Saturday, July 30, 2011

ಪ್ರಾಣಿ ಬಲಿ: ಹಿಂಸೆಯ ವೈಭವೀಕರಣದ ದ್ವಂದ್ವ ಯಾಕೆ? ಡಾ.ಸತೀಶ್ ಪಾಟೀಲ್ ಪ್ರಶ್ನೆ


ಪ್ರಾಣಿ ಬಲಿ ಕುರಿತು ಡಾ. ಅರುಣ್ ಜೋಳದಕೂಡ್ಲಿಗಿ ಹಾಗೂ ರೂಪಾ ಹಾಸನ್ ಅವರು ಮಂಡಿಸಿರುವ ಚರ್ಚೆಗೆ ಕೊಟ್ಟೂರಿನ ಡಾ. ಸತೀಶ್ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಸದ್ಯ ಸಹಾಯಕ ಪ್ರಾಧ್ಯಾಪಕರಾಗಿರುವ ಸತೀಶ್ ಪಾಟೀಲ್ ಹಿಂದೆ ಮಾಧ್ಯಮ ಕ್ಷೇತ್ರದಲ್ಲೂ ಕೆಲಸ ನಿರ್ವಹಿಸಿದವರು. ಚರ್ಚೆ ಮುಂದುವರೆಯುತ್ತದೆ.-ಸಂಪಾದಕೀಯ


೩-೪ ವರ್ಷಗಳ ಹಿಂದೆ ಈಟಿವಿ ನ್ಯೂಸ್ ನಲ್ಲಿ ಬುಲೆಟಿನ್ ಪ್ರಡ್ಯೂಸರ್ ಆಗಿ ನಾನು ಕೆಲಸ ಮಾಡುತ್ತಿದ್ದೆ. ಒಮ್ಮೆ ಗುಲ್ಬರ್ಗ ಜಿಲ್ಲೆಯ ಹಳ್ಳಿಯೊಂದರಲ್ಲಿ ಸ್ತ್ರೀ ದೇವತೆಯ ಜಾತ್ರೆ ನಡೆದ ಸುದ್ದಿ ಬಂತು. ಆ ಜಾತ್ರೆಯಲ್ಲಿ ನೂರಾರು ಕುರಿ ಹಾಗೂ ಕೋಣಗಳನ್ನು ಬಲಿ ನೀಡಲಾಗಿತ್ತು. ಪ್ರಾಣಿ ಬಲಿ ನೀಡುವಾಗ ಸುತ್ತಲಿನ ಕೆಲವರು ಕೂಗುತ್ತಿದ್ದರೆ, ಇನ್ನು ಕೆಲವರು ಕೈ ಮುಗಿದು ನಿಂತಿದ್ದು ಕಾಣುತ್ತಿತ್ತು. ಆ ಪರಿಸರದಲ್ಲಿ ರಕ್ತದೋಕುಳಿ ಹರಿದಾಡಿತ್ತು..  ಮೌಢ್ಯತೆಯ ಪರಾಕಾಷ್ಠತೆಯಾಗಿರುವ ಈ ಭೀಕರ ಘಟನೆ   ಡೆಸ್ಕ್ ನಲ್ಲಿ ಚರ್ಚೆಗೆ ಕಾರಣವಾಯಿತು. ಜಾತ್ರೆಯಲ್ಲಿ ನಡೆದ ಭೀಕರ ಸನ್ನಿವೇಶ ವಿರೋಧಿಸಿ ಹೆಡ್ ಲೈನ್ ರೆಡಿ ಮಾಡಲು ನನಗೆ ಸೂಚಿಸಲಾಯಿತು. ಆದರೆ, ಅದಕ್ಕೆ ನಾನು ವಿರೋಧ ವ್ಯಕ್ತಪಡಿಸಿದೆ. ನನ್ನ ವಿರೋಧದ ನಡುವೆಯೂ ಆ ಘಟನೆ ಹೆಡ್ ಲೈನ್ ಆಗಿ ಈಟಿವಿ ನ್ಯೂಸ್ ನಲ್ಲಿ ಪ್ರಸಾರವಾಯಿತು.  

ಜಾತ್ರೆಯಲ್ಲಿ ನಡೆಯುವ ಪ್ರಾಣಿ ಬಲಿ ವಿರೋಧಿಸಿ ಸಾಮಾನ್ಯವಾಗಿ ಎಲ್ಲ ನ್ಯೂಸ್ ಚಾನೆಲ್ಗಳಲ್ಲೂ ಸುದ್ದಿ ಪ್ರಸಾರವಾಗುತ್ತವೆ. ಪತ್ರಿಕೆಗಳು ಸಾಕಷ್ಟು ಬಾರಿ ಇಂತಹ ಸುದ್ದಿ ನೀಡಿವೆ. ಅಂದು ನ್ಯೂಸ್ ಮುಗಿದ ಬಳಿಕ ನನ್ನ ವಿರೋಧಕ್ಕೆ  ಡೆಸ್ಕ್ ನಲ್ಲಿ ಕಾರಣ ಕೇಳಲಾಯಿತು. ಇಂತಹ ಆಚರಣೆಗಳ ಬಗ್ಗೆ ಮಾಧ್ಯಮಗಳು ವರ್ತಿಸುವ ರೀತಿಗೆ ನಾನು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ಏಕೆಂದರೆ ಒಂದೆಡೆ ಪ್ರಾಣಿ ಬಲಿ ವಿರೋಧಿಸಿ ನ್ಯೂಸ್ ಮಾಡುವ ಮಾಧ್ಯಗಳು ಇನ್ನೊಂದೆಡೆ ಸವಿರುಚಿ, ಅಡುಗೆ ಮನೆ ಮುಂತಾದ ಕಾರ್ಯಕ್ರಮಗಳಲ್ಲಿ ಚಿಕನ್ ಬಿರಿಯಾನಿ, ಮಟನ್ ಫ್ರೈ ಮಾಡುವ ಬಗ್ಗೆ ಕಾರ್ಯಕ್ರಮ ಪ್ರಸಾರ ಮಾಡುತ್ತವೆ. ಕಾರ್ಯಕ್ರಮ ಮಾಡುವವರು ಕೂಡ ಪ್ರಾಣಿಯನ್ನು ಕೊಂದು ಈ ಕಾರ್ಯಕ್ರಮ ನಡೆಸುತ್ತಿದ್ದೇವೆ ಎನ್ನುವ ಪ್ರಜ್ಞೆಯಿಲ್ಲದೆ ಸಂಭ್ರಮದಿಂದ ವರ್ತಿಸುತ್ತಿರುತ್ತಾರೆ. ಪತ್ರಿಕೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಪತ್ರಿಕೆಗಳ ಮುಖಪುಟದಲ್ಲಿ ಪ್ರಾಣಿ ಬಲಿ ವಿರೋಧಿಸಿದರೆ, ಪುರವಣಿಗಳಲ್ಲಿ ಚಿಕನ್, ಮಟನ್ ಮಾಡುವ ವಿಧಾನದ ಬಗ್ಗೆ ಪುಟಗಟ್ಟಲೆ ವಿವರ ಇರುತ್ತದೆ.  
 
ಸಿಟಿಯಲ್ಲಿ ಬದುಕುವ ನಾಗರಿಕರು ಎನಿಸಿಕೊಂಡವರು ಹಳ್ಳಿಗಳಲ್ಲಿ ಬದುಕುವ ಜನರನ್ನು ಹಾಗೂ ಅವರ ಆಚರಣೆಗಳನ್ನು ಅನಾಗರಿಕ, ಭೀಕರ ಎಂದು ಬಿಂಬಿಸುವ ಪ್ರಯತ್ನವಿದು.. ರೂಪ ಹಾಸನ್ ಕೂಡ ಇಂತಹುದೇ ಅಭಿಪ್ರಾಯ ಹೊಂದಿದ್ದಾರೆ. ಖಾಸಗಿಯಾಗಿ ನಡೆಯುವ ಪ್ರಾಣಿ ಬಲಿಯನ್ನು ಒಪ್ಪುವ ಅವರು, ಸಾಮೂಹಿಕ ಹಾಗೂ ಸಾರ್ವಜನಿಕ ಪ್ರಾಣಿಬಲಿಯಲ್ಲಿ ಹಿಂಸೆಯ ವೈಭವೀಕರಣವಾಗುತ್ತದೆ ಎಂದು ಪ್ರತಿಪಾದಿಸುತ್ತಾರೆ. ರೂಪ ಹಾಸನರ ಇಂತಹ ಸಮರ್ಥನೆಗೆ ಮಾಧ್ಯಮಗಳು ಕೂಡ ಹೊಣೆ ಹೋರಬೇಕು. ಏಕೆಂದರೆ ಜಾತ್ರೆಗಳಲ್ಲಿ ನಡೆಯುವ ಪ್ರಾಣಿಬಲಿ ಆಚರಣೆ ಅಲ್ಲಿದ್ದವರಿಗೆ ಭಕ್ತಿಯ ಸಂಗತಿಯಾಗಿರುತ್ತದೆ. ಆದರೆ, ಅದು ಡೆಸ್ಕ್‌ಗೆ ಬರುತ್ತಿದ್ದ ಹಾಗೆ ನಾಗರಿಕರ ಮನಸ್ಥಿತಿಗೆ ಸಿಲುಕಿ ಭೀಕರವಾಗಿ ಗೋಚರಿಸುತ್ತದೆ. ಡೆಸ್ಕ್‌ನಲ್ಲಿ ಕೂತಿರುವ ರೂಪ ಹಾಸನ್ ಅವರಂತಹ ನಾಗರಿಕರು, ತಮ್ಮದಲ್ಲದ ಬದುಕನ್ನು ಒಪ್ಪಲು ಸಿದ್ದರಿಲ್ಲ.  ಹೀಗಾಗಿಯೇ  ಜಾತ್ರೆಯ ಸಂದರ್ಭದಲ್ಲಿ ಭಕ್ತಿಯಿಂದ ಕೂಡಿದ ಪ್ರಾಣಿ ಬಲಿ ಆಚರಣೆ ಡೆಸ್ಕ್‌ನಲ್ಲಿ ಭೀಕರ ರೂಪ ಪಡೆದು ಮತ್ತೆ ಜನಸಾಮಾನ್ಯರಿಗೆ ಮೌಢ್ಯತೆಯ ಸುದ್ಧಿಯಾಗಿ ಪ್ರಸಾರವಾಗುತ್ತದೆ.  

ಕೆಲ ವಾರಗಳ ಹಿಂದೆ ಜನಶ್ರೀ ಚಾನೆಲ್ನಲ್ಲಿ ಪುನಿತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಭೇಟಿ ನೀಡುವ ನಾನ್ ವೆಜ್ ಹೋಟೆಲ್ ಬಗ್ಗೆ ನ್ಯೂಸ್ ಮಾಡಲಾಯಿತು. ಆ ಹೋಟೆಲ್ ನಲ್ಲಿ ಮಾಡುವ ಮಟನ್ ಹಾಗೂ ಮುದ್ದೆಯ ರುಚಿಯ ಬಗ್ಗೆ ಅಲ್ಲಿನ ಗ್ರಾಹಕರಿಂದ ಮಾಹಿತಿ ಪಡೆಯಲಾಯಿತು.  ಇಡೀ ಸುದ್ದಿಯುದ್ದಕ್ಕೂ ಅದೊಂದು ಅತ್ಯುತ್ತಮ ಹೋಟೆಲ್ ಎನ್ನುವಂತೆ ಬಿಂಬಿಸಲಾಯಿತು. ಇಲ್ಲಿ ಕೂಡ ಪ್ರತಿ ದಿನ ಸಾಮೂಹಿಕವಾಗಿ ಕುರಿ ಹಾಗೂ ಕೋಳಿಗಳನ್ನು ಬಲಿಕೊಡಲಾಗುತ್ತದೆ ಎಂಬುದನ್ನು ಮರೆಯಬಾರದು. ಖಾಸಗಿಯಾಗಿ ನಡೆಯುವ ಪ್ರಾಣಿ ಬಲಿ ನಮ್ಮ ಕಣ್ಣಿಗೆ ಕಾಣುವುದಿಲ್ಲ ಎಂದಾಕ್ಷಣ ಅದು ಹಿಂಸೆಯ ವೈಭವೀಕರಣವಲ್ಲವೆ...

