Tuesday, December 6, 2011

ಕೆಜಿಎಫ್‌ನ ಮಲಸಂತ್ರಸ್ಥರು: ದಯಾನಂದ್ ಬರೆದ ಕರಳು ಹಿಂಡುವ ವಾಸ್ತವಗಳು...


ಈ ನೆಲದ ಹಿರಿಮೆ ಮತ್ತು ಔನ್ನತ್ಯವನ್ನು ಹಾಡಿಹೊಗಳುವಾಗಲೆಲ್ಲ ಮೈಸೂರು ಪೇಟ, ಕೊಡವರ ದಿರಿಸು ಮತ್ತು ಕೋಲಾರದ ಕೆಜಿಎಫ್‌ನ ಚಿನ್ನದ ಗಣಿಯ ಪ್ರಸ್ತಾಪವಿಲ್ಲದೆ ಆ ಸಾಲು ಕೊನೆಯಾಗುವುದೇ ಇಲ್ಲ. ಒಂದನೇ ತರಗತಿಯಿಂದ ನಾವೆಲ್ಲರೂ ಓದಿಕೊಂಡ ಒಟ್ಟು ರಾಜ್ಯದ ಬೋಪರಾಕು ಗೀತೆಗಳು ಕನ್ನಡನಾಡು ಚಿನ್ನದ ಬೀಡು ಎಂಬ ಮೂರುಪದಗಳನ್ನು ನಮ್ಮ ನಾಲಿಗೆಯ ಮೇಲೆ ಮುದ್ರಿತವಾದಂತೆ ಇನ್ನೂ ಹಾಗೆಯೇ ಉಳಿಸಿಕೊಂಡಿರುವ ನಾಡಪ್ರೀತಿಯುಳ್ಳ ಜನ ನಾವು.

ಜನಸಾಮಾನ್ಯರು, ಸಾಹಿತಿಗಳು, ಪದ್ಯಗಾರರು, ಸಿನಿಮಾದವರು, ಸಾಂಸ್ಕೃತಿಕ ಕಲಾವಿದರು, ಹಾಡುಗಾರರು, ಹೋರಾಟಗಾರರು, ಭಾಷಾಪ್ರೇಮಿಗಳು, ಪತ್ರಕರ್ತರು, ಅಧ್ಯಾಪಕರು, ವಿದ್ಯಾರ್ಥಿಗಳು ಇನ್ನಿತರ ಕ್ಷೇತ್ರಗಳ ಎಲ್ಲರೆಂದರೆ ಎಲ್ಲರಿಗೂ ಚಿನ್ನದಗಣಿಯೂರು ನಮ್ಮ ಪಕ್ಕದ್ದೇ ಊರು ಎಂಬಷ್ಟು ಪರಿಚಿತ. ಕಣ್ಣಿಂದ ನೋಡದಿದ್ದರೂ ಯಾರಿಗೂ ಈ ನಗರ ಅಪರಿಚಿತವೇನಲ್ಲ. ಅದು ಅಂಥ ಮಟ್ಟಿಗೆ ನಮ್ಮ ಸ್ಮೃತಿಯೊಳಗೆ ನುಗ್ಗಿರುವ ಚಿನ್ನದೂರು. ಹೆಸರು ಕೋಲಾರ ಗೋಲ್ಡ್ ಫೀಲ್ಡ್ ಎನ್ನುವ ಕೆಜಿಎಫ್ ಎಂಬ ಪುಟ್ಟ ಊರು. ಅಲ್ಲಿ ಟನ್ನುಗಟ್ಟಲೆ ಚಿನ್ನ ಸಿಗುತ್ತದೆ, ಅದು ರಾಜ್ಯದ ಪ್ರಾಕೃತಿಕ ಸಂಪತ್ತಿನ ಹಿರಿಮೆಗೆ ಕಿರೀಟಗಳನ್ನು ಜೋಡಿಸಿದೆ, ಅಂತರರಾಷ್ಟ್ರೀಯಮಟ್ಟದಲ್ಲಿ ನಮ್ಮ ನಾಡಿಗೆ ಖ್ಯಾತಿ ತಂದುಕೊಟ್ಟಿದೆ.. ಎಲ್ಲವೂ ಗೊತ್ತು ಸರಿ, ಇಷ್ಟೆಲ್ಲ ಖ್ಯಾತಿಗಳನ್ನು ತಂದುಕೊಟ್ಟ ಈ ಊರಿನಲ್ಲಿರುವ ಚಿನ್ನ ಬಗೆದವರು, ಸುರಂಗಗಳೊಳಗೆ ನುಗ್ಗಿ ಜೀವ ಅಡವಿಟ್ಟು ಮಿರುಗುವ ಲೋಹವನ್ನು ಲಾರಿಗಳಲ್ಲಿ ತಂದು ಸುರಿದವರು, ಎಣಿಸಲಾಗದಷ್ಟು ಹನಿ ಬೆವರನ್ನು ಬಸಿದವರು ಈ ಊರಿನ ಚಿನ್ನದಗಣಿಯಲ್ಲಿ ಕಾರ್ಮಿಕರಾಗಿ ದುಡಿದ ಶ್ರಮಿಕರು. ಈ ಬೆವರಿನೊಡೆಯರ ದುಮ್ಮಾನಗಳನ್ನು ನಾವೂ ಸೇರಿದಂತೆ ಯಾರೂ ತಲೆಗೆ ತಂದುಕೊಳ್ಳಲಿಲ್ಲ. ಸಾವಿರಾರು ಅಡಿಗಳ ಆಳದಿಂದ ಈ ಶ್ರಮಿಕರು ತಂದು ಸುರಿದ ಚಿನ್ನವಷ್ಟೇ ನಮಗೆಲ್ಲರಿಗೂ ಹಿರಿಮೆಯ ದ್ಯೋತಕವಾಯಿಯಿತೇ ವಿನಃ, ಚಿನ್ನತಂದವರು ಎಲ್ಲಿಯೂ ನಮಗೆ ನೆನಪಾಗಲೇ ಇಲ್ಲ. ಯಾವ ಪುಸ್ತಕವೂ, ಯಾವ ಹಾಡೂ, ಯಾವ ಬರಹವೂ ನೆನಪಿಸಿಕೊಳ್ಳಲೇ ಇಲ್ಲ.

