Wednesday, September 28, 2011

ಸಮಯ ಟಿವಿಯವರಿಗೆ ಲಕ್ಷ್ಮಿಯರೆಲ್ಲ ಪತಿಗಳ ಪಾಲಿನ ವಿನಾಶಿಗಳು, ಅಕಟಕಟಾ!


ಚಾನಲ್‌ಗಳಿಗೂ, ಜ್ಯೋತಿಷಿಗಳಿಗೂ ಯಾವ ಜನ್ಮಜನ್ಮಾಂತರದ ಸಂಬಂಧವೋ ಗೊತ್ತಿಲ್ಲ. ಮೊನ್ನೆಮೊನ್ನೆ ತಾನೇ ಟಿವಿ೯ನವರು ದರ್ಶನ್ ಮತ್ತು ಆತನ ಹೆಂಡತಿಯ ಜ್ಯೋತಿಷ್ಯವನ್ನು ಹಿಡಿದುಕೊಂಡು ಯಾರೋ ತಲೆಮಾಸಿದ ಜ್ಯೋತಿಷಿಗಳನ್ನು ಕೂರಿಸಿಕೊಂಡು ಚರ್ಚೆ ನಡೆಸುತ್ತಿದ್ದರು. ಅವನ್ಯಾರೋ ಮುಠ್ಠಾಳ ಕಂಠಭರ್ತಿ ಕುಡಿದು ಹೆಂಡತಿಯನ್ನು ಹೊಡೆದರೆ ಅದಕ್ಕೆ ಜ್ಯೋತಿಷ್ಯ ಏನು ಮಾಡುತ್ತೋ ಭಗವಂತನೇ ಬಲ್ಲ.

ನಿನ್ನೆ ಸಮಯ ಟಿವಿಯಲ್ಲಿ ಮತ್ತೊಂದು ಪ್ರಹಸನ. ಸಾಯಿಬಾಬಾ ಸತ್ತ ಕೆಲ ದಿನಗಳಲ್ಲೇ ಬಾಬಾರ ಆತ್ಮವನ್ನು ಸಮಯ ಟಿವಿಯ ಸ್ಟುಡಿಯೋಗೆ ಕರೆಸಿ ಮಾತನಾಡಿಸಿ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದನ್ನು ನೀವು ಬಲ್ಲಿರಿ. ಈಗ ವಿಚಿತ್ರವಾದ ಇನ್ನೊಂದು ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದಾರೆ. ಅದರ ಕಥೆಯೂ ಮಜಬೂತಾಗಿದೆ.

ಲಕ್ಷ್ಮಿಪತಿಯರಿಗೆ ಕಂಟಕ ಎನ್ನುವುದು ಕಾರ್ಯಕ್ರಮದ ಥೀಮು. ಕಾರ್ಯಕ್ರಮ ನಡೆಸಿದವರ ಪ್ರಕಾರ ಯಾರ ಹೆಸರು ಲಕ್ಷ್ಮಿ ಅಂತ ಇದೆಯೋ ಅವರ ಪತಿಯರಿಗೆಲ್ಲ ಕಂಟಕವಂತೆ. ಇದಕ್ಕೆ ಅವರು ಉದಾಹರಣೆಯಾಗಿ ಕೊಟ್ಟಿದ್ದು ಜನಾರ್ದನ ರೆಡ್ಡಿ, ವೀರಪ್ಪನ್, ಗ್ಯಾರಹಳ್ಳಿ ತಮ್ಮಯ್ಯ. ಸ್ಟುಡಿಯೋದಲ್ಲಿದ್ದ ಜ್ಯೋತಿಷಿಗಳಿಬ್ಬರು ಲಕ್ಷ್ಮಿ ಅನ್ನೋ ಹೆಸರೇ ಸರಿಯಲ್ಲ ಅನ್ನೋ ಹಂಗೆ ಮಾತಾಡಿದರು. ಒಬ್ಬನಂತೂ ಸರಸ್ವತಿ ಅಂತನೂ ಹೆಸರು ಇಟ್ಟುಕೊಳ್ಳಬಾರದು ಎಂದು ಆದೇಶ ಕೊಟ್ಟರು.

ಜನಾರ್ದನ ರೆಡ್ಡಿಯ ಪತ್ನಿಯ ಹೆಸರು ಅರುಣಾ ಲಕ್ಷ್ಮಿ. ಹೀಗಾಗಿ ರೆಡ್ಡಿಗೆ ಕಂಟಕವಂತೆ. ನಾಡಿನ ಭೂಮಿಯನ್ನು ಅಗೆದು ದೋಚಿ, ಮಾಡಬಾರದ್ದನ್ನೆಲ್ಲ ಮಾಡಿ ರೆಡ್ಡಿ ಜೈಲುಪಾಲಾದರೆ ಅದಕ್ಕೆ ಅರುಣಾ ಲಕ್ಷ್ಮಿ ಏನು ಮಾಡಿಯಾಳು? ಯಾರಾದರೂ ಕಾಮನ್‌ಸೆನ್ಸ್ ಇರುವವರು ಹೇಳುವ ಮಾತೇ ಇದು?

ಇನ್ನು ವೀರಪ್ಪನ್‌ಗೂ ಮುತ್ತುಲಕ್ಷ್ಮಿಯ ಹೆಸರಿಗೂ ಏನು ಸಂಬಂಧ? ಮುತ್ತುಲಕ್ಷ್ಮಿಯನ್ನು ಮದುವೆಯಾಗುವುದಕ್ಕೂ ಮುನ್ನವೇ ವೀರಪ್ಪನ್ ಕಾಡುಗಳ್ಳನಾಗಿದ್ದ, ಪೊಲೀಸು, ಅರಣ್ಯ ಅಧಿಕಾರಿಗಳನ್ನು ಕೊಂದಿದ್ದ. ಅವನ ಪಾಪಕ್ಕೆ ಅವನು ಪೊಲೀಸರ ಗುಂಡಿಗೆ ಸಿಕ್ಕು ಸತ್ತ. ಇದರಲ್ಲಿ ಮುತ್ತುಲಕ್ಷ್ಮಿಯ ಪಾತ್ರವೇನು ಬಂತು? ಮುತ್ತುಲಕ್ಷ್ಮಿಯಲ್ಲದೆ ಬೇರೆ ಇನ್ಯಾರೋ ಆಶಾ, ರೇಖಾ, ವಾಣಿಯನ್ನು ಆತ ಮದುವೆಯಾಗಿದ್ದರೆ ಪೊಲೀಸರು ಮಾಫಿ ಮಾಡುತ್ತಿದ್ದರಾ?

ಮೂರನೇ ಉದಾಹರಣೆ ಗ್ಯಾರಹಳ್ಳಿ ತಮ್ಮಯ್ಯನದು. ಆತನ ಹೆಂಡತಿಯ ಹೆಸರು ವರಮಹಾಲಕ್ಷ್ಮಿ. ಗ್ಯಾರಹಳ್ಳಿ ತಮ್ಮಯ್ಯ ಹಿಂದೆ ಮತ್ತೊಬ್ಬ ರೌಡಿ ಹಾ.ರಾ.ನಾಗರಾಜನನ್ನು ಕೊಂದುಹಾಕಿದ್ದ. ನಾಗರಾಜನ ಮಕ್ಕಳು ದ್ವೇಷ ಇಟ್ಟುಕೊಂಡು ತಮ್ಮಯ್ಯನನ್ನು ಮುಗಿಸಿದರು. ಇವರಿಬ್ಬರ ದ್ವೇಷಕ್ಕೆ ವರಮಹಾಲಕ್ಷ್ಮಿಯ ಹೆಸರು ಏಕೆ ಹೊಣೆ ಹೊರಬೇಕು? ನಾಗರಾಜನೂ ಸತ್ತನಲ್ಲ, ಆತನ ಹೆಂಡತಿಯ ಹೆಸರು ಲಕ್ಷ್ಮಿ ಅಲ್ಲವಲ್ಲ? ಅವನೇಕೆ ಸತ್ತ?

ಜೈಲಿನಲ್ಲಿ ಮುದ್ದೆ ಮುರಿದುಕೊಂಡು ಬಿದ್ದಿರುವವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಲೇ ಇದೆ. ಕಟ್ಟಾ ಮತ್ತವರ ಮಗ ಗ್ರಾಂಗಟ್ಟಲೆ ಅನ್ನ ತಿನ್ನುತ್ತಿದ್ದಾರೆ. ರಾಜಾ, ಕನ್ನಿಮೋಳಿ, ಅಮರಸಿಂಗ್, ಸುಧೀಂದ್ರ ಕುಲಕರ್ಣಿ, ಸತ್ಯಂ ರಾಜು ಇತ್ಯಾದಿಗಳು ಜೈಲು ಸೇರಿವೆ. ಅಕ್ಟೋಬರ್ ಮೂರರ ನಂತರ ಇನ್ನೂ ಸಾಕಷ್ಟು ಮಂದಿ ವಿವಿಐಪಿಗಳು ಜೈಲು ಪಾಲಾಗುವ ಸಾಧ್ಯತೆಗಳಿವೆ. ಇವರೆಲ್ಲರ ಪತ್ನಿಯರ ಹೆಸರೂ ಲಕ್ಷ್ಮಿ ಎಂತಲೇ ಇವೆಯೇ?

ಅದೆಲ್ಲ ಹಾಗಿರಲಿ, ಅನಿಷ್ಟಕ್ಕೆಲ್ಲ ಹೆಣ್ಣುಮಕ್ಕಳನ್ನೇ ದೂರುವುದು ಯಾಕೆ? ಈಗಲೂ ಹೆಣ್ಣುಮಕ್ಕಳ ಕಾಲ್ಗುಣ, ಕೈಗುಣ ಇತ್ಯಾದಿ ಕಪೋಲಕಲ್ಪಿತ ನಂಬಿಕೆಗಳನ್ನೆಲ್ಲ ಹೇರಿ ಅವರನ್ನು ಶೋಷಿಸಲಾಗುತ್ತಿದೆ. ಈಗ ಅವರ ಹೆಸರೂ ಅವರ ಪಾಲಿನ ಶತ್ರುವಾದರೆ ಹೇಗೆ?

ಲಕ್ಷ್ಮಿ ಎನ್ನುವುದು ಅತ್ಯಂತ ಪಾಪ್ಯುಲರ್ ಆದ ಹೆಸರು. ಈ ಹೆಸರಿರುವ ಲಕ್ಷಾಂತರ ಹೆಣ್ಣುಮಕ್ಕಳು ನಾಡಿನಲ್ಲಿದ್ದಾರೆ. ಇವರೆಲ್ಲರಿಗೂ ಸಮಯ ಟಿವಿ ಕೊಡುವ ಸಂದೇಶವಾದರೂ ಏನು? ನಿಮ್ಮ ಹೆಸರು ಬದಲಾಯಿಸಿಕೊಳ್ಳಿ ಅಂತಾನಾ? ಈ ಹೆಣ್ಣುಮಕ್ಕಳ ಗಂಡಂದಿರಿಗೆ ಕೊಡುವ ಸಂದೇಶ ಏನು? ಡೈವೋರ್ಸ್ ಮಾಡಿಬಿಡಿ ಎಂದೇ?

ಕೇವಲ ಅಗ್ಗದ ಜನಪ್ರಿಯತೆಗಾಗಿ ಸಮಯ ಟಿವಿಯವರು ಇಂಥದ್ದನ್ನೆಲ್ಲ ಮಾಡುತ್ತಿದ್ದಾರೆ ಎನ್ನುವುದಾದರೆ ಪ್ರಜ್ಞಾವಂತ ವೀಕ್ಷಕರಿಗೆ ಅದು ಕನಿಷ್ಠ ಕನಿಕರವನ್ನೂ ಮೂಡಿಸುವುದಿಲ್ಲ, ಬದಲಾಗಿ ಅಸಹ್ಯ ಮೂಡಿಸುತ್ತದೆ.

ಸಮಯದ ಮುಖ್ಯಸ್ಥರಾದ ಜಿ.ಎನ್.ಮೋಹನ್ ಮತ್ತು ಅವರ ತಂಡ ಇತ್ತೀಚಿಗೆ ಹೊಸಹೊಸ ಪ್ರಯೋಗಗಳನ್ನು ನಡೆಸಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇದರ ನಡುವೆ ಇಂಥ ಕಾರ್ಯಕ್ರಮಗಳು ಬಂದರೆ ಹೇಗೆ? ಇದನ್ನು ಅವರು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಇಷ್ಟು ವರ್ಷದ ತಮ್ಮ ಸಾಂಸ್ಕೃತಿಕ ಹಿನ್ನೆಲೆಗೆ ತಾವೇ ಮಸಿ ಬಳಿದುಕೊಳ್ಳುವಂತಾಗುತ್ತದೆ. ಹಾಗಾಗದಿರಲಿ ಎಂಬುದು ನಮ್ಮ ಪ್ರಾಮಾಣಿಕ ಆಶಯ.

2ಜಿ ಹಗರಣ: ದಿನೇಶ್ ಕುಕ್ಕುಜಡ್ಕ ಬರೆದ ಕಾರ್ಟೂನ್


Tuesday, September 27, 2011

ಸಾಹಿತ್ಯ ಓದದ ಪತ್ರಕರ್ತ ಜ್ಞಾನಪೀಠದ ಜಡ್ಜ್ ಮೆಂಟ್ ಕೊಟ್ಟ ವೈಚಿತ್ರ್ಯ!


ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಪ್ರಕಟವಾದ ನಂತರ ಭೈರಪ್ಪನವರ ಅಭಿಮಾನಿಗಳಲ್ಲಿ ಒಮ್ಮೆಲೆ ನಿರಾಶೆ, ಅಸಹನೆ, ಕೋಪ ಭಾವನೆಗಳು ಮೂಡಿದವು. ಇಂಧದೇ ಭಾವನೆಗಳಿಗೆ ಕೆಲವರು ಬರಹ ರೂಪ ಕೊಟ್ಟು ಕೆಂಡಕಾರಿದರು. ಪಾಟೀಲ ಪುಟ್ಟಪ್ಪನವರು ಮಾನಸಿಕ ಸಮತೋಲನ ಕಳೆದುಕೊಂಡವರಂತೆ ಮಾತನಾಡಿದರು. ಇದೇ ಧಾಟಿಯಲ್ಲಿ ಅಂಕಣ ಬರೆದವರು ಸ್ಟಾರ್ ಆಫ್ ಮೈಸೂರು ಪತ್ರಿಕೆ ಸ್ಥಾಪಕ ಸಂಪಾದಕ ಕೆ.ಬಿ.ಗಣಪತಿ. ಇದು ಚುರುಮುರಿ ಬ್ಲಾಗ್‌ನಲ್ಲೂ ಪ್ರಕಟಗೊಂಡಿದೆ. ಸೀಮಿತವಾದ ಅಧ್ಯಯನದ ಆಧಾರದ ಮೇಲೆಯೇ ಗಂಭೀರವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ ಪತ್ರಕರ್ತರು ನಿಷ್ಣಾತರು ಎನ್ನುವ ಆರೋಪಕ್ಕೆ ಗಣಪತಿ ಬರಹ ಪಕ್ಕಾ ಉದಾಹರಣೆ.

ಬರಹದ ಆರಂಭದಲ್ಲಿಯೇ ಮಹಾತ್ಮಗಾಂಧಿಗೆ ನೊಬೆಲ್ ಪ್ರಶಸ್ತಿ ಬಾರದಿರುವುದನ್ನು ಉಲ್ಲೇಖಿಸಿ ಬೇಸರ ವ್ಯಕ್ತಪಡಿಸುತ್ತಾರೆ. ಕೊನೆ ಸಾಲುಗಳಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗದ ಭೈರಪ್ಪನವರನ್ನು ಮಹಾತ್ಮ ಗಾಂಧಿಗೆ ಹೋಲಿಸಿ ತಮ್ಮ ಭೋಳೆತನವನ್ನು ಪ್ರದರ್ಶನಕ್ಕಿಡುತ್ತಾರೆ. ಪಾಟೀಲ ಪುಟ್ಟಪ್ಪನವರ ಮಾತನ್ನು ಸಂಪೂರ್ಣವಾಗಿ ಒಪ್ಪುವ ಗಣಪತಿ, ಮೊದಲೇ ತಮ್ಮ ಓದಿನ ಮಿತಿಯನ್ನು ಸ್ಪಷ್ಟಪಡಿಸುತ್ತಾರೆ. ನಾನೇನು ಕನ್ನಡ ಪ್ರಧ್ಯಾಪಕನಲ್ಲ ಅಥವಾ ಕನ್ನಡ ಸಾಹಿತ್ಯ ಜಗತ್ತನ್ನು ಆಳವಾಗಿ ಅಧ್ಯಯನ ಮಾಡಿದವನೂ ಅಲ್ಲ. ಹಾಗಂತ ನಾನೇನು ದಡ್ಡನಲ್ಲ, ಕನ್ನಡದ ಪ್ರಮುಖ ಪುಸ್ತಕಗಳ ಬಗ್ಗೆ ಪ್ರಕಟವಾಗುವ ವಿಮರ್ಶೆಗಳನ್ನು, ಪ್ರತಿಕ್ರಿಯೆಗಳನ್ನು ಆಗಾಗ ಓದಿದ್ದೇನೆ ಮತ್ತು ಕೆಲವು ಕೃತಿಗಳನ್ನು ಓದಿದ್ದೇನೆ, ಇದು ಅವರ ಹೇಳಿಕೆ.

ಈ ಮಾತಿನಲ್ಲಿ ಅವರು ಕಂಬಾರರ ಅಥವಾ ಭೈರಪ್ಪನವರ ಯಾವುದೇ ಕೃತಿಯನ್ನು ಓದಿರುವುದಾಗಿ ಹೇಳುವುದಿಲ್ಲ. ವಿಮರ್ಶೆ ಅಥವಾ ಪ್ರತಿಕ್ರಿಯೆಗಳನ್ನು ಓದಿರಬಹುದು. ವಿಶಿಷ್ಟ ಅಂದರೆ ತಾವು ಓದಿರುವ ವಿಮರ್ಶೆ, ಪ್ರತಿಕ್ರಿಯೆಗಳ ಆಧಾರದ ಮೇಲೆಯೇ ಸುದೀರ್ಘ ಅಭಿಪ್ರಾಯ ಮಂಡಿಸುವ ದಾರ್ಷ್ಟ್ಯ ಅವರದು. ಗಣಪತಿಯವರ ಪ್ರಕಾರ ಭೈರಪ್ಪನವರಿಗೆ ಕಂಬಾರರಿಗಿಂತ ಮೊದಲು ಜ್ಞಾನಪೀಠ ದೊರಕಬೇಕಿತ್ತು. ಪ್ರಶಸ್ತಿ ಆಯ್ಕೆ ಸಮಿತಿ ಮೊದಮೊದಲು ಯಾವುದೇ ಪಂಥದ ಪ್ರಾಬಲ್ಯವಿಲ್ಲದೆ ಕೆಲಸ ನಿರ್ವಹಿಸಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಯ್ಕೆ ಸಮಿತಿ ಎಡಪಂಥೀಯ ಆಲೋಚನೆ ಕಡೆಗೆ ವಾಲಿರುವ ಕಾರಣ ಭೈರಪ್ಪನವರಿಗೆ ಪ್ರಶಸ್ತಿ ಲಭಿಸಲಿಲ್ಲವಂತೆ.

ಇನ್ನೂ ಮುಂದೆ ಹೋಗಿ, ಮುಂದೊಂದು ದಿನ ಆಯ್ಕೆ ಸಮಿತಿ ಭೈರಪ್ಪನವರನ್ನು ಆಯ್ಕೆ ಮಾಡದಿರುವುದಕ್ಕೆ ಪಶ್ಚಾತ್ತಾಪ ಪಡಬಹುದು ಎಂದೂ ಗಣಪತಿ ಎಚ್ಚರಿಸಿದ್ದಾರೆ. ನೊಬೆಲ್ ಸಮಿತಿ ಗಾಂಧಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡದ್ದಕ್ಕೆ ಪರಿತಪಿಸುವಂತೆ, ಜ್ಞಾನಪೀಠ ಆಯ್ಕೆ ಸಮಿತಿಯೂ ಪರಿತಪಿಸಬೇಕಾಬಹುದು ಎನ್ನುತ್ತಾರೆ ಅವರು. ಭೈರಪ್ಪನವರು ಈ ಮಟ್ಟಿನ ಹೊಗಳಿಕೆಗೆ ಎಷ್ಟು ಅರ್ಹರು ಎನ್ನುವುದು ಬೇರೆ ಪ್ರಶ್ನೆ. ಆದರೆ, ಅವರ ಸಾಹಿತ್ಯ ಓದದೆ, ಅದರ ಒಳ ಹುನ್ನಾರಗಳನ್ನು ಗ್ರಹಿಸದೆ, ಹೀಗೆ ಏಕಾಏಕಿ ಗಾಂಧಿಗೆ ಹೋಲಿಸುವುದು ಸುಮ್ಮನೆ ಮಾತೆ? ಬಹುಶಃ ಅರ್ಧಂಬರ್ಧ ತಿಳಿದುಕೊಂಡ ಪತ್ರಕರ್ತ ಮಾತ್ರ ಹೀಗೆ ಮಾಡಬಲ್ಲ. ಇಂತಹ ಅನೇಕರು ನಮ್ಮ ಮಧ್ಯೆ ಇದ್ದಾರೆ.

ಕೆ.ಬಿ.ಗಣಪತಿಯವರ ವಿತಂಡವಾದ ಮಾತು ಬಾಲಿಷ ಚಿಂತನೆಗಳಿಗೆ ಈ ಕೆಳಗಿನ ಸಾಲುಗಳು ಉದಾಹರಣೆಯಾಗಬಹುದು. ಈ ಸಾಲುಗಳನ್ನು ಸೂಕ್ಷ್ಮವಾಗಿ ಗಮನಿಸಿ:


It is believed that S.L. Bhyrappa is branded as one with rightist orientation or as being a pro-Hindu in his writings. If this is so, one can also brand U.R. Anantha Murthy, Girish Karnad and Kambar as those with leftist orientation and as being anti-Hindu. 
Does it mean that being a rightist and pro-Hindu is a disqualification to deserve a Jananpith award while being a leftist and anti-Hindu is a qualification to deserve it?


ಮಾನ್ಯ ಕೆ.ಬಿ.ಗಣಪತಿಯವರ ಪ್ರಕಾರ ಗಿರೀಶ್ ಕಾರ್ನಾಡರು ಮತ್ತು ಯು.ಆರ್.ಅನಂತಮೂರ್ತಿಯವರು ಎಡಪಂಥೀಯ ವಿಚಾರಧಾರೆಯುಳ್ಳವರು ಮಾತ್ರವಲ್ಲ, ಅವರು ಹಿಂದೂ ವಿರೋಧಿಗಳು! ಇಂಥ ತೀರ್ಮಾನಕ್ಕೆ ಗಣಪತಿ ಹೇಗೆ ಬಂದರು? ಇದನ್ನು ಅವರು ಗೊತ್ತುಮಾಡಿಕೊಂಡಿದ್ದು ಯಾವ ಶಾಲೆಯಲ್ಲಿ ಓದುವಾಗ? ಅಥವಾ ಸೆಕ್ಯುಲರಿಸ್ಟರೆಲ್ಲ ಹಿಂದೂ ವಿರೋಧಿಗಳೇ ಆಗಿರುತ್ತಾರೆ ಎಂಬ ಗಟ್ಟಿಯಾದ ನಿಲುವು ಗಣಪತಿಯವರದಿರಬಹುದೇ? ಇದಕ್ಕೆ ಆಧಾರಗಳಾದರೂ ಏನು? ಕನಿಷ್ಠ ಪಕ್ಷ ಗಣಪತಿಯವರು ಕಾರ್ನಾಡರ ಒಂದು ನಾಟಕ ಅಥವಾ ಅನಂತಮೂರ್ತಿಯವರ ಒಂದು ಕಾದಂಬರಿಯನ್ನಾದರೂ ಓದಿರಬಹುದೇ? ಓದಿಲ್ಲದಿದ್ದರೆ ಯಾಕೆ ಇಂಥ ಅಸಹ್ಯಗಳನ್ನೆಲ್ಲ ಬರೆಯುತ್ತಾರೆ?

Thursday, September 22, 2011

ಬ್ಲಾಕ್‌ಮೇಲ್ ಪತ್ರಕರ್ತರ ವಿರುದ್ಧ ಮುಧೋಳ ಬಂದ್!


ಏನು ಆಗಬಾರದಿತ್ತೋ ಅದೆಲ್ಲವೂ ಆಗುತ್ತಿದೆ. ಮುಧೋಳದಲ್ಲಿ ಬ್ಲಾಕ್‌ಮೇಲ್ ಪತ್ರಕರ್ತರ ಕಾಟ ತಡೆಯಲಾರದೆ ಅಲ್ಲಿನ ಜನರು ಬಂದ್ ಆಚರಿಸಿದ್ದಾರೆ. ಈ ಸುದ್ದಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ವಿವಾದಾತ್ಮಕ ಸುದ್ದಿಗಳ (ಅದರಲ್ಲೂ ವಿಶೇಷವಾಗಿ ಕೋಮುಭಾವನೆ ಪ್ರಚೋದಿಸುವ ಬರೆಹಗಳು) ಬಗ್ಗೆ ಗಲಾಟೆ, ಬಂದ್ ನಡೆಯುವುದು ಸಾಮಾನ್ಯ. ಆದರೆ ಪೀತ ಪತ್ರಕರ್ತರ ವಿರುದ್ಧ ಜನರು ಊರನ್ನೇ ಬಂದ್ ಮಾಡಿದ ಘಟನೆ ಇತಿಹಾಸದಲ್ಲಿ ಮೊದಲಿರಬೇಕು. ಮುಧೋಳ ಜನರನ್ನು ಕಾಡುತ್ತಿರುವವರು ದಿನಪತ್ರಿಕೆಯವರಲ್ಲ, ಸ್ಥಳೀಯ ವಾರಪತ್ರಿಕೆಗಳು ಎಂಬುದು ಗಮನಾರ್ಹ ಅಂಶ. ಕೆಲ ಪತ್ರಕರ್ತರೂ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಇತ್ತೀಚೆಗೆ ಬ್ಲಾಕ್‌ಮೇಲ್ ಜರ್ನಲಿಸಂ ದಿನಪತ್ರಿಕೆ, ಟಿವಿ ಚಾನಲ್‌ಗಳಿಗೂ ಕಾಲಿಟ್ಟಿರುವುದನ್ನು ಮರೆಯುವಂತಿಲ್ಲ. ಮಾಧ್ಯಮ ಸಮೂಹ ಎಚ್ಚೆತ್ತುಕೊಳ್ಳಲು ಇದು ಸಕಾಲ. ಅಂದಹಾಗೆ ಪ್ರಜಾವಾಣಿ ವರದಿಯ ಕೆಲವು ಅಂಶಗಳು ಈ ಕೆಳಕಂಡಂತಿವೆ.

ಮುಧೋಳ: ಬ್ಲ್ಯಾಕ್‌ಮೇಲ್ ಪತ್ರಿಕೋದ್ಯಮ ಹಾಗೂ ನಕಲಿ ಪತ್ರಕರ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಂಥವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಮಂಗಳವಾರ ನಡೆಸಿದ ಮುಧೋಳ ಬಂದ್ ಸಂಪೂರ್ಣ ಯಶಸ್ವಿಯಾಯಿತು. 
ಪತ್ರಿಕಾರಂಗ ಸಂವಿಧಾನದ ನಾಲ್ಕನೆಯ ಅಂಗವಾಗಿದ್ದು, ಸಮಾಜದಲ್ಲಿ ಪತ್ರಿಕೆಗಳಿಗೆ ಹಾಗೂ ಪತ್ರಕರ್ತರಿಗೆ ಗೌರವದ ಸ್ಥಾನವಿದೆ. ಆದರೆ ಕೆಲವು ನಕಲಿ ಪತ್ರಕರ್ತರಿಂದಾಗಿ ಇಡೀ ಪತ್ರಿಕೋದ್ಯಮಕ್ಕೆ ಕಳಂಕ ಬರುವಂತಾಗಿದೆ. ಪೀತ ಪತ್ರಿಕೋದ್ಯಮಿಗಳು ಮತ್ತು ಪತ್ರಕರ್ತರನ್ನು ನಿಯಂತ್ರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. 
ಪ್ರತಿಭಟನೆ ನಂತರ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ನಂತರ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಕಿಸಾನ ಘಟಕದ ಅಧ್ಯಕ್ಷ ನಂದಕುಮಾರ ಪಾಟೀಲ, ಪತ್ರಿಕೆಗಳ ವಿರುದ್ಧ ತಮ್ಮ ಆಕ್ರೋಶವಿಲ್ಲ. ಕೆಲವು ವಾರ ಪತ್ರಿಕೆಗಳು ಪೀತ ಪತ್ರಿಕೋದ್ಯಮಕ್ಕೆ ಪ್ರಚೋದಿಸುತ್ತಿವೆ. ಅದರಿಂದಾಗಿ ಬ್ಲ್ಯಾಕ್‌ಮೇಲ್ ಪತ್ರಕರ್ತರ ಹಾವಳಿ ಹೆಚ್ಚಾಗಿ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದರು. 
ಪತ್ರಕರ್ತ ಬಾಬುರೆಡ್ಡಿ ತುಂಗಳ ಮಾತನಾಡಿ, ಪತ್ರಕರ್ತರು ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಮಾಹಿತಿ ಹಕ್ಕಿನ ದುರುಪಯೋಗ ಆಗುತ್ತಿದೆ. ನೋಂದಣಿ ಇಲ್ಲದ ಪತ್ರಿಕೆಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು. 
ಜಿಪಂ ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ, ಪ್ರಮುಖರಾದ ನಂದಕುಮಾರ ಪಾಟೀಲ, ಸತೀಶ ಬಂಡಿವಡ್ಡರ, ರಾಚಪ್ಪ ಕರೇಹೊನ್ನ, ಎಸ್.ಆರ್.ನಿರಾಣಿ, ಪುರಸಭೆ ಅಧ್ಯಕ್ಷ ರಾಜು ಪಾಲೋಜಿ, ಪುರಸಭೆ ಸದಸ್ಯರಾದ ಸದಾಶಿವ ಬಾಗೋಡಿ, ಮಾರುತಿ ಪವಾರ, ಪಾಂಡು ಭೋವಿ, ಕಿಶೋರ ಮಸೂರಕರ, ಗಿರಿಮಲ್ಲಪ್ಪ ತೇಲಿ, ಇಬ್ರಾಹಿಂ ಸಾರವಾನ, ಸೋಮಶೇಖರ ಕರೇಹೊನ್ನ, ಮಹಮ್ಮದಸಾಬ ಕೌಜಲಗಿ ಹಾಗೂ ವಿವಿಧ ಸಮಾಜದ ಹಾಗೂ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 
ನಗರದಲ್ಲಿ ಕೆಲಹೊತ್ತು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದ ವರ್ತಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ವಾಹನಗಳ ಸಂಚಾರ ಸ್ಥಗಿತಗೊಂಡಿದ್ದರು.

Tuesday, September 20, 2011

ಪಾಟೀಲರ ನಿರ್ಗಮನದೊಂದಿಗೆ ಎದ್ದಿರುವ ಗಂಭೀರ ಪ್ರಶ್ನೆಗಳು...


ಶಿವರಾಜ ಪಾಟೀಲರು ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಿರ್ಗಮಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಕೋರ್ಟು ಕಟಕಟೆ ಹತ್ತಿಳಿಯುತ್ತಿದ್ದಾರೆ, ಜೈಲು ಅವರ ಸನಿಹದಲ್ಲೇ ನಿಚ್ಚಳವಾಗಿ ಕಾಣಿಸುತ್ತಿದೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತವನ ಪುತ್ರ ಜೈಲಿನಲ್ಲೇ ಕೊಳೆಯುತ್ತಿದ್ದಾರೆ. ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಡಾ. ಎಚ್.ಎನ್.ಕೃಷ್ಣ ಸಹ ಬಂಧನಕ್ಕೆ ಒಳಗಾಗುವುದು ಬಹುತೇಕ ಖಚಿತವಾಗಿದೆ. ಗಣಿ ಲೂಟಿಕೋರ ಜನಾರ್ದನ ರೆಡ್ಡಿ ಸಿಬಿಐ ಕೈಗೆ ಸಿಕ್ಕು ಜೈಲು ಪಾಲಾಗಿದ್ದಾನೆ. ಅವನ್ಯಾರೋ ದರ್ಶನ್ ಎಂಬ ನಟ ಹೆಂಡತಿಯನ್ನೇ ಹೊಡೆದು, ಸಿಗರೇಟಿನಿಂದ ಸುಟ್ಟು ಜೈಲು ಅಸ್ತಮಾದಿಂದ ನರಳುತ್ತಿದ್ದಾನೆ. ಗಣಿಕಪ್ಪ ಪಡೆದ ಏಳುನೂರಕ್ಕೂ ಹೆಚ್ಚು ಅಧಿಕಾರಿಗಳ ಮೇಲೆ ಕೇಸು ಹೂಡುವ ಸಮಯವೂ ಹತ್ತಿರವಾಗಿದೆ. ಜೈಲು ಸೇರುವವರ ಪಟ್ಟಿ ಇನ್ನೂ ದೊಡ್ಡದಿದೆ. ಕೇಸುಗಳು ದಂಡಿಯಾಗಿ ಬೀಳುತ್ತಲೇ ಇವೆ. ಗಣಿಕಪ್ಪ ಪಡೆದವರ ಪಟ್ಟಿಯಲ್ಲಿ ಪತ್ರಕರ್ತರ ಹೆಸರು ಕಾಣಿಸಿಕೊಂಡ ಪರಿಣಾಮ ಜನರು ಮಾಧ್ಯಮಗಳನ್ನೂ ಅಪನಂಬಿಕೆಯಿಂದ ನೋಡುವಂತಾಗಿದೆ.

ಜನ ಯಾರನ್ನು ನಂಬಬೇಕು?

ನ್ಯಾಯಾಧೀಶರು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಮಂತ್ರಿಗಳು, ಅಧಿಕಾರಿಗಳು, ಉದ್ದಿಮೆದಾರರು, ಮಾಧ್ಯಮದವರು ಎಲ್ಲರ ಮುಖವಾಡಗಳೂ ಕಳಚಿ ಬೀಳುತ್ತಿವೆ. ಇದು ಅತ್ಯಂತ ಅಪಾಯಕಾರಿಯಾದ ಸೂಕ್ಷ್ಮ ಸಂದರ್ಭ. ಹೀಗೆ ವ್ಯವಸ್ಥೆಯ ಎಲ್ಲ ಭಾಗಗಳೂ ಮಲಿನವಾದಾಗ ಜನರು ಹತಾಶೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ನಾವೆಲ್ಲರೂ ಸಿನಿಕರಾಗುವುದಕ್ಕೆ, ನಿರಾಶಾವಾದಿಗಳಾಗುವುದಕ್ಕೆ ಇದೆಲ್ಲವೂ ದಾರಿಮಾಡಿಕೊಡುತ್ತದೆ.

ಕಟು ವ್ಯಂಗ್ಯವೆಂದರೆ ಭ್ರಷ್ಟಚಾರದ ವಿರುದ್ಧ ಕತ್ತಿ ಝಳಪಿಸುತ್ತಿರುವವರೂ ಬಹುತೇಕ ಪ್ರಕರಣಗಳಲ್ಲಿ ಭ್ರಷ್ಟರೇ ಆಗಿದ್ದಾರೆ. ಇಲ್ಲಿ ಪ್ರಾಮಾಣಿಕರ ಪಾತ್ರ ಏನೇನೂ ಇಲ್ಲವೆನ್ನಿಸುವಷ್ಟು ನಿರ್ವಾತ ಕಾಡುತ್ತಿದೆ. ಯಡಿಯೂರಪ್ಪನವರ ಹಗರಣಗಳನ್ನು ಹೊರಗೆ ತಂದಿದ್ದು ಕುಮಾರಸ್ವಾಮಿ. ಹಾಗೆಯೇ ಕುಮಾರಸ್ವಾಮಿ ಹಗರಣಗಳನ್ನು ಹೊರತಂದಿದ್ದು ಯಡಿಯೂರಪ್ಪ. ಗಣಿರೆಡ್ಡಿಗಳ ವಿರುದ್ಧ ತಿರುಗಿಬಿದ್ದವರೂ ಅದೇ ಗಣಿದಂಧೆಕೋರರು. ಎಲ್ಲೋ ಒಂದೆರಡು ಅಪವಾದಗಳನ್ನು ಹೊರತುಪಡಿಸಿದರೆ ಭ್ರಷ್ಟಾಚಾರದ ವಿರುದ್ಧ ಹೋರಾಟವೂ ಭ್ರಷ್ಟಾಚಾರಿಗಳ ಅಸ್ತ್ರವಾಗೇ ಪರಿಣಮಿಸುತ್ತಿದೆ. ಒಂದೇ ಒಂದು ಆಶಾವಾದವೆಂದರೆ ಇಂಥ ಒಬ್ಬನ ಕಣ್ಣನ್ನು ಇನ್ನೊಬ್ಬನು ಕೀಳುವ ಮೂಲಕ ಭ್ರಷ್ಟರು ಪರಸ್ಪರರನ್ನು ಬೆತ್ತಲಾಗಿಸುತ್ತಿದ್ದಾರೆ. ಪ್ರಾಮಾಣಿಕರು ಇಲ್ಲಿ ಪ್ರೇಕ್ಷಕರು ಮಾತ್ರ. ಇದು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ದೂರಗಾಮಿ ಪರಿಣಾಮಗಳನ್ನು ಬಿರುತ್ತದೆ ಎಂಬ ನಂಬಿಕೆ ಮಾತ್ರ ಹುಟ್ಟುತ್ತಿಲ್ಲ.

