Monday, February 28, 2011

ಹರಕೆ-ಹರಾಜು: ಅಕ್ಷರ ಹೊಡೆದ ಕೊನೆಯ ಮೊಳೆ...


ಹರಕೆ-ಹರಾಜು ಯಾವುದು ಸಹಜ, ಯಾವುದು ಅವಮಾನ? ಎಂಬ ಲೇಖನದ ಮೂಲಕ ಹೊಸ ಸಂಸ್ಕೃತಿ ಚಿಂತನೆಯೊಂದನ್ನು ಮಂಡಿಸಿದ್ದ ಕೆ.ವಿ.ಅಕ್ಷರ, ತನ್ಮೂಲಕ ಹುಟ್ಟಿಕೊಂಡಿದ್ದ ವಾಗ್ವಾದಕ್ಕೆ ಅಂತಿಮ ಉತ್ತರವೊಂದನ್ನು ಕೊಡುವ ಮೂಲಕ ಕೊನೆಯ ಮೊಳೆ ಜಡಿದಿದ್ದಾರೆ. ಕಳೆದ ನಾಲ್ಕು ವಾರಗಳಿಂದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯಲ್ಲಿ ನಡೆದ ಸಂವಾದವನ್ನು ಅಕ್ಷರ ಅವರ ಸ್ಪಷ್ಟನೆಗಳೊಂದಿಗೆ ಕೊನೆಗೊಳಿಸಲಾಗಿದೆ.  ಜೊತೆಗೆ ನಾನೆ ಸ್ವದೇಶಿ, ನೀನೆ ಪರದೇಶಿ ಎಂಬ ಶೀರ್ಷಿಕೆಯಲ್ಲಿ ಅಕ್ಷರ ಅವರ ಚಿಂತನೆಗಳನ್ನು ನಿಕಷಕ್ಕೆ ಒಳಪಡಿಸುವ ಜಿ.ರಾಜಶೇಖರ ಅವರ ಲೇಖನವೂ ಮೊನ್ನೆಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟಗೊಂಡಿದೆ.

ಹಾಗೆ ನೋಡುವುದಾದರೆ ಈ ಚರ್ಚೆಯನ್ನು ಪ್ರಜಾವಾಣಿ ಮುಕ್ತಾಯಗೊಳಿಸಿದ್ದರೂ ಅದು ಹೊಸ ಕವಲುಗಳನ್ನು ಪಡೆದು ಮುಂದುವರೆಯುತ್ತಲೇ ಇರುತ್ತದೆ. ಮಾನಾವಮಾನಗಳ ಚರ್ಚೆಯ ಸಂದರ್ಭದಲ್ಲೆಲ್ಲ ಅಕ್ಷರ ಹೊಸೆದುಕೊಟ್ಟ ಹೊಸ ವ್ಯಾಖ್ಯಾನ ಮತ್ತೆ ಮತ್ತೆ ಪ್ರತ್ಯಕ್ಷವಾಗಲಿದೆ. ಸಾಂಸ್ಕೃತಿಕ ವಾಗ್ವಾದಗಳೇ ಹಾಗೆ, ಯಾವಾಗ ಬೇಕಾದರೂ ಆಕಳಿಸಿ ಮೈಮುರಿದು ಎದ್ದು ನಿಲ್ಲಬಹುದು!

ವಿಶೇಷವೆಂದರೆ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಪ್ರಕಟಗೊಂಡ ಈ ಲೇಖನ ಕೇವಲ ಪ್ರಜಾವಾಣಿಯಲ್ಲಿ ಮಾತ್ರ ಚರ್ಚೆಗೊಳಪಡದೆ, ಬೇರೆಡೆಯೂ ಮೈದಳೆದು ಸಂಸ್ಕೃತಿ ಚಿಂತಕರನ್ನು ಆಕರ್ಷಿಸಿತು. ಕೆ.ವಿ.ಅಕ್ಷರ ಅವರ ಬೆತ್ತಲೆ ಜಗತ್ತು ಎಂಬ ಶೀರ್ಷಿಕೆಯಲ್ಲಿ ಸಂಪಾದಕೀಯ ಈ ಲೇಖನದ ಮೂಲ ಆಶಯಗಳನ್ನು ಕಟುಟೀಕೆಗೆ ಒಳಪಡಿಸಿದ್ದನ್ನು ನೀವು ಬಲ್ಲಿರಿ. ನಂತರ ಎಚ್.ಎಸ್.ಶಿವಪ್ರಕಾಶ್ ಮತ್ತು ಸಂವರ್ಥ ಸಾಹಿಲ್  ಬರೆದ ಎರಡು ಮನುಮುಟ್ಟುವ ಪ್ರತಿಕ್ರಿಯೆಗಳನ್ನೂ ಪ್ರಕಟಿಸಿದ್ದೆವು. ಅತ್ತ ಅವಧಿಯಲ್ಲೂ ಈ ಕುರಿತ ಚರ್ಚೆ ಜೋರಾಗಿಯೇ ನಡೆಯಿತು. ಅಗ್ನಿ, ಗೌರಿ ಲಂಕೇಶ್, ಹಾಯ್ ಬೆಂಗಳೂರ್ ಮತ್ತಿತರ ವಾರಪತ್ರಿಕೆಗಳಲ್ಲೂ ಈ ಕುರಿತ ಚರ್ಚೆಗಳು ನಡೆದವು.

ಇದೀಗ ಅಕ್ಷರ ಅವರ ಅಂತಿಮ ಪ್ರತಿಕ್ರಿಯೆ ಪ್ರಕಟಗೊಂಡಿದೆ. ಈ ಪ್ರತಿಕ್ರಿಯೆಯ ಕುರಿತೂ ನಮಗೆ ತಕರಾರಿದೆ. ಯಥಾಪ್ರಕಾರ ಅಕ್ಷರ ಅವರದು ಅಕ್ಷರಗಳ ಜತೆಗಿನ ಆಟ. ಇಲ್ಲೂ ಸಹ ನಿಚ್ಚಳವಾಗಿ ಎದ್ದು ಕಾಣುವುದು ಅವರ ಬೌದ್ಧಿಕ ಕಸರತ್ತು.

೧. ತಮ್ಮ ಚಿಂತನೆಗಳು ಕನ್ನಡದ ವಿಚಾರಶೀಲರ ಗ್ರಹಿಕೆಯನ್ನು ಮೀರಿದ್ದೇನೋ ಎಂಬ ಬೌದ್ಧಿಕ ಅಹಂಕಾರ ಅಕ್ಷರ ಅವರನ್ನು ಕಾಡಿರಲಿಕ್ಕೂ ಸಾಕು. ಅಥವಾ ಆ ಪ್ರಕಾರದ ಭ್ರಮೆಗಳಲ್ಲಿ ಅವರು ಸಿಲುಕಿಕೊಂಡಿರುವ ಅಪಾಯವನ್ನೂ ನಿರಾಕರಿಸುವಂತಿಲ್ಲ. ಹರಕೆ-ಹರಾಜು ಲೇಖನವನ್ನು ವಿರೋಧಿಸಿದವರೆಲ್ಲ ಅದನ್ನು ಗ್ರಹಿಸುವಲ್ಲೇ ಎಡವಿದ್ದಾರೆ ಎಂಬ ಅರ್ಥವನ್ನು ಅವರ ಪ್ರತಿಕ್ರಿಯೆ ಧ್ವನಿಸುತ್ತದೆ.

೨. ಮಡೆಸ್ನಾನ ಮೌಢ್ಯವೇ, ಅಲ್ಲವೇ ಎಂಬ ಜಿಜ್ಞಾಸೆ ಅಕ್ಷರ ಅವರಲ್ಲಿ ಇನ್ನೂ ಉಳಿದುಕೊಂಡಿದೆ. ನಮ್ಮ ಸಮಾಜದ ಕೆಲವು ಪರಂಪರಾನುಗತ ಆಚರಣೆಗಳು ಅತ್ತ ಮೌಢ್ಯವೂ ಅಲ್ಲದ, ಇತ್ತ ಅಧ್ಯಾತ್ಮಿಕವೂ ಅಲ್ಲದ ಸಮುದಾಯಿಕ ಪಾಲ್ಗೊಳ್ಳುವಿಕೆಯ ಒಂದು ಚಟುವಟಿಕೆ ಮಾತ್ರವೆ ಇರಬಹುದೆ? ಎಂಬ ಸಂದೇಹವನ್ನು ಅವರು ವ್ಯಕ್ತಪಡಿಸುತ್ತಾರೆ. ಇದಕ್ಕೆ ಅವರು ಬಳಸಿಕೊಂಡಿರುವುದು ವೈದೇಹಿ ಬರೆದ ಇದು ಲೌಕಿಕ ಸಂಕಟಗಳ ಅನಿವಾರ್ಯ ಅಭಿವ್ಯಕ್ತಿ ಇರಬಹುದೇ ಎಂಬ ಸಾಲನ್ನು. ಅಲ್ಲಿಗೆ ಮಡೆಸ್ನಾನವನ್ನು ಅವರು ಮೌಢ್ಯ ಎನ್ನಲು ಅವರಿಗೆ ಮನಸ್ಸು ಒಪ್ಪುತ್ತಿಲ್ಲ. ಅದನ್ನು ಅಧ್ಯಾತ್ಮಿಕ ಎನ್ನಲು ತಕ್ಕ ಆಧಾರಗಳೂ ಅವರ ಬಳಿಯಿಲ್ಲ. ಹೀಗಾಗಿ ಮಧ್ಯದ ಯಾವುದೋ ಅಮೂರ್ತ ಶೋಧದಲ್ಲಿ ಅವರು ದಾರಿತಪ್ಪಿ ನಿಂತಿದ್ದಾರೆ.

೩. ಹುಟ್ಟಿನ ಮೂಲದ ಅಸಮಾನತೆಗಳು ಯಾವ ರೂಪದಲ್ಲಿದ್ದರೂ ಖಂಡನಾರ್ಹವೇ ಎಂದು ಅಕ್ಷರ ಒಪ್ಪಿಕೊಳ್ಳುತ್ತಾರೆ. ಮಡೆಸ್ನಾನದಲ್ಲಿ ಹುಟ್ಟಿನ  ಮೂಲದ ಅಸಮಾನತೆ ಅವರ ಕಣ್ಣಿಗೆ ಗೋಚರಿಸದಿರುವುದು ಮಾತ್ರ ವಿಸ್ಮಯ. ಹುಟ್ಟಿನ  ಮೂಲದ ಅಸಮಾನತೆಗಳು ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ಅಧೀನದಲ್ಲಿರುವ ದೇವಸ್ಥಾನಗಳೂ ಸೇರಿದಂತೆ ಸಾಕಷ್ಟು ದೇವಸ್ಥಾನಗಳಲ್ಲಿ ಇವೆ. ಅದಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವೂ ಹೊರತಾಗಿಲ್ಲ. ಅಸಮಾನತೆಯನ್ನು ವಿಜೃಂಭಿಸುವ ಪ್ರತ್ಯೇಕ ಪಂಕ್ತಿಗಳಂಥ ಆಚರಣೆಗಳೇ ಮಡೆಸ್ನಾನವೆಂಬ ಸಂಪ್ರದಾಯದ ಮೂಲ ಎಂಬುದನ್ನು ಅಕ್ಷರ ಪ್ರಜ್ಞಾಪೂರ್ವಕವಾಗಿ ಮರೆಯುತ್ತಾರೆ. ಬದಲಾಗಿ ಇತ್ತೀಚಿನ ವರ್ಷಗಳಲ್ಲಿ ಬ್ರಾಹ್ಮಣರೂ ಮಡೆಸ್ನಾನದಲ್ಲಿ ಪಾಲ್ಗೊಂಡಿದ್ದರು ಎಂಬುದನ್ನು ವಾದಕ್ಕಾಗಿ ಬಳಸುತ್ತಾರೆ.

ಈ ಬಗೆಯ ರಾಜಕೀಯ ಸಮರ್ಪಕತೆಯ ಪ್ರದರ್ಶನದಿಂದ ಯಾವ ವೈಜ್ಞಾನಿಕ ಸಮಾಜಶಾಸ್ತ್ರವೂ ಬೆಳೆಯುವುದಿಲ್ಲವೆಂಬುದನ್ನು ಅರ್ಥ ಮಾಡಿಕೊಳ್ಳಬೇಕಾದ ಕಾಲವೀಗ ಬಂದಿದೆ ಎಂದು ಅಕ್ಷರ ಬರೆಯುತ್ತಾರೆ. ನಿಜವಿರಬಹುದು. ಆದರೆ ಮಡೆಸ್ನಾನದ ವಿಶ್ಲೇಷಣೆಗೆ ಬೇಕಾಗಿರುವುದು  ರಾಜಕೀಯ ಸಮರ್ಪಕತೆಯ ಪ್ರದರ್ಶನವಲ್ಲ, ಮಾನವ ಘನತೆಯ ಕುರಿತಾದ ಸಾಮಾನ್ಯ ಜ್ಞಾನ ಎಂಬುದನ್ನು ಅವರು ಬುದ್ಧಿಪೂರ್ವಕವಾಗಿ ಮರೆಯುತ್ತಾರೆ.

೪. ಹರಕೆ-ಹರಾಜು ಲೇಖನದ ಕೂತವ-ನಿಂತವ-ನೋಡುವವ ಎಂಬ ರೂಪಕ ಅತಿ ಹೆಚ್ಚು ಟೀಕೆಗೊಳಗಾಗಿತ್ತು. ಅಕ್ಷರ ಆ ರೂಪಕವನ್ನು ಮತ್ತೆ ಸಮರ್ಥಿಸಿದ್ದಾರೆ. ಈ ಪ್ರಳಯಾಂತಕ ರೂಪಕ ಹುಟ್ಟಿದ್ದು ಹೇಗೆ ಎಂಬ ರಹಸ್ಯವನ್ನೂ ಅವರು ಹೊರಗೆಡಹಿದ್ದಾರೆ. ಹೆಗ್ಗೋಡು ಕುಟುಂಬದ ಚಿಂತನೆಯ ಹಿಂದಿನ ಬೌದ್ಧಿಕ ವಲಯದ ಪ್ರಮುಖರಾದ ಅಶೀಶ್ ನಂದಿಯವರ ಹ್ಯುಮಿಲಿಯೇಷನ್ ಎಂಬ ಲೇಖನವನ್ನು ಆಧರಿಸಿ ಈ ರೂಪಕವನ್ನು ಕಟ್ಟಿ ಕೊಟ್ಟಿದ್ದಾರೆ. ಒಂದು ಸಂಸ್ಕೃತಿಯೊಳಗಡೆ ಯಾವುದು ಅವಮಾನ, ಯಾವುದು ಅಲ್ಲ ಎಂಬುದನ್ನು ನಿರ್ಧರಿಸುವುದು ಎಷ್ಟು ಸಂಕೀರ್ಣವಾದ ಸಮಸ್ಯೆಯೆಂಬುದನ್ನು ನಂದಿಯವರು ಆ ಲೇಖನದಲ್ಲಿ ವಿಶ್ಲೇಷಿಸಿದ್ದಾರಂತೆ. ಬಹುಶಃ ಮುಂದಿನ ಸಂಸ್ಕೃತಿ ಶಿಬಿರದ ವೇಳೆ ಶಿಬಿರಾರ್ಥಿಗಳು ಅಶೀಶ್ ನಂದಿಯವರಿಂದ ಈ ಬಗ್ಗೆ ಸ್ಪಷ್ಟನೆ ಪಡೆದುಕೊಳ್ಳಬಹುದು.

ಗಾಂಧಿಯವರೇ ಆಗಲಿ, ಅಂಬೇಡ್ಕರ್‌ರೇ ಆಗಲಿ ಕೇವಲ ಇನ್ನೊಬ್ಬರ ಪರವಾಗಿ ಹೋರಾಟ ಮಾಡಲಿಲ್ಲ. ಜೊತೆಯಾಗಿ ಮಾಡುವುದಕ್ಕೂ ಪರವಾಗಿ ಮಾಡುವುದಕ್ಕೂ ದೊಡ್ಡ ವ್ಯತ್ಯಾಸವಿದೆ. ಜೊತೆಯಾಗಿ ಮಾಡುವ ಕೆಲಸಕ್ಕೆ ಆಳವಾದ ನೈತಿಕ ಶಕ್ತಿಯೂ ವೈಯಕ್ತಿಕ ಚಾರಿತ್ರ್ಯವೂ ಅಗತ್ಯವಾಗುತ್ತದೆ, ಪರವಾಗಿ ಮಾಡುವ ಕೆಲಸ ಹಾಗಲ್ಲ ಎಂದು ಅಕ್ಷರ ಟಿಪ್ಪಣಿ ಮಾಡಿದ್ದಾರೆ. ವರ್ಣಭೇದ ನೀತಿಯ ವಿರುದ್ಧ ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರು ನಡೆಸಿದ ಹೋರಾಟಕ್ಕೆ ನೈತಿಕ ಶಕ್ತಿ, ವೈಯಕ್ತಿಕ ಚಾರಿತ್ರ್ಯ ಬೇಕಿರಲಿಲ್ಲ ಎಂದು ಅವರು ಸೂಚಿಸಬಹುದೆ? ಮಡೆಸ್ನಾನದ ವಿಷಯಕ್ಕೆ ಸಂಬಂಧಿಸಿದಂತೆ ಈ ಟಿಪ್ಪಣಿಯನ್ನು ಅನ್ವಯಿಸಿ ಹೇಳುವುದಾದರೆ, ಮಡೆಸ್ನಾನವನ್ನು ಮಾಡುವವರ ಪರವಾಗಿ ಪ್ರತಿಭಟನೆ ಅನಗತ್ಯ. ಒಂದು ವೇಳೆ ಮಡೆಸ್ನಾನ ಅಪಮಾನಕಾರಿ ಎಂದು ಮಾಡುವವರು ಭಾವಿಸುವುದಾದರೆ, ಅದಕ್ಕೆ ಅವರು ಹೋರಾಟಕ್ಕಿಳಿಯುವುದಾದರೆ ಮಾತ್ರ ಅವರ ಜತೆಗೂಡಿ ಹೊರಾಡಬಹುದು. ಆಗ ಮಾತ್ರ ಅದು ನೈತಿಕವಾಗುತ್ತದೆ! ಇದನ್ನು ಯಥಾಸ್ಥಿತಿವಾದ ಎಂದು ಕರೆಯದೆ ಇರಲು ಸಾಧ್ಯವೇ? ಹೊಸಬಗೆಯ ಸಂಸ್ಕೃತಿ ಚಿಂತನೆಯೆಂದರೆ ಯಥಾಸ್ಥಿತಿವಾದವೇ?

೫. ಪುರೋಹಿತಶಾಹಿ ಅಂದರೇನು? ಅದು ಜಾತಿ ಸೂಚಕವೇ? ವೃತ್ತಿ ಸೂಚಕವೆ? ಅಥವಾ ನಿರ್ದಿಷ್ಟ ಧೋರಣೆಗಳ ಸಮುಚ್ಚಯವೇ? ಎಂಬ ಬ್ರಾಕೆಟ್ಟಿನೊಳಗಿನ ಪ್ರಶ್ನೆಗಳನ್ನು ಅಕ್ಷರ ಎತ್ತಿದ್ದಾರೆ. ಪುರೋಹಿತಶಾಹಿ ಎನ್ನೋದು ಜಾತಿ ಸೂಚಕವೂ ಅಲ್ಲ, ವೃತ್ತಿ ಸೂಚಕವೂ ಅಲ್ಲ ಎಂಬುದನ್ನು ಅರಿಯದವರಷ್ಟು ಅಕ್ಷರ ಮುಗ್ಧರಲ್ಲ. ಪುರೋಹಿತಶಾಹಿಯನ್ನು ಜಾತಿಗೋ ವೃತ್ತಿಗೋ ಆರೋಪಿಸಿ ಈ ಚರ್ಚೆಯಲ್ಲಿ ಯಾರೂ ಮಾತನಾಡಿಲ್ಲ. ಪುರೋಹಿತಶಾಹಿಯನ್ನು ಕಟುವಾಗಿ ಟೀಕಿಸಿದ ವಿವೇಕಾನಂದ, ಕುವೆಂಪು, ಲೋಹಿಯಾ ಅವರಾದಿಯಾಗಿ ಯಾರೂ ಸಹ ಹೀಗೆ ಸರಳೀಕರಿಸಿ ವಿಶ್ಲೇಷಿಸಿಲ್ಲ. ಹೀಗೆ ಪ್ರಶ್ನೆಗಳನ್ನು ಎತ್ತುವ ಮೂಲಕ ಇವತ್ತಿನ ಕಾಲಮಾನದಲ್ಲಿ ಜಾತಿ ಕುರಿತ ಚರ್ಚೆ ಪಡೆದುಕೊಳ್ಳುವ ವಿಕೃತ ಸ್ವರೂಪಗಳಿಗೆ ಅನುಕೂಲಕರವಾದ ಸಣ್ಣ ಪ್ರಚೋದನೆಯೊಂದಕ್ಕೆ ಅವರು ಕಿಡಿಹಚ್ಚುವ ಯತ್ನದಲ್ಲಿದ್ದಾರೆ ಎನಿಸುತ್ತದೆ.

ಕಡೆಯದಾಗಿ ಅಕ್ಷರ ತಮಗೆ ಈ ಲೇಖನ ಬರೆಯಲು ನಿಜಪ್ರೇರಣೆ ಏನೆಂಬುದನ್ನು ಹೇಳಿದ್ದಾರೆ. ನನ್ನ ತಂದೆ ಪುರುಸೊತ್ತಾದಾಗ ಪೂಜೆ ಮಾಡುತ್ತಿದ್ದರು; ನನ್ನ ಅಜ್ಜಿ ಹರಕೆಗಳನ್ನು ಹೊರುತ್ತಿದ್ದರು. ಇನ್ನು ನನ್ನ ಸುತ್ತಮುತ್ತಲಿರುವ, ಎಲ್ಲ ಜಾತಿಯ ಜನರೂ ಕೂಡಿರುವ ಸಮುದಾಯವು ದಿನಬೆಳಗಾದರೆ ಪೂಜೆ-ಪುನಸ್ಕಾರ-ಹಬ್ಬ-ಹರಕೆಗಳಲ್ಲೇ ಮುಳುಗಿರುವಂಥದ್ದು. ಇಂಥ ನಮ್ಮನ್ನೆಲ್ಲ ಹಿಂದುಳಿದವರೆಂದು ಪ್ರತಿಗಾಮಿಗಳೆಂದು ಮೂಢರೆಂದು ಯಾರಾದರೂ ಬಿಂಬಿಸಲೆತ್ನಿಸಿದರೆ ಅದು ನನಗೆ ಬೌದ್ಧಿಕ ಅಹಂಕಾರವಾಗಿ ಕಾಣುತ್ತದೆ ಎನ್ನುತ್ತಾರೆ ಅವರು.

ಒಂದು ವಿಷಯವನ್ನು ಅವರು ಬೇಕೆಂದೇ ಮರೆತಿದ್ದಾರೆ.  ಹರಕೆ-ಹರಾಜು ಲೇಖನವನ್ನು ಟೀಕೆಗೆ ಒಳಪಡಿಸಿದ ಎಲ್ಲರೂ ಇಂಥ ಹಿನ್ನೆಲೆಗಳಿಂದಲೇ ಬಂದವರು. ಪೂಜೆ, ವ್ರತ, ಹರಕೆ ಎಲ್ಲವೂ ವೈಯಕ್ತಿಕ ಆಚರಣೆಗಳು. ಅವು  ನಂಬಿಕೆಗಳನ್ನು ಆಧರಿಸಿದ್ದು. ಅವುಗಳ ಕುರಿತು ಯಾರಿಗೂ ತಂಟೆ, ತಕರಾರಿಲ್ಲ. ತಕರಾರಿರುವುದು ಒಂದು ಸಮುದಾಯದವರು ಉಂಡು ಎದ್ದ ಮೇಲೆ, ಆ ಎಲೆಗಳ ಮೇಲೆ ಉಳಿದ ಸಮುದಾಯಗಳ ಜನರು ಉರುಳಾಡುವ ಅಸಹ್ಯದ ಕುರಿತು. ಅದು ಕೇವಲ ನಂಬಿಕೆಯ ಪ್ರಶ್ನೆ ಮಾತ್ರವಲ್ಲ. ಅಕ್ಷರ ಅವರು ಹೇಳುವ ಮಾನಾವಮಾನಗಳ ಪ್ರಶ್ನೆ, ಮನುಷ್ಯ ಘನತೆಯ ಪ್ರಶ್ನೆ, ವಿವಿಧ ಹಂತಗಳಲ್ಲಿ ಒಡೆದು ಚೂರಾಗಿರುವ ಸಮಾಜವನ್ನು ಸಮಾನವಾಗಿ ಬದುಕುವಂತೆ ಪ್ರೇರೇಪಿಸುವ ಕಾಲದ ಅಗತ್ಯದ ಪ್ರಶ್ನೆ, ಆಧುನಿಕ ಯುಗದ ಪ್ರಲೋಭನೆಗಳಿಗೆ ಒಳಗಾಗಿ ಮುಗ್ಧ ಜನರು ಅಸಹಾಯಕರಾಗಿ ಹುಡುಕಿಕೊಳ್ಳುತ್ತಿರುವ ಅಪಮಾರ್ಗಗಳ ಪ್ರಶ್ನೆ.
ಅದು ಅಕ್ಷರ ಅವರಿಗೆ ಅರ್ಥವಾಗದ್ದೇನಲ್ಲ.

ಅವರು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ, ಅಷ್ಟೆ.

ದಿ ವಿನ್ನರ್ ಈಸ್ ಹಮೀದ್ ಪಾಳ್ಯ....


ಕನ್ನಡ ನ್ಯೂಸ್ ಚಾನಲ್‌ಗಳ ಸುದ್ದಿ ನಿರೂಪಕರು/ವಿಶ್ಲೇಷಕರ ಪೈಕಿ ನಿಮಗೆ ಯಾರು ಹೆಚ್ಚು ಇಷ್ಟವಾಗುತ್ತಾರೆ ಎಂದು ಪ್ರಶ್ನಿಸಿದ್ದೆವು. ನೀವು ಉತ್ತರಿಸಿದ್ದೀರಿ. ಎಲ್ಲರಿಗಿಂತ ಹೆಚ್ಚು ಪ್ರೀತಿ, ಮೆಚ್ಚುಗೆ ಗಳಿಸಿರುವವರು ಸುವರ್ಣ ನ್ಯೂಸ್‌ನ ಹಮೀದ್ ಪಾಳ್ಯ. ಅವರಿಗೆ ನಮ್ಮ ಅಭಿಮಾನದ ಅಭಿನಂದನೆಗಳು.

ಈ ಪೋಲ್ ಆರಂಭವಾದ ದಿನದಿಂದಲೂ ಹಮೀದ್ ಅವರಿಗೆ ಓಟ್ ಮಾಡುವವರ ಸಂಖ್ಯೆ ಒಂದೇ ಪ್ರಮಾಣದಲ್ಲಿ ಏರುಗತಿಯಲ್ಲಿ ಸಾಗುತ್ತಿತ್ತು. ಶೇ.೫೦ರ ಆಜುಬಾಜಿನಲ್ಲಿ ಅವರಿಗೆ ಮತಗಳು ಚಲಾವಣೆಯಾದವು. ಅದರರ್ಥ ಪ್ರತಿ ಇಬ್ಬರಲ್ಲಿ ಒಬ್ಬರು ಹಮೀದ್ ಪಾಳ್ಯ ಅವರನ್ನು ಆಯ್ಕೆ ಮಾಡಿದ್ದರು. ಇದು ಅತ್ಯಂತ ಅರ್ಹ ಆಯ್ಕೆ ಎನ್ನುವುದಕ್ಕೆ ಇದು ತೋರುಗನ್ನಡಿ.
ಈ ಸಮೀಕ್ಷೆಗೂ ಮುನ್ನ ಹಮೀದ್ ಅವರನ್ನು ಪರಿಚಯಿಸಿದಾಗ ಹೇಳಿದ ಹಾಗೆಯೇ ಅವರು ಪಕ್ಕಾ ಪ್ರೊಫೆಷನಲ್. ತನಗೆ ಕೊಟ್ಟ ಜವಾಬ್ದಾರಿಯನ್ನು ಯಾವ ಅಂಜಿಕೆ-ಅಳುಕೂ ಇಲ್ಲದಂತೆ ನಿಭಾಯಿಸುವ ಛಾತಿ ಉಳ್ಳವರು.

ಹಮೀದ್ ಅವರದು ಇನ್ನೂ ಚಿಕ್ಕ ವಯಸ್ಸು. ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಪಾಳ್ಯ ಎಂಬ ಪುಟ್ಟ ಹಳ್ಳಿಯಿಂದ ಬಂದವರು. ಮೊದಲು ಈಟಿವಿಯಲ್ಲಿ ಸುದ್ದಿ ವಾಚಕರಾಗಿ ಕಾರ್ಯ ನಿರ್ವಹಣೆ. ನಂತರ ಟಿವಿ೯ನಲ್ಲಿ ಕೆಲಸ. ನ್ಯೂಸ್ ಚಾನಲ್‌ನ ಅಗತ್ಯಗಳನ್ನು ಬಲುಬೇಗನೆ ಗ್ರಹಿಸಿಕೊಂಡು ಅದಕ್ಕೆ ತಯಾರಾದವರು. ಇದೀಗ ಸುವರ್ಣ ನ್ಯೂಸ್‌ನಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾರೆ. ಹಮೀದ್ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರೂ ಹೌದು. ಈ ಬಾರಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿದೆ.

ಹಮೀದ್ ಪಾಳ್ಯ ಅವರಿಗೆ ೨೯೩ ಮತಗಳು ಚಲಾವಣೆಯಾಗಿದ್ದರೆ, ಅವರ ಸಹೋದ್ಯೋಗಿ, ಸುವರ್ಣ ನ್ಯೂಸ್‌ನವರೆ ಆದ ಗೌರೀಶ್ ಅಕ್ಕಿ ಅವರಿಗೆ ೧೭೮ ಮತಗಳು ಲಭಿಸಿವೆ. ರಂಗನಾಥ್ ಭಾರದ್ವಾಜ್ ೧೭೧, ರೆಹಮಾನ್ ಹಾಸನ್ ೧೩೮, ಲಕ್ಷ್ಮಣ್ ಹೂಗಾರ್ ೧೦೫, ರಮಾಕಾಂತ್ ೩೬, ಚಂದ್ರೇಗೌಡ ೨೧ ಮತಗಳನ್ನು ಪಡೆದಿದ್ದಾರೆ. ಟಿವಿ೯ನ ಶಿವಪ್ರಸಾದ್ ಟಿ.ಆರ್. ಈ ಸಮೀಕ್ಷೆಯಿಂದ ತಮ್ಮ ಹೆಸರನ್ನು ತೆಗೆಯಲು ಎರಡು ಬಾರಿ ವಿನಂತಿಸಿದ್ದರಿಂದಾಗಿ ಅವರ ಕುರಿತ ಮತಗಳ ವಿವರ ಇಲ್ಲಿ ಪ್ರಕಟಿಸಿಲ್ಲ. ಈ ಎಲ್ಲರಿಗೂ ನಮ್ಮ ಕೃತಜ್ಞತೆಗಳು ಹಾಗು ಅಭಿನಂದನೆಗಳು. ಹಾಗೆಯೇ ಮತ ಚಲಾಯಿಸಿದ ಎಲ್ಲರಿಗೂ ನಮ್ಮ ಥ್ಯಾಂಕ್ಸ್.

ಹಮೀದ್ ಅವರಿಗೊಂದು ಅಭಿನಂದನೆ ಹೇಳಿ ಹೋಗಿ.

Saturday, February 26, 2011

ತುಂಗಭದ್ರಾ ನದಿಯಲ್ಲಿ ಮುಳುಗಿದ್ದ ಚಿದಾನಂದ ಮೂರ್ತಿಯವರನ್ನು ಕಾಪಾಡಿದ್ದು ಯಾರು?


ಡಾ. ಎಂ.ಚಿದಾನಂದಮೂರ್ತಿಯವರಿಗೆ ಈ ಹಿಂದೆ ಸಂಪಾದಕೀಯವು ಬರೆದ ಪತ್ರದಲ್ಲಿ ವ್ಯಂಗ್ಯವೇ ಢಾಳಾಗಿ ಎದ್ದು ಕಾಣುತ್ತಿತ್ತು ಎನ್ನುವುದು ಹಲವರ ಆಕ್ಷೇಪ. ಅದು ಹಾಗಲ್ಲ, ಅವರ ಕುರಿತು ಅಪಾರ ಗೌರವ ಇಟ್ಟುಕೊಂಡೇ ಅವರ ನಿಲುವನ್ನು ಟೀಕಿಸಿದ್ದೆವು; ಇಂಗ್ಲಿಷ್‌ನಲ್ಲಿ ವಿತ್ ಆಲ್ ರೆಸ್ಟೆಕ್ಟ್ ಅನ್ನುತ್ತಾರಲ್ಲ ಹಾಗೆ.

ಚಿದಾನಂದಮೂರ್ತಿಯವರು ಇತಿಹಾಸ ಸಂಶೋಧಕರು, ಅದಕ್ಕೂ ಮಿಗಿಲಾಗಿ ಕನ್ನಡ ಶಕ್ತಿ ಕೇಂದ್ರದ ಮೂಲಕ ಕನ್ನಡ ಚಳವಳಿಯನ್ನು ಕಟ್ಟಿದವರು. ಆದರೆ ಬರಬರುತ್ತ ಅವರ ಆಸಕ್ತಿ ಮತ್ತು ಕಾಳಜಿಗಳು ಕವಲೊಡೆಯುತ್ತ ಬಂದವು. ಹಾರ್ಡ್‌ಕೋರ್ ಆರ್‌ಎಸ್‌ಎಸ್‌ಗಳಂತೆ ಮಾತನಾಡಲು ಶುರು ಮಾಡಿದರು. ಮುಸ್ಲಿಮರು, ಕ್ರಿಶ್ಚಿಯನ್ನರ ವಿರುದ್ಧ ವಿಷ ಕಾರತೊಡಗಿದರು.

ಸ್ವಭಾವತಃ ಪ್ರಾಮಾಣಿಕರು, ಮುಗ್ಧರು, ಭಾವುಕರೂ ಆದ ಚಿದಾನಂದಮೂರ್ತಿಯವರು ಪಾರದರ್ಶಕವಾಗಿ ಬದುಕಿದವರು. ಎಸ್.ಎಲ್ ಭೈರಪ್ಪನವರಂತೆ ಚಿಮೂ ಸ್ಟ್ರಾಟರ್ಜಿಸ್ಟ್ ಅಲ್ಲ. ಆದರೆ ಮುಸ್ಲಿಮರ ಬಗ್ಗೆ, ಕ್ರಿಶ್ಚಿಯನ್ನರ ಬಗ್ಗೆ ಅವರು ಈ ವಯಸ್ಸಿನಲ್ಲಿ ಆಡುತ್ತಿರುವ ಮಾತುಗಳನ್ನು ನೋಡಿದರೆ, ಅವರ ಮಾನಸಿಕ ಸ್ಥಿತಿಯ ಬಗ್ಗೆಯೇ ಅನುಮಾನ ಹುಟ್ಟಿಸುತ್ತಿದೆ.

ಕನ್ನಡ ಜಾಗೃತಿಯ ಕೆಲಸ ತನ್ನಿಂದ ಸಂಪೂರ್ಣವಾಗಿ ಆಗಿಲ್ಲ ಎಂದು ನೊಂದ ಚಿದಾನಂದಮೂರ್ತಿಯವರು ಹಿಂದೆ ಹಂಪಿಯ ಪಂಪಾ ಕ್ಷೇತ್ರದ ತುಂಗಭದ್ರಾ ನದಿಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. (ಚಿಮೂ ಅವರು ಇದನ್ನು ಆತ್ಮಹತ್ಯೆ ಪ್ರಯತ್ನ ಎನ್ನುವುದಿಲ್ಲ; ಜಲಪ್ರವೇಶ ಎನ್ನುತ್ತಾರೆ!) ಹೀಗೆ ತುಂಗಭದ್ರಾ ನದಿಯಲ್ಲಿ ಲೀನವಾಗಿ ಹೋಗುವ ತೀರ್ಮಾನ ಮಾಡಿದಾಗ ಅವರು ಡಾ.ಎಲ್.ಎಸ್.ಶೇಷಗಿರಿರಾವ್ ಅವರಿಗೆ ಸುಮಾರು ೧೫ ಪುಟಗಳ ಪತ್ರವೊಂದನ್ನು ಬರೆದಿದ್ದರು. ಸತ್ತಮೇಲೂ ಕನ್ನಡ ಚಳವಳಿಗಾರರಿಗೆ ನಾನು ಪಾಂಚಜನ್ಯವಾಗಿ ಸ್ಫೂರ್ತಿ ನೀಡುತ್ತೇನೆ. ಕನ್ನಡದ ಶತ್ರುಗಳನ್ನು ಪ್ರೇತಾತ್ಮವಾಗಿ ಕಾಡುತ್ತೇನೆ ಎಂದು ಅವರು ಆ ಪತ್ರದಲ್ಲಿ ಬರೆದಿದ್ದರು.

ಚಿದಾನಂದಮೂರ್ತಿಯವರು ಎಷ್ಟು ಮುಗ್ಧರು ಎಂಬುದಕ್ಕೆ ಇದು ಸಾಕ್ಷಿ.

ಆದರೆ ಈ ಮುಗ್ಧತೆಯು ಅವರನ್ನು ಎಷ್ಟು ಅಪಾಯಕಾರಿಯಾದ ನಿಲುವುಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸಿದೆ ಎಂಬುದನ್ನು ಗಮನಿಸಿದರೆ ಆತಂಕವಾಗುತ್ತದೆ.