ಈಗಲಾದರೂ ಅವರನ್ನು ನೆನಪಿಸಿಕೊಳ್ಳಲೇಬೇಕಾದ ಬರ್ಬರತೆಯ ಪ್ರಸಂಗವೊಂದರಲ್ಲಿ ಅವರನ್ನಿಂದು ಮುಖಾಮುಖಿಯಾಗಬೇಗಾದ ಸಂದರ್ಭವೊಂದು ನಮ್ಮೆದುರು ಕೋರೆಹಲ್ಲು ಝಳಪಿಸುತ್ತ ಇವತ್ತು ನಿಂತಿದೆ. ಈ ಶ್ರಮಿಕರಿಂದು ಹೊಟ್ಟೆಗೆ ಎರಡು ಹನಿಯ ಗಂಜಿಯೂ ಸಿಗದೆ, ಹಸಿವಿನ ಕಾರಣಕ್ಕೆ ಯಾವತ್ತೋ ಒಂದು ದಿನ ಬರಬಹುದಾದ ಸಾವನ್ನು ನಿಟ್ಟಿಸುತ್ತ ನೆಲಕಚ್ಚಿಹೋಗಿದ್ದಾರೆ.

ಕೆಜಿಎಫ್ ನ ಮಲಹೊರುವ ಜನಗಳ ವಿಷಯ ಎಲ್ಲರಿಗೂ ಗೊತ್ತಿರುವ ಕಾರಣಕ್ಕೆ ಅದನ್ನು ಮತ್ತೆ ಮತ್ತೆ ನೆನಪಿಸಬೇಕಾದ ಪ್ರಮೇಯದಿಂದ ತಪ್ಪಿಸಿಕೊಂಡು ಅವರಿಂದು ತಲುಪಿರುವ ಹಸಿವಿನ ಪ್ರಪಾತದೊಳಗೆಯೇ ಅವರನ್ನು ಮಾತಾನಾಡಿಸಬೇಕಾದ ಬರ್ಬರತೆಯ ಪರಿಸ್ಥಿತಿಗೆ ಯಾರನ್ನು ದೂರುವುದು? ಸರ್ಕಾರವನ್ನು ದೂರಿದ್ದಾಯಿತು, ಅಧಿಕಾರಿಗಳನ್ನು ದೂರಿದ್ದಾಯಿತು, ವ್ಯವಸ್ಥೆಯನ್ನು ದೂರಿದ್ದಾಯಿತು, ಇದೆಲ್ಲ ಇದಾದ ಮೇಲೂ ಅಲ್ಲಿ ೩ ಹೆಣಗಳು ಮಲದಗುಂಡಿಯೊಳಗೆ ಅನ್ನ ಹುಡುಕಲೋಸುಗ ಇಳಿದು ಜೀವ ತೆತ್ತಿದ್ದೂ ಆಯಿತು.