****

ನ್ಯಾಯಮೂರ್ತಿ ಶಿವರಾಜ ಪಾಟೀಲ ಲೋಕಾಯುಕ್ತ ಸ್ಥಾನದಿಂದ ನಿರ್ಗಮಿಸುವುದರೊಂದಿಗೆ ನಮ್ಮೆದುರಿನ ಆತಂಕಗಳು ಇನ್ನಷ್ಟು ಬೆಳೆದು ನಿಂತಿದೆ. ಮುಂದೆ ಲೋಕಾಯುಕ್ತರಾಗುವವರು ಯಾರು? ಅವರನ್ನು ಎಲ್ಲಿಂದ ಹುಡುಕಿ ತರಲಾಗುತ್ತದೆ?

ಎ.ಟಿ.ರಾಮಸ್ವಾಮಿಯವರ ವರದಿಯನ್ನು ನೀವು ಗಮನಿಸಿರಬಹುದು. ಇಡೀ ಜುಡಿಷಿಯಲ್ ಕಾಲೋನಿಯೇ ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿದೆ ಎಂಬುದನ್ನು ಅವರು ದಾಖಲಿಸಿದ್ದರು. ಈ ಬಡಾವಣೆಯಲ್ಲಿ ಸೈಟು ಪಡೆಯಲು ನ್ಯಾಯಮೂರ್ತಿ ಸಂತೋಷ್ ಹೆಗಡೆಯವರೂ ಸೇರಿದಂತೆ ಸಾಕಷ್ಟು ನ್ಯಾಯಾಧೀಶರು ನಿರಾಕರಿಸಿದರು. ಕೆಲವರು ಪಡೆದರು.

ಇದಕ್ಕಿಂತ ಗಂಭೀರವಾದ ಪ್ರಶ್ನೆ ಏನೆಂದರೆ ಸ್ವಂತ ಮನೆ-ನಿವೇಶನ ಹೊಂದಿದ ನ್ಯಾಯಾಧೀಶರಿಗೂ ಈ ಬಡಾವಣೆಯಲ್ಲಿ ಅವಕಾಶ ಕಲ್ಪಿಸಲಾಯಿತು. ಇದಕ್ಕೆ ಹೌಸಿಂಗ್ ಸೊಸೈಟಿಗಳ ಬೈಲಾಗಳು ಅವಕಾಶ ನೀಡುವುದಿಲ್ಲ. ಶಿವರಾಜ ಪಾಟೀಲರು ಇಲ್ಲಿ ೯೬೦೦ ಚದರ ಅಡಿಯಷ್ಟು ಜಾಗ ಪಡೆಯುವಾಗ ಅವರ ಬಳಿ ಒಂದು ಮನೆಯಿತ್ತು. ಬೆಂಗಳೂರಿನಲ್ಲಿ ಇವತ್ತು ೨೦ ೩೦ ಅಡಿ ಅಳತೆಯ ಸೈಟಿನ ಬೆಲೆ ೨೦ ಲಕ್ಷ ದಾಟಿದೆ. ಇಂಥ ೧೬ ಸೈಟುಗಳನ್ನು ಈ ೯೬೦೦ ಚದರ ಅಡಿ ಜಾಗದಲ್ಲಿ ಹಂಚಬಹುದು! ಬಡವರಿಗೆ ಸೂರು ಕೊಡಬೇಕಾದ್ದು ಸರ್ಕಾರದ ಕರ್ತವ್ಯ. ನ್ಯಾಯಾಧೀಶರುಗಳ ಬಡವರ ಪಟ್ಟಿಯಲ್ಲಿ ಬರುತ್ತಾರಾ? ಬಹುಶಃ ಇತರ ನ್ಯಾಯಾಧೀಶರಿಗೂ ಇಂಥದ್ದೇ ಕೊಡುಗೆಗಳು ದೊರಕಿರಬಹುದು.

ಶಿವರಾಜ ಪಾಟೀಲರು ಇದಾದ ನಂತರ ತಮ್ಮ ಪತ್ನಿಯ ಹೆಸರಲ್ಲಿ ಮತ್ತೊಂದು ಹೌಸಿಂಗ್ ಸೊಸೈಟಿಯಿಂದ ಸೈಟು ಪಡೆದರು.  ಅದು ಸಹ ೪೦೧೨ ಚದರ ಅಡಿಗಳ ಬೃಹತ್ ಸೈಟು. ವಿವಾದಕ್ಕೆ ಸಿಲುಕಿಕೊಂಡಾದ ಅದನ್ನು ವಾಪಾಸು ಮಾಡಿದರು. ಆದರೆ ಕಾಲ ಮಿಂಚಿ ಹೋಗಿತ್ತು. ಆರೋಪಗಳ ಏಟು ತಡೆಯಲಾಗದೆ ಈಗ ರಾಜೀನಾಮೆ ಕೊಟ್ಟು ಹೋಗಿದ್ದಾರೆ.

ಈಗ ಶಿವರಾಜ ಪಾಟೀಲರ ನಿರ್ಗಮನ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನ್ಯಾಯ ಎಲ್ಲರಿಗೂ ಒಂದೇ ಅಲ್ಲವೇ? ಹೌಸಿಂಗ್ ಸೊಸೈಟಿಗಳ ಬೈಲಾ ಉಲ್ಲಂಘಿಸಿ ಸೈಟು ಪಡೆದ ಇತರ ಜಡ್ಜುಗಳ ಮೇಲೂ ಇದೇ ನ್ಯಾಯದ ವ್ಯಾಖ್ಯಾನವೇ ಅನ್ವಯವಾಗುವುದಿಲ್ಲವೆ? ಹಾಗಿದ್ದರೆ ೮೦ಕ್ಕೂ ಹೆಚ್ಚು ನ್ಯಾಯಾಧೀಶರ ಮೇಲೆ ತನಿಖೆಯಾಗುತ್ತದೆಯೇ? ಅಥವಾ ಈ ನ್ಯಾಯಾಧೀಶರ ಪೈಕಿ ಯಾರಾದರೂ ಆಯಕಟ್ಟಿನ ಸ್ಥಾನದಲ್ಲಿದ್ದಾಗ, ವಿಶೇಷ ಕಾರಣಗಳಿಗೆ ಸುದ್ದಿಯಾದಾಗ ಅವರ ಮೇಲೆ ಎರಚಲು ಈ ಹಳೆಯ ಕೊಳಚೆ ರಾಡಿಯನ್ನು ಬಳಸಿಕೊಳ್ಳಲಾಗುತ್ತದೆಯೇ? ಹೀಗೆ ಸೆಲೆಕ್ಟಿವ್ ಆಗಿ ಹಣಿಯುವುದರ ಬದಲು ಇದರ ಮೂಲವನ್ನೇ ಹುಡುಕಿ ಗಲೀಜು ತೆಗೆದು ಶುದ್ಧಿ ಮಾಡುವ ಕಾಯಕ ಯಾಕೆ ಮಾಡಬಾರದು? ಇದೆಲ್ಲ ಯಾರ ಹೊಣೆ?

****

ನೈತಿಕತೆಯ ವ್ಯಾಖ್ಯಾನ ಕಾಲಕಾಲಕ್ಕೆ ಬದಲಾಗುತ್ತಿದೆ. ನೈತಿಕ ಪ್ರಶ್ನೆಗಳು ಈಗ ಯಾರಿಗೂ ಮುಖ್ಯವೆನ್ನಿಸದಷ್ಟು ಅದನ್ನು ಹಿಂದೆ ಬಿಟ್ಟು ಮುಂದೆ ಸಾಗುತ್ತಿದ್ದೇವೆ. ಸಾಮಾಜಿಕ ಜೀವನದಲ್ಲಿ ನಿಸ್ಪೃಹತೆಯಿಂದ, ಪ್ರಾಮಾಣಿಕತೆಯಿಂದ ಬದುಕಿದ ನೂರಾರು ಆದರ್ಶಜೀವಿಗಳನ್ನು ನಾವು ಕಂಡಿದ್ದೇವೆ. ಈಗಲೂ ಅಂಥ ಜೀವಗಳು ಇದ್ದೇ ಇವೆ. ಆದರೆ ಇರುವವರು ಈಗ ಮುನ್ನೆಲೆಯಲ್ಲಿ ಇಲ್ಲ. ಅವರು ಯಾರಿಗೂ ಬೇಕಾಗೂ ಇಲ್ಲ.

ಈಗ ಕಾನೂನು-ಕಟ್ಲೆಯ ಪರಿಭಾಷೆಗಳೇ ಎಲ್ಲ ಸಂದರ್ಭಗಳನ್ನು ನಿರ್ವಚಿಸುತ್ತಿವೆ. ರಾಜಕೀಯ ಪಕ್ಷಗಳ ಮುಖಂಡರು ತಮ್ಮ ತಮ್ಮ ಪಾರ್ಟಿಗಳನ್ನು ಟಿವಿ ಸ್ಟುಡಿಯೋಗಳಲ್ಲಿ ಕುಳಿತು ಸಮರ್ಥಿಸಿಕೊಳ್ಳುವಂತೆ ಸಾರ್ವಜನಿಕ ಬದುಕಿನ ಎಲ್ಲ ಜನ-ಸಂಸ್ಥೆಗಳೂ ನೈತಿಕ ಪ್ರಶ್ನೆಗಳನ್ನು ಬಿಟ್ಟುಕೊಟ್ಟು ಕೋರ್ಟು ವಾದದಂಥ ಟೆಕ್ನಿಕಾಲಿಟಿಯೊಳಗೆ ಕಳೆದುಹೋಗುತ್ತಿವೆ. ಇಂಥ ವಿತಂಡವಾದಗಳು ನಮ್ಮೆದುರಿನ ಕೊಚ್ಚೆ-ಕೊಳಕನ್ನು ಇನ್ನಷ್ಟು ಹೆಚ್ಚಿಸುತ್ತವೆ ಎಂಬ ಆತಂಕ ನಮ್ಮನ್ನು ಕಾಡದೇ ಇರುವುದರ ಪರಿಣಾಮವಾಗಿ ಹೊಸ ಬಗೆಯ ಸಾಮಾಜಿಕ ವ್ಯವಸ್ಥೆಯೊಂದನ್ನು ನಾವು ಸೃಷ್ಟಿಸುತ್ತಿದ್ದೇವೆ. ಇಂಥ ನೈತಿಕ ಚೌಕಟ್ಟಿಲ್ಲದ ವ್ಯವಸ್ಥೆಯೊಳಗೆ ನಾವು ಹೆಚ್ಚು ಕಾಲ ನೆಮ್ಮದಿಯಿಂದ ಇರಲಾರೆವು ಎಂಬ ಸತ್ಯ ಮನವರಿಕೆ ಆಗಲೇಬೇಕಿದೆ.

ಒಬ್ಬ ರಾಜಕಾರಣಿ ಮತ್ತೊಬ್ಬ ಅಧಿಕಾರಿ ಜೈಲು ಪಾಲಾಗುವುದನ್ನು ಕಂಡು ನಾವು ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದೇವೆ. ನಿಜಕ್ಕೂ ಆತಂಕಪಡುವ ಸಂದರ್ಭ ಇದು ಎಂದು ನಮಗನ್ನಿಸುತ್ತಲೇ ಇಲ್ಲ. ಭ್ರಷ್ಟ ವ್ಯವಸ್ಥೆಯ ಒಂದು ಹುಲ್ಲುಕಡ್ಡಿಯನ್ನು ಅಲ್ಲಾಡಿಸಿದರೆ ಇಡೀ ವ್ಯವಸ್ಥೆ ನಾಶವಾಗುವುದಿಲ್ಲ.

ಭ್ರಷ್ಟಾಚಾರದ ಕುರಿತಾದ ನಮ್ಮ ತಿಳಿವಳಿಕೆಗಳೂ ಪ್ರಬುದ್ಧವಾಗಿಲ್ಲ. ಭ್ರಷ್ಟಾಚಾರವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಸುತ್ತಿರುವ ಆಧುನಿಕ ಪರಿಪಾಠಗಳು, ಕೊಳ್ಳುಬಾಕ ಸಂಸ್ಕೃತಿ, ಲೋಭದ ಬೆನ್ನತ್ತಿ ಹೊರಟ ಅನೈಸರ್ಗಿಕ ಸ್ಪರ್ಧೆ ನಮ್ಮನ್ನು ಕಾಡಿಸುವ, ನಾಚಿಸುವ ಬದಲಿಗೆ ಬೆರಗಿನ ಸಂಭ್ರಮವನ್ನು ನೀಡುತ್ತಿವೆ. ನಾವು ನಮ್ಮ ಸುಖವನ್ನು ಮಾಲ್‌ಗಳ, ರೆಸಾರ್ಟುಗಳ, ಐಷಾರಾಮಿ ವಿಲ್ಲಾಗಳ, ಎಂಜಿ ರೋಡಿನ ಆಕರ್ಷಣೆಗಳಲ್ಲಿ ಕಂಡುಕೊಳ್ಳುತ್ತಿದ್ದೇವೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಲೇ ನೈತಿಕ ಭ್ರಷ್ಟಾಚಾರದಲ್ಲಿ ನಮ್ಮನ್ನು ನಾವು ಕಳೆದುಕೊಂಡಿದ್ದೇವೆ.

ಬಸವಣ್ಣನ ನಾಡು ನಮ್ಮದು. ಸಾಮಾಜಿಕ ನ್ಯಾಯದ ಸೂತ್ರಗಳನ್ನು ೧೨ನೇ ಶತಮಾನದಲ್ಲೇ ಜಗತ್ತಿಗೆ ಕೊಟ್ಟವರು ಬಸವಾದಿ ಶರಣರು. ಇವತ್ತು ನಮ್ಮ ಸಾಮಾಜಿಕ ವ್ಯವಸ್ಥೆ ಇನ್ನಷ್ಟು ಛಿದ್ರಗೊಂಡಿರುವುದಲ್ಲದೇ ಹೊಸಬಗೆಯ ಅಪಾಯಕಾರಿ ವರ್ಗಗಳನ್ನು ಸೃಷ್ಟಿಸಿದೆ. ಬಡವರು ದಟ್ಟದರಿದ್ರರಾಗುವ, ಶ್ರೀಮಂತರು ಅತಿಶ್ರೀಮಂತರಾಗುವ ಈ ಹೊತ್ತಿನಲ್ಲಿ ನಾಡನ್ನು ಸರಿಯಾದ ದಾರಿಯಲ್ಲಿ ಮುಂದಕ್ಕೆ ಕರೆದೊಯ್ಯುವ ಆತ್ಮಶುದ್ಧಿಯುಳ್ಳ ನಾಯಕರು ಮುಂದೆಬರಬೇಕಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಭ್ರಷ್ಟಾಚಾರಿಗಳನ್ನೇ ಮುಂದೆ ಬಿಡುವುದರ ಬದಲು ಪ್ರಾಮಾಣಿಕರು ಈ ಕಾರ್ಯವನ್ನು ಕೈಗೊಳ್ಳಬೇಕಿದೆ.

ಇದಾಗದಿದ್ದರೆ ನಮ್ಮ ಮುಂದಿನ ಹಾದಿ ಇನ್ನಷ್ಟು ಭೀಕರವಾಗಲಿದೆ.

ಕೊನೆಮಾತು: ಕನ್ನಡನಾಡು ಇಷ್ಟೆಲ್ಲ ಬಿಕ್ಕಟ್ಟುಗಳನ್ನು ಎದುರಿಸುವ ಸಂದರ್ಭದಲ್ಲೇ ಕನ್ನಡದ ಶ್ರೇಷ್ಠ ಕವಿ-ನಾಟಕಕಾರರಲ್ಲಿ ಒಬ್ಬರಾದ ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಈ ಜಂಜಾಟದಲ್ಲೇ ರಿಲೀಫ್ ಕೊಟ್ಟ ಕಂಬಾರರಿಗೆ ಅಭಿನಂದನೆಗಳು, ಕೃತಜ್ಞತೆಗಳು. ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ಕಂಬಾರರ ಮೂಲಕ ದೊರಕಿರುವುದು ಬಿಕ್ಕಟ್ಟಿನ ಸಂದರ್ಭದಲ್ಲಿ ನಾಡಿನ ಸಾಂಸ್ಕೃತಿಕ ಚೇತನಗಳು ಕ್ರಿಯಾಶೀಲವಾಗಲು ಕಾರಣವಾಗಲಿ, ಸ್ಫೂರ್ತಿ ಒದಗಿಸಲಿ.

Monday, September 19, 2011

ಮಾಧ್ಯಮ ಭ್ರಷ್ಟಾಚಾರವನ್ನೇಕೆ ಸಮಾಜ ಅಷ್ಟು ಸುಲಭವಾಗಿ ಅರಗಿಸಿಕೊಳ್ಳುತ್ತಿದೆ?


ಪ್ರಜಾವಾಣಿಯಲ್ಲಿ ಗಣಿರೆಡ್ಡಿಗಳಿಂದ ಹಣ ಪಡೆದಿದ್ದರೆನ್ನಲಾದ ಖ್ಯಾತನಾಮ ಪತ್ರಕರ್ತರಿಬ್ಬರ ಹೆಸರು ಪ್ರಕಟಗೊಂಡಾಗ ಕನ್ನಡ ಪತ್ರಿಕೋದ್ಯಮದಲ್ಲಿ ದೊಡ್ಡ ಕೋಲಾಹಲವೇ ಉಂಟಾಗುತ್ತದೇನೋ ಎಂಬ ಭಾವನೆ ಮಾದ್ಯಮ ಲೋಕದಲ್ಲಿ ವ್ಯಕ್ತವಾಯಿತು. ಅದಕ್ಕೆ ಪೂರಕವಾಗಿ ಪತ್ರಕರ್ತರ ನಡುವೆ ಪರಸ್ಪರ ಎಸ್‌ಎಂಎಸ್‌ಗಳ ಪ್ರವಾಹವೇ ಹರಿದಾಡಿತು, ಗಂಭೀರ ಚರ್ಚೆಯೊಂದನ್ನು ಹುಟ್ಟು ಹಾಕಬೇಕಾದ ಸಂದರ್ಭವೊಂದು ಏನೊಂದು ಚರ್ಚೆಯಿಲ್ಲದೇ ತೆರೆಗೆ ಸರಿಸಲ್ಪಡುವಾಗಲೇ ಹರ್ಷಕುಮಾರ್ ಕುಗ್ವೆಯವರ ಲೇಖನ ಅದೇ ವಿಷಯದ ಚರ್ಚೆಗೆ ವೇದಿಕೆಯನ್ನೊದಗಿಸಿದೆ.

ಹರ್ಷ ಶಿವಮೊಗ್ಗ ಜಿಲ್ಲೆಯವರೆಂಬ ಕಾರಣಕ್ಕೆ ಕೆ ಎಚ್ ಬಿ ಕಾಲನಿಯ ನಿವೇಶನಗಳ ಪ್ರಸ್ತಾಪ ಮಾಡಿರುವುದು ಕಾಕತಾಳೀಯ ವಾಗಿರಬಹುದು. ಬಹಳಷ್ಟು ಕಮೆಂಟುಗಳು ಅದರ ಸುತ್ತಲೇ ಪ್ರಕಟವಾಗಿರುವುದರಿಂದ ಅದಕ್ಕೆ ಸೂಕ್ತ ಸಮಜಾಯಿಷಿ ನೀಡುವ ಜವಾಬ್ದಾರಿಯನ್ನು ಸಂಪಾದಕೀಯ ಸಹಾ ಹೊರಬೇಕಾಗುತ್ತದೆ. ಹರ್ಷ ಪ್ರಸ್ತಾಪಿಸಿರುವ ಕೆಎಚ್‌ಬಿ ನಿವೇಶನಗಳ ವಿಷಯದಲ್ಲಿ ಸೈಟು ಪಡೆದವರೆಲ್ಲಾ ಭ್ರಷ್ಟರೆಂದು ಭಾವಿಸುವ ಅಗತ್ಯವೇನೂ ಇಲ್ಲ. ಅಷ್ಟು ಮಾತ್ರ ಅಲ್ಲ. ಹರ್ಷ ಪ್ರಾಮಾಣಿಕರೆಂದು ಪ್ರಸ್ತಾಪಿಸುವ ಪತ್ರಕರ್ತರಷ್ಟೇ ಬದ್ಧತೆಯಿರುವ ಪತ್ರಕರ್ತರು ಬಹಳ ಜನ ಶಿವಮೊಗ್ಗದಲ್ಲಿ ಇದ್ದಾರೆ. ಅಂತಹವರು ಕೆಎಚ್ ಬಿ ನಿವೇಶನಗಳ ಹಂಚಿಕೆಯ ಸುತ್ತಲಿನ ವಾಸ್ತವವನ್ನು ಸಾರ್ವಜನಿಕರ ಮುಂದಿಡುವ ಬದ್ಧತೆಯನ್ನು ತೋರಬೇಕು. ಅದು ಉಳಿದ ಜಿಲ್ಲೆಗಳ ಪತ್ರಕರ್ತರಿಗೂ ಮಾದರಿಯಾಗಬಹುದು.

ಈ ರೋಗಗ್ರಸ್ಥ  ವ್ಯವಸ್ಥೆಯನ್ನು ಸುಧಾರಿಸಬೇಕೆಂದು ಬಯಸುವ ಪ್ರಯತ್ನದಲ್ಲಿ ಬೇರೆಲ್ಲರಿಗಿಂತ ವಿಶೇಷ ಹೊಣೆಗಾರಿಕೆ ನಮ್ಮದಾಗಿರುತ್ತದೆ ಎಂದು ಭಾವಿಸುವ ಎಲ್ಲ ಮಾನವಂತ ಪತ್ರಕರ್ತರೂ ಹರ್ಷಕುಮಾರ ಬರೆಹದ ಆಶಯವನ್ನು ಸರಿಯಾಗಿ ಗ್ರಹಿಸುತ್ತಾರೆ ಎಂಬ ಆಶಾಭಾವನೆ ನನ್ನದು. ಹರ್ಷ ನೀಡಿರುವ ಉದಾಹರಣೆಗಳ ಬಿಡಿ ಬಿಡಿ ಚರ್ಚೆಯಿಂದಾಗಲೀ, ಥಟ್ ಅಂತಾ ಹೇಳಿ? ಎಂಬ ಶೈಲಿಯ ಪ್ರಶ್ನೆಗಳಿಂದಾಗಲೀ, ವಕೀಲಿಕೆಯ ಧೋರಣೆಯಲ್ಲಿ ಸಾಕ್ಷಿ ಆಧಾರಗಳನ್ನು ಕೇಳುವುದರಿಂದಾಗಲೀ ಚರ್ಚೆ ಪರಿಪೂರ್ಣವಾಗಲಾರದು. ವಾದ-ಪ್ರತಿವಾದದ ಆಯಾಮಕ್ಕೆ ಹೊರತಾದ ಆತ್ಮಾಲೋಕನದ ದನಿಯ ಚರ್ಚೆ ಇಲ್ಲಿ ಬಹಳ ಮುಖ್ಯ.

 ದೇಶದ ಮಾಧ್ಯಮ ಜಗತ್ತು ಹಾಗೂ ಮಧ್ಯಮ ವರ್ಗ ಹಿಂದೆಂದಿಗಿಂತ ತೀವ್ರವಾಗಿ ಭ್ರಷ್ಟಾಚಾರದ ವಿಷಯಕ್ಕೆ ಸ್ಪಂದಿಸು ತ್ತಿರುವಾಗ ನನ್ನ ನಿಲುವೇನಾಗಿರಬೇಕು? ಏನಾಗಿದೆ? ಮತ್ತು ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಏನು ಹೇಳುತ್ತೇನೆ?  ನನ್ ನನಗೇ ಕೆಲವು ವಿಷಯಗಳು ಸ್ಪಷ್ಟವಾಗಬೇಕಿರುವ ಕಾರಣಕ್ಕಾಗಿಯಾದರೂ,  ನನ್ನನ್ನು ಒಂದು ಚೌಕಟ್ಟಿನಲ್ಲಿ ನಿಲ್ಲಿಸಿಕೊಳ್ಳುವ ಸಲುವಾಗಿ ಹಾಗೂ ದಾರಿ ತಪ್ಪಿದರೆ ನನ್ನ ಮಾತುಗಳನ್ನು ಮುಂದೆ ಯಾರಾದರೂ ನೆನಪಿಸಲಿ ಎನ್ನುವ ಕಾರಣಕ್ಕಾಗಿಯಾದರೂ ಈ ಕುರಿತು ಬರೆದುಕೊಳ್ಳಬೇಕಾಗಿದೆ.  ನಾನೇನೋ ಶೇಕಡಾ ನೂರು ಸಾಚಾ ಎಂಬ ಭಾವನೆ ನನಗಿಲ್ಲದಿದ್ದರೂ ಇಂತಹ ಸಂದರ್ಭ ನನ್ನೊಳಗೇ ಸೃಷ್ಟಿಸಿರುವ ಆತ್ಮಾವಲೋಕನಕ್ಕೆ ನಾನೂ ಒಳಗಾಗಲೇಬೇಕಿದೆ

ನನಗನಿಸಿದಂತೆ ಮೇಲಿನ ಉಲ್ಲೇಖದ ಪ್ರಕಾರ ಹರ್ಷ ಅವರಿಗೆ ಬೇರೆಯವರ ಬಗೆಗಿನ ಟೀಕೆಗಿಂತ ಪತ್ರಿಕಾ ವಲಯದಲ್ಲಿ ಆತ್ಮಾವಲೋಕನ ನಡೆಯಲಿ ಎಂಬುದೇ ಆಗಿದೆ. ಹಾಗಾಗಿ ಇದು ಕೇವಲ ಶಿವಮೊಗ್ಗ ಪತ್ರಕರ್ತ ಮಿತ್ರರ ಕುರಿತ ಟೀಕೆ-ಟಿಪ್ಪಣಿ ಮಾತ್ರ ಎಂದು ಭಾವಿಸಿ ಚರ್ಚೆಯನ್ನು ಸೀಮಿತಗೊಳಿಸುವುದು ಸರಿಯಲ್ಲ. ನಿವೇಶನ ಹಗರಣವೂ ಒಳಗೊಂಡಂತೆ ಹರ್ಷ ಪ್ರಸ್ತಾಪಿಸಿರುವ ಭ್ರಷ್ಟಚಾರದ ಹಲವು ನಿದರ್ಶನಗಳಿಗೆ ಶಿವಮೊಗ್ಗ ಅಥವಾ ಬೆಂಗಳೂರು ಎಂಬ ಹೆಸರು ಬದಲಿಸಿ ರಾಜ್ಯದ ಯಾವುದೇ ಜಿಲ್ಲೆಯ ಹೆಸರು ಮತ್ತು ಪತ್ರಿಕಾ ವಲಯದೊಂದಿಗೆ ಸಮೀಕರಿಸಬಹುದು. ವಾಸ್ತವ ಕಟುವಾಗಿರುತ್ತದೆ. ಅದನ್ನು ಸ್ವೀಕರಿಸುವ ಪ್ರಾಂಜಲ ಮನಸ್ಸು ಇರಬೇಕು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್ ಜೆ ಬಾಲಕೃಷ್ಣನ್ ಭೂ ಹಗರಣ ಬಯಲಾದಾಗ ಅಷ್ಟೊಂದು ಅಲ್ಲೋಲ-ಕಲ್ಲೋಲ ಏಕೆ ಉಂಟಾಯಿತು? ನ್ಯಾಯಾಂಗದ ಪಾವಿತ್ರ್ಯತೆ ಬಗ್ಗೆ ಜನರಿಗಿದ್ದ ನಂಬಿಕೆಯನ್ನು ಹುಸಿಗೊಳಿಸಿದರೆಂದೇ ಅಲ್ಲವೇ ಪ್ರಜ್ಞಾವಂತ ವಲಯ ತಲ್ಲಣಗೊಂಡದ್ದು? ಕಾರ್ಯಾಂಗ-ಶಾಸಕಾಂಗಗಳ ಭ್ರಷ್ಟತೆಯನ್ನು ಅರಗಿಸಿಕೊಂಡಷ್ಟು ಸುಲಭವಾಗಿ ನ್ಯಾಯಾಂಗದ ಭ್ರಷ್ಟಾಚಾರವನ್ನು ಅರಗಿಸಿಕೊಳ್ಳಲಾಗದು ಎಂಬ ಕಾರಣಕ್ಕಲ್ಲವೇ ಮಾಧ್ಯಮ ವಲಯ ವಿಶೇಷ ಆಸ್ಥೆವಹಿಸಿ ಗಂಭೀರ ಚರ್ಚೆಗಳನ್ನು ಹುಟ್ಟಹಾಕಿದ್ದು? ಒಬ್ಬ ನ್ಯಾಯಮೂರ್ತಿಯ ಭ್ರಷ್ಟಚಾರದ ವಿಷಯ ಇಡೀ ನ್ಯಾಯಾಂಗದ ಪಾವಿತ್ರ್ಯದ ಬಗೆಗೆ ಸಂಶಯಗಳನ್ನು ಹೇಗೆ ಹುಟ್ಟುಹಾಕಿತೋ, ಅದೇ ರೀತಿ ಸಂವಿಧಾನದ ನಾಲ್ಕನೇ ಅಂಗ ಎಂದು ಪರಿಗಣಿಸಲ್ಪಟ್ಟಿರುವ ಪತ್ರಿಕಾರಂಗವನ್ನು ಕನ್ನಡದ ಖ್ಯಾತನಾಮ ಪತ್ರಕರ್ತರಿಬ್ಬರು ಭ್ರಷ್ಟಗೊಳಿಸಿದ್ದರೆಂಬ ವಿಷಯ ಏಕೆ ಪತ್ರಿಕಾರಂಗದ ಪಾವಿತ್ರ್ಯದ ಬಗೆಗಿನ ಸಂಶಯಗಳಿಗೆ ದಾರಿ ಮಾಡಲಿಲ್ಲ? ಗಂಭೀರ ಚರ್ಚೆಗಳನ್ನು ಹುಟ್ಟು ಹಾಕಲಿಲ್ಲ? ಇಡೀ ದೇಶಕ್ಕೇ ದೇಶವೇ ಅಣ್ಣಾ ಹಜಾರೆಯ ಭ್ರಷ್ಟಾಚಾರ ವಿರೋಧಿ ದನಿಗೆ ದನಿಗೂಡಿಸುವ ಸಂದರ್ಭದಲ್ಲೇ ಈ ಖ್ಯಾತನಾಮ ಪತ್ರಕರ್ತರು ಧರಿಸಿರುವ ಮುಖವಾಡಗಳು ಮಾತ್ರ ಏಕೆ ರಕ್ಷಿಸಲ್ಪಟ್ಟವು? ಇದರಲ್ಲಿ ಓರ್ವ ಪತ್ರಕರ್ತನ ಪಟಾಲಮ್ಮು ದಿನಬೆಳಗಾದರೆ ಆ ಹಗರಣ-ಈ ಹಗರಣ ಎಂದು ಕಂಡ ಕಂಡವರ ಬಗ್ಗೆ ರೀಲು ಸುತ್ತಿ ಅಷ್ಟೇ ವೇಗದಲ್ಲಿ ಸ್ಪಷ್ಟೀಕರಣಗಳನ್ನು ಪ್ರಕಟಿಸುವ ನಿರ್ಲಜ್ಜತನವನ್ನು ಪ್ರದರ್ಶಿಸುತ್ತಲೇ ಬಂದಿದೆ, ಹೀಗೆ ಎಲ್ಲೆಂದರಲ್ಲಿ ಕೆಸರೆರಚಿದರೆ ತಮ್ಮ ಬಾಸ್ ಮೇಲೆ ಬಿದ್ದಿರುವ ಕೆಸರಿನ ಕಡೆ ಗಮನ ಹರಿಯದಂತೆ ಮಾಡಬಹುದು ಎಂಬುದು ಇವರ ಲೆಕ್ಕಾಚಾರ. ಆದರೆ ಈ ಸರ್ಕಸ್ ನಿರೀಕ್ಷಿತ ಫಲನೀಡಿದಂತೆ ಕಾಣುತ್ತಿಲ್ಲ. ಪಶ್ಚಾತ್ತಾಪ ಮನೋಭಾವದ ಲವಲೇಶವೂ ಪ್ರಕಟಿಸದ ಇಂಥ ಜನರ ಭಂಡತನ ನಿಜಕ್ಕೂ ಗಾಬರಿ ಹುಟ್ಟಿಸುವಂಥದ್ದು.

ಸಮಾಜದ ಎಲ್ಲಾ ವರ್ಗಗಳೂ ತಮ್ಮ ಪ್ರಶ್ನಾವಳಿಯ ಹಾಗೂ ಸ್ಪಷ್ಟೀಕರಣದ ವ್ಯಾಪ್ತಿಗೆ ಬರುತ್ತವೆಂಬ ಅಘೋಷಿತ ನಿಯಮ ಹೇರುತ್ತಿರುವ ಮಾಧ್ಯಮ ವಲಯ ತಮ್ಮನ್ನು ಮಾತ್ರ ಏಕೆ ಅದಕ್ಕೆ ಹೊರತಾಗಿಸಿಕೊಂಡಿದೆ. ಹಾಗೆ ನೋಡಿದರೆ ಸಂವಿಧಾನದಲ್ಲಿ ಪತ್ರಕರ್ತರಿಗೆ ವಿಶೇಷ ಪ್ರಾತಿನಿಧ್ಯವನ್ನೇನೂ ನೀಡಲಾಗಿಲ್ಲ. ಜನಸಾಮಾನ್ಯರಿಗಿರುವ ವಾಕ್  ಸ್ವಾತಂತ್ರ್ಯದ ಪರಿಮಿತಿಯಲ್ಲೇ ಪತ್ರಕರ್ತರೂ ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೆ ಎಲ್ಲಾಕಡೆ ವಿಶೇಷ ಪ್ರಾತಿನಿಧ್ಯವನ್ನು ನಿರೀಕ್ಷಿಸುವುದು ಪತ್ರಕರ್ತರ ಜಾಯಮಾನವೇ ಆಗಿ ಹೋಗಿದೆ. ಇಂಥಹ ಪ್ರವೃತ್ತಿಯಿಂದಾಗಿಯೇ ಮಾದ್ಯಮ ವಲಯದ ಬಗ್ಗೆ ಜನರಲ್ಲಿ ಅತಿರಂಜಿತ ಕಲ್ಪನೆಗಳು, ಭ್ರಮೆಗಳು ಮನೆಮಾಡಿಕೊಂಡಿವೆ,

ಸದಾ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯ ಬಗ್ಗೆ ಕಾಳಜಿ ವಹಿಸುವ ಮಾಧ್ಯಮದ ಮಂದಿ ಈ ಖ್ಯಾತನಾಮ ಪತ್ರಕರ್ತರ ವಿಷಯದಲ್ಲಿ ಮೌನ ವಹಿಸಿರುವುದೇಕೆ? ಎಲ್ಲಾ ಕಡೆ ಮುಕ್ತ ಚರ್ಚೆಯಾಗಲಿ ಎಂದು ಬಯಸುವ ನಾವು ಅನಾಮಧೇಯವಾಗಿ ನಮ್ಮ ಅಭಿಪ್ರಾಯಗಳನ್ನು ದಾಖಲಿಸಿಬೇಕಾದ ದುಸ್ಥಿತಿ ಏಕೆ ಬಂದಿದೆ? ಯಾರಿಗೂ ಪತ್ರಕರ್ತರ ಭ್ರಷ್ಟಾಚಾರದ ವಿಷಯ ಚರ್ಚೆಯಾಗುವುದು ಬೇಕಿಲ್ಲ. ಕುಂಬಳಕಾಯಿ ಕಳ್ಳ ಎಂದರೆ ಈಗ ಬಹುತೇಕ ಪತ್ರಕರ್ತರು ಈಗ ಹೆಗಲುಮುಟ್ಟಿ ನೋಡಿಕೊಳ್ಳುವುದಿಲ್ಲ. ಏಕೆಂದರೆ ಆ ಕುಂಬಳ ಕಾಯಿಯನ್ನು ಹೆಗಲ ಮೇಲಿಂದ ಕೆಳಗಿಳಿಸಿ ರುಚಿಯಾದ ಪಾಯಸವನ್ನು ಮಾಡಿ ಸವಿದಾಗಿದೆ. ಈ ಕುಂಬಳ ಕಾಯಿ ಸೈಟುಗಳ ರೂಪದಲ್ಲಿ ಮಾತ್ರವಲ್ಲ. ಸಂದರ್ಶನಗಳು, ಮುಖಾಮುಖಿಗಳು, ನ್ಯೂಸ್ ಕವರೇಜ್ ಗಳ ಹೆಸರಲ್ಲಿ  ರಾಜಕೀಯ ಅವಕಾಶಗಳು, ವರ್ಗಾವಣೆಗಳು, ಮಕ್ಕಳ ಬರ್ತ್ ಡೇ, ಮ್ಯಾರೇಜ್ ಆನಿವರ್ಸರಿ  ಗಿಫ್ಟುಗಳು, ಟೆಂಡರ್ ಲಾಬಿಗಳು, ಪ್ರಿಂಟಿಂಗ್ ಆರ್ಡರ್‌ಗಳು, ಮನೆಲೀಸುಗಳು, ಕಂಪ್ಯೂಟರ್‌ಗಳು ಹೀಗೆ ಹಲವು ತೆರನಾಗಿ ಸಂದಾಯವಾಗಿ ಬಿಟ್ಟಿದೆ.