ಇವತ್ತಿನ ಪ್ರಜಾವಾಣಿ ನೋಡಿ. ಚಿಮೂ ಅವರ ಪತ್ರಿಕಾಗೋಷ್ಠಿಯ ವಿವರಗಳು ಪ್ರಕಟವಾಗಿವೆ. ಕ್ರೈಸ್ತರೇ ನೈಜ ಕೋಮುವಾದಿಗಳು ಎಂಬುದು ವರದಿಯ ಶೀರ್ಷಿಕೆ. ಏನು ಹಾಗೆಂದರೆ? ಕ್ರೈಸ್ತರಲ್ಲಿ ಕೆಲವರು ಅಂತಲೋ, ಕ್ರೈಸ್ತರಲ್ಲಿ ಬಹಳಷ್ಟು ಮಂದಿ ಎಂದೋ ಅವರು ಬಳಸಿಲ್ಲ. ಇಡೀ ಕ್ರೈಸ್ತ ಸಮುದಾಯವನ್ನು ಕೋಮುವಾದಿ ಎಂದು ಬಣ್ಣಿಸಿದ್ದಾರೆ. ಇದನ್ನು ಹೇಗೆ ಗ್ರಹಿಸುವುದು? ಜಗತ್ತಿನ ಕ್ರೈಸ್ತರೆಲ್ಲ ಕೋಮುವಾದಿಗಳಾಗಿದ್ದರೆ ಹೇಗಿರುತ್ತಿತ್ತು?

ಇನ್ನು ೩೦೦ ವರ್ಷಗಳಲ್ಲಿ ಹಿಂದೂ ಧರ್ಮ ನಾಶವಾಗಲಿದೆ ಎಂದು ಚಿದಾನಂದಮೂರ್ತಿಯವರು ಹೇಳಿಕೆ ನೀಡಿದ್ದಾರೆ. ಸತ್ತ ಮೇಲೆ ಕನ್ನಡದ ಶತ್ರುಗಳನ್ನು ಪ್ರೇತಾತ್ಮವಾಗಿ ಕಾಡುತ್ತೇನೆ ಎಂಬ ಅವರ ಹಿಂದಿನ ಹೇಳಿಕೆಯಷ್ಟೆ ಇದು ಬಾಲಿಷ. ಒಬ್ಬ ಸಂಶೋಧಕ ತಲುಪಿರುವ ಮಾನಸಿಕ ಸ್ಥಿತಿ ಇದು.

ಕ್ರೈಸ್ತರ ಮೇಲೆ, ಮುಸಲ್ಮಾನರ ಮೇಲೆ ಚಿದಾನಂದ ಮೂರ್ತಿಯವರು ಯಾಕಿಷ್ಟು ನಂಜು ಕಾರುತ್ತಿದ್ದಾರೆ? ತುಂಗಭದ್ರಾ ನದಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿ, ಮುಳುಗಿದರಲ್ಲ ಚಿದಾನಂದ ಮೂರ್ತಿಯವರು; ಆಗ ಅವರನ್ನು ಕಾಪಾಡಿದ್ದು ಯಾರು?
ಒಬ್ಬ ಅಂಬಿಗ, ಆತ ಮುಸ್ಲಿಮ್.

ಚಿದಾನಂದ ಮೂರ್ತಿಯವರ ವಿತಂಡವಾದ, ವಿಷ ಕಾರುವ ಹೇಳಿಕೆಗಳು.. ಇತ್ಯಾದಿಗಳ ಬಗ್ಗೆ ಚರ್ಚೆ ಸಾಕು ಅನ್ನಿಸುತ್ತೆ ಅಲ್ಲವೇ?

Friday, February 25, 2011

ಬಜೆಟ್ ಕವರೇಜ್, ಕನ್ನಡಪ್ರಭವೇ ನಂ.೧


ಬಜೆಟ್ ಅಂದ್ರೆ ಪತ್ರಕರ್ತರ ಪಾಲಿಗೆ ಹಬ್ಬ. ಅದೊಂದು ಈವೆಂಟ್. ಸವಾಲನ್ನು ಒಡ್ಡುವ ಖುಷಿಯ ಅಸೈನ್‌ಮೆಂಟು. ಹೆಚ್ಚು ಕಡಿಮೆ ನೂರು ಪುಟದ ಪುಸ್ತಕವನ್ನು ಓದಿ, ಅದರಲ್ಲಿ ಎಷ್ಟನ್ನು ಹೇಗೆ ಓದುಗರ ಮುಂದಿಡಬೇಕು ಎಂಬುದು ಅಕ್ಷರಶಃ ಸವಾಲಿನ ಕೆಲಸವೇ. ಪತ್ರಕರ್ತರು ಅಂದೆವಲ್ಲ, ಎಲ್ಲ ಪತ್ರಕರ್ತರಿಗೂ ಹೀಗೇ ಆಗಬೇಕು ಎಂಬುದೇನಿಲ್ಲ. ಕೆಲವರಿಗೆ ಅದು ಬೋರೋ ಬೋರು. ಇಲ್ಲಿ ಅದೇ ರಾಗ ಅದೇ ಹಾಡು ಬಿಡ್ರೀ ಅನ್ನೋ ಸಿನಿಕರಿಗೇನು ಕೊರತೆಯಿಲ್ಲ.

ಆದರೆ ಕೆಲವು ಪತ್ರಕರ್ತರು ಬಜೆಟ್ ಬರುವುದನ್ನೇ ಕಾಯುತ್ತಾರೆ. ಹಾಗೆ ಕಾಯುವವರಿಗೆ ಅಲ್ಪಸ್ವಲ್ಪ ಎಕನಾಮಿಕ್ಸು ಗೊತ್ತಿರುತ್ತದೆ, ಜನರ ನಾಡಿಮಿಡಿತವೂ ಗೊತ್ತಿರುತ್ತದೆ. ಯಾವುದಕ್ಕೆ ಎಷ್ಟು ಹಣ ಹಂಚಿದ್ದಾರೆ, ಎಲ್ಲಿಂದ ಎಷ್ಟು ಹಣ ತರುತ್ತಾರೆ, ಎಷ್ಟು ಸಾಲ ಇದೆ, ಎಷ್ಟು ತೀರಿದೆ, ಇನ್ನೆಷ್ಟು ತರುತ್ತಾರೆ, ಇಲ್ಲಿ ಘೋಷಿಸಿರುವ ಕಾರ್ಯಕ್ರಮಗಳಿಗೆ ಹಣ ನಿಜಕ್ಕೂ ಒದಗುತ್ತಾ? ಇತ್ಯಾದಿ ಇತ್ಯಾದಿಗಳನ್ನು ಅವರು ಒಂದೇ ಅಬ್ಸರ್‌ವೇಷನ್‌ನಲ್ಲಿ ಹೇಳಬಲ್ಲರು.

ಅದೆಲ್ಲ ಹಾಗಿರಲಿ, ಆ ಕುರಿತು ಇನ್ನೊಮ್ಮೆ ಚರ್ಚೆ ಮಾಡೋಣ. ಇವತ್ತಿನ ಪತ್ರಿಕೆಗಳನ್ನು ನೋಡಿದ್ರಾ? ಬಜೆಟ್ ಕವರೇಜ್ ಯಾವ ಯಾವ ಪತ್ರಿಕೆಯಲ್ಲಿ ಹೇಗನ್ನಿಸಿತು. ದಯವಿಟ್ಟು ಬರೆದು ತಿಳಿಸಿ.

ನಮಗೆ ಅನ್ನಿಸಿದ ಪ್ರಕಾರ, ಬಜೆಟ್ ಕವರೇಜ್‌ನಲ್ಲಿ ಮೊದಲ ಸ್ಥಾನ ದಕ್ಕಬೇಕಾಗಿರುವುದು ಕನ್ನಡಪ್ರಭಕ್ಕೆ. ಪುಟಪುಟವನ್ನೂ ಕನ್ನಡಪ್ರಭದ ಸಿಬ್ಬಂದಿ ಉತ್ಸಾಹ ಮತ್ತು ಶ್ರದ್ಧೆಯಿಂದ ಕಟ್ಟಿದ್ದಾರೆ. ಒನ್ಸ್ ಎಗೇನ್ ಇಲ್ಲಿ ವಿಶ್ವೇಶ್ವರ ಭಟ್ಟರ ಕೈಚಳಕ ಎದ್ದು ಕಾಣುತ್ತದೆ. ಯಡಿಯೂರೈತಪ್ಪ ಎಂಬ ಶೀರ್ಷಿಕೆ ತುಂಬಾ ಚೆನ್ನಾಗಿದೆ ಎಂದೇನು ಅನಿಸಲಿಲ್ಲವಾದರೂ, ಒಟ್ಟು ಬಜೆಟ್‌ನ ಎಲ್ಲ ಅಂಶಗಳನ್ನು ವಿವರಿಸುವ ಸುದ್ದಿಗಳು, ಆ ಕುರಿತು ತಜ್ಞರ, ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಪರಿಣಿತರ ಅಭಿಪ್ರಾಯಗಳು ಸೊಗಸಾಗಿ ಮೂಡಿಬಂದಿದೆ.

ಕನ್ನಡಪ್ರಭಕ್ಕೆ ಪೈಪೋಟಿ ನೀಡುತ್ತಿರುವುದು ಇವತ್ತಿನ ಉದಯವಾಣಿ. ರವಿ ಹೆಗಡೆ ಉದಯವಾಣಿ ಸೇರಿದ ದಿನದಿಂದಲೇ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ ಎಂಬ ಸುದ್ದಿಯೇನೋ ಇತ್ತು. ಇವತ್ತಿನ ಪತ್ರಿಕೆ ಅದನ್ನು ಸಾರಿ ಹೇಳುತ್ತಿದೆ. ಮುಖಪುಟದ ಅಗ್ರಲೇಖನ ಬಜೆಟ್‌ನ ಒಳಹೊರಗನ್ನು ಅರ್ಥ ಮಾಡಿಸುವಲ್ಲಿ ಸಫಲವಾಗಿದೆ.

ವಿಜಯ ಕರ್ನಾಟಕ ಮುಖಪುಟದ ಕಾನ್ಸೆಪ್ಟ್ ಹೊಸತನದಿಂದ ಕೂಡಿದೆ. ಒಳಗೆ  ನಾಲ್ಕು ವಿಶೇಷ ಪುಟಗಳೇನೋ ಇವೆ. ಆದರೆ ಇನ್ನಷ್ಟು ಕವರೇಜ್ ಬೇಕಿತ್ತು ಅನಿಸುತ್ತದೆ. ಮುಖಪುಟದ ಹೆಡ್ಡಿಂಗು ಆಕರ್ಷಕವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಪಾದಕ ಇ.ರಾಘವನ್ ಮುಖಪುಟದಲ್ಲೇ ಬರೆದಿರುವ ಪುಟ್ಟ ಟಿಪ್ಪಣಿ ಗಮನಸೆಳೆಯುತ್ತದೆ. ಕೃಷಿ ಮತ್ತು ಸಾಮಾನ್ಯ ಬಜೆಟ್ ವರ್ಣನೆಗೆ ಅವರು ಬಳಸಿರುವ ಡಬಲ್ ಬ್ಯಾರಲ್ ಗನ್‌ನ ಉಪಮೆಯೂ ಚೆನ್ನಾಗಿದೆ.

ಪ್ರಜಾವಾಣಿ ಸಂಪಾದಕೀಯ ಬಜೆಟ್ ಕುರಿತು ಸಮರ್ಥ ಒಳನೋಟ ನೀಡುತ್ತಿದೆ. ಆದರೆ ಉಳಿದ ಪುಟಗಳು ಸಪ್ಪೆ. ಹೇಳುವುದನ್ನೇ ಆಕರ್ಷಕ ವಿನ್ಯಾಸದಲ್ಲಿ ಹೇಳಿದರೆ ಹೆಚ್ಚು ಜನರಿಗೆ ಇಷ್ಟವಾಗಬಹುದಿತ್ತೇನೋ.

ಹೊಸದಿಗಂತದ ಪುಟಪುಟಗಳ ವಿನ್ಯಾಸ ಸೂಪರ್. ಆದರೆ ಈ ಮಾತನ್ನು ವಿನ್ಯಾಸಕ್ಕೆ ಸೀಮಿತವಾಗಿ ಹೇಳಬೇಕಾಗುತ್ತದೆ. ಯಾಕೆಂದರೆ ಇದು ಯಡಿಯೂರಪ್ಪನವರ ಜಾಹೀರಾತು ಪುರವಣಿಯ ಹಾಗೆ ರೂಪಿತವಾಗಿದೆ. ಏಕಮುಖಿಯಾದ ವಿಶ್ಲೇಷಣೆಗಳಿಂದ ಓದುಗರಿಗೆ ಯಾವ ಉಪಯೋಗವೂ ಇಲ್ಲ ಎಂದು ಬೇರೆ ಹೇಳಬೇಕಾಗಿಲ್ಲ.

ಇನ್ನು ನ್ಯೂಸ್ ಚಾನಲ್‌ಗಳ ಪೈಕಿ ಹೆಚ್ಚು ಆಕರ್ಷಿಸಿದ್ದು ಸುವರ್ಣ ನ್ಯೂಸ್. ಎಚ್.ಆರ್.ರಂಗನಾಥ್ ಅವರ ಪ್ರೌಢಿಮೆ ವರ್ಕ್ ಔಟ್ ಆಯಿತು. ಇತ್ತ ಟಿವಿ೯ನಲ್ಲಿ ಲಕ್ಷ್ಮಣ್ ಹೂಗಾರ್ ಮತ್ತು ಶಿವಪ್ರಸಾದ್ ನಡೆಸಿಕೊಟ್ಟ ಕಾರ್ಯಕ್ರಮಗಳೂ ಚೆನ್ನಾಗಿದ್ದವು. ಸಮಯ ಟಿವಿಯವರಿಗೆ ಇದು ಮೊದಲ ಬಜೆಟ್. ಆದರೂ ಓದುಗರನ್ನು ಸೆಳೆಯಲು ಅದು ಯಶಸ್ವಿಯಾಯಿತು. ಜನಶ್ರೀಯಲ್ಲಿ ರಮಾಕಾಂತ್ ಬಜೆಟ್ ಕುರಿತ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಜನಶ್ರೀ ಹೊಸ ಚಾನಲ್, ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾದೀತು.

ಇದು ನಮಗನ್ನಿಸಿದ್ದು, ನಿಮಗನ್ನಿಸಿದ್ದನ್ನು ದಯವಿಟ್ಟು ಹೇಳಿ.

ಚಿಮೂ ಕುರಿತು ರವಿ ಬರೆದಿದ್ದಾರೆ, ಓದಿ...


ಈ ವಾರದ ಹಾಯ್ ಬೆಂಗಳೂರ್‌ನಲ್ಲಿ ರವಿ ಬೆಳಗೆರೆ, ಗೋರಿಪಾಳ್ಯದ ರಸ್ತೆಗಳ ಕುರಿತು ಡಾ. ಎಂ.ಚಿದಾನಂದಮೂರ್ತಿಯವರ ಓದುಗರ ಪತ್ರದ ಕುರಿತು ಸೊಗಸಾಗಿ ಬರೆದಿದ್ದಾರೆ. ನೀವೂ ಒಮ್ಮೆ ಓದಿ.



ರಾಧಿಕಾ ಸಮಯ ಚಾನಲ್ ಒಡತಿಯಾಗುತ್ತಾರಾ?


ಹೌದು, ಸಮಯ ಚಾನಲ್ ಮಾರಾಟಕ್ಕಿದೆ. ಅದರ ಮಾಲೀಕರೊಂದಿಗೆ ಮಾತುಕತೆಯಲ್ಲಿದ್ದೇನೆ. ಆದರೂ ಇನ್ನೂ ಈ ಕುರಿತ ಒಡಂಬಡಿಕೆ ಇನ್ನೂ ಆಗಿಲ್ಲ.
ಬೆಂಗಳೂರು ಮಿರರ್ ಪತ್ರಿಕೆಗೆ ಎಚ್.ಡಿ.ಕುಮಾರಸ್ವಾಮಿ ಹೇಳಿರುವ ಮಾತು ಇದು.

ಸಮಯ ಟಿವಿಯನ್ನು ಕುಮಾರಸ್ವಾಮಿ ಕೊಳ್ಳಲಿದ್ದಾರೆ ಎಂಬ ಗುಸುಗುಸು ಸುದ್ದಿ ನಿಜವಾಗುವ ಸಮಯ ಹತ್ತಿರವಾಗುತ್ತಿರುವಂತೆ ಬೆಂಗಳೂರು ಮಿರರ್ ಪತ್ರಿಕೆ ಈ ಬಗ್ಗೆ ಮೊದಲು ಬೆಳಕು ಚೆಲ್ಲಿದೆ. 

ತುಂಬಾ ಆಸಕ್ತಿಕರವಾದ ವಿಷಯವೆಂದರೆ, ಕುಮಾರಸ್ವಾಮಿ ಇದನ್ನು ತಮ್ಮ ಗೆಳತಿ ರಾಧಿಕಾ ಅವರಿಗಾಗಿ ಸಮಯ ಚಾನಲ್ ಕೊಳ್ಳುತ್ತಿದ್ದಾರೆ ಎಂಬುದು. ಈ ಕುರಿತು ಬೆಂಗಳೂರು ಮಿರರ್ ಕುಮಾರಸ್ವಾಮಿಯವರನ್ನು ಕೇಳಿದೆ. ಹೌದಾ, ರಾಧಿಕಾ ಅವರಿಗಾಗಿ ಈ ಚಾನಲ್ ಕೊಳ್ಳುತ್ತಿದ್ದೀರಾ ಅಂದರೆ ಕುಮಾರಸ್ವಾಮಿ ಗಹಗಹಿಸಿ ನಕ್ಕರಂತೆ. ನಗುವಿಗೆ ನಾನಾರ್ಥಗಳಿರುತ್ತವೆ. ಅದು ಸಮ್ಮತಿ ಸೂಚಕವೂ ಆಗಿರಬಹುದು.

ಸದ್ಯ ಸುವರ್ಣ ನ್ಯೂಸ್‌ನ ಮುಖ್ಯಸ್ಥರಾಗಿರುವ ಎಚ್.ಆರ್.ರಂಗನಾಥ್‌ಗೂ ಅದರ ಮಾಲೀಕರಾದ ರಾಜೀವ್ ಚಂದ್ರಶೇಖರ್ ಅವರಿಗೂ ಅಷ್ಟಾಗಿ ಆಗಿಬರುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಲೇ ಇದ್ದವು. ಹೀಗಾಗಿ ನ್ಯೂಸ್ ಚಾನಲ್ ಆಗಲಿರುವ ಕಸ್ತೂರಿಗೆ ಅವರು ವಲಸೆ ಹೋಗುತ್ತಾರೆ ಎಂಬುದು ಗುಸುಗುಸು ಆಗಿತ್ತು. ಆದರೆ ಸಮಯ ಚಾನಲ್ ಕೊಂಡು ಕುಮಾರಸ್ವಾಮಿಯವರು ಅದನ್ನು ತಮ್ಮ ಆತ್ಮೀಯವಾಗಿರುವ ರಂಗನಾಥ್ ಅವರ ಉಸ್ತುವಾರಿಗೆ ಒಪ್ಪಿಸಲಿದ್ದಾರೆ ಎಂಬುದು ಹೊಸ ಸುದ್ದಿ.

ಅಷ್ಟಕ್ಕೂ ಕುಮಾರಸ್ವಾಮಿ ಕಸ್ತೂರಿ ಟಿವಿಯನ್ನು ನ್ಯೂಸ್ ಚಾನಲ್ ಮಾಡುತ್ತಿರುವಾಗ ಮತ್ತೊಂದು ನ್ಯೂಸ್ ಚಾನಲ್ ಕೊಳ್ಳುವ ಅಗತ್ಯವಾದರೂ ಏನಿತ್ತು? ಒಂದು ವೇಳೆ ಸಮಯವನ್ನು ಕೊಂಡರೆ ಕಸ್ತೂರಿಯನ್ನು ನ್ಯೂಸ್ ಚಾನಲ್ ಮಾಡುವ ಪ್ರಯತ್ನವನ್ನು ಕೈಬಿಡುತ್ತಾರಾ? ನಿಜಕ್ಕೂ ಸಮಯವನ್ನು ಅವರು ರಾಧಿಕಾಗಾಗಿ ಕೊಳ್ಳುತ್ತಿದ್ದಾರಾ? ರಂಗನಾಥ್ ಸುವರ್ಣ ನ್ಯೂಸ್ ಬಿಟ್ಟು ಸಮಯಕ್ಕೆ ಸೇರ್ಪಡೆಯಾಗುತ್ತಾರಾ? ಒಂದು ವೇಳೆ ರಂಗನಾಥ್ ಸಮಯದ ಉಸ್ತುವಾರಿ ವಹಿಸಿಕೊಂಡರೆ, ಈಗ ಚಾನಲ್ ಹೆಡ್ ಆಗಿರುವ ಶಶಿಧರ ಭಟ್ಟರ ಭವಿಷ್ಯವೇನು? ಸಮಯವೇ ಇದಕ್ಕೆ ಉತ್ತರ ಹೇಳಲಿದೆ.

ಕಸ್ತೂರಿ ಟಿವಿ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿಯವರ ಒಡೆತನದಲ್ಲಿದೆ. ರಾಧಿಕಾ ಮತ್ತು ಕುಮಾರಸ್ವಾಮಿಯವರ ಸಂಬಂಧದ ಕುರಿತು ಯಾವುದೇ ಸಂಶಯ ಈಗ ಉಳಿದುಕೊಂಡಿಲ್ಲ. ಅವರಿಗೆ ಶಮಿಕಾ ಎಂಬ ಮಗಳೂ ಇದ್ದಾಳೆ. ಹೀಗಾಗಿ ತಮ್ಮ ಮತ್ತೋರ್ವ ಪತ್ನಿಗಾಗಿ ಕುಮಾರಸ್ವಾಮಿ ಚಾನಲ್ ಕೊಳ್ಳುವ ವಿಷಯ ಈಗ ಮಾಧ್ಯಮರಂಗದಲ್ಲಿ ಹಾಟ್‌ಹಾಟ್ ಚರ್ಚೆಯಾಗಿದೆ.

Thursday, February 24, 2011

ಪತ್ರಕರ್ತರ ಸಂಬಳ ನಿಜಕ್ಕೂ ಎಷ್ಟಿರುತ್ತೆ, ಗೊತ್ತಾ ನಿಮಗೆ?


ಪತ್ರಕರ್ತರು ಎಷ್ಟು ಸಂಬಳ ತಗೋತಾರೆ, ಸ್ವಲ್ಪ ಹೇಳಿ ಎಂದು ಓದುಗರು ಕೇಳ್ತಿದ್ದಾರೆ.

ಹೌದೂ, ಪತ್ರಕರ್ತರು ಎಲ್ಲರ ಸಂಬಳ ಎಷ್ಟು, ಆಸ್ತಿ ವಿವರ ಏನೇನು ಅಂತ ಪ್ರಕಟಿಸ್ತಾ ಇರ‍್ತಾರೆ. ಅವರ ಜೋಳಿಗೆಗೆ ಎಷ್ಟು ಕಾಸು ಬೀಳುತ್ತೆ ಅನ್ನೋದು ಓದುಗರ ಕುತೂಹಲ.

ಹಿಂದೆಲ್ಲ ಪತ್ರಕರ್ತರು ತಗೋತಿದ್ದ ಸಂಬಳ ತುಂಬಾ ಕಡಿಮೆ. ಎಷ್ಟು ಕಡಿಮೆ ಅಂದ್ರೆ ಅದೂ ಒಂದು ವೃತ್ತಿಯೇ ಎಂಬ ಅನುಮಾನ ಮೂಡಿಸುವಷ್ಟು.

ಆದರೆ ಈಗ ಹಾಗಿಲ್ಲ. ಕೈ ತುಂಬಾ ಸಂಬಳ ದಕ್ಕುತ್ತೆ. ಕೈ ತುಂಬಾ ಅಂದರೆ ಎಷ್ಟು ಅಂತ ನೀವು ಮರುಪ್ರಶ್ನೆ ಎಸೆಯಬಹುದು. ಸುಮ್ನೆ ಒಂದು ಅಂದಾಜು ಕೊಡ್ತೀವಿ, ಅರ್ಥ ಮಾಡಿಕೊಳ್ಳೋ ಹಂಗೆ ಇದ್ರೆ ಅರ್ಥ ಮಾಡಿಕೊಳ್ಳಿ.

ಸಂಬಳ, ವಗೈರೆ ಸಂಸ್ಥೆಗಳನ್ನು ಆಧರಿಸಿರುತ್ತದೆ. ಅಂದರೆ ಕೆಲವು ಸಂಸ್ಥೆಗಳು ಕೈ ತುಂಬ ಕೊಡುತ್ತವೆ, ಮತ್ತೆ ಕೆಲವು ಜಿಗುಟು.
ನಮಗೆ ತಿಳಿದ ಪ್ರಕಾರ ಪ್ರಜಾವಾಣಿ, ಕನ್ನಡಪ್ರಭ, ವಿಜಯ ಕರ್ನಾಟಕಗಳಲ್ಲಿ ಸಂಬಳ ಚೆನ್ನಾಗಿಯೇ ಕೊಡಲಾಗುತ್ತದೆ. ನ್ಯೂಸ್ ಚಾನಲ್‌ಗಳ ಪತ್ರಕರ್ತರಿಗೆ ಪತ್ರಿಕೆಗಳಲ್ಲಿ ಕೆಲಸ ಮಾಡುವವರಿಗಿಂತ ಹೆಚ್ಚು ಸಂಬಳವಿರುತ್ತದೆ. ಕೆಲವು ಕಡೆ ಹುದ್ದೆಯನ್ನು ಮಾನದಂಡವಾಗಿಟ್ಟುಕೊಂಡು ಸಂಬಳ ಫಿಕ್ಸ್ ಆಗಿರುತ್ತದೆ, ಮತ್ತೆ ಕೆಲವು ಕಡೆ ಸಿಬ್ಬಂದಿಯ ಅರ್ಹತೆ, ಸಾಮರ್ಥ್ಯವೂ ಪರಿಗಣನೆಗೆ ಬರುತ್ತದೆ. ಕೆಳಹಂತದ ಅಂದರೆ ವರದಿಗಾರ, ಉಪಸಂಪಾದಕರ ಸಂಬಳ ೮,೦೦೦ ರೂಪಾಯಿಗಳಿಂದ ಮೇಲ್ಪಟ್ಟು ೨೦-೨೫ ಸಾವಿರ ರೂಪಾಯಿಗಳವರೆಗೆ ಇರುತ್ತದೆ. ಸಂಪಾದಕರನ್ನು ಹೊರತುಪಡಿಸಿ ಉಳಿದ ಉನ್ನತ ಹುದ್ದೆಯ ಪತ್ರಕರ್ತರು ೩೦ರಿಂದ ೬೦ ಸಾವಿರ ರೂಪಾಯಿಗಳವರೆಗೆ ವೇತನ ಪಡೆಯುತ್ತಾರೆ.

ಕೆಲವು ಪತ್ರಿಕೆಗಳಲ್ಲಿ ಸಂಪಾದಕ ಹುದ್ದೆಗೆ ವರ್ಷದ ಪ್ಯಾಕೇಜು ಲೆಕ್ಕದಲ್ಲಿ ಸಂಬಳ ಕೊಡಲಾಗುತ್ತದೆ. ಅಂದರೆ ವರ್ಷಕ್ಕೆ ಇಷ್ಟು ಅಂತ.

ಸುಮ್ನೆ ಒಂದು ಅಂದಾಜು ಮಾಡಿದ್ದೇವೆ, ನೋಡಿ. ಈಗ ಒಂದು ಪತ್ರಿಕೆಗೆ ಒಬ್ಬರು ಸಂಪಾದಕರು ನೇಮಕವಾದರು ಅಂತಿಟ್ಟುಕೊಳ್ಳಿ. ನಮ್ಮ ಅಂದಾಜಿನ ಪ್ರಕಾರ ಅವರಿಗೆ ಸರಿಸುಮಾರು ಹದಿನಾಲ್ಕು ಲಕ್ಷ ರೂಪಾಯಿಗಳ ವಾರ್ಷಿಕ ಪ್ಯಾಕೇಜು ಕೊಡಲಾಗುತ್ತದೆ. ಇದರಲ್ಲಿ ವಸತಿ, ಪೆಟ್ರೋಲು, ಮ್ಯಾಗಜೀನು ಇತ್ಯಾದಿ ಎಲ್ಲವೂ ಅಡಕ. ದೇಶ ಸುತ್ತು, ಕೋಶ ಓದು ಅನ್ನೋದು ಗಾದೆ. ಸಂಪಾದಕರು ದೇಶ ಸುತ್ತುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳುವ ತವಕದಲ್ಲಿರುವವರಾದರೆ ಅವರಿಗೆ ದೇಶದ ಒಳಗಡೆ ಎಕ್ಸಿಕ್ಯೂಟಿವ್ ದರ್ಜೆಯ ವಿಮಾನ ಪ್ರಯಾಣವನ್ನು ಸಂಸ್ಥೆ ಕಲ್ಪಿಸುತ್ತದೆ. ರಾಜ್ಯದ ಒಳಗಡೆ ಓಡಾಡಲು ಅವರಿಗೆ ಹವಾನಿಯಂತ್ರಿತ ಇನೋವಾ ಕಾರನ್ನು ನೀಡಲಾಗುತ್ತದೆ. ರಾಜ್ಯದ ಒಳಗಡೆ ಪ್ರಯಾಣಕ್ಕೆ ಅವರು ರೈಲನ್ನು ಬಳಸುವುದಾದರೆ ಮೊದಲ ದರ್ಜೆಯ ಹವಾನಿಯಂತ್ರಿತ ಬೋಗಿಯಲ್ಲಿ ಅವರು ಓಡಾಡಬಹುದು. ಇದೆಲ್ಲದರ ವೆಚ್ಚವನ್ನು ಸಂಸ್ಥೆಯೇ ಭರಿಸುತ್ತದೆ. ಸಂಪಾದಕರು ಅನಿಯಂತ್ರಿತವಾಗಿ ಸಂಪರ್ಕ ಸಾಧನಗಳನ್ನು ಬಳಸಬೇಕಾಗುತ್ತದೆ. ಅಂದರೆ ಲ್ಯಾಂಡ್ ಲೈನ್ ಫೋನು, ಇಂಟರ್‌ನೆಟ್ ಮತ್ತು ಮೊಬೈಲ್. ಇವುಗಳ ಎಲ್ಲ ಬಿಲ್‌ಗಳನ್ನು ಸಂಸ್ಥೆ ಮರುಪಾವತಿ ಮಾಡುತ್ತದೆ.

ಇನ್ನು ಸಹಾಯಕ ಸಂಪಾದಕರ ವಿಷಯಕ್ಕೆ ಬನ್ನಿ. ಅವರಿಗೆ ಸಂಸ್ಥೆ ಸುಮಾರು ೬೦,೦೦೦ ರೂಗಳನ್ನು ಕೊಡಮಾಡಬಹುದು. ಒಂದು ವೇಳೆ ಸಹಾಯಕ ಸಂಪಾದಕರು ವರದಿಗಾರಿಕೆಯ ವಿಷಯದಲ್ಲಿ ನಿಪುಣರಾಗಿದ್ದು, ಆ ಕುರಿತು ಅವರು ಆಸಕ್ತಿ ತೋರುವುದಾದರೆ ಅವರ ವರದಿಗಾರಿಕೆಯ ಅಸೈನ್‌ಮೆಂಟುಗಳಿಗೆ ವಿಶೇಷ ಭತ್ಯೆಯನ್ನು ಪಡೆಯುತ್ತಾರೆ.

ಇನ್ನು ಸುದ್ದಿ ಸಂಪಾದಕರ ವಿಷಯಕ್ಕೆ ಬನ್ನಿ. ಸುದ್ದಿ ಸಂಪಾದಕರು ಒಂದು ವೇಳೆ ಅಂಕಣಕಾರರೂ ಆಗಿದ್ದರೆ ತಲಾ ಒಂದು ಲೇಖನಕ್ಕೆ ಅವರು ೧,೦೦೦ದಂತೆ ವಿಶೇಷ ಭತ್ಯೆ ಪಡೆಯಬಹುದು. ಬೇರೆ ಬೇರೆ ಸ್ವರೂಪದ ಇಂಕ್ರಿಮೆಂಟುಗಳೂ ಇವರಿಗೆ ಲಭ್ಯ. ಅಂದಾಜಿಗೆ ಒಂದು ಐದು ಇಂಕ್ರಿಮೆಂಟು ಎಂದು ಭಾವಿಸಿದರೂ ಅವರು ತಿಂಗಳಿಗೆ ಒಟ್ಟು ೬೭,೦೦೦ ರೂ. ಪಡೆಯಬಹುದು.

ಇನ್ನು ವಿಶೇಷ ವರದಿಗಾರರಿಗೆ ಮುಖ್ಯ ವರದಿಗಾರರ ಹುದ್ದೆಗೆ ಸಮನಾಗಿ ಸಂಬಳ ನಿಗದಿಪಡಿಸುವ ಸಾಧ್ಯತೆಗಳಿರುತ್ತದೆ. ಇವರಿಗೂ ಒಂದೆರಡು ವಿಶೇಷ ಇಂಕ್ರಿಮೆಂಟುಗಳು ಲಭ್ಯವಾಗಬಹುದು. ವಿಶೇಷ ವರದಿಗಾರರೂ ಸಹ ಊರೂರು ಸುತ್ತಬೇಕು. ಹೀಗಾಗಿ ಅವರಿಗೆ ತಿಂಗಳಿಗೆ ೫,೫೦೦ ರೂ. ಪ್ರಯಾಣ ಭತ್ಯೆಯನ್ನೂ ನಿಗದಿಪಡಿಸಬಹುದು. ಒಟ್ಟಾರೆ ಅವರ ಸಂಬಳ ೭೦,೦೦೦ ತಲುಪಬಹುದು.

ಇದು ಒಂದು ಅಂದಾಜು ಪಟ್ಟಿ. ತುಂಬಾ ಕನ್‌ಫ್ಯೂಸ್ ಮಾಡಿದೆವು ಅನ್ನಿಸಿತಾ? ಕ್ಷಮಿಸಿ.

ಪತ್ರಕರ್ತರ ಸಂಬಳವನ್ನು ಹೈಪ್ ಮಾಡಿ ಹೇಳುವವರಿದ್ದಾರೆ. ಅವರ ಸಂಬಳ ಎಷ್ಟು ಗೊತ್ತಾ? ತಿಂಗಳಿಗೆ ೪ ಲಕ್ಷ, ೮ ಲಕ್ಷ ಎಂದು ಹೇಳುವವರಿದ್ದಾರೆ. ಹೀಗೆ ಹೇಳುವವರು, ಯಾರ ಕುರಿತು ಮಾತನಾಡುತ್ತಿರುತ್ತಾರೋ ಅವರನ್ನು ವೈಭವೀಕರಿಸಲು ಯತ್ನಿಸುತ್ತಿರುತ್ತಾರೆ ಅಥವಾ ಅವರ ಇಮೇಜು ಹಾಳುಮಾಡಲು ಯತ್ನಿಸುತ್ತಿರುತ್ತಾರೆ.

ಸತ್ಯ ಎಲ್ಲೋ ಮಧ್ಯೆದಲ್ಲಿ ಇರುತ್ತದೆ ಎಂದು ಹೇಳುವುದಕ್ಕೆ ಇಷ್ಟನ್ನು ಬರೆಯಬೇಕಾಯಿತು.

ಕೊನೆಕುಟುಕು: ಪತ್ರಕರ್ತರ ಕುರಿತು ಇರುವ ಒಂದು ಎಸ್‌ಎಂಎಸ್ ಇಲ್ಲಿದೆ, ಓದಿ ಅಭಿಪ್ರಾಯ ಹೇಳಿ.

Promises should be taken before choosing media field.
1. I have already enjoyed my life in childhood.
2. I love tension.
3. I dont want to spend time with my friends and family.
4. I love night duties.
5. I love to work on sundays and holidays.
6. I want to take revange on myself
7. I dont want to get married before 30 years of age.
8. I want to study until my death.
9. I dont want hair on my head.

ವಿಜ್ಞಾನಿಗಳಿಂದ ಟಿಆರ್‌ಪಿ ಹುಟ್ಟೋದಿಲ್ಲ, ಜ್ಯೋತಿಷಿಗಳಿಂದ ಹುಟ್ಟುತ್ತದೆ!


ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದರು ಕುವೆಂಪು. ನಿರಂಕುಶಮತಿ ಎಂಬ ಪದವನ್ನು ಅವರು ಇತ್ಯಾತ್ಮಕ ನೆಲೆಯಲ್ಲಿ ಬಳಸಿದ್ದರು. ನಿಮ್ಮ ಮತಿಯು ನಿಮ್ಮ ಹಿಡಿತದಲ್ಲಿರಲಿ, ಅದನ್ನು ಇತರರು ಆಳುವುದು ಬೇಡ ಎಂಬುದು ಅವರ ಸೂಚನೆಯಾಗಿತ್ತು. ಬುದ್ಧಿ ಮತ್ತು ವಿವೇಕವನ್ನು ಪ್ರಜ್ಞಾಪೂರ್ವಕವಾಗಿ ಕಾಪಾಡಿಕೊಳ್ಳುವುದು ಅಗತ್ಯ.

ನಿರಂಕುಶಮತಿಗಳಾಗುವುದೆಂದರೆ ಪ್ರಶ್ನಿಸುವುದು ಮತ್ತು ಎಲ್ಲವನ್ನು ತನ್ನ ಅರಿವಿನ ಬೆಳಕಲ್ಲಿ ಸಾಣೆ ಹಿಡಿದು ನೋಡುವುದು. ತನ್ಮೂಲಕ ಮೌಢ್ಯವೇ ಮೊದಲಾದ ಬಂಧನಗಳಿಂದ ಬಿಡುಗಡೆ ಹೊಂದುವುದು. ಗುಡಿ, ಚರ್ಚು, ಮಸಜೀದುಗಳ ಬಿಟ್ಟು ಹೊರಬನ್ನಿ ಎಂದು ಕುವೆಂಪು ಅವರು ಕರೆ ನೀಡಿದ್ದೂ ಈ ನೆಲೆಯಲ್ಲೇ.