ಸಾಮಾಜಿಕ ನ್ಯಾಯವೆಂಬ ಹಸಿದ ಹುಲಿಯನ್ನು ಅವಕಾಶವಾದಿಗಳು ಸಾಕುಪ್ರಾಣಿಯನ್ನಾಗಿ ಪರಿವರ್ತಿಸಿದ ಮೇಲೆ ಹುಲಿಯೂ ಮಿಸುಕಾಡುತ್ತಿಲ್ಲ. ನೆತ್ತಿ ಸವರುವ ಯಜಮಾನರೆದುರು ಅದೀಗ ತಲೆಯಾಡಿಸಿಕೊಂಡು ಕೂರುವ ಪೆಟ್ ಅನಿಮಲ್ ನಂತೆ ನ್ಯಾಯದ ಪರಿಕಲ್ಪನೆಯನ್ನೇ ಕೆಜಿಎಫ್‌ನಲ್ಲಿ ಅಣಕಿಸಲಾಯಿತು. ಚಿನ್ನದಗಣಿ ಕಾರ್ಮಿಕರ ಕೆಜಿಎಫ್ ನಲ್ಲಿ ಇವತ್ತು ಪ್ರಜಾಪ್ರಭುತ್ವ, ನ್ಯಾಯ, ಸಮಾನತೆ, ಬಡವರೆಡೆಗಿನ ಬದ್ದತೆಗಳು ಎಂಬ ವಿಷಯಗಳಿಗೆ ಆಸ್ಪದವೇ ಇಲ್ಲವೆಂಬ ಮಟ್ಟಿಗೆ ಅಲ್ಲಿ ನರಕವೂ, ಪಿಶಾಚಿಗಳಂತಹ ಪ್ರತಿನಿಧಿಗಳೂ ಒಟ್ಟಿಗೆ ಕೈಜೋಡಿಸಿದ್ದಾರೆ. ಸತ್ತವರ ಪರವಾಗಿ ಪ್ರಶ್ನೆ ಕೇಳಿದವರ ಮೇಲೆ ಲಾಠಿಚಾರ್ಜು ಮಾಡಿಸುವ ಜಿಲ್ಲಾಧಿಕಾರಿ, ನ್ಯಾಯ ಕೇಳಿದ ಹೋರಾಟಗಾರರ ಮೇಲೆ ಕೇಸು ಜಡಿಯುವ ಎಸ್.ಪಿ, ಪರಿಹಾರದ ಚೆಕ್ ವಿತರಿಸಲು ಬಂದು ನೊಂದವರ ಮೇಲೆಯೇ ಬೀದಿಗೂಂಡಾಗಳೂ ನಾಚುವಂತೆ ಹಲ್ಲೆ ಮಾಡುವ ಮಾಜಿ ಸಚಿವ, ಬಾಯ್ ಬಿಟ್ಟರೆ ಸುಳ್ಳು ಹೇಳುವ ಮುನಿಸಿಪಾಲಿಟಿಯ ಆಯುಕ್ತ, ಮಾಧ್ಯಮಗಳ ಜೊತೆ ಮಾತನಾಡಿದರೆ ಕೈಕಾಲು ಮುರಿಯುತ್ತೇವೆ ಎಂದು ರೌಡಿಗಳನ್ನು ಛೂ ಬಿಡುವ ಲೂಟಿಕೋರರು, ಇವೆಲ್ಲವುಗಳನ್ನೂ ಬಡವರ ಪ್ರಶ್ನೆಗಳನ್ನು ದಮನಿಸಲು ಬಳಸಿದ ಜಿಲ್ಲಾಡಳಿತವು ಈಗ ಬೀದಿಬೀದಿಗಳಲ್ಲಿ ಮಲಹೊರುವುದು ನಿಷಿದ್ಧ ಎಂಬ ಬೋರ್ಡು ಜಡಿದು ತನ್ನ ಮಾನ ಮರ್ಯಾದೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದೆ.