ಪ್ರಾಣಿಬಲಿ ನೀಡಬೇಕೆ ಅಥವಾ ಬೇಡವೇ ಎನ್ನುವುದಕ್ಕಿಂತ ಮುಖ್ಯವಾಗಿ ನಾವು ಯೋಚಿಸಬೇಕಿರುವುದು ತಮ್ಮ   ವಾದಗಳನ್ನು ಮಂಡಿಸುತ್ತಿರುವವರ ಉದ್ದೇಶಗಳೇನು ಎನ್ನುವುದನ್ನು ಅರಿಯಬೇಕಿದೆ. ಏಕೆಂದರೆ ಪ್ರಾಣಿಬಲಿಯನ್ನು ಸಮರ್ಥಿಸುತ್ತಿರುವ ಅರುಣ್ ಜೋಳದ ಕೂಡ್ಲಿಗಿಯವರು ಆ ಮೂಲಕ ಜನಸಮುದಾಯದ ಆಚರಣೆ ಹಾಗೂ ಅವರ ಸಾಂಸ್ಕೃತಿಕ ಅನನ್ಯತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಾಣಿಬಲಿಯನ್ನು ಸರಳೀಕರಿಸದೆ ಅದರ ಹಿಂದಿರುವ ಸಮುದಾಯದ ಬದುಕುವ ಚೈತನ್ಯದ ಕುರಿತು ಆಲೋಚಿಸುತ್ತಿದ್ದಾರೆ. ಆದರೆ ರೂಪಾ ಹಾಸನ್ ಅವರ ವಾದದ ಹಿಂದೆ ಇರುವ ಉದ್ದೇಶವೇ ಬೇರೆ.. ತಾವು ಬದುಕುತ್ತಿರುವ ರೀತಿ ನೀತಿಗೆ ಸಾರ್ವಜನಿಕ ಪ್ರಾಣಿಬಲಿ ಎಂಬುದು ಅಸಹ್ಯ ಹಾಗೂ ಭೀಕರವಾಗಿ ಕಾಣುತ್ತಿರುವುದರಿಂದ ಅದನ್ನು ವಿರೋಧಿಸುತ್ತಿದ್ದಾರೆ. ಅದಕ್ಕವರು ಸಂವಿಧಾನದ ಸಮರ್ಥನೆಯನ್ನು ನೀಡುತ್ತಿದ್ದಾರೆ. ಆ ಮೂಲಕ ಹಳ್ಳಿಯ ಜನತೆ ಹಾಗೂ ಸಾಮಾನ್ಯ ಜನರು ತಮ್ಮ ಮೌಢ್ಯತೆಯನ್ನು ತೊರೆದು ಭಾರತದ ಸಂವಿಧಾನವನ್ನು ಒಪ್ಪಿಕೊಂಡು  ನಾಗರಿಕರಾಬೇಕೆಂದು ಒತ್ತಾಯಿಸುತ್ತಿದ್ದಾರೆ.. ಸಾಮಾನ್ಯರು ತಮ್ಮ ಮೌಢ್ಯತೆಯನ್ನು ತೊರೆದು ಇನ್ನಷ್ಟು ಸತ್ಪ್ರಜೆಗಳಾಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ.. ಆದರೆ ನಾಗರಿಕರಾಗಬೇಕಾದಾಗ ಅವರು ಯಾವುದನ್ನು ಹಾಗೂ ಯಾರನ್ನು ಅನುಸರಿಸಬೇಕೆಂಬುದು ಪ್ರಶ್ನೆ..  ಈ ಪ್ರಶ್ನೆಯನ್ನು ಅರ್ಥಪೂರ್ಣವಾಗಿ ಕೇಳಿಕೊಂಡರೆ ನಮ್ಮ ಸಂವಿಧಾನದಲ್ಲಿ ಇನ್ನಷ್ಟು ತಿದ್ದುಪಡಿಗಳಾಗಬಹುದು..

- ಡಾ. ಸತೀಶ್ ಪಾಟೀಲ್, 
ಸಹಾಯಕ ಪ್ರಾಧ್ಯಾಪಕರು,
ಕೊಟ್ಟೂರು.
ಬಳ್ಳಾರಿ ಜಿಲ್ಲೆ

Thursday, July 28, 2011

ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು?




ಸಂವಿಧಾನವೇ ಜಾತಿ, ಧರ್ಮ, ಸಂಸ್ಕೃತಿಗಿಂತ ಮುಖ್ಯ: ರೂಪ ಹಾಸನ ಪ್ರತಿಕ್ರಿಯೆ


ಪ್ರಜಾವಾಣಿ ಸಂಗತದಲ್ಲಿ ಪ್ರಟಕಗೊಂಡ ರೂಪ ಹಾಸನ್ ಅವರ ಪ್ರಾಣಿ ಬಲಿ ನಿಷೇಧದ ಕುರಿತಾದ ಲೇಖನಕ್ಕೆ ಪ್ರತಿಕ್ರಿಯೆಯ ರೂಪವಾಗಿ ಡಾ. ಅರುಣ್ ಜೋಳದಕೂಡ್ಲಿಗಿ ಪ್ರಾಣಿಬಲಿ ನಿಷೇಧ: ಸರಳೀಕರಣದ ಆತಂಕಗಳು ಎಂಬ ಲೇಖನವನ್ನು ಸಂಪಾದಕೀಯಕ್ಕೆ ಬರೆದಿದ್ದರು. ಸಂಗತದಲ್ಲಿ ಬರೆದಿದ್ದ ರೂಪ ಹಾಸನ್ ಅವರೇ ಇದೀಗ ಅರುಣ್ ಅವರಿಗೆ ಪ್ರತಿಕ್ರಿಯಿಸಿದ್ದಾರೆ. ಚರ್ಚೆ ಮುಂದುವರೆಯಲಿ. ಅಂದ ಹಾಗೆ ರೂಪ ಹಾಸನ್ ಪ್ರತಿಭಾವಂತ ಕವಯಿತ್ರಿ. ಒಂದಿಷ್ಟು ಹಸಿಮಣ್ಣು, ಬಾಗಿಲಾಚೆಯ ಮೌನ ಎಂಬ ಕವನ ಸಂಕಲನಗಳೂ ಸೇರಿದಂತೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ಹಿಂದೆ ಅವರು ಪ್ರಜಾವಾಣಿಯಲ್ಲಿ ಅಂಕಣ ಬರೆದಿದ್ದರು. - ಸಂಪಾದಕೀಯ

ನನ್ನ ಪ್ರಜಾವಾಣಿ ಸಂಗತ ಬರಹಕ್ಕೆ ಇಲ್ಲಿ ಪ್ರತಿಕ್ರಿಯೆ ನೀಡಿರುವ ಅರುಣ್, ಭಾವಾವೇಶಕ್ಕೆ ಒಳಗಾಗಿರುವಂತಿದೆ. ಜೀವಪರ ಹಾಗೂ ಮಾನವೀಯತೆಯ ನೆಲೆಯಲ್ಲಿ ನನ್ನ ಬರಹವಿದೆಯೇ ಹೊರತು ಅರುಣ್ ಅವರು ತಪ್ಪು ತಿಳಿದಂತೆ ಯಾವ ಪರ-ವಿರೋಧ ಅಂಶಗಳೂ ಅದರಲ್ಲಿ ಇಲ್ಲ. ನನ್ನ ಪ್ರಜಾವಾಣಿಯ ಬರಹವನ್ನು ಓದದವರು ವಿಷಯವನ್ನು ತಪ್ಪಾಗಿ ಗ್ರಹಿಸುವ ಸಾಧ್ಯತೆ ಇದೆಯೆಂದು ಈ ದೀರ್ಘ ಪ್ರತಿಕ್ರಿಯೆ ನೀಡುತ್ತಿರುವೆ.

ಅರುಣ್, ತಮ್ಮ ಪೂರ್ವಗ್ರಹ ಉಳ್ಳ ಸಿದ್ಧಾಂತವನ್ನು ವಾಸ್ತವದ ವಸ್ತುಸ್ಥಿತಿಯನ್ನು ಪಕ್ಕಕ್ಕಿಟ್ಟು, ಅಕಡೆಮಿಕ್ ಚೌಕಟ್ಟಿನಲ್ಲಿಯಷ್ಟೇ ಪ್ರಾಣಿಬಲಿಯನ್ನು ಹಿಡಿದಿಡಲು ಪ್ರಯತ್ನಿಸಿದ್ದಾರೆ. ನನ್ನ ಬರಹ, ಬದಲಾದ ಸಂದರ್ಭದಲ್ಲಿ ಪ್ರಾಣಿಬಲಿಯನ್ನು ಕುರಿತು ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿ ವಿಶ್ಲೇಷಿಸಿತ್ತು. ನಮ್ಮ ಸಂವಿಧಾನದ ೫೧ ಎ ಕಲಮ್ ಪ್ರಾಣಿದಯೆಯ ಕುರಿತು ಚರ್ಚಿಸುತ್ತದೆ. ಪ್ರಾಣಿಬಲಿ ತಡೆಗೆ ಸಂಬಂಧಿಸಿದಂತೆ ಕರ್ನಾಟಕ ಪ್ರಾಣಿಬಲಿ ನಿಯಂತ್ರಣ ಕಾಯ್ದೆ- ೧೯೫೯ ಮತ್ತು ಕರ್ನಾಟಕ ಪ್ರಾಣಿಬಲಿ ನಿಯಂತ್ರಣ ನಿಯಮ-೧೯೬೩ ಈಗಾಗಲೇ ಜಾರಿಯಲ್ಲಿದೆ. ಅದನ್ನು ವಿವರವಾಗಿ ಅಧ್ಯಯನ ಮಾಡಿದರೆ ನಿಷೇಧದ ಹಿಂದಿರುವ ಗಂಭೀರತೆ ಅರ್ಥವಾಗಬಹುದು. ಯಾವುದೇ ಕಾನೂನು ವಿವೇಚನೆಯಿಲ್ಲದೇ, ಸರಳವಾಗಿ ಸುಮ್ಮನೆ ರೂಪಿತವಾಗಿಬಿಡುವುದಿಲ್ಲ. ಕೆಲವು ಜಿಲ್ಲಾಡಳಿತಗಳು ಈಗಾಗಲೇ ಕಾನೂನಿನನ್ವಯ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಪ್ರಾಣಿಬಲಿಯನ್ನು ನಿಯಂತ್ರಿಸಿವೆ. ಆದರೆ ಹೆಚ್ಚಿನ ಕಡೆಗಳಲ್ಲಿ ಇದು ಆಗಿಲ್ಲ. ಗಮನಿಸಬೇಕಾದ ಅಂಶವೆಂದರೆ ಈ ಕಾನೂನಿನಡಿಯಲ್ಲಿ ಇದುವರೆಗೂ ಒಬ್ಬರನ್ನೂ ಶಿಕ್ಷಿಸಿಲ್ಲ! ಇದು ಜನರ ಮನೋಭಾವ ಬದಲಾವಣೆಗೆ ಕಾನೂನು ನೀಡಿರುವ ಅವಕಾಶವಿರಬಹುದು!

ಇಂದು ಪ್ರಾಣಿಬಲಿಯೆಂಬ ಮೌಢ್ಯ ಜಾತಿ, ವರ್ಗ, ಪ್ರದೇಶಗಳನ್ನು ಮೀರಿ ಹೇಗೆ ಬೆಳೆಯುತ್ತಿದೆ ಎಂಬುದನ್ನು, ವಿದ್ಯಾವಂತರು, ನಗರ ಪ್ರದೇಶದವರು, ಮೇಲ್ಜಾತಿಯವರೂ, ಮುಖ್ಯವಾಗಿ ರಾಜಕಾರಣಿಗಳು-ಅಧಿಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಪೊಳ್ಳು ಪ್ರತಿಷ್ಟೆಗಾಗಿ ಪ್ರಾಣಿಬಲಿ ನೀಡುತ್ತಿದ್ದಾರೆಂಬುದನ್ನು ಮುಖ್ಯವಾಗಿ ನನ್ನ ಲೇಖನದಲ್ಲಿ ಚರ್ಚಿಸಿದ್ದೆ. ಮತ್ತು ಸಾರ್ವಜನಿಕ ಹಾಗೂ ಸಾಮೂಹಿಕ ಪ್ರಾಣಿಬಲಿಯಲ್ಲಿ ಹಿಂಸೆಯ ವೈಭವೀಕರಣವಾಗುವ, ಹೆಚ್ಚಿನ ಹಿಂಸೆಯಿಂದ ಪ್ರಾಣಿಗಳನ್ನು ಕೊಲ್ಲುವ ಚಿತ್ರಣದ ಜೊತೆಗೆ ನಿತ್ಯ ಪ್ರಾಣಿಬಲಿ ನೀಡುವ ಪ್ರದೇಶಗಳು ಅನೈರ್ಮಲ್ಯದ ತಾಣವಾಗಿ ಮಾರ್ಪಟ್ಟಿರುವುದನ್ನು ವಿವರಿಸಲಾಗಿತ್ತು.