ಇವತ್ತೇನಾಗಿದೆ ನೋಡಿ.

ಯಾವ ಮೌಢ್ಯ, ಕಂದಾಚಾರಗಳನ್ನು ಬಿಟ್ಟು ನಾವು ಇಷ್ಟೊತ್ತಿಗಾಗಲೇ ಬಹುದೂರ ಸಾಗಬೇಕಿತ್ತೋ, ಅದೇ ಮೌಢ್ಯದ ಕೂಪದಲ್ಲಿ ಹಿಂದೆಂದಿಗಿಂತಲೂ ಉಸಿರುಗಟ್ಟುವಂತೆ ಸಿಕ್ಕಿಬಿದ್ದಿದ್ದೇವೆ. ಮೌಢ್ಯದ ಹೊಸಹೊಸ ರೂಪಗಳು ಪ್ರತ್ಯಕ್ಷವಾಗಿವೆ ಮತ್ತು ಬಲಿಷ್ಠವಾಗಿ ಬೆಳೆದು ನಿಂತಿವೆ.

ಟಿವಿ ಚಾನಲ್‌ಗಳಲ್ಲಿ ದಿನ ಬೆಳಗಾದರೆ ಬಂದು ಕೂರುವ ಚಿತ್ರವಿಚಿತ್ರ ವೇಷಧಾರಿ ಜ್ಯೋತಿಷಿಗಳು ಅಳ್ಳೆದೆಯ ಜನರನ್ನು, ಅದರಲ್ಲೂ ವಿಶೇಷವಾಗಿ ದುರ್ಬಲ ಮನಸ್ಸಿನ ಹೆಣ್ಣುಮಕ್ಕಳನ್ನು ವಶೀಕರಣಗೊಳಿಸಿಕೊಂಡಿದ್ದಾರೆ. ಅತ್ತೆ-ಸೊಸೆ ಧಾರಾವಾಹಿ ಮಿಸ್ ಮಾಡಿಕೊಂಡರೂ ಅವರು ಈ ಜ್ಯೋತಿಷಿಗಳ ದುರ್ಬೋಧೆಯನ್ನು ಕಳೆದುಕೊಳ್ಳಲಾರರು. ಅವರು ಹೇಳಿದ್ದೇ ವೇದವಾಕ್ಯ. ತೋರಿಸಿಕೊಟ್ಟಿದ್ದೇ ಮಾರ್ಗ.

ಅದಕ್ಕೆ ನಾವು ಕೇಳಿದ್ದು ಟಿವಿ ಚಾನಲ್‌ಗಳಿಗೆ ಕನಿಷ್ಠ ಸಾಮಾಜಿಕ ಜವಾಬ್ದಾರಿಯೂ ಇರಬೇಡವೇ ಎಂದು.
ನಿಜ, ದೇವರು-ದೆವ್ವ-ಜ್ಯೋತಿಷ್ಯ-ಮಾಟ-ಮಂತ್ರ ಇತ್ಯಾದಿಗಳು ಅವರವರ ನಂಬಿಕೆಗಳಿಗೆ ಸಂಬಂಧಿಸಿದ್ದು. ಜ್ಯೋತಿಷ್ಯ ಕೇಳಿ ಹಲವರಿಗೆ ಸಮಾಧಾನವೂ ಆಗಬಹುದೇನೋ? ಇದೆಲ್ಲವೂ ಖಾಸಗಿಯಾದ ವಿಷಯಗಳು. ಆದರೆ ಇದ್ಯಾವುದೂ ಖಾಸಗಿಯಾಗಿ ಉಳಿದಿಲ್ಲ.

ಹಿಂದೆ ಕವಡೆ ಹಾಕಿ ಜ್ಯೋತಿಷ್ಯ ಹೇಳುವ ಗಿಳಿಶಾಸ್ತ್ರದವರೇ ಹೆಚ್ಚಿದ್ದರು. ಅವರು ಕಡಿಮೆ ಅಪಾಯಕಾರಿಗಳು. ಆದರೆ ಇಂದು ಲ್ಯಾಪ್‌ಟಾಪ್ ಹಿಡಿದು ಟಿವಿ ಸ್ಟುಡಿಯೋಗಳಲ್ಲಿ ಕೂರುತ್ತಿರುವ ಜ್ಯೋತಿಷಿಗಳು ಹೆಚ್ಚು ಅಪಾಯಕಾರಿಗಳು. ಯಾಕೆಂದರೆ ಇವರ ಜ್ಯೋತಿಷ್ಯಕ್ಕೆ ಲ್ಯಾಪ್‌ಟಾಪ್‌ನ ಮೂಲಕ ವೈಜ್ಞಾನಿಕ ಸ್ಪರ್ಶವೂ ಲಭ್ಯವಾದಂತೆ ಜನರಿಗೆ ತೋರುತ್ತದೆ.

ಗಮನಿಸಿ ನೋಡಿ. ದಿನನಿತ್ಯ ಟಿವಿಗಳಲ್ಲಿ ಲೈವ್ ಶೋ ನಡೆಸುವ ಜ್ಯೋತಿಷಿಗಳು ಕರೆ ಮಾಡಿದವರ ಜನ್ಮ ದಿನಾಂಕ ಕೇಳುತ್ತಾರೆ. ಅದನ್ನು ತಮ್ಮ ಲ್ಯಾಪ್‌ಟಾಪ್‌ನಲ್ಲಿ ಎಂಟರ್ ಮಾಡುತ್ತಾರೆ. ಕ್ಷಣಾರ್ಧದಲ್ಲಿ ಅವರಿಗೆ ಕರೆ ಮಾಡಿದ ವ್ಯಕ್ತಿಯ ಪೂರ್ತಿ ಜಾತಕವೇ ಲಭ್ಯವಾಗಿಬಿಡುತ್ತದೆ. ಯಾವ ವ್ಯವಹಾರಕ್ಕೆ ಕೈ ಹಾಕಿದರೂ ಕೈ ಹತ್ತುತ್ತಿಲ್ಲ, ನಂಬಿದವರೆಲ್ಲ ಕೈ ಬಿಟ್ಟರು, ಮನಸ್ಸಿನಲ್ಲಿ ಏನೋ ಒಂದು ತರಹದ ವೇದನೆ, ಮನೆಯಲ್ಲಿ ಕಿರಿಕಿರಿ, ಕಷ್ಟಗಳು ಒಂದಾದ ಹಿಂದರಂತೆ ಬರುತ್ತವೆ... ಹೌದೋ, ಅಲ್ವೋ ಎಂದು ಪ್ರಶ್ನಿಸಿಬಿಡುತ್ತಾರೆ. ಆ ಕಡೆಯಿಂದ ಹೌದು ಸ್ವಾಮೀಜಿ ಎಂಬ ಧ್ವನಿ ಕೇಳಿಬರುತ್ತದೆ.

ಎಲ್ಲ ಚೆನ್ನಾಗಿದ್ದವನು ಯಾಕೆ ಜಾತಕ ಕೇಳಲು ಬಯಸುತ್ತಾನೆ? ಎಲ್ಲರ ಬದುಕಿನಲ್ಲೂ ಇಂಥ ನೋವು ಇದ್ದೇ ಇರುತ್ತದೆ. ಮನೆಯಲ್ಲಿ ಕಿರಿಕಿರಿ, ಕಷ್ಟಗಳು ಮಾಮೂಲು. ಅದನ್ನೇ ಜ್ಯೋತಿಷಿ ಹೇಳಿದ ತಕ್ಷಣ ಸ್ವಾಮಿಗಳಿಗೆ ನನ್ನ ವಿಷಯ ಎಲ್ಲ ಗೊತ್ತು ಎಂದು ಮುಗ್ಧ ವ್ಯಕ್ತಿ ನಂಬಿಬಿಡುತ್ತಾನೆ.

ಎಲ್ಲ ಚಾನಲ್‌ಗಳಲ್ಲೂ ಇದೇ ಕಥೆ. ಜ್ಯೋತಿಷಿಗಳ ಫೋನ್ ನಂಬರು, ವಿಳಾಸ ಕಡೆಯಲ್ಲಿ ಪ್ರಸಾರವಾಗುತ್ತದೆ. ಯಾರ ಭವಿಷ್ಯ ಏನಾಗುತ್ತೋ ಏನೋ, ಜ್ಯೋತಿಷಿಗಳ ಬಾಳು ಬಂಗಾರವಾಗಿಬಿಡುತ್ತದೆ.

ನ್ಯೂಸ್ ಚಾನಲ್‌ಗಳನ್ನು ಗಮನಿಸಿ. ಅಲ್ಲೂ ಸಹ ಜ್ಯೋತಿಷಿಗಳಿಗೆ ಬೇಡಿಕೆ. ಮೊನ್ನೆ ದಾವಣಗೆರೆಯಲ್ಲಿ ಕಾಲೇಜು ಒಂದರ ಬಳಿ ಯಾರೋ ಮಾಟ ಮಾಡಿಸಿಟ್ಟಿದ್ದರಂತೆ. ನ್ಯೂಸ್ ಚಾನಲ್‌ಗಳಿಗೆ ಸುದ್ದಿಯ ಹಬ್ಬ. ಅದೂ ಪ್ರೇಮಿಗಳ ದಿನದ ಮುನ್ನಾದಿನ ಈ ಘಟನೆ ನಡೆದಿದ್ದರಿಂದ ಅದಕ್ಕೆ ಹೊಸ ಬಣ್ಣವನ್ನೂ ಬಳಿಯಲಾಯಿತು. ಆ ಕುರಿತು ಸ್ಟುಡಿಯೋಗಳಲ್ಲಿ ಲೈವ್ ಚರ್ಚೆ. ಯಾರೋ ಭಗ್ನ ಪ್ರೇಮಿಯೇ ಇದನ್ನು ಮಾಡಿಸಿದ್ದಾನೆ ಎಂಬುದು ಸುದ್ದಿಯ ಹೂರಣ. ಸುವರ್ಣ ನ್ಯೂಸ್‌ನ ಚರ್ಚೆಯಲ್ಲಿ ಇದ್ದ ಎಚ್.ಆರ್.ರಂಗನಾಥ್, ನೋಡಿ, ಯುವ ಜನಾಂಗ ಎಂಥ ಅಪಾಯಕಾರಿಯಾದ ಮೌಢ್ಯದ ಕಡೆ ಹೋಗುತ್ತಿದೆ ಎಂದು ಆತಂಕದಿಂದ ಹೇಳಿದರು. ಯಾರೋ ಒಬ್ಬ ತಲೆಕೆಟ್ಟವನು ತನ್ನ ಪ್ರಿಯತಮೆಯನ್ನು ಒಲಿಸಿಕೊಳ್ಳಲು ಮಾಟ ಮಾಡಿಸಿದ್ದರೆ, ಅದನ್ನು ಸಾರ್ವತ್ರೀಕರಣಗೊಳಿಸಿ ಯಾಕೆ ಮಾತಾಡ್ತೀರಿ ರಂಗಣ್ಣಾ ಎಂದು ಕೇಳಬೇಕೆನಿಸುತ್ತದೆ. ಸ್ಟುಡಿಯೋದಲ್ಲಿ ಜ್ಯೋತಿಷಿಗಳು, ವಾಮಾಚಾರ ತಜ್ಞರನ್ನು ಕೂರಿಸಿಕೊಂಡಿದ್ದನ್ನು ಸಮರ್ಥಿಸಿಕೊಳ್ಳಲು ಅವರು ಹೀಗೆಲ್ಲ ಮಾತನಾಡಲೇಬೇಕು ಎಂಬುದು ನೆನಪಾದಾಗ ಅವರ ಅಸಹಾಯಕತೆ ನೆನೆದು ಬೇಸರವಾಗುತ್ತದೆ.

ಹೀಗೆ ಚಾನಲ್‌ಗಳಿಂದಲೇ ಪ್ರಸಿದ್ಧಿಗೆ ಬಂದ ಜ್ಯೋತಿಷಿಗಳ ಸಂಖ್ಯೆ ಏರುತ್ತಲೇ ಇದೆ. ನಟಿಯೊಬ್ಬಳ ವಿವಾಹದ ಮುಹೂರ್ತ ನಿಗದಿ ಮಾಡಿದ ಜ್ಯೋತಿಷಿಯೊಬ್ಬನಿಗೆ ಚಾನಲ್ ಒಂದು ಪ್ರಚಾರ ಕೊಟ್ಟ ಪರಿಣಾಮ ಆತ ಎಷ್ಟು ವೇಗವಾಗಿ ಬೆಳೆದನೆಂದರೆ ಆತ ಈಗ ಜ್ಯೋತಿಷ್ಯದ ಜತೆಗೆ ರಾಜಕೀಯ ದಳ್ಳಾಳಿ ಕೆಲಸವನ್ನೂ, ಹೈಟೆಕ್ ವೇಶ್ಯಾವಾಟಿಕೆಯನ್ನೂ ನಡೆಸುತ್ತಾನೆ. ಹತ್ತು ಸಾವಿರ ರೂಪಾಯಿಯ ಉಂಗುರವೊಂದನ್ನು ಶೂನ್ಯದಲ್ಲಿ ತೆಗೆದು ಕೊಡುವ ಈತ, ತನ್ನ ಗ್ರಾಹಕನಿಂದ ಕೋಟಿಗಟ್ಟಲೆ ಸುಲಿಯಲು ಸಂಚು ರೂಪಿಸಿರುತ್ತಾನೆ. ತನಗೆ ಬಗ್ಗದವರನ್ನು, ಒಮ್ಮೆ ತನ್ನ ತೆಕ್ಕೆಯಲ್ಲಿ ಸಿಕ್ಕಿಬಿದ್ದವರನ್ನು ಬ್ಲಾಕ್‌ಮೇಲ್ ಮಾಡುವ ತಂತ್ರವೂ ಈತನಿಗೆ ಗೊತ್ತು.

ಟಿವಿಯಲ್ಲಿ ಕಾಣಿಸಿಕೊಂಡ ಎಲ್ಲ ಮುಖಗಳಿಗೂ ರೇಟಿಂಗು ಜಾಸ್ತಿಯಾಗಿದೆ. ಕೆಲವರನ್ನು ಭೇಟಿಯಾಗುವುದಕ್ಕೆ ತಿಂಗಳುಗಟ್ಟಲೆ ಕಾಯಬೇಕು. ಕನ್ಸಲ್ಟಿಂಗ್ ಫೀಜೇ ಸಾವಿರಗಟ್ಟಲೆ ಇರುತ್ತದೆ. ಹೀಗೆ ದುಡ್ಡು ತೆತ್ತು ಬಂದವರಿಗೆ ಸಮಾಧಾನ ಸಿಗುತ್ತಾ, ಸಮಸ್ಯೆಗಳು ಪರಿಹಾರ ಆಗುತ್ತಾ? ಉತ್ತರ ಕೊಡುವವರು ಯಾರು?

ಮಾಟಗಾರರು, ಜ್ಯೋತಿಷಿಗಳು, ವಾಮಾಚಾರ ಪಂಡಿತರಿಗೆ ಕೊಟ್ಟಷ್ಟು ಅವಕಾಶವನ್ನು ನಮ್ಮ ಚಾನಲ್‌ಗಳು ವಿಜ್ಞಾನಿಗಳಿಗೆ ಕೊಟ್ಟಿವೆಯೇ? ಯಾರಾದರೂ ಒಬ್ಬ ವಿಜ್ಞಾನಿಯನ್ನು ಜನರ ಮನಸ್ಸಲ್ಲಿ ಉಳಿಯುವಂತೆ ಪರಿಚಯಿಸುವ ಕೆಲಸ ಇವುಗಳಿಂದಾಗಿದೆಯೇ?

ಇವತ್ತು ಕೃಷಿ ಬಜೆಟ್ ನಡೆಯುತ್ತಿದೆ. ಎಷ್ಟು ಚಾನಲ್‌ಗಳಲ್ಲಿ ಈ ಕುರಿತು ಗಂಭೀರವಾದ ಚರ್ಚೆಗಳು ನಡೆದವು? ಸಮಯ ಟಿವಿಯಲ್ಲಿ ಶಶಿಧರ ಭಟ್ಟರು ಕೃಷಿ ವಿಜ್ಞಾನಿಗಳನ್ನು ಕರೆದು ಒಳ್ಳೆಯ ಕಾರ್ಯಕ್ರಮವೊಂದನ್ನು ನಡೆಸಿದರು. ಇಂಥವು ಅಲ್ಲೊಂದು ಇಲ್ಲೊಂದು ನಡೆದಿರಬಹುದು. ಆದರೆ ದೇಶದಲ್ಲೇ ಮೊದಲ ಬಾರಿಗೆ ಮಂಡನೆಯಾಗಲಿದ್ದ ಕೃಷಿ ಬಜೆಟ್ ಕುರಿತು ಜನರ ಮನಸ್ಸಿನಲ್ಲಿದ್ದ ಕುತೂಹಲ, ನಿರೀಕ್ಷೆಗಳಿಗೆ ಪೂರಕವಾಗಿ ಇನ್ನಷ್ಟು ವ್ಯಾಪಕವಾದ ಕಾರ್ಯಕ್ರಮಗಳನ್ನು ನಡೆಸಬಹುದಿತ್ತಲ್ಲವೇ?

ವಿಜ್ಞಾನಿಗಳಿಂದ ಚಾನಲ್‌ಗಳಿಗೆ ಟಿಆರ್‌ಪಿ ಹುಟ್ಟೋದಿಲ್ಲ. ಜ್ಯೋತಿಷಿಗಳಿಂದ ಹುಟ್ಟುತ್ತದೆ. ಹೀಗಾಗಿ ಅವರ ಆಯ್ಕೆ ಜ್ಯೋತಿಷಿಗಳೇ ಆಗಿರುತ್ತಾರೆ ಎಂಬುದು ಸರಳವಾದ ಉತ್ತರ.

ಆದರೆ ಒಂದು ತಲೆಮಾರಿನ ಜನರನ್ನು ಮೌಢ್ಯದ ಪಾತಾಳಕ್ಕೆ ತಳ್ಳಿದ ಮಹಾವಂಚನೆಯನ್ನು ಮಾಡುತ್ತಿದ್ದೇವೆ ಎಂಬ ಪಾಪಪ್ರಜ್ಞೆಯಾದರೂ ಇವರನ್ನು ಕಾಡಬಾರದೇ?

ಏನಂತೀರಿ?

Wednesday, February 23, 2011

ಟಿವಿ ಚಾನಲ್‌ಗಳಿಗೆ ಕನಿಷ್ಠ ಸಾಮಾಜಿಕ ಜವಾಬ್ದಾರಿಯೂ ಬೇಡವೇ?


ಜ್ಯೋತಿಷಿ ನರೇಂದ್ರ ಬಾಬು ಶರ್ಮನ ಕುರಿತಾಗಿ ಗಂಭೀರವಾದ ವಿಷಯಗಳನ್ನು ಓದುಗರು ಬರೆದು ಹೇಳುತ್ತಿದ್ದಾರೆ. ಈ ವ್ಕಕ್ತಿ ಲೈವ್ ಕಾರ್ಯಕ್ರಮಗಳಲ್ಲಿ ದೂರವಾಣಿ ಕರೆ ಮಾಡುವ ವೀಕ್ಷಕರ ಜತೆ ತೀರಾ ಕೆಟ್ಟದಾಗಿ, ಕೊಳಕು ಭಾಷೆಯಲ್ಲಿ ಮಾತನಾಡುತ್ತಾನೆ.

ಒಂದೆರಡು ಉದಾಹರಣೆಗಳು ಇಲ್ಲಿವೆ.

ಒಬ್ಬಾಕೆ ಕರೆ ಮಾಡಿ, ತನ್ನ ಗಂಡ ಬೇರೆ ಸ್ತ್ರೀ ಸಹವಾಸ ಮಾಡಿದ್ದಾನೆ. ಇದರಿಂದಾಗಿ ತನ್ನ ಮನಸ್ಥಿತಿ ಕೆಟ್ಟು ಹೋಗಿದೆ. ಏನಾದ್ರೂ ಪರಿಹಾರ ಕೊಡಿ ಎಂದು ಕೋರುತ್ತಾಳೆ. ನರೇಂದ್ರ ಬಾಬು ಶರ್ಮ ಆಕೆಯ ಜನ್ಮದಿನಾಂಕವನ್ನು ಗಮನಿಸಿ ಹೌದೋ, ನಿನ್ನ ಗಂಡ ಕೆಟ್ಟಿದ್ದಾನೋ? ನೀನು ಸರಿಯಾಗಿದ್ದೀಯಾ? ನಿನ್ನ ಜಾತಕ ಹೇಳಲಾ ನಾನು? ನಿನಗೆ ಯಾರೊಂದಿಗೆ ಸಂಬಂಧವಿದೆ ಹೇಳಲಾ? ಎಂದು ಅಬ್ಬರಿಸುತ್ತಾನೆ.

ಅತ್ತ ಗಾಬರಿ, ಆಘಾತದಿಂದ ಕರೆ ಮಾಡಿದಾಕೆ ಸಂಪರ್ಕ ಕಡಿತ ಮಾಡುತ್ತಾಳೆ. ನೋಡಿದ್ರಾ, ಅವಳ ಜಾತಕ ಹೇಳುವಷ್ಟರಲ್ಲಿ ಆಕೆ ಹೇಗೆ ಕರೆ ಕಟ್ ಮಾಡಿದಳು ಎಂದು ನರೇಂದ್ರ ಬಾಬು ಶರ್ಮ ವಿಕೃತವಾಗಿ ನಗುತ್ತಾನೆ. ಆಘಾತಕ್ಕೆ ಒಳಗಾದ ಹೆಣ್ಣುಮಗಳ ಕಥೆ ಏನಾಯ್ತು? ಆಕೆ ಚೇತರಿಸಿಕೊಂಡಳಾ? ಗೊತ್ತಿಲ್ಲ.

ನರೇಂದ್ರ ಶರ್ಮನ  ದೃಷ್ಟಿಯಲ್ಲಿ ಹೆಣ್ಣುಮಕ್ಕಳೆಂದರೆ ಲಕ್ಷಣವಾಗಿ ಸೀರೆ ಉಟ್ಟು, ಕೈ ತುಂಬಾ ಬಳೆ ತೊಟ್ಟು, ಹಣೆಯಲ್ಲಿ ರುಪಾಯಿ ಗಾತ್ರದ ಸಿಂಧೂರ ಧರಿಸಿಕೊಂಡಿರಬೇಕು. ತನ್ನ ಕಾರ್ಯಕ್ರಮದಲ್ಲಿ ಆತ ಹೆಣ್ಣುಮಕ್ಕಳನ್ನು ಆಗಾಗ ಕಿಂಡಲ್ ಮಾಡುತ್ತಲೇ ಇರುತ್ತಾನೆ.

ಈಗಿನ ಕಾಲದ ಹೆಂಗುಸ್ರು, ಅವರ ವೇಷನೋ, ಮುಂಡೇವು ಯಾಕೆ ಹುಟ್ಟಿದ್ವೋ ಅನ್ನಿಸುತ್ತೆ. ಹಣೆಯಲ್ಲಿ ಕುಂಕುಮವಿಲ್ಲ, ಕೈಯಲ್ಲಿ ಬಳೆಯಿಲ್ಲ, ಬೂಬಮ್ಮಗಳ ಹಾಗೆ ಇರತಾವೆ ಎಂದು ಕಮೆಂಟ್ ಮಾಡುತ್ತಾನೆ. ಉದ್ಯೋಗಸ್ಥ ಮಹಿಳೆಯರೆಂದರೆ ಈತನಿಗೆ ಅಲರ್ಜಿ. ಆಗಾಗ ಅವರನ್ನು ಟೀಕಿಸುತ್ತಲೇ ಇರುತ್ತಾನೆ.

ಮುಂಡೇವು, ಅದೇನೋ ನೈಟಿ ಅಂತ ಹಾಕ್ಕೊಳ್ತಾವೆ. ಮನೇಲೂ ನೈಟಿ, ಹೊರಗಡೆನೂ ನೈಟಿ. ದರಿದ್ರ ಬರೋದೇ ಅದಕ್ಕೆ ಎಂದು ತೀರ್ಮಾನ ಕೊಡುತ್ತಾನೆ.

ಬೆಳಿಗ್ಗೆ ಎದ್ದ ಮೇಲೆ ಯಾರ‍್ಯಾರ ಮುಖವನ್ನೋ ನೋಡಬೇಡಿ. ಚಪ್ಪಲಿ, ಪೊರಕೆ ನೋಡಬೇಡಿ. ಅದರಲ್ಲೂ ಮುಂಡೇವು ಎದ್ದ ತಕ್ಷಣ ಹೊರಗೆ ಬಂದು ಬಿಡುತ್ತವೆ. ಅಲ್ಲಿ ಯಾರ‍್ಯಾರೋ ಓಡಾಡ್ತಾ ಇರ‍್ತಾರೆ. ಅದರಲ್ಲೂ ಹಜಾಮರ ಮುಖವನ್ನು ನೋಡಿದರೆ ಅಶುಭವಾಗದೆ ಇನ್ನೇನಾಗುತ್ತದೆ... ಎನ್ನುತ್ತಾನೆ ಈ ಪ್ರಕಾಂಡ ಪಂಡಿತ.

ಸತ್ತಾಗ ನೀವೆಲ್ಲ ಕಣ್ಣುದಾನ ಮಾಡ್ತೀರಾ, ಮುಂದಿನ ಜನ್ಮದಲ್ಲಿ ನೀವೆಲ್ಲ ಕುರುಡರಾಗಿ ಹುಟ್ತೀರಾ... ಇದು ನರೇಂದ್ರ ಬಾಬು ಶರ್ಮನ ಮಹಾನ್ ಸಂಶೋಧನೆ.

ಸವಿತಾ ಸಮಾಜಕ್ಕೆ ಸೇರಿದ ಯುವಕನೋರ್ವ ಕರೆ ಮಾಡುತ್ತಾನೆ. ತಾನು ರಿಯಲ್ ಎಸ್ಟೇಟ್ ವೃತ್ತಿಯನ್ನು ಮಾಡಬೇಕೆಂದಿದ್ದೇನೆ. ಯಶಸ್ವಿಯಾಗ್ತೀನಾ ಹೇಳಿ ಎಂದು ನರೇಂದ್ರ ಶರ್ಮಾನನ್ನು ಕೇಳುತ್ತಾನೆ. ಯಾವ ಜಾತಿ ನೀನು? ಎಂದು ನರೇಂದ್ರ ಶರ್ಮ ಹೇಳುತ್ತಾನೆ. ಯುವಕ ತನ್ನ ಜಾತಿಯನ್ನು ಹೇಳಿಕೊಳ್ಳುತ್ತಾನೆ. ಓಹೋ ನೀವು ಅವರೋ, ನಿಮಗೆ ಕ್ಷೌರದ ಕೆಲಸ ಬಿಟ್ಟು ಬೇರೆ ಯಾವುದೂ ಬರಕತ್ತಾಗಲ್ಲ ಬಿಡು ಎಂದು ವಿಕೃತವಾಗಿ ಕೈಯಲ್ಲಿ ಕತ್ತರಿಯಿಂದ ಕತ್ತರಿಸುವ ಶೈಲಿಯನ್ನು ತೋರಿ ನಗುತ್ತಾನೆ.

ಇಷ್ಟೆಲ್ಲ ಹೇಳ್ತೀಯಲ್ಲ, ಗಾಯತ್ರಿ ಮಂತ್ರಕ್ಕೆ ಎಷ್ಟು ಪಾದಗಳಿವೆ ಹೇಳು ಅಂತ ಈತನ ಪತ್ರಿಕಾಗೋಷ್ಠಿಯೊಂದರಲ್ಲಿ ಹಿರಿಯ ಪತ್ರಕರ್ತ ಸ. ಚಂದ್ರಶೇಖರ ರಾವ್ ಗಂಟುಬಿದ್ದಿದ್ದರಂತೆ. ನರೇಂದ್ರ ಬಾಬು ಶರ್ಮ ಕಕ್ಕಾಬಿಕ್ಕಿ. ನಿನಗೆ ಗೊತ್ತಿರೋದೆಲ್ಲ ನೀನು ಹೇಳು, ನಿನಗೆ ಗೊತ್ತಿಲ್ಲದನ್ನು ನಾನು ಹೇಳ್ತೀನಿ ಅಂದ್ರೆ ಶರ್ಮ ಗಪ್‌ಚುಪ್. ಅಶ್ವಮೇಧ ಯಾಗ ಮಾಡ್ತೀನಿ ಅಂತೀಯಲ್ಲ, ಹಿಂದೆ ಕುದುರೆಯನ್ನು ರಾಣಿಯ ಜತೆ ಒಂದು ರಾತ್ರಿ ಮಲಗಿಸುತ್ತಿದ್ದರು. ನೀನು ಯಾರನ್ನು ಮಲಗಿಸುತ್ತೀ? ಯಾಗದ ಹೆಸರಲ್ಲಿ ಎಷ್ಟು ಕೋಟಿ ಕಲೆಕ್ಷನ್ ಮಾಡಿದ್ದೀ. ಎಲ್ಲಿ ಸ್ವಲ್ಪ ಲೆಕ್ಕ ಕೊಡು ಎಂದು ಅವರು ಸಾಲುಸಾಲು ಪ್ರಶ್ನೆ ಕೇಳಿದಾಗ ನರೇಂದ್ರ ಬಾಬು ಶರ್ಮ ಗೋಷ್ಠಿಯನ್ನೇ ಬರಕಾಸ್ತು ಮಾಡಿ ಓಡಿಹೋಗಿದ್ದನಂತೆ.

ಕಸ್ತೂರಿಯಲ್ಲಿ ಈತ ಕಾರ್ಯಕ್ರಮ ನಡೆಸುತ್ತಿದ್ದಾಗ, ಈತನನ್ನು ನೋಡಲು ಹಿಂಡುಗಟ್ಟಲೆ ಜನರು ಕಸ್ತೂರಿ ಕಚೇರಿಯೆದುರೇ ಬಂದು ನಿಲ್ಲುತ್ತಿದ್ದರು. ತೊಲಗ್ರೀ ಮುಂಡೇವಾ ಎಂದು ಈತ ಅವರನ್ನು ಅಕ್ಷರಶಃ ಒದ್ದುಕೊಂಡೇ ಕಚೇರಿಗೆ ಹೋಗುತ್ತಿದ್ದುದನ್ನು ಕಂಡವರಿದ್ದಾರೆ. ಕಚೇರಿಯಲ್ಲಿ ಕುಳಿತ ಪತ್ರಕರ್ತರು ಎದ್ದು ನಿಂತು ಈತನಿಗೆ ನಮಸ್ಕಾರ ಹೇಳದಿದ್ದರೆ, ದುರಹಂಕಾರಿ ಮುಂಡೇವು ಎಂದು ಗೊಣಗಿಕೊಂಡು ಹೋಗುತ್ತಿದ್ದ.

ಎಲ್ಲಾ ಹಾಳಾಗಿ ಹೋಗಲಿ, ಸಲ್ವಾರ್ ಕಮೀಜ್ ಧರಿಸಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತದೆ ಎಂದು ಹೇಳಿದ್ದನಂತೆ ಈ ಭೂಪ.

ಈತನಿಗೆ ಮೆದುಳಿಗೇ ತಗುಲಿಕೊಂಡಿರುವ ಕ್ಯಾನ್ಸರ್ ವಾಸಿ ಮಾಡೋದು ಯಾರು?

ಅಷ್ಟಕ್ಕೂ ಜೀ ಟಿವಿಯವರು ಯಾಕೆ ಇವನನ್ನು ಇನ್ನೂ ಇಟ್ಟುಕೊಂಡಿದ್ದಾರೆ? ಟಿಆರ್‌ಪಿ, ಹೊಟ್ಟೆಪಾಡು ಇತ್ಯಾದಿ ಸಮರ್ಥನೆಗಳನ್ನು ಅವರು ಕೊಡಬಹುದು. ಅದಷ್ಟೇ ಸಾಕೆ? ಅವರಿಗೆ ಕನಿಷ್ಠ ಸಾಮಾಜಿಕ ಜವಾಬ್ದಾರಿಯೂ ಇಲ್ಲವೇ? ಇದನ್ನು ಕೇಳುವವರು ಯಾರು?

ನೀವೇನಂತೀರಿ?

ದೀಪವು ನಿನ್ನದೇ ಗಾಳಿಯೂ ನಿನ್ನದೇ ಆಗದಿರಲಿ ಪ್ರಳಯ!


ಮಡೆ ಸ್ನಾನದ ಮಾನಾವಮಾನಗಳ ಚರ್ಚೆ ಕಾಲದೇಶಗಳ ಅಗತ್ಯಕ್ಕೆ ಅನುಸಾರವಾಗಿ ಇನ್ನೂ ಜಾರಿಯಲ್ಲಿರುವಾಗಲೇ, ಕನ್ನಡ ಟಿವಿ ವಾಹಿನಿಯ ಕಾರ್ಯಕ್ರಮವೊಂದು ದೀರ್ಪಾಚನೆಯ ಹೆಸರಿನಲ್ಲಿ ಕನ್ನಡ ಜನರನ್ನು ಗಾಡಾಂಧಕಾರಕ್ಕೆ ತಳ್ಳಿದೆ.

ಒಂದು ದೃಶ್ಯ ಮಾಧ್ಯಮ ಹೇಗೆ ಜನರನ್ನು ಮಂಕುಬೂದಿ ಎರಚಿ, ಹೊಸ ಹೊಸ ಸಂಪ್ರದಾಯ, ಆಚರಣೆಗಳನ್ನು ಜಾರಿಗೆ ತರಬಹುದು ಎನ್ನುವುದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ಹೀಗೆ ಹೊಸ ಮೌಢ್ಯಗಳನ್ನು ಸೃಷ್ಟಿಸುವ ಮೂಲಕ ತನ್ನ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಚಾನಲ್‌ಗಳು ಕರ್ನಾಟಕವನ್ನು ಶಿಲಾಯುಗಕ್ಕೆ ಮರಳಿಸಲು ಯತ್ನಿಸುತ್ತಿರುವ ಹಾಗಿದೆ.

ಇದು ನರೇಂದ್ರ ಸ್ವಾಮಿ ಎಂಬ ಜೋತಿಷಿಯ ಬೃಹತ್ ಬ್ರಹ್ಮಾಂಡದ ಫಲ.

೨೦೧೨ರ ಪ್ರಳಯವನ್ನು ತಪ್ಪಿಸಲು, ಮಂಗಳವಾರ ಸಂಜೆ ೭-೦೫ರಿಂದ ಸಂಜೆ ೭-೨೫ರೊಳಗೆ  ೨೦ ನಿಮಿಷದಲ್ಲಿ ದೀಪರಾಧನೆಯನ್ನು ದೇವಸ್ಥಾನದಲ್ಲಿ ನಡೆಸಬೇಕೆಂದು ಜೀ ಕನ್ನಡದ ಬೃಹತ್ ಬ್ರಹ್ಮಾಂಡದಲ್ಲಿ ಜ್ಯೊತಿಷಿ ನರೇಂದ್ರಸ್ವಾಮಿ ಅಪ್ಪಣೆ ಕೊಟ್ಟಿದ್ದೇ ತಡ  ನಿನ್ನೆ ಸಂಜೆ  ಭಕ್ತಸಾಗರವು ಕುಟುಂಬ ಸಮೇತರಾಗಿ ರಾಜ್ಯದ ವಿವಿಧ ದೇವಸ್ಥಾನದಲ್ಲಿ  ಹರಿದಿದೆ.

ಐದು ಧಾನ್ಯಗಳ ಎಣ್ಣೆಯಿಂದ ದೀಪ ಬೆಳಗಿಸುವ ಮೂಲಕ ಶಾಸ್ತ್ರೋಕ್ತವಾಗಿ ದೀರ್ಪಾಚನೆಯನ್ನು ನಡೆಸಬೇಕು, ಇದನ್ನು ಕಡ್ಡಾಯವಾಗಿ ಕುಟುಂಬ ಸಮೇತವಾಗಿಯೇ ಮಾಡಬೇಕು ಎಂದು ನರೇಂದ್ರ ಸ್ವಾಮಿ ಆದೇಶ ನೀಡಿದ್ದರಿಂದ ಎಲ್ಲೆಡೆ  ದೇವಸ್ಥಾನಗಳಲ್ಲಿ ನಿಲ್ಲಲ್ಲೂ ಜಾಗವಿರಲಿಲ್ಲ.

ದೀಪವು ನಿನ್ನದೇ, ಗಾಳಿಯೂ ನಿನ್ನದೇ, ಆರದಿರಲಿ ಬೆಳಕು ಎನ್ನುವ ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಯನ್ನು ಬದಲಿಸಿ, ದೀಪವು ನಿನ್ನದೇ ಗಾಳಿಯೂ ನಿನ್ನದೇ ಆಗದಿರಲಿ ಪ್ರಳಯ ಎಂದು ಹಾಡುತ್ತಾ ಐದು ಧಾನ್ಯಗಳ ಎಣ್ಣೆಗಾಗಿ ಅಂಗಡಿಗಳನ್ನು ಎಡತಾಕಿ ಇದ್ದಬದ್ದ ಎಣ್ಣೆಯನ್ನೆಲ್ಲಾ ಬಳಿದುಕೊಂಡು ಮೂರ್ಖರಾಗಿದ್ದು ಜನಸಾಮಾನ್ಯರು.