ಮಲಹೊರುವುದು ನಿಷೇಧವಾಯಿತು, ಸಂತೋಷ. ಆದರೆ ಮಲ ಹೊರುವವರ ಮುಂದಿನ ಬದುಕೇನು, ಅವರ ಪುನರ್ವಸತಿಗೆ ತೆಗೆದುಕೊಳ್ಳುವ ಕ್ರಮಗಳೇನು ಎಂಬ ಬಗ್ಗೆ ಬೋರ್ಡು ಜಡಿದು ಮಾನ ಉಳಿಸಿಕೊಂಡವರ ಬಳಿ ಯಾವ ಉತ್ತರವೂ ಇಲ್ಲ. ೫-೧೦ ಸಾವಿರದ ಸಾಲ ಕೊಡುತ್ತೇವೆ, ಅದನ್ನು ತೀರಿಸಿ ಎಂಬ ಬೆದರಿಕೆಯಂತಹ ಪುನರ್ವಸತಿಗೆ ಮಲಹೊರುವ ಬಡಜನರು ಇನ್ನಷ್ಟು ಗಾಬರಿ ಬಿದ್ದಿದ್ದಾರೆ. ಏಕೆಂದರೆ ಇವರು ತೆಗೆದುಕೊಂಡೇ ಇರದ ಸಾಲ ತೀರಿಸಲು ಈ ಬಡವರ ಮನೆಗಳಿಗೆ ನೋಟೀಸುಗಳು ಬರುತ್ತಿವೆ. ಖೋಟಾ ದಾಖಲೆ ಸೃಷ್ಟಿಸಿ ಇವರ ಹೆಸರಿನಲ್ಲಿ ಮಜಾ ಉಡಾಯಿಸಿದವರು ಈಗ ನಾಪತ್ತೆ.

ಪರಿಣಾಮ ಊಹೆಗೆ ಸಿಲುಕದಷ್ಟು ಕ್ರೂರ ಪರಿಸ್ತಿತಿಯಾಗಿ  ಕೆಜಿಎಫ್ ನಲ್ಲಿ ಹಸಿವು ಪ್ರತ್ಯಕ್ಷವಾಗಿದೆ. ದಿನಬೆಳಗಾದರೆ ಅನ್ನ ಕೇಳುವ ಹೊಟ್ಟೆಗೆ ಉತ್ತರಿಸಲು ಹಣ, ಕೆಲಸ ಎರಡೂ ಇಲ್ಲದ ಕೆನಡೀಸ್ ಲೈನ್ ನ ಕುಟುಂಬಗಳು ಮನೆಯಲ್ಲಿದ್ದ ಒಂದಷ್ಟು ಪಾತ್ರೆ ಪಗಡೆಗಳನ್ನು ಮಾರಿ ಒಂದಷ್ಟು ದಿನ ಅನ್ನದ ಬಣ್ಣವನ್ನು ಕಂಡಿವೆ. ಪಾತ್ರೆಗಳು ಇಳಿಮುಖವಾಗುತ್ತ ಈಗ ಮಾರಲಿಕ್ಕೂ ಮತ್ತೇನೂ ಉಳಿಯದೆ ಮತ್ತದೇ ಹಸಿವಿನ ಭೂತದ ಬಾಯಿಗೆ ಮಕ್ಕಳುಮರಿಗಳು, ವೃದ್ಧರು, ಅಸಹಾಯಕರು, ರೋಗಪೀಡಿತರು ಬಿದ್ದಿದ್ದಾರೆ. ಹಸಿವು ಮತ್ತು ರೋಗ್ ಹೊಡೆತಕ್ಕೆ ಪಾಲ್ ರಾಜ್ ಎಂಬ ಮಧ್ಯವಯಸ್ಕ ಶ್ರಮಿಕರೊಬ್ಬರು ಕಳೆದ ಹತ್ತು ದಿನಗಳ ಹಿಂದೆ ಜೀವವನ್ನೂ ತೆತ್ತಾಗಿದೆ. ಪ್ರಸ್ತುತ ಈ ಜನರಿಗೆ ಗೊತ್ತಿರುವುದು ಮೂರೇ ವಿಷಯ. ಹಸಿವು ಹಸಿವು ಮತ್ತು ಹಸಿವು.
       
