Friday, March 30, 2012

ಕಟ್ಟೆಚ್ಚರ: ನ್ಯೂಸ್ ಚಾನಲ್‌ಗಳಲ್ಲಿ ಈಗ ಸೆಕ್ಸ್ ವಿಡಿಯೋಗಳು ಪ್ರಸಾರವಾಗುತ್ತವೆ...


ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರಿಗೊಂದು ಬಹಿರಂಗ ಪತ್ರ

ನಮಸ್ಕಾರ,

ಮೊದಲಿಗೆ ಒಂದು ಪತ್ರಿಕೆ ಹಾಗೂ ಟಿವಿವಾಹಿನಿಯೊಂದರ ಸಂಪಾದಕ ಎರಡೂ ಆಗಿರುವ ವಿಶ್ವೇಶ್ವರ ಭಟ್ಟರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು. ಇಷ್ಟು ದಿವಸ ಅಶ್ಲೀಲ ಚಿತ್ರಗಳೆಂದರೆ ನಗರಪ್ರದೇಶಗಳ ಹೊರವಲಯದ ಮತ್ತು ಸಣ್ಣಪುಟ್ಟ ಊರುಗಳ ಟೆಂಟುಗಳಲ್ಲಿ ಬೆಳಗಿನ ಪ್ರದರ್ಶನ ಕಾಣುತ್ತಿದ್ದ ಹಸಿಬಿಸಿ ಮಲಯಾಳಂ ಚಿತ್ರಗಳೆಂದೇ ಪ್ರಚಲಿತದಲ್ಲಿತ್ತು. ಆದರೀಗ ಅಶ್ಲೀಲ ಚಿತ್ರಗಳನ್ನು ನೋಡಬೇಕೆಂದರೆ ಅಷ್ಟುದೂರ ಮುಖಮರೆಸಿಕೊಂಡು ಹೋಗುವ ಅಗತ್ಯವಿಲ್ಲ ಸುವರ್ಣನ್ಯೂಸ್ ಚಾನೆಲ್ ನೋಡಿದರೆ ಸಾಕು ಎಂಬ ಧೈರ್ಯವನ್ನು ರಾಜ್ಯದ ಜನರಿಗೆ ರವಾನಿಸಿದ್ದಕ್ಕಾಗಿ ನಿಮ್ಮನ್ನು ನಿಜಕ್ಕೂ ಅಭಿನಂದಿಸಬೇಕು.

ಎರಡನೆಯದಾಗಿ ಮಾಧ್ಯಮರಂಗದ ಆಳ ಅಗಲಗಳು ಮತ್ತು ಮಾಧ್ಯಮಲೋಕದಲ್ಲಿ ಯಾವುದು ಸರಿ ಯಾವುದು ಸರಿಯಲ್ಲ, ನೈತಿಕತೆ ಮತ್ತು ಅನೈತಿಕತೆಯ ನಡುವಿನ ತೆಳುಗೆರೆಗಳನ್ನು ಪುಂಖಾನುಪುಂಖವಾಗಿ ಬರೆದಿದ್ದೀರಿ, ಬರೆಯುತ್ತಲೂ ಇದ್ದೀರಿ. ಅವುಗಳೆಲ್ಲವನ್ನೂ ನಾವುಗಳೂ ಓದಿದ್ದೇವೆ. ಈಗ ಒಂದು ಪ್ರಶ್ನೆಯೆದ್ದಿದ್ದೆ. ಇಷ್ಟೆಲ್ಲವನ್ನೂ ಬರೆಯುವ ತಾವು, ಇಷ್ಟೆಲ್ಲ ಜಗತ್ತಿನ ವಿವಿಧ ಪತ್ರಿಕೋದ್ಯಮಿಗಳು ಮತ್ತು ಸಾಹಸಿಗ ಪತ್ರಕರ್ತರ ಬಗ್ಗೆ ದಿವೀನಾಗಿ ಬರೆದುಕೊಳ್ಳುವ ನೈತಿಕತೆ ಇವತ್ತು ಸಂತೆಯಲ್ಲಿ ಅರೆಬೆತ್ತಲಾಗಿ ನಿಂತುಕೊಂಡಿದೆ. ಇದೇ ಮಾರ್ಚ್ ೨೯ರ ರಾತ್ರಿ ೧೦ ಗಂಟೆಗೆ ಪ್ರಸಾರವಾದ ಕಟ್ಟೆಚ್ಚರ ಕಾರ್ಯಕ್ರಮದಲ್ಲಿ ತಾವು ಇಲ್ಲಿಯವರೆಗೂ ಹೇಳಿಕೊಂಡು ಬಂದ ಮಾಧ್ಯಮ ನೈತಿಕತೆ ಮತ್ತು ಸಂಹಿತೆಗಳೆರಡರ ಮುಖಕ್ಕೂ ಡಾಂಬರು ಬಳಿಯುವಂತಹ ಒಂದು ಕಂತು ಪ್ರಸಾರವಾಯಿತು.

ಶಿವಮೊಗ್ಗದ ಕಾಲೇಜು ಯುವತಿಯೊಬ್ಬಳು ತನ್ನ ಪ್ರಿಯಕರನೊಡನೆ ರತಿಕ್ರೀಡೆಯಲ್ಲಿ ತೊಡಗಿದ್ದ ಅಸಹ್ಯ ಹುಟ್ಟಿಸುವ ವಿಡಿಯೋದೃಶ್ಯಗಳು ಯಾವ ಎಡಿಟಿಂಗೂ ಇಲ್ಲದಂತೆ ಹಸಿಹಸಿಯಾಗಿಯೇ ಪ್ರಸಾರವಾಯಿತು. (ವಿಡಿಯೋ ಮಬ್ಬಾಗಿದ್ದರೂ ಆ ಕ್ರಿಯೆಯ ಎಲ್ಲ ಹಂತಗಳೂ ಸುಸ್ಪಷ್ಟವಾಗಿ ಕಾಣಿಸುತ್ತಿದ್ದುದು ನೋಡಿದ ಜನರಿಗೆ ಗೊತ್ತು) ಈ ವಿಡಿಯೋ ತುಣುಕುಗಳು ಶಿವಮೊಗ್ಗೆಯ ಪಡ್ಡೆಹುಡುಗರ ಮೊಬೈಲುಗಳಲ್ಲಿ ಹರಿದಾಡುವುದನ್ನು ನೋಡಿದ ನಿಮ್ಮ ಶಿವಮೊಗ್ಗ ಜಿಲ್ಲಾ ವರದಿಗಾರ ಆ ವಿಡಿಯೋ ಸಂಪಾದಿಸಿ ಅದನ್ನು ಇರುವ ಹಾಗೆಯೇ ಸುವರ್ಣನ್ಯೂಸ್ ಕಚೇರಿಗೆ ತಲುಪಿಸಿದ್ದಾರೆ. ಪ್ರೇಮಸಲ್ಲಾಪದ ವಿಡಿಯೋ ಸೋರಿಕೆಯಾಗಿ ಊರಿನವರ ಮೊಬೈಲಿನಲ್ಲಿ ಹರಿದಾಡುತ್ತಿರುವುದು ಯುವತಿಯ ಗಮನಕ್ಕೂ ಬಂದು ಮಾನಕ್ಕೆ ಅಂಜಿದ ಆಕೆ ಆತ್ಮಹತ್ಯೆಗೆ ಯತ್ನಿಸಿ ಪರವೂರಿನ ಆಸ್ಪತ್ರೆಯೊಂದರಲ್ಲಿ ಸಾವುಬದುಕಿನ ನಡುವೆ ಹೋರಾಡಿ ಜೀವವುಳಿಸಿಕೊಂಡಿದ್ದಾಳೆ. ಪ್ರಸ್ತುತ ಬೆಂಗಳೂರಿನ ಆಕೆಯ ಸಂಬಂಧಿಯೊಬ್ಬರ ಮನೆಯಲ್ಲಿದ್ದಾಳೆ. ಇದು ಪ್ರಸಾರವಾದ ಕಟ್ಟೆಚ್ಚರ ಕಾರ್ಯಕ್ರಮದ ಹೂರಣ.

ಇಂತಹದ್ದೊಂದು ಸೂಕ್ಷ್ಮ ವಿಷಯವನ್ನು ಕಾರ್ಯಕ್ರಮವಾಗಿ ಬದಲಾಯಿಸುವಾಗ ಕಟ್ಟೆಚ್ಚರ ಕಾರ್ಯಕ್ರಮ ತಂಡ ಬಹಳಷ್ಟು ಎಡವಟ್ಟುಗಳನ್ನು ಮಾಡಿಕೊಂಡಿದೆ. ಅವಾಂತರಕ್ಕೆ ಮಾಡಿಕೊಂಡ ಯುವತಿಯ ಫೋಟೋವನ್ನು ಕಣ್ಣು ಮಾತ್ರ ಮರೆಮಾಡಿ ಪ್ರಸಾರವಾಯಿತು, ಆಕೆ ತನ್ನ ಪ್ರಿಯಕರನೊಡನೆ ನಡೆಸಿದ ಸಲ್ಲಾಪದ ಉದ್ರೇಕಕಾರಿ ತುಣುಕುಗಳು ಹೇಗಿವೆಯೋ ಹಾಗೆಯೇ ಪ್ರಸಾರವಾಯಿತು, ಜೊತೆಗೆ ಆಕೆ ಈಗ ಉಳಿದುಕೊಂಡಿರುವ ಬೆಂಗಳೂರಿನ ಸಂಬಂಧಿಗಳ ಮನೆಯ ವಿಳಾಸವನ್ನೂ ಪ್ರಸಾರ ಮಾಡಲಾಯಿತು. ಆಕೆಯ ಸಹಪಾಠಿಗಳನ್ನು ಸಂದರ್ಶನದ ಹೆಸರಿನಲ್ಲಿ ಮಾತನಾಡಿಸಲಾಯಿತು. (ಇವರ ಮುಖವೂ ಸಹ ಮಬ್ಬು ಮಾಡಲಾಗಿಲ್ಲ) ಇಷ್ಟೆಲ್ಲ ವಿವರಗಳನ್ನು ಸೂಕ್ಷ್ಮ ವಿಷಯವೊಂದರ ಮೇಲಿನ ಕಾರ್ಯಕ್ರಮದಲ್ಲಿ ಆಕೆಯ ವಿಳಾಸದ ಸಮೇತ ಹರಿದು ಹಂಚಲಾಯಿತು. ಒಟ್ಟು ಕಾರ್ಯಕ್ರಮವೇ ಆಕೆ ಮಾಡಿದ ಎಡವಟ್ಟಿಗೆ ಆಕೆಯ ಪೋಷಕರನ್ನು ನಡುರಸ್ತೆಯಲ್ಲಿ ಮಾನಕಳೆಯುವುದಕ್ಕಾಗಿಯೇ ರೂಪಿಸಿದಂತಿತ್ತು.

ಸರಿ ಆಕೆ ಮಾಡಿದ್ದು ಕ್ಷಮೆಗೆ ಅರ್ಹವಲ್ಲದ್ದೇ ಇರಬಹುದು, ಆದರೆ ಆಕೆಯ ಹೆತ್ತವರು, ಅಣ್ಣತಮ್ಮಂದಿರು, ಅಕ್ಕತಂಗಿಯರು, ನೆರೆಹೊರೆಯವರು, ಸಂಬಂಧಿಗಳು, ಸಹಪಾಠಿಗಳು ಇವರೆಲ್ಲರೂ ಕಟ್ಟೆಚ್ಚರ ಕಾರ್ಯಕ್ರಮದ ಕಾರಣಕ್ಕೆ, ಇಂಥಹ ಹುಡುಗಿಗೆ ಸಂಬಂಧಿಸಿದವರು ಎಂದು ಸಮಾಜ ಕೆಟ್ಟದಾಗಿ ಮಾತಾಡುವುದನ್ನು ಅದು ಹೇಗೆ ಇವರೆಲ್ಲ ಸಹಿಸಬೇಕು? ಪರೀಕ್ಷೆಯಲ್ಲಿ ಅಂಕ ಕಡಿಮೆ ಎಂದೋ, ರಂಗೋಲಿ ತುಳಿದದ್ದಕ್ಕೆ ಬೈದರೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಇಂದಿನ ದಿನಗಳಲ್ಲಿ, ಇವರೆಲ್ಲರನ್ನು ಅಪರಾಧಿಗಳಂತೆ ಕಟಕಟೆಯೊಳಗೆ ತಂದು ನಿಲ್ಲಿಸಿರುವ ಸುವರ್ಣನ್ಯೂಸ್ ಇವರಿಗೆ ಮುಂದಿನ ದಿನಗಳಲ್ಲಿ ಸಮಾಜದಿಂದ ಎದುರಿಸಬೇಕಾದ ಪ್ರಶ್ನೆಗಳು ಮತ್ತು ಮೂದಲಿಕೆಗಳನ್ನು ತಡೆಯಲು ಸಾಧ್ಯವಿದೆಯೇ? ಆ ಸಂಸಾರ ಅವಮಾನವಾಯಿತೆಂದು, ತಲೆ ಎತ್ತಿ ಓಡಾಡಲು ಸಾಧ್ಯವಿಲ್ಲವೆಂದು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಹೊಣೆ ಯಾರು?

ಅದನ್ನು ಪಕ್ಕಕ್ಕಿಡೋಣ, ಉಳಿದೆಲ್ಲದಕಿಂತ ಮೊದಲು ಇದು ಮಾಧ್ಯಮದ ನೈತಿಕತೆಯ ಪ್ರಶ್ನೆ. ಅಶ್ಲೀಲ ಎಮ್ಮೆಮ್ಮೆಸ್‌ಗಳನ್ನು ಪ್ರಸಾರ ಮಾಡದೆ ಒಂದು ಟಿವಿ ಚಾನೆಲ್ ಬದುಕಲು ಸಾಧ್ಯವೇ ಇಲ್ಲವೇ, ಈ ಹಿಂದೆ ಸದನದೊಳಗೆ ನೀಲಿಚಿತ್ರ ವೀಕ್ಷಿಸಿದ ಶಾಸಕರ ದೃಶ್ಯಗಳನ್ನು ಪ್ರಸಾರ ಮಾಡಿದ್ದರ ಬಗ್ಗೆ ವಿರೋಧ ವ್ಯಕ್ತವಾದಾಗಲೂ ತಾವು ತೋರಿಸೋದು ತಪ್ಪಾ ಅಂತ ತಮ್ಮ ಅಶ್ಲೀಲ ದೃಶ್ಯ ಪ್ರಸಾರದ ಸಮರ್ಥನೆಗೆ ಅಂಟಿಕೊಂಡಿರಿ. ಬಸ್ ಸ್ಟಾಂಡುಗಳಲ್ಲಿ, ಬುಕ್‌ಸ್ಟೋರ್‌ಗಳಲ್ಲಿ ನೇತಾಡುವ ೧೦ ರೂಪಾಯಿಗೆ ಸಿಗುವ ಅಶ್ಲೀಲಚಿತ್ರಗಳ ಕಥೆಗಳ ಅಗ್ಗದ ಪುಸ್ತಕಗಳಿಗೂ ತಾವು ಪದೇಪದೇ ಪ್ರಸಾರಿಸುತ್ತಿರುವ ಅಶ್ಲೀಲ ಎಮ್ಮೆಮ್ಮೆಸ್ ಕಾರ್ಯಕ್ರಮಗಳಿಗೂ ಕಿಂಚಿತ್ತಾದರೂ ವ್ಯತ್ಯಾಸವಿದೆಯೇ? ಹಿಂದೊಮ್ಮೆ ಅಶ್ಲೀಲ ವಿಡಿಯೋಗಳನ್ನು ಅಂತರ್ಜಾಲದಿಂದ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ವೆಬ್‌ಸೈಟ್ ಅಡ್ರೆಸ್‌ಗಳ ಮೂಲಕವೇ ಪ್ರಸಾರ ಮಾಡಿದವರು ನೀವು. ಡಿವಿಡಿ ಅಂಗಡಿಗಳಲ್ಲಿಯೂ ಅಶ್ಲೀಲ ಡಿವಿಡಿಗಳನ್ನು ಮುಜುಗರದಿಂದಲೋ, ಭಯದಿಂದಲೋ ಕದ್ದುಮುಚ್ಚಿ ವಿತರಿಸುವ ಪರಿಪಾಠವಿದೆ. ಅವರಿಗಿರುವ ಕನಿಷ್ಠಮಟ್ಟದ ಭಯವೂ ಸುವರ್ಣನ್ಯೂಸ್ ಸಂಪಾದಕರಾದ ತಮಗಿಲ್ಲ, ರಾಜಾರೋಷವಾಗಿ ಎಗ್ಗುಸಿಗ್ಗಿಲ್ಲದೆ ಬ್ಲೂಫಿಲ್ಮ್‌ಗಳನ್ನೇ ಪ್ರಸಾರ ಮಾಡಿಬಿಡುತ್ತೀರಿ, ತುಂಬು ಕುಟುಂಬವೊಂದರಲ್ಲಿ ಅಣ್ಣತಂಗಿ, ಅಪ್ಪಮಗಳು ಏನನ್ನೋ ನೋಡಲು ಹೋಗಿ ತಾವು ಪ್ರಸಾರಿಸುತ್ತಿರುವ ಸುಸಂಸ್ಕೃತ ಬ್ಲೂಫಿಲ್ಮ್‌ಗಳನ್ನೋ, ಅಶ್ಲೀಲ ಎಮ್ಮೆಮ್ಮೆಸ್ ತುಣುಗಳನ್ನೋ ಅಕಸ್ಮಾತ್ ನೋಡಿದರೂ ಆಗುವ ಮುಜುಗರ ಕಸಿವಿಸಿಯಿದೆಯಲ್ಲ.. ಬಹುಶಃ ಅದರ ಅನುಭವ ತಮಗೆ ಆದಂತಿಲ್ಲ. ಮಾನ ಮರ್ಯಾದೆಯಿರುವ ಜನಕ್ಕೆ ಮುಖಮುಚ್ಚಿಕೊಂಡು ಎದ್ದು ಹೋಗಬೇಕೆನಿಸುತ್ತದೆ.

ತಾವು ಕನ್ನಡಪ್ರಭ ಪತ್ರಿಕೆಗೂ ಸಂಪಾದಕರು. ಅದರಲ್ಲಿ ಬರೆಯುವ ಅಂಕಣಕಾರರೂ ಸೇರಿದಂತೆ ಹಲವಾರು ಬರಹಗಾರರಿಂದ ಭಾರತೀಯ ಸಂಸ್ಕೃತಿ ಪರಂಪರೆ ನೈತಿಕತೆಯ ಬಗ್ಗೆ ಬರೆಸುತ್ತೀರಿ. ಇನ್ನೊಂದು ಕಡೆಯಲ್ಲಿ ಈ ವಿಷಯಗಳಿಗೆ ತದ್ವಿರುದ್ಧವಾಗಿರುವ ಕಾಮಕೇಳಿಗಳನ್ನು ಯಾವ ಅಂಜಿಕೆಯೂ ಇಲ್ಲದೆ ಪ್ರಸಾರ ಮಾಡುತ್ತೀರಿ, ಜನ ನೋಡುತ್ತಾರೆ ಟಿಆರ್‌ಪಿ ಬರುತ್ತದೆ ಎಂದು ಕಂಡಕಂಡದ್ದನ್ನೆಲ್ಲ ಪ್ರಸಾರ ಮಾಡುವುದಾದರೆ ನೇರವಾಗಿ ಒಂದು ಅಶ್ಲೀಲ ಟಿವಿವಾಹಿನಿಯನ್ನೇ ತಾವು ಧೈರ್ಯವಾಗಿ ಪ್ರಾರಂಭಿಸುವುದು ಒಳ್ಳೆಯದು. ಅಂತರ್ಜಾಲದಲ್ಲಿ ಅಶ್ಲೀಲ ಎಮ್ಮೆಮ್ಮೆಸ್ಸುಗಳಿಗೇನೂ ಕೊರತೆಯಿಲ್ಲ, ತಮ್ಮ ಚಾನೆಲ್‌ನ ಟಿಆರ್‌ಪಿಗೂ ಜಾಹಿರಾತಿಗೂ ಈ ಎಮ್ಮೆಮ್ಮೆಸ್ಸುಗಳಿಂದ ಇನ್ನಷ್ಟು ಒಳ್ಳೆಯದಾಗುತ್ತದೆ. ಸುವರ್ಣನ್ಯೂಸ್ ಚಾನೆಲ್ ಸದ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ರೀತಿ ಮತ್ತು ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳ ಮೇಲೆ ತಮಗೆ ಹಿಡಿತವೇ ಇದ್ದಂತಿಲ್ಲ, ಅಥವಾ, ಆ ಅಧಿಕಾರವನ್ನು ಚಾನೆಲ್ ಮಾಲೀಕರು ತಮಗೆ ಕೊಟ್ಟೇ ಇಲ್ಲ, ಬದಲಾಗಿ ಡಮ್ಮಿ ಸಂಪಾದಕರಂತೆ ತಾವು ಕುರ್ಚಿಯಲ್ಲಿ ಕುಳಿತಿರಬಹುದೇ? ಎಂಬ ಅನುಮಾನಗಳು ಬರುತ್ತಿವೆ. ಏಕೆಂದರೆ ತಾವು ಕನ್ನಡಪ್ರಭದಲ್ಲಿ ಸುಸಂಸ್ಕೃತರಂತೆ ಆಡುವುದು ಒಂದು, ಸುವರ್ಣನ್ಯೂಸ್‌ನಲ್ಲಿ ಅಪಾಪೋಲಿಗಳಂತೆ ಮಾಡುತ್ತಿರುವುದು ಇನ್ನೊಂದು.

ಪ್ರಸ್ತುತ ವಿಷಯಕ್ಕೆ ಮರುಳುವುದಾದರೆ ಆ ಯುವತಿಯ ಪೋಷಕರನ್ನು ನಡುಬೀದಿಯಲ್ಲಿ ನೀವು ಇವತ್ತು ತಂದು ನಿಲ್ಲಿಸಿರುವಂತೆಯೇ ತಾವೂ ಹಿಂದೊಮ್ಮೆ ಇದ್ದ ಕೆಲಸದಿಂದ ಹೊರದಬ್ಬಿಸಿಕೊಂಡು ನಡುಬೀದಿಯಲ್ಲೇ ನಿಂತಿದ್ದೀರಿ. ಆವತ್ತು ಇದೇ ಜಗತ್ತು ತಮ್ಮತ್ತ ತೂರಿದ ಕಲ್ಲುಗಳ ಸೈಜು ಎಂಥವು ಎಂಬುದು ತಮಗೂ ಗೊತ್ತು. ಅಂತಹ ಅವಮಾನವನ್ನು ಸಹಿಸಿದವರು ತಾವು. ಆ ನೆನಪಿನ ನೈತಿಕತೆ ತಮಗೆ ಇದ್ದಿದ್ದರೆ ಇವತ್ತು ಶಿವಮೊಗ್ಗದ ಒಂದು ಕುಟುಂಬವನ್ನು ಇವತ್ತು ಮೂರಾಬಟ್ಟೆಯಾಗುವಂತೆ ಮಾನ ಕಳೆಯುತ್ತಿರಲಿಲ್ಲ. ಕೈಯಿಟ್ಟಲ್ಲೆಲ್ಲ ಸುದ್ದಿ ಸಿಗುವ, ಸರ್ಕಾರಿ ಇಲಾಖೆಗಳ ಹಗರಣಗಳು ಕಾಲುಕಾಲಿಗೇ ತೊಡರುತ್ತಿರುವ ಈ ಸಮಯದಲ್ಲಿ ತಮ್ಮ ಹಾರ್ಡ್‌ಕೋರ್ ವರದಿಗಾರರು ಆ ಎಲ್ಲವನ್ನೂ ಬಿಟ್ಟು ಸುಲಭಕ್ಕೆ ಕೈಗೆ ಸಿಗುವ ಅಶ್ಲೀಲ ಎಮ್ಮೆಮ್ಮೆಸ್ಸುಗಳ ಹಿಂದೇಕೆ ಬೀಳುವಷ್ಟು ಸೋಮಾರಿಗಳಾಗಿದ್ದಾರೆ ಎಂಬುದು ತಮ್ಮ ಅರಿವಿಗೆ ಯಾಕೋ ಬರುತ್ತಲೇ ಇಲ್ಲ. ಈ ಎಮ್ಮೆಮ್ಮೆಸ್ಸುಗಳನ್ನು ನೋಡಿ ಯಾರಿಗೇನು ಆಗಬೇಕಿದೆ, ಇವನ್ನು ತೋರಿಸಿ ಯಾರಿಗೆ ಎಂಥಹ ಸಂದೇಶ ಕೊಡುವ ಘನಕಾರ್ಯ ಮಾಡುತ್ತಿದ್ದಿರೋ ನಮಗೆ ಗೊತ್ತಿಲ್ಲ. ಹೀಗೆಲ್ಲ ದುಡ್ಡು ದುಡಿಯಬೇಕೇ ವಿಶ್ವೇಶ್ವರ ಭಟ್ಟರೆ?

