Friday, March 30, 2012

ಕಟ್ಟೆಚ್ಚರ: ನ್ಯೂಸ್ ಚಾನಲ್‌ಗಳಲ್ಲಿ ಈಗ ಸೆಕ್ಸ್ ವಿಡಿಯೋಗಳು ಪ್ರಸಾರವಾಗುತ್ತವೆ...


ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರಿಗೊಂದು ಬಹಿರಂಗ ಪತ್ರ

ನಮಸ್ಕಾರ,

ಮೊದಲಿಗೆ ಒಂದು ಪತ್ರಿಕೆ ಹಾಗೂ ಟಿವಿವಾಹಿನಿಯೊಂದರ ಸಂಪಾದಕ ಎರಡೂ ಆಗಿರುವ ವಿಶ್ವೇಶ್ವರ ಭಟ್ಟರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು. ಇಷ್ಟು ದಿವಸ ಅಶ್ಲೀಲ ಚಿತ್ರಗಳೆಂದರೆ ನಗರಪ್ರದೇಶಗಳ ಹೊರವಲಯದ ಮತ್ತು ಸಣ್ಣಪುಟ್ಟ ಊರುಗಳ ಟೆಂಟುಗಳಲ್ಲಿ ಬೆಳಗಿನ ಪ್ರದರ್ಶನ ಕಾಣುತ್ತಿದ್ದ ಹಸಿಬಿಸಿ ಮಲಯಾಳಂ ಚಿತ್ರಗಳೆಂದೇ ಪ್ರಚಲಿತದಲ್ಲಿತ್ತು. ಆದರೀಗ ಅಶ್ಲೀಲ ಚಿತ್ರಗಳನ್ನು ನೋಡಬೇಕೆಂದರೆ ಅಷ್ಟುದೂರ ಮುಖಮರೆಸಿಕೊಂಡು ಹೋಗುವ ಅಗತ್ಯವಿಲ್ಲ ಸುವರ್ಣನ್ಯೂಸ್ ಚಾನೆಲ್ ನೋಡಿದರೆ ಸಾಕು ಎಂಬ ಧೈರ್ಯವನ್ನು ರಾಜ್ಯದ ಜನರಿಗೆ ರವಾನಿಸಿದ್ದಕ್ಕಾಗಿ ನಿಮ್ಮನ್ನು ನಿಜಕ್ಕೂ ಅಭಿನಂದಿಸಬೇಕು.

ಎರಡನೆಯದಾಗಿ ಮಾಧ್ಯಮರಂಗದ ಆಳ ಅಗಲಗಳು ಮತ್ತು ಮಾಧ್ಯಮಲೋಕದಲ್ಲಿ ಯಾವುದು ಸರಿ ಯಾವುದು ಸರಿಯಲ್ಲ, ನೈತಿಕತೆ ಮತ್ತು ಅನೈತಿಕತೆಯ ನಡುವಿನ ತೆಳುಗೆರೆಗಳನ್ನು ಪುಂಖಾನುಪುಂಖವಾಗಿ ಬರೆದಿದ್ದೀರಿ, ಬರೆಯುತ್ತಲೂ ಇದ್ದೀರಿ. ಅವುಗಳೆಲ್ಲವನ್ನೂ ನಾವುಗಳೂ ಓದಿದ್ದೇವೆ. ಈಗ ಒಂದು ಪ್ರಶ್ನೆಯೆದ್ದಿದ್ದೆ. ಇಷ್ಟೆಲ್ಲವನ್ನೂ ಬರೆಯುವ ತಾವು, ಇಷ್ಟೆಲ್ಲ ಜಗತ್ತಿನ ವಿವಿಧ ಪತ್ರಿಕೋದ್ಯಮಿಗಳು ಮತ್ತು ಸಾಹಸಿಗ ಪತ್ರಕರ್ತರ ಬಗ್ಗೆ ದಿವೀನಾಗಿ ಬರೆದುಕೊಳ್ಳುವ ನೈತಿಕತೆ ಇವತ್ತು ಸಂತೆಯಲ್ಲಿ ಅರೆಬೆತ್ತಲಾಗಿ ನಿಂತುಕೊಂಡಿದೆ. ಇದೇ ಮಾರ್ಚ್ ೨೯ರ ರಾತ್ರಿ ೧೦ ಗಂಟೆಗೆ ಪ್ರಸಾರವಾದ ಕಟ್ಟೆಚ್ಚರ ಕಾರ್ಯಕ್ರಮದಲ್ಲಿ ತಾವು ಇಲ್ಲಿಯವರೆಗೂ ಹೇಳಿಕೊಂಡು ಬಂದ ಮಾಧ್ಯಮ ನೈತಿಕತೆ ಮತ್ತು ಸಂಹಿತೆಗಳೆರಡರ ಮುಖಕ್ಕೂ ಡಾಂಬರು ಬಳಿಯುವಂತಹ ಒಂದು ಕಂತು ಪ್ರಸಾರವಾಯಿತು.

ಶಿವಮೊಗ್ಗದ ಕಾಲೇಜು ಯುವತಿಯೊಬ್ಬಳು ತನ್ನ ಪ್ರಿಯಕರನೊಡನೆ ರತಿಕ್ರೀಡೆಯಲ್ಲಿ ತೊಡಗಿದ್ದ ಅಸಹ್ಯ ಹುಟ್ಟಿಸುವ ವಿಡಿಯೋದೃಶ್ಯಗಳು ಯಾವ ಎಡಿಟಿಂಗೂ ಇಲ್ಲದಂತೆ ಹಸಿಹಸಿಯಾಗಿಯೇ ಪ್ರಸಾರವಾಯಿತು. (ವಿಡಿಯೋ ಮಬ್ಬಾಗಿದ್ದರೂ ಆ ಕ್ರಿಯೆಯ ಎಲ್ಲ ಹಂತಗಳೂ ಸುಸ್ಪಷ್ಟವಾಗಿ ಕಾಣಿಸುತ್ತಿದ್ದುದು ನೋಡಿದ ಜನರಿಗೆ ಗೊತ್ತು) ಈ ವಿಡಿಯೋ ತುಣುಕುಗಳು ಶಿವಮೊಗ್ಗೆಯ ಪಡ್ಡೆಹುಡುಗರ ಮೊಬೈಲುಗಳಲ್ಲಿ ಹರಿದಾಡುವುದನ್ನು ನೋಡಿದ ನಿಮ್ಮ ಶಿವಮೊಗ್ಗ ಜಿಲ್ಲಾ ವರದಿಗಾರ ಆ ವಿಡಿಯೋ ಸಂಪಾದಿಸಿ ಅದನ್ನು ಇರುವ ಹಾಗೆಯೇ ಸುವರ್ಣನ್ಯೂಸ್ ಕಚೇರಿಗೆ ತಲುಪಿಸಿದ್ದಾರೆ. ಪ್ರೇಮಸಲ್ಲಾಪದ ವಿಡಿಯೋ ಸೋರಿಕೆಯಾಗಿ ಊರಿನವರ ಮೊಬೈಲಿನಲ್ಲಿ ಹರಿದಾಡುತ್ತಿರುವುದು ಯುವತಿಯ ಗಮನಕ್ಕೂ ಬಂದು ಮಾನಕ್ಕೆ ಅಂಜಿದ ಆಕೆ ಆತ್ಮಹತ್ಯೆಗೆ ಯತ್ನಿಸಿ ಪರವೂರಿನ ಆಸ್ಪತ್ರೆಯೊಂದರಲ್ಲಿ ಸಾವುಬದುಕಿನ ನಡುವೆ ಹೋರಾಡಿ ಜೀವವುಳಿಸಿಕೊಂಡಿದ್ದಾಳೆ. ಪ್ರಸ್ತುತ ಬೆಂಗಳೂರಿನ ಆಕೆಯ ಸಂಬಂಧಿಯೊಬ್ಬರ ಮನೆಯಲ್ಲಿದ್ದಾಳೆ. ಇದು ಪ್ರಸಾರವಾದ ಕಟ್ಟೆಚ್ಚರ ಕಾರ್ಯಕ್ರಮದ ಹೂರಣ.

ಇಂತಹದ್ದೊಂದು ಸೂಕ್ಷ್ಮ ವಿಷಯವನ್ನು ಕಾರ್ಯಕ್ರಮವಾಗಿ ಬದಲಾಯಿಸುವಾಗ ಕಟ್ಟೆಚ್ಚರ ಕಾರ್ಯಕ್ರಮ ತಂಡ ಬಹಳಷ್ಟು ಎಡವಟ್ಟುಗಳನ್ನು ಮಾಡಿಕೊಂಡಿದೆ. ಅವಾಂತರಕ್ಕೆ ಮಾಡಿಕೊಂಡ ಯುವತಿಯ ಫೋಟೋವನ್ನು ಕಣ್ಣು ಮಾತ್ರ ಮರೆಮಾಡಿ ಪ್ರಸಾರವಾಯಿತು, ಆಕೆ ತನ್ನ ಪ್ರಿಯಕರನೊಡನೆ ನಡೆಸಿದ ಸಲ್ಲಾಪದ ಉದ್ರೇಕಕಾರಿ ತುಣುಕುಗಳು ಹೇಗಿವೆಯೋ ಹಾಗೆಯೇ ಪ್ರಸಾರವಾಯಿತು, ಜೊತೆಗೆ ಆಕೆ ಈಗ ಉಳಿದುಕೊಂಡಿರುವ ಬೆಂಗಳೂರಿನ ಸಂಬಂಧಿಗಳ ಮನೆಯ ವಿಳಾಸವನ್ನೂ ಪ್ರಸಾರ ಮಾಡಲಾಯಿತು. ಆಕೆಯ ಸಹಪಾಠಿಗಳನ್ನು ಸಂದರ್ಶನದ ಹೆಸರಿನಲ್ಲಿ ಮಾತನಾಡಿಸಲಾಯಿತು. (ಇವರ ಮುಖವೂ ಸಹ ಮಬ್ಬು ಮಾಡಲಾಗಿಲ್ಲ) ಇಷ್ಟೆಲ್ಲ ವಿವರಗಳನ್ನು ಸೂಕ್ಷ್ಮ ವಿಷಯವೊಂದರ ಮೇಲಿನ ಕಾರ್ಯಕ್ರಮದಲ್ಲಿ ಆಕೆಯ ವಿಳಾಸದ ಸಮೇತ ಹರಿದು ಹಂಚಲಾಯಿತು. ಒಟ್ಟು ಕಾರ್ಯಕ್ರಮವೇ ಆಕೆ ಮಾಡಿದ ಎಡವಟ್ಟಿಗೆ ಆಕೆಯ ಪೋಷಕರನ್ನು ನಡುರಸ್ತೆಯಲ್ಲಿ ಮಾನಕಳೆಯುವುದಕ್ಕಾಗಿಯೇ ರೂಪಿಸಿದಂತಿತ್ತು.

