Saturday, October 29, 2011

ಮಾಧ್ಯಮ ನಿಸ್ಪೃಹತೆ: ರವಿಕೃಷ್ಣಾರೆಡ್ಡಿ ಬರೆದ ಪತ್ರಕ್ಕೆ ಒಂದು ಉತ್ತರ


ಕೆಲವು ದಿನಗಳ ಹಿಂದೆ ವರ್ತಮಾನದಲ್ಲಿ ರವಿಕೃಷ್ಣಾರೆಡ್ಡಿಯವರು ಮಾಧ್ಯಮ ಮಿತ್ರರಿಗೆ ಮತ್ತು ಕನ್ನಡ ಪತ್ರಕರ್ತರಿಗೊಂದು ಪತ್ರ ಎಂಬ ಲೇಖನ ಬರೆದಿದ್ದರು. ಪತ್ರಕರ್ತರಿಗೆ ಹಲವು ಪ್ರಶ್ನೆಗಳನ್ನು ಅವರು ಒಡ್ಡಿದ್ದರು, ಯಾರಾದರೂ ಉತ್ತರಿಸಬಹುದೆಂಬ ನಿರೀಕ್ಷೆಯಲ್ಲಿ. ಯಾರೂ ಉತ್ತರಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಆ ಜವಾಬ್ದಾರಿಯನ್ನು ನಾವೇ ಹೊತ್ತು ಈ ಮಾರುತ್ತರವನ್ನು ಬರೆದಿದ್ದೇವೆ. ರವಿಕೃಷ್ಣಾರೆಡ್ಡಿಯವರು ಎತ್ತಿರುವ ಪ್ರಶ್ನೆಗಳು ಗಂಭೀರವಾದವೂ, ಚರ್ಚಾಯೋಗ್ಯವೂ, ಈ ಕ್ಷಣದ ಅಗತ್ಯವೂ ಆಗಿರುವುದರಿಂದ ಅವೆಲ್ಲ ಚರ್ಚೆಯೇ ಆಗದೇ ಉಳಿಯಬಾರದು ಎಂಬುದು ನಮ್ಮ ಕಾಳಜಿ. ಎಂದಿನಂತೆ ನಮ್ಮ ಓದುಗರ ಪ್ರತಿಕ್ರಿಯೆಗಳನ್ನು ನಿರೀಕ್ಷಿಸುತ್ತೇವೆ. 

ಪ್ರಿಯ ರವಿಕೃಷ್ಣಾ ರೆಡ್ಡಿಯವರೇ,

ನಮಸ್ಕಾರ,

ಮುರುಗೇಶ್ ನಿರಾಣಿ
ನೀವು ಎತ್ತಿರುವ ಪ್ರಶ್ನೆಗಳು ಸಕಾಲಿಕವಾಗಿವೆ, ಸರಳವಾಗಿವೆ. ನಿಮ್ಮ ಪತ್ರದ ಮೊದಲ ಭಾಗದಲ್ಲಿ ಎತ್ತಿರುವ ಪ್ರಶ್ನೆ ಇವತ್ತಿನ ಮಾಧ್ಯಮ ಸಂಸ್ಥೆಗಳನ್ನು ಆಳುತ್ತಿರುವವರು ಯಾರು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಲೇಖನದಲ್ಲಿ ಉಲ್ಲೇಖಿಸಿದ ಆಲಂ ಪಾಷ ವಿರುದ್ಧ ಸಮಯ ಟಿವಿಯಲ್ಲಿ ಮಾತ್ರವೇಕೆ ಸುದ್ದಿ ಬರುತ್ತೆ ಎಂದು ನೀವು ಕೇಳುತ್ತೀರಿ. ಮುರುಗೇಶ್ ನಿರಾಣಿಯವರ ಪಾಲುದಾರಿಕೆ ಇರುವ  ಸಮಯ ಟಿವಿಯಲ್ಲದೆ ಬೇರೆಲ್ಲಿ ಬರಲು ಸಾಧ್ಯ ಎಂಬುದು ಸ್ಪಷ್ಟ ಉತ್ತರ. ಮಾಧ್ಯಮ ಸಂಸ್ಥೆಗಳು ಈಗೀಗ ಹಲವರ ಕೈಗಳ ದಾಳವಾಗಿವೆ. ಇಲ್ಲೂ ಅದೇ ಆಗಿದೆ.

ನೀವು ಕಸ್ತೂರಿ ಟಿವಿಯ ಸುದ್ದಿಗಳನ್ನು ನೋಡಿರಬಹುದು. ಅಲ್ಲೂ ಹಾಗೇನೇ. ಅಲ್ಲಿ ಕುಮಾರಸ್ವಾಮಿ ವಿರುದ್ಧ ಯಾರ‍್ಯಾರು ಇದ್ದಾರೋ ಅವರೆಲ್ಲರೂ ಟಾರ್ಗೆಟ್ ಆಗುತ್ತಾರೆ. ಕುಮಾರಸ್ವಾಮಿ ಒಂದು ಪತ್ರಿಕಾಗೋಷ್ಠಿ ನಡೆಸಿದರೆ ಗಂಟೆಗಟ್ಟಲೆ ಆ ಗೋಷ್ಠಿಯನ್ನು ಅದು ಪ್ರಸಾರ ಮಾಡುತ್ತದೆ. ತೀರಾ ಜೆಡಿಎಸ್ ಕಾರ್ಯಕರ್ತರೇ ಈ ಭಟ್ಟಂಗಿ ಚಾನಲ್‌ನ ನ್ಯೂಸ್‌ಗಳನ್ನು ನೋಡುತ್ತಾರೋ ಇಲ್ಲವೋ ಅದು ಅನುಮಾನ.

ಇತ್ತೀಚಿಗೆ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭಗಳಲ್ಲಿ ಯಡಿಯೂರಪ್ಪ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ದಾಳಿಯ ಹಿಂದೆ ಯಾರಿದ್ದಾರೆ ಎಂಬುದನ್ನು ಸುಲಭವಾಗಿ ಊಹಿಸಬಹುದು. ಯಡಿಯೂರಪ್ಪ ಆರೋಪಿಯಾಗಿ ಜೈಲಿಗೆ ಹೋಗಿದ್ದಾರೆ, ಇದು ಅವಮಾನಕರ ಎಂಬುದು ನಿಜ.  ಆದರೆ ಇಡೀ ಪುಟದಲ್ಲಿ ಯಡಿಯೂರಪ್ಪ ಸರಳುಗಳ ಹಿಂದೆ ಕುಳಿತಿರುವ ಚಿತ್ರ ಪ್ರಕಟಿಸುವ ಅಗತ್ಯವಿತ್ತಾ?  ಈ ಎರಡು ಮೀಡಿಯಾ ಸಂಸ್ಥೆಗಳು ಯಡಿಯೂರಪ್ಪ ಅವರನ್ನು ಗಲ್ಲಿಗೆ ಹಾಕುವ ಆತುರದಲ್ಲಿ ಇದ್ದಂತೆ ಬಹಳ ಸ್ಪಷ್ಟವಾಗಿ ತೋರುತ್ತದೆ. ಯಾಕೆ ಹೀಗೆ? ಇದಕ್ಕೇನು ಕಾರಣ?  ಒಂದು ವೇಳೆ ಯಡಿಯೂರಪ್ಪ ಬದಲಾಗಿ ಅನಂತಕುಮಾರ್ ಹುಡ್ಕೋ ಹಗರಣದ ವಿಷಯದಲ್ಲೋ, ಇನ್ನೊಂದರಲ್ಲೋ ಜೈಲಿಗೆ ಹೋಗಿದ್ದರೆ ಇದೇ ರೀತಿ ಅಪಮಾನಕಾರಿಯಾದ ವರದಿಗಳನ್ನು ಈ ಮಾಧ್ಮಮ ಸಂಸ್ಥೆಗಳು ಪ್ರಕಟಿಸುತ್ತಿದ್ದವೇ?

ಇದಕ್ಕೆ ತದ್ವಿರುದ್ಧವಾದ ಇನ್ನೊಂದು ಕಥೆ ಇದೆ, ನೋಡಿ. ಹೊಸದಿಗಂತ ಅಂತ ಒಂದು ಪತ್ರಿಕೆ ಇದೆ, ನಿಮಗೆ ಗೊತ್ತಿರಬಹುದು. ಯಡಿಯೂರಪ್ಪ ಜೈಲಿಗೆ ಹೋಗಿದ್ದು ಅವರಿಗೆ ಸುದ್ದಿನೇ ಅಲ್ಲ. ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋದಾಗ ಆ ಪತ್ರಿಕೆಯಲ್ಲಿ ಯಾವುದೋ ಅಪಘಾತದ ವರದಿಯೇ ಪ್ರಮುಖ ಸುದ್ದಿಯಾಗುತ್ತದೆ. ಕೋಮಾವಸ್ಥೆಯಲ್ಲಿದ್ದ ದಿಗಂತಕ್ಕೆ ಆಮ್ಲಜನಕ ಕೊಟ್ಟು ಉಸಿರಾಡುವಂತೆ ಮಾಡಿದ್ದು ಯಡಿಯೂರಪ್ಪ. ಇದೇ ಯಡಿಯೂರಪ್ಪ ಜೈಲಿಗೆ ಹೋದಾಗ ಋಣಪ್ರಜ್ಞೆ ಕೆಲಸ ಮಾಡದಿದ್ದರೆ ಹೇಗೆ?

ಇವತ್ತು ಮಾಧ್ಯಮಸಂಸ್ಥೆಗಳನ್ನು ನಿಯಂತ್ರಿಸುತ್ತಿರುವವರು ರಾಜಕಾರಣಿಗಳು. ಹಿಂದೆಲ್ಲ ರಾಜಕಾರಣಿಗಳು ಬರೇ ರಾಜಕಾರಣಿಗಳಾಗಿದ್ದರು. ಈಗ ಅವರು ಪಾರ್ಟ್‌ಟೈಮ್ ಉದ್ಯಮಿಗಳು, ಪಾರ್ಟ್‌ಟೈಮ್ ರಾಜಕಾರಣಿಗಳು. ಮಾಧ್ಯಮ ಸಂಸ್ಥೆಗಳನ್ನು ಹಿಡಿತಕ್ಕೆ ತಂದುಕೊಂಡು ತಮ್ಮ ರಾಜಕಾರಣ ಮತ್ತು ಉದ್ಯಮ ಎರಡನ್ನೂ ರಕ್ಷಣೆ ಮಾಡಿಕೊಳ್ಳೋದು ಅವರ ಉದ್ದೇಶ. ಆಲಂಪಾಷ ವಿಷಯದಲ್ಲಿ ನಡೆದಿರುವುದು ಅದೇ.

ರಾಜೀವ್ ಚಂದ್ರಶೇಖರ್
ಇನ್ನು ಈ ವಿದ್ಯಮಾನವನ್ನು ಬೇರೆ ಮಾಧ್ಯಮಗಳೇಕೆ ವರದಿ ಮಾಡಲಿಲ್ಲವೆಂಬ ನಿಮ್ಮ ಪ್ರಶ್ನೆಗೆ ಉತ್ತರವೂ ಇಲ್ಲೇ ಇದೆ. ಎಲ್ಲರದೂ ಒಂದಲ್ಲ ಒಂದು ಹುಳುಕು. ಒಬ್ಬರ ಹುಳುಕನ್ನು ಮತ್ತೊಬ್ಬರು ಜಾಹೀರು ಮಾಡಿದರೆ ಆ ಒಬ್ಬರು ಸುಮ್ಮನಿರಲು ಹೇಗೆ ಸಾಧ್ಯ? ಅವರು ಇವರದನ್ನು ಬಯಲು ಮಾಡುತ್ತಾರೆ, ಅಲ್ಲವೇ? ಎಲ್ಲೋ ಪ್ರಜಾವಾಣಿಯಂಥ ಪತ್ರಿಕೆ ಆಗಲೋ ಈಗಲೋ ಸಣ್ಣ ಪ್ರಮಾಣದ ಧ್ವನಿಯನ್ನು ಪ್ರತ್ಯಕ್ಷವಾಗೋ ಪರೋಕ್ಷವಾಗೋ ಎತ್ತುವುದನ್ನು ಬಿಟ್ಟರೆ ನೀವು ಬೇರೆ ಸಂಸ್ಥೆಗಳಿಂದ ಇಂಥ ಒಳಬಂಡಾಯವನ್ನು ಹೇಗೆ ಕಾಣಲು ಸಾಧ್ಯ?

ಇನ್ನು ನಿಮ್ಮ ಪತ್ರದ ಎರಡನೇ ಭಾಗಕ್ಕೆ ಬರುವುದಾದರೆ ಅಲ್ಲೂ ನಿಮಗೆ ನಿರಾಶಾದಾಯಕ ಉತ್ತರಗಳೇ ಲಭಿಸುತ್ತವೆ. ಸಹ ಪತ್ರಕರ್ತನಿಗೆ ಅನ್ಯಾಯವಾದಾಗ ಯಾಕೆ ಯಾರೂ ಧ್ವನಿ ಎತ್ತುವುದಿಲ್ಲ ಎನ್ನುತ್ತೀರಿ ನೀವು. ಯಾರು ಧ್ವನಿ ಎತ್ತಬೇಕು? ಧ್ವನಿ ಎತ್ತಬಹುದಾದ ಸಂಸ್ಥೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ. ಅದನ್ನು ಹಲವರು ಕಾರ್ಯಮರೆತ ಪತ್ರಕರ್ತರ ಸಂಘ ಎಂದು ಗೇಲಿ ಮಾಡುವುದೂ ಉಂಟು. ಮುಖ್ಯವಾಹಿನಿಯ ಪತ್ರಕರ್ತರ ಪೈಕಿ ಬಹುತೇಕರು ಇಲ್ಲಿ ಸದಸ್ಯರೇ ಆಗಿಲ್ಲ ಎಂದರೆ ನೀವು ನಂಬಲೇಬೇಕು. ಹೆಸರೇ ಇಲ್ಲದ ಅಥವಾ ಇಲ್ಲವೇ ಇಲ್ಲದ ಪತ್ರಿಕೆಗಳವರೇ ಇಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸದಸ್ಯರು. ಜಿಲ್ಲಾ ಮಟ್ಟದಲ್ಲಿ ಈ ಸಂಘಟನೆ ಅಲ್ಪಸ್ವಲ್ಪ ಕ್ರಿಯಾಶೀಲವಾಗಿದೆ, ಆದರೆ ರಾಜ್ಯಮಟ್ಟದಲ್ಲಿ ಕ್ರಿಯಾಶೀಲವಾಗಿದ್ದನ್ನು ಕಂಡವರು ಇಲ್ಲ. ಎಲ್ಲೋ ಯಾರೋ ಪತ್ರಕರ್ತನ ಕೊಲೆಯಾದರೆ ಒಂದು ಸಾಂಕೇತಿಕ ಪ್ರತಿಭಟನೆ, ವಿಧಾನಸೌಧಕ್ಕೆ ಪ್ರವೇಶಪತ್ರ ಕೊಡಲಿಲ್ಲವೆಂದರೆ ಒಂದು ಪ್ರತಿಭಟನೆ, ಬಸ್ ಪಾಸ್ ಕೊಡಿ ಎಂದು ಒಂದು ಪ್ರತಿಭಟನೆ... ಇಂಥವುಗಳನ್ನು ಬಿಟ್ಟು ಯೂನಿಯನ್ ಬೇರೆ ಏನನ್ನೂ ಮಾಡಿದ್ದನ್ನು ಯಾರೂ ಕಂಡಿಲ್ಲ.

ನೀವು ಮಾನಸ ಪುದುವೆಟ್ಟು ಕೆಲಸ ಕಳೆದುಕೊಂಡ ವೃತ್ತಾಂತ ಬರೆದಿದ್ದೀರಿ. ಗಂಡ ಬರೆದ ಸುದ್ದಿಗೆ ಹೆಂಡತಿಯ ತಲೆದಂಡವಾಗುವುದು ಎಷ್ಟು ಕ್ರೂರ ಮತ್ತು ಅಮಾನವೀಯ ಎಂದು ಈ ಯೂನಿಯನ್‌ನ ಪದಾಧಿಕಾರಿಗಳಿಗೆ, ಅದರಲ್ಲೂ ಗಂಗಾಧರ ಮೊದಲಿಯಾರ್‌ರಂಥ ಹಿರಿಯರಿಗೆ ಅನಿಸುವುದೇ ಇಲ್ಲ. ಪ್ರತಿಭಟನೆ ಬೇಡ, ಯಾಕೆ ಹೀಗೆ ಮಾಡಿದ್ರಿ ಎಂದು ಸಮಯದ ಮ್ಯಾನೇಜ್‌ಮೆಂಟನ್ನು ಕೇಳಲಾರದಷ್ಟು ಇವರ ಬಾಯಿ ಸತ್ತಿದೆ. ಯೂನಿಯನ್ ಇರೋದು ಮತ್ತೆ ಯಾವ ಪುರುಷಾರ್ಥಕ್ಕೆ ಅಂತ ನೀವು ಕೇಳಬಹುದು. ಕೆಜಿ ರಸ್ತೆಯಲ್ಲಿದ್ದ ಅಮೂಲ್ಯ ಆಸ್ತಿಯನ್ನು ಉಳಿಸಿಕೊಳ್ಳಲು ಯೂನಿಯನ್‌ನವರಿಗೆ ಸಾಧ್ಯವಾಗಲಿಲ್ಲ. ಪ್ರತಿಯೊಂದಕ್ಕೂ ಕೋರ್ಟಿಗೇರುವ, ಸಣ್ಣಪುಟ್ಟದಕ್ಕೂ ಜಗಳ ಮಾಡಿಕೊಂಡು ಕೂರುವ ಯೂನಿಯನ್‌ನವರಿಗೆ ಮಾನಸ ಅವರ ಸಮಸ್ಯೆ ಬಗೆಹರಿಸುವ ಸಮಯವಾದರೂ ಎಲ್ಲಿದೆ ಹೇಳಿ?

ಸೋಮಶೇಖರ ಪಡುಕೆರೆ
ಮಾನಸ ವಿಷಯ ಪ್ರಸ್ತಾಪಿಸುವ ಸಂದರ್ಭದಲ್ಲೇ ನಿಮಗೆ ಸೋಮಶೇಖರ ಪಡುಕೆರೆ ಎಂಬ ಪತ್ರಕರ್ತರ ವಿಷಯ ಹೇಳಬೇಕು. ಕ್ರೀಡಾ ವರದಿಗಾರಿಕೆಯಲ್ಲಿ ಪಳಗಿದ್ದವರು ಸೋಮಶೇಖರ್. ಕನ್ನಡಪ್ರಭದಲ್ಲಿ ಸರಿಸುಮಾರು ದಶಕದ ಅನುಭವವಿದೆ. ಸಹಪತ್ರಕರ್ತರ ನಡುವೆ ಒಳ್ಳೆಯ ಹೆಸರು ಪಡೆದವರು. ಇತ್ತೀಚಿಗೆ ಏಕಾಏಕಿ ಅವರಿಂದ ರಾಜೀನಾಮೆ ಪಡೆಯಲಾಯಿತು. ಕಾರಣಕ್ಕಾಗಿ ಹುಡುಕುವ ಅಗತ್ಯವೂ ಇಲ್ಲ. ಹೀಗೆ ಪತ್ರಕರ್ತರನ್ನು ಬಲಿ ತೆಗೆದುಕೊಳ್ಳುವ ಪ್ರಕ್ರಿಯೆ ಸದಾ ಚಾಲ್ತಿಯಲ್ಲಿ ಇರುತ್ತದೆ. ನಿನ್ನೆ ಮಾನಸ, ಇವತ್ತು ಸೋಮಶೇಖರ್, ನಾಳೆ ಇನ್ಯಾರೋ?  ಹೀಗೆ ಮಾಧ್ಯಮಗಳಿಂದ ದೂರವಾಗಿ ಬೇರೆ ಕ್ಷೇತ್ರಗಳಿಗೆ ವಲಸೆ ಹೋದವರ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ಹೋಗುವವರು ಹೋಗುತ್ತಲೇ ಇದ್ದಾರೆ, ಕೇಳುವವರು ಯಾರೂ ಇಲ್ಲ. ತೀರಾ ಹೀಗೆ ಮಾಧ್ಯಮ ಬಿಟ್ಟು ಹೋದವರನ್ನೂ ಗೇಲಿ ಮಾಡುವ ಬಾಣಗಳನ್ನು ಹೊಡೆಯುವ ಕ್ರೂರ ಮನಸ್ಸು ಘನತೆವೆತ್ತ ಪತ್ರಕರ್ತರಿಗೇ ಇರುವಾಗ ಬೇರೇನು ಹೇಳೋದು? ಸೋಮಶೇಖರ್‌ರಂಥವರಿಗೆ ಬಕೆಟ್ ಹಿಡಿದು ನಿಂತು ಅಭ್ಯಾಸವಿಲ್ಲ. ಬಕೆಟ್ ಹಿಡಿಯದವರನ್ನು ಮ್ಯಾನೇಜ್‌ಮೆಂಟುಗಳು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ.

ರೆಡ್ಡಿಯವರೇ, ಎಲ್ಲ ಪತ್ರಕರ್ತರೂ ಈಗ ಕಾಂಟ್ರಾಕ್ಟ್ ಕೂಲಿಯಾಳುಗಳು. ಬಾಡಿಗೆ ಮನೆಗಳಿಗೆ ಕರಾರು ಒಪ್ಪಂದ ಮಾಡಿಕೊಳ್ಳುವಂತೆ ೧೧ ತಿಂಗಳ ಕಾಂಟ್ರಾಕ್ಟು ಕೂಲಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ವೇಳೆ ಕೆಲಸ ಖಾಯಂ ಆದರೂ ಸಂಭ್ರಮಿಸಬೇಕಾದ ಅಗತ್ಯವಿಲ್ಲ. ಸಂಸ್ಥೆಯಿಂದ ಹೊರಗೆ ಎಸೆಯಲು ಮ್ಯಾನೇಜ್‌ಮೆಂಟುಗಳಿಗೆ ಏನೇನೂ ಕಷ್ಟವಿಲ್ಲ. ಒಳಗೇ ಸಣ್ಣಪ್ರಮಾಣದಲ್ಲಿ ಕಿರುಕುಳ ಶುರು ಮಾಡಿದರೆ ತಾವೇ ತಾವಾಗಿ ಪತ್ರಕರ್ತರು ಹೊರಹೋಗುತ್ತಾರೆ. ಹಠ ಹಿಡಿದು ಕುಳಿತವರಿಗೆ ಡಿಸ್‌ಮಿಸ್ ಮಾಡುವ ಬೆದರಿಕೆ ಒಡ್ಡಿ ರಾಜೀನಾಮೆ ಪಡೆಯಲಾಗುತ್ತದೆ. ಒನ್ಸ್ ಎಗೇನ್, ಇಂಥ ಪತ್ರಕರ್ತರ ಸಹಾಯಕ್ಕೆ ಯಾವ ಯೂನಿಯನ್ ಕೂಡ ಬರೋದಿಲ್ಲ.

ನೀವು ಬೆಂಗಳೂರು ವರದಿಗಾರರ ಕೂಟದ ಹೆಸರು ಕೇಳಿರಬಹುದು. ಸಖತ್ತು ಬಲಶಾಲಿ ಸಂಘಟನೆ ಅದು. ಎಷ್ಟು ಬಲಶಾಲಿ ಎಂದರೆ ತನ್ನ ಸದಸ್ಯರೆಲ್ಲರಿಗೂ ಕೆಎಚ್‌ಬಿ ಸೈಟು ಕೊಡಿಸುವಷ್ಟು ಬಲಶಾಲಿ. ಆದರೆ ಪತ್ರಕರ್ತರಿಗೆ ಅನ್ಯಾಯವಾದಾಗ ಈ ಸಂಘಟನೆಯೂ ಧ್ವನಿ ಎತ್ತಿದ್ದನ್ನು ಯಾರೂ ಕಂಡಿಲ್ಲ. ಇದು ಕೇವಲ ವರದಿಗಾರರ ಕೂಟ. ಇಲ್ಲಿ ವರದಿಗಾರರಿಗೆ ಮಾತ್ರ ಸದಸ್ಯತ್ವ, ಉಪಸಂಪಾದಕರಿಗೂ ಸದಸ್ಯತ್ವ ಕೊಡಲಾಗುವುದಿಲ್ಲ.  ಒಂದುವೇಳೆ ವರದಿಗಾರನಿಗೆ ಡೆಸ್ಕ್‌ಗೆ ವರ್ಗಾವಣೆಯಾದರೆ ಆತನ ಸದಸ್ಯತ್ವವೇ ಅನರ್ಹಗೊಳ್ಳುತ್ತದಂತೆ. ಹೀಗೆ ತನ್ನ ಸದಸ್ಯರೊಂದಿಗೇ ಅಮಾನವೀಯವಾಗಿ ನಡೆದುಕೊಳ್ಳಬಹುದಾದ ಬೈಲಾ ಇರುವ ಸಂಘಟನೆ, ಸದಸ್ಯರ ಸಮಸ್ಯೆಗಳನ್ನು ಅಡ್ರೆಸ್ ಮಾಡಲು ಸಾಧ್ಯವಾ? ಇದು ಪ್ರಶ್ನೆ. ಇನ್ನು ಬೆಂಗಳೂರು ಪ್ರೆಸ್ ಕ್ಲಬ್ ತಾನಿರುವುದೇ ಪತ್ರಕರ್ತರ ಮನರಂಜನೆಗೆ, ಹೀಗಾಗಿ ಬೇರೆ ಉಸಾಬರಿ ನಮಗೆ ಬೇಕಿಲ್ಲ ಎಂದು ಮಾತಿಗೇ ಮೊದಲೇ ಹೇಳುವುದರಿಂದ ಅದರಿಂದಲೂ ನ್ಯಾಯ ದೊರಕೀತೆಂಬ ನಂಬಿಕೆ ಇಲ್ಲ.

ಪತ್ರಿಕಾರಂಗದಲ್ಲಿ ಯಾಕೆ ಅನರ್ಹರು, ಅಸಮರ್ಥರು, ಭ್ರಷ್ಟರು ಮುನ್ನೆಲೆಗೆ ಬರುತ್ತಿದ್ದಾರೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರಿಸಲು ಇಷ್ಟು ಹೇಳಬೇಕಾಯಿತು.  ಒಂದು ವಾಸ್ತವ ಏನೆಂದರೆ ಪತ್ರಕರ್ತರು ಈಗೀಗ ಕೂಲಿಯಾಳುಗಳ, ಜೀತದಾಳುಗಳ ಸ್ವರೂಪದಲ್ಲಿ ಬಳಕೆಯಾಗುತ್ತಿದ್ದಾರೆ. ಮೀಡಿಯ ಅನ್ನೋದು ಬಿಜಿನೆಸ್ಸಾಗಿ ಬಹಳ ಕಾಲವೇ ಆಯಿತು. ಆದರೆ ಈಗ ಅದು ಧನದಾಹಿ ರಾಜಕಾರಣದ ಒಂದು ಭಾಗ. ಹೀಗಾಗಿ ಸತ್ಯವಷ್ಟೆ ಸುದ್ದಿಯಾಗಬೇಕು ಎಂದೇನೂ ಇಲ್ಲ. ಈ ಕಟುಸತ್ಯ ಗೊತ್ತಿರುವ ಯಾವ ಪತ್ರಕರ್ತನೂ ಸ್ವಂತ ಬುದ್ಧಿಯಿಂದ ಸುದ್ದಿ ಮಾಡಲಾರ, ನಿಷ್ಠುರವಾದಿಯಾಗಿ ಇಲ್ಲಿ ಉಳಿದುಕೊಳ್ಳಲಾರ.

ಕ್ಷಮಿಸಿ, ನಿಮಗೆ ಉತ್ತರ ಬರೆಯುವ ಭರದಲ್ಲಿ ಈ ಪತ್ರ ಇನ್ನೊಂದಿಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದಂತೆ ಅನಿಸುತ್ತಿದೆ.

ವಂದನೆಗಳೊಂದಿಗೆ

-ಸಂಪಾದಕೀಯ ಬಳಗ

Thursday, October 27, 2011

ಕೆಜಿಎಫ್‌ನಲ್ಲಿ ಮತ್ತೆ ಮೂವರ ದಾರುಣ ಸಾವು: ದಯಾನಂದ್ ಬರೆದ ಆಘಾತಕಾರಿ ಸತ್ಯ ವರದಿ


ನೋಡಿ ಬೀದಿಯ ಮೇಲೆ ರಕ್ತವಿದೆ.. ರಕ್ತವಿದೆ ಬೀದಿಯ ಮೇಲೆ..
- ಪ್ಯಾಬ್ಲೋನೆರೂಡ 


ಪ್ರಸಾದ್ ಕುಟ್ಟಿಯ ಜೀವವಿಲ್ಲದ ಕಾಯದಲ್ಲಿ ಇನ್ನೂ ಕಣ್ಣುಗಳು ಉಸಿರಾಡುತ್ತಿವೆಯೇನೋ ಅನ್ನಿಸುತ್ತಿತ್ತು.. ಈಗಲೋ ಆಗಲೋ ಕಣ್ರೆಪೆ ಮಿಟುಕಿಸಿ ಎಂದಿನಂತೆ ನಾಗೇಂದ್ರ ಬಾಬು ನನಗೊಮ್ಮೆ ಕಣ್ಣು ಹೊಡೆಯುತ್ತಾನಾ? ಕಟಿಂಗು ಸೇವಿಂಗು ಚೇಸಕುನ್ನಾನು ಚೂಡು ಸಾರ್ ಅಂದೇ ಬಿಡುತ್ತಾನೆ ಅನ್ನುವಂತೆ ಇದ್ದ ಪುಟ್ಟಹುಡುಗ ರವಿ.. ಮೂವರೂ ಆ ಮಲದ ಬಾವಿಯ ಪಕ್ಕದಲ್ಲೇ ಒಬ್ಬರ ಪಕ್ಕ ಒಬ್ಬರು ಸಾಲುಸಾಲಾಗಿ ಮಲಗಿಬಿಟ್ಟಿದ್ದರು. ಸುತ್ತಮುತ್ತಲಿದ್ದ ಜನರು ಪೋಲೀಸರು, ಮುನಿಸಿಪಾಲಿಟಿಯವರು, ಆಸುಪಾಸಿನವರು ಈ ಮೂರೂ ಜೀವಗಳನ್ನು ಡೆಡ್ಡುಬಾಡಿ, ಹೆಣ, ಅದು.. ಹೀಗೆಲ್ಲ ಏನೇನೋ ಯಾಕೆ ಅನ್ನುತ್ತಿದ್ದಾರೆ. ಹೆಸರು ಹಿಡಿದು ಕರೆಯಬಾರದಾ? ಈ ಮೂವರಿಗೆ ಹೆಸರು ಇಲ್ಲವಾ ಅಂತ ಸಿಟ್ಟು ಬರುತ್ತಿತ್ತು.