ಕಟ್ಟೆಚ್ಚರ ಕಾರ್ಯಕ್ರಮದ ಅಧ್ವಾನಗಳಾದರೂ ಎಂಥವು, ಬೆಳಗ್ಗೆಹೊತ್ತು ಬ್ರೇಕ್‌ಫಾಸ್ಟ್ ನ್ಯೂಸ್‌ನಲ್ಲಿ ಕೈ ಮುಗಿಯಬೇಕೆನ್ನಿಸುವಷ್ಟು ಸಂಭಾವಿತರಾಗಿ ಕಾಣಿಸಿಕೊಳ್ಳುವ ಜಯಪ್ರಕಾಶಶೆಟ್ಟರು ರಾತ್ರಿಯಾದರೆ ಸಾಕು ಕಟ್ಟೆಚ್ಚರದೊಳಗೆ ಜಾತ್ರೆಯಲ್ಲಿ ಟೋಪಿ ಮಾರುವವರಂತೆ ಹಾಸ್ಯಾಸ್ಪದ ಪೋಷಾಕಿನಲ್ಲಿ ಕರೆಂಟು ಹೊಡೆಸಿಕೊಂಡವರಂತೆ ಮೈಕೈ ಬಳುಕಿಸುತ್ತ ಆಗಾಗ ಕೂಗಾಡುತ್ತ ಆಂಕರಿಂಗ್ ಮಾಡುತ್ತಿರುತ್ತಾರೆ. ಅವರ ಮಾತಿನ ಶೈಲಿ ಮತ್ತು ಐಟಂಸಾಂಗ್ ಶೈಲಿಯ ಅವರ ಆಂಕರಿಂಗ್ ನಗೆಪಾಟಲಲ್ಲದೆ ಇನ್ನೇನೂ ಅಲ್ಲ, ಶಿವಮೊಗ್ಗದ ಯುವತಿಯ ಎಪಿಸೋಡಿನ ಸ್ಕ್ರಿಪ್ಟನ್ನು ಸಹನಾಭಟ್ ಎಂಬ ಸ್ತ್ರೀ ಬರೆಯುತ್ತಾರೆ ಅಂದರೆ ವಾಕರಿಕೆ ಹುಟ್ಟುತ್ತದೆ. ಕೆಲಸಮರೆತ ಜಿಲ್ಲಾ ವರದಿಗಾರನೊಬ್ಬ ಎಂಥದೋ ಎಬಡೇಶಿ ಎಮ್ಮೆಮ್ಮೆಸ್ ಕಳಿಸಿದೆಂದ ಮಾತ್ರಕ್ಕೆ ಅದನ್ನು ಪ್ರಸಾರಿಸಬೇಕೇ ಬೇಡವೇ, ನೈತಿಕತೆಯೇ ಅನೈತಿಕತೆಯೇ ಎಂಬ ವಿವೇಚನೆಯೂ ಇಲ್ಲದಷ್ಟು ಒಬ್ಬ ಟಿವಿ ಚಾನೆಲ್ಲಿನ ಸಂಪಾದಕ ಎಮ್ಮೆಚರ್ಮದವರಾಗಿ ಹೋದರೆ ಏನೇನೆಲ್ಲ ಅನಾಹುತಗಳಾಬೇಕೋ ಅವೆಲ್ಲವೂ ಸುವರ್ಣನ್ಯೂಸಿನಲ್ಲಿ ಇವತ್ತು ಆಗುತ್ತಿವೆ. ಸುವರ್ಣನ್ಯೂಸಿನ ಬದಲು ಎಫ್ ಚಾನೆಲ್ ನೋಡುವುದು ಒಳಿತು ಎಂಬ ಮಟ್ಟಿಗೆ ಜೋಕುಗಳು ಹುಟ್ಟಿಕೊಂಡಿವೆ. ತಮಗೆ ತಮ್ಮ ಜನಪರ ನ್ಯೂಸುಗಳ ಪ್ರಸಾರದಿಂದ ಕರ್ನಾಟಕವನ್ನು ಉದ್ದಾರ ಮಾಡಿಬಿಡುವ ಸಾಹಸ ಬೇಡವಾಗಿದ್ದಾಗ ಮಾತ್ರ ಮದನಾರಿಯಂತಹ ಅಡ್ಡಕಸುಬಿ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಒಂದುಕಾಲದಲ್ಲಿ ಜನ ನೋಡುತ್ತಾರೆ ಅಂತ ಕೇರಳದ ಚಿತ್ರರಂಗದಲ್ಲಿ ತನ್ನ ಉಬ್ಬುತಗ್ಗುಗಳನ್ನು ತೋರಿಸಿಕೊಂಡು ಅಶ್ಲೀಲಚಿತ್ರಗಳಲ್ಲಿ ನಟಿಸಿದ ನಟಿಯೊಬ್ಬಳಿಗೂ... ಎಮ್ಮೆಮ್ಮೆಸ್ಸು, ಬ್ಲೂಫಿಲ್ಮ್, ಮದನಾರಿಗಳ ಹಿಂದೆ ಬಿದ್ದಿರುವ ತಮಗೂ ನಡುವೆ ಯಾವ ವ್ಯತ್ಯಾಸವೂ ಕಾಣಿಸುತ್ತಿಲ್ಲ. ಎರಡರಲ್ಲೂ ದುಡ್ಡೇ ಪ್ರಮುಖವಾಗಿದೆ.

ಕೊನೆಗೆ ವಿಶ್ವೇಶ್ವರ ಭಟ್ಟರಲ್ಲಿ ಒಂದು ಮನವಿ, ನೀವು ಕನ್ನಡಪ್ರಭದ ಅಂಕಣಕಾರನ್ನು ಸುವರ್ಣನ್ಯೂಸ್ ಟಾಕ್ ಶೋಗಳ ಅತಿಥಿಗಳನ್ನಾಗಿಯೂ, ಈ ಚಾನೆಲ್ಲಿನ ಚಿಳ್ಳೆಪಿಳ್ಳೆ ವರದಿಗಾರರನ್ನು ಕನ್ನಡಪ್ರಭದ ಅಂಕಣಕಾರನ್ನಾದರೂ ಮಾಡಿಕೊಳ್ಳಿ. ಈ ಅಧ್ವಾನಗಳನ್ನು ಟಿವಿ ನೋಡುವ ಮಂದಿ ಹೇಗಾದರೂ ಸಹಿಸಬಲ್ಲರು, ಆದರೆ  ಕಾಮ, ಸೆಕ್ಸು. ಹೆಂಗಸಿನ ಉಬ್ಬುತಗ್ಗುಗಳ ಮೇಲೆ ಬೀಳುವ ಚಿಲ್ಲರೆ ಕಾಸುಗಳನ್ನು ಆಯ್ದುಕೊಳ್ಳುತ್ತಿರುವ ಈ ನೀಚತನವಿದೆಯಲ್ಲ, ಅದನ್ನು ಮಾನವಂತರಾರೂ ಸಹಿಸುವುದಿಲ್ಲ. ಈಗಾಗಲೇ ತಮ್ಮ ಚಾನೆಲ್ಲಿನ ನಗೆಪಾಟಲು ಕಾರ್ಯಕ್ರಮವಾದ ಕಟ್ಟೆಚ್ಚರದಲ್ಲಿ ಶಿವಮೊಗ್ಗದ ಎಮ್ಮೆಮ್ಮೆಸ್ ಕಾರ್ಯಕ್ರಮದ ಬಗ್ಗೆ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಫೌಂಡೇಷನ್‌ಗೆ ಆನ್‌ಲೈನ್ ದೂರುಗಳು ಲೋಡುಗಟ್ಟಲೆ ತಲುಪುತ್ತಿವೆ. ೩೦ರ ಶನಿವಾರದಂದು ಕಾರ್ಯಕ್ರಮದ ೨ನೇ ಭಾಗದಲ್ಲಿ ಇನ್ನೆಷ್ಟು ಅಸಹ್ಯ ಎಮ್ಮೆಮ್ಮೆಸ್ ತುಣುಕುಗಳನ್ನು ಪ್ರಸಾರ ಮಾಡಲು ಸಿದ್ದವಿದ್ದೀರೋ ಗೊತ್ತಿಲ್ಲ. ದಯವಿಟ್ಟು ಈ ೨ನೇ ಕಂತನ್ನು ಪ್ರಸಾರಿಸದಿರಿ. ತಮ್ಮ ಕಾರ್ಯಕ್ರಮದ ವಿಡಿಯೋ ಅನ್ನು ಗೆಳೆಯರನೇಕರು ಮೊಬೈಲಿನಲ್ಲಿ ಶೂಟ್ ಮಾಡಿಟ್ಟುಕೊಂಡಿದ್ದಾರೆ. ಐಬಿಎಫ್ ನಿರ್ಬಂಧಿಸಿರುವ ಅಷ್ಟನ್ನೂ ಕಟ್ಟೆಚ್ಚರ ಕಾರ್ಯಕ್ರಮದಲ್ಲಿ ಉಲ್ಲಂಘಿಸಿದ್ದೀರಿ, ಅದಕ್ಕೆ ಸಾಕ್ಷಿಯೂ ಇದೆ. ಯಾವಾಗ ಬೇಕಾದರೂ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಫೌಂಡೇಷನ್‌ನಿಂದ ತಮ್ಮ ಕಛೇರಿಗೆ ನೊಟೀಸ್ ಬರಬಹುದು.

ಪತ್ರಕರ್ತನೊಬ್ಬನಿಗೆ ಜನಪರವಾದ, ಜನೋಪಯೋಗಿ ಸುದ್ದಿಗಳನ್ನಷ್ಟೇ ಜನರಿಗೆ ತಲುಪಿಸುವ ಉತ್ಸಾಹವಿರಬೇಕೇ ಹೊರತು ಜನ ನೋಡುತ್ತಾರೆ ಎಂಬ ಧಾವಂತದಲ್ಲಿ ಸೆಕ್ಸ್‌ಬುಕ್ಕಿನ ರೇಂಜಿನ ಕಾರ್ಯಕ್ರಮಗಳನ್ನು ಬ್ಲೂಫಿಲ್ಮುಗಳನ್ನೂ, ಅಶ್ಲೀಲ ಎಮ್ಮೆಮ್ಮೆಸ್ಸುಗಳನ್ನೂ ಪ್ರಸಾರ ಮಾಡುವ ತಮ್ಮ ಕೊಳಕು ಅಭಿರುಚಿಯನ್ನು ಪ್ರದರ್ಶಿಸುವುದಲ್ಲ. ಏಕೆಂದರೆ ನೋಡುವ ಮಾನವಂತರು ವರದಿಗಾರನನ್ನು ವಿಮರ್ಶಿಸುವುದಕ್ಕಿಂತ ಹೆಚ್ಚಾಗಿ ಇಂಥದ್ದನ್ನ ಪ್ರಸಾರ ಮಾಡೋಕೆ ಅನುಮತಿ ಕೊಟ್ಟ ಎಡಿಟರ್ ಏನು ದನಾ ಮೇಯಿಸ್ತಾ ಇದ್ದನಾ ಅಂತ ಮುಲಾಜಿಲ್ಲದೇ ಬೈದುಬಿಡುತ್ತಾರೆ. ಇದಕ್ಕಾದರೂ ತಮ್ಮ ಅಭಿರುಚಿ ಉಬ್ಬುತಗ್ಗುಗಳ ಆಚೀಚೆಗೆ ವಿಸ್ತರಿಸಲೆಂಬ ಆಶಯ ಟಿವಿ ನೋಡುಗರದ್ದು. ಅರ್ಥ ಮಾಡಿಕೊಳ್ಳುತ್ತೀರೆಂಬ ನಂಬುಗೆಯೊಂದಿಗೆ.

ಪ್ರೀತಿಯಿಂದ

-ಟಿ.ಕೆ. ದಯಾನಂದ

Monday, March 5, 2012

ನಮ್ಮ ಮೀಡಿಯಾ ತೋರಿಸದ ಕೆಲವು ದೃಶ್ಯಗಳು ಇಲ್ಲಿವೆ ನೋಡಿ...



ಕರ್ನಾಟಕದ ಇತಿಹಾಸದಲ್ಲಿ ಮಾರ್ಚ್ ೨ ಕರಾಳ ನೆನಪುಗಳನ್ನು ಉಳಿಸಿಹೋಗಿದೆ. ಮಾಧ್ಯಮದವರ ಮೇಲೆ ಕೆಲನ್ಯಾಯವಾದಿಗಳ ಗೂಂಡಾಗಿರಿ. ನಂತರ ನ್ಯಾಯವಾದಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಈಗ ಮುಗಿದುಹೋದ ಕಹಿ ಅಧ್ಯಾಯ. ಮಾಧ್ಯಮ ಮಂದಿಯ ಮೇಲೆ ನಡೆದ ಭೀಕರ ಹಲ್ಲೆಯ ದೃಶ್ಯಗಳನ್ನು ನಾವು ಎಲ್ಲ ನ್ಯೂಸ್ ಚಾನಲ್ ಗಳಲ್ಲೂ ನೂರಾರು ಬಾರಿ ನೋಡಿದ್ದೇವೆ, ಇನ್ನೂ ನೋಡುತ್ತಲೇ ಇದ್ದೇವೆ. ಆದರೆ ಎರಡನೇ ಹಂತದಲ್ಲಿ ನ್ಯಾಯವಾದಿಗಳ ಮೇಲೆ ನಡೆದ ದೌರ್ಜನ್ಯದ ದೃಶ್ಯಗಳನ್ನು ಎಲೆಕ್ಟ್ರಾನಿಕ್ ಮೀಡಿಯಾ ತೋರಿಸುವ ಧೈರ್ಯ ಪ್ರದರ್ಶಿಸಲಿಲ್ಲ. ಹೀಗಾಗಿ ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಹಲವು ವಕೀಲರುಗಳು ತಮ್ಮ ಮೊಬೈಲುಗಳಲ್ಲಿ ಹಿಡಿದ ಚಿತ್ರಗಳನ್ನೇ ಸಂಗ್ರಹಿಸಿ ಅಡ್ವೊಕೇಟ್ ಬೆಂಗಳೂರು ಎಂಬ ಹೆಸರಿನಲ್ಲಿ ಯೂ ಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದಾರೆ. ವಾಯ್ಸ್ ಓವರ್ ನಲ್ಲಿ ಹೇಳಲಾಗುವ ಮಾಹಿತಿಗಳಲ್ಲಿ ಉತ್ಪ್ರೇಕ್ಷೆ ಇದೆ ಎಂದು ನಿಮಗನ್ನಿಸಬಹುದು. ಆದರೆ ವಿಡಿಯೋ ನಿಜಕ್ಕೂ ಭಯಾನಕವಾಗಿದೆ, ಆಘಾತಕಾರಿಯಾಗಿದೆ. ಅದು ಎಲ್ಲದಕ್ಕೂ ಸಾಕ್ಷಿ ಹೇಳುತ್ತಿದೆ. ಇಷ್ಟಾಗಿಯೂ ಈ ದ್ವೇಷ, ರೊಚ್ಚು, ಸೇಡು ಎಲ್ಲ ಮುಗಿದುಹೋಗಲಿ, ದೌರ್ಜನ್ಯಕ್ಕೆ ಒಳಗಾದ ಪತ್ರಕರ್ತ, ನ್ಯಾಯವಾದಿ ಮತ್ತು ಪೊಲೀಸರಿಗೆ ನ್ಯಾಯ ದೊರಕಲಿ ಎಂದು ಆಶಿಸುವುದಷ್ಟೆ ನಮ್ಮ ಈ ಕ್ಷಣದ ವಿನಂತಿ.

Sunday, March 4, 2012

ಪತ್ರಕರ್ತರು, ವಕೀಲರು ಆಯಾ ಸಮುದಾಯವನ್ನಷ್ಟೇ ಪ್ರತಿನಿಧಿಸುವುದಿಲ್ಲ, ಅದು ವೃತ್ತಿಧರ್ಮವೂ ಅಲ್ಲ....


ಯುದ್ಧ ಹೆಚ್ಚು ದೀರ್ಘವಾದಷ್ಟೂ ಉಭಯ ಪಂಗಡಗಳಿಗೂ ಸಾವು ನೋವು ಖಾತರಿ. ಹಾಗಾಗಿ ಯುದ್ಧವನ್ನು ಹೆಚ್ಚು ಕಾಲ ಮುಂದುವರೆಸಲಾಗುವುದಿಲ್ಲ. ರಕ್ತ-ಗಾಯಗಳು ಕಾಣಿಸಿದ ಮೇಲೆ ಯುದ್ಧಪೂರ್ವದ ತೇಜಸ್ಸೂ, ಆವೇಶವೂ ಹಾಗೇ ಉಳಿದಿರುವುದಿಲ್ಲ. ವಕೀಲರು-ಪತ್ರಕರ್ತರ ಸಂಘರ್ಷದಲ್ಲಿ ಮರೆತ ಮಾನವೀಯತೆಯನ್ನು ಹುಡುಕಿಕೊಳ್ಳಲೇಬೇಕು. ಎಲ್ಲಾದರೂ ಈ ಅಸಹನೀಯ ದ್ವೇಷದ ವಾತಾವರಣವನ್ನು ತಿಳಿಗೊಳಿಸುವ ಕಾರ್ಯ ಯಾರಿಂದಾದರೂ ನಡೆಯಲೇಬೇಕು. ಅದು ಆರಂಭವಾಗಿದೆ. ನಾಳೆ ವಕೀಲರ ಪ್ರತಿಭಟನೆ. ಅದು ಮತ್ತೆ ಈ ಸಂಘರ್ಷವನ್ನು ತಾರಕಕ್ಕೆ ತೆಗೆದುಕೊಂಡು ಹೋಗುತ್ತದಾ? ಅಥವಾ ಆ ಕಡೆಯಿಂದನೂ ಬಿಳಿ ಪಾರಿವಾಳಗಳು ಹಾರಬಹುದಾ? ಕಾದು ನೋಡಬೇಕು. ನಾಳೆ ಪತ್ರಕರ್ತರ ದೊಡ್ಡಮಟ್ಟದ ಪ್ರತಿಭಟನೆಯೂ ನಡೆಯಲಿದೆ. ಅಲ್ಲಿ ಹಿರಿಯ ಪತ್ರಕರ್ತರು ಒಂದಷ್ಟು ವಿವೇಕದ ಮಾತನಾಡಬಹುದಾ? ಕಾದುನೋಡಬೇಕು.

ಇದಕ್ಕೂ ಮುನ್ನವೇ ತಿಳಿಗೊಳಿಸುವ ಪ್ರಯತ್ನವನ್ನು ಮೊದಲು ಆರಂಭಿಸಿದ್ದು ಸಮಯ ಟಿವಿ. ಇತರ ಚಾನಲ್ಲುಗಳು ರೋಷಾವೇಶದಲ್ಲಿ ಕುದಿಯುತ್ತಿದ್ದಾಗಲೇ ಸಮಯ ಟಿವಿ ಯಾಕೆ ಹಿಂಗಾಯ್ತು ಎಂಬ ಚರ್ಚೆ ನಡೆಸಿ ಆತ್ಮಶೋಧನೆಗೆ ದಾರಿ ಮಾಡಿಕೊಟ್ಟಿತು. ಮೂವರು ವಕೀಲರು, ಇಬ್ಬರು ಪತ್ರಕರ್ತರು ಮತ್ತು ಓರ್ವ ಮಾಜಿ ಪೊಲೀಸ್ ಅಧಿಕಾರಿಯ ಜತೆ ಸಮಯದ ನಿರ್ದೇಶಕ ಶಿವಪ್ರಸಾದ್ ಚರ್ಚೆ ನಡೆಸಿದರು.

ಒಂದು ಬಹುಮುಖ್ಯ ವಿಷಯವೆಂದರೆ ನೀವು ನನ್ನ ಪ್ರಶ್ನೆಗಷ್ಟೇ ಉತ್ತರ ಕೊಡಬೇಕು, ಉತ್ತರ ಕೊಡುವಾಗಲೂ ನನಗೆ ಅಹಿತವೆನಿಸಿದ್ದನ್ನು ಹೇಳಕೂಡದು, ನನಗೆ ಬೇಡದ ಉತ್ತರ ಬಂದರೆ ನಿಮಗೆ ಮಾತನಾಡಲು ಬಿಡುವುದಿಲ್ಲ ಎಂಬ ಕೆಲವು ಟಿಪಿಕಲ್ ನಿರೂಪಕರ ಹಾಗೆ ಅವರು ಚರ್ಚೆ ನಡೆಸಲಿಲ್ಲ. ಎಲ್ಲರಿಗೂ ಅವರ ಪಾಡಿಗೆ ಅವರು ಮಾತನಾಡಲು ಬಿಟ್ಟರು. ಹಿರಿಯ ವಕೀಲ ದೊರೆರಾಜು ಸ್ವಲ್ಪ ಭಾವುಕರಾದಂತೆ ಕಂಡರೂ ತಮಗೆ ಹೇಳಬೇಕೆನಿಸಿದ್ದನ್ನು ಎಗ್ಗಿಲ್ಲದೆ ಹೇಳಿದರು. ಡಾ. ಸಿ.ಎಸ್.ದ್ವಾರಕಾನಾಥ್ ಸಹ ಘಟನೆಯ ಎಲ್ಲ ಮಗ್ಗುಲುಗಳನ್ನು ವಿವರಿಸಿದರು. ಪತ್ರಕರ್ತರ ಮೇಲೆ ದಾಳಿ ನಡೆಸಿದವರನ್ನು ನೇಣು ಹಾಕಿ, ನಮ್ಮ ಅಭ್ಯಂತರವಿಲ್ಲ. ಆದರೆ ಇಡೀ ವಕೀಲ ಸಮುದಾಯವನ್ನು ಗೂಂಡಾಗಳೆಂದು ಕರೆಯಬೇಡಿ ಎಂದು ಅವರು ಹೇಳಿದರು.

ಕೋರ್ಟ್ ಒಳಗೆ ಪೊಲೀಸರು ವಕೀಲರ ಮೇಲೆ ನಡೆಸಿದ ದೌರ್ಜನ್ಯವನ್ನು ಕವರ್ ಮಾಡಲು ಸಾಧ್ಯವಾಗದೇ ಇರುವುದಕ್ಕೆ ಕಾರಣ ಒಳಗೆ ಮೀಡಿಯಾ ಕ್ಯಾಮೆರಾಗಳು ಇಲ್ಲದೇ ಇದ್ದಿದ್ದು ಎಂದು ಪತ್ರಕರ್ತ ರಾಜಾ ಶೈಲೇಶ್ ಚಂದ್ರ ಗುಪ್ತ ಬಾಲಿಷ ಸಮರ್ಥನೆ ನೀಡಿದಾಗ ದ್ವಾರಕಾನಾಥ್ ನೀಡಿದ ಉತ್ತರ: ಸುದ್ದಿ ಮಾಡುವುದಕ್ಕೆ ಕ್ಯಾಮೆರಾ ಬೇಕು ಎಂದೇನೂ ಇಲ್ಲ. ಕಣ್ಣು ಇರಬೇಕು, ಹೃದಯ ಇರಬೇಕು, ಮನಸ್ಸು ಇರಬೇಕು...

ಇದಾದ ತರುವಾಯ ಎಲ್ಲ ಚಾನಲ್‌ಗಳಲ್ಲೂ ಒರಟಾಟದ ಧ್ವನಿ ಗಣನೀಯವಾಗಿ ತಗ್ಗಿದ್ದನ್ನು ಗಮನಿಸಬಹುದು. ಭಾಷೆಯಲ್ಲಿ ಸ್ವಲ್ಪ ಸೌಮ್ಯತೆ ಕಾಣಿಸಿತು. ಗಲಭೆಯ ದಿನ ಸೈನಿಕರನ್ನು ಹುರಿದುಂಬಿಸುವ ಸೇನಾಧಿಪತಿಯಂತೆ ಮಾತನಾಡುತ್ತಿದ್ದ ಪಬ್ಲಿಕ್ ಟಿವಿಯ ರಂಗಣ್ಣನ ಧ್ವನಿಯಲ್ಲೂ ಒಂಚೂರು ಸೌಮ್ಯತೆ ಕಾಣಿಸಿದ್ದನ್ನು ನೀವು ಗಮನಿಸಿರಬಹುದು. ಪೊಲೀಸರು ಬಿಡುಗಡೆ ಮಾಡಿದ ಆರೋಪಿಗಳ ಪಟ್ಟಿಯನ್ನು ಅಪರಾಧಿಗಳ ಪಟ್ಟಿ ಎಂಬಂತೆಯೇ ಘೋಷಿಸುತ್ತಿದ್ದ ಸುವರ್ಣನ್ಯೂಸ್‌ನಲ್ಲೂ ಕೊಂಚ ಅಬ್ಬರದ ಧ್ವನಿ ತಗ್ಗಿದಂತಿತ್ತು.

ಉದಯವಾಣಿ ಪತ್ರಿಕೆ ಇವತ್ತು ಘಟನೆಗೆ ಇರುವ ಮೂರು ಆಯಾಮಗಳನ್ನು ವಿವರಿಸಿ ತನ್ನ ಅಗ್ರ ಸುದ್ದಿ ಪ್ರಕಟಿಸಿತು. ಅದೂ ಕೂಡ ರಣಭೂಮಿಯಲ್ಲಿ ಒಂದು ಹೆಜ್ಜೆ ಹಿಂದಿಟ್ಟ ಸೇನಾಪಾಳಯದ ಲಕ್ಷಣ. ಹೊತ್ತಿರುವ ಬೆಂಕಿಯನ್ನು ಆರಿಸುವುದು ಹೇಗೆ ಎಂಬುದು ಮೊದಲ ಆದ್ಯತೆ ಎಂದು ರವಿ ಹೆಗಡೆ ಬರೆದು ಪತ್ರಿಕೆಯ ನಿಲುವನ್ನು ಜಾಹೀರುಪಡಿಸಿದರು.

ವಾರ್ತಾಭಾರತಿ ಸಂಪಾದಕ ಬಿ.ಎಂ.ಬಷೀರ್ ತಮ್ಮ ಫೇಸ್ ಬುಕ್‌ನಲ್ಲಿ ಬರೆಯುತ್ತ ಮಾನವ ಹಕ್ಕಿನ ಮೇಲೆ ದಾಳಿಯಾದಾಗ ಸಂತ್ರಸ್ತರಿಗೆ ಬೆಂಗಾವಲಾಗಿ ನಿಂತು, ಗುದ್ದಾಡಿದ, ಒದ್ದಾಡಿದ, ಪ್ರಾಣವನ್ನೇ ಕಳೆದುಕೊಂಡ ಅದೆಷ್ಟೋ ವಕೀಲರು ನಮ್ಮ ನಡುವೆ ಇರುವಾಗ, ವಕೀಲ ವೃತ್ತಿಯ ಘನತೆಯನ್ನು ತಿಳಿಯ ಹೊಸ ತಲೆಮಾರು, ಯಾವುದೋ ಹಿತಾಸಕ್ತಿಗೆ ಬಲಿಯಾಗಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದಾಕ್ಷಣ ನಾವು ಇಡೀ ವಕೀಲರ ಮೇಲೆ ಆರೋಪ ಮಾಡುವುದು ನಿಜವಾದ ಲಾಯರ್‌ಗಳಿಗೆ ಮಾಡುವ ಅವಮಾನ. ಈ ನಾಡಿನ ಅದೆಷ್ಟೋ ರಾಜಕಾರಣಿಗಳು ಒಂದು ಕಾಲದಲ್ಲಿ ವಕೀಲರಾಗಿ ದುಡಿದವರು. ಪೊಲೀಸ್ ವ್ಯವಸ್ಥೆ ನಿರಂಕುಶವಾಗಿ ವರ್ತಿಸಿದಾಗ ಪತ್ರಕರ್ತರನ್ನೂ ಸೇರಿದಂತೆ ಈ ನಾಡಿನ ಜನತೆಯನ್ನು ಮುಂದೆ ನಿಂತು ರಕ್ಷಿಸಿದವರು ವಕೀಲರು. ಇಂದು ನಾವು ವಕೀಲರ ಮೇಲೆ ಸಾರಾಸಗಟಾಗಿ ಆರೋಪ ಮಾಡುವಾಗ, ಆ ಕುರಿತ ಪ್ರಜ್ಞೆ ನಮ್ಮಲ್ಲಿರಬೇಕಾಗುತ್ತದೆ  ಎಂದು ಹೇಳಿದ್ದಾರೆ.