ಸರಿ ಆಕೆ ಮಾಡಿದ್ದು ಕ್ಷಮೆಗೆ ಅರ್ಹವಲ್ಲದ್ದೇ ಇರಬಹುದು, ಆದರೆ ಆಕೆಯ ಹೆತ್ತವರು, ಅಣ್ಣತಮ್ಮಂದಿರು, ಅಕ್ಕತಂಗಿಯರು, ನೆರೆಹೊರೆಯವರು, ಸಂಬಂಧಿಗಳು, ಸಹಪಾಠಿಗಳು ಇವರೆಲ್ಲರೂ ಕಟ್ಟೆಚ್ಚರ ಕಾರ್ಯಕ್ರಮದ ಕಾರಣಕ್ಕೆ, ಇಂಥಹ ಹುಡುಗಿಗೆ ಸಂಬಂಧಿಸಿದವರು ಎಂದು ಸಮಾಜ ಕೆಟ್ಟದಾಗಿ ಮಾತಾಡುವುದನ್ನು ಅದು ಹೇಗೆ ಇವರೆಲ್ಲ ಸಹಿಸಬೇಕು? ಪರೀಕ್ಷೆಯಲ್ಲಿ ಅಂಕ ಕಡಿಮೆ ಎಂದೋ, ರಂಗೋಲಿ ತುಳಿದದ್ದಕ್ಕೆ ಬೈದರೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಇಂದಿನ ದಿನಗಳಲ್ಲಿ, ಇವರೆಲ್ಲರನ್ನು ಅಪರಾಧಿಗಳಂತೆ ಕಟಕಟೆಯೊಳಗೆ ತಂದು ನಿಲ್ಲಿಸಿರುವ ಸುವರ್ಣನ್ಯೂಸ್ ಇವರಿಗೆ ಮುಂದಿನ ದಿನಗಳಲ್ಲಿ ಸಮಾಜದಿಂದ ಎದುರಿಸಬೇಕಾದ ಪ್ರಶ್ನೆಗಳು ಮತ್ತು ಮೂದಲಿಕೆಗಳನ್ನು ತಡೆಯಲು ಸಾಧ್ಯವಿದೆಯೇ? ಆ ಸಂಸಾರ ಅವಮಾನವಾಯಿತೆಂದು, ತಲೆ ಎತ್ತಿ ಓಡಾಡಲು ಸಾಧ್ಯವಿಲ್ಲವೆಂದು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಹೊಣೆ ಯಾರು?

ಅದನ್ನು ಪಕ್ಕಕ್ಕಿಡೋಣ, ಉಳಿದೆಲ್ಲದಕಿಂತ ಮೊದಲು ಇದು ಮಾಧ್ಯಮದ ನೈತಿಕತೆಯ ಪ್ರಶ್ನೆ. ಅಶ್ಲೀಲ ಎಮ್ಮೆಮ್ಮೆಸ್‌ಗಳನ್ನು ಪ್ರಸಾರ ಮಾಡದೆ ಒಂದು ಟಿವಿ ಚಾನೆಲ್ ಬದುಕಲು ಸಾಧ್ಯವೇ ಇಲ್ಲವೇ, ಈ ಹಿಂದೆ ಸದನದೊಳಗೆ ನೀಲಿಚಿತ್ರ ವೀಕ್ಷಿಸಿದ ಶಾಸಕರ ದೃಶ್ಯಗಳನ್ನು ಪ್ರಸಾರ ಮಾಡಿದ್ದರ ಬಗ್ಗೆ ವಿರೋಧ ವ್ಯಕ್ತವಾದಾಗಲೂ ತಾವು ತೋರಿಸೋದು ತಪ್ಪಾ ಅಂತ ತಮ್ಮ ಅಶ್ಲೀಲ ದೃಶ್ಯ ಪ್ರಸಾರದ ಸಮರ್ಥನೆಗೆ ಅಂಟಿಕೊಂಡಿರಿ. ಬಸ್ ಸ್ಟಾಂಡುಗಳಲ್ಲಿ, ಬುಕ್‌ಸ್ಟೋರ್‌ಗಳಲ್ಲಿ ನೇತಾಡುವ ೧೦ ರೂಪಾಯಿಗೆ ಸಿಗುವ ಅಶ್ಲೀಲಚಿತ್ರಗಳ ಕಥೆಗಳ ಅಗ್ಗದ ಪುಸ್ತಕಗಳಿಗೂ ತಾವು ಪದೇಪದೇ ಪ್ರಸಾರಿಸುತ್ತಿರುವ ಅಶ್ಲೀಲ ಎಮ್ಮೆಮ್ಮೆಸ್ ಕಾರ್ಯಕ್ರಮಗಳಿಗೂ ಕಿಂಚಿತ್ತಾದರೂ ವ್ಯತ್ಯಾಸವಿದೆಯೇ? ಹಿಂದೊಮ್ಮೆ ಅಶ್ಲೀಲ ವಿಡಿಯೋಗಳನ್ನು ಅಂತರ್ಜಾಲದಿಂದ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ವೆಬ್‌ಸೈಟ್ ಅಡ್ರೆಸ್‌ಗಳ ಮೂಲಕವೇ ಪ್ರಸಾರ ಮಾಡಿದವರು ನೀವು. ಡಿವಿಡಿ ಅಂಗಡಿಗಳಲ್ಲಿಯೂ ಅಶ್ಲೀಲ ಡಿವಿಡಿಗಳನ್ನು ಮುಜುಗರದಿಂದಲೋ, ಭಯದಿಂದಲೋ ಕದ್ದುಮುಚ್ಚಿ ವಿತರಿಸುವ ಪರಿಪಾಠವಿದೆ. ಅವರಿಗಿರುವ ಕನಿಷ್ಠಮಟ್ಟದ ಭಯವೂ ಸುವರ್ಣನ್ಯೂಸ್ ಸಂಪಾದಕರಾದ ತಮಗಿಲ್ಲ, ರಾಜಾರೋಷವಾಗಿ ಎಗ್ಗುಸಿಗ್ಗಿಲ್ಲದೆ ಬ್ಲೂಫಿಲ್ಮ್‌ಗಳನ್ನೇ ಪ್ರಸಾರ ಮಾಡಿಬಿಡುತ್ತೀರಿ, ತುಂಬು ಕುಟುಂಬವೊಂದರಲ್ಲಿ ಅಣ್ಣತಂಗಿ, ಅಪ್ಪಮಗಳು ಏನನ್ನೋ ನೋಡಲು ಹೋಗಿ ತಾವು ಪ್ರಸಾರಿಸುತ್ತಿರುವ ಸುಸಂಸ್ಕೃತ ಬ್ಲೂಫಿಲ್ಮ್‌ಗಳನ್ನೋ, ಅಶ್ಲೀಲ ಎಮ್ಮೆಮ್ಮೆಸ್ ತುಣುಗಳನ್ನೋ ಅಕಸ್ಮಾತ್ ನೋಡಿದರೂ ಆಗುವ ಮುಜುಗರ ಕಸಿವಿಸಿಯಿದೆಯಲ್ಲ.. ಬಹುಶಃ ಅದರ ಅನುಭವ ತಮಗೆ ಆದಂತಿಲ್ಲ. ಮಾನ ಮರ್ಯಾದೆಯಿರುವ ಜನಕ್ಕೆ ಮುಖಮುಚ್ಚಿಕೊಂಡು ಎದ್ದು ಹೋಗಬೇಕೆನಿಸುತ್ತದೆ.

ತಾವು ಕನ್ನಡಪ್ರಭ ಪತ್ರಿಕೆಗೂ ಸಂಪಾದಕರು. ಅದರಲ್ಲಿ ಬರೆಯುವ ಅಂಕಣಕಾರರೂ ಸೇರಿದಂತೆ ಹಲವಾರು ಬರಹಗಾರರಿಂದ ಭಾರತೀಯ ಸಂಸ್ಕೃತಿ ಪರಂಪರೆ ನೈತಿಕತೆಯ ಬಗ್ಗೆ ಬರೆಸುತ್ತೀರಿ. ಇನ್ನೊಂದು ಕಡೆಯಲ್ಲಿ ಈ ವಿಷಯಗಳಿಗೆ ತದ್ವಿರುದ್ಧವಾಗಿರುವ ಕಾಮಕೇಳಿಗಳನ್ನು ಯಾವ ಅಂಜಿಕೆಯೂ ಇಲ್ಲದೆ ಪ್ರಸಾರ ಮಾಡುತ್ತೀರಿ, ಜನ ನೋಡುತ್ತಾರೆ ಟಿಆರ್‌ಪಿ ಬರುತ್ತದೆ ಎಂದು ಕಂಡಕಂಡದ್ದನ್ನೆಲ್ಲ ಪ್ರಸಾರ ಮಾಡುವುದಾದರೆ ನೇರವಾಗಿ ಒಂದು ಅಶ್ಲೀಲ ಟಿವಿವಾಹಿನಿಯನ್ನೇ ತಾವು ಧೈರ್ಯವಾಗಿ ಪ್ರಾರಂಭಿಸುವುದು ಒಳ್ಳೆಯದು. ಅಂತರ್ಜಾಲದಲ್ಲಿ ಅಶ್ಲೀಲ ಎಮ್ಮೆಮ್ಮೆಸ್ಸುಗಳಿಗೇನೂ ಕೊರತೆಯಿಲ್ಲ, ತಮ್ಮ ಚಾನೆಲ್‌ನ ಟಿಆರ್‌ಪಿಗೂ ಜಾಹಿರಾತಿಗೂ ಈ ಎಮ್ಮೆಮ್ಮೆಸ್ಸುಗಳಿಂದ ಇನ್ನಷ್ಟು ಒಳ್ಳೆಯದಾಗುತ್ತದೆ. ಸುವರ್ಣನ್ಯೂಸ್ ಚಾನೆಲ್ ಸದ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ರೀತಿ ಮತ್ತು ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಮೇಲೆ ತಮಗೆ ಹಿಡಿತವೇ ಇದ್ದಂತಿಲ್ಲ, ಅಥವಾ, ಆ ಅಧಿಕಾರವನ್ನು ಚಾನೆಲ್ ಮಾಲೀಕರು ತಮಗೆ ಕೊಟ್ಟೇ ಇಲ್ಲ, ಬದಲಾಗಿ ಡಮ್ಮಿ ಸಂಪಾದಕರಂತೆ ತಾವು ಕುರ್ಚಿಯಲ್ಲಿ ಕುಳಿತಿರಬಹುದೇ? ಎಂಬ ಅನುಮಾನಗಳು ಬರುತ್ತಿವೆ. ಏಕೆಂದರೆ ತಾವು ಕನ್ನಡಪ್ರಭದಲ್ಲಿ ಸುಸಂಸ್ಕೃತರಂತೆ ಆಡುವುದು ಒಂದು, ಸುವರ್ಣನ್ಯೂಸ್‌ನಲ್ಲಿ ಅಪಾಪೋಲಿಗಳಂತೆ ಮಾಡುತ್ತಿರುವುದು ಇನ್ನೊಂದು.