ಗೆಳೆಯರೇ ಒಂದು ರಾಜ್ಯ, ಒಂದು ಸರ್ಕಾರ, ಒಂದು ವ್ಯವಸ್ಥೆ ಎಷ್ಟೆಲ್ಲ ಪೈಶಾಚಿಕವಾಗಿ ವರ್ತಿಸಬೇಕೋ ಅಷ್ಟೆಲ್ಲ ವರ್ತನೆಗಳೂ ಈ ಮಲಹೊರುವ ಬಡವರ ಮೇಲೆ ಪ್ರಯೋಗವಾಗಿ ಹೋದ ಮೇಲೆ ಇಷ್ಟರಲ್ಲೇ ಒಬ್ಬೊಬ್ಬರಾಗಿ ಈ ಊರಿನಿಂದ ಒಂದೊಂದೇ ಜೀವಗಳು ಮಣ್ಣುಸೇರಲು ಸಿದ್ದಗೊಂಡ ಮೇಲೆ ನಮ್ಮೆದುರು ಒಂದು ಪ್ರಶ್ನೆಯನ್ನು ಇಟ್ಟುಕೊಳ್ಳಬಹುದೇ? ಅಲ್ಲೆಲ್ಲೋ ಸುನಾಮಿ ಹೊಡೆದರೆ ಇಲ್ಲಿಂದ ಅಕ್ಕಿಧಾನ್ಯಗಳನ್ನು ಕಳಿಸಿದವರು ನಾವು, ಪ್ರವಾಹ ಬಂದಿದ್ದು ನಮ್ಮೂರಿಗೇ ಎಂಬಂತೆ ಸಿಕ್ಕ ಬಸ್ಸು ಹತ್ತಿಕೊಂಡು ನೊಂದವರಿಗೆ ಕೈಲಾದ ನೆರವು ಕೊಟ್ಟವರು ನಾವು, ಕಛ್, ಗುಜರಾತು ಭೂಕಂಪಗಳ ಸಂತ್ರಸ್ತರಿಗೆ ಬೀದಿಬೀದಿ ಸುತ್ತಿ ಬಟ್ಟೆ ಬರೆ ಸಂಗ್ರಹಿಸಿಕೊಟ್ಟವರು ನಾವು. ಇವತ್ತು ನಮ್ಮ ಸರ್ಕಾರವೇ, ನಮ್ಮ ತೆರಿಗೆಯ ಹಣದಲ್ಲೇ ಮೋಜು ಉಡಾಯಿಸುತ್ತಿರುವ ಅಧಿಕಾರಿಗಳು ನಾಡಿಗೆ ಚಿನ್ನ ಬಗೆದುಕೊಟ್ಟ ಈ ಶ್ರಮಿಕರನ್ನು ಮಲ ಹೊರಲು ಬಿಟ್ಟದ್ದೇ ಅಲ್ಲದೇ, ಅವರೆಲ್ಲರೂ ಸತ್ತರೆ ಮಲಹೊರುವವರ ಸಮಸ್ಯೆ ಇಲ್ಲವಾಗಿಬಿಡುತ್ತದೆ ಎಂಬ ಉದ್ದೇಶಿತ ಪಿತೂರಿಯ ಕಾರಣಕ್ಕೆ ಸಾಮೂಹಿಕವಾಗಿ ಇವರನ್ನು ಹಸಿವಿನ ಪ್ರಪಾತಕ್ಕೆ ದೂಡಿ ತಮಾಷೆ ನೋಡುತ್ತ ಕೈ ಬಿಟ್ಟಿದೆ.