ಪತ್ರಕರ್ತ ಕೇವಲ ಪತ್ರಕರ್ತ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಆತ ಇಡೀ ಸಮಾಜದ ಗಂಟಲು. ಧರ್ಮ, ಜಾತಿ, ಮತ, ಪಂಥ, ಭಾಷೆಗಳ ಭೇದವಿಲ್ಲದಂತೆ ಎಲ್ಲರ ಅಭಿವ್ಯಕ್ತಿಗಳಿಗೂ ಅವನು ಕಣ್ಣಾಗಬೇಕು, ಕಿವಿಯಾಗಬೇಕು.  ನಾನು ಪತ್ರಕರ್ತರನ್ನಷ್ಟೆ ಪ್ರತಿನಿಧಿಸುತ್ತೇನೆ ಎಂದು ಚೌಕಟ್ಟು ಹಾಕಿಕೊಂಡು ಕುಳಿತ ತಕ್ಷಣ ಅವನೊಳಿಗೆ ಪತ್ರಕರ್ತ ಸತ್ತ ಎಂದೇ ಅರ್ಥ. ಇಂಥವರು ಕೇವಲ ಸಂಬಳಕ್ಕಾಗಿ ವೃತ್ತಿ ಮಾಡುವವರು. ಪತ್ರಕರ್ತರು ಸಮಾಜದ ಪ್ರತಿಯೊಬ್ಬನ, ಕಟ್ಟಕಡೆಯ ಮನುಷ್ಯನನ್ನೂ ಪ್ರತಿನಿಧಿಸಬೇಕು, ಅವನ ಧ್ವನಿಯನ್ನು ದಾಖಲಿಸಬೇಕು. ವಕೀಲರ ನೋವನ್ನು, ಅವರ ಮೇಲೆ ನಡೆದ ದೌರ್ಜನ್ಯವನ್ನು ನಾವು ಪ್ರಕಟಿಸುವುದಿಲ್ಲ, ಪ್ರಸಾರಿಸುವುದಿಲ್ಲ ಎಂಬ ನಿಲುವು ವೃತ್ತಿಧರ್ಮವಲ್ಲ. ವಕೀಲರ ಕೊಲೆ ಕೇಸು ಆರೋಪಿಗೂ ಒಬ್ಬ ವಕೀಲನಿರುತ್ತಾನೆ, ವಕೀಲರಿಲ್ಲದೆ ಕೇಸು ನಡೆಯುವುದಿಲ್ಲ, ಯಾರೋ ಒಬ್ಬರು ವಕಾಲತು ಮಾಡಲೇಬೇಕು, ಅದು ವಕೀಲರ ವೃತ್ತಿಧರ್ಮ. ಹಾಗೆಯೇ ಪತ್ರಕರ್ತರು ಮೊನ್ನೆಯ ಘಟನೆಯಲ್ಲಿ ತಾವು ಒಂದು ಪಕ್ಷವಾಗಿದ್ದರೂ ಸಹ, ಎದುರು ಪಕ್ಷದವರ ಮಾತನ್ನೂ ಪ್ರಕಟಿಸಬೇಕು, ಪ್ರಸಾರಿಸಬೇಕು. ಆ ಕೆಲಸ ಈಗ ಆಗುತ್ತಿದೆ.

ದಾಳಿಕೋರ ವಕೀಲರನ್ನು ವಕೀಲ ಸಮುದಾಯದಿಂದ ಪ್ರತ್ಯೇಕಿಸಿ ಮಾತನಾಡದ ಹೊರತು, ಹಲ್ಲೆಗೊಳಗಾದ ಪತ್ರಕರ್ತರಿಗೆ ನ್ಯಾಯ ದೊರೆಯುವುದೂ ಅನುಮಾನ. ಯಾಕೆಂದರೆ ಇಡೀ ಸಮುದಾಯವನ್ನು ನಿಂದಿಸುತ್ತಲೇ ಇದ್ದರೆ ಆ ಸಮುದಾಯ ಒಟ್ಟಾಗಿ ನಿಲ್ಲುತ್ತದೆ, ದಾಳಿಕೋರರಿಗೆ ರಕ್ಷಣೆಯೂ ದೊರೆಯುತ್ತದೆ.

ಇದೆಲ್ಲವನ್ನೂ ವಕೀಲ ಸಮುದಾಯವೂ ಗಮನಿಸಿರಬಹುದು, ಗಮನಿಸಬಹುದು. ಮಾಧ್ಯಮದಲ್ಲಿ ಇರುವವರೆಲ್ಲ ಭ್ರಷ್ಟರಲ್ಲ, ದುಷ್ಟರಲ್ಲ ಎಂಬುದು ಅವರಿಗೂ ಗೊತ್ತಿದೆ. ವಕೀಲರ ಜತೆಗೆ ಅನುಚಿತವಾಗಿ ವರ್ತಿಸಿರಬಹುದಾದ ಪತ್ರಕರ್ತರು ಬೆರಳೆಣಿಕೆಯಷ್ಟು ಜನರು, ಎಲ್ಲರೂ ಹಾಗಿರಲು ಸಾಧ್ಯವಿಲ್ಲ ಎಂಬುದೂ ಅವರಿಗೆ ಅರಿವಾಗಬೇಕು. ಮಿಕ್ಕಂತೆ ಪ್ರಚೋದಿತ ವರದಿಗಳು, ಏಕಮುಖ ವರದಿಗಳಿಗೆ ಆ ಕ್ಷಣದ ರೋಷಾವೇಶಗಳು ಕಾರಣವಾಗಿರುತ್ತವೆ ಎಂದೂ ಸಹ ಅವರು ಅರಿತುಕೊಳ್ಳಬೇಕು.

ಒಂದು ಕಡೆಯಿಂದ ಸೌಹಾರ್ದತೆಯ ಮಾತುಗಳು ಕೇಳಿಬಂದಿದೆ, ಮತ್ತೊಂದು ಕಡೆಯಿಂದಲೂ ಅದು ಬರುವಂತಾಗಲಿ. ಇದು ನಮ್ಮ ಆಶಯ.

ವಕೀಲರು v/s ಮಾಧ್ಯಮಗಳು - ಪ್ರಜಾಪ್ರಭುತ್ವಕ್ಕೆ ಮತ್ತೊಂದು ಸೋಲು.


ಯಾವೆರಡು ಅಂಗಗಳು ಸೇರಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ಕ್ರಿಯೆಯಲ್ಲಿ ಇನ್ನಷ್ಟು ಕ್ರಿಯಾಶೀಲರಾಗಿ ತೊಡಗಿರಬೇಕಿತ್ತೋ ಅವೆರಡೂ ಪರಸ್ಪರ ಗುದುಮುರುಗಿಯಲ್ಲಿ ಬಿದ್ದಿವೆ. ಮೊನ್ನೆ ಬೆಂಗಳೂರನ ಸಿವಿಲ್ ಕೋರ್ಟಿನ ಆವರಣ ಮತ್ತು ಕೋರ್ಟಿನ ಒಳಗೆ ನಡೆದಿರುವ ಘಟನೆಗಳು ರಾಜ್ಯದ ಮಟ್ಟಿಗೆ ಅತ್ಯಂತ ಕೆಟ್ಟ ಬೆಳವಣಿಗೆಗಳು. ಅದೂ ಕೆಟ್ಟ ಆಡಳಿತವೊಂದನ್ನು ಜನರು ನೋಡುತ್ತಿರುವ ಸಂದರ್ಭದಲ್ಲಿ ಈಗಾಗಿರುವ ಬೆಳವಳಿಗೆ ಮತ್ತೂ ಕೆಟ್ಟ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.

ನಿಜಕ್ಕೂ ಇಂತಹ ಕೆಟ್ಟಕಾಲದಲ್ಲಿ ಇರುವ ನಮ್ಮಷ್ಟು ದುರಾದೃಷ್ಟವಂತರು ಯಾರೂ ಇಲ್ಲವೇನೋ. ಒಂದೆಡೆ ಭ್ರಷ್ಟತೆಯ ಕೂಪದಲ್ಲಿ ನಾಡು ಮುಳುಗಿ ಏಳುತ್ತಿದ್ದರೆ ಈಗ ಹಲ್ಲೆ, ಗೂಂಡಾಗಿರಿಗಳು ತಾಂಡವವಾಡುತ್ತಿವೆ. ಅದರಲ್ಲೂ ಕಲಿತ ವರ್ಗಗಳೇ ಅರಾಜಕತೆಯಲ್ಲಿ ಮುಳುಗಿರುವಾಗ ಇನ್ಯಾರು ಈ ನಾಡನ್ನು ರಕ್ಷಿಸಲು ಸಾಧ್ಯ ಹೇಳಿ?

ಕೆಲವು ಗೂಂಡಾ ಪ್ರವೃತ್ತಿಯ, ಅವಿವೇಕಿ ವಕೀಲರು ಅಂದು ನಡೆದುಕೊಂಡಿರುವ ವರ್ತನೆ ನಿಜಕ್ಕೂ ಬೆಚ್ಚಿ ಬೀಳಿಸುವಂತಾದ್ದು. ಬಡಪಾಯಿ ಹೊಟ್ಟಿಪಾಡಿನ ಮಾಧ್ಯಮ ವರದಿಗಾರರ ಮೇಲೆ ಕೈಮಾಡಿದ ಅವರ ಅಪರಾಧ ಅಕ್ಷಮ್ಯ. ಇಂತಹ ದುರಾಂಧರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು.

ಪತ್ರಕರ್ತರ ಪಾಲಿಗೆ ಇಂದು ಬಹಳ ಕೆಟ್ಟ ದಿನಗಳು. ಮೊನ್ನೆ ಮಧ್ಯಪ್ರದೇಶದಲ್ಲಿ ಬಿಜೆಪಿಯ ಕುಮ್ಮಕ್ಕಿನಿಂದ ಗೂಂಡಾಗಳು ಒಬ್ಬ ಪ್ರಾಮಾಣಿಕ ಪತ್ರಕರ್ತನನ್ನು ಆತನ ಇಡೀ ಕುಟುಂಬದ ಸಮೇತ ಕಗ್ಗೊಲೆ ನಡೆಸಿದ್ದಾರೆ. ಇಂದು ದೇಶದಲ್ಲಿ ಹಲವಾರು ಕಡೆಗಳಲ್ಲಿ ಅತ್ಯಂತ ಅಪಾಯದ ಸ್ಥಿತಿಯಲ್ಲಿರುವವರೆಂದರೆ ಸತ್ಯವನ್ನು ಭೇಧಿಸುತ್ತೇವೆ ಎಂದು ಹೊರಡುವ ಪತ್ರಕರ್ತರು ಮತ್ತು ಭ್ರಷ್ಟರ ಕುರಿತ ಮಾಹಿತಿಯನ್ನು ಹೊರಗೆಳೆಯುತ್ತೇವೆ ಎಂದು ಹೊರಡುವ ಮಾಹಿತಿ ಹಕ್ಕು ಕಾರ್ಯಕರ್ತರು.

ಇಂತಹ ಒಂದು ಸಂದಿಗ್ಧ ಸಂದರ್ಭವನ್ನು ನ್ಯಾಯವಾದಿಗಳು ಅರ್ಥ ಮಾಡಿಕೊಳ್ಳಬೇಕಿತ್ತು. ಮಾಧ್ಯಮಗಳೊಂದಿಗೆ ಸಂಘರ್ಷವಾಗುವ ಸಂದರ್ಭದಲ್ಲಿ ಕೊಂಚ ವಿವೇಕಿಗಳಾಗಿರಬೇಕಿತ್ತು. ಮಾಧ್ಯಮದವರು, ಮಾಹಿತಿ ಹಕ್ಕು ಕಾರ್ಯಕರ್ತರು ಹಾಗೂ ವಕೀಲರು ಈ ಮೂರೂ ಜನರ ಉತ್ತಮ ಸಂಯೋಜನೆಯಲ್ಲಿ ಕೆಲಸ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಉಳಿಗಾಲ. ಆದರೆ ಇಲ್ಲಿ ಇತ್ತೀಚಿನ ಬೆಳವಣಿಗೆಗಳು ವಿರುದ್ಧಗತಿಯಲ್ಲಿ ಹೊರಟಿರುವುದು ಮಾತ್ರ ವಿಷಾಧನೀಯ.
ಇದು ಇಡೀ ಸಮಸ್ಯೆಯ ಒಂದು ಮುಖ. ಈಗ ಸೃಷ್ಟಿಯಾಗಿರುವ ಸಂದರ್ಭಕ್ಕೆ ಮತ್ತೊಂದು ಮುಖ ಇದೆ. ಇದು ಮಾಧ್ಯಮಗಳ ಅದರಲ್ಲೂ ದೃಶ್ಯವಾಹಿನಿಗಳ ಟಿಆರ್‌ಪಿ ಹುಚ್ಚು ಹಾಗೂ ಪ್ರತಿಯೊಂದನ್ನೂ ವೈಭವೀಕರಿಸಿ, ಅತಿರಂಜಿಸುವಲ್ಲಿನ ಹಾಳು ಪೈಪೋಟಿಯಿಂದಾದ ಅನಾಹುತ. ಅಗತ್ಯ ಇರುವುದು, ಇಲ್ಲದಿರುವುದು, ಏನೊಂದೂ ನೋಡದೇ ಪ್ರತಿಯೊಂದನ್ನೂ ಲೈವ್ ತೋರಿಸಬೇಕು ಎನ್ನುವ ಹಪಹಪಿಕೆ. ಇದರ ಪರಿಣಾಮವಾಗಿಯೇ ಒತ್ತಡದಲ್ಲಿ ಸಿಲುಕುವ ವರದಿಗಾರರು ಹಲ್ಲೆಗೆ, ನಿಂದನೆಗೆ ಒಳಗಾಗುವುದು.

ಮೊನ್ನೆ ಘಟನೆಯನ್ನೇ ನೋಡೋಣ. ನ್ಯಾಯಾಲಯ ಎಂದರೆ ಅದಕ್ಕೆ ಒಂದು ಘನತೆ ಇದೆಯಲ್ಲವೇ? ಆವರಣದಲ್ಲಿ ಒಂದು ಮೊಬೈಲ್ ರಿಂಗ್ ಆದರೂ ದಂಡವಿಧಿಸಲಾಗುತ್ತದೆ. ಹೀಗಿರುವಾಗ ಜನಾರ್ಧನ ರೆಡ್ಡಿಯ ಕಲಾಪಗಳನ್ನು ಕೋರ್ಟು ಆವರಣದ ಒಳಗಿನಿಂದಲೂ ಲೈವ್ ತೋರಿಸುವ ಅಗತ್ಯ ಯಾರಿಗಿತ್ತು? ನ್ಯಾಯಾಲಯದ ನಡೆಗಳಿಗೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕಾಗಿ ಕೋರ್ಟಿನೊಳಗೆ ಮಾಧ್ಯಮಗಳನ್ನು ಬಿಡಲಾಗುವುದಿಲ್ಲ ಎಂದು ನ್ಯಾಯವಾದಿಗಳು ಮಾಧ್ಯಮದವರಿಗೆ ತಾಕೀತು ಮಾಡಿದ್ದರಲ್ಲಿ ತಪ್ಪೇನಿತ್ತು? ಆದರೆ ತಾವು ಹೋಗುವುದೇ ಸೈ ಎಂದು ಪೊಲೀಸರನ್ನೂ ಬಳಸಿಕೊಂಡು ತಾವು ಸೆನ್ಷೇಶನ್ ನ್ಯೂಸ್ ಕೊಡುವುದೇ ಸೈ ಎಂದು ವಕೀಲರೊಂದಿಗೆ ವಾಗ್ವಾದಕ್ಕಿಳಿದ ಮಾಧ್ಯಮದ ವರದಿಗಾರರಿಗೆ ಪ್ರಜ್ಞೆ ಇತ್ತೇ?  ಅದರಲ್ಲೂ ಕೆಲ ದಿನಗಳ ಹಿಂದೆಯಷ್ಟೇ ಮಾಧ್ಯಮದವರಿಗೂ, ವಕೀಲರಿಗೂ ನಡುವೆ ಕಹಿ ಸಂಬಂಧ ಏರ್ಪಟ್ಟಿದ್ದ ಸಂದರ್ಭದಲ್ಲಿ ಪರಿಸ್ಥಿತಿ ಇನ್ನಷ್ಟು ಸೂಕ್ಷ್ಮವಾಗಿತ್ತು. ನ್ಯಾಯವಾದಿಗಳನ್ನು ಲಾಕಪ್‌ನಲ್ಲಿ ಚಚ್ಚಿದ್ದ ಪೊಲೀಸರ ವಿರುದ್ಧ ವಕೀಲರು ಪ್ರತಿಭಟನೆಗಿಳಿದಾಗ ಸಂಬಂಧ ಪಟ್ಟ ಪೊಲೀಸ್ ಅಧಿಕಾರಿಗಳು ಕೂಡಲೇ ಸ್ಪಂದಿಸದಿದ್ದರಿಂದಾಗಿ ಗಂಟೆಗಟ್ಟಲೆ ರಸ್ತೆ ಜಾಮ್ ಆಗುವ ಸಂದರ್ಭ ಬಂದೊದಗಿತ್ತು. ಅಂದು ಮಾನ್ಯ ಮಿರ್ಜಿಯವರು ಕೂಡಲೇ ಸ್ಪಂದಿಸಿದ್ದರೆ ಅಷ್ಟೊಂದು ಸಮಸ್ಯೆಯೇನೂ ಆಗುತ್ತಿರಲಿಲ್ಲ. ಆದರೆ ವಾಹಿನಿಯವರಿಗೆ ಸಮಸ್ಯೆ ಅಷ್ಟು ಸಲಭವಾಗಿ ಸಮಸ್ಯೆ ಬಗೆಹರಿದಿದ್ದರೆ ಅದು ಒಳ್ಳೆದಿನವಲ್ಲ. ಕೊನೆಗೆ ಅವರಿಚ್ಛೆಯಂತೆಯೇ ಆಗಿತ್ತು. ಹೀಗೆ ಅಂದು ಮಾಧ್ಯಮಗಳಿಂದ ಸಾರ್ವಜನಿಕವಾಗಿ ತೀರಾ ಅವಮಾನಕ್ಕೊಳಗಾಗಿದ್ದ ವಕೀಲರು ಯಾವ ಮನಸ್ಥಿತಿಯಲ್ಲಿದ್ದರು ಎಂದು ಗ್ರಹಿಸುವುದು ಟೀವಿಗಳ ಮುಖ್ಯಸ್ಥರಿಗೆ ಅರಿವಿರಲಿಲ್ಲವೇ? ಆದರೂ ಪೊಲೀಸರಿಗೆ ಕುಮ್ಮಕ್ಕು ಕೊಟ್ಟು ಮೊನ್ನೆ ವಕೀಲರೊಂದಿಗೆ ಜಗಳಕ್ಕಿಳಿಯುವ ಅಗತ್ಯವಿತ್ತೇ? ಪರಿಸ್ಥಿತಿಯ ಗಭೀರತೆಯನ್ನು ಗ್ರಹಿಸಿ ತಮ್ಮ ವರದಿಗಾರಿಗೆ ಕಿವಿಮಾತು ಹೇಳಿರಲಿಲ್ಲವೇಕೆ?

ವಕೀಲರು ವರದಿಗಾರರಿಗೆ ಹೊಡೆದರು. ಒಬಿ ವ್ಯಾನ್‌ಗಳ ಮೇಲೆ ಬಲವಾದ ಕಲ್ಲುಗಳನ್ನು ಎತ್ತಿಹಾಕಿದರು. ಇಷ್ಟೊತ್ತಿಗೆ ಅಂದು ಪರಿಸ್ಥಿತಿ ಹೀಗಾಗಲಿರುವನ್ನು ಸರಿಯಾಗಿಯೇ ಗ್ರಹಿಸಿದ್ದ ಪೊಲೀಸರು ಎಲ್ಲಾ ಬಗೆಯಿಂದಲೂ ಸಜ್ಜಿತವಾಗಿಯೇ ಬಂದಿದ್ದರು. ಬಾಕ್ಸ್‌ಗಳಲ್ಲಿ ಕಲ್ಲುಗಳನ್ನು ತಂದಿದ್ದರು. (ಕಲ್ಲುಗಳನ್ನು ತಂದಿದ್ದು ವಕೀಲರು ಎಂದು ಟಿವಿಗಳು ತಪ್ಪಾಗಿ ವರದಿ ಮಾಡಿದವು). ಅವರು ತಪ್ಪಿತ್ಥಸ್ಥರನ್ನು ಬಂಧಿಸುವ ಗೋಜಿಗೇ ಹೋಗಲಿಲ್ಲ. ಸಿಕ್ಕಿದ್ದೇ ಛಾನ್ಸು ಎಂದು ಪೊಲೀಸರು ಸಾವಿರ ಸಾವಿರ ಸಂಖ್ಯೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ನುಗ್ಗಿದರು. ನಂತರ ಆವರಣದಲ್ಲಿ ಸಿಕ್ಕ ಸಿಕ್ಕ ವಕೀಲರನ್ನು ಚಚ್ಚಿದರು. ಈ ಹೊತ್ತಿಗೆ ಪೊಲೀಸರು ಹೊಡೆದ ಒಂದು ಕಲ್ಲನ್ನು ತಿರುಗಿಸಿ ವಕೀಲನೊಬ್ಬ ಹೊಡೆದ ಪೆಟ್ಟಿಗೆ ಪೇದೆಯೊಬ್ಬರಿಗೆ ಗಂಭೀರವಾಗಿ ಗಾಯವಾಯ್ತು.  ಕೊನೆಗೆ ಮಿರ್ಜಿ ಲಾಠಿಚಾರ್ಜ್‌ಗೆ ಆದೇಶ ನೀಡಿದರು. ಕೂಡಲೇ ತಮ್ಮ ಸಿಟ್ಟನ್ನು ವಿಚಿತ್ರ ರೀತಿಯಲ್ಲಿ ತೀರಿಸಿಕೊಂಡದ್ದು ಪೊಲೀಸರು. ಹೀಗೆ ವಕೀಲರನ್ನು ಥಳಿಸತೊಡಗಿದಂತೆಯೇ ವಕೀಲಲ್ಲಿ ಯಾವನೋ ತಲೆಕೆಟ್ಟ ಒಬ್ಬ ವಕೀಲ ಮೊದಲ ಮಹಡಿಯಿಂದ ಒಂದು ಕುರ್ಚಿ ಎತ್ತಿಹಾಕಿದ. (ಈ ಕುರ್ಚಿಯಿಂದ ಯಾರಿಗೂ ಪೆಟ್ಟಾಗಿಲ್ಲ. ಯಾಕೆಂದರೆ ಅದು ತೀರಾ ಹಗುರವಾಗಿತ್ತು). ಆದರೆ ಮಾಧ್ಯಮಗಳು ಈ ಕುರ್ಚಿಯ ಏಟಿನಿಂದಲೇ ಪೊಲೀಸ್ ಪೇದೆ ಮಹದೇವಯ್ಯ ಸತ್ತುಹೋದ ಎಂದು ನಿಮಿಷ ನಿಮಿಷಕ್ಕೂ ಭಿತ್ತರಿಸಿ ರಾಜ್ಯದಾದ್ಯಂತ ಸೆನ್ಷೇಷನ್ ಸೃಷ್ಟಿಸಿದರು. ಅಲ್ಲಿಗೆ ಪೊಲೀಸರು ಸಕ್ಸೆಸ್ ಆಗಿದ್ದರು.