ಪ್ರಸ್ತುತ ವಿಷಯಕ್ಕೆ ಮರುಳುವುದಾದರೆ ಆ ಯುವತಿಯ ಪೋಷಕರನ್ನು ನಡುಬೀದಿಯಲ್ಲಿ ನೀವು ಇವತ್ತು ತಂದು ನಿಲ್ಲಿಸಿರುವಂತೆಯೇ ತಾವೂ ಹಿಂದೊಮ್ಮೆ ಇದ್ದ ಕೆಲಸದಿಂದ ಹೊರದಬ್ಬಿಸಿಕೊಂಡು ನಡುಬೀದಿಯಲ್ಲೇ ನಿಂತಿದ್ದೀರಿ. ಆವತ್ತು ಇದೇ ಜಗತ್ತು ತಮ್ಮತ್ತ ತೂರಿದ ಕಲ್ಲುಗಳ ಸೈಜು ಎಂಥವು ಎಂಬುದು ತಮಗೂ ಗೊತ್ತು. ಅಂತಹ ಅವಮಾನವನ್ನು ಸಹಿಸಿದವರು ತಾವು. ಆ ನೆನಪಿನ ನೈತಿಕತೆ ತಮಗೆ ಇದ್ದಿದ್ದರೆ ಇವತ್ತು ಶಿವಮೊಗ್ಗದ ಒಂದು ಕುಟುಂಬವನ್ನು ಇವತ್ತು ಮೂರಾಬಟ್ಟೆಯಾಗುವಂತೆ ಮಾನ ಕಳೆಯುತ್ತಿರಲಿಲ್ಲ. ಕೈಯಿಟ್ಟಲ್ಲೆಲ್ಲ ಸುದ್ದಿ ಸಿಗುವ, ಸರ್ಕಾರಿ ಇಲಾಖೆಗಳ ಹಗರಣಗಳು ಕಾಲುಕಾಲಿಗೇ ತೊಡರುತ್ತಿರುವ ಈ ಸಮಯದಲ್ಲಿ ತಮ್ಮ ಹಾರ್ಡ್‌ಕೋರ್ ವರದಿಗಾರರು ಆ ಎಲ್ಲವನ್ನೂ ಬಿಟ್ಟು ಸುಲಭಕ್ಕೆ ಕೈಗೆ ಸಿಗುವ ಅಶ್ಲೀಲ ಎಮ್ಮೆಮ್ಮೆಸ್ಸುಗಳ ಹಿಂದೇಕೆ ಬೀಳುವಷ್ಟು ಸೋಮಾರಿಗಳಾಗಿದ್ದಾರೆ ಎಂಬುದು ತಮ್ಮ ಅರಿವಿಗೆ ಯಾಕೋ ಬರುತ್ತಲೇ ಇಲ್ಲ. ಈ ಎಮ್ಮೆಮ್ಮೆಸ್ಸುಗಳನ್ನು ನೋಡಿ ಯಾರಿಗೇನು ಆಗಬೇಕಿದೆ, ಇವನ್ನು ತೋರಿಸಿ ಯಾರಿಗೆ ಎಂಥಹ ಸಂದೇಶ ಕೊಡುವ ಘನಕಾರ್ಯ ಮಾಡುತ್ತಿದ್ದಿರೋ ನಮಗೆ ಗೊತ್ತಿಲ್ಲ. ಹೀಗೆಲ್ಲ ದುಡ್ಡು ದುಡಿಯಬೇಕೇ ವಿಶ್ವೇಶ್ವರ ಭಟ್ಟರೆ?

ಕಟ್ಟೆಚ್ಚರ ಕಾರ್ಯಕ್ರಮದ ಅಧ್ವಾನಗಳಾದರೂ ಎಂಥವು, ಬೆಳಗ್ಗೆಹೊತ್ತು ಬ್ರೇಕ್‌ಫಾಸ್ಟ್ ನ್ಯೂಸ್‌ನಲ್ಲಿ ಕೈ ಮುಗಿಯಬೇಕೆನ್ನಿಸುವಷ್ಟು ಸಂಭಾವಿತರಾಗಿ ಕಾಣಿಸಿಕೊಳ್ಳುವ ಜಯಪ್ರಕಾಶಶೆಟ್ಟರು ರಾತ್ರಿಯಾದರೆ ಸಾಕು ಕಟ್ಟೆಚ್ಚರದೊಳಗೆ ಜಾತ್ರೆಯಲ್ಲಿ ಟೋಪಿ ಮಾರುವವರಂತೆ ಹಾಸ್ಯಾಸ್ಪದ ಪೋಷಾಕಿನಲ್ಲಿ ಕರೆಂಟು ಹೊಡೆಸಿಕೊಂಡವರಂತೆ ಮೈಕೈ ಬಳುಕಿಸುತ್ತ ಆಗಾಗ ಕೂಗಾಡುತ್ತ ಆಂಕರಿಂಗ್ ಮಾಡುತ್ತಿರುತ್ತಾರೆ. ಅವರ ಮಾತಿನ ಶೈಲಿ ಮತ್ತು ಐಟಂಸಾಂಗ್ ಶೈಲಿಯ ಅವರ ಆಂಕರಿಂಗ್ ನಗೆಪಾಟಲಲ್ಲದೆ ಇನ್ನೇನೂ ಅಲ್ಲ, ಶಿವಮೊಗ್ಗದ ಯುವತಿಯ ಎಪಿಸೋಡಿನ ಸ್ಕ್ರಿಪ್ಟನ್ನು ಸಹನಾಭಟ್ ಎಂಬ ಸ್ತ್ರೀ ಬರೆಯುತ್ತಾರೆ ಅಂದರೆ ವಾಕರಿಕೆ ಹುಟ್ಟುತ್ತದೆ. ಕೆಲಸಮರೆತ ಜಿಲ್ಲಾ ವರದಿಗಾರನೊಬ್ಬ ಎಂಥದೋ ಎಬಡೇಶಿ ಎಮ್ಮೆಮ್ಮೆಸ್ ಕಳಿಸಿದೆಂದ ಮಾತ್ರಕ್ಕೆ ಅದನ್ನು ಪ್ರಸಾರಿಸಬೇಕೇ ಬೇಡವೇ, ನೈತಿಕತೆಯೇ ಅನೈತಿಕತೆಯೇ ಎಂಬ ವಿವೇಚನೆಯೂ ಇಲ್ಲದಷ್ಟು ಒಬ್ಬ ಟಿವಿ ಚಾನೆಲ್ಲಿನ ಸಂಪಾದಕ ಎಮ್ಮೆಚರ್ಮದವರಾಗಿ ಹೋದರೆ ಏನೇನೆಲ್ಲ ಅನಾಹುತಗಳಾಬೇಕೋ ಅವೆಲ್ಲವೂ ಸುವರ್ಣನ್ಯೂಸಿನಲ್ಲಿ ಇವತ್ತು ಆಗುತ್ತಿವೆ. ಸುವರ್ಣನ್ಯೂಸಿನ ಬದಲು ಎಫ್ ಚಾನೆಲ್ ನೋಡುವುದು ಒಳಿತು ಎಂಬ ಮಟ್ಟಿಗೆ ಜೋಕುಗಳು ಹುಟ್ಟಿಕೊಂಡಿವೆ. ತಮಗೆ ತಮ್ಮ ಜನಪರ ನ್ಯೂಸುಗಳ ಪ್ರಸಾರದಿಂದ ಕರ್ನಾಟಕವನ್ನು ಉದ್ದಾರ ಮಾಡಿಬಿಡುವ ಸಾಹಸ ಬೇಡವಾಗಿದ್ದಾಗ ಮಾತ್ರ ಮದನಾರಿಯಂತಹ ಅಡ್ಡಕಸುಬಿ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಒಂದುಕಾಲದಲ್ಲಿ ಜನ ನೋಡುತ್ತಾರೆ ಅಂತ ಕೇರಳದ ಚಿತ್ರರಂಗದಲ್ಲಿ ತನ್ನ ಉಬ್ಬುತಗ್ಗುಗಳನ್ನು ತೋರಿಸಿಕೊಂಡು ಅಶ್ಲೀಲಚಿತ್ರಗಳಲ್ಲಿ ನಟಿಸಿದ ನಟಿಯೊಬ್ಬಳಿಗೂ... ಎಮ್ಮೆಮ್ಮೆಸ್ಸು, ಬ್ಲೂಫಿಲ್ಮ್, ಮದನಾರಿಗಳ ಹಿಂದೆ ಬಿದ್ದಿರುವ ತಮಗೂ ನಡುವೆ ಯಾವ ವ್ಯತ್ಯಾಸವೂ ಕಾಣಿಸುತ್ತಿಲ್ಲ. ಎರಡರಲ್ಲೂ ದುಡ್ಡೇ ಪ್ರಮುಖವಾಗಿದೆ.

ಕೊನೆಗೆ ವಿಶ್ವೇಶ್ವರ ಭಟ್ಟರಲ್ಲಿ ಒಂದು ಮನವಿ, ನೀವು ಕನ್ನಡಪ್ರಭದ ಅಂಕಣಕಾರನ್ನು ಸುವರ್ಣನ್ಯೂಸ್ ಟಾಕ್ ಶೋಗಳ ಅತಿಥಿಗಳನ್ನಾಗಿಯೂ, ಈ ಚಾನೆಲ್ಲಿನ ಚಿಳ್ಳೆಪಿಳ್ಳೆ ವರದಿಗಾರರನ್ನು ಕನ್ನಡಪ್ರಭದ ಅಂಕಣಕಾರನ್ನಾದರೂ ಮಾಡಿಕೊಳ್ಳಿ. ಈ ಅಧ್ವಾನಗಳನ್ನು ಟಿವಿ ನೋಡುವ ಮಂದಿ ಹೇಗಾದರೂ ಸಹಿಸಬಲ್ಲರು, ಆದರೆ  ಕಾಮ, ಸೆಕ್ಸು. ಹೆಂಗಸಿನ ಉಬ್ಬುತಗ್ಗುಗಳ ಮೇಲೆ ಬೀಳುವ ಚಿಲ್ಲರೆ ಕಾಸುಗಳನ್ನು ಆಯ್ದುಕೊಳ್ಳುತ್ತಿರುವ ಈ ನೀಚತನವಿದೆಯಲ್ಲ, ಅದನ್ನು ಮಾನವಂತರಾರೂ ಸಹಿಸುವುದಿಲ್ಲ. ಈಗಾಗಲೇ ತಮ್ಮ ಚಾನೆಲ್ಲಿನ ನಗೆಪಾಟಲು ಕಾರ್ಯಕ್ರಮವಾದ ಕಟ್ಟೆಚ್ಚರದಲ್ಲಿ ಶಿವಮೊಗ್ಗದ ಎಮ್ಮೆಮ್ಮೆಸ್ ಕಾರ್ಯಕ್ರಮದ ಬಗ್ಗೆ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಫೌಂಡೇಷನ್‌ಗೆ ಆನ್‌ಲೈನ್ ದೂರುಗಳು ಲೋಡುಗಟ್ಟಲೆ ತಲುಪುತ್ತಿವೆ. ೩೦ರ ಶನಿವಾರದಂದು ಕಾರ್ಯಕ್ರಮದ ೨ನೇ ಭಾಗದಲ್ಲಿ ಇನ್ನೆಷ್ಟು ಅಸಹ್ಯ ಎಮ್ಮೆಮ್ಮೆಸ್ ತುಣುಕುಗಳನ್ನು ಪ್ರಸಾರ ಮಾಡಲು ಸಿದ್ದವಿದ್ದೀರೋ ಗೊತ್ತಿಲ್ಲ. ದಯವಿಟ್ಟು ಈ ೨ನೇ ಕಂತನ್ನು ಪ್ರಸಾರಿಸದಿರಿ. ತಮ್ಮ ಕಾರ್ಯಕ್ರಮದ ವಿಡಿಯೋ ಅನ್ನು ಗೆಳೆಯರನೇಕರು ಮೊಬೈಲಿನಲ್ಲಿ ಶೂಟ್ ಮಾಡಿಟ್ಟುಕೊಂಡಿದ್ದಾರೆ. ಐಬಿಎಫ್ ನಿರ್ಬಂಧಿಸಿರುವ ಅಷ್ಟನ್ನೂ ಕಟ್ಟೆಚ್ಚರ ಕಾರ್ಯಕ್ರಮದಲ್ಲಿ ಉಲ್ಲಂಘಿಸಿದ್ದೀರಿ, ಅದಕ್ಕೆ ಸಾಕ್ಷಿಯೂ ಇದೆ. ಯಾವಾಗ ಬೇಕಾದರೂ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಫೌಂಡೇಷನ್‌ನಿಂದ ತಮ್ಮ ಕಛೇರಿಗೆ ನೊಟೀಸ್ ಬರಬಹುದು.