ಮೂವರನ್ನು ಬಲಿತೆಗೆದುಕೊಂಡಿದ್ದು ಇದೇ ಪಿಟ್.
 ಫೋಟೋ ತೆಗೆಯುತ್ತ, ವಿಡಿಯೋ ಶೂಟ್ ಮಾಡುತ್ತಿದ್ದವನಿಗೆ ಪೋಲೀಸನೊಬ್ಬ ಬನ್ನೀ ಈಕಡೆ ಸಾಕು ಸಾಕು ಅಂದಂತಾಯಿತು.. ಜೂಲುನಾಯಿಗೆ ಕೊಟ್ಟಷ್ಟೇ ಬೆಲೆಯನ್ನು ಅವನಿಗೆ ಕೊಟ್ಟು ನನ್ನ ಪಾಡಿಗೆ ನಾನು ವಿಡಿಯೋ ಶೂಟ್ ಮಾಡುತ್ತಲೇ ಇದ್ದೆ. ೬ ತಿಂಗಳ ಹಿಂದೆ ಈ ಮೂರೂ ಜೀವಗಳು ಕೆಜಿಎಫ್‌ನಲ್ಲಿ ಎದುರಾದಾಗ, ಕುಟ್ಟಿಯ ಮನೆಯಲ್ಲಿ ಡಾಲ್ಮೇಷಿಯನ್ ನಾಯಿಗೆ ಹೆದರುತ್ತ ಊಟ ಮಾಡಿದಾಗ, ಮಾರನೆ ಬೆಳಿಗ್ಗೆ ಅವರನ್ನೇ ಹಿಂಬಾಲಿಸಿಕೊಂಡು ಗೆಳೆಯ ಚಂದ್ರುವಿನೊಡನೆ ಅವರ ಮಲಹೊರುವ ವೃತ್ತಿಯ ವಿವರಗಳನ್ನು ಇದೇ ಪನಾಸೋನಿಕ್ ಕೆಮೆರಾ ಶೂಟ್ ಮಾಡಿದಾಗ, ಇದೇ ಕೆನಾನ್ ಸ್ಟಿಲ್ ಕೆಮೆರಾ ರವಿಯ ತಮಾಷೆಗಳನ್ನು, ಪ್ರಸಾದ್ ಕುಟ್ಟಿಯ ನಿಷ್ಕಲ್ಮಶ ನಗೆಯನ್ನು, ನಾಗೇಂದ್ರ ಬಾಬುವಿನ ವಿನಾಕಾರಣ ಕಣ್ಣು ಹೊಡೆಯುತ್ತಿದ್ದದ್ದನ್ನ್ದು ಚಿತ್ರಗಳಾಗಿ ನುಂಗುತ್ತಿದ್ದಾಗ ನನಗೂ ಚಂದ್ರುವಿಗೂ ಇದೇ ಜನರ ಕಳೇಬರಗಳನ್ನು ಮುಂದೊಂದು ದಿನ ನಾವೇ ಮಬ್ಬಿನ ಪೊರೆಯ ಕಣ್ಣಲ್ಲಿ ಶೂಟ್ ಮಾಡುತ್ತೇವೆ, ಚಿತ್ರ ಹಿಡಿಯುತ್ತೇವೆ ಎಂಬ ಯಾವ ಊಹೆಯೂ ಇರಲಿಲ್ಲ.. ಎಲ್ಲವೂ ಗಿರಗಿರನೆ ನನ್ನ ಸುತ್ತಲೇ ಓಡಾಡುತ್ತಲೇ ಇತ್ತು..

ಗಂಗರಾಜು ಅಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿ ಹೋಗಿದ್ದ ಮೂರೂ ಜೀವಗಳ ಚಪ್ಪಲಿಗಳನ್ನು ಯಾವ ಕಾರಣಕ್ಕೆ ಅಷ್ಟು ಶ್ರದ್ಧೆಯಿಂದ ಆರಿಸುತ್ತಿದ್ದನೋ.. ಗಂಗರಾಜುವಿನ ದೇಹದಲ್ಲೂ ಜೀವವಿದೆಯೋ ಇಲ್ಲವೋ ಅಂತ ಆ ಸೆಕೆಂಡಿಗೂ ಗಾಬರಿಯಾಯಿತು..  ಕಣ್ಣೂ ಮಿಟುಕಿಸುತ್ತಿದ್ದ ಅನ್ನುವುದನ್ನು ಬಿಟ್ಟರೆ ೧೭ ವರ್ಷದ ಆ ಹುಡುಗನ ಇಡೀ ದೇಹದಲ್ಲಿ ಮತ್ತೇನೂ ಚಲಿಸುತ್ತಿಲ್ಲ ಅನಿಸಿ ಗಂಗರಾಜೂ ವಿಸೆರೇಯ್ರಾ, ಆ ಚೆಪ್ಪುಲ್ನಿ ತೀಸುಕೊನಿ ಏಮ್ ಚೇಸ್ತಾವ್ ನುವ್ವು (ಗಂಗರಾಜು ಆ ಚಪ್ಪಲಿ ತಗೊಂಡು ಏನು ಮಾಡ್ತೀಯ, ಬಿಸಾಕು ಮಾರಾಯ)  ಅಂದೆ.. ನನ್ನ ಮಾತಿಗೆ ಕಿಲುಬುಕಾಸಿನ ಬೆಲೆಯೂ ಕೊಡದೆ ಅವನ ಪಾಡಿಗವನು ಚಪ್ಪಲಿಗಳನ್ನು ಆಯ್ದುಕೊಂಡು ಒಂದು ಹ್ಯಾಂಡ್ ಕವರ್ರಿಗೆ ತುಂಬಿಕೊಂಡು ಕಂಕುಳಿಗೆ ಸಿಗಿಸಿಕೊಂಡು ನನ್ನ ಬಳಿಗೆ ಬಂದು ನಿಂತ. ನಾಗನ್ನ ಪಂಡಗನೇಸಿ ಮೊನ್ನ ತೀಸುಕುನ್ನಾಡು ಚೆಪ್ಪುಲು ಬಾಗುನ್ನಾಯಿ, ನೇನೇಸ್ಕುಂಟಾ, ಕುಟ್ಟನ್ನದಿ ಮಾ ಅಕ್ಕಕಿ ಸರವುತುಂದಿ, ರವೀದಿ ಅಲಾಗೇ ಉಂಚುಕುಂಟಾ (ನಾಗಣ್ಣ ಮೊನ್ನೆ ತಗೊಂಡ ಚಪ್ಪಲೀನಾ, ಚೆನಾಗಿದಾವೆ ನಾನೇ ಇಟ್ಕೋತೀನಿ, ಕುಟ್ಟಣ್ಣನ ಚಪ್ಪಲಿ ನಮ್ಮಕ್ಕನಿಗೆ ಸರಿ ಹೋಗ್ತವೆ.. ರವೀದು ಹಂಗೇ ಇಟ್ಕೋತೀನಿ)  ಅಂದು ಸುಮ್ಮನೆ ಹೋಗಿ ಗೋಡೆ ಬದಿಗೆ ಹೋಗಿ ಕುಳಿತ. ಆ ಕ್ಷಣಕ್ಕೆ ಅವನನ್ನೂ ಆ ಮಲದ ಬಾವಿಗೆ ನೂಕಿ ನಾನೂ ಅವನ ಹಿಂದೆಯೇ ಬಿದ್ದು ಸಾಯಬೇಕು ಅನಿಸುವಷ್ಟು ಒದ್ದಾಡಿಹೋದೆ.
ನಾಗೇಂದ್ರ ಬಾಬುನ ಒಂದು ವಾರದ ಕೂಸು.

ಗಂಗರಾಜು ನನ್ನ ಜೊತೆಗೋ, ಅವನ ಪಾಡಿಗವನೋ ಮಾತನಾಡುತ್ತಲೇ ಇದ್ದ. ನನ್ನೂ ಪಿಲಿಚಾರು.. ನೇನೆಳ್ಳಲೇದು, ಪೋಲೀಸೋಳ್ಳು ಪಟ್ಟುಕೊನಿ ಎಳತಾರನಿ.. ಎಳ್ಳಲೇದು.. ರೈಲ್‌ಪಟ್ಲು ಉಂದಿ ಕದ ಅಕ್ಕಡನಿಂಚಿ ಪಾರಿಪೋಯಾ, (ನನ್ನನ್ನೂ ಕರೆದ್ರು, ನಾನು ಪೋಲೀಸರು ಹಿಡಕಂಡು ಹೋಗತಾರೆ ಅಂತ ರೈಲ್ವೇಹಳಿ ದಾಟಿಕೊಂಡು ಓಡಿಹೋದೆ) ಗಂಗರಾಜನಿಗೂ ಜೀವವಿಲ್ಲದೆ ಮಲಗಿದ್ದ ಮೂವರಿಗೂ ಹಸಿವು ಅನ್ನೋ ಮೂರಕ್ಷರದಲ್ಲಿ ಸಾಮ್ಯತೆಯಿತ್ತು.  ಕಕ್ಕಸ್ಸುಗುಂಡಿ ಹುಡುಕುತ್ತ ಅಲೆದಾಡುವ ಗಂಗರಾಜುವಿನ ನಿಸ್ತೇಜ ಮುಖದಲ್ಲಿ, ನಾಳೆಯಿಂದ ಯಾರಿಗೋಸ್ಕರ ಮಲದಗುಂಡಿ ಹುಡುಕಲಿ ಎಂಬ ಗೊಂದಲವಿತ್ತೇ? ನನಗೂ ಗೊಂದಲವಾಯಿತು.

ಹೊರಗಡೆ ಸೇರಿದ್ದ ಕೆನಡಿ ಲೈನ್‌ನ ಬಡವರು ಕಟ್ಟೆಯೊಡೆದ ಕೆರೆಯಂತೆ ಭೋರಿಡುತ್ತಿದ್ದರು. ಯಾರು ಯಾರಿಗೋಸ್ಕರ ಅಳುತ್ತಿದ್ದಾರೆ ಎಂಬುದನ್ನು ಯಾರಿಗೂ ಗುರ್ತಿಸಲಾಗುತ್ತಿರಲಿಲ್ಲ. ಒಂದಷ್ಟು ಸಂಘಟನೆಯ ಜನ ಸರ್ಕಾರಂತೆ ಸರ್ಕಾರ, ಇವನಪ್ಪಂದಂತೆ ಸರ್ಕಾರ ಎನ್ನುತ್ತ ಅದನ್ನದನ್ನೇ ಪುನರಾವರ್ತಿಸುತ್ತಿದ್ದರು. ಡೀಸಿಯೂ ಬಂದ. ಇದೇ ಡೀಸಿ ಹದಿನಾಲ್ಕು ದಿನಗಳ ಹಿಂದೆ ಇದ್ದ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದು ಪ್ರತಿಭಟಿಸುತ್ತಿದ್ದ ಇದೇ ಜನರನ್ನ ಯಾರ ಹತ್ರ ಪರ‍್ಮಿಷನ್ ತಗೊಂಡು ಇಲ್ಲಿ ಗಲಾಟೆ ಮಾಡ್ತೀದೀರಿ, ಎಲ್ಲರನ್ನೂ ಒಳಗೆ ಹಾಕ್ತೀನಿ ಎಂದು ಅಲ್ಸೇಷಿಯನ್‌ಗಳೂ ನಾಚಿಕೊಳ್ಳುವಂತೆ ಬೊಗಳಿ ಹೋಗಿದ್ದ. ಅಂಥಹವನ ಬಾಯಲ್ಲಿ ಸತ್ತ ಮೂವರ ಬಗ್ಗೆ ಮರುಕವೂ, ಕನಿಕರವೂ ಸರ್ಕಾರಿ ಪದಗಳಾಗಿ ಸುರಿಯುತ್ತಿದ್ದವು. ಕೆಜಿಎಫ್ ಅನ್ನು ಜರ್ಮನಿಯೆಂತಲೂ ತಾನೊಬ್ಬ ಹಿಟ್ಲರ್ ಎಂತಲೂ ಪರಿಭಾವಿಸಿಕೊಂಡ ಇಂಥಹ ಮೃಗವೊಂದರ ಬಾಯಲ್ಲಿ ಇಷ್ಟೆಲ್ಲ ಸುನೀತ ಪದಗಳು ಎಲ್ಲಿ ಅಡಗಿದ್ದವು ಇಷ್ಟು ದಿನ ಎಂದು ಒಂದು ಕಡೆಯಿಂದ ನನಗೆ ಅಸಹ್ಯ ಕಿತ್ತುಕೊಂಡು ಬರುತ್ತಿತ್ತು.

ನಾಗೇಂದ್ರ ಬಾಬು ಬದುಕಿದ್ದಾಗ 
ಈ ಮೃಗವನ್ನು ನೋಡುವುದಕ್ಕಿಂತ ಇನ್ನಷ್ಟು ಹೊತ್ತು ಸತ್ತುಹೋದ ಆ ಜೀವಗಳ ಹೆಣವನ್ನು ನೋಡುತ್ತ ಕೂರುವುದು ಹೆಚ್ಚು ಸಹನೀಯ ಅನ್ನಿಸುತ್ತಿರುವಾಗ ರೊಚ್ಚಿಗೆದ್ದ ಬಡವರ ಗುಂಪಿನಿಂದ ಒಬ್ಬಾತ ತನ್ನ ಚಪ್ಪಲಿಯನ್ನು ಕೈಗೇ ತೆಗೆದುಕೊಂಡು ಕೊಟ್ಟ ಕೆಲಸವನ್ನು ಕಿತ್ತುಕೊಂಡಲ್ಲೋ, ನಾಚಿಕೆ ಇದೆಯೇನೋ ನಿನಗೆ? ಹೊಟ್ಟೆಗೇನು ಹೇಲು ತಿನ್ನತೀಯೇನೋ, ಕೆಲಸ ಇಲ್ಲದೆ ಮತ್ತೆ ಕಕ್ಕಸ್ಸು ಗುಂಡು ಬಳಿಯೋಕೆ ಹೋಗಿ ಸತ್ತವರಲ್ಲ ಮೂರು ಜನ, ಕಟುಕ ನನಮಗನೇ ಅಂತ ಉಂಗುಷ್ಟದ ಜಾಗದಲ್ಲಿ ಹೇರ್‌ಪಿನ್ನು ಸಿಕ್ಕಿಸಿದ್ದ ತನ್ನ ಚಪ್ಪಲಿಯನ್ನು ತೂರಲು ಸಿದ್ದವಾಗಿದ್ದ. ಬಿಟ್ಟರೆ ಕೈಯೊಂದು ಕಡೆ, ತಲೆಯೊಂದು ಕಡೆ ಎಂಬಂತೆ ಮೃಗವನ್ನು ಚೆಂಡಾಡಲು ಜನರು ಸಿದ್ದವಿದ್ದಂತೆ ಕಾಣಿಸಿತೋ ಏನೋ ಲಾಠಿಚಾರ‍್ಜಿಗೆ ಮೃಗ ಆದೇಶಿಸಿತು. ಮತ್ತೊಂದು ಪೋಲೀಸು ಮೃಗ ಪೀಪೀ ಊದಲಾಗಿ ಉಳಿದ ಖಾಕಿ ದಿರಿಸಿನ, ತಮಾಷೆ ಟೊಪ್ಪಿಗೆಯ ಕ್ರಿಮಿಕೀಟಗಳು ಆ ಬಡಜನರನ್ನು ಮನಬಂದಂತೆ ಬಡಿಯತೊಡಗಿದರು,  ಜರ್ಮನಿಯ ಹಿಟ್ಲರ್ರನಂತೆಯೇ ದಿವೀನಾಗಿ ಇದ್ದ ಮೃಗವು ಸುಮ್ಮನೆ ನಿಂತು ಇದನ್ನೆಲ್ಲ ನೋಡುತ್ತಿತ್ತು. ಬಡವರು ತಮಗೆ ಕಂಡಕಂಡಲ್ಲಿಗೆ ಬಡಿಯುತ್ತಿದ್ದ ತಮಾಷೆ ಟೊಪ್ಪಿಗೆಯ ಕ್ರಿಮಿಕೀಟಗಳಿಂದ ತಪ್ಪಿಸಿಕೊಂಡು ಸಿಕ್ಕಸಿಕ್ಕಲ್ಲಿಗೆ ನುಗ್ಗುತ್ತಿದ್ದರು. ಅಷ್ಟರಲ್ಲಿ ಪ್ರಭು.. ಹೆಣ ತಗೊಂಡು ಹೋಗ್ತಿದಾರೆ ಕಣ್ರೋ ಎನ್ನುತ್ತ ಕೂಗುತ್ತ ಓಡಿ ಬಂದ..

ರವಿ ಮತ್ತು ಆತನ ಪತ್ನಿ
ಇಲ್ಲಿ ಲಾಠಿಚಾರ‍್ಜ್ ಮಾಡಿ ಆ ಕಡೆ ಹೆಣವನ್ನು ಹೊತ್ತೊಯ್ಯಲು ಯತ್ನಿಸುತ್ತಿದ್ದ ಪೋಲೀಸರನ್ನು ಕಂಡಕಂಡಲ್ಲಿಗೆ ನೂಕಿ ಎಸೆದು ಮೂರೂ ಹೆಣಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಡೀಸಿಯ ಮುಂದಿಟ್ಟು ಪ್ರಭು ಇನ್ನೂ ಎಷ್ಟು ಜನಾ ಸತ್ತ ಮೇಲೆ ಕೆಜಿಎಫ್ ನಲ್ಲಿ ಮಲ ಹೊರೋರು ಇದಾರೆ ಅಂತ ನಂಬತೀಯಾ? ಬರ್ರಪ್ಪಾ ಬರ್ರಿ.. ಸಾಲಾಗಿ ನಿಂತುಕೊಳ್ಳೋಣ ಎಲ್ಲಾರಿಗೂ ಗುಂಡು ಹೊಡೆದು ಕೊಂದ್ಹಾಕಿ ಆಮೇಲೆ, ಕಕ್ಕಸ್ಸು ಬಳಿಯೋರು ಯಾರೂ ಇಲ್ಲ ಅಂತ ರಿಪೋರ್ಟ್ ಬರಕೋ ಅಂತ ಕೂಗಾಡಿಬಿಟ್ಟ. ಇದಾದ ೨ ನಿಮಿಷಕ್ಕೆ ಸರ್ಕಾರಿ ಮೃಗ ತಲೆತಪ್ಪಿಸಿಕೊಂಡು ಕಂಡ ಜೀಪು ಹತ್ತಿಕೊಂಡು ಪರಾರಿಯಾಗಿ ಹೋಯಿತು. ಶವಪರೀಕ್ಷೆಗೆ ತೆಗೆದುಕೊಂಡ ಹೋದ ಮೂವರ ಹೆಣಗಳನ್ನು ಆ ಬಡವರಿಗೆ ಬಡಿಯುತ್ತಲೇ ತಮಾಷೆ ಟೊಪ್ಪಿಗೆಯ ಕ್ರಿಮಿಕೀಟಗಳು ಸರ್ಕಾರಿ ಆಸ್ಪತ್ರೆಯ ಕಡೆಗೆ ವಾಹನದಲ್ಲಿ ಕೊಂಡೊಯ್ದರು.

ಮಾರನೆಯ ಬೆಳಿಗ್ಗೆ ಕೆನಡೀಸ್ ಲೈನ್‌ನ ಮೂರೂ ಕ್ರಿಯಾಶೀಲ ಜೀವಗಳು ಬಿಳಿ ಬಟ್ಟೆಯೊಳಗೆ ತುಂಬಿಸಿಟ್ಟ ಮಾಂಸದ ಮುದ್ದೆಗಳಂತೆ ಗಾಜಿನಪೆಟ್ಟಿಗೆಗಳಲ್ಲಿ ಸುತ್ತಿಕೊಂಡಿದ್ದರು. ಮೂರೂ ಗಾಜಿನಪೆಟ್ಟಿಗೆಗಳ ಪಕ್ಕವೂ ಆ ಜೀವಗಳ ಪತ್ನಿಯರು ಅಳಲೂ ನಿತ್ರಾಣವಿಲ್ಲದೆ ಕುಳಿತಿದ್ದರು. ಕುಟ್ಟಿಯ ನಡುವಯಸ್ಕ ಪತ್ನಿ, ರವಿ ಮತ್ತು ನಾಗೇಂದ್ರ ಬಾಬುರ ಚಿಕ್ಕವಯಸ್ಸಿನ ಪತ್ನಿಯರು.. ಅವರನ್ನು ಸಮಾಧಾನಿಸುತ್ತಿದ್ದ ನೆರೆಹೊರೆಯವರು, ನಾಗೇಂದ್ರಬಾಬುವಿನ ಒಂದು ವಾರದ ಮಗು ಕುಟ್ಟಿಯ ಡಾಲ್ಮೇಷಿಯನ್ ನಾಯಿಯ ಮೇಲಿನ ಕಪ್ಪುಕಪ್ಪು ಚಿಕ್ಕೆಗಳನ್ನೇ ನೋಡುತ್ತಿತ್ತು. ಬ್ಯಾಂಡ್ ಸೆಟ್ಟಿನವರು ಶೋಕಗೀತೆಗಳನ್ನು ಹುಡುಕೀ ಹುಡುಕೀ ವಾದ್ಯ ಬಡಿಯುತ್ತ ಇದ್ದ ಸಂದರ್ಭದಲ್ಲೇ ಕೆನಡಿ ಲೈನ್‌ನ ಎರಡೂ ಬದಿಗಿದ್ದ ತಮಿಳು ಮತ್ತು ತೆಲುಗು ಚರ್ಚುಗಳಲ್ಲಿ ಒಂದರೊಳಗಿನಿಂದ ಆತ್ಮ ಸ್ವರೂಪನೇ, ಪ್ರಿಯ ಆತ್ಮಸ್ವರೂಪನೇ, ಈಗ ಬಾ ದೇವ, ಇಳಿದು ಬಾ ದೇವ ನಮ್ಮ ಮಧ್ಯದೊಳು, ಪಾಪ ತೊಳೆದು ಶುದ್ದೀಕರಿಸು ಈ ದಿವ್ಯ ಸಮಯದೊಳು ಎಂಬ ಪ್ರಾರ್ಥನೆ. ಯಾವ ದೇಶದ ಯಾವ ಜಾತಿಯ ಯಾವ ಜನ ಪಾಪಗಳ ಬಗ್ಗೆ ಯೇಸುದೇವನು ಮಾತಾಡುತ್ತಿದ್ದಾನೋ ಎಂದುಕೊಳ್ಳುತ್ತ ಸಿಗರೇಟು ಹಚ್ಚಿ ವಕೀಲೆ ಗೆಳತಿ ಮೈತ್ರೇಯಿ ಕೃಷ್ಣನ್ ಬಳಿ ಬಳಿ ನಿಂತುಕೊಂಡೆ.

ಮೃತರ ಸಂಬಂಧಿಗಳೊಂದಿಗೆ ಲೇಖಕ ದಯಾನಂದ್
 ಫ್ಯಾಮಿಲಿ ಪ್ರೊಫೈಲ್ ಒಂದು ಬೇಕಿತ್ತು ದಯಾ, ಮೂರೂ ಫ್ಯಾಮಿಲಿಗಳದ್ದು ಪ್ರೊಫೈಲ್ ಮಾಡಿಬಿಡು ಅರ್ಜೆಂಟಾಗಿ ಬೇಕಿದೆ ಎಂದ ಮೈತ್ರೇಯಿ ಮಾತಿಗೆ ಹೂಂಗುಟ್ಟಿ ಜೀವ ಕಳೆದುಕೊಂಡ ಮೂವರ ಮನೆಗಳ ಬಳಿ ಹೋಗಿ ಫೋಟೋ ವಿಡಿಯೋ ಮಾಡುತ್ತ ನಿಂತೆ. ಗೆಳೆಯ ಚಂದ್ರು, ರಾಜೇಂದ್ರ ಮತು ಪುರುಷಿ ಎಲ್ಲರೂ ಜನಗಳ ಸಭೆ ನಡೆಸುತ್ತಿದ್ದ ಸರ್ಕಲ್ ಬಳಿ ಬರುತ್ತಿದ್ದಂತೆ ೮೦ರ ಇಳಿವೃದ್ಧೆ ಅಂತೋನಿಯಮ್ಮ ಸಿಕ್ಕರು. ನಾ ಕೊಡುಕು ಬಾಬೂ ಸನಿಪೋಯಾಡು ನೈನಾ.. ಇಪ್ಪುಡು ಚೂಡು ಇಂಕಾ ಮುಗ್ಗುರು ಎಲ್ಲಿಪೋಯಾರು, ಯಮದೂತುದು ಇಕ್ಕಡೇ ಎಕ್ಕಡೋ ರೈಲುಪಟ್ಲ ದಗ್ಗರ ದಾಚಿಕೊನಿ ಉನ್ನಾಡೇಮೋ ನೈನಾ.. ಅಪ್ಪುಡಪ್ಪುಡು ವಚ್ಚೀ.. ಮನವಾಳನಿ ತೀಸುಕೆನಿ ಎಳುತೂ ಉಂಟಾಡು. ಇಂಕೆನ್ನಿ ಪ್ರಾಣಾಲೂ ಎಳ್ಳಾಲನಿ ರಾಸಿಪೆಟ್ಟುಂಂದೋ ತೆಲೀದು ನೈನಾ (ನನ್ನ ಮಗ ಬಾಬೂ ಸತ್ತುಹೋದ, ಈಗ ಇನ್ನು ಮೂವರು ಸತ್ತು ಹೋಗಿದ್ದಾರೆ.. ಯಮದೂತರು ಇಲ್ಲೇ ಎಲ್ಲೋ ರೈಲುಹಳಿ ಆಸುಪಾಸಿನಲ್ಲಿ ಕದ್ದು ಕೂತಿರಬಹುದು, ಅವಾಗವಾಗ ಬಂದು ನಮ್ಮ ಜನಗಳನ್ನ ಹಿಂಗೆ ಎಳೆದುಕೊಂಡು ಹೋಗ್ತಿದಾರೆ, ಇನ್ನೂ ಎಷ್ಟು ಜೀವಗಳು ಹೀಗೇ ಹೋಗುತ್ತವೋ ಗೊತ್ತಿಲ್ಲ ಕಣಪ್ಪ) ಅನ್ನುತ್ತ ಬಂದು ಕೈ ಹಿಡಿದುಕೊಂಡಿತು. ಒಮ್ಮೆ ಕುಮಾರ ಕುಡಿದ ಚೊಂಬಿನಲ್ಲಿಯೇ ನಾನು ನೀರು ಕುಡಿದಿದ್ದರಿಂದ ನನ್ನ ಬಗ್ಗೆ ಇದ್ದ ಭಯಾತಂಕಗಳೆಲ್ಲ ದೂರವಾಗಿ, ನನ್ನನ್ನು ಕಂಡಾಗಲೆಲ್ಲ ಒಂದು ಚೊಂಬಿನಲ್ಲಿ ನೀರು ಹಿಡಿದುಕೊಂಡು ನೀಳ್ಳು ತಾಗಂಡಿ ಸಾರೂ ಎಂದು ಹಿಂದ್ಹಿಂದೆ ಓಡಾಡುತ್ತಿದ್ದ ಕುಮಾರ ಕೈಯಲ್ಲಿ ಚೊಂಬಿಲ್ಲದೆ ಸುಮ್ಮನೆ ಕುಳಿತಿದ್ದ. ಗಂಗರಾಜು ಅವನಿಗೆ ಕುಟ್ಟಿ ಪ್ರಸಾದನ ಜೊತೆ ತಾನು ಹೋಗದೆ ಇದ್ದ ಕಾರಣಕ್ಕೆ ಹೇಗೆ ನನ್ನ ಜೀವವುಳಿಯಿತು ಎಂಬುದನ್ನು ವಿವರಿಸುತ್ತ, ತಾನು ಆಯ್ದುಕೊಂಡು ಬಂದಿದ್ದ ಮೂವರ ಚಪ್ಪಲಿಗಳಲ್ಲಿ ಒಂದನ್ನು ಕುಮಾರನ ಎದುರಿಗೆ ಹಾಕಿ ಸೈಜು ನೋಡಲು ಹೇಳುತ್ತಿದ್ದ. ಅಮಾಯಕ ಗಂಗರಾಜನ ಬುದ್ದಿಮತ್ತೆಗೆ ಗಾಜಿನಪೆಟ್ಟಿಗೆಯೊಳಗೆ ಉಸಿರೂ ಮರೆತು ಮಲಗಿದ್ದ ಜೀವಗಳಿಗಿಂತ ಆ ಮೂರು ಜೊತೆ ಕಡಿಮೆಬೆಲೆಯ ಚಪ್ಪಲಿಗಳು ದೊಡ್ಡವಾಗಿ ಕಂಡಿದ್ದು ಕರುಳು ಕಿತ್ತುಬಂದಂತೆ ಆಯ್ತು.