ಗಾಳಿಗೆ ಗುಂಡು ಹಾರಿಸುತ್ತ, ಟಿಯರ್ ಗ್ಯಾಸ್ ಸಿಡಿಸುತ್ತ ನೂರಾರು ಸಂಖ್ಯೆಯಲ್ಲಿ  ಶಸ್ತ್ರಸಜ್ಜ್ಜಿತರಾಗಿ, ಫೈಬರ್ ಲಾಟಿಗಳನ್ನು, ಕಲ್ಲುಗಳನ್ನು ಹಿಡಿದು ನ್ಯಾಯಾಲಯದ ಒಳಗೆ ನುಗ್ಗಿದ ಪೊಲೀಸರು ವಿಚಿತ್ರವಾಗಿ ವರ್ತಿಸಿದರು. ನೂರಾರು ವಕೀಲರ ಮೇಲೆ (ಇವರಲ್ಲಿ ಬಹುತೇಕರು ಅಮಾಯಕರು) ಮನಸೋಯಿಚ್ಛೇ ಥಳಿಸಿದರು. ೩೦- ೪೦ ವಕೀಲರಿಗೆ ಗಂಭೀರ ಗಾಯಗಳಾದವು. ನ್ಯಾಯಾಲದ ಅಸೋಷಿಯೇಷನ್ ಒಳಗೆ ನುಗ್ಗಿ ಸುಮ್ಮನೇ ಕುಳಿತಿದ್ದವರನ್ನೆಲ್ಲಾ ಥಳಿಸಿದರು. ಲೇಡೀಸ್ ಅಸೋಷಿಯೇಷನ್‌ಗೆ ನುಗ್ಗಲು ಯತ್ನಿಸಿದರು. ಆದರೆ ಕೂಡಲೇ ಅದರ ಬಾಗಿಲು ಹಾಕಾಯಿತು. ನ್ಯಾಯಾಧೀಶರನ್ನೂ ಬಿಡದೇ ಬಡಿದರು. ನ್ಯಾಯಾದೀಶ ಬೂದಿಹಾಳ್ ಅವರಿಗೆ ತೀವ್ರ ಏಟು ಬಿದ್ದಿತು. ಕೋರ್ಟ್ ಆವರಣದಲ್ಲಿದ್ದ ವಕೀಲರ ಹತ್ತಾರು ಕಾರುಗಳಿಗೆ ಪೊಲೀಸರು ಬೆಂಕಿ ಹಚ್ಚಿದರು. ಗಾಜುಗಳನ್ನು ಪುಡಿಪುಡಿ ಮಾಡಿದರು. ಮಿರ್ಜಿ ಸಾಹೇಬರು ವಕೀಲರೇ ವಾಹನಗಳಿಗೆ ಬೆಂಕಿ ಹಚ್ಚಿದರು ಎಂದು ಹೇಳುತ್ತಾರೆ. ತಾವೆ ತಮ್ಮ ವಾಹನಗಳಿಗೆ ಬೆಂಕಿ ಹಚ್ಚಲು ಸಾಧ್ಯವೇ?

ಅತ್ತ ಟೀವಿಗಳಲ್ಲಿ ಮಾತ್ರ ಇದೆಲ್ಲದರರ ಬಗ್ಗೆ ಒಂದೇ ಒಂದು ಸೊಲೂ ಇರಲಿಲ್ಲ.

ನಿಜ ಹೇಳಬೇಕೆಂದಿದ್ದರೆ ಇಷ್ಟು ಹೊತ್ತಿಗೆ ಮಾಧ್ಯಮದವರೂ ಏಟು ತಿಂದು ಸೋತಿದ್ದರು. ವಕೀಲರೂ ಏಟು ತಿಂದು ಸೋತಿದ್ದರು. ಆದರೆ ಪೊಲೀಸರು ಗೆದ್ದಿದ್ದರು. ಅದೂ ಮಾಧ್ಯಮದವರ ಸಂಪೂರ್ಣ ಬೆಂಬಲದಿಂದ. ವಕೀಲರು ಹಾಗೂ ಮಾಧ್ಯಮದವರು ಇಬ್ಬರ ಕಾಟ ತಡೆಯಲಾರದೇ ಒಳಗೊಳಗೇ ಕುದಿಯುತ್ತಿದ್ದ ರಾಜಕಾರಣಿಗಳು, ಸಚಿವರು ಈಗ ಇಬ್ಬರ ಹೊಡೆದಾಟ ನೋಡಿ ಒಳಗೊಳಗೇ  ಮುಸಿಮುಸಿ ನಗುತ್ತಿದ್ದರು. ಈ ಖುಷಿಯಲ್ಲಿ ಮೊದಮೊದಲಿಗೆ ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಏನು ಹೇಳುವುದೇ ತೋಚದಾಗಿ ಏನೇನೋ ಹೇಳಿಕೆ ನೀಡತೊಡಗಿದ್ದರು. ಮಾಧ್ಯಮಗಳ ಒತ್ತಡ ಹೆಚ್ಚಿದಾಗಲಷ್ಟೇ ಅವರು ಮಾಧ್ಯಮದ ಪರವಾಗಿ ನಿಂತದ್ದು.

ನಂತರದಲ್ಲಿ ಇಡೀ ರಾಜ್ಯದ ಮಾಧ್ಯಮಗಳು ಒಂದಾದವು. ಪ್ರತಿಭಟಿಸಿದವು, ಸರ್ಕಾರವನ್ನು ಮಣಿಸಿದವು. ಹೋರಾಟ ನಡೆಸಿದವು.  ಅಪರಾಧವೆಸಗಿದ, ಎಸಗದ, ಹಲ್ಲೆಗೆ ಒಳಗಾದ ಅಮಾಯಕ, ಪ್ರಾಮಾಣಿಕ, ಎಲ್ಲಾ ವಕೀಲರನ್ನೂ ಯಾರಿಗೂ ಕೊಂಚವೂ ಮಾರ್ಜಿನ್ ಕೊಡದೇ ’ಗೂಂಡಾ ವಕೀಲರು’ ’ತಾಲಿಬಾನ್‌ಗಳು’, ಇತ್ಯಾದಿಯಾಗಿ ಜರಿದು ತಮ್ಮ ಮಾಧ್ಯಮ ಪ್ರಭಾವದಿಂದ ಎಲ್ಲಾ ವಕೀಲರನ್ನು ವಿಲನ್‌ಗಳಾಗಿ ಮಾಡಿಬಿಟ್ಟರು. ಇಡೀ ಪ್ರಕರಣದಲ್ಲಿ ವೃತ್ತಿಧರ್ಮಕ್ಕೆ ನಿಷ್ಟರಾಗಿ ನಿಷ್ಪಕ್ಷಪಾತವಾಗಿ ವರದಿ ಮಾಡಿದ್ದೆಂದರೆ ’ದ ಹಿಂದೂ’ ಮತ್ತು ಇತರ ಕೆಲವೇ ಪತ್ರಿಕೆಗಳು.

ಆದರೆ ಪಬ್ಲಿಕ್ ಮೆಮೊರಿ ತುಂಬಾ ಶಾರ್ಟ್. ಮತ್ತೆ ದಿನರಾತ್ರಿ ಟೀವಿಗಳು ನಡೆಸುವ ರಿಯಾಲಿಟಿ ಶೋಗಳ, ಬ್ರೇಕಿಂಗ್ ನ್ಯೂಸ್‌ಗಳ ಭರಾಟೆಯಲ್ಲಿ ಜನರು ಈ ಎರಡು ದಿನ ನಡೆದಿದ್ದೆಲ್ಲವನ್ನೂ ಮರೆತೇ ಬಿಡುತ್ತಾರೆ. ಈಗ ನಿಜಕ್ಕೂ ಮತ್ತೆ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುವುದು ಪತ್ರಕರ್ತರೇ.

ಈಗ ವಕೀಲರು ಸುಮ್ಮನೇ ಬಿಡುವ ಲಕ್ಷಣಗಳು ಕಾಣಿಸುತ್ತಿಲ್ಲ.  ಸಭೆಗಳ ಮೇಲೆ ಸಭೆಗಳಾಗುತ್ತಿವೆ.  ವಕೀಲರ ಸಂಘವೇ  ನಿರ್ಣಯಗಳನ್ನು ತೆಗೆದುಕೊಂಡಿದೆ. ಮಾಧ್ಯಮದ ಪಕ್ಷಪಾತದ ವಿರುದ್ಧ ಅವರು ರೊಚ್ಚಿಗೆದ್ದಿದ್ದಾರೆ.  ಪತ್ರಕರ್ತರ ಯಾವ ಕೇಸುಗಳನ್ನೂ ನಡೆಸಬಾರದು, ತಮ್ಮ ಬಗ್ಗೆ ಅವಾಚ್ಯವಾಗಿ ರೌಡಿಗಳು, ರೌಡಿ ವಕೀಲರು ಎಂದೆಲ್ಲಾ ದಿನವಿಡೀ ಕೂಗುತ್ತಿದ್ದ ಟಿವಿ ಚಾನಲ್‌ಗಳ ನಿರೂಪಕಿಯರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬೇಕು, ಪತ್ರಕರ್ತರ ಕುರಿತು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಕೇಸು ಜಡಿಯಬೇಕು ಎಂದೆಲ್ಲಾ ಚರ್ಚೆಗಳಾಗುತ್ತಿವೆ. ಇನ್ನು ರಾಜಕಾರಣಿಗಳ, ಭ್ರಷ್ಟರ ವಿರುದ್ಧ ಪತ್ರಕರ್ತರು ಬರೆದಾಗ ಕೇಸು ಹಾಕಿಸಿಕೊಂಡ ಪತ್ರಕರ್ತರು ವಕೀಲರನ್ನು ನೇಮಿಸಿಕೊಳ್ಳಬೇಕಾದಾಗ ಇದೇ ’ಗೂಂಡಾ’ ವಕೀಲರಿಗೇ ಕೈಕಾಲು ಹಿಡಿದು ದುಂಬಾಲು ಬೀಳಬೇಕಾದ ದುಸ್ಥಿತಿ ಬಂದೊದಗುವುದು ಎಷ್ಟು ಶೋಚನೀಯವಲ್ಲವೇ? ಇನ್ನು ರಾಜಕಾರಣಿಗಳು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದರೆ ಅವರ ಪರವಾಗಿ ಹೋಗುವ ಒಬ್ಬ ವಕೀಲ ಸಿಗುವುದೂ ದುಸ್ತರ. ಇಡೀ ಪ್ರಕರಣವನ್ನು ಏಕಮುಖವಾಗಿ ಹೇಳ ಹೊರಡುವ ಮುನ್ನ ಮಾಧ್ಯಮ ಮುಖ್ಯಸ್ಥರು ಕೊಂಚ ಆಲೋಚಿಸಬೇಕಿತ್ತಲ್ಲವೇ?

ಈಗ ಮಾಧ್ಯಮದವರನ್ನು ಬಳಸಿಕೊಂಡು ತಮ್ಮ ಬೇಳೆಕಾಳು ಬೇಯಿಸಕೊಂಡಿರುವ ಪೊಲೀಸರು ಮತ್ತು ರಾಜಕಾರಣಿಗಳು ಆಗ ಪತ್ರಕರ್ತರ ಬೆಂಬಲಕ್ಕೆ ನಿಲ್ಲುವ ಯಾವ ಸಾಧ್ಯತೆಯೂ ಇಲ್ಲ.

ಕೊನೆಗೊಂದು ಪ್ರಶ್ನೆ: ನೇರವಾಗಿ ಈ ಹಿಂದೆ ಸುವರ್ಣ ಸುದ್ದಿವಾಹಿನಿಯ ಮುಖ್ಯಸ್ಥರಾಗಿದ್ದವರಿಗೆ: 
ಈಗ ಟೀವಿ ವರದಿಗಾರರ ಮೇಲೆ ಹಲ್ಲೆಯಾಗಿದ್ದನ್ನು ಭಯಂಕರವಾಗಿ ವಿಶ್ಲೇಷಣೆಗೆ ತೊಡಗಿರುವ ನೀವು ಈ ಹಿಂದೆ ಬಳ್ಳಾರಿಯ ಗಣಿಕಳ್ಳರ ಗೂಂಡಾಗಳಿಂತ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಪ್ರಾಮಾಣಿಕ ವರದಿಗಾರ ಕುಮಾರ ರೈತರಿಗೆ ಆಸ್ಪತ್ರೆ ಖರ್ಚಿಗೆ ಹಣಕಾಸು ಬೆಂಬಲ ನೀಡುವುದಿರಲಿ ಕನಿಷ್ಟ ನೈತಿಕ ಸ್ಥೈರ್ಯವನ್ನೂ ಹೇಳದೇ ಕೊನೆಗೆ ಅವರ ಮೇಲೇ ಗೂಬೆ ಕೂರಿಸಿ ಅವರು ರಾಜಿನಾಮೆ ಕೊಡುವ ಪರಿಸ್ಥಿತಿ ಉಂಟು ಮಾಡಿದಿರಲ್ಲಾ ಆವಾಗ ನಿಮ್ಮ ವೃತ್ತಿಪ್ರೇಮ ಎಲ್ಲಿಹೋಗಿತ್ತು ಸ್ವಾಮಿ?

Tuesday, February 21, 2012

ನಂಬುವುದಾದರೆ ನಂಬಿ, ಪೈರಸಿ ಈಗ ಹೊಸ ಧರ್ಮ!


ಹೊಸ ಧರ್ಮವೊಂದು ಇದೀಗ ಅಸ್ತಿತ್ವ ಪಡೆದಿದೆ. ಸ್ವೀಡನ್ ದೇಶದ ಸರ್ಕಾರವು ಅದಕ್ಕೀಗ ಅಧಿಕೃತ ಮಾನ್ಯತೆಯನ್ನೂ ನೀಡಿದೆ. ೨೦೧೨ರ ಜನವರಿ ೫ ನೇ ತಾರೀಖಿನಂದು ಸ್ವೀಡನ್ ಸರ್ಕಾರವು ಆಧುನಿಕ ತಂತ್ರಜ್ಞಾನ ಕಾಲದಲ್ಲಿ ಆವಿರ್ಭವಿಸಿರುವ ಈ ಹೊಸ ಧರ್ಮವನ್ನು ಸಂವಿಧಾನಬದ್ಧಗೊಳಿಸಿದೆ. ಇದೀಗ ಈ ಹೊಸಧರ್ಮವನ್ನು ಪ್ರಚಾರಗೊಳಿಸುವ ದೃಷ್ಟಿಯಿಂದ ಒಂದು ಮಿಷನರಿ ಚರ್ಚ್ ಕೂಡಾ ಅಸ್ತಿತ್ವ ಪಡೆದಿದೆ. ಅಂದಹಾಗೆ ಈ ಹೊಸ ಧರ್ಮದ ಹೆಸರು ಕಾಪಿಮಿಸಂ ಅಥವಾ ಕಾಪಿಮಿ ಧರ್ಮ ಎಂದು.

ಈ ಕಾಪಿಮಿಸಂ ತತ್ವ ೨೦೧೦ರಲ್ಲೇ ಅಸ್ತಿತ್ವವನ್ನು ಪಡೆದಿತ್ತು. ಇದರ ಸಂಸ್ಥಾಪಕ ೧೯ ವರ್ಷದ ತತ್ವಶಾಸ್ತ್ರ ವಿದ್ಯಾರ್ಥಿ ಐಸಾಕ್ ಗೆರ್ಸನ್. ಈತ ಹಾಗೂ ಈ ಧರ್ಮದ ಇನ್ನಿತರ ಒಂದು ಸಾವಿರ ಸದಸ್ಯರು ಕಾಪಿಮಿ ಧರ್ಮವನ್ನು ಸಂವಿಧಾನಬದ್ಧಗೊಳಿಸಲು ಸತತವಾಗಿ ಪ್ರಯತ್ನಿಸಿದ್ದರೂ ಎರಡು ಸಲ ವಿಫಲವಾಗಿ ಅಂತಿಮವಾಗಿ ಈಗ ಯಶಸ್ವಿಯಾಗಿದ್ದಾರೆ. ಸ್ವೀಡನ್‌ನ ಸರ್ಕಾರಿ ಸಂಸ್ಥೆ ಕಮ್ಮಾರ್‌ ಕೊಲಿಜಿಯೆಟ್ ಈಗ ಕಾಪಿಮಿ ಎಂದು ಧರ್ಮ ಎಂದು ಮಾನ್ಯತೆ ನೀಡಿದೆ. ಈಗ ಈ ಧರ್ಮದ ಅಧಿಕೃತ ಸದಸ್ಯರು ಮೂರು ಸಾವಿರ.

ಧರ್ಮ ಎಂದಾಕ್ಷಣ ದೇವರು, ದಿಂಡಿರು, ಪ್ರಾರ್ಥನೆ, ಭಜನೆ ಮುಂತಾದವು ನಿಮ್ಮ ತಲೆಯಲ್ಲಿ ಬಂದಿದ್ದರೆ ಕ್ಷಮಿಸಿ. ಈ ಕಾಪಿಮಿ ಧರ್ಮವಾಗಲೀ ಅದರ ಮಿಷನರಿ ಚರ್ಚ್ ಆಗಲೀ ಇಂತಹ ಯಾವುದನ್ನೂ ಬೋಧಿಸುವುದಿಲ್ಲ, ಪ್ರತಿಪಾದಿಸುವುದೂ ಇಲ್ಲ. ಈ ಕಾಪಿಮಿ ಧರ್ಮದ ಸರಳ ತತ್ವಗಳು ಹೀಗಿವೆ.

* ಪ್ರತಿಯೊಬ್ಬರೂ ಜ್ಞಾನವಂತರಾಗಬೇಕು
* ಜ್ಞಾನಕ್ಕಾಗಿನ ಹುಡುಕಾಟ ಪವಿತ್ರವಾದದ್ದು
* ಒಬ್ಬರಿಂದ ಒಬ್ಬರಿಗೆ ಜ್ಞಾನದ ಪ್ರಸರಣ ಪವಿತ್ರ ಕಾರ್ಯ
* ಕಾಪಿ ಮಾಡುವ ಕ್ರಿಯೆ ಪವಿತ್ರವಾದದ್ದು
* ಮಾಹಿತಿ ಹಾಗೂ ಜ್ಞಾನದ ಸಂವಹನ ಪರಮ ಪವಿತ್ರವಾದದ್ದು.

ಈ ಹಿನ್ನೆಲೆಯಲ್ಲಿ ಕಾಪಿಮಿಸ್ಟ್ ಎಂದು ಕರೆಯಲ್ಪಡುವ ಈ ಮತಾನುಯಾಯಿಯು ಕೆಲವು ನಂಬಿಕೆಗಳನ್ನು ಹೊಂದಿರುತ್ತಾನೆ. ಅವೆಂದರೆ,
* ಯಾವುದೇ ಮಾಹಿತಿಯನ್ನು ಕಾಪಿ ಮಾಡುವುದು ನೈತಿಕವಾಗಿ ಸರಿಯಾದದ್ದು.
* ಯಾವುದೇ ಮಾಹಿತಿಯ ಪ್ರಸರಣವು ನೈತಿಕವಾಗಿ ಸರಿಯಾದ್ದು.
* ಕಾಪಿ ಮಾಡುವುದು ಅದನ್ನು ಹಂಚುವ (ಶೇರಿಂಗ್) ಕ್ರಿಯೆಗಳು ಉದಾತ್ತ ಕ್ರಿಯೆಗಳು.
* ಕಾಪಿಮಿಕ್ಸಿಂಗ್ ಎನ್ನುವುದು ಕಾಪಿ ಮಾಡುವುದರಲ್ಲೇ ಒಂದು ಪವಿತ್ರ ಕಾರ್ಯ. ಏಕೆಂದರೆ ಇದು ಮಾಹಿತಿಯ ಸಂಪತ್ತನ್ನು    ವಿಸ್ತಾರಗೊಳಿಸುತ್ತದೆ.
* ಒಬ್ಬ ವ್ಯಕ್ತಿಯಿಂದ ಪಡೆದ ಮಾಹಿತಿಯನ್ನು ಕಾಪಿ ಮಾಡುವುದು ಅಥವಾ ರಿಮಿಕ್ಸ್ ಮಾಡುವುದನ್ನು ಅತ್ಯಂತ ಗೌರವಪೂರಕವಾದ ಕಾರ್ಯವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದು ಕಾಪಿಮಿ ನಂಬಿಕೆಗೆ ಸಹಮತವನ್ನು ವ್ಯಕ್ತಪಡಿಸುವುದೆಂದು ಪರಿಗಣಿಸಲಾಗುತ್ತದೆ.
* ಅಂತರ್ಜಾಲವು ಪವಿತ್ರಕ್ಷೇತ್ರ.


 ಹಾಗೆಯೇ ಈ ಕಾಪಿಮಿ ಚರ್ಚ್‌ನ ಧಾರ್ಮಿಕ ಚಿನ್ಹೆ ಕಂಟ್ರೋಲ್ ಪ್ಲಸ್ ಸಿ ಮತ್ತು ಕಂಟ್ರೋಲ್ ಪ್ಲಸ್ ವಿ ((CTRL+C   ಮತ್ತು CTRL+V) . ಒಂದು ಕಾಪಿ ಮಾಡುವುದನ್ನು ಸೂಚಿಸಿದರೆ ಮತ್ತೊಂದು ಪೇಸ್ಟ್ ಮಾಡುವುದು! ಚರ್ಚ್ ಆಫ್ ಕಾಪಿಮಿಸಂ ಪ್ರಕಾರ ಮಾಹಿತಿ ಪವಿತ್ರ, ಮಾಹಿತಿಯನ್ನು ಕಾಪಿ ಮಾಡುವುದು ಒಂದು ಪವಿತ್ರ  ಸಂಸ್ಕಾರ, ಮಾಹಿತಿಯು ತನ್ನಷ್ಟಕ್ಕೆ ತನ್ನೊಳಗೆ ಒಂದು ಮೌಲ್ಯವನ್ನು ಹೊಂದಿರುತ್ತದೆ. ಕಾಪಿ ಮಾಡುವ ಮೌಲಕ ಆ ಮೌಲ್ಯವು ದ್ವಿಗುಣಗೊಳ್ಳುತ್ತದೆ. ಹೀಗಾಗಿ ಈ ಚರ್ಚ್‌ನ ಸಂಸ್ಥೆಗೆ ಮತ್ತು ಸದಸ್ಯರಿಗೆ ಕಾಪಿ ಮಾಡುವುದೇ ಕೇಂದ್ರವಾಗಿರುತ್ತದೆ ಎಂದು ಐಸಾಕ್ ಗೆರ್ಸನ್ ಹೇಳಿಕೆ ನೀಡಿದ್ದಾನೆ. ಈಗ ಸ್ವೀಡನ್‌ನಲ್ಲಿ ಕಾಪಿಮಿ ಚರ್ಚ್‌ನ ಪಾದ್ರಿಯಾದವನಿಗೆ ಇತರ ಚರ್ಚ್‌ಗಳ ರೀತಿಯಲ್ಲಿಯೇ ಗೌಪ್ಯವನ್ನು ಕಾಪಾಡಿಕೊಳ್ಳುವ ಎಲ್ಲಾ ಸಾಂವಿಧಾನಿಕ ಹಕ್ಕುಗಳೂ ಇವೆ.

ಇಡೀ ಜಗತ್ತಿನಲ್ಲಿ ತಂತ್ರಜ್ಞಾನದ ಮೂಲಕ ನಡೆಯುತ್ತಿರುವ ಪೈರಸಿ ಬಗ್ಗೆ ಹಿತಾಸಕ್ತ ಗುಂಪುಗಳು ಬೊಬ್ಬೆಹೊಡೆಯುತ್ತಿರುವ ಸಂದರ್ಭದಲ್ಲಿಯೇ ಹೀಗೊಂದು ಕಾಪಿಮಿ ಧರ್ಮವು ಅಧಿಕೃತವಾಗಿ ಅಸ್ತಿತ್ವ ಪಡೆದಿರುವುದು ಕುತೂಹಲಕಾರಿಯಾಗಿದೆ. ಅಮೆರಿಕವು ಇತ್ತೀಚೆಗೆ ಪೈರಸಿಯನ್ನು ತಡೆಗಟ್ಟಲು ಸೋಪಾ ಎನ್ನುವ ಕಾಯ್ದೆಯನ್ನು ಜಾರಿ ಮಾಡಿದೆ. ಹಲವಾರು ಸರ್ಕಾರಗಳು ಸಹ ಇಂತದೇ ಕಾನೂನುಗಳನ್ನು ತಂದು ಪೈರಸಿ ಮಾಡುವವರನ್ನು ಹತ್ತಿಕ್ಕುವ ಕಾರ್ಯ ರಭಸವಾಗಿ ನಡೆಯುತ್ತಿದೆ. ಅಂತರ್ಜಾಲವು ಕರುಣಿಸಿದ ಅವಕಾಶಗಳ ಕಾರಣದಿಂದಾಗಿ ಜಾಗತಿಕ ಮಟ್ಟದಲ್ಲಿ ಪೈರಸಿ ಎನ್ನುವುದು ತಡೆರಹಿತವಾಗಿ ಸಾಗುತ್ತಿದ್ದ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಉದ್ದಿಮೆಗಳು ಈ ಪೈರಸಿಯಿಂದ ಘಾಸಿಗೊಂಡಿದ್ದರಲ್ಲದೇ ಸರ್ಕಾರಗಳ ಮೇಲೆ ಒತ್ತಡ ತಂದು ಪೈರಸಿ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದ್ದರು. ಈ ಬಗೆಯ ಪೈರಸಿಯಿಂದಾಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ಹೊಂದುವ ಕೃತಿಸ್ವಾಮ್ಯಕ್ಕೆ (ಕಾಪಿರೈಟ್) ಧಕ್ಕೆಯಾಗುತ್ತದಲ್ಲದೆ ಯಾವುದೇ ಉತ್ಪನ್ನದ ತಯಾರಿಕರಿಗೆ ಅದರಿಂದ ಬರುವ ಲಾಭದ ಅವಕಾಶ ಕಡಿಮೆಯಾಗುತ್ತದೆ. ಹಾಗೆಯೇ ಇಂತಹ ಪೈರಸಿ ಯಾವುದೇ ಉತ್ಪನ್ನವನ್ನು ಕಂಡು ಹಿಡಿದವರ ಪ್ರತಿಭೆಯನ್ನು ಗೌಣಗೊಳಿಸುತ್ತದೆ ಎನ್ನುವುದು ಪೈರಸಿ ವಿರೋಧಿಗಳ ವಾದ.

ಈ ಮೇಲಿನ ವಾದದ ಬಗ್ಗೆ ಜಾಗತಿಕ ಮಟ್ಟದಲ್ಲಿ ಹಲವಾರು ಚರ್ಚೆಗಳು ನಡೆದಿವೆ.  ಕಾಪಿರೈಟ್ ತತ್ವಕ್ಕೆ ವಿರುದ್ಧವಾಗಿ ಕಾಪಿಲೆಫ್ಟ್ ತತ್ವವೂ ಜಾರಿಯಲ್ಲಿದೆ. ಅಂತರ್ಜಾಲದಲ್ಲಿ ಏಕಸ್ವಾಮ್ಯವನ್ನು ವಿರೋಧಿಸುವ ನಿಟ್ಟಿನಲ್ಲಿ ಈ ಕಾಪಿಲೆಫ್ಟ್ ತತ್ವಾನುಯಾಯಿಗಳು ಕೆಲವಾರು ಉಚಿತ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದೊಂದು ಬಗೆಯ ಆಂದೋಲನವಾಗಿಯೇ ಇದೆ.