ಪತ್ರಕರ್ತನೊಬ್ಬನಿಗೆ ಜನಪರವಾದ, ಜನೋಪಯೋಗಿ ಸುದ್ದಿಗಳನ್ನಷ್ಟೇ ಜನರಿಗೆ ತಲುಪಿಸುವ ಉತ್ಸಾಹವಿರಬೇಕೇ ಹೊರತು ಜನ ನೋಡುತ್ತಾರೆ ಎಂಬ ಧಾವಂತದಲ್ಲಿ ಸೆಕ್ಸ್‌ಬುಕ್ಕಿನ ರೇಂಜಿನ ಕಾರ್ಯಕ್ರಮಗಳನ್ನು ಬ್ಲೂಫಿಲ್ಮುಗಳನ್ನೂ, ಅಶ್ಲೀಲ ಎಮ್ಮೆಮ್ಮೆಸ್ಸುಗಳನ್ನೂ ಪ್ರಸಾರ ಮಾಡುವ ತಮ್ಮ ಕೊಳಕು ಅಭಿರುಚಿಯನ್ನು ಪ್ರದರ್ಶಿಸುವುದಲ್ಲ. ಏಕೆಂದರೆ ನೋಡುವ ಮಾನವಂತರು ವರದಿಗಾರನನ್ನು ವಿಮರ್ಶಿಸುವುದಕ್ಕಿಂತ ಹೆಚ್ಚಾಗಿ ಇಂಥದ್ದನ್ನ ಪ್ರಸಾರ ಮಾಡೋಕೆ ಅನುಮತಿ ಕೊಟ್ಟ ಎಡಿಟರ್ ಏನು ದನಾ ಮೇಯಿಸ್ತಾ ಇದ್ದನಾ ಅಂತ ಮುಲಾಜಿಲ್ಲದೇ ಬೈದುಬಿಡುತ್ತಾರೆ. ಇದಕ್ಕಾದರೂ ತಮ್ಮ ಅಭಿರುಚಿ ಉಬ್ಬುತಗ್ಗುಗಳ ಆಚೀಚೆಗೆ ವಿಸ್ತರಿಸಲೆಂಬ ಆಶಯ ಟಿವಿ ನೋಡುಗರದ್ದು. ಅರ್ಥ ಮಾಡಿಕೊಳ್ಳುತ್ತೀರೆಂಬ ನಂಬುಗೆಯೊಂದಿಗೆ.

ಪ್ರೀತಿಯಿಂದ

-ಟಿ.ಕೆ. ದಯಾನಂದ

Monday, March 5, 2012

ನಮ್ಮ ಮೀಡಿಯಾ ತೋರಿಸದ ಕೆಲವು ದೃಶ್ಯಗಳು ಇಲ್ಲಿವೆ ನೋಡಿ...



ಕರ್ನಾಟಕದ ಇತಿಹಾಸದಲ್ಲಿ ಮಾರ್ಚ್ ೨ ಕರಾಳ ನೆನಪುಗಳನ್ನು ಉಳಿಸಿಹೋಗಿದೆ. ಮಾಧ್ಯಮದವರ ಮೇಲೆ ಕೆಲನ್ಯಾಯವಾದಿಗಳ ಗೂಂಡಾಗಿರಿ. ನಂತರ ನ್ಯಾಯವಾದಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಈಗ ಮುಗಿದುಹೋದ ಕಹಿ ಅಧ್ಯಾಯ. ಮಾಧ್ಯಮ ಮಂದಿಯ ಮೇಲೆ ನಡೆದ ಭೀಕರ ಹಲ್ಲೆಯ ದೃಶ್ಯಗಳನ್ನು ನಾವು ಎಲ್ಲ ನ್ಯೂಸ್ ಚಾನಲ್ ಗಳಲ್ಲೂ ನೂರಾರು ಬಾರಿ ನೋಡಿದ್ದೇವೆ, ಇನ್ನೂ ನೋಡುತ್ತಲೇ ಇದ್ದೇವೆ. ಆದರೆ ಎರಡನೇ ಹಂತದಲ್ಲಿ ನ್ಯಾಯವಾದಿಗಳ ಮೇಲೆ ನಡೆದ ದೌರ್ಜನ್ಯದ ದೃಶ್ಯಗಳನ್ನು ಎಲೆಕ್ಟ್ರಾನಿಕ್ ಮೀಡಿಯಾ ತೋರಿಸುವ ಧೈರ್ಯ ಪ್ರದರ್ಶಿಸಲಿಲ್ಲ. ಹೀಗಾಗಿ ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಹಲವು ವಕೀಲರುಗಳು ತಮ್ಮ ಮೊಬೈಲುಗಳಲ್ಲಿ ಹಿಡಿದ ಚಿತ್ರಗಳನ್ನೇ ಸಂಗ್ರಹಿಸಿ ಅಡ್ವೊಕೇಟ್ ಬೆಂಗಳೂರು ಎಂಬ ಹೆಸರಿನಲ್ಲಿ ಯೂ ಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದಾರೆ. ವಾಯ್ಸ್ ಓವರ್ ನಲ್ಲಿ ಹೇಳಲಾಗುವ ಮಾಹಿತಿಗಳಲ್ಲಿ ಉತ್ಪ್ರೇಕ್ಷೆ ಇದೆ ಎಂದು ನಿಮಗನ್ನಿಸಬಹುದು. ಆದರೆ ವಿಡಿಯೋ ನಿಜಕ್ಕೂ ಭಯಾನಕವಾಗಿದೆ, ಆಘಾತಕಾರಿಯಾಗಿದೆ. ಅದು ಎಲ್ಲದಕ್ಕೂ ಸಾಕ್ಷಿ ಹೇಳುತ್ತಿದೆ. ಇಷ್ಟಾಗಿಯೂ ಈ ದ್ವೇಷ, ರೊಚ್ಚು, ಸೇಡು ಎಲ್ಲ ಮುಗಿದುಹೋಗಲಿ, ದೌರ್ಜನ್ಯಕ್ಕೆ ಒಳಗಾದ ಪತ್ರಕರ್ತ, ನ್ಯಾಯವಾದಿ ಮತ್ತು ಪೊಲೀಸರಿಗೆ ನ್ಯಾಯ ದೊರಕಲಿ ಎಂದು ಆಶಿಸುವುದಷ್ಟೆ ನಮ್ಮ ಈ ಕ್ಷಣದ ವಿನಂತಿ.

Sunday, March 4, 2012

ಪತ್ರಕರ್ತರು, ವಕೀಲರು ಆಯಾ ಸಮುದಾಯವನ್ನಷ್ಟೇ ಪ್ರತಿನಿಧಿಸುವುದಿಲ್ಲ, ಅದು ವೃತ್ತಿಧರ್ಮವೂ ಅಲ್ಲ....


ಯುದ್ಧ ಹೆಚ್ಚು ದೀರ್ಘವಾದಷ್ಟೂ ಉಭಯ ಪಂಗಡಗಳಿಗೂ ಸಾವು ನೋವು ಖಾತರಿ. ಹಾಗಾಗಿ ಯುದ್ಧವನ್ನು ಹೆಚ್ಚು ಕಾಲ ಮುಂದುವರೆಸಲಾಗುವುದಿಲ್ಲ. ರಕ್ತ-ಗಾಯಗಳು ಕಾಣಿಸಿದ ಮೇಲೆ ಯುದ್ಧಪೂರ್ವದ ತೇಜಸ್ಸೂ, ಆವೇಶವೂ ಹಾಗೇ ಉಳಿದಿರುವುದಿಲ್ಲ. ವಕೀಲರು-ಪತ್ರಕರ್ತರ ಸಂಘರ್ಷದಲ್ಲಿ ಮರೆತ ಮಾನವೀಯತೆಯನ್ನು ಹುಡುಕಿಕೊಳ್ಳಲೇಬೇಕು. ಎಲ್ಲಾದರೂ ಈ ಅಸಹನೀಯ ದ್ವೇಷದ ವಾತಾವರಣವನ್ನು ತಿಳಿಗೊಳಿಸುವ ಕಾರ್ಯ ಯಾರಿಂದಾದರೂ ನಡೆಯಲೇಬೇಕು. ಅದು ಆರಂಭವಾಗಿದೆ. ನಾಳೆ ವಕೀಲರ ಪ್ರತಿಭಟನೆ. ಅದು ಮತ್ತೆ ಈ ಸಂಘರ್ಷವನ್ನು ತಾರಕಕ್ಕೆ ತೆಗೆದುಕೊಂಡು ಹೋಗುತ್ತದಾ? ಅಥವಾ ಆ ಕಡೆಯಿಂದನೂ ಬಿಳಿ ಪಾರಿವಾಳಗಳು ಹಾರಬಹುದಾ? ಕಾದು ನೋಡಬೇಕು. ನಾಳೆ ಪತ್ರಕರ್ತರ ದೊಡ್ಡಮಟ್ಟದ ಪ್ರತಿಭಟನೆಯೂ ನಡೆಯಲಿದೆ. ಅಲ್ಲಿ ಹಿರಿಯ ಪತ್ರಕರ್ತರು ಒಂದಷ್ಟು ವಿವೇಕದ ಮಾತನಾಡಬಹುದಾ? ಕಾದುನೋಡಬೇಕು.

ಇದಕ್ಕೂ ಮುನ್ನವೇ ತಿಳಿಗೊಳಿಸುವ ಪ್ರಯತ್ನವನ್ನು ಮೊದಲು ಆರಂಭಿಸಿದ್ದು ಸಮಯ ಟಿವಿ. ಇತರ ಚಾನಲ್ಲುಗಳು ರೋಷಾವೇಶದಲ್ಲಿ ಕುದಿಯುತ್ತಿದ್ದಾಗಲೇ ಸಮಯ ಟಿವಿ ಯಾಕೆ ಹಿಂಗಾಯ್ತು ಎಂಬ ಚರ್ಚೆ ನಡೆಸಿ ಆತ್ಮಶೋಧನೆಗೆ ದಾರಿ ಮಾಡಿಕೊಟ್ಟಿತು. ಮೂವರು ವಕೀಲರು, ಇಬ್ಬರು ಪತ್ರಕರ್ತರು ಮತ್ತು ಓರ್ವ ಮಾಜಿ ಪೊಲೀಸ್ ಅಧಿಕಾರಿಯ ಜತೆ ಸಮಯದ ನಿರ್ದೇಶಕ ಶಿವಪ್ರಸಾದ್ ಚರ್ಚೆ ನಡೆಸಿದರು.