ಯಾವುದೇ ಪ್ರಜ್ಞಾವಂತ ನಾಗರಿಕನಿಗೆ ದೇಶದ ಸಂವಿಧಾನ ಮತ್ತು ಕಾನೂನುಗಳು ಬೇರೆಲ್ಲ ಜಾತಿ, ಧರ್ಮ, ಸಂಸ್ಕೃತಿಗಿಂತಾ ಮುಖ್ಯವೆಂದು ನನ್ನ ನಂಬಿಕೆ. ಹೀಗೆಂದೇ ಧಾರ್ಮಿಕ ಕಂದಾಚಾರದಿಂದಾಗಿ ನಮ್ಮ ಸಮಾಜದಲ್ಲಿ ಬೇರೂರಿದ್ದ ಸತಿ ಸಹಗಮನ, ಬೆತ್ತಲೆಸೇವೆ, ಬಸವಿ, ಜೋಗತಿಯಂತ ಅನಿಷ್ಟ ಆಚರಣೆಗಳನ್ನು ಜೀವವೊಂದರ ಜೊತೆಗೆ ಆಡುವ ಅನಾಗರಿಕ ಕ್ರೌರ್ಯವೆಂದು ಪರಿಗಣಿಸಿ ಕಾನೂನಿನ ಮೂಲಕವೇ ಇವೆಲ್ಲಕ್ಕೂ ಕಡಿವಾಣ ಹಾಕಲಾಯ್ತು. ಅಸಮಾನತೆಯ ವಿರುದ್ಧದ ಎಲ್ಲ ಹೋರಾಟ, ಹಾಗೂ ಚಳವಳಿಗಳೂ ಸಂವಿಧಾನ ಮತ್ತು ಕಾನೂನಿನಡಿಯಲ್ಲೇ ರೂಪಿತವಾಗಿರುವುದು ಗಮನಾರ್ಹ. ಶೋಷಣೆಯ ಅನೇಕ ಸ್ವರೂಪಗಳಿಗೆ ಇಂದಿಗೂ ಕಾನೂನಿನ ಮೂಲಕವೇ ಶೋಷಿತರು ನ್ಯಾಯ ಪಡೆದುಕೊಳ್ಳಲು ಸಾಧ್ಯವಾಗಿದೆ. ಮಹಿಳೆಯರು, ಮಕ್ಕಳನ್ನು ಲೈಂಗಿಕವಾಗಿ ಶೋಷಿಸುವ, ದೌರ್ಜನ್ಯ ನಡೆಸುವ ಅತ್ಯಾಚಾರಿಗೂ ಹಾಗೆ ನಡೆದುಕೊಳ್ಳಲು ಅವನದೇ ಆದ ದೈಹಿಕ-ಮಾನಸಿಕ ಕಾರಣಗಳು ಇದ್ದೇ ಇರುತ್ತವೆ. ಹಾಗೆಂದು ಯಾರೂ ಅಂಥಹವರಿಗೆ ಅದು ತಪ್ಪೆಂದು ಬುದ್ದಿ ಹೇಳುತ್ತಾ ಕೂರುವುದಿಲ್ಲ. ಕಾನೂನಿನ ಕುರುಡಿಗೆ ಕ್ಷಮೆಯಿಲ್ಲ ಎಂಬ ಮಾತು ಎಲ್ಲರಿಗೂ ಅನ್ವಯಿಸುವಂತದ್ದೇ ಆಗಿರುತ್ತದೆ.

ಪ್ರಾಣಿಬಲಿ ನಿಷೇಧ ಯಾವುದೇ ಕಾರಣಕ್ಕೂ ಮಾಂಸಾಹಾರದ ಹಕ್ಕಿನ ನಿಷೇಧವಾಗಲಿ, ಸಹಜವಾಗಿ ಬಳಸಲಾಗುವ ಮಂಸಾಹಾರಕ್ಕೆ ವಿರೋಧವಾಗಲಿ ಅಲ್ಲ ಎಂದು ನನ್ನ ಲೇಖನದಲ್ಲಿ ಒತ್ತುಕೊಟ್ಟು ಹೇಳಿದ್ದೇನೆ. ಅಸಲಿಗೆ ಇದೊಂದು ಮಾಂಸಾಹಾರ-ಸಸ್ಯಾಹಾರ ಸಂಬಂಧಿತ ವಿಷಯವೇ ಅಲ್ಲ. ಇದೊಂದು ಜೀವಪರವಾದ, ಹಿಂಸಾ ವಿರೋಧಿಯಾದ, ಸಂವಿಧಾನ ಬದ್ಧ ವಿಷಯವಷ್ಟೇ ಆಗಿದೆ. ನನ್ನ ಲೇಖನವನ್ನು ಓದಿ ಈ ಅಂಶಗಳಿಗಾಗಿಯೇ ಮೆಚ್ಚಿದವರಲ್ಲಿ ಹೆಚ್ಚಿನವರು ಮಾಂಸಾಹಾರಿಗಳು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಲು ಬಯಸುತ್ತೇನೆ. ಆದರೆ ಪ್ರಾಣಿಬಲಿ ನಿಷೇಧವೆಂದೊಡನೆ ಮಾಂಸಾಹಾರದ ವಿರುದ್ಧವೆಂದು ಪೂರ್ವನಿಶ್ಚಯ ಮಾಡಿಕೊಂಡ ಮನಸುಗಳು ಅದನ್ನು ತಪ್ಪಾಗಿಯೇ ಗ್ರಹಿಸುತ್ತವೆ. ಮೆಲ್ಜಾತಿ, ಮೇಲ್ವರ್ಗದವರ ಮೇಲಿನ ಸೇಡಿಗಾಗಿ ಪ್ರಾಣಿಬಲಿ ನೀಡಿ ಕೆಳಜಾತಿ, ಕೆಳವರ್ಗದವರು ಚೈತನ್ಯ ಪಡೆಯುತ್ತಾರೆ ಎನ್ನುವುದಾದರೆ ಕತ್ತೆ, ನಾಯಿ, ಬೆಕ್ಕುಗಳನ್ನೇಕೆ ಬಲಿ ನೀಡುವುದಿಲ್ಲ? ಹೋಗಲಿ ಚೈತನ್ಯ ಪಡೆಯಲಾದರೂ ಎಲ್ಲೆಂದರಲ್ಲಿ ಸಿಕ್ಕುವ ಅವುಗಳನ್ನೇಕೆ ಹಾಗೇ ಕೊಲ್ಲುವುದಿಲ್ಲ? ಆಹಾರಕ್ಕಾಗಿ ಬಳಸಲಾಗುವ ಪ್ರಾಣಿಗಳನ್ನೇ ಬಲಿಯಾಗಿಯೂ ನೀಡಲಾಗುತ್ತದೆ ಎಂಬುದು ನಿರ್ವಿವಾದ. ಹಾಗಿದ್ದಾಗ ಅದನ್ನು ಖಾಸಗಿಯಾಗಿ, ಶುದ್ಧ ಮತ್ತು ಆರೋಗ್ಯಕರವಾಗಿ ಉಪಯೋಗಿಸುವಂತೆ ಜನರಲ್ಲಿ ಅರಿವು ಮೂಡಿಸುವುದೂ ಮುಖ್ಯ. ಈ ಕೆಲಸ ಸಾಮಾಜಿಕ ಕಾರ್ಯಕರ್ತರಿಂದ ಅಲ್ಲಲ್ಲಿ ನಡೆಯುತ್ತಲೇ ಇದೆ.

ಆದರೆ ರಾಜಕಾರಣಿಗಳಿಗೆ, ಸಮಾಜದ ಗಣ್ಯ ವ್ಯಕ್ತಿಗಳಿಗೆ ಅರಿವು ಮೂಡಿಸುವುದು ಹೇಗೆ? ಒಂದೆಡೆ ಗೋಹತ್ಯೆ ನಿಷೇಧಕ್ಕೆ ಕಾನೂನು ತರಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ. ಇನ್ನೊಂದೆಡೆ, ಪ್ರಸ್ತುತ ಸರ್ಕಾರ ಉಳಿದಿದ್ದಕ್ಕೆ ಕೆಲವು ತಿಂಗಳ ಹಿಂದಷ್ಟೇ ೨೦೦ ಕುರಿಗಳನ್ನು ಬಿಜೆಪಿ ಶಾಸಕರೊಬ್ಬರು ಬಲಿ ನೀಡಿದ್ದನ್ನು ನನ್ನ ಪ್ರಜಾವಾಣಿ ಲೇಖನದಲ್ಲಿ ಪ್ರಸ್ತಾಪಿಸಿರುವೆ. ಇರುವ ಕಾನೂನನ್ನು ಗೌರವಿಸದ, ಇಂತಹ ಅಧಿಕಾರಸ್ಥರು, ವಿದ್ಯಾವಂತರು, ಪ್ರಜ್ಞಾವಂತರಿಗೆ ಯಾರು ತಿಳುವಳಿಕೆ ನೀಡಬಲ್ಲರು? ಕಾನೂನಿನ ನಿಯಮಗಳು ಶಕ್ತಿಯುತವಾಗಿದ್ದರೆ ಅದನ್ನು ಮುಂದು ಮಾಡಿ ಜಾಗೃತಿ ಮೂಡಿಸುವುದು ಸುಲಭ ಮತ್ತು ವೈಜ್ಞಾನಿಕ ಮಾದರಿಯಾಗಿದೆ. ಪತ್ರಿಕಾ ಬರಹಗಳು ಕೂಡ ಬಹುಸಂಖ್ಯಾತರಿಗೆ ಏಕಕಾಲಕ್ಕೆ ತಿಳಿವು ನೀಡುವ ಒಂದು ಸಾಧನ. ಅದನ್ನು ಬೌದ್ಧಿಕ ತರ್ಕ, ಸಿದ್ಧಾಂತಗಳಿಂದ ಸಂಕೀರ್ಣಗೊಳಿಸದೇ, ಪ್ರಸ್ತುತ ಸಮಾಜ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಸರಳವಾಗಿ ಹೇಳಬೇಕಾಗಿರುವುದು ಅನಿವಾರ್ಯ. ಮತ್ತು ಅದನ್ನು ಸಂವಿಧಾನದ ಚೌಕಟ್ಟಿನಲ್ಲಿಯೇ ಹೇಳಬೇಕಾದ್ದು ಇನ್ನೂ ಅನಿವಾರ್ಯ ಎಂಬುದು ಓರ್ವ ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ನನ್ನ ನಂಬಿಕೆ.

ಯಕಶ್ಚಿತ್ ಕಾನೂನಿನಿಂದ ಜನರ ಧಾರ್ಮಿಕ ನಂಬಿಕೆಗಳನ್ನು ಬದಲಿಸಲು ಸಾಧ್ಯವೇ ಎಂಬುದು ಅರುಣ್ ಪ್ರಶ್ನೆ. ಈಗ್ಗೆ ಒಂದು ವರ್ಷದ ಹಿಂದೆ ಸುಪ್ರೀಂಕೋರ್ಟ್‌ನ ಆದೇಶದಂತೆ ದೇಶಾದ್ಯಂತ ರಸ್ತೆ ಸಂಚಾರಕ್ಕೆ ಅಡ್ಡಿಯಾಗುವ, ರಸ್ತೆ ಮಧ್ಯೆ, ಬದಿಯಲ್ಲಿರುವ ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ಮುಲಾಜಿಲ್ಲದೇ ಕೆಲವೇ ದಿನಗಳಲ್ಲಿ ಎತ್ತಂಗಡಿ ಮಾಡಲಾಯ್ತು. ಮತ್ತೆ ಕೆಲವನ್ನು ನಿರ್ನಾಮ ಮಾಡಲಾಯ್ತು. ಯಾರೂ ಏಕೆ ಅದನ್ನು ವಿರೋಧಿಸಲಿಲ್ಲ? ಆಗ ಜನರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗಲಿಲ್ಲವೇ? ಕಾಡುಗಳಲ್ಲಿ ಪ್ರಾಣಿಬೇಟೆಯನ್ನೂ ನಿಷೇಧಿಸಲಾಗಿದೆ. ಆದಿವಾಸಿ, ಗಿರಿಜನರಿಗೂ ಈ ಕಾನೂನು ಅನ್ವಯಿಸುತ್ತದೆ. ಹಾಗಿದ್ದರೆ ಇದು ಅವರ ನಂಬಿಕೆ, ಸಂಸ್ಕೃತಿ, ಆಚರಣೆ, ಆಹಾರಪದ್ಧತಿಯ ಮೇಲಿನ ಹಲ್ಲೆಯಲ್ಲವೇ? ಅದನ್ನೇಕೆ ಯಾರೂ ವಿರೋಧಿಸುತ್ತಿಲ್ಲ?