ಇಂತಹ ಜಾಗತಿಕ ಮಟ್ಟದ ಆಂದೋಲನಕ್ಕೆ ಈಗ ಹೊಸ ಸೇರ್ಪಡೆಯಾಗಿರುವುದು ಕಾಪಿಮಿ ಮತ. ಈ ಕಾಪಿಮಿ ಮತಾನುಯಾಯಿಗಳು ತಮ್ಮ ಮತದ ಸಮರ್ಥನೆಗೆ ಬೈಬಲ್‌ನಲ್ಲಿನ ಒಂದು ಪದಪುಂಜವನ್ನು ಬಳಸಿಕೊಳ್ಳುತ್ತಿದ್ದಾರೆ. ಅದು ಹೀಗಿದೆ.

ನಾನು ಏಸುವನ್ನು ಹೇಗೆ ಕಾಪಿ ಮಾಡುತ್ತೇನೋ ಹಾಗೆಯೇ ನನ್ನನ್ನು ಕಾಪಿ ಮಾಡಿ, ನನ್ನ ಸಹೋದರರೇ(Copy me, my brothers, just as I copy Christ himself — 1 Corinthians 11:1) ಜಗತ್ತಿನ ಯಾವುದೇ ಮಾಹಿತಿಯನ್ನು ಯಾರೂ ಸಹ ನಿರ್ಬಂಧಿಸುವುದು ಸರಿಯಲ್ಲ; ಎಲ್ಲಾ ಮಾಹಿತಿಯೂ ತಡೆರಹಿತವಾಗಿ, ಮುಕ್ತವಾಗಿ ಪ್ರಸಾರ ಹೊಂದಬೇಕು ಎನ್ನುವುದು ಕಾಪಿಮಿ ತತ್ವದ ಸಾರಾಂಶ. ಅದು ಯಾವುದೇ ಸ್ವರೂಪದಲ್ಲಿರಲಿ ಜ್ಞಾನದ ಖಾಸಗೀಕರಣವನ್ನು, ಏಕಸ್ವಾಮ್ಯವನ್ನು ಕಾಪಿಮಿ ವಿರೋಧಿಸುತ್ತದೆ. ಹೀಗಾಗಿಯೇ ಅದು ಸಂಗೀತ, ಸಿನಿಮಾ, ಟಿವಿ ಷೋ, ಸಾಫ್ಟ್‌ವೇರ್ ಇನ್ನಿತರೆ ಯಾವುದೇ ಮಾಧ್ಯಮದ ಪೈರಸಿಯನ್ನು ಕಾಪಿಮಿ ಪ್ರೇರೇಪಿಸುತ್ತದೆ. ನಾವು ಕಾಪಿರೈಟ್‌ನಲ್ಲಿ ನಂಬಿಕೆಯಿಟ್ಟವರಿಗೆ ಸವಾಲೊಡ್ಡಲಿದ್ದೇವೆ, ಇಂದು ಈ ಕಾಪಿರೈಟ್ ಬೆಂಬಲಿಗರು ರಾಜಕೀಯದಲ್ಲಿ ಬಹಳ ಪ್ರಭಾವವುಳ್ಳವರಾಗಿದ್ದಾರಲ್ಲದೇ, ಅವರು ಜನರ ಬದುಕು ಮತ್ತು ಸ್ವಾತಂತ್ರ್ಯಗಳನ್ನು ನಿರ್ಬಂಧಿಸುವ ಮೂಲಕವೇ ತಮ್ಮ ಅಧಿಕಾರವನ್ನು ಸ್ಥಾಪಿಸಿಕೊಂಡಿದ್ದಾರೆ. ಅವರೆಲ್ಲಾ ಜ್ಞಾನವನ್ನು ಸೀಮಿತಗೊಳಿಸಲು ಹೊರಟಿದ್ದಾರೆ. ಅಂತವರ ದ್ವೇಷ ಮತ್ತು ಆಕ್ರಮಣಗಳನ್ನು ನಾವು ಎದುರಿಸಬೇಕಾಗಿದೆ. ಕಾಪಿ, ಡೌನ್‌ಲೋಡ್, ಅಪ್‌ಲೋಡ್!, ಎಲ್ಲರಿಗೂ ಎಲ್ಲಾ ಜ್ಞಾನ ಲಭಿಸಲಿ! ಮಾಹಿತಿ ತಂತ್ರಜ್ಞಾನವಿರುವುದು ಕಾನೂನಿನಿಂದ ನಿರ್ಬಂಧಿಸಲು ಅಲ್ಲ ಎಂದು ಈಗ ಕಾಪಿಮಿಸ್ಟ್‌ಗಳು ಘಂಟಾಘೋಷವಾಗಿ ಸಾರುತ್ತಿದ್ದಾರೆ.

ಮನುಷ್ಯನ ಜ್ಞಾನದ ಮೇಲೆ ಹಕ್ಕು ಚಲಾಯಿಸಲು ಹೊರಟಿದ್ದಾಗಲೀ, ಕಾಪಿರೈಟ್‌ನಂತಹ ಪರಿಕಲ್ಪನೆಗಳು ಬಂದಿದ್ದೇ ಕೈಗಾರಿಕಾ ಕ್ರಾಂತಿಯ ನಂತರದಲ್ಲಿ. ಎಲ್ಲವನ್ನೂ ಲಾಭದ ದೃಷ್ಟಿಯಿಂದಲೇ ನೋಡಲು ಶುರುವಾದದ್ದೇ ಜ್ಞಾನವನ್ನೂ ಲಾಭಕ್ಕಾಗಿ ಬಳಸಿಕೊಳ್ಳಲಾಯಿತು. ಇಂದು ನಾವು ಯಾವುದೇ ಜ್ಞಾನವನ್ನು ತೆಗೆದುಕೊಂಡರೂ ಅದು ಒಬ್ಬ ವ್ಯಕ್ತಿಯಿಂದ ಬಂದಿರುವುದಾಗಿರುವುದಿಲ್ಲ. ಒಬ್ಬ ವ್ಯಕ್ತಿಯೂ ಪ್ರತಿಭೆಯೂ ಕೂಡಾ ಸಮಾಜದ ಕೊಡುಗೆಯೇ ಅಗಿದೆ. ಪ್ರಪಂಚದ ಎಲ್ಲಾ ಜ್ಞಾನವೂ ಸಾಮೂಹಿಕ ಸೃಷ್ಟಿಯೇ ಅಲ್ಲವೇ? ಯಾವುದೇ ಒಂದು ಸಾಧನೆಯಲ್ಲಿ ಒಬ್ಬ ವ್ಯಕ್ತಿಯ ವಿಶೇಷ ಪ್ರಯತ್ನಗಳು ಖಂಡಿತಾ ಇರುತ್ತದೆ. ಆದರೆ ಹಾಗಂತ ಆ ವ್ಯಕ್ತಿ ತನಗಿರುವ ಪ್ರತಿಭೆಯನ್ನೆಲ್ಲಾ ತನ್ನದೇ ಸ್ವತ್ತು ಎಂದು ಹೇಳುವುದು ಆತನಿಗಿರುವ ಸ್ವಾರ್ಥ ಭಾವನೆಯಿಂದ ಮಾತ್ರ. ಜಗತ್ತಿನ ಎಲ್ಲಾ ಮಾಹಿತಿ, ಜ್ಞಾನ ಪ್ರತಿಭೆಗಳೂ ಸಹ ಮನುಕುಲದ ಸಾಮೂಹಿಕ ಶ್ರಮದ ಉತ್ಪನ್ನಗಳು ಎಂದು ಪರಿಣಿಸಿದಾಗ ಕಾಪಿರೈಟ್ ಎನ್ನುವುದು ಕೆಲವೇ ಜನರ ಲಾಭಕ್ಕಾಗಿ ಹುಟ್ಟಿಕೊಂಡ ತತ್ವ ಎಂದು ತೋರುತ್ತದೆ. ಈ ನಿಟ್ಟಿನಲ್ಲಿ ವಾದಿಸುವ ಕಾಪಿಮಿ ಅತ್ಯಂತ ಕ್ರಾಂತಿಕಾರಿಯಾಗಿ ಕಾಣುತ್ತದೆ.

ಜಗತ್ತಿನ ಚರಿತ್ರೆಯಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಅಥವಾ ಗುಂಪಿನ ಮೇಲೆ ದಿಗ್ಭಂಧನ, ದಮನಗಳು ಹೆಚ್ಚಿದಾಗ  ಆ ಗುಂಪು ಧರ್ಮದ ಆಸರೆ ಪಡೆದಿರುವುದನ್ನು ಕಾಣುತ್ತೇವೆ. ಅಂತರ್ಜಾಲದಲ್ಲಿ ಪೈರಸಿಯನ್ನು ಪ್ರಚೋದಿಸುವವರ ಮೇಲೆ ಸರ್ಕಾರಗಳು ಈಗಾಗಲೇ ದಮನವನ್ನಾರಂಭಿಸಿದ್ದೇ ಅಲ್ಲದೆ ಅಂತವರನ್ನು ಜೈಲಿಗಟ್ಟುವ ಕ್ರಿಯೆಯೂ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಅಂತಹ ದಮನಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಈಗ ಸ್ವೀಡನ್‌ನ ಯುವಕರು ಈಗ ತಮ್ಮ ಕೃತ್ಯಗಳಿಗೆ ತತ್ವಶಾಸ್ತ್ರದ ಆಸರೆ ಪಡೆದು ಅದನ್ನೊಂದು ಪ್ರತ್ಯೇಕ ಧರ್ಮವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಕಾಪಿಮಿಸ್ಟರು ತಮ್ಮ ಧರ್ಮವು ಕಾನೂನು ಬಾಹಿರ ಕೃತ್ಯಗಳನ್ನು ಬೆಂಲಿಸುವುದಿಲ್ಲ ಎಂದೂ ಹೇಳಿದ್ದಾರೆ.

ಅಂತರ್ಜಾಲದ ದೆಸೆಯಿಂದ ಪೈರಸಿ ಎನ್ನುವುದು ಜಗತ್‌ವ್ಯಾಪಿಯಾಗಿರುವ ಹಿನ್ನೆಲೆಯಲ್ಲಿ ಈ ತತ್ವಕ್ಕೆ ಮುಂದಿನ ದಿನಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿ ಇತರೆ ದೇಶಗಳಲ್ಲಿಯೂ ಇಂತಹುದೇ ಧರ್ಮಗಳು ಸ್ಥಾಪನೆಯಾದರೂ ಅಚ್ಚರಿಯಿಲ್ಲ.

-ಶಿವಪುತ್ರ.ಪಿ.ಆರ್.

Saturday, February 18, 2012

ಸೆಕ್ಸ್ ವಿಡಿಯೋ ವೀಕ್ಷಣೆ; ನಿಷ್ಪಕ್ಷಪಾತ ವರದಿ ಬರಬಹುದೇ?


ಅಶ್ಲೀಲ ಚಿತ್ರ ವೀಕ್ಷಿಸಿದ ಮೂವರು ಮಾಜಿ ಸಚಿವರುಗಳ ಕುರಿತಂತೆ ಸದನ ಸಮಿತಿ ನೇಮಕವಾಗಿದೆ. ಬಿಜೆಪಿಯ ಹಿರಿಯ ಮುಖಂಡರ ಹೇಳಿಕೆಗಳನ್ನು ಗಮನಿಸಿದರೆ, ಸಮಿತಿಯ ವರದಿಯ ಏನಾಗಿರಬಹುದು ಎಂಬುದು ಈಗಲೇ ಗೊತ್ತಾಗುತ್ತಿದೆ. ಅಶ್ಲೀಲ ಚಿತ್ರ ವೀಕ್ಷಣೆಯ ಘಟನೆಗಿಂತ ಅದರ ಕುರಿತು ತೀರ್ಮಾನವೇ ಘೋರವಾಗಿರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮೌನಕಣಿವೆ ಬ್ಲಾಗ್‌ನ ಉಷಾ ಕಟ್ಟೆಮನೆ ಬರೆದಿರುವ ಪ್ರತಿಭಟನೆಯ ಲೇಖನ ಇಲ್ಲಿದೆ. ಜನರ ಆತ್ಮಸಾಕ್ಷಿಯನ್ನೇ ನಡುಬೀದಿಯಲ್ಲಿ ಹರಾಜು ಹಾಕುವಂಥದ್ದು ನಡೆಯಕೂಡದು ಎಂಬ ಆಶಯ ಅವರ ಲೇಖನದಲ್ಲಿದೆ. ಸಂಪಾದಕೀಯದ ಓದುಗರಿಗಾಗಿ ಈ ಬರೆಹ ಇಲ್ಲಿದೆ.
-ಸಂಪಾದಕೀಯ

‘ಅಶ್ಲೀಲ ಚಿತ್ರ ವೀಕ್ಷಣೆ ಪ್ರಕರಣದಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಹೀಗಾಗಿ ಈ ಕೃತ್ಯ ಎಸಗಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ, ವಿಧಾನಸಭೆಯಲ್ಲಿ ಬ್ಲೂಫಿಲ್ಮ್ ವೀಕ್ಷಿಸಿದವರು ಸದನಕ್ಕೆ ಬಂದರೆ ನಾನು ಒಂದು ಕ್ಷಣವೂ ಸ್ಪೀಕರ್ ಕುರ್ಚಿಯ ಮೇಲೆ ಕೂರುವುದಿಲ್ಲ. ಯಾರನ್ನು ಬೇಕಾದರೂ ಕೂರಿಸಿಕೊಳ್ಳಿ, ರಾಜಿನಾಮೆ ಕೊಟ್ಟು ಇಲ್ಲಿಂದಲೇ ಹೊರಟೆ ಹೀಗೆಂದು ಸರ್ಕಾರದ ಪ್ರಮುಖರಿಗೆ ಫೆ.೯ರಂದು ಎಚ್ಚರಿಕೆಯನ್ನು ಕೊಟ್ಟಿದ್ದರು ಕೊಡಗಿನ ವೀರಪುತ್ರ ಸ್ಪೀಕರ್ ಕೆ.ಜಿ. ಬೋಪಯ್ಯನವರು.
ಅವರಿಗೆ ಒತ್ತಡ ಹೇರಲು ಪ್ರಯತ್ನಿಸಿದವರು ಹಾಲಿ ಸಿಎಂ ಸದಾನಂದಗೌಡ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿಯ ರಾಜ್ಯಧ್ಯಕ್ಷ ಈಶ್ವರಪ್ಪ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ ಕುಮಾರ್.

ಸ್ಪೀಕರ್ ಹೀಗೆ ಹೇಳಲು ಕಾರಣವಾಗಿದ್ದು ಫೆ. ೭ರಂದು ವಿಧಾನ ಸಭೆಯಲ್ಲಿ ಅಧಿವೇಶನ ನಡೆಯುತ್ತಿರುವಾಗಲೇ ಸಹಕಾರ ಸಚಿವರಾಗಿದ್ದ ಲಕ್ಷಣ ಸವದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಸಿ.ಸಿ. ಪಾಟೀಲ್ ತಮ್ಮ ಮೊಬೈಲ್‌ಗಳಲ್ಲಿ ಸೆಕ್ಸ್ ವಿಡಿಯೋವನ್ನು ನೋಡಿ ಎಂಜಾಯ್ ಮಾಡುತ್ತಿದ್ದದ್ದು.. ಮತ್ತು ಆ ವಿಡಿಯೋವನ್ನು ಅವರ ಮೊಬೈಲ್‌ಗೆ ಎಂಎಂಎಸ್ ಮಾಡಿದ ಕೃಷ್ಣ ಪಾಲೆಮಾರ್ ಅವರ ನಡವಳಿಕೆಗಳು. ಅಂತಹ ಸಚಿವರ ಬಗ್ಗೆ ಮೃದು ಧೋರಣೆಯನ್ನು ತಳೆಯುವಂತೆ ಒತ್ತಾಯಿಸಲು ಸ್ಪೀಕರ್ ಬೋಪಯ್ಯನವರ ಬಳಿಗೆ ಈ ಮಹನೀಯರು ತೆರಳಿದ್ದರು. ಅದಕ್ಕವರು ಮೇಲಿನಂತೆ ಪ್ರತಿಕ್ರಿಯಿಸಿದ್ದರು.

ಅವರ ರಾಜಿನಾಮೆ ಬೆದರಿಕೆಯ ಪ್ರತಿಕ್ರಿಯೆಗೆ ತೂಕವಿಲ್ಲವೆಂಬುದು ಎಲ್ಲರಿಗೂ ಗೊತ್ತಿದೆ. ಯಾಕೆಂದರೆ ಹಿಂದೆ ಐದು ಪಕ್ಷೇತರ ಶಾಸಕರ ಅನರ್ಹತೆ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ಸ್ಪೀಕರಿಗೆ ಛೀಮಾರಿ ಹಾಕಿ ಆ ಶಾಸಕರನ್ನು ಅರ್ಹರೆಂದು-ಸ್ಪೀಕರ್ ತೀರ್ಪಿಗೆ ವಿರುದ್ಧವಾಗಿ- ತೀರ್ಪು ನೀಡಿತ್ತು. ಆ ಸಂದರ್ಭದಲ್ಲಿ ಆತ್ಮಸಾಕ್ಷಿ ಉಳ್ಳ ಯಾರೇ ಆಗಿದ್ದರೂ ರಾಜಿನಾಮೆ ಕೊಡುತ್ತಿದ್ದರು. ಆದರೆ ಅವರು ಹಾಗೆ ಮಾಡಿರಲಿಲ್ಲ.

ನಿಜ, ವಿಧಾನಸಭೆಯೆಂಬುದು ಸ್ಪೀಕರ್ ಕಾರ್ಯಕ್ಷೇತ್ರ. ಅಲ್ಲಿ ಅವರೇ ಸರ್ವೋಚ್ಛ. ಅವರು ನ್ಯಾಯಾಧೀಶರಿದ್ದಂತೆ. ಅವರು ಕೈಗೊಳ್ಳುವ ತೀರ್ಮಾನಗಳು ನ್ಯಾಯಾಧೀಶರು ನೀಡುವ ತೀರ್ಪುಗಳಿದ್ದಂತೆ. ಅಲ್ಲಿ ಸದನದ ಘನತೆಗೆ ಕುಂದು ತರುವಂತಹ ಅನ್ ಪಾರ್ಲಿಮೆಂಟರಿ ಪದಗಳನ್ನು ಬಳಸುವಂತಿಲ್ಲ. ಒಂದು ವೇಳೆ ಅಕಸ್ಮತ್ತಾಗಿ ಬಳಸಿದರೆ, ಬಳಸಿದವರು ಅದಕ್ಕಾಗಿ ಕ್ಷಮೆ ಯಾಚಿಸಿ ಅಂತಹ ಪದಗಳನ್ನು ಕಡತದಿಂದ ತೆಗೆದು ಹಾಕುವುದು ಅಲ್ಲಿಯ ನಿಯಮ. ಈಗ ಪದದ ಜಾಗದಲ್ಲಿ ಘಟನೆ ನಡೆದಿದೆ. ಈಗ ಏನು ಮಾಡಬೇಕು.?

ವಿಧಾನಸಭೆಯ ಆವರಣದೊಳಗೆ ಪೋಲಿಸರಿಗೂ ಪ್ರವೇಶವಿಲ್ಲ. ಪೋಲಿಸರು ಮಾಡುವ ಕೆಲಸವನ್ನು ಅಲ್ಲಿ ಬಿಳಿ ಸಮವಸ್ತ್ರವನ್ನು ತೊಟ್ಟ ಮಾರ್ಶಲ್ ಮತ್ತು ಅವರ ಸಿಬ್ಬಂದಿಗಳು ಮಾಡುತ್ತಾರೆ. ಮೊನ್ನೆ ಫೆ.೩ರಂದು ಸ್ಪೀಕರ್ ವಿರುದ್ಧ ಪ್ರತಿಭಟನೆ ಮಾಡಿದ ಗೂಳಿ ಹಟ್ಟಿ ಶೇಖರ್ ಅವರನ್ನು ಸದನದಿಂದ ಮಾರ್ಷಲ್‌ಗಳು ಹೊರಗೆ ಕರೆದುಕೊಂಡು ಹೋದ ದೃಶ್ಯವನ್ನು ಒಮ್ಮೆ ನೆನಪಿಸಿಕೊಳ್ಳಿ.

ವಕೀಲ ಧರ್ಮಪಾಲ ಗೌಡರೆಂಬವರು ಈ ಮೂವರು ಕಳಂಕಿತ ಮಾಜಿ ಸಚಿವರ ವಿರುದ್ಧ ಖಾಸಗಿ ದೂರನ್ನು ಕೊಟ್ಟಾಗ ವಿಚಾರಣೆಗೆ ಮುಂದಾದ ೮ನೇ ಎಸಿಎಂಎಂ ನ್ಯಾಯಾಲಯದೆದುರು ಪೋಲಿಸರು ಹೇಳಿದ್ದು ಇದನ್ನೇ ಸದನದ ಒಳಗೆ ಪೋಲಿಸರಿಗೆ ಪ್ರವೇಶ ನಿಷಿದ್ಧ. ಸ್ಪೀಕರ್ ಅನುಮತಿ ಇಲ್ಲದೆ ಸಚಿವರನ್ನು ನಾವು ಪ್ರಶ್ನಿಸುವಂತಿಲ್ಲ ಹಾಗಾಗಿ ಮಾಜಿ ಸಚಿವರ ಮೇಲೆ ಮೊಕದ್ದಮೆಯನ್ನು ದಾಖಲಿಸಿಕೊಳ್ಳಲು ಪೋಲಿಸರಿಗೆ ಸಾಧ್ಯವಾಗಿಲ್ಲ.

ಸ್ಪೀಕರ್ ಮನಸ್ಸು ಮಾಡಿದ್ದರೆ ತಮ್ಮ ವಿವೇಚನೆಯನ್ನು ಬಳಸಿ ಸದನದ ಘನತೆ ಗೌರವಗಳನ್ನು ಮಣ್ಣು ಪಾಲು ಮಾಡಿದ, ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಮಾನವನ್ನು ಹರಾಜು ಹಾಕಿದ, ಮೇಲ್ನೋಟಕ್ಕೆ ತಪ್ಪಿತಸ್ಥರೆಂದು ಕಂಡ ಆ ಮೂವರು ಕಳಂಕಿತ ಶಾಸಕರ ಶಾಸಕತ್ವವನ್ನು ರದ್ದುಗೊಳಿಸಬಹುದಿತ್ತು ಆದರೆ ಅವರು ಹಾಗೆ ಮಾಡಲಿಲ್ಲ. ಆ ಸಚಿವರೇನೂ ಶಾಸನ ಸಭೆಗೆ ಹೊಸತಾಗಿ ಚುನಾಯಿತರಾದವರಲ್ಲ. ಆ ಸ್ಥಾನದ ಪಾವಿತ್ರ್ಯತೆಯನ್ನು ಅರಿತವರೇ ಆಗಿದ್ದಾರೆ. ಹಾಗಿರುವಾಗ ಅವರ ಬಗ್ಗೆ ಮೃದು ಧೋರಣೆ ತಳೆದದ್ದು ಎಷ್ಟರ ಮಟ್ಟಿಗೆ ಸರಿ?

ಇಂಥ ಜವಾಬ್ದಾರಿಯುತ, ಪವಿತ್ರ ಸ್ಥಾನದಲ್ಲಿ ಎಂತೆಂಥ ಮಹನೀಯರು, ಘನತೆವೆತ್ತವರು ಕುಳಿತಿದ್ದರು ಎಂಬುದನ್ನೊಮ್ಮೆ ಜ್ಞಾಪಿಸಿಕೊಳ್ಳಿ; ವೈಕುಂಠ ಬಾಳಿಗಾ, ಕೆ.ಎಚ್. ರಂಗನಾಥ್, ರಮೇಶ್ ಕುಮಾರ್ ಅಂತವರ ಜೊತೆ ಯಡಿಯೂರಪ್ಪನವರ ಲೌಡ್ ಸ್ಪೀಕರ್ ಎಂಬ ಆರೋಪ ಹೊತ್ತಿರುವ ಬೋಪಯ್ಯನವರನ್ನು ಹೋಲಿಸಿ ನೋಡಿ.

ಆಗ ಗೊತ್ತಾಗುತ್ತದೆ ಈ ಕೊಡಗಿನ ಕಲಿಯ ಮಾತಿನಲ್ಲಿ ತೂಕವಿದೆಯೇ ಎಂದು. ಅವರ ಗುಡುಗು ಟುಸ್ ಎಂಬುದು ಸದನ ಸಮಿತಿಯ ರಚನೆಯಲ್ಲೇ ಬಹಿರಂಗಗೊಂಡಿದೆ.

ಸದನದಲ್ಲಿ ಸೆಕ್ಸ್ ಸಿಡಿ ವೀಕ್ಷಣೆ ಪ್ರಕರಣದ ಸತ್ಯಾಸತ್ಯತೆಯನ್ನು ಅರಿಯಲು ಅವರು ರಚಿಸಿದ ಸದನ ಸಮಿತಿಯನ್ನು ನೋಡಿ; ಅಧ್ಯಕ್ಷರು ಬಿಜೆಪಿಯ ಶ್ರೀಶೈಲಪ್ಪ ವಿರೂಪಾಕ್ಷಪ್ಪ ಬಿದನೂರು. ಸದಸ್ಯರು, ಬಿಜೆಪಿಯ ಎಸ್.ಆರ್.ವಿಸ್ವನಾಥ್, ಬಿ.ಸುರೇಶ್ ಗೌಡ, ನೆಹರೂ ಓಲೆಕಾರ್ ಮತ್ತು ಕಾಂಗ್ರೆಸ್‌ನ ಅಮರೇಗೌಡ ಬಯ್ಯಾಪುರ, ಡಾ.ಎಚ್.ಸಿ ಮಹಾದೇವಪ್ಪ ಮತ್ತು ಜೆಡಿಎಸ್‌ನ ದಿನಕರ್ ಶೆಟ್ಟಿ.