ನರೇಂದ್ರ ಸ್ವಾಮಿ ಕಸ್ತೂರಿ ಟಿವಿಯಲ್ಲಿ ಬ್ರಹ್ಮಾಂಡ ಕಾರ್ಯಕ್ರಮ ನಡೆಸುತ್ತಿದ್ದರು. ಯಾಗ ಯಜ್ಞದ ಹೆಸರಲ್ಲಿ ಹಣ ಸಂಗ್ರಹ ಶುರು ಮಾಡಿದಾಗ ಕಸ್ತೂರಿಯಿಂದ ಹೊರಗೆ ಕಳಿಸಲಾಯಿತು. ನಂತರ ಭವ್ಯ ಬ್ರಹ್ಮಾಂಡ ಎಂಬ ಹೆಸರಿನಲ್ಲಿ ಇದೇ ವ್ಯಕ್ತಿ ಸುವರ್ಣ ಟಿವಿಯಲ್ಲಿ ಹಾಜರಾದರು. ಅಲ್ಲೂ ಏನೋ ಜಟಾಪಟಿ ನಡೆದು ಈಗ ಜೀ ಟಿವಿಯಲ್ಲಿ ಪ್ರತಿಷ್ಠಾಪಿತರಾಗಿದ್ದಾರೆ. ಇಲ್ಲಿ ಈತ ನಡೆಸಿಕೊಡುವ ಕಾರ್ಯಕ್ರಮದ ಹೆಸರು ಬೃಹತ್ ಬ್ರಹ್ಮಾಂಡ. ಬೆಳಿಗ್ಗೆ ಎದ್ದು ಮೊದಲು ಕ್ಷೌರಿಕರ ಮುಖ ನೋಡಿದರೆ ಅಶುಭವಾಗುತ್ತದೆ ಎಂದು ಹಿಂದೆ ಈತ ತನ್ನ ಕಾರ್ಯಕ್ರಮದಲ್ಲಿ ಹೇಳಿದ ಪರಿಣಾಮವಾಗಿ ಪ್ರತಿಭಟನೆಗಳು ನಡೆದಿದ್ದವು.

ಕಳೆದ ದಶಕದಲ್ಲಿ ಕರ್ನಾಟಕದಲ್ಲಿ ಜನರ ಮೌಢ್ಯ, ಕಂದಾಚಾರಗಳು ಹೆಚ್ಚಾಗಿದ್ದರೆ  ಅದಕ್ಕೆ  ಟಿವಿ ಚಾನಲ್‌ಗಳ ಭವಿಷ್ಯ-ಭೂತಪ್ರೇತ ಸಂಬಂಧಿ ಕಾರ್ಯಕ್ರಮಗಳು ಕಾರಣ. ವೈಜ್ಞಾನಿಕ ಯುಗದಲ್ಲಿ ನಾಡನ್ನು ಮುನ್ನಡೆಸಬೇಕಾದ ದೃಶ್ಯ ಮಾಧ್ಯಮಗಳು ಜನರನ್ನು ಭೀತಿಗೆ ತಳ್ಳುತ್ತ, ಅವರೊಳಗಿನ ಮೌಢ್ಯವನ್ನು ಪೋಷಿಸುತ್ತ, ತಮ್ಮ ಜೇಬು ತುಂಬಿಸಿಕೊಳ್ಳುವ ಕೆಳದರ್ಜೆಯ ಕುತಂತ್ರಗಳನ್ನು ನಡೆಸುತ್ತಿವೆ. ಆಶ್ಚರ್ಯವೆಂದರೆ ಇದನ್ನು ಯಾರೂ ಸಹ ಪ್ರತಿಭಟಿಸದೇ ಇರುವುದು!

ವಿಚಾರವಾದಿಗಳೆನಿಸಿಕೊಂಡ ಬಹುತೇಕರೂ ಸಹ ಬಾಯಿಮುಚ್ಚಿಕೊಂಡಿದ್ದಾರೆ; ಕಾರಣವೇನೆಂದರೆ ಅವರು ಮೀಡಿಯಾಗಳ ವಿರುದ್ಧ ಧ್ವನಿಯೆತ್ತಿ ಅಪಾಯ ತಂದುಕೊಳ್ಳಲಾರರು! ಇದು ಇನ್ನೊಂದು ಬಗೆಯ ಮೌಢ್ಯ!

ವಿಜಯ ಕರ್ನಾಟಕ ಇಂದಿನ ಪತ್ರಿಕೆಯ ಮುಖಪುಟದಲ್ಲೇ ಈ ಅವಾಂತರ ಕುರಿತು ವರದಿ ಮಾಡಿ ಗಮನ ಸೆಳೆದಿದೆ. ಅದೊಂದು ಸಮಾಧಾನ. ಕರ್ನಾಟಕದ ಜನತೆಯನ್ನು ಸದ್ಯಕ್ಕೆ ಮೀಡಿಯಾಗಳಿಂದಲೇ ಕಾಪಾಡುವ ಕೆಲಸ ಆಗಬೇಕಿದೆ.!

Tuesday, February 22, 2011

ಸಂಪಾದಕರು ಬದಲಾದಂತೆ ಸ್ಟೈಲ್ ಶೀಟುಗಳೂ ಬದಲಾಗುತ್ತವೆ...


ಸ್ಟೈಲ್ ಶೀಟ್ ಅಥವಾ ಸ್ಟೈಲ್ ಮ್ಯಾನುಯಲ್ ಅಂದರೆ ಏನು ಅಂತ ಪತ್ರಕರ್ತರಿಗೆ ಗೊತ್ತೇ ಇರುತ್ತೆ. ಪತ್ರಕರ್ತರಲ್ಲದ ಬ್ಲಾಗ್ ಓದುಗರಿಗಾಗಿ ಕೆಲವು ಮಾಹಿತಿ. ಯಾವುದೇ ಪತ್ರಿಕೆಯೂ ತನ್ನದೇ ಆದ ಸ್ಟೈಲ್ ಶೀಟ್ ಹೊಂದಿರುತ್ತದೆ. ಪತ್ರಿಕೆಯ ಸಂಪಾದಕೀಯ ಬಳಗದ ಮುಖ್ಯಸ್ಥರು ತನ್ನ ಸಿಬ್ಬಂದಿಯ ಅನುಸರಣೆಗಾಗಿ ನೀಡುವ ತಾಂತ್ರಿಕ ಮಾರ್ಗದರ್ಶಿಯೇ ಸ್ಟೈಲ್ ಶೀಟ್. ಮನೆಯಲ್ಲಿ ಮಕ್ಕಳು ಯಾವ ಥರದ ಡ್ರೆಸ್ ಹಾಕಬೇಕು ಅಂತ ಹಿರಿಯರು ನಿರ್ಧಾರ ಮಾಡ್ತಾರಲ್ಲ ಹಾಗೆ ಇದು.

ನೀವು ಯಾವುದಾದರೂ ಒಂದು ಪತ್ರಿಕೆಯ ಮಾಸ್ಟ್‌ಹೆಡ್ ನೋಡದೆಯೇ ಆ ಪತ್ರಿಕೆಯ ಒಂದು ಸುದ್ದಿ ಓದಿ, ಪತ್ರಿಕೆ ಯಾವುದು ಎಂದು ಊಹೆ ಮಾಡಿಬಿಡಬಹುದು. ಅದು ಹೇಗೆಂದರೆ ಒಂದು ಪತ್ರಿಕೆ ಒಂದು ಶೈಲಿಯನ್ನು ಹೊಂದಿರುತ್ತದೆ. ಅದನ್ನು ಸಮಸ್ತ ಸಿಬ್ಬಂದಿಯೂ ಅನುಸರಿಸಬೇಕಾಗುತ್ತದೆ. ಪತ್ರಿಕೆಯಲ್ಲಿ ಬೇರೆ ಬೇರೆ ಶೈಲಿಯಲ್ಲಿ ಬರೆಯುವ ಸಿಬ್ಬಂದಿ ಇರಬಹುದು. ಆದರೆ ಏಕರೂಪತೆಯನ್ನು ತರುವುದು ಅನಿವಾರ್ಯ. ಉದಾಹರಣೆಗೆ ಚಳವಳಿ ಮತ್ತು ಚಳುವಳಿ ಎಂಬ ಎರಡು ಪದಗಳು ಬಳಕೆಯಲ್ಲಿವೆ. ಎರಡೂ ಸರಿಯಾದ ಪ್ರಯೋಗ ಎಂದು ಹಲವರು ಹೇಳುತ್ತಾರೆ. ಚಳವಳಿಯೇ ಸರಿ, ಚಳುವಳಿ ಅನ್ನಕೂಡದು ಎನ್ನುತ್ತಾರೆ ಮತ್ತೆ ಕೆಲವರು. ಹೀಗಿರುವಾಗ ಒಂದು ಪತ್ರಿಕೆ ಎರಡರಲ್ಲೊಂದು ಪದವನ್ನು ಬಳಸಬೇಕಾಗುತ್ತದೆ; ಎರಡನ್ನೂ ಅಲ್ಲ. ತತ್ತ್ವ ಅನ್ನೋದು ಸರಿಯಾದ ಪ್ರಯೋಗ. ಆದರೆ ಬಳಕೆಯಲ್ಲಿರುವುದು ತತ್ವ ಎಂಬ ಪ್ರಯೋಗವೇ. ಬದಲಾಯಿಸಿದರೆ ಇಂಥದೇ ಹಲವು ಪದಗಳನ್ನು ಬದಲಾಯಿಸಬೇಕಾಗುತ್ತದೆ. ಹೀಗಾಗಿ ಹಲವು ಸಂಪಾದಕರು ರಿಸ್ಕ್ ತೆಗೆದುಕೊಳ್ಳದೆ ಬಳಕೆಯಲ್ಲಿರೋದೇ ಇರಲಿ ಬಿಡ್ರಿ ಎನ್ನುತ್ತಾರೆ. ಕತೆ ಅನ್ನೋದೋ ಕಥೆ ಅನ್ನೋದೋ? ಎರಡೂ ಸರಿನೇ. ಹಾಗಂತ ಎರಡನ್ನೂ ಬಳಸುವುದು ಸರಿಯಲ್ಲ. ಹೀಗಾಗಿ ಒಂದು ತೀರ್ಮಾನ ತೆಗೆದುಕೊಳ್ಳಲೇಬೇಕಾಗುತ್ತದೆ. ಇದು ಬಹುತೇಕ ಸಂಪಾದಕೀಯ ಬಳಗದ ಮುಖ್ಯಸ್ಥರ ನಿಷ್ಕರ್ಷೆಗೆ ಬಿಟ್ಟ ವಿಚಾರ. ಕೆಲವೊಮ್ಮೆ ಇದು ಪ್ರತಿಷ್ಠೆಯ ಪ್ರಶ್ನೆಯೂ ಆಗಿಬಿಡುತ್ತದೆ. ಒಮ್ಮೆ ಒಂದು ಸ್ಟೈಲ್ ಶೀಟ್ ಬಂತೆಂದರೆ ಅದನ್ನು ಎಲ್ಲರೂ ಅನುಸರಿಸಲೇಬೇಕು.

ಪತ್ರಿಕೆಯಲ್ಲಿ ಬಳಸಲಾಗುವ ಮಾರ್ಜಿನ್ ಎಷ್ಟಿರಬೇಕು, ಫಾಂಟ್ ಯಾವುದನ್ನು ಬಳಸಬೇಕು ಮತ್ತು ಗಾತ್ರ ಎಷ್ಟಿರಬೇಕು, ಇಂಟರ್‌ಲೈನ್ ಸ್ಪೇಸ್ ಎಷ್ಟು ಕೊಡಬೇಕು, ಅಲೈನುಮೆಂಟು ಹೇಗಿರಬೇಕು ಎಲ್ಲವನ್ನು ಈ ಸ್ಟೈಲ್ ಶೀಟು ನಿರ್ಧರಿಸುತ್ತದೆ.
ಸಾಧಾರಣವಾಗಿ ಈ ಸ್ಟೈಲ್ ಶೀಟ್‌ಗಳು ಸಂಪಾದಕರ ಮರ್ಜಿಗೆ ಅನುಸಾರವಾಗಿಯೇ ಇರುತ್ತದೆ.

ಸಂಪಾದಕರು ಬದಲಾದರೆ?

ಈಗ ನೋಡಿ, ನಾವು ಓದುತ್ತಾ ಇರೋದು ವಿಜಯ ಕರ್ನಾಟಕನೋ, ಉದಯವಾಣಿನೋ, ಕನ್ನಡಪ್ರಭನೋ ಎಂಬ ಗೊಂದಲ ಒಮ್ಮೊಮ್ಮೆ ಮೂಡುವುದುಂಟು. ವಿಜಯ ಕರ್ನಾಟಕದಲ್ಲಿ ಹೆಡ್ಡಿಂಗುಗಳ ಜತೆ ಆಟ ಶುರುವಿಟ್ಟವರು ವಿಶ್ವೇಶ್ವರ ಭಟ್ಟರು. ಅದು ಚೆನ್ನಾಗಿ ವರ್ಕ್ ಔಟ್ ಕೂಡ ಆಯಿತು. ಇದೇ ಪ್ರಯೋಗ ಕನ್ನಡಪ್ರಭದಲ್ಲೂ ನಡೆದಿತ್ತು. ಭಟ್ಟರು ವಿಜಯ ಕರ್ನಾಟಕ ಬಿಟ್ಟ ಮೇಲೂ ಅಲ್ಲಿ ಹೆಡ್ಡಿಂಗುಗಳ ವಿಷಯದಲ್ಲಿ ಅಂಥ ಬದಲಾವಣೆಗಳೇನೂ ಆಗಿಲ್ಲ. ಯಾಕೆಂದರೆ ಈ ಪದಗಳ ಆಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ವಸಂತ ನಾಡಿಗೇರ್ ತರಹದವರು ಇನ್ನೂ ವಿಕದಲ್ಲೇ ಇದ್ದಾರೆ. ಇತ್ತ ಉದಯವಾಣಿ ಸೇರಿರುವ ರವಿ ಹೆಗಡೆ ಕೂಡ ಪಂಚಿಂಗ್ ಹೆಡ್ಡಿಂಗ್ ಶುರು ಮಾಡಿದ್ದಾರೆ. ಇವುಗಳನ್ನು ನೋಡಿ ಪ್ರಜಾವಾಣಿಯೂ ತನ್ನ ಸಾಂಪ್ರದಾಯಿಕ ಹೆಡ್ಡಿಂಗುಗಳನ್ನು ಬಿಟ್ಟು ಹೇಮಾಮಾಲಿನಿ ‘ರಾಜ್ಯ ಪ್ರವೇಶ ಎಂಬಂಥ ಹೆಡ್ಡಿಂಗು ಕೊಡುವುದಕ್ಕೆ ಆರಂಭಿಸಿದೆ.
ಈಗ ಪೂರ್ತಿ ಕನ್‌ಫ್ಯೂಸೋ ಕನ್‌ಫ್ಯೂಸು.

ವಿಜಯ ಕರ್ನಾಟಕದಲ್ಲಿ ಭಟ್ಟರು ಇದ್ದಾಗ ವಿಕಲಚೇತನ ಎಂಬ ಶಬ್ದವನ್ನು ಚಲಾವಣೆಗೆ ಬಿಟ್ಟರು. ಅಂಗವಿಕಲ ಎಂಬ ಪದ ನೋವುಂಟು ಮಾಡುವಂಥದ್ದು ಎಂಬುದು ಬದಲಾವಣೆಗೆ ಕಾರಣ. ಅಂಗವಿಕಲ ಎಂಬ ಸಂಯುಕ್ತ ಪದದಲ್ಲಿ ನೋವುಂಟು ಮಾಡುವ ಪದ ವಿಕಲ ಎಂಬುದೇ ಆಗಿತ್ತು. ಹೀಗಿರುವಾಗ ಆ ಪದವನ್ನು ಇಟ್ಟುಕೊಂಡೇ ಇನ್ನೊಂದು ಶಬ್ದವನ್ನು ಹೆಣೆದರೆ ಆಗುವ ಪ್ರಯೋಜನವೇನು ಅನ್ನೋದು ಹಲವರ ಪ್ರಶ್ನೆ. ಅಂಗವಿಕಲ ಅನ್ನೋ ಪದಕ್ಕಿಂತ ವಿಕಲಚೇತನ ಎಂಬ ಶಬ್ದವೇ ಹೆಚ್ಚು ನೋವುಂಟು ಮಾಡುವಂಥದ್ದು; ಯಾಕೆಂದರೆ ಚೇತನ ವಿಕಲಗೊಳ್ಳುವುದು ಸಾಧ್ಯವೇ ಎನ್ನುತ್ತಾರೆ ಅವರು.

ಈ ಗೊಂದಲದ ನಡುವೆಯೇ ಭಟ್ಟರು ಕನ್ನಡಪ್ರಭದಲ್ಲೂ ವಿಕಲ ಚೇತನ ಶಬ್ದವನ್ನು ಸ್ಟೈಲ್ ಶೀಟ್‌ನಲ್ಲಿ ತರುತ್ತಾರಾ? ಅತ್ತ ಈ ಪದ ಬಳಕೆ ಸರಿಯಲ್ಲ ಎಂಬ ಕಾರಣಕ್ಕೆ ವಿಜಯ ಕರ್ನಾಟಕದವರು ಕೈ ಬಿಡುತ್ತಾರಾ?

ಇವರೇನೋ ಶೈಲಿಯನ್ನು ಹೀಗೆ ಬದಲಾಯಿಸುತ್ತಾ ಇರುತ್ತಾರೆ? ಕನಫ್ಯೂಸ್ ಆಗುವ ನಮ್ಮಂಥ ಓದುಗರ ಕತೆ?

Monday, February 21, 2011

ಪ್ರತಾಪ್ ಸಿಂಹ ಮತ್ತು ಮೂವರು ಕನ್ನಡಪ್ರಭ ಸೇರಿದರು...


ನಿರೀಕ್ಷಿಸಿದಂತೆಯೇ ನಾಲ್ವರು ಪತ್ರಕರ್ತರು ಕನ್ನಡಪ್ರಭ ಸೇರ್ಪಡೆಗೊಂಡಿದ್ದಾರೆ. ಪಿ.ತ್ಯಾಗರಾಜ್, ರಾಧಾಕೃಷ್ಣ ಬಡ್ತಿ, ಪ್ರತಾಪ್ ಸಿಂಹ ಹಾಗು ವಿನಾಯಕ ಭಟ್ ಮೂರೂರು ಹೊಸದಾಗಿ ಸೇರ್ಪಡೆಗೊಂಡವರು.

ಎಲ್ಲರೂ ವಿಜಯ ಕರ್ನಾಟಕದಲ್ಲಿದ್ದವರು, ಎಲ್ಲರೂ ವಿಶ್ವೇಶ್ವರ ಭಟ್ಟರ ನಿರ್ಗಮನದ ನಂತರ ರಾಜೀನಾಮೆ ಕೊಟ್ಟು ಹೊರಬಂದವರು. ಒಂದು ವಿಶೇಷವೆಂದರೆ ಎಲ್ಲರಿಗೂ ಬಡ್ತಿ ದೊರಕಿದೆ. ವಿಜಯ ಕರ್ನಾಟಕದಲ್ಲಿದ್ದಾಗ ತ್ಯಾಗರಾಜ್ ಮುಖ್ಯ ವರದಿಗಾರರಾಗಿದ್ದರು, ಅವರೀಗ ಸಹಾಯಕ ಸಂಪಾದಕ. ಮುಖ್ಯ ಉಪಸಂಪಾದಕರಾಗಿದ್ದ ರಾಧಾಕೃಷ್ಣ ಬಡ್ತಿ ಕೂಡ ಸಹಾಯಕ ಸಂಪಾದಕರಾಗಿದ್ದಾರೆ. ವಿಜಯ ಕರ್ನಾಟಕದಲ್ಲಿ ಮುಖ್ಯ ಉಪಸಂಪಾದಕ ಹುದ್ದೆಯಲ್ಲಿದ್ದ ಪ್ರತಾಪ್ ಸಿಂಹ ಕನ್ನಡಪ್ರಭದಲ್ಲೀಗ ಸುದ್ದಿ ಸಂಪಾದಕರಾಗಿದ್ದಾರೆ. ದೆಹಲಿ ಪ್ರತಿನಿಧಿಯಾಗಿದ್ದ ವಿನಾಯಕ ಭಟ್ ಮೂರೂರು ವಿಶೇಷ ಪ್ರತಿನಿಧಿಯಾಗಿದ್ದಾರೆ.

ಅತ್ತ ಉದಯವಾಣಿಯಲ್ಲೂ ಹೊಸ ಮುಖಗಳು ಕಾಣಿಸಿಕೊಂಡಿವೆ. ಎಲ್ಲರೂ ಸುವರ್ಣ ನ್ಯೂಸ್‌ನಿಂದ ಬಂದವರು. ಎಲ್ಲರಿಗೂ ಪ್ರಮುಖ ಹುದ್ದೆಗಳೇ ದೊರಕಿವೆ. ಇನ್ನೂ ಒಂದೆರಡು ಮಂದಿ ಸೇರಿಕೊಳ್ಳುವ ನಿರೀಕ್ಷೆಯಿದೆ.

ಕನ್ನಡ ಮಾಧ್ಯಮ ರಂಗದಲ್ಲಿ ನಡೆಯುತ್ತಿರುವ ಪಲ್ಲಟಗಳು, ವಲಸೆ ಇತ್ಯಾದಿಗಳೆಲ್ಲ ನಿಧಾನವಾಗಿ ಒಂದು ಹಂತಕ್ಕೆ ತಲುಪಿ ಎಲ್ಲವೂ ಈಗ ನಿಚ್ಚಳವಾಗುತ್ತಿವೆ.

ಉಳಿದಿರುವ ಪ್ರಶ್ನೆ ಯಾರು ಯಾರು ಏನನ್ನು ಸಾಧಿಸಲಿದ್ದಾರೆ ಎಂಬುದಷ್ಟೆ.

ಹೊಸ ಜವಾಬ್ದಾರಿಗಳೊಂದಿಗೆ ಮರಳಿರುವ ಎಲ್ಲರಿಗೂ ಶುಭವಾಗಲಿ

ನಿಮಗೆ ಯಾರು ಇಷ್ಟವಾಗ್ತಾರೆ? ಪ್ಲೀಸ್ ಹೇಳಿ ಹೋಗಿ...


ವಿಶ್ವೇಶ್ವರ ಭಟ್ಟರ ನೇತೃತ್ವದಲ್ಲಿ ಕನ್ನಡಪ್ರಭ ನಂ.೧ ಪತ್ರಿಕೆಯಾಗಬಹುದೇ ಎಂಬ ಪ್ರಶ್ನೆ ಇಟ್ಟುಕೊಂಡು ಕಳೆದ ವಾರದ ಸಮೀಕ್ಷೆ ನಡೆಸಿದ್ದೆವು. ಈ ಬಾರಿ ಅಗ್ದಿ ಜೋರಾಗಿಯೇ ಮತದಾನ ನಡೆದಿದೆ. ಒಟ್ಟು ೪೭೦ ಮಂದಿ ವೆಬ್ ಓದುಗರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಇವರಲ್ಲಿ ೨೪೪ ಜನರಿಗೆ ವಿಶ್ವೇಶ್ವರ ಭಟ್ಟರು ಕನ್ನಡಪ್ರಭವನ್ನು ನಂ.೧ ಮಾಡುತ್ತಾರೆ ಎಂಬ ವಿಶ್ವಾಸವಿದೆ. ೨೦೭ ಮಂದಿ ಇದು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ೧೯ ಮಂದಿ ಗೊತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸರಿಸುಮಾರು ಶೇ.೫೧ರಷ್ಟು ಜನರಿಗೆ ಭಟ್ಟರ ಸಾಮರ್ಥ್ಯದ ಬಗ್ಗೆ ದೃಢ ನಂಬಿಕೆ ಇದೆ. ಶೇ.೪೪ರಷ್ಟು ಮಂದಿ ಪತ್ರಿಕೆಗಳ ಸೆಣೆಸಾಟದಲ್ಲಿ ಭಟ್ಟರು ಕನ್ನಡಪ್ರಭವನ್ನು ನಂ.೧ ಮಾಡಲಾರರು ಎಂದು ಬಲವಾಗಿ ನಂಬಿದ್ದಾರೆ. ಶೇ. ೪ರಷ್ಟು ಮಂದಿಗೆ ಈ ಬಗ್ಗೆ ಸ್ಪಷ್ಟ ಕಲ್ಪನೆ ಇದ್ದಂತೆ ಕಾಣುವುದಿಲ್ಲ.

ಕಾದು ನೋಡೋಣ, ಏನಾಗುತ್ತದೆ ಎಂಬುದನ್ನು.

ಅದು ಸರಿ, ಈಗ ಒಟ್ಟು ಐದು ನ್ಯೂಸ್ ಚಾನಲ್‌ಗಳು ಕನ್ನಡದಲ್ಲಿವೆ. ಈ ಪೈಕಿ ಉದಯ ನ್ಯೂಸ್ ಹೆಸರಿಗೆ ಮಾತ್ರ ನ್ಯೂಸ್ ಚಾನಲ್ ಆಗಿದೆ, ಅದನ್ನು ಬೇರೆ ನ್ಯೂಸ್ ಚಾನಲ್‌ಗಳ ಜತೆ ಪೈಪೋಟಿಗೆ ನಿಲ್ಲಿಸಲು ಅದರ ಮಾಲೀಕರಿಗೇ ಇಷ್ಟವಿದ್ದಂತಿಲ್ಲ. ಇನ್ನು ಉಳಿದಿರುವವು ನಾಲ್ಕು; ಟಿವಿ೯, ಸುವರ್ಣ ನ್ಯೂಸ್, ಸಮಯ ಹಾಗು ಜನಶ್ರೀ ನ್ಯೂಸ್. ಹೊಸ ಚಾನಲ್‌ಗಳು ಬಂದಂತೆಲ್ಲ ಹೊಸಹೊಸ ಮುಖಗಳು ಸುದ್ದಿ ನಿರೂಪಕರಾಗಿ, ವಿಶ್ಲೇಷಕರಾಗಿ ಕಾಣಿಸಿಕೊಳ್ಳುತ್ತಿವೆ. ಇವತ್ತು ಇದೇ ನಿರೂಪಕರು ಕನ್ನಡ ಮೀಡಿಯಾದ ಹೊಸ ಸ್ಟಾರ್‌ಗಳಾಗಿ ಮಿಂಚುತ್ತಿದ್ದಾರೆ. ಅವರುಗಳ ನಡುವೆಯೂ ಆರೋಗ್ಯಕರ ಪೈಪೋಟಿ ಜಾರಿಯಲ್ಲಿದೆ.

ಈಗ ಹೇಳಿ, ನಿಮಗೆ ಯಾರು ತುಂಬ ಇಷ್ಟವಾಗುವ ಟಿವಿ ಸ್ಟಾರ್? ನಿಮ್ಮ ಆಯ್ಕೆಗೆಂದು ಚಾಲ್ತಿಯಲ್ಲಿರುವ, ಜನಪ್ರಿಯರಾಗಿರುವ ಕೆಲವರ ಹೆಸರನ್ನು ಇಲ್ಲಿ ಸೂಚಿಸಿದ್ದೇವೆ. ನಿಮಗೆ ಇಷ್ಟವಾಗುವವರಿಗೆ ಮರೆಯದೆ ಓಟ್ ಮಾಡಿ. ಒಬ್ಬರಿಗೇ ಓಟ್ ಮಾಡಬೇಕು ಅಂತ ಏನೂ ಇಲ್ಲ, ನಿಮಗೆ ಇಷ್ಟವಾಗುವ ಎಲ್ಲರಿಗೂ ನೀವು ಓಟ್ ಮಾಡಬಹುದು. ಈ ಬಾರಿ ಆ ಅವಕಾಶವನ್ನು ಕಲ್ಪಿಸಲಾಗಿದೆ. ಮತ ಚಲಾಯಿಸುವುದಕ್ಕೆ ಮುನ್ನ ನಾವು ಆಯ್ದು ನೀಡಿರುವ ಅಭ್ಯರ್ಥಿಗಳ ಸಂಕ್ಷಿಪ್ತ ಪರಿಚಯವನ್ನೂ ಒಮ್ಮೆ ಗಮನಿಸಿ.

ಹಮೀದ್ ಪಾಳ್ಯ: ಈಟಿವಿ ಮೂಲಕ ಪರಿಚಿತರಾದವರು. ಅಲ್ಲಿ ಸುದ್ದಿ ವಾಚಕರಾಗಿದ್ದವರು ಟಿವಿ೯ಗೆ ಬಂದ ಕೂಡಲೇ ಸ್ಟಾರ್ ಆದರು. ಪಕ್ಕಾ ಪ್ರೊಫೆಷನಲ್. ಯಾವುದನ್ನು ಕೊಟ್ಟರೂ ನಿರ್ವಹಿಸಬಲ್ಲೆ ಎಂಬ ಆತ್ಮವಿಶ್ವಾಸ; ಅದಕ್ಕೆ ತಕ್ಕ ಅಧ್ಯಯನ. ಹಮೀದ್ ಎಂದರೆ ಒಂದು ಪಾಸಿಟಿವ್ ಎನರ್ಜಿ, ಪುಟಿಯುವ ಉತ್ಸಾಹ. ಹೀಗಾಗಿಯೇ ಅವರು ಬಹಳಷ್ಟು ವೀಕ್ಷಕರಿಗೆ ಅಚ್ಚುಮೆಚ್ಚು.

ರಂಗನಾಥ್ ಭಾರದ್ವಾಜ್: ಇವರೂ ಕೂಡ ಈಟಿವಿ ಪ್ರಾಡಕ್ಟೇ. ಟಿವಿ೯ನಲ್ಲಿ ಜನಪ್ರಿಯತೆ ಗಳಿಸಿದವರು. ಒಂದು ಸಿನಿಮಾಕ್ಕೆ ನಾಯಕರೂ ಹೌದು. ಲಘು ಹಾಸ್ಯ ಮಿಶ್ರಿತ ಶೈಲಿ, ಧ್ವನಿಯ ಏರಿಳಿತದಲ್ಲೇ ಮೋಡಿ ಮಾಡುವ ಕಲೆಗಾರ. ಸದ್ಯಕ್ಕೆ ಸುವರ್ಣ ನ್ಯೂಸ್ ಬಿಟ್ಟಿದ್ದಾರೆ. ಸಿನಿಮಾ ಶೂಟಿಂಗು ಮುಗಿಸಿದ ಮೇಲೆ ಜನಶ್ರೀ ಸೇರುತ್ತಾರೆ ಎಂಬುದು ವದಂತಿ.

ರೆಹಮಾನ್ ಹಾಸನ್: ಪವರ್ ಹೌಸ್ ಪರ್ಫಾಮರ್. ಖಚಿತವಾದ ಮಾತು, ದೃಢವಾದ ಧ್ವನಿ, ಸ್ಪಷ್ಟವಾದ ಉಚ್ಛಾರಣೆ. ಟಿವಿ೯ನಿಂದ ಹಲವರು ಗುಳೆ ಹೋದಾಗ ತಾನೇ ಮುಂದೆ ನಿಂತು ಕೊರತೆಯಾಗದಂತೆ ನೋಡಿಕೊಂಡ ನಿಷ್ಠಾವಂತ. ಮೂರು-ನಾಲ್ಕು ಗಂಟೆ ಸತತ ಕಾರ್ಯಕ್ರಮ ನಡೆಸಿರುವ ರೆಹಮಾನ್ ಟಿವಿ೯ನ ಸದ್ಯದ ಆಸ್ತಿ.

ಲಕ್ಷ್ಮಣ್ ಹೂಗಾರ್: ಕಮ್ಯುನಿಸ್ಟ್ ಹಿನ್ನೆಲೆ. ಜನವಾಹಿನಿ, ಕನ್ನಡಪ್ರಭದಲ್ಲಿ ಮೊದಲು ಸೇವೆ. ನಂತರ ಟಿವಿ೯ನಲ್ಲಿ ರಾಜಕೀಯ ವರದಿಗಾರ. ಈಗ ಚಕ್ರವ್ಯೂಹ ನಡೆಸುತ್ತಾರೆ, ಹಾಗೆಯೇ ರಾಜಕೀಯ ಸಂಬಂಧಿ ವಿಶೇಷ ಕಾರ್ಯಕ್ರಮಗಳನ್ನೂ ಕೂಡ. ಸೈದ್ಧಾಂತಿಕ ಸ್ಪಷ್ಟತೆ, ನಿಖರವಾದ ರಾಜಕೀಯ ಜ್ಞಾನ ಇರುವ ಹೂಗಾರ್ ಬಿಡುವಿನ ಸಮಯದಲ್ಲಿ ತನ್ನ ಸಣ್ಣ ತೋಟದಲ್ಲಿ ಭೂಮಿ, ಪ್ರಕೃತಿಯ ಜತೆ ಮುಖಾಮುಖಿಯಾಗಿ ಎಲ್ಲವನ್ನೂ ಮರೆಯುತ್ತಾರೆ.

ಚಂದ್ರೇಗೌಡ: ಕನ್ನಡಪ್ರಭ, ಈಟಿವಿಗಳಲ್ಲಿದ್ದು, ನಂತರ ಕೆಲಕಾಲ ಇಂಗ್ಲಿಷ್ ಮ್ಯಾಗಜೀನ್ ಒಂದಕ್ಕೆ ಕೆಲಸ ಮಾಡಿ, ಸುವರ್ಣದಲ್ಲಿದ್ದು ಇದೀಗ ಸಮಯದಲ್ಲಿರುವ ಚಂದ್ರೇಗೌಡ ಅವರ ಸದ್ಯದ ಡೆಸಿಗ್ನೇಷನ್ ಮುಖ್ಯ ವರದಿಗಾರ. ಪತ್ನಿ ಶಾರದಾ ನಾಯಕ್ ಕೂಡ ಪತ್ರಕರ್ತೆಯಾಗಿದ್ದವರು. ರಾಜಕೀಯ ಸಂಬಂಧಿ ಕಾರ್ಯಕ್ರಮಗಳನ್ನು ಚೆನ್ನಾಗಿ ನಡೆಸಿಕೊಡುತ್ತಾರೆ.

ಶಿವಪ್ರಸಾದ್ ಟಿ.ಆರ್.: ಟಿವಿ೯ನ ಮತ್ತೊಂದು ಆಸ್ತಿ. ಈಜಿಪ್ಟ್‌ನಲ್ಲಿ ಕ್ರಾಂತಿಯಾದರೆ, ದಿಲ್ಲಿಯಲ್ಲಿ ಚಳಿ ಬಿದ್ದರೆ, ಮಾಲೆಗಾಂವ್‌ನಲ್ಲಿ ಬಾಂಬ್ ಇದ್ದರೆ, ಹೀಗೆ ಎಲ್ಲಿ ಏನೇ ಆದರೂ ಶಿವಪ್ರಸಾದ್ ಅವರ ಧ್ವನಿಯೇ ಟಿವಿ೯ನಲ್ಲಿ ಕೇಳಿಬರುತ್ತದೆ. ಹೀಗೆ ಎಲ್ಲಕ್ಕೂ ಸ್ಪಂದಿಸುವ, ಅರಿತುಕೊಳ್ಳುವ ಅದಕ್ಕಾಗಿ ಅಧ್ಯಯನ ಮಾಡುವ ಶಿಸ್ತು ಶಿವಪ್ರಸಾದ್ ಅವರಿಗಿದೆ. ಕನ್ನಡ, ಇಂಗ್ಲಿಷ್ ಎರಡರಲ್ಲೂ ಬರೆಯುವ ಆರೋಗ್ಯಕರ ಅಭ್ಯಾಸವೂ ಇವರಿಗಿದೆ.

ಗೌರೀಶ್ ಅಕ್ಕಿ: ಇವರೂ ಕೂಡ ಈಟಿವಿಯಿಂದ ಬಂದವರೇ. ಸುವರ್ಣ ನ್ಯೂಸ್‌ನಲ್ಲಿ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಿದ್ದರೆ ಅಲ್ಲಿ ಅಕ್ಕಿ ಇರುತ್ತಾರೆ. ಅದು ವಿಶೇಷ ಪರಿಣತಿ, ಮಿಕ್ಕಂತೆ ರಾಜಕೀಯ, ಕಲೆ ಇತ್ಯಾದಿ ಎಲ್ಲಕ್ಕೂ ಸೈ. ಮೃದು ಮಾತು, ಅಪೀಲಿಂಗ್ ಆಗುವ ವ್ಯಾಖ್ಯಾನ ಇವರ ವಿಶೇಷ.

ರಮಾಕಾಂತ್: ಹಿಂದೆ ಟಿವಿ೯ನಲ್ಲಿದ್ದು, ನಂತರ ಕಸ್ತೂರಿ ಸೇರ್ಪಡೆಯಾಗಿ, ವಾಪಾಸು ಟಿವಿ೯ಗೆ ಬಂದು, ಇದೀಗ ಜನಶ್ರೀಯಲ್ಲಿರುವ ರಮಾಕಾಂತ್ ಸದ್ಯಕ್ಕೆ ಜನಶ್ರೀಯ ಮುಖ್ಯ ನಿರೂಪಕ. ಗಂಟೆಗಟ್ಟಲೆ ಕಾರ್ಯಕ್ರಮ ನಡೆಸುವ ಕ್ಷಮತೆ ಇದೆ ಎನ್ನುವುದು ಪ್ಲಸ್ ಪಾಯಿಂಟ್.

ಎಲ್ಲಾ ಸರಿ, ಹೆಣ್ಣು ಮಕ್ಕಳ ಹೆಸರೇ ಇಲ್ವಲ್ಲ ಅಂದಿರಾ? ಅವರ ಸಂಖ್ಯೆ ದೊಡ್ಡದು, ಅವರ ಕುರಿತು ಇನ್ನೊಮ್ಮೆ ಸಮೀಕ್ಷೆ ಮಾಡೋಣ. ಈಗ ದಯಮಾಡಿ ಓಟ್ ಮಾಡಿ, ಕಾಯ್ತಾ ಇರ‍್ತೀವಿ.