ಪ್ರಸಾದ್ ಕುಟ್ಟಿಯ ಪತ್ನಿ
ಕೆಜಿಎಫ್‌ನಲ್ಲಿ ಮಲಹೊರುವವ ಪ್ರಕರಣ ಇವತ್ತು ನಿನ್ನೆಯದ್ದಲ್ಲ. ಬಿಜಿಎಂಎಲ್ ನೇತೃತ್ವದ ಗಣಿ ಮುಚ್ಚುವುದಕ್ಕೂ, ನಾಲ್ಕಂಕಿ, ಐದಂಕಿ ಸಂಬಳ ತೆಗೆದುಕೊಳ್ಳುತ್ತಿದ್ದ ಅಧಿಕಾರಿಗಳು ನಿವೃತ್ತಿ ನಂತರದ ಎಲ್ಲಾ ಸೌಲಭ್ಯಗಳನ್ನು ಪಡೆದು ಕೆಲಸದಿಂದ ನಿವೃತ್ತಿಯಾದ ಸಮಯಕ್ಕೇ ಅದೇ ಗಣಿಯಲ್ಲಿ ಚಿನ್ನ ಅಗೆಯಲು ಸುರಂಗ ನುಗ್ಗುತ್ತಿದ್ದ ಅನಕ್ಷರಸ್ಥ ಕಾರ್ಮಿಕರು ನೇರವಾಗಿ ಬೀದಿಪಾಲಾಗುವುದಕ್ಕೂ ಒಂದೇ ಆಗಿತ್ತು. ಆಗಿನಿಂದ ಕುಡಿಯಲು ನೀರನ್ನೂ ಸಹ ಕೊಡದೆ ಈ ಕಾರ್ಮಿಕರ ಕ್ವಾಟ್ರಸ್‌ಗಳಿಗೆ ಬಲವಂತವಾಗಿ ಕ್ವಾಟ್ರಸ್‌ಗಳಿಂದ ಓಡಿಸಲು ಜಿಲ್ಲಾಡಳಿತದ ವತಿಯಿಂದ ಹುನ್ನಾರಗಳೂ ನಡೆದಿದ್ದವು. ಆ ಸಮಯದಲ್ಲಿ ಕೋಲಾರದ ಸಂಘಟನೆಗಳ ಮತ್ತು ಪ್ರಜ್ಞಾವಂತರ ಪ್ರತಿಭಟನೆಯ ಕಾರಣಕ್ಕೆ ಕೆಜಿಎಫ್ ನಗರಸಭೆಯಲ್ಲಿ ಈ ಕಾರ್ಮಿಕರಿಗೆ ಗುತ್ತಿಗೆ ಪೌರಕಾರ್ಮಿಕರ ತಾತ್ಕಾಲಿಕ ಕೆಲಸವನ್ನೂ ನೀಡಲಾಗಿತ್ತು. ಆ...ದರೆ ಗಣಿಯಿಂದ ನೇರವಾಗಿ ಗುತ್ತಿಗೆ ಕಂಟ್ರಾಕ್ಟರ ಕಪಿಮುಷ್ಠಿಯೊಳಗೆ ಸಿಲುಕಿಕೊಂಡ ಈ ಕಾರ್ಮಿಕರು ನಿಯತ್ತಾಗಿ ಕೆಲಸವನ್ನೇನೋ ಮಾಡಿದರು, ಸಂಬಳ ಮಾತ್ರ ಸಿಗಲಿಲ್ಲ. ಸತತ ೯ ತಿಂಗಳು ಸಂಬಳವಿಲ್ಲದೆ ದುಡಿಸಿಕೊಂಡ ಕೆಜಿಎಫ್ ನಗರಸಭೆ ಈ ಕಾರ್ಮಿಕರ ಹಸಿವನ್ನು ಮಾತ್ರ ಗಣನೆಗೆ ತಂದುಕೊಳ್ಳಲೇ ಇಲ್ಲ. ಅನಿವಾರ್ಯವಾಗಿ ಸಂಬಳ ಸಿಗದ ಕೆಲಸ ತ್ಯಜಿಸಿ ಹೊಟ್ಟೆಹೊರೆಯಲು ಮಲಹೊರುವ ಕೆಲಸಕ್ಕೇ ಈ ಕಾರ್ಮಿಕರು ಬೀಳುವಂತೆ ಮಾಡಿದ್ದ್ದು ಇದೇ ಕೆಜಿಎಫ್ ನಗರಸಭೆ.

ನಾಗೇಂದ್ರ ಬಾಬು ಪತ್ನಿ
ಕಳೆದ ನಾಲ್ಕೂವರೆ ತಿಂಗಳ ಹಿಂದೆ ಕೆಜಿಎಫ್‌ನ ಈ ಕಾರ್ಮಿಕರ ಮಲಹೊರುವ ಬರ್ಬರತೆಯ ಮಾಹಿತಿ ಜಗತ್ತಿನ ಮುಂದೆ ಬರುತ್ತಿದ್ದಂತೆಯೇ ತಮ್ಮ ಮುಖದ ಮೇಲೆಯೇ ಈ ಕಾರ್ಮಿಕರು ಮಲ ಎಸೆದಂತಾಗಿ ಕನಲಿಹೋದ ಕೋಲಾರದ ಡೀಸಿ ಮತ್ತು ನಗರಸಭೆಯ ಕಮಿಷನರ್ ತರಾತುರಿಯಲ್ಲಿ ಮಲಹೊರುವುದನ್ನು ನಿಷೇಧಿಸಿ ಆಟೋ ಪ್ರಚಾರ ಕೈಗೊಂಡರು. ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಒಂದು ತಿಂಗಳ ಗಡುವು ವಿಧಿಸಿ ಹೋದರು, ಸಚಿವರಿಗೆ ಚಪ್ರಾಸಿಗಳಿಗೆ ಕೊಡುವಷ್ಟು ಬೆಲೆಯನ್ನೂ ಕೊಡದ ಕೋಲಾರ ಜಿಲ್ಲಾಡಳಿತ ಸಚಿವರ ಅಷ್ಟೂ ಸೂಚನೆಗಳನ್ನು ಗಾಳಿಗೆ ತೂರಿ ೧೪೦ ಮಂದಿಗೆ ದಿನಗೂಲಿ ಕೆಲಸ ನೀಡಿ ಕೈತೊಳೆದುಕೊಂಡಿತು. ಅದಾದಮೇಲೆ ಮಾನವಹಕ್ಕುಗಳ ಆಯೋಗದ ಸದಸ್ಯ ರೆಡ್ಡಿ ಕೆಜಿಎಫ್‌ಗೆ ಭೇಟಿ ನೀಡಿ ಕೆಲವೊಂದು ಜನಪರ ಆದೇಶಗಳು ಮತ್ತು ಸೂಚನೆಗಳನ್ನು ನೀಡಿದರು. ಅದಕ್ಕೂ ಇವರು ಕಿಲುಬುಕಾಸಿನ ಬೆಲೆಯನ್ನೂ ಕೊಡಲಿಲ್ಲ. ಮಲಹೊರುವ ಪ್ರಕರಣ ಬಯಲಿಗೆ ಬಂದಾದ ಮೇಲೆ ಕಡೇಪಕ್ಷ ಅಂಥಹ ಮಲದಗುಂಡಿಗಳನ್ನು ಮುಚ್ಚುವ ಕೆಲಸವಾದರೂ ಮಾಡಿದ್ದರೆ, ಮಲದಗುಂಡಿಗಳು ಎಲ್ಲೆಲ್ಲಿವೆ ಎಂಬ ಸರ್ವೇಯನ್ನಾದರೂ ಕೈಗೊಂಡಿದ್ದರೆ, ಮಲಹೊರುತ್ತಿರುವ ಕಾರ್ಮಿಕರ ಜನಪರ ಅಭಿವೃದ್ಧಿಗಾದರೂ ಮನಸ್ಸು ಮಾಡಿದ್ದರೆ ಇವತ್ತು ಮೂರು ಜೀವಗಳು ಹೆಣವಾಗುತ್ತಿರಲಿಲ್ಲ. ಯಾವುದನ್ನೂ ಮಾಡದ ಜಿಲ್ಲಾಡಳಿತ ತಮ್ಮ ಘೋರ ದುರಹಂಕಾರದ ಕಾರಣಕ್ಕೆ ಮೂವರು ಸತ್ತ ಕೂಡಲೇ ಪರಿಹಾರದ ಚೆಕ್ಕುಗಳನ್ನು ಹಿಡಿದು ಹೆಣದ ಮುಂದೆ ನಿಂತಿದ್ದರು. ಸತ್ತವರು ಸತ್ತರು ಉಳಿದವರ ಕಥೆಯೇನು? ಎಂದು ಸಮಗ್ರ ಅಭಿವೃದ್ಧಿಗೆ ಆಗ್ರಹಿಸುತ್ತಿದ್ದ ಸಫಾಯಿ ಕರ್ಮಾಚಾರಿ ಆಂದೋಲನದ ವಿಲ್ಸನ್ ಬೆಜವಾಡ, ಬಾಲನ್ ಮತ್ತು ಹೋರಾಟದ ಹಿನ್ನೆಲೆಯ ನಾಯಕರ ಮೇಲೆ ಕೆಜಿಎಫ್ ನಗರಸಭೆಯ ಉಪಾಧ್ಯಕ್ಷ ಭಕ್ತವತ್ಸಲಂ ಎಂಬ ವಯೋವೃದ್ದ ಪುಢಾರಿಯೊಬ್ಬ ಪಕ್ಕಾ ಬೀದಿರೌಡಿಯಂತೆ ಕೊರಳಪಟ್ಟಿ ಹಿಡಿದು ಪ್ರತಿಭಟನೆ ಏತಕ್ಕೆ ಮಾಡ್ತೀಯ ಅಂತ ಬೊಗಳುತ್ತಿದ್ದ. ನಗರಸಭೆಯೆಂದರೇನು, ಅದರ ಘನತೆ, ಕರ್ತವ್ಯಗಳ ಕಿಂಚಿತ್ ಅರಿವಿಲ್ಲದೆ ಬೀದಿ ರೌಡಿಯಂತೆ ಹೊಡೆದಾಟಕ್ಕೆ ನಿಂತಿದ್ದ ಭಕ್ತವತ್ಸಲಂನನ್ನು ನಗರಸಭೆಯ ಉಪಾಧ್ಯಕ್ಷನನ್ನಾಗಿ ಆರಿಸಿದ ಮಂದಿಗೆ ತಲೆಯಲ್ಲಿ ಮಿದುಳಿತ್ತೋ ಅಥವಾ ಮತ್ತೇನಾದರೂ ವಿಸರ್ಜನೆಯ ಪದಾರ್ಥವಿತ್ತೋ ಅನ್ನಿಸಿತು. ಈ ಮೂರುಕಾಸಿನ ರೌಡಿಯ ದುಂಡಾವರ್ತಿಗೆ ಭಯಬಿದ್ದ ಸತ್ತವರ ಮನೆಯ ಹೆಣ್ಣುಮಕ್ಕಳು ಪರಿಹಾರದ ಚೆಕ್ ಅನ್ನು ತೆಗೆದುಕೊಂಡರು.
ಗಂಗರಾಜು

ತಾವು ಮಾಡಿದ ಕೊಲೆಗಡುಕ ಕೆಲಸವನ್ನು ಅಚ್ಚುಕಟ್ಟಾಗಿ ಮುಚ್ಚಿಹಾಕಲು ಹೊರಟಿರುವ ಜಿಲ್ಲಾಡಳಿತದ ಮೃಗಗಳು, ನಗರಸಭೆಯ ಕಮಿಷನರ್ ಎಂಬ ಹಾಸ್ಯಾಸ್ಪದ ದೇ, ಮತ್ತು ಕೋಲಾರದ ಪೋಲೀಸರು ಹೆಣ ಎತ್ತಲು ಬಿಡದೆ ಪ್ರತಿಭಟಿಸಿದ ಕಾರಣಕ್ಕೆ ಏಳು ಮಂದಿಯ ಮೇಲೆ ಕರ್ತವ್ಯ ನಿರ್ವಹಣೆಗೆ ಅಡ್ಡಿಯುಂಟು ಮಾಡಿದ ಕೇಸಿನಲ್ಲಿ ಎಫ್.ಐ.ಆರ್ ದಾಖಲಿಸಿದ್ದಾರೆ. ತೆಗೆದುಕೊಳ್ಳುವ ಸಂಬಳಕ್ಕೆ ಯಾವತ್ತೂ ಕೆಲಸ ಮಾಡದೆ ಬಡವರ ವಿರೋಧಿಯಾಗಿಯೇ ವರ್ತಿಸುತ್ತಿರುವ ಕೆಜಿಎಫ್ ನಗರಸಭೆ, ಜಿಲ್ಲಾಡಳಿತದ ಅತ್ಯುಚ್ಚ ಸ್ಥಾನದಲ್ಲಿರುವ ರಾಜಾಸ್ಥಾನಿ ಮೃಗ, ಸಾಲ ನೀಡಿಕೆಯಲ್ಲಿ ಕಮೀಷನ್ ಹೊಡೆಯುತ್ತ ಕಮೀಷನ್ ಏಜೆಂಟರಿಂದ ವಸೂಲು ಮಾಡಿದ ಹಡಬೆ ದುಡ್ಡಿನಲ್ಲಿ ತಮ್ಮ ಮಕ್ಕಳ ಕೈಯಲ್ಲಿ ಪಟಾಕಿ ಹೊಡೆಸುತ್ತ ಮಜಾ ಮಾಡುತ್ತ ಬಿದ್ದಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳು, ಸತ್ತಿದೆಯೋ ಬದುಕಿದೆಯೋ ಅಂತಲೂ ತಿಳಿಯದಂತಾಗಿರುವ ಕೋಲಾರ ಸಮಾಜ ಕಲ್ಯಾಣ ಇಲಾಖೆ. ಇವರಲ್ಲಿ ಯಾವನಾದರೂ ಒಬ್ಬನೇ ಒಬ್ಬ ಪಿತೃಸಂಜಾತ ಈ ಕಾರ್ಮಿಕರ ಪರವಾಗಿದ್ದರೂ ಈ ಮೂರೂ ಮಂದಿ ಇವತ್ತು ಸಾಯುತ್ತಿರಲಿಲ್ಲ. ಇವರ ಕುತ್ತಿಗೆಗೆ ಕೈಯಿಟ್ಟು ಜೈಲಿಗೆ ನೂಕುವ ದರ್ದು ಪೋಲೀಸರಿಗೂ ಇಲ್ಲ. ಬೀದಿರೌಡಿಗಳಿಂದ ತುಂಬಿ ತುಳುಕುತ್ತಿರುವ ಕೆಜಿಎಫ್ ಅಧಿಕಾರಿಗಳ ವರ್ಗ ಮತ್ತು ರಾಜಕಾರಣ ವರ್ಗಕ್ಕೂ ಇಲ್ಲ.  

ಆ ಸಾವಿನ ಮನೆಯಲ್ಲಿ ನಡೆದ ಇನ್ನು ಉಳಿದ ವಿವರಗಳನ್ನು ಬರೆಯಲು ಬೆರಳುಗಳೋ, ಅಥವಾ ಇನ್ಯಾವುದೋ.. ಬರೆಯಲು ssಒಪ್ಪುತ್ತಿಲ್ಲ.. ಸಂಜೆಯ ೪ರ ಹೊತ್ತಿಗೆ ಒಂದೇ ಗುಂಡಿಯೊಳಗೆ ಮೂರೂ ಜೀವಗಳನ್ನು ಒಂದರಪಕ್ಕ ಒಂದರಂತೆ ಜೋಡಿಸಿ ಒಬ್ಬೊಬ್ಬರಾಗಿ ಮೂರು ಹಿಡಿ ಮಣ್ಣು ಸುರಿಯುತ್ತಿರುವಾಗ.. ಆ ಮೂರೂ ಹೆಣಗಳ ಕೊನೆಯಲ್ಲಿ ಯಾವುದೋ ನಾಲ್ಕನೆಯ ಹೆಣವೂ ಜೀವಕಳೆದುಕೊಂಡಂತೆ ಕಣ್ಣು ತೇಲಿಸಿಕೊಂಡು ಬಿದ್ದಂತೆ ಕಾಣಿಸಿತು.. ಅರ್ಧಗುಂಡಿಯ ಮಣ್ಣೂ ತುಂಬುವವರೆಗೂ ಆ ನಾಲ್ಕನೆಯ ಹೆಣ ಯಾರದ್ದಾಗಿರಬಹುದೆಂಬ ಪ್ರಶ್ನೆಗೆ ಗೊಂದಲಗಳೇ ಢಿಕ್ಕಿ ಹೊಡೆಯುತ್ತಿದ್ದವು. ಕೆಜಿಎಫ್ ನಿಂದ ವಾಪಸ್ಸು ಬರುವ ದಾರಿಯಲ್ಲಿ ಆ ನಾಲ್ಕನೆಯ ಹೆಣದ ಚಿತ್ರ ಸುಸ್ಪಷ್ಟವಾಗಿ ಕಂಡುಬಿಟ್ಟಿತು. ವಿ ದಿ ಪೀಪಲ್ ಎಂದು ಶುರುವಾಗುವ ಭಾರತದ ಸಂವಿಧಾನ, ಪ್ರಜಾಪ್ರಭುತ್ವ, ಕಾನೂನು ಶಾಸನಗಳು, ಅಧಿಕಾರಿಗಳು, ಅಧಿಕಾರಗಳು, ಎಲ್ಲದಕ್ಕೂ ಈ ಮೂರು ಹೆಣಗಳು ಒಟ್ಟಿಗೆ ಸೇರಿ ಶವಪರೀಕ್ಷೆ ಮಾಡಿ ಮುಗಿಸಿ ಅವಕ್ಕೂ ಒಂದು ಬಿಳೇಬಟ್ಟೇ ಸುತ್ತಿ ತಮ್ಮ ಪಕ್ಕದಲ್ಲಿ ಮಲಗಿಸಿಕೊಂಡೇ ಮಣ್ಣಾದವು ಅನಿಸತೊಡಗಿ ಒಂದಷ್ಟು ನಿರಾಸೆಯೂ, ಕಡುಕೋಪವೂ, ಮುಂದಿನ ಕೆಲಸ ಕಾರ್ಯಗಳ ಬಗ್ಗೆ ಸ್ಪಷ್ಟ ನಿರ್ಧಾರಗಳೂ ಒಟ್ಟೊಟ್ಟಿಗೇ ನುಗ್ಗತೊಡಗಿದವು.. ಯಾವ ಯಾವ ಕಾನೂನುಗಳನ್ನು ಶಾಸನಗಳನ್ನು ಯಾವ ಯಾವ ಸರ್ಕಾರಿಮೃಗಗಳ ವಿರುದ್ದವೇ ತಿರುಗಿಸಿಬಿಟ್ಟು ಯಾರು ಯಾರನ್ನು ಜೈಲುಪಾಲು ಮಾಡಬೇಕೆನ್ನುವ ಒಂದೇ ಒಂದು ಅಜೆಂಡಾ ನನ್ನೆದುರು ಈಗ ತಕಪಕನೆ ಕುಣಿಯುತ್ತಿದೆ. ಅಂದಹಾಗೆ ಮಲದಗುಂಡಿ ಶುಚಿಗೊಳಿಸಲು ತೆರಳಿದ್ದ ಆರು ಜನರಲ್ಲಿ ಮೂವರು ಹೆಣವಾದರು.. ಒಬ್ಬರ ಹಿಂದೊಬ್ಬರು ಕಣ್ಣೆದುರೇ ಮಲದಬಾವಿಯೊಳಗೆ ಉಸಿರುಸಿಲುಕಿಕೊಂಡು ಒದ್ದಾಡುವುದನ್ನು ಕಣ್ಣಾರೆ ನೋಡಿದ ಉಳಿದ ಮೂವರಲ್ಲಿ ಒಬ್ಬರಾದ ಫಿಟ್ಸ್‌ಬಾಬು, ತಾನು ಆಗ ಹಾಕಿಕೊಂಡಿದ್ದ ಹರಕಲು ಅಂಡರ್‌ವೇರ್‌ನಲ್ಲಿಯೇ ದಿಕ್ಕುತಿಳಿಯದೆ ಕೂಗಿಕೊಂಡು ಹೋದವರು ಇನ್ನೂ ಪತ್ತೆಯಿಲ್ಲ. ಎಲ್ಲಿದ್ದಾರೋ ಏನೋ, ಫಿಟ್ಸ್ ಖಾಲೆಯಿಂದ ಬಳಲುತ್ತಿರುವ ನಡುವಯಸ್ಸಿನ ಬಾಬು ಈ ದೇಶದ ಪ್ರಜಾಪ್ರಭುತ್ವದಂತೆಯೇ ಈಗೆಲ್ಲಿ ಹರಿದ ಅಂಡರ್ ವೇರ್‌ನಲ್ಲಿಯೇ ದಿಕ್ಕು ತಿಳಿಯದೆ ಅಲೆದಾಡುತ್ತಿದ್ದಾರೋ..

-ಟಿ.ಕೆ. ದಯಾನಂದ 

Sunday, October 23, 2011

ಎಬಿಸಿ ವರದಿಯೂ, ಕನ್ನಡ ಪತ್ರಿಕೆಗಳ ಪೈಪೋಟಿಯೂ...


ವಿಜಯ ಸಂಕೇಶ್ವರರ ಬಹುನಿರೀಕ್ಷೆಯ ದಿನಪತ್ರಿಕೆ ವಿಜಯ ವಾಣಿ ಆರಂಭವಾಗುವುದಕ್ಕೆ ಇನ್ನು ಎರಡು ಮೂರು ತಿಂಗಳಷ್ಟೇ ಬಾಕಿ ಉಳಿದಿದೆ. ಬರುವ ಜನವರಿಯಲ್ಲೇ ಪತ್ರಿಕೆ ಆರಂಭವಾಗುವ ಸಾಧ್ಯತೆಗಳು ಇವೆ. ಹಾಗಾಗಿ ಬರುವ ವರ್ಷ ಕನ್ನಡ ಪತ್ರಿಕೆಗಳ ನಡುವೆ ಹೊಸದೊಂದು ಪೈಪೋಟಿಯ ಕಾಲ ಆರಂಭವಾಗಲಿದೆ. ಸಂಕೇಶ್ವರರ ವಿಜಯವಾಣಿ ಹತ್ತು ಆವೃತ್ತಿಗಳೊಂದಿಗೆ ಆರಂಭವಾಗುವ ಮುನ್ಸೂಚನೆ ಇರುವುದರಿಂದ ಅದು ನೇರವಾಗಿ ವಿಜಯ ಕರ್ನಾಟಕ ಮತ್ತು ಪ್ರಜಾವಾಣಿಗೇ ಪೈಪೋಟಿ ನೀಡುವ ಸಾಧ್ಯತೆಗಳಿವೆ. ಇದು ಗಂಭೀರವಾದ ಪರಿಣಾಮ ಬೀರುವುದು ಉದಯವಾಣಿ ಮತ್ತು ಕನ್ನಡಪ್ರಭ ಪತ್ರಿಕೆಗಳಿಗೆ ಎನ್ನುವುದು ನಿಸ್ಸಂದೇಹ.

ಸದ್ಯಕ್ಕೆ ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳ ಒಟ್ಟು ಪ್ರಸಾರ ಸಂಖ್ಯೆ ಎಬಿಸಿ ವರದಿಯ ಪ್ರಕಾರ ಹದಿನೈದರಿಂದ ಹದಿನಾರು ಲಕ್ಷ ಮಾತ್ರ. ಇತರ ಭಾಷೆಗಳಿಗೆ ಹೋಲಿಸಿದರೆ ಇದು ಕಡಿಮೆ. ಕರ್ನಾಟಕದಲ್ಲಿ ಪತ್ರಿಕೆ ಕೊಂಡು ಓದುವವರ ಸಂಖ್ಯೆ ಕಡಿಮೆ. ಇಲ್ಲದಿದ್ದರೆ ಐದು ಕೋಟಿಗೂ ಮೀರಿದ ಜನಸಂಖ್ಯೆಗೆ ಕನಿಷ್ಠ ೪೦ ಲಕ್ಷವಾದರೂ ಪತ್ರಿಕೆಗಳು ಖರ್ಚಾಗಬೇಕಿತ್ತು. ವಿಜಯವಾಣಿ ಹೊಸ ಓದುಗರನ್ನು ಪಡೆದು ಅಖಾಡಕ್ಕೆ ಇಳಿದರೆ ಅದು ಕನ್ನಡ ಪತ್ರಿಕೋದ್ಯಮದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ. ಆದರೆ ಇತರ ಪತ್ರಿಕೆಗಳ ಓದುಗರನ್ನು ಕಿತ್ತುಕೊಂಡು ಬೆಳೆದರೆ? ಇತರ ಪತ್ರಿಕೆಗಳು ಬೆದರಿರುವುದು ಇದೇ ಕಾರಣಕ್ಕೆ.

ಸದ್ಯಕ್ಕೆ ಕನ್ನಡ ಪತ್ರಿಕೋದ್ಯಮದಲ್ಲಿ ನಂ.೧ ಪಟ್ಟಕ್ಕೆ ಸ್ಪರ್ಧೆ ಇರುವುದು ವಿಜಯ ಕರ್ನಾಟಕ ಮತ್ತು ಪ್ರಜಾವಾಣಿ ಪತ್ರಿಕೆಗಳ ನಡುವೆ ಮಾತ್ರ. ಮೊದಲ ಸ್ಥಾನದಲ್ಲಿರುವ ವಿಜಯ ಕರ್ನಾಟಕದ ಪ್ರಸಾರ ಸಂಖ್ಯೆಗಿಂದ ಪ್ರಜಾವಾಣಿಯ ಪ್ರಸಾರ ಸಂಖ್ಯೆ ಎಬಿಸಿ ಜನವರಿ-ಜೂನ್-೨೦೧೧ರ ವರದಿ ಪ್ರಕಾರ ೫೪ಸಾವಿರದಷ್ಟು ಮಾತ್ರ ಕಡಿಮೆ ಇದೆ. ಇದನ್ನು ಮೀರಲು ಸಾಧ್ಯವಾದರೆ ಪ್ರಜಾವಾಣಿ ಮತ್ತೆ ತನ್ನ ನಂ.೧ ಸ್ಥಾನವನ್ನು ಪಡೆಯಲಿದೆ. ಎಬಿಸಿ ವರದಿ ಪ್ರಕಾರ ೨೦೧೧ ಜನವರಿ-ಜೂನ್ ಅವಧಿಯಲ್ಲಿ ಪ್ರಜಾವಾಣಿ ಒಂದು ಸಾವಿರರಷ್ಟು ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳಲಷ್ಟೇ ಸಾಧ್ಯವಾಗಿದೆ. ಇದೇ ಸಮಯದಲ್ಲಿ ವಿಜಯ ಕರ್ನಾಟಕ ತನ್ನ ೫೦೦೦ದಷ್ಟು ಪ್ರಸಾರ ಸಂಖ್ಯೆ ಕಳೆದುಕೊಂಡಿದೆ.

ಮೂರನೇ ಸ್ಥಾನದಲ್ಲಿರುವ ಉದಯವಾಣಿಗೂ ಪ್ರಜಾವಾಣಿಗೂ ನಡುವಿನ ಅಂತರ ಗಣನೀಯ ಪ್ರಮಾಣದ್ದಾಗಿದೆ. ಮೂರನೇ ಸ್ಥಾನದಲ್ಲಿರುವ ಉದಯವಾಣಿಗಿಂತ ಸುಮಾರು ೨,೮೦,೦೦೦ದಷ್ಟು ಪ್ರಜಾವಾಣಿಯ ಪ್ರಸಾರ ಸಂಖ್ಯೆ ಹೆಚ್ಚು. ಉದಯವಾಣಿಯ ಮಟ್ಟಿಗೆ ಖುಷಿಯ ಬೆಳವಣಿಗೆ ಏನೆಂದರೆ ಈ ವರ್ಷದ ಪ್ರಥಮಾರ್ಧದಲ್ಲಿ ಅದು ಶೇ.೮ರಷ್ಟು ಪ್ರಸಾರ ಸಂಖ್ಯೆಯ ಬೆಳವಣಿಗೆಯನ್ನು ಕಂಡಿದೆ. ಇದು ಇತರ ಎಲ್ಲ ಪತ್ರಿಕೆಗಳಿಗಿಂತ ಹೆಚ್ಚು. ಸರಿಸುಮಾರು ೨೧ ಸಾವಿರದಷ್ಟು ಪ್ರಸಾರ ಸಂಖ್ಯೆ ಹೆಚ್ಚಿಸಿಕೊಳ್ಳುವಲ್ಲಿ ಉದಯವಾಣಿ ಸಫಲವಾಗಿದೆ.

ನಾಲ್ಕನೇ ಸ್ಥಾನದಲ್ಲಿರುವ ಕನ್ನಡಪ್ರಭ ಪತ್ರಿಕೆ ಉದಯವಾಣಿಗಿಂತಲೂ ೫೪ ಸಾವಿರದಷ್ಟು ಪ್ರಸಾರ ಸಂಖ್ಯೆಯಲ್ಲಿ ಹಿಂದಿದೆ. ಆದರೂ ಶೇ.೪ರಷ್ಟು ಬೆಳವಣಿಗೆ ಸಾಧಿಸಲು ಅಂದರೆ ಸುಮಾರು ೯,೦೦೦ ಹೆಚ್ಚು ಪ್ರಸಾರ ಸಂಖ್ಯೆಯನ್ನು ಹೊಂದಲು ಕನ್ನಡಪ್ರಭ ಯಶಸ್ವಿಯಾಗಿದೆ. ಇನ್ನು ಕನ್ನಡಪ್ರಭಕ್ಕಿಂತ ೩೫ಸಾವಿರದಷ್ಟು ಪ್ರಸಾರ ಸಂಖ್ಯೆಯಲ್ಲಿ ಹಿಂದಿರುವ ಸಂಯುಕ್ತ ಕರ್ನಾಟಕ ಐದನೇ ಸ್ಥಾನದಲ್ಲಿದೆ.