ನಗರ ಪ್ರದೇಶದವರು, ಸುಶಿಕ್ಷಿತರು ಗ್ರಾಮಪ್ರದೇಶಗಳಿಗೆ ಹೋಗಿ ಪೊಳ್ಳು ಪ್ರತಿಷ್ಟೆಯ ಹೆಸರಿನಲ್ಲಿ ಬಹುಸಂಖ್ಯೆಯಲ್ಲಿ ಪ್ರಾಣಿಬಲಿ ನೀಡುವ ಮೂಲಕ ಅಲ್ಲಿನ ವಾತಾವರಣವನ್ನು ಕೆಡಿಸುತ್ತಿದ್ದಾರೆಂಬ ವಿಷಯ ನನ್ನ ಲೇಖನದಲ್ಲಿ ಪ್ರಸ್ತಾಪಿತವಾಗಿದೆಯೇ ಹೊರತು ಹಳ್ಳಿಗರನ್ನು, ಅನಾಗರಿಕರು ಎಂದು ಎಲ್ಲಿಯೂ ಹೇಳಿಲ್ಲ. ಅನೇಕ ಧಾರ್ಮಿಕ ಆಚರಣೆಗಳನ್ನು ಪ್ರಸ್ತಾಪಿಸಿರುವ ಅರುಣ್ ಅವುಗಳು ಮೌಢ್ಯವಲ್ಲವೇ ಎಂದು ಕೇಳುತ್ತಾರೆ. ಖಂಡಿತಾ ಅವು ಮೌಢ್ಯವೇ. ಆದರೆ ಪ್ರಾಣಿಬಲಿಯಲ್ಲಿ ಜೀವವೊಂದನ್ನು ಹಿಂಸೆಯಿಂದ ಕೊಲ್ಲಲಾಗುತ್ತದೆ ಎಂಬುದು ಕಾನೂನಿನ ದೃಷ್ಟಿಯಿಂದ ಗಮನಾರ್ಹವಾದ ಅಂಶ. ಏನು ಮಾಡುವುದು? ನಮ್ಮ ಸಂವಿಧಾನ ಪ್ರಾಣಿಯನ್ನು ಸಹ ಜೀವವೆಂದು ಪರಿಗಣಿಸುತ್ತದೆ! ನಮ್ಮ ಸಂವಿಧಾನವನ್ನು ರೂಪಿಸಿದವರು ಅಂಬೇಡ್ಕರ್ ಎಂಬ ಮಹಾನ್ ವ್ಯಕ್ತಿ ಎಂಬುದನ್ನು ಮತ್ತೊಮ್ಮೆ ನೆನಪಿಸುತ್ತೇನೆ. ಇದು ತಪ್ಪು ಎನ್ನುವುದಾದರೆ ನಮ್ಮ ಸಂವಿಧಾನಕ್ಕೇ ತಿದ್ದುಪಡಿ ತರಬೇಕಷ್ಟೇ!

ಸೀಮಿತ ಅಕಡೆಮಿಕ್ ಚೌಕಟ್ಟುಗಳನ್ನು ಬಿಟ್ಟು ನಿತ್ಯ ಪ್ರಾಣಿಬಲಿ ನಡೆಯುವ ನಾಲ್ಕು ಪ್ರದೇಶಗಳನ್ನು ಕ್ಷೇತ್ರಕಾರ್ಯ ಮಾಡಿ, ಅಧ್ಯಯನ ಮಾಡಿದರೆ ಪ್ರಸ್ತುತ ಸಂದರ್ಭದಲ್ಲಿ ಪ್ರಾಣಿಬಲಿಯ ಸ್ವರೂಪ ಹೇಗೆ ಬದಲಾಗುತ್ತಿದೆ, ಮತ್ತು ಅದು ಹೇಗೆ ಪೊಳ್ಳು ಸಂಸ್ಕೃತಿಯಾಗಿ ಮೌಢ್ಯದ ಹೆಸರಲ್ಲಿ ವಿಜೃಂಭಿಸುತ್ತಿದೆ ಎಂಬುದು ಅರ್ಥವಾಗುತ್ತದೆ.

ಇದೆಲ್ಲ ಚರ್ಚೆಗಳಾಚೆಗೂ, ಇದೇ ಜುಲೈ ೧೨ ರಂದು ಪ್ರಾಣಿಬಲಿ ಕಾಯ್ದೆ ಉಲ್ಲಂಘಿಸಿ ಸಾರ್ವಜನಿಕವಾಗಿ  ಪ್ರಾಣಿಬಲಿ ಕೊಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಕರ್ನಾಟಕ ಹೈಕೋರ್ಟ್‌ಗೆ,  ರಾಜ್ಯ ಸರ್ಕಾರ ಮುಚ್ಚಳಿಕೆ ಬರೆದುಕೊಟ್ಟಿರುವುದು ಗಮನಾರ್ಹವಾದ ವಿಷಯ.


 -ರೂಪ ಹಾಸನ

Wednesday, July 27, 2011

ಪ್ರಾಣಿಬಲಿ ನಿಷೇಧ: ಸರಳೀಕರಣದ ಆತಂಕಗಳು

ಪ್ರಾಣಿ ಬಲಿ ನಿಷೇಧದ ಕುರಿತಾಗಿ ಪತ್ರಿಕೆಗಳಲ್ಲಿ ಮತ್ತೆ ಮತ್ತೆ ವರದಿಗಳು ಪ್ರಕಟವಾಗುತ್ತಿರುತ್ತವೆ, ಈ ವರದಿಗಳಲ್ಲಿ ಆ ವಿಷಯವನ್ನು ತುಂಬಾ ಸರಳೀಕರಿಸುತ್ತವೆ ಎಂಬುದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಯೋಜನಾ ಸಹಾಯಕ ಡಾ. ಅರುಣ್ ಜೋಳದಕೂಡ್ಲಿಗಿ ಅವರ ವಾದ. ಪ್ರಾಣಿಬಲಿ  ನಿಷೇಧ ಆಗಬೇಕು, ಆದರೆ ಆ ವಿಷಯವನ್ನು ತುಂಬಾ ಸರಳವಾಗಿ ನೋಡಲಾಗದು. ಹಾಗಾಗಿ ಪ್ರಾಣಿಬಲಿ ಕುರಿತು ಇನ್ನೊಂದು ಮಗ್ಗಲಲ್ಲಿ ಯೋಚಿಸಲು ಅನುವಾಗಬೇಕು ಎನ್ನುವ ಅರುಣ್ ಬರೆದ ಲೇಖನ ಇಲ್ಲಿದೆ. ಚರ್ಚೆಗೆ ಸ್ವಾಗತ. ಅರುಣ್ ಜೋಳದಕೂಡ್ಲಿಗಿ ಹೊಸ ತಲೆಮಾರಿನ ಜಾನಪದ ಸಂಶೋಧಕರು. ಅವರ ಬ್ಲಾಗ್ ಕನ್ನಡ ಜಾನಪದ.
-ಸಂಪಾದಕೀಯ

ಪ್ರಜಾವಾಣಿಯಲ್ಲಿ ಜುಲೈ ೬ ರ ಸಂಗತ ಬರಹ (ರೂಪ ಹಾಸನ) ಜುಲೈ ೧೩ ರ ವಾಚಕರವಾಣಿ (ಎಸ್.ತಾರಾನಾಥರ ಪತ್ರ) ಗಳನ್ನು ನೋಡಿದೆ. ಇಂತಹ ಬರಹ ಪತ್ರಿಕಾ ವರದಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುತ್ತದೆ. ಇಲ್ಲಿ ಪ್ರಾಣಿಬಲಿ ನಿಷೇಧದಬಗ್ಗೆ ಕಾಳಜಿ ವ್ಯಕ್ತವಾಗಿದೆ. ಅಂತೆಯೇ ಇಬ್ಬರೂ ಪ್ರಾಣಿಬಲಿಯನ್ನು ಮೌಢ್ಯ, ಇಂತಹ ಅನಾಗರಿಕ ಆಚರಣೆಯನ್ನು ನಾಗರಿಕರೊಬ್ಬರು ಸರಿಪಡಿಸುವ ಜವಾಬ್ದಾರಿಯಂತೆ ಹೇಳಿದ್ದಾರೆ. ಈ ಎರಡೂ ಬರಹಗಳು ಪ್ರಾಣಿ ಬಲಿಯನ್ನು ಸರಳವಾಗಿ ಗ್ರಹಿಸಿದಂತೆ ಕಾಣುತ್ತದೆ.  ಹೀಗೆ ವಿಚಾರ ಮಂಡಿಸುವುದು ಸುಲಭ, ಆದರೆ ಅದರ ಸಂಕೀರ್ಣ ಸ್ವರೂಪವನ್ನು ಅರ್ಥ ಮಾಡಿಕೊಂಡು ನಿಷೇಧದ ಬಗ್ಗೆ ಮಾತನಾಡುವುದು ಒಳಿತು.

ಪ್ರಾಣಿಬಲಿ ಆಚರಣೆ ನಿಷೇಧ ಆಗಬೇಕೆನ್ನುವುದು ಎಲ್ಲರ ಸದಾಶಯ. ಆದರೆ ಅದನ್ನು ಕಾನೂನಿನ ಮೂಲಕ ಹೊರಗಿನಿಂದ ನಿಯಂತ್ರಿಸಲು ಎಂದಿಗೂ ಸಾದ್ಯವಾಗದು. ಬದಲಾಗಿ ಮೊದಲು ಪ್ರಾಣಿಬಲಿ ಕುರಿತ ಚಾರಿತ್ರಿಕ ಹಿನ್ನೆಲೆಯನ್ನು ಅರಿತು, ಬುಡಮಟ್ಟದಿಂದ ಕೆಲ ಸಾಮಾಜಿಕ ಬದಲಾವಣೆಗಳಿಗೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕು. ಹಾಗಾದಲ್ಲಿ ನಿಧಾನಕ್ಕೆ ಜನರ ಒಳಗೇ ಪ್ರಾಣಿಬಲಿ ನಿಷೇಧದ ಭಾವನೆ ಬರುವಂತೆ ಮಾಡುವ ಅಗತ್ಯವಿದೆ.

ಪ್ರಾಣಿಬಲಿ  ದಮನಿತ ಮುದಾಯಗಳು ಕಟ್ಟಿಕೊಂಡ ಪ್ರತಿಸಂಸ್ಕೃತಿ. ಮೇಲ್ವರ್ಗ, ಮೇಲ್ಜಾತಿ ಸಮುದಾಯಗಳು ತಮ್ಮ ಆಚರಣೆ ಪರಂಪರೆಯನ್ನು ಶ್ರೇಷ್ಠ ಎಂದೂ, ಕೆಳಜಾತಿಗಳ ಆಚರಣೆ ಮತ್ತು ಬದುಕಿನ ರೀತಿಯನ್ನು ಕನಿಷ್ಠ ಎಂದೂ  ಬಾವಿಸುತ್ತವೆ. ಹಾಗಾಗಿ ಪ್ರಾಣಿಬಲಿ ಅನಾಗರಿಕ ಆಚರಣೆಯಂತೆ ಕಾಣುತ್ತದೆ.  ತಳಸಮುದಾಯಗಳು ಮೇಲ್ವರ್ಗ ಕಟ್ಟಿದ ಪಾವಿತ್ರ್ಯದ ನಾಶ ಮಾಡಲು, ಕೀಳೆಂದು ನಿರಾಕರಿಸದ್ದನ್ನು ಈ ಸಮುದಾಯಗಳು ತಮ್ಮ ಸಂಸ್ಕೃತಿಯ ಭಾಗವನ್ನಾಗಿಸಿಕೊಂಡಿರುತ್ತವೆ. (ನೋಡಿ: ರಹಮತ್ ತರೀಕೆರೆ ಅವರ ಪ್ರತಿಸಂಸ್ಕೃತಿ ಪುಸ್ತಕ) ಹಾಗಾಗಿ ಪ್ರಾಣಿಬಲಿ ನಿಷೇಧದ ಆತಂಕ ಏಕಕಾಲದಲ್ಲಿ ದಮನಿತ ಸಮುದಾಯಗಳ ಸಂಸ್ಕೃತಿಯ ನಿರಾಕರಣೆಯೂ ಆಗಿರುತ್ತದೆ.