Saturday, February 19, 2011

ಬರೆಯುವವರ ಜಾತಿ, ಬರೆಯದವರ ಜಾತಿ, ಇರೋದು ಎರಡೇ ಜಾತಿ...


ಏನಾದ್ರೂ ಪ್ರಶ್ನೆ ಕೇಳಿ ಅಂತ ಕೇಳಿದೆ ನಿಮ್ಮನ್ನು. ಇದು ಪತ್ರಿಕೆ ತಂಡದ ಸಭೆ. ಏನನ್ನಾದರೂ ಕೇಳಬಹುದಿತ್ತು ನೀವು, ಏನನ್ನೂ ಕೇಳಲಿಲ್ಲ. ನಿಮ್ಮ ಮನಸ್ಸಿನಲ್ಲಿ ಇರಬಹುದಾದ ಪ್ರಶ್ನೆಗಳನ್ನು ಊಹಿಸಿ, ನಾನೇ ಎರಡು ಪ್ರಶ್ನೆ ಕೇಳಿಕೊಂಡು ಉತ್ತರ ಕೊಡುತ್ತೇನೆ. 
ನೀವೇನೋ ಬಂದ್ರಿ, ನಿಮ್ಮ ಜತೆ ಸೇರಿಕೊಳ್ಳಲು ಯಾರಾದರೂ ಬರುತ್ತಾರಾ? ಎಂಬುದು ಮೊದಲ ಪ್ರಶ್ನೆ. ಹೌದು, ನಾಲ್ಕು ಮಂದಿ ಬಂದು ಸೇರಿಕೊಳ್ಳುತ್ತಾರೆ-ಇದು ನನ್ನ ಉತ್ತರ. 
ಬರುವವರಿಂದ ನಮಗೆ ಏನಾದರೂ ಸಮಸ್ಯೆನಾ? ಜವಾಬ್ದಾರಿಗಳು ಬದಲಾಗುತ್ತವಾ? ಇದು ಎರಡನೇ ಪ್ರಶ್ನೆ. ಇಲ್ಲ, ಹಾಗೇನೂ ಆಗುವುದಿಲ್ಲ. ಬರುವವರಿಂದ ನಿಮಗೇನೂ ತೊಂದರೆಯಾಗುವುದಿಲ್ಲ. ಯಾರ ಜವಾಬ್ದಾರಿಗಳನ್ನೂ ಬದಲಾಯಿಸುವುದಿಲ್ಲ. ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡು ಹೋಗಿ- ಇದು ನನ್ನ ಉತ್ತರ. 
ನನಗೆ ಜಾತಿ, ಮತ ಇತ್ಯಾದಿಗಳಿಲ್ಲ. ನನಗೆ ಗೊತ್ತಿರೋದು ಎರಡೇ ಜಾತಿ. ಒಂದು ಬರೆಯುವವರ ಜಾತಿ, ಇನ್ನೊಂದು ಬರೆಯದವರ ಜಾತಿ. ನೀವು ಬರೆಯುವವರ ಜಾತಿನೋ, ಬರೆಯದವರ ಜಾತಿನೋ ಅಂತ ನೀವೇ ತೀರ್ಮಾನ ಮಾಡಿಕೊಳ್ಳಿ. ನಿಮ್ಮಿಂದ ಸಾಧ್ಯವಾಗದಿದ್ದರೆ ಮೂರು ತಿಂಗಳು ಸಮಯ ಕೊಡಿ, ನಾನೇ ಹೇಳುತ್ತೇನೆ. 
ಎಲ್ಲರೂ ಬರೆಯಿರಿ. ನಿಮ್ಮ ಬರವಣಿಗೆ ಸರ್‌ಪ್ರೈಸಿಂಗ್ ಆಗಿರಬೇಕು, ಫ್ರೆಷ್‌ನೆಸ್ ಇರಬೇಕು. ಒಡೆದು ಕಟ್ಟುವ ಕೆಲಸ ನಮ್ಮಿಂದ ಆಗಬೇಕು. ಹಿಂದೆಲ್ಲ ಯಾರಾದರೂ ಸತ್ತರೆ ದೇಹಾಂತ್ಯ ಅಂತನೂ ಬರೆಯುವ ಹಾಗಿರಲಿಲ್ಲ. ಬರೆದರೆ ಏಕೆ ಇಂಥ ಪದ ಪ್ರಯೋಗ ಮಾಡಿದ್ರಿ ಎಂದು ಪ್ರಶ್ನಿಸುತ್ತಿದ್ದರು. ಈಗ ಹಾಗಿಲ್ಲ, ಪ್ರಕಾಶಮಾಯ ಅಂತ ಹೆಡ್ಡಿಂಗು ಕೊಟ್ಟರೆ ಕನಿಷ್ಠ ಐವತ್ತು ಓದುಗರು ಹೆಡ್ಡಿಂಗು ಚೆನ್ನಾಗಿತ್ತು ಅಂತ ಎಸ್‌ಎಂಎಸ್ ಮಾಡ್ತಾರೆ. 
...ಅವರು ಗೊತ್ತಲ್ಲ ನಿಮಗೆ. ಹಿಂದೆ ಅವರು ಪೇಟೆಧಾರಣೆ, ಟ್ರೈನ್ ಟೈಮಿಂಗ್ ಇತ್ಯಾದಿ ಬರೆಯುತ್ತಿದ್ದರು. ಪ್ರತಿಭಾವಂತರು. ಅವಕಾಶ ನೀಡಿದೆ, ಬಳಸಿಕೊಂಡರು. ಅವರು ಬರೆದಷ್ಟು ಅಂಕಣವನ್ನು ಮತ್ತೆ ಯಾರೂ ಬರೆಯಲಿಲ್ಲ. ನಿಮ್ಮಲ್ಲಿ ಯಾರಿಗೆ ಯಾವ ಆಸಕ್ತಿ ಇದೆಯೋ ನನಗೆ ತಿಳಿಸಿ. ಅಂಕಣ ಬರೆಯುವುದಾದರೆ ಬರೆಯಿರಿ. ಎಲ್ಲರಿಗೂ ಇಲ್ಲಿ ಸ್ಪೇಸ್ ಇರುತ್ತದೆ. ಪತ್ರಿಕೆಯಲ್ಲಿ ಕೆಲಸ ಮಾಡುವವರ ಭಾವಚಿತ್ರದ ಜತೆ ಅಂಕಣ, ಲೇಖನ ಬರೆಸಲು ಆರಂಭಿಸಿದ್ದು ನಾನು. ಅದು ನಿಮಗೆ ಗೊತ್ತಿದೆ ಎಂದು ಭಾವಿಸುತ್ತೇನೆ. ನಿಮ್ಮಲ್ಲಿ ನನಗಿಂತ ತಿಳಿದವರು ಇರಬಹುದು. ಒಂದೇ ರಾತ್ರಿಯಲ್ಲಿ ಎಲ್ಲವನ್ನೂ ಬದಲಿಸಿ ಕ್ರಾಂತಿ ಮಾಡುವ ಭ್ರಮೆಯೇನು ನನಗಿಲ್ಲ. ನಿಮ್ಮೆಲ್ಲರ ಸಹಕಾರ ನನಗೆ ಬೇಕು. ಎಲ್ಲರೂ ಸೇರಿಯೇ ಪತ್ರಿಕೆಯನ್ನು ಬೆಳೆಸೋಣ. 
ಬರೀತಾ ಹೋಗಿ ನೀವು. ಇಷ್ಟು ಗಂಟೆಗೇ ಬರಬೇಕು, ಇಷ್ಟು ಗಂಟೆಗೇ ಹೋಗಬೇಕು ಎಂಬ ನೌಕರಿ ತರಹ ಪತ್ರಿಕಾವೃತ್ತಿಯಲ್ಲ. ನೀವು ಎಷ್ಟು ಹೊತ್ತು ಹೊರಗಿರುತ್ತೀರೋ, ಅದರಿಂದ ಪತ್ರಿಕೆಗೆ ಅನುಕೂಲವಾಗಬೇಕು. ರಜೆ ಬೇಕು ಅಂದ್ರೆ ತಗೊಳ್ಳಿ, ಒಂದು ವಾರ, ತಿಂಗಳು, ವರ್ಷ... ಎಷ್ಟು ಬೇಕಾದರೂ ತಗೊಳ್ಳಿ. ಒಂದು ವರ್ಷದ ರಜೆ ಆರು ವರ್ಷ ಬರೆಯುವುದಕ್ಕೆ ಸರಕಾಗಬೇಕು. ದೇಶ ಸುತ್ತಿ, ವಿದೇಶಕ್ಕೂ ಹೋಗಿಬನ್ನಿ, ಆದರೆ ನಿಮ್ಮ ಪ್ರವಾಸ, ಅಧ್ಯಯನ ಪತ್ರಿಕೆಗೆ ಎಷ್ಟು ಅನುಕೂಲ ಅನ್ನುವುದಷ್ಟೇ ನನ್ನ ಲೆಕ್ಕಾಚಾರ. 
ಹಿಂದೆ ನಾನು ಯಾರೊಬ್ಬರಿಗೂ ಮೆಮೋ ಕೂಡ ಕೊಟ್ಟವನಲ್ಲ. ಅಂಥದ್ದರಲ್ಲಿ ನನಗೆ ನಂಬಿಕೆಯೂ ಇಲ್ಲ. ಹಾಗಂತ ನಾನು ಪನಿಷ್ ಮಾಡಲ್ಲ ಅಂತಲ್ಲ. ಯಾರಾದ್ರೂ ತಪ್ಪು ಮಾಡಿದರೆ ನನ್ನ ಎದುರು ಅರ್ಧ ಗಂಟೆ ನಿಲ್ಲಿಸಿಕೊಳ್ಳುತ್ತೇನೆ, ಅಷ್ಟು ಶಿಕ್ಷೆ ಸಾಕು ಅಂದುಕೊಳ್ತೀನಿ. 
ತುಂಬಾ ದೊಡ್ಡದೊಡ್ಡವರು ಕುಳಿತು ಹೋದ ಸಂಪಾದಕ ಸ್ಥಾನ ಇದು. ಆ ಜವಾಬ್ದಾರಿ ನನಗಿದೆ, ನಿಭಾಯಿಸುವ ವಿಶ್ವಾಸವೂ ನನಗಿದೆ. 
ಎಲ್ಲರಿಗೂ ಒಳ್ಳೆಯದಾಗಲಿ, ಹೋಗಿಬನ್ನಿ.

                                                                        ****

ಈಗೀಗ ಗಾರ್ಮೆಂಟ್ಸ್ ನೌಕರರಿಗೆ ಇರುವಷ್ಟೂ ಭದ್ರತಾಭಾವ ಪತ್ರಕರ್ತರಿಗಿಲ್ಲ. ದೊಡ್ಡದೊಡ್ಡವರೇ ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಂಡು ಬ್ಯಾಗು ನೇತುಹಾಕಿಕೊಂಡು ಹೊರಟುಬಿಡುವ ಕಾಲ ಇದು. ಮಾಧ್ಯಮ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು ಕಿರಿಯ ಪತ್ರಕರ್ತರಲ್ಲಿ ಅಭದ್ರತಾ ಭಾವ ಮೂಡಿಸಿರುವುದು ಸುಳ್ಳಲ್ಲ. ಹೀಗಿರುವಾಗ ಒಬ್ಬ ಸಂಪಾದಕ ಹೊಸದಾಗಿ ಕೂಡಿಕೊಂಡ ಸಂಸ್ಥೆಯ ಹಳೆಯ ಸಿಬ್ಬಂದಿಯೊಂದಿಗೆ ಇದಕ್ಕಿಂತ ವಿಶ್ವಾಸಪೂರ್ವಕವಾಗಿ ಮಾತನಾಡಲು ಸಾಧ್ಯವೇ? ಹಳೆಯ ಸಿಬ್ಬಂದಿ ಒಳಗಿನ ದುಗುಡ, ಆತಂಕಗಳನ್ನು ತಣಿಸಲು ಇದಕ್ಕಿಂತ ಒಳ್ಳೆಯ ಮಾತುಗಳು ಬೇಕೆ?

ಹೀಗೆಲ್ಲ ತಮ್ಮ ಸಿಬ್ಬಂದಿಯೊಂದಿಗೆ ಮಾತನಾಡಬಲ್ಲ, ನಡೆದುಕೊಳ್ಳಬಲ್ಲ ವಿಶ್ವೇಶ್ವರ ಭಟ್ಟರು ಇಷ್ಟವಾಗುವುದು ಈ ಕಾರಣಗಳಿಗೇ ಅಲ್ಲವೇ?

Friday, February 18, 2011

ಮಾಂಸದ ಅಂಗಡಿಯಲ್ಲಿ ಚೆಂಡುಹೂವು ನೇತುಹಾಕ್ತಾರಾ ಚಿದಾನಂದಮೂರ್ತಿಗಳೇ?


ಸನ್ಮಾನ್ಯ ಡಾ. ಎಂ.ಚಿದಾನಂದಮೂರ್ತಿಯವರೇ,

ರಾಜ್ಯಪಾಲರು ಡಾಕ್ಟರೇಟು ತಡೆಹಿಡಿದದ್ದು, ಅನಂತಮೂರ್ತಿಯಂಥವರು ಪ್ರತಿಭಟಿಸಿದ್ದು, ಸಾಹಿತ್ಯ ಸಮ್ಮೇಳನದಲ್ಲಿ ಖಂಡನಾ ನಿರ್ಣಯ ಅಂಗೀಕಾರವಾಗಿದ್ದು, ರಾಜ್ಯಪಾಲರು ನಿಲುವು ಬದಲಿಸಿಕೊಂಡಿದ್ದು, ನೀವು ಡಾಕ್ಟರೇಟು ಸ್ವೀಕರಿಸಿದ್ದು, ಚಿದಾನಂದಮೂರ್ತಿಯವರೇನು ಕರ್ನಾಟಕಕ್ಕಿಂತ ದೊಡ್ಡವರಾ ಎಂದು ಪಾಪು ಪ್ರಶ್ನಿಸಿದ್ದು... ಇತ್ಯಾದಿ ಇತ್ಯಾದಿಗಳ ವಿಷಯ ದೇವರಾಣೆಗೂ ನಾವು ಚರ್ಚಿಸುವುದಿಲ್ಲ. ಅದೆಲ್ಲ ಈಗ ಹಳೆಯ ಸುದ್ದಿಯಾಯಿತು.

ವಾಚಕರ ವಾಣಿಗಳಿಗಾಗಿ ನೀವು ಬರೆದ ಪತ್ರವೊಂದನ್ನು ಹೊಸದಿಗಂತದಲ್ಲಿ ಮೊನ್ನೆ ಹಾಗು ಕನ್ನಡಪ್ರಭದಲ್ಲಿ ನಿನ್ನೆ ಓದಿದೆವು. ಆ ಪತ್ರಕ್ಕೆ ಇದು ಪ್ರತಿಪತ್ರ.  ದಯಮಾಡಿ ಪರಾಂಬರಿಸಬೇಕು. ನೀವು ಎಂ.ಪಿ.ಪ್ರಕಾಶರ ಅಂತಿಮ ದರ್ಶನಕ್ಕೆ ಹೋಗಿದ್ದು, ವಾಪಾಸು ಬರುತ್ತಾ ಭಿಕ್ಷುಕಿಗೂ ಆಕೆಯ ಮೂವರು ಮಕ್ಕಳಿಗೂ ಕಾಸು, ಚಾಕಲೇಟು ಕೊಟ್ಟಿದ್ದು, ಗಳಗಳನೆ ಅತ್ತಿದ್ದು.. ಇತ್ಯಾದಿ ಬರೆದಿದ್ದೀರಿ. ಅದು ನಿಮ್ಮ ಮಾನವೀಯತೆಯನ್ನು ತೋರಿಸುತ್ತದೆ, ಸಂತೋಷ.

ನಂತರ ನೀವೇನು ಬರೆಯುತ್ತಾ ಹೋದಿರಿ? ಏನಾಗಿದೆ ನಿಮಗೆ?

ನಿಮ್ಮ ಪತ್ರದ ಕೆಲವು ಸಾಲುಗಳು ಇವು:

ಮುಂದೆ ಆಟೋ ಹಂಪಿನಗರದ ಮನೆಗೆ ಗೋರಿಪಾಳ್ಯದ ಮೂಲಕ ಬಂದಿತು. ಅಲ್ಲಿನ ಪ್ರದೇಶದಲ್ಲಿ ನಿಧಾನಕ್ಕೆ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ- ಮುಸ್ಲಿಮರೇ ಜಾಸ್ತಿಯಿರುವುದರಿಂದ ಅನೇಕರು ಹೆದರಿ ತಮ್ಮ ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ. ಅಲ್ಲಿನ ಮುಖ್ಯ ರಸ್ತೆಯಲ್ಲಿ ಬಂದರೆ ಮಾಂಸದ ಕೆಟ್ಟ ವಾಸನೆ, ಹಲವು ಮಸೀದಿಗಳು ಅಲ್ಲಿವೆ-ಅಲ್ಲಿನ ಧ್ವನಿವರ್ಧಕಗಳಿಂದ ನನ್ನ ಮನೆಗೆ ಅಲ್ಲಿ ನಡೆಯುವ ಪ್ರಾರ್ಥನೆಗಳು ಕೇಳಿಸುತ್ತವೆ. 
ಆ ಮುಖ್ಯ ರಸ್ತೆಯಲ್ಲಿ ಬಲಗಡೆ ಒಂದು ಚರ್ಚು; ಅದರ ಎದುರಿಗೆ ಒಂದು ಮಾಂಸದ ಅಂಗಡಿಯಲ್ಲಿ ಮಾಂಸವನ್ನು ನೇತು ಹಾಕಿದ್ದರೆ ಅದರ ಮುಂದೆಯೇ ಒಂದು ಹಸು ನಿಂತಿತ್ತು. ಅದನ್ನು ದಾಟಿ ಬಂದರೆ ಅಲ್ಲೇ ಒಂದು ಹಿಂದೂ ದೇವಾಲಯ. ಅದರಿಂದ ಮುಂದೆ ಬಂದರೆ ಅಲ್ಲೇ ಎಡಗಡೆ ಮೂರು ನಾಲ್ಕು ಚಿಕ್ಕ ಮನೆಗಳ ಮೇಲೆ ಹಲವು ಹಸಿರು ಬಾವುಟಗಳು, ಮನಸ್ಸು ತೀರಾ ಖಿನ್ನವಾಯಿತು.

ಈಗ ನಿಧಾನವಾಗಿ ನಿಮ್ಮ ಮಾತುಗಳ ಕುರಿತು ಚರ್ಚಿಸೋಣ. ಹೌದು, ಗೋರಿಪಾಳ್ಯದಲ್ಲಿ ಮುಸ್ಲಿಮರೇ ಹೆಚ್ಚು. ಇರಬಾರದು ಎಂದು ಹೇಳಿದವರ‍್ಯಾರು? ಯಾಕಿರಬಾರದು? ಒಂದೊಂದು ಬಡಾವಣೆಗಳಲ್ಲಿ ಒಂದೊಂದು ಜಾತಿಯವರು, ಧರ್ಮದವರು ಹೆಚ್ಚು ಇರಬಹುದು, ಇರುತ್ತಾರೆ. ನಮ್ಮ ಹಳ್ಳಿಗಳಲ್ಲಿ ಜಾತಿಗೊಂದು ಕೇರಿ ಇರುವುದಿಲ್ಲವೇ? ಯಾಕೆ ಬೇಜಾರು ಮಾಡಿಕೊಳ್ತೀರಿ? ಮುಸ್ಲಿಮರಿಗೆ ಹೆದರಿ ಅನೇಕರು ತಮ್ಮ ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ ಎಂದು ನಿಮಗೆ ಹೇಗೆ ಗೊತ್ತಾಯಿತು?  ಅಣ್ಣಿಗೇರಿಯಲ್ಲಿ ಪಂಪನ ವಂಶಸ್ಥರನ್ನು ಹುಡುಕಿದ ಹಾಗೆ ಗೋರಿಪಾಳ್ಯದಲ್ಲಿ ಭೀತಿಯಿಂದ ಆಗುತ್ತಿರುವ ವಲಸೆ ಕುರಿತು ಗಂಭೀರ ಸಂಶೋಧನೆಯನ್ನೇನಾದರೂ ಮಾಡಿದ್ದೀರೆ?

ಮುಖ್ಯರಸ್ತೆಯಲ್ಲಿ ಮಾಂಸದ ಕೆಟ್ಟ ವಾಸನೆ ಎನ್ನುತ್ತೀರಿ. ಬೇಯಿಸಿದ ಮಾಂಸದ ವಾಸನೆನಾ? ಹಸಿ ಮಾಂಸದ ವಾಸನೆನಾ? ನೀವು ಬಿಡಿಸಿ ಹೇಳಬೇಕಿತ್ತು. ಯಾಕಂದ್ರೆ ಬೇಯಿಸಿದ ಮಾಂಸದ ವಾಸನೆ ಮಾಂಸಪ್ರಿಯರಿಗೆ ಅಚ್ಚುಮೆಚ್ಚು; ಅದಕ್ಕೆ ಕೇಳಿದೆವು. ಹಲವು ಮಸೀದಿಗಳು ಅಲ್ಲಿವೆ ಅಂತೀರಾ, ಇರಲಿ ಬಿಡಿ. ಧ್ವನಿವರ್ಧಕಗಳಿಂದ ಪ್ರಾರ್ಥನೆಯ ಧ್ವನಿ ಕೇಳಿಬರುತ್ತೆ ಅಂತೀರಿ. ಬೆಳ್ಳಂಬೆಳಗ್ಗೆ ಪ್ರಾರ್ಥನೆಗಳ ಶಬ್ದ ಕೇಳಿಬರುವುದು ಮಸೀದಿಗಳಿಂದ ಮಾತ್ರವಲ್ಲ, ಮಂದಿರಗಳಿಂದಲೂ ಕೇಳಿಬರುತ್ತವೆ. ನಿಮಗೆ ಕೇಳುತ್ತಿಲ್ಲವಾದರೆ ನಿಮ್ಮ ಮನೆಯ ಪಕ್ಕದಲ್ಲಿ ಇರುವ ದೇವಸ್ಥಾನಗಳ ಮುಖ್ಯಸ್ಥರಿಗೆ ಹೇಳಿ, ಅವರು ಬೆಳಿಗ್ಗೆ ಸುಶ್ರಾವ್ಯ ಭಕ್ತಿಗೀತೆಗಳನ್ನು ಹಾಕುತ್ತಾರೆ.

ಮಾಂಸದ ಅಂಗಡಿಯಲ್ಲಿ ಮಾಂಸವನ್ನು ನೇತು ಹಾಕದೆ ಚೆಂಡುಹೂವಿನ ಮಾಲೆಯನ್ನು ನೇತುಹಾಕುತ್ತಾರಾ ಚಿದಾನಂದಮೂರ್ತಿಗಳೇ? ಅಥವಾ ಮಾಂಸದಂಗಡಿಗಳಲ್ಲಿ ಸ್ಯಾನಿಟರಿ ಪೈಪುಗಳನ್ನು ಜೋಡಿಸಿಡುತ್ತಾರಾ? ಅಥವಾ ಅಲ್ಲಿ ಬತ್ತಾಸು, ಖರ್ಜೂರ, ಜೀರಿಗೆ ಮಿಠಾಯಿ ಮಾರಲು ಸಾಧ್ಯವೇ?

ಕೆಲವು ಮನೆಗಳ ಮೇಲೆ ಹಸಿರು ಬಾವುಟಗಳು ಕಂಡರೆ ನಿಮ್ಮ ಮನಸ್ಸಿಗೇಕೆ ಖಿನ್ನತೆ ಆವರಿಸಬೇಕು? ಹಸಿರು ಬಾವುಟವನ್ನು ದೇಶದಲ್ಲಿ ನಿಷೇಧಿಸಲಾಗಿದೆಯೇ? ಮನೆಗಳ ಮೇಲೆ ಕೇಸರಿ ಬಾವುಟಗಳನ್ನು ಕಂಡರೂ ನೀವು ಖಿನ್ನರಾಗುತ್ತೀರೆ?

ಪೂಜ್ಯರಾದ ಡಾ.ಎಂ.ಚಿದಾನಂದಮೂರ್ತಿಯವರೇ, ನಿಮ್ಮ ಪತ್ರದ ತಲೆಬುಡ ಅರ್ಥವಾಗಲಿಲ್ಲ ನಮಗೆ. ಅದಕ್ಕಾಗಿ ಈ ಪತ್ರವನ್ನು ನಿಮಗೆ ನಿವೇದಿಸಿಕೊಂಡಿದ್ದೇವೆ. ಅನ್ಯಥಾ ಭಾವಿಸಬೇಡಿ. ನಾವು ಪಾಮರರು, ಏನದ್ರೂ ತಪ್ಪಾಗಿದ್ರೆ ಕ್ಷಮಿಸಿ.

ಆದರಪೂರ್ವಕವಾಗಿ
-ಸಂಪಾದಕೀಯ

ಡಾ.ಎಂ.ಚಿದಾನಂದಮೂರ್ತಿಯವರ ಪತ್ರ ಯಾವುದೇ ಸ್ವರೂಪದ ಪತ್ರಿಕೆಯಲ್ಲಿ ಪ್ರಕಟವಾಗಲು ಯೋಗ್ಯವಾಗಿದೆಯೇ? ನೀವು ಹೇಳಿ.

Thursday, February 17, 2011

ಸ್ವಪ್ನಸ್ಖಲನದ ಜಾಹೀರಾತು ಮುಖಪುಟಕ್ಕೆ ಬಂದ್ರೆ ಏನು ಮಾಡೋದು?


ಉದಯವಾಣಿ ಪತ್ರಿಕಾ ಸಮೂಹದ ನೂತನ ಗ್ರೂಪ್ ಎಡಿಟರ್ ಆಗಿ ರವಿ ಹೆಗಡೆ ೧೬-೨-೨೦೧೧ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ೨೦ ವರ್ಷಗಳ ಅನುಭವ ಇರುವ ಇವರು ಈ ಮೊದಲು ಸಂಯುಕ್ತ ಕರ್ನಾಟಕ, ಕನ್ನಡಪ್ರಭ ಪತ್ರಿಕೆ ಹಾಗು ಸುವರ್ಣ ನ್ಯೂಸ್ ಟಿವಿ ವಾಹಿನಿಯಲ್ಲಿ ಕಾರ್ಯನಿರ್ವಹಿಸಿದ್ದರು.
ಹೀಗಂತ ಇವತ್ತಿನ ಉದಯವಾಣಿಯ ಮುಖಪುಟದಲ್ಲಿ ಅನೌನ್ಸ್‌ಮೆಂಟು ಹೊರಬಿದ್ದಿದೆ. ನಾವು ನಿನ್ನೆ ಮಧ್ಯಾಹ್ನ ಹೇಳಿದಂತೆಯೇ ರವಿ ಹೆಗಡೆ ಸಂಜೆ ೪-೩೦ರ ಸುಮಾರಿಗೆ ಉದಯವಾಣಿಯ ಚಾರ್ಜು ವಹಿಸಿಕೊಂಡರು. ತಿಮ್ಮಪ್ಪ ಭಟ್ಟರು ರಾಜೀನಾಮೆ ಕೊಟ್ಟು ಹೊರಟರು.

ಹಿಂದೆ ತಿಮ್ಮಪ್ಪಭಟ್ಟರು, ಪೂರ್ಣಿಮ ಅವರು ಬೆಂಗಳೂರು ಆವೃತ್ತಿಗಳಿಗಷ್ಟೆ ಸಂಪಾದಕರಾಗಿದ್ದರು. ಈಗ ಹಾಗಲ್ಲ, ಎಲ್ಲ ಆವೃತ್ತಿಗಳೂ ರವಿ ಹೆಗಡೆಯವರ ಕೈಗೇ ಬಂದಿವೆ. ಅವರ ಡೆಸಿಗ್ನೇಷನ್ನು ಗ್ರೂಪ್ ಎಡಿಟರ್. ನಾವು ಕೇಳಿದ ಪ್ರಕಾರ ರವಿ ಹೆಗಡೆ ಟೆಕ್ನಿಕಲಿ ಗುಡ್ ಹ್ಯಾಂಡ್. ಉದಯವಾಣಿಯಲ್ಲಿ ಅವರು ಏನೇನು ಬದಲಾವಣೆ ತರುತ್ತಾರೆ? ಕಾದು ನೋಡಬೇಕು.

ಸಾಧಾರಣವಾಗಿ ಎಲ್ಲ ಪತ್ರಿಕೆಗಳ ಸಂಪಾದಕರುಗಳಿಗೆ ಆಗುವ ಮೊದಲ ಕಿರಿಕಿರಿಯೇ ಮುಖಪುಟಕ್ಕೆ ಬರುವ ಜಾಹೀರಾತುಗಳದ್ದು. ಅಲ್ಲಾ ಸ್ವಾಮಿ, ಬೊಜ್ಜು ಕರಗಿಸುವುದು ಹೇಗೆ? ಎಂಬ ಕಾಲುಪುಟದ ಜಾಹೀರಾತು ಮುಖಪುಟದಲ್ಲಿ ಪ್ರಕಟಿಸಿದರೆ ಬೊಜ್ಜು ಹೊತ್ತ ವ್ಯಕ್ತಿಯ ಅಸಹ್ಯ ಹೊಟ್ಟೆಯನ್ನು ಓದುಗರು ಹೇಗೆ ಸ್ವೀಕರಿಸುತ್ತಾರೆ ಎಂಬುದು ಸಂಪಾದಕರುಗಳ ಪ್ರಶ್ನೆ. ಜಾಹೀರಾತು ಬೇಕು, ನಿಜ. ಆದರೆ ಮುಖಪುಟದಿಂದಾದರೂ ಇವುಗಳಿಗೆ ಮುಕ್ತಿ ನೀಡಬೇಡವೇ? ಎಂದು ಅವರು ಪ್ರಶ್ನಿಸುತ್ತಾರೆ. ಕಾಸು ಮುಖ್ಯ ಕಣ್ರೀ, ಸುಮ್ನೆ ಪೇಜಿಗೆ ಕೂರಿಸಿ ಎಂಬುದು ಜಾಹೀರಾತು ವಿಭಾಗದ ಫರ್ಮಾನು.

ಅದು ಹೋಗಲಿ, ಮುಖಪುಟವನ್ನು ಚೆನ್ನಾಗಿ ವಿನ್ಯಾಸ ಮಾಡೋಣ ಅಂದ್ರೆ ಶಕ್ತಿ ದೋಷ, ಶೀಘ್ರ ವೀರ‍್ಯ ಸ್ಖಲನ, ಸ್ವಪ್ನ ಸ್ಖಲನ, ಪುರುಷತ್ವ ನಾಶ ಇತ್ಯಾದಿಗಳಿಗೆ ನಮ್ಮಲಿದೆ ಪರಿಹಾರ ಎಂದು ಹೇಳುವ ಡಿಸ್ಪೆಂಸರಿಗಳ ಪಾಪ್ ಅಪ್ ಜಾಹೀರಾತುಗಳನ್ನು ಮುಖಪುಟಕ್ಕೇ ಕೊಟ್ಟರೆ ಏನು ಮಾಡೋದು ಅಂದ್ರೆ ಮತ್ತದೇ ಕಾಸು ಬೇಕು ಎಂಬ ಉತ್ತರ. ಹೋಗಲಿ ಮಾಸ್ಟ್‌ಹೆಡ್ ಪಕ್ಕದ ಕೆಟ್ಟ ವಿನ್ಯಾಸದ ಪ್ಯಾನಲ್ ಜಾಹೀರಾತುಗಳಾದರೂ ತೆಗೆಯಿರಿ, ಒಳಗಿನ ಪೇಜಿನಲ್ಲಿ ಏನಿದೆ ಅಂತನಾದ್ರೂ ಕಾಣಿಸ್ತೀವಿ ಅಂತ ಗೋಗರೆದರೂ ಜಾಹೀರಾತು ವಿಭಾಗದವರು ಕೇಳೋದಿಲ್ಲ.

ಕಾಲ ಬದಲಾಗಿದೆ. ಕೆಲವು ಇಂಗ್ಲಿಷ್ ಪತ್ರಿಕೆಯವರು ಮುಖಪುಟದಲ್ಲಿ ನಾವು ಜಾಹೀರಾತು ಪ್ರಕಟಿಸುವುದಿಲ್ಲ ಎಂದು ಘೋಷಿಸಿಕೊಂಡಿದ್ದಾರೆ. ನಾವು ಪ್ರಾಯೋಜಿತ ಸುದ್ದಿ (ಪೇಯ್ಡ್ ನ್ಯೂಸ್) ಪ್ರಕಟಿಸುವುದಿಲ್ಲ ಎಂದು ಡಿಎನ್‌ಎ ಪತ್ರಿಕೆ ಇತ್ತೀಚಿಗೆ ತಾನೇ ಮಾಸ್ಟ್‌ಹೆಡ್ ಜತೆನೇ ಬರೆದುಕೊಂಡಿದೆ.

ಕನ್ನಡ ಪತ್ರಿಕೆಗಳು ಜಾಹೀರಾತಿನ ವಿಷಯದಲ್ಲಿ ಸಣ್ಣಪುಟ್ಟ ರಾಜಿಗಳಿಗೆ ತಯಾರಾಗಿವೆಯೇ? ಇದು ಸದ್ಯದ ಪ್ರಶ್ನೆ.
ಉದಯವಾಣಿಗೊಂದು ಹೊಸ ರೂಪ ಕೊಡುವ ಉತ್ಸಾಹದಲ್ಲಿರುವ ರವಿ ಹೆಗಡೆ ಕೂಡ ಇಂಥ ಸಮಸ್ಯೆ, ಸವಾಲುಗಳನ್ನು ಎದುರಿಸಬೇಕಾದೀತು.

ಇನ್ನು ಉದಯವಾಣಿಯ ಬಹುದೊಡ್ಡ ಕೊರತೆಯೇನೆಂದರೆ ಅದಕ್ಕೆ ಪೂರ್ಣ ಪ್ರಮಾಣದ ಜಿಲ್ಲಾ ವರದಿಗಾರರು ಇಲ್ಲದೇ ಇರುವುದು. ಈಗ ಜಿಲ್ಲಾ ವರದಿಗಾರರಿಲ್ಲವೆಂದೇನಲ್ಲ, ಆದರೆ ಬಹುತೇಕರು ಸ್ಟ್ರಿಂಜರ್‌ಗಳು. ಅವರು ಸಂಸ್ಥೆಯಿಂದ ನೇಮಕವಾದ ಪೂರ್ಣಾವಧಿ ವರದಿಗಾರರಲ್ಲ. ಈ ವರದಿಗಾರರೋ ಒಂದೇ ಮೇಷ್ಟ್ರುಗಳು ಅಥವಾ ಅಂಗಡಿ ಮುಂಗಟ್ಟು ಇಟ್ಟುಕೊಂಡು ಜೀವನಕ್ಕೆ ಬೇರೆ ಏನಾದರು ಮಾಡಿಕೊಂಡು ಇರುವವರು. ಅವರ ವೃತ್ತಿ ಕಮಿಟ್‌ಮೆಂಟುಗಳ ನಡುವೆ ಇವತ್ತಿನ ಸ್ಪರ್ಧಾತ್ಮಕ ಮೀಡಿಯಾ ಯುಗದಲ್ಲಿ ಎಂಥ ಸುದ್ದಿಗಳನ್ನು ನಿರೀಕ್ಷಿಸುತ್ತೀರಿ? ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬರು ಚೆನ್ನಾಗಿ ಕೆಲಸ ಮಾಡುತ್ತಿರಬಹುದು. ಆದರೆ ಬಹುತೇಕರು ಅಧಿಕಾರಿಗಳು ಕೊಡುವ ಪ್ರೆಸ್‌ನೋಟುಗಳಿಗೇ ಜೋತುಬಿದ್ದು ಕೆಲಸ ಮಾಡುವವರು. ಅವರಾದರೂ ಏನು ಮಾಡಿಯಾರು? ಕೆಲವು ಜಿಲ್ಲೆಗಳಲ್ಲಿ ಮಾತ್ರ ಉದಯವಾಣಿಯ ಸಿಬ್ಬಂದಿಯೇ ಜಿಲ್ಲಾ ವರದಿಗಾರರಿದ್ದಾರೆ, ಇನ್ನುಳಿದ ಕಡೆ ಸ್ಟ್ರಿಂಜರುಗಳು ಎಂದು ಕರೆಯಲ್ಪಡುವ ಒಂಥರದ ಹವ್ಯಾಸಿ ವರದಿಗಾರರೇ ಇದ್ದಾರೆ.

ಇಂಥ ಸಮಸ್ಯೆಗಳ ಕಡೆ ರವಿ ಹೆಗಡೆ ಗಮನ ಕೊಡಬೇಕೆನಿಸುತ್ತದೆ, ಅದಕ್ಕೆ ತಕ್ಕ ಬೆಂಬಲವೂ ಮ್ಯಾನೇಜ್‌ಮೆಂಟ್ ಕಡೆಯಿಂದ ದಕ್ಕಬೇಕಾಗುತ್ತದೆ. ಮ್ಯಾನೇಜ್‌ಮೆಂಟು ಸಂಪಾದಕರ ಬೆಂಬಲಕ್ಕೆ ನಿಲ್ಲುತ್ತದಾ? ವಿಜಯ ಕರ್ನಾಟಕ, ಪ್ರಜಾವಾಣಿಗಳ ಜತೆ ನಂ.೧ ಪಟ್ಟಕ್ಕೆ ಅದು ಪೈಪೋಟಿ ನಡೆಸುತ್ತದಾ? ಕಾದು ನೋಡೋಣ. ಓದು, ಬದಲಾಗು, ಮುನ್ನಡೆಸು... ಎಂಬುದು ಉದಯವಾಣಿಯ ಘೋಷವಾಕ್ಯ. ಅದು ಕನ್ನಡ ಮಾಧ್ಯಮ ರಂಗದಲ್ಲಿ ಜಾರಿಯಾಗಲಿ. ಕನ್ನಡ ಪತ್ರಿಕೆಗಳ ಈ ಆರೋಗ್ಯಕರ ಪೈಪೋಟಿ, ಕರ್ನಾಟಕದ ಓದುಗರಿಗೆ ಹೊಸತನ್ನು ಕೊಡಲಿ, ಜ್ಞಾನವನ್ನು ವೃದ್ಧಿಸಲಿ.