ಎಬಿಸಿ ಪತ್ರಿಕೆಗಳ ಪ್ರಸಾರ ಸಂಖ್ಯೆಯನ್ನು ನಿಖರವಾಗಿ ಹೇಳುತ್ತದೆ. ಅದು ಪತ್ರಿಕೆಗಳ ಪ್ರಿಂಟಿಂಗ್ ಸೆಕ್ಷನ್‌ಗಳಿಗೇ ಭೇಟಿ ನೀಡಿ ಮಾಹಿತಿಗಳನ್ನು ಸಂಗ್ರಹಿಸುತ್ತದೆ. ಹೀಗಾಗಿ ಎಬಿಸಿ ನೀಡುವ ಅಂಕಿಅಂಶಗಳು ಅತ್ಯಂತ ವಿಶ್ವಾಸಾರ್ಹವಾಗಿರುತ್ತದೆ.

ಕನ್ನಡ ಪತ್ರಿಕೆಗಳ ೨೦೧೧ರ ಪ್ರಥಮಾರ್ಧದಲ್ಲಿ ಹೇಳಿಕೊಳ್ಳುವಂಥ ಬದಲಾವಣೆಗಳೇನೂ ಆಗಿಲ್ಲ. ಬಹುಶಃ ದ್ವಿತೀಯಾರ್ಧದಲ್ಲೂ ಅಂಥ ಬದಲಾವಣೆಗಳು ಕಾಣಿಸುವ ಸಾಧ್ಯತೆ ಕಡಿಮೆ. ಆದರೆ ವಿಜಯವಾಣಿ ಬಂದ ನಂತರ ಒಂದಷ್ಟು ಬದಲಾವಣೆ ಆಗೇತೀರುತ್ತದೆ ಎಂಬ ಮಾತು ಮಾಧ್ಯಮ ಪಂಡಿತರಲ್ಲಿದೆ.

ತಿಮ್ಮಪ್ಪ ಭಟ್ಟರು ವಿಜಯವಾಣಿ ಆರಂಭಕ್ಕೆ ಮುನ್ನ ಬೇಕಿರುವ ಎಲ್ಲ ಪೂರ್ವಸಿದ್ಧತೆಗಳನ್ನೂ ಪೂರ್ಣಗೊಳಿಸುತ್ತಿದ್ದಾರೆ. ಹಲವು ಪತ್ರಿಕೆಗಳಿಗಿಂದ ಗುಳೆ ಹೋಗುವ ಕಾರ್ಯ ನಿಧಾನವಾಗಿ ಆರಂಭವಾಗಿದೆ. ಉದಯವಾಣಿಯಿಂದ ಕೆಲವರು ಈಗಾಗಲೇ ಒಂದು ಕಾಲು ಹೊರಗೆ ಇಟ್ಟಿದ್ದಾರೆ. ಕನ್ನಡ ಪತ್ರಿಕಾರಂಗದಲ್ಲಿ ಒಳ್ಳೆ ಹೆಸರು ಮಾಡಿರುವ, ಅಪಾರ ಶ್ರದ್ಧೆಯ ಹಿರಿಯ ವರದಿಗಾರ ರುದ್ರಣ್ಣ ಹರ್ತಿಕೋಟೆ ವಿಜಯವಾಣಿಯ ಪ್ರಮುಖ ಹುದ್ದೆಗೆ ತೆರಳಲಿದ್ದಾರೆ. (ಮುಖ್ಯ ವರದಿಗಾರ?) ಇನ್ನೂ ಯಾರ‍್ಯಾರು ಹೋಗುತ್ತಾರೋ ಕಾದು ನೋಡಬೇಕು.

ಮುಂದಿನ ವರ್ಷ ಕನ್ನಡ ಪತ್ರಿಕೆಗಳ ನಡುವೆ ಪೈಪೋಟಿಯಂತೂ ನಿಜ. ವಿಜಯ ಕರ್ನಾಟಕ ತನ್ನ ನಂ.೧ ಸ್ಥಾನ ಕಳೆದುಕೊಳ್ಳುತ್ತಾ? ಪ್ರಜಾವಾಣಿ ನಂ.೧ ಪಟ್ಟಕ್ಕೆ ಏರುತ್ತಾ? ವಿಜಯ ವಾಣಿ ಎಷ್ಟು ಎತ್ತರ ಏರಲು ಸಾಧ್ಯ?

ಅಷ್ಟಕ್ಕೂ ವಿಜಯವಾಣಿ ಇತರ ಪತ್ರಿಕೆಗಳ ಓದುಗರನ್ನು ಸೆಳೆದುಕೊಂಡರೆ, ಯಾವ ಪತ್ರಿಕೆ ಹೆಚ್ಚು ನಷ್ಟ ಅನುಭವಿಸಬೇಕಾಗುತ್ತದೆ? ಸಂಕೇಶ್ವರರೇ ಸ್ಥಾಪಿಸಿದ ವಿಜಯ ಕರ್ನಾಟಕವೇ? ಒಂದು ಕಾಲದಲ್ಲಿ ಸಂಕೇಶ್ವರರ ನೆಚ್ಚಿನ ಸಂಪಾದಕರಾಗಿದ್ದ ವಿಶ್ವೇಶ್ವರ ಭಟ್ಟರು ನೇತೃತ್ವ ವಹಿಸಿರುವ ಕನ್ನಡಪ್ರಭವೇ? ಮಣಿಪಾಲದ ನೆರಳಿನಿಂದ ಹೊರಬಂದು ಬೆಂಗಳೂರಿನಲ್ಲಿ ಪ್ರಬಲವಾಗಿ ಸ್ಥಾಪಿಸಿಕೊಳ್ಳುವಲ್ಲಿ ಯಶಸ್ಸನ್ನು ಸಾಧಿಸುತ್ತಿರುವ ಉದಯವಾಣಿಯೇ? ಅಥವಾ ತನ್ನ ಸಾಂಪ್ರದಾಯಿಕ ಓದುಗರನ್ನು ತೀವ್ರವಾಗಿ ನೆಚ್ಚಿಕೊಂಡಿರುವ ಪ್ರಜಾವಾಣಿಯೇ?

ಕಾದು ನೋಡೋಣ.

Wednesday, October 19, 2011

ಶಾಲಿವಾಹನನೂ, ಬಬ್ರುವಾಹನನೂ ಒಂದಾದ ಪುರಾಣ ಪುಣ್ಯ ಕಥೆ...


ಬೇಜಾರು ಕಣ್ರೀ. ಮೀಡಿಯಾ ಬಗ್ಗೆ, ರಾಜಕಾರಣ ಬಗ್ಗೆ ಬರೆದೂ ಬರೆದೂ ಬೇಜಾರು. ಅದಕ್ಕೆ ಸುಮ್ಮನೆ ಒಂದು ಮಕ್ಕಳ ಕಥೆ ಬರೆದಿದ್ದೇವೆ. ಓದಿ ಖುಷಿಯಾದರೆ ಗುಡ್ ಅನ್ನೋ ಬಟನ್ ಒತ್ತಿ ಹೋಗಿ. ಚೆನ್ನಾಗಿಲ್ಲ ಅಂದ್ರೆ ಬ್ಯಾಡ್ ಅನ್ನಿ. ಬೇಜಾರು ಮಾಡಿಕೊಳ್ಳಲ್ಲ...

ಒಂದೂರಿನಲ್ಲಿ ಒಬ್ಬ ಪಾಳೇಗಾರ ಇದ್ದ. ಅವನ ಹೆಸರು ಶಾಲಿವಾಹನ ಅಂತ ಇಟ್ಟುಕೊಳ್ಳಿ. ಪಾಳೇಗಾರನಿಗೆ ಪಕ್ಕದ ಊರಿನ ಮತ್ತೊಬ್ಬ ಪಾಳೇಗಾರ ಕ್ಲೋಸ್ ಫ್ರೆಂಡು. ಅವನ ಹೆಸರು ಬಬ್ರುವಾಹನ.  ಇಬ್ಬರೂ ಆಗಾಗ ಭೇಟಿ ಮಾಡ್ಕೊಂಡು ಹರಟೆ ಹೊಡಿಯೋರು, ನಾಟಕ ನೋಡೋರು, ಒಟ್ಟಿಗೆ ಕೂತ್ಗಂಡು ಊಟ ಮಾಡೋರು. ಇಬ್ಬರೂ ಸೇರ‍್ಕಂಡು ಖಂಡಾಪಟ್ಟೆ ಆಸ್ತಿನೂ ಮಾಡ್ತಾ ಇದ್ರು.

ಶಾಲಿವಾಹನನಿಗೆ ಒಬ್ಬ ಸೇನಾಧಿಪತಿ ಇದ್ದ. ಯಾವಾಗಲೂ ಸೊಂಟದಲ್ಲಿ ಬಾಕು ಇಟ್ಟುಕೊಂಡೇ ತಿರುಗಾಡುತ್ತಿದ್ದ. ಸಿಕ್ಕಸಿಕ್ಕವರನ್ನೆಲ್ಲ ತಿವಿಯೋದೇ ಅವನ ಕೆಲಸ. ಅವನ ಹೆಸರು ಗರುಡವಾಹನ ಅಂತ. ಏನಾಯ್ತಪ್ಪ ಅಂದ್ರೆ ಈ ಗರುಡವಾಹನನಿಗೂ ಬಬ್ರುವಾಹನನಿಗೂ ಆಗಿ ಬರಲೇ ಇಲ್ಲ. ಇಬ್ಬರೂ ಪಟಾಪಟಾಂತ ಪರಸ್ಪರ ಕಪಾಳಕ್ಕೆ ಹೊಡೆದುಕೊಳ್ತಾ ಇದ್ರು. ಜಗಳ ಮಾಡಕ್ಕೆ ಇಂಥದ್ದು ಅಂತ ಒಂದು ಕಾರಣನೂ ಬೇಕಾಗಿರಲಿಲ್ಲ. ಸುಮ್ ಸುಮ್‌ನೆ ಜಗಳ ಆಡೋರು. ಹಿಂಗೆಲ್ಲಾ ಆಗ್ತಾ ಇರುವಾಗ ಶಾಲಿವಾಹನ ಮಾತ್ರ ಸುಮ್ನೆ ಮೀಸೆ ಮರೆಯಲ್ಲೇ ನಗ್ತಾ ಇರ‍್ತಿದ್ದ. ಜಗಳ ಬಿಡಿಸೋಕ್ಕೂ ಹೋಗ್ತಾ ಇರ‍್ಲಿಲ್ಲ.

ಒಂದು ದಿವ್ಸ ಏನಾಯ್ತು ಅಂದ್ರೆ, ಶಾಲಿವಾಹನ ಏನೇನೋ ಸಮಸ್ಯೆ ಮಾಡಿಕೊಂಡು ಅವನ ಪಾಳೇಪಟ್ಟಿನ ಜನರೆಲ್ಲ ತಿರುಗಿಬಿದ್ರು. ಶಾಲಿವಾಹನ ಊರು ಬಿಡಬೇಕಾಗಿ ಬಂತು. ಜತೆಗೆ ಸೇನಾಧಿಪತಿ ಗರುಡವಾಹನನೂ ಅವನ ಸಕಲ ಕಾಲಾಳುಗಳೂ ಊರು ಬಿಟ್ಟರು. ಸಿಕ್ಕಿದ್ದೇ ಛಾನ್ಸು ಅಂತ ಬಬ್ರುವಾಹನ ಒಂದೇ ಸಮನೆ ದಾಳಿ ಶುರು ಮಾಡಿದ. ಸ್ನೇಹಿತ ಅಂತಾನೂ ಮುಖಮೂತಿ ನೋಡದೆ ಶಾಲಿವಾಹನನಿಗೂ, ಗರುಡವಾಹನನಿಗೂ ಚಚ್ಚತೊಡಗಿದೆ. ಪಾಪ, ಯುದ್ಧ ಮಾಡಣ ಅಂದ್ರೆ ಪಾಳೇಪಟ್ಟೆ ಇಲ್ಲ ಶಾಲಿವಾಹನನಿಗೆ.

ಆಮೇಲೆ ಶಾಲಿವಾಹನ ಏನೇನೋ ಮಾಡಿ, ಏನೋ ಒಂದು ಪಾಳೇಪಟ್ಟು ರೆಡಿ ಮಾಡ್ಕಂಡ. ಹಿಂದಿನ ಪಾಳೇಪಟ್ಟಿನಷ್ಟು ದೊಡ್ಡದಲ್ಲದಿದ್ದರೂ ಏನೋ ಒಂದು ಲೆವೆಲ್ಲಿಗೆ ಪರವಾಗಿಲ್ಲ ಅನ್ನಿಸುವಂಥ ಪಾಳೇಪಟ್ಟು ಅದು. ಒಂದು ಸಲ ಕೈಗೆ ಅಧಿಕಾರ ಸಿಕ್ಕಿದ್ದೇ ತಡ ಶಾಲಿವಾಹನನೂ, ಗರುಡವಾಹನನೂ ಒಟ್ಟಾಗಿ ಸೇರಿ ಬಬ್ರುವಾಹನನ ಮೇಲೆ ಯುದ್ಧ ಅನೌನ್ಸ್ ಮಾಡಿದ್ರು. ಭೀಕರ ಕಾಳಗ ಶುರುವಾಗಿ ಹೋಯ್ತು. ಯಾವ ಪರಿ ಜಗಳ ಆಡುದ್ರು ಅಂದ್ರೆ ಜನ ಎಲ್ಲ ಕ್ಯಾಕರಿಸಿ ಉಗಿದು, ಆಡ್ಕೊಂಡು ನಗೋ ಹಂಗೆ ಆಯ್ತು.

ಹಿಂಗೇ ಕಾಲ ಹೋಗ್ತಾ ಇರಬೇಕಾದ್ರೆ, ಬಬ್ರುವಾಹನ ಪಟ್ಟಕ್ಕೆ ಬಂದ ೧೬ನೇ ವರ್ಷದ ಆಚರಣೆ ಬಂತು. ಇಂಥ ಸಂದರ್ಭದಲ್ಲಿ ಬಬ್ರುವಾಹನನಿಗೆ ತನ್ನ ಗೆಳೆಯ ಶಾಲಿವಾಹನನ ಮೇಲೆ ಸಿಕ್ಕಾಪಟ್ಟೆ ಲವ್ ಬಂದು ಬಿಟ್ಟಿತು. ಸೀದಾ ಬಂದು ಶಾಲಿವಾಹನನನ್ನು ತಬ್ಬಿಕೊಂಡು ನೋಡು ಗೆಳೆಯಾ, ನಾನು ಈ ಲೆವೆಲ್ಲಿಗೆ ನನ್ನ ಪಾಳೇಪಟ್ಟು ಬೆಳೆಸೋದಿಕ್ಕೆ ನೀನೂ ಒಂದು ಕಾರಣ. ತುಂಬಾ ಥ್ಯಾಂಕ್ಸು ಕಣೋ ಅಂದ. ಅದೆಲ್ಲ ಸರಿ, ನೀನು ಅನ್ಯಾಯವಾಗಿ ನನ್ನ ಮೇಲೆ ಯುದ್ಧ ಮಾಡಿ ಮಾನಸಿಕವಾಗಿ ಘಾಸಿಗೊಳಿಸಿಬಿಟ್ಟಲ್ಲ ಯಾಕೆ ಅಂತ ಶಾಲಿವಾಹನ ಕೇಳಿದ. ಏನ್ ಬಿಡೋ ಮರಾಯ. ಒಂದು ವರ್ಷದ ಜಗಳ ಇದು, ಈ ಪುಟಗೋಸಿ ಜಗಳಕ್ಕೆ ನಮ್ಮ ೧೬ ವರ್ಷದ ಸ್ನೇಹ ಬಲಿಯಾಗಬೇಕಾ ಅಂತೇನೋ ಎಮೋಷನಲ್ ಆಗಿ ಮಾತನಾಡತೊಡಗಿದ ಬಬ್ರುವಾಹನ.

ಏನಪ್ಪಾ ಅಂದ್ರೆ, ಈ ಶಾಲಿವಾಹನನೂ, ಬಬ್ರುವಾಹನನೂ ಒಟ್ಟಿಗೆ ಗೆಳೆಯರಾಗಿದ್ದಾಗ ಯಾರ‍್ಯಾರದೋ ಸಹವಾಸ ಮಾಡಿ ಅನೈತಿಕ ಮಾರ್ಗದಿಂದ ಪಾಳೇಪಟ್ಟು ಬೆಳೆಸಿಕೊಂಡಿದ್ದರು. ಅದೆಲ್ಲವೂ ಮಹಾರಾಜರಿಗೆ ಗೊತ್ತಾಗಿ ಹೋಗಿತ್ತು. ಇಬ್ಬರ ಮೇಲೂ ಮಹಾರಾಜರು ಕಣ್ಣಿಟ್ಟುಬಿಟ್ಟಿದ್ದರು. ಮಹಾರಾಜರೇನೂ ಏಟು ಕೊಟ್ಟರೆ ಇಬ್ಬರಿಗೂ ಕೊಡುತ್ತಾರೆ. ಹೀಗಾಗಿ ಇಬ್ಬರಿಗೂ ಭಯ ಶುರುವಾಗಿ ಹೋಗಿತ್ತು.

ಹೀಗಾಗಿ ಬಬ್ರುವಾಹನ ಸ್ನೇಹದ ಪ್ರಸ್ತಾಪ ತಂದ ಕೂಡಲೇ ಶಾಲಿವಾಹನನೂ ಒಪ್ಪಿಕೊಂಡು, ಹಾಳಾಗ್ ಹೋಗ್ಲಿ ಬಿಡು. ನನ್ ತಂಟೆಗೆ ನೀನು ಬರಬೇಡ, ನಿನ್ ತಂಟೆಗೆ ನಾನು ಬರಲ್ಲ. ನಮ್ಮ ಗರುಡವಾಹನನ ಕಡೆ ಕಣ್ಣೆತ್ತಿನೂ ನೋಡಬೇಡ. ಒಟ್ಟಿಗೆ ಯಾವಾಗ್ಲಾದ್ರೂ ಸೇರಣ, ದ್ರಾಕ್ಷಾರಸ ಕುಡಿಯೋಣ ಅಂದು ಕೈಕುಲುಕೇಬಿಟ್ಟ.

ಆಮೇಲೆ ಅವರೆಲ್ಲ ಒಟ್ಟಿಗೆ ಸುಖವಾಗಿ ಬಾಳಿದರು.

(ಈ ಕಥೆ ಸಂಪೂರ್ಣ ಕಾಲ್ಪನಿಕ. ಕಥೆಯಲ್ಲಿನ ಪಾತ್ರಗಳು ನಿಜಜೀವನದ ಪಾತ್ರಗಳಿಗೆ ಹೋಲುತ್ತಿದ್ದರೆ ಅದೊಂದು ಪವಾಡ)

Tuesday, October 11, 2011

ಐಆರ್‌ಎಸ್ ಸರ್ವೆ ಕರ್ನಾಟಕ: ವಿಜಯ ಕರ್ನಾಟಕ ಈಗಲೂ ನಂ.೧


ಐಆರ್‌ಎಸ್ ಸರ್ವೆ ಬೆಂಗಳೂರು ಫಲಿತಾಂಶವನ್ನು ಕಳೆದ ಪೋಸ್ಟ್‌ನಲ್ಲಿ ಗಮನಿಸಿದ್ದಿರಿ. ಒಟ್ಟಾರೆ ಕರ್ನಾಟಕದ ಫಲಿತಾಂಶದ ವಿವರಗಳು ಇಲ್ಲಿವೆ. ಯಥಾಪ್ರಕಾರ ವಿಜಯ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ವಿಜಯ ಕರ್ನಾಟಕದ ಅಂದಾಜು ಓದುಗರ ಸಂಖ್ಯೆ ೩೪.೩೮ ಲಕ್ಷ. ಕಳೆದ ತ್ರೈಮಾಸಿಕದಲ್ಲಿ ಈ ಸಂಖ್ಯೆ ೩೪.೭ರಷ್ಟಿತ್ತು. ಒಟ್ಟಾರೆಯಾಗಿ ಕಳೆದ ವರ್ಷವೊಂದರಲ್ಲಿ ವಿಜಯ ಕರ್ನಾಟಕ ಓದುಗರ ಸಂಖ್ಯೆ ಶೇ. ೫.೨ರಷ್ಟು ಏರಿದೆ.

ಎರಡನೇ ಸ್ಥಾನದಲ್ಲಿ ಇರುವ ಪ್ರಜಾವಾಣಿ ಕರ್ನಾಟಕದಾದ್ಯಂತ ಪ್ರಸಾರದಲ್ಲಿ ಗಣನೀಯ ಏರಿಕೆಯನ್ನು ದಾಖಲಿಸಿದೆ. ಆದರೆ ಕಳೆದ ತ್ರೈಮಾಸಿಕದಲ್ಲಿ ಶೇ.೧ರಷ್ಟು ಓದುಗರನ್ನು ಕಳೆದುಕೊಂಡಿದೆ ಕಳೆದ ಪ್ರಜಾವಾಣಿ ಅಂದಾಜು ಓದುಗರ ಸಂಖ್ಯೆ ೩೩.೬೯ ಲಕ್ಷ. ಹಿಂದಿನ ತ್ರೈಮಾಸಿಕದಲ್ಲಿ ಇದು ೩೪.೦೩ ಲಕ್ಷವಾಗಿತ್ತು.

ಮೂರನೇ ಸ್ಥಾನದಲ್ಲಿರುವ ಕನ್ನಡಪ್ರಭದ ಕಳೆದ ತ್ರೈಮಾಸಿಕದಲ್ಲಿ ಅಲ್ಪ ಏರಿಕೆಯನ್ನು ಕಂಡಿದೆ. ಓದುಗರ ಅಂದಾಜು ಸಂಖ್ಯೆ ಈಗ ೧೩.೫೪ ಲಕ್ಷ. ಹಿಂದಿನ ತ್ರೈಮಾಸಿಕದಲ್ಲಿ ಇದು ೧೩.೩೪ ಲಕ್ಷವಾಗಿತ್ತು. ಕಳೆದ ವರ್ಷದಲ್ಲಿ ಕನ್ನಡಪ್ರಭದ ಓದುಗರ ಸಂಖ್ಯೆ ಹೆಚ್ಚಳವಾಗಿದ್ದು, ೮.೬೨ ಲಕ್ಷ ಓದುಗರಿದ್ದ ಪತ್ರಿಕೆ ಸಾಕಷ್ಟು ಏರಿಕೆ ಕಂಡಿದೆ.

ನಾಲ್ಕನೇ ಸ್ಥಾನದಲ್ಲಿರುವ ಸಂಯುಕ್ತ ಕರ್ನಾಟಕದ ಓದುಗರ ಸಂಖ್ಯೆ ಈಗ ೧೧.೭೬ ಲಕ್ಷ. ಕಳೆದ ತ್ರೈಮಾಸಿಕದಲ್ಲಿ ಈ ಸಂಖ್ಯೆ ೧೩.೦೬ ಲಕ್ಷವಾಗಿತ್ತು. ಅಂದರೆ ಪತ್ರಿಕೆ ಗಣನೀಯ ಸಂಖ್ಯೆಯಲ್ಲಿ ತನ್ನ ಓದುಗರನ್ನು ಕಳೆದುಕೊಂಡಿದೆ. ಆದರೂ ಕಳೆದ ವರ್ಷ ಶೇ. ೧೯.೫ರಷ್ಟು ಬೆಳವಣಿಗೆ ಸಾಧಿಸಲು ಪತ್ರಿಕೆ ಯಶಸ್ವಿಯಾಗಿದೆ.

ಉದಯವಾಣಿ ಪತ್ರಿಕೆ ಕಳೆದ ತ್ರೈಮಾಸಿಕದಲ್ಲಿ ಕಳೆದುಕೊಂಡದ್ದನ್ನು ಈ ತ್ರೈಮಾಸಿಕದಲ್ಲಿ ಗಳಿಸಿಕೊಳ್ಳಲು ಯಶಸ್ವಿಯಾಗಿದೆ. ಶೇ.೧೦.೩ರಷ್ಟು ಓದುಗರ ಸಂಖ್ಯೆ ಹೆಚ್ಚಿದ ಪರಿಣಾಮ ಈಗ ಅದರ ಪ್ರಸಾರ ಸಂಖ್ಯೆ ೯.೮೫ ಲಕ್ಷವಾಗಿದೆ. ಒಟ್ಟಾರೆಯಾಗಿ ಕಳೆದ ವರ್ಷ ಶೇ. ೨೪ರಷ್ಟು ಬೆಳವಣಿಗೆ ಸಾಧಿಸಲು ಪತ್ರಿಕೆ ಯಶಸ್ವಿಯಾಗಿದೆ.

ಟೈಮ್ಸ್ ಆಫ್ ಇಂಡಿಯಾ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳು ನಂತರದ ಸ್ಥಾನಗಳಲ್ಲಿದ್ದು, ಸಂಜೆವಾಣಿ, ಬೆಂಗಳೂರು ಮಿರರ್ ಮತ್ತು ತರುಣ್ ಭಾರತ್ ಪತ್ರಿಕೆಗಳು ಕಡೆಯ ಮೂರು ಸ್ಥಾನಗಳಲ್ಲಿವೆ.

ಐಆರ್‌ಎಸ್ ಸರ್ವೆ ಬೆಂಗಳೂರು: ಕನ್ನಡ ಪತ್ರಿಕೆಗಳಲ್ಲಿ ತಳಮಳ ಶುರು....

೨೦೧೧ರ ಸಾಲಿನ ಎರಡನೇ ತ್ರೈಮಾಸಿಕದ ಐಆರ್‌ಎಸ್ ಸಮೀಕ್ಷೆಯ ಫಲಿತಾಂಶಗಳು ಕನ್ನಡ ಪತ್ರಿಕೆಗಳಿಗೆ ತಳಮಳ ತರುವ ಅಂಶಗಳನ್ನು ಒಳಗೊಂಡಿದೆ. ಬೆಂಗಳೂರು ನಗರದಮಟ್ಟಿನ ಫಲಿತಾಂಶಗಳು ಹೀಗಿವೆ. ವಿಜಯ ಕರ್ನಾಟಕ ಎಂದಿನಂತೆ ತನ್ನ ನಂ.೧ ಸ್ಥಾನ ಉಳಿಸಿಕೊಂಡಿದೆ. ಆದರೆ ಈ ತ್ರೈಮಾಸಿಕದಲ್ಲಿ ಯಾವುದೇ ಪ್ರಗತಿ ಸಾಧಿಸಲು ಪತ್ರಿಕೆಗೆ ಸಾಧ್ಯವಾಗಿಲ್ಲ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ಎರಡು ಸಾವಿರ ಓದುಗರನ್ನು ವಿಜಯ ಕರ್ನಾಟಕ ಕಳೆದುಕೊಂಡಿದೆ. ಕಳೆದ ತ್ರೈಮಾಸಿಕದಲ್ಲಿ ವಿಜಯ ಕರ್ನಾಟಕ ಓದುಗರ ಸಂಖ್ಯೆ ೭.೧೯ ಲಕ್ಷವಾಗಿದ್ದರೆ ಈ ತ್ರೈಮಾಸಿಕದಲ್ಲಿ ಅಲ್ಪ ಹಿನ್ನಡೆ ಅನುಭವಿಸಿ ೭.೧೭ ಲಕ್ಷಕ್ಕೆ ಇಳಿದಿದೆ. ಆದರೆ ವಿಜಯ ಕರ್ನಾಟಕ ಕಳೆದ ಒಂದು ವರ್ಷದಲ್ಲಿ ಒಟ್ಟಾರೆ ಶೇ.೬.೯ರಷ್ಟು ಬೆಳವಣಿಗೆ ಕಂಡಿರುವುದು ಆ ಪತ್ರಿಕೆಯ ವ್ಯವಸ್ಥಾಪಕ ಮಂಡಳಿಗೆ ಆಶಾದಾಯಕವಾಗಿ ಕಾಣಬಹುದು. ಕಳೆದ ವರ್ಷದ ತ್ರೈಮಾಸಿಕ ವರದಿಯಲ್ಲಿ ವಿಜಯ ಕರ್ನಾಟಕದ ಓದುಗರ ಸಂಖ್ಯೆ ೬.೭೧ ಲಕ್ಷ ಮಾತ್ರ ಇತ್ತು. ಅದೀಗ ೭.೧೭ ಲಕ್ಷಕ್ಕೆ ತಲುಪಿದೆ.

ಎರಡನೇ ಸ್ಥಾನವನ್ನು ಪ್ರಜಾವಾಣಿ ಕಾಪಾಡಿಕೊಂಡಿದೆ. ಈ ತ್ರೈಮಾಸಿಕ ಪ್ರಜಾವಾಣಿಗೆ ಅಷ್ಟೇನು ಲಾಭದಾಯಕವಾಗಿಲ್ಲ. ಅದರ ಅಂದಾಜು ಓದುಗರ ಸಂಖ್ಯೆ ೧೧,೦೦೦ದಷ್ಟು ಕುಸಿದಿದೆ. ಈ ತ್ರೈಮಾಸಿಕ ವರದಿಯ ಪ್ರಕಾರ ಪ್ರಜಾವಾಣಿ ಓದುಗರ ಸಂಖ್ಯೆ ಈಗ ೬.೫೯ ಲಕ್ಷ. ಆದರೆ ಒಟ್ಟಾರೆ ವರ್ಷವನ್ನು ಗಣನೆಗೆ ತೆಗೆದುಕೊಂಡರೆ ಪ್ರಜಾವಾಣಿ ಶೇ.೮ರಷ್ಟು ಪ್ರಗತಿ ಸಾಧಿಸಿದೆ. ಕಳೆದ ವರ್ಷ ಈ ಹೊತ್ತಿಗೆ ಪ್ರಜಾವಾಣಿ ಓದುಗರ ಸಂಖ್ಯೆ ೬.೧ ಲಕ್ಷವಿತ್ತು, ಅದೀಗ ೬.೫೯ ಲಕ್ಷಕ್ಕೆ ಏರಿದೆ.