ಪ್ರಾಣಿ ಬಲಿ ನಿಷೇಧ, ಕೊನೆಗೆ ಮಾಂಸಾಹಾರ ನಿಷೇಧದ ಕಡೆ ವಾಲುತ್ತದೆ. ಅಥವಾ ಮಾಂಸಾಹಾರ ನಿಷೇದದ ಬಗೆಗೆ ಒಲವಿರುವವರು ಸಹ ಪ್ರಾಣಿಬಲಿ ನಿಷೇಧವಾಗಬೇಕೆಂದು ಹೇಳುತ್ತಿರುತ್ತಾರೆ. ಇದು ಮಾಂಸ ಉಣ್ಣುವವರ ಆಹಾರದ ಹಕ್ಕಿನ ಪ್ರಶ್ನೆ. ಹಾಗಾಗಿ ಇಡೀ ಪ್ರಾಣಿ ಬಲಿ ಕುರಿತ ವಿಷಯವನ್ನು ತಿಳಿಯುವಲ್ಲಿಯೇ ತೊಡಕಿದೆ. ಪ್ರಾಣಿಬಲಿಯನ್ನು ಮೌಡ್ಯ ಎಂದು ಕರೆಯಲಾಗುತ್ತದೆ. ಆದರೆ ದೇವರನ್ನು ನಿರಾಕರಿಸಲಾಗದ ಯಾವುದೇ ಆಚರಣೆ ಕೂಡ ಮೂಡನಂಬಿಕೆ ಅಥವಾ ಮೌಡ್ಯ. ಮಠಾಧೀಶರುಗಳ ತುಲಾಬಾರ, ಬ್ರಾಹ್ಮಣರ ವ್ರತಾಚರಣೆ, ಕ್ರೈಸ್ತರ ಯೇಸು ಪ್ರಾರ್ಥನೆ, ಮುಸ್ಲೀಮರ ನಮಾಜು, ಹಿಂದುಗಳ ದೈವಾರಾಧನೆ ಈ ಎಲ್ಲವೂ ಮೌಡ್ಯವಲ್ಲದೆ ಮತ್ತೇನು? ಮೌಡ್ಯದ ನಿಷೇಧವಾಗಬೇಕೆಂದು ನಾವು ಭಾವಿಸುವುದಾದರೆ ಇವೆಲ್ಲವುಗಳ ನಿಷೇಧಕ್ಕೂ ನಾವು ಒತ್ತಾಯಿಸುವ ಅಗತ್ಯವಿದೆ.

ಪ್ರಾಣಿಬಲಿ ಆಚರಣೆಯನ್ನು ಕೇವಲ ಮೌಡ್ಯ ಎಂದು ಮಾತ್ರ ವಿವರಿಸಲಾಗುತ್ತಿದೆ. ಆದರೆ ಪ್ರಾಣಿಬಲಿಗೆ ಕೇವಲ ಮೌಡ್ಯವಲ್ಲದ ಮತ್ತೊಂದು ಆಯಾಮವಿದೆ. ಅದು ತಳಸಮುದಾಯ ಪ್ರಾಣಿ ಬಲಿಯಿಂದಾಗಿ ಬದುಕಿಗೆ ಪಡೆಯಬಹುದಾದ ಚೈತನ್ಯದ ಸಂಗತಿ.  ಇಡೀ ಪ್ರಾಣಿ ಬಲಿ ಆಚರಣೆಯನ್ನು ತುಂಬಾ ಸೂಕ್ಷ್ಮವಾಗಿ ಅವಲೋಕಿಸಿದಾಗ ಮಾತ್ರ ಇದು ಕಾಣುತ್ತದೆ. ಸಾಮಾನ್ಯವಾಗಿ ಹಳ್ಳಿಗಳ ಜಾತಿ  ಸಮೀಕರಣದ ರಚನೆಯ ಒಳಗೇ ಪ್ರಾಣಿಬಲಿಗೆ ಒಂದು ವಿಚಿತ್ರ ರೀತಿಯ ಸಂಬಂಧವಿದೆ. ಇಂತಹ ಸಮೀಕರಣದ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳದ ಯಾರಿಗಾದರೂ, ಇದು ಅನಾಗರಿಕವಾದುದು ಎಂದು ಅನ್ನಿಸದೇ ಇರದು. ಪ್ರಾಣಿಬಲಿಗೂ ಮುನ್ನ ಮೊಚ್ಚು, ಕಂದೀಲು ಹಿಡಿದು ಕುಣಿಯುವಿಕೆ ಇರುತ್ತದೆ, ಈ ಕುಣಿತದಲ್ಲಿ ತಳಸಮುದಾಯಗಳು ರೋಷಾವೇಷ ತಂದುಕೊಂಡು ಕುಣಿಯುತ್ತಾರೆ. ಆಗ ಅಕ್ಷರಶಃ ಮಾನಸಿಕವಾಗಿ ಅವರುಗಳು ಒಂದು ಬಗೆಯ ಬಿಡುಗಡೆ ಪಡೆಯುತ್ತಾರೆ ಅನ್ನಿಸುತ್ತದೆ.

ಪ್ರಾಣಿಬಲಿಗಳು ನಡೆಯುವುದು ಬಹುಪಾಲು ಹಳ್ಳಿಗಳಲ್ಲಿ. ಅಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಿ ಬಲಿ ಮಾಡುವುದು ದಲಿತರು, ಮತ್ತು ಕೆಳವರ್ಗದ, ಹಿಂದುಳಿದ ಜನರು. ಈ ಜನರು ಪ್ರಾಣಿಬಲಿ ಆಚರಣೆ ಮಾಡುತ್ತಾ ಬಂದಿರುವುದಕ್ಕೆ ದೊಡ್ಡ ಚರಿತ್ರೆ ಇದೆ. ಇಂತಹುದನ್ನು ಒಂದು ಯಕಶ್ಚಿತ್ ಕಾನೂನು ನಿಲ್ಲಿಸಿಬಿಡುವಷ್ಟು ಸರಳವೆ?  ಪ್ರಾಣಿಬಲಿಯನ್ನು ವಿರೋಧಿಸುವವರಲ್ಲಿ ಬಹುಪಾಲು ಜನ ಮೇಲ್ವರ್ಗದವರು. ಮುಖ್ಯವಾಗಿ ಇದರಲ್ಲಿ ಮಾಂಸಾಹಾರ ಸೇವಿಸದವರ ಸಂಖ್ಯೆ ಹೆಚ್ಚು. ಅದರಲ್ಲಿ ಕೆಲವರು ಸುಶಿಕ್ಷಿತರು. ಇವರುಗಳು ಪ್ರಾಣಿಬಲಿ ಎನ್ನುವುದು ಅನಾಗರಿಕ ವರ್ತನೆ, ಈ ವರ್ತನೆಯ ಕಾರಣಕ್ಕೆ  ಹಳ್ಳಿಗರನ್ನು ಅನಾಗರಿಕರೆಂದೂ ಸಮೀಕರಿಸಿ ಸುಖ ಪಡುವ ವರ್ಗದವರು ಇದ್ದಾರೆ. ಇಂಥವರು ಪ್ರಾಣಿಬಲಿಯನ್ನು ವಿರೋಧಿಸುವ ಕಾರಣಕ್ಕೆ ತಮ್ಮನ್ನು ತಾವು ನಾಗರಿಕರೆಂದು ಕರೆದುಕೊಂಡು ಖುಷಿಪಡುವ ಮನಸ್ಥಿತಿಯವರು.

ನಾವು ಸಾಮಾಜಿಕ ಬದಲಾವಣೆಯನ್ನು ನಗರಗಳ ಕಣ್ಣೋಟದಿಂದ ನೋಡುತ್ತಿರುತ್ತೇವೆ. ಆದರೆ ಹಳ್ಳಿಗಳ ಕಣ್ಣೋಟದಿಂದ ಸಾಮಾಜಿಕ ಬದಲಾವಣೆಯನ್ನು, ಜಾತಿ ಪದ್ದತಿಯನ್ನು ನೋಡಲು ಸಾದ್ಯವಾದರೆ ಪ್ರಾಣಿಬಲಿ ಆಚರಣೆಯ ಮತ್ತೊಂದು ಮುಖ ಹೊಳೆಯುತ್ತದೆ. ಈಗಲೂ ಲಕ್ಷಾಂತರ ಹಳ್ಳಿಗಳ ದಲಿತರು, ಕೆಳಜಾತಿಗಳು ಮೇಲ್ವರ್ಗದಿಂದ ಶೋಷಣೆಗೆ ಒಳಗಾಗಿವೆ. ಈ ಶೋಷಣೆಯ ರೂಪಗಳು ಈಗ ಬದಲಾಗಿವೆ. ಹಾಗಾಗಿ ಈಗಲೂ ದಲಿತರು, ಕೆಳಜಾತಿಗಳು ಮೇಲ್ವರ್ಗದ ಮೇಲಿನ ಮನಸ್ಸಿನಲ್ಲಿ ಹುದುಗಿಟ್ಟುಕೊಂಡ ಸೇಡನ್ನು ಪ್ರಾಣಿಬಲಿ ಮೂಲಕ ತೀರಿಸಿಕೊಂಡು ಮಾನಸಿಕವಾಗಿ ಹಗುರಾಗುವ ಬಗ್ಗೆ ನಾವು ಆಲೋಚನೆ ಮಾಡಬೇಕಾಗಿದೆ. ಆ ನಂತರ ತಮ್ಮ ಕೀಳರಿಮೆಗಳನ್ನು ಕಳೆದುಕೊಂಡು ಬದುಕಲು ಹೊಸ ಚೈತನ್ಯವನ್ನು ಪಡೆಯುತ್ತಾರೆ. ಹಾಗಾಗಿ ಪ್ರಾಣಿಬಲಿ ಬಗ್ಗೆ ಚಕಾರವೆತ್ತುವ ನಾವುಗಳು ಮೇಲ್ಜಾತಿಗಳು ಕೆಳಜಾತಿಗಳ ಮೇಲೆ ಮಾಡುವ ಶೋಷಣೆಗಳ ಬಗ್ಗೆ ಮೊದಲು ಚಕಾರವೆತ್ತಬೇಕಾಗಿದೆ.