ಒಂದು ಬಹುಮುಖ್ಯ ವಿಷಯವೆಂದರೆ ನೀವು ನನ್ನ ಪ್ರಶ್ನೆಗಷ್ಟೇ ಉತ್ತರ ಕೊಡಬೇಕು, ಉತ್ತರ ಕೊಡುವಾಗಲೂ ನನಗೆ ಅಹಿತವೆನಿಸಿದ್ದನ್ನು ಹೇಳಕೂಡದು, ನನಗೆ ಬೇಡದ ಉತ್ತರ ಬಂದರೆ ನಿಮಗೆ ಮಾತನಾಡಲು ಬಿಡುವುದಿಲ್ಲ ಎಂಬ ಕೆಲವು ಟಿಪಿಕಲ್ ನಿರೂಪಕರ ಹಾಗೆ ಅವರು ಚರ್ಚೆ ನಡೆಸಲಿಲ್ಲ. ಎಲ್ಲರಿಗೂ ಅವರ ಪಾಡಿಗೆ ಅವರು ಮಾತನಾಡಲು ಬಿಟ್ಟರು. ಹಿರಿಯ ವಕೀಲ ದೊರೆರಾಜು ಸ್ವಲ್ಪ ಭಾವುಕರಾದಂತೆ ಕಂಡರೂ ತಮಗೆ ಹೇಳಬೇಕೆನಿಸಿದ್ದನ್ನು ಎಗ್ಗಿಲ್ಲದೆ ಹೇಳಿದರು. ಡಾ. ಸಿ.ಎಸ್.ದ್ವಾರಕಾನಾಥ್ ಸಹ ಘಟನೆಯ ಎಲ್ಲ ಮಗ್ಗುಲುಗಳನ್ನು ವಿವರಿಸಿದರು. ಪತ್ರಕರ್ತರ ಮೇಲೆ ದಾಳಿ ನಡೆಸಿದವರನ್ನು ನೇಣು ಹಾಕಿ, ನಮ್ಮ ಅಭ್ಯಂತರವಿಲ್ಲ. ಆದರೆ ಇಡೀ ವಕೀಲ ಸಮುದಾಯವನ್ನು ಗೂಂಡಾಗಳೆಂದು ಕರೆಯಬೇಡಿ ಎಂದು ಅವರು ಹೇಳಿದರು.

ಕೋರ್ಟ್ ಒಳಗೆ ಪೊಲೀಸರು ವಕೀಲರ ಮೇಲೆ ನಡೆಸಿದ ದೌರ್ಜನ್ಯವನ್ನು ಕವರ್ ಮಾಡಲು ಸಾಧ್ಯವಾಗದೇ ಇರುವುದಕ್ಕೆ ಕಾರಣ ಒಳಗೆ ಮೀಡಿಯಾ ಕ್ಯಾಮೆರಾಗಳು ಇಲ್ಲದೇ ಇದ್ದಿದ್ದು ಎಂದು ಪತ್ರಕರ್ತ ರಾಜಾ ಶೈಲೇಶ್ ಚಂದ್ರ ಗುಪ್ತ ಬಾಲಿಷ ಸಮರ್ಥನೆ ನೀಡಿದಾಗ ದ್ವಾರಕಾನಾಥ್ ನೀಡಿದ ಉತ್ತರ: ಸುದ್ದಿ ಮಾಡುವುದಕ್ಕೆ ಕ್ಯಾಮೆರಾ ಬೇಕು ಎಂದೇನೂ ಇಲ್ಲ. ಕಣ್ಣು ಇರಬೇಕು, ಹೃದಯ ಇರಬೇಕು, ಮನಸ್ಸು ಇರಬೇಕು...

ಇದಾದ ತರುವಾಯ ಎಲ್ಲ ಚಾನಲ್‌ಗಳಲ್ಲೂ ಒರಟಾಟದ ಧ್ವನಿ ಗಣನೀಯವಾಗಿ ತಗ್ಗಿದ್ದನ್ನು ಗಮನಿಸಬಹುದು. ಭಾಷೆಯಲ್ಲಿ ಸ್ವಲ್ಪ ಸೌಮ್ಯತೆ ಕಾಣಿಸಿತು. ಗಲಭೆಯ ದಿನ ಸೈನಿಕರನ್ನು ಹುರಿದುಂಬಿಸುವ ಸೇನಾಧಿಪತಿಯಂತೆ ಮಾತನಾಡುತ್ತಿದ್ದ ಪಬ್ಲಿಕ್ ಟಿವಿಯ ರಂಗಣ್ಣನ ಧ್ವನಿಯಲ್ಲೂ ಒಂಚೂರು ಸೌಮ್ಯತೆ ಕಾಣಿಸಿದ್ದನ್ನು ನೀವು ಗಮನಿಸಿರಬಹುದು. ಪೊಲೀಸರು ಬಿಡುಗಡೆ ಮಾಡಿದ ಆರೋಪಿಗಳ ಪಟ್ಟಿಯನ್ನು ಅಪರಾಧಿಗಳ ಪಟ್ಟಿ ಎಂಬಂತೆಯೇ ಘೋಷಿಸುತ್ತಿದ್ದ ಸುವರ್ಣನ್ಯೂಸ್‌ನಲ್ಲೂ ಕೊಂಚ ಅಬ್ಬರದ ಧ್ವನಿ ತಗ್ಗಿದಂತಿತ್ತು.

ಉದಯವಾಣಿ ಪತ್ರಿಕೆ ಇವತ್ತು ಘಟನೆಗೆ ಇರುವ ಮೂರು ಆಯಾಮಗಳನ್ನು ವಿವರಿಸಿ ತನ್ನ ಅಗ್ರ ಸುದ್ದಿ ಪ್ರಕಟಿಸಿತು. ಅದೂ ಕೂಡ ರಣಭೂಮಿಯಲ್ಲಿ ಒಂದು ಹೆಜ್ಜೆ ಹಿಂದಿಟ್ಟ ಸೇನಾಪಾಳಯದ ಲಕ್ಷಣ. ಹೊತ್ತಿರುವ ಬೆಂಕಿಯನ್ನು ಆರಿಸುವುದು ಹೇಗೆ ಎಂಬುದು ಮೊದಲ ಆದ್ಯತೆ ಎಂದು ರವಿ ಹೆಗಡೆ ಬರೆದು ಪತ್ರಿಕೆಯ ನಿಲುವನ್ನು ಜಾಹೀರುಪಡಿಸಿದರು.

ವಾರ್ತಾಭಾರತಿ ಸಂಪಾದಕ ಬಿ.ಎಂ.ಬಷೀರ್ ತಮ್ಮ ಫೇಸ್ ಬುಕ್‌ನಲ್ಲಿ ಬರೆಯುತ್ತ ಮಾನವ ಹಕ್ಕಿನ ಮೇಲೆ ದಾಳಿಯಾದಾಗ ಸಂತ್ರಸ್ತರಿಗೆ ಬೆಂಗಾವಲಾಗಿ ನಿಂತು, ಗುದ್ದಾಡಿದ, ಒದ್ದಾಡಿದ, ಪ್ರಾಣವನ್ನೇ ಕಳೆದುಕೊಂಡ ಅದೆಷ್ಟೋ ವಕೀಲರು ನಮ್ಮ ನಡುವೆ ಇರುವಾಗ, ವಕೀಲ ವೃತ್ತಿಯ ಘನತೆಯನ್ನು ತಿಳಿಯ ಹೊಸ ತಲೆಮಾರು, ಯಾವುದೋ ಹಿತಾಸಕ್ತಿಗೆ ಬಲಿಯಾಗಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದಾಕ್ಷಣ ನಾವು ಇಡೀ ವಕೀಲರ ಮೇಲೆ ಆರೋಪ ಮಾಡುವುದು ನಿಜವಾದ ಲಾಯರ್‌ಗಳಿಗೆ ಮಾಡುವ ಅವಮಾನ. ಈ ನಾಡಿನ ಅದೆಷ್ಟೋ ರಾಜಕಾರಣಿಗಳು ಒಂದು ಕಾಲದಲ್ಲಿ ವಕೀಲರಾಗಿ ದುಡಿದವರು. ಪೊಲೀಸ್ ವ್ಯವಸ್ಥೆ ನಿರಂಕುಶವಾಗಿ ವರ್ತಿಸಿದಾಗ ಪತ್ರಕರ್ತರನ್ನೂ ಸೇರಿದಂತೆ ಈ ನಾಡಿನ ಜನತೆಯನ್ನು ಮುಂದೆ ನಿಂತು ರಕ್ಷಿಸಿದವರು ವಕೀಲರು. ಇಂದು ನಾವು ವಕೀಲರ ಮೇಲೆ ಸಾರಾಸಗಟಾಗಿ ಆರೋಪ ಮಾಡುವಾಗ, ಆ ಕುರಿತ ಪ್ರಜ್ಞೆ ನಮ್ಮಲ್ಲಿರಬೇಕಾಗುತ್ತದೆ  ಎಂದು ಹೇಳಿದ್ದಾರೆ.

ಪತ್ರಕರ್ತ ಕೇವಲ ಪತ್ರಕರ್ತ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಆತ ಇಡೀ ಸಮಾಜದ ಗಂಟಲು. ಧರ್ಮ, ಜಾತಿ, ಮತ, ಪಂಥ, ಭಾಷೆಗಳ ಭೇದವಿಲ್ಲದಂತೆ ಎಲ್ಲರ ಅಭಿವ್ಯಕ್ತಿಗಳಿಗೂ ಅವನು ಕಣ್ಣಾಗಬೇಕು, ಕಿವಿಯಾಗಬೇಕು.  ನಾನು ಪತ್ರಕರ್ತರನ್ನಷ್ಟೆ ಪ್ರತಿನಿಧಿಸುತ್ತೇನೆ ಎಂದು ಚೌಕಟ್ಟು ಹಾಕಿಕೊಂಡು ಕುಳಿತ ತಕ್ಷಣ ಅವನೊಳಿಗೆ ಪತ್ರಕರ್ತ ಸತ್ತ ಎಂದೇ ಅರ್ಥ. ಇಂಥವರು ಕೇವಲ ಸಂಬಳಕ್ಕಾಗಿ ವೃತ್ತಿ ಮಾಡುವವರು. ಪತ್ರಕರ್ತರು ಸಮಾಜದ ಪ್ರತಿಯೊಬ್ಬನ, ಕಟ್ಟಕಡೆಯ ಮನುಷ್ಯನನ್ನೂ ಪ್ರತಿನಿಧಿಸಬೇಕು, ಅವನ ಧ್ವನಿಯನ್ನು ದಾಖಲಿಸಬೇಕು. ವಕೀಲರ ನೋವನ್ನು, ಅವರ ಮೇಲೆ ನಡೆದ ದೌರ್ಜನ್ಯವನ್ನು ನಾವು ಪ್ರಕಟಿಸುವುದಿಲ್ಲ, ಪ್ರಸಾರಿಸುವುದಿಲ್ಲ ಎಂಬ ನಿಲುವು ವೃತ್ತಿಧರ್ಮವಲ್ಲ. ವಕೀಲರ ಕೊಲೆ ಕೇಸು ಆರೋಪಿಗೂ ಒಬ್ಬ ವಕೀಲನಿರುತ್ತಾನೆ, ವಕೀಲರಿಲ್ಲದೆ ಕೇಸು ನಡೆಯುವುದಿಲ್ಲ, ಯಾರೋ ಒಬ್ಬರು ವಕಾಲತು ಮಾಡಲೇಬೇಕು, ಅದು ವಕೀಲರ ವೃತ್ತಿಧರ್ಮ. ಹಾಗೆಯೇ ಪತ್ರಕರ್ತರು ಮೊನ್ನೆಯ ಘಟನೆಯಲ್ಲಿ ತಾವು ಒಂದು ಪಕ್ಷವಾಗಿದ್ದರೂ ಸಹ, ಎದುರು ಪಕ್ಷದವರ ಮಾತನ್ನೂ ಪ್ರಕಟಿಸಬೇಕು, ಪ್ರಸಾರಿಸಬೇಕು. ಆ ಕೆಲಸ ಈಗ ಆಗುತ್ತಿದೆ.