ಅಧ್ಯಕ್ಷರಾದ ಶ್ರೀ ಶೈಲಪ್ಪ ಬಿದನೂರು ಅವರು ಎಂದೂ ಸದನದಲ್ಲಿ ಮಾತಾಡಿದವರೇ ಅಲ್ಲ. ಈ ಪ್ರಕರಣದಲ್ಲಿ ಅವರ ಸ್ಟ್ಯಾಂಡ್ ಏನಿದ್ದರೂ ಅದು ಬಸ್ ಸ್ಟ್ಯಾಂಡೇ ಇದ್ದೀತು. ಸುರೇಶ ಗೌಡರಂತೂ ಬಿಜೆಪಿ ಅಸ್ಥಾನದ ಹೊಗಳುಭಟ. ನೆಹರು ಓಲೆಕಾರ ಮತ್ತು ಎಸ್.ಅರ್.ವಿಶ್ವನಾಥರ ಬಗ್ಗೆ ಲೋಕಕ್ಕೇ ತಿಳಿದಿದೆ. ಇನ್ನು ಜೆಡಿಎಸ್‌ನ ದಿವಾಕರ ಶೆಟ್ಟಿ ಪಾಪದವರು. ಕಾಂಗ್ರೆಸ್‌ನ ಎಚ್.ಸಿ ಮಹಾದೇವಪ್ಪ ಇದೇ ಕೆಟಗೆರಿಗೆ ಸೇರಿದವರು. ಒಳ್ಳೆತನ ನಿಷ್ಠುರ ತನಿಖೆಗೆ ಸಹಾಯಕವಾಗಲಾರದು. ಹಾಗಾಗಿ ಸದನ ಸಮಿತಿ ತನಿಖೆ ಹಳ್ಳ ಹಿಡಿಯುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ನಡುವೆ ಕಾಂಗ್ರೆಸಿನ ಎಚ್.ಸಿ ಮಹಾದೇವಪ್ಪ ಮತ್ತು ಅಮರೇ ಗೌಡ ಬೈಯ್ಯಾಪುರ ಅವರು ತಾವು ಸದನ ಸಮಿತಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಬಹುಶಃ ವಿರೋಧ ಪಕ್ಷಗಳಿಂದ ಇಂಥ ಅಸಹಕಾರವನ್ನು ಸ್ಪೀಕರ್ ಮೊದಲೇ ನಿರೀಕ್ಷಿಸಿರಬೇಕು. ಇಲ್ಲವಾದರೆ ಏಳು ಮಂದಿ ಇರುವ ಸದನ ಸಮಿತಿಯಲ್ಲಿ ಆಡಳಿತ ಪಕ್ಷದ ನಾಲ್ಕು ಮಂದಿ ಸದಸ್ಯರಿರುವಾಗ ವಿರೋಧ ಪಕ್ಷದ ಸಮರ್ಥ ವ್ಯಕ್ತಿಯೊಬ್ಬರನ್ನು ಅಧ್ಯಕ್ಷರನ್ನು ಮಾಡಬೇಕಾಗಿತ್ತು. ಅವರು ಹಾಗೆ ಮಾಡಲಿಲ್ಲ. ಘಟನೆ ನಡೆದ ಫೆ.೭ರಿಂದ ಸಮಿತಿ ನೇಮಿಸಿದ ಫೆ.೧೬ ರ ನಡುವೆ ಬೋಪಯ್ಯನವರ ಹುಟ್ಟಿದೂರಿನ ಕಾವೇರಿನದಿಯಿಂದ ತಮಿಳುನಾಡಿಗೆ ಸಾಕಷ್ಟು ನೀರು ಹರಿದು ಹೋಗಿದೆ.

ಇಂಥ ಸಮಿತಿ ಎಂಥ ವರದಿ ನೀಡಬಹುದು? ರಾಜಕಾರಣಿಗಳಿಗೀಗ ಮಾಧ್ಯಮ ತಮ್ಮ ಪರಮ ವೈರಿಯಂತೆ ಕಾಣಿಸುತ್ತಿದೆ. ಹಾಗಾಗಿ ಎಲ್ಲರೂ ಸೇರಿ ಮಾಧ್ಯಮದ ವರದಿಗಾರಿಕೆಯ ಮೇಲೆ ನಿಯಂತ್ರಣ ಹೇರುವ ಬಗ್ಗೆ ಷಡ್ಯಂತರ ರೂಪಿಸಿ ನೀತಿ ನಿಯಾಮಾವಳಿಗಳ ಪಟ್ಟಿಯನ್ನು ನೀಡಬಹುದೇ ಹೊರತು ಮಾಜಿ ಸಚಿವರ ಬಗ್ಗೆ ಕ್ರಮ ಕೈಗೊಳ್ಳುವ ಸೂಚನೆಯಂತೂ ಸದ್ಯದ ಪರಿಸ್ಥಿಯಲ್ಲಿ ಕಾಣುತ್ತಿಲ್ಲ. ಇದಕ್ಕೆ ಬಲವಾದ ಸಾಕ್ಷಿ ಎಂದರೆ ಮೊನ್ನೆ ಚಿಕ್ಕಮಗಳೂರಿನಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ ಮಾತುಗಳು; ಅಲ್ಲಿ ಅವರು; ವಿಧಾನ ಮಂಡಲ ಕಲಾಪಗಳನ್ನು ಖಾಸಗಿ ವಾಹಿನಿಗಳು ನೇರವಾಗಿ ಸೆರೆ ಹಿಡಿದು ಪ್ರಸಾರ ಮಾಡುವುದನ್ನು ನಿರ್ಬಂಧಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ ಎಂದು ಹೇಳಿದ್ದು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಂತೂ ಕಳಂಕಿತರನ್ನು ಸಮರ್ಥಿಸಿಕೊಂಡ ಪರಿ ನೋಡಿ; ಲಕ್ಷಣ ಸವದಿ ಮತ್ತು ಸಿ.ಸಿ ಪಾಟೀಲ್ ಅತ್ಯುತ್ತಮ ಸಚಿವರಾಗಿದ್ದರು. ಕೃಷ್ಣ ಪಾಲೇಮಾರ್ ಸಹ ಒಳ್ಳೆಯ ಕೆಲಸ ಮಾಡಿದ್ದರು. ತಿಂಗಳಲ್ಲಿ ಸತ್ಯ ಹೊರ ಬೀಳಲಿದೆ. ಈ ಘಟನೆ ಮಾಧ್ಯಮಗಳ ಸೃಷ್ಟಿ. ನಿಜವಾದ ಅಪರಾಧಿ ಯಾರು ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ. ಮೂವರು ಮಾಜಿ ಸಚಿವರಿಗೂ ಅವರ ಕ್ಷೇತ್ರದಲ್ಲಿ ಯಾವ ತೊಂದರೆಯೂ ಆಗುವುದಿಲ್ಲ. ಅವರ ಗ್ರಹಚಾರ ಸರಿ ಇರಲಿಲ್ಲ. ಕೆಟ್ಟ ಕಾಲ ಅಷ್ಟೇ ಎಂದು ಅವರು ಮಂಗಳೂರಿನಲ್ಲಿ ಹೇಳಿದ್ದಾರೆ.

ಇನ್ನು ಪಕ್ಷದ ಅಧ್ಯಕ್ಷ ಈಶ್ವರಪ್ಪನವರ ಆತ್ಮ ವಿಶ್ವಾಸವನ್ನು ನೋಡಿ;  ಸದನದಲ್ಲಿ ನೀಲಿಚಿತ್ರ ವೀಕ್ಷಣೆ ಆರೋಪಕ್ಕೆ ಗುರಿಯಾಗಿರುವ ಮೂವರು ಮಾಜಿ ಸಚಿವರ ವಿರುದ್ಧ ಪಕ್ಷ ತಕ್ಷಣ ಕ್ರಮ ಕೈಗೊಳ್ಳುವುದಿಲ್ಲ. ಸದನ ಸಮಿತಿ ವರದಿಯೇ ಅಂತಿಮ. ಹೀಗಾಗಿ ಈ ಮೂವರೂ ಶಾಸಕರೂ ಕಳಂಕತ್ವದಿಂದ ಹೊರ ಬರುತ್ತಾರೆ ಎಂಬ ವಿಶ್ವಾಸ ನಮ್ಮಲ್ಲಿದೆ ಈ ಮೂವರ ಹೇಳಿಕೆಗಳು ಅಧಿಕೃತ, ಯಾಕೆಂದರೆ ಇವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಇದಕ್ಕೆಲ್ಲಾ ಸಂವಿಧಾನವನ್ನು ನಂಬಿರುವ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯನ್ನಿಟ್ಟಿರುವ ನಮ್ಮಂಥ ಪಾಮರರು ಏನು ಹೇಳಲು ಸಾಧ್ಯ?

ಬಹುಶಃ ಇದನ್ನೆಲ್ಲಾ ನೋಡಿ ಪ್ರತಿಭಟಿಸಲಾಗದೆ, ತಮ್ಮ ಪಕ್ಷ ನೈತಿಕವಾಗಿ ಕುಸಿಯುತ್ತಿರುವುದನ್ನು ಕಂಡು ಒಳಗೊಳಗೆ ಸಂಕಟಪಟ್ಟ ಮೃದು ಮಾತಿನ, ಸುಸಂಸ್ಕೃತ, ಸಜ್ಜನ ರಾಜಕಾರಣಿ ವಿ.ಎಸ್. ಆಚಾರ್ಯ ಅವರು ಎದೆಯೊಡೆದು ಇಹಲೋಕ ತ್ಯಜಿಸಿದರೇನೋ?!

ಶೌರ್ಯಕ್ಕೆ, ಕೆಚ್ಚಿಗೆ, ಹೋರಾಟಕ್ಕೆ ನಮಗೆ ನೆನಪಾಗುವುದು ಕೊಡಗರು, ನಮ್ಮ ಸೇನೆಯ ಮೊದಲ ಜನರಲ್ ಮೇಜರ್ ಪೀಲ್ಡ್ ಮಾರ್ಷಲ್ ಕರಿಯಪ್ಪ ಅವರು. ಸೇನೆಯಲ್ಲಿ ಗೂರ್ಖಾ ರೆಜಿಮೆಂಟ್ ಇದ್ದ ಹಾಗೆ ಕೂರ್ಗ್ ರೆಜಿಮೆಂಟ್ ಇದೆ. ಇಂಥ ಮಣ್ಣಿನಲ್ಲಿ ಹುಟ್ಟಿದ ಬೋಪಯ್ಯನವರು ಹಾಗೆ ವರ್ತಿಸುತ್ತಿದ್ದಾರಲ್ಲಾ..? ಹುಟ್ಟಿದ ಮಗು ಶೌರ್ಯವಂತನಾಗಿ ಬೆಳೆಯಲಿ ಎಂದು ಹುಲಿ ಹಾಲನ್ನು ತಂದು ಕುಡಿಸುವ ಪರಂಪರೆ ಆ ಮಣ್ಣಿನದು. ಈಗ ಆ ಪರಂಪರೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅ ಜಿಲ್ಲೆಯ ಪಕ್ಕದ ಜಿಲ್ಲೆ ನಮ್ಮದು. ನಮ್ಮಲ್ಲಿ ಈಗಲೂ ಗಂಡು ಮಗುವಿಗೆ ಹುಲಿ ತುಪ್ಪವನ್ನು ನೆಕ್ಕಿಸುವ ಪದ್ಧತಿಯಿದೆ. ನನ್ನ ಮಗನಿಗೆ ನೆಕ್ಕಿಸಿದ್ದಾರೆ..

ನಾನು ಕಾಲೇಜಿನಲ್ಲಿದ್ದಾಗ ಪ್ರವಾಸ ಬಂದಾಗ ವಿಧಾನಸಭೆಯ ಕಲಾಪವನ್ನು ವೀಕ್ಷಿಸಲು ಕರೆದುಕೊಂಡು ಹೋಗಿದ್ದರು. ಆಗ ನಾವು ಒಂದು ಪೂಜಾಸ್ಥಾನದ ಒಳಗೆ ಪ್ರವೇಶಿಸುವಷ್ಟೇ ಭಯ ಭಕ್ತಿಯಿಂದ ಅದರೊಳಗೆ ಪ್ರವೇಶಿಸಿದ್ದೆವು. ಮಾತ್ರವಲ್ಲ ಆ ಸನ್ನಿದಾನಕ್ಕೆ ಅಗೌರವ ತೋರಬಾರದೆಂದು ನಮ್ಮನ್ನು ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳಬಾರದೆಂದು ನಮ್ಮ ಲೆಕ್ಚರರ್ ತಾಕೀತು ಮಾಡಿದ್ದರು. ಆ ಗೌರವದ ಭಾವನೆ ಇಂದಿಗೂ ನನ್ನ ಮನದಲ್ಲಿದೆ. ಆದರೆ ಮೊನ್ನೆ ಸದನದಲ್ಲಿ ನಡೆದ ಘಟನೆ ಈ ಸ್ಥಳದ ಪಾವಿತ್ರ್ಯತೆಯನ್ನು ಮಲಿನಗೊಳಿಸಿದೆ. ನಮ್ಮ ಎಳೆಯ ಮಕ್ಕಳ ಮೇಲೆ ಈ ಪ್ರಕರಣ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಯಾರೂ ಚಿಂತಿಸಿದಂತಿಲ್ಲ.

ಸೆಕ್ಸ್ ಸೀಡಿ ವೀಕ್ಷಣೆ ಪ್ರಕರಣದಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಸೇರಿದಂತೆ ಒಟ್ಟು ರಾಜಕಾರಣವೇ ನಾ ಹೊಡೆದ ಹಾಗೆ ಮಾಡುತ್ತೇನೆ, ನೀ ಅತ್ತ ಹಾಗೆ ಮಾಡು ಎಂಬ ರೀತಿಯಲ್ಲಿದೆ. ನಮ್ಮಲ್ಲಿ ಒಂದು ಮಹಿಳಾ ಆಯೋಗವಿದೆ. ಅದಕ್ಕೊಬ್ಬ ಅಧ್ಯಕ್ಷೆಯಿದ್ದಾರೆ. ಅವರು ಕನಿಷ್ಟ ಪಕ್ಷ ಒಂದು ಹೇಳಿಕೆಯನ್ನಾದರೂ ನೀಡಬಹುದಿತ್ತು.ಅದನ್ನೂ ಮಾಡಲಿಲ್ಲ. ಮಹಿಳಾ ಸಂಘಟನೆಗಳೂ ತುಟಿ ಬಿಚ್ಚಲಿಲ್ಲ. ಒಬ್ಬ ಮಹಿಳೆಯಾಗಿ ಪುರುಷ ಮನಸ್ಥಿತಿಯ ಈ ಕಳಂಕಿತ ಲಾಲಸೆಯನ್ನ ನಾನು ತೀವ್ರವಾಗಿ ಪ್ರತಿಭಟಿಸುತ್ತೇನೆ.

-ಉಷಾ ಕಟ್ಟೆಮನೆ

Friday, February 17, 2012

ಸದನದಿಂದ ಮಾಧ್ಯಮಗಳನ್ನು ಹೊರಗಿಡುವುದು ಬುದ್ಧಿವಂತಿಕೆಯಲ್ಲ, ಬಡತನ



-ಚಿದಂಬರ ಬೈಕಂಪಾಡಿ

ಪ್ರಜಾಪ್ರಭುತ್ವದ ಕಾವಲುಗಾರ ಮಾಧ್ಯಮ ಎನ್ನುವ ಮಾತು ನಿಜ ಎನ್ನುವುದನ್ನು ರಾಜಕಾರಣಿಗಳು ಸಾರ್ವಜನಿಕ ಭಾಷಣಗಳಲ್ಲಿ ಹೇಳಿದರೂ ಆಂತರಿಕವಾಗಿ ಅವರು ಹಾಗೆ ಯೋಚಿಸುತ್ತಾರೆಂದು ಭಾವಿಸಬೇಕಾಗಿಲ್ಲ. ಯಾಕೆಂದರೆ ವಿಧಾನಸಭಾ ಕಲಾಪ ನಡೆಯುತ್ತಿದ್ದಾಗ ಅಶ್ಲೀಲ ವೀಡಿಯೋ ನೋಡಿದರೆಂಬುದು ಜಗಜಾಹೀರಾಗುತ್ತಿದ್ದಂತೆಯೇ ಇಡೀ ರಾಜಕೀಯ ಕ್ಷೇತ್ರದಲ್ಲಿ ತಲ್ಲಣಗಳು ಕಾಣಿಸಿಕೊಂಡವು.

ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕಂಡ ದೃಶ್ಯಗಳು ಮತ್ತೆ ಮತ್ತೆ ಕಣ್ಣೊರೆಸಿಕೊಂಡು ನೋಡುವಷ್ಟರ ಮಟ್ಟಕ್ಕೆ ದಿಗಿಲುಂಟು ಮಾಡಿದವು. ವಿಧಾನ ಸಭೆಯ ಇತಿಹಾಸದಲ್ಲಿ ಗದ್ದಲಗಳು ನಡೆದಿವೆ, ಕುರ್ಚಿ, ಮೈಕ್ ಬಿಸಾಡಿದ ಘಟನೆಗಳು ನಡೆದಿವೆ, ಅನೇಕ ಕಾರಣಗಳಿಗಾಗಿ ಅನೇಕ ರೀತಿಯ ರಂಪಾಟಗಳು ಘಟಿಸಿವೆ, ಸದನದೊಳಗೇ ರಾತ್ರಿಯೆಲ್ಲ ಧರಣಿ ನಡೆಸಿರುವುದು ಹೀಗೆ ಹತ್ತು ಹಲವು ಘಟನೆಗಳು ಈ ದೇವಮಂದಿರದೊಳಗೆ ನಡೆದಿವೆ. ಆದರೆ ಅಶ್ಲೀಲ ವೀಡಿಯೋ ನೋಡಿ ಸಿಕ್ಕಿಬಿದ್ದ ಮೊಟ್ಟಮೊದಲ ಘಟನೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ಅಶ್ಲೀಲ ಮಾತುಗಳನ್ನು ಅಥವಾ ಅನ್‌ಪಾರ್ಲಿಮೆಂಟರಿ ಪದಬಳಕೆ ಮಾಡುವುದೇ ತಪ್ಪು ಎನ್ನುವಷ್ಟರಮಟ್ಟಿಗೆ ಸದನಕ್ಕೆ ಘನತೆಯಿದೆ. ಈ ಕಾರಣಕ್ಕಾಗಿಯೇ ಅಂಥ ಪದಗಳನ್ನು ಆಡಿದವರು ಕ್ಷಮೆಯಾಚಿಸಿರುವುದು, ಅಂಥ ಪದಗಳನ್ನು ಕಡತದಿಂದ ಕಿತ್ತು ಹಾಕಿಸಿದಂಥ ನೂರಾರು ಉದಾಹರಣೆಗಳಿವೆ. ಆದರೆ ಅಶ್ಲೀಲ ವೀಡಿಯೋ ಪ್ರಕರಣದ ಗಂಭೀರತೆಯನ್ನು ಅರ್ಥಮಾಡಿಕೊಳ್ಳಬೇಕಿತ್ತು ಮತ್ತು ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಸನ್ನಡತೆಯನ್ನು ಸದನದೊಳಗಿರುವವರು ಪಾಲಿಸುವಂತೆ ಮಾಡುವುದು ಜವಾಬ್ದಾರಿಯುತವಾದ ಹಾಗೂ ಸುಧಾರಣೆಯ ಕ್ರಮ. ಅಶ್ಲೀಲ ವೀಡಿಯೋ ಪ್ರಕರಣದ ಅಂತಿಮ ತೀರ್ಪೇ ಹೊರಬಿದ್ದಿಲ್ಲ, ನಿಜಕ್ಕೂ ತಪ್ಪಾಗಿರುವುದು ಎಲ್ಲಿ? ಎನ್ನುವ ಶೋಧವೂ ಆಗಿಲ್ಲ. ಅತ್ಯಂತ ಆತುರವಾಗಿ ರಾಜಕಾರಣಿಗಳ ಮನಸ್ಸು (ಸಾಮೂಹಿಕವಾಗಿ ಅಲ್ಲ, ಕೆಲವೇ ಕೆಲವು) ಮಾಧ್ಯಮಗಳನ್ನು ಸದನದಿಂದ ಹೊರಗಿಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದು ನಿಜಕ್ಕೂ ಆಘಾತಕಾರಿ. ಅಶ್ಲೀಲ ವೀಡಿಯೋ ನೋಡಿದ ಅಪರಾಧಕ್ಕಿಂತಲೂ ಘೋರವಾದ ಅಪರಾಧವನ್ನು ಮಾಡಲು ಕರ್ನಾಟಕದಲ್ಲಿ ಸಂಚು ಹೆಣೆಯುತ್ತಿರುವುದು ನಿರೀಕ್ಷಿತವೂ ಹೌದು.

ಸದನದೊಳಗೆ ಮಾಧ್ಯಮಗಳಿಗೆ ಅವಕಾಶ ಕಲ್ಪಿಸಲು ತಮಗೆ ಅನುಕೂಲಕರವಾದ ಸೂತ್ರ ಹೆಣೆದು ಯಾರನ್ನು ಬಿಡಬೇಕು?, ಯಾರನ್ನು ಬಿಡಬಾರದು ಎನ್ನುವ ತೀರ್ಮಾನಕ್ಕೆ ಬರುವಂಥ ದಡ್ಡ ಕೆಲಸವನ್ನು ಬುದ್ಧಿವಂತರು ಮಾಡುತ್ತಿರುವುದು ಮೂರ್ಖತನ ಮತ್ತು ಅವಿವೇಕಿತನ ಕೂಡಾ. ಸರ್ಕಾರಿ ಕೃಪಾಪೋಷಿತ ಮಾಧ್ಯಮಗಳಿಗೆ ಸದನದೊಳಗೆ ಮಣೆಹಾಕಿ ಹುಳುಕನ್ನು ಎತ್ತಿತೋರಿಸುವ ಮಾಧ್ಯಮಗಳ ಕತ್ತುಹಿಚುಕುವ ದಡ್ಡತನ ಇದರ ಹಿಂದಿದೆ. ಬೆಳಕೇ ಇಲ್ಲದ ಸ್ಥಿತಿಯನ್ನು ನೆನಪಿಸಿಕೊಂಡಂತಾಗುತ್ತದೆ ಮಾಧ್ಯಮಗಳಿಲ್ಲದ ಸದನವನ್ನು ಊಹಿಸುವುದು ಎನ್ನುವ ಸಾಮಾನ್ಯ ಅರಿವೂ ಇಲ್ಲದಷ್ಟು ಬುದ್ಧಿ ಬಡತನವೇ ನಮ್ಮ ರಾಜಕಾರಣಿಗಳಿಗೇ?

ಮಾಧ್ಯಮಗಳ ಕತ್ತು ಹಿಚುಕುವ, ತಮಗೆ ಬೇಕಾದಂತೆ ಕುಣಿಸುವ ತಂತ್ರಗಳನ್ನು ದಶಕಗಳ ಹಿಂದೆಯೂ ಅನೇಕರು ರೂಪಿಸಿದ್ದರು ಮತ್ತು ತಮ್ಮದೇ ಆದ ತಂತ್ರಗಾರಿಕೆಯಿಂದ ಕಾರ್ಯಗತ ಮಾಡುವ ದುಸ್ಸಾಹಸವನ್ನು ಮಾಡಿ ಇತಿಹಾಸದ ಪುಟ ಸೇರಿಕೊಂಡಿರುವ ದೊಡ್ಡ ರಾಜಕಾರಣಿಗಳನ್ನು ಈಗಿನವರು ನೆನಪು ಮಾಡಿಕೊಂಡರೆ ಅರ್ಥವಾಗಿ ಬಿಡುತ್ತದೆ ತಾವೇನು ಮಾಡಲು ಹೊರಟಿದ್ದೇವೆಂಬುದು. ನಿರ್ಮಲವಾಗಿದ್ದ ಮಾಧ್ಯಮ ಕ್ಷೇತ್ರವನ್ನು ಪೇಯ್ಡ್ ನ್ಯೂಸ್ ಮೂಲಕ ಕಲುಷಿತಗೊಳಿಸಿದವರು ಯಾರು?

ಪತ್ರಕರ್ತನ ಹುದ್ದೆ ನಿರ್ವಹಿಸಿದರೆ ಹೊಟ್ಟೆಗೇನು ಗತಿ ? ಎನ್ನುವ ಕಾಲ ಬದಲಾಗಿದೆ, ರಾಜಕಾರಣಿಯ ಮನಸ್ಸಿನ ಹಿಂದೆ ಮಾಧ್ಯಮಗಳು ಮತ್ತು ಮಾಧ್ಯಮ ಮಂದಿಯ ಬುದ್ಧಿ ಕೆಲಸ ಮಾಡುವಂತಾಗಿರುವ ಸ್ಥಿತಿಗೆ ಹೊಣೆ ಯಾರು? ವೃತ್ತಿಘನತೆ ಎತ್ತಿಹಿಡಿಯುವುದೇ ಪರಮಧರ್ಮವೆಂದು ಬದುಕಿದ ಮಾಧ್ಯಮ ಮಂದಿಯ ನಿಜವಾದ ಬದುಕು ಹಿಂದೆ ಹೇಗಿತ್ತು ? ಈಗ ಹೇಗಿದೆ ? ಇಂಥ ಬದಲಾವಣೆಯ ಬಿರುಗಾಳಿಯ ಸುಳಿಯನ್ನು ಅರ್ಥಮಾಡಿಕೊಳ್ಳಿ.