ಇಂತಹ ಸಂದರ್ಭದಲ್ಲಿ ನಾವು ಮಾತ್ರ ಟಾರ್ಗೆಟ್ ಆಗಿದ್ದೇವೆ ಎಂದು ಶಿವಮೊಗ್ಗದ ಪತ್ರಕರ್ತ ಮಿತ್ರರು ಭಾವಿಸಬೇಕಾಗಿಲ್ಲ. ಕರ್ನಾಟಕದ ಚರಿತ್ರೆಯಲ್ಲಿ ಶಿವಮೊಗ್ಗ ಜಿಲ್ಲೆ ಹಲವು ಕಾರಣಗಳಿಗಾಗಿ ರಾಜಕೀಯವಾಗಿ, ಸಾಮಾಜಿಕವಾಗಿ ನಾಡಿನ ಜನತೆಯ ತಿಳಿವಳಿಕೆಯನ್ನು ವಿಸ್ತರಿಸುವಂಥ ಚಳವಳಿಗಳು, ಚಿಂತನೆಗಳಿಗೆ ಮೇಲ್ಪಂಕ್ತಿಯಾಗಿದೆ. ಹಾಗಾಗಿ ಶಿವಮೊಗ್ಗದ ಪತ್ರಕರ್ತ ಮಿತ್ರರು ರಾಜಕಾಣಿಗಳ ಶೈಲಿಯಲ್ಲಿ ಆಧಾರಗಳನ್ನು ಕೇಳುವ ಪರಿಪಾಠ ಕೈಬಿಡಬೇಕು. ನಾವು ಪತ್ರಕರ್ತರು ಕೇವಲ ಮೇಲ್ಪದರದ ಸಂಶಯಗಳನ್ನು ಆದರಿಸಿ  ತನಿಖಾ ವರದಿಗಳನ್ನು ಬರೆದು ಸತ್ಯಾಂಶ ಬಯಲಿಗೆಳೆಯಲು ಮುಂದಾಗುವುದಿಲ್ಲವೇ? ಈ ಸರಳ ಸತ್ಯ ನಮಗೆಲ್ಲರಿಗೂ ಗೊತ್ತಿದೆ.  ಪ್ರಸ್ತುತ ಕೆ ಎಚ್ ಬಿ ವಿಷಯದಲ್ಲಿ ಏನೇನಾಗಿದೆ ಎಂಬುದರ ವಿವರಗಳನ್ನು ಜನತೆಯ ಮುಂದಿಡುವ ಕೆಲಸಕ್ಕೆ ಅಲ್ಲಿನ ಪ್ರಜ್ಞಾವಂತ ಪತ್ರಕರ್ತರು ಮುಂದಾಗಬೇಕು. ಆ ಮೂಲಕ ನಾಡಿನ ಪತ್ರಿಕಾರಂಗದ ಹುಳುಕುಗಳ, ಓರೆಕೋರೆಗಳ ಆತ್ಮಾವಲೋಕನಕ್ಕೆ ಮುನ್ನುಡಿ ಬರೆಯಬೇಕು.

-ಓರ್ವ ಪತ್ರಕರ್ತ

Saturday, September 17, 2011

ಬ್ರೆಕಿಂಗ್ ನ್ಯೂಸ್: ಗಣಿ ಕಪ್ಪ ಪಡೆದ ಪತ್ರಕರ್ತರ ನಿವಾಸಗಳ ಮೇಲೆ ದಾಳಿ


ಉದಯವಾಣಿಗೆ ರವಿ ಹೆಗಡೆ ಸಂಪಾದಕರಾಗಿ ಬಂದ ನಂತರ ಸುಳ್ ಸುದ್ದಿ ಎಂಬ ಕಾಲಂ ಪರಿಚಯಿಸಿದ್ದನ್ನು ನೀವು ನೋಡಿದ್ದೀರಿ. ಸಾಧಾರಣವಾಗಿ ಈ ಸುಳ್ ಸುದ್ದಿ ಪ್ರಯೋಗವಾಗುವುದು ರಾಜಕಾರಣಿಗಳ ಮೇಲೆ. ಮೀಡಿಯಾ ಮಂದಿಯ ಮೇಲೂ ಪ್ರಯೋಗವಾದರೆ ಹೇಗಿರುತ್ತೆ ಎಂದು ಊಹಿಸಿ ಕೆಲವು ಸುಳ್ಳು ಸುದ್ದಿ ಸೃಷ್ಟಿಸಿದ್ದೇವೆ. ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು ಯಾರೂ ಬೇಜಾರ್ ಮಾಡ್ಕೋಬೇಡಿ ಎಂದು ಮೊದಲೇ ವಿನಂತಿಸುತ್ತೇವೆ.

****

ಗಣಿ ಕಪ್ಪ ಪಡೆದ ಪತ್ರಕರ್ತರ ನಿವಾಸಗಳ ಮೇಲೆ ದಾಳಿ

ಅಕ್ರಮ ಗಣಿಗಾರಿಕೆ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಪೊಲೀಸರು ನಿನ್ನೆ ರಾತ್ರಿ ಏಕಾಏಕಿ ಬೆಂಗಳೂರಿನ ಕೆಲವು ಪ್ರತಿಷ್ಠಿತ ಪತ್ರಕರ್ತರ ನಿವಾಸಗಳು ಹಾಗು ಮಾಧ್ಯಮ ಸಂಸ್ಥೆಗಳ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ದಾಳಿ ಸಂದರ್ಭದಲ್ಲಿ ಮಹತ್ವದ ದಾಖಲೆಗಳು ಹಾಗು ಅಪಾರ ಪ್ರಮಾಣದ ನಗ-ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಕ್ರಮ ಗಣಿಗಾರಿಕೆ ಸಂಬಂಧ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ನೀಡಿರುವ ವರದಿಯಲ್ಲಿ ಅಡಕವಾಗಿರುವ ಯು.ವಿ.ಸಿಂಗ್ ಅವರ ತನಿಖಾ ವರದಿಯಲ್ಲಿ ಪತ್ರಕರ್ತರಿಗೂ ಜನಾರ್ದನ ರೆಡ್ಡಿಗೆ ಸಂಬಂಧಿಸಿದ ಬೇನಾಮಿ ಸಂಸ್ಥೆಯೊಂದು ಅಪಾರ ಪ್ರಮಾಣದ ಕಪ್ಪ ನೀಡಿರುವ ಕುರಿತು ಮಾಹಿತಿ ನೀಡಲಾಗಿತ್ತು. ಈ ಸಂಬಂಧ ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಗಳಲ್ಲಿ ವರದಿಯಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಯು.ವಿ.ವರದಿಯಲ್ಲಿ ಗಣಿ ಕಪ್ಪ ಪಡೆದ ಪತ್ರಕರ್ತರ ಇನಿಷಿಯಲ್ಸ್‌ಗಳನ್ನು ನಮೂದಿಸಲಾಗಿದ್ದು, ಈ ಪೈಕಿ ವಿ.ಭಟ್, ಆರ್.ಬಿ., ಸಂಜಯ್ ಸರ್ ಎಂಬ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಸಿಬಿಐ ಪೊಲೀಸರು ಯಶಸ್ವಿಯಾಗಿದ್ದು, ಈ ಎಲ್ಲರನ್ನು ಬಂಧಿಸಿ ಐಪಿಸಿ ಸೆಕ್ಷನ್ ೫೧೧ರ ಅಡಿಯಲ್ಲಿ ದೂರು ದಾಖಲಿಸಿಕೊಂಡು, ವಿಚಾರಣೆ ನಡೆಸಲಾಗುತ್ತಿದೆ,

****

ಕಸ್ತೂರಿ ವರದಿಗಾರರಿಗೆ ದೇವೇಗೌಡರ ಕುಟುಂಬ ಕುರಿತ ಮಾಹಿತಿ ಶಿಬಿರ

ದೇವೇಗೌಡರ ಪೂರ್ಣ ಕುಟುಂಬದ ಸಮಗ್ರ ವಿವರಗಳು, ಅವರ ನಡೆನುಡಿಗಳು, ಅವರು ಕ್ಯಾಮೆರಾಗಳಿಗೆ ಚೆನ್ನಾಗಿ ಕಾಣುವಂತೆ ಮಾಡುವ ಬಗೆ ಈ ಕುರಿತು ಅಧ್ಯಯನ ಶಿಬಿರವೊಂದನ್ನು ಕಸ್ತೂರಿ ವರದಿಗಾರರಿಗಾಗಿ ಏರ್ಪಡಿಸಲಾಗಿತ್ತು.

ಜೆಡಿಎಸ್ ರಾಜ್ಯ ವಕ್ತಾರ ವೈ.ಎಸ್.ವಿ.ದತ್ತ ನೇತೃತ್ವದಲ್ಲಿ ನಡೆದ ಈ ಶಿಬಿರದಲ್ಲಿ ದೇವೇಗೌಡರ ಕುಟುಂಬವನ್ನು ಚಾನಲ್‌ನಲ್ಲಿ ವಿಜೃಂಭಿಸಲು ಅಗತ್ಯವಾಗಿರುವ ಕೌಶಲ್ಯದ ಕುರಿತು ಮಾಹಿತಿ ಒದಗಿಸಿದರು.

ಎಚ್.ಡಿ.ಕುಮಾರಸ್ವಾಮಿಯವರ ಮನೆ, ಕಾರು, ಆಫೀಸು ಎಲ್ಲೆಡೆ ಕಸ್ತೂರಿ ಚಾನಲ್‌ನ ಕ್ಯಾಮೆರಾಗಳನ್ನು ಸಿಸಿ ಟಿವಿ ಮಾದರಿಯಲ್ಲಿ ಶಾಶ್ವತವಾಗಿ ಸ್ಥಾಪಿಸುವ ಮೂಲಕ ೨೪ ಗಂಟೆ ಕವರೇಜ್ ಸುಲಭವಾಗಿ ಮಾಡಬಹುದು ಎಂಬ ಸಲಹೆಯನ್ನು ಕೆಲವು ವರದಿಗಾರರು ಈ ಸಂದರ್ಭದಲ್ಲಿ ನೀಡಿದರು ಎಂದು ಗೊತ್ತಾಗಿದೆ.

****

ರಾಜೀವ್ ಚಂದ್ರಶೇಖರ್‌ಗೆ ಪವಾಡಗಳಲ್ಲಿ ನಂಬಿಕೆ

ರಾಜ್ಯಸಭಾ ಸದಸ್ಯ, ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ತೊಡಗಿರುವ ರಾಜ್ಯದ ಏಕೈಕ ಸಂಸದ ರಾಜೀವ್ ಚಂದ್ರಶೇಖರ್ ಅವರಿಗೆ ಪವಾಡಗಳಿಗೆ ನಂಬಿಕೆ ಇದೆಯಂತೆ. ಇದನ್ನು ಸ್ವತಃ ರಾಜೀವ್ ಚಂದ್ರಶೇಖರ್ ಅವರೇ ಬಹಿರಂಗಪಡಿಸಿದ್ದಾರೆ.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಸುವರ್ಣ ನ್ಯೂಸ್ ಹಾಗು ಕನ್ನಡಪ್ರಭದೊಂದಿಗೆ ಮಾತನಾಡಿದ ರಾಜೀವ್ ಚಂದ್ರಶೇಖರ್ ಅವರು ಈ ಹಿಂದೆ ರಾಜ್ಯಸಭಾ ಸದಸ್ಯರಾಗಿ ಚುನಾವಣೆಗೆ ಸ್ಪರ್ಧಿಸಿದ್ದಾಗ ನಡೆದ ಘಟನಾವಳಿಗಳನ್ನು ಮೆಲುಕು ಹಾಕಿದ್ದಾರೆ.

ಯಾವ ರಾಜಕೀಯ ಪಕ್ಷದ ಪ್ರಾಥಮಿಕ ಸದಸ್ಯನೂ ಅಲ್ಲದ ತಮ್ಮನ್ನು ಅರ್ಹತೆಯ ಆಧಾರದಲ್ಲಿ, ದೇಶಕ್ಕೆ ಮಹತ್ತರ ಸೇವೆ ಸಲ್ಲಿಸಬಹುದೆಂಬ ನಂಬಿಕೆ ಆಧಾರದಲ್ಲಿ ಶಾಸಕರು ಮತ ಚಲಾಯಿಸಿ ಆಯ್ಕೆ ಮಾಡಿದರು. ಇದು ಪವಾಡವಲ್ಲದೆ ಮತ್ತೇನು ಎಂದು ಅವರು ಪ್ರಶ್ನಿಸಿದರು. ದೇಶದ ಯಾವುದೇ ನಾಗರಿಕನೂ ಯಾವ ರಾಜ್ಯದಲ್ಲಿ ಬೇಕಾದರೂ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಬಹುದು. ಇದಕ್ಕೆ ತಾವೇ ಉದಾಹರಣೆ ಎಂದು ಅವರು ಹೇಳಿದರು.

ಅಪರಿಚಿತನಾಗಿದ್ದ ನನ್ನನ್ನು ದೇಶದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಆಯ್ಕೆ ಮಾಡಿದ ಶಾಸಕರ ಬಲದಿಂದಲೇ ತಾವು ಭ್ರಷ್ಟಾಚಾರ ವಿರೋಧಿ ಆಂದೋಲನದ ನೇತಾರರಾಗಿ ಹೊರಹೊಮ್ಮಿರುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಗಣಿ ಕಪ್ಪ ಪಡೆದವರ ಪಟ್ಟಿಯಲ್ಲಿ ಜುಪಿಟರ್ ಏವಿಯೇಷನ್ ಸಂಸ್ಥೆಯೂ ಇರುವ ಆರೋಪದ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

****

ಹೀಗೂ ಉಂಟೆ ನಾರಾಯಣಸ್ವಾಮಿಗೆ ಅತೀಂದ್ರಿಯ ಶಕ್ತಿ ಪ್ರಾಪ್ತಿ

ಟಿವಿ೯ ವಾಹಿನಿಯಲ್ಲಿ ಹೀಗೂ ಉಂಟೆ ಕಾರ್ಯಕ್ರಮವನ್ನು ವರ್ಷಗಳಿಂದ ನಡೆಸುತ್ತಿರುವ ನಾರಾಯಣಸ್ವಾಮಿಯವರಿಗೆ ಕೆಲವು ಅತೀಂದ್ರಿಯ ಶಕ್ತಿಗಳು ಪಾಪ್ತಿಯಾಗಿದೆ ಎಂದು ತಿಳಿದು ಬಂದಿದೆ.

ಅಲೌಕಿಕ, ಅತೀಂದ್ರಿಯ ಶಕ್ತಿಗಳಿರುವ ಸ್ಥಳಗಳಿಗೆ ಭೇಟಿ ಮಾಡಿ, ಅತಿಮಾನವರನ್ನು ಸಂದರ್ಶಿಸಿದ ಪರಿಣಾಮವಾಗಿ ಅವರಿಗೆ ಈ ಎಲ್ಲ ಶಕ್ತಿಗಳು ಆವಾಹನೆಯಾಗಿದ್ದು, ಸ್ಪರ್ಶ ಮಾತ್ರದಿಂದಲೇ ಏಡ್ಸ್, ಕ್ಯಾನ್ಸರ್‌ನಂಥ ಕಾಯಿಲೆಗಳನ್ನು ವಾಸಿ ಮಾಡುವ ಶಕ್ತಿಯನ್ನು ಗಳಿಸಿದ್ದಾರೆ.

ವಿಷಯ ಕಾಡ್ಗಿಚ್ಚಿನಂತೆ ಹಬ್ಬಿದ್ದು, ಜನರು ಸಾಗರೋಪಾದಿಯಲ್ಲಿ ನಾರಾಯಣಸ್ವಾಮಿ ಅವರ ಮನೆಯತ್ತ ಧಾವಿಸುತ್ತಿದ್ದು, ಸಮಸ್ಯೆ-ಕಾಯಿಲೆಗಳಿಂದ ನರಳುತ್ತಿರುವ ಜನರು ಪರಿಹಾರ ದೊರೆಯಬಹುದೆಂಬ ನಂಬಿಕೆಯಿಂದ ಮನೆಯ ಬಳಿಯೇ ಠಿಕಾಣಿ ಹೂಡಿದ್ದಾರೆ.

****


ಮುರುಗೇಶ್ ನಿರಾಣಿ ವಿರುದ್ಧ ಸುದ್ದಿ ಬರೆಯದಂತೆ ಕಟ್ಟಪ್ಪಣೆ

ತಮ್ಮ ಕುಟುಂಬ ಸದಸ್ಯರು ಇತರ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರೆ, ಯಾವುದೇ ಕಾರಣಕ್ಕೂ ಕೈಗಾರಿಕಾ ಸಚಿವ ಮುರುಗೇಶ್ ನಿರಾನಿ ವಿರುದ್ಧ ಯಾವುದೇ ಸುದ್ದಿ ಬರೆಯಕೂಡದು. ಈ ಸಂಬಂಧ ಕುಟುಂಬ ಸದಸ್ಯರೊಂದಿಗೆ ಒಂದು ಒಪ್ಪಂದ ಮಾಡಿಕೊಳ್ಳಬೇಕು ಎಂದು ಸಮಯ ಟಿವಿ ಪ್ರಧಾನ ಸಂಪಾದಕ ಜಿ.ಎನ್.ಮೋಹನ್ ತಮ್ಮ ಸಿಬ್ಬಂದಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ಕಟ್ಟಪ್ಪಣೆ ಮಾಡಿದ್ದಾರೆ.

ಸಮಯ ಟಿವಿ ಸಿಬ್ಬಂದಿ ಇತರ ಪತ್ರಿಕೆ/ಚಾನಲ್‌ನಲ್ಲಿ ಕೆಲಸ ಮಾಡುತ್ತಿದ್ದು ಒಂದು ವೇಳೆ ನಿರಾಣಿ ವಿರುದ್ಧ ಸುದ್ದಿ ಬರೆದಲ್ಲಿ ಅವರನ್ನು ನೀರು-ನೆರಳಿಲ್ಲದ ಜಾಗಗಳಿಗೆ ವರ್ಗಾವಣೆ ಮಾಡುವ ಮೂಲಕ ರಾಜೀನಾಮೆ ಕೊಡುವಂತೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಎಲ್ಲ ಸಿಬ್ಬಂದಿ ತಮ್ಮ ಕುಟುಂಬ ಸದಸ್ಯರಿಗೆ ಸೂಕ್ತವಾದ ನಿರ್ದೇಶನ ಕೊಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮುರುಗೇಶ್ ನಿರಾಣಿ ವಿರುದ್ಧ ಉದಯವಾಣಿಯಲ್ಲಿ ವರದಿ ಬರೆದ ತಪ್ಪಿಗೆ ಆ ವರದಿಗಾರನ ಪತ್ನಿ ಸಮಯ ಟಿವಿ ತೊರೆದ ಪ್ರಕರಣವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

****

ಬ್ರಹ್ಮಾಂಡ ನರೇಂದ್ರ ಸ್ವಾಮಿಗೆ ದೇವಸ್ಥಾನ ಕಟ್ಟಿದ ಭಕ್ತವೃಂದ

ಜೀ ಟಿವಿ ವಾಹಿನಿಯಲ್ಲಿ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮ ನಡೆಸುವ ನರೇಂದ್ರ ಶರ್ಮ ಅವರಿಗೆ ಅವರ ಭಕ್ತವೃಂದ ಬೃಹತ್ ದೇವಸ್ಥಾನವೊಂದನ್ನು ನಿರ್ಮಿಸುತ್ತಿದೆ. ದೇವಸ್ಥಾನದಲ್ಲಿ ಕೇವಲ ನರೇಂದ್ರ ಶರ್ಮ ಅವರನ್ನು ಪೂಜಿಸಲಾಗುವುದು.

ನರೇಂದ್ರ ಶರ್ಮ ಅವರ ಬೃಹತ್ ವಿಗ್ರಹವೊಂದನ್ನು ಚೆನ್ನೈನಲ್ಲಿ ತಯಾರಿಸಲಾಗುತ್ತಿದ್ದು, ಶರ್ಮರ ಆಕಾರಕ್ಕೆ ತಕ್ಕ ವಿಗ್ರಹ ಸಿದ್ಧಪಡಿಸಲು ಕೊಂಚ ಹೆಚ್ಚು ಸಮಯ ಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಜಗನ್ಮಾತೆಯ ಅವತಾರವಾಗಿರುವ ನರೇಂದ್ರ ಶರ್ಮ ಅವರ ಈ ದೇಗುಲದಲ್ಲಿ ಜೀ ವಾಹಿನಿ ಒಂದು ಶಾಶ್ವತ ಸ್ಟುಡಿಯೋ ನಿರ್ಮಿಸಲಿದ್ದು, ದೇವಸ್ಥಾನದಲ್ಲಿ ನಡೆಯುವ ಸಂಪೂರ್ಣ ಚಟುವಟಿಕೆಗಳನ್ನು ನೇರಪ್ರಸಾರದಲ್ಲಿ ಭಿತ್ತರಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ದೇವಸ್ಥಾನದ ಉದ್ಘಾಟನೆಯನ್ನು ಬದುಕು ಜಟಕಾ ಬಂಡಿ ಖ್ಯಾತಿಯ ಮಾಳವಿಕಾ ಅವಿನಾಶ್ ನೆರವೇರಿಸುವ ಸಾಧ್ಯತೆಗಳಿವೆ.

****

ರವಿ ಬೆಳಗೆರೆಗೆ ಅಭಿನವ ಕೃಷ್ಣದೇವರಾಯ ಪ್ರಶಸ್ತಿ

ಓಬಳಾಪುರಂ ಮೈನಿಂಗ್ ಕಂಪೆನಿ ವಿಜಯನಗರದ ಅರಸರಾಗಿದ್ದ ಕೃಷ್ಣದೇವರಾಯರ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಘೋಷಿಸಿದ್ದು ಮೊದಲ ವರ್ಷದ ಪ್ರಶಸ್ತಿಯನ್ನು ಹಾಯ್ ಬೆಂಗಳೂರ್ ಸಂಪಾದಕ ರವಿ ಬೆಳಗೆರೆಯವರಿಗೆ ಕೊಡಮಾಡಲು ನಿರ್ಧರಿಸಿದೆ.

ಪ್ರಶಸ್ತಿಯು ಒಂದು ಕೋಟಿ ರೂಪಾಯಿ ನಗದು, ಒಂದು ವಜ್ರಖಚಿತ ಕಿರೀಟ, ಚಿನ್ನದ ಸಿಂಹಾಸನ ಹಾಗು ಒಂದು ಚಿನ್ನದ ಖಡ್ಗವನ್ನು ಒಳಗೊಂಡಿರುತ್ತದೆ.

ಜನಾರ್ದನ ರೆಡ್ಡಿಯನ್ನು ಸಿಬಿಐ ಪೊಲೀಸರು ಬಂಧಿಸಿದಾಗ ರೆಡ್ಡಿಯಿಂದ ಕಪ್ಪ ತಿಂದವರೂ ಸೇರಿದಂತೆ ಎಲ್ಲರೂ ವಿರುದ್ಧವಾಗಿ ಬರೆದಾಗ ರವಿ ಬೆಳಗೆರೆ ಒಬ್ಬರೇ ರೆಡ್ಡಿ ಸೋದರರನ್ನು ಸಮರ್ಥಿಸಿಕೊಂಡು ಬರೆದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಗೊತ್ತಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭ ಸರಳವಾಗಿ ಹೈದ್ರಾಬಾದ್‌ನ ಸಿಬಿಐ ಹೆಡ್ ಕ್ವಾರ್ಟರ‍್ಸ್‌ನಲ್ಲಿ ನಡೆಯಲಿದೆ.

****

Thursday, September 15, 2011

ಉಗ್ರಪ್ಪ - ಪ್ರತಾಪ ಸಿಂಹ ಹಾಕ್ಯಾಟಗಳು ಮತ್ತು ಬಯಲಾಗದ ರಹಸ್ಯಗಳು!



ನಮ್ಮ ಓದುಗರೊಬ್ಬರು ಸುವರ್ಣ ನ್ಯೂಸ್‌ನಲ್ಲಿ ಇತ್ತೀಚೆಗೆ ನಡೆದ ಚರ್ಚೆಯೊಂದರ ವಿಡಿಯೋ ಲಿಂಕ್ ಕಳಿಸಿದ್ದಾರೆ. ಇದು ಪ್ರಸಾರವಾಗಿರುವುದು ಜನಾರ್ದನ ರೆಡ್ಡಿಯನ್ನು ಸಿಬಿಐ ಪೊಲೀಸರು ಬಂಧಿಸಿದ ಸಂದರ್ಭದಲ್ಲಿ. ರಂಗನಾಥ್ ಭಾರದ್ವಾಜ್ ನಿರೂಪಕರಾಗಿರುವ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ವಕ್ತಾರ ವಿ.ಎಸ್.ಉಗ್ರಪ್ಪ, ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ಹಾಗು ಅಂಕಣಕಾರ ಪ್ರತಾಪಸಿಂಹ ಪಾಲ್ಗೊಂಡಿದ್ದಾರೆ.

ಉಗ್ರಪ್ಪ ಮತ್ತು ಪ್ರತಾಪ ಸಿಂಹ ಇಬ್ಬರೂ ಉಗ್ರ ಸ್ವರೂಪ ಪ್ರದರ್ಶಿಸಿರುವುದನ್ನು ಇಲ್ಲಿ ಗಮನಿಸಬಹುದು. ಚರ್ಚೆಯ ಸಂದರ್ಭದಲ್ಲಿ ಬೇಕಾಬಿಟ್ಟಿ ಮಾತನಾಡಬೇಡಿ ಎಂದು ಉಗ್ರಪ್ಪನವರಿಗೆ ಪ್ರತಾಪಸಿಂಹ ತಾಕೀತು ಮಾಡುವುದರೊಂದಿಗೆ ಇಬ್ಬರ ಜಗಳ ಶುರುವಾಗುತ್ತದೆ.

ಜಗಳಗಳು ಇತ್ತೀಚಿಗೆ ಟಿವಿ ಸ್ಟುಡಿಯೋಗಳಲ್ಲಿ ಮಾಮೂಲಿಯಾಗಿದೆ. ದಿನೇಶ್ ಗುಂಡೂರಾವ್ ಮತ್ತು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರುಗಳು ಪರಸ್ಪರ ಹೊಡೆದಾಡುವಷ್ಟು ಜಗಳ ಮಾಡಿಕೊಂಡಿದ್ದು ನಿಮಗೆ ನೆನಪಿರಬಹುದು. ಇತ್ತೀಚಿಗೆ ವಿ.ಸೋಮಣ್ಣ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಪರಸ್ಪರ ಅಸಹ್ಯ ಭಾಷೆ ಬಳಸಿ ಕಿತ್ತಾಡಿದ್ದೂ ನೆನಪಿರಬಹುದು. ಇಲ್ಲಿ ಜಗಳವಾಡಿದವರೆಲ್ಲ ರಾಜಕಾರಣಿಗಳು. ಆದರೆ ಈ ಪ್ರಕರಣದಲ್ಲಿ ಜಗಳ ನಡೆದಿರುವುದು ಒಬ್ಬ ಪತ್ರಕರ್ತ ಮತ್ತು ಒಬ್ಬ ರಾಜಕಾರಣಿಯ ನಡುವೆ ಆಗಿರುವುದರಿಂದ ಕುತೂಹಲಕ್ಕೆ ಕಾರಣವಾಗಿದೆ.

ಉಗ್ರಪ್ಪ ಜತೆ ಸಿಂಹ ಕದನ ಇದು ಮೊದಲ ಬಾರಿಯೇನೂ ಅಲ್ಲ. ಹಿಂದೆಯೇ ಇದೇ ವೇದಿಕೆಯಲ್ಲಿ ಹಾಕ್ಯಾಟ ನಡೆಸಿದ್ದಾರೆ. ಉಗ್ರಪ್ಪನವರಿಗೆ ಅದೆಲ್ಲ ಸಿಟ್ಟು ಒಂದೇ ಸಮನೆ ನೆತ್ತಿಗೇರಿ ಜಗಳಕ್ಕೆ ನಿಂತಿರಬೇಕು ಎನಿಸುತ್ತದೆ.

ಹಾಗೆ ನೋಡಿದರೆ ಉಗ್ರಪ್ಪನವರು ರಾಜ್ಯದಲ್ಲಿರುವ ರಾಜಕಾರಣಿಗಳ ಪೈಕಿ ನೈತಿಕ ಚಾರಿತ್ರ್ಯ ಇಟ್ಟುಕೊಂಡಿರುವ ಬೆರಳೆಣಿಕೆಯ ಜನರ ಪೈಕಿ ಒಬ್ಬರು. ಎಂಜಲು ಕಾಸಿಗೆ ಕೈ ಚಾಚಿದವರಲ್ಲ. ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಸರಳವಾಗಿಯೇ ಇದ್ದರು, ಈಗಲೂ ಹಾಗೇ ಇದ್ದಾರೆ. ಗಣಿಕಳ್ಳ ಬಳ್ಳಾರಿ ರೆಡ್ಡಿಗಳ ವಕ್ತಾರನಂತಿರುವ ಪತ್ರಕರ್ತನೋರ್ವ ಹಿಂದೆ ಉಗ್ರಪ್ಪನವರನ್ನು ಸಂಪರ್ಕಿಸಿ ತನ್ನ ಗಣಿಗೆಳೆಯರೊಂದಿಗೆ (ಅಣ್ಣ-ತಮ್ಮಂದಿರು) ರಾಜಿ ಮಾಡಿಸಿ ಡೀಲಿಂಗ್ ನಡೆಸುವ ಪ್ರಯತ್ನ ನಡೆಸಿ ಹಚ್ಯಾ ಎಂದು ಓಡಿಸಿಕೊಂಡಿದ್ದ. ಇಂಥ ಆಮಿಷಗಳಿಗೆ ಉಗ್ರಪ್ಪ ಬಲಿಯಾದವರಲ್ಲ.

ಉಗ್ರಪ್ಪ ಜತೆ ಜಗಳಕ್ಕೆ ನಿಂತ ಪ್ರತಾಪ ಸಿಂಹ ಈಗೀಗ ಟಿವಿ ಸ್ಟುಡಿಯೋದಲ್ಲಿ ಕಾಣಿಸುತ್ತಿರುವವರು. ಇನ್ನೂ ಅವರು ಈ ಕೆಲಸದಲ್ಲಿ ಮಾಗಿದ ಹಾಗೆ ಕಾಣುತ್ತಿಲ್ಲ. ಅಂಕಿಅಂಶಗಳಿಗೆ ಸೀಮಿತವಾದ ಜ್ಞಾನ, ತುಸು ಎಳಸೆನ್ನುವ ವಿಚಾರ ಮಂಡನೆ. ಕ್ಷೀಣ ಧ್ವನಿಯಲ್ಲಿ ಕಾನ್ವೆಂಟ್ ಮಕ್ಕಳ ಹಾಗೆ ಗಿಳಿಪಾಠ ಒಪ್ಪಿಸುವವರಂತೆ ಮಾತನಾಡುವುದು ಅವರ ಸಮಸ್ಯೆ.

ಉಗ್ರಪ್ಪ ಮತ್ತು ಪ್ರತಾಪ ಸಿಂಹರ ನಡುವೆ ಜಗಳ ತಾರಕಕ್ಕೇರಿದಾಗ ಕೆಲವು ಅನಿರೀಕ್ಷಿತ ಮಾತುಗಳೂ ತೂರಿ ಬಂದವು. ಮಾತಿಗೆ ಮಾತು ಬೆಳೆದ ಸಂದರ್ಭದಲ್ಲಿ ಉಗ್ರಪ್ಪ ಒಂದು ಮಾತನ್ನು ಹೇಳಿದ್ದನ್ನು ಗಮನಿಸಿ: ಇವರು ಯಾರ‍್ಯಾರು ಏನೇನು ಮಾಡ್ತಿದ್ದಾರೆ ಅಂತ ನನಗೂ ಗೊತ್ತಿದೆ, ಸಂದರ್ಭ ಬಂದಾಗ ಬಿಡಿಸಿಡೋಣ. ಈ ಸಂದರ್ಭದಲ್ಲಿ ಬೇಡ.

ಉಗ್ರಪ್ಪ ಇಂಥ ಮಾರ್ಮಿಕವಾದ ಮಾತುಗಳನ್ನು ಆಡುತ್ತಿದ್ದಂತೆ ರಂಗನಾಥ ಭಾರದ್ವಾಜ್ ಮಧ್ಯೆ ಪ್ರವೇಶಿಸಿ ಮಾತು ಎಲ್ಲಿಂದ ಎಲ್ಲಿಗೋ ಹೋಗೋದು ಬೇಡ ಎಂದು ಅದನ್ನು ಅಲ್ಲೇ ತಡೆಯಲು ಯತ್ನಿಸಿದರು.

ಅಸಲಿಗೆ ಉಗ್ರಪ್ಪ ಏನನ್ನು ಹೇಳಬಯಸಿದ್ದರು? ಯಾರ‍್ಯಾರು ಏನೇನು ಮಾಡಿದ್ದೇವೆ ಹೇಳಿ ಬಿಡಿ ಎಂದು ಪ್ರತಾಪಸಿಂಹ ಯಾಕೆ ಒತ್ತಾಯಿಸಲಿಲ್ಲ? ಉಗ್ರಪ್ಪ ಎಲ್ಲವನ್ನು ಬಿಡಿಸಿ ಹೇಳುವ ಸಂದರ್ಭ ಯಾವಾಗ ಬರುತ್ತದೆ?

Wednesday, September 14, 2011

ವಿಷಾದ, ಸಂಕಟ ಹಾಗೂ ಕಳಚಿದ ಭ್ರಮೆಗಳು: ಹರ್ಷ ಕುಗ್ವೆ ಪ್ರತಿಕ್ರಿಯೆ


ಮಾಧ್ಯಮ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಹರ್ಷಕುಮಾರ್ ಕುಗ್ವೆ ಬರೆದ ಲೇಖನದ ಒಂದೆರಡು ಸಾಲುಗಳು ಶಿವಮೊಗ್ಗ ಪತ್ರಕರ್ತರ ವಲಯವನ್ನು ವಿಚಲಿತಗೊಳಿಸಿದೆ. ಜನಪರ ಪತ್ರಿಕೋದ್ಯಮದ ಪರಂಪರೆಯನ್ನು ಹೊಂದಿರುವ ಶಿವಮೊಗ್ಗದ ಪತ್ರಕರ್ತರ ಬಗ್ಗೆ ನಮಗೆ ವಿಶೇಷ ಗೌರವವಿದೆ. ಆದರೆ ಹರ್ಷ ಅವರ ಲೇಖನಕ್ಕೆ ಬಂದ ಅನಪೇಕ್ಷಿತ ಪ್ರತಿಕ್ರಿಯೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಈ ಚರ್ಚೆಯನ್ನು ಮುಂದುವರೆಸುತ್ತಿದ್ದೇವೆ. ಹರ್ಷ ಈ ಪ್ರತಿಕ್ರಿಯೆಯನ್ನು ನೋವಿನಿಂದಲೇ ಬರೆದಂತಿದೆ. ಅವರೊಂದಿಗೆ ನಾವಿದ್ದೇವೆ ಎಂದಷ್ಟೇ ಈ ಸಂದರ್ಭದಲ್ಲಿ ಹೇಳಬಯಸುತ್ತೇವೆ.


ಶಿವಮೊಗ್ಗದ ಕೆಎಚ್‌ಬಿ ಸೈಟು ಅವಾಂತರ ಯಾಕೆ ಸೃಷ್ಟಿಯಾಯಿತು? ಯಾಕೆ ಲೋಕಾಯುಕ್ತ, ರಾಜ್ಯಪಾಲರವರೆಗೆ ದೂರುಗಳು ಹೋದವು? ಯಾಕೆ ಫಲಾನುಭವಿಗಳ ಪಟ್ಟಿ ಸರಿಯಾದ ಪರಿಷ್ಕರಣೆಗೆ ಒಳಗಾಗಲಿಲ್ಲ? ಕೆಎಚ್‌ಬಿ ಕಾಯ್ದೆ ಉಲ್ಲಂಘಿಸಿ ಎರಡನೇ ಬಾರಿ ಸೈಟು ಪಡೆಯಲು ಹೊರಟವರ ಹೆಸರೂ ಪಟ್ಟಿಯಲ್ಲಿದೆಯೇ? ಪತ್ರಕರ್ತರಲ್ಲದವನ್ನೂ ಪಟ್ಟಿಯಲ್ಲಿ ಸೇರಿಸಲಾಗಿದೆಯೇ? ಹೀಗೆ ನೂರಾರು ಪ್ರಶ್ನೆಗಳು ಉದ್ಭವಿಸಿವೆ. ಕೆಲ ದಿನಗಳಲ್ಲೇ ಈ ಕುರಿತು ಒಂದು ಟಿಪ್ಪಣಿಯನ್ನು ಬರೆಯುವ ಪ್ರಯತ್ನ ನಡೆಸುತ್ತೇವೆ. 