ಮರೆತಿದ್ದ ಮಾತು: ನಾಳೆನೇ ಜನಶ್ರೀ ಚಾನಲ್ ಲೋಕಾರ್ಪಣೆ. ಚಾನಲ್ ಸಾಕಷ್ಟು ಮಂದಿಯಲ್ಲಿ ಕುತೂಹಲ ಹುಟ್ಟಿಸಿರುವುದು ರವಿ ಬೆಳಗೆರೆ ಕಾರಣಕ್ಕೆ. ಬೆಳಗೆರೆಯವರನ್ನು ಪ್ರೀತಿಸುವವರು, ದ್ವೇಷಿಸುವವರು ಎಲ್ಲರೂ ಚಾನಲ್ ಹೇಗಿರಬಹುದು ಎಂಬ ಚರ್ಚೆಯಲ್ಲಿ ತೊಡಗಿದ್ದಾರೆ. ಬೆಳಗೆರೆ ಏನಾದರೂ ಮ್ಯಾಜಿಕ್ ಮಾಡಬಹುದಾ? ನೋಡೋಣ.

ಅವಧಿ ವೆಬ್‌ಸೈಟಾಗ್ತಾ ಇದೆ, ಶುಭಾಶಯಗಳು!


ಕನ್ನಡ ಬ್ಲಾಗುಗಳ ಪೈಕಿ ಅತ್ಯಂತ ಜನಪ್ರಿಯವಾಗಿರುವುದು ಅವಧಿ. ಮೇ ಫ್ಲವರ್ ಮೀಡಿಯಾ ಹೌಸ್‌ನಿಂದ ನಡೆಸಲ್ಪಡುವ ಅವಧಿ ಜಿ.ಎನ್.ಮೋಹನ್ ಅವರ ಕನಸಿನ ಕೂಸು. ಒಂದು ಪ್ರಶ್ನಾರ್ಥಕ ಚಿಹ್ನೆ ಇಟ್ಟು, ಇದೇನಿದು ಅಂತ ಪ್ರಶ್ನೆ ಕೇಳಿದ್ದಾರೆ ಜಿ.ಎನ್.ಮೋಹನ್. ಅವಧಿ ೧೦ ಲಕ್ಷ ಹಿಟ್ಸ್ ತಲುಪುತ್ತಾ ಇದೆ ಎಂಬುದು ಓದುಗರ ಕಮೆಂಟು. ಅದೂ ಸರಿನೇ, ವಿಷ್ಯ ಇನ್ನೂ ಇದೆ ಎಂಬುದು ಮೋಹನ್ ಅವರ ಕೊಸರು.


ವಿಷಯ ಇಷ್ಟೇನೆ. ಅವಧಿ ವೆಬ್‌ಸೈಟಾಗಿ ಪರಿವರ್ತನೆಗೊಳ್ಳುತ್ತಿದೆ. ಹೊಸ ವೆಬ್ ಮಾಗಜೀನ್ http://avadhimag.com/ ಎಂಬ ವಿಳಾಸದಲ್ಲಿ ಲಭ್ಯವಾಗಲಿದೆ. ಕನ್ನಡ ಅಂತರ್ಜಾಲಿಗರಿಗೆ ಇದು ಒಳ್ಳೆಯ ಸುದ್ದಿ. ಬ್ಲಾಗರ್‌ಗಳು ಅತ್ಯುತ್ಸಾಹದಿಂದ ಶುರುಮಾಡಿದರೂ ಕೆಲ ದಿನಗಳ ನಂತರ ಆಸಕ್ತಿ ಕಳೆದುಕೊಳ್ಳುವುದು ಮಾಮೂಲು. ಆದರೆ ಅವಧಿ ಹಾಗಲ್ಲ. ಆರಂಭವಾದ ದಿನದಿಂದಲೂ ಪ್ರತಿನಿತ್ಯ ಚಟುವಟಿಕೆಯಿಂದಿರುವುದರಿಂದಲೇ ಅದು ಪಾಪ್ಯುಲರ್ ಆಗಿದೆ. ಕನ್ನಡ ಬ್ಲಾಗ್ ಒಂದು ಹತ್ತು ಲಕ್ಷ ಹಿಟ್ಸ್ ಪಡೆಯುವುದೆಂದರೆ ಸಣ್ಣ ಸಾಧನೆಯೇನಲ್ಲ. ಕನ್ನಡ ಅಂತರ್ಜಾಲ ಇನ್ನೂ ಬೆಳೆಯಬೇಕಿರುವ ಕ್ಷೇತ್ರ. ಕನ್ನಡದ ಅತ್ಯಂತ ಪ್ರಮುಖರ ಲೇಖಕರ ಪೈಕಿ ಬಹುತೇಕರು ಇನ್ನೂ ಅಂತರ್ಜಾಲವನ್ನೇ ಬಳಸುತ್ತಿಲ್ಲ ಎಂಬುದು ಗಾಬರಿ ಹುಟ್ಟಿಸುವ ವಿದ್ಯಮಾನ. ಹೀಗಿರುವಾಗ ಅವಧಿಯ ಸಾಧನೆಯನ್ನು ಮೆಚ್ಚಲೇಬೇಕು.

ದಟ್ಸ್ ಕನ್ನಡ, ಸಂಪದ, ಬರಹ, ಕೆಂಡಸಂಪಿಗೆಯಂಥ (ಈ ಪಟ್ಟಿಯಲ್ಲಿ ಇನ್ನೂ ಸಾಕಷ್ಟಿವೆ.) ವೆಬ್‌ಸೈಟುಗಳು ಕನ್ನಡ ಅಂತರ್ಜಾಲವನ್ನೂ ಹಟಕ್ಕೆ ಬಿದ್ದು ಬೆಳೆಸಿದವು. ಇಲ್ಲಿ ಫಾಯಿದೆಯ ಮಾತು ಕೇಳಲೇಬೇಡಿ. ಕನ್ನಡ ಅಂತರ್ಜಾಲಗಳಿಗೆ ಜಾಹೀರಾತಿನ ಬೆಂಬಲ ಇಲ್ಲವೇ ಇಲ್ಲ ಅನ್ನುವಷ್ಟು ತೀರಾ ಕಡಿಮೆ. ಕನ್ನಡವನ್ನೂ ಜಗತ್ತಿನ ಇತರ ಭಾಷೆಗಳಿಗೆ ಮುಖಾಮುಖಿಯಾಗಿ ಬೆಳೆಸುವ ಛಲವೊಂದೇ ಇವುಗಳದು. ನಿಜ, ಕನ್ನಡ ಅಂತರ್ಜಾಲ ಹೀಗೇ ಇರೋದಿಲ್ಲ. ಬರುವ ವರ್ಷಗಳಲ್ಲಿ ಅದು ಅತ್ಯಂತ ವೇಗವಾಗಿ ಬೆಳೆಯಬಹುದು. ಆದರೆ ಏನೂ ಇಲ್ಲದ ನಿರ್ವಾತದಲ್ಲಿ ಕನ್ನಡಿಗರನ್ನು ಅಂತರ್ಜಾಲಕ್ಕೆ ಸೆಳೆದ ಈ ವೆಬ್‌ಸೈಟುಗಳನ್ನು, ಅದರ ಸೃಷ್ಟಿಕರ್ತರನ್ನು ಯಾವತ್ತಿಗೂ ಸ್ಮರಿಸಲೇಬೇಕು.

ಅವಧಿ ಹೆಸರಿಗೆ ಮಾತ್ರ ಬ್ಲಾಗ್. ಆದರೆ ಅದು ಕನ್ನಡ ವೆಬ್‌ಸೈಟುಗಳ ಹಾಗೇ ಇತ್ತು, ಇದೆ. ದಿನಕ್ಕೊಮ್ಮೆಯಾದರೂ ಅವಧಿಗೆ ಹೋಗಿ ಬರುವ ಮನಸ್ಸು ಬ್ಲಾಗಿಗರದು. ಎಲ್ಲಿಲ್ಲೆ ಏನೇನು ಕಾರ್ಯಕ್ರಮ ಅನ್ನುವುದರಿಂದ ಹಿಡಿದು, ಯಾರ ಪುಸ್ತಕ ಬಿಡುಗಡೆಯಾಗಿದೆ, ಹೊಸದಾಗಿ ಯಾವ ಪುಸ್ತಕ ಬರ‍್ತಿದೆ, ಎಲ್ಲೆಲ್ಲಿ ಯಾವ ನಾಟಕ ಪ್ರದರ್ಶನವಿದೆ ಎಂಬ ಮಾಹಿತಿಗಳು. ಜತೆಗೆ ಜನಪ್ರಿಯ ಲೇಖಕರ ಲೇಖನಗಳು, ಹೊಸ ಬರಹಗಾರರ ಬ್ಲಾಗ್‌ಕೊಂಡಿಗಳು ಎಲ್ಲವೂ ಅವಧಿಯಲ್ಲಿ ಲಭ್ಯ. ಯಾರನ್ನೂ ಕೆಣಕದೆ, ಯಾರನ್ನೂ ಎದುರು ಹಾಕಿಕೊಳ್ಳದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಆಗಾಗ ವಿವಾದಾತ್ಮಕ ವಿಷಯಗಳ ಕುರಿತ ಚರ್ಚೆಯನ್ನು ನಡೆಸುವ ಕಲೆಯೂ ಮೋಹನ್‌ರಿಗೆ ಸಿದ್ಧಿಸಿದೆ. ಹೀಗಾಗಿ ಕ್ಲಾಸ್ ಸಿನೆಮಾದ ಹಾಗಿರುವ ಅವಧಿ ಇದಕ್ಕಿದ್ದಂತೆ ಮಾಸ್ ಕೂಡ ಆಗಿಬಿಡುತ್ತದೆ. ಇದೇ ಕಾರಣದಿಂದ ಅವಧಿ ಎಡ, ಬಲ ಹಾಗೂ ನಡುವಿನ ಎಲ್ಲರಿಗೂ ಅಚ್ಚುಮೆಚ್ಚು. ಇತರ ವೆಬ್ ಮಾಗಜೀನ್‌ಗಳ ಜೊತೆಗೆ ಸೇರಿ ಕನ್ನಡದ ಲೇಖಕರನ್ನು ಅಂತರ್ಜಾಲಕ್ಕೆ ಸೆಳೆದ ಕೀರ್ತಿ ಅವಧಿಗೆ ಸಲ್ಲುತ್ತದೆ.

ಈಗ ಅವಧಿ ವೆಬ್‌ಸೈಟಾಗ್ತಾ ಇದೆ. ಬ್ಲಾಗ್‌ಗಳಲ್ಲಿ ವಿನ್ಯಾಸದ ಮಟ್ಟಿಗೆ ಸೀಮಿತ ಅವಕಾಶಗಳಿರುತ್ತವೆ. ವೆಬ್‌ಸೈಟಿನಲ್ಲಿ ಹಾಗಲ್ಲ, ಬೇಕಾದ ವಿನ್ಯಾಸ ಮಾಡಿಕೊಳ್ಳಬಹುದು. ಇಷ್ಟ ಬಂದ ಹಾಗೆ ಅದನ್ನು ರೂಪಿಸಬಹುದು.

ಹೊಸರೂಪದ ಅವಧಿ ಇನ್ನಷ್ಟು ಜನಪ್ರಿಯವಾಗಲಿ ಎಂದು ಹಾರೈಸುತ್ತ ಹೊಸ ವೆಬ್ ಮಾಗಜೀನ್‌ನ ಪ್ರಧಾನ ಸಂಪಾದಕ ಜಿ.ಎನ್.ಮೋಹನ್ ಮತ್ತು ಅವರ ಇಡೀ ತಂಡಕ್ಕೆ ಸಂಪಾದಕೀಯ ಶುಭಾಶಯ ಕೋರುತ್ತದೆ. ಹಾಗೆಯೇ ಇದನ್ನು ಅವಧಿಯಲ್ಲಿ ಘೋಷಿಸುವುದಕ್ಕೂ ಮುನ್ನವೇ ಇಲ್ಲಿ ಪ್ರಕಟಿಸಿದ ತುಂಟತನಕ್ಕೆ ಒಂದು ಕ್ಷಮೆಯನ್ನೂ ಅವರು ಸ್ವೀಕರಿಸಲಿ.

Wednesday, February 16, 2011

ಸಂಪಾದಕರ ಮ್ಯೂಸಿಕಲ್ ಚೇರ್: ಇನ್ನೊಂದು ಸುತ್ತು


ಮಣಿಪಾಲ್ ಟವರ್‌ನಲ್ಲಿ ಚಟುವಟಿಕೆಗಳು ಗರಿಗೆದರಿವೆ. ಕನ್ನಡ ಮಾಧ್ಯಮರಂಗದಲ್ಲಿ ಜರುಗುತ್ತಿರುವ ಪತ್ರಕರ್ತರ ಮ್ಯೂಸಿಕಲ್ ಚೇರ್ ಸ್ಪರ್ಧೆಯಲ್ಲಿ ಉದಯವಾಣಿಯೂ ಹಿಂದೆ ಬಿದ್ದಿಲ್ಲ. ಹಿಂದೆ ನಾವು ಹೇಳಿದಂತೆ ರವಿ ಹೆಗಡೆ ಉದಯವಾಣಿಗೆ ಇಂದು ಅಧಿಕೃತವಾಗಿ ಸೇರ್ಪಡೆಯಾಗುತ್ತಿದ್ದಾರೆ. ಅದರ ಜತೆಗೆ ತಿಮ್ಮಪ್ಪ ಭಟ್ಟರ ನಿರ್ಗಮನದ ವಿಷಾದದ ಸುದ್ದಿಯೂ ಕೂಡ ಹೊರಬರುತ್ತಿದೆ.

ತಿಮ್ಮಪ್ಪಭಟ್ಟರು ಸಮಾಜವಾದಿ ಹಿನ್ನೆಲೆಯವರು. ಸಂಯುಕ್ತ ಕರ್ನಾಟಕದಲ್ಲಿ ಕೆಲ ಕಾಲ ವೃತ್ತಿಜೀವನ ನಡೆಸಿದ್ದರು. ನಂತರ ಅವರು ಕನ್ನಡಪ್ರಭದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. ರವಿ ಹೆಗಡೆಯವರು ಕನ್ನಡಪ್ರಭ ಸೇರಿದ್ದೂ ತಿಮ್ಮಪ್ಪಭಟ್ಟರು ಬ್ಯೂರೋ ಒಂದರ ಮುಖ್ಯಸ್ಥರಾಗಿದ್ದಾಗ. ಈಗ ಇಬ್ಬರೂ ಉದಯವಾಣಿಯ ಮ್ಯೂಸಿಕಲ್ ಚೇರ್‌ನ ಪಾತ್ರಧಾರಿಗಳಾಗಿದ್ದು ವಿಪರ್ಯಾಸ.

ಭಟ್ಟರು ಕನ್ನಡಪ್ರಭ ಬಿಟ್ಟ ನಂತರ ಉಷಾಕಿರಣದಲ್ಲಿ ಸುದ್ದಿಸಂಪಾದಕರಾಗಿದ್ದರು. ಗ್ರಾಮಾಂತರ ಸುದ್ದಿಯ ನಿರ್ವಹಣೆ ಅವರ ಜವಾಬ್ದಾರಿಯಾಗಿತ್ತು. ನಂತರ ಉಷಾಕಿರಣ ಮುಚ್ಚಿಹೋಗಿ ಅದು ಟೈಮ್ಸ್ ಆಫ್ ಇಂಡಿಯಾ ಕನ್ನಡವಾಗಿ ರೂಪಾಂತರವಾದಾಗಲೂ ಅದರ ಸುದ್ದಿ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಆ ಪತ್ರಿಕೆಯೂ ಬಂದ್ ಆಯಿತು.

ಉದಯವಾಣಿ ಪತ್ರಿಕೆ ಈಗ ಮಣಿಪಾಲ, ಬೆಂಗಳೂರು ಹಾಗು ಮುಂಬೈ ಆವೃತ್ತಿಗಳನ್ನು ಹೊಂದಿದೆ. ಹುಬ್ಬಳ್ಳಿ ಆವೃತ್ತಿಯನ್ನು ಆರಂಭಿಸುವ ಪೈಗಳ ಉದ್ದೇಶ ಇನ್ನೆರಡು ವಾರಗಳಲ್ಲಿ ಕೈಗೂಡಲಿದೆ. ಹುಬ್ಬಳ್ಳಿ ಆವೃತ್ತಿಗಾಗಿಯೇ ತಿಮ್ಮಪ್ಪ ಭಟ್ಟರನ್ನು ಉದಯವಾಣಿಗೆ ಕರೆತರಲಾಗಿತ್ತು. ಆ ಸಂದರ್ಭದಲ್ಲಿ ಸಂಪಾದಕಿ ಡಾ. ಪೂರ್ಣಿಮ ರಾಜೀನಾಮೆ ಕೊಟ್ಟು ಹೊರಹೋದರು. ಹೀಗಾಗಿ ತಿಮ್ಮಪ್ಪಭಟ್ಟರನ್ನೇ ಆ ಹುದ್ದೆಗೆ ನೇಮಿಸಲಾಗಿತ್ತು. ತಮಗೆ ಕೊಟ್ಟ ಜವಾಬ್ದಾರಿಯನ್ನು ಭಟ್ಟರು ನಿಷ್ಠೆಯಿಂದಲೇ ನಿಭಾಯಿಸಿದ್ದರು. ಹುಬ್ಬಳ್ಳಿ ಆವೃತ್ತಿಯನ್ನು ಹೊರತರುವ ಸಲುವಾಗಿ ಸಾಕಷ್ಟು ಶ್ರಮ ವಹಿಸಿದ್ದರು.

ಆದರೆ ಮ್ಯಾನೇಜ್‌ಮೆಂಟುಗಳು ಯಾವಾಗ ಹೇಗೆ ವರ್ತಿಸುತ್ತವೆ ಎಂಬುದನ್ನು ಹೇಳಲಾಗದು. ಆರಕ್ಕೇರದೆ, ಮೂರಕ್ಕಿಳಿಯದೇ ಇದ್ದ ಉದಯವಾಣಿಯನ್ನು ವಿಸ್ತಾರಗೊಳಿಸುವ ಸಲುವಾಗಿ ಪೈಗಳು ಹೊಸಬರನ್ನು ಪತ್ರಿಕೆಗೆ ತರುವ ಮನಸ್ಸು ಮಾಡಿದರು. ಹುಬ್ಬಳ್ಳಿ ಆವೃತ್ತಿ, ಅದರ ಬೆನ್ನಲ್ಲೇ ಮೈಸೂರು ಆವೃತ್ತಿ ತರುವ ಆಲೋಚನೆ ಪೈಗಳದು. ಅದರ ಫಲಿತವೇ ರವಿ ಹೆಗಡೆ ಸೇರ್ಪಡೆ.

ರವಿ ಹೆಗಡೆ ಕನ್ನಡಪ್ರಭದಿಂದ ಹೊರಬಂದು ತಮ್ಮೊಂದಿಗೆ ಸುವರ್ಣ ನ್ಯೂಸ್‌ನಲ್ಲಿ ಕೆಲಸವಿಲ್ಲದೇ ಉಳಿದಿರುವ ೨೫ಕ್ಕೂ ಹೆಚ್ಚು ಪತ್ರಕರ್ತರ ಭವಿಷ್ಯದ ಕುರಿತು ಚಿಂತಿತರಾಗಿದ್ದರು. ಇದೀಗ ಉದಯವಾಣಿ ಸೇರ್ಪಡೆಯಾಗುವುದರೊಂದಿಗೆ ಅವರ ಭವಿಷ್ಯವೂ ತೀರ್ಮಾನವಾಗಬಹುದು. ಇವತ್ತು ಹೆಗಡೆ ತಮ್ಮೊಂದಿಗೆ ಇನ್ನೂ ನಾಲ್ವರನ್ನು ಉದಯವಾಣಿಗೆ ಸೇರ್ಪಡೆಗೊಳಿಸಲಿದ್ದಾರೆ ಎಂಬ ಸುದ್ದಿಯಿದೆ.

ರವಿ ಹೆಗಡೆ ಸೇರ್ಪಡೆ ಉದಯವಾಣಿಯಲ್ಲಿ ಸಂಚಲನವನ್ನೇ ಮೂಡಿಸಿದೆ. ಉದಯವಾಣಿಯ ಸಮರ್ಥರಲ್ಲಿ ಒಬ್ಬರಾದ ಪ್ರಭುದೇವ ಶಾಸ್ತ್ರಿಮಠರನ್ನು ಈಗಾಗಲೇ ಹುಬ್ಬಳ್ಳಿ ಬ್ಯೂರೋಗೆ ಹೋಗಿ ಅಲ್ಲಿನ ಮೇಲ್ವಿಚಾರಣೆ ನೋಡಿಕೊಳ್ಳಲು ಸೂಚಿಸಲಾಗಿದೆ. ಇದು ತಾತ್ಕಾಲಿಕ ವ್ಯವಸ್ಥೆ ಎಂದು ಹೇಳಲಾಗುತ್ತಿದೆಯಾದರೂ ಮುಂದೆ ಏನೇನು ನಡೆಯುತ್ತದೋ ಹೇಳಲು ಸಾಧ್ಯವಿಲ್ಲ. ಹುಬ್ಬಳ್ಳಿ ಬ್ಯೂರೋಗೆ ಬೆಂಗಳೂರಿನಿಂದಲೇ ಮೂವರು ವರದಿಗಾರರು, ಮೂವರು ಉಪಸಂಪಾದಕರನ್ನು ಕಳುಹಿಸುವ ಆಲೋಚನೆ ಮ್ಯಾನೇಜ್‌ಮೆಂಟ್‌ಗೆ ಇದೆ ಎಂಬ ಮಾಹಿತಿಯಿದೆ.

ಇರುವ ಸಿಬ್ಬಂದಿ ಯಾರೂ ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂಬುದು ರವಿ ಹೆಗಡೆ ಕಡೆಯಿಂದ ಬಂದಿರುವ ಪಾಸಿಟಿವ್ ಮೆಸೇಜು. ಅದು ಒಳ್ಳೆಯ ಸೂಚನೆ ಕೂಡ.

ಸದ್ಯಕ್ಕೆ ತಿಮ್ಮಪ್ಪ ಭಟ್ಟರಂತೂ ರಾಜೀನಾಮೆಯ ನಿರ್ಧಾರ ಕೈಗೊಂಡಿದ್ದಾರೆ. ಪವಾಡವೇನೂ ನಡೆಯದೆ ಹೋದರೆ ಇಂದು ಸಂಜೆಯ ಹೊತ್ತಿಗೆ ಅವರು ನಿರ್ಗಮಿಸಲೂಬಹುದು. ಅದರೊಂದಿಗೆ ಕನ್ನಡ ಪತ್ರಿಕಾರಂಗದ ಹಾವು ಏಣಿಯಾಟ ಇನ್ನೊಂದು ಹೆಜ್ಜೆ ಮುಂದೆ ಹೋದಂತಾಗಿದೆ.

ಇತ್ತ ಚಾಮರಾಜಪೇಟೆಯ ಪಂಪ ಮಾರ್ಗದಲ್ಲೂ ಏನೇನೋ ಬದಲಾವಣೆಗಳು. ಹೊಸದಿಗಂತದಿಂದ ಚನ್ನಕೃಷ್ಣ ಬಂದು ವಿಜಯ ಕರ್ನಾಟಕ ಸೇರ್ಪಡೆಯಾಗಿದ್ದಾರೆ. ಹೊಸದಿಗಂತಕ್ಕೆ ಹೊಸ ರೂಪ ಕೊಡುವಲ್ಲಿ ಶ್ರಮಿಸಿದವರಲ್ಲಿ ಚನ್ನಕೃಷ್ಣ ಪ್ರಮುಖರು.  ಅದಕ್ಕೂ ಮುನ್ನ ಈ ಸಂಜೆ ಪತ್ರಿಕೆಗೆ ಹೊಸರೂಪ ಕೊಟ್ಟಿದ್ದೂ ಚನ್ನಕೃಷ್ಣ ಅವರೇ. ವಿಭಿನ್ನ ರೀತಿಯ ಪತ್ರಿಕಾ ವಿನ್ಯಾಸದಲ್ಲಿ ಅವರು ಎತ್ತಿದ ಕೈ. ವಿಜಯ ಕರ್ನಾಟಕ ಅವರನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು.

ವಿಜಯ ಕರ್ನಾಟಕಕ್ಕೆ ಹೊಸ ಸಂಪಾದಕರ ನೇಮಕಾತಿಯಾಗಿಲ್ಲ. ಇ. ರಾಘವನ್ ತಮಗೆ ಕೊಟ್ಟ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿಭಾಯಿಸುತ್ತಿರುವುದರಿಂದ ಹೊಸ ಸಂಪಾದಕರ ಅಗತ್ಯವಿಲ್ಲ ಎಂಬುದು ವಿಕದ ಕೆಲವು ಸಿಬ್ಬಂದಿಯ ನಿಲುವು. ರಾಘವನ್ ಅವರಿಗೆ ಮುಖ್ಯವರದಿಗಾರ ಎಲ್. ಪ್ರಕಾಶ್ ಬಳಗದ ಪೂರ್ಣ ಬೆಂಬಲವೂ ಲಭ್ಯವಾಗಿದೆ. ಒನ್ಸ್ ಎಗೇನ್, ಮ್ಯಾನೇಜ್‌ಮೆಂಟುಗಳು ಹೇಗೆ ಯೋಚಿಸುತ್ತವೆ ಹೇಳಲು ಸಾಧ್ಯವಿಲ್ಲವಲ್ಲ?

ಹಾಗಂತ ವಿಜಯ ಕರ್ನಾಟಕದಲ್ಲಿ ಸಮಸ್ಯೆಗಳು ಇಲ್ಲದೇ ಇಲ್ಲ. ಅಲ್ಲಿ ವಿಶ್ವೇಶ್ವರ ಭಟ್ಟರ ಪರವಾಗಿರುವವರ ಪಟ್ಟಿಯೊಂದನ್ನು ಮಾಡಿ, ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪಗಳೂ ಇವೆ. ಪತ್ರಕರ್ತರು ಹೈ ಪ್ರೊಫೈಲ್ ಪತ್ರಕರ್ತರ ನೇತೃತ್ವದಲ್ಲಿ ತಂಡಗಳಾಗಿ ಹಂಚಿಕೆಯಾಗುತ್ತಿರುವುದು ಇಂಥ ಕಳವಳಕಾರಿ ಬೆಳವಣಿಗೆಗಳಿಗೆ ಕಾರಣ.

ಸದ್ಯಕ್ಕೆ ಉದಯವಾಣಿ ನೇತೃತ್ವ ವಹಿಸಿಕೊಳ್ಳುತ್ತಿರುವ ರವಿ ಹೆಗಡೆಯವರಿಗೆ ಇದು ಮೊದಲ ಬಾರಿ ಸ್ವತಂತ್ರ ಹೊಣೆ. ಅವರಿಗೊಂದು ಅಭಿನಂದನೆ ಹೇಳೋಣ. ಹಾಗೆಯೇ ಮತ್ತೆ ತೆರೆಮರೆಗೆ ಸರಿಯುತ್ತಿರುವ ಭಟ್ಟರಿಗೂ ಒಳ್ಳೆಯದಾಗಲಿ ಎಂದು ಆಶಿಸೋಣ.

Tuesday, February 15, 2011

ಹುತಾತ್ಮ ಭಗತ್ ಸಿಂಗರನ್ನು ಫೆ.೧೪ರಂದೇ ನೇಣಿಗೇರಿಸಿದರು!


ಹುತಾತ್ಮ ಭಗತ್ ಸಿಂಗ್‌ರನ್ನು ನೇಣಿಗೆ ಏರಿಸಿದ ದಿನ ಯಾವುದು? ಎಲ್ಲರಿಗೂ ಗೊತ್ತಿರುವ ಹಾಗೆ ಅದು ಮಾ.೨೩. ಭಾರತದ ಮೊದಲ ಮಾರ್ಕ್ವಿಸ್ಟ್‌ಗಳಲ್ಲಿ ಒಬ್ಬರಾಗಿದ್ದ ಭಗತ್ ಅಪ್ಪಟ ನಾಸ್ತಿಕ ಮತ್ತು ಜಾತೀಯತೆಯ ವಿರೋಧಿ. ಭಗತ್ ಸಿಂಗ್ ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಮರೆಯಲಾಗದ ಹೆಸರು. ಸುಖದೇವ್, ರಾಜಗುರು ಹಾಗು ಭಗತ್ ಸಿಂಗ್‌ರನ್ನು ಲಾಹೋರ್‌ನಲ್ಲಿ ಬ್ರಿಟಿಷ್ ಸರ್ಕಾರ ೧೯೩೧ರ ಮಾ.೨೩ರಂದು ಗಲ್ಲಿಗೇರಿಸಿತು.

ಆದರೆ ಪ್ರಮೋದ್ ಮುತಾಲಿಕ್ ಎಂಬ ಸ್ವಘೋಷಿತ ಹಿಂದೂ ಮುಖಂಡನ ಪ್ರಕಾರ ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಿದ್ದು ಫೆ.೧೪ರಂದು!

ನಿನ್ನೆ ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಟಿವಿ೯ ವಿಶೇಷ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡಿತು. ಶಿವಪ್ರಸಾದ್ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದರು. ದೂರವಾಣಿ ಕರೆಗಳನ್ನೂ ತೆಗೆದುಕೊಳ್ಳಲಾಗುತ್ತಿತ್ತು. ಕರೆ ಮಾಡಿದ ಒಬ್ಬಾತ, ಇವತ್ತು ಭಗತ್ ಸಿಂಗ್‌ರನ್ನು ಗಲ್ಲಿಗೇರಿಸಿದ ದಿನ, ನಾವು ಹುತಾತ್ಮರನ್ನು ನೆನೆಯುವುದರ ಬದಲು ಪ್ರೇಮಿಗಳ ದಿನಾಚರಣೆ ಆಚರಿಸುವುದು ಎಷ್ಟು ಸರಿ ಎಂದ. ಇದನ್ನು ಕೇಳಿದ ಪ್ರಮೋದ್ ಮುತಾಲಿಕ್, ಹೌದು ಹೌದು. ಇವತ್ತು ಭಗತ್‌ರನ್ನು ಗಲ್ಲಿಗೇರಿಸಿದ ದಿನ ಎಂದು ಹೇಳಿಬಿಟ್ಟರು.

ಕಾರ್ಯಕ್ರಮ ನಡೆಸುತ್ತಿದ್ದ ಶಿವಪ್ರಸಾದ್ ಈ ಬಗ್ಗೆ ಏನೂ ಹೇಳಲಿಲ್ಲ. ಪ್ರೇಮಿಗಳ ದಿನಾಚರಣೆಯ ವಿರೋಧಿಗಳು ಹೀಗೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂಬುದು ಶಿವಪ್ರಸಾದ್‌ಗೆ ಮೊದಲೇ ಗೊತ್ತಿದ್ದರೆ, ದಿನಾಂಕವನ್ನು ಗೊತ್ತುಪಡಿಸಿಕೊಂಡು ಅವರನ್ನು ಗಲ್ಲಿಗೇರಿಸಿದ್ದು ಫೆ.೧೪ ಅಲ್ಲ, ಮಾ.೨೩ ಎಂದು ಹೇಳುತ್ತಿದ್ದರೇನೋ? ಆದರೆ ಅಚಾನಕ್ಕಾಗಿ ಮುತಾಲಿಕ ಮತ್ತು ಶಿಷ್ಯರು ಫೆ.೧೪ರಂದೇ ಭಗತ್‌ರನ್ನು ಗಲ್ಲಿಗೇರಿಸಿಬಿಟ್ಟರು!

ಅಸಲಿ ವಿಷಯವೇನೆಂದರೆ, ನಿನ್ನೆ ಬೆಳಗ್ಗೆಯಿಂದಲೇ On 14/2/1931 LAHORE, in morning time the legendary  BHAGATH SINGH, RAJAGURU, SUKHDEV were hanged to their deaths. BUT We only celebrate Valentine day. Lets pass this message to everybody and salute their sacrifice. BE AN INDIAN FIRST…   ಎಂಬ ಮೆಸೇಜನ್ನು ಮೊಬೈಲ್‌ಗಳಲ್ಲಿ ಹರಿಬಿಡಲಾಗಿತ್ತು. ಇಂಥ ಸುಳ್ಳುಗಳನ್ನು ಹರಡುವ ವಿಘ್ನಸಂತೋಷಿಗಳು ಇದರಿಂದ ಯಾವ ಲಾಭ ಪಡೆದರೋ ಶ್ರೀರಾಮನೇ ಬಲ್ಲ.

ಈಗೀಗ ಪ್ರೇಮಿಗಳ ದಿನ ಅಂದರೆ ನಮ್ಮ ಟಿವಿ ಚಾನಲ್‌ನವರಿಗೆ ಮೊದಲು ನೆನಪಾಗುವುದೇ ಪ್ರಮೋದ್ ಮುತಾಲಿಕ್. ಶ್ರೀರಾಮಸೇನೆಯ ಎರಡು ಮತ್ತು ಮೂರನೇ ಹಂತದ ನಾಯಕರಿಗೂ ಟಿವಿ ಚಾನಲ್‌ಗಳ ಸ್ಟುಡಿಯೋಗಳಲ್ಲಿ ಜಾಗ ಸಿಗುತ್ತಿದೆ. ಮುತಾಲಿಕ್ ಪ್ರೇಮಿಗಳ ದಿನದಂದು ಎಷ್ಟು ಬಿಜಿ ಎಂಬುದಕ್ಕೆ ಇದು ಸಾಕ್ಷಿ.

ಅಷ್ಟಕ್ಕೂ ಶ್ರೀರಾಮಸೇನೆಯನ್ನು ಯಾಕೆ ಹೀಗೆ ಪ್ರೇಮಿಗಳ ದಿನದಂದು ಟಿವಿ ಪರದೆಗಳಲ್ಲಿ ವೈಭವೀಕರಿಸಲಾಗುತ್ತದೆ ಎಂಬುದೇ ಅರ್ಥವಾಗದ ವಿಷಯ.

ಪ್ರೇಮಿಗಳ ದಿನದ ಮುನ್ನಾದಿನ ಸುವರ್ಣ ನ್ಯೂಸ್‌ನಲ್ಲಿ ಜುಗಲ್‌ಬಂದಿ ನಡೆದಿತ್ತು. ಅಲ್ಲಿ ಭಾಗವಹಿಸಿದ್ದ ಶ್ರೀರಾಮಸೇನೆಯ ವ್ಯಕ್ತಿಯೋರ್ವ ಈ ಬಾರಿ ಗಲಾಟೆ, ಸಂಘರ್ಷ ಮಾಡೋದಿಲ್ಲ. ಪ್ರೇಮಿಗಳ ಫೋಟೋ ತೆಗೀತೀವಿ, ಅದನ್ನು ಅವರ ಮನೆಯವರಿಗೆ, ಪೊಲೀಸ್ ಠಾಣೆಗೆ ಕೊಡ್ತೀವಿ ಎಂದು ಹೇಳಿದ.

ಅಲ್ರೀ, ಹೀಗೆ ಯಾರದೋ ಫೋಟೋ ತೆಗೀತಿವಿ ಅಂತೀರಲ್ಲ, ಹಾಗೆ ಮಾಡುವುದರಿಂದ ವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡ ಹಾಗೆ ಆಗುವುದಿಲ್ಲವಾ? ಪ್ರೇಮಿಗಳು ಕೈ ಕೈ ಹಿಡಿದು ಓಡಾಡೋದು ಭಾರತ ದಂಡಸಂಹಿತೆಯ ಪ್ರಕಾರ ಅಪರಾಧನಾ? ಮತ್ತೇಕೆ ಫೋಟೋ ತೆಗೆದು ಪೊಲೀಸ್ ಠಾಣೆಗೆ ಕೊಡ್ತೀರಿ ಎಂದು ಕಾರ್ಯಕ್ರಮ ನಡೆಸುತ್ತಿದ್ದ ಎಚ್.ಆರ್.ರಂಗನಾಥ್, ಹಮೀದ್ ಪಾಳ್ಯ ಕೇಳಬಹುದಿತ್ತು, ಅವರು ಕೇಳಲಿಲ್ಲ.

ನಿನ್ನೆ ಟಿವಿ೯ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಪ್ರಮೋದ್ ಮುತಾಲಿಕ್, ಪ್ರೇಮಿಗಳ ದಿನ ಎನ್ನುವುದು ಕ್ರಿಶ್ಚಿಯನ್ನರ ಸಂಚು ಎಂದು ಅಬ್ಬರಿಸಿದರು. ಹೀಗೆ ಟಿವಿ ಸ್ಟುಡಿಯೋದಲ್ಲಿ ಕುಳಿತು ಕ್ರಿಶ್ಚಿಯನ್ನರ ಸಂಚು, ಮುಸ್ಲಿಮರ ಸಂಚು, ಹಿಂದೂಗಳ ಸಂಚು ಎಂದು ಹೇಳೋದು ಅಪರಾಧವಲ್ಲವೆ? ಮಾತನಾಡುವವರಿಗೆ ನಾಲಿಗೆ ಮೇಲೆ ಹಿಡಿತ ಬೇಡವೇ? ಹೀಗೆ ಮುತಾಲಿಕನನ್ನು ಸ್ಟುಡಿಯೋದಲ್ಲಿ ಕೂರಿಸಿಕೊಂಡು ಆತನಿಗೆ ಮನಸ್ಸಿಗೆ ಬಂದಂತೆ ಮಾತನಾಡಲು ಬಿಡುವುದು ಎಷ್ಟು ಸರಿ?