ದಾಳಿಕೋರ ವಕೀಲರನ್ನು ವಕೀಲ ಸಮುದಾಯದಿಂದ ಪ್ರತ್ಯೇಕಿಸಿ ಮಾತನಾಡದ ಹೊರತು, ಹಲ್ಲೆಗೊಳಗಾದ ಪತ್ರಕರ್ತರಿಗೆ ನ್ಯಾಯ ದೊರೆಯುವುದೂ ಅನುಮಾನ. ಯಾಕೆಂದರೆ ಇಡೀ ಸಮುದಾಯವನ್ನು ನಿಂದಿಸುತ್ತಲೇ ಇದ್ದರೆ ಆ ಸಮುದಾಯ ಒಟ್ಟಾಗಿ ನಿಲ್ಲುತ್ತದೆ, ದಾಳಿಕೋರರಿಗೆ ರಕ್ಷಣೆಯೂ ದೊರೆಯುತ್ತದೆ.

ಇದೆಲ್ಲವನ್ನೂ ವಕೀಲ ಸಮುದಾಯವೂ ಗಮನಿಸಿರಬಹುದು, ಗಮನಿಸಬಹುದು. ಮಾಧ್ಯಮದಲ್ಲಿ ಇರುವವರೆಲ್ಲ ಭ್ರಷ್ಟರಲ್ಲ, ದುಷ್ಟರಲ್ಲ ಎಂಬುದು ಅವರಿಗೂ ಗೊತ್ತಿದೆ. ವಕೀಲರ ಜತೆಗೆ ಅನುಚಿತವಾಗಿ ವರ್ತಿಸಿರಬಹುದಾದ ಪತ್ರಕರ್ತರು ಬೆರಳೆಣಿಕೆಯಷ್ಟು ಜನರು, ಎಲ್ಲರೂ ಹಾಗಿರಲು ಸಾಧ್ಯವಿಲ್ಲ ಎಂಬುದೂ ಅವರಿಗೆ ಅರಿವಾಗಬೇಕು. ಮಿಕ್ಕಂತೆ ಪ್ರಚೋದಿತ ವರದಿಗಳು, ಏಕಮುಖ ವರದಿಗಳಿಗೆ ಆ ಕ್ಷಣದ ರೋಷಾವೇಶಗಳು ಕಾರಣವಾಗಿರುತ್ತವೆ ಎಂದೂ ಸಹ ಅವರು ಅರಿತುಕೊಳ್ಳಬೇಕು.

ಒಂದು ಕಡೆಯಿಂದ ಸೌಹಾರ್ದತೆಯ ಮಾತುಗಳು ಕೇಳಿಬಂದಿದೆ, ಮತ್ತೊಂದು ಕಡೆಯಿಂದಲೂ ಅದು ಬರುವಂತಾಗಲಿ. ಇದು ನಮ್ಮ ಆಶಯ.

ವಕೀಲರು v/s ಮಾಧ್ಯಮಗಳು - ಪ್ರಜಾಪ್ರಭುತ್ವಕ್ಕೆ ಮತ್ತೊಂದು ಸೋಲು.


ಯಾವೆರಡು ಅಂಗಗಳು ಸೇರಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕ್ರಿಯೆಯಲ್ಲಿ ಇನ್ನಷ್ಟು ಕ್ರಿಯಾಶೀಲರಾಗಿ ತೊಡಗಿರಬೇಕಿತ್ತೋ ಅವೆರಡೂ ಪರಸ್ಪರ ಗುದುಮುರುಗಿಯಲ್ಲಿ ಬಿದ್ದಿವೆ. ಮೊನ್ನೆ ಬೆಂಗಳೂರನ ಸಿವಿಲ್ ಕೋರ್ಟಿನ ಆವರಣ ಮತ್ತು ಕೋರ್ಟಿನ ಒಳಗೆ ನಡೆದಿರುವ ಘಟನೆಗಳು ರಾಜ್ಯದ ಮಟ್ಟಿಗೆ ಅತ್ಯಂತ ಕೆಟ್ಟ ಬೆಳವಣಿಗೆಗಳು. ಅದೂ ಕೆಟ್ಟ ಆಡಳಿತವೊಂದನ್ನು ಜನರು ನೋಡುತ್ತಿರುವ ಸಂದರ್ಭದಲ್ಲಿ ಈಗಾಗಿರುವ ಬೆಳವಳಿಗೆ ಮತ್ತೂ ಕೆಟ್ಟ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.

ನಿಜಕ್ಕೂ ಇಂತಹ ಕೆಟ್ಟಕಾಲದಲ್ಲಿ ಇರುವ ನಮ್ಮಷ್ಟು ದುರಾದೃಷ್ಟವಂತರು ಯಾರೂ ಇಲ್ಲವೇನೋ. ಒಂದೆಡೆ ಭ್ರಷ್ಟತೆಯ ಕೂಪದಲ್ಲಿ ನಾಡು ಮುಳುಗಿ ಏಳುತ್ತಿದ್ದರೆ ಈಗ ಹಲ್ಲೆ, ಗೂಂಡಾಗಿರಿಗಳು ತಾಂಡವವಾಡುತ್ತಿವೆ. ಅದರಲ್ಲೂ ಕಲಿತ ವರ್ಗಗಳೇ ಅರಾಜಕತೆಯಲ್ಲಿ ಮುಳುಗಿರುವಾಗ ಇನ್ಯಾರು ಈ ನಾಡನ್ನು ರಕ್ಷಿಸಲು ಸಾಧ್ಯ ಹೇಳಿ?

ಕೆಲವು ಗೂಂಡಾ ಪ್ರವೃತ್ತಿಯ, ಅವಿವೇಕಿ ವಕೀಲರು ಅಂದು ನಡೆದುಕೊಂಡಿರುವ ವರ್ತನೆ ನಿಜಕ್ಕೂ ಬೆಚ್ಚಿ ಬೀಳಿಸುವಂತಾದ್ದು. ಬಡಪಾಯಿ ಹೊಟ್ಟಿಪಾಡಿನ ಮಾಧ್ಯಮ ವರದಿಗಾರರ ಮೇಲೆ ಕೈಮಾಡಿದ ಅವರ ಅಪರಾಧ ಅಕ್ಷಮ್ಯ. ಇಂತಹ ದುರಾಂಧರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು.

ಪತ್ರಕರ್ತರ ಪಾಲಿಗೆ ಇಂದು ಬಹಳ ಕೆಟ್ಟ ದಿನಗಳು. ಮೊನ್ನೆ ಮಧ್ಯಪ್ರದೇಶದಲ್ಲಿ ಬಿಜೆಪಿಯ ಕುಮ್ಮಕ್ಕಿನಿಂದ ಗೂಂಡಾಗಳು ಒಬ್ಬ ಪ್ರಾಮಾಣಿಕ ಪತ್ರಕರ್ತನನ್ನು ಆತನ ಇಡೀ ಕುಟುಂಬದ ಸಮೇತ ಕಗ್ಗೊಲೆ ನಡೆಸಿದ್ದಾರೆ. ಇಂದು ದೇಶದಲ್ಲಿ ಹಲವಾರು ಕಡೆಗಳಲ್ಲಿ ಅತ್ಯಂತ ಅಪಾಯದ ಸ್ಥಿತಿಯಲ್ಲಿರುವವರೆಂದರೆ ಸತ್ಯವನ್ನು ಭೇಧಿಸುತ್ತೇವೆ ಎಂದು ಹೊರಡುವ ಪತ್ರಕರ್ತರು ಮತ್ತು ಭ್ರಷ್ಟರ ಕುರಿತ ಮಾಹಿತಿಯನ್ನು ಹೊರಗೆಳೆಯುತ್ತೇವೆ ಎಂದು ಹೊರಡುವ ಮಾಹಿತಿ ಹಕ್ಕು ಕಾರ್ಯಕರ್ತರು.

ಇಂತಹ ಒಂದು ಸಂದಿಗ್ಧ ಸಂದರ್ಭವನ್ನು ನ್ಯಾಯವಾದಿಗಳು ಅರ್ಥ ಮಾಡಿಕೊಳ್ಳಬೇಕಿತ್ತು. ಮಾಧ್ಯಮಗಳೊಂದಿಗೆ ಸಂಘರ್ಷವಾಗುವ ಸಂದರ್ಭದಲ್ಲಿ ಕೊಂಚ ವಿವೇಕಿಗಳಾಗಿರಬೇಕಿತ್ತು. ಮಾಧ್ಯಮದವರು, ಮಾಹಿತಿ ಹಕ್ಕು ಕಾರ್ಯಕರ್ತರು ಹಾಗೂ ವಕೀಲರು ಈ ಮೂರೂ ಜನರ ಉತ್ತಮ ಸಂಯೋಜನೆಯಲ್ಲಿ ಕೆಲಸ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಉಳಿಗಾಲ. ಆದರೆ ಇಲ್ಲಿ ಇತ್ತೀಚಿನ ಬೆಳವಣಿಗೆಗಳು ವಿರುದ್ಧಗತಿಯಲ್ಲಿ ಹೊರಟಿರುವುದು ಮಾತ್ರ ವಿಷಾಧನೀಯ.
ಇದು ಇಡೀ ಸಮಸ್ಯೆಯ ಒಂದು ಮುಖ. ಈಗ ಸೃಷ್ಟಿಯಾಗಿರುವ ಸಂದರ್ಭಕ್ಕೆ ಮತ್ತೊಂದು ಮುಖ ಇದೆ. ಇದು ಮಾಧ್ಯಮಗಳ ಅದರಲ್ಲೂ ದೃಶ್ಯವಾಹಿನಿಗಳ ಟಿಆರ್‌ಪಿ ಹುಚ್ಚು ಹಾಗೂ ಪ್ರತಿಯೊಂದನ್ನೂ ವೈಭವೀಕರಿಸಿ, ಅತಿರಂಜಿಸುವಲ್ಲಿನ ಹಾಳು ಪೈಪೋಟಿಯಿಂದಾದ ಅನಾಹುತ. ಅಗತ್ಯ ಇರುವುದು, ಇಲ್ಲದಿರುವುದು, ಏನೊಂದೂ ನೋಡದೇ ಪ್ರತಿಯೊಂದನ್ನೂ ಲೈವ್ ತೋರಿಸಬೇಕು ಎನ್ನುವ ಹಪಹಪಿಕೆ. ಇದರ ಪರಿಣಾಮವಾಗಿಯೇ ಒತ್ತಡದಲ್ಲಿ ಸಿಲುಕುವ ವರದಿಗಾರರು ಹಲ್ಲೆಗೆ, ನಿಂದನೆಗೆ ಒಳಗಾಗುವುದು.