ಹಾಗಾಗಿ ನಾವು ಪ್ರಾಣಿಬಲಿ ನಿಷೇಧದ ಬಗ್ಗೆ ಮಾತನಾಡುವ ನಾವುಗಳು, ಈ ಬಗೆಯ ಮೇಲ್ವರ್ಗದ ಶೋಷಣೆಯ ಕಾರಣಕ್ಕೆ ಹಳ್ಳಿಗಳ ಮತ್ತು ಗ್ರಾಮೀಣ ಭಾಗದಲ್ಲಿ ಕೆಳವರ್ಗದ ಜಾತಿಗಳು, ದಲಿತರು ಪಡುವ ಶೋಷಣೆಯನ್ನು, ಆ ಶೋಷಣೆಯ ಕಾರಣಕ್ಕೆ ಅವರುಗಳು ಬೆಳೆಸಿಕೊಳ್ಳುವ ಕೀಳಿರಿಮೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿ ಸರಕಾರವಾಗಲಿ, ಸುಶಿಕ್ಷಿತ ವರ್ಗವಾಗಲಿ ಏನು ಮಾಡಿದೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ.  ಪ್ರಾಣಿಬಲಿ ಬಗ್ಗೆ ಪುಂಕಾನುಪುಂಕವಾಗಿ ಬರೆದು ಪ್ರಾಣಿದಯೆಯನ್ನು ತೋರುವ ಬರಹಗಾರರು ಇದನ್ನೇಕೆ ನೋಡಲು ಸಾದ್ಯವಾಗುತ್ತಿಲ್ಲ? ಸುಶಿಕ್ಷಿತರಾದವರಿಗೆ ಪ್ರಾಣಿ ಬಲಿ ಹಿಂಸೆಯಂತೆ ಕಾಣುತ್ತದೆನ್ನುವುದಾದರೆ, ಪ್ರಾಣಿಬಲಿ ಕೊಡುವ ಸಮುದಾಯಗಳಲ್ಲಿ ಅದನ್ನು ಹಿಂಸೆಯನ್ನಾಗಿ ಕಾಣುವ ಶಿಕ್ಷಣವನ್ನಾಗಲಿ, ಸಾಮಾಜಿಕ ಪ್ರಜ್ಞೆಯನ್ನಾಗಲಿ, ಆರ್ಥಿಕ ಬದಲಾವಣೆಯ ಪರ್ಯಾಯವನ್ನಾಗಲಿ ಎಷ್ಟರಮಟ್ಟಿಗೆ ಕೊಡಲಾಗಿದೆ ಎಂದು ಯೋಚಿಸುವ ಅಗತ್ಯವಿದೆ. ನಾನಿಲ್ಲಿ ಪ್ರಾಣಿಬಲಿಯನ್ನು ಬೆಂಬಲಿಸುತ್ತಿಲ್ಲ, ಬದಲಾಗಿ ಬಹುಸಂಸ್ಕೃತಿಯ ದೇಶದಲ್ಲಿ ಬದುಕುತ್ತಿರುವ ನಾವುಗಳು, ಅದನ್ನು ಕಾನೂನು ಗ್ರಹಿಸಿದಂತೆ ಸರಳವಾಗಿ ಗ್ರಹಿಸುವುದು ಕಷ್ಟ ಎಂದು ಮಾತ್ರ ಹೇಳಲು ಇಚ್ಚಿಸುತ್ತೇನೆ.
-ಡಾ. ಅರುಣ್ ಜೋಳದ ಕೂಡ್ಲಿಗಿ
ವಿಳಾಸ: ಯೋಜನಾ ಸಹಾಯಕ, ದರ್ಪಣ ಕಟ್ಟಡ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.

ಕೊನೆಮಾತು: ನಿನ್ನೆ ಬರೆದ ಹಾಗೆಯೇ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಸಮಯ ನ್ಯೂಸ್ ಚಾನಲ್‌ನ ಮುಖ್ಯಸ್ಥರಾಗಿ ರಾತ್ರಿ ೮ ಗಂಟೆಯ ಸುಮಾರಿಗೆ ಅಧಿಕಾರ ಸ್ವೀಕರಿಸಿದ್ದಾರೆ. ಸಂಪಾದಕೀಯ ಓದುಗರೆಲ್ಲರ ಪರವಾಗಿ ಜಿ.ಎನ್.ಮೋಹನ್‌ರಿಗೆ ಶುಭಾಶಯ ಹಾಗು ಅಭಿನಂದನೆಗಳು. ಚಾನಲ್ ಜನಮುಖಿಯಾಗಿರಲಿ ಎಂಬುದು ನಮ್ಮ ಏಕೈಕ ಅಪೇಕ್ಷೆ.

Tuesday, July 26, 2011

ಸಮಯದ ಸಾರಥ್ಯ ಜಿ.ಎನ್. ಮೋಹನ್ ವಹಿಸಲಿದ್ದಾರೆಯೇ?


 ಸಮಯದಲ್ಲಿನ ಗಲಿಬಿಲಿಗಳ ಬಗ್ಗೆ ಬರೆದಿದ್ದೆವು, ನೀವು ಗಮನಿಸಿರಬಹುದು. ಶಶಿಧರ ಭಟ್ಟರು ಚಾನಲ್ ಬಿಡಲಿದ್ದಾರೆಯೇ ಎಂಬುದು ನಮ್ಮ ಪ್ರಶ್ನೆಯಾಗಿತ್ತು. ಭಟ್ಟರು ಮರುದಿನ ತಮ್ಮ ಫೇಸ್ ಬುಕ್‌ನಲ್ಲಿ ಮತ್ತೆ ಬರೆದದ್ದು ಹೀಗೆ: ನಿನ್ನೆಯಿಂದ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ನನಗೆ ಬಂದಿದ್ದು ಸಾವಿರಾರು ಕರೆಗಳು. ಈ ಪ್ರೀತಿಗೆ ವಿಶ್ವಾಸಕ್ಕೆ ನಾನು ಹೇಗೆ ಕೃತಜ್ಞತೆಯನ್ನು ಸಲ್ಲಿಸಲಿ? ಅಲ್ಲಿಗೆ ಭಟ್ಟರ ವಿದಾಯದ ಮಾತಿಗೆ ಮತ್ತಷ್ಟು ಪುಷ್ಠಿ ದೊರೆತಂತಾಗಿತ್ತು.

ಭಟ್ಟರು ನಿರ್ಗಮಿಸಿದರೆ ಅವರ ಸ್ಥಾನಕ್ಕೆ ಯಾರು ಬರಬಹುದು ಎಂಬ ಪ್ರಶ್ನೆಯನ್ನೂ ಎತ್ತಿದ್ದೆವು. ಬಹುತೇಕ ಈ ಪ್ರಶ್ನೆಗೂ ಉತ್ತರ ಆಖೈರಾದ ಹಾಗೆ ಕಾಣುತ್ತಿದೆ. ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಸಮಯದ ಚಾನಲ್ ಹೆಡ್ ಆಗಿ ಬರಲಿರುವವರು ಹಿರಿಯ ಪತ್ರಕರ್ತ ಜಿ.ಎನ್.ಮೋಹನ್. ಹೀಗಾಗಿ ಮಹತ್ವಾಕಾಂಕ್ಷೆಯ ಜ್ವರದಲ್ಲಿ ಬೇಯುತ್ತಿರುವವರು ಇನ್ನಷ್ಟು ಕಾಲ ಕಾಯಬೇಕು, ಮತ್ತಷ್ಟು ಬೇಯಬೇಕು ಎಂದಾಯಿತು.

ಒಂದು ವೇಳೆ ಜಿ.ಎನ್.ಮೋಹನ್ ಸಮಯದ ಸಾರಥ್ಯ ವಹಿಸುವುದೇ ಆದರೆ ಅದು ಅವರ ಪಾಲಿನ ಮತ್ತೊಂದು ದೊಡ್ಡ ಸಾಹಸವಾಗಬಹುದು. ಇತ್ತೀಚಿಗೆ ಶುರುವಾದ ಜನಶ್ರೀ ವಾಹಿನಿಯೇ ಸಮಯವನ್ನು ಹಿಂದಕ್ಕೆ ಬಿಟ್ಟು ಟಿಆರ್‌ಪಿಯಲ್ಲಿ ಮುಂದಿದೆ. ಹೀಗಿರುವಾಗ ಮತ್ತೆ ಬುಡದಿಂದಲೇ ಚಾನಲ್ ಕಟ್ಟುವ ಕೆಲಸ ಮಾಡಬೇಕಾಗುತ್ತದೆ. ನ್ಯೂಸ್ ಚಾನಲ್ ಹೆಡ್ ಆಗಿ ಕೆಲಸ ಮಾಡುವುದು ಮೀಡಿಯಾ ಮಿರ್ಚಿ ಬರೆದಷ್ಟು ಸುಲಭವಲ್ಲ. ಅದು ಮೋಹನ್‌ರಿಗೆ ಚೆನ್ನಾಗಿಯೇ ಗೊತ್ತಿದೆ.

ಜಿ.ಎನ್.ಮೋಹನ್ ಹಿಂದೆ ಪ್ರಜಾವಾಣಿಯಲ್ಲಿದ್ದವರು. ನಂತರ ಈಟಿವಿಗೆ ಬಂದು ಅದರ ನ್ಯೂಸ್ ಮುಖ್ಯಸ್ಥರಾಗಿ ಕೆಲಸ ಮಾಡಿದವರು. ಬೆಂಗಳೂರು, ಮಂಗಳೂರು, ಗುಲ್ಬರ್ಗ, ಹೈದರಾಬಾದ್ ಮತ್ತು ಇತರೆಡೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ.

ಪರ್ಯಾಯ ಮಾಧ್ಯಮದ ಕುರಿತು ಜಿ.ಎನ್.ಮೋಹನ್ ಹುಡುಕಾಟ ನಡೆಸುತ್ತಿದ್ದರು. ಈ ಟಿವಿ ಬಿಟ್ಟ ನಂತರ ಅವರು ತಮ್ಮದೇ ಆದ ಮೇ ಫ್ಲವರ್ ಮೀಡಿಯಾ ಹೌಸ್ ಕಟ್ಟಿಕೊಂಡರು. ಅದನ್ನೂ ಒಂದು ಸಂಸ್ಥೆಯನ್ನಾಗಿ ಬೆಳೆಸಲು ಯತ್ನಿಸಿದರು. ಅದು ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ. ಆದರೆ ಪ್ರಯತ್ನಗಳಂತೂ ನಿಲ್ಲಲಿಲ್ಲ. ಮಾಧ್ಯಮ ಕೋರ್ಸುಗಳನ್ನು ಆರಂಭಿಸುವ ಪ್ರಯತ್ನ ನಡೆಸಿದರು. ಅವಧಿ ಎಂಬ ಸೊಗಸಾದ ಬ್ಲಾಗ್ ರೂಪಿಸಿದರು. ನಂತರ ಅದನ್ನು ವೆಬ್ ಸೈಟ್ ಮಾಡಿದರು. ಕನ್ನಡ ಪತ್ರಕರ್ತರ ಪೈಕಿ ಅತ್ಯಂತ ಹೆಚ್ಚು ಸಾಂಸ್ಕೃತಿಕ ವ್ಯಕ್ತಿತ್ವ ಹೊಂದಿದವರು ಮೋಹನ್. ಹೀಗಾಗಿಯೇ ವ್ಯಾವಹಾರಿಕ ಪ್ರಯತ್ನಗಳನ್ನು ಮಾಡಿದಾಗಲೆಲ್ಲ ಟೀಕೆಗೆ ಗುರಿಯಾದರು. ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದ ಜನರ ಜತೆಗೆ ಅವಿನಾಭಾವ ಸಂಬಂಧವಿಟ್ಟುಕೊಂಡಿರುವ ಮೋಹನ್ ಮೀಡಿಯಾ ಗ್ರಾಮರ್ ಚೆನ್ನಾಗಿ ಅರಿತವರು. ಈ ಟಿವಿಯಲ್ಲಿ ನಡೆಸಿದ ಪ್ರಯೋಗಗಳು ಇದಕ್ಕೆ ಸಾಕ್ಷಿ.

ನ್ಯೂಸ್ ಚಾನಲ್‌ಗಳು ಒಂದರ ಹಿಂದೊಂದರಂತೆ ಬರುವುದಕ್ಕೂ ಮುನ್ನ ಇದ್ದ ಮನರಂಜನಾ ಚಾನಲ್‌ಗಳಲ್ಲಿ ಅತಿಹೆಚ್ಚು ಪಾಪ್ಯುಲರ್ ಆಗಿದ್ದು ಈ ಟಿವಿ ನ್ಯೂಸ್. ಸುದ್ದಿಗೂ ಮನರಂಜನೆಯ ಟಚ್ ನೀಡಿದ ಮೊದಲಿಗರು ಮೋಹನ್. (ಅದೆಷ್ಟು ಸರಿ ಎಂಬ ಚರ್ಚೆ ಈಗಲೂ ಇದೆ.) ಪೂರ್ಣಚಂದ್ರ ತೇಜಸ್ವಿ ಸಾವಿನ ನಂತರ ಈಟಿವಿ ಸುದ್ದಿಯಲ್ಲಿ ಪ್ರಸಾರವಾದ ತೇಜಸ್ವಿ ನೆನಪು ಮಾಲಿಕೆ ಸದಾ ಕಾಲಕ್ಕೂ ಸ್ಮರಣೀಯ. ರಾಜಕೀಯ ವಿದ್ಯಮಾನಗಳಿಗೆ ಸಿನಿಮಾ ಹಾಡುಗಳ ಹಿನ್ನೆಲೆ ನೀಡಿ ಯಶಸ್ವಿಯಾಗಿದ್ದೂ ಜಿ.ಎನ್.ಮೋಹನ್ ಪ್ರಯೋಗವೇ.