ಇದು ಯಾರ ಮೇಲೂ ಮಾಡಲಾಗುವ ಆರೋಪಪಟ್ಟಿಯೇನಲ್ಲ. ಪತ್ರಕರ್ತರು ಸ್ವಯಂ ನಿಯಂತ್ರಣ, ನೈತಿಕ ಶುದ್ಧತೆಯ ಮಾರ್ಗವೊಂದನ್ನು ಹಿಡಿಯಲೇಬೇಕು ಎಂಬ ಒತ್ತಾಯ ಎಲ್ಲೆಡೆ ಕೇಳಿಬರುತ್ತಿರುವುದರಿಂದ ಆತ್ಮಾವಲೋಕನದ ಧಾಟಿಯಲ್ಲೇ ಈ ಚರ್ಚೆ ನಡೆಯಲಿ. ಶಿವಮೊಗ್ಗ ಗೆಳೆಯರು ಯಾವುದನ್ನೂ ವೈಯಕ್ತಿಕವಾಗಿ ಸ್ವೀಕರಿಸದೆ ಒಂದು ಆರೋಗ್ಯಕರ ಚರ್ಚೆಗೆ ಅನುವಾಗುತ್ತಾರೆ ಎಂಬ ನಂಬುಗೆ ನಮ್ಮದು. ಆ ಸೂಕ್ಷ್ಮತೆ ಶಿವಮೊಗ್ಗದ ಗೆಳೆಯರಿಗಿದೆ ಎಂಬುದೂ ನಮಗೆ ಗೊತ್ತಿದೆ. ಒಂದು ವೇಳೆ ಈ ಚರ್ಚೆಗೆ ಸಂಪಾದಕೀಯ ಸರಿಯಾದ ವೇದಿಕೆಯಲ್ಲವೆಂದು ಅವರಿಗನ್ನಿಸಿದರೆ, ಬೇರೆ ವೇದಿಕೆಗಳಲ್ಲಿ ಈ ಚರ್ಚೆ ಮುಂದುವರೆಸಲಿ. ಆದರೆ ಉದ್ಭವವಾಗಿರುವ ಪ್ರಶ್ನೆಗಳಿಗೆ ಉತ್ತರ ಹುಡುಕಲು ಚರ್ಚೆಯಂತೂ ನಡೆಯಬೇಕಲ್ಲವೇ?
-ಸಂಪಾದಕೀಯ

ನಮ್ಮ ಕಡೆ ಕಡಿಜೀರ ಎಂಬ ಕೀಟವಿದೆ. ಅದು ಜೇನು ಹುಳುವನ್ನೇ ಹೋಲುತ್ತದಾದರೂ ಅದಕ್ಕಿಂತ ಗಾತ್ರದಲ್ಲಿ ದೊಡ್ಡದು ಮತ್ತು ಇದು ಕಡಿದರೆ ಜೇನುಹುಳದ ಕಡಿತಕ್ಕಿಂತ ವಿಪರೀತ ಉರಿ ಮತ್ತು ವಿಷಕಾರಿ. ಇದೂ ಗೂಡು ಕಟ್ಟುತ್ತದೆ. ಆದರೆ ಅದರಲ್ಲಿ ಮಧುವಿರುವುದಿಲ್ಲ. ಪತ್ರಿಕೋದ್ಯಮದಲ್ಲಿನ ಭ್ರಷ್ಟಾಚಾರದ ಕುರಿತ ಕೆಲವು ಅನಿಸಿಕೆಗಳನ್ನು ಹೇಳಿಕೊಳ್ಳಲು ಹೋಗಿ ಈ ಕಡಿಜೀರದಿಂದ ಸಕತ್ತಾಗಿ ಕಡಿಸಿಕೊಂಡ ಅನುಭವ ನನ್ನದಾಗಿದೆ. ಕಡಿತ ತಾಳದೇ ನಾನು ಓಡಿಹೋದ ದಾರಿಯ ಅಕ್ಕಪಕ್ಕದಲ್ಲಿ ತಮ್ಮ ಪಾಡಿಗೆ ತಾವಿದ್ದ ಒಬ್ಬಿಬ್ಬರಿಗೂ ಕಚ್ಚಿಬಿಟ್ಟಿವೆ. ಅದರ ಗೂಡಿಗೆ ಯಾರೋ ಈಗಾಗಲೇ ಯಾವುದೋ ಕಾರಣಕ್ಕೆ ಕಲ್ಲುಹೊಡೆದಿದ್ದರು. ನಾನು ಸುಮ್ಮನೇ ಹೋಗಿ ಗೂಡಿನ ಕೆಳಗೆ ಇದು ಜೇನಿದ್ದಂಗೆ ಇಲ್ಲವಲ್ಲಾ..? ಎಂದು ತಲೆಕೆಡಿಸಿಕೊಂಡು ನಿಂತದ್ದೇ ಈಗ ಹುಳುಗಳು ಅಟ್ಟಾಡಿಸಿಕೊಂಡು ಕಚ್ಚುತ್ತಿವೆ. ಮುಖ ಮುಸುಡಿ ಏನೊಂದೂ ನೋಡುತ್ತಿಲ್ಲ. ಕೊನೆಯ ದಾರಿಯಾಗಿ ಈಗ ದೋಪ್ದಿಯ ರೀತಿ ಬನ್ನಿ ಅದೆಷ್ಟು ಕಚ್ಚುತ್ತೀರೋ ಕಚ್ಚಿ ಎಂದು ಹೇಳುವ ಸ್ಥಿತಿ ಬರುವಂತೆ ಕಾಣುತ್ತಿದೆ.

**

ಒಂದು ಬಗೆಯ ವಿಚಿತ್ರ ನೋವು, ಸಂಕಟ. ನನ್ನ ಲೇಖನದಲ್ಲಿ ಶಿವಮೊಗ್ಗ ಪತ್ರಕರ್ತರ ಪ್ರಸ್ತಾಪ ಮಾಡಿದ್ದೇ ಇದಕ್ಕೆ ಕಾರಣವಾಗಿದೆ. ನಾನು ನಿರೀಕ್ಷಿಸಿಯೇ ಇರದಿದ್ದ ರೀತಿಯ ಪ್ರತಿಕ್ರಿಯೆ ನನ್ನ ಶಿವಮೊಗ್ಗದ ಹಿರಿಯ ಪತ್ರಕರ್ತರ ಗೆಳೆಯರಿಂದ ವ್ಯಕ್ತವಾಗಿದೆ. ಸುಮಾರು ಹತ್ತು ವರ್ಷಗಳ ಕಾಲ ಹೊಂದಿದ್ದ ಉತ್ತಮ ಸಂಬಂಧ, ಗೌರವ ಎಲ್ಲವೂ ಒಮ್ಮೆಲೇ ಅನಿರೀಕ್ಷಿತವಾಗಿ ಹುಡಿಗಟ್ಟಿಬಿಡುತ್ತಿರುವ ಸಂಕಟವದು. ನನ್ನ ಮೇಲೆ ಅವರಿಗೆ, ಅವರ ಮೇಲೆ ನನಗೆ. ನನ್ನೆದುರು ಕೆಲವರು ಮನಸ್ಸಿಗೆ ಬಂದಂತೆ ಮಾತಾಡಿದಾಗ ಯಾವ ಪತ್ರಕರ್ತ ಗೆಳೆಯರನ್ನು ನನ್ನವರು ಎಂಬ ಭಾವನೆಯಿಂದ ಸಮರ್ಥಿಸಿಕೊಂಡು ಮಾತಾಡುತ್ತಿದ್ದೆನೋ, ಯಾರೊಂದಿಗೆ ಅಪಾರ ಗೌರವಗಳೊಂದಿಗೆ ವ್ಯವಹರಿಸುತ್ತಿದ್ದೆನೋ ಅವರ ಕುರಿತು ಕಟ್ಟಿಕೊಂಡಿದ್ದ ಮನಸ್ಸಿನ ಗೋಪುರ ಹೀಗೆ ದಢಾರ್ ಅಂತ ಕಳಚಿ ಬೀಳುತ್ತದೆ ಎಂದುಕೊಂಡಿರಲಿಲ್ಲ.

**

ನಾನು ಪತ್ರಿಕೋದ್ಯಮಕ್ಕೆ ಕಾಲಿಟ್ಟಿದ್ದೇ ಅನಿರೀಕ್ಷಿತ. ಹತ್ತು ಹನ್ನೆರಡು ವರ್ಷಗಳ ಕಾಲ ಶಿವಮೊಗ್ಗದ ಕಾಲೇಜುಗಳಲ್ಲಿ, ಹಾಸ್ಟೆಲುಗಳಲ್ಲಿ, ದಲಿತರ ಕೇರಿಗಳಲ್ಲಿ ವಿದ್ಯಾರ್ಥಿಗಳನ್ನು, ಯುವಕರನ್ನು ಕೂರಿಸಿಕೊಂಡು ನಿಸ್ವಾರ್ಥ ಸಮಾಜಸೇವೆಯ ಬಗ್ಗೆ ಭಾಷಣ ಕೊಚ್ಚುತ್ತಿದ್ದವ. ಬದುಕಲ್ಲಿ ಒಮ್ಮಿಂದೊಮ್ಮೆಗೇ ಅನಿರೀಕ್ಷಿತವಾಗಿ ಬಿದ್ದ ಹೊಡೆತಗಳನ್ನು ತಾಳಲಾಗದೇ, ಆ ಮೊದಲಿನ ಬದ್ಧತೆ ಉಳಿಸಿಕೊಳ್ಳಲಾಗದೇ ದುಡಿಮೆ ಅನಿವಾರ್ಯ ಎಂದುಕೊಂಡು ಈ ಕ್ಷೇತ್ರಕ್ಕೆ ಕಾಲಿಟ್ಟವ. ಒಂದು ನೆಲೆಯಿಂದ ಅದು ನನ್ನ ವೈಯುಕ್ತಿಕ ದೌರ್ಬಲ್ಯವೇ ಎನ್ನಿ. ಹೀಗೆ ಆದರ್ಶ - ಬದುಕು - ದೌರ್ಬಲ್ಯಗಳ ನಡುವೆ ನೈತಿಕ ಇಕ್ಕಟ್ಟನ್ನೆದುರಿಸುತ್ತಿದ್ದ ಸಂದರ್ಭದಲ್ಲೇ ಹೀಗೊಂದು ಭ್ರಷ್ಟಾಚಾರದ ವಿರುದ್ಧ ಚಳವಳಿ, ಚರ್ಚೆ, ವಾದ, ವಿವಾದ, ಸಂಪಾದಕೀಯ, ಇತ್ಯಾದಿಗಳೆಲ್ಲಾ ಸೇರಿ ಹೀಗೊಂದು ಲೇಖನ ಬರೆಯಲು ಪ್ರೇರೇಪಿಸಿತ್ತು.

ಸುತ್ತಮುತ್ತಲ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಮಾಧ್ಯಮಗಳಿವೆ, ಆದರೆ ಮಾಧ್ಯಮ ಲೋಕದ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಇಲ್ಲಿ ಯಾರೂ ಇಲ್ಲದಿರುವ ಕುರಿತು ನನ್ನ ತಲೆಯಲ್ಲಿ ಬಹಳ ಕಾಲದಿಂದಲೇ ಕೊರೆಯುತ್ತಿತ್ತು. ಆದರೆ ಹಾಗಂತ ಅದನ್ನೆಲ್ಲಾ ತನಿಖೆ ನಡೆಸಿ ಬಯಲುಮಾಡಿಬಿಡುವ ಯೋಚನೆಯೂ ನನಗಿರಲಿಲ್ಲ. ಅದು ನನ್ನಿಂದ  ಸಾಧ್ಯವೂ ಇರಲಿಲ್ಲವೆನ್ನಿ. ಆದರೆ ಈಗ ಪ್ರಾಮಾಣಿಕವಾಗಿ ಅನಿಸಿದ್ದನ್ನು ಬರೆದುಕೊಳ್ಳಲು ನನ್ನ ಬ್ಲಾಗ್ ಮತ್ತು ಸಂಪಾದಕೀಯ ಒಂದು ವೇದಿಕೆ ಕೊಟ್ಟಿದ್ದವಷ್ಟೆ. ಹಾಗೆಂದೇ ಬರೆದೆ. ನನ್ನನ್ನೂ ಒಳಗೊಂಡಂತೆ ಇಲ್ಲಿ ಪತ್ರಕರ್ತರಲ್ಲಿ ಆತ್ಮಾವಲೋಕನ ನಡೆಯಬೇಕು ಎನ್ನುವುದಿಷ್ಟೇ ನನ್ನ ಬಯಕೆಯಾಗಿತ್ತು. ಮತ್ತಿನ್ನಾರನ್ನೂ ಗುರಿಪಡಿಸುವ, ವಿಚಾರಣೆಗೊಳಪಡಿಸುವ, ಅವರನ್ನು ಕಾನೂನು ಅಥವಾ ಆರ್ಥಿಕ ಇಕ್ಕಟ್ಟಿಗೆ ಸಿಲುಕಿಸುವ ದುರುದ್ದೇಶಗಳು ನನ್ನದಾಗಿರಲಿಲ್ಲ.

**

ಈ ಭರದಲ್ಲಿ ನನ್ನಿಂದ ಒಂದು ತಪ್ಪಾಯಿತು. ಅದೇನೆಂದರೆ ಶಿವಮೊಗ್ಗದ ಕೆಎಚ್‌ಬಿ ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ದಾಖಲೆಯೂ ನನ್ನ ಬಳಿ ಇಲ್ಲದಿದ್ದರೂ ಬಹಳ ಹಿಂದೆ ಕೆಲ ಗೆಳೆಯರಿಂದ ಕೇಳಿದ್ದನ್ನು  ಅಧಿಕೃತ ಮಾಹಿತಿಯನ್ನು ಕೈಯಲ್ಲಿಟ್ಟುಕೊಳ್ಳದೇ ಹಾಗೇ ದಾಖಲಿಸಿಬಿಟ್ಟೆ. ಅದರಲ್ಲೂ ಶಿವಮೊಗ್ಗದ ಎಲ್ಲಾ ಪತ್ರಕರ್ತರೂ ಎನ್ನುವ ರೀತಿಯಲ್ಲಿ. ನಿಜಕ್ಕೂ ಇದು ನನ್ನಿಂದಾದ ಪ್ರಮಾದ. ಆದರೆ ಇದರಾಚೆಗೆ ನನ್ನ ಲೇಖನಕ್ಕೆ ಫೋನ್ ಮೂಲಕ, ಹಾಗೂ ಅನಾಮಿಕವಾಗಿ ಬಂದ ಕಮೆಂಟುಗಳ ಮೂಲಕ ಬಂದ ಪ್ರತಿಕ್ರಿಯೆಗಳಿಗೆ ಉತ್ತರಿಸುವುದು ಈ ಸಂದರ್ಭದಲ್ಲಿ ನನ್ನ ಜವಾಬ್ದಾರಿ ಎನ್ನಿಸಿದೆ. ಅವರ ಪ್ರತಿಕ್ರಿಯೆಯ ರೀತಿಯಿಂದಾಗಿ ನನಗೆ ಅವರ ಬಳಿ ನಿರ್ದಿಷ್ಟವಾಗಿ ಈ ವಿಷಯದ ಕುರಿತು ಯಾವ ಮಾತುಕತೆಯೂ ಬೇಕು ಎನ್ನಿಸಿರದ ಕಾರಣ ಅವರ ಕಮೆಂಟುಗಳನ್ನು ಮತ್ತು ಸೈಟು ಆಕಾಂಕ್ಷಿಗಳ ಪಟ್ಟಿಯನ್ನಾಧರಿಸಿ ಮಾತ್ರ ಶಿವಮೊಗ್ಗದ ಆ ಗೆಳೆಯರನ್ನುದ್ದೇಶಿಸಿ ಇಲ್ಲಿ ಬರೆಯುತ್ತಿದ್ದೇನೆ.

**

೧. ಮೊದಲನೆಯದಾಗಿ ನನಗೊಂದು ಮೂಲಭೂತ ಪ್ರಶ್ನೆ ಇದೆ. ಸೈಟುಗಳನ್ನು ಸರ್ಕಾರ ಸಂಬಂಧಪಟ್ಟ ಬೋರ್ಡುಗಳ ಮೂಲಕ ಜನರಿಗೆ ಕೊಡುವುದು ಸರಿ. ಆದರೆ, ಅದನ್ನು ಪತ್ರಕರ್ತರು ಎನ್ನುವ ಕಾರಣಕ್ಕೆ ಕೊಡುವುದು ಎಷ್ಟು ಸರಿ? ಈ ಟ್ರಂಪ್ ಕಾರ್ಡಿನಲ್ಲಿ ಸೈಟುಗಳಿಗೆ ಪತ್ರಕರ್ತರ ಸಂಘ ಸೈಟುಗಳನ್ನು ರಿಯಾಯ್ತಿಯಾಗಿ ಪಡೆಯುತ್ತದೆ ಎಂದಾದರೆ ಸಮಾಜದ ಎಲ್ಲಾ ವರ್ಗಗಳ ಸಂಘಗಳಿಗೂ ಅದೇ ರೀತಿ ನೀಡಬೇಕಲ್ಲವೇ? ಉದಾಹರಣೆಗೆ, ಶಿಕ್ಷಕರ ಸಂಘ, ವಕೀಲರ ಸಂಘ, ವೈದ್ಯರ ಸಂಘ,... ಇತ್ಯಾದಿ? ಯಾವಾಗಲೂ ಸರ್ಕಾರದ, ಸರ್ಕಾರವನ್ನು ನಡೆಸುವವರ ಮೇಲೆ ವಿಚಕ್ಷಣೆ ನಡೆಸಬೇಕಾದ ಪತ್ರಕರ್ತರಿಗೆ ಸರ್ಕಾರ, ಅಥವಾ ಒಂದು ಸಂದರ್ಭದಲ್ಲಿ ಸರ್ಕಾರ ನಡೆಸುವವರು ಸೈಟನ್ನು ನೀಡುವುದಾದರೆ ಪತ್ರಿಕೋದ್ಯಮ ಸಮಾಜದ ನಾಲ್ಕನೇ ಆಸ್ತಿ ಆಗಿ ಉಳಿಯಲು ಸಾಧ್ಯವಾ? ಪತ್ರಿಕೋದ್ಯಮದ ಸ್ವತಂತ್ರ ಅಸ್ತಿತ್ವದ ದೃಷ್ಟಿಯಿಂದ ಪತ್ರಕರ್ತರೆಂಬ ಕಾರಣಕ್ಕೆ ಸರ್ಕಾರ ಯಾವುದೇ ವಿಶೇಷ ಸೌಲಭ್ಯ (ಪ್ರಿವಿಲೇಜ್) ನೀಡುವುದು ಸರಿಯಲ್ಲ ಎನ್ನುವುದು ನನ್ನ ಖಚಿತ ಅಭಿಪ್ರಾಯ. ‘ನನ್ನ ಲೇಖನದಲ್ಲಿ ಹೇಳಲು ಬಂದಿದ್ದು ಇದನ್ನೇ ಸಾರ್ ಎಂದಿದ್ದಕ್ಕೆ ಹಾಂ. ನಿಮ್ಮ ಈ ಅಭಿಪ್ರಾಯದ  ಬಗ್ಗೆ ಗೌರವ ಇದೆ, ಇದು ರಾಜ್ಯದಲ್ಲಿ ಚರ್ಚೆಯಾಗತಕ್ಕ ವಿಷಯ ಎಂದು ಹೇಳಿದರು ಗೆಳೆಯರು. ಚರ್ಚೆ ನಡೆದರೆ ಒಂದು ಕಡೆಗೆ ನಡೆಯಲಿ, ಅಲ್ಲಿಯವರೆಗೆ ಏನೇನು ಸೌಲಭ್ಯ ಸಿಗುತ್ತದೆಯೋ ಅದನ್ನು  ಪಡೆಯುತ್ತಾ ಇರೋಣ. ಆಮೇಲೆ ನೋಡೋಣ ಎಂದೋ ಇದರರ್ಥ?

 ೨. ಈಗ ನಾನೊಬ್ಬ ಅಪರಾಧಿ ಎಂದು ಗೆಳೆಯರು ನಿರ್ಧರಿಸಿಯಾಗಿದೆ. ಯಾಕೆಂದರೆ ತಮ್ಮ ಜೀವಮಾನದಲ್ಲಿ ಎಂದೂ ಸೈಟು ಪಡೆಯಲಾಗದ ಅನೇಕರಿಗೆ ಈಗ ಇವರ ಪ್ರಯತ್ನದಿಂದಾಗಿ ಸೈಟು ಸಿಗಲಿದೆ. ಪತ್ನಿಯರ ತಾಳಿ ಸರವನ್ನೂ ಮಾರಿ ಕಂತು ಕಟ್ಟುತ್ತಿದ್ದಾರೆ. ಪತ್ರಿಕಾ ಕಛೇರಿಗಳಲ್ಲಿ ಡಿಟಿಪಿ ಮಾಡುವ, ಪತ್ರಿಕೆ ವಿತರಿಸುವಂತವರಿಗೂ ಸೈಟು ಸಿಗುತ್ತಿದೆ. ಇಂತಾದ್ದರಲ್ಲಿ ಈಗ ಇದರ ಬಗ್ಗೆ ಇಲ್ಲ ಸಲ್ಲದ ಗುಲ್ಲೆಬ್ಬಿಸುತ್ತಿರವ ನಾನು ಈ ಮೇಲಿನವರ ವಿರೋಧಿಗಳು. ಅಂತವರ ಬಗ್ಗೆ ಕಾಳಜಿ ಇರದವನು. ನಾನೆಂತಹ ಸಂವೇದನೆ ಇಲ್ಲದ ವ್ಯಕ್ತಿ ಎಂದು ನನ್ನ ಬಗ್ಗೆ ನನಗೇ ಅಸಹ್ಯ ಎನ್ನಿಸಬೇಕು. ಹಾಗಿದೆ ನಿಮ್ಮ ವಾದ. ನನಗೂ ಗೊತ್ತು. ಪಾಪದ ಸುಮಾರು ಜನರು ೨೦ ಸಾವಿರ ರೂಪಾಯಿ ಕಟ್ಟಿ ಸೈಟು ಆಗ ಸ್ಯಾಂಕ್ಷನ್ ಆಗುತ್ತದೆಯೋ ಈಗ ಆಗುತ್ತದೆಯೋ ಎಂದು ಕಾಯುತ್ತಿದ್ದಾರೆ. ಆದವರು ನಾಲ್ಕೇ ಕಂತುಗಳಲ್ಲಿ ಕಟ್ಟುವ ಸಾಮರ್ಥ್ಯವಿಲ್ಲದೇ ಪರದಾಡುತ್ತಿದ್ದಾರೆ. ಆದರೆ ಈ ಯಾರೂ ಸಹ ತಾವು ಪತ್ರಿಕಾ ಕಛೇರಿಗಳಿಗೆ ಎಡತಾಕಿದಾಗ ಹೀಗೆ ಇತರೆ ಸಾಮಾನ್ಯ ಜನರಿಗೆ ಸುಲಭವಾಗಿ ಸಿಗದ ಸೈಟು ಪತ್ರಕರ್ತರಾಗುವ ತಮಗೆ ಸಿಗುತ್ತದೆ, ಹಾಗಾಗಿ ನಾವು ಕೆಲಸ ಸೇರಬೇಕು ಎಂದುಕೊಂಡು ಬಂದವರಲ್ಲ. ಬದಲಿಗೆ ಅವರಲ್ಲಿ ಈ ಪ್ರಲೋಭನೆ ಬರುವಂತೆ ಮಾಡಲಾಗಿದೆ. ಸೈಟು ಸಿಕ್ಕುವುದೇ ಒಂದು ಭಾಗ್ಯ ಎಂದುಕೊಂಡ ಇಂತಹ ಎಲ್ಲಾ ಉದ್ಯೋಗಿಗಳೂ ಸಹಜವಾಗಿ ಖುಷಿಯಾಗಿದ್ದಾರೆ. ತಾವೂ ಅರ್ಜಿ ಹಾಕಿದ್ದಾರೆ. ಸಮಸ್ಯೆ ಇರುವುದು ಇದಲ್ಲವೇ ಅಲ್ಲ. ಹೀಗೆ ಪ್ರಾಮಾಣಿಕವಾಗಿ ಸೈಟಿಗೆ ಅರ್ಜಿ ಹಾಕಿದವರದ್ದಂತೂ ಖಂಡಿತಾ ತಪ್ಪಲ್ಲ. ಆದರೆ ಏನಾಗಿದೆ ನೋಡಿ. ಹೀಗೆ ಅರ್ಜಿ ಹಾಕಿದವರೂ ಕೂಡಾ ಇಂದು ಒಂದು ಬಗೆಯ ಗೊಂದಲದಲ್ಲಿ ಮುಳುಗಿದ್ದಾರೆ. ಇಲ್ಲಿ ಯಾರದೋ ಮರ್ಜಿಗೆ ನಾವು ಒಳಗಾಗಿದ್ದೇವೆ, ಯಾರೋ ಎಸೆದ ದಾಳಕ್ಕೆ ಬಲಿಯಾಗಿದ್ದೇವೆ ಎಂದು. ಇದಕ್ಕೆ ಯಾರು ಹೊಣೆ ಸ್ವಾಮಿ? ಯಾಕೆ ಬರೀ ೨-೩ ಸಾವಿರ ಸಂಬಳ ಪಡೆದು ನಿವೇಶನ ಪಡೆದವರ ಬಗ್ಗೆ ಮಾತ್ರ ಪ್ರಸ್ತಾಪಿಸಿದ್ದೀರಿ? ಈಗಾಗಲೇ ಉತ್ತಮ ಮನೆ ಇರುವವರು, ಮಗ, ಸೊಸೆ, ತಾಯಿ, ಹೆಂಡತಿ, ಹೀಗೆ ಅವರ ಇವರ ಹೆಸರಲ್ಲೆಲ್ಲಾ ನಿವೇಶನಕ್ಕೆ ಅರ‍್ಜಿ ಹಾಕಿದ್ದವರ ಬಗ್ಗೆ ಯಾಕೆ ಪ್ರಸ್ತಾಪಿಸಿಲ್ಲ? ಈಗಾಗಲೇ ಶಿವಮೊಗ್ಗದಲ್ಲೇ ಬೇರೆ ನಿವೇಶನ, ಮನೆ ಹೊಂದಿ ಮತ್ತೆ ಈಗ ದುರಾಸೆಯಿಂದ ಅರ್ಜಿ ಹಾಕಿರುವವರು, ಬೇರೆ ಊರುಗಳಲ್ಲಿ ಸಾಕಷ್ಟು ನಿವೇಶನ, ಮನೆ, ಆಸ್ತಿ, ಎಲ್ಲಾ ಇದ್ದೂ ಯಡಿಯೂರಪ್ಪನ ದುಬಾರಿ ಶಿವಮೊಗ್ಗದಲ್ಲಿ ಸೈಟು ಇರುವುದು ಲಾಭದಾಯಕ ಎಂದು ಕೊಂಡು ಮತ್ತೆ ಈಗ ಅರ್ಜಿ ಹಾಕಿರುವವರು, ಇಂಥವರೆಲ್ಲಾ ಇತರೆ ಪ್ರಾಮಾಣಿಕ ಸಾಮಾನ್ಯ ಪತ್ರಕರ್ತರನ್ನು ತಮ್ಮ ಸ್ವಾರ್ಥಸಾಧನೆಗೆ ಗುರಾಣಿಯಾಗಿಟ್ಟುಕೊಂಡಿದ್ದಾರೆ ಎಂದೆನ್ನಿಸುವುದಿಲ್ಲವೇ?

೩. ಸರಿ. ನಾನು ೩೫೦ ಜನರು ಎಂದು ಬರೆದಿದ್ದು ತಪ್ಪು. ಆದರೆ ಈ ಸೈಟುಗಳಿಗೆ ಮೊತ್ತ ಮೊದಲು ತಯಾರು ಮಾಡಿ ಕಳಿಸಿದ್ದ ಪಟ್ಟಿಯಲ್ಲಿ ಎಷ್ಟು ಜನರ ಹೆಸರುಗಳಿದ್ದವು? ಮತ್ತು ಅವುಗಲ್ಲಿ ಪತ್ರಕರ್ತರಲ್ಲದವರ ಹೆಸರುಗಳನ್ನು  ಕೆಎಚ್‌ಬಿ ಅಂತಿಮಗೊಳಿಸಿ ಕಳಿಸಿದಾಗ ನೀವು ಯಾಕೆ ಕನಿಷ್ಟ ಒಂದು ಸುಳಿವನ್ನೂ ರಾಜ್ಯದ ಜನತೆಗೆ ಬಿಟ್ಟುಕೊಟ್ಟಿರಲಿಲ್ಲ? ನಂತರ ಅವುಗಳಲ್ಲಿ ಕೆಲವು ತಿರಸ್ಕಾರಗೊಂಡಿದ್ದು ಯಾಕೆ? ಈ ಎಲ್ಲಾ ಮಾಹಿತಿಗಳನ್ನೂ ಜನತೆಗೆ ಕೊಡಿ. ಪತ್ರಕರ್ತರ ಸಂಘದಿಂದ ಪರವಾಗಿ ನೂಡುವುದು ಉತ್ತಮ. ಅದಾಗದಿದ್ದರೆ ಹೀಗೇ ಅನಾಮಿಕವಾಗಿಯೇ ಕೊಡಿ. ಪರವಾಗಿಲ್ಲ. ಆಗ ನಿಮ್ಮ ಬಗ್ಗೆ ಇಲ್ಲಸಲ್ಲದ ಗುಲ್ಲುಗಳು ತಾನಾಗಿಯೇ ನಿಂತುಬಿಡುತ್ತಲ್ಲ?. ನಿಮ್ಮ ಪ್ರಾಮಾಣಿಕ ಪ್ರಯತ್ನಗಳು ಜನತೆಗೆ ತಿಳಿದು ನಿಮ್ಮ ಮೇಲಿನ ಗೌರವ ಹೆಚ್ಚುತ್ತದೆ. ಈ ಹಿಂದೆ ಪಟ್ಟಿಯಲ್ಲಿ ಪತ್ರಕರ್ತರಲ್ಲದವರ ಹೆಸರುಗಳಿದ್ದಾಗ ಜವಾಬ್ದಾರಿಯ ಸ್ಥಾನದಲ್ಲಿದ್ದವರು ಯಾಕೆ ಮೌನ ವಹಿಸಿದ್ದಿರಿ? ಈಗ ಇರುವ ಪಟ್ಟಿಯಲ್ಲೂ ಎಲ್ಲರೂ ಪತ್ರಕರ್ತರಾ? ನಿಮ್ಮ ವರ್ತನೆ ನೋಡಿದಾಗ ನನಗೆ ಈ ಪ್ರಶ್ನೆಗಳು ಉದ್ಭವಿಸಿವೆ.

೪. ನೀವೇ ಹೇಳಿದ್ದೀರಿ ಇಷ್ಟಾಗಿಯೂ ಕೆಲವರು ಪ್ರಾಧಿಕಾರದಿಂದ ಎರಡೆರಡು ನಿವೇಶನ ಪಡೆದವರಿರಬಹುದು, ಅಂತಹ ವಿಷಯಗಳ ಬಗ್ಗೆ ತನಿಖೆ ನಡೆಯಲಿ, ಅವರಿಗೆ ನಿವೇಶನ ಕೊಡುವುದು ಬೇಡ ಎಂದು. ಈ ಕುರಿತು ನಿಮ್ಮಲ್ಲಿ ಸಂಪೂರ್ಣ ಮಾಹಿತಿ ಇದೆ ತಾನೆ? ಯಾರ‍್ಯಾರವೋ, ಎಂತೆಂತವೋ ಹಗರಣ ನಡೆದಾಗಲೆಲ್ಲಾ ಹೀಗೇ ತನಿಖೆಯಾಗಲಿ ಎಂದು ಕಾಯುತ್ತಾ ಕುಳಿತಿದ್ದಿರೋ ಅಥವಾ ನೀವೇ ಮುನ್ನುಗ್ಗಿ ತನಿಖೆ ನಡೆಸಿ ಅದನ್ನು ಬಯಲಿಗೆಳಿದಿದ್ದೀರೋ? ಹೇಳಿ. ಕನಿಷ್ಟ ಇದೇ ರೀತಿ ಅನಾಮಿಕನ ಹೆಸರಲ್ಲಿ ಇದೇ ‘ಸಂಪಾದಕೀಯದಲ್ಲೇ ಬಹಿರಂಗಪಡಿಸಬಹುದಲ್ಲಾ? ಗೆಳೆಯರೆ, ನಿಮಗೆ ಹೀಗೆ ಕಮೆಂಟು ಹಾಕುವಾಗ ನಿಮ್ಮ ಒಳಗಡೆ ಏನೂ ಕಾಡಿಲ್ಲವೇ? ಈಗಲೂ ಕಾಲ ಮಿಂಚಿಲ್ಲ ನೋಡಿ.

೫. ಈಗ ಅರ್ಜಿ ಸಲ್ಲಿಸಿರುವವರಿಗೆ ನಿವೇಶನ ದೊರೆತೊಡನೆ ಅವನ್ನು ಮಾರಿಕೊಳ್ಳಲು ತುದಿಗಾಲಲ್ಲಿ ನಿಂತು ಕೆಲವರು ಅಡ್ವಾನ್ಸನ್ನೂ ಪಡೆದಿರುವುದು ತನಿಖಾ ವರದಿಗಾರರಾದ ನಿಮಗೂ ತಿಳಿದಿರಬಹುದೇನೋ? ಅದೂ ಯಡಿಯೂರಪ್ಪನ ಕೃಪೆಯಿಂದ ಸೈಟುಗಳ ಬೆಲೆ ಯರ್ರಾಬಿರ್ರಿ ಏರಿರುವಾಗ ಇಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆ ನಡೆಯುವುದಿಲ್ಲ ಅಂತೀರಾ? ಅಂತಹ ದಂದೆಗೆ ಸುಮ್ಮನೇ ಪತ್ರಿಕೋದ್ಯಮವನ್ನು ಯಾಕೆ ಬಲಿ ಕೊಡ್ತೀರಾ?

ಗೆಳೆಯರೆ, ನನಗೆ ಜೀವನದಲ್ಲಿಯಾಗಲೀ, ಪತ್ರಿಕೋದ್ಯಮದಲ್ಲಿಯೇ ಆಗಲೀ ನಿಮ್ಮಷ್ಟು ಅನುಭವ ಇಲ್ಲ. ನೀವು ಬರೆಯುತ್ತಿದ್ದ ಅದ್ಭುತ ತನಿಖಾ ವರದಿಗಳನ್ನು ಕಣ್ಣರಳಿಸಿಕೊಂಡು ಓದಿ ಒಳಗೊಳಗೇ ಖುಷಿ ಪಡುತ್ತಾ ಬಂದವನು ನಾನು. ನನ್ನೊಂದಿಗರಿಗೂ ಜೋರಾಗಿ ಓದಿ ಹೇಳಿ ಚರ್ಚಿಸುತ್ತಿದ್ದವನು. ಹೀಗಾಗಿ ಎಲ್ಲೋ ಒಂದು ಮೂಲೆಯಲ್ಲಿ ನಿಮ್ಮ ಬಗ್ಗೆ ಆರಾಧನಾ ಮನೋಭಾವನೆಯೂ ಇತ್ತೆನ್ನಬಹುದು. ನಿಮ್ಮೆದುರು ಬಂದು ಕುಳಿತಾಗ  ಸಣ್ಣ ದನಿಯಲ್ಲಿ ಹಾಗೆ ಸರ್, ಹೀಗೆ ಸರ್, ಹಾಂ ಸರ್, ಹೂಂ ಸರ್ ಎಂದು ಮಾತಾಡುತ್ತಿದ್ದವ. ಆ ನನ್ನ ಮುಖ ನಿಮಗೆ ಸೌಮ್ಯವಾಗಿಯೂ, ಸುಂದರವಾಗಿಯೂ ಕಂಡಿತ್ತು.  ಆದರೆ ಈಗ ನನ್ನ ಒಳಮುಖ ನಿಮಗೆ ವಿಕಾರವಾಗಿ ಕಾಣುತ್ತಿದೆ ಅಲ್ಲವೇ? ಆ ನಿಮ್ಮ ಕಮೆಂಟು ನೋಡಿದಾಗ ನಿಜಕ್ಕೂ ತಪ್ಪು ನನ್ನದೇ ಇರಬೇಕು ಎಂದು ಕಳೆದ ನಾಲ್ಕೈದು ದಿನಗಳಿಂದ ಚಿಂತಾಕ್ರಾಂತನಾಗಿಬಿಟ್ಟಿದ್ದೇನೆ. ಆದರೆ ಇಲ್ಲಿ ಎಲ್ಲವೂ ಸರಿಯಿಲ್ಲ ಎಂದಷ್ಟೇ ಗಾಢವಾಗಿ ಅನ್ನಿಸುತ್ತಿದೆ. ಭ್ರಮೆಗಳು ಉದುರುದುರಿ ಕಳಚಿ ಬೀಳುತ್ತಿದೆ. ನೂರಾರು ದುಃಸ್ವಪ್ನಗಳನ್ನು ಒಂದೇ ಸಲಕ್ಕೆ ಕಂಡು ಕುಮುಟಿ ಬೀಳುತ್ತಿರುವಂತಾಗಿದೆ. ನನ್ನ ಸ್ಥಿತಿ ನನಗೆ ಒಮ್ಮೆ ನಗು ತರಿಸಿದರೆ ಇನ್ನೊಮ್ಮೆ ಅಳು, ಇನ್ನೊಮ್ಮೆ ಹತಾಷೆ, ಮತ್ತೊಮ್ಮೆ ಸಿಟ್ಟು. ಎಲ್ಲೋ ಮತ್ತೊಂದು ಮನಸ್ಸು ಇದೆಲ್ಲಾ ಬೇಕಿತ್ತಾ ಹರ್ಷಾ ನಿಂಗೆ? ಎಲ್ಲರ ತರ ನಿನ್ನನ್ನು ನೀನು ನೋಡಿಕೊಂಡು ಮುಚ್ಕೊಂಡು ಸುಮ್ನೆ ಕೂತಿದ್ರೆ ಆಗ್ತಿರಲಿಲ್ವಾ? ಅನ್ನುತ್ತೆ. ಪಕ್ಕನೆ ಚೆ-ಗುವಾರ ಎಚ್ಚರಿಸುತ್ತಾನೆ.  ಜಗತ್ತಿನ ಯಾವುದೇ ಮೂಲೆಯಲ್ಲಿ ಅನ್ಯಾಯದ ವಿರುದ್ಧ ಸಿಡಿದು ನಿಂತರೆ ನೀನು ನನ್ನ ಸಂಗಾತಿ!  ಕಳೆದ ಕೆಲವಾರು ವರ್ಷಗಳಲ್ಲಿ ನನಗಾಗಿರುವ ಭ್ರಮನಿರಸನಗಳ ಬಗ್ಗೆ ನಿಮಗೂ ತಿಳಿದೇ ಇದೆ. ಈಗ ಮತ್ತೆ ನಿಮ್ಮ ಬಗ್ಗೆಯೇ. ಬದುಕು ತುಂಬಾ ವಿಚಿತ್ರ ಸರ್!.