ಮೂರನೇ ಸ್ಥಾನದಲ್ಲಿರುವ ಟೈಮ್ಸ್ ಆಫ್ ಇಂಡಿಯಾ ಈ ತ್ರೈಮಾಸಿಕದಲ್ಲಿ ಶೇ.೬.೫ರಷ್ಟು ಓದುಗರನ್ನು ಹೆಚ್ಚುವರಿಯಾಗಿ ಪಡೆದಿದೆ. ಕಳೆದ ವರ್ಷ ಟಿಓಐಗೆ ಹರ್ಷವನ್ನೇ ತಂದಿದೆ. ಶೇ.೩೩.೧ರಷ್ಟು ಬೆಳವಣಿಗೆ ಸಾಧಿಸಿರುವುದು ವಿಶೇಷ. ಈಗ ಟಿಓಐ ಓದುಗರ ಸಂಖ್ಯೆ  ೪.೪೨ ಲಕ್ಷ. ಕಳೆದ ವರ್ಷ ಈ ಹೊತ್ತಿಗೆ ಇದು ಕೇವಲ ೩.೩ ಲಕ್ಷವಾಗಿತ್ತು.

ನಾಲ್ಕನೇ ಸ್ಥಾನದಲ್ಲಿರುವ ಡೆಕ್ಕನ್ ಹೆರಾಲ್ಡ್ ತನ್ನ ಓದುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಮಾತ್ರ ಯಶಸ್ವಿಯಾಗಿದೆ. ಈ ತ್ರೈಮಾಸಿಕ ವರದಿ ಪ್ರಕಾರ ಡೆಕ್ಕನ್ ಹೆರಾಲ್ಡ್ ಓದುಗರ ಸಂಖ್ಯೆ ೨.೦೧ ಲಕ್ಷ. ಡೆಕ್ಕನ್ ಹೆರಾಲ್ಡ್ ಸಹ ಕಳೆ ಒಂದು ವರ್ಷದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು ಶೇ. ೨೨.೬ರಷ್ಟು ಹೆಚ್ಚುವರಿ ಓದುಗರನ್ನು ಗಳಿಸಿಕೊಂಡಿದೆ.

ಐದನೇ ಸ್ಥಾನದಲ್ಲಿರುವ ಬೆಂಗಳೂರು ಮಿರರ್ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ೨೦೧೦ರ ಎರಡನೇ ತ್ರೈಮಾಸಿಕ ವರದಿಯ ಪ್ರಕಾರ ಕೇವಲ ೬೨,೦೦೦ ಓದುಗರನ್ನು ಪಡೆದಿದ್ದ ಮಿರರ್ ಈಗ ೧.೫೬ ಲಕ್ಷ ಓದುಗರನ್ನು ಗಳಿಸಿಕೊಂಡಿದೆ. ಅಂದರೆ ಕಳೆದ ವರ್ಷವೊಂದರಲ್ಲಿ ಮಿರರ್ ಶೇ.೧೫೦ರಷ್ಟು ಬೆಳವಣಿಗೆ ಕಂಡಿದೆ.

ಆರನೇ ಸ್ಥಾನದಲ್ಲಿರುವ ಕನ್ನಡಪ್ರಭಕ್ಕೆ ಬೆಂಗಳೂರು ಪ್ರಸಾರದ ನಿಟ್ಟಿನಲ್ಲಿ ಹೇಳುವುದಾದರೆ ಕಳೆದ ವರ್ಷ ಅತ್ಯಂತ ಕೆಟ್ಟ ವರ್ಷ. ಈ ತ್ರೈಮಾಸಿಕವೂ ಅದರ ಪಾಲಿಗೆ ಯಾವ ಖುಷಿಯನ್ನೂ ತಂದಿಲ್ಲ. ಈ ಬಾರಿ ಸುಮಾರು ೧೪,೦೦೦ ಓದುಗರನ್ನು ಅದು ಕಳೆದುಕೊಂಡಿದೆ. ಒಟ್ಟಾರೆಯಾಗಿ ಈ ವರ್ಷ ಕನ್ನಡಪ್ರಭ ೩೨,೦೦೦ ಓದುಗರನ್ನು ಕಳೆದುಕೊಂಡಿದೆ. ೨೦೧೧ರ ಎರಡನೇ ತ್ರೈಮಾಸಿಕ ವರದಿ ಪ್ರಕಾರ ಕನ್ನಡಪ್ರಭ ಓದುಗರ ಸಂಖ್ಯೆ ಕೇವಲ ೧.೨೫ ಲಕ್ಷಕ್ಕೆ ಕುಸಿದಿದೆ. ಕಳೆದ ವರ್ಷ ಇದೇ ಹೊತ್ತಿಗೆ ಈ ಸಂಖ್ಯೆ ೧.೫೭ ಲಕ್ಷವಾಗಿತ್ತು.

ಉದಯವಾಣಿ ಪತ್ರಿಕೆ ಮಾತ್ರ ಕಳೆದ ತ್ರೈಮಾಸಿಕದಲ್ಲಿ ಅಲ್ಪಪ್ರಮಾಣದಲ್ಲಿ ಹೆಚ್ಚುವರಿ ಓದುಗರನ್ನು ಪಡೆಯಲು ಯಶಸ್ವಿಯಾಗಿ ಏಳನೇ ಸ್ಥಾನದಲ್ಲಿದೆ. ಕಳೆದ ತ್ರೈಮಾಸಿಕದಲ್ಲಿ ೧.೧೨ ಲಕ್ಷದಷ್ಟು ಓದುಗರ ಸಂಖ್ಯೆ ಹೊಂದಿದ್ದ ಉದಯವಾಣಿ ಈಗ ೧.೧೮ ಲಕ್ಷ ಓದುಗರನ್ನು ಪಡೆದಿದೆ. ಉದಯವಾಣಿ ಕಳೆದ ವರ್ಷ ಪಡೆದಿದ್ದ ಓದುಗರ ಸಂಖ್ಯೆ ೯೭,೦೦೦ ಮಾತ್ರ. ಅದು ೧.೧೮ ಲಕ್ಷಕ್ಕೆ ಏರಿರುವುದು ಆಶಾದಾಯಕ ಬೆಳವಣಿಗೆ.

ಇನ್ನು ಎಂಟು, ಒಂಭತ್ತು ಮತ್ತು ಹತ್ತನೇ ಸ್ಥಾನಗಳನ್ನು ಡೈಲಿ ತಂತಿ, ಡೆಕ್ಕನ್ ಕ್ರಾನಿಕಲ್ ಮತ್ತು ಡಿಎನ್ ಎ ಪತ್ರಿಕೆಗಳು ಕ್ರಮವಾಗಿ ಪಡೆದಿವೆ.

Saturday, October 8, 2011

ಅಮೆರಿಕಾದಲ್ಲಿ ಸಿಡಿದ ಬಂಡಾಯ- ಒಂದು ಆಶಾಭಾವನೆ!

ಚಳವಳಿಗಳಿಲ್ಲದ, ಪ್ರತಿಭಟನೆಯಿಲ್ಲದ, ಪರ್ಯಾಯ ಚಿಂತನೆಗಳಿಲ್ಲದ ಸಮಾಜ-ದೇಶ ಯಾವತ್ತೂ ಅಪಾಯಕಾರಿಯೇ. ಇಂಥ ಸಮಾಜ-ದೇಶಗಳು ಏಕಕಾಲಕ್ಕೆ ದುರಹಂಕಾರಿಯೂ, ನೈಜ ಪ್ರಜಾಪ್ರಭುತ್ವ ವಿರೋಧಿಯೂ, ಮನುಷ್ಯತ್ವ ವಿರೋಧಿಯೂ ಆಗಿರುತ್ತದೆ. ಅಮೆರಿಕದಲ್ಲಿ ಆರಂಭವಾಗಿರುವ ಜನಾಂದೋಲನ ಈ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವದ್ದು. ಈ ಬಗ್ಗೆ ಬೆಳಕು ಚೆಲ್ಲುವ ಲೇಖನವನ್ನು ಹರ್ಷಕುಮಾರ್ ಕುಗ್ವೆ ಬರೆದಿದ್ದಾರೆ. ಇದು ನಿಮಗಿಷ್ಟವಾದೀತು -ಸಂಪಾದಕೀಯ


ಹಲವಾರು ದಿನಗಳಿಂದ ನನಗೆ ಒಂದು ಬಯಕೆಯಿತ್ತು.  ಅಮೆರಿಕವೇ ಅಮೆರಿಕದ ವಿರುದ್ದ ಬಂಡೆದ್ದು ನಿಲ್ಲಬೇಕು ಎನ್ನುವ ಬಯಕೆ ಅದು. ಕಳೆದ ಸೆಪ್ಟೆಂಬರ್ ೧೭ರಿಂದ ಅಮೆರಿಕದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ನೋಡಿ ಕೊಂಚ ಥ್ರಿಲ್ ಆಗುತ್ತಿದೆ. ಜಗತ್ತಿನೆಲ್ಲೆಡೆ ನಡೆಯುತ್ತಿರುವ ಜನಾಂದೋಲನಗಳ ಸಾಲಿನಲ್ಲಿ ಈಗ ಅಮೆರಿಕದ ಜನರೂ ಹೊಸ ಹೆಜ್ಜೆ ಇಟ್ಟಿರುವುದು ನೋಡಿ ಖುಷಿಯಾಗಿದೆ. ಈ ಬಂಡಾಯ ಎಲ್ಲಿಯವರೆಗೆ ನಡೆಯುತ್ತದೆ, ಏನು ಸಾಧಿಸುತ್ತದೆ, ಯಾವುದೂ ಖಾತ್ರಿಯಿಲ್ಲ. ಆದರೆ ಜಗತ್ತಿನ ಪ್ರತಿಯೊಬ್ಬ ಪ್ರಜಾಪ್ರಭುತ್ವವಾದಿಯೂ ಮುಕ್ತ ಮನಸ್ಸಿನಿಂದ ಬೆಂಬಲಿಸಬೇಕಾದ ಚಳವಳಿ ಇದು ಎಂದು ಮಾತ್ರ ಹೇಳಬಹುದು. ಇದಕ್ಕೆ ಕಾರಣಗಳನ್ನು ಸ್ವಲ್ಪ ವಿವರವಾಗಿ ಗಮನಿಸುವ ಮುನ್ನ ಇಲ್ಲಿ ಏನೇನಾಗುತ್ತಿದೆ ಎಂದು ನೋಡೋಣ. 

ನಿಜಕ್ಕೂ ಅಚ್ಚರಿಯ ಹಾಗೂ ಬೇಸರದ ಸಂಗತಿಯಿಂದರೆ ಅಲ್ಲಿ ನಡೆಯುತ್ತಿರುವ ಇಂತಹ ಒಂದು ಅದ್ಭುತ ಬೆಳವಣಿಗೆಗೆ ನಮ್ಮ ಮಾಧ್ಯಮಗಳ ಪ್ರತಿಕ್ರಿಯೆ ಏನೂ ಇಲ್ಲವೆನ್ನುವಷ್ಟರ ಮಟ್ಟಿಗೆ ಸೊನ್ನೆಯಾಗಿರುವುದು. ಇದು ಮಾಧ್ಯಮಗಳ ಜಾಣಮೌನವಾ? ಇದು ಇಲ್ಲಿನ ಮಾಧ್ಯಮಗಳ ಪರಿಸ್ಥಿತಿ ಮಾತ್ರವಲ್ಲ. ಅಮೆರಿಕದ ಮುಖ್ಯವಾಹಿನಿ ಮಾಧ್ಯಮಗಳೂ ಬೇಕೆಂದೇ ಈ ಚಳವಳಿಯ ಕುರಿತು ಉಪೇಕ್ಷೆಯನ್ನೂ ಹಾಗೂ ಅಪಪ್ರಚಾರವನ್ನೂ ನಡೆಸುತ್ತಿವೆ. ಈಜಿಪ್ಟಿನ, ಲಿಬಿಯಾದ, ಆಥವಾ ನಮ್ಮದೇ ಅಣ್ಣಾ ಚಳವಳಿಗಳನ್ನು ಮುಖಪುಟದಲ್ಲಿ ವಾರಗಟ್ಟಲೆ ವರದಿ ಮಾಡಿದ ಪತ್ರಿಕೆಗಳಿಗೆ, ಟೀವಿ ಚಾನಲ್‌ಗಳಿಗೆ ಈಗ ಕನಿಷ್ಟ ಒಂದು ವರದಿಯನ್ನೂ ಮಾಡದಿರುವಂತದ್ದು ಏನಾಗಿದೆ?!


ಈಗ ಅಮೆರಿಕದಲ್ಲಿ ಆರಂಭಗೊಂಡಿರುವ ಚಳವಳಿ 'ವಾಲ್ ಸ್ಟ್ರೀಟ್ ವಶಪಡಿಸಿಕೊಳ್ಳಿ’ಚಳವಳಿ. ಮೊದಲಿಗೆ ಹತ್ತಾರು ಸಂಖ್ಯೆಯಲ್ಲಿ ಚಳವಳಿಗಾರರು ಆರಂಭಿಸಿದ ಈ ಚಳವಳಿಯಲ್ಲಿ ದಿನಕಳೆದಂತೆ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಅದರಲ್ಲೂ ಮುಖ್ಯವಾಗಿ ಹೊಸಪೀಳಿಗೆಯ ವಿದ್ಯಾರ್ಥಿಗಳು, ಯುವಕರು, ಕಾರ್ಮಿಕರು ಸೇರಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ 'ವಾಲ್‌ಸ್ಟ್ರೀಟ್ ವಶಪಡಿಸಿಕೊಳ್ಳಿ’ ಚಳವಳಿಯನ್ನು ಇದುವರೆಗೆ ವಾಷಿಂಗ್ಟನ್ ಡಿಸಿ, ಬೋಸ್ಟನ್, ಚಿಕಾಗೋ, ಫಿಲಡೆಲ್ಫಿಯಾ, ಹೂಸ್ಟನ್, ಪೋರ್ಟ್‌ಲೆಂಟ್, ಓರೆಗಾಂವ್, ಸಿಯಾಟಲ್, ಹೂಸ್ಟನ್, ಟೆಕ್ಸಾಸ್, ಮುಂತಾದ ಹತ್ತಾರು ಕಡೆಗಳಲ್ಲಿ ಅದೇ ಮಾದರಿಯ ಚಳವಳಿಗಳೂ ಆರಂಭಗೊಳ್ಳುತ್ತಿವೆ. ಮೊದಮೊದಲು ಇದನ್ನು ಬರೀ ಪಡ್ಡೆ ಹುಡುಗರ ಬಂಡಾಯ ಎಂದು ಉಪೇಕ್ಷೆ ಮಾಡಿದ್ದವರಿಗೆ ಈಗ ಆಘಾತವಾಗಿದೆ. ಅಮೆರಿಕದ ಹಲವಾರು ದೊಡ್ಡ ಕಾರ್ಮಿಕ ಸಂಘಟನೆಗಳೂ ನೆನ್ನೆಯಷ್ಟೇ ತಮ್ಮ ಬಹಿರಂಗ ಬೆಂಬಲವನ್ನು ಘೋಷಿಸಿವೆ. ವಾಲ್‌ಸ್ಟ್ರೀಟ್ ಬಳಿ ಇರುವ ಝುಕ್ಕೊಟ್ಟಿ ಪಾರ್ಕ್‌ನಲ್ಲಿ ನೂರಾರು ಕಾರ್ಯಕರ್ತರು ಕಾರ್ಡ್‌ಬೋರ್ಡ್ ಜೋಪಡಿ ಕಟ್ಟಿಕೊಂಡು ಕಳೆದ ಹದಿನೈದು ಇಪ್ಪತ್ತು ದಿನಗಳಂದ ಜಾಂಡಾ ಹೂಡಿದ್ದರೆ ಇವರಿಗೆ ಬೆಂಬಲವಾಗಿ ಅಮೆರಿಕದಾದ್ಯಂತ ಸಾವಿರಾರು ಜನರು ಕೇರಾಫ್ ’ಆಕ್ಯುಪೈ ವಾಲ್‌ಸ್ಟ್ರೀಟ್’ ವಿಳಾಸಕ್ಕೆ ತಮ್ಮ ಕೈಲಾಗುವಂತಾದ್ದನ್ನೆಲ್ಲಾ ಸಹಾಯ ಮಾಡುತ್ತಿದ್ದಾರೆ. ಊಟ, ಬಟ್ಟೆ, ಬರೆ, ಮೊಬೈಲ್ ಫೋನ್‌ಗಳಿಗೆ ಬೇಕಾದ ಬ್ಯಾಟರಿಗಳು, ಬ್ಯಾಕಪ್ ಸರಕುಗಳು, ಬಾರಿಸಲು ಡ್ರಮ್‌ಗಳು, ಪೀಪಿಗಳು, ಹೀಗೆ ಏನೇನು ಸಾಧ್ಯವೋ ಎಲ್ಲಾ ಅಂಚೆಯ ಮೂಲಕ ಹರಿದು ಬರುತ್ತವೆ. ಒಟ್ಟಾರೆಯಾಗಿ ನಿಧಾನಕ್ಕೆ ಈ ಬಂಡಾಯ ಒಂದು ಬೃಹತ್ ಜನಾಂದೋಲನವಾಗಿ ಚಳವಳಿಯಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಕಳೆದ ಒಂದು ದಶಕದಲ್ಲಿ ಅಮೆರಿಕದಲ್ಲಿ ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರಲ್ಲಿ ಮಡುಗಟ್ಟಿರುವ ಆಕ್ರೋಶವನ್ನು ಗಮನಿಸಿದರೆ ಈ ಸೂಚನೆ ತೋರುತ್ತದೆ. 


ನೀವೆಲ್ಲಾ ೧೯೮೪ರಲ್ಲಿ ಚೀನಾ ಸರ್ಕಾರದ ಸರ್ವಾಧಿಕಾರದ ವಿರುದ್ಧ ನಡೆಸಿದ್ದ ದಂಗೆಯ ಕುರಿತು ಕೇಳಿರಬಹುದು. ಇಂದು ಅಮೆರಿಕದಲ್ಲಿ ನಡೆಯುತ್ತಿರುವ ಈ ಚಳವಳಿಯನ್ನು ಗಮನಿಸಿದರೆ ಬಹುತೇಕ ಅದೇ ಮಾದರಿಯಲ್ಲಿ ನಡೆಯುತ್ತಿರುವಂತೆ  ಕಾಣಿಸುತ್ತಿದೆ. ಆದರೆ ಇಲ್ಲಿ ನಡೆಯುತ್ತಿರುವುದು ಭಾರತದಲ್ಲಿ ಅಣ್ಣಾ ಹಜಾರೆ ಕೇವಲ ಕಾಂಗ್ರೆಸ್ ವಿರುದ್ಧ ನಡೆಸಿದಂತೆ ಬರೀ ಒಬಾಮಾ ಸರ್ಕಾರದ ನೀತಿಗಳ ವಿರುದ್ಧ ಮಾತ್ರವಲ್ಲ. ಇಡೀ ಜಗತ್ತಿನ ಹಣಕಾಸು ಮಾರುಕಟ್ಟೆಯನ್ನು ತನ್ನ ಬೆರಳ ತುದಿಯಲ್ಲಿ ಕುಣಿಸುತ್ತಿರುವ ’ವಾಲ್‌ಸ್ಟ್ರೀಟ್’ನ ಹಣಕಾಸು ಸರ್ವಾಧಿಕಾರದ ವಿರುದ್ಧ ನಡೆಯುತ್ತಿರುವ ಚಳವಳಿ ಇದು.

ಈಗ ನಡೆಯುತ್ತಿರುವ ಚಳವಳಿಯ ರೂಪುರೇಷೆಯನ್ನು ಮೊದಲು ನೀಡಿದ್ದು ಕೆನಡಾದಲ್ಲಿರುವ 'ಅಡ್‌ಬಸ್ಟರ್’ ಎಂಬ ಗುಂಪು. ಈ ಗುಂಪಿನ ಸಲಹೆ ಮೇರೆಗೆ ಹೋರಾಟದ ರೂಪುರೇಷೆಯನ್ನು ಸಿದ್ಧಗೊಂಡು ಸೆಪ್ಟೆಂಬರ್ ೧೭ರಂದು ಚಳವಳಿ ಆರಂಭವಾಯಿತು. ಈ ಚಳವಳಿಯವರು ತಮ್ಮ ಹೋರಾಟವನ್ನು ಘೋಷಿಸಿಕೊಂಡಿರುವುದು ಹೀಗೆ-  "ಈಜಿಪ್ಟ್, ಗ್ರೀಸ್, ಸ್ಪೇನ್ ಹಾಗೂ ಐಸ್‌ಲ್ಯಾಂಡ್‌ಗಳಲ್ಲಿನ ನಮ್ಮ ಸಹೋದರಂತೆಯೇ ನಾವು ಕ್ರಾಂತಿಕಾರಿ ಅರಬ್ ಬಂಡಾಯವನ್ನು ಅಮೆರಿಕದಲ್ಲಿ ಪ್ರಜಾಪ್ರಭುತ್ವವನ್ನು ಪುನರ್‌ಸ್ಥಾಪಿಸಲು ಬಳಸುತ್ತಿದ್ದೇವೆ. ಇದರಲ್ಲಿ ಭಾಗವಹಿಸುವ ಪ್ರತಿಯಿಬ್ಬರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಅಹಿಂಸಾ ಮಾರ್ಗವನ್ನು ಬಳಸುತ್ತಿದ್ದೇವೆ. ...'ವಾಲ್‌ಸ್ಟ್ರೀಟ್ ವಶಪಡಿಸಿಕೊಳ್ಳಿ’ ಒಂದು ನಾಯಕರಹಿತ ಚಳವಳಿ. ಇದರಲ್ಲಿ ಬೇರೆ ಬೇರೆ ವರ್ಣ, ಲಿಂಗ, ರಾಜಕೀಯ ದೃಷ್ಟಿಕೋನಗಳ ಜನರು ಭಾಗವಹಿಸುತ್ತಿದ್ದಾರೆ. ನಮ್ಮೆಲ್ಲರಲ್ಲಿರುವ ಸಮಾನ ಅಂಶವೆಂದರೆ ೧% ಜನರ ದುರಾಸೆ ಹಾಗೂ ಭ್ರಷ್ಟಾಚಾರವನ್ನು ೯೯%ಜನರಾದ ನಾವು ಇನ್ನು ಮುಂದೆ ಸಹಿಸಲು ಸಾಧ್ಯವೇ ಇಲ್ಲ"


ಇಲ್ಲಿ ಮೊಳಗುತ್ತಿರುವ ಘೋಷಣೆಗಳನ್ನೂ ನೋಡಿ-  "ನಾವು ಬಹಳ ಮಂದಿ, ಅವರು ಕೆಲವೇ ಮಂದಿ. ನಾವು ಎದ್ದು ನಿಂತರೆ ಅವರೇನು ಮಾಡ್ತಾರೆ?", "ಅವರು ಎಷ್ಟು ಅಂತ ಶ್ರೀಮಂತರಾಗುತ್ತಲೇ ಹೋಗುತ್ತಾರೆ? ಮೊದಲು ವಿದ್ಯಾರ್ಥಿಗಳ ಎಲ್ಲಾ ಸಾಲ ಮನ್ನಾ ಮಾಡಿ",  "ಅವರು ಹೇಳ್ತಾರೆ ಕಟ್ ಬ್ಯಾಕ್, ನಾವು ಹೇಳ್ತೀವಿ- ಫೈಟ್ ಬ್ಯಾಕ್ ಸಾಲಪಾವತಿಗೆ ಒಂದೇ ದಾರಿ- ಯುದ್ಧ ನಿಲ್ಲಿಸಿ, ಶ್ರೀಮಂತರ ಮೇಲೆ  ತೆರಿಗೆ ಹೆಚ್ಚಿಸಿ". ಹೀಗೆ ಇಂತಹ ಹಲವಾರು ಘೋಷಣೆಗಳನ್ನು ಹಾಕುತ್ತಾ ಹುಮ್ಮಸ್ಸಿನಿಂದ ಪಾಲ್ಗೊಳ್ಳುತ್ತಿರುವ ಕಾರ್ಯಕರ್ತರ ಚಳುವಳಿ ಇಂದಿನ ಸಂದರ್ಭದಲ್ಲಿ ಜಾಗತಿಕ ಮಟ್ಟದ ಪ್ರಾಮುಖ್ಯತೆ ಇದೆ.

ಈ ಚಳವಳಿಯ ಹಲವಾರು ಬೇಡಿಕೆಗಳಲ್ಲಿ ಪ್ರಮುಖವಾದವೆಂದರೆ, 
* ಜನರ ಎಲ್ಲಾ ಬಗೆಯ ಸಾಲಗಳನ್ನು ಮನ್ನಾ ಮಾಡಬೇಕು.
* ಸಾಮಾಜಿಕ ಭದ್ರತಾ ಕ್ರಮಗಳನ್ನು ರದ್ದುಗೊಳಿಸದೇ ಹೆಚ್ಚಿಸಬೇಕು.
* ಸರ್ಕಾರದ ಆದಾಯ ಹೆಚ್ಚಿಸಲಿಕ್ಕಾಗಿ ಶೇಕಡಾ ೧೦ಷ್ಟು ಶ್ರೀಂಮಂತರ ಮೇಲೆ ತೆರಿಗೆ ಹೆಚ್ಚಿಸಬೇಕು
* ದೊಡ್ಡ ಕಾರ್ಪೊರೇಟ್ ಸಂಸ್ಥೇಗಳು ಜನತೆಯ ಭಾಗ ಅಲ್ಲ ಎಂದು ಸಂವಿಧಾನದಲ್ಲಿ ತಿದ್ದುಪಡಿ ತರುವುದು.
* ಸರ್ವರಿಗೂ ಹೆಲ್ತ್ ಕೇರ್ ವ್ಯವಸ್ಥೆ ಜಾರಿಗೊಳಿಸುವುದು.
* ಉಚಿತ ಕಾಲೇಜು ಶಿಕ್ಷಣ ನೀಡಬೇಕು.
* ಉದ್ಯೋಗ ಭದ್ರತೆ ಹಾಗೂ ಉತ್ತಮ ವೇತನ ಖಾರಿಗೊಳಿಸಬೇಕು.
* ಮೂಲಸೌಕರ್ಯಗಳಿಗಾಗಿ (ನೀರು, ಒಳಚರಂಡಿ, ರೈಲ್ವೆ, ರಸ್ತೆ, ಸೇತುವೆ, ವಿದ್ಯುತ್) ಒಂದು ಲಕ್ಷಕೋಟಿ ಡಾಲರ್
ನೀಡಬೇಕು.
* ಪರಿಸರ ಸಂರಕ್ಷಣೆಗಾಗಿ ಒಂಟು ಲಕ್ಷ ಕೋಟಿ ಡಾಲರ್ ನೀಡಬೇಕು.
* ತೈಲ ಇಂದನಾಧಾರಿತ ವಿದ್ಯುತ್ ಮೇಲಿನ ಅವಲಂಬನೆ ಕೊನೆಗೊಳಿಸಿ ಪರ್ಯಾಯ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು.
* ಲಿಂಗ ಹಾಗೂ ಜನಾಂಗೀಯ ಭೇಧಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಮಾನಹಕ್ಕು ತಿದ್ದು ಪಡಿ ತರಬೇಕು, ಇತ್ಯಾದಿ.

ಈ ಚಳವಳಿ ತನ್ನ ಕೇಂದ್ರವನ್ನು ವಾಲ್‌ಸ್ಟ್ರೀಟನ್ನೇ ಕೇಂದ್ರಮಾಡಿಕೊಂಡಿರುವುದಕ್ಕೆ ಕಾರಣವಿದೆ. ಇಂದು ಅಮೆರಿಕದ ಇಡೀ ಹಣಕಾಸು ವ್ಯವಹಾರ ನಡೆಯುವುದು ವಾಲ್‌ಸ್ಟ್ರೀಟ್‌ನಲ್ಲಿ. ಜಗತ್ತಿನ ಅತಿದೊಡ್ಡ ಶೇರು ಮಾರುಕಟ್ಟೆಯಾದ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ಹಾಗೂ ನಾಸ್ಡಾಕ್ ಎಲ್ಲಾ ಇರುವುದು ಇಲ್ಲೇ. ’ವಾಲ್‌ಸ್ಟ್ರೀಟ್ ವಶಪಡಿಸಿಕೊಳ್ಳಿ’ ಚಳವಳಿಯ ಲೋಗೋ ನೋಡಿ. ಗೂಳಿಯ ಮೇಲೆ ನೃತ್ಯಗೈಯುತ್ತಿರುವ ಯುವತಿಯ ಚಿತ್ರ!  