ಮೊನ್ನೆ ಘಟನೆಯನ್ನೇ ನೋಡೋಣ. ನ್ಯಾಯಾಲಯ ಎಂದರೆ ಅದಕ್ಕೆ ಒಂದು ಘನತೆ ಇದೆಯಲ್ಲವೇ? ಆವರಣದಲ್ಲಿ ಒಂದು ಮೊಬೈಲ್ ರಿಂಗ್ ಆದರೂ ದಂಡವಿಧಿಸಲಾಗುತ್ತದೆ. ಹೀಗಿರುವಾಗ ಜನಾರ್ಧನ ರೆಡ್ಡಿಯ ಕಲಾಪಗಳನ್ನು ಕೋರ್ಟು ಆವರಣದ ಒಳಗಿನಿಂದಲೂ ಲೈವ್ ತೋರಿಸುವ ಅಗತ್ಯ ಯಾರಿಗಿತ್ತು? ನ್ಯಾಯಾಲಯದ ನಡೆಗಳಿಗೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕಾಗಿ ಕೋರ್ಟಿನೊಳಗೆ ಮಾಧ್ಯಮಗಳನ್ನು ಬಿಡಲಾಗುವುದಿಲ್ಲ ಎಂದು ನ್ಯಾಯವಾದಿಗಳು ಮಾಧ್ಯಮದವರಿಗೆ ತಾಕೀತು ಮಾಡಿದ್ದರಲ್ಲಿ ತಪ್ಪೇನಿತ್ತು? ಆದರೆ ತಾವು ಹೋಗುವುದೇ ಸೈ ಎಂದು ಪೊಲೀಸರನ್ನೂ ಬಳಸಿಕೊಂಡು ತಾವು ಸೆನ್ಷೇಶನ್ ನ್ಯೂಸ್ ಕೊಡುವುದೇ ಸೈ ಎಂದು ವಕೀಲರೊಂದಿಗೆ ವಾಗ್ವಾದಕ್ಕಿಳಿದ ಮಾಧ್ಯಮದ ವರದಿಗಾರರಿಗೆ ಪ್ರಜ್ಞೆ ಇತ್ತೇ?  ಅದರಲ್ಲೂ ಕೆಲ ದಿನಗಳ ಹಿಂದೆಯಷ್ಟೇ ಮಾಧ್ಯಮದವರಿಗೂ, ವಕೀಲರಿಗೂ ನಡುವೆ ಕಹಿ ಸಂಬಂಧ ಏರ್ಪಟ್ಟಿದ್ದ ಸಂದರ್ಭದಲ್ಲಿ ಪರಿಸ್ಥಿತಿ ಇನ್ನಷ್ಟು ಸೂಕ್ಷ್ಮವಾಗಿತ್ತು. ನ್ಯಾಯವಾದಿಗಳನ್ನು ಲಾಕಪ್‌ನಲ್ಲಿ ಚಚ್ಚಿದ್ದ ಪೊಲೀಸರ ವಿರುದ್ಧ ವಕೀಲರು ಪ್ರತಿಭಟನೆಗಿಳಿದಾಗ ಸಂಬಂಧ ಪಟ್ಟ ಪೊಲೀಸ್ ಅಧಿಕಾರಿಗಳು ಕೂಡಲೇ ಸ್ಪಂದಿಸದಿದ್ದರಿಂದಾಗಿ ಗಂಟೆಗಟ್ಟಲೆ ರಸ್ತೆ ಜಾಮ್ ಆಗುವ ಸಂದರ್ಭ ಬಂದೊದಗಿತ್ತು. ಅಂದು ಮಾನ್ಯ ಮಿರ್ಜಿಯವರು ಕೂಡಲೇ ಸ್ಪಂದಿಸಿದ್ದರೆ ಅಷ್ಟೊಂದು ಸಮಸ್ಯೆಯೇನೂ ಆಗುತ್ತಿರಲಿಲ್ಲ. ಆದರೆ ವಾಹಿನಿಯವರಿಗೆ ಸಮಸ್ಯೆ ಅಷ್ಟು ಸಲಭವಾಗಿ ಸಮಸ್ಯೆ ಬಗೆಹರಿದಿದ್ದರೆ ಅದು ಒಳ್ಳೆದಿನವಲ್ಲ. ಕೊನೆಗೆ ಅವರಿಚ್ಛೆಯಂತೆಯೇ ಆಗಿತ್ತು. ಹೀಗೆ ಅಂದು ಮಾಧ್ಯಮಗಳಿಂದ ಸಾರ್ವಜನಿಕವಾಗಿ ತೀರಾ ಅವಮಾನಕ್ಕೊಳಗಾಗಿದ್ದ ವಕೀಲರು ಯಾವ ಮನಸ್ಥಿತಿಯಲ್ಲಿದ್ದರು ಎಂದು ಗ್ರಹಿಸುವುದು ಟೀವಿಗಳ ಮುಖ್ಯಸ್ಥರಿಗೆ ಅರಿವಿರಲಿಲ್ಲವೇ? ಆದರೂ ಪೊಲೀಸರಿಗೆ ಕುಮ್ಮಕ್ಕು ಕೊಟ್ಟು ಮೊನ್ನೆ ವಕೀಲರೊಂದಿಗೆ ಜಗಳಕ್ಕಿಳಿಯುವ ಅಗತ್ಯವಿತ್ತೇ? ಪರಿಸ್ಥಿತಿಯ ಗಭೀರತೆಯನ್ನು ಗ್ರಹಿಸಿ ತಮ್ಮ ವರದಿಗಾರಿಗೆ ಕಿವಿಮಾತು ಹೇಳಿರಲಿಲ್ಲವೇಕೆ?

ವಕೀಲರು ವರದಿಗಾರರಿಗೆ ಹೊಡೆದರು. ಒಬಿ ವ್ಯಾನ್‌ಗಳ ಮೇಲೆ ಬಲವಾದ ಕಲ್ಲುಗಳನ್ನು ಎತ್ತಿಹಾಕಿದರು. ಇಷ್ಟೊತ್ತಿಗೆ ಅಂದು ಪರಿಸ್ಥಿತಿ ಹೀಗಾಗಲಿರುವನ್ನು ಸರಿಯಾಗಿಯೇ ಗ್ರಹಿಸಿದ್ದ ಪೊಲೀಸರು ಎಲ್ಲಾ ಬಗೆಯಿಂದಲೂ ಸಜ್ಜಿತವಾಗಿಯೇ ಬಂದಿದ್ದರು. ಬಾಕ್ಸ್‌ಗಳಲ್ಲಿ ಕಲ್ಲುಗಳನ್ನು ತಂದಿದ್ದರು. (ಕಲ್ಲುಗಳನ್ನು ತಂದಿದ್ದು ವಕೀಲರು ಎಂದು ಟಿವಿಗಳು ತಪ್ಪಾಗಿ ವರದಿ ಮಾಡಿದವು). ಅವರು ತಪ್ಪಿತ್ಥಸ್ಥರನ್ನು ಬಂಧಿಸುವ ಗೋಜಿಗೇ ಹೋಗಲಿಲ್ಲ. ಸಿಕ್ಕಿದ್ದೇ ಛಾನ್ಸು ಎಂದು ಪೊಲೀಸರು ಸಾವಿರ ಸಾವಿರ ಸಂಖ್ಯೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ನುಗ್ಗಿದರು. ನಂತರ ಆವರಣದಲ್ಲಿ ಸಿಕ್ಕ ಸಿಕ್ಕ ವಕೀಲರನ್ನು ಚಚ್ಚಿದರು. ಈ ಹೊತ್ತಿಗೆ ಪೊಲೀಸರು ಹೊಡೆದ ಒಂದು ಕಲ್ಲನ್ನು ತಿರುಗಿಸಿ ವಕೀಲನೊಬ್ಬ ಹೊಡೆದ ಪೆಟ್ಟಿಗೆ ಪೇದೆಯೊಬ್ಬರಿಗೆ ಗಂಭೀರವಾಗಿ ಗಾಯವಾಯ್ತು.  ಕೊನೆಗೆ ಮಿರ್ಜಿ ಲಾಠಿಚಾರ್ಜ್‌ಗೆ ಆದೇಶ ನೀಡಿದರು. ಕೂಡಲೇ ತಮ್ಮ ಸಿಟ್ಟನ್ನು ವಿಚಿತ್ರ ರೀತಿಯಲ್ಲಿ ತೀರಿಸಿಕೊಂಡದ್ದು ಪೊಲೀಸರು. ಹೀಗೆ ವಕೀಲರನ್ನು ಥಳಿಸತೊಡಗಿದಂತೆಯೇ ವಕೀಲಲ್ಲಿ ಯಾವನೋ ತಲೆಕೆಟ್ಟ ಒಬ್ಬ ವಕೀಲ ಮೊದಲ ಮಹಡಿಯಿಂದ ಒಂದು ಕುರ್ಚಿ ಎತ್ತಿಹಾಕಿದ. (ಈ ಕುರ್ಚಿಯಿಂದ ಯಾರಿಗೂ ಪೆಟ್ಟಾಗಿಲ್ಲ. ಯಾಕೆಂದರೆ ಅದು ತೀರಾ ಹಗುರವಾಗಿತ್ತು). ಆದರೆ ಮಾಧ್ಯಮಗಳು ಈ ಕುರ್ಚಿಯ ಏಟಿನಿಂದಲೇ ಪೊಲೀಸ್ ಪೇದೆ ಮಹದೇವಯ್ಯ ಸತ್ತುಹೋದ ಎಂದು ನಿಮಿಷ ನಿಮಿಷಕ್ಕೂ ಭಿತ್ತರಿಸಿ ರಾಜ್ಯದಾದ್ಯಂತ ಸೆನ್ಷೇಷನ್ ಸೃಷ್ಟಿಸಿದರು. ಅಲ್ಲಿಗೆ ಪೊಲೀಸರು ಸಕ್ಸೆಸ್ ಆಗಿದ್ದರು.



ಗಾಳಿಗೆ ಗುಂಡು ಹಾರಿಸುತ್ತ, ಟಿಯರ್ ಗ್ಯಾಸ್ ಸಿಡಿಸುತ್ತ ನೂರಾರು ಸಂಖ್ಯೆಯಲ್ಲಿ  ಶಸ್ತ್ರಸಜ್ಜ್ಜಿತರಾಗಿ, ಫೈಬರ್ ಲಾಟಿಗಳನ್ನು, ಕಲ್ಲುಗಳನ್ನು ಹಿಡಿದು ನ್ಯಾಯಾಲಯದ ಒಳಗೆ ನುಗ್ಗಿದ ಪೊಲೀಸರು ವಿಚಿತ್ರವಾಗಿ ವರ್ತಿಸಿದರು. ನೂರಾರು ವಕೀಲರ ಮೇಲೆ (ಇವರಲ್ಲಿ ಬಹುತೇಕರು ಅಮಾಯಕರು) ಮನಸೋಯಿಚ್ಛೇ ಥಳಿಸಿದರು. ೩೦- ೪೦ ವಕೀಲರಿಗೆ ಗಂಭೀರ ಗಾಯಗಳಾದವು. ನ್ಯಾಯಾಲದ ಅಸೋಷಿಯೇಷನ್ ಒಳಗೆ ನುಗ್ಗಿ ಸುಮ್ಮನೇ ಕುಳಿತಿದ್ದವರನ್ನೆಲ್ಲಾ ಥಳಿಸಿದರು. ಲೇಡೀಸ್ ಅಸೋಷಿಯೇಷನ್‌ಗೆ ನುಗ್ಗಲು ಯತ್ನಿಸಿದರು. ಆದರೆ ಕೂಡಲೇ ಅದರ ಬಾಗಿಲು ಹಾಕಾಯಿತು. ನ್ಯಾಯಾಧೀಶರನ್ನೂ ಬಿಡದೇ ಬಡಿದರು. ನ್ಯಾಯಾದೀಶ ಬೂದಿಹಾಳ್ ಅವರಿಗೆ ತೀವ್ರ ಏಟು ಬಿದ್ದಿತು. ಕೋರ್ಟ್ ಆವರಣದಲ್ಲಿದ್ದ ವಕೀಲರ ಹತ್ತಾರು ಕಾರುಗಳಿಗೆ ಪೊಲೀಸರು ಬೆಂಕಿ ಹಚ್ಚಿದರು. ಗಾಜುಗಳನ್ನು ಪುಡಿಪುಡಿ ಮಾಡಿದರು. ಮಿರ್ಜಿ ಸಾಹೇಬರು ವಕೀಲರೇ ವಾಹನಗಳಿಗೆ ಬೆಂಕಿ ಹಚ್ಚಿದರು ಎಂದು ಹೇಳುತ್ತಾರೆ. ತಾವೆ ತಮ್ಮ ವಾಹನಗಳಿಗೆ ಬೆಂಕಿ ಹಚ್ಚಲು ಸಾಧ್ಯವೇ?