ಆದರೆ ಈಗ ಕಾಲ ತುಂಬಾ ಮುಂದಕ್ಕೆ ಹೋಗಿದೆ. ಸುದ್ದಿ ಚಾನಲ್‌ಗಳ ಪೈಪೋಟಿ ವಿಪರೀತಕ್ಕೆ ಏರಿದೆ. ಜ್ಯೋತಿಷ್ಯ, ಕ್ರೈಂ, ಪುನರ್ಜನ್ಮ, ಸೆಕ್ಸ್ ಇತ್ಯಾದಿ ಮಸಾಲೆಗಳಿಲ್ಲದೆ ಸುದ್ದಿ ಚಾನಲ್ ನಡೆಸಲು ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ಏನನ್ನು ನೋಡುತ್ತಾರೆ ಎಂಬುದಷ್ಟೇ ಚಾನಲ್‌ಗಳಿಗೆ ಮುಖ್ಯ, ಏನನ್ನು ಕೊಡಬೇಕು ಎಂಬುದಲ್ಲ. ಹೀಗಿರುವಾಗ ಮೋಹನ್‌ರ ಸಾಂಸ್ಕೃತಿಕ ಅಭಿರುಚಿಗಳು ಅವರನ್ನು ಕಾಪಾಡುತ್ತವಾ ಎಂಬುದು ಮಹತ್ವದ ಪ್ರಶ್ನೆ. ಆದರೆ ಮೋಹನ್ ಇನ್ನೂ ಹುಡುಗು ಮನಸ್ಸಿನವರು, ಹೀಗಾಗಿ ಹೊಸಹೊಸ ಪ್ರಯೋಗಗಳನ್ನು ಮಾಡಬಲ್ಲರು ಎಂಬ ನಂಬಿಕೆಯೂ ಇದೆ.

ಟಿವಿ೯ ಎಲ್ಲ ನ್ಯೂಸ್ ಚಾನಲ್‌ಗಳಿಗಿಂತ ಮುಂದಿದೆ. ಅದನ್ನು ಹಿಮ್ಮೆಟ್ಟುವ ಧೀರರು ಸದ್ಯಕ್ಕೆ ಕಾಣುತ್ತಿಲ್ಲ. ಕಸ ಕೊಟ್ಟರೂ ರಸ ಮಾಡಿಕೊಳ್ಳುವ ಕಲೆ ಆ ಚಾನೆಲ್‌ನ ಸಿಬ್ಬಂದಿಗಿದೆ. ಯಾರು ಬಿಟ್ಟು ಹೋದರೂ ಕ್ಯಾರೇ ಅನ್ನದೇ, ಹೊಸ ಹುಡುಗ-ಹುಡುಗಿಯರನ್ನು ಸಿದ್ಧಪಡಿಸುವ ಛಾತಿ ಅವರಿಗಿದೆ. ಇನ್ನು ವಿಶ್ವೇಶ್ವರ ಭಟ್ಟರ ನೇತೃತ್ವದಲ್ಲಿ ಸುವರ್ಣ ನ್ಯೂಸ್ ನಿರ್ದಿಷ್ಟ ಪೊಲಿಟಿಕಲ್ ಅಜೆಂಡಾಗಳೊಂದಿಗೆ ಮುನ್ನುಗ್ಗುತ್ತಿದೆ. ಸುವರ್ಣ ನ್ಯೂಸ್‌ಗೆ ಫೈಟಿಂಗ್ ಮಾಡುತ್ತಿರುವುದು ಜನಶ್ರೀ. ಈ ಚಾನಲ್‌ನ ವಿಶೇಷವೆಂದರೆ ಕಸ್ತೂರಿ ಟಿವಿಯ ಹಾಗೆ ಇದು ಮಾಲೀಕರ ತುತ್ತೂರಿಯಾಗಲಿಲ್ಲ. ಅದರ ಪರಿಣಾಮಗಳು ಈಗ ಕಾಣಿಸುತ್ತಿವೆ.

ಇಂಥ ಸನ್ನಿವೇಶದಲ್ಲಿ ಜಿ.ಎನ್.ಮೋಹನ್ ಸಮಯದಲ್ಲಿ ಏನೇನು ಮಾಡಬಹುದು? ಪಾತಾಳಕ್ಕೆ ಇಳಿದಿರುವ ಟಿಆರ್‌ಪಿ ಎತ್ತಲು ಅವರಿಂದ ಸಾಧ್ಯವೇ? ೨೪*೭ ನ್ಯೂಸ್ ಚಾನಲ್‌ನ ಗ್ರಾಮರುಗಳಿಗೆ ಅವರು ಒಗ್ಗಿಕೊಳ್ಳಬಹುದೇ?

ಮೀಡಿಯ ಬಗ್ಗೆ ಅಷ್ಟೇನು ಗೊತ್ತಿಲ್ಲದಿದ್ದರೂ ಚಾನಲ್ ನಿರ್ವಹಿಸುತ್ತಿರುವ ಶಾಂತ (ಮಾಜಿ ಶಾಸಕ ಬಿ.ಬಿ.ಶಿವಪ್ಪನವರ ಸೊಸೆ) ಸೆನ್ಸಿಬಲ್ ಹೆಣ್ಣುಮಗಳು ಎಂಬ ಮಾತಿದೆ. ಅದೇ ರೀತಿ ಹಾಸನದ ಉದ್ಯಮಿ ಸಚಿನ್ ಕೂಡ ವಯಸ್ಸು ಚಿಕ್ಕದಾದರೂ ಹಲವು ಉದ್ಯಮಗಳನ್ನು ನಿಭಾಯಿಸಿದ ಅನುಭವ ಹೊಂದಿರುವವರು. ಇನ್ನೊಬ್ಬರು ಮುರುಗೇಶ್ ನಿರಾಣಿ. ಇವರೆಲ್ಲರ ಜತೆ ಮೋಹನ್ ಹೊಂದಿಕೊಂಡು ಹೋಗಬಲ್ಲರೇ?

ಅದೆಲ್ಲ ಸರಿ, ಶಶಿಧರ ಭಟ್ಟರು ಸಮಯ ತೊರೆದರೆ ಮುಂದೇನು ಮಾಡುತ್ತಾರೆ?

ಸಂಪಾದಕೀಯ ಓದ್ತಾ ಇರಿ.

ಪತ್ರಕರ್ತರೊಂದಿಗಿನ ಅತಿಸಲುಗೆಯಿಂದ ಸಂತೋಷ್ ಹೆಗಡೆಯವರೇ ಟ್ರಾಪ್ ಆದರಾ?


ನಾಳೆ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅಕ್ರಮ ಗಣಿಗಾರಿಕೆ ಕುರಿತ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ದಿನ. ವರದಿಯ ಪ್ರಮುಖ ಅಂಶಗಳು ಸೋರಿಕೆಯಾಗಿ, ಮಾಧ್ಯಮಗಳಲ್ಲಿ ಪ್ರಕಟ/ಪ್ರಸಾರವಾದ ನಂತರ ಎದ್ದಿರುವ ವಿವಾದದ ಬಿರುಗಾಳಿ ಇನ್ನೂ ತಣ್ಣಗಾಗಿಲ್ಲ. ಸಂತೋಷ್ ಹೆಗಡೆಯವರ ಕೆನ್ನೆ ಮೇಲೆ ಹರಿದ ಕಣ್ಣೀರಿನಿಂದಾದ ತೇವ ಇನ್ನೂ ಆರಿದಂತಿಲ್ಲ. ಸೋರಿಕೆಯಾಗಿದ್ದರಿಂದಾಗಿ ವರದಿಗೆ ಮಹತ್ವವೇ ಇಲ್ಲ ಎಂದ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಧನಂಜಯ ಕುಮಾರ್ ಬಾಯಿಂದ ಮಂತ್ರಕ್ಕಿಂತ ಹೆಚ್ಚಾಗಿ ಸಿಡಿಯುತ್ತಿರುವ ಉಗುಳಿನ ಧಾರೆಯೂ ನಿಂತಿಲ್ಲ.

ಅತ್ತ ಆಯನೂರು ಮಂಜುನಾಥ್ ಎಂಬ ಬಿಜೆಪಿ ಮುಖಂಡ ಹೊಸ ವಾದವೊಂದನ್ನು ಮಂಡಿಸಿದ್ದಾರೆ. ವಾದಕ್ಕೆ ಆತ ಬಳಸಿರುವ ತರ್ಕವೂ ಅತ್ಯಂತ ಸಮರ್ಥವಾಗಿದೆ. ದೂರವಾಣಿ ಕದ್ದಾಲಿಕೆಯಿಂದ ವರದಿ ಸೋರಿಕೆಯಾಗಿದೆ ಎಂದು ಹೇಳುವುದಾದರೆ ದೂರವಾಣಿ ಮೂಲಕ ವರದಿಯ ಪ್ರಮುಖ ಅಂಶಗಳನ್ನು ಚರ್ಚಿಸಲಾಗುತ್ತಿತ್ತೆ? ಅಥವಾ ವರದಿಯ ಮಾಹಿತಿಯನ್ನು ಯಾರಿಗೆ ಒದಗಿಸಲಾಗುತ್ತಿತ್ತು?

ಧನಂಜಯ ಕುಮಾರ್, ಆಯನೂರು ಮಂಜುನಾಥ್ ಮತ್ತು ಹಲವು ಬಿಜೆಪಿ ಮುಖಂಡರು ಒಂದೇ ಸಮನೆ ಪ್ರಶ್ನೆಗಳನ್ನು ಸುರಿಸುತ್ತಿದ್ದಾರೆ. ದೂರವಾಣಿ ಕದ್ದಾಲಿಕೆ ಆಗುತ್ತಿದೆ ಎಂಬ ಅನುಮಾನ ಮೂಡಿದ ತಕ್ಷಣ ಸಂತೋಷ ಹೆಗಡೆಯವರು ಯಾಕೆ ದೂರು ನೀಡಲಿಲ್ಲ? ಯಾಕೆ ತನಿಖೆ ನಡೆಸಲಿಲ್ಲ? ಇಷ್ಟು ತಡವಾಗಿ ಇದನ್ನು ಪ್ರಸ್ತಾಪ ಮಾಡಿದ್ದೇಕೆ? ತಮ್ಮನ್ನು ಡೀಲ್ ಮಾಡಲೆತ್ನಿಸಿದ ಧನಂಜಯ ಕುಮಾರ್ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಯಾಕೆ ಇಷ್ಟು ತಡವಾಗಿ ಈ ಮಹತ್ವದ ಅಂಶವನ್ನು ಪ್ರಸ್ತಾಪಿಸುತ್ತಿದ್ದಾರೆ?

ಸಂತೋಷ್ ಹೆಗಡೆಯವರ ನೈತಿಕ ಚಾರಿತ್ರ್ಯದ ಬಗ್ಗೆ ಬಹುತೇಕ ಎಲ್ಲರಿಗೂ ಗೌರವವಿದೆ. ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದ ಪ್ರಾಮಾಣಿಕ ನ್ಯಾಯಾಧೀಶರು ಅವರು. ಆದರೆ ಇತ್ತೀಚಿನ ದಿನಗಳಲ್ಲಿ ಒಂದರ ಮೇಲೊಂದರಂತೆ ಯಡವಟ್ಟುಗಳನ್ನೇಕೆ ಮಾಡಿಕೊಂಡು ಬಂದರು?

ವರದಿ ಸೋರಿಕೆಯಾದ ನಂತರ ಕಣ್ಣೀರಿಟ್ಟ ಸಂತೋಷ್ ಹೆಗಡೆಯವರು ಸೋರಿಕೆಗೆ ತಾನೇ ಹೊಣೆ ಹೊರುವುದಾಗಿ ಹೇಳಿದರು. ತನ್ನ ಕಚೇರಿಯಲ್ಲಿರುವ ಅಧಿಕಾರಿಗಳು ಪ್ರಾಮಾಣಿಕರು. ಅವರಿಂದ ಮಾಹಿತಿ ಸೋರಿಕೆಯಾಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಹಾಗಿದ್ದರೆ ಸೋರಿಕೆಯಾಗಿದ್ದು ಹೇಗೆ?