ಇಷ್ಟೆಲ್ಲಾ ಹೇಳಿದ ಮೇಲೂ ಮೇಲೂ ನನಗೆ ಶಿವಮೊಗ್ಗದ ಎಲ್ಲಾರನ್ನೂ ಒಂದೇ ರೀತಿಯಲ್ಲಿ ನೋಡಬೇಕೆನಿಸುತ್ತಿಲ್ಲ. ಕೆಲವರ ಬಗ್ಗೆ ಹೆಚ್ಚು, ಕೆಲವರ ಬಗ್ಗೆ ಕಡಿಮೆ. ಕೆಲವರ ಬಗ್ಗೆ ನನಗಿರುವ ಗೌರವಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಈಗಲೂ ನನ್ನ ಉದ್ದೇಶಗಳನ್ನು ಸಂಶಯದಿಂದ ನೋಡಿ ಮತ್ತೊಮ್ಮೆ ದಾಳಿ ನಡೆಸುತ್ತೀರಾದರೆ ನಡೆಸಿ. ಅದೇ - ಮನಸ್ಸು ದೌಪ್ದಿಯಾಗಲು ಅಣಿಯಾಗುತ್ತಿದೆ. ಮುಗಿಸುವ ಮುನ್ನ ಒಂದೇ ಮಾತು. ಕಳೆದ ಹಲವಾರು ವರ್ಷಗಳಿಂದ ನನ್ನ ತಿಳಿವಳಿಕೆಯನ್ನು ಹಲವಾರು ರೀತಿಯಲ್ಲಿ ವಿಸ್ತರಿಸಲು ಸಹಕರಿಸಿರುವ ಹಾಗೂ ಈಗ ಮತ್ತೊಂದು ಬಗೆಯಲ್ಲಿ ಮತ್ತೂ ಸಹಕರಿಸಿರುವ ನಿಮಗೂ ನನ್ನ ಆಲೋಚನೆಗಳಿಗೆ ದನಿಯಾದ ಸಂಪಾದಕೀಯಕ್ಕೂ ಧನ್ಯವಾದಗಳು.

Tuesday, September 13, 2011

ಸದಾನಂದ ಗೌಡರ ನಗೆ-ನಡೆ ಹೀಗಿದ್ದರೆ ಹೇಗೆ?


ಚಿದಂಬರ ಬೈಕಂಪಾಡಿ ನಿಮಗೆ ಗೊತ್ತಿರಬಹುದು. ವಡ್ದರ್ಸೆ ರಘುರಾಮಶೆಟ್ಟರ ಗರಡಿಯಲ್ಲಿ ಬೆಳೆದವರು. ಇತ್ತೀಚಿಗೆ ತಾನೇ ಅವರು ವಡ್ಡರ್ಸೆ ಕುರಿತಾದ ಪುಸ್ತಕವೊಂದನ್ನು ಹೊರತಂದಿದ್ದಾರೆ. ಮೂಲತಃ ಕವಿಯಾದ  ಚಿದಂಬರ ಅವರು ಹಲವು ಕವನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಮುಂಗಾರು ಪತ್ರಿಕೆಯಲ್ಲಿ ಪತ್ರಕರ್ತನಾಗಿ ವೃತ್ತಿ ಜೀವನ ಆರಂಭಿಸಿ ಕನ್ನಡಪ್ರಭ ಸೇರಿದಂತೆ ಹಲವು ಪತ್ರಿಕೆಗಳು, ಚಾನಲ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಸಂಪಾದಕೀಯಕ್ಕಾಗಿ ಬರೆದಿರುವ ಈ ಲೇಖನ ನಿಮಗಿಷ್ಟವಾಗಬಹುದು.


-ಸಂಪಾದಕೀಯ


ಕರ್ನಾಟಕದ ಮುಖ್ಯಮಂತ್ರಿಯಾಗಿ ಕರಾವಳಿ ಮೂಲದ ಡಿ.ವಿ.ಸದಾನಂದ ಗೌಡ ಅವರು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಒಂದು ಹಂತದ ಬಿಜೆಪಿಯ ರಾಜಕೀಯ ತುಮುಲಕ್ಕೆ ತೆರೆ ಬಿದ್ದಿದೆ ಅಂದುಕೊಂಡರೂ ಎಲ್ಲವೂ ಸರಿಯಾಗಿಲ್ಲ. ಆ ಪಕ್ಷದೊಳಗಿನ ಆಂತರಿಕ ತಳಮಳ ಮಾತ್ರ ಮುಂದುವರಿದಿದೆ. ಆ ಪಕ್ಷದವರೇ ಹೇಳಿಕೊಂಡಿರುವಂತೆ ಅವರೇ ಹುಟ್ಟುಹಾಕಿದ ಸಮಸ್ಯೆಯನ್ನು ಅವರೇ ನಿಭಾಯಿಸಿಕೊಳ್ಳುತ್ತಾರೆ ಅಂದುಕೊಳ್ಳಬಹುದು.

ಕರ್ನಾಟಕದ ೨೬ ನೆಯ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಡಿ.ವಿ.ಸದಾನಂದ ಗೌಡರು ಅಖಂಡ ಕರ್ನಾಟಕವನ್ನು ಕಣ್ತುಂಬಿಕೊಂಡು ಕೆಲಸ ಮಾಡಬೇಕಾಗಿದೆ. ಇಪ್ಪತೈದು ಮಂದಿ ಮುಖ್ಯಮಂತ್ರಿಗಳು ಈ ನಾಡನ್ನು ಮುನ್ನಡೆಸಲು, ನಾಡಿನ ಜನರ ಬದುಕನ್ನು ಹಸನುಗೊಳಿಸಲು ಮಾಡಿದ ಸಾಧನೆಗಳನ್ನು ಮುಂದಿಟ್ಟುಕೊಂಡು ಮಾಡದೇ ಉಳಿದಿರುವ ಮತ್ತು ಮಾಡಲೇಬೇಕಾದ ಈಗಿನ ಅವಶ್ಯಕತೆಯನ್ನು ಮನನ ಮಾಡಿ ಮುನ್ನಡಿಯಿಡಬೇಕಾಗಿದೆ.

ಕೆಂಗಲ್ ಹನುಮಂತಯ್ಯ ವಿಧಾನ ಸೌಧ ಕಟ್ಟಿಸಿದ ಕತೆಯಿಂದ ನಿರ್ಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗ್ರಾಮೀಣ ಬಡ ಮಕ್ಕಳಿಗೆ ಸೈಕಲ್ ವಿತರಿಸಿದ ತನಕದ ಕಥಾನಕಗಳ ಇತಿಹಾಸವಿದೆ. ಅಧಿಕಾರ ಸುಖಭೋಗ ಅನುಭವಿಸಿ, ಸಂಪತ್ತುಕೊಳ್ಳೆಹೊಡೆದು ಕುಳಿತು ತಿನ್ನುತ್ತಿರುವವರೂ ಕಣ್ಣಮುಂದಿದ್ದಾರೆ. ಹಗರಣಗಳನ್ನು ಮೈಕೈಗೆ ಮೆತ್ತಿಸಿಕೊಂಡು ಮಾನಗೆಟ್ಟವರೂ ನಮ್ಮ ಮಧ್ಯೆಯೇ ಇದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಡಿ.ವಿ.ಸದಾನಂದ ಗೌಡರು ಸದಾ ಆನಂದದ ನಗೆ ಚೆಲ್ಲಿದರೆ ಅದಷ್ಟೇ ಸಾಧನೆಯಾಗುವುದಿಲ್ಲ, ಇತಿಹಾಸದ ಪುಟಗಳಲ್ಲಿ ಉಳಿದದ್ದು ಕೇವಲ ನಗೆಯಾಗಬಾರದು.

ಕರ್ನಾಟವನ್ನು ಮುನ್ನಡೆಸಿದ ಮುಖ್ಯಮಂತ್ರಿಗಳ ಸಾಧನೆಯ ಪುಟಗಳನ್ನು ತಿರುಗಿಸುತ್ತಾ ಹೋದಾಗ ನಮ್ಮ ಸಾಧನೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವಂತಿಲ್ಲ. ಎರಡು ಕೋಟಿಯಿದ್ದ ಜನಸಂಖ್ಯೆ ಆರು ಕೋಟಿಗೇರಿದೆ. ದುಡಿವ ಕೈಗಳಿಗೆ ಉದ್ಯೋಗ ಪೂರ್ಣಪ್ರಮಾಣದಲ್ಲಿ ಸಿಕ್ಕಿಲ್ಲ. ನೆಲಜಲ ಸಂರಕ್ಷಣೆಯಲ್ಲಿ ಉದಾಸೀನ ತೋರಿಸಲಾಗಿದೆ. ಹೇರಳವಾದ ಖನಿಜ ಸಂಪತ್ತು ಲೂಟಿಯಾಗಿದೆ. ಫಲವತಾದ ಕೃಷಿ ಭೂಮಿ ಅಭಿವೃದ್ದಿ, ಕೈಗಾರಿಕೆಗಳ ಹೆಸರಲ್ಲಿ ಬಂಡವಾಳಶಾಹಿಗಳ ವಶವಾಗಿದೆ.

ಶಿಕ್ಷಣ ವ್ಯಾಪಾರೀಕರಣವಾಗಿದೆ. ಹಳ್ಳಿಗಳು ಆಧುನಿಕತೆಯ ಲೇಪಹಚ್ಚಿಕೊಂಡು ತಮಗರಿವಿಲ್ಲದಂತೆಯೇ ಪಟ್ಟಣಗಳ ಸ್ವರೂಪಪಡೆಯುತ್ತಿವೆ. ಗ್ರಾಮೀಣ ಪ್ರದೇಶಗಳ ಯುವಮನಸ್ಸುಗಳು ಪೇಟೆಯ ಬೆಡಗಿಗೆ ಆಕರ್ಷಿತವಾಗಿ ಗುಳೇಹೋಗುತ್ತಿವೆ. ಐಟಿ-ಬಿಟಿಯೇ ಪರಮ ಸತ್ಯ, ಅದೇ ಸ್ವರ್ಗಕ್ಕೆ ರಹದಾರಿ ಎನ್ನುವ ಗುಂಗಿನಲ್ಲಿ ಹೊಸಪೀಳಿಗೆ ಸಾಮಾನ್ಯ ಶಿಕ್ಷಣದಿಂದ ದೂರ ಸರಿಯುತ್ತಿದೆ.

ನದಿಗಳು ಬತ್ತಿ ಹೋಗುತ್ತಿವೆ, ಕಾಡುಗಳು ಬೋಳಾಗುತ್ತಿವೆ, ಬೆಟ್ಟಗಳು ಕರಗುತ್ತಿವೆ. ಮರ, ಮಣ್ಣು, ನೀರು ಮಾರಾಟದ ಸರಕಾಗಿವೆ. ಎಲ್ಲವನ್ನೂ ಕೆಡವಲು ಮನಸ್ಸುಗಳು ತುಡಿಯುತ್ತಿವೆಯೇ ಹೊರತು ಕಟ್ಟುವ ಅಗತ್ಯವನ್ನು ಮರೆತುಬಿಟ್ಟಿವೆ. ಮನುಷ್ಯ-ಮನುಷ್ಯರ ನಡುವೆ ಅಪನಂಬಿಕೆಯ ಕಂದರ ಹೆಚ್ಚಾಗುತ್ತಿದೆ. ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು ಕಣ್ಣಮುಂದಿರುವ ಸವಾಲುಗಳನ್ನು, ಸಮಸ್ಯೆಗಳನ್ನು.

ಈ ನಾಡಿನ ಸಾರಥಿಗಳಾಗಿ ನೆಟ್ಟ ಹೆಜ್ಜೆಗುರುತುಗಳನ್ನು ಅವಲೋಕಿಸಿದರೆ ಸದಾನಂದ ಗೌಡರು ಮುಂದಕ್ಕೆ ಇಡಬೇಕಾದ ಹೆಜ್ಜೆಯ ದರ್ಶನವಾಗುತ್ತದೆ. ಅವರು ದಾಖಲಿಸಿದ ಸಾಧನೆಯ ಹೆಗ್ಗುರುತುಗಳು ಹೊಸ ಸಾಧನೆಗೆ ಸ್ಪೂರ್ತಿಯಾಗುತ್ತದೆ.

ಎಸ್.ನಿಜಲಿಂಗಪ್ಪ, ಎಚ್.ಡಿ.ದೇವೇಗೌಡ ಮತ್ತು ಬಿ.ಡಿ.ಜತ್ತಿ ಈ ನಾಡಿನಿಂದ ದೇಶದ ಅತ್ಯುನ್ನತ ಹುದ್ದೆಗಳನ್ನೇರಿದ ಸಾಧಕರು. ನಿಜಲಿಂಗಪ್ಪ ಅವರು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು. ದಿವಂಗತ ಇಂದಿರಾ ಗಾಂಧಿ ಅವರ ಜೊತೆ ಕುಳಿತು, ಅವರಿಗೂ ಮಾರ್ಗದರ್ಶನ ಮಾಡುವಂಥ ದೊಡ್ಡ ಸ್ಥಾನದಲ್ಲಿದ್ದವರು. ಅವರು ಮುಖ್ಯಮಂತ್ರಿಯಾಗಿ ಶರಾವತಿ, ಕಾಳಿ ವಿದ್ಯುತ್ ಯೋಜನಗಳಿಗೆ ಬುನಾದಿ ಹಾಕಿ ನಾಡಿಗೆ ಬೆಳಕು ನೀಡಿದವರು.

ಮುಖ್ಯಮಂತ್ರಿಯಾಗಿ, ನಂತರ ಈ ದೇಶದ ಪ್ರಧಾನಿ ಹುದ್ದೆಗೇರಿದ ಎಚ್.ಡಿ.ದೇವೇಗೌಡರು ರೈತಪರ ಕಾಳಜಿಯನ್ನು ನಿರಂತರವಾಗಿ ಪ್ರತಿಪಾದಿಸುತ್ತಲೇ ಬಂದವರು. ರಾಮಕೃಷ್ಣ ಹೆಗಡೆ ಮಂತ್ರಿಮಂಡಲದಲ್ಲಿ ನೀರಾವರಿ ಮಂತ್ರಿಯಾಗಿದ್ದಾಗ ಗೌಡರು ಬಜೆಟ್ ನಲ್ಲಿ ನೀರಾವರಿಗೆ ಒದಗಿಸಿದ ಹಣ ಕಡಿಮೆಯೆಂದು ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟಿದ್ದರು.

ಮುಖ್ಯಮಂತ್ರಿಯಾಗಿ, ದೇಶದ ಉಪರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ ಬಸಪ್ಪ ದಾನಪ್ಪ ಜತ್ತಿ ಅವರದು ಆದರ್ಶ ಬದುಕು. ಉತ್ತರ ಕರ್ನಾಟಕದ ಅಭಿವೃದ್ಧಿಯ ಜೊತೆಗೆ ಸಮಗ್ರ ಕರ್ನಾಟಕದ ಏಳಿಗೆಯ ಕನಸು ಕಂಡವರು.

ವೀರೇಂದ್ರ ಪಾಟೀಲ್ ನಾಡು ಕಂಡ ದಕ್ಷ ಆಡಳಿತಗಾರ. ಆಡಳಿತದಲ್ಲಿ ಸುಧಾರಣೆಗಳನ್ನು ತರುವಲ್ಲಿ ಇವರ ಶ್ರಮ ನಿಜಕ್ಕೂ ಶ್ಲಾಘನೀಯ. ಇಂದಿರಾಗಾಂಧಿಯವರ ನಿಕಟವರ್ತಿಯಾಗಿದ್ದ ದೇವರಾಜ ಅರಸು ಹಿಂದುಳಿದ ವರ್ಗದವರ ಪಾಲಿಗೆ ಆಶಾಕಿರಣವಾದರು. ಇಂದಿರಾ ಅವರಂತೆಯೇ ಸಾಮಾಜಿಕ ಸುಧಾರಣೆಗಳಿಗೆ ತಮ್ಮ ಸೇವೆಯನ್ನು ಮುಡಿಪಾಗಿಟ್ಟ ಅರಸು ಭೂಸುಧಾರಣೆಯನ್ನು ಪರಿಣಾಮಕಾರಿಯಾಗಿ ಜ್ಯಾರಿಗೆ ತಂದು ಬಡವರ ಬದುಕಿನ ಬಾಗಿಲು ತೆರೆಸಿದರು. ಇಂದಿರಾ ಅವರ ವೈರತ್ವ ಕಟ್ಟಿಕೊಂಡು ಕಾಂಗ್ರೆಸ್ ಪಕ್ಷದಿಂದ ಸಿಡಿದು ತಮ್ಮದೇ ಅರಸು ಕಾಂಗ್ರೆಸ್ ಪಕ್ಷ ಕಟ್ಟಿ ಮೂಲೆಗುಂಪಾದದ್ದು ಮಾತ್ರ ದುರಂತ.

ಕೊಡಗಿನ ಆರ್.ಗುಂಡೂರಾವ್ ಕರ್ನಾಟಕ ಕಂಡ ಅತ್ಯಂತ ರೋಚಕ ಮುಖ್ಯಮಂತ್ರಿ. ತಾನು ನುಡಿದದ್ದೇ ವೇದವಾಕ್ಯ, ಆದೇ ಆದೇಶ, ಸಂದೇಶ ಎನ್ನುವ ಮಟ್ಟಿಗೆ ಸುದ್ದಿಯಾದರು. ಗೋಕಾಕ್ ಚಳುವಳಿ, ನರಗುಂದ, ನವಲಗುಂದ ರೈತ ಚಳುವಳಿ ಗುಂಡೂರಾವ್ ಅವರ ಪತನಕ್ಕೆ ನಾಂದಿಯಾದವು. ಪತ್ರಕರ್ತರನ್ನು ಅರಬ್ಬಿ ಸಮುದ್ರಕ್ಕೆ ಎಸೆಯಿರಿ ಎನ್ನುವ ಅವರ ಒಂದು ಸ್ಟೇಟ್ ಮೆಂಟ್ ಅವರ ಸರ್ಕಾರದ ಅವಸಾನಕ್ಕೆ ಹೇತುವಾಯಿತು.

ಕಾಂಗ್ರೇಸೇತರ ಸರ್ಕಾರವನ್ನು ಕರ್ನಾಟಕದಲ್ಲಿ ಸ್ಥಾಪಿಸಿದ ರೂವಾರಿ ರಾಮಕೃಷ್ಣ ಹೆಗಡೆ ನಾಡುಕಂಡ ಅತ್ಯಂತ ಚಾಣಕ್ಷ ಮುಖ್ಯಮಂತ್ರಿ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜ್ಯಾರಿಗೆ ತಂದು ತಮ್ಮ ಛಾಪು ಮೂಡಿಸಿದರು. ಬಿಜೆಪಿ ಒಂದು ರಾಜಕೀಯ ಪಕ್ಷವಾಗಿ ಗರಿಬಿಚ್ಚಿಕೊಂಡದ್ದೂ ಕೂಡಾ ಹೆಗಡೆ ಕಾಲದಲ್ಲಿ ಎನ್ನುವುದನ್ನು ಮರೆಯಬಾರದು.
ಚಿದಂಬರ ಬೈಕಂಪಾಡಿ

ಸಾರೆಕೊಪ್ಪ ಬಂಗಾರಪ್ಪ ರಾಜಕೀಯದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡವರು. ಮುಖ್ಯಮಂತ್ರಿಯಾಗಿ ಅವರು ಅನುಷ್ಠಾನಕ್ಕೆ ತಂದ ಆರಾಧನಾ, ವಿಶ್ವ ಕಾರ್ಯಕ್ರಮಗಳು ಮೆಚ್ಚುಗೆಗೆ ಪಾತ್ರವಾದವು. ಗ್ರಾಮೀಣ ಮಾಕ್ಕಳಿಗೆ ಕೃಪಾಂಕ ನೀಡಿಕೆಯೂ ಇವರ ಬಳುವಳಿ.

ಕರಾವಳಿ ಮೂಲದ ಎಂ.ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾಗಿ ಜ್ಯಾರಿಗೆ ತಂದ ಸಿಇಟಿ ಬಡವರ ಮಕ್ಕಳು ವೃತ್ತಿಪರ ಕೋರ್ಸ್ ಸೇರಲು ಅನುವಾಯಿತು. ಪ್ರಾದೇಶಿಕ ಭಾಷೆಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಕೊಡವ, ಕೊಂಕಣಿ, ತುಳು ಸಾಹಿತ್ಯ ಅಕಾಡೆಮಿಗಳನ್ನು ಸ್ಥಾಪಿಸಿದ ಕೀರ್ತಿ ಇವರದು.

ಜೆ.ಎಚ್.ಪಟೇಲ್ ಅವರದು ಅವರ ಬದುಕಿನಂತೆಯೇ ಸ್ವಚ್ಚಂದ ಸರ್ಕಾರ. ಹೆಣ್ಣು- ಹೆಂಡ ನನ್ನ ವೀಕ್ ನೆಸ್ ಅಂತ ಬಹಿರಂಗವಾಗಿ ಹೇಳಿಕೊಂಡು ತಮಗೆ ಸರಿಕಂಡಂತೆಯೇ ಸರ್ಕಾರ ನಡೆಸಿ ಇತಿಹಾಸ ಸೇರಿಕೊಂಡರು.

ಕರ್ನಾಟಕದಲ್ಲಿ ಹಗರಣಗಳ ಸರಮಾಲೆಯೇ ಹುಟ್ಟಿಕೊಳ್ಳುವುದು ೨೦೦೦ದಿಂದೀಚೆಗೆ. ಎಸ್.ಎಂ.ಕೃಷ್ಣ, ಧರಂ ಸಿಂಗ್, ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಸರ್ಕಾರಗಳು ಹಗರಣಗಳ ಧೂಳಿನಿಂದ ಆವರಿಸಿಕೊಂಡವು. ಕಾಡುಗಳ್ಳ ವೀರಪ್ಪನ್ ಮಾಡಿದ ರಾಜ್ ಅಪಹರಣ, ಅವನಿಗೆ ಒತ್ತೆಹಣ ಸಂಗ್ರಹದಿಂದ ಹಿಡಿದು ಖೇಣಿಯ ನೈಸ್ ವಿವಾದ, ಗಣಿ ಲೂಟಿ ತನಕವೂ ಹಗರಣಗಳೇ ಸದ್ದು ಮಾಡಿದವು. ದಶಕದ ಕರ್ನಾಟಕದ ಆಡಳಿತ ಅನೇಕ ಕಾರಣಗಳಿಂದಾಗಿ ದೇಶದ ಗಮನ ಸೆಳೆಯಿತು. ರೆಸಾರ್ಟ್ ಸಂಸ್ಕೃತಿ ಬೆಳೆದದ್ದು ಕೂಡಾ ಈ ಅವಧಿಯಲ್ಲೇ.

ಈ ಎಲ್ಲಾ ಅಂಶಗಳನ್ನು ಮನನ ಮಾಡಿದರೆ ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಏನು ಮಾಡಬೇಕು ಎನ್ನುವುದು ಗೋಚರವಾಗುತ್ತದೆ. ಒಂದು ದಶಕದಿಂದ ಆಡಳಿತ ಹಳಿತಪ್ಪಿದೆ, ಅಭಿವೃದ್ಧಿ ಯೋಜನೆಗಳು ವೇಗ  ಕಳೆದುಕೊಂಡಿವೆ. ಸರ್ಕಾರ ಉಳಿಸಿಕೊಳ್ಳುವುದು, ತಾನು ಅಧಿಕಾರದಲ್ಲಿ ಮುಂದುವರಿಯುವುದೇ ಪರಮಧ್ಯೇಯ ಎನ್ನುವಷ್ಟರಮಟ್ಟಿಗೆ ಸೀಮಿತವಾಗಿದೆ. ಪಕ್ಷ ರಾಜಕಾರಣ ಪಾರಾಕಾಷ್ಠೆಗೆ ಮುಟ್ಟಿರುವುದೂ ಕೂಡಾ ಈ ದಶಕದಲ್ಲೇ ಎನ್ನುವ ಸತ್ಯವನ್ನು ಮರೆಯಬಾರದು.

ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಪವಾಡ  ಮಾಡಿಬಿಡುತ್ತಾರೆ ಎನ್ನುವ ಭ್ರಮೆ ಯಾರಿಗೂ ಬೇಕಾಗಿಲ್ಲ. ಪವಾಡಗಳು ಏನಿದ್ದರೂ ತಾತ್ಕಾಲಿಕ ಅಥವಾ ರೋಚಕ. ಹಳಿತಪ್ಪಿರುವ ಆಡಳಿತ ವ್ಯವಸ್ಥೆ ಮತ್ತೆ ಹಳಿಗೆ ಬರಬೇಕು. ವೇಗ ಕಳೆದುಕೊಂಡಿರುವ ಯೋಜನೆಗಳು ವೇಗ ಹೆಚ್ಚಿಸಿಕೊಳ್ಳಬೇಕು. ಪಕ್ಷ ರಾಜಕಾರಣ ಮಾಡಲು ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳಿರುವುದರಿಂದ ಗೌಡರಿಗೆ ಇದರಗೊಡವೆ ಬೇಕಾಗಿಲ್ಲ.

ಪಾರದರ್ಶಕ ಆಡಳಿತ, ಜನಮೆಚ್ಚುವ ಅಭಿವೃದ್ಧಿಪರ ಸರ್ಕಾರಕೊಡುವುದು ಮುಖ್ಯವಾಗಿದೆ. ಕಾಡುಗಳ್ಳರು, ನೆಲಗಳ್ಳರಿಂದಾಗಿ ಲೂಟಿಯಾಗಿರುವ ಸಂಪತ್ತು ಮತ್ತೆ ಲೂಟಿಯಾಗದಂತೆ ಕಡಿವಾಣ ಹಾಕುವ ಗಟ್ಟಿತನದ ಅವಶ್ಯಕತೆಯಿದೆ. ಮುಖ್ಯಮಂತ್ರಿಗಳು ತಮ್ಮ ಎಡ-ಬಲಗಳಲ್ಲಿ ಕೈ, ಬಾಯಿ ಶುದ್ಧವಿದ್ದವರನ್ನೇ ಇಟ್ಟುಕೊಂಡರೆ ಘನತೆ ಬರುತ್ತದೆ. ಜಾತಿಯ ವಾಸನೆ, ಅಧಿಕಾರದ ಮದದಿಂದ ಮುಕ್ತರಾಗುವುದು ಕೂಡಾ ಯಶಸ್ಸಿಗೆ ಮೆಟ್ಟಿಲುಗಳು ಎನ್ನುವುದನ್ನು ಮರೆಯಬಾರದು. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಐದು ದಶಕಗಳಿಂದ ರೂಢಿಸಿಕೊಂಡು ಬಂದಿರುವ ಶಿಸ್ತನ್ನು ಉಳಿಸಿಕೊಂಡು ಕನ್ನಡನಾಡಿನ ತೇರನ್ನು ಸದಾನಂದ ಗೌಡರು ಎಳೆಯಬೇಕಾಗಿದೆ. ಮುಂದಿನ ಪೀಳಿಗೆ ನೆನೆಪಿಡುವಂಥ ಕೊಡುಗೆಯನ್ನು ಕೊಡಲು ಮನಸ್ಸು ಮಾಡಬೇಕು. ಕರಾವಳಿಗೆ ಮತ್ತೆ ಬಹುಬೇಗ ಇಂಥ ಅವಕಾಶ ಸಿಗುವುದೆಂದು ಊಹಿಸುವುದು ತುಸು ಕಷ್ಟವೇ ಸರಿ.

ಕರಾವಳಿಗೆ ಶ್ರೀನಿವಾಸ ಮಲ್ಯರು ಕೊಟ್ಟ ಕೊಡುಗೆಯನ್ನು ಮರೆಯಲು ಹೇಗೆ ಸಾಧ್ಯವಿಲ್ಲವೋ ಅಂಥ ಕೊಡುಗೆಯನ್ನು ಸದಾನಂದ ಗೌಡರು ನಾಡಿಗೆ ಕೊಡಲು ಸಿಕ್ಕಿರುವ ಸದವಕಾಶ. ಮೈಮರೆಯದೆ, ಮದವೇರದೆ ಮನವಿಟ್ಟು ಕೆಲಸ ಮಾಡಿದರೆ ನಾಡು-ನಾಡಿನ ಜನ ಮುಂದೊಂದು ದಿನ ಕೊಂಡಾಡುತ್ತಾರೆ, ಇಲ್ಲವಾದರೆ ಸಿಕ್ಕಿದ ಅವಕಾಶವನ್ನು ಕೈಚೆಲ್ಲಿದ ಕಪ್ಪುಚುಕ್ಕೆ ಇತಿಹಾಸದ ಪುಟದಲ್ಲಿ ದಾಖಲಾಗಿಬಿಡುತ್ತದೆ.

-ಚಿದಂಬರ ಬೈಕಂಪಾಡಿ

Monday, September 12, 2011

ವರ್ತಮಾನ, ವರದಿಗಾರ ಮತ್ತು ಕಾಲಂ೯ ಬಗ್ಗೆ ಒಂದಿಷ್ಟು...


ರವಿಕೃಷ್ಣಾರೆಡ್ಡಿ ನಿಮಗೆ ಗೊತ್ತು. ಅಮೆರಿಕದಿಂದ ರವಿ ಎಂಬುದು ಅವರ ಬ್ಲಾಗು. ಅಮೆರಿಕದಲ್ಲಿ ಕೆಲಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ರೆಡ್ಡಿ ಬೆಂಗಳೂರಿಗೆ ವಾಪಾಸು ಬಂದಿದ್ದಾರೆ. ನಿಮಗೆ ಹಿಂದೆ ಹೇಳಿದ ಹಾಗೆ ಅವರು ಚಿತ್ರದುರ್ಗದಲ್ಲಿ ನಡೆದ ಮಾಧ್ಯಮಗೋಷ್ಠಿಯೊಂದರಲ್ಲಿ ಪರ್ಯಾಯ ಮಾಧ್ಯಮವನ್ನು ಗಟ್ಟಿಗೊಳಿಸಬೇಕಾದ ಅನಿವಾರ್ಯತೆ ಕುರಿತು ಮಾತನಾಡಿದ್ದರು. ಹೇಳಿದ್ದನ್ನು ಮಾಡುವವರ ಪೈಕಿ ರೆಡ್ಡಿಯವರೂ ಒಬ್ಬರು. ರಾಜ್ಯವೆಲ್ಲ ಸುತ್ತಿ ವರ್ತಮಾನ ಎಂಬ ವೆಬ್‌ಸೈಟ್ ಅಣಿಗೊಳಿಸಿದ್ದಾರೆ. ಈಗಾಗಲೇ ಹಲವು ಜನಪರ ಮನಸ್ಸುಗಳು ರೆಡ್ಡಿಯವರ ಈ ಪ್ರಯತ್ನದಲ್ಲಿ ಕೈ ಜೋಡಿಸಿವೆ. ಹೀಗಾಗಿ ವರ್ತಮಾನ ಸೊಗಸಾಗಿ ಮೂಡಿಬರುತ್ತಿದೆ.
ರವಿಕೃಷ್ಣಾ ರೆಡ್ಡಿ

ಅಣ್ಣಾ ಹಜಾರೆ ಆಂದೋಲನದ ಸಂದರ್ಭದಲ್ಲಿ ರವಿ ಕೃಷ್ಣಾರೆಡ್ಡಿ ಆ ಆಂದೋಲನದ ಭಾಗವೇ ಆಗಿ, ಚಳವಳಿಯ ಬಗ್ಗೆ ಅಶಾದಾಯಕ ಮಾತುಗಳನ್ನು ಆಡಿದ್ದರು. ಆದರೆ ವರ್ತಮಾನದಲ್ಲಿ ಹಜಾರೆ ಚಳವಳಿಯನ್ನು ತೀಕ್ಷ್ಣವಾಗಿ ವಿಮರ್ಶೆಗೆ ಒಳಪಡಿಸುವ ಲೇಖನಗಳನ್ನೂ ಪ್ರಕಟಿಸಿದರು. ಭಿನ್ನ ಧ್ವನಿಗಳನ್ನೂ ಗೌರವಿಸುವುದು ಪ್ರಜಾಪ್ರಭುತ್ವ ಶೈಲಿಯ ಮಾರ್ಗ.

ಏನನ್ನೇ ಮಾಡು, ಒಳ್ಳೆಯದನ್ನೇ ಮಾಡು ಎಂಬುದು ರೆಡ್ಡಿಯವರು ಪ್ರಕಟಿಸಿರುವ ಹೊಸ ಪುಸ್ತಕದ ಹೆಸರು. ರೆಡ್ಡಿಯವರದು ನಿಗಿನಿಗಿ ಕೆಂಡದಂಥ ಆದರ್ಶದ ಬದುಕು. ಅವರು ಏನನ್ನೇ ಮಾಡಿದರೂ ಒಳ್ಳೆಯದನ್ನೇ ಮಾಡುತ್ತಾರೆ ಎಂಬ ನಂಬುಗೆ ನಮ್ಮದು. ವರ್ತಮಾನ ನಿಮಗೂ ಇಷ್ಟವಾಗುತ್ತದೆ. ನಮ್ಮ ಎಲ್ಲ ಓದುಗರೂ ತಪ್ಪದೇ ವರ್ತಮಾನವನ್ನೂ ಓದಬೇಕೆಂಬುದು ನಮ್ಮ ಮನವಿ.

****

ಕುಮಾರ ರೈತ ನಿಮಗೆ ಗೊತ್ತು. ಕೃಷಿ ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿ ಮತ್ತು ಶ್ರದ್ಧೆಯುಳ್ಳವರು. ಆದರೆ ದುರ್ಘಟನೆಯೊಂದರ ಕಾರಣಕ್ಕೆ ಸುದ್ದಿಯಾದವರು. ಅವರ ಮೇಲೆ ಇದೇ ಬಳ್ಳಾರಿಯ ಗಣಿದಂಧೆಕೋರರು ಅಮಾನುಷವಾಗಿ ಹಲ್ಲೆ ನಡೆಸಿದ್ದರು. ಬಳ್ಳಾರಿಯ ಗಣಿ ಮಾಫಿಯಾದ ಕುರಿತು ಅವರು ಮುಲಾಜಿಲ್ಲದಂತೆ ವರದಿ ಮಾಡಿದ್ದಕ್ಕೆ ದೊರಕಿದ ಶಿಕ್ಷೆ ಇದು. ದುರಂತವೆಂದರೆ ಅವರ ನೆರವಿಗೆ ಕೆಲ ಬಳ್ಳಾರಿ ಪತ್ರಕರ್ತರನ್ನು ಬಿಟ್ಟರೆ ಬೇರೆ ಯಾರೂ ನಿಲ್ಲಲೇ ಇಲ್ಲ.

ಕುಮಾರ ರೈತ
ಗಣಿ ಮಾಫಿಯಾದಿಂದ ಹಲ್ಲೆಗೊಳಗಾದರೂ ಕುಮಾರ ರೈತ ತಾನು ನೆಚ್ಚಿಕೊಂಡ ಜೀವನಾದರ್ಶನವನ್ನು ಬಿಟ್ಟುಕೊಡಲಿಲ್ಲ. ಯಾರಿಗೂ ತಲೆಬಾಗಲೂ ಇಲ್ಲ. ಅಫಘಾತಕ್ಕೆ ಒಳಗಾಗಿ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾಗ ಅವರನ್ನು ದುಡಿಸಿಕೊಳ್ಳುತ್ತಿದ್ದ ಚಾನಲ್ ಅವರ ಕೈ ಹಿಡಿಯಲಿಲ್ಲ. ಆದರೂ ಅವರು ವಿಚಲಿತರಾಗಲಿಲ್ಲ.

ಕುಮಾರ ರೈತ ಅವರೀಗ ವರದಿಗಾರ ಎಂಬ ವೆಬ್ ಸೈಟ್ ನಡೆಸುತ್ತಿದ್ದಾರೆ. ಸದ್ಯಕ್ಕೆ ಅವರೊಬ್ಬರೇ ಬರೆಯುತ್ತಿದ್ದಾರೆ, ಬಹುಶಃ ಮುಂದೆ ಅವರ ಗೆಳೆಯರು ಜತೆಗೂಡಬಹುದೇನೋ? ವರದಿಗಾರನನ್ನೂ ಆಗಾಗ ಭೇಟಿ ಮಾಡಿ ಎಂಬುದು ನಮ್ಮ ಕೋರಿಕೆ.

****

ಸಂಪಾದಕೀಯ ಶುರುವಾದಮೇಲೆ ಹಲವಾರು ಮೀಡಿಯಾ ಬ್ಲಾಗ್ ಗಳು ಹುಟ್ಟಿಕೊಂಡವು. ಕೆಲವು ಹುಟ್ಟಿಕೊಂಡಷ್ಟೇ ವೇಗದಲ್ಲಿ ಸತ್ತುಹೋದವು. ವೈಯಕ್ತಿಕ ಸಿಟ್ಟಿಗೆ, ಸೇಡಿಗೆ ಮೀಸಲಾದವು ಕೆಲವು. ಆದರೆ ಕಾಲಂ೯ ಎಂಬ ಬ್ಲಾಗ್ ನೀವು ನೋಡಿರಬಹುದು. ಅದು ಯಾರ ಚಾರಿತ್ರ್ಯವಧೆಗೂ ಕೈ ಹಾಕದೆ, ಯಾರ ಮೇಲೂ ಪೂರ್ವನಿರ್ಧಾರಿತ ಸಿಟ್ಟನ್ನು ಪ್ರಕಟಿಸದೆ ವಸ್ತುನಿಷ್ಠವಾಗಿ ಬರೆಯತೊಡಗಿತು.

ಕಾಲಂ ೯ ಯಾರು ನಡೆಸುತ್ತಾರೆ ಎಂಬುದು ನಮಗೆ ಗೊತ್ತಿಲ್ಲ, ಅದರ ಅವಶ್ಯಕತೆಯೂ ಇಲ್ಲ. ಆದರೆ ಹೇಳುವುದನ್ನು ಚುಟುಕಾಗಿ, ಸಮರ್ಥವಾಗಿ, ಮನಮುಟ್ಟುವಂತೆ ಹೇಳುವುದು ಅವರಿಗೆ ಗೊತ್ತು. ಅದಕ್ಕಾಗಿ ಅವರಿಗೆ ಅಭಿನಂದನೆ.