ದೂರದಲ್ಲಿದ್ದವರಿಗೆ ನೊಂದ ನಮ್ಮ ಎದೆಗೂಡು ನಮ್ಮದೇ ಜನರು, ಮಕ್ಕಳು ವೃದ್ಧರು, ನಿಸ್ಸಹಾಯಕರ ಹಸಿವನ್ನು ನೋಡುತ್ತ ಕೂರುವುದು ನಮ್ಮ ಮನುಷ್ಯತ್ವದ ಕೆನ್ನೆಗೆ ಬಿದ್ದ ಏಟೆಂದು ಅನಿಸವುದಿಲ್ಲವೇ. ಎಲ್ಲರೂ ಕೈ ಬಿಟ್ಟ ಈ ಬಡವರ ಹಸಿವಿಗೆ ಹೆಗಲು ಕೊಡುವುದು ನಮ್ಮ ಜವಾಬ್ದಾರಿಯಲ್ಲವೇ, ಸಮಾಜವೊಂದರ ತಳಸ್ಥರದಲ್ಲಿದ್ದೂ ಈ ನಾಡಿಗೆ ಚಿನ್ನದ ನಾಡೆಂದು ಹೆಸರು ತಂದುಕೊಟ್ಟ ಕಷ್ಟಜೀವಿಗಳ ಹಸಿವಿಗೆ ಇಷ್ಟಾದರೂ ಉತ್ತರಿಸುವುದು ನಮ್ಮ ಕರ್ತವ್ಯವಲ್ಲವೆ? ಒಟ್ಟು ವ್ಯವಸ್ಥೆಯೇ ಕೈಬಿಟ್ಟ ಈ ಬಡಜನರ ಜೊತೆಗೆ ಹೆಗಲು ಕೊಡುವುದು ನಮ್ಮ ಕರ್ತವ್ಯವೆಂದು ಅಂದುಕೊಂಡ ಸಮಾನಮನಸ್ಕರ ಗೆಳೆಯ ಗುಂಪೊಂದು ಕೆಜಿಫ್ ನಲ್ಲಿನ ಹಸಿವುಪೀಡಿತರ ಪ್ರದೇಶದಲ್ಲಿ ಪರ್ಯಾಯ ವ್ಯವಸ್ಥೆಗಳು ಆಗುವವರೆಗೆ ಗಂಜಿಕೇಂದ್ರವನ್ನು ನಡೆಸುವ ಮೂಲಕ ನಮ್ಮ ಜವಾಬ್ದಾರಿ ನಿರ್ವಹಣೆಗೆ ಮುಂದಾಗಿದ್ದೇವೆ. ಎಲ್ಲರೂ ಕೈಲಾದಷ್ಟು ಹಣಕಾಸನ್ನು ಒಟ್ಟುಗೂಡಿಸಿಕೊಂಡು ಕೆಜಿಎಫ್‌ಗೆ ತೆರಳಲು ನಿರ್ಧಾರವಾಗಿದೆ. ಇದರ ಜವಾಬ್ದಾರಿಯನ್ನು ವೃತ್ತಿಯಿಂದ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ, ಜನಪರ ಕಾಳಜಿಯ ಚಿಂತಕ ರವಿಕೃಷ್ಣಾರೆಡ್ಡಿ ತಮ್ಮ ವರ್ತಮಾನ ಬಳಗದ ಮೂಲಕ ಆರಂಭಿಸಿದ್ದಾರೆ.