ಸದನದೊಳಗೆ ಪ್ರವೇಶಿಸುವುದೆಂದರೆ ದೇವಮಂದಿರಕ್ಕೆ ಪ್ರವೇಶಿಸಿದಂತೆ ಎನ್ನುವ ಕಲ್ಪನೆ ಜೀವಂತವಾಗಿದೆ. ಈ ಕಾರಣಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಸದನದೊಳಗಿನ ಕಲಾಪಗಳ ಗುಣಮಟ್ಟ ಕುಸಿಯುತ್ತಿದೆ, ಮೌಲ್ಯಗಳು ಇಳಿಮುಖವಾಗುತ್ತಿವೆ ಎನ್ನುವ ಸ್ವರವನ್ನು ಹಿರಿಯ ಪತ್ರಕರ್ತರು ಬಹಿರಂಗವಾಗಿ ಎತ್ತುತ್ತಿರುವುದು. ತಮ್ಮ ಅನೂಕೂಲಕ್ಕೆ ಮಾಧ್ಯಮಗಳನ್ನು ತೆಕ್ಕೆಯಲ್ಲಿಟ್ಟುಕೊಂಡು, ಮಾಧ್ಯಮ ಮಂದಿಯನ್ನು ಮಡಿಲಲ್ಲಿಟ್ಟುಕೊಂಡು ಮುದ್ದಾಡಿದವರು ಈಗ ಕೈಚೆಲ್ಲಿದರೆ ಹೇಗೆ ? ಎನ್ನುವುದು ಇಲ್ಲಿ ಪ್ರಶ್ನೆಯಲ್ಲ.

ಒಬ್ಬ ಶಾಸಕನ ಸರಿಸಮಾನಕ್ಕೆ ಅಧಿಕಾರಿಗಳು ನಿಂತು ಮಾತನಾಡುವುದೇ ತಪ್ಪು ಎನ್ನುವ ದಿನಗಳಿದ್ದವು. ಮಂತ್ರಿಯ ಜೊತೆಯಲ್ಲಿ ವೇದಿಕೆ ಹತ್ತುವುದೇ ಸಲ್ಲದು ಎನ್ನುವ ನಿರ್ಬಂಧದ ದಿನಗಳಿದ್ದವು. ಈಗ ಅಧಿಕಾರಿಗಳೇ ರಾಜಕಾರಣಿಗಳ ಹೆಗಲಮೇಲೆ ಕೈ ಹಾಕಿಕೊಂಡು ನಡೆಯುವಂಥ ಸ್ಥಿತಿ ನಿರ್ಮಾಣವಾಗಿದೆ ಅಂತಾದರೆ ಕಳೆದುಹೋಗಿರುವ ಮೌಲ್ಯಗಳನ್ನು ಎಲ್ಲಿ ಹುಡುಕುವಿರಿ? ಮಡೆಸ್ನಾನ, ಪಂಕ್ತಿಭೇದ ಭೋಜನ, ತಲೆಮೇಲೆ ಮಲಸುರಿದುಕೊಂಡು ಪ್ರತಿಭಟಿಸುವಂಥ ಘಟನೆಗಳು ನಿಮ್ಮ ಸುತ್ತಲೂ ನಡೆಯುತ್ತಿವೆಯಲ್ಲ ಅವುಗಳ ವಿರುದ್ಧ ತಾರ್ಕಿಕವಾದ ಹೋರಾಟ ಮಾಡಲು ಸಾಧ್ಯವಾಯಿತೇ? ಖಾಸಗೀಕರಣಕ್ಕೆ ಮುಚ್ಚಿದ್ದ ಬಾಗಿಲುಗಳನ್ನು ತೆರೆದು ಎಂಥ ಅನಾಹುತವಾಗುತ್ತಿದೆ ಎನ್ನುವ ಅರಿವಾದರೂ ಬೇಡವೇ?

ದೇಹಕ್ಕೆ ಮುಪ್ಪು ಬಂದರೆ ಒಪ್ಪಿಕೊಳ್ಳಬಹುದು, ಬುದ್ಧಿಗೆ ಮುಪ್ಪು ಬರಬಾರದು. ಮಾಧ್ಯಮಗಳನ್ನು ಸದನದಿಂದ ದೂರವಿಡುವ ಪ್ರಯತ್ನವೆಂದರೆ ಬುದ್ಧಿಗೆ ಮುಪ್ಪು ಬಂದಿದೆ ಎಂದೇ ಅರ್ಥ. ಇಂಥ ತಪ್ಪು ಕೆಲಸವನ್ನು ಮಾಡಿದ ಅಪಕೀರ್ತಿಗೆ ಕರ್ನಾಟಕ ಒಳಗಾಗುವುದು ನಿಜಕ್ಕೂ ಆಘಾತಕಾರಿ. ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್, ಕೆಡಿಪಿ ಸಭೆಗಳನ್ನು ನೋಡಿದರೆ ಸಾಕು ನಿದ್ದೆ ಗೊರಕೆ, ಆಕಳಿಕೆ, ಮೊಬೈಲ್ ನಲ್ಲಿ ಸರಸ-ಸಲ್ಲಾಪದ ಲೋಕವೇ ಅನಾವರಣಗೊಳ್ಳುತ್ತದೆ. ಅಲ್ಲೂ ಮಾಧ್ಯಮಗಳಿವೆ, ಆದರೆ ಎಚ್ಚೆತ್ತುಕೊಂಡಿಲ್ಲ, ಈಗ ವಿಧಾನಸಭೆಯ ಕಲಾಪದ ಹಿನ್ನೆಲೆಯಲ್ಲಿ ಮಾಧ್ಯಮಗಳು ಚುರುಕಾಗುವ ಕಾಲ ಸನ್ನಿಹಿತವಾಗಿದೆ.

ವಿಧಾನಸಭೆಯ ಕಲಾಪದಿಂದ ಮಾಧ್ಯಮಗಳನ್ನು ಹೊರಗಿಡುವ ಪ್ರಯತ್ನ ಸಫಲವಾದರೆ ಅದು ಕೆಳಹಂತಕ್ಕೂ ಅನ್ವಯವಾಗುವ ಅಪಾಯವಿದೆ. ಸದನದ ಕಲಾಪ ಗೌಪ್ಯ ಅಲ್ಲ, ಅದನ್ನು ಸಾರ್ವಜನಿಕರು ಅರ್ಥಾತ್ ಪ್ರಜೆಗಳು ತಿಳಿದುಕೊಳ್ಳುವ ಮೂಲಭೂತ ಹಕ್ಕೂ ಕೂಡಾ. ಅಂತೆಯೇ ಮಾಧ್ಯಮಗಳು ಕೂಡಾ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂಬುದರಲ್ಲಿ ತಪ್ಪಿಲ್ಲ. ರಾಜಕಾರಣಿಗಳು ಅದರಲ್ಲೂ ಮಾಧ್ಯಮಗಳ ಬೆಳಕಲ್ಲೇ ಹೊಳಪುಕಂಡುಕೊಂಡವರು ಬುದ್ಧಿಗೆ ಕವಿದಿರುವ ಮುಸುಕನ್ನು ಸರಿಸಿಕೊಳ್ಳುವುದು ಒಳ್ಳೆಯದು. ಅವಿವೇಕತನ ಎಂದೂ ಬುದ್ಧಿವಂತಿಕೆಯೆನಿಸಿಕೊಳ್ಳುವುದಿಲ್ಲ, ಇಲ್ಲೂ ಹಾಗೆಯೇ.

Monday, February 13, 2012

ರಂಗಣ್ಣನ ಪಬ್ಲಿಕ್ ಟಿವಿ ನೋಡಿದಿರಾ? ಏನನ್ನಿಸಿತು?


ಪತ್ರಕರ್ತನೇ ಚಾನಲ್ ಮಾಲೀಕನಾಗಿರುವ ಪಬ್ಲಿಕ್ ಟಿವಿ ನಿನ್ನೆ ಶುರುವಾಯಿತು. ಮೊನ್ನೆ ಪಬ್ಲಿಕ್ ಟಿವಿಯ ಮೂಲಕ ರಂಗಣ್ಣ ಆಕ್ಟಿವಿಸಂ ಮಾಡ್ತಾರಾ ಎಂಬ ಶೀರ್ಷಿಕೆಯ ಲೇಖನ ಪ್ರಕಟಿಸಿದ್ದನ್ನು ನೀವು ನೋಡಿದ್ದೀರಿ. ಕಾಕತಾಳೀಯ ಎಂಬಂತೆ ನಿನ್ನೆ ಚಾನಲ್ ಆರಂಭಗೊಂಡ ನಿಮಿಷದಲ್ಲೇ ರಂಗನಾಥ್ ಘೋಷಿಸಿದ್ದು ಇದು ಒಂದು ಟಿವಿಯಲ್ಲ, ಚಳವಳಿ ಎಂದು. ಇದು ಯಾರ ಆಸ್ತಿಯೂ ಅಲ್ಲ, ನಿಮ್ಮ ಟಿವಿ ಎಂಬ ಘೋಷವಾಕ್ಯಕ್ಕೆ ರಂಗನಾಥ್ ತುಸು ಹೆಚ್ಚೇ ಒತ್ತು ಕೊಟ್ಟು ಮಾತಾಡಿದ್ದು ಕಾಣಿಸಿತು. ನಾವು ಯಾರಿಗೂ ಜಗ್ಗಲ್ಲ, ಬಗ್ಗಲ್ಲ, ನಿಮಗೆ ಮಾತ್ರ ತಲೆಬಾಗುತ್ತೇವೆ ಎಂದು ರಂಗನಾಥ್ ಆರ್ಭಟಿಸಿದರು. ರಂಗನಾಥ್ ಪ್ರಾಸ್ತಾವನೆಯ ಮಾತುಗಳು ಅತಿ ಆತ್ಮವಿಶ್ವಾಸದಿಂದ ಕೂಡಿದ್ದವು ಅನ್ನುವುದಕ್ಕೆ ಅವರ ಬದಲಾದ ಬಾಡಿ ಲಾಂಗ್ವೇಜ್ ಸಾಕ್ಷಿಯಾಗಿತ್ತು. ಈ ಆತ್ಮವಿಶ್ವಾಸ ಅಹಂಕಾರವಾಗದೇ ಇದ್ದರೆ ಪಬ್ಲಿಕ್ ಟಿವಿಯ ಕನಸುಗಳು ನನಸಾಗಬಹುದೇನೋ?

ನಿನ್ನೆಯ ಕಾರ್ಯಕ್ರಮಗಳನ್ನು ಗಮನಿಸಿದಾಗ ಚಾನಲ್ ಪೂರ್ತಾ ರಂಗಣ್ಣನೇ ತುಂಬಿಹೋದಂತೆ ಕಾಣಿಸಿತು. ಅತಿಥಿ ಗಣ್ಯರಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರ ಬಾಯಲ್ಲೂ ರಂಗನಾಥ್ ಗುಣಗಾನವೇ ನಡೆಯಿತು. ತಮಗಿರುವ ಜನಪ್ರಿಯತೆಯನ್ನು ಚಾನಲ್ ಗೆ ಮೂಲಬಂಡವಾಳ ಮಾಡಿಕೊಳ್ಳುವ ಸ್ಪಷ್ಟ ಯತ್ನಕ್ಕೆ ರಂಗನಾಥ್ ಕೈ ಹಾಕಿದ್ದಾರೆ ಅನಿಸಿತು. ಅದರಲ್ಲಿ ಅಂಥ ದೋಷವೇನೂ ಇಲ್ಲ.

ಪಬ್ಲಿಕ್ ಟಿವಿಯ ಬಗ್ಗೆ ಕೇಳಿಬಂದ ಊಹಾಪೋಹಗಳಿಗೆ ಉತ್ತರಿಸಲು ರಂಗನಾಥ್ ಒಂಚೂರು ಪ್ರಯತ್ನ ಮಾಡಿದಂತೆ ತೋರಿತು. ಪಬ್ಲಿಕ್ ಟಿವಿ ಜನರದ್ದು ಎಂದು ಹೇಳುವ ಭರಾಟೆಯಲ್ಲಿ ಪಾರದರ್ಶಕತೆಗೆ ಹೆಚ್ಚು ಒತ್ತು ನೀಡುವ ಪ್ರಯತ್ನಗಳು ನಡೆದವು. ಚಾನಲ್ ನ ಕಚೇರಿ, ಬಂಡವಾಳ, ಅಧಿಕಾರಿಗಳು, ಸಿಬ್ಬಂದಿಯ ಬಗ್ಗೆ ವಿವರಣೆಗಳು ಪಾರದರ್ಶಕತೆಯನ್ನು ಬಿಂಬಿಸುವ ಪ್ರಯತ್ನಗಳಾಗಿ ಕಾಣಿಸಿದವು.

ಚಾನಲ್ ನ ಮೊದಲ ಸುದ್ದಿಯನ್ನು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರಿಂದ ಓದಿಸುವ ಪ್ರಯತ್ನ ನಡೆಯಿತು. ನಂತರ ಸಂತೋಷ್ ಹೆಗಡೆ ಸುದ್ದಿ ಓದಿದರು. ಇದನ್ನು ಲೈವ್ ಮಾಡಿದ್ದರೆ ಇನ್ನಷ್ಟು ಚೆನ್ನಾಗಿರುತ್ತಿತ್ತು.

ಪಬ್ಲಿಕ್ ಟಿವಿ ನೋಡುತ್ತಿದ್ದಂತೆ ಇದು ಹೊಸ ಟಿವಿ ಚಾನಲ್ ಅನಿಸಲಿಲ್ಲ. ಯಾಕೆಂದರೆ ಹಿಂದೆ ಕೇಳಿದ ಧ್ವನಿಗಳೇ ಕೇಳುತ್ತಿದ್ದವು, ಅದೇ ಮುಖಗಳು ಕಾಣಿಸಿಕೊಂಡವು. ಸುದ್ದಿಯ ಪ್ರಸ್ತುತಿಯಲ್ಲೂ ಅಂಥ ಭಿನ್ನತೆಯೇನೂ ಕಾಣಿಸಲಿಲ್ಲ. ರಂಗನಾಥ್ ಮಾತಿಗೆ ಕೂತರೆ ಯಥಾಪ್ರಕಾರ ಮಾತಿನ ಮಲ್ಲ. ಚೆಕ್ಕುಬಂದಿ ಕಾರ್ಯಕ್ರಮದ ಝಲಕ್ ನಿನ್ನೆ ಪ್ರಸಾರವಾಯಿತು. ಮೊದಲ ದಿನವಾದ್ದರಿಂದ ರಂಗನಾಥ್ ತುಸು ಅಂಡರ್ ಪ್ಲೇ ಮಾಡಲು ಯತ್ನಿಸಿದಂತಿತ್ತು. ಬಹುಶಃ ಗಂಭೀರವಾದ ರಾಜಕೀಯ ವಿಶ್ಲೇಷಣೆಗಳನ್ನು ಮುಂದಿನ ದಿನಗಳಲ್ಲಿ ಅವರಿಂದ ನಿರೀಕ್ಷಿಸಬಹುದು.

ಪಬ್ಲಿಕ್ ಟಿವಿಯ ಕುರಿತು ಗಂಭೀರವಾದ ಆಕ್ಷೇಪಣೆಗಳೂ ಇವೆ. ತಪ್ಪಾದರೆ ತಿದ್ದಿ ಎಂದು ರಂಗನಾಥ್ ಮೊದಲ ದಿನವೇ ಹೇಳಿರುವುದರಿಂದ ತಪ್ಪುಗಳನ್ನು ಮುಂದಿಡುವುದು ನಮ್ಮ ಜವಾಬ್ದಾರಿಯೂ ಹೌದು. ಪಬ್ಲಿಕ್ ಟಿವಿಯೂ ಇತರ ಚಾನಲ್ ಗಳಂತೆ ಮನೆಹಾಳು ಜ್ಯೋತಿಷಿಗಳನ್ನು ಮೆರೆಸಲು ಆರಂಭಿಸಿರುವುದು ಅಸಹನೀಯ. ಜೋತಿಷ್ಯ ಸಂಬಂಧಿ ಕಾರ್ಯಕ್ರಮದ ಪ್ರೋಮೋ ಬಗ್ಗೆ ಸಂಪಾದಕೀಯದ ಓದುಗರೊಬ್ಬರು ಗಮನ ಸೆಳೆದಿದ್ದಾರೆ. ಮಕ್ಕಳಾಗಿಲ್ಲವೇ? ಮನೆಯಲ್ಲಿ ಸಮಸ್ಯೆಯೇ? ಹಾಗಿದ್ದರೆ ಈ ಕಾರ್ಯಕ್ರಮ ನೋಡಿ ಎಂಬ ಪ್ರೋಮೋ ಪ್ರಸಾರವಾಗುತ್ತಿದೆಯಂತೆ.

ನಮ್ಮದು ನೇರಾನೇರ ಪ್ರಶ್ನೆ. ಮಕ್ಕಳಾಗದವರಿಗೆ ಮಕ್ಕಳು ಹುಟ್ಟಿಸಲು ಜೋತಿಷಿಗಳಿಗೆ ಶಕ್ತಿಯಿದೆಯೇ? ಅದನ್ನು ನೀವು ನಂಬುತ್ತೀರಾ? ನಂಬುವುದಾದರೆ ಟಿವಿ ಚಾನಲ್ ನಡೆಸುವ ಬದಲು ಜೋತಿಷಿಗಳನ್ನು ಗುಡ್ಡೆ ಹಾಕಿಕೊಂಡು ಮಕ್ಕಳನ್ನು ಹುಟ್ಟಿಸುವ ಸಂಸ್ಥೆಯನ್ನು ಕಟ್ಟಿಬಿಡಿ, ಸಾರ್ವಜನಿಕರಿಗೆ ಚಾನಲ್‌ನಿಂದ ಆಗುವ ಸೇವೆಗಿಂತ ಸಾವಿರ ಪಟ್ಟು ಅನುಕೂಲವಾಗುತ್ತದೆ.
ಜೋತಿಷಿಗಳ ಈ ಬೊಗಳೆಯನ್ನು ನಂಬುವುದಿಲ್ಲವಾದರೆ ಈ ಆತ್ಮವಂಚನೆಯನ್ನು ಕೈಬಿಡಿ. ಭಾರತ ಸಂವಿಧಾನ ಪ್ರತಿಯೊಬ್ಬ ಪ್ರಜೆಯೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ಕರ್ತವ್ಯವನ್ನು ಘೋಷಿಸಿದೆ. ಅಂಧಶ್ರದ್ಧೆಗಳನ್ನು ಹರಡುವುದು ಸಂವಿಧಾನ ವಿರೋಧಿ, ಜನವಿರೋಧಿ ಕ್ರಿಯೆ. ಜನರನ್ನು ಜೋತಿಷಿಗಳ ಗುಲಾಮರನ್ನಾಗಿಸುವ ಪ್ರಯತ್ನ ಬೇಡ. ಅದನ್ನು ಮಾಡಿದರೆ ಜನರಿಗಾಗಿ ನಮ್ಮ ಟಿವಿ ಎಂಬ ನಿಮ್ಮ ಘೋಷಣೆಯೇ ಹಸಿಹಸಿ ಸುಳ್ಳಾಗಿಹೋಗುತ್ತದೆ.

ಮಿಕ್ಕಂತೆ ಪಬ್ಲಿಕ್ ಟಿವಿಗೆ ಇಂಗ್ಲಿಷ್ ಶೀರ್ಷಿಕೆಗಳ ಹುಚ್ಚು ಎಲ್ಲ ಚಾನಲ್ ಗಳಿಗಿಂತ ತುಸು ಹೆಚ್ಚೇ ಇರುವಂತಿದೆ. ಸುವರ್ಣ ನ್ಯೂಸ್‌ನವರು ನವೆಂಬರ್ ನಲ್ಲಿ ಮಾಡಿಕೊಂಡ ಬದಲಾವಣೆಗಳು ಚಾನಲ್ ಗೆ ಹೊಂದಿಕೊಂಡಿರುವುದನ್ನು ರಂಗಣ್ಣ ಗಮನಿಸಿಲ್ಲವೆನಿಸುತ್ತದೆ. ಪ್ರತಿ ಕಾರ್ಯಕ್ರಮಕ್ಕೂ ಇಂಗ್ಲಿಷ್ ಹೆಸರು ಬೇಕಿತ್ತಾ ಎಂಬ ಪ್ರಶ್ನೆಗೆ ರಂಗನಾಥ್ ಉತ್ತರ ಕೊಟ್ಟುಕೊಳ್ಳಬೇಕಿದೆ. ಇಲ್ಲದಿದ್ದರೆ ಚಾನಲ್ ಆರಂಭದ ಸಂದರ್ಭದಲ್ಲಿ ಕನ್ನಡ ನುಡಿ, ನೆಲ, ಜಲದ ಪ್ರಶ್ನೆ ಬಂದಾಗ ಹೋರಾಡುತ್ತೇವೆ ಎಂದು ರಂಗಣ್ಣ ಆಡಿದ ಮಾತುಗಳು ಆಷಾಡಭೂತಿಯದ್ದು ಎಂದು ಅನಿಸಿಬಿಡುತ್ತದೆ.

ಏನೇ ಇರಲಿ, ಪಬ್ಲಿಕ್ ಟಿವಿ ಆರರ ಜತೆ ಏಳನೇ ಚಾನಲ್ ಆಗದೇ ಇರಲಿ. ಜನರಿಗೆ ನಿಜಕ್ಕೂ ಬೇಕಾಗಿರುವ, ಜನರನ್ನು ಜಾಗೃತಿಗೊಳಿಸುವ ಚಾನಲ್ ಇದಾಗಲಿ. ಇಷ್ಟೇ ನಮ್ಮ ಆಶಯ ಮತ್ತು ಹಾರೈಕೆ.

Saturday, February 11, 2012

ಪಬ್ಲಿಕ್ ಟಿವಿಯ ಮೂಲಕ ರಂಗಣ್ಣ ಆಕ್ಟಿವಿಸಂ ಮಾಡಲಿದ್ದಾರೆಯೇ?


ಕನ್ನಡ ಮಾಧ್ಯಮ ರಂಗದಲ್ಲಿ ಈ ವರ್ಷ ನಿರೀಕ್ಷಿಸಲಾಗುತ್ತಿರುವ ಎರಡು ಮಹತ್ವದ ಬೆಳವಣಿಗೆಗಳಲ್ಲಿ ಒಂದರ ಮುಹೂರ್ತ ನಾಳೆಗೆ ನಿಗದಿಯಾಗಿದೆ. ವಿಜಯ ಸಂಕೇಶ್ವರರ ಬಹುನಿರೀಕ್ಷಿತ ವಿಜಯವಾಣಿ ಪತ್ರಿಕೆಯ ಆರಂಭ ಇನ್ನೇನು ಸದ್ಯದಲ್ಲೇ ಆಗಲಿದೆ. ಅದಕ್ಕೂ ಮುನ್ನ ನಾಳೆ (ಫೆಬ್ರವರಿ ೧೨) ಪತ್ರಕರ್ತ ಎಚ್.ಆರ್.ರಂಗನಾಥ್ ಅವರ ಪಬ್ಲಿಕ್ ಟಿವಿ ಆರಂಭಗೊಳ್ಳುತ್ತಿದೆ. ಕನ್ನಡ ಮಾಧ್ಯಮ ರಂಗಕ್ಕೆ  ಇವೆರಡೂ ಹೊಸ ಸೇರ್ಪಡೆಗಳು. ಈ ಎರಡರ ಕುರಿತೂ ಮಾಧ್ಯಮ ರಂಗದಲ್ಲಿ ವಿಪರೀತ ನಿರೀಕ್ಷೆಗಳಿವೆ.

ಎಚ್.ಆರ್.ರಂಗನಾಥ್ ಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಮಾತ್ರವಲ್ಲ, ಪಬ್ಲಿಕ್ ಟಿವಿಯನ್ನು ಆರಂಭಿಸುತ್ತಿರುವ ರೈಟ್ ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗು ಅಧ್ಯಕ್ಷರೂ ಹೌದು. ಅರುಣ್ ಕುಮಾರ್ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ, ದಿವಾಕರ್ ಉಪಾಧ್ಯಕ್ಷರಾಗಿ ಈ ಸಂಸ್ಥೆಯ ಹೊಣೆ ಹೊತ್ತಿದ್ದಾರೆ.

ಟಿವಿ ಚಾನಲ್‌ಗಳನ್ನು ಆರಂಭಿಸುವವರು ದೊಡ್ಡ ಪ್ರಮಾಣದ ಉದ್ಯಮಿಗಳೇ ಆಗಿರಬೇಕು ಎಂಬ ಮಾತಿದೆ. ಯಾಕೆಂದರೆ ಟಿವಿ ಚಾನಲ್ ಗಳದ್ದು ಬಕಾಸುರನ ಹೊಟ್ಟೆ. ಎಷ್ಟು ಹಣ ಸುರಿದರೂ ಅದು ತಿನ್ನುತ್ತದೆ. ಈ ಮಿಥ್ ಒಡೆಯುವ ಯತ್ನದಲ್ಲಿ ರಂಗನಾಥ್ ಇದ್ದಾರೆ. ಮೊದಲ ಬಾರಿಗೆ ಪತ್ರಕರ್ತನಾಗಿಯೇ ಈ ಸಾಹಸಕ್ಕೆ ಕೈಹಾಕಿದ್ದಾರೆ. ಚಾನಲ್‌ಗಳಿಗೆ ಹೂಡಲಾಗುವ ಬಂಡವಾಳ ಬೇಕಾಬಿಟ್ಟಿ ಸೋರಿಕೆಯಾಗುವುದೇ ಹೆಚ್ಚು. ಈ ದುಂದುವೆಚ್ಚವನ್ನು ತಡೆಗಟ್ಟಿದರೆ ದೊಡ್ಡ ಪ್ರಮಾಣದ ಬಂಡವಾಳ ಬೇಕಾಗಿಲ್ಲ ಎಂಬುದು ರಂಗನಾಥ್ ನಂಬುಗೆ. ಚಾನಲ್ ಕಟ್ಟುವ ಕೆಲಸದ ಜತೆಗೆ ರಂಗನಾಥ್ ಅದಕ್ಕೆ ಬೇಕಾದ ಬಂಡವಾಳವನ್ನೂ ಸಂಗ್ರಹಿಸಿ ಅಖಾಡಕ್ಕೆ ಇಳಿದಿದ್ದಾರೆ. ಇದು ಒಂದು ಬಗೆಯ ಸಾಹಸ. ಎಷ್ಟು ಪ್ರಮಾಣದಲ್ಲಿ ಯಶಸ್ಸು ಅವರಿಗೊಲಿಯುತ್ತದೆ ಎಂಬುದನ್ನು ಕಾದು ನೋಡಬೇಕು.