ಪ್ರೇಮಿಸಿ ಮದುವೆಯಾದವರು, ಪ್ರೇಮದ ಕುರಿತು ಹಾಡು ಕಟ್ಟಿದವರು-ಹಾಡಿದವರು, ಪ್ರೇಮಕ್ಕಾಗಿ ಹೊಸ ಇತಿಹಾಸ ನಿರ್ಮಿಸಿದವರು, ಪ್ರೇಮಕ್ಕೆ ಹೊಸ ಅರ್ಥ ಹುಡುಕಿದವರು, ಪ್ರೇಮಕ್ಕಾಗಿಯೇ ಬದುಕಿದವರು... ನ್ಯೂಸ್ ಚಾನಲ್‌ಗಳಿಗೆ ಇವರ‍್ಯಾರೂ ಸಿಕ್ಕುವುದಿಲ್ಲವೇ?

ಪ್ರತಿ ವರ್ಷ ಫೆ.೧೪ರಂದು ಅದೇ ಪ್ರಮೋದ ಮುತಾಲಿಕನ ಅಮಂಗಳ ಮುಖವನ್ನೇ  ನೋಡಿ ಪ್ರೇಮಿಗಳು ಮೂಡ್ ಕೆಡಿಸಿಕೊಳ್ಳಬೇಕಾ?

ಮುಂದಿನ ವರ್ಷವಾದರೂ ಇದರಿಂದ ಮುಕ್ತಿ ಕೊಡ್ತೀರಾ ಸರ್? ರಂಗನಾಥ್, ಹಮೀದ್, ಶಶಿಧರ ಭಟ್, ಚಂದ್ರೇಗೌಡ, ಶಿವಪ್ರಸಾದ್, ರೆಹಮಾನ್, ಲಕ್ಷ್ಮಣ್ ಹೂಗಾರ್ ಮತ್ತು ಇತರ ಎಲ್ಲ ಮಹನೀಯರಲ್ಲಿ ಇದು ನಮ್ಮ ವಿನಮ್ರ ಪ್ರಶ್ನೆ.

ಭಿನ್ನ ಧ್ವನಿಗಳನ್ನು ಗೌರವಿಸುವ ಪರಂಪರೆ ನಮ್ಮದಾಗಬೇಕು...


ಪ್ರಿಯ ಅನಾಮಿಕ ಕಮೆಂಟುದಾರರೇ,

ಹೇಗಿದ್ದೀರಿ?

ನಾಲ್ಕೈದು ದಿನಗಳಿಂದ ನಿಮ್ಮ ಪತ್ತೆಯಿಲ್ಲ. ಹಾಗೆ ಪತ್ತೆಯಿಲ್ಲದಂತಾಗಲು ನಾವೇ ಕಾರಣ ಅನ್ನೋದೂ ನಿಜಾನೇ. ನೀವಿಲ್ಲದೇ ನಮಗೂ ಬೋರು ಹೊಡೆದಿದೆ. ಅದನ್ನು ಹೇಳಲೆಂದೇ ಈ ಪತ್ರ.

ಈ ಬ್ಲಾಗು ಶುರು ಮಾಡಿದಾಗಿನಿಂದಲೂ ನಮ್ಮ ಜತೆ ಮಾತುಕತೆ ಆರಂಭಿಸಿದವರು ನೀವು. ಎಲ್ಲೋ ಕಂಡ ಚಿತ್ರ, ಓದಿದ ಸುದ್ದಿ, ಆಕರ್ಷಕ ಲಿಂಕು ಎಲ್ಲವನ್ನೂ ಕಳಿಸಿದವರು ನೀವು, ನಮ್ಮ ತಿಳಿವಳಿಕೆಯನ್ನು ಬೆಳೆಸಿದವರು ನೀವು.

ಇಂಗ್ಲೀಷಂದರೆ ಇಂಗ್ಲೀಷು, ಕನ್ನಡವೆಂದರೆ ಕನ್ನಡ, ಕಂಗ್ಲೀಷೆಂದರೆ ಕಂಗ್ಲೀಷು ಸಿಕ್ಕ ಭಾಷೆಯಲ್ಲಿ ಬರೆದಿರಿ ನೀವು. ಹಲವು ಬಾರಿ ನಿಮ್ಮ ಕಮೆಂಟುಗಳೇ ನಮ್ಮ ಪೋಸ್ಟ್‌ಗಳಿಗಿಂತ ಮಜಬೂತಾಗಿದ್ದವು. ತುಂಬ ಸರ್ತಿ ನಮ್ಮ ಓದುಗರು ನಿಮ್ಮ ಕಮೆಂಟು ಓದಲೆಂದೇ ಬರುತ್ತಿದ್ದರು. ಕೆಲವು ಪೋಸ್ಟ್‌ಗಳಿಗಂತೂ ದಾಖಲೆಗಳ ಜತೆ ಮೆಟೀರಿಯಲ್ಲುಗಳನ್ನು ಒದಗಿಸಿದವರೇ ನೀವು.

ಆದರೆ ಕೆಲವರು ಮಾತ್ರ ಶುದ್ಧ ಜಗಳಗಂಟರು. ಚರ್ಚೆ ಅಂದ್ರೆ ಜಗಳಾನೇ ಅಂತ ತೀರ್ಮಾನಿಸಿದವರು. ಕೆಲವರಿಗೆ ಅವರವರದೇ ಆದ ಅಜೆಂಡಾಗಳು. ಯಾರಿಗೋ ಅವರು ನಿಷ್ಠರು, ಅದಕ್ಕಾಗಿ ವಿತಂಡವಾದಕ್ಕೆ ನಿಂತುಬಿಡುತ್ತಾರೆ. ಅಭಿಮಾನ ಅನ್ನೋದು ನೆತ್ತಿಗೆ ಬಂದು ಕುಳಿತರೆ, ತಾವು ಆರಾಧಿಸುವ ವ್ಯಕ್ತಿಯ ವಿರೋಧಿಗಳೆಲ್ಲ ಅವರಿಗೆ ಶತ್ರುಗಳ ಹಾಗೆ ಕಾಣುತ್ತಾರೆ.

ವ್ಯಕ್ತಿ ನಿಂದನೆ, ಚಾರಿತ್ರ್ಯಹರಣ ಬೇಡ ಅಂತ ನಾವು ಮೊದಲಿನಿಂದಲೇ ಹೇಳುತ್ತಲೇ ಬಂದಿದ್ದೆವು. ನಿಮಗೆ ಗೊತ್ತಿದೆ, ನಾವು ಈ ಕೆಲಸವನ್ನು ಈ ಒಂದೂ ಮುಕ್ಕಾಲು ತಿಂಗಳಲ್ಲಿ ಯಾವತ್ತೂ ಮಾಡಿದವರಲ್ಲ. ಯಾರ ಬಗ್ಗೆಯೂ ನಂಜು ಇಟ್ಟುಕೊಂಡು ಬರೆಯುವುದು ನಮಗೆ ಆಗದು. ನಾವು ಆಧಾರರಹಿತವಾಗಿ ಯಾರ ವಿರುದ್ಧವೂ ಟೀಕೆ ಮಾಡಿದವರಲ್ಲ. ಹೀಗೆ ಟೀಕೆ ಮಾಡುವಾಗಲೂ ಸಭ್ಯತೆಯನ್ನು ಮರೆತವರಲ್ಲ. ಟೀಕೆ ರಚನಾತ್ಮಕವಾಗಿರಬೇಕು ಎಂಬುದು ನಮ್ಮ ನಿಲುವು.

ನಿಮ್ಮಲ್ಲಿ ಹಲವರು ನಮ್ಮನ್ನು ವಿಪರೀತ ಟೀಕೆ ಮಾಡಿದರು. ಧಿಕ್ಕಾರವಿರಲಿ ನಿಮಗೆ ಎಂದು ಬೈದರು. ಬೈಗುಳ ನಮಗಲ್ಲವೇ, ಅದು ನಮಗೆ ಸಹ್ಯ. ಆದರೆ ಇತರರನ್ನೂ ಹಾಗೇ ಬೈದರೆ ಅದನ್ನು ಮಾಡರೇಟ್ ಮಾಡುವುದು ಹೇಗೆ? ಕಮೆಂಟು ಪ್ರಕಟವಾಗದಿದ್ದರೆ, ಯಾಕ್ರೀ ಹಾಕಲಿಲ್ಲ- ನೀವೇ ತಾನೇ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡಿದವರು ಎಂದು ಚುಚ್ಚಿದವರಿದ್ದಾರೆ. ಎಡಿಟ್ ಮಾಡಿ ಹಾಕಿದರೆ, ಯಾಕ್ರೀ ಎಡಿಟ್ ಮಾಡಿದ್ದು, ಕಾಳಸರ್ಪ, ಹಾದರ ಅಂತ ಶಬ್ದ ಬಳಸಿದರೆ ತಪ್ಪಾ ಎಂದು ಕೇಳಿದವರೂ ಇದ್ದಾರೆ.

ತುಂಬ ಒಳ್ಳೆ ಚರ್ಚೆ ಆರಂಭಿಸಿದ್ದೀರಿ, ಆದರೆ ಅಲ್ಲಿ ಕಮೆಂಟು ಹಾಕುತ್ತಿರುವವರನ್ನು ಗಮನಿಸಿದರೆ ಅವರ ಜತೆ ಆರೋಗ್ಯಕರ ಚರ್ಚೆ ಸಾಧ್ಯವಿಲ್ಲ ಅನ್ನಿಸುತ್ತಿದೆ. ಅಂಥವರ ಜತೆ ಚರ್ಚಿಸುವುದಕ್ಕಿಂತ ಸುಮ್ಮನಿರುವುದು ವಾಸಿ ಎಂದು ಸಂಪಾದಕೀಯದ ಗಂಭೀರ ಓದುಗರೊಬ್ಬರು ಹೇಳಿದರು. ಏನಾದರೂ ಮಾಡಿ, ಅರ್ಥಪೂರ್ಣ ಚರ್ಚೆಯಾಗುವ ಹಾಗೆ ಮಾಡಿ ಎಂಬುದು ಅವರ ಬಿನ್ನಹ.

ನಿಜ, ಎಲ್ಲರನ್ನೂ ಮೆಚ್ಚಿಸಲು ಆಗುವುದಿಲ್ಲ. ಮೆಚ್ಚಿಸುವ ಉದ್ದೇಶವೂ ನಮಗಿಲ್ಲ. ಸಾವಿರಾರು ಮಂದಿ ದಿನವೂ ನಮ್ಮ ಬ್ಲಾಗ್ ಓದಬೇಕು ಎಂಬ ಟಿಆರ್‌ಪಿ ಆಸೆಯೂ ನಮಗಿಲ್ಲ. ಇದರಿಂದ ಏನೋ ಕ್ರಾಂತಿ ಜರುಗುತ್ತದೆ ಎಂಬ ಭ್ರಮೆಯೂ ನಮಗಿಲ್ಲ. ಕೆಲವು ಪ್ರತಿಭಟನೆಯ ಧ್ವನಿಗಳನ್ನು ದಾಖಲಿಸಲೇಬೇಕು ಎಂಬ ಕಾಳಜಿ ನಮ್ಮದು. ಇಂಥ ಧ್ವನಿಗಳು ಇಲ್ಲದೇ ಹೋದರೆ ಫ್ಯಾಸಿಸ್ಟ್ ಪ್ರವೃತ್ತಿ ಬಲವಾಗುತ್ತಾ ಹೋಗುತ್ತದೆ. ಪ್ರಜಾಪ್ರಭುತ್ವದ ಆಶಯಗಳಿಗೆ ತಕ್ಕ ಹಾಗೆ ಒಳಿತು-ಕೆಡುಕುಗಳ ಚರ್ಚೆ ನಡೆಯಲೇಬೇಕು. ಇದು ಎಲ್ಲ ಕ್ಷೇತ್ರಗಳಲ್ಲೂ ನಡೆಯಬೇಕು. ಭಿನ್ನ ಧ್ವನಿಗಳನ್ನು ಗೌರವಿಸುವ ಪರಂಪರೆ ನಮ್ಮದಾಗಬೇಕು. ಈ ಆಶಯಗಳೊಂದಿಗೆ ಈ ಪರ್ವ ಕಾಲದಲ್ಲಿ ನಿಂತಿದ್ದೇವೆ. ಹೀಗಿರುವಾಗ ಈ ಬ್ಲಾಗ್‌ನಲ್ಲಿ ಬಹಳಷ್ಟು ಮಂದಿಗೆ ತಮ್ಮ ನಿಜ ನಾಮಧೇಯದಲ್ಲಿ ಬರೆಯುವುದು ಕಷ್ಟವಾಗುತ್ತದೆ, ಅದಕ್ಕೆ ನಾನಾ ಕಾರಣಗಳೂ ಇರುತ್ತವೆ, ನಾವು ಅದನ್ನು ಬಲ್ಲೆವು. ಆದರೆ ಎಲ್ಲವೂ ಒಂದು ಮಿತಿಯಲ್ಲಿದ್ದರೆ ಚಂದವಲ್ಲವೇ?

ಇದೆಲ್ಲವನ್ನೂ ಹೇಳುತ್ತ, ಮತ್ತೆ ನಿಮಗೆ ಅಂದರೆ ಅನಾಮಿಕ ಕಮೆಂಟುದಾರರಿಗೆ ಮುಕ್ತ ಅವಕಾಶ ನೀಡುತ್ತಿದ್ದೇವೆ. ಹರಿದು ಬರುತ್ತಿದ್ದ ನೂರಾರು ಕಮೆಂಟುಗಳನ್ನು ಓದಲೂ ಸಾಧ್ಯವಾಗದೆ ಅನಾಮಿಕ ಕಮೆಂಟುಗಳನ್ನು ಬ್ಲಾಕ್ ಮಾಡಿದ್ದೆವು. ಇದು ನಮಗೆ ಇಷ್ಟವಾದ ನಿರ್ಧಾರವೇನೂ ಆಗಿರಲಿಲ್ಲ. ಈಗ ಅದನ್ನು ಮತ್ತೆ ತೆರವು ಮಾಡುತ್ತಿದ್ದೇವೆ. ನಿಮಗನ್ನಿಸಿದ್ದನ್ನು ನೀವು ಹೇಳಿ. ಮಂತ್ರಕ್ಕಿಂತ ಉಗುಳು ಜಾಸ್ತಿಯಾಗೋದು ಬೇಡ. ನಮ್ಮ ಉಗುಳು ನಮ್ಮ ಮೇಲೇ ಸಿಡಿಯಬಾರದಲ್ಲವೇ?
ಪ್ರೀತಿ ಹೀಗೇ ಇರಲಿ.

-ಸಂಪಾದಕೀಯ

Monday, February 14, 2011

ಭಟ್ಟರ ಸಾರಥ್ಯದಲ್ಲಿ ಕನ್ನಡಪ್ರಭ ನಂ.೧ ಆಗುತ್ತದೆಯೇ?


ರವಿ ಬೆಳಗೆರೆ ನೇತೃತ್ವದಲ್ಲಿ ಜನಶ್ರೀ ಯಶಸ್ವಿಯಾಗುತ್ತದೆ ಎಂದು ನಿಮಗನ್ನಿಸುತ್ತದೆಯೇ?

ಹೀಗಂತ ಪ್ರಶ್ನೆ ಕೇಳಿದ್ದೆವು. ಹಿಂದಿನ ಎಲ್ಲ ಸಮೀಕ್ಷೆಗಳಿಗಿಂತ ಹೆಚ್ಚು ಪ್ರತಿಕ್ರಿಯೆಗಳನ್ನು ಆಕರ್ಷಿಸಿದ ಪ್ರಶ್ನೆ ಇದು. ೩೬೭ ಮಂದಿ ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ೭೬ ಮಂದಿ ರವಿ ಬೆಳಗೆರೆ ನೇತೃತ್ವದಲ್ಲಿ ಜನಶ್ರೀ ಯಶಸ್ವಿಯಾಗುತ್ತದೆ ಎಂದು ಹೇಳಿದ್ದಾರೆ. ೨೬೨ ಮಂದಿಗೆ ಇದು ಸಾಧ್ಯವಿಲ್ಲ ಅನಿಸಿದೆ. ೨೯ ಮಂದಿ ಗೊತ್ತಿಲ್ಲ ಎಂದಿದ್ದಾರೆ.

ಒಟ್ಟು ಶೇ.೨೦ರಷ್ಟು ಮಂದಿ ಜನಶ್ರೀ ಯಶಸ್ವಿಯಾಗುತ್ತೆ ಎಂದಿದ್ದರೆ, ಶೇ.೭೧ರಷ್ಟು ಮಂದಿ ಇಲ್ಲ ಎಂದಿದ್ದಾರೆ. ಶೇ.೭ರಷ್ಟು ಜನರು ಗೊತ್ತಿಲ್ಲ ಎಂದಿದ್ದಾರೆ.

I joined JASHREE news channel today and will be hosting a daily show late evening. Need your support and best wishes. I will also host a morning breakfast programme show which will be unique. . ಹೀಗಂತ ರವಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದಿದ್ದರು.

My friend Ravi Belagere took charge of Janashree Channel Today. Gud luck Ravee Sir.  ಹೊಸ ದ್ವೀಪಗಳಿಗೆ ಹೊರಟಾನ ಬನ್ನೀ.... ಎಂದು ರವಿಬೆಳಗೆರೆಯ ಮಿತ್ರ, ಕನ್ನಡದ ಮತ್ತೋರ್ವ ಕ್ರಿಯಾಶೀಲ ಪತ್ರಕರ್ತ ಜೋಗಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದಿದ್ದರು.

ರವಿ ಬೆಳಗೆರೆ ಜನಶ್ರೀಯಲ್ಲಿ ಸಿಇಓ (ಕಂಟೆಂಟ್) ಆಗಿ ಸೇರ್ಪಡೆಯಾಗಿದ್ದಾರೆ ಎಂಬ ಮಾಹಿತಿ ನಮಗಿತ್ತು.
ಆದರೆ ರವಿ ಬೆಳಗೆರೆ ಈ ವಾರದ ತಮ್ಮ ಹಾಯ್ ಬೆಂಗಳೂರಿನಲ್ಲಿ ಹೀಗೆ ಬರೆದಿದ್ದಾರೆ: ಫೆಬ್ರವರಿ ೧೮ಕ್ಕೆ ಜನಶ್ರೀ ವಾಹಿನಿ ಆರಂಭವಾಗಲಿದೆ. ಅದಕ್ಕೆ ನಾನು ಮುಖ್ಯಸ್ಥನಲ್ಲ, ಸಿಬ್ಬಂದಿಯವನೂ ಅಲ್ಲ. ಪ್ರತಿನಿತ್ಯ ಒಂದು ಟಾಕ್ ಶೋ ಥರದ್ದನ್ನು ಮಾಡಿಕೊಡಲು ಒಪ್ಪಿದ್ದೇನೆ.

ಬೆಳಗೆರೆಯವರ ಈ ಸ್ಟೇಟ್‌ಮೆಂಟು ಗಮನಿಸಿದರೆ, ರವಿ ಬೆಳಗೆರೆ ನೇತೃತ್ವದಲ್ಲಿ ಜನಶ್ರೀ ಯಶಸ್ವಿಯಾಗುತ್ತದೆಯೇ ಎಂಬ ನಮ್ಮ ಪ್ರಶ್ನೆಯೇ ಅಪ್ರಸ್ತುತವಾಗಿದೆ.

ಅದು ಹಾಗೆ ಇರಲಿ, ವಿಶ್ವೇಶ್ವರ ಭಟ್ಟರು ಪ್ಯಾಡು ಕಟ್ಟಿ ಕನ್ನಪ್ರಭದಲ್ಲಿ ಬ್ಯಾಟಿಂಗ್ ಆರಂಭಿಸಿದ್ದಾರೆ. ಕನ್ನಡಪ್ರಭ ಯಾಕೋ ಬ್ಲಾಕ್ ಅಂಡ್ ವೈಟ್ ಮೂವಿ ಇದ್ದಂತೆ ಕಾಣುತ್ತಿದೆ, ಏನಾದ್ರೂ ಮ್ಯಾಜಿಕ್ ಮಾಡಿ ಸರ್ ಎಂಬುದು ಅವರ ಅಭಿಮಾನಿ ಓದುಗರ ಬೇಡಿಕೆ.

ವಿಜಯ ಕರ್ನಾಟಕವನ್ನು ನಂ.೧  ಮಾಡಿದವರು ಭಟ್ಟರು. ಭಟ್ಟರು ವಿಜಯ ಕರ್ನಾಟಕ ಕೈಗೆ ತೆಗೆದುಕೊಂಡಾಗ ಅಂದಿನ ಮಾಲೀಕ ವಿಜಯ ಸಂಕೇಶ್ವರರ ಪೂರ್ಣ ಬೆಂಬಲವಿತ್ತು. ಸಂಕೇಶ್ವರರ ಮಾರ್ಕೆಟಿಂಗ್ ಕೌಶಲ್ಯ ಅಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಈಗ ಕನ್ನಡಪ್ರಭಕ್ಕೆ ಇಬ್ಬರು ಮಾಲೀಕರಿದ್ದಾರೆ. ಇಬ್ಬರೂ ಮಾರ್ಕೆಟಿಂಗ್ ಜಗತ್ತಿನಲ್ಲಿ ಹೆಸರು ಮಾಡಿದವರೇ. ಆದರೆ ಭಟ್ಟರಿಗೆ ಪೂರ್ಣ ಪ್ರಮಾಣದ ಬೆಂಬಲ ದೊರೆಯಬಹುದೇ? ಇನ್ನು ಮೂರು ತಿಂಗಳ ಹೊತ್ತಿಗೆ ರಾಜೀವ್ ಚಂದ್ರಶೇಖರ್ ಕನ್ನಡಪ್ರಭದ ಇನ್ನಷ್ಟು ಶೇರುಗಳನ್ನು ಪಡೆದು ಪ್ರಭುತ್ವ ಸಾಧಿಸಲಿದ್ದಾರೆ ಎಂಬ ಮಾತಿದೆ. ವಿಜಯ ಕರ್ನಾಟಕ ಮತ್ತು ಪ್ರಜಾವಾಣಿಯನ್ನು ಮೀರಿ ನಿಲ್ಲಲು ಭಟ್ಟರು ಮತ್ತು ರಾಜೀವ್ ಚಂದ್ರಶೇಖರ್ ಅವರಿಂದ ಸಾಧ್ಯವೇ?

ಭಟ್ಟರ ಸಾರಥ್ಯದಲ್ಲಿ ಕನ್ನಡಪ್ರಭ ನಂ.೧ ಕನ್ನಡ ಪತ್ರಿಕೆಯಾಗಿ ಹೊರಹೊಮ್ಮಬಹುದೇ?

ಇದು ಈ ವಾರದ ನಮ್ಮ ಪ್ರಶ್ನೆ. ಆಗುತ್ತೆ, ಆಗೋದಿಲ್ಲ, ಗೊತ್ತಿಲ್ಲ ಎಂಬ ಉತ್ತರಗಳು ಯಥಾಪ್ರಕಾರ ನಿಮಗೆ. ದಯವಿಟ್ಟು ಓಟ್ ಮಾಡಿ.

Saturday, February 12, 2011

ವಾಸ್ತು ಮೆಷಿನ್ನು ಬಂತು, ದಾರಿ ಬಿಡಿ...


ಮಹಾಜನಗಳೇ, ಕೇಳಿರಿ, ಕೇಳಿರಿ.

ಹೊಸದೊಂದು ಮೆಷಿನ್ನು ಬಂದಿದೆ. ಬಟ್ಟೆ ಒಗೆಯೋದಕ್ಕೆ, ಅಕ್ಕಿ ರುಬ್ಬೋದಕ್ಕೆ, ಹಣ್ಣು ಹಿಂಡುವುದಕ್ಕೆ ಮೆಷಿನ್ನು ಬಂದ ಹಾಗೆ ಈಗ ವಾಸ್ತು ನೋಡೋದಕ್ಕೂ ಮೆಷಿನ್ನು ಬಂದಿದೆ. ಹೆಸರು ವೈದಿಕ್ (ವೇದಿಕ್) ಔರಾ ಸ್ಕ್ಯಾನಿಂಗ್ ಮೆಷಿನ್. ಭಲರೇ, ಬಪ್ಪರೇ.
ಮೆಷಿನ್ನಿನ ಕುರಿತು ನಾವು ಏನನ್ನಾದರೂ ಹೇಳುವ ಮೊದಲು ಇಲ್ಲಿರುವ ಇಮೇಜನ್ನು ಒಮ್ಮೆ ಕ್ಲಿಕ್ ಮಾಡಿ ಮನಸ್ಸು ಭರ್ತಿ ಓದಿಕೊಂಡುಬಿಡಿ. ನಾವಂತೂ ಓದಿ ಖುಷಿಯಾಗಿದ್ದೀವಿ, ನೀವು ಓದಿ ಖುಷಿಯಾಗಿಬಿಡಿ.

ಇಷ್ಟು ದಿನ ವಿಚಾರವಾದಿಗಳೆಂಬ ಅಡ್ಡಕಸುಬಿಗಳು ವಾಸ್ತುವನ್ನೇ ಅವೈಜ್ಞಾನಿಕ, ಮೌಢ್ಯ, ಹಣ ಗಳಿಸುವ ದಗಲ್ಬಾಜಿ ತಂತ್ರ ಎಂದು ಜರೆಯುತ್ತಿದ್ದರು. ಆದರೆ ಸಂಶೋಧಕರೊಬ್ಬರು ವಾಸ್ತು ಕಂಡು ಹಿಡಿಯುವುದಕ್ಕೂ ಮೆಷಿನ್ನು ಕಂಡುಹಿಡಿದು, ಅದಕ್ಕೂ ವೈಜ್ಞಾನಿಕತೆಯ ಮೆರುಗು ನೀಡಿದ್ದಾರೆ. ಎಲ್ಲರೂ ಉಘೇ ಉಘೇ ಅಂತನ್ನಿ. ವಿಚಾರವಾದಿಗಳ ಮನೆ ಹಾಳಾಗಿ ಹೋಗಲಿ.

ಇದು ಟ್ಯೂಬ್ ಲೈಟ್ ಬಣ್ಣ ಹೊಂದಿರುವ ಸಣ್ಣ ಜೋಡಿ ಯಂತ್ರವಂತೆ. ಯಾವುದೇ ಕಾರಣಕ್ಕೂ ಮೆಷಿನ್ನಿನಲ್ಲಿ ಏನಿದೆ? ಅದು ಹೇಗೆ ವಾಸ್ತು ಕಂಡುಹಿಡಿಯುತ್ತದೆ ಎಂದು ಅಪ್ಪಿತಪ್ಪಿಯೂ ಕೇಳಬೇಡಿ, ನಿಮ್ಮ ತಲೆ ಸಿಡಿದು ಸಾವಿರ ಹೋಳಾದೀತು, ಎಚ್ಚರಿಕೆ. ವೈದಿಕ್ ಮೆಷಿನ್ನು ನಂಬಿಕೆಯ ಆಧಾರದ ಮೇಲೆ ನಿಂತಿದೆ. ಅದನ್ನು ಪ್ರಶ್ನಿಸಕೂಡದು, ಹುಶಾರ್!

ಈ ಮೆಷಿನ್ನನ್ನು ಕೈಯಲ್ಲಿ ಹಿಡಿದುಕೊಂಡು ಕಟ್ಟಡದಲ್ಲಿ ದೋಷವಿರುವ ಕಡೆ ಹೋಗಿ ನಿಂತರೆ ಅದು ಓಪನ್ ಆಗುವುದಿಲ್ಲ, ದೋಷವಿಲ್ಲದೇ ಇದ್ದರೆ ಓಪನ್ ಆಗಿಬಿಡುತ್ತೆ. ವಾರೆವ್ಹಾ, ಎಂಥ ಮೆಷಿನ್ನು, ಏನು ಕಥೆ? ದೇಶ ಉದ್ಧಾರವಾಗಲು ಇನ್ನೇನು ಬೇಕು.

ಈಗ ನೋಡಿ, ಈ ಯಂತ್ರ ಪತ್ರಕರ್ತರಿಗೂ ತುಂಬಾ ಯೂಸ್‌ಫುಲ್ ಆಗುತ್ತೆ. ಕಚೇರಿಯಲ್ಲಿ ಯಾವುದಾದರೂ ಸೆಕ್ಷನ್ನಿನಲ್ಲಿ ಸಮಸ್ಯೆ ಆದ್ರೆ ಮೆಷಿನ್ನು ಹಿಡಿದು ನಿಂತರೆ ಸಾಕು, ಅದು ಓಪನ್ ಆಗೋದಿಲ್ಲ. ಆಮೇಲೆ ಅಲ್ಲೊಂದು ದೇವರ ಫೋಟೋ ತಗುಲಿಸಿಬಿಡೋದು. ಮತ್ತೆ ಮೆಷಿನ್ನು ಹಿಡಿದು ನಿಂತರೆ ಅದು ಓಪನ್ ಆಗುತ್ತೆ. ಅಲ್ಲಿಗೆ ಪ್ರಾಬ್ಲಮ್ ಸಾಲ್ವ್!

ಯಾವುದಾದರೂ ಸಪ್ಲಿಮೆಂಟು ವಾಸ್ತುಪ್ರಕಾರ ಸರಿ ಇದೆಯೋ ಇಲ್ಲವೋ ಎಂಬುದನ್ನೂ ಈ ಮೆಷಿನ್ನು ಕಂಡುಹಿಡಿಯಬಹುದು. ಒಂದು ಸಪ್ಲಿಮೆಂಟಿನ ಎದುರು ಮೆಷಿನ್ನು ಹಿಡಿಯೋದು, ಓಪನ್ ಆಗಲಿಲ್ಲ ಅಂದ್ರೆ ಕಾಲ-ದೇಶದ ಅಗತ್ಯಕ್ಕೆ ತಕ್ಕಂತೆ ಸಪ್ಲಿಮೆಂಟೇ ಬದಲಾಯಿಸೋದು. ಹೇಗಿದೆ ಐಡಿಯಾ?

ಕೆಲವು ಪತ್ರಿಕೆಗಳಲ್ಲಿ ಲೀಡ್ ಸುದ್ದಿ ಏನನ್ನು ಮಾಡೋದು ಎಂಬೋದೇ ಸಮಸ್ಯೆ. ಇನ್ನು  ಆ ಸಮಸ್ಯೆನೂ ಖಲ್ಲಾಸ್. ನಾಲ್ಕು ಸುದ್ದಿಗಳ ಪ್ರಿಂಟ್ ಔಟ್‌ಗಳನ್ನು ನಾಲ್ಕು ಟೇಬಲ್‌ಗಳ ಮೇಲೆ ಪ್ರತ್ಯೇಕವಾಗಿ ಇಡೋದು. ಒಂದೊಂದೇ ಟೇಬಲ್ ಬಳಿ ಹೋಗಿ ಮೆಷಿನ್ನು ಹಿಡಿಯೋದು. ಯಾವ ಸುದ್ದಿ ಎದುರು ಮೆಷಿನ್ನು ಓಪನ್ ಆಗುತ್ತೋ ಅದೇ ಲೀಡ್ ಸುದ್ದಿ! ಎಂಥ ಸೂಪರ್ ಪ್ರಯೋಗ ಅಲ್ವಾ?

ಹಾಗಂತ ಕೆಡವಿ ಕಟ್ಟದ ಸರಳ ವಾಸ್ತುತಜ್ಞ ಎಂಬ ಶೀರ್ಷಿಕೆಯಲ್ಲಿ ಇಂಥ ಮೆಷಿನ್ನಿನ ಮಹಿಮೆಯ ಕುರಿತ ಲೇಖನ ಪ್ರಕಟಿಸಿರೋದು ಪ್ರಜಾವಾಣಿ. ಇದನ್ನು ನಾವು ಓದಿದ್ದು ಬಳ್ಳಾರಿಯಲ್ಲಿ. ಅಂದ್ರೆ ಅಲ್ಲಿನ ಎಡಿಷನ್‌ನಲ್ಲಿ ಅದು ಬಂದಿದೆ.( ೬-೨-೨೦೧೧ರ ಭಾನುವಾರ ಮೂರನೇ ಪುಟ)

ಈ ಸುದ್ದಿಯನ್ನು ಮೂರ‍್ನಾಲ್ಕು ಜಿಲ್ಲೆಯವರು ಮಾತ್ರ ಓದಿದ್ದಾರೆ. ಹಾಗೆ ನೋಡಿದರೆ ವಾಸ್ತು ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಇರೋದು ಬೆಂಗಳೂರಿನಲ್ಲಿ. ಹೀಗಾಗಿ ಆಲ್ ಎಡಿಷನ್‌ನಲ್ಲಿ ಅದರಲ್ಲೂ ಬೆಂಗಳೂರು ಎಡಿಷನ್‌ನಲ್ಲಿ ಇದು ಪ್ರಕಟವಾಗಿದ್ದರೆ ಎಷ್ಟೊಂದು ಜನರಿಗೆ ಅನುಕೂಲವಾಗುತ್ತಿತ್ತು ಅಲ್ವೇ? ಮೆಷಿನ್ನು ಕಂಡುಹಿಡಿದ ಮಹಾಜ್ಞಾನಿ ಎನ್.ಪಿ.ಅನಂತರಾಮ ಭಟ್ಟರಿಗೆ ಎಷ್ಟೊಂದು ಅಭಿಮಾನಿಗಳು ಹುಟ್ಟಿಕೊಳ್ಳುತ್ತಿದ್ದರು, ಎಷ್ಟು ಡಿಮ್ಯಾಂಡು ಸೃಷ್ಟಿಯಾಗುತ್ತಿತ್ತು? ಲೇಖನದಲ್ಲಿ ಪ್ರಕಟಗೊಂಡಿರುವ ಅವರ ಮೊಬೈಲ್ ನಂಬರಿಗೆ, ಇ-ಮೇಲ್ ಐಡಿಗೆ ಅದೆಷ್ಟು ಆರ್ಡರುಗಳು ಸಿಕ್ಕಿ ಅವರ ಬದುಕು ಪಾವನವಾಗುತ್ತಿತ್ತು?

ತಡೀರಿ, ನಾವು ನಮ್ಮ ಬ್ಲಾಗ್‌ಪೇಜ್ ಓಪನ್ ಮಾಡಿ, ಭಟ್ಟರ ಕೈಯಲ್ಲಿ ಮೆಷಿನ್ನು ಹಿಡಿಸಿ ನಮ್ಮ ಬ್ಲಾಗಿನ ವಾಸ್ತು ಸರಿ ಇದೆಯೋ ಇಲ್ಲವೋ ಚೆಕ್ ಮಾಡಿಸಿಬಿಡ್ತೀವಿ.

ವಾಸ್ತು ಶಾಸ್ತ್ರಕ್ಕೆ ಜಯವಾಗಲಿ, ಹೊಸ ಮೆಷಿನ್ನಿಗೆ ಜಯವಾಗಲಿ.

Thursday, February 10, 2011

ಎಂ.ಪಿ.ಪ್ರಕಾಶ್ ಕುರಿತು ನಮ್ಮ ಮಾಧ್ಯಮಗಳು...


ಸಜ್ಜನಿಕೆಯ ನಿರ್ಗಮನ: ಎಂ.ಪಿ. ಪ್ರಕಾಶ್ ನಿಧನದ ಕುರಿತು ಹೊಸದಿಗಂತದ ಮುಖಪುಟದ ಹೆಡ್ಡಿಂಗ್ ಇದು. ಇವತ್ತಿನ ರಾಜಕಾರಣ ಸಜ್ಜನಿಕೆಯನ್ನು ಮರೆತುಹೋಗಿದೆ. ಹೊಡಿ, ಬಡಿ, ಕತ್ತರಿಸು ಶೈಲಿಯ ರಾಜಕೀಯ ಮುಖಂಡರೇ ಮುನ್ನೆಲೆಗೆ ಬಂದಿದ್ದಾರೆ. ಪ್ರಕಾಶ್ ಸಜ್ಜನಿಕೆಯ ರಾಜಕಾರಣದ ಕೊನೆಯ ಕೊಂಡಿ. ಹೀಗಾಗಿ ಹೊಸದಿಗಂತ ಕೊಟ್ಟ ತಲೆಬರಹ ಅರ್ಥಪೂರ್ಣವಾಗಿತ್ತು.

ಹೊಸದಿಗಂತದ ನಾಲ್ಕು ಪುಟಗಳಲ್ಲಿ ಎಂ.ಪಿ.ಪ್ರಕಾಶ್ ಕುರಿತ ಸುದ್ದಿಗಳು ಹರಡಿಕೊಂಡಿವೆ. ಕವರೇಜು ಚೆನ್ನಾಗಿದೆ. ಪತ್ರಿಕೆಯ ಘೋಷಿತ ನಿಲುವಿನಲ್ಲಿ ಕಿಂಚಿತ್ತೂ ಬದಲಾವಣೆಯಿಲ್ಲದಿದ್ದರೂ ರೀಲಾಂಚ್ ಆದ ಮೇಲೆ ಪತ್ರಿಕೆಯ ವಿನ್ಯಾಸ ಸೊಗಸಾಗಿದೆ.