ತಮ್ಮ ಚಳವಳಿಗೆ ಮುಖ್ಯವಾಹಿನಿ ಮಾಧ್ಯವಮಗಳು ಬೆಂಬಲ ನೀಡಲಾರವು ಎಂಬ ಸಂಶಯವಿಟ್ಟುಕೊಂಡೇ ಚಳವಳಿಗಾರರು ಸಾಧ್ಯವಿರುವ ಎಲ್ಲಾ ಪರ್ಯಾಯ ಮಾಧ್ಯಮಗಳನ್ನೂ ಬಳಸಿಕೊಳ್ಳುತ್ತಿದ್ದಾರೆ. ’ಆಕ್ಯುಪೈ ವಾಲ್‌ಸ್ಟ್ರೀಟ್ ಜರ್ನಲ್ ಎಂಬ ಪತ್ರಿಕೆಯನ್ನೂ’ ಹೊರತರುತ್ತಿದ್ದಾರೆ. ಅದರ ಮೊದಲ ಸಂಚಿಕೆಯ ಮುಖಪುಟದಲ್ಲೇ ಕ್ರಾಂತಿ ಈಗ ತಾಯ್ನಾಡಿನಲ್ಲೇ ಭುಗಿಲೆದ್ದಿದೆ ಎಂಬ ಒಕ್ಕಣೆಯಿತ್ತು. ಇದರೊಂದಿಗೆ ಫೇಸ್‌ಬುಕ್,  ಟ್ವಿಟರ್‌ಗಳು, ಯೂಟ್ಯೂಬ್, ವೆಬ್‌ಸೈಟ್ ಹೀಗೆ ಎಲ್ಲವೂ ನಿರಂತರವಾಗಿ ಜನಸಾಮಾನ್ಯರಿಗೆ ಸುದ್ದಿವಾಹಿನಿಗಳಾಗಿ, ಚರ್ಚಾ ವೇದಿಕೆಗಳಾಗಿ ಕೆಲಸ ಮಾಡುತ್ತಿದೆ. ಜನರು ವ್ಯಾಪಕವಾಗಿ ಬಳಸುವ ವಿಕಿಪಿಡಿಯಾ ಕೂಡಾ ಚಳವಳಿಯ ಬೆಳವಣಿಗೆಯನ್ನು ದಾಖಲಿಸುತ್ತಿದೆ. ಅರಬ್ ಹಾಗೂ ಭಾರತದಲ್ಲೇ ಸಾಕಷ್ಟು ಕೆಲಸ ಮಾಡಿರುವ ಇವುಗಳೆಲ್ಲಾ ಅಮೆರಿಕದಲ್ಲಿ ಮಾಡದಿರುತ್ತವೆಯೆ?

ಸೆಪ್ಟೆಂಬರ್ ೧೭ರಿಂದ ಆರಂಭವಾದ ಈ ಚಳವಳಿಯ ಮೊದಲ ದಿನ ಸುಮಾರು ಒಂದು ಸಾವಿರ ಕಾರ್ಯಕರ್ತರು ಬೀವಿಗಳಲ್ಲಿ ಜಮಾಯಿಸಿ ಝುಕ್ಕೊಟ್ಟಿ ಪಾರ್ಕ್‌ನಲ್ಲಿ ಕಾರ್ಡ್‌ಬೋರ್ಡ್‌ಗಳ ಸಹಾಯದಿಂದ ಜೋಪಡಿ ಹಾಕಿಕೊಂಡು ತಂಗಿದ್ದರು, (ನ್ಯೂಯಾರ್ಕ್ ಪೋಲೀಸ್ ಇಲಾಖೆ ಟೆಂಟ್‌ಬಳಕೆಯನ್ನು ನಿಷೇಧಿಸಿದ ಕಾರಣ).  ಆ ವಾರ ಪೋಲೀಸರು ನಾಲ್ಕು ಜನರನ್ನು ಬಂಧಿಸಿದ್ದರು. ಸೆ.೨೪ರಂದು ಕನಿಷ್ಟ ೮೦ ಜನರನ್ನು ಬಂಧಿಸಲಾಗಿತ್ತು. ಅಂದು ನಡೆದ ಜಟಾಪಟಿಯಲ್ಲಿ ಮೂವರು ಮಹಿಳೆಯರ ಮೇಲೆ ಪೋಲೀಸರು ಬಲೆಯನ್ನು ಬೀಸಿ ’ಪೆಪ್ಪರ್’ (ಮೆಣಸು ಕಾಳಿನ ದ್ರವ) ಸಿಂಪಡಿಸಿ ಹಲ್ಲೆ ನಡೆಸಿದ್ದರು. ಇದನ್ನು ಕೂಡಲೇ ಯೂಟ್ಯೂಬ್‌ನಲ್ಲಿ ಬಹಿರಂಗಪಡಿಸಿದ ಪ್ರತಿಭಟನಾಕಾರರು ಆ ಪೋಲೀಸ್ ಅಧಿಕಾರಿಯ ಸಂಪೂರ್ಣ ವಿವರ, ಫೋನ್ ನಂಬರ್‌ಗಳನ್ನೂ ಪ್ರಕಟಿದ್ದರು. ಯಾವುದೇ ಪೊಲೀಸ್ ಅಧಿಕಾರಿ ಕೆಟ್ಟದಾಗಿ ವರ್ತಿಸಿದ ಮರುಕ್ಷಣವೇ ಆತನ ಎಲ್ಲಾ ವರ್ತನೆಯನ್ನೂ ವಿಡಿಯೋ ಸಮೇತ ಜಗತ್ತಿನ ವೀಕ್ಷಣೆಗೆ ಬಿಡಲಾಗುತ್ತಿದೆ!


ಅಕ್ಟೋಬರ್ ೧ರಂದು ಬ್ರೂಕ್‌ಲಿನ್ ಸೇತುವೆ ಮೇಲೆ ಪ್ರತಿಭಟಿಸಿದ ಸುಮಾರು ೭೦೦ ಜನರನ್ನು ಪೋಲೀಸರು ಬಂಧಿಸಿದ್ದರು. ಇಲ್ಲಿ ಹೀಗೆ ಬಂಧಿಸುವಾಗ ಪೋಲೀಸರು ’ಕೆಟ್ಲಿಂಗ್’ ಎಂಬ ತಂತ್ರವನ್ನು ಪ್ರಯೋಗಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ನಡೆಸುವಂತೆ ಹಠಾತ್ ಲಾಠಿ ಚಾರ್ಜು, ಹಲ್ಲೆಗಳನ್ನು ಅಮೆರಿಕದಲ್ಲಿ ನಡೆಸಲು ಸಾಧ್ಯವಾಗುವುದಿಲ್ಲ. ಮಾನವ ಹಕ್ಕು, ಪ್ರಜಾತಂತ್ರಗಳ ಕುರಿತ ಮುಂದುವರಿದ ದೇಶಗಳ ಜನರ ಜನರ ಪ್ರಜ್ಞಾಮಟ್ಟ ಹೆಚ್ಚಿರುವುದರಿಂದ ಪೋಲೀಸ್ ಅಧಿಕಾರಿಗಳು ಮನಬಂದಂತೆ ವರ್ತಿಸಲು ಬರುವುದಿಲ್ಲ. ಹೀಗಾಗಿ ಪ್ರತಿಭಟನಾಕಾರರನ್ನು ಆದಷ್ಟು ಚದುರಿಸಿ, ದಿಕ್ಕು ತಪ್ಪಿಸಿ ಗುಂಪು ಗುಂಪಾಗಿ ಬಂದಿಸುವ ತಂತ್ರ ಹೂಡುವ ಕೆಟ್ಲಿಂಗ್ ಕೂಡಾ ಬಹಳಷ್ಟು ಸಲ ಟೀಕೆಗೊಳಗಾಗಿದೆ. 


ಅಕ್ಟೋಬರ್ ೫ ರಂದು ನ್ಯೂಯಾರ್ಕ್ ನಗರದ ಹತ್ತಾರು ಶಾಲಾಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಸೇರಿಕೊಂಡರು. ಅಂದು ನಡೆದ ಮೆರವಣಿಗೆಯಲ್ಲು ಸುಮಾರು ೧೫,೦೦೦ ಜನರು ಪಾಲ್ಗೊಂಡಿದ್ದರು. ಹೀಗೆ ದಿನೇ ದಿನೇ ಆಂದೋಲನದಲ್ಲಿ ಹೆಚ್ಚೆಚ್ಚು ಜನರು ಭಾಗವಹಿಸುತ್ತಲೇ ಇದ್ದಾರೆ.

೧೯೯೯ರಲ್ಲಿ ಸಿಯಾಟಲ್‌ನಲ್ಲಿ ನಡೆದ ಡಬ್ಲ್ಯೂಟಿಓ ಸಮ್ಮೇಳನದ ವಿರುದ್ಧ ಹಾಗೂ ನಂತರ ಇರಾಕ್ ಯುದ್ಧದ ವಿರುದ್ಧ ಬೃಹತ್ ಚಳವಳಿ ನಡೆದಿದ್ದವು ಅವುಗಳಲ್ಲಿ ಲಕ್ಷಾಂತರ ಜನರು ಸೇರಿದ್ದರಾದರೂ ಅವು ನಿರ್ದಿಷ್ಟ ದಿನಗಳಂದು ನಡೆದ ಪ್ರದರ್ಶನಗಳು. ಆದರೆ ಈಗ ನಡೆಯುತ್ತಿರುವುದು ಬೇರೆಯದೇ ಸ್ವರೂಪದ್ದು. 


ಹಾಗಾದರೆ ಇಡೀ ಜಗತ್ತಿಗೇ ಬುದ್ಧಿ ಹೇಳುವ ಅಮೆರಿಕದಂಥ ಅಮೆರಿಕದಲ್ಲಿ ಇಂತಹ ಒಂದು ಬಂಡಾಯ ಹುಟ್ಟಿಕೊಂಡಿರುವುದು ಯಾಕೆ? ಈಗ ಹುಟ್ಟಿರುವ ಚಳವಳಿಯ ವ್ಯಾಪ್ತಿಯೇನು? ಇದರ ಶಕ್ತಿ ಏನು? ದೌರ್ಬಲ್ಯಗಳೇನು? ಈ ಕುರಿತು ಕೊಂಚ ತಲೆಕೆಡಿಸಿಕೊಳ್ಳುವ ಅಗತ್ಯ ಭಾರತೀಯರಿಗೂ ಇದೆ. ಯಾಕೆ ಇದರ ಅಗತ್ಯ ನಮಗಿದೆ ಎಂದರೆ ಎರಡನೆಯ ವಿಶ್ವ ಮಹಾಯುದ್ಧದ ನಂತರದಲ್ಲಿ ಅದರಲ್ಲೂ ಸೋವಿಯತ್ ಒಕ್ಕೂಟ ಕುಸಿದ ಮೇಲೆ ಇಡೀ ಜಗತ್ತನ್ನು ತನ್ನ ಅಂಕೆಯಲ್ಲಿಟ್ಟುಕೊಂಡಿರುವುದು ಅಮೆರಿಕ. ನೂರಾರು ದೇಶಗಳಲ್ಲಿ ಬುಡಮೇಲು ಕೃತ್ಯಗಳನ್ನು, ಸಾವಿರಾರು ಪ್ರಾಕ್ಸಿ ಯುದ್ಧಗಳನ್ನು ನಡೆಸುತ್ತಾ ಇಡೀ ಜಗತ್ತಿನ ಬಹುಪಾಲು ದೇಶಗಳನ್ನು ತನ್ನ ಪದತಲದಲ್ಲಿ ಬೀಳುವಂತೆ ಮಾಡಿಕೊಂಡು ಕೇಕೆ ಹಾಕುತ್ತಿರುವುದು ಅಮೆರಿಕ. ಒಂದು ಕಡೆ ಮುಕ್ತ ಆರ್ಥಿಕತೆಯ ನೀತಿಗಳನ್ನು ಎಲ್ಲರ ಮೇಲೆ ಹೇರುತ್ತಲೇ ತಾನು ಮಾತ್ರ ರಕ್ಷಣಾತ್ಮಕ ನೀತಿಗಳನ್ನು ಪಾಲಿಸಿಕೊಂಡು ಇಬ್ಬಗೆಯ ನೀತಿಯನ್ನು ಪಾಲಿಸುತ್ತಿರುವುದು ಇದೇ ಅಮೆರಿಕ. ಜಗತ್ತಿನ ತೈಲಸಂಪನ್ಮೂಲಗಳ ಮೇಲಿನ ಹಿಡಿತಕ್ಕಾಗಿ ಲಕ್ಷಾಂತರ ಜನರ ಮಾರಣಹೋಮ ನಡೆಸಿರುವುದೂ ಇದೇ ಅಮೆರಿಕ. ಇಂದು ಇಡೀ ಜಗತ್ತನ್ನು ಕಾಡುತ್ತಿರುವ ಇಸ್ಲಾಂ ಭಯೋತ್ಪಾದನೆಗೆ ಬೀಜ ನೆಟ್ಟು, ನೀರು ಗೊಬ್ಬರ ಹಾಕಿ ಈಗ ಮತ್ತೆ ಭಯೋತ್ಪಾದನೆಯ ವಿರುದ್ಧದ ಹೋರಾಟದ ಹೆಸರಿನಲ್ಲಿ ತನ್ನ ಅಜೆಂಡಾಗಳನ್ನು ಜಗತ್ತಿನ ಮೇಲೆ ಹೇರುತ್ತಿರುವುದೂ ಇದೇ ಅಮೆರಿಕ. ಇಂದು ಜಗತ್ತಿನ ಪ್ರತಿಯೊಬ್ಬ ಮನುಷ್ಯನೂ ಕೂಡ ಅಮೆರಿಕ ತನ್ನ ಹಿತಾಸಕ್ತಿಗಾಗಿ ಹಾಕಿಕೊಟ್ಟ ಅಜೆಂಡಾಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ಪಾಲಿಸುತ್ತಲೇ ಇದ್ದಾನೆ ಎಂದರೆ ಅತಿಶಯೋಕ್ತಿಯಲ್ಲ. ಆದರೆ ಇದೆಲ್ಲಾ ಜಾಗತೀಕರಣ ಮುಸುಕಿನಲ್ಲಿ ನಡೆಯುತ್ತಿರುವುದರಿಂದ ಅದನ್ನೆಲ್ಲಾ ನಮ್ಮದೇ ಎಂಬಂತೆ ನಾವು ಒಪ್ಪಿಕೊಂಡು ಹೋಗುತ್ತಿದ್ದೇವಷ್ಟೆ.

ಇಂತಿಪ್ಪ ಅಮೆರಿಕದ ಪ್ರಭುತ್ವದ ವಿರುದ್ಧ ಅಮೆರಿಕದ ಪ್ರಜೆಗಳೇ ದಂಗೆಯೇಳುವ ಸ್ಥಿತಿ ಉಂಟಾಗಿದೆ ಎಂದರೆ ನಾವು ಖಂಡಿತಾ ಇದನ್ನು ಕೊಂಚ ಹತ್ತಿರದಿಂದ ಗಮನಿಸುವ ಅಗತ್ಯವಿದೆ. ಇದಕ್ಕಾಗಿ ಈ ಚಳವಳಿಗೆ ಕಾರಣವಾಗಿರುವ ಅಮೆರಿಕ ಆರ್ಥಿಕತೆಯನ್ನು ಸಂಕ್ಷಿಪ್ತವಾಗಿಯಾದರೂ ಅರಿಯಬೇಕಾಗುತ್ತದೆ.

ಕಳೆದ ಆಗಸ್ಟ್ ತಿಂಗಳಲ್ಲಿ ಅಮೆರಿಕ ಅಮೆರಿಕ ಸರ್ಕಾರದ ಋಣಾರ್ಹತೆ ಮಟ್ಟವನ್ನು ಅಲ್ಲಿನ ಪ್ರಮುಖ ಮೌಲ್ಯಮಾಪನಾ ಸಂಸ್ಥೆಗಳಲ್ಲೊಂದಾದ ಎಸ್ & ಪಿ  ಎಎಎ ಯಿಂದ ಎಎ+ಗೆ ಇಳಿಸಿತ್ತು. ತಾನು ಸುಸ್ತಿದಾರನಾಗುವ ಹಂತಕ್ಕೆ ಹೋಗುವುದನ್ನು ತಪ್ಪಿಸಲು ಒಬಾಮಾ ಸರ್ಕಾರವು ಸಾಲ ಒಪ್ಪಂದ ಕಾಯ್ದೆಯನ್ನು ಜಾರಿ ಮಾಡಿತು. ಮುಂದಿನ ಹತ್ತು ವರ್ಷಗಳಲ್ಲಿ ಅಮೆರಿಕವು ಸರ್ಕಾರದ ವೆಚ್ಚಗಳನ್ನು ೨ ರಿಂದ ೨.೪ ಲಕ್ಷ ಕೋಟಿ ಡಾಲರುಗಳಿಗೆ ಹೆಚ್ಚಿಸಲು ನಿರ್ಧರಿಸಿದೆ. ಇನ್ನೂ ಸ್ವಲ್ಪ ಹಿಂದಕ್ಕೆ ಹೋಗೋಣ. ೨೦೦೮ರ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕದ ಸಬ್‌ಪ್ರೈಂ ಗೃಹಸಾಲ ಬಿಕ್ಕಟ್ಟು ಸ್ಪೋಟಗೊಂಡಿತ್ತು. ಅಮೆರಿಕಾದ ಎಲ್ಲಾ ಹಣಕಾಸು ಉದ್ದಿಮೆಗಳೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಈ ಸಬ್‌ಪ್ರೈಮ್ ಗೃಹಸಾಲ ಮಾರುಕಟ್ಟೆಯೊಳಗೆ ಕಾಲಿಟ್ಟಿದ್ದವು. ವಾಣಿಜ್ಯ ಬ್ಯಾಂಕುಗಳು ಅಗ್ಗದ ಬಡ್ಡಿ ದರದಲ್ಲಿ ನೀಡತೊಡಗಿದ್ದ ಗೃಹಸಾಲ ಉದ್ದಿಮೆಗೆ ಕಾಲಿಟ್ಟ ಹಣಕಾಸು ಸಂಸ್ಥೆಗಳು ಬೃಹತ್ ಮಟ್ಟದಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸತೊಡಗಿದ್ದೇ ಬೃಹತ್ ಪ್ರಮಾಣದ ಬಂಡವಾಳ ಸಂಚಯವಾಗತೊಡಗಿತ್ತು. ಆದರೆ ಯಾವಾಗ ಇದ್ದಕ್ಕಿದ್ದಂತೆ ಹೆಚ್ಚೆಚ್ಚು ಜನರು ಗೃಹಸಾಲದ ಕಂತುಕಟ್ಟಲಾರದೆ ಜನರು ಡಿಫಾಲ್ಟರ್ ಆಗತೊಡಗಿದ್ದರೋ ಆಗ ಈ ಉದ್ದಿಮೆಯನ್ನವಲಂಭಿಸಿ ಬಹುದೂರ ಹೋಗಿಬಿಟ್ಟದ್ದ ಆರ್ಥಿಕತೆಯೆಲ್ಲವೂ ಕುಸಿಯತೊಡಗಿತ್ತು. ಎಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತೆಂದರೆ ೨೦೦೭ರ ಡಿಸೆಂಬರ್‌ನಲ್ಲಿ ಅಮೆರಿಕಾದಲ್ಲಿ ಬ್ಯಾಂಕುಗಳಿಗೆ ಬಾಕಿ ಬರಬೇಕಿದ್ದ ಈ ಸಬ್‌ಫ್ರೈಮ್ ಗೃಹಸಾಲದ ಒಟ್ಟು ಮೊತ್ತ ೭೦ ಲಕ್ಷ ಕೋಟಿ ರೂಗಳು! ಅದೇ ವರ್ಷ ೧೩ ಲಕ್ಷ ಮನೆಗಳು ಜಪ್ತಿಯಾದವು. ಹೀಗೆ ಜಪ್ತಿಯಾಗಿ  ಬೀದಿಗೆ ಬಿದ್ದವರ ಸಂಖ್ಯೆ ೪೫ ಲಕ್ಷ ದಾಟಿತ್ತು!. ಮನೆಗಳ ಬೆಲೆಗಳು ಶೇ. ೪೦ ರಷ್ಟು ಕುಸಿದಿದ್ದರೂ ಕೊಳ್ಳುವವರೇ ಗತಿ ಇರಲಿಲ್ಲ. ೧.೮೬ ಕೋಟಿ ಮನೆಗಳು ಹೀಗೆ ಧೂಳು ಹಿಡಿದು ಕೂತಿದ್ದವು. ಆದರೆ ಆ ಮನೆಗಳಲ್ಲಿರಬೇಕಾದವರು ಬೀದಿ ಮೂಲೆಗಳಲ್ಲಿ, ತಮ್ಮ ಕಾರುಗಳೊಳಗೆ, ರೈಲು ಬೋಗಿಗಳಲ್ಲಿ, ಪಾರ್ಕ್‌ಗಳಲ್ಲಿ ರಾತ್ರಿ ಕಳೆಯುವ ಪರಿಸ್ತಿತಿ ಬಂದೊದಗಿತ್ತು! 


ಮತ್ತೊಂದೆಡೆ ಲೀಮಾನ್ ಬ್ರದರ‍್ಸ್‌ನಂತಹ ಹೂಡಿಕೆ ಬ್ಯಾಂಕುಗಳು ದಿವಾಳಿಯಾದವು. ಕೆಲವು ಬ್ಯಾಂಕುಗಳನ್ನು ಸರ್ಕಾರ ರಾಷ್ಟ್ರೀಕರಣ ಮಾಡಿ ಉಳಿಸಿಕೊಂಡಿತು. ಅಮೆರಿಕ ಸರ್ಕಾರ ಕೂಡಲೇ ಸುಮಾರು ೭೦೦ ಶತಕೋಟಿ ಡಾಲರುಗಳ ಬೇಲೌಟ್ ನೀಡಿತ್ತು. ಹಣಕಾಸು ಸಂಸ್ಥೆಗಳಿಗೆ ತತ್ಕಾಲಿಕ ಸಾಲ ನೀಡುವ ಕಮರ್ಷಿಯಲ್ ಪೇಪರ್ ಕೂಡಾ ಕುಸಿದು ಬಿದ್ದಿದ್ದೇ ಇದಕ್ಕೆ ಕಾರಣವಾಗಿತ್ತು. ಆರ್ಥಿಕತೆಯ ಈ ಬಿಕ್ಕಟ್ಟಿನಿಂದಾಗಿ ಅಂದು ಅಮೆರಿಕದಲ್ಲೇ ಕೆಲಸ ಕಳೆದುಕೊಂಡವರು ೧೨ ಲಕ್ಷಕ್ಕಿಂತ ಹೆಚ್ಚು ಮಂದಿ. ಈ ಬಿಕ್ಕಟ್ಟು ಅಂದು ಇತರ ದೇಶಗಳಿಗೂ ಹರಡಿ ಎಲ್ಲೆಡೆ ಇದೇ ಬೆಳವಣಿಗೆಗಳಾದವು.

೧೯೩೦ರಲ್ಲಾದಂತೆಯೇ ಮತ್ತೊಂದು ಆರ್ಥಿಕ ಮಹಾಕುಸಿತದ ಮುನ್ಸೂಚನೆ ದೊರೆತು ಜಗತ್ತು ತಲ್ಲಣಗೊಂಡಿತ್ತು. ಇದು ಅಮೆರಿಕದಲ್ಲಿ ಡಬಲ್ ಡಿಪ್ ಡಿಪ್ರೆಷನ್ ಸ್ಥಿತಿ. ಅಂದರೆ ಈಗಾಗಲೇ ಒಂದು ಬಿಕ್ಕಟ್ಟಿನಿಂದ ಪೂರ್ತಿ ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೊಂದು ಆರ್ಥಿಕ ಕುಸಿತದ ಭಯ!

೨೦೦೮ರ ಈ ಕುಸಿತವಾದಾಗ ಅಮೆರಿಕ ಸರ್ಕಾರ ಹಾಗೂ ಅನೇಕ ಆರ್ಥಿಕ ಪಂಡಿತರು ಗೃಹಸಾಲ ಮಾರುಕಟ್ಟೆಯನ್ನು ದೂರಿದರಾಗಲೀ ಈ ಸಮಸ್ಯೆಯ ಕಾರಣವನ್ನು ಗುರಿತಿಸಿ ಅದಕ್ಕೆ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡಲಿಲ್ಲ.

ಇಷ್ಟಕ್ಕೆಲ್ಲ ಇದ್ದ ಮೂಲ ಕಾರಣವನ್ನು ಹೆಚ್ಚಿನ ವಿವರಗಳನ್ನೂ ಅಂಕಿ ಅಂಶಗಳನ್ನು ನೀಡುವ ಗೊಡವೆಗೆ ಹೋಗದೇ ಅತ್ಯಂತ ಸರಳವಾಗಿ ಹೀಗೆ ಹೇಳಬಹುದು - ಅದು ಅಮೆರಿಕ ಕೇಂದ್ರಿತ ಜಾಗತಿಕ ಮಾರುಕಟ್ಟೆ ವ್ಯವಸ್ಥೆ ನೈಜವಾದ ಆರ್ಥಿಕತೆಯಿಂದ (ಅಂದರೆ ಉತ್ಪಾದನೆಯನ್ನು, ಉದ್ಯೋಗವನ್ನು ಆಧರಿಸಿದ ಆರ್ಥಿಕತೆ) ವಿಮುಖಗೊಂಡು ಹಣಕಾಸು ಬಂಡವಾಳವನ್ನು ಅಗಾಧವಾಗಿ ಸಂಚಯಿಸಿಕೊಳ್ಳುತ್ತಾ ಹೋದದ್ದು. ಕೊನೆಗೆ ಇಡೀ ಆರ್ಥಿಕತೆಯೇ ಸಾಲದ ವ್ಯಸನಕ್ಕೊಳಗಾಗಿ ಈಗ ದಿವಾಳಿ ಹಂತಕ್ಕೆ ತಲುಪಿದ್ದು. ಉತ್ಪಾದನೆ ಆಧಾರಿತ ಕೈಗಾರಿಕೆ ಮತ್ತು ಸೇವಾಕ್ಷೇತ್ರಗಳು ಒಂದು ಹಂತದಲ್ಲಿ ಸ್ಥಗಿತಗೊಂಡು ಸಾಲಾಧಾರಿತ ಸಟ್ಟಾ ವ್ಯಾಪಾರ (speculative Buisiness ದ ಪ್ರಾಬಲ್ಯ ತೀವ್ರಗೊಂಡಿದ್ದು. ಇದು ಬೇರೇನೂ ಆಗಿರದೇ ಹಣಕಾಸು ಮಾರುಕಟ್ಟೆಯೊಳಗಿನ ಜೂಜು ಮಾತ್ರವಾಗಿದ್ದದ್ದು. ಅಮೆರಿಕದಲ್ಲಿ ಎಲ್ಲಾ ಕ್ಷೇತ್ರಗಳನ್ನೂ ಗಣನೆಗೆ ತೆಗೆದುಕೊಂಡರೆ ೧೯೫೪ರಲ್ಲಿ ಒಟ್ಟು ಜಿಡಿಪಿಗೆ ಹೋಲಿಸಿ ನೋಡಿದಾಗ ಅಲ್ಲಿನ ಸಾಲ ಶೇಕಡಾ ೧೫೩ರಷ್ಟಿದ್ದರೆ ೨೦೦೭ರಲ್ಲಿ ಶೇಕಡಾ ೩೭೩ರಷ್ಟಿತ್ತೆಂದರೆ ಸಾಲದ ಪಾತ್ರವನ್ನು ಊಹಿಸಬಹುದು. ಮಾತ್ರವಲ್ಲ ಅತ್ತ ನೈಜ ಆರ್ಥಿಕತೆ ಯಾವ ಬೆಳವಣಿಗೆಯನ್ನೂ ಕಾಣದೇ ಬಡತನ, ನಿರುದ್ಯೋಗಗಳು ಕ್ರಮೇಣ ಹೆಚ್ಚತೊಡಗಿದ್ದರೆ ಆರ್ಥಿಕತೆಯನ್ನು ಹೀಗೆ ಬರೀ ಪೇಪರ್ ಮೇಲಿನ (ಕಂಪ್ಯೂಟರ್ ಎಂದು ಓದಿಕೊಳ್ಳಿ) ಹಣದ ಮೇಲೆಯೇ ನಿಲ್ಲಿಸಿದ ಪರಿಣಾಮವಾಗಿ ಕಾರ್ಪೊರೇಷನ್‌ಗಳು ವಿಪರೀತ ಲಾಭ ಮಾಡತೊಡಗಿದವು. ಮಧ್ಯಮ ವರ್ಗದವರ ಆದಾಯದಲ್ಲಿ ಅಂತಹ ಏರಿಕೆ ಇಲ್ಲದಿದ್ದರೂ ಈ ಹಣಕಾಸು ಸಂಸ್ಥೆಗಳು ಸಾವಿರ ಸಾವಿರ ಪಟ್ಟು ಲಾಭ ಮಾಡಿಕೊಂಡವು. ಅಮೇರಿಕಾದಲ್ಲಿ ೨೦೦೧ರಲ್ಲಿ ಹಣಕಾಸು ವ್ಯವಸ್ಥೆಯ ತುತ್ತತುದಿಯಲ್ಲಿದ್ದ ಶೇ೧ರಷ್ಟು ಹಣಕಾಸು ಬಂಡವಾಳವು ಕೆಳಹಂತದ ಶೇ. ೮೦ರಷ್ಟು ಜನರ ಒಟ್ಟು ಆದಾಯದ ನಾಲ್ಕು ಪಟ್ಟು ಇತ್ತು. ೨೦೦೬ರಲ್ಲಿ ಅಮೆರಿಕಾದ ೬೦ ಅತ್ಯಂತ ಶ್ರೀಮಂತರ ಬಳಿ ೬೩೦ ಬಿಲಿಯ ಡಾಲರುಗಳಷ್ಟು ಮೊತ್ತದ ಸಂಪತ್ತು ಶೇಖರಣೆಗೊಂಡಿತ್ತು!. ಆರ್ಥಿಕತೆ ಎಂದರೇ ಹಣಕಾಸು ಆರ್ಥಿಕತೆ ಎಂದು ಆದ ಪರಿಣಾಮವಾಗಿ ಇಡೀ ವ್ಯವಸ್ಥೆಯನ್ನು ನಿಯಂತ್ರಿಸುವವರೇ ಈ ಕಾರ್ಪೊರೇಟರ್‌ಗಳಾದರು. ಹೀಗೆ ಪ್ರಜಾಪ್ರಭುತ್ವ ವ್ಯವಸ್ಥೆಗಳು ಕಾರ್ಪೊರೇಟ್ ಪ್ರಭುತ್ವಗಳಾಗಿ ಪರಿವರ್ತನೆಯಾಗಿದ್ದವು. 