ಜೀವಪರತೆಯ ಆಶಯವನ್ನು ಬೆಂಬಲಿಸುವ ಸಹೃದಯರು, ಹಸಿವುರಹಿತ ನಾಡಿನ ನಿರ್ಮಾಣದಲ್ಲಿ ಹೆಗಲು ಜೋಡಿಸುವ ಸಮಾನ ಮನಸ್ಕರ ನೆರವೂ ಇದಕ್ಕೆ ಬೇಕಿದೆ. ಇಚ್ಛೆಯುಳ್ಳವರು ನಮ್ಮೊಡನೆ ಬರಹುದು. ಬರಲಾಗದ ಜೀವಪರರು ತಮ್ಮಿಂದ ಆದಷ್ಟು ಮಟ್ಟಿಗೆ ಧನಸಹಾಯವನ್ನು ಮಾಡಬೇಕೆಂದು ವಿನಂತಿಸುತ್ತೇವೆ. ಸಂಗ್ರಹಗೊಂಡ ಪ್ರತಿಯೊಂದು ಪೈಸೆಯ ಲೆಕ್ಕವನ್ನೂ ಪಾರದರ್ಶಕವಾಗಿ ಜನರ ಮುಂದೆ ಇಡುವ ಮೂಲಕ ನೆರವಾದವರನ್ನು ಸ್ಮರಿಸುವುದು ನಮ್ಮ ಉದ್ದೇಶವೂ ಆಗಿದೆ. ಮುಂದೊಂದು ದಿನ ಚಿನ್ನದನಾಡು ಎಂಬ ಪದ ಕೇಳಿದಾಗ ಈ ಶ್ರಮಿಕರಿಗೆ ಒಂದು ಕಾಲದಲ್ಲಿ ಹೆಗಲು ಕೊಟ್ಟಿದ್ದೆವು, ಹಸಿವು ನೀಗಿದ ಕೂಸೊಂದರ ನಗೆಯಲ್ಲಿ ನಮ್ಮದೂ ಒಂದು ಬೆಂಬಲವಿತ್ತು ಎಂಬ ಸಮಾಧಾನವನ್ನಷ್ಟೇ ನಿಮ್ಮ ಬೆಂಬಲ ಮತ್ತು ನೆರವು ನೀಡಬಲ್ಲುದು. ಹೆಗಲು ಕೊಡಿ ಗೆಳೆಯರೇ/ಗೆಳತಿಯರೇ. ಇದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿ.

-ಟಿ.ಕೆ. ದಯಾನಂದ



ನೀವು ಹಣ ಕಳುಹಿಸಬೇಕಾದ ಬ್ಯಾಂಕ್ ಖಾತೆ: ೬೪೦೪೬೦೯೬೯೭೪ (ಟಿ.ಕೆ.ದಯಾನಂದ) ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಂಪಂಗಿರಾಮ ನಗರ ಶಾಖೆ, ಬೆಂಗಳೂರು. ಇದೇ ಡಿಸೆಂಬರ್ ೧೫ ರ ಒಳಗೆ ತಾವು ಹಣ ಕಳುಹಿಸಬೇಕಾಗಿ ವಿನಂತಿ. ಚೆಕ್ ಕಳುಹಿಸುವವರು ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು. ಚೆಕ್ ಟಿ.ಕೆ.ದಯಾನಂದ ರ ಹೆಸರಿನಲ್ಲಿರಲಿ.


ವರ್ತಮಾನ
ನಂ. ೪೦೦, ೨೩ನೇ ಮುಖ್ಯ ರಸ್ತೆ,
ಕುವೆಂಪು ನಗರ, ಎರಡನೇ ಹಂತ
ಬೆಂಗಳೂರು - ೫೬೦೦೭೬
ದೂ: ೦೮೦-೨೬೭೮೩೩೨೯

2 comments:

  1. ಮಾನ್ಯರೆ,
    ನಾಗರೀಕ ಸಮಾಜದಲ್ಲಿದ್ದೇವ ಎಂದು ಭಯವಾಗುತ್ತಿದೆ. ತಮ್ಮ ಕಾರ್ಯಕ್ಕೆ, ತಮ್ಮ ಆಲೋಚನೆಗಳಿಗೆ ಸದಾ ನನ್ನ ಬೆಂಬಲವಿರುತ್ತದೆಂದು ತಿಳಿಸಲು ಇಚ್ಚಿಸುತ್ತೇನೆ. ಆರ್ಥಿಕವಾಗಿ ನನ್ನ ಮಿತಿಯೊಳಗೆ ಸಾದ್ಯವಾದ ವೇಳೆಯೊಳಗೆ ಹಣ ಕಳಿಸುತ್ತೇನೆಂದು ತಿಳಿಸುತ್ತಿದ್ದೇನೆ.
    ವಂದನೆಗಳೊಂದಿಗೆ

    ReplyDelete
  2. another battle lost ...

    burude bramhanda and now the KGF case....

    i pity journalisam .. and the "hap" less ness.

    govt eno kisidavara tara toristu.. but we are still at square one collecting chanda..,vantige,denige,donation,dana..., social service...

    khadginta harita vagiruvudu.. gillet bladeu.. kai kotta govermentu , adhikarigalu.. avara melondu RTI.. mera bharat mahan !!

    ReplyDelete