ಎತ್ತಿಗೆ ಜ್ವರ, ಎಮ್ಮೆಗೆ ಬರೆ ಎಂಬ ಕಾಲಂ೯ರ ಹೊಸ ಲೇಖನವನ್ನು ಗಮನಿಸಿ. ಕನ್ನಡ ಮೀಡಿಯಾ ಜಗತ್ತು ಎಂಥ ಪಾತಾಳಕ್ಕೆ ಇಳಿಯುತ್ತಿದೆ ಎಂಬುದಕ್ಕೆ ಇದು ಸಾಕ್ಷಿ. ಮೀಡಿಯಾಗಳಿಗೆ ಇನ್ನು ಪತ್ರಕರ್ತರು ಬೇಕಾಗೇ ಇಲ್ಲ. ಗುಲಾಮಗಿರಿ ಮಾಡುವ ಕೂಲಿಕಾರ್ಮಿಕರಷ್ಟೇ ಬೇಕು. ಇದು ವಾಸ್ತವ. ಕಾಲಂ೯ ಬ್ಲಾಗ್ ನೋಡಿ ಎಂದು ನಮ್ಮ ಓದುಗರಿಗೆ ವಿನಂತಿಸುತ್ತೇವೆ.

ಈ ನಡುವೆ ಫೇಸ್‌ಬುಕ್ ನಲ್ಲಿ ನಾನಾ ತರಹದ ಗುಂಪುಗಳು. ಲಘುಹರಟೆಯಿಂದ ಹಿಡಿದು ಅಂತಾರಾಷ್ಟ್ರೀಯ ಸಮಸ್ಯೆಗಳ ಗಂಭೀರ ಚರ್ಚೆಯವರೆಗೆ ಎಲ್ಲವೂ ಅಲ್ಲಿ ಲಭ್ಯ. ನಮ್ಮ ಗೆಳೆಯರು ಈಗಾಗಲೇ ಮೂವತ್ತು-ಮೂವತ್ತೈದು ಗುಂಪಿಗೆ ನಮ್ಮನ್ನು ಸೇರಿಸಿಕೊಂಡಿದ್ದಾರೆ.  ಒಮ್ಮೊಮ್ಮೆ ಬ್ಲಾಗ್‌ಗಿಂತ ಹೆಚ್ಚು ಚರ್ಚೆ ಅಲ್ಲೇ ನಡೆಯುತ್ತಿದೆ. ಈಗಾಗಲೇ ನಮ್ಮ ಸ್ನೇಹಿತರ ಸಂಖ್ಯೆ ೪೫೦೦ ದಾಟಿದೆ. ಇನ್ನು ಐನೂರು ಮಂದಿಯನ್ನಷ್ಟೆ ಗೆಳೆಯರನ್ನಾಗಿ ಪಡೆಯಬಹುದು. ನೀವಿನ್ನೂ ಫೇಸ್‌ಬುಕ್‌ನಲ್ಲಿ ಗೆಳೆಯರಾಗಿಲ್ಲದಿದ್ದರೆ ಖಂಡಿತ ಬಂದು ಗೆಳೆಯರಾಗಿ. ( https://www.facebook.com/profile.php?id=100000684598704 )

ವರ್ತಮಾನ, ವರದಿಗಾರ, ಕಾಲಂ೯ರಂಥ ಬ್ಲಾಗು, ವೆಬ್‌ಸೈಟುಗಳಿಂದ ನಮ್ಮ ಕೆಲಸವೂ ಹಗುರವಾಗಿದೆ. ಪರ್ಯಾಯ ಮಾಧ್ಯಮ ಬಲಶಾಲಿಯಾಗಿ ಬೆಳೆಯಬೇಕಿದೆ. ಅದು ಅಭಿಪ್ರಾಯ ರೂಪಿಸುವಷ್ಟು ಶಕ್ತಿಯನ್ನು ಗಳಿಸಿಕೊಳ್ಳಬೇಕಿದೆ. ದಾರಿಗುಂಟ ನೀವಿರುತ್ತೀರಿ ಎಂಬ ನಂಬುಗೆ ನಮಗಿದೆ. ಪ್ರೀತಿ ಹೀಗೇ ಸದಾ ಇರಲಿ.

Sunday, September 11, 2011

ದೂರ್ವಾಸಪುರದಲ್ಲಿ ಸಂಸ್ಕಾರವಾಗದ ಹೆಣಗಳು, ಕೊಳೆತ ದುರ್ವಾಸನೆ!


ಯಾಕೋ ಅನಂತಮೂರ್ತಿಯವರ ಸಂಸ್ಕಾರ ಕಾದಂಬರಿ ಮೇಲಿಂದ ಮೇಲೆ ನೆನಪಾಗುತ್ತಿದೆ...

ಅಲ್ಲಿ ದೂರ್ವಾಸಪುರದಲ್ಲಿ ನಾರಣಪ್ಪನ ಹೆಣ ಕೊಳೆಯುತ್ತಿದೆ. ಸಂಸ್ಕಾರ ಯಾರು ಮಾಡಬೇಕು, ಯಾರು ಮಾಡಬಾರದು ಎಂಬ ಧರ್ಮ ಜಿಜ್ಞಾಸೆ. ಪ್ರಾಣೇಶಾಚಾರ್ಯರು ಮನುಸ್ಮೃತಿಯಾದಿಯಾಗಿ ಎಲ್ಲ ಧರ್ಮಗ್ರಂಥಗಳಲ್ಲಿ ಮುಳುಗೆದ್ದರೂ ಜಿಜ್ಞಾಸೆ ಪರಿಹಾರವಾಗಿಲ್ಲ. ನೆಚ್ಚಿನ ದೈವವೂ ಕೈಕೊಟ್ಟಿದೆ. ಪ್ರಾಣೇಶಾಚಾರ್ಯರೇ ಸೂಳೆ ಚಂದ್ರಿಯೊಂದಿಗೆ ಸೇರಿ, ಅವಳ ಬೆತ್ತಲೆ ತೊಡೆಯ ಮೇಲೆ ಮಲಗೆದ್ದು ಬಂದು ಮೈಲಿಗೆಯಾಗಿ ಗಾಬರಿಗೊಂಡಿದ್ದಾರೆ.

ದೂರ್ವಾಸಪುರದಲ್ಲಿ ಹೆಣ ಕೊಳೆಯುತ್ತಿದೆ. ಎಲ್ಲಿ ನೋಡಿದರೂ ಹದ್ದು, ಹದ್ದು, ಹದ್ದು. ಆಕಾಶದ ನೀಲಿಯ ತುಂಬ ತೇಲಾಡುವ, ಓಲಾಡುವ, ವೃತ್ತವೃತ್ತ ಸುತ್ತಿ ಕೆಳಗೆ ಬರುವ ಹದ್ದುಗಳು. ಮನೆಮನೆಗಳಲ್ಲೂ ಇಲಿಗಳು ರಿವ್ರನೆ ಮಕಾಡೆ ತಿರುಗಿ ಸತ್ತುಹೋಗುತ್ತಿವೆ. ಸತ್ತ ಇಲಿಗಳನ್ನು ಹದ್ದುಗಳು ಹೆಕ್ಕಿ ಎಳೆದೊಯ್ಯುತ್ತಿವೆ.

ಸಂಸ್ಕಾರವಾಗದ ಹೆಣ ಇಟ್ಟುಕೊಂಡು ಗಂಡಸರು ಊಟ ಮಾಡುವಂತಿಲ್ಲ. ದೇವರಿಗೆ ನೇವೇದ್ಯವಿಲ್ಲ. ಪ್ರಾಣೇಶಾಚಾರ್ಯರ ಪ್ರವಚನವಿಲ್ಲ. ಸತ್ತ ಇಲಿಗಳು, ಹದ್ದುಗಳ ಆರ್ಭಟದ ನಡುವೆ ದೂರ್ವಾಸಪುರ ಸ್ಮಶಾನವಾಗಿ ಹೋಗಿದೆ. ಹೆಣದ ಮೇಲೆ ಹೆಣ ಬೀಳುತ್ತಿದೆ. ಸಂಸ್ಕಾರ ಮಾಡುವವರಿಲ್ಲ, ಯಾರು, ಹೇಗೆ ಮಾಡಬೇಕೆಂಬುದಕ್ಕೆ ಧರ್ಮಜಿಜ್ಞಾಸೆ ಮುಂದುವರೆದಿದೆ. ಆದರೆ ಈ ಜಿಜ್ಞಾಸೆಯಲ್ಲಿ ತೊಡಗಿದ್ದ ಆಚಾರ್ಯರೇ ಸೂಳೆ ಚಂದ್ರಿಯ ಕಿಬ್ಬೊಟ್ಟೆಗೆ ಅಂಟಿದ ತಮ್ಮ ಕೆನ್ನೆಯನ್ನು ಸವರಿಕೊಳ್ಳುತ್ತ ಎದ್ದಿದ್ದಾರೆ...

ಹೆಣ ಕೊಳೆಯುತ್ತಿದೆ......

****

ಕನ್ನಡ ಮಾಧ್ಯಮ ಲೋಕದಲ್ಲಿ ಮಂಕೋ ಮಂಕು. ಯಾರಲ್ಲೂ ಉತ್ಸಾಹ ಕಾಣುತ್ತಿಲ್ಲ. ಒಂಥರಾ ಸಾವಿನ ಮನೆಯ ಹಾಗೆ. ಬರೆಹಕ್ಕೆ, ಮಾತಿಗೆ ಸೂತಕ. ಏನೋ ಕೊಳೆತು ನಾರುತ್ತಿದೆ. ಇಲ್ಲಿ ಕೊಳೆತದ್ದಕ್ಕೆ ಸಂಸ್ಕಾರವಾಗುವುದು ಕಡಿಮೆ. ಹಾಗಾಗಿ ಗಬ್ಬುನಾತ ಕುಡಿದೇ ಬದುಕಬೇಕು. ಯುದ್ಧಕ್ಕೆ ಬಂದು ನಿಂತಂತೆ ರಿವ್ವನೆ ತಿರುಗುವ ಹದ್ದುಗಳು, ಆತ್ಮಹತ್ಯೆ ಮಾಡಿಕೊಳ್ಳುವಂತೆ ಮೇಲೆ ಎರಗಿ ಎರಗಿ, ಲಗಾಟಿ ಹಾಕಿ ಬಿದ್ದು ಸಾಯುವ ಇಲಿಗಳು.

ಜನಾರ್ದನ ರೆಡ್ಡಿ ಜೈಲು ಸೇರಿದ್ದಾರೆ. ಸಿಬಿಐ ಹೆಣೆದಿರುವ ಕುಣಿಕೆಯಿಂದ ಆತ ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಇತ್ತ ಲೋಕಾಯುಕ್ತರ ವರದಿಯಲ್ಲಿ ಮಾಧ್ಯಮ ಮಂದಿ, ಸಂಸ್ಥೆಗಳಿಗೂ ರೆಡ್ಡಿಯ ಹಣ ಸಂದಾಯವಾಗಿರುವ ಸುದ್ದಿ ಇನ್ನೂ ಜೀವಂತವಾಗೇ ಇದೆ. ಯಾರೂ ಮಾತನಾಡಲೊಲ್ಲರು. ಯಾರು ಮಾತನಾಡಬೇಕು ಎಂಬುದೇ ಯಾರಿಗೂ ಗೊತ್ತಿಲ್ಲ. ಕರ್ಮಜಿಜ್ಞಾಸೆ!

ಇಂಡಿಯಾ ಎಗೆನೆಸ್ಟ್ ಕರಪ್ಞನ್, ಹಮಾರಾ ನೇತಾ ಚೋರ್ ಹೈ, ಮೈ ಅಣ್ಣಾ ಹೂಂ ಎಂದೆಲ್ಲಾ ಬರೆದ ಪ್ಲಕಾರ್ಡುಗಳು ಟವಿ ಚಾನಲ್‌ಗಳ ಕಚೇರಿಗಳ ಸ್ಟೋರ್ ರೂಮು ಸೇರಿದೆ. ಮುಂದೆ ಅಣ್ಣಾ ಮತ್ತೆ ಉಪವಾಸಕ್ಕೆ ಕೂತಾಗ ಅವೆಲ್ಲ ಉಪಯೋಗಕ್ಕೆ ಬರಬಹುದು.

ಸ್ಟುಡಿಯೋದಲ್ಲಿ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ನಿರೂಪಕ ಒಂದೇ ಸಮನೆ ಭ್ರಷ್ಟಾಚಾರಿಗಳ ವಿರುದ್ಧ ಭಾಷಣ ಕೊಚ್ಚುತ್ತಿದ್ದಾನೆ. ಅವನ ಜತೆ ಕುಳಿತ ಸಬ್ಜೆಕ್ಟ್ ಎಕ್ಸ್ ಪರ್ಟ್‌ ಒಬ್ಬ ಇಂಥ ಇಸವಿ, ಇಂಥ ತಿಂಗಳು, ಇಂಥ ದಿನದ ಇಷ್ಟನೇ ಗಳಿಗೆಯಲ್ಲಿ ಹೀಗೆ ಆಗಿತ್ತು ನೋಡಿ ಎಂದು ಅದೇನೋ ವಿಚಿತ್ರವಾಗಿ ಹೇಳುತ್ತಿದ್ದಾನೆ.

ಸ್ಟೋರ್ ರೂಮುಗಳಲ್ಲಿ ಇಲಿಗಳ ಕಾಟ ಹೆಚ್ಚು. ಸತ್ತರೆ ಸುಡುಗಾಡು ವಾಸನೆ, ಮೇಲೆ ಆಕಾಶದಲ್ಲಿ ಹದ್ದುಗಳು.

ಏನೋ ಇಲ್ಲೂ ಸತ್ತಿದೆ, ಕೊಳೆಯುತ್ತಿದೆ, ಸಂಸ್ಕಾರವಾಗುತ್ತಿಲ್ಲ.

****

ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರ ಕಟ್ಟಾ ಜಗದೀಶನನ್ನು ನ್ಯಾಯಾಲಯಕ್ಕೆ ಮಾಮೂಲಿನಂತೆ ಹಾಜರುಪಡಿಸಲು ಪೊಲೀಸರು ಕರೆ ತಂದಿದ್ದಾರೆ. ಛಾಯಾಗ್ರಾಹಕರು ಕಾದಿದ್ದಾರೆ. ಫೋಟೋ ಬೇಕಾ, ತಗೋ, ಎಷ್ಟು ಬೇಕೋ ತಗೋ ಎಂದು ಜಗದೀಶ ಹತಾಶೆಯಿಂದ ಸಿಡುಕುತ್ತಾನೆ.

ಕಟ್ಟಾ ಅಪ್ಪ-ಮಕ್ಕಳ ದರ್ಬಾರು ನಡೆಯುತ್ತಿದ್ದಾಗ ಇದೇ ಛಾಯಾಗ್ರಾಹಕರಲ್ಲಿ ಹಲವರು ಅವರ ಮನೆ ಬಾಗಿಲು ಕಾದು ಎಂಥದ್ದೋ ಪುಟ್ಟ ಪುಟ್ಟ ಕವರ್‌ಗಳನ್ನು ಪಡೆದುಕೊಂಡು ಹೋಗುತ್ತಿದ್ದರು. ಜಗದೀಶನಿಗೆ ಅದೆಲ್ಲಾ ನೆನಪಾಗುತ್ತದೆ.

ಜಗದೀಶನ ಸಿಡುಕಿಗೆ ಮಿಡುಕಿ ಬಿದ್ದ ಕೆಲವರು ತಲೆ ತಗ್ಗಿಸಿ ಹೊರಡುತ್ತಾರೆ.

ಏನೋ ಸತ್ತು ಕೊಳೆಯುತ್ತಿದೆ ತಲೆಯಲ್ಲಿ, ವಾಸನೆ ಸಹಿಸಲಾಗದು. ಸಂಸ್ಕಾರ ಹೇಗೆ ಮಾಡಬೇಕೆಂಬ ಧರ್ಮ ಜಿಜ್ಞಾಸೆಯಲ್ಲಿರುವವರು ಏನೂ ಬಾಯಿಬಿಡುತ್ತಿಲ್ಲ. ಚಂದ್ರಿಯ ಮೈಬೆವರು ಇನ್ನೂ ಅಂಟಿಕೊಂಡಿದೆ ಅವರಿಗೆ.

****

ಪ್ರೆಸ್‌ಕ್ಲಬ್‌ನಲ್ಲಿ ಹರಟೆ. ಬದುಕಿಗಾಗಿ ಪತ್ರಿಕಾ ವೃತ್ತಿ ಆರಿಸಿಕೊಂಡು ಬಂದವರು, ಆದರ್ಶಕ್ಕಾಗಿ, ಇನ್ಯಾವುದೋ ಆಕರ್ಷಣೆಗಾಗಿ ಇಲ್ಲಿಗೆ ಬಂದವರು ಮೈಮುರಿದು ಕಾಫಿ ಹೀರುತ್ತಿದ್ದಾರೆ. ದರಿದ್ರ ಕಣ್ರೀ, ಎಲ್ಲ ಕಡೆ ಬಾಯಿಗೆ ಬಂದಂತೆ ಜನ ಮಾತಾಡುತ್ತಾರೆ. ಯಾವನೋ ಲೂಟಿ ಹೊಡೆಯುತ್ತಾನೆ. ನಮ್ಮೆಲ್ಲರಿಗೂ ಕೆಟ್ಟ ಹೆಸರು. ಮೊನ್ನೆ ಅವನು ಮೂರು ಕಾಸಿನ ಪೊಲಿಟಿಷಿಯನ್ ಏನಂದ ಗೊತ್ತಾ? ಆಯ್ತು ಬಿಡ್ರೀ, ಈಗ ನಿಮ್ಮ ಕಥೆಗಳೂ ಆಚೆಗೆ ಬರ‍್ತಾ ಇವೆ. ಹೇಳೋದು ಮಾತ್ರ ವೇದಾಂತ, ನೀವು ಮಾಡೋದೂ ಅದನ್ನೆ. ನಿಮಗೂ-ನಮಗೂ ಏನು ವ್ಯತ್ಯಾಸ ಅಂತ ಕೇಳಿದ. ಕಪಾಳಕ್ಕೆ ಬಾರಿಸಬೇಕು ಅನ್ನಿಸ್ತು....

ಈ ಕ್ಲಬ್ಬಿಗೊಂದು ಮರ್ಯಾದೆ ಅಂತ ಇತ್ತು. ಈಗ ನೋಡ್ರಿ ಜನಾರ್ದನ ರೆಡ್ಡಿ ಯಾವುದೋ ಹವಾಲಾ ಮೂಲಕ ಐದು ಲಕ್ಷ ಕೊಟ್ಟಿದ್ದಾನೆ ಕ್ಲಬ್ಬಿಗೆ. ತಗೊಳ್ಳೋ ಹಣಕ್ಕೆ ಒಂದು ಲೆಕ್ಕಾಚಾರ ಬೇಡ್ವಾ? ಹೋಗಲಿ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್‌ನಲ್ಲಿ ಸುದ್ದಿ ಬಂದ ಮೇಲಾದ್ರೂ ಒಂದು ಸ್ಪಷ್ಟೀಕರಣ ಕೊಡಬಾರದಾ ಈ ಕ್ಲಬ್ಬಿನವರು... ಯಾಕ್ ಯಾಕ್ ಈ ಫೀಲ್ಡಿಗೆ ಬಂದ್ವೋ ಅನ್ಸುತ್ತೆ....

ಹರಟೆ ಮುಂದುವರೆಯುತ್ತದೆ. ಕಾಫಿ ತಣ್ಣಗಾಗುತ್ತದೆ. ಕಬ್ಬನ್ ಪಾರ್ಕಿನ ಸುಂದರ ಪರಿಸರದ ಆ ಭಾಗದಲ್ಲೂ ಎಂಥದ್ದೋ ಕೊಳಕು ವಾಸನೆ ಮುತ್ತಿಕೊಳ್ಳುತ್ತದೆ. ಎಲ್ಲೋ ಏನೋ ಸತ್ತು ಕೊಳೆಯುತ್ತಿದೆ... ಪ್ರಾಣೇಶಾಚಾರ್ಯರು ಇನ್ನೂ ಬಂದ ಹಾಗೆ ಕಾಣುತ್ತಿಲ್ಲ.

****

ಅವರು ಒಬ್ಬ ಹಿರಿಯ ಪತ್ರಕರ್ತರು. ಜೀವನಪೂರ್ತಿ ಕಳಂಕವಿಲ್ಲದೆ ಬದುಕಿದವರು. ವೃತ್ತಿಯಲ್ಲಿ ಎಂದೂ ಯಾರಿಗೂ ಕೈ ಚಾಚಿದವರಲ್ಲ.  ಪ್ರೆಸ್ ಕ್ಲಬ್ ಅವರನ್ನು ಸನ್ಮಾನಿಸಿದೆ. ಏಳೆಂಟು ಸಾವಿರ ರೂ. ಬೆಲೆಬಾಳುವ ಬೆಳ್ಳಿಯ ತಟ್ಟೆಯನ್ನು ನೀಡಿ ಗೌರವಿಸಲಾಗಿದೆ. ಮನೆಯಲ್ಲಿ ಅದಕ್ಕೆ ಪ್ರಶಸ್ತವಾದ ಜಾಗವಿತ್ತು. ಬಂದವರು ಹೋದವರು ಎಲ್ಲರಿಗೂ ಕಣ್ಣಿಗೆ ಬೀಳುವಂಥ ಜಾಗದಲ್ಲಿ ಅದನ್ನು ಹೆಮ್ಮೆಯಿಂದ ಇಟ್ಟುಕೊಂಡಿದ್ದರು.

ಜನಾರ್ದನ ರೆಡ್ಡಿಯ ಕಡೆಯಿಂದ ಬಂದ ಹಣದಿಂದಲೇ ಈ ಬೆಳ್ಳಿ ತಟ್ಟೆಗಳನ್ನು ಕೊಳ್ಳಲಾಗಿತ್ತು ಎನ್ನುವುದು ಗೊತ್ತಾಗುತ್ತಿದ್ದಂತೆ, ಆ ಹಿರಿಯರು ತಟ್ಟೆಯನ್ನು ಒಳಗೆ ಎಸೆದು, ಈ ಸುಡುಗಾಡು ತಟ್ಟೆ ನನ್ನ ಕಣ್ಣಿಗೆ ಕಾಣುವಂತೆ ಇಡಬೇಡ ಎಂದು ಪತ್ನಿಗೆ ಹೇಳುತ್ತಾರೆ.

ಏನೋ ಕೊಳೆಯುತ್ತಿದೆ, ವಾಸನೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಿರಿಯರು ಸುಮ್ಮನೆ ಒಮ್ಮೆ ನಿಟ್ಟುಸಿರು ತೆಗೆದುಕೊಂಡು ಮಿಡುಕುತ್ತಾರೆ.

****

ಅಲ್ಲಿ ದೂರ್ವಾಸಪುರದಲ್ಲಿ ಮೂರು ದಿನಗಳಾದರೂ ನಾರಣಪ್ಪನ ಹೆಣವನ್ನು ಸಂಸ್ಕಾರ ಮಾಡದೇ ಹೋದ್ದರಿಂದ ನೊಂದ ಆತನ ಸೂಳೆ ಚಂದ್ರಿ ಬೇರೆ ನಿರ್ವಾಹವಿಲ್ಲದೆ ಯಾರನ್ನೋ ಕರೆಸಿ ದುಡ್ಡು ಕೊಟ್ಟು ಸಂಸ್ಕಾರ ಮಾಡಿಸಿಬಿಡುತ್ತಾಳೆ. ಆದರೆ ದೂರ್ವಾಸಪುರದವರಿಗೆ ಇದು ಗೊತ್ತಿಲ್ಲ.

ಅವರ ಮನಸ್ಸಿನಲ್ಲಿನ್ನೂ ನಾರಣಪ್ಪನ ಹೆಣ ಕೊಳೆಯುತ್ತಲೇ ಇದೆ. ಕೊಳೆತು ನಾರುತ್ತಲೇ ಇದೆ. ಒಬ್ಬರಾದ ಮೇಲೊಬ್ಬರಂತೆ ದೂರ್ವಾಸಪುರದ ಜನರೆಲ್ಲ ಸಾಯತೊಡಗುತ್ತಾರೆ. ಇಲಿಗಳು ಮಾಮೂಲಿನಂತೆ ಎಗರಿ ಬಿದ್ದು ಸಾಯುತ್ತಿವೆ. ಹದ್ದುಗಳು ಮನೆ ಮೇಲೆ ಬಂದು ಕುಳಿತಿವೆ. ವಾಸನೆ, ವಾಸನೆ, ಅನಿಷ್ಟ ವಾಸನೆ. ಎಲ್ಲದಕ್ಕೂ ಸಂಸ್ಕಾರವಾಗದ ನಾರಣಪ್ಪನ ಹೆಣವೇ ಕಾರಣ ಇವರಿಗೆ.

ಧರ್ಮಸೂಕ್ಷ್ಮ ಹೇಳಬೇಕಾದ ಪ್ರಾಣೇಶಾಚಾರ್ಯರೇ ಮೈಲಿಗೆಯಾಗಿದ್ದಾರೆ. ಸೂಳೆ ಚಂದ್ರಿಯೊಂದಿಗೆ ಕೂಡಿದ್ದಾರೆ. ಸತ್ತ ಪತ್ನಿ ಭಾಗೀರಥಿಯನ್ನು ಸುಟ್ಟು ಬಂದ ಸೂತಕ ಕಳೆದಿಲ್ಲ, ಆಗಲೇ ಅವರ ತಲೆಯಲ್ಲಿ ಮಾಲೇರ ಪದ್ಮಾವತಿಯ ರೂಪ ಲಾವಣ್ಯ ಕುಣಿಯುತ್ತಿದೆ.

ಪ್ರಾಣೇಶಾಚಾರ್ಯರ ಮೈ ಚರ್ಮದ ಅಣುಅಣುವಿನಿಂದ ಈಗ ಕೊಳತ ಶವದ ವಾಸನೆ ಹೊಡೆಯುತ್ತಿದೆ. ಕೊಳೆತದ್ದಕ್ಕೆ ಸಂಸ್ಕಾರವಾಗುತ್ತಾ? ಧರ್ಮಸೂಕ್ಷ್ಮ ಬಗೆಹರಿಯುತ್ತಾ? ಗೊತ್ತಿಲ್ಲ.

Friday, September 9, 2011

ಮಾಧ್ಯಮ ಲೋಕದ ಭ್ರಷ್ಟಾಚಾರ: ಒಂದು ಗಂಭೀರ ಆತ್ಮಾವಲೋಕನ



ಮಾಧ್ಯಮ ಲೋಕದ ಭ್ರಷ್ಟಾಚಾರದ ಬಗ್ಗೆ ಮಾಧ್ಯಮ ವಲಯದಿಂದಲೇ ಆತ್ಮಾವಲೋಕನ ಆರಂಭವಾಗಬೇಕು ಎಂಬುದು ಮೊದಲಿನಿಂದಲೂ ನಮ್ಮ ಆಗ್ರಹ. ಲೋಕಾಯುಕ್ತ ವರದಿಯಲ್ಲಿ ಪತ್ರಕರ್ತರ ಹೆಸರು, ಇನಿಷಿಯಲ್ಸ್ ಕಾಣಿಸಿಕೊಂಡ ಹಿನ್ನೆಲೆಯನ್ನಿಟ್ಟುಕೊಂಡು ಸಂಡೆ ಇಂಡಿಯನ್ ಪತ್ರಿಕೆ ವರದಿಗಾರ ಹರ್ಷ ಕುಮಾರ್ ಕುಗ್ವೆ ಸುದೀರ್ಘ ಲೇಖನವನ್ನು ಸಂಪಾದಕೀಯಕ್ಕಾಗಿ ಬರೆದಿದ್ದಾರೆ. ಮಾಧ್ಯಮ ಭ್ರಷ್ಟಾಚಾರದ ಬಗ್ಗೆ ಮಾತನಾಡುವವರೂ ಇಲ್ಲದ ಈ ಸಂದರ್ಭದಲ್ಲಿ ಓರ್ವ ಪತ್ರಕರ್ತನಾಗಿ ತನ್ನ ಅರಿವಿನ ಮಿತಿಯಲ್ಲಿ ಇಡೀ ಸಮಸ್ಯೆಯನ್ನು ಪ್ರಾಂಜಲ ಮನಸ್ಸಿನಿಂದ ಬಿಡಿಸಿಡಲು ಹರ್ಷ ಪ್ರಯತ್ನಿಸಿದ್ದಾರೆ. ಅವರಿಗೆ ಕೃತಜ್ಞತೆಗಳು.


-ಸಂಪಾದಕೀಯ

ಲೋಕಾಯುಕ್ತ ನಿಕಟಪೂರ್ವ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರ ಗಣಿ ಅಕ್ರಮ ಕುರಿತ ಅಂತಿಮ ವರದಿಯ ಅಡಕಭಾಗವಾದ ಯು.ವಿ.ಸಿಂಗ್ ವರದಿಯಲ್ಲಿರುವ ಗಣಿಕಳ್ಳರಿಂದ ಹಣ ಪಡೆದ ಪತ್ರಕರ್ತರ ಹೆಸರುಗಳ ಇನಿಷಿಯಲ್ಲುಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾದ ಕುರಿತು ಪತ್ರಕರ್ತರ ಒಳಗೊಳಗೇ ಅನೌಪಚಾರಿಕವಾಗಿ ಚರ್ಚೆಯಾಗುತ್ತಿರುವುದನ್ನು ಬಿಟ್ಟರೆ ಹೊರಗಡೆ ಯಾರೂ ಮಾತನಾಡುವ ವಾತಾವರಣವೇ ಇಲ್ಲದಷ್ಟು ಮುಕ್ತತೆಯನ್ನು ಕಳೆದುಕೊಂಡಿದೆ ನಮ್ಮ ಪತ್ರಿಕೋದ್ಯಮ. ಮೊನ್ನೆ ಮಿತ್ರ ಅಹೋಬಳಪತಿ ಕರೆಮಾಡಿ ಅಲ್ಲಾ ಮಾರಾಯಾ ಬೇರೆಯವರ ಭ್ರಷ್ಟಾಚಾರದ ಬಗ್ಗೆ ಪುಟಗಟ್ಟಲೇ, ವಾರಗಟ್ಟಲೇ ಬರೆಯುವ, ಜಾಡಿಸುವ, ಹಂಗಿಸುವ ನಮ್ಮ ಪತ್ರಕರ್ತರು ಯಾಕೆ ಈ ಬಗ್ಗೆ ಏನೂ ಮಾತನಾಡುತ್ತಿಲ್ಲ? ಏನಾದರೂ ಮಾಡಬೇಕಲ್ವಾ ಇದರ ಬಗ್ಗೆ? ಎಂದರು. ನಾವೇನು ಮಾಡಬಹುದು ಎಂದು ನಿಜಕ್ಕೂ ನನಗೆ ತೋಚಲಿಲ್ಲ.

ನಾನು ಒಬ್ಬ ಪತ್ರಕರ್ತ. ಮುಖ್ಯವಾಗಿ ಹೊಟ್ಟೆಪಾಡಿಗಾಗಿ ಈ ವೃತ್ತಿ ಸೇರಿಕೊಂಡವ. ಅಪಾರ ವಿಸ್ತಾರ, ವೈವಿಧ್ಯತೆ ಹೊಂದಿರುವ ಈ ಕ್ಷೇತ್ರದಲ್ಲಿ ಈಗಿನ್ನೂ ಕಣ್ ಕಣ್ ಬಿಡುತ್ತಿರುವ ಪತ್ರಕರ್ತರಲ್ಲಿ ನಾನೂ ಒಬ್ಬ ಎಂದರೂ ಸರಿ. ಇಂದಿನ ವಾಸ್ತವಿಕ ಪತ್ರಿಕೋದ್ಯಮ ಹಿಡಿದ ದಿಕ್ಕು - ನಂಬಿದ್ದೇನೆಂದುಕೊಂಡಿರುವ ಆದರ್ಶಗಳ ನಡುವೆ ತಾಕಲಾಡುತ್ತಾ ಮುಂದೋ, ಹಿಂದೋ ಅರಿಯದೇ ಓಡುತ್ತಿರುವವ. ಇದೇ ಓಟದಲ್ಲಿ ಗಕ್ ಅಂತ ನಿಂತು ಒಮ್ಮೆ ಸುತ್ತಲೆಲ್ಲ ಕಣ್ಣಾಡಿಸಿ ಮುಂದೆ ಓಡಲನುವಾಗುವ ಮುನ್ನ ಈ ಪ್ರಶ್ನೆ ಎದುರಾಗಿದೆ. ದೇಶದ ಮಾಧ್ಯಮ ಜಗತ್ತು ಹಾಗೂ ಮಧ್ಯಮ ವರ್ಗ ಹಿಂದೆಂದಿಗಿಂತ ತೀವ್ರವಾಗಿ ಭ್ರಷ್ಟಾಚಾರದ ವಿಷಯಕ್ಕೆ ಸ್ಪಂದಿಸುತ್ತಿರುವಾಗ ನನ್ನ ನಿಲುವೇನಾಗಿರಬೇಕು? ಏನಾಗಿದೆ? ಮತ್ತು ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಏನು ಹೇಳುತ್ತೇನೆ?

ನನ್ ನನಗೇ ಕೆಲವು ವಿಷಯಗಳು ಸ್ಪಷ್ಟವಾಗಬೇಕಿರುವ ಕಾರಣಕ್ಕಾಗಿಯಾದರೂ, ನನ್ನನ್ನು ಒಂದು ಚೌಕಟ್ಟಿನಲ್ಲಿ ನಿಲ್ಲಿಸಿಕೊಳ್ಳುವ ಸಲುವಾಗಿ ಹಾಗೂ ದಾರಿ ತಪ್ಪಿದರೆ ನನ್ನ ಮಾತುಗಳನ್ನು ಮುಂದೆ ಯಾರಾದರೂ ನೆನಪಿಸಲಿ ಎನ್ನುವ ಕಾರಣಕ್ಕಾಗಿಯಾದರೂ ಈ ಕುರಿತು ಬರೆದುಕೊಳ್ಳಬೇಕಾಗಿದೆ.  ನಾನೇನೋ ಶೇಕಡಾ ನೂರು ಸಾಚಾ ಎಂಬ ಭಾವನೆ ನನಗಿಲ್ಲದಿದ್ದರೂ ಇಂತಹ ಸಂದರ್ಭ ನನ್ನೊಳಗೇ ಸೃಷ್ಟಿಸಿರುವ ಆತ್ಮಾವಲೋಕನಕ್ಕೆ ನಾನೂ ಒಳಗಾಗಲೇಬೇಕಿದೆ. ಪತ್ರಕರ್ತನಾಗಿ ಹೆಚ್ಚು ಕಾಲ ಅನುಭವವಿಲ್ಲದಿದ್ದರೂ ನನ್ನ ಅನುಭವಕ್ಕೆ ಬಂದ, ಕಣ್ಣಿಗೆ ಕಂಡ, ಕಿವಿಗೆ ಬರಸಿಡಿಲಂತೆ ಅಪ್ಪಳಿಸಿದ ಸಂಗತಿಗಳನ್ನು ಎಲ್ಲರೆದುರು ಹಂಚಿಕೊಳ್ಳುವ ಅನಿವಾರ್ಯತೆಯನ್ನು ನಾನೇ ಸೃಷ್ಟಿಸಿಕೊಂಡಿದ್ದೇನೆ.

****

ಕಳೆದ ವರ್ಷ ಕಾರ್ಯಕ್ರಮವೊಂದಕ್ಕೆ ಹೋದೆ. ಅದು ಡಿಅಡಿಕ್ಷನ್ ಆಸ್ಪತ್ರೆಯೊಂದು ನಡೆಸಿದ ಕಾರ್ಯಕ್ರಮ. ನ್ಯಾಯಾಧೀಶರಿಂದ ಹಿಡಿದು ವೈದ್ಯರವರೆಗೆ ಅನೇಕ ಅತಿಥಿಗಳು ಭಾಗವಹಿಸಿದ್ದ ಆ ಕಾರ್ಯಕ್ರಮ ಚೆನ್ನಾಗಿಯೇ ನಡೆಯಿತು. ಕೊನೆಗೆ ಎಲ್ಲರೂ ಹೊರಡಲನುವಾದಾಗ ಒಬ್ಬ ವ್ಯಕ್ತಿ ನನ್ನೆಡೆ ಬಂದು ಒಂದು ಬದಿಗೆ ಕರೆದುಕೊಂಡು ಹೋಗಿ ಒಂದು ಸೀಲ್ ಮಾಡಿದ್ದ ಕವರ್ ನೀಡಲು ಬಂದರು. ಅದರ ಮರ್ಮ ತಿಳಿದು ಇಲ್ಲ ಅದೆಲ್ಲಾ ಬೇಡ ಎಂದೆ. ಇಲ್ಲಾ ಸರ್ ಬೇಡ ಅನ್ನಬಾರದು. ನಮ್ ಡಾಕ್ಟರು ತಿಳಿಸಿಬಿಟ್ಟಿದ್ದಾರೆ. ಬಂದಿರುವ ಎಲ್ಲಾ ಪತ್ರಕರ್ತರಿಗೂ ಕೊಡಬೇಕು ಎಂದು. ನೀವು ತೊಗೊಳ್ಳಿಲ್ಲ ಅಂದರೆ ನಮಗೆ ಬೈಯುತ್ತಾರೆ. ಪ್ಲೀಸ್ ತೊಗೊಳ್ಳಿ ಸಾರ್ ಎಂದರು. ಸ್ವಲ್ಪ ಗಂಭೀರ ದ್ವನಿಯಲ್ಲೇ ನೀವು ಹೀಗೆಲ್ಲಾ ಹೇಳಿದ್ರೆ ನಾನು ಬರ‍್ತಾನೇ ಇರಲಿಲ್ಲ. ಮತ್ತೆ ಎಂದೂ ಕರೆಯಬೇಡಿ ಎಂದೆ. ಆಗ ಆ ವ್ಯಕ್ತಿ ಸುಮ್ಮನೇ ನಡೆದ.  ಅಂದು ಅಲ್ಲಿಗೆ ವಿಶೇಷ ವಾಹನವೊಂದರ ವ್ಯವಸ್ಥೆಯಲ್ಲಿ ಬಂದಿದ್ದ ಪತ್ರಕರ್ತರ ಗುಂಪೊಂದು ಪ್ರತ್ಯೇಕ ಕೊಠಡಿಗಳಿದ್ದ ಕಡೆ ನಡೆದಿದ್ದು ದೂರದಿಂದಲೇ ಕಂಡು ಪಿಚ್ಚೆನಿಸಿತ್ತು.