ಆದರೆ ಒಳಗೆ ಯಾವ ಹೂರಣವೂ ಇಲ್ಲದೇ ಹೀಗೆ ಬಲೂನಿನಂತೆ ಊದಿಕೊಳ್ಳುತ್ತಲೇ ಹೋದ ಆರ್ಥಿಕತೆ ಭಾರೀ ಸದ್ದಿನೊಂದಿಗೆ ಒಡೆದು ಜಗತ್ತಿನ ಆರ್ಥಿಕ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡುವ ಸೂಚನೆ ೨೦೦೮ರಲ್ಲಿ ಸಿಕ್ಕಿತ್ತು. ಆದರೆ ತಾವು ಆರ್ಥಿಕತೆಯಲ್ಲಿ ಸೃಷ್ಟಿಸಿದ್ದ ನಿಜವಾದ ಸಮಸ್ಯೆಯನ್ನು ಸರಿಪಡಿಸಲು ಬಂಡವಾಳದ ನೇತಾರರು ತಯಾರಿಲ್ಲ.

೧೯೩೦ರ ದಶಕದಲ್ಲೇ ರಲ್ಲೇ ಪ್ರಸಿದ್ಧ ಅರ್ಥಶಾಸ್ತ್ರಜ್ಞ  ಕೀನ್ಸ್ ಹೀಗೆ ಆರ್ಥಿಕತೆಯನ್ನು ಹಣಕಾಸಿನ ನೀರುಗುಳ್ಳೆಯ ಮಟ್ಟಕ್ಕೆ ಸೀಮಿತಗೊಳಿಸುವುದರ ಅಪಾಯವನ್ನು ವಿವರಿಸಿದ್ದರು. ಕೀನ್ಸ್ ಕೂಡಾ ಬಂಡವಾಳಶಹಿ ಪರವಾದ ಅರ್ಥಜ್ಞನೇ ಆಗಿದ್ದರೂ ಅವರು ಪ್ರತಿಪಾದಿಸಿದ್ದು ವಿವೇಕಶೀಲವಾದಂತಹ ಬಂಡವಾಳವಾದವನ್ನು. ಬದಲಾಗಿ ಇಂದಿರುವ ದುರಾಸೆಯ ಬಂಡವಾಳವಾದವನ್ನು ಖಂಡಿತಾ ಆಗಿರಲಿಲ್ಲ. ೧೯೮೦ರ ದಶಕದಲ್ಲೇ ಅಮೆರಿಕ ಕೇಂದ್ರಿತ ಜಾಗತಿಕ ಹಣಕಾಸು ವ್ಯವಸ್ಥೆಯ ಜಾಡು ಹಿಡಿದ ಪೌಲ್ ಸ್ವೀಜಿಯಂತಹ ಎಡಪಂಥೀಯ ಅರ್ಥಶಾಸ್ತ್ರಜ್ಞರೂ ಸಹ ಸನಿಹದಲ್ಲೇ ಬಂದೆರಗಲಿರುವ ಅಪಾಯವನ್ನು ತಿಳಿಸಿದ್ದರು. ಇದು ಇಡೀ ಜಗತ್ತನ್ನು ಮತ್ತೊಂದು ಆರ್ಥಿಕ ಕುಸಿತಕ್ಕೆ ಕೊಂಡೊಯ್ಯಲಿದೆ ಎಂದೂ ಅಂಕಿ ಅಂಶಗಳ ಸಮೇತ ತಿಳಿಸಿದ್ದರು. ಅವರು ಹೇಳಿದ್ದೆಲ್ಲಾ ಈಗ ಸಾಕ್ಷಾತ್ಕಾರವಾಗುತ್ತಿದೆ.  


ಜಾಗತೀಕರಣ ಎಂದರೆ ಅಮೇರಿಕೀಕರಣ ಎಂದು ಬಣ್ಣಿಸುವ ನಮ್ಮ ಡಾ. ಯು. ಆರ್. ಅನಂತಮೂರ್ತಿಯಂತಹವರ ಅಭಿಪ್ರಾಯ ಮುಖ್ಯವಾಗುವುದು ಈ ಕಾರಣದಿಂದಲೇ. 


ಇಂತಹ ಒಂದು ಸಂದರ್ಭದಲ್ಲಿ ಹುಟ್ಟಿಕೊಂಡಿರುವ ಅಮೆರಿಕದ ಈ ಚಳವಳಿ ’ವಾಲ್‌ಸ್ಟ್ರೀಟ್ ವಶಪಡಿಸಿಕೊಳ್ಳುವ ಕರೆನೀಡಿ ಹೊರಟಿರುವುದು ಇಡೀ ಜಗತ್ತಿನ ಪ್ರಜಾಪ್ರಭುತ್ವವಾದಿಗಳ ದೃಷ್ಟಿಯಿಂದ ಅತ್ಯಂತ ಸ್ವಾಗತಿಸಬೇಕಾದ ಬೆಳವಣಿಗೆ. ಈ ಕುರಿತು ಇತ್ತೀಚೆಗೆ ಪ್ರತಿಕ್ರಿಯಿಸಿರುವ ಜಗತ್ತಿನ ಜನಸಾಮಾನ್ಯರ ಸಾಕ್ಷಿಪ್ರಜ್ಞೆ ಎಂದೇ ಕರೆಯಬಹುದಾದ ನೋಮ್ ಚಾಮ್‌ಸ್ಕಿ ಕೂಡಾ ಈ ಚಳವಳಿಯನ್ನು ಸ್ವಾಗತಿಸಿದ್ದಾರೆ. ಆಶಾಭಾವನೆ ವ್ಯಕ್ತಪಡಿಸಿದ್ದಾರೆ. 


ಈ ಚಳವಳಿ ತನ್ನನ್ನು ತಾನು ’ನಾಯಕರಹಿತ’ ಎಂದು ಬಣ್ಣಿಸಿಕೊಂಡಿದೆ. ಆದರೆ ಇದರಲ್ಲಿ ಒಳಿತೂ ಉಂಟು, ಕೆಡುಕೂ ಉಂಟು. ಒಬ್ಬ ನಾಯಕ ಇಲ್ಲದೇ ಪ್ರತಿಯೊಂದು ನಿರ್ಧಾರವನ್ನೂ ಸಾಮೂಹಿಕವಾಗಿ ತೆಗೆದುಕೊಳ್ಳುತ್ತಿರುವ ಕಾರಣ ಸರ್ಕಾರಕ್ಕೆ ಈ ಚಳವಳಿಯನ್ನು ಹತ್ತಿಕ್ಕಲು ಸುಲಭಸಾಧ್ಯವಾಗಲಾರದು. ಮತ್ತು ಒಬ್ಬನ ಅಭಿಪ್ರಾಯವನ್ನು ಇಡೀ ಚಳವಳಿಯ ಮೇಲೆ ಹೇರಲು ಸಾಧ್ಯವಾಗಲಾರದು. ಆದರೆ ಇಡೀ ಜಗತ್ತಿನ ಚಳವಳಿಗಳನ್ನು ನೋಡಿದರೆ ಅಲ್ಲಿ ಒಬ್ಬ ನಾಯಕನಿರುತ್ತಾನೆ ಎಂದರೆ ಆತನ ಬೆನ್ನಿಗೆ ಒಂದು ಸಿದ್ದಾಂತವೂ ಇರುತ್ತದೆ. ಆ ಸಿದ್ದಾಂತ ಎಷ್ಟು ಮಾನವೀಯವಾಗಿರುತ್ತದೆಯೋ ಅಷ್ಟು ಗಟ್ಟಿತನ ಆ ಚಳವಳಿಗಿರುತ್ತದೆ. ಮಾತ್ರವಲ್ಲ ಈಗಿನ ಚಳವಳಿ ಪ್ರಮುಖವಾಗಿ ಅಲ್ಲಿನ ಮಧ್ಯಮ ವರ್ಗದ ಕೈಯಲ್ಲಿರುವುದರಿಂದ ಅದು ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸುತ್ತದೆ ಎನ್ನುವುದೂ ಸಂಶಯಕ್ಕೆಡೆಮಾಡುತ್ತದೆ. ಮಾತ್ರವಲ್ಲ. ಇಲ್ಲಿ ಹಲವಾರು ಸಿದ್ದಾಂತಗಳ ಕಾಕ್‌ಟೇಲ್. ಇಲ್ಲಿ ಕೂಡಾ ನೀತಿ ನಿರೂಪಣೆಗಳ ಮೇಲೆ, ಕಾರ್ಯಕರ್ತರ ಮೇಲೆ ತಂತಮ್ಮ ಸಿದ್ದಾಂತಗಳನ್ನು ಹೇರುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಪರಿಸ್ಥಿತಿ ಗೊಂದಲ ಮೂಡಿಸುವ ಸಾಧ್ಯತೆಯೂ ಇರುತ್ತದೆ. 


ಅಮೆರಿಕಕ್ಕೆ ಚಳವಳಿಗಳನ್ನು ಎಲ್ಲಾ ರೀತಿಯಲ್ಲೂ ಬಗ್ಗು ಬಡಿಯುವ ವಿಧಾನಗಳೂ ಗೊತ್ತಿವೆ. ಸೈನಿಕವಾಗಿಯೂ, ರಾಜಕೀಯವಾಗಿಯೂ ನೂರಾರು ಚಳವಳಿಗಳನ್ನು ಹುಟ್ಟು ಹಾಕಿದ ಹಾಗೂ ಬಗ್ಗುಬಡಿದ ಚರಿತ್ರೆಯೇ ಅಮೆರಿಕಕ್ಕೆ ಇದೆ. ಈಗ ಭುಗಿಲೆದ್ದ ಚಳವಳಿಯನ್ನು ಅಗತ್ಯ ಬಂದರೆ ಅತ್ಯಂತ ತೀವ್ರವಾಗಿ ಸರ್ಕಾರ ಹತ್ತಿಕ್ಕಬಹುದು. ಈಗ ಅಮೆರಿಕದಲ್ಲಿ ಮತ್ತೊಂದು ತಿಯನನ್‌ಮನ್ ಚೌಕ ಮರುಕಳಿಸಬಹುದು. ಆದರೆ ಇಂದಿನ ಅಮೆರಿಕದ ಟೆಕ್ ಸ್ಯಾವಿ ಪೀಳಿಗೆಯ ಮುಂದೆ ಅಂತದ್ದೊಂದನ್ನು ನಡೆಸುವುದೇನೂ ಸುಲಭಸಾಧ್ಯವಲ್ಲ ಬಿಡಿ. ಎಚ್ಚೆತ್ತ ಜನಶಕ್ತಿಯ ಮುಂದೆ ಎಲ್ಲಾ ಬಗೆಯ ಸರ್ವಾಧಿಕಾರಗಳೂ ಮಂಡಿಯೂರಿರುವುದೂ ಇತಿಹಾಸವೇ ಎಲ್ಲವೇ?  


ಇದೇ ಸಂದರ್ಭ ಅಮೆರಿಕನ್ನರಿಗೆ ಮತ್ತೊಂದು ಅವಕಾಶವನ್ನೂ ಸೃಷ್ಟಿಸಿದೆ. ಅದೇನೆಂದರೆ ಅವರು ನಿವಾದ ಅರ್ಥದಲ್ಲಿ ಮನುಷ್ಯರಾಗುವ ಅವಕಾಶ!. ವಾಸ್ತವದಲ್ಲಿ ಇಂದು ಅಮೆರಿಕದ ಶ್ರೀಮಂತಿಕೆ ನಿಂತಿರುವುದೇ ತೃತೀಯ ಜಗತ್ತಿನ ಸಂಪತ್ತಿನ ಲೂಟಿಯನ್ನಾಧರಿಸಿ ಹಾಗೂ ಬಡದೇಶಗಳ ಜನರ ಅಗ್ಗದ ಶ್ರಮವನ್ನು ದೋಚಿದ್ದರ ಪರಿಣಾಮವಾಗಿ. ಯಾವ ಸರ್ಕಾರಗಳು ಬಂಡವಾಳಿಗರ ಲಾಭಕ್ಕಾಗಿ ಸರಕು ಸಂಸ್ಕೃತಿಯನ್ನು, ಕೊಳ್ಳುಬಾಕ ಸಂಸ್ಕೃತಿಯನ್ನು ಪ್ರೇರೇಪಿಸಿ ತಾವು ಸಾಲದ ಬಲೆಯಲ್ಲಿ ಬೀಳುವ ಜೊತೆಗೆ ಜನರನ್ನೂ ಸಾಲದ ವ್ಯಸನಕ್ಕೆ ಗುರಿಮಾಡಿದ್ದರೋ ಆ ಎಲ್ಲಾ ಸರ್ಕಾರಗಳನ್ನೂ ಅಮೆರಿಕನ್ನರು ಚುನಾವಣೆಯಿಂದ ಚುನಾವಣೆಗೆ ಗೆಲ್ಲಿಸಿಕೊಂಡೇ ಬಂದಿದ್ದಾರೆ. ತಮ್ಮ ಸರ್ಕಾರಗಳ ಇಂತಹ ನೀತಿಗಳನ್ನು ಹಾಗೂ ತಮ್ಮ ಅನುಭೋಗೀ ಸಂಸ್ಕೃತಿಯ ಕುರಿತ ದೊಡ್ಡ ಮಟ್ಟದಲ್ಲಿ ಚಿಂತನೆ ನಡೆಸುವ ಅವಕಾಶವನ್ನಾದರೂ ಈಗಿನ ಚಳವಳಿ ಸೃಷ್ಟಿಸಿದರೆ ಅದೇ ಚಳವಳಿಯ ಅತಿದೊಡ್ಡ ಯಶಸ್ಸಾಗಲಿದೆ. 



-ಹರ್ಷ ಕುಮಾರ್ ಕುಗ್ವೆ

Tuesday, October 4, 2011

ಇವರು ಸಮೂಹ ಸನ್ನಿಗೊಳಗಾದರೆ ಪತ್ರಿಕೋದ್ಯಮ ಇರುತ್ತದೆಯೇ?


ಪತ್ರಿಕೆಗಳನ್ನು ವಿತರಿಸುವ ಹುಡುಗರು ಇಲ್ಲದಿದ್ದರೆ ಎಂಬ ಕಾಲ್ಪನಿಕ ಪ್ರಶ್ನೆಯೊಂದನ್ನಿಟ್ಟುಕೊಂಡು ಛಾಯಾಕನ್ನಡಿ ಬ್ಲಾಗ್ ನ ಶಿವು ಕೆ. ಲೇಖನವೊಂದನ್ನು ಬರೆದಿದ್ದಾರೆ. ಇವತ್ತಿನ ಪತ್ರಿಕೋದ್ಯಮದಲ್ಲಿ ಪತ್ರಿಕೆ ಹಂಚುವ ಹುಡುಗರ ಅನಿವಾರ್ಯತೆ ಮತ್ತು ಅವರ ಕೊಡುಗೆಯನ್ನು ಈ ಲೇಖನ ವಿವರಿಸುತ್ತದೆ. -ಸಂ

ಕೇಂದ್ರ ಸರ್ಕಾರವನ್ನು ನಡುಗಿಸಿ, ವಿಶ್ವದ ಗಮನವನ್ನೇ ಸೆಳೆದ ಅಣ್ಣಾ ಅಜಾರೆ ಭ್ರಷ್ಟಾಚಾರ ವಿರುದ್ದದ ಉಪವಾಸ ಸತ್ಯಗ್ರಹ ನಮಗೆಲ್ಲಾ ಗೊತ್ತೇ ಇದೆ. ಪ್ರತಿಯೊಬ್ಬ ನಾಗರೀಕನಲ್ಲೂ ಭ್ರಷ್ಟಾಚಾರವನ್ನು ಹೋಗಲಾಡಿಸಲು ಹೋಆಟ ಮಾಡಬೇಕೆನ್ನುವ ಸಂಚಲನವನ್ನೇ ಉಂಟು ಮಾಡಿದ ಆರೋಗ್ಯಕರ ಸಮೂಹ ಸನ್ನಿ ಎನ್ನಬಹುದು.  ಇಂಥ ಅಓಗ್ಯಕರ ಸಮೂಹ ಸನ್ನಿ ನಮಗೆ ಬೇಕಿತ್ತು.

ಇಂಥದ್ದೇ ಒಂದು ಸಮೂಹ ಸನ್ನಿ ನಮ್ಮ ಪೇಪರ್ ಹಾಕುವ ಹುಡುಗರಲ್ಲಿ ನೆಗಟೀವ್ ಆಗಿ ಆಗಿಬಿಟ್ಟರೆ  ಏನಾಗಬಹುದು? ಅಂತ ಒಮ್ಮೆ ಪ್ರಶ್ನಿಸಿಕೊಂಡೆ. ನಿಜಕ್ಕೂ ಒಂದು ಕ್ಷಣ ಹೃದಯ ಬಡಿತ ನಿಂತಂತೆ ಆಗಿ ಆತಂಕ ದಿಗಿಲುಗಳು ಒಟ್ಟಿಗೆ ಮೈಮನಸ್ಸುಗಳನ್ನು ಆವರಿಸಿಕೊಂಡವು.  ಇದೇನಿದು ಪೇಪರ್ ಹಾಕುವ ಹುಡುಗರ ಮನಸ್ಸು ಬದಲಾದರೇ ಹೃದಯಬಡಿತ ನಿಲ್ಲುವಂತದ್ದು, ದಿಗಿಲು, ಆತಂಕ ಪಡುವಂತದ್ದು ಏನಾಗಿಬಿಡುತ್ತದೆ ಅಂತ ನಿಮ್ಮಲ್ಲಿ ಪ್ರಶ್ನೆ ಮೂಡಬಹುದು.  ವಿವರಿಸಿಬಿಡುತ್ತೇನೆ ಬಿಡಿ..

ಎಲ್ಲೋ ಪುಟ್ಟ ಗುಡಿಸಲಿನಲ್ಲಿ ಮಲಗಿದ್ದ ಒಬ್ಬ ಹದಿನೆಂಟು ವರ್ಷದ ಪೇಪರ್ ಹಾಕುವ ಹುಡುಗನಿಗೆ ಒಂದು ಅಲೋಚನೆ ಬರುತ್ತದೆ.  ಅದನ್ನು ತನ್ನ ಇತರ ಪೇಪರ್ ಹಾಕುವ ಹುಡುಗರಿಗೆ ಹೇಳುತ್ತಾನೆ. ಅದು ಒಬ್ಬರಿಂದ ಒಬ್ಬರಿಗೆ ಎಸ್ ಎಂ ಎಸ್  ತರ ಸಾಗಿ ಹತ್ತು..ನೂರು...ಸಾವಿರ...ಕೊನೆಗೆ ಭಾರತದಾದ್ಯಂತ ಮುಂಜಾನೆ ದಿನಪತ್ರಿಕೆ ಹಂಚುವ ಎಲ್ಲಾ ಹುಡುಗರ ಮನಸ್ಸಿನಲ್ಲಿಯೂ ಆದೇ ಅಲೋಚನೆ ಗಟ್ಟಿಯಾಗಿಬಿಡುತ್ತದೆ.  ನಿಮಗೆ ಗೊತ್ತಿರಲಿ, ನಮ್ಮ ಭಾರತದಾದ್ಯಂತ ಪೇಪರ್ ಹಾಕುವ ಹುಡುಗರೆಲ್ಲರ ವಯಸ್ಸು ಹದಿನೈದರಿಂದ ಇಪ್ಪತ್ತೈದು. ಈ ಪೇಪರ್ ಹಾಕುವ ಕೆಲಸವನ್ನು ಹಣವಂತರ ಮಕ್ಕಳು ಮಾಡುವುದಿಲ್ಲ. ಶೋಕಿಗೆ ಅಥವ ವ್ಯಾಯಾಮಕ್ಕೆ ಆಗುತ್ತೆ ಅಂದುಕೊಂಡು ಬರುವವರು ಹೆಚ್ಚೆಂದರೆ ಒಂದು ವಾರ-ಹದಿನೈದು ದಿನವಷ್ಟೆ. ಅಷ್ಟರಲ್ಲಿ ಬೇಸರವಾಗಿ ಮನೆಯಲ್ಲಿ ಸುಖನಿದ್ರೆ ಮಾಡುತ್ತಾರೆ. ಇನ್ನೂ ಮೇಲ್ಮದ್ಯಮ, ಮದ್ಯಮ ವರ್ಗದ ಹುಡುಗರು ಇತ್ತ ಸುಳಿಯುವುದಿಲ್ಲ. ಸುಳಿದರೂ ಅವರ ಕತೆ ಶ್ರೀಮಂತ ಹುಡುಗರ ಕತೆಯೇ!  ಇಲ್ಲಿ ಅವರ ತಂದೆ ತಾಯಿಗಳಿಗೆ ಗೌರವ ಅಂತಸ್ಥು, ಪಕ್ಕದ ಮನೆಯವರು, ಸಂಬಂಧಿಕರು ಏನಂದುಕೊಳ್ಳುತ್ತಾರೋ ಎನ್ನುವ ಕಾರಣಕ್ಕೆ ಅವರ ಮಕ್ಕಳನ್ನು ಈ ಕೆಲಸಕ್ಕೆ ಕಳಿಸುವುದಿಲ್ಲ. ಇನ್ನೂ ಕೆಳ ಮದ್ಯಮವರ್ಗದವರು ಸ್ವಲ್ಲ ಜನ ಬರುತ್ತಾರಾದರೂ ಅವರು ತಾತ್ಕಾಲಿಕ ಅಷ್ಟೆ. ಇಂಥ ಕೆಲಸಕ್ಕೆ ಬಡತನದಲ್ಲಿರುವವರು, ಸ್ಲಮ್‌ನಲ್ಲಿರುವ ಹುಡುಗರು, ಮನೆಯಲ್ಲಿ ಕಷ್ಟವಿರುವವರು. ಇವರೇ ಮುಂಜಾನೆ ದಿನಪತ್ರಿಕೆ ಸಂತೆಯ ಜೀವಾಳ. ಈ ಹುಡುಗರ ಮನಸ್ಥಿತಿಯನ್ನು ಎಂಥದ್ದು ಅಂದರೆ ಇವರೊಮ್ಮೆ ಮನಸ್ಸು ಮಾಡಿದರೆ ಕಿತ್ತು ಹೋದ ಕಚಡ ಮಾಸ್ ಸಿನಿಮವನ್ನು ಸೂಪರ್ ಹಿಟ್ ಮಾಡಿಬಿಡಬಲ್ಲರು. ತುಂಬಾ ಚೆನ್ನಾಗಿರುವ ಮಾಸ್ ಚಿತ್ರವನ್ನು ಪ್ಲಾಪ್ ಮಾಡಿ ಡಬ್ಬದೊಳಗೆ ಹಾಕಿಬಿಡುವಂತೆ ಮಾಡುವವರು.  ಪಾದರಸಕ್ಕಿಂತ ವೇಗವಾಗಿ ಸದಾ ಚಂಚಲತೆಯನ್ನು ಹೊಂದಿರುವ, ಇವರು ಇದರಿಂದೇನು ಲಾಭವಿಲ್ಲ,  ಇಷ್ಟು ವರ್ಷ ನಮ್ಮ ಮುಂಜಾನೆ ಸಕ್ಕರೆ ನಿದ್ರೆಗಳನ್ನು ಹಾಳುಮಾಡಿಕೊಂಡು ಪೇಪರ್ ಹಾಕುವ ಕೆಲಸಕ್ಕೆ ನಿಂತೆವಲ್ಲ, ಇದನ್ನು ಮನೆ ಮನೆಗೆ ಹಾಕಿ ಯಾರನ್ನು ಉದ್ದಾರ ಮಾಡಬೇಕಾಗಿದೆ?  ನಾಳೆಯಿಂದ ಯಾರು ಪೇಪರ್ ಹಾಕುವ ಕೆಲಸಕ್ಕೆ ಹೋಗುವುದು ಬೇಡ ಅಂತ ತೀರ್ಮಾನಿಸಿ ಅಣ್ಣಾ ಅಜಾರೆಯಷ್ಟೇ ದೊಡ್ಡ ಸಂಚಲನ ಉಂಟು ಮಾಡಿದ ಸಮೂಹ ಸನ್ನಿಗೊಳಗಾಗಿಬಿಟ್ಟರೆ ಮುಂದೇನಾಗಬಹುದು..

ಮೊದಲು ಕೆಲಸ ಕಳೆದುಕೊಳ್ಳುವುದು ನಮ್ಮಂಥ ನೂರಾರು ಸಾವಿರಾರು ವೆಂಡರುಗಳು. ಒಬ್ಬ ವೆಂಡರ್ ಹೆಚ್ಚೆಂದರೆ ೨೦೦ ದಿನಪತ್ರಿಕೆಯನ್ನು ಮುಂಜಾನೆ ಮನೆಮನೆಗಳಿಗೆ ವಿತರಿಸಬಹುದು ಅದಕ್ಕಿಂತ ಹೆಚ್ಚು ಸಾಧ್ಯವೇ ಇಲ್ಲ.  ಹಾಗೆ ಆದಲ್ಲಿ ಒಬ್ಬ ವೆಂಡರ್ ಆದಾಯ ನೂರರಲ್ಲಿ ೯೦% ಮಾಯವಾಗಿ  ೧೦% ಗಿಳಿಯುತ್ತದೆ.

ನಂಬರ್ ಒನ್ ಎಂದು ಮೀಸೆ ತಿರುಗಿಸುವ ಟೈಮ್ಸ್ ಆಫ್ ಇಂಡಿಯ ಸರ್ಕುಲೇಷನ್ ಐದು ಲಕ್ಷ ನಲವತ್ತು ಸಾವಿರದಿಂದ ಐವತ್ತನಾಲ್ಕು ಸಾವಿರಕ್ಕೆ ಇಳಿಯುತ್ತದೆ.

ಡೆಕ್ಕನ್ ಹೆರಾಲ್ಡ್ ಒಂದು ಲಕ್ಷದಿಂದ ಹತ್ತು ಸಾವಿರಕ್ಕೆ, ಹಿಂದೂ ದಿನಪತ್ರಿಕೆ ಅರವತ್ತು ಸಾವಿರದಿಂದ ಆರುಸಾವಿರಕ್ಕೆ, ಇಂಡಿಯನ್ ಎಕ್ಸ್ ಪ್ರೆಸ್ ನಲವತ್ತು ಸಾವಿರದಿಂದ ನಾಲ್ಕು ಸಾವಿರಕ್ಕೆ, ಡೆಕ್ಕನ್ ಕ್ರಾನಿಕಲ್ ಇಪ್ಪತ್ತು ಸಾವಿರದಿಂದ ಎರಡು ಸಾವಿರಕ್ಕೆ, ಡಿ ಎನ್ ಎ ಪತ್ರಿಕೆ ಹದಿನೆಂಟು ಸಾವಿರದಿಂದ ಸಾವಿರದ ಎಂಟು ನೂರಕ್ಕೆ ಇಳಿಯುತ್ತದೆ. ಮತ್ತೆ ಕನ್ನಡ ದಿನಪತ್ರಿಕೆಗಳಲ್ಲಿ ಎರಡು ಲಕ್ಷವಿರುವ ವಿಜಯ ಕರ್ನಾಟಕ ಇಪ್ಪತ್ತು ಸಾವಿರಕ್ಕೆ ಒಂದುಲಕ್ಷ ನಲವತ್ತು ಸಾವಿರವಿರುವ ಪ್ರಜಾವಾಣಿ ಹದಿನಾಲ್ಕು ಲಕ್ಷಕ್ಕೆ, ಅರವತ್ತು ಸಾವಿರವಿರುವ ಕನ್ನಡಪ್ರಭ ಆರುಸಾವಿರಕ್ಕೆ, ಮುವತ್ತು ಸಾವಿರವಿರುವ ಉದಯವಾಣಿ ಮೂರು ಸಾವಿರಕ್ಕೆ, ಹದಿನೆಂಟು ಸಾವಿರವಿರುವ ಸಂಯುಕ್ತ ಕರ್ನಾಟಕ ಸಾವಿರದ ಎಂಟುನೂರಕ್ಕೆ, ಇದು ಬಿಟ್ಟು ಹೊಸದಿಗಂತ, ವ್ಯಾಪಾರಿ ದಿನಪತ್ರಿಕೆಗಳಾದ ಎಕನಾಮಿಕ್ಸ್ ಟೈಮ್ಸ್, ಬುಸಿನೆಸ್ ಲೈನ್, ಬುಸಿನೆಸ್ ಸ್ಟಾಂಡರ್ಡ್, ಇತ್ಯಾದಿಗಳು ನೂರು ಇನ್ನೂರು ಲೆಕ್ಕಕ್ಕೆ ಇಳಿದುಬಿಡುತ್ತವೆ. ಇದು ಬೃಹತ್ ಬೆಂಗಳೂರಿನ ಲೆಕ್ಕಚಾರ. ಇತರೆ ನಗರಗಳು, ಇತರೆ ರಾಜ್ಯಗಳು, ಪೂರ್ತಿ ಭಾರತದ ಮುಂಜಾನೆ ದಿನಪತ್ರಿಕೆ ವಿತರಣೆ ಲೆಕ್ಕಾಚಾರ ಕೇವಲ ೧೦% ಗೆ ಇಳಿದುಬಿಡುತ್ತದೆ.