ಎಂ.ಪಿ.ಪ್ರಕಾಶ್ ನಿಧನದ ಕುರಿತಾದ ಸುದ್ದಿಯಲ್ಲಿ ಎಲ್ಲ ಪತ್ರಿಕೆಗಳನ್ನು ಮೀರಿಸಿರುವುದು ಕನ್ನಡಪ್ರಭ. ವಿಶ್ವೇಶ್ವರ ಭಟ್ಟರ ಕುಸುರಿ ಕೆಲಸ ಪ್ರಕಾಶಮಾಯ ಎಂಬ ಹೆಡ್ಡಿಂಗಿನಲ್ಲೇ ಗೋಚರಿಸುತ್ತದೆ. ವಿಶ್ವೇಶ್ವರ ಭಟ್ಟರು ತಮ್ಮ ಹೊಸ ಇನ್ನಿಂಗ್ಸ್‌ನ್ನು ಭರ್ಜರಿಯಾಗಿಯೇ ಆರಂಭಿಸಿರುವುದಕ್ಕೆ ಒಳಪುಟಗಳಲ್ಲೂ ಸಾಕ್ಷಿ ದೊರೆಯುತ್ತದೆ. ಅದಕ್ಕೆ ತಕ್ಕ ಬೆಂಬಲವೂ ಅವರ ಹೊಸ ಒಡನಾಡಿಗಳಿಂದ ದೊರೆತಿರುವುದು   ಎದ್ದು ಕಾಣುತ್ತದೆ.

ಪ್ರಜಾವಾಣಿಯಲ್ಲಿ ಎಂ.ಪಿ.ಪ್ರಕಾಶ್ ತೀರಿಕೊಂಡ ಸುದ್ದಿ ಮುಖಪುಟದಲ್ಲಿ ಪ್ರಕಟವಾಗೇ ಇಲ್ಲ. ಬದಲಾಗಿ ಪ್ರೇಮ್ ಕುಮಾರ್ ಹರಿಯಬ್ಬೆ ಕಟ್ಟಿಕೊಟ್ಟಿರುವ ವ್ಯಕ್ತಿ ಚಿತ್ರ ಕಾಣಿಸಿಕೊಂಡಿದೆ. ಬಹುಶಃ ಬೆಳಿಗ್ಗೆಯಿಂದ ನ್ಯೂಸ್ ಚಾನೆಲ್‌ಗಳಲ್ಲಿ ಸುದ್ದಿ ಹರಿದಾಡಿದ ಪರಿಣಾಮ ನಿಧನದ ಸುದ್ದಿ ಪ್ರಜಾವಾಣಿಗೆ ಹಳೆಯ ಸುದ್ದಿ ಎನಿಸಿರಬಹುದು. ಕವರೇಜ್‌ನಲ್ಲೂ ಅಂಥ ವಿಶೇಷಗಳೇನೂ ಇಲ್ಲ. ಹರಿಯಬ್ಬೆ ಲೇಖನವೊಂದೇ ಹೈಲೈಟ್, ಉಳಿದ ಸುದ್ದಿ-ಬರಹಗಳು ಪ್ರಕಾಶ್‌ಗೆ ನ್ಯಾಯ ಕೊಟ್ಟಂತೆ ಕಾಣುವುದಿಲ್ಲ.

ವಿಜಯ ಕರ್ನಾಟಕ ಒಂದು ಪೂರ್ಣ ಪುಟವನ್ನು ಪ್ರಕಾಶ್ ಕುರಿತ ಸುದ್ದಿ ಬರಹಗಳಿಗೆ ಮೀಸಲಿಟ್ಟಿದೆ. ಆದರೂ ಕನ್ನಡಪ್ರಭ-ಹೊಸದಿಗಂತಗಳಿಗೆ ಹೋಲಿಸಿದರೆ ಅಂಥ ವಿಶೇಷಗಳೇನೂ ಇಲ್ಲ. ಸಜ್ಜನ ನಿರ್ಗಮನ ಎಂಬ ಹೆಡ್ಡಿಂಗ್‌ನೊಂದಿಗೆ ಕಾಣಿಸಿಕೊಂಡಿರುವ ಉದಯವಾಣಿ ಒಂದು ಪುಟವನ್ನು ಪ್ರಕಾಶ್ ಕುರಿತ ಸುದ್ದಿಗಳಿಗೆ ಮೀಸಲಿಟ್ಟಿವೆ. ಅಲ್ಲೂ ಸಹ ಅಂತಹ ವಿಶೇಷ ಪ್ರಯತ್ನಗಳೇನೂ ಕಾಣಿಸುವುದಿಲ್ಲ.

ಇಂಟರ್‌ನೆಟ್‌ನಲ್ಲಿ ಎಂ.ಪಿ.ಪ್ರಕಾಶ್ ಕುರಿತು ಸುದ್ದಿ-ಚಿತ್ರಗಳು ಗಮನ ಸೆಳೆದವು. ಚುರುಮುರಿ ಎರಡು ಪ್ರತ್ಯೇಕ ಲೇಖನಗಳನ್ನು ಪ್ರಕಟಿಸಿತು. ಅವಧಿಯ ಚಿತ್ರ ನಮನ ಚೆನ್ನಾಗಿತ್ತು. ಎನ್‌ಎಎಂ ಇಸ್ಮಾಯಿಲ್ ಎಂದೋ ಬರೆದ ಲೇಖನವನ್ನು ಪ್ರಕಟಿಸಿದ ಕೆಂಡಸಂಪಿಗೆ ಸಮಯಪ್ರಜ್ಞೆಯನ್ನು ಮರೆಯಿತು, ನಂತರ ತಿದ್ದಿಕೊಂಡು ಕುಂವೀ, ರಂಜಾನ್ ದರ್ಗಾ ಬರೆದ ಲೇಖನಗಳನ್ನು ಪ್ರಕಟಿಸಿ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಂಡಿತು.

ಹಿಂದೆಲ್ಲ ನಿಧನದ ಸುದ್ದಿಗಳಿಗೆ ಪತ್ರಿಕೆಗಳಲ್ಲಿ ಅಂಥ ಮಹತ್ವವೇನೂ ಇರುತ್ತಿರಲಿಲ್ಲ. ಆದರೆ ಈಗ ಪೈಪೋಟಿ ಕಾಣಿಸಿಕೊಂಡಿದೆ. ಡಾ. ರಾಜಕುಮಾರ್ ತೀರಿಕೊಂಡಾಗ ಕನ್ನಡಪ್ರಭ (ಎಚ್.ಆರ್.ರಂಗನಾಥ್ ಸಂಪಾದಕರಾಗಿದ್ದಾಗ) ಇಡೀ ಪತ್ರಿಕೆಯಲ್ಲಿ ಆ ಸುದ್ದಿಯ ಹೊರತಾಗಿ ಬೇರೇನನ್ನೂ ಪ್ರಕಟಿಸದೆ ದಾಖಲೆ ಸೃಷ್ಟಿಸಿತ್ತು. ತೇಜಸ್ವಿ ನಿಧನರಾದಾಗ ಈ ಟಿವಿಯ ಅರ್ಧ ಗಂಟೆ ಬುಲೆಟಿನ್‌ನಲ್ಲಿ ತೇಜಸ್ವಿ ಹೊರತಾಗಿ ಬೇರೆ ಯಾವ ಸುದ್ದಿಯನ್ನೂ ಬಿತ್ತರಿಸದೆ ಅವತ್ತಿನ ಸುದ್ದಿ ವಿಭಾಗದ ಮುಖ್ಯಸ್ಥ ಜಿ.ಎನ್.ಮೋಹನ್ ಹೊಸ ಪರಂಪರೆ ಶುರು ಮಾಡಿದ್ದರು. ಇತ್ತೀಚಿಗೆ ಭೀಮಸೇನ ಜೋಷಿ ನಿಧನರಾದಾಗಲೂ ಕನ್ನಡ ಪತ್ರಿಕೆಗಳು ಅತ್ಯಂತ ಶ್ರದ್ಧೆಯಿಂದ ಪುಟಗಟ್ಟಲೆ ಸುದ್ದಿಯನ್ನು ನೀಡಿದ್ದವು. ಸಂಗೀತ ಕ್ಷೇತ್ರದ ದಿಗ್ಗಜರಿಂದಲೇ ಬರೆಯಿಸಿ ಓದುಗರನ್ನು ತಲುಪಿದ್ದವು.

ಮಹತ್ವದ ವ್ಯಕ್ತಿಗಳು ಸಾವಿಗೀಡಾದಾಗ ಅವರ ಒಟ್ಟು ಬದುಕನ್ನು ಬಿಂಬಿಸುವ ಸುದ್ದಿ-ಬರಹಗಳನ್ನು ಓದುಗ ನಿರೀಕ್ಷಿಸುತ್ತಾನೆ. ಇಂಥ ಸಂದರ್ಭದಲ್ಲಿ ಕೆಲವೊಮ್ಮೆ ಸಂಪ್ರದಾಯಗಳನ್ನು ಮುರಿಯಬೇಕಾಗುತ್ತದೆ. ಈ ಮೀರುವ ಗುಣವನ್ನು ಒಳಗೊಂಡವನೇ ಯಶಸ್ವಿ ಪತ್ರಕರ್ತ ಆಗಲು ಸಾಧ್ಯ ಅಲ್ಲವೇ?

ಮರೆತಿದ್ದ ಮಾತು: ಸಾಹಿತ್ಯ ಸಮ್ಮೇಳನಕ್ಕೆ ಬಾರದವರಿಗೆ ಅವರದೇ ಆದ ವೈಯಕ್ತಿಕ ಕಾರಣಗಳಿರುತ್ತವೆ, ಫೈನ್. ಆದರೆ ನಾಗರಾಜ್ ವಸ್ತಾರೆ ಎಂಬ ವಿಚಿತ್ರ ಮನುಷ್ಯನಿಗೆ ಸಾಹಿತ್ಯ ಸಮ್ಮೇಳನಕ್ಕೆ ತಾನೇಕೆ ಹೋಗಲಿಲ್ಲ ಎಂಬ ತನ್ನ ಸಮಸ್ಯೆಯೇ ಸಾರ್ವತ್ರಿಕ ಸಮಸ್ಯೆಯಾಗಿದೆ. ಸುವರ್ಣ ನ್ಯೂಸ್‌ನ ಮೆಗಾಫೈಟ್‌ನಲ್ಲಿ ಈತ ಹೇಳಿದ್ದು ಇನ್ನೂ ವಿಚಿತ್ರವಾಗಿತ್ತು. ಕನ್ನಡವನ್ನೇ ಫ್ರೆಂಚ್ ಭಾಷೆಯಂತೆ ಮಾತನಾಡುವ ಈತ ಸಾಹಿತ್ಯ ಸಮ್ಮೇಳನಕ್ಕೆ ಬರಲು ನಿಮ್ಮ ಕಡೆ ನನಗೇನು ಆಫರ್ ಏನಿದೆ ಎಂದು ಸಾಹಿತ್ಯ ಪರಿಷತ್ ಅಧ್ಯಕ್ಷರನ್ನು ಕೇಳಿದ್ದರು! ವಿಶೇಷವೆಂದರೆ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಶಂಕರ್ ಪ್ರಕಾಶ್ ಜತೆ ಅದ್ಭುತವಾಗಿ ನಿರೂಪಿಸಿದ್ದು ಆತನ ಪತ್ನಿ ಅಪರ್ಣ!

೨೫೦ ರೂ. ಕೊಡಿಸಿ: ಪ್ರವಾ ಬ್ಯೂರೋ ಮುಖ್ಯಸ್ಥರ ಆರ್ತನಾದ


 ನನ್ನ ಕಾರಿನ ಆಂಟೆನಾವನ್ನು ಯಾರೋ ಕಿಡಿಗೇಡಿಗಳು ಮುರಿದಿದ್ದಾರೆ. ನನಗೆ ನಮ್ಮ ಪತ್ರಿಕೆಯ ಸರ್ಕ್ಯುಲೇಷನ್ ವಿಭಾಗದಲ್ಲಿ ಕೆಲಸ ಮಾಡುವ ಒಬ್ಬ ಹುಡುಗನ ಮೇಲೆ ಡೌಟು. ಅವನನ್ನು ಕರೆಸಿ ವಿಚಾರಣೆ ನಡೆಸಿ, ನನಗೆ ಆಗಿರುವ ೨೫೦ ರೂ. ನಷ್ಟವನ್ನು ತುಂಬಿಸಿಕೊಡಿ.

ಹೀಗಂತ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿರುವುದು ಪ್ರಜಾವಾಣಿ ಮಂಗಳೂರು ಬ್ಯೂರೋ ಮುಖ್ಯಸ್ಥ ಬಿ.ವಿ.ಮಹೇಶ್ಚಂದ್ರ. ಕೊಟ್ಟ ದೂರು ಹಾಗೂ ಹೀಗೂ ಹೊರಜಗತ್ತಿಗೆ ಗೊತ್ತಾಗಿ ಕರಾವಳಿಯ ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿ ಎಲ್ಲರೂ ಬಿದ್ದು ಬಿದ್ದು ನಗುತ್ತಿದ್ದಾರೆ.

ಕದ್ರಿ ಠಾಣೆಯಲ್ಲಿ ಮಹೇಶ್ಚಂದ್ರ ದಾಖಲಿಸಿರುವ ದೂರಿನ ಪ್ರಕಾರ ಘಟನೆ ನಡೆದಿರುವುದು ಜನವರಿ ೨೨ರಂದು. ಮಹೇಶ್ಚಂದ್ರ ಅವರ ನೀಲಿ ಬಣ್ಣದ ಆಲ್ಟೋ ಕಾರು (ಕೆ.ಎ.೧೩- ಎಂ ೪೮೦೪) ಪ್ರಜಾವಾಣಿ ಕಚೇರಿಯ ಮುಂದೆ ನಿಲ್ಲಿಸಲಾಗಿತ್ತು. ಸಂಜೆ ಹೊತ್ತಿಗೆ ಕಾರಿನ ರೇಡಿಯೋ ಆಂಟೆನಾವನ್ನು ಯಾರೋ ಕಿಡಿಗೇಡಿಗಳು ಮುರಿದಿದ್ದರು.

ಈ ಬಗ್ಗೆ ಮಹೇಶ್ಚಂದ್ರ ಶಾನೆ ತಲೆಕೆಡಿಸಿಕೊಂಡು ತನಿಖೆ ನಡೆಸಿದರು. ಕಚೇರಿ ಪಕ್ಕದ ಹೊಟೇಲ್‌ನಲ್ಲಿ ಕೆಲಸ ಮಾಡುವ ಹುಡುಗರು ಈ ಕೆಲಸ ಮಾಡಿರಬಹುದು ಎಂಬುದು ಅವರಿಗೆ ಹೊಳೆದ ಮೊದಲ ಅನುಮಾನ. ಆದರೆ ಅವರೇ ಅದು ನಿರಾಧಾರ ಎಂಬ ತೀರ್ಮಾನಕ್ಕೆ ಬರುತ್ತಾರೆ.

ನಂತರ ಮಹೇಶ್ಚಂದ್ರ ಅವರ ನೆನಪಿಗೆ ಬರುವುದು ಸರ್ಕ್ಯುಲೇಷನ್ ವಿಭಾಗದಲ್ಲಿ ನಡೆದ ಕೋಳಿಕದನ. ಅಲ್ಲಿ ಹಿರಿಯ ವ್ಯವಸ್ಥಾಪಕ ಕೃಷ್ಣ ನಾಯರಿಗೂ ಎಕ್ಸಿಕ್ಯೂಟಿವ್ ಉದಯಕುಮಾರ್ ಎಂಬುವವರಿಗೂ ಜಟಾಪಟಿ. ಉದಯಕುಮಾರ್ ಪರವಾಗಿ ಅವರ ಕೈ ಕೆಳಗೆ  ಕೆಲಸ ಮಾಡುವ ಅಜಯ್ ಎಂಬ ಹುಡುಗ ನಿಂತಿದ್ದ. ಕೃಷ್ಣ ನಾಯರಿಗೂ ಬೆದರಿಕೆ ಒಡ್ಡಿದ್ದನಂತೆ. ಇದೇ ಹಿನ್ನೆಲೆಯಲ್ಲಿ ತಮ್ಮ ಕಾರಿನ ಆಂಟೆನಾ ಮುರಿದದ್ದೂ ಅಜಯ ಎಂಬ ಈ ಹುಡುಗನೇ ಎಂಬ ತೀರ್ಮಾನಕ್ಕೆ ಮಹೇಶ್ಚಂದ್ರ ಬಂದಿದ್ದಾರೆ.

ಓಡಿ ಬಂದು ಕದ್ರಿ ಠಾಣೆಗೆ ದೂರು ಕೊಟ್ಟಿದ್ದಾರೆ. ದೂರು ದಾಖಲಾಗಿದೆ. ಪೊಲೀಸರು ಅಜಯ್‌ನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಏನಪ್ಪಾ, ಆಂಟೆನಾ ಮುರಿದಿದ್ದು ನೀನಾ ಎಂದು ಪ್ರಶ್ನಿಸಿದ್ದಾರೆ. ಆ ಹುಡುಗ ಆಣೆ, ಭಾಷೆ ಮಾಡಿ, ಸ್ವಾಮಿ ಈ ಕೃತ್ಯಮಾಡಿದ್ದು ನಾನಲ್ಲ, ಒಂದು ವೇಳೆ ನಾನೇ ಮಾಡಿದ್ದು ಎಂದಾದರೆ ಬನ್ನಿ ಶರವು ಮಹಾಗಣಪತಿ ದೇವಸ್ಥಾನಕ್ಕೆ, ಅಲ್ಲಿ ೨೫೦ ರೂಪಾಯಿ ಇಡುತ್ತೇನೆ, ತೆಗೆದುಕೊಂಡು ಹೋಗಲು ಹೇಳಿ ಅವರಿಗೆ ಎಂದು ಸವಾಲು ಒಡ್ಡಿದ್ದಾನೆ.

ಮಹೇಶ್ಚಂದ್ರ ಶರಾವು ಮಹಾಗಣಪತಿ ದೇವಸ್ಥಾನಕ್ಕೆ ಹೋಗಿ ೨೫೦ ರೂ. ಪರಿಹಾರ ತೆಗೆದುಕೊಂಡು ಬರುತ್ತಾರಾ ಅಥವಾ ಧರ್ಮಸ್ಥಳದ ಅಣ್ಣಪ್ಪಸ್ವಾಮಿಯ ಬಳಿ ಹೋಗಿ ಆಂಟೆನಾ ಮುರಿದವರ ಕೈ ಮುರಿದುಹೋಗಲಿ ಎಂದು ಬೇಡಿಕೊಂಡು ಕಾಣಿಕೆ ಸಲ್ಲಿಸಿ ಬರುತ್ತಾರಾ? ಅವರೇ ಹೇಳಬೇಕು.

ಹೇಳಿ ಕೇಳಿ, ಮಹೇಶ್ಚಂದ್ರ ಪ್ರಜಾವಾಣಿ ಪತ್ರಿಕೆಯ ಬ್ಯೂರೋ ಮುಖ್ಯಸ್ಥ. ಆ ಹುದ್ದೆಗೊಂದು ಘನತೆಯಿದೆ. ಒಂದು ವೇಳೆ ಅಜಯನೇ ಈ ಕೆಲಸ ಮಾಡಿದ್ದರೂ ಆತನ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲು ಅವರಿಗೆ ಎಲ್ಲ ಅವಕಾಶ ಇತ್ತು. ಇಂತಹ ಘಟನೆಗಳು ನಡೆದಾಗ ಆಂತರಿಕವಾಗಿ ವಿಚಾರಣೆ ನಡೆಸುವ ಪರಿಪಾಠ ಎಲ್ಲ ಕಚೇರಿಗಳಲ್ಲೂ ಇರುತ್ತದೆ. ಅದಕ್ಕೊಂದು ವ್ಯವಸ್ಥೆಯೂ ಇರುತ್ತದೆ. ಆದರೆ ೨೫೦ ರೂ. ಪರಿಹಾರ ಕೊಡಿಸಿ ಎಂದು ಪೊಲೀಸ್ ಠಾಣೆಗೆ ದೂರು ಕೊಟ್ಟಿರುವುದು ಮಂಗಳೂರಿನ ಮಾಧ್ಯಮ ವಲಯದಲ್ಲಿ ಖಂಡಾಪಟ್ಟೆ ಸುದ್ದಿಯಾಗಿ, ಕೆಲವರು ಮುಸಿಮುಸಿ ನಗುತ್ತಿದ್ದರೆ, ಮತ್ತೆ ಕೆಲವರು ಬಿದ್ದು ಬಿದ್ದು ನಗುತ್ತಿದ್ದಾರೆ.

ಅಂದ ಹಾಗೆ ಮಹೇಶ್ಚಂದ್ರ ಈ ಹಿಂದೆ ವಿಜಯ ಕರ್ನಾಟಕದಲ್ಲಿ ನಂತರ ಕಸ್ತೂರಿಯಲ್ಲಿ ಕೆಲಸ ಮಾಡಿದ್ದರು. ಇದೀಗ ಪ್ರಜಾವಾಣಿ ಬ್ಯೂರೋ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ.

Wednesday, February 9, 2011

ವಿಜಯ ಕರ್ನಾಟಕಕ್ಕೊಬ್ಬ ದಲಿತ ಸಂಪಾದಕ?


“I think a qualified journalist with a Dalit background should be made editor of a major newspaper in Karnataka. We may get new perspectives and the issues addressed may be different too. The time is ripe.”

ಹೀಗೆ ಜನಪ್ರಿಯವಲ್ಲದ ಅಭಿಪ್ರಾಯವನ್ನು ನಿರ್ಭಿಡೆಯಿಂದ ಹೇಳಿದವರು ಉದಯ ಟಿವಿಯ ದೀಪಕ್ ತಿಮ್ಮಯ. ತಮ್ಮ ಫೇಸ್‌ಬುಕ್‌ನಲ್ಲಿ ಅವರು ಹೀಗೆ ಬರೆದಿದ್ದನ್ನು ಚುರುಮುರಿ ಪ್ರಕಟಿಸಿ, ಚರ್ಚೆಗೆ ಅವಕಾಶ ಕಲ್ಪಿಸಿತ್ತು. ಪತ್ರಿಕಾರಂಗದಲ್ಲೂ ಮೀಸಲಾತಿನಾ ಎಂದು ಹಲವರು ಬಾಯಿಬಡಿದುಕೊಂಡಿದ್ದರು. ಇನ್ನೂ ಕೆಲವರು ಜಿಗುಪ್ಸೆ ಹುಟ್ಟಿಸುವ ಶೈಲಿಯಲ್ಲಿ ತಮ್ಮ ವಿಕಾರ ಜಾತೀಯತೆಯನ್ನು ಪ್ರದರ್ಶಿಸಿದ್ದರು.

ಆ ವಿಷಯ ಹಾಗಿರಲಿ, ಕನ್ನಡ ಮಾಧ್ಯಮಗಳ ಉನ್ನತ ಹುದ್ದೆಗಳಲ್ಲಿ ಆಗುತ್ತಿರುವ ಮ್ಯೂಸಿಕಲ್ ಚೇರ್ ಸ್ಪರ್ಧೆಯನ್ನು ಗಮನಿಸಿ. ಬ್ರಾಹ್ಮಣ ಸಮುದಾಯದವರೇ ಸ್ಪರ್ಧಾಳುಗಳು, ಎದುರಾಳಿಗಳು. ಇಲ್ಲಿ ಬೇರೆ ಸಮುದಾಯದವರಿಗೆ ಜಾಗವೇ ಇಲ್ಲವೇ? ಬೇರೆ ಸಮುದಾಯಗಳ ಪತ್ರಕರ್ತರಿಗೆ ಮಾಧ್ಯಮ ಸಂಸ್ಥೆಗಳನ್ನು ಮುನ್ನಡೆಸಿಕೊಂಡು ಹೋಗುವ ಅರ್ಹತೆಯೇ ಇಲ್ಲವೇ? ಈಗ ಸಂಪಾದಕ ಸ್ಥಾನಗಳಲ್ಲಿ ಇರುವ ಬ್ರಾಹ್ಮಣ ಸಮುದಾಯದ ಪತ್ರಕರ್ತರು ಅನರ್ಹರು ಎಂದು ಯಾರೂ ತಪ್ಪಾಗಿ ಭಾವಿಸಬೇಕಿಲ್ಲ. ಆದರೆ ಉಳಿದ ಸಮುದಾಯದವರ ಪಾರ್ಟಿಸಿಪೇಷನ್ ಯಾಕೆ ಇಲ್ಲ? ಎಲ್ಲೋ ದೀಪಕ್ ತಿಮ್ಮಯ ಅಂಥವರು ಇಂಥ ಪ್ರಶ್ನೆಗಳನ್ನು ಅಪರೂಪಕ್ಕೆ ಎತ್ತಿದ್ದನ್ನು ಹೊರತುಪಡಿಸಿದರೆ ಬೇರೆ ಯಾರೂ ಈ ಕುರಿತು ಮಾತನಾಡುತ್ತಿಲ್ಲ?

ಎಲ್ಲ ಪತ್ರಿಕೆಗಳಲ್ಲೂ ಬದಲಾವಣೆಗಳು ನಡೆಯುತ್ತಿವೆ. ಸದ್ಯಕ್ಕೆ ಉಳಿದಿರುವುದು ವಿಜಯ ಕರ್ನಾಟಕ ಮಾತ್ರ. ವಿಶ್ವೇಶ್ವರ ಭಟ್ಟರ ನಿರ್ಗಮನದ ನಂತರ ವಿಜಯ ನೆಕ್ಸ್ಟ್‌ನ ಸಂಪಾದಕರಾಗಿರುವ ಇ.ರಾಘವನ್ ಅವರಿಗೆ ವಿಜಯ ಕರ್ನಾಟಕದ ಹೆಚ್ಚುವರಿ ಹೊಣೆಯನ್ನು ಕನ್ಸಲ್ಟಿಂಗ್ ಎಡಿಟರ್ ಆಗಿ ನೀಡಲಾಗಿತ್ತು. ಈ ತಾತ್ಕಾಲಿಕ ವ್ಯವಸ್ಥೆ ಹೆಚ್ಚು ದಿನಗಳ ಕಾಲ ನಡೆಯುವ ಸಾಧ್ಯತೆ ಕಡಿಮೆ. ಹೀಗಾಗಿ ವಿಜಯ ಕರ್ನಾಟಕದ ಪೂರ್ಣಾವಧಿಯ ಸಂಪಾದಕ ಯಾರಾಗುತ್ತಾರೆ ಎಂಬ ಪ್ರಶ್ನೆ ಇನ್ನೂ ಜೀವಂತವಾಗಿಯೇ ಇದೆ.

ಈಗ ದೀಪಕ್ ತಿಮ್ಮಯ ಕೇಳಿದ್ದನ್ನೇ ನಾವೂ ಮತ್ತೆ ಕೇಳುತ್ತಿದ್ದೇವೆ. ಯಾಕೆ ದಲಿತ ಸಮುದಾಯದ ಸಮರ್ಥ ಪತ್ರಕರ್ತರೋರ್ವರನ್ನು ಈ ಸ್ಥಾನಕ್ಕೆ ತರಬಾರದು? ವಿಜಯ ಕರ್ನಾಟಕ ಈ ಕಾರ್ಯಕ್ಕೆ ತಯಾರಾಗಿದೆಯೇ?
ನೀವು ಕೇಳಬಹುದು: ಸದ್ಯಕ್ಕೆ ಆ ಸ್ಥಾನಕ್ಕೆ ಅರ್ಹರಾಗಿರುವ ದಲಿತ ಸಮುದಾಯದ ಹಿನ್ನೆಲೆಯ ಪತ್ರಕರ್ತರು ಇದ್ದಾರೆಯೇ? ನಮ್ಮ ಉತ್ತರ: ಹೌದು, ಇದ್ದಾರೆ. ಅರ್ಹತೆ, ಬದ್ಧತೆ, ಪ್ರಾಮಾಣಿಕತೆ, ಹಿರಿತನ, ತಂಡವನ್ನು ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯವಿರುವ ದಲಿತ ಸಮುದಾಯಕ್ಕೆ ಸೇರಿದ ಪತ್ರಕರ್ತರು ಇದ್ದಾರೆ. ಗುರುತಿಸುವ ಕೆಲಸ ಆಗಿಲ್ಲ ಅಷ್ಟೆ.

ದಲಿತರೊಬ್ಬರು ಸಂಪಾದಕರಾದರೆ ಮಹಾ, ಏನಾಗಿಬಿಡುತ್ತೆ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳಬಹುದು. ನಿಜ, ಸಮುದಾಯ ಯಾವುದೇ ಇರಲಿ, ಸಂಪಾದಕನಿಗೆ ನಿಜವಾದ ಸಾಮಾಜಿಕ ಬದ್ಧತೆ, ಕಾಳಜಿಗಳಿದ್ದರೆ ಆತ ಪತ್ರಿಕೆಯನ್ನು ಜನಪರವಾಗಿ, ಮಾನವೀಯವಾಗಿ ರೂಪಿಸಬಲ್ಲ. ಅದನ್ನು ಬಹಳಷ್ಟು ಮಂದಿ ಈ ಹಿಂದೆಯೇ ನಿರೂಪಿಸಿದ್ದಾರೆ.

ಆದರೆ, ದಲಿತ ಸಮುದಾಯದ ಹಿನ್ನೆಲೆಯಿಂದ ಬಂದವರು ತಮ್ಮ ಜೀವನದೃಷ್ಟಿಯೊಂದಿಗೆ ಹೊಸತನವನ್ನು ಕೊಡಬಲ್ಲರು. ಸಮಕಾಲೀನ ಜಗತ್ತಿಗೆ ಬೇರೆಯದೇ ಆದ ರೀತಿಯಲ್ಲಿ ಸ್ಪಂದಿಸಬಲ್ಲರು. ಹೊಸ ಸಂವೇದನೆಗಳು, ಹೊಸ ಕಾಣ್ಕೆಗಳು, ಹೊಸ ನಿಲುವುಗಳು ಹುಟ್ಟಿಕೊಳ್ಳಬಹುದು. ಹಿಂದುಳಿದ ಸಮುದಾಯಗಳ ಇನ್ನಷ್ಟು ಮಂದಿ ಪ್ರತಿಭಾವಂತರು ಇದೇ ಸ್ಫೂರ್ತಿಯಲ್ಲಿ ಮಾಧ್ಯಮರಂಗ ಪ್ರವೇಶಿಸಬಹುದು. ಬೇರೆ ಬೇರೆ ಹಿನ್ನೆಲೆಯ ಈ ಸಮೂಹ ತಮ್ಮದೇ ಆದ ವಿಶೇಷ ಜ್ಞಾನ, ಪರಿಣತಿಯನ್ನು ಇಲ್ಲಿ ತೋರಬಹುದು. (ಅಸಲಿಗೆ ಜ್ಞಾನದ ವ್ಯಾಖ್ಯೆಯೇ ಬದಲಾಗಬೇಕಾದ ಸಂದರ್ಭ ಇದು.) ದೇವನೂರು, ಸಿದ್ಧಲಿಂಗಯ್ಯ ಅವರುಗಳು ಬರೆದ ಸಾಹಿತ್ಯವನ್ನು, ಕಟ್ಟಿಕೊಟ್ಟ ಸಂವೇದನೆಗಳನ್ನು ಬೇರೆ ಸಮುದಾಯದವರು ಕೊಡಲು ಸಾಧ್ಯವಿತ್ತೆ?

ಬೇರೆ ಸಮುದಾಯದವರು ಸಂಪಾದಕ ಸ್ಥಾನಕ್ಕೆ ಹೋಗಬಾರದು ಎಂದು ಯಾರಾದರೂ ಕಟ್ಟಿಹಾಕಿಕೊಂಡಿದ್ದಾರಾ? ಅರ್ಹತೆ ಇದ್ದರೆ ದಕ್ಕಿಸಿಕೊಳ್ಳುತ್ತಾರೆ ಬಿಡಿ ಎಂದು ಕೆಲವರು ಗೊಣಗಬಹುದು. ಆದರೆ ಇದು ಅಷ್ಟು ಸರಳವಾದ ವಿಷಯವಲ್ಲ. ಮ್ಯಾನೇಜ್‌ಮೆಂಟುಗಳು ತಮ್ಮ ಭ್ರಮೆಗಳಿಂದ ಕಳಚಿಕೊಳ್ಳದ ಹೊರತು ಈ ಪ್ರಶ್ನೆಗೆ ಉತ್ತರ ಸಿಗದು. ಇವತ್ತಿಗೂ ಪ್ರತಿಷ್ಠಿತ ಪತ್ರಿಕೆಯೊಂದರಲ್ಲಿ ಜಾತಕವನ್ನು ನೋಡಿಯೇ ಪತ್ರಕರ್ತರಿಗೆ ಕೆಲಸ ಕೊಡಲಾಗುವುದು ಎಂದರೆ ನೀವು ನಂಬಲೇಬೇಕು. ದಲಿತರೆಂಬ ಕಾರಣಕ್ಕೆ ಮಾಧ್ಯಮಸಂಸ್ಥೆಗಳಲ್ಲಿ ಕೆಲಸ ಸಿಕ್ಕದೆ ಒದ್ದಾಡಿದವರೂ ಇಲ್ಲಿದ್ದಾರೆ. ಅಲ್ಲೊಬ್ಬ ಇಲ್ಲೊಬ್ಬರು ಹಿಂದುಳಿದ ಸಮುದಾಯದ ಪತ್ರಕರ್ತರು ಕಾಣಿಸಿಕೊಂಡರೂ ಅವರು ತಮ್ಮ ಪರವಾಗಿ ಲಾಬಿ ನಡೆಸಲಾರರು, ಗುಂಪು ಕಟ್ಟಿಕೊಳ್ಳಲಾರರು, ಒಟ್ಟಾರೆಯಾಗಿ ತಾನು ಸಮರ್ಥ ಆಯ್ಕೆ ಎಂದು ಮ್ಯಾನೇಜ್‌ಮೆಂಟ್‌ಗಳನ್ನು ಒಪ್ಪಿಸಲಾರರು.

ಹಿಂದೆ ದಿನಪತ್ರಿಕೆಯೊಂದನ್ನು ಬ್ರಾಹ್ಮಣೇತರರ ಸಂಪಾದಕತ್ವದಲ್ಲಿ ಮಾಡಿದ್ದ ಉದ್ಯಮಿಯೊಬ್ಬರು ಅದೇ, ಕಣ್ರೀ ನಾನು ಮಾಡಿದ ತಪ್ಪು ಎಂದು ತಮ್ಮ ವೈಫಲ್ಯವನ್ನು ಸಮರ್ಥಿಸಿಕೊಂಡಿದ್ದರು. ಇಂಥ ಭ್ರಮೆ, ಮೌಢ್ಯವನ್ನು ಇಟ್ಟುಕೊಂಡಿರುವ ಮಾಧ್ಯಮ ಸಂಸ್ಥೆಗಳ ಒಡೆಯರಿಂದ ಏನನ್ನು ನಿರೀಕ್ಚಿಸುತ್ತೀರಿ? ಇಂಥ ಮಿಥ್‌ಗಳನ್ನು ಒಡೆದು, ಈ ಮಹತ್ವದ ಪ್ರಶ್ನೆಗಳಿಗೆ ಐತಿಹಾಸಿಕ ಉತ್ತರ ಕಂಡುಕೊಳ್ಳಬಹುದಾಗಿದ್ದ ಜನರು ಮಡೆಸ್ನಾನ ಮಾಡಿಕೊಂಡು, ಕಾಲ-ದೇಶದ ಭ್ರಮೆಯಲ್ಲಿ ಸಿಲುಕಿ ನರಳುತ್ತಿದ್ದಾರೆ.

ಕಾಲ ಬದಲಾಗಿದೆ. ಈಗಲಾದರೂ ನಮ್ಮ ಮಾಧ್ಯಮ ಕ್ಷೇತ್ರ ಇಂಥ ಭ್ರಮೆಗಳಿಂದ ಹೊರಗೆ ಬರುವುದೇ? ಕನ್ನಡದ ನಂ.೧ ಪತ್ರಿಕೆ ವಿಜಯ ಕರ್ನಾಟಕಕ್ಕೆ ಒಬ್ಬ ದಲಿತ ಸಮುದಾಯದ ಸಂಪಾದಕರು ನೇಮಕವಾಗಬಹುದೇ?

ಅಷ್ಟಕ್ಕೂ ನಾವು ಈ ವಿಷಯವನ್ನು ಯಾಕೆ ಚರ್ಚಿಸುತ್ತಿದ್ದೇವೆಂದರೆ ನಮ್ಮ ಆರನೇ ಇಂದ್ರಿಯ ಏನನ್ನೋ ಹೇಳುತ್ತಿದೆ. ಅದು ನಿಜಕ್ಕೂ ನಿಜವಾಗುತ್ತಾ? ಕನ್ನಡ ಮಾಧ್ಯಮ ರಂಗದಲ್ಲೊಂದು ಪವಾಡ ನಡೆದು ಹೋಗುತ್ತಾ? ಕಾದು ನೋಡೋಣ,

***

ಸಂಪಾದಕೀಯಕ್ಕೆ ಬಂದ ಒಂದು ಕಮೆಂಟು ಹೀಗಿತ್ತು: Imagine, 18 years old boy started reading Vijaya Karnataka 12 years back. Now he is totally communal. More over his views on literature, movie, books, everything moulded according to Vijaya Karnataka.

ನಿಜ ಅನ್ನಿಸಲ್ವಾ ನಿಮಗೆ? ವಿಜಯ ಕರ್ನಾಟಕ ನಂ.೧ ಪತ್ರಿಕೆಯಾಗಿ ಮೆರೆದಿದ್ದು ಎಷ್ಟು ನಿಜವೋ, ಆ ಪತ್ರಿಕೆ ಕನ್ನಡದ ಯುವಮನಸ್ಸುಗಳನ್ನು ಮತಾಂಧಗೊಳಿಸಿದ್ದೂ ಅಷ್ಟೇ ನಿಜ.

ಟೈಮ್ಸ್ ಒಡೆಯರಿಗೆ ಪ್ರಾಯಶ್ವಿತ್ತ ಮಾಡಿಕೊಳ್ಳಲು ಇದು ಸಕಾಲವಲ್ಲವೇ?