ಅತ್ತ ಟೀವಿಗಳಲ್ಲಿ ಮಾತ್ರ ಇದೆಲ್ಲದರರ ಬಗ್ಗೆ ಒಂದೇ ಒಂದು ಸೊಲೂ ಇರಲಿಲ್ಲ.

ನಿಜ ಹೇಳಬೇಕೆಂದಿದ್ದರೆ ಇಷ್ಟು ಹೊತ್ತಿಗೆ ಮಾಧ್ಯಮದವರೂ ಏಟು ತಿಂದು ಸೋತಿದ್ದರು. ವಕೀಲರೂ ಏಟು ತಿಂದು ಸೋತಿದ್ದರು. ಆದರೆ ಪೊಲೀಸರು ಗೆದ್ದಿದ್ದರು. ಅದೂ ಮಾಧ್ಯಮದವರ ಸಂಪೂರ್ಣ ಬೆಂಬಲದಿಂದ. ವಕೀಲರು ಹಾಗೂ ಮಾಧ್ಯಮದವರು ಇಬ್ಬರ ಕಾಟ ತಡೆಯಲಾರದೇ ಒಳಗೊಳಗೇ ಕುದಿಯುತ್ತಿದ್ದ ರಾಜಕಾರಣಿಗಳು, ಸಚಿವರು ಈಗ ಇಬ್ಬರ ಹೊಡೆದಾಟ ನೋಡಿ ಒಳಗೊಳಗೇ  ಮುಸಿಮುಸಿ ನಗುತ್ತಿದ್ದರು. ಈ ಖುಷಿಯಲ್ಲಿ ಮೊದಮೊದಲಿಗೆ ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಏನು ಹೇಳುವುದೇ ತೋಚದಾಗಿ ಏನೇನೋ ಹೇಳಿಕೆ ನೀಡತೊಡಗಿದ್ದರು. ಮಾಧ್ಯಮಗಳ ಒತ್ತಡ ಹೆಚ್ಚಿದಾಗಲಷ್ಟೇ ಅವರು ಮಾಧ್ಯಮದ ಪರವಾಗಿ ನಿಂತದ್ದು.

ನಂತರದಲ್ಲಿ ಇಡೀ ರಾಜ್ಯದ ಮಾಧ್ಯಮಗಳು ಒಂದಾದವು. ಪ್ರತಿಭಟಿಸಿದವು, ಸರ್ಕಾರವನ್ನು ಮಣಿಸಿದವು. ಹೋರಾಟ ನಡೆಸಿದವು.  ಅಪರಾಧವೆಸಗಿದ, ಎಸಗದ, ಹಲ್ಲೆಗೆ ಒಳಗಾದ ಅಮಾಯಕ, ಪ್ರಾಮಾಣಿಕ, ಎಲ್ಲಾ ವಕೀಲರನ್ನೂ ಯಾರಿಗೂ ಕೊಂಚವೂ ಮಾರ್ಜಿನ್ ಕೊಡದೇ ’ಗೂಂಡಾ ವಕೀಲರು’ ’ತಾಲಿಬಾನ್‌ಗಳು’, ಇತ್ಯಾದಿಯಾಗಿ ಜರಿದು ತಮ್ಮ ಮಾಧ್ಯಮ ಪ್ರಭಾವದಿಂದ ಎಲ್ಲಾ ವಕೀಲರನ್ನು ವಿಲನ್‌ಗಳಾಗಿ ಮಾಡಿಬಿಟ್ಟರು. ಇಡೀ ಪ್ರಕರಣದಲ್ಲಿ ವೃತ್ತಿಧರ್ಮಕ್ಕೆ ನಿಷ್ಟರಾಗಿ ನಿಷ್ಪಕ್ಷಪಾತವಾಗಿ ವರದಿ ಮಾಡಿದ್ದೆಂದರೆ ’ದ ಹಿಂದೂ’ ಮತ್ತು ಇತರ ಕೆಲವೇ ಪತ್ರಿಕೆಗಳು.

ಆದರೆ ಪಬ್ಲಿಕ್ ಮೆಮೊರಿ ತುಂಬಾ ಶಾರ್ಟ್. ಮತ್ತೆ ದಿನರಾತ್ರಿ ಟೀವಿಗಳು ನಡೆಸುವ ರಿಯಾಲಿಟಿ ಶೋಗಳ, ಬ್ರೇಕಿಂಗ್ ನ್ಯೂಸ್‌ಗಳ ಭರಾಟೆಯಲ್ಲಿ ಜನರು ಈ ಎರಡು ದಿನ ನಡೆದಿದ್ದೆಲ್ಲವನ್ನೂ ಮರೆತೇ ಬಿಡುತ್ತಾರೆ. ಈಗ ನಿಜಕ್ಕೂ ಮತ್ತೆ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುವುದು ಪತ್ರಕರ್ತರೇ.

ಈಗ ವಕೀಲರು ಸುಮ್ಮನೇ ಬಿಡುವ ಲಕ್ಷಣಗಳು ಕಾಣಿಸುತ್ತಿಲ್ಲ.  ಸಭೆಗಳ ಮೇಲೆ ಸಭೆಗಳಾಗುತ್ತಿವೆ.  ವಕೀಲರ ಸಂಘವೇ  ನಿರ್ಣಯಗಳನ್ನು ತೆಗೆದುಕೊಂಡಿದೆ. ಮಾಧ್ಯಮದ ಪಕ್ಷಪಾತದ ವಿರುದ್ಧ ಅವರು ರೊಚ್ಚಿಗೆದ್ದಿದ್ದಾರೆ.  ಪತ್ರಕರ್ತರ ಯಾವ ಕೇಸುಗಳನ್ನೂ ನಡೆಸಬಾರದು, ತಮ್ಮ ಬಗ್ಗೆ ಅವಾಚ್ಯವಾಗಿ ರೌಡಿಗಳು, ರೌಡಿ ವಕೀಲರು ಎಂದೆಲ್ಲಾ ದಿನವಿಡೀ ಕೂಗುತ್ತಿದ್ದ ಟಿವಿ ಚಾನಲ್‌ಗಳ ನಿರೂಪಕಿಯರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬೇಕು, ಪತ್ರಕರ್ತರ ಕುರಿತು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಕೇಸು ಜಡಿಯಬೇಕು ಎಂದೆಲ್ಲಾ ಚರ್ಚೆಗಳಾಗುತ್ತಿವೆ. ಇನ್ನು ರಾಜಕಾರಣಿಗಳ, ಭ್ರಷ್ಟರ ವಿರುದ್ಧ ಪತ್ರಕರ್ತರು ಬರೆದಾಗ ಕೇಸು ಹಾಕಿಸಿಕೊಂಡ ಪತ್ರಕರ್ತರು ವಕೀಲರನ್ನು ನೇಮಿಸಿಕೊಳ್ಳಬೇಕಾದಾಗ ಇದೇ ’ಗೂಂಡಾ’ ವಕೀಲರಿಗೇ ಕೈಕಾಲು ಹಿಡಿದು ದುಂಬಾಲು ಬೀಳಬೇಕಾದ ದುಸ್ಥಿತಿ ಬಂದೊದಗುವುದು ಎಷ್ಟು ಶೋಚನೀಯವಲ್ಲವೇ? ಇನ್ನು ರಾಜಕಾರಣಿಗಳು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದರೆ ಅವರ ಪರವಾಗಿ ಹೋಗುವ ಒಬ್ಬ ವಕೀಲ ಸಿಗುವುದೂ ದುಸ್ತರ. ಇಡೀ ಪ್ರಕರಣವನ್ನು ಏಕಮುಖವಾಗಿ ಹೇಳ ಹೊರಡುವ ಮುನ್ನ ಮಾಧ್ಯಮ ಮುಖ್ಯಸ್ಥರು ಕೊಂಚ ಆಲೋಚಿಸಬೇಕಿತ್ತಲ್ಲವೇ?

ಈಗ ಮಾಧ್ಯಮದವರನ್ನು ಬಳಸಿಕೊಂಡು ತಮ್ಮ ಬೇಳೆಕಾಳು ಬೇಯಿಸಕೊಂಡಿರುವ ಪೊಲೀಸರು ಮತ್ತು ರಾಜಕಾರಣಿಗಳು ಆಗ ಪತ್ರಕರ್ತರ ಬೆಂಬಲಕ್ಕೆ ನಿಲ್ಲುವ ಯಾವ ಸಾಧ್ಯತೆಯೂ ಇಲ್ಲ.

ಕೊನೆಗೊಂದು ಪ್ರಶ್ನೆ: ನೇರವಾಗಿ ಈ ಹಿಂದೆ ಸುವರ್ಣ ಸುದ್ದಿವಾಹಿನಿಯ ಮುಖ್ಯಸ್ಥರಾಗಿದ್ದವರಿಗೆ: 
ಈಗ ಟೀವಿ ವರದಿಗಾರರ ಮೇಲೆ ಹಲ್ಲೆಯಾಗಿದ್ದನ್ನು ಭಯಂಕರವಾಗಿ ವಿಶ್ಲೇಷಣೆಗೆ ತೊಡಗಿರುವ ನೀವು ಈ ಹಿಂದೆ ಬಳ್ಳಾರಿಯ ಗಣಿಕಳ್ಳರ ಗೂಂಡಾಗಳಿಂತ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಪ್ರಾಮಾಣಿಕ ವರದಿಗಾರ ಕುಮಾರ ರೈತರಿಗೆ ಆಸ್ಪತ್ರೆ ಖರ್ಚಿಗೆ ಹಣಕಾಸು ಬೆಂಬಲ ನೀಡುವುದಿರಲಿ ಕನಿಷ್ಟ ನೈತಿಕ ಸ್ಥೈರ್ಯವನ್ನೂ ಹೇಳದೇ ಕೊನೆಗೆ ಅವರ ಮೇಲೇ ಗೂಬೆ ಕೂರಿಸಿ ಅವರು ರಾಜಿನಾಮೆ ಕೊಡುವ ಪರಿಸ್ಥಿತಿ ಉಂಟು ಮಾಡಿದಿರಲ್ಲಾ ಆವಾಗ ನಿಮ್ಮ ವೃತ್ತಿಪ್ರೇಮ ಎಲ್ಲಿಹೋಗಿತ್ತು ಸ್ವಾಮಿ?