ನೂರು ರೂಪಾಯಿಯನ್ನು ನೋಡುತ್ತಿದ್ದ ನನ್ನಂತ ವೆಂಡರ್ ಹತ್ತು ರೂಪಾಯಿಗೆ ಎಷ್ಟು ದಿನ ಇಂಥ ವ್ಯಾಪಾರ ಮಾಡಿಯಾನು? ವಿಧಿಯಿಲ್ಲದೇ ಅವನು ಬೇರೆ ಉದ್ಯೋಗ, ಅಥವ  ವ್ಯಾಪರವನ್ನೋ ಹುಡುಕಿಕೊಳ್ಳುತ್ತಾನೆ.  ಅಲ್ಲಿಗೆ ಮೇಲೆ ವಿವರಿಸಿದ ಹತ್ತು ಪರಸೆಂಟ್ ಕೂಡ ಇಲ್ಲವಾಗುತ್ತದೆ.

ಯಾರು ಇದ್ದರೆಷ್ಟು ಬಿಟ್ಟರೆಷ್ಟು ಅಂದುಕೊಂಡ ಪತ್ರಿಕಾ ಕಛೇರಿಗಳು ತಾವೆ ವಿತರಣೆ ಮಾಡುತ್ತೇವೆ ಅಂತ ಮುಂದೆ ನಿಂತರೆ ಅವರಿಗೆ ಮನೆಮನೆಗೆ ತಲುಪಿಸಲು ಅವರ ವರದಿಗಾರರನ್ನು ಬಿಡುತ್ತಾರಾ, ಎಸಿ ರೂಮಿನಲ್ಲಿ ಕುಳಿತ ಡೆಸ್ಕ್ ಆಪರೇಟರುಗಳಿಗೆ ಸೈಕಲ್ ಕೊಟ್ಟು ಮನೆಮನೆಗೆ ಕಳಿಸುತ್ತಾರಾ? ಈಗಿನ ವರದಿಗಾರರು ಮತ್ತು ಡೆಸ್ಕ್ ಆಪರೇಟರುಗಳು ಆಕಾಶದಿಂದ ಇಳಿದುಬಂದ ರಾಜಕುಮಾರರಂತೆ ವರ್ತಿಸುವ ಇಂದಿನ ಕಾಲದಲ್ಲಿ ಅವರನ್ನು ಮನೆಮನೆಗೆ ಪೇಪರ್ ಹಂಚುವ ಕೆಲಸಕ್ಕೆ ಹಚ್ಚಿಬಿಟ್ಟರೆ ಅವರ ಅಹಂಗೆ ಕುಂದು ಬಂದಂತಾಗಿ ಅವರು ಖಂಡಿತ ಕೆಲಸ ಬಿಡುತ್ತಾರೆ. ಇದೆಲ್ಲವನ್ನು ಬಿಟ್ಟು ಮಾರುಕಟ್ಟೆ ವಿಭಾಗದ ಪ್ರತಿನಿಧಿಗಳಿಗೆ ಸೈಕಲ್ಲು, ಮೋಟರ್ ಸೈಕಲ್ ಕೊಟ್ಟು ಮನೆಮನೆಗೆ ಪೇಪರ್ ಹಾಕಲು ಕಳಿಸಿದರೂ ಇವರ ಅರ್ಹತೆಯೂ ವೆಂಡರಿನಷ್ಟೆ. ಮತ್ತೆ ಈಗಾಗಲೇ ಐದು ಆರಂಕಿ ಪಗಾರದ ರುಚಿಯನ್ನು ನೋಡಿರುವ ಇವರೆಲ್ಲಾ ಐನೂರು ಸಾವಿರಕ್ಕೆ ಕೆಲಸ ಮಾಡುತ್ತಾರಾ? ಅಲ್ಲಿಗೆ ಇದು ಕಾರ್ಯಸಾಧುವಲ್ಲವೆಂದಾಯಿತು.

ಈ ಪತ್ರಿಕೆ ಕಛೇರಿಯವರು ಮೊಂಡುಬಿದ್ದು ವೆಂಡರುಗಳು ಬೇಡ, ಪೇಪರ್ ಹಾಕುವ ಹುಡುಗರೂ ಬೇಡ ಅಂತ ಅಜೆಂಡ ಹೊರಡಿಸಿ, ಈ ದಿನಪತ್ರಿಕೆ ವಿತರಣೆ ಕೆಲಸಕ್ಕೆ ಹೊಸದಾಗಿ ನೂರಾರು ಜನರನ್ನು ನೇಮಿಸಿಕೊಂಡರೂ ಪ್ರತಿಯೊಬ್ಬನೂ ಹೆಚ್ಚೆಂದರೆ ಇನ್ನೂರು ಪೇಪರುಗಳನ್ನು ಮನೆಮನೆಗೆ ತಲುಪಿಸಬಹುದು....ಅಲ್ಲಿಗೆ ಅವನ ಕತೆಯೂ ವೆಂಡರ್‌ಗಿಂತ ವ್ಯತ್ಯಾಸವೇನು ಇಲ್ಲ. ಮತ್ತೆ ಅವನ ಕೆಲಸಕ್ಕೆ ವೆಂಡರಿಗೆ ಸಿಗುವ ೧೦% ಅಧಾಯವನ್ನೆ ಸಂಬಳವಾಗಿ ಕೊಟ್ಟರೆ ಅವನಿಗೆ ಅದು ಸಾಲದಾಗಿ ಒಂದೇ ತಿಂಗಳಿಗೆ ಕೆಲಸ ಬಿಟ್ಟು ಓಡುತ್ತಾನೆ. ಅಥವ ಅವರ ಸಂಬಳವನ್ನು ೧೦% ಗೆ ೯೦% ಸೇರಿಸಿ ಕೊಟ್ಟರೆ ಪತ್ರಿಕೆ ಕಂಪನಿಗಳು ಒಂದೇ ತಿಂಗಳಿಗೆ ಬಾಗಿಲು ಮುಚ್ಚಿಕೊಂಡು ಒಳಗೆ ಮಲಗಬೇಕಾಗುತ್ತದೆ.

ಶಿವು ಕೆ.
ಮತ್ತೇನು ಮಾಡಬಹುದು ಅಂತ ಬೇಎ ದಿಕ್ಕಿನಲ್ಲಿ ಅಲೋಚಿಸಿದಾಗ ಹೀಗೆ ಹೊಸದಾಗಿ ನೇಮಕ ಮಾಡಿಕೊಂಡ ನೂರಾರು ಜನರನ್ನೇ ಮನೆಮನೆಗಳಿಗೆ ವಿತರಿಸುವ ಬದಲು ನೂರು ಇನ್ನೂರು ಪತ್ರಿಕೆಗಳನ್ನು ನೇರವಾಗಿ ಎಲ್ಲಾ ಏರಿಯಗಳಲ್ಲಿರುವ ದೊಡ್ಡ-ಪುಟ್ಟ ಅಂಗಡಿಗಳಿಗೆ ಕೊಟ್ಟರೆ ಅವರು ಭರ್ಜರಿ ವ್ಯಾಪರ ಮಾಡಬಹುದು ಅಂದುಕೊಂಡರೆ ಅದು ಸುಳ್ಳೇ ಸುಳ್ಳು. ನಿಮಗೆ ಮತ್ತೊಂದು ವಿಚಾರ ಗೊತ್ತಿರಲಿ, ಬೆಂಗಳೂರಿನಲ್ಲಿ ಪ್ರಿಂಟ್ ಆಗುವ ಎಲ್ಲಾ ದಿನಪತ್ರಿಕೆಗಳ ಕೇವಲ ೧% ಮಾತ್ರ ಅಂಗಡಿಗಳಲ್ಲಿ ಸೇಲ್ ಆಗುತ್ತವೆ. ಎಷ್ಟೇ ಶ್ರಮವಹಿಸಿ ಚಾಣಕ್ಷತೆ ಮೆರೆದರೂ ಇದು ೫% ದಾಟುವುದಿಲ್ಲ. ಏಕೆ ದಾಟುವುದಿಲ್ಲವೆನ್ನುವುದಕ್ಕೆ ಕಾರಣಗಳನ್ನು ಕೊಡುತ್ತೇನೆ.  ಬೆಂಗಳೂರಿನ ಒಂದು ಏರಿಯದಲ್ಲಿ ನೂರು ಮೀಟರ್ ರಸ್ತೆಯ ಆ ಬದಿ ಈ ಬದಿ ಎರಡು ಅಂಗಡಿಗಳಿದ್ದರೂ ಆ ನೂರು ಮೀಟರ್ ಸುತ್ತಳತೆಯಲ್ಲಿರುವ ಒಂದು ಸಾವಿರ ಮನೆಗಳಲ್ಲಿ ಕೇವಲ ನಲವತ್ತು-ಐವತ್ತು ಮನೆಯವರು ಮಾತ್ರ ಮನೆಯಿಂದ ಹೊರಗೆ ವಾಕಿಂಗ್ ಅಂತ ಬಂದು ಪೇಪರ್ ಕೊಳ್ಳುತ್ತಾರೆ. ಅಲ್ಲಿಗೆ ೫೦ ಪೇಪರ್ ಮಾತ್ರ ಖರ್ಚಾಯಿತು.  ಉಳಿದ ಮನೆಯವರಿಗೆ ಪೇಪರ್ ಓದುವ ಆಸಕ್ತಿಯಿಲ್ಲ ಇಲ್ಲವಾ ಅಂದುಕೊಂಡರೆ ಅವರಲ್ಲಿ ಕಡಿಮೆಯೆಂದರೂ ಇನ್ನೂ ಏಳುನೂರು ಮನೆಗಳವರಿಗೆ ಪೇಪರ್ ಬೇಕಿದೆ. ಆದ್ರೆ  ನಮ್ಮ ಬೆಂಗಳೂರು ಇವರಿಗೆಲ್ಲಾ ಅದೆಂತ ಅರಾಮದಾಯಕ ಜೀವನವನ್ನು ಒದಗಿಸಿಕೊಟ್ಟಿದೆಯೆಂದರೆ ಅವರು ಕುಳಿತಲ್ಲೆ ಮಲಗಿದಲ್ಲೇ ಬೇಕಾದರೆ ವೆಂಡರುಗಳ ಜೊತೆ ಪೇಪರ್ ಹುಡುಗರ ಜೊತೆ ಫೋನಿನಲ್ಲೇ ಅರ್ಧಗಂಟೆ ಮಾತಾಡುತ್ತಾರೆ ಹೊರತು, ಮನೆಯಿಂದ ಹೊರಬಂದು ಮೆಟ್ಟಿಲಿಳಿದು ಪೇಪರ್ ಅಂಗಡಿಯಲ್ಲಿ ಪೇಪರ್ ಕೊಳ್ಳುವುದಿಲ್ಲ. ಇದೆಲ್ಲಾ ನಮ್ಮ ಬೆಂಗಳೂರು ಇವರಿಗೆ ಕರುಣಿಸಿರುವ ಮಾರ್ವಾಡಿ ಬದುಕಿನ ಗಿಪ್ಟ್. ಇದೇ ಲೆಕ್ಕಾಚಾರದಲ್ಲಿ ಈಗ ನೂರು ಮೀಟರ್ ಅಂತರದಲ್ಲಿರುವ ಸಾವಿರ ಮನೆಗಳಲ್ಲಿ ವೆಂಡರುಗಳು-ಪೇಪರ್ ಹುಡುಗರ ಮೂಲಕ ಏಳುನೂರಕ್ಕೂ ಹೆಚ್ಚು ಮನೆಗಳಿಗೆ,  ನೂರು ಮನೆಗಳಿರುವ ಅಪಾರ್ಟ್‌ಮೆಂಟಿನಲ್ಲಿ ೯೫ ಮನೆಗಳ ಬಾಗಿಲಿಗೆ, ಮೆಟ್ಟಿಲ ಮೇಲೆ, ಬಾಲ್ಕನಿಗಳ ಮೇಲೆ, ಪೇಪರುಗಳು ಸುರಕ್ಷಿತವಾಗಿ ತಲುಪುತ್ತಿವೆ ಎನ್ನುವ ವಿಚಾರ ನಿಮ್ಮ ಮನಸ್ಸಿನಲ್ಲಿರಲಿ. ನಾನಿಲ್ಲಿ ವಿವರಿಸಿದ ವಿಚಾರಗಳು ಬೆಂಗಳೂರಿಗೆ ಸೀಮಿತವಾದರೂ ಇತರೆ ನಗರಗಳು ಹಾಗೂ ನಮ್ಮ ಭಾರತದಾದ್ಯಂತ ಒಂದರಡು % ಹೆಚ್ಚು ಕಡಿಮೆಯಾದರೂ ದೊಡ್ಡ ಬದಲಾವಣೆಯೇನಿಲ್ಲ.

ಮತ್ತೊಂದು ವಿಚಾಅವಿದೆ. ಅದು ಜಾಹೀರಾತಿಗೆ ಸಂಬಂಧಿಸಿದ್ದು.  ನೀವ್ಯಾರು ಬೇಕಾಗಿಲ್ಲ. ನೀವಿಲ್ಲದಿದ್ದಲ್ಲಿ ನಮ್ಮ ಪತ್ರಿಕೆ ನಿಂತುಹೋಗುವುದಿಲ್ಲ ನಮಗೆ ಜಾಹಿರಾತಿನ ಅದಾಯವಿದೆ. ಅದರಿಂದ ನಾವು ಪತ್ರಿಕೆಯನ್ನು ನಡೆಸುತ್ತೇವೆ ಬೇಕಾದರೆ  ಪತ್ರಿಕೆಯನ್ನು ಉಚಿತವಾಗಿ ಹಂಚುತ್ತೇವೆ ಅಂತ ಶೂರ ಧೀರ ಏಕಾಂಗಿ ವೀರರಂತೆ ಮುನ್ನುಗ್ಗಿದರೂ ಹಾಗೆ ಉಚಿತವಾಗಿ ಮನೆಮನೆಗೆ ತಲುಪಿಸಲು ನೂರಾರು ಸಾವಿರಾರು ಕೆಲಸಗಾರರು ಬೇಕಾಗುತ್ತದೆ.  ಮತ್ತೆ ಅವರೆಲ್ಲಾ ವೆಂಡರುಗಳು ಮತ್ತು ಪೇಪರ್ ಬಾಯ್‌ಗಳಾಗುವುದಕ್ಕೆ ಆಗುವುದಿಲ್ಲ. ಈ ರೀತಿ ಉಚಿತವಾಗಿ ಹಂಚಿದರೂ ಈಗಿನ ಜಾಹಿರಾತು ತುಂಬಿದ ಪೇಪರುಗಳನ್ನು ಮತ್ತೆ ಹತ್ತು % ಮಾತ್ರ ಹಂಚಲು ಸಾಧ್ಯ. ಇನ್ನೂ ನಾಲ್ಕರಷ್ಟು ಹೆಚ್ಚು ಕೆಲಸಗಾರರನ್ನು ನೇಮಿಸಿ ಮನೆಮನೆಗೆ ಹಂಚುತ್ತೇವೆ. ಅಂತ ಶುರುಮಾಡಿದರೇ ಅದು ಖಂಡಿತ ಚೆನ್ನಾಗಿ ನಡೆಯುತ್ತದೆ.  ಆಹಾ! ಎಲ್ಲಾ ಪತ್ರಿಕೆಗಳು ಉಚಿತವಾಗಿ ಸಿಗುತ್ತಿವೆಯಲ್ಲಾ ಅಂತ ಗ್ರಾಹಕರು ಪುಲ್ ಖುಷ್!  ಆದ್ರೆ ಉಚಿತವಾಗಿ ಹಂಚುವವನು ಉಪ್ಪುಕಾರ ತಿನ್ನುವ, ನವರಸಗಳ ಮನುಷ್ಯರೇ ತಾನೆ!  ಒಂದು ತಿಂಗಳು ತುಂಬಾ ಖುಷಿಯಾಗಿ ತಾವು ಪಡೆಯುವ ಸಂಬಳಕ್ಕೆ ತಕ್ಕಂತೆ ಉಚಿತವಾಗಿ ಮನೆಮನೆಗೆ ಪೇಪರ್ ತಲುಪಿಸುತ್ತಾರೆ.  ಮುಂದಿನ ತಿಂಗಳಿಗೆ ಅವರ ತಲೆ ತಿರುಗುತ್ತದೆ. ಮನೆಮನೆಗೆ ಉಚಿತವಾಗಿ ಏಕೆ ಕೊಡಬೇಕು. ಅದರ ಬದಲು ತೂಕಕ್ಕೆ ಹಾಕಿದರೆ ಸಕ್ಕತ್ ಹಣಬರುತ್ತದಲ್ಲಾ....ಸರಿಯಾಗಿ ಹಾಕಬೇಕು ಎನ್ನುವುದಕ್ಕೆ ಮನೆಯವರೇನು ಹಣಕೊಡುವುದಿಲ್ಲವಲ್ಲ. ಒಂದೆರಡು ದಿನ ತಪ್ಪಿಸಿದರಾಯಿತು..ಅಂದುಕೊಂಡು ಒಂದೆರಡು ದಿನ ತಪ್ಪಿಸಿ ತೂಕಕ್ಕೆ ಹಾಕುತ್ತಾರೆ. ಈ ಸುಲಭದ ಹಣ ಯಾವಾಗ ಕೈತುಂಬ ಸಿಗಲು ಪ್ರಾರಂಭವಾಗುತ್ತದೋ...ಅಲ್ಲಿಗೆ ಅದು ಒಂದು ವಾರ, ತಿಂಗಳು.ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಅಂತ ಈ ಕೆಲಸಗಾರರೆಲ್ಲಾ ಚೆನ್ನಾಗಿ ಹಣ ಮಾಡುತ್ತಾರೆ....ಹೀಗೆ ಮುಂದುವರಿದು  ಪತ್ರಿಕೋದ್ಯಮದ ಮಾರುಕಟ್ಟೆ ವ್ಯವಸ್ಥೆಯೇ ಅಡ್ಡದಾರಿ ಹಿಡಿಯುತ್ತದೆ.  ಜಾಹಿರಾತು ನೀಡುವವರಿಗೆ ಸತ್ಯ ಗೊತ್ತಾಗಿ ಅವರು ಪತ್ರಿಕೆಗೆ ಕೊಡುವ ಜಾಹಿರಾತು ನಿಲ್ಲಿಸಿದರೆ ಅದನ್ನೇ ನಂಬಿಕೊಂಡು ಪತ್ರಿಕೆ ನಡೆಸುವ ಶೂರ ಧೀರರೆಲ್ಲಾ ಟುಸ್ ಪಟಾಕಿಗಳಾಗಿ ತಲೆಮೇಲೆ ಟವಲ್ ಹಾಕಿಕೊಂಡು ಮಕಾಡೆ ಮಲಗಬೇಕಾಗುತ್ತದೆ.

ಈಗ ಹೇಳಿ ಮುಂಜಾನೆ ದಿನಪತ್ರಿಕೆಯ ನಿಜವಾದ ಹೀರೋಗಳು ಯಾರು? ಭಾರತಕ್ಕೆ ನಂಬರ್ ಒನ್ ಎಂದು ಮೀಸೆ ತಿರುವುವ ಟೈಮ್ಸ್  ಅಫ್ ಇಂಡಿಯಾನ, ಡೆಕ್ಕನ್, ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿಯ....ಇತ್ಯಾದಿ ಹತ್ತಾರು ಪತ್ರಿಕೆಗಳ ಮಾಲೀಕರಾ,  ತಾವು ಅದ್ಬುತ ಕಾಲಂ ಲೇಖಕರು ಎಂದು ಬೀಗುವ ಸಂಪಾದಕರು, ಹೊರಪ್ರಪಂಚದಲ್ಲಿರುವವರೆಲ್ಲಾ ದಡ್ಡರು, ನಾವು ಬರೆದಿದ್ದೇ ವೇದವಾಕ್ಯ ಎಂದುಕೊಂಡು ಬೈಲೈನ್ ಹಾಕಿಕೊಳ್ಳುವ ವರದಿಗಾರರು ಮತ್ತು ಡೆಸ್ಕ್ ಅಪರೇಟರುಗಳಾ? ವಾರಕ್ಕೊಂದು ಕಾಲಂ ಬರೆಯುವ ಪ್ರಖ್ಯಾತ ಲೇಖಕರಾ?  ಪುಟಗಟ್ಟಲೇ ಜಾಹಿರಾತು ಹಾಕಿಸಿ ಜನರನ್ನು ಟೆಂಪ್ಟ್ ಮಾಡುತ್ತಿರುವ ಜಾಹಿರಾತು ಕಂಪನಿಗಳಾ? ಇರುವುದರಲ್ಲೇ ಸ್ವಲ್ಪ ವಾಸಿ ಎನ್ನುವಂತೆ ವೆಂಡರುಗಳನ್ನು ಪುಸಲಾಯಿಸುತ್ತಾ, ಕಛೇರಿಯಲ್ಲಿ ಸರ್ಕುಲೇಷನ್ ಹೆಚ್ಚು ಮಾಡಬೇಕು ಅಂತ ಮಾಡುವ ತಾಕೀತನ್ನು ಸಹಿಸಿಕೊಳ್ಳುವ ಮಾರುಕಟ್ಟೆ ವಿಭಾಗದ ಪ್ರತಿನಿಧಿಗಳಾ?

ಜನರ ಮಾನಸಿಕ ಸ್ಥಿತಿಗತಿಗಳನ್ನು ಬದಲಾಯಿಸುವ ನಾವೇ ಹೀರೋಗಳು ಅಂತ ಭ್ರಮೆಯಲ್ಲಿರುವವರು. ಈ ಭ್ರಮೆಯಲ್ಲಿರುವುದಕ್ಕೆ ಅವರಿಗೆ ವರ್ಷಕ್ಕೊಮ್ಮೆಯಾದರೂ ಅವರಿಗೆ ವೆಂಡರ್ಸ್ ಡೇ ನೆನಪಾಗುವುದಿಲ್ಲ. ವೆಂಡರುಗಳ ಕಷ್ಟಗಳು ಮನಸ್ಸಿಗೆ ಬರುವುದಿಲ್ಲ. ಇದುವರೆಗೂ ಒಬ್ಬಸಂಪಾದಕ, ಸಹಸಂಪಾದಕನಾಗಲಿ, ವರದಿಗಾರನಾಗಲಿ, ಪ್ರಖ್ಯಾತ ಲೇಖನರಾಗಲಿ, ವಾರಕ್ಕೊಂದು ಕಾಲಂ ಬರೆಯುವ ಡೆಸ್ಕ್ ಆಪರೇಟರುಗಳಾಗಲಿ ಒಬ್ಬ ವೆಂಡರನ್ನು ಸಂದರ್ಶಿಸಿಲ್ಲ. ಪೇಪರ್ ಹುಡುಗನ ಸ್ಥಿತಿ ಗತಿ ತಿಳಿದಿಲ್ಲ.

ನಂಬರ್ ಒನ್ ಪತ್ರಿಕೆಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುವವರ ಮನೆಗೆ ಪೇಪರ್ ಹಾಕುತ್ತೇನೆ. ಆರಾಮ ಸೋಪ ಮೇಲೆ ಕುಳಿತು ಟೀಪಾಯ್ ಮೇಲೆ ಕಾಲುಚಾಚಿ ಎದುರಿನ ಗೋಡೆಯಲ್ಲಿನ ನಲವತ್ತು ಇಂಚಿನ ಟಿವಿಯನ್ನು ನೋಡುವ ಅವರಿಗೆ ನಾಲ್ಕು ಅಡಿ ಅಗಲ ಎಂಟು ಅಡಿ ಉದ್ದ ಮಲಗಿದರೆ ಕಾಲು ಚಾಚಲು ಆಗದ ನಮ್ಮ ಪೇಪರ್ ಹುಡುಗನ ಪುಟ್ಟ ಗುಡಿಸಲು ಗೊತ್ತಿಲ್ಲ. ಜಾಹಿರಾತು ಹಣಕ್ಕಾಗಿ ಗಂಡು ಹೆಣ್ಣಿನ ಅರೆಬೆತ್ತಲೆ ಫೋಟೊಗಳನ್ನು ಹಾಕುವ ನಮ್ಮ ಸಂಪಾದಕರಿಗೆ ಅರಕಲು ಕುಪ್ಪಸ, ಸೀರೆ ಹಾಕಿಕೊಂಡ ನಮ್ಮ ಸಾವಿರಾರು ಪೇಪರ್ ಹುಡುಗರ ತಾಯಂದಿರ ಸ್ಥಿತಿಯ ಕಲ್ಪನೆಯಿಲ್ಲ.

ಈಗ ಮತ್ತೆ ಮೊದಲೆರಡು ಪ್ಯಾರಗಳನ್ನು ನೆನಪಿಸಿಕೊಳ್ಳೋಣ. ನಮ್ಮ ಭಾರತದಾದ್ಯಂತ ಇರುವ ಇಂಥ ನೂರಾರು ಸಾವಿರಾರು, ಲಕ್ಷಾಂತರ ಪುಟ್ಟ ಪುಟ್ಟ ಮನೆ, ಗುಡಿಸಲು,...ಮುಂತಾದವುಗಳಲ್ಲಿರುವ ನಮ್ಮ ಪೇಪರ್ ಹಾಕುವ ಹುಡುಗರೆಲ್ಲಾ ನಾಳೆಯಿಂದ ಪೇಪರ್ ಹಾಕಬಾರದೆಂದು ತೀರ್ಮಾನಿಸಿ ಸಮೂಹ ಸನ್ನಿಗೆ ಒಳಗಾಗಿಬಿಟ್ಟರೆ........ನಮ್ಮ ಭಾರತದಲ್ಲಿ ಮುಂಜಾನೆ ದಿನಪತ್ರಿಕೆ ಉದ್ಯಮ ಮಕಾಡೆ ಮಲಗುತ್ತದೆ. ಈಗ ನಿಮ್ಮ ಎದೆ ಬಡಿತವೂ ಒಂದು ಕ್ಷಣ ನಿಂತಂತೆ ಅಯ್ತಲ್ಲವೇ....ಜನರನ್ನು ಮೆಚ್ಚಿಸುವ ಸಲುವಾಗಿ ಉಪ್ಪು ಖಾರ, ಮಸಾಲೆಗಳನ್ನು ತಮ್ಮ ಲೇಖನಗಳಲ್ಲಿ ತುರುಕುವ, ನಮ್ಮ ಪತ್ರಿಕೆಗಳ ಸಂಪಾದಕರು, ವರದಿಗಾರರು ಈ ಮುಂಜಾನೆ ಹೀರೋಗಳು ಕೈಕೊಟ್ಟರೆ.....ಆ ಮಸಾಲಯುಕ್ತ ಬಿಸಿಬಿಸಿ ಪತ್ರಿಕೆಗಳನ್ನು ತಮ್ಮ ತಮ್ಮ ಮನೆಗಳ ಟೆರಸ್ ಮೇಲೆ ಹರಡಿ ಅದರ ಮೇಲೆ ಹಪ್ಪಳ ಸಂಡಿಗೆಗಳನ್ನು ಒಣಗಿಸುತ್ತಾ, ಅದನ್ನು ಕದ್ದು ತಿನ್ನಲು ಬರುವ ಕಾಗೆ ಕೋತಿಗಳನ್ನು ಓಡಿಸುತ್ತಾ ಕೂರಬೇಕಾಗುತ್ತದೆ. ಏನಂತೀರಿ?

ಇದುವರೆಗೂ ದಿನಪತ್ರಿಕೆ ವೆಂಡರುಗಳು ಮತ್ತು ಪೇಪರ್ ಹುಡುಗರು ಗ್ರೇಟ್, ಸೆಲೆಬ್ರಿಟಿಗಳು, ಹೀರೋಗಳು, ಅವರಿಲ್ಲದಿದ್ದರೇ ಬೆಳಗಾಗುವುದಿಲ್ಲ ಅಂತ ಹೇಳಲಿಕ್ಕೆ ನಾನು ಈ ಲೇಖನವನ್ನು ಖಂಡಿತ ಬರೆಯಲಿಲ್ಲ. ಸದ್ಯ ನಮ್ಮ ಸ್ಥಿತಿಗತಿಯನ್ನು ನೇರವಾಗಿ ವಿವರಿಸುತ್ತಿದ್ದೇನೆ ಅಷ್ಟೆ. ಹಾಗಾಂತ ಎಲ್ಲಾ ದಿನಪತ್ರಿಕೆ ಸಂಪಾದಕರು, ರಿಪೋರ್ಟರುಗಳು, ಡೆಸ್ಕ್ ಆಪರೇಟರುಗಳು ಮಾರುಕಟ್ಟೆ ಪ್ರತಿನಿಧಿಗಳು ಕೆಟ್ಟವರಲ್ಲ. ಒಳ್ಳೆಯ ಸಂಪಾದಕರು, ರೆಪೋರ್ಟರುಗಳು, ಪ್ರತಿನಿಧಿಗಳು ಇದ್ದಾರೆ. ಅವರಿಂದಲೇ ವೆಂಡರುಗಳ ಮತ್ತು ಪೇಪರ್ ಹುಡುಗರಿಗೆ ಬೆಳಗಿನ ಕೆಲಸ ಸಿಗುತ್ತಿದೆ. ಅದಕ್ಕಾಗಿ ಈ ಲೇಖನದಿಂದಾಗಿ ಬೇರೆ ಗ್ರಾಹಕರು, ಮತ್ತು ಪತ್ರಿಕೋದ್ಯಮದವರು ತಪ್ಪು ತಿಳಿಯಬಾರದಾಗಿ ವಿನಂತಿ.

-ಶಿವು.ಕೆ