ಪತ್ರಕರ್ತರು ಸರ್ಕಾರ ನೀಡುವ ಸೈಟುಗಳನ್ನು ತೆಗೆದುಕೊಳ್ಳೋದು ಇದ್ದೇ ಇದೆ. ಕೆಲ ದಿನಗಳ ಹಿಂದೆ ನನ್ನ ಗೆಳೆಯ ಪತ್ರಕರ್ತರೊಬ್ಬರು ಪ್ರೆಸ್ ಕಾಲನಿ ಸೈಟೊಂದನ್ನು ರಕ್ಷಿಸಿಕೊಳ್ಳಲು ವಿಶೇಷ ಶ್ರಮ ಪಡುತ್ತಿದ್ದುದು ಕಂಡು ಕೇಳಿದ್ದೆ. ಸಾರ್. ನಿಮಗೆ ಸ್ವಂತ ಮನೆ ಇದೆ. ಹೀಗಿದ್ದೂ ಈ ಸೈಟು ನಿಮಗೆ ಅಗತ್ಯ ಇದೆಯಾ? ನನ್ನಿಂದ ಈ ಪ್ರಶ್ನೆಯನ್ನು ನಿರೀಕ್ಷಿಸಿಯೇ ಇದ್ದ ನನ್ನ ಪ್ರಶ್ನೆಗವರು  ಮುಗುಳ್ನಕ್ಕು  ಮೂರ್ಖ ನನ್ ಮಗನೇ ಎನ್ನುವಂತೆ ನನ್ನೆಡೆ ನೋಡಿ ಸೈಟಿಗಾಗಿಯೇ ರಾಜಕಾರಣಿಗಳ ಕೈಕಾಲು ಹಿಡಿಯುವ ಪೈಕಿ ನಾನಲ್ಲವಾದರೂ ಅದಾಗಿಯೇ ಬಂದಾಗ ಬೇಡ ಎಂದು ದೂರ ತಳ್ಳುವ ಮೂರ್ಖನೂ ಅಲ್ಲ ಎಂದರು. ಅಂದಿನಿಂದ ಅವರನ್ನು ನೋಡುವ ನನ್ನ ದೃಷ್ಟಿಕೋನವೇ ಬದಲಾಯಿತು. ಈ ಹಾಳು ಭ್ರಮೆಗಳು ಇನ್ನೂ ಯಾಕಾದರೂ ತಲೆಯಲ್ಲಿವೆಯೋ? ಎನ್ನಿಸಿತ್ತು. ಅಂತೆಯೇ ಶಿವಮೊಗ್ಗೆಯಲ್ಲಿ ಸೈಟಿಗಾಗಿ ಅರ್ಜಿ ಹಾಕಿದವರ ಸಂಖ್ಯೆ ೩೫೦ ಎಂದು ತಿಳಿದಾಗ ದಿಗ್ಭ್ರಮೆಯಾಗಿತ್ತು. ಯಾಕೆಂದರೆ ಶಿವಮೊಗ್ಗ ನಗರದ ಪ್ರತಿಯೊಂದೂ ಪತ್ರಿಕಾ ಕಛೇರಿಗೂ ತಿಂಗಳಿಗೆ ಏಳೆಂಟು ಸಲವಾದರೂ ಭೇಟಿ ಕೊಡುತ್ತಿದ್ದ ನನಗೆ ಅಲ್ಲಿರುವ ಬರೋಬ್ಬರಿ ೩೦ - ೩೫ ಪತ್ರಿಕಾ ಕಛೇರಿಗಳಲ್ಲಿ ಎಲ್ಲಾ ಸಿಬ್ಬಂದಿಯವರನ್ನ ಸೇರಿಸಿದರೂ ೧೫೦ಕ್ಕಿಂತ ಹೆಚ್ಚು ಮಂದಿ ಇದ್ದಾರೆನಿಸಿರಲಿಲ್ಲ. ನಂತರ ಈ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದ ಕಾರಣಕ್ಕೆ ಕೆಲವರು ಭಾರೀ ಪ್ರತಿಭಟನೆ ನಡೆಸಿದ್ದವರಲ್ಲಿ ಒಬ್ಬರು ತಾಮ್ಮನ್ನು ತಾವು ಕಾಮ್ರೇಡ್  ಎಂದುಕೊಳ್ಳುತ್ತಾ ಕೆಂಪು ಕಪ್ಪು ಡ್ರೆಸ್ ಹಾಕುತ್ತಾ, ಕೆಂಪು ಬೈಕ್‌ನಲ್ಲಿ ಓಡಾಡಿಕೊಂಡಿದ್ದವರು ಯಡಿಯೂರಪ್ಪ ಮುಖ್ಯಮಂತ್ರಿಯಾದೊಡನೆ ದಿಢೀರ್ ಅಂತ ಯಡಿಯೂರಪ್ಪನ ಆರಾಧಕರಾಗಿದ್ದದ್ದು ಯಾರಿಗೂ ಗೊತ್ತಿಲ್ಲದ ವಿಷಯವೇನಲ್ಲ.

ಒಬ್ಬ ಪತ್ರಕರ್ತನ ಅನೇಕ ಬರಹಗಳಲ್ಲಿ ಹುತಾತ್ಮ ಭಗತ್ ಸಿಂಗ್, ಆಜಾದ್ ಸಾವರ್ಕರ್ ಮುಂತಾದವರ ಬಗ್ಗೆ ಅವರಿಗಿಂತ ತಾನು ಹೆಚ್ಚು ದೇಶಪ್ರೇಮಿ ಎನ್ನುವ ದಾಟಿಯಲ್ಲಿ ಬರೆದಿರುವುದನ್ನೂ, ತನ್ನಿಂದಲೇ ಧರ್ಮರಕ್ಷಣೆ ಎಂದು ಆತ ಹೂಂಕರಿಸುವುದನ್ನೂ ಓದಿದ್ದೇನೆ. ಆದರೆ ಆವರೇಜ್ ಪತ್ರಕರ್ತರಿಗಿಂತ ಹೆಚ್ಚಿಗೇ ಸಂಬಳ ಪಡೆಯುವ ಈತ ಹಾಗೆಲ್ಲಾ ಬರೆದು ತಾನು ಪಡೆದ ಹೆಸರಿನಿಂದ ಹಾಗೂ, ತಾನಿರುವ ಸುದ್ದಿಮನೆ ಕತೆಗಾರ, ಗಾಡ್‌ಫಾದರ್ ಪತ್ರಕರ್ತರ ಪ್ರಭಾವ ಬಳಸಿಕೊಂಡು ತನ್ನ ಅಂಗವಿಕಲ ಹೆಂಡತಿಯ ಹೆಸರಲ್ಲಿ ಜಿ ಕೆಟಗರಿ ಸೈಟ್ ಪಡೆದಿದ್ದು ಬೆತ್ತಲಾದಾಗ, ಹಾಗೆ ಪಡೆದಿದ್ದನ್ನು ನಾಚಿಕೆಯಿಲ್ಲದೆ ಭಂಡನಂತೆ ಸಮರ್ಥಿಸಿಕೊಂಡಾಗ ನನಗೆ ಏನನ್ನಿಸಿತ್ತು ಎಂದು ಇಲ್ಲಿ ಹೇಳಲು ಆಗುವುದೇ ಇಲ್ಲ. ಸದ್ಯ ಆ ಭಗತ್ ಸಿಂಗ್, ಆಜಾದ್, ಸಾವರ್ಕರ್ ಈಗಿಲ್ಲ. ಅದು ಅವರ ಅದೃಷ್ಟವೆಂದೇ ಹೇಳಬೇಕು!

ಈ ಸಮಾಜದಲ್ಲಿ ಸಾಮಾನ್ಯ ಜನರೆನಿಸಿಕೊಂಡವರು ಒಂದು ಮದುವೆ ಮಾಡಲು, ಒಂದು ಸೈಟು ಕೊಳ್ಳಲು, ಒಂದು ಮನೆ ಕಟ್ಟಲು ತಮ್ಮ ಇಡೀ ಜೀವನಾಯುಷ್ಯವನ್ನೇ ಕಳೆಯುತ್ತಾರೆ. ಸಾಲಸೋಲದಲ್ಲಿ ಬಿದ್ದು ಪಡಬಾರದ ಪಡಿಪಾಟಲು ಪಡುತ್ತಿರುತ್ತಾರೆ. ಅದೇ ಸಾಮಾನ್ಯ ಜನರ ನಡುವಿನ ಕತೆಗಳನ್ನು ಅವರಿಗೇ ಅಸಾಮಾನ್ಯವೆಂಬಂತೆ ಓದಿಸಿ, ತೋರಿಸಿ, ರಂಜಿಸಿ, ಬೆಚ್ಚಿ ಬೀಳಿಸಿ, ಕೊನೆಗೆ ಆ ಸಾಮಾನ್ಯರಿಗಿಂತ ಭಿನ್ನರಾಗಿ, ಶ್ರೇಷ್ಟರಾಗಿ, ಅದೇ ಕಾರಣಕ್ಕೆ ಆ ಸಾಮಾನ್ಯ ಜನರ ವಿರೋಧಿಗಳಿಂದ ಕಾಣಿಕೆಗಳನ್ನು ಸವಲತ್ತುಗಳನ್ನು ಪಡೆದು ಅಸಾಮಾನ್ಯರಾಗಿಬಿಡುವ ಈ ಪತ್ರಕರ್ತರ ಬಗ್ಗೆ ಏನು ಹೇಳೋಣ?!

ಕೆಲವು ಪತ್ರಕರ್ತರಿದ್ದಾರೆ. ತಮ್ಮ ಕೆಳಗಿನವರು ಎಂತಹಾ ಕಡು ಭ್ರಷ್ಟರೆಂಬುದು ಅವರಿಗೆ ತಿಳಿದಿರುತ್ತದೆ. ಆದರೆ ಅವರ ಕೆಲಸ ಅಂತ ಕೆಳಗಿನವವರನ್ನೇ ಅವಲಂಬಿಸಿರುತ್ತಾದ್ದರಿಂದ ಆ ಕುರಿತು ಎಲ್ಲೂ ಪಿಟಕ್ ಎನ್ನುತ್ತಿರುವುದಿಲ್ಲ. ತಾವು ಮಾತ್ರ ಸರ್ವಸಂಪನ್ನರಾಗಿದ್ದುಬಿಡುತ್ತಾರೆ. ಆ ಕೆಳಗಿನವರು ಅನೇಕ ಸಲ ಇವರು ನೀಡುವ ಕಡಿಮೆ ಸಂಬಳದ ಕಾರಣದ ಜೊತೆಗೆ ಸ್ಥಳೀಯವಾಗಿ ಭ್ರಷ್ಟರಾಗಲು ಇರುವ ಅವಕಾಶಗಳ ಕಾರಣವೂ ಸೇರಿಕೊಂಡು ಭ್ರಷ್ಟತೆಯ ಹಾದಿ ಹಿಡಿದಿರುವುದೂ ಉಂಟು. ಅವರಿಗೇನ್ ಬಿಡಿ. ಬೆಂಗಳೂರಲ್ಲಿ ಕಂಪ್ಯೂಟರ್ ಮುಂದು ಕುಳಿತು ಯಾವುದಕ್ಕೂ ಕಡಿಮೆ ಮಾಡಿಕೊಳ್ಳದಂಗೆ ಇರುತ್ತಾರೆ. ಆದರೆ ಇಲ್ಲಿ ನಾವು ಎಷ್ಟೋ ಸಲ ಎಂತೆಂತಹ ರಿಸ್ಕ್ ತೆಗೆದುಕೊಳ್ಳಬೇಕಿರುತ್ತೆ ಅವರಿಗೆ ತಿಳಿಯೋದಿಲ್ಲ. ಹೋದಲ್ಲೆಲ್ಲಾ ಕಾರ್ಮಿಕರ, ಬಡವರ ಬಗ್ಗೆ ಭಾಷಣ ಮಾಡ್ತಾರೆ. ಆದರೆ ನಮಗೆ ಐನೂರು ರೂಪಾಯಿ ಜಾಸ್ತಿ ಕೊಡೋಕೆ ಹಿಂದೆ ಮುಂದೆ ನೋಡುತ್ತಾರೆ. ಅವರು ಒಂದೊತ್ತಿನ ಕುಡಿತಕ್ಕೆ ಹಾಕೋದನ್ನೇ ನಮಗೆ ನೀಡಿದ್ರೆ ನಮ್ಮ ಮನೆಯ ಎಷ್ಟೋ ಪ್ರಾಬ್ಲಂಗಳು ಪರಿಹಾರ ಆಗಿಬಿಡ್ತವೆ ಕಣ್ರೀ. ಆದರೆ ಅವರು ನಮ್ಮ ಬಗ್ಗೆ ಕ್ಯಾರೇ ಅನ್ನಲ್ಲ. ಹಿಂಗಾಗಿ ನಾವೂ ಬೇರೆ ದಾರಿ ಮಾಡಿಕೊಳ್ಳಬೇಕಾಗಿದೆ ಎಂದು ಒಬ್ಬ ಪತ್ರಕರ್ತ ಗೆಳೆಯ ತಾನು ನಡೆಸುವ ಡೀಲಿಂಗ್‌ಗಳನ್ನು ಸಮರ್ಥಿಸುವುದನ್ನು ಕೇಳಿ ಮೈಪರಚಿಕೊಳ್ಳುವಂತಾಗಿತ್ತು ನನಗೆ.

ಇನ್ನೊಂದು ಘಟನೆ. ಒಬ್ಬ ಯುವಕ ನನ್ನನ್ನು ಪರಿಚಯ ಮಾಡಿಕೊಂಡ. ಉದ್ಯೋಗ ಕೇಳಿದ. ನಾನು ಪತ್ರಕರ್ತ ಎಂದೆ. ಕೂಡಲೇ ಆತ ಒಂದು ಟಾಪ್ ಟೀವಿ ವಾಹಿನಿಯ ಬೆಂಗಳೂರಿನ ವರದಿಗಾರನೊಬ್ಬನನ್ನು ವಾಚಾಮಗೋಚರ ಬೈಯತೊಡಗಿದ. ಅಲ್ಲಾ ಸಾರ್.. ಈ ಬೇವರ್ಸಿ ನನ್ ಮಕ್ಕಳು ಉತ್ತಮ ಸಮಾಜ ನಿರ್ಮಿಸ್ತೀವಿ ಎನ್ನುತ್ತಾರೆ. ಅವರು ನಿಜಕ್ಕೂ ಸಾಚಾ ಆಗಿದ್ದರೆ ಪ್ರಾಮಾಣಿಕವಾಗಿ ಕೆಲಸ ಮಾಡಲಿ. ಅದು ಬಿಟ್ಟು ತಪ್ಪು ಮಾಡಿದೋರ ವೀಕ್‌ನೆಸ್ ಬಳಸಿಕೊಂಡು ಡೀಲಿಂಗ್‌ಗೆ ಇಳೀತಾರಲ್ಲಾ ಸಾರ್. ಅವರು ಕೇಳಿದಷ್ಟು ಕೊಡಲಿಲ್ಲ ಎಂದಾಕ್ಷಣ ಹಾಕಿ ಜಡಿದು ಬಿಡ್ತಾರೆ. ಇದಾ ಸಾರ್ ಪತ್ರಿಕೋದ್ಯಮ ಎಂದರೆ? ಅಂದ. ನನಗೆ ತಲೆಬುಡ ತಿಳಿಯಲಿಲ್ಲ. ಆಮೇಲೆ ಕೇಳಿದ್ದಕ್ಕೆ ಆ ವರದಿಗಾರನು ಕೆಲವು ಯುವಕರು (ಬಹುಶಃ ನನಗೆ ಹೇಳಿದವನೂ ಸೇರಿಕೊಂಡೆ) ಬೆಂಗಳೂರಿನ ಕೆಲ ಪ್ರತಿಷ್ಟಿತ ಕಾಲೇಜುಗಳ  ಹುಡುಗಿಯರಿಗೂ ಗಿರಾಕಿಗಳಿಗೂ ನಡುವೆ ತಲೆಹಿಡಿಯುವ ಕೆಲಸ ಮಾಡುತ್ತಿದ್ದುದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ಆ ಯುವಕರಿಗೆ ಒಂದು ಲಕ್ಷ ರೂಪಾಯಿ ಕೊಡಲು ಡಿಮಾಂಡ್ ಮಾಡಿದ್ದನಂತೆ. ಅವರು ೮೦ ಸಾವಿರ ರೂಪಾಯಿ ಕೊಡಲು ತಯಾರಿದ್ದರೂ ಒಪ್ಪದೆ ಕೊನೆಗೆ ಪ್ರಸಾರ ಮಾಡಿಯೇ ಬಿಟ್ಟರಂತೆ!.

ಎರಡು ತಿಂಗಳ ಹಿಂದೆ ನನ್ನ ಸ್ನೇಹಿತನೊಬ್ಬ ಕಾಲ್ ಮಾಡಿ ಟೀವಿ ಚಾನಲ್ ಒಂದರ ಹೆಸರು ಹೇಳಿ ಅದರಲ್ಲಿ ಮನರಂಜನಾ ವಿಭಾಗದಲ್ಲಿ ಕೆಲಸದಲ್ಲಿರುವ ರಾಜು(ಹೆಸರು ಬದಲಿಸಿಲ್ಲ) ಎನ್ನುವವ ನಿನಗೆ ಗೊತ್ತಾ? ಕೇಳಿದ. ವಿಷಯ ಏನು ಎಂದಿದ್ದಕ್ಕೆ. ವಿದ್ಯಾರ್ಥಿನಿಯೊಬ್ಬಳು ಟೀವಿಯಲ್ಲಿ ನಿರೂಪಕಿಯಾಗಲು ಇಚ್ಚಿಸಿ ಕರೆ ಮಾಡಿದ್ದಾಗ ಆಕೆಯ ಫೋಟೋ ತರಿಸಿಕೊಂಡು ನೀನು ಬೆಂಗಳೂರಿಗೆ ಬಂದು ಕೆಲವು ದಿನ ನಮ್ಮ ಜೊತೆ ಇರಬೇಕಾಗುತ್ತೆ ಕಣಮ್ಮಾ. ಇಲ್ಲಿಂದ ಹೊರ ಊರಿಗೂ ಬರಬೇಕಾಗುತ್ತೆ. ಅದಕ್ಕೆ ತಯಾರಿದ್ದೀಯಾ? ಹಳ್ಳಿ ಗೌರಮ್ಮನ ರೀತಿ ಇರೋ ಹಾಗಿಲ್ಲ, ಇಲ್ಲಿ ಅಡ್ಜ್ಜಸ್ಟ್ ಮಾಡಿಕೊಂಡು ಇರಬೇಕಾಗುತ್ತೆ. ಓಕೆನಾ? ಎಂದು ಅಸಭ್ಯವಾಗಿ ವರ್ತಿಸಿದ್ದನಂತೆ. ಕೊನೆಗೆ ಆ ವ್ಯಕ್ತಿಯ ಜಾಡು ಹಿಡಿದ ನನ್ನ ಕೆಲವು ಸ್ನೇಹಿತರು ಆತನ ದೇಹಚರ್ಯೆ ಬದಲಿಸುವುದರೊಳಗಾಗಿ ಅವನ ಹಲ್ಕಟ್ ಕೆಲಸಗಳು ಚಾನೆಲ್‌ನ ಮುಖ್ಯಸ್ಥರ ಗಮನಕ್ಕೆ ಬಂದು ಆತನನ್ನು ಬಿಡಿಸಿದ್ದಾರೆ ಎಂಬ ಸುದ್ದಿ ಬಂದಿದೆ. ಈತನಿಗೊಬ್ಬ ಮಧ್ಯವರ್ತಿ ಇದಾನೆ. ಆತ ಇನ್ನೂ ಅದರಲ್ಲೇ ಇದ್ದಾನೆ. ಈ ಘಟನೆಯಿಂದಾಗಿ ಆ ವಿದ್ಯಾರ್ಥಿನಿ ಅದೆಷ್ಟು ಜರ್ಝರಿತಳಾಗಿದ್ದಳೆಂದರೆ ಹೇಳತೀರದು. ಒಂದೊಮ್ಮೆ ಇಂತಹ ಘಟನೆಗಳು ಸಮಾಜದ ಮುಂದೆ ಬಯಲಾದರೆ ಪರಿಸ್ಥಿತಿ ಏನಾಗುತ್ತದೆ? ಸ್ವಾಭಿಮಾನ- ಗೌರವ - ಮರ್ಯಾದೆಯಿಂದ ಟೀವಿ ವಾಹಿನಿಗಳಲ್ಲಿ, ಪತ್ರಿಕೆಗಳಲ್ಲಿ ರಾತ್ರಿ ಹಗಲೆನ್ನದೇ ಸೇವೆ ಸಲ್ಲಿಸುತ್ತಿರುವ ಹೆಣ್ಣುಮಕ್ಕಳನ್ನು ಅವರ ಸುತ್ತಮುತ್ತಲಿನ ಸಮಾಜ ನೋಡುವ ರೀತಿ ಏನಾಗಬಹುದು. ರಾಜುನಂತಹ ನೀಚರಿಗೆ ಅಷ್ಟು ಮುಂದುವರೆಯಲು ಇಲ್ಲಿ ಅವಕಾಶ ಇದ್ದುದಾದರೂ ಹೇಗೆ?

ಪತ್ರಕರ್ತರಿಗೆ, ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಅನೈಚ್ಚಿಕವಾಗಿಯೂ, ಅನಾಯಾಸವಾಗಿಯೂ ಹಲವಾರು ಸಲ ವಿಶೇಷ ಅವಕಾಶಗಳು ಸೌಲಭ್ಯಗಳು ದೊರೆಯುತ್ತವೆ. ಪತ್ರಿಕಾಗೋಷ್ಠಿಗಳಲ್ಲಿ ದೊಡ್ಡ ಕುಳಗಳು ಒಳ್ಳೆಯ ಊಟ ಹಾಕಿಸುವುದರಿಂದ ಹಿಡಿದು ವಿಶೇಷ ಕೊಡುಗೆ, ಬೆಳ್ಳಿ ಪಾತ್ರೆ ನೀಡುವವರೆಗೂ ಆ ಸೌಲಭ್ಯಗಳು ಇರುತ್ತವೆ. ಮಾಧ್ಯಮವೊಂದರಲ್ಲಿ ತಮಗಿರುವ ಸ್ಥಾನಮಾನದ ಕಾರಣಕ್ಕಾಗಿ ಸಮಾಜದಲ್ಲಿ ಅವರ ಮಾತಿಗೆ ಬೆಲೆ ಬರುತ್ತದೆ. ಅಧಿಕಾರಿಗಳು, ಮಂತ್ರಿ ಮಹೋದಯರು ಭಯಮಿಶ್ರಿತ ಗೌರವಾಧರಗಳನ್ನು ನೀಡತೊಡಗುತ್ತಾರೆ. ಅಲ್ಲಿಗೆ ಆ ಪತ್ರಕರ್ತನ ಪಾತ್ರ ಪತ್ರಿಕೆಗೆ ಮಾತ್ರ ಸೀಮಿತಗೊಳ್ಳದೇ ಆತ ಏಕಾಪಾತ್ರಾಭಿನಯ ಶುರು ಮಾಡಿತ್ತಾನೆ. ಏಕಕಾಲದಲ್ಲಿ ಅರೆಕಾಲಿಕ ಪತ್ರಕರ್ತನೂ, ಅರೆಕಾಲಿಕ ರಾಜಕಾರಣಿಯೂ ಆಗಿ ಮಾರ್ಪಾಡಾಗುತ್ತಾನೆ. ಕೆಲ ರಾಜಕಾರಣಿಗಳು ಪತ್ರಕರ್ತನನ್ನ ಅಣ್ಣಾ ಎಂದೋ, ಸಾರ್ ಎಂದೋ ಸಂಬೋಧಿಸುತ್ತಾ ತಮ್ಮ ಹಿತೈಷಿಗಳನ್ನಾಗಿಯೂ, ಮಾರ್ಗದರ್ಶಕರನ್ನಾಗಿಯೂ ಮಾಡಿಕೊಳ್ಳುತ್ತಾರೆ. ಪತ್ರಕರ್ತನಾಗಿ ಅವನ ಹುದ್ದೆ ಒಂದು ಮಟ್ಟದಲ್ಲಿ ನಿಂತು ಹೋಗಿಬಿಡಬಹುದು. ಆದರೆ ಈ ಬಗೆಯ ಮಾರ್ಗದರ್ಶಕ, ಚಿಂತಕ, ಸೆಮಿ ರಾಜಕಾರಣಿ ಪಾತ್ರಧಾರಿಯಾಗಿ, ನಟನಾಗಿ, ಟಿವಿ ಚಾನಲ್‌ಗಳಲ್ಲಿ ಆತನ ವಿಶೇಷ ಕಾರ್ಯಕ್ರಮಗಳು, ಪ್ಯಾನೆಲ್ ಚರ್ಚೆಗಳು, ಅವ್ಯಾಹತವಾಗಿ ನಡೆಯತೊಡಗುತ್ತವೆ. ಕೆಲವೊಮ್ಮೆ ಕ್ರೈಂ ವರದಿಗಳನ್ನೂ, ಕಾರ್ಯಕ್ರಮಗಳನ್ನೂ ಆತ ಲೈವ್ ಆಗಿ ವರದಿ ಮಾಡಿದ ಕಾರಣದಿಂದ ಸಮಾಜದ ಆ ಅಪರಾಧಿ ವರ್ಗವೂ ಈತನಿಗೆ ವಿಶೇಷ ರಕ್ಷಣೆ, ಬೆಂಬಲಗಳನ್ನೂ ನೀಡುತ್ತಿರುತ್ತದೆ. ಆದರೆ ಈ ಪತ್ರಕರ್ತನಿಗೆ ವೃತ್ತಿನಿಷ್ಟೆ ಎಷ್ಟೆಂದರೆ ಅಪ್ಪಿತಪ್ಪಿಯೂ ತಾನು ನಿರ್ವಹಿಸುವ ಇಂತಹ ಅರೆಕಾಲಿಕ ಕೆಲಸಗಳನ್ನು ಆತ ಬರೆದುಕೊಳ್ಳಲು ಹೋಗುವುದಿಲ್ಲ. ಅಲ್ಲಿ ಸಿಗುವ ವಿಶೇಷ ಸೌಲಭ್ಯಗಳ ಬಗ್ಗೆ ಖಾಸಗಿ ರಾತ್ರಿ ಪಾರ್ಟಿಗಳಲ್ಲಿ ಬಿಟ್ಟರೆ ಯಾವ ಕಾಲಂಗಳಲ್ಲಿಯೂ ಬರೆಯುವುದಿಲ್ಲ. ಬರೆದರೂ ಸಹ ಅಲ್ಲಿ ಪತ್ರಕರ್ತನಾಗಿ ಏನು ಮಾಡಿದ್ದನೋ ಅಷ್ಟು ವಿವರಣೆ ಮಾತ್ರ ಇರುತ್ತದೆ.

ಈ ಸಮಾಜದ ಬಹುಪಾಲು ಜನರಿಗೆ ಪತ್ರಕರ್ತರಾದ ನಮ್ಮ ಬಗ್ಗೆ ವಿಶೇಷ ಗೌರವದ ಭಾವನೆ ಇದೆ. ಯಾಕೆ ಹೇಳಿ. ಇಲ್ಲಿ ಸುತ್ತಮುತ್ತಲಿನ ಜನರ ಸಮಸ್ಯೆಗಳಿಗೆ ದನಿಯಾಗಿರುವವರು ನಾವೇ ಎಂದು. ಜಗದ ಹಲವಾರು ಕೌತುಕಗಳನ್ನು ಮನಸ್ಸಿಗೆ, ಕೆಲವೊಮ್ಮೆ ಹೃದಯಕ್ಕೆ ತಟ್ಟುವ ಭಾಷೆಯಲ್ಲಿ ಅವರಿಗೆ ತಿಳಿಯಪಡಿಸುತ್ತೇವೆ ಎಂದು. ನಮ್ಮ ಮಾಧ್ಯಮಗಳು ಜನರಿಗೆ ಜ್ಞಾನದ ಕಿಂಡಿಗಳಾಗಿದ್ದೇವೆ ಎಂದು ಹಾಗೂ ಭ್ರಷ್ಟರ ಬಣ್ಣ ಬಯಲು ಮಾಡುವವರೂ ನಾವೇ ಎಂದು. ಇಲ್ಲಿ ಸಿನಿಕತೆಯಿಂದ ಯಾವುದನ್ನೂ ನೋಡುವ ಅವಶ್ಯಕತೆ ಇಲ್ಲವಾದರೂ ಒಬ್ಬ ರಾಜಕಾರಣಿಗಿಂತಲೂ, ಒಬ್ಬ ಉದ್ಯಮಿ, ಒಬ್ಬ ಅಧಿಕಾರಿಗಿಂತಲೂ ಒಬ್ಬ ಪತ್ರಕರ್ತನಿಗಿರುವ ಹೊಣೆ ಮಹತ್ತರದ್ದು. ಯಾಕೆಂದರೆ ಇವರೆಲ್ಲಾ ಮಾಡುವ ತಪ್ಪುಗಳನ್ನು ಎತ್ತಿಹಿಡಿದು ಅವರಲ್ಲಿ ಭಯವಿರಿಸಿ ಜನರಲ್ಲಿ ಆಶಾ ಭಾವನೆ ಉಳಿಯುವಂತೆ ಮಾಡುವುದು ಪತ್ರಕರ್ತನೇ. ಆದರೆ ಇಲ್ಲಿ ಆಗುತ್ತಿರುವುದೇನು? ಹೊಲವನ್ನು ಮೇಯುತ್ತಿರುವ ಗೂಳಿಗಳೊಂದಿಗೆ ಬೇಲಿಯೂ ಸಾಥ್ ನೀಡಿದೆಯಲ್ಲಾ. ಅದೂ ಹೇಗೆಂದರೆ ದೂರದಿಂದ ನೋಡಿದವರಿಗೆ ಬೇಲಿ ತಾನು ಬಹಳ ಶ್ರಮವಹಿಸಿ ಗೂಳಿಯನ್ನು ಕೂಡಿಹಾಕಿಕೊಂಡು ಬಂಧಿಸಿ ಬಿಟ್ಟಿದೆ ಎಂದು ಅನ್ನಿಸುವಂತೆ! ನನಗೆ ಪ್ರಾಮಾಣಿಕವಾಗಿ ಅನ್ನಿಸುವುದೆಂದರೆ ಒಬ್ಬ ಅಧಿಕಾರಿಯೋ, ರಾಜಕಾರಣಿಯೋ ಭ್ರಷ್ಟನಾದರೆ ಆತನನ್ನು ಸಮಾಜವಿರೋಧಿ ಎನ್ನಬಹುದು. ಅದೇ ಒಬ್ಬ ಪತ್ರಕರ್ತ ಭ್ರಷ್ಟನಾದರೆ ಆತ ಸಮಾಜದ್ರೋಹಿಯೇ ಅಗುತ್ತಾನೆ.

ಒಂದು ವಿಷಯ ಗಮನಿಸಬಹದು. ಹಲವಾರು ಪತ್ರಕರ್ತರ ನಡುವೆ ಹಾವು ಮುಂಗುಸಿ ಸಂಬಂಧ ಇದ್ದೇ ಇರುತ್ತದೆ. ಇದು ಕೆಲವೊಮ್ಮೆ ಸೈದ್ಧಾಂತಿಕ ಕಾರಣಗಳಿಗಾದರೆ ಕೆಲವೊಮ್ಮೆ ವೃತ್ತಿ ವೈಷಮ್ಯದಿಂದಾಗಿ. ಆದರೆ ಸಮಾಜದಲ್ಲಿ ಅದು ಹೇಗೆ ವ್ಯಕ್ತವಾಗುತ್ತದೆ? ಇಬ್ಬರು ಪ್ರತಿಸ್ಪರ್ಧಿ ಪತ್ರಕರ್ತರಿದ್ದಾರೆ, ಇಬ್ಬರು ಪ್ರತಿಸ್ಪರ್ಧಿ ಭ್ರಷ್ಟ ಉದ್ಯಮಿಗಳಿದ್ದಾರೆ ಎಂದಿಟ್ಟುಕೊಳ್ಳೋಣ. ಒಬ್ಬ ಉದ್ಯಮಿಯ ಅಂದಾದುಂದಿಗಳನ್ನು ಒಬ್ಬ ಪತ್ರಕರ್ತ ತನಿಖೆ ನಡೆಸಿ ತನ್ನ ಪತ್ರಿಕೆಯಲ್ಲಿ ಪ್ರಕಟಿಸುತ್ತಾನೆ. ತಕ್ಷಣ ಆತನ ಎದುರಾಳಿ ಪತ್ರಕರ್ತ ಆ ಬಯಲಾದ ಆ ಉದ್ಯಮಿಯನ್ನು ಸಂಪರ್ಕಿಸಿ ನೋಡ್ರೀ. ಆ ಪತ್ರಕರ್ತ ನಿಮ್ಮ ವಿರುದ್ಧ ಹಾಗೆ ಬರೆದಿದ್ದಾನೆ. ಆದರೆ ನಿಮ್ಮ ವಿರೋಧಿ ಉದ್ಯಮಿಯ ಬಗ್ಗೆ ಏನೂ ಬರೆದಿಲ್ಲ. ನಾನು ಬರೀತೀನಿ ಎಂದು ವ್ಯವಹಾರ ಕುದುರಿಸಿಕೊಳ್ಳುತ್ತಾನೆ. ಅಲ್ಲಿಗೆ ಇಬ್ಬರ ಪತ್ರಿಕೆಗಳಲ್ಲಿ ಒಬ್ಬರನ್ನು ಸಮರ್ಥಿಸುವ ಮತ್ತೊಬ್ಬರನ್ನು ಬಯಲುಗೊಳಿಸುವ ಮೇಲಾಟ ಶುರುವಾಗುತ್ತದೆ.

ಪತ್ರಕರ್ತರ ಮೇಲಾಟಗಳಲ್ಲಿ ಅನೇಕ ಸೂಕ್ಷ್ಮ ಮನಸ್ಸಿನ ಓದುಗರು, ಸಾಹಿತಿಗಳು ತಮ್ಮದಲ್ಲದ ತಪ್ಪಿಗೆ ಮಾನಸಿಕವಾಗಿ ನೊಂದುಕೊಳ್ಳುವ ಸಂದರ್ಭಗಳೂ ಎದುರಾಗುತ್ತವೆ. ಸಾಮಾನ್ಯವಾಗಿ ಒಂದು ಪತ್ರಿಕೆಯ ಸಂಪಾದಕ ತನ್ನ ಓದುಗರನ್ನು ಎಲ್ಲಾ ರೀತಿಯಿಂದಲೂ ಪ್ರಭಾವಿಸಿಬಿಡುವುದರಿಂದ ಆತ ಹೇಳಿದ್ದೇ ವೇದವಾಕ್ಯ ಎಂದು ಓದುಗರು ಭಾವಿಸುವುದುಂಟು. ಹೀಗಾಗಿ ಸಹಜವಾಗಿ ಆ ಪತ್ರಕರ್ತನ ಎದುರಾಳಿ ಪತ್ರಕರ್ತನ ಬಗ್ಗೆ ಅವರು ಯಾವಾಗಲೂ ಸಂದೇಹಿಸುತ್ತಲೇ ಇರುತ್ತಾರೆ. ಆದರೆ ಸತ್ಯ ಇಬ್ಬರ ನಡುವೆ ಇರುತ್ತದೆ.

ಪೀತ ಪತ್ರಿಕೋದ್ಯಮ ಎನ್ನುವುದು ಇಂದು ಎಲ್ಲಾ ಕಡೆ ಅವ್ಯಾಹತವಾಗಿ ನಡೆದಿದೆ. ಇಲ್ಲಿ ನಿಜಕ್ಕೂ ವಿಪರ‍್ಯಾಸ ಎಂದರೆ ನಾವು ಭ್ರಷ್ಟ ಪತ್ರಕರ್ತರು ಎಂದು ಯಾರನ್ನಾದರೂ ಗುರುತಿಸುವುದಾದರೆ ಸಂಶಯವೇ ಬೇಡ ಆ ಪತ್ರಕರ್ತ ಹಿಂದೆಯೋ ಅಥವಾ ಈಗಲೋ ಒಂದಲ್ಲಾ ಒಂದು ರೀತಿ ಭ್ರಷ್ಟಾಚಾರದ ವಿರುದ್ಧ ಗುಡುಗಿದವನೇ ಆಗಿರುತ್ತಾನೆ. ಹೀಗೆ ಭ್ರಷ್ಟಾಚಾರದ ವಿರುದ್ಧ ಆತ ಜೋರು ದನಿಯಲ್ಲಿ, ಭಾವಾವೇಶದಲ್ಲಿ ಬರೆದಾಗಲೇ ಆತನಿಗೆ ದೊಡ್ಡ ಭ್ರಷ್ಟನಾಗುವ ಅವಕಾಶವೂ ಲಭಿಸಿರುತ್ತದೆ. ಆದರೆ ಆತ ಭ್ರಷ್ಟನಾಗಿ ಪರಿವರ್ತನೆಗೊಂಡ ಮೇಲೆ ಮೊದಲಿನಂತೆ ನಿಷ್ಪಕ್ಷವಾಗಿ ಭ್ರಷ್ಟಾಚಾರದ ಬಗ್ಗೆ ವರದಿ ಮಾಡುವ ಬದಲು ತಾನು ಯಾರನ್ನು ಬಗ್ಗಿಸಬೇಕೆಂದಿರುತ್ತಾನೋ ಅವರ ಭ್ರಷ್ಟಾಚಾರದ ಬಗ್ಗೆ ಅಥವಾ ತನಗೆ ಗಿಫ್ಟ್ ನೀಡುವ ಭ್ರಷ್ಟರ ವಿರೋಧಿಗಳ ಭ್ರಷ್ಟಾಚಾರದ ಬಗ್ಗೆ ಮಾತ್ರ ಆಕರ್ಷಕ ಶೀರ್ಷಿಕೆಗಳನ್ನು ನೀಡಿ ಬರೆಯತೊಡಗುತ್ತಾನೆ. ಉದಾಹರಣೆಗೆ, ಬಳ್ಳಾರಿಯಲ್ಲಿ ಜನಾರ್ಧನ ರೆಡ್ಡಿ ಯಾಕೆ ಗೆಲ್ಲಬೇಕೆಂದರೆ...........!!