ಎಚ್.ಆರ್.ರಂಗನಾಥ್ ಕನ್ನಡಪ್ರಭದ ಸಂಪಾದಕರಾಗಿದ್ದಾಗ ರಾಜಕೀಯ ವಿಶ್ಲೇಷಕರಾಗಿ ನ್ಯೂಸ್ ಚಾನಲ್‌ಗಳ ಪ್ಯಾನೆಲ್‌ನಲ್ಲಿ ಬಂದು ಕೂರುತ್ತಿದ್ದರು. ಟಿವಿ ಮೀಡಿಯಾಗೆ ಹೇಳಿ ಮಾಡಿಸಿದ ವ್ಯಕ್ತಿ ಎಂದು ಸಾಕಷ್ಟು ಮಂದಿಗೆ ಅನ್ನಿಸಿದ್ದು ಸುಳ್ಳಲ್ಲ. ರಂಗನಾಥ್ ಕಡೆಗೊಮ್ಮೆ ಸುವರ್ಣ ನ್ಯೂಸ್ ಮುಖ್ಯಸ್ಥರಾಗಿ ಬಂದರು. ಒಂದಷ್ಟು ಜನಪ್ರಿಯತೆಯನ್ನೂ ಪಡೆದರು. ಸುವರ್ಣದಲ್ಲಿ ಅವರು ಹೆಚ್ಚು ಕಾಲ ಇರಲು ಸಾಧ್ಯವಾಗಲಿಲ್ಲ. ಹೊರಬಂದ ನಂತರ ಅವರ ತಲೆಹೊಕ್ಕಿದ್ದು ಪಬ್ಲಿಕ್ ಟಿವಿಯ ಕನಸು.

ಈಗಾಗಲೇ ಆರು ನ್ಯೂಸ್ ಚಾನಲ್ ಗಳು ಕನ್ನಡದಲ್ಲಿವೆ. ಟಿವಿ೯, ಉದಯ ನ್ಯೂಸ್, ಸುವರ್ಣ ನ್ಯೂಸ್, ಸಮಯ ನ್ಯೂಸ್, ಜನಶ್ರೀ ನ್ಯೂಸ್ ಹಾಗು ಕಸ್ತೂರಿ ನ್ಯೂಸ್‌ಗಳು ಚಾಲ್ತಿಯಲ್ಲಿವೆ. ಇವುಗಳ ನಡುವೆ ಏಳನೇ ಚಾನಲ್ ಆಗಿ ಪಬ್ಲಿಕ್ ಟಿವಿ ಬರುತ್ತಿದೆ. ಈ ಎಲ್ಲ ಚಾನಲ್‌ಗಳಿಗಿಂತ ಭಿನ್ನವಾಗಿ ಪಬ್ಲಿಕ್ ಟಿವಿ ಏನನ್ನಾದರೂ ಮಾಡಲು ಸಾಧ್ಯವೇ? ಟಿಆರ್‌ಪಿ ಕದನದಲ್ಲಿ ಪಬ್ಲಿಕ್ ಟಿವಿ ಗೆಲ್ಲಬಹುದೇ? ಕಾದು ನೋಡಬೇಕು.

ಹಿಂದೆ ಸುವರ್ಣ ನ್ಯೂಸ್ ನಲ್ಲಿದ್ದಾಗ ಪಬ್ಲಿಕ್ ವಾಯ್ಸ್ ಎಂಬ ಕಾರ್ಯಕ್ರಮವೊಂದನ್ನು ಎಚ್.ಆರ್.ರಂಗನಾಥ್ ನಡೆಸುತ್ತಿದ್ದರು. ವರ್ತಮಾನದ ಬೆಳವಣಿಗೆಗಳ ಕುರಿತು ಸಾರ್ವಜನಿಕರ ಜತೆ ಸಂವಾದಿಸುವ ಕಾರ್ಯಕ್ರಮ ಅದು. ಅದಕ್ಕೆ ಒಳ್ಳೆಯ ಪ್ರತಿಕ್ರಿಯೆಯೂ ಲಭ್ಯವಾಗಿತ್ತು. ರಂಗನಾಥ್ ಸಾರ್ವಜನಿಕರೊಂದಿಗೆ ಸಂವಾದವನ್ನೂ ಕೌನ್ಸಿಲಿಂಗ್ ಧಾಟಿಯಲ್ಲಿ ನಡೆಸಿ ರಾಜಕಾರಣ, ಪ್ರಚಲಿತ ವಿದ್ಯಮಾನಗಳು ಹಾಗು ಸಾಮಾಜಿಕ ಸಮಸ್ಯೆಗಳನ್ನು ವೀಕ್ಷಕರಿಗೆ ಅರ್ಥ ಮಾಡಿಸಲು ಯತ್ನಿಸುತ್ತಿದ್ದರು.

ಈಗ ರಂಗನಾಥ್ ಪಬ್ಲಿಕ್ ಟಿವಿಯ ಜತೆ ಬಂದಿದ್ದಾರೆ. ಆರಂಭದ ಜಾಹೀರಾತುಗಳನ್ನು ಗಮನಿಸಿದರೆ ತಮ್ಮ ಚಾನಲನ್ನು ಸಾರ್ವಜನಿಕರ ಟಿವಿಯನ್ನಾಗಿಸುವ ಉಮ್ಮೇದು ಅವರಿಗಿದ್ದಂತಿದೆ. ಇತರ ಚಾನಲ್‌ಗಳು ರಾಜಕಾರಣಿಗಳ ಚಾನಲ್‌ಗಳಾಗಿರುವುದನ್ನು ಅವರ ಜಾಹೀರಾತುಗಳು ಪರೋಕ್ಷವಾಗಿ ಲೇವಡಿ ಮಾಡುತ್ತವೆ. ತಮ್ಮ ಚಾನಲ್ ಯಾರ ಆಸ್ತಿಯೂ ಅಲ್ಲ, ಜನರದ್ದು ಎಂದು ಹೇಳುವ ಹಿನ್ನೆಲೆಯಲ್ಲಿ ತಮ್ಮದು ಸ್ವತಂತ್ರ ಕಾರ್ಯನಿರ್ವಹಣೆಯ ಚಾನಲ್ ಎಂದು ಹೇಳುವ ಉದ್ದೇಶವೂ ಇದ್ದಂತಿದೆ.

ಎಲ್ಲ ಸರಿ, ಆದರೆ ಈ ಆಕ್ಟಿವಿಸಂ ವರ್ಕ್ ಔಟ್ ಆಗುತ್ತದೆಯೇ ಎಂಬುದು ಮುಖ್ಯ ಪ್ರಶ್ನೆ. ಚಾನಲ್ ಸೊಗಸಾಗಿ ತರುವುದೊಂದೇ ಅದರ ಯಶಸ್ಸಿಗೆ ಮಾರ್ಗವಾಗುವುದಿಲ್ಲ. ಟಿವಿ ಚಾನಲ್‌ಗಳು ಕೇಬಲ್ ಆಪರೇಟರ್‌ಗಳನ್ನು ಒಲಿಸಿಕೊಳ್ಳಬೇಕು. ಅವರಿಗೆ ಕಾಲಕಾಲಕ್ಕೆ ದಕ್ಷಿಣೆ ನೀಡಬೇಕು. ಕೆಲವು ಕೇಬಲ್ ನೆಟ್ ವರ್ಕ್‌ಗಳು ನೇರವಾಗಿ ಎದುರಾಳಿ ಚಾನಲ್‌ಗಳ ಮಾಲೀಕರ ನಿಯಂತ್ರಣದಲ್ಲೇ ಇವೆ. ಹೀಗಾಗಿ ಪ್ರೈಮ್ ಬ್ಯಾಂಡ್ ನಲ್ಲಿ ಚಾನಲ್ ಪ್ರಸಾರವಾಗುವಂತೆ ನೋಡಿಕೊಳ್ಳುವುದು ಸುಲಭದ ವಿಷಯವಲ್ಲ. ಕನೆಕ್ಟಿವಿಟಿ ಇಲ್ಲದಿದ್ದರೆ ಚಾನಲ್ ಸಿಬ್ಬಂದಿ ಎಷ್ಟೇ ಹೆಣಗಾಡಿದರೂ ಟಿಆರ್‌ಪಿ ಗಿಟ್ಟುವುದಿಲ್ಲ. ಆರಂಭದಲ್ಲಿ ಸುವರ್ಣ ನ್ಯೂಸ್ ಈ ಸಮಸ್ಯೆಗೆ ಬಳಲಿ ಹೋಗಿತ್ತು, ಈಗ ಸಮಯ ಟಿವಿ ಇನ್ನೂ ಕನೆಕ್ಟಿವಿಟಿಯ ಸಮಸ್ಯೆಯಿಂದ ಹೊರಗೆ ಬಂದಿಲ್ಲ.

ಎಲ್ಲ ಸರಿ ಮಾಡಿಕೊಂಡು ಚಾನಲ್ ಆರಂಭಿಸಿದರೂ, ಮಾಡಿದ ಕಾರ್ಯಕ್ರಮಗಳು ಜನರಿಗೆ ಇಷ್ಟವಾಗಬೇಕು. ಜನರ ಇಷ್ಟಗಳೆಲ್ಲವೂ ಒಳ್ಳೆಯ ಅಭಿರುಚಿಯದ್ದೇ ಆಗಿರಬೇಕಿಲ್ಲ. ಸ್ಪರ್ಧೆ ಮಾಡುವ ಚಾನಲ್‌ಗಳು ನಡೆಸುವ ಚೀಪ್ ಗಿಮಿಕ್‌ಗಳನ್ನು ಅನಿವಾರ್ಯವಾಗಿ ಅನುಸರಿಸುವ ಸಂದರ್ಭಗಳೂ ಬರಬಹುದು. ಇಲ್ಲಿ ಆದರ್ಶ, ಸಾಮಾಜಿಕ ಕಳಕಳಿ ಇಂಥವಕ್ಕೆ ಅರ್ಥಗಳು ಉಳಿದಿಲ್ಲ.

ಪಬ್ಲಿಕ್ ಟಿವಿಯ ಹೆಸರಲ್ಲಿ ಬರುತ್ತಿರುವ ರಂಗಣ್ಣ ಎದುರಿಸಬೇಕಾದ ಸಮಸ್ಯೆಗಳು ಇವು. ಅವರಿಗೆ ಯಶಸ್ಸಾಗಲಿ. ನಿಜಕ್ಕೂ ಅದು ಜನರ ಟಿವಿಯಾಗಲಿ.

Thursday, February 9, 2012

ಒಬ್ಬ ಧೂರ್ತ ನೀಲಿಚಿತ್ರ ನೋಡಿದ, ನೀವು ಕೋಟ್ಯಂತರ ಜನರು ನೋಡುವಂತೆ ಮಾಡಿದಿರಿ...!


ಒಟ್ಟು ಹನ್ನೆರಡು ನಿಮಿಷಗಳ ಟೇಪು ನಮ್ಮ ಬಳಿ ಇದೆ ಎಂದು ಚಾನಲ್‌ಗಳು ಹೇಳಿಕೊಳ್ಳುತ್ತಿವೆ. ಅದು ಸ್ಥಳೀಯ ಮತ್ತು ರಾಷ್ಟ್ರಮಟ್ಟದ ಚಾನಲ್ ಗಳಲ್ಲಿ ಪ್ರಸಾರವಾಗಿದ್ದು ಎಷ್ಟು ಗಂಟೆಗಳ ಕಾಲ? ಐಬಿಎನ್ ನಂಥ ಚಾನಲ್ ಗಳು ಮೊಬೈಲ್ ಪರದೆಯನ್ನು ಪೂರ್ತಿ ಮಸುಕು ಮಾಡಿ ಪ್ರಸಾರ ಮಾಡಿದವು. ಕನ್ನಡದ ಕೆಲ ಚಾನಲ್‌ಗಳು ಅರೆಬರೆ ಮಸುಕು ಮಾಡಿ ಗಂಟೆಗಟ್ಟಲೆ ಪ್ರಸಾರ ಮಾಡಿದವು. ಆರಂಭದಲ್ಲಂತೂ ಕೆಲ ಚಾನಲ್‌ಗಳು ಒಂಚೂರೂ ಮುಸುಕು ಮಾಡದೇ, ನೀಲಿಚಿತ್ರಗಳನ್ನು ಯಥಾವತ್ತಾಗಿ ಪ್ರಸಾರವನ್ನೇ ಮಾಡಿಬಿಟ್ಟವು.

ಮುಠ್ಠಾಳ ಮಂತ್ರಿಯೊಬ್ಬ ವಿಧಾನಸಭೆಯಲ್ಲಿ ಕುಳಿತು ನೀಲಿಚಿತ್ರ ನೋಡಿದ. ಅದನ್ನು ಇನ್ನೊಬ್ಬ ಮಂತ್ರಿ ಇಣುಕಿದ. ತನ್ನ ಮೊಬೈಲನ್ನು ಕೊಟ್ಟು ಈ ಚಿತ್ರಗಳನ್ನು ನೋಡಿ ಎಂದವನು ಮತ್ತೊಬ್ಬ ಮಂತ್ರಿ. ಈ ನೀಚ ಕೆಲಸಕ್ಕೆ ಆ ಮೂವರೂ ಮಂತ್ರಿಪದವಿ ಕಳೆದುಕೊಂಡಿದ್ದಾರೆ. ಟಿವಿ ಚಾನಲ್‌ಗಳು ಸಾಹಸಕ್ಕೆ ಶಹಬ್ಬಾಸ್ ಅನ್ನೋಣ.

ಆದರೆ ಇದೇ ಚಾನಲ್ ಗಳು ಇದೇ ಬ್ಲೂಫಿಲ್ಮ್ ನ ತುಣುಕುಗಳನ್ನು ಕೋಟ್ಯಂತರ ಜನರು ನೋಡುವಂತೆ ಮಾಡಿದರಲ್ಲ? ಬ್ಲೂಫಿಲ್ಮ್ ಏನೆಂದೇ ಅರಿಯದ ಲಕ್ಷಾಂತರ ಮುಗ್ಧರಿಗೂ ಅವುಗಳನ್ನು ತೋರಿಸಿದರಲ್ಲ? ಈ ಅಪರಾಧಕ್ಕೆ ಶಿಕ್ಷೆ ಕೊಡುವವರು ಯಾರು? ಸಚಿವತ್ರಯರ ನೀಲಿಚಿತ್ರ ವೀಕ್ಷಣೆಯನ್ನು ಹಲವು ಹಾಡುಗಳನ್ನು ಬಳಸಿ ತಮಾಶೆಯಾಗಿ ತೋರಿಸುವ ಪ್ರಯತ್ನವನ್ನೂ ಚಾನಲ್‌ಗಳು ಮಾಡಿದವು. ಜತೆಗೆ ಅಯ್ಯೋ ಅಮ್ಮಾ ಎನ್ನುವ ಹೆಣ್ಣು ಕಂಠದ ಕಾಮೋದ್ವೇಗದ ಆರ್ತನಾದವೂ ಕೇಳಿಬಂತು. ಮನೆಮಕ್ಕಳು, ಹೆಂಗಸರು, ಹಿರಿಯರು ಇದನ್ನು ನೋಡಲು ಸಾಧ್ಯವೇ ಎಂಬ ಕನಿಷ್ಠ ಸಾಮಾನ್ಯಪ್ರಜ್ಞೆಯನ್ನೂ ಚಾನಲ್‌ಗಳು ಮರೆತವು. ಅವರಿಗೆ ತತ್ ಕ್ಷಣದ ಟಿಆರ್ ಪಿ ಬೇಕಿತ್ತು. ಇತರ ಚಾನಲ್ ಗಳನ್ನು ಹಿಂದಿಕ್ಕುವುದು ಹೇಗೆ ಎಂಬುದೇ ಚಿಂತೆಯಾಗಿತ್ತು. ಹೀಗಾಗಿ ಒಂದಕ್ಕೊಂದು ಸ್ಪರ್ಧೆ ನಡೆಸುತ್ತಾ, ಲಕ್ಷಾಂತರ ಜನರಿಗೆ ನೀಲಿ ಚಿತ್ರಗಳನ್ನು ತೋರಿಸಿಯೇಬಿಟ್ಟವು, ಗಂಟೆಗಟ್ಟಲೆ, ದಿನಗಟ್ಟಲೆ...

ಇಷ್ಟೆಲ್ಲ ಮಾಡುವ ಚಾನಲ್ ಗಳ ನಿರೂಪಕರು ಸಚಿವತ್ರಯರನ್ನು ಪೋಲಿಗಳು, ಕಾಮಾಂಧರು, ದರ್ಟಿ ಪಾಲಿಟಿಷಿಯನ್ಸ್ ಎಂದೆಲ್ಲಾ ನೇರಾನೇರ ಬೈಯುತ್ತಲೇ ಇದ್ದರು. ಜನರ ಆಕ್ರೋಶವನ್ನು ಎನ್ ಕ್ಯಾಶ್ ಮಾಡಿಕೊಳ್ಳುವ ಅವಕಾಶವನ್ನೂ ಯಾವ ನಿರೂಪಕನೂ ಬಿಡಲಿಲ್ಲ. ಆದರೆ ಅದೇ ಸಮಯಕ್ಕೆ ಸಚಿವತ್ರಯರು ಮಾಡಿದ ಅಪರಾಧಕ್ಕಿಂತ ಹೆಚ್ಚಿನ ಪ್ರಮಾದವನ್ನು ತಾವೇ ಮಡುತ್ತಿದ್ದೇವೆಂಬುದನ್ನು ಅವರು ಮರೆತರು.

ಎಷ್ಟು ವಿಚಿತ್ರವೆಂದರೆ ಪ್ರತಿ ನ್ಯೂಸ್ ಚಾನಲ್‌ಗಳೂ ಸಚಿವರ ಬ್ಲೂಫಿಲ್ಮ್ ವೀಕ್ಷಣೆಯ ಸುದ್ದಿಯನ್ನು ಬ್ರೆಕ್ ಮಾಡಿದ್ದು ತಾವೇ ಮೊದಲು ಎಂದು ಹೇಳಿಕೊಂಡವು. ಕೆಲ ಚಾನಲ್‌ಗಳಂತೂ ತಮ್ಮ ಕ್ಯಾಮರಾಮೆನ್‌ಗಳ ಸಂದರ್ಶನವನ್ನೂ ಪ್ರಸಾರ ಮಾಡಿದವು. ಒಂದು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಉದ್ದೇಶದ ಸುದ್ದಿಯನ್ನು ಬಿತ್ತರಿಸುವ ಧಾವಂತಕ್ಕಿಂತ, ಈ ಸುದ್ದಿ ಹಿಡಿದುತಂದಿದ್ದು ನಾವೇ ಎಂಬ ಅಹಂ ಮತ್ತು ಅದರಿಂದ ಬರುವ ಲಾಭವೇ ಚಾನಲ್ ಗಳಿಗೆ ಮುಖ್ಯವಾದಂತೆ ಕಂಡುಬಂತು.

ವಿಧಾನಸೌಧದಲ್ಲಿ ಕಲಾಪ ನಡೆಯುವಾಗಲೇ ಸಚಿವರುಗಳು ಬ್ಲೂಫಿಲ್ಮ್ ನೋಡಿದರು. ನೈತಿಕ ದೃಷ್ಟಿಯಿಂದ, ಕಾನೂನಿನ ದೃಷ್ಟಿಯಿಂದ ಇದು ಅಪರಾಧ. ಅದನ್ನು ಬಯಲು ಮಾಡಿದ್ದೂ ಕೂಡ ಶ್ಲಾಘನೀಯವೇ ಹೌದು. ಆದರೆ ಅದನ್ನು ಹೇಳುವ ಭರದಲ್ಲಿ ಚಾನಲ್‌ಗಳು ಹದ್ದುಮೀರಿ ಯಥಾವತ್ ದೃಶ್ಯಗಳನ್ನು ಪ್ರಸಾರ ಮಾಡಿದವು. ಅದು ಅನಿವಾರ್ಯವೇನೂ ಆಗಿರಲಿಲ್ಲ. ಅದಕ್ಕೆ ಹೊರತಾದ ಮಾರ್ಗವೂ ಇತ್ತು. ಚಾನಲ್ ಗಳ ಮುಖ್ಯಸ್ಥರ ಜಾಗದಲ್ಲಿ ಕುಳಿತವರು ಆತ್ಮವಂಚಕರಾದಾಗ ಹೀಗೆಲ್ಲಾ ಆಗಿಬಿಡುತ್ತದೆ.

ಇಷ್ಟೆಲ್ಲ ಮಾಡಿದ ಚಾನಲ್ ಗಳು ಸ್ವತಃ ಲಕ್ಷ್ಣಣ ಸವದಿಯೇ ಪ್ರತಿಕ್ರಿಯೆ ನೀಡುತ್ತಿದ್ದಾಗ ಆತನನ್ನು ಸರಿಯಾದ ದಾರಿಯಲ್ಲಿ ಪ್ರಶ್ನಿಸಲು ವಿಫಲವಾದವು. ಲಕ್ಷ್ಮಣ ಸವದಿಯ ಪ್ರಕಾರ ಆತ ನೋಡಿದ್ದು ಬೇರೊಂದು ದೇಶದಲ್ಲಿ ನಡೆದ ನೈಜ ಘಟನೆಯೊಂದರ ವಿಡಿಯೋ. ಒಬ್ಬ ಹುಡುಗಿಯನ್ನು ನಾಲ್ವರು ಹುಡುಗರು ಸಾಮೂಹಿಕ ಅತ್ಯಾಚಾರ ಮಾಡಿ ಆಕೆಯನ್ನು ಕೊಲ್ಲುತ್ತಾರೆ, ಆಕೆಯ ರುಂಡಮುಂಡಗಳನ್ನು ಬೇರ್ಪಡಿಸುತ್ತಾರೆ. ಪೊಲೀಸರು ನಾಲ್ವರನ್ನು ಬಂಧಿಸಿ ಸಾರ್ವಜನಿಕವಾಗಿ ನೇಣು ಹಾಕುತ್ತಾರೆ. ಇದು ಸವದಿ ನೋಡಿದ ವಿಡಿಯೋವಂತೆ.

ನೀಲಿಚಿತ್ರಗಳಲ್ಲಿ ಕಾಣಿಸಿಕೊಳ್ಳುವ ನಟ ನಟಿಯರು ಸ್ವ ಇಚ್ಛೆಯಿಂದ ಲೈಂಗಿಕ ಕ್ರಿಯೆಗೆ ಒಳಗಾಗುತ್ತಾರೆ, ಅತ್ಯಾಚಾರ ಪ್ರಕರಣ ಹಾಗಲ್ಲ. ನೀಲಿ ಚಿತ್ರಗಳನ್ನು ನೋಡುವವರಿಗೂ ಅತ್ಯಾಚಾರ ದೃಶ್ಯಗಳನ್ನು ನೋಡುವ ಮನಸ್ಸಾಗುವ ಸಾಧ್ಯತೆ ಕಡಿಮೆ. ಈ ರೀತಿಯ ಸಾಮೂಹಿಕ ಅತ್ಯಾಚಾರ ದೃಶ್ಯವನ್ನು ನೋಡುವವರು ವಿಕೃತರೂ, ಕ್ರೂರ ಮನಸ್ಸಿನವರೂ ಸ್ಯಾಡಿಸ್ಟ್ ಗಳೂ ಆಗಿರಬೇಕು. ನೀವು ನೀಲಿ ಚಿತ್ರಗಳನ್ನು ನೋಡುವುದಕ್ಕಿಂತ ದೊಡ್ಡ ಅಪರಾಧ ಮಾಡಿದ್ದೀರಿ ಎಂದು ಚಾನಲ್ ನಿರೂಪಕರು ಕೇಳಬಹುದಿತ್ತು, ಕೇಳಲಿಲ್ಲ.

ಇತ್ತೀಚಿಗೆ ನ್ಯೂಸ್ ಚಾನಲ್ ಗಳು ಬಾಲಿವುಡ್ ನ ಹಸಿಹಸಿ ಸೆಕ್ಸ್ ದೃಶ್ಯಗಳಿರುವ ಸಿನಿಮಾಗಳ ತುಣುಕುಗಳನ್ನು ಪ್ರದರ್ಶಿಸುವ ಕಾರ್ಯಕ್ರಮಗಳನ್ನು ನೀಡುತ್ತ ಬಂದಿವೆ. ನೀಲಿ ಚಿತ್ರಗಳಿಗೆ ಕಡಿಮೆಯಿಲ್ಲದಂತೆ ಇರುವ ಹಲವು ಸಿನಿಮಾಗಳ ದೃಶ್ಯಗಳನ್ನು ಒಂದೆಡೆ ಸೇರಿಸಿ ಪ್ಯಾಕೇಜ್ ರೂಪದಲ್ಲಿ ಕೊಡುತ್ತ ವೀಕ್ಷಕರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತ ಬಂದಿವೆ. ಸಚಿವರುಗಳ ಸೆಕ್ಸ್ ದೃಶ್ಯ ವೀಕ್ಷಣೆಯನ್ನು ಖಂಡಿಸುವ ಜತೆಜತೆಗೆ ತಾವೇನು ಮಾಡುತ್ತಿದ್ದೇವೆಂಬುದನ್ನೂ ಈ ಚಾನಲ್‌ಗಳು ಆತ್ಮವಿಮರ್ಶೆ ಮಾಡಿಕೊಳ್ಳಲಿ.

ಸಚಿವತ್ರಯರು ಕರ್ನಾಟಕದ ಮಾನವನ್ನು ರಾಷ್ಟ್ರ ಮಟ್ಟದಲ್ಲಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದರು. ನಮ್ಮ ಚಾನಲ್ ಗಳು ಕರ್ನಾಟಕದ ಮನಸ್ಸುಗಳನ್ನೇ ಕೆಡಿಸುವ ಕೆಲಸ ಮಾಡಿದವು. ಯಾರ ಅಂಕೆಗೂ ಸಿಗದ ಚಾನಲ್‌ಗಳು ಇನ್ನೇನೇನು ಅನಾಹುತಗಳನ್ನು ಮಾಡುತ್ತವೆಯೋ ಕಾದು ನೋಡಬೇಕು.