ಭ್ರಷ್ಟಾಚಾರವನ್ನು ಬರೀ ಅಕ್ರಮ ಮಾರ್ಗದಿಂದ ಹಣ ಆಸ್ತಿ ಗಳಿಸುವುದೊಂದಕ್ಕೆ ಸೀಮಿತಗೊಳಿಸಲಾಗುವುದಿಲ್ಲ. ಆದರೆ ಇಂದಿನ ದಿನಮಾನದಲ್ಲಿ ಅದೂ ಬಹಳ ಪ್ರಮುಖವಾದದ್ದೇ. ಈ ಅರ್ಥದಲ್ಲಿ ಮಾಧ್ಯಮ ಜಗತ್ತಿನ ಅನೇಕ ಮಂದಿ ದೊಡ್ಡ ಮಟ್ಟದಲ್ಲಿಯೇ ಭ್ರಷ್ಟರಾಗಿದ್ದಾರೆ. ಆದರೆ ಬಹುತೇಕರು ಪ್ರಾಮಾಣಿಕವಾಗಿಯೇ ಇದ್ದಾರೆ. ಇದಕ್ಕೆ ಎರಡು ಕಾರಣ. ಒಂದನೆಯದು ಬಹಳ ಜನ ಪತ್ರಕರ್ತರಿಗೆ ಅವರಿಗೆ ಭ್ರಷ್ಟರಾಗುವ ಅವಕಾಶ ಸಿಗದಿರುವುದು. ಸಿಕ್ಕರೂ ಮೇಲಿನವರ ಭಯದಿಂದ ಸುಮ್ಮನಿರುವುದು. ಎರಡನೆಯದು ಪ್ರಜ್ಞಾಪೂರ್ವಕವಾಗಿ ಪ್ರಾಮಾಣಿಕರಾಗಿ ಬದುಕುವುದು. ಪತ್ರಿಕೋದ್ಯಮವನ್ನು ಬರಿ ಉದ್ದಿಮೆಯಾಗಿ ಅಲ್ಲದೇ ಸಾಮಾಜಿಕ ಬದ್ಧತೆ ಹಾಗೂ ಬದುಕಿನ ಸಿದ್ದಾಂತವನ್ನಾಗಿ ಸ್ವೀಕರಿಸಿರುವುದು. ನನಗೇ ತಿಳಿದಿರುವ ಅನೇಕರು ಹೀಗೆ ಬದುಕುತ್ತಿರುವವವರಿದ್ದಾರೆ. ತಮ್ಮ ಜ್ಞಾನ, ಅನುಭವ, ಅವಕಾಶಗಳಲ್ಲಿ ಇವರು ಬಹಳಷ್ಟು ಹಣ, ಆಸ್ತಿ, ಅಂತಸ್ತು ಗಳಿಸಬಹುದಾಗಿರುವಂತವರು. ಆದರೆ ಬದುಕು ಅನೇಕ ಸವಾಲು ಸಂಕಷ್ಟಗಳನ್ನನ್ನೊಡ್ಡಿದರೂ ನಂಬಿದ ತತ್ವಗಳೊಂದಿಗೆ ರಾಜಿಮಾಡಿಕೊಳ್ಳಲು ಬಯಸದ ಇವರು ತಮ್ಮ ಅನೇಕ ರೀತಿಯ ಮಿತಿಗಳಲ್ಲಿಯೇ ನನ್ನ ಹಾಗೂ ನನ್ನಂತವರ ಆಶಾದೀಪಗಳಾಗಿರುವಂತವರು. ಲಂಕೇಶ್, ವಡ್ಡರ್ಸೆ ರಘುರಾಮ ಶೆಟ್ಟರು, ಮುಂತಾದ ನಾನು ಕೇಳಿರುವ ಆದರೆ ಇಂದು ನಮ್ಮೆದುರು ಇಲ್ಲದ ಐಕನ್‌ಗಳನ್ನು ಬಿಟ್ಟರೆ ನನ್ನ ಸೀಮಿತ ತಿಳಿವಳಿಕೆ ಅನುಭವದಲ್ಲಿ ಇಲ್ಲಿ ಹೆಸರಿಸಲೇಬೇಕಾದ ಇಬ್ಬರೆಂದರೆ ಶಿವಮೊಗ್ಗದ ನಮ್ಮನಾಡು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಜಾರ್ಜ್ ಸಾಲ್ಡಾನಾ. ಮತ್ತೊಬ್ಬರು ಸಾಗರದ ನಮ್ಮೂರಿನ ಮಣ್ಣಿನ ವಾಸನೆ ಪತ್ರಿಕೆಯ ಸಂಪಾದಕ ಅ.ರಾ. ಶ್ರೀನಿವಾಸ್. ಇವರಿಬ್ಬರ ಕರ್ತವ್ಯನಿಷ್ಟೆ, ನಿಷ್ಠುರತೆ ಎಷ್ಟೋ ಸಲ ನನ್ನೊಳಗೆ ಕೀಳರಿಮೆಯನ್ನುಂಟುಮಾಡುವ ಜೊತೆಗೇ ಆದರ್ಶಗಳು ಹೇಳಲು ಮಾತ್ರ ಅಲ್ಲ ಎನ್ನುವುದನ್ನು ನಂಬಲೂ, ಅವನ್ನು ಪಾಲಿಸುವ ಧೈರ್ಯ ತೋರಲೂ ಸಹಕರಿಸಿವೆ. ಎಲ್ಲಾ ಊರುಗಳಲ್ಲಿಯೂ ಜಾರ್ಜ್, ಶ್ರೀನಿವಾಸ್ ಅಂತವರು ಇದ್ದೇ ಇರುತ್ತಾರೆ ಎಂಬುದು ನನ್ನ ನಂಬಿಕೆ. ಅವರೆಲ್ಲರಿಗೂ ಈ ಯುವಪತ್ರಕರ್ತನ ಹೃದಯಪೂರ್ವಕ ನಮನಗಳು.

-ಹರ್ಷ ಕುಮಾರ್ ಕುಗ್ವೆ

ಚಿತ್ರಕೃಪೆ: ಭಾರತ್ ಸ್ವಾಭಿಮಾನ್ ಆಂದೋಲನ್ ವೆಬ್ ಸೈಟ್

Wednesday, September 7, 2011

ಗಣಿಧೂಳು ಕುಡಿದ ಪತ್ರಕರ್ತರಿಗೂ ಸಿಬಿಐ ಕುಣಿಕೆ?

ಜನಾರ್ದನ ರೆಡ್ಡಿಯಿಂದ ಗಣಿ ಕಪ್ಪ ಪಡೆದ ಆರೋಪ ಪತ್ರಕರ್ತರ ಮೇಲೇ ಅಮರಿಕೊಂಡ ನಂತರ ಆ ವಿಷಯ ಅಷ್ಟಾಗಿ ಚರ್ಚೆಯೇ ಆಗದೆ ಉಳಿದಿತ್ತು. ಇವತ್ತು ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿರುವ ಅದಿರು ಕಳ್ಳರ ಮೇಲೆ ಐಪಿಸಿ ಸೆಕ್ಷನ್ ೩೭೯ ಎಂಬ ಶೀರ್ಷಿಕೆಯ ವರದಿ ಗಣಿ ಧೂಳು ಕುಡಿದ ಪತ್ರಕರ್ತರಿಗೆ ಥ್ರೋಟ್ ಇನ್ಫೆಕ್ಷನ್ ತರಿಸಿರುವ ಸಾಧ್ಯತೆ ಇದೆ.

ಈ ವರದಿಯ ಒಂದು ಪ್ಯಾರ ಹೀಗಿದೆ ನೋಡಿ:

ಕದ್ದ ಅದಿರು ಮಾರಾಟ ಮಾಡಿ, ಸಂಪಾದನೆ ಮಾಡಿದ ಹಣವನ್ನು ಗಾಲಿ ಬ್ರದರ‍್ಸ್ ಕೆಲ ಶಾಸಕರು, ಅಧಿಕಾರಿಗಳು ಸೇರಿದಂತೆ ಮಾಧ್ಯಮದ ಅನೇಕರಿಗೆ ನಾನಾ ಕಾರಣಗಳಿಂದ ಗಣಿ ಕಪ್ಪ ನೀಡಿದ ಆರೋಪಗಳಿವೆ. ಇವರ ಮೇಲೆ ಸಿಬಿಐ ಅಧಿಕಾರಿಗಳು ಐಪಿಸಿ ಸೆಕ್ಷನ್ ೫೧೧ರ ಅಡಿ ದೂರು ದಾಖಲಿಸಿಕೊಂಡರೂ ಅಚ್ಚರಿಯೇನಲ್ಲ. ಸೆಕ್ಷನ್ ೫೧೧ ಇದು ಶಿಕ್ಷೆ ವಿಧಿಸಬಹುದಾದ ಅಪರಾಧ ಎನ್ನುತ್ತದೆ ಕಾನೂನು. ಈ ಸೆಕ್ಷನ್ ಅಪರಾಧಕ್ಕೆ ಜೈಲು ಶಿಕ್ಷ ದಂಡ ವಸೂಲಿ ಅಥವಾ ಎರಡನ್ನೂ ವಿಧಿಸಬಹುದು.

ಗಣಿ ಧೂಳನ್ನು ಪತ್ರಕರ್ತರೂ ಕುಡಿದಿದ್ದಾರೆ ಎಂಬ ಮಾಹಿತಿಯೇನೋ ಲೋಕಾಯುಕ್ತ ನ್ಯಾಯಮೂರ್ತಿಗಳಾಗಿದ್ದ ಸಂತೋಷ್ ಹೆಗಡೆಯವರು ನೀಡಿದ ವರದಿಯಲ್ಲಿ ಅಡಕಗೊಂಡ ಯು.ವಿ.ಸಿಂಗ್ ವರದಿಯಲ್ಲಿ ದಾಖಲಾಗಿತ್ತು. ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳು ಇದನ್ನು ಪ್ರಕಟಿಸುವ ಧೈರ್ಯ ತೋರಿದ್ದವು. ಯಾವ ಮೀಡಿಯಾದಲ್ಲೂ ಈ ಬಗ್ಗೆ ವಿಸ್ತ್ರತ ಚರ್ಚೆ ನಡೆಯಲೇ ಇಲ್ಲ. ಪರ್ಯಾಯ ಮಾಧ್ಯಮವಾಗಿರುವ ಇಂಟರ್‌ನೆಟ್‌ನಲ್ಲಿ ಮಾತ್ರ ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ಲೇಖನಗಳು ಪ್ರಕಟಗೊಂಡವು.

ಗಾಲಿ ಜನಾರ್ದನ ರೆಡ್ಡಿಗೆ ಸಂಬಂಧಿಸಿದ ಹೆಲಿಕಾಪ್ಟರ್, ಐಶಾರಾಮಿ ಕಾರುಗಳು, ಚಿನ್ನ, ಬ್ಯಾಂಕ್ ಲಾಕರ್ ಇತ್ಯಾದಿಗಳನ್ನೆಲ್ಲ ಸಿಬಿಐನವರು ಸೀಜ್ ಮಾಡಿದ್ದಾರೆ. ರೆಡ್ಡಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಬ್ಬಿಣದ ಅದಿರನ್ನು ಲೂಟಿ ಮಾಡಿರುವುದರಿಂದ, ಮುಂದೆ ತನಿಖೆ ಪೂರ್ಣಗೊಂಡ ನಂತರ ನಷ್ಟವನ್ನು ಕಟ್ಟಿಸಿಕೊಳ್ಳಲು ಇದೆಲ್ಲವೂ ನೆರವಾಗಬಹುದು. ಇದಿಷ್ಟೇ ಅಲ್ಲದೆ ರೆಡ್ಡಿಗಳು ತನ್ನ ಅಕ್ರಮಕ್ಕೆ ಸಹಕರಿಸಿದವರಿಗೆ ತಿನ್ನಿಸಿದ್ದನ್ನೂ ಸಿಬಿಐನವರು ಕಕ್ಕಿಸಬಹುದು.

ಹೀಗಾಗಿ ರೆಡ್ಡಿಯಿಂದ ಹಣ ತಿಂದವರೆಲ್ಲ ಈಗ ಸೆಕ್ಷನ್ ೫೧೧ರ ಭೀತಿಗೆ ಸಿಲುಕುವಂತಾಗಿದೆ. ಈಗಾಗಲೇ ತಿರುಪತಿ ತಿಮ್ಮಪ್ಪನಿಗೆ ರೆಡ್ಡಿಗಳು ಕೊಟ್ಟ ವಜ್ರಖಚಿತ ಕಿರೀಟವನ್ನು ಹಿಂದಕ್ಕೆ ನೀಡಿ ಎಂದು ಭಕ್ತರು ಆಗ್ರಹಿಸುತ್ತಿದ್ದಾರೆ. ತೀರಾ ಇತ್ತೀಚಿಗೆ ವರಮಹಾಲಕ್ಷ್ಮಿ ಹಬ್ಬದಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಗೆ ಕೊಟ್ಟ ಚಿನ್ನದ ಖಡ್ಗವನ್ನೂ ಸಿಬಿಐನವರು ಕಿತ್ತುಕೊಂಡು ಬರಬಹುದು. ಕೆಲವರ ಮದುವೆಗಳಲ್ಲಿ ರೆಡ್ಡಿಗಳು ತಮ್ಮ ದೊಡ್ಡಸ್ತಿಕೆ ತೋರಿಸಿಕೊಳ್ಳಲು ಮತ್ತು ತಮ್ಮ ವ್ಯಾವಹಾರಿಕ ಕಾರಣಗಳಿಗಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ವಜ್ರದ ನೆಕ್‌ಲೆಸ್‌ಗಳನ್ನೂ ಉಡುಗೊರೆಯಾಗಿ ನೀಡಿದ್ದಾರೆ. ಇವೆಲ್ಲವನ್ನೂ ಮುಂಬರುವ ದಿನಗಳಲ್ಲಿ ಸಿಬಿಐ ವಶಪಡಿಸಿಕೊಳ್ಳಬಹುದಾ?

ಗಣಿ ಲೂಟಿ ಮಾಡಿದವರ ಜತೆಗೆ ಗಣಿ ಧೂಳು ತಿಂದವರೂ ಜೈಲು ಸೇರಬೇಕೆನ್ನುವುದು ಸಹಜನ್ಯಾಯ. ಅದು ನಡೆಯುತ್ತದೆಯೇ? ಪ್ರಜಾವಾಣಿ ಮತ್ತು ವಿಜಯ ಕರ್ನಾಟಕಗಳ ಹಾಗೆ ಇತರ ಮಾಧ್ಯಮಗಳೂ ಮಾಧ್ಯಮ ಭ್ರಷ್ಟಾಚಾರದ ಬಗ್ಗೆ ಇನ್ನಾದರೂ ಬಾಯಿಬಿಡುತ್ತವೆಯೇ?

ಯು.ವಿ.ಸಿಂಗ್ ವರದಿಯಲ್ಲಿ ಉಲ್ಲೇಖವಾಗಿರುವ ವಿ.ಭಟ್, ಆರ್‌ಬಿ, ಸಂಜಯ್ ಸರ್ ಮೊದಲಾದ ಗಣಿಧೂಳು ಕುಡಿದು ಅರಗಿಸಿಕೊಂಡ ಪುಣ್ಯಾತ್ಮರವರೆಗೆ ಸಿಬಿಐ ತಲುಪುವುದೇ?

ಕಾದು ನೋಡೋಣ.

Tuesday, September 6, 2011

ಸುಳ್ಳು ಅಫಿಡೆವಿಟ್ಟು ಕೊಟ್ಟ ಸೈಟುಗಳ್ಳ ಪತ್ರಕರ್ತರನ್ನು ಜೈಲಿಗೆ ಕಳುಹಿಸುವರು ಯಾರು?


ಡಿನೋಟಿಫಿಕೇಷನ್, ಜಿ ಕೆಟಗರಿ ಸೈಟು ಹಂಚಿಕೆ ಇತ್ಯಾದಿ ವಿಷಯಗಳಲ್ಲಿ ರಾಜಕಾರಣಿಗಳು ಸಿಕ್ಕಿಬಿದ್ದು ಜೈಲು ಪಾಲಾಗುತ್ತಲೇ, ಇತರ ಜನಪ್ರತಿನಿಧಿಗಳು ಗ್ರಾಂ ಲೆಕ್ಕದಲ್ಲಿ ತಿನ್ನಬೇಕಾದ ಅನ್ನಕ್ಕೆ ಬೆದರಿ ನಮಗ್ಯಾಕೆ ಬೇಕು ಈ ಉಸಾಬರಿ ಎಂದು ಏದುಸಿರು ಬಿಡುತ್ತಿದ್ದಾರೆ. ರಾಜಕಾರಣಿಗಳು ಜೈಲು ಪಾಲಾಗುವುದನ್ನು ಪತ್ರಿಕೆಗಳು, ಚಾನಲ್‌ಗಳು ರಸವತ್ತಾಗಿ ಬರೆಯುತ್ತಿವೆ, ಪ್ರಸಾರ ಮಾಡುತ್ತಿವೆ. ಅದು ಆಗಲಿ, ತುಂಬ ಸಂತೋಷ.

ಆದರೆ ಪದೇ ಪದೇ ಮಾಧ್ಯಮದ ನೈತಿಕತೆಯ ಕುರಿತು ಪ್ರಶ್ನೆಗಳು ಏಳುತ್ತಲೇ ಇವೆ. ಭ್ರಷ್ಟಾಚಾರದ ವಿರುದ್ಧ ರಣಘೋಷ ನಡೆಸುತ್ತಿರುವ ಪತ್ರಕರ್ತರು ಕೂಡ ನ್ಯಾಯಬದ್ಧವಾಗಿ ತಮ್ಮ ವೃತ್ತಿ ನಡೆಸಬೇಕು, ಅವ್ಯವಹಾರಗಳಲ್ಲಿ ಭಾಗಿಯಾಗಿರಬಾರದು ಎಂಬುದು ಜನರ ಬಯಕೆ. ಟಿವಿ ಚಾನಲ್‌ಗಳಲ್ಲಿ ಈಗೀಗ ಗಂಟೆಗಟ್ಟಲೆ ಉಪದೇಶ ಸ್ವರೂಪದ ಭಾಷಣ ಹೊಡೆಯುತ್ತಿರುವ ಪತ್ರಕರ್ತರನ್ನು ನೋಡಿ ಇವರ ಬಂಡವಾಳ ಬಲ್ಲವರು ಕ್ಯಾಕರಿಸಿ ಉಗಿಯುವಂತಾಗಿದೆ.

ಜಿ ಕೆಟಗರಿ ಸೈಟುಗಳ ವಿಷಯಕ್ಕೆ ಬನ್ನಿ. ಬಿಡಿಎ, ಹೌಸಿಂಗ್ ಬೋರ್ಡುಗಳಲ್ಲಿ ಸಾಕಷ್ಟು ಮಂದಿ ಪತ್ರಕರ್ತರು ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಸೈಟು ಹೊಡೆದುಕೊಂಡಿದ್ದಾರೆ. ಜಿ ಕೆಟಗರಿ ಎಂದರೆ ಅತಿಗಣ್ಯರಿಗೆ ಸೈಟು ಕೊಡುವ ವ್ಯವಸ್ಥೆ. ಇವತ್ತು ಮೀಡಿಯಾ ಬೆಳೆದಿರುವ ಭರಾಟೆ ನೋಡಿದರೆ ಪತ್ರಕರ್ತರು ಅತಿಗಣ್ಯರು ಎಂಬ ಭ್ರಮೆ ಹುಟ್ಟಿಕೊಂಡಿರುವುದು ಒಂದರ್ಥದಲ್ಲಿ ನಿಜ. ಹೋಗ್ಲಿ ಬಿಡಿ, ಸೈಟು ಪಡೆದುಕೊಳ್ಳಲಿ ಎಂದೇ ಇಟ್ಟುಕೊಳ್ಳೋಣ. ಈ ಸೈಟುಗಳೆಲ್ಲ ಕನಿಷ್ಠ ಒಂದು ಕೋಟಿ ರೂಪಾಯಿಗೂ ಹೆಚ್ಚು ಬೆಲೆ ಬಾಳುತ್ತವೆ.

ಈ ತರಹದ ಕೆಟಗರಿ ಸೈಟು ಪಡೆದುಕೊಳ್ಳಬೇಕಾದವರು ತಮಗೆ ಸೈಟು ಕೊಡುವ ಸಂಸ್ಥೆಗೆ ಒಂದು ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ. ಸೈಟು ಬೇಕಾಗಿರುವ ನಗರದಲ್ಲಿ ತಮಗಾಗಲಿ, ತಮ್ಮ ಕುಟುಂಬದವರಿಗಾಗಲಿ ಯಾವುದೇ ನಿವೇಶನವಾಗಲಿ, ಮನೆಯಾಗಲಿ ಇಲ್ಲ ಎಂದು ಪ್ರಮಾಣಪತ್ರ ಕೊಟ್ಟರೆ ಮಾತ್ರ ಸೈಟು ಕೊಡಲಾಗುತ್ತದೆ.

ಒಂದು ಖಚಿತವಾದ ಸುದ್ದಿ ಏನೆಂದರೆ ಶೇ.೯೦ರಷ್ಟು ಮಂದಿ ಸುಳ್ಳು ಅಫಿಡೆವಿಟ್ ಸಲ್ಲಿಸಿಯೇ ಸೈಟುಗಳನ್ನು ಹೊಡೆದುಕೊಂಡಿದ್ದಾರೆ. ಈ ಪೈಕಿ ಕೆಲವರ ಮೇಲೆ ನಾಗಲಕ್ಷ್ಮಿಬಾಯಿ ಎಂಬ ಮತ್ತೊಬ್ಬ ಪತ್ರಕರ್ತೆ ಕೇಸು ಜಡಿದು ಸೈಟು ಹಂಚಿಕೆಯೂ ರದ್ದಾಗಿ ಹೋಗಿದೆ. ಮತ್ತೆ ಕೆಲವರು ಬಚಾವಾಗಿ ಹೋಗಿದ್ದಾರೆ. ಬಹಳಷ್ಟು ಮಂದಿ ತಮಗೆ ಕೊಟ್ಟ ಸೈಟನ್ನು ಮಾರಿ ನುಂಗಿ ನೀರು ಕುಡಿದಿದ್ದಾಗಿದೆ.

ಕೆಲವು ಪತ್ರಕರ್ತರು ಕೇವಲ ಬಿಡಿಎನಿಂದಲೇ ಎರಡೆರಡು ಸೈಟು ಹೊಡೆದುಕೊಂಡಿದ್ದಾರೆ. ಕೆಲವರು ತಮ್ಮ ಹೆಸರಲ್ಲೊಂದು, ಪತ್ನಿ ಹೆಸರಲ್ಲೊಂದು ಸೈಟು ಗಿಟ್ಟಿಸಿಕೊಂಡಿದ್ದಾರೆ. ಒಬ್ಬ ಮಹಾಶಯನಂತೂ ಪತ್ನಿ ಹೆಸರಲ್ಲಿ ಸೈಟು ಇದ್ದ ಕಾರಣಕ್ಕೆ ತನ್ನ ಸೈಟು ಎಲ್ಲಿ ರದ್ದಾಗುತ್ತೋ ಎಂಬ ಕಾರಣಕ್ಕೆ ಪತ್ನಿಗೇ ಡೈವೋರ್ಸ್ ಕೊಟ್ಟು, ಅವಳ ಜತೆಯೇ ಸಂಸಾರ ಮಾಡುತ್ತಿದ್ದಾನೆ. ಮುಖ್ಯಮಂತ್ರಿಯ ಹಿಂದೆ ನಾಯಿನರಿಯಂತೆ ಅಲೆದಾಡಿ, ಪಾದಕ್ಕೆರಗಿ ಕೆಲವರು ಸೈಟು ಪಡೆದಿದ್ದಾರೆ.

ಮಾಜಿ ಮುಖ್ಯಮಂತ್ರಿಯೊಬ್ಬರ ಕೃಪಾಪೋಷಿತ ಪತ್ರಿಕೆಯೊಂದರ ಸ್ಥಾನೀಯ ಸಂಪಾದಕನೋರ್ವ ಹೌಸಿಂಗ್ ಬೋರ್ಡ್‌ನಿಂದ ಎರಡನೇ ಬಾರಿ ಸೈಟು ಮಂಜೂರು ಮಾಡಿಸಿಕೊಂಡಿದ್ದಷ್ಟೇ ಅಲ್ಲದೆ, ಅದಕ್ಕೆ ಕಟ್ಟಬೇಕಾದ ೩೮ ಲಕ್ಷ ರೂ ಹಣವನ್ನು ನೀವೇ ಕೊಡಿ ಎಂದು ಅದೇ ಮಾಜಿ ಮುಖ್ಯಮಂತ್ರಿಗೆ ಅವರು ಮುಖ್ಯಮಂತ್ರಿಯಾಗಿದ್ದಾಗ ಅಧಿಕೃತವಾಗಿ ಬೇಡಿಕೊಂಡಿದ್ದೂ ಇದೆ.

ಕೆಲವು ಪತ್ರಿಕೆಗಳಲ್ಲಿ ಈ ಸೈಟುಗಳ್ಳರಿಗೆ ಶಾಶ್ವತ ಬಹಿಷ್ಕಾರವಿದೆ. ಅದೇ ಪ್ರಕಾರ ಜಿ ಕೆಟಗರಿ ಸೈಟು ಪಡೆಯುವುದಿದ್ದರೆ ನಿನ್ನ ಹೆಸರಲ್ಲಿ ತೆಗೆದುಕೊಳ್ಳಬೇಡ, ಬೇರೆಯವರ ಹೆಸರಲ್ಲಿ ತೆಗೆದುಕೋ ಎಂದು ಪತ್ರಕರ್ತರಿಗೆ ಅಡ್ಡದಾರಿ ಹೇಳಿಕೊಡುವ ಸಂಪಾದಕರೂ ಇದ್ದಾರೆ.

ಜಿ ಕೆಟಗರಿಯ ಅಡಿಯಲ್ಲಿ ಬರಲು ಯಾವುದಾದರೂ ಸಾಧನೆ ಮಾಡಿರಬೇಕು, ರಾಜ್ಯೋತ್ಸವ ಪ್ರಶಸ್ತಿ ಪಡೆದಿರಬೇಕು ಎಂಬ ನಿಯಮವಿತ್ತು. ಹೀಗಾಗಿಯೇ ಪತ್ರಕರ್ತರು ರಾಜ್ಯೋತ್ಸವ ಪ್ರಶಸ್ತಿಗಳಿಗೆ ಹೊಲಸಿನ ಮೇಲೆ ನೊಣ ಮುತ್ತುವಂತೆ ಮುತ್ತಿಕೊಂಡರು. ಪತ್ರಕರ್ತರಾಗಿ ಐದು ವರ್ಷ ಕೆಲಸ ಮಾಡಿದ ಬಾಲಕರಿಗೂ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಎಂಬುದು ತಳ್ಳುಗಾಡಿಯಲ್ಲಿ ಮಾರುವ ತರಕಾರಿಯಂತಾಗಿ ಹೋಯಿತು.

ಜಿ ಕೆಟಗರಿ ಸೈಟು ಕೊಡೋದು ಅತಿಗಣ್ಯರಿಗೆ ಮತ್ತು ಸೈಟು ಕೊಳ್ಳಲು ಶಕ್ತಿ ಇಲ್ಲದ ನಿವೇಶನರಹಿತರಿಗೆ. ಆದರೆ ಸೈಟು ಹೊಡೆದುಕೊಂಡಿರುವವರ ಪೈಕಿ ಬಹುತೇಕರು ಯಾವ ಕೋನದಲ್ಲಿ ನೋಡಿದರೂ ಅತಿಗಣ್ಯರೇನಲ್ಲ. ಕೆಲವರಂತೂ ಸ್ಪಷ್ಟವಾಗಿ ಹೇಳುವುದಾದರೆ ಪತ್ರಿಕಾ ವೃತ್ತಿಯನ್ನೇ ಸರಿಯಾಗಿ ನಿರ್ವಹಿಸಲು ಬಾರದ ಅಡ್ನಾಡಿಗಳು.

ಈಗ ಪ್ರಾಮಾಣಿಕರಾಗಿರುವ ಪತ್ರಕರ್ತರು ಅಥವಾ ಪ್ರಾಮಾಣಿಕರಾಗಿರುವ ರಾಜಕಾರಣಿಗಳು ಈ ನ್ಯಾಯಬಾಹಿರವಾಗಿ, ಸುಳ್ಳು ಅಫಿಡೆವಿಟ್ ಕೊಟ್ಟ ಪತ್ರಕರ್ತರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡುವರಾ? ಯಾರಾದರೂ ಈ ಸಂಬಂಧ ನ್ಯಾಯಾಲಯಗಳಲ್ಲಿ ದಾವೆ ಹೂಡಿ ಈ ಪತ್ರಕರ್ತರ ಮುಖವಾಡದ ದಗಲ್ಬಾಜಿಗಳನ್ನೂ ಪರಪ್ಪನ ಅಗ್ರಹಾರಕ್ಕೆ ಕಳಿಸುವರೇ? ರಾಜಕಾರಣಿಗಳು ಮಾಡಿದ್ದು ಭ್ರಷ್ಟಾಚಾರವಾದರೆ ಪತ್ರಕರ್ತರು ಮಾಡಿದ್ದೇಕೆ ಭ್ರಷ್ಟಾಚಾರವಲ್ಲ?

ಪರಪ್ಪನ ಅಗ್ರಹಾರದಲ್ಲಿ ಗ್ರಾಮುಗಟ್ಟಲೆ ಅನ್ನ ಮತ್ತು ಮುದ್ದೆ ಬೇಕಾದಷ್ಟು ತಯಾರಾಗುತ್ತದೆ.

Friday, September 2, 2011

ಬಳ್ಳಾರಿ ಪತ್ರಕರ್ತರೇಕೆ ಗಣಿಗಾರಿಕೆ ಆರಂಭಕ್ಕೆ ಒತ್ತಾಯಿಸುತ್ತಿದ್ದಾರೆ?


ಬಳ್ಳಾರಿ ಪತ್ರಕರ್ತರು ದಿಢೀರನೆ ಆಕ್ಟಿವಿಸಮ್‌ಗೆ ಇಳಿದಿದ್ದಾರೆ. ಗಣಿಗಾರಿಕೆ ಪರಿಣಾಮಗಳ ಅಧ್ಯಯನಕ್ಕೆಂದು ಸುಪ್ರೀಂ ಕೋರ್ಟ್ ನೇಮಿಸಿರುವ ಸಮಿತಿಗೊಂದು ಮನವಿ ಪತ್ರ ಸಲ್ಲಿಸಿದ್ದಾರೆ. ಬಳ್ಳಾರಿಯಲ್ಲಿ ಮತ್ತೆ ಗಣಿಗಾರಿಕೆ ಶುರುವಾಗಬೇಕು ಎಂಬುದು ಪತ್ರಕರ್ತರ ಬೇಡಿಕೆ. ಈ ಬೇಡಿಕೆಗೆ ಪೂರಕವಾದ ಮಾಹಿತಿಗಳನ್ನು ನಾಲ್ಕು ಪುಟಗಳ ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ಎಲ್ಲ ಸರಿ, ಬಳ್ಳಾರಿ ಜರ್ನಲಿಸ್ಟ್ ಗಿಲ್ಡ್ ಎಂಬ ಸಂಸ್ಥೆಗೆ ಈ ಉಸಾಬರಿ ಯಾಕೆ ಬೇಕಿತ್ತು? ಗಣಿ ಉದ್ದಿಮೆಯನ್ನು ನಂಬಿಕೊಂಡ ಬಡವರ ಪರ ಇವರ ಕಾಳಜಿ ಇರುವುದೇ ಆದರೆ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಈ ಕುರಿತು ವರದಿ ಮಾಡಿ ಸಮಸ್ಯೆಯ ಆಳ-ಅಗಲವನ್ನು ಬಿಚ್ಚಿಡಬಹುದಿತ್ತಲ್ಲವೇ?

ಪತ್ರಕರ್ತ ಸಂಘಟನೆಗಳು ಹೆಚ್ಚಾಗಿ ಬಾಯಿ ಬಿಡುವುದು ಪತ್ರಕರ್ತರ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ, ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಉದ್ಭವವಾದಾಗ ಮಾತ್ರ. ಇದೇ ಸರಿ ಎಂಬುದು ನಮ್ಮ ನಿಲುವೇನೂ ಅಲ್ಲ. ಆದರೆ ಬಳ್ಳಾರಿ ಪತ್ರಕರ್ತರು ಹಠಾತ್ತನೆ ಗಣಿ ನಿಷೇಧದ ವಿಷಯವನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸಿದ್ದೇಕೆ ಎನ್ನುವುದು ಪ್ರಶ್ನೆ.

ಬಳ್ಳಾರಿಯಲ್ಲಿ ಗಣಿ ಕಂಪೆನಿಗಳು ಭೂಮಿಯನ್ನೇ ಅಗೆದು ನುಂಗಿದಾಗ, ಇಡೀ ಪರಿಸರವೇ ನಾಶದ ಅಂಚಿಗೆ ಸಾಗಿದಾಗ, ಕರ್ನಾಟಕದ ಗಡಿರೇಖೆಯನ್ನೇ ಅಳಿಸಿ ಅಕ್ರಮ ದಂಧೆ ನಡೆಸಿದಾಗ, ಗಣಿಗಾರಿಕೆಯಿಂದಾಗಿ ನಾನಾ ಖಾಯಿಲೆಗಳಿಗೆ ಜನರು ತುತ್ತಾದಾಗ, ಗಣಿದಂಧೆಯ ನೆರಳಲ್ಲಿ ನೂರಾರು ಮಂದಿ ಹತ್ಯೆಗೀಡಾದಾಗ... ಇಂಥದೇ ಭೀಕರ ಸನ್ನಿವೇಶಗಳು ಎದುರಾದಾಗ ಬಳ್ಳಾರಿ ಜರ್ನಲಿಸ್ಟ್ ಗಿಲ್ಡ್ ಇಂಥ ಆಕ್ಟಿವಿಸಂ ತೋರಿತ್ತೇ? ಬಳ್ಳಾರಿ ಗೆಳೆಯರೇ ಹೇಳಬೇಕು.

ಗಣಿದಂಧೆಕೋರರು ರಾಜಾರೋಷವಾಗಿ ಕೆಲ ಪತ್ರಕರ್ತರ ಮೇಲೇ ಹಲ್ಲೆ ನಡೆಸಿದರು. ವಿನಾಕಾರಣ ಏಟು ತಿಂದ ಪತ್ರಕರ್ತರಿಗೆ ಕಡೆಗೂ ನ್ಯಾಯ ದೊರೆಯಲಿಲ್ಲ. ಆರೋಪಿಗಳಿಗೆ ಶಿಕ್ಷೆಯೂ ಆಗಲಿಲ್ಲ. ಈ ಪ್ರಕರಣಗಳನ್ನಾದರೂ ಬಳ್ಳಾರಿ ಜರ್ನಲಿಸ್ಟ್ ಗಿಲ್ಡ್ ತಾರ್ಕಿಕ ಹಂತಕ್ಕೆ ಕೊಂಡೊಯ್ದು ಗಣಿಕಳ್ಳರ ದಾದಾಗಿರಿಯ ವಿರುದ್ಧ ನಿಲ್ಲುವ ಕೆಲಸವನ್ನೂ ಮಾಡಿರಲಿಲ್ಲ.

ಇದೇ ಮನವಿಯನ್ನು ಲಾರಿ ಮಾಲೀಕರೋ, ಗಣಿ ಕೂಲಿ ಕಾರ್ಮಿಕರೋ ಅಥವಾ ಈ ದಂಧೆಗೆ ಸಂಬಂಧಿಸಿದ ಇನ್ಯಾವುದೇ ಗುಂಪು ಕೊಟ್ಟಿದ್ದರೆ ಅದಕ್ಕೊಂದು ಅರ್ಥ, ಸಮರ್ಥನೆ ಇರುತ್ತಿತ್ತು. ಪತ್ರಕರ್ತರ ಸಂಘಕ್ಕೆ ಯಾಕೆ ಈ ಕಾಳಜಿ ಉದ್ಭವಿಸಿತು? ಪತ್ರಕರ್ತರ ವೃತ್ತಿಗೂ ಗಣಿಗಾರಿಕೆಗೂ ಏನು ಸಂಬಂಧ?

ಈಗ ಗಣಿಗಾರಿಕೆ ಆರಂಭವಾಗಬೇಕು ಎಂದು ಸಂಘಟನೆ ಯಾಕೆ ಹೇಳುತ್ತಿದೆ? ಬಳ್ಳಾರಿ ಪತ್ರಕರ್ತ ಗೆಳೆಯರು ಉತ್ತರಿಸುವರೆ?