ಕೆಲವು ಪತ್ರಕರ್ತರೊಂದಿಗೆ ಸಂತೋಷ್ ಹೆಗಡೆಯವರು ಹೊಂದಿರುವ ಅಗತ್ಯಕ್ಕಿಂತ ಹೆಚ್ಚಿನ ಆತ್ಮೀಯ ಸಂಬಂಧವೇ ಈ ಸೋರಿಕೆಗೆ ಕಾರಣವಾಗಿರಬಹುದೇ? ಟೈಮ್ಸ್ ನೌ ವಾಹಿನಿಯಲ್ಲಿ ಸೋರಿಕೆಯಾದ ವರದಿ ಪ್ರಸಾರವಾಗುವುದಕ್ಕೆ ಮುನ್ನವೇ ಪ್ರಜಾವಾಣಿಯ ಜುಲೈ ೧೮ರ ಪತ್ರಿಕೆಯಲ್ಲಿ ವರದಿ ತರಲಿದೆಯೇ ಬಿರುಗಾಳಿ? ಎಂಬ ಶೀರ್ಷಿಕೆಯಲ್ಲಿ ಮುಖಪುಟದ ಸುದ್ದಿಯೊಂದು ಪ್ರಕಟವಾಗಿತ್ತು. ಲೋಕಾಯುಕ್ತರ ವರದಿ ಎಲ್ಲ ಪಕ್ಷಗಳಿಗೂ ಕಹಿ ತರಲಿದೆ ಎಂಬ ಮುನ್ಸೂಚನೆಯನ್ನೂ ವರದಿಯಲ್ಲಿ ನೀಡಲಾಗಿತ್ತು. ವರದಿಯನ್ನು ಗಮನಿಸಿದರೆ ಲೋಕಾಯುಕ್ತರೇ ಇಂಥದ್ದೊಂದು ಸುದ್ದಿಯನ್ನು ಬ್ರೀಫ್ ಮಾಡಿರುವ ಸಾಧ್ಯತೆಗಳು ಕಾಣಿಸುತ್ತದೆ. ಇಂಥ ಹಲವಾರು ಸುದ್ದಿಗಳು ಆಗಾಗ ಪ್ರಕಟವಾಗುತ್ತಲೇ ಇರುತ್ತವೆ. ಲೀಕಾಯಣದ ಪ್ರಹಸನಗಳೆಲ್ಲ ನಡೆದ ನಂತರವೂ ಜುಲೈ ೨೪ರ ಪ್ರಜಾವಾಣಿಯಲ್ಲಿ ಬಯಲಾಗಲಿದೆ ಬೇಲೆಕೇರಿ ರಹಸ್ಯ ಎಂಬ ಶೀರ್ಷಿಕೆಯ ಮತ್ತೊಂದು ಅಗ್ರ ಸುದ್ದಿ ಪ್ರಕಟವಾಯಿತು. ಅಂತಿಮ ವರದಿಯಲ್ಲಿ ಬೇಲೆಕೇರಿ ಹಗರಣದ ರೂವಾರಿಗಳ ಹೆಸರೂ ಇದೆ ಎಂಬುದನ್ನು ಈ ಸುದ್ದಿಯಲ್ಲಿ ಖಚಿತವಾಗಿ ಹೇಳಲಾಗಿದೆ. ಇದೂ ಸಹ ಲೋಕಾಯುಕ್ತರ ಸಹಕಾರದಿಂದಲೇ ಪ್ರಕಟವಾಗಿರಬಹುದಾದ ಸುದ್ದಿ. ಸಂತೋಷ್ ಹೆಗಡೆಯವರ ಪುಣ್ಯ, ಈ ಸುದ್ದಿಯ ಜತೆ ಸೋರಿಕೆಯಾದ ಲೋಕಾಯುಕ್ತ ವರದಿ-ಭಾಗ ೨ ಎಂಬ ಉಪಶೀರ್ಷಿಕೆ ಇರಲಿಲ್ಲ!

ಸಂತೋಷ್ ಹೆಗಡೆಯವರು ತಮ್ಮ ಬಳಿಗೆ ಬರುವ ಪತ್ರಕರ್ತರಿಗೆ ಖಾಲಿ ಕೈಯಲ್ಲಿ ಕಳುಹಿಸುವುದು ಅಪರೂಪ. ಅಲ್ಲಿಗೆ ಹೋದ ಪತ್ರಕರ್ತರು ಒಂದಿಲ್ಲೊಂದು ಸುದ್ದಿಯನ್ನು ಹಿಡಿದು ತರುತ್ತಾರೆ. ಅದರಲ್ಲೂ ಅವರ ಆತ್ಮೀಯ ಬಳಗದ ಪತ್ರಕರ್ತರಿಗಂತೂ ಅವರು ಸುದ್ದಿಯ ಕಣಜ. ಬಹುತೇಕ ಸುದ್ದಿಗಳು ಆಫ್ ದಿ ರೆಕಾರ್ಡ್! ಲೋಕಾಯುಕ್ತ ಮೂಲಗಳು ಹೇಳಿವೆ, ಗೊತ್ತಾಗಿದೆ, ನಂಬಲಾಗಿದೆ, ಹೇಳಲಾಗಿದೆ ಎಂಬ ಒಕ್ಕಣೆಯ ಸುದ್ದಿಗಳು ಕಳೆದ ಎರಡು ವರ್ಷಗಳಿಂದ ಕೋಲಾಹಲವನ್ನು ಮೂಡಿಸುತ್ತಲೇ ಬಂದಿವೆ. ಇವುಗಳಿಂದ ಲೋಕಾಯುಕ್ತರು ಏನೇನು ಮಾಡುತ್ತಿದ್ದಾರೆ ಎಂಬ ಮಾಹಿತಿ ಪತ್ರಿಕಾ ಓದುಗರಿಗೆ ತಲುಪುತ್ತಲೇ ಇತ್ತು. ಆದರೆ ಕಾನ್ಫಿಡೆನ್ಷಿಯಲ್ ಆಗಿರಬೇಕಾಗಿದ್ದ ಅತ್ಯಂತ ಮಹತ್ವದ ವರದಿಯ ಅಂಶಗಳನ್ನು ಸುದ್ದಿದಾಹದ ಚಾನಲ್ ಒಂದು ನೇರವಾಗಿ ಬಿತ್ತರಿಸುವುದರೊಂದಿಗೆ ಹೆಗಡೆಯವರೇ ಪೇಚಿಗೆ ಸಿಲುಕುವಂತಾಯಿತು. ಯಾರನ್ನು ದೂರಿ ಏನು ಪ್ರಯೋಜನ?

ಧನಂಜಯ ಕುಮಾರ್ ಡೀಲ್ ಮಾಡಲು ಬಂದಿದ್ದ ಎಕ್ಸ್‌ಕ್ಲೂಸಿವ್ ಸುದ್ದಿ ಕನ್ನಡಪ್ರಭದಲ್ಲಿ ಮೊದಲು ಪ್ರಕಟವಾದ ನಂತರ, ಸಂತೋಷ್ ಹೆಗಡೆಯವರು ಅದನ್ನು ನಿಜ ಎಂದರು. ಪತ್ರಕರ್ತರ ಜತೆ ಸಂತೋಷ್ ಹೆಗಡೆ ಹೊಂದಿರುವ ವಿಶೇಷ ಸಂಬಂಧಕ್ಕೆ ಇವೆಲ್ಲವೂ ತಾಜಾ ಉದಾಹರಣೆಗಳು. ಹಾಗಂತ ಇದೆಲ್ಲವನ್ನು ತಪ್ಪು ಎಂದೇನು ಹೇಳುತ್ತಿಲ್ಲ. ಆದರೆ ಇಂಥ ಅತಿ ಆತ್ಮೀಯತೆಯೇ ‘ವರದಿ ಸೋರಿಕೆ ವಿವಾದಕ್ಕೆ ಕಾರಣವಾಗಿರಬಹುದೇ? ವರದಿ ಸೋರಿಕೆಗೆ ಫೋನ್ ಕದ್ದಾಲಿಕೆಯ ವಿವಾದವನ್ನು ಪೋಣಿಸುವ ಮೂಲಕ ಹೆಗಡೆಯವರು ತಮ್ಮನ್ನು ಸಮರ್ಥಿಸಿಕೊಳ್ಳಲು ಮುಂದಾದರೆ? ಹಿಟ್ ಅಂಡ್ ರನ್ ಮಾಡಲು ಬಿಡುವುದಿಲ್ಲ ಎಂದು ಲೋಕಾಯುಕ್ತರ ವಿರುದ್ಧವೇ ಘರ್ಜಿಸುತ್ತಿರುವ ಯಡಿಯೂರಪ್ಪನವರಿಗೆ ಅನಾಯಾಸವಾಗಿ ಒಂದು ಅಸ್ತ್ರ ಒದಗಿಸಲಾಯಿತೆ?

ಈವರೆಗೆ ಕಂಡ ಮುಖ್ಯಮಂತ್ರಿಗಳ ಪೈಕಿ ಡ್ಯಾಮೇಜ್ ಕಂಟ್ರೋಲ್ ವ್ಯವಸ್ಥೆಯನ್ನು ಗರಿಷ್ಠ ಮಟ್ಟಕ್ಕೆ ಬೆಳೆಸಿಕೊಂಡವರು ಬಿ.ಎಸ್.ಯಡಿಯೂರಪ್ಪ. ಯಾವುದಕ್ಕೆ ಯಾವುದು ಮದ್ದು ಎಂಬುದು ಅವರಿಗೆ ಚೆನ್ನಾಗಿಯೇ ಗೊತ್ತಿದೆ. ವರದಿ ಸಲ್ಲಿಕೆಯಾಗುವುದಕ್ಕೂ ಮುನ್ನವೇ ಅವರು ಬಾಣ ಬಿಟ್ಟಿದ್ದಾರೆ, ಅದು ಸರಿಯಾದ ಜಾಗಕ್ಕೇ ನಾಟಿಕೊಂಡಿದೆ. ಲೋಕಾಯುಕ್ತರಿಗೆ ಕೆಲ ಪತ್ರಕರ್ತರ ಜತೆ ಆತ್ಮೀಯ ಸಂಬಂಧವಿರಬಹುದು. ಆದರೆ ಯಡಿಯೂರಪ್ಪನವರಿಗೆ ಪತ್ರಕರ್ತರನ್ನು ಸಂಭಾಳಿಸಿ ಗೊತ್ತು, ಪತ್ರಕರ್ತರಿಗೆ ಬೇಕಾದನ್ನು ಒದಗಿಸಿ ಒಲಿಸಿಕೊಂಡು ಗೊತ್ತು. ತಮಗೆ ತಿರುಗಿ ಬಿದ್ದ ಪತ್ರಕರ್ತರನ್ನು ಮನೆಗೆ ಕಳುಹಿಸುವುದೂ ಗೊತ್ತು. (ಅದಕ್ಕೆ ತಕ್ಕ ತಿರುಗೇಟನ್ನು ಅವರೇ ಈಗ ತಿನ್ನುತ್ತಿದ್ದಾರೆ, ಅದು ಬೇರೆ ವಿಷಯ.) ಈವರೆಗಿನ ಮುಖ್ಯಮಂತ್ರಿಗಳ ಪೈಕಿ ಮೀಡಿಯಾ ಮ್ಯಾನೇಜ್‌ಮೆಂಟನ್ನು ಅತ್ಯಂತ ಯಶಸ್ವಿಯಾಗಿ, ಪರಿಣಾಮಕಾರಿಯಾಗಿ ನಡೆಸಿದವರು ಯಡಿಯೂರಪ್ಪ. ಈ ಚಾಕಚಕ್ಯತೆಯಿಂದಾಗಿಯೇ ಸಂತೋಷ್ ಹೆಗಡೆ ಕಣ್ಣೀರು ಹಾಕುವಂತಾಯಿತಾ?

ಯಡಿಯೂರಪ್ಪ ಮಾತನಾಡುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿ. ಅವರು ಅಕ್ರಮ ಗಣಿಗಾರಿಕೆ ವರದಿಗಿಂತ ಟೆಲಿಫೋನ್ ಕದ್ದಾಲಿಕೆಯ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದಾರೆ. ಈ ಬಗ್ಗೆ ಪ್ರಧಾನಿಗೊಂದು ಪತ್ರವನ್ನೂ ಬರೆದಿದ್ದಾರೆ. ತನಿಖಾ ಸಮಿತಿಯ ಸದಸ್ಯರಾಗಿ ಯಾರ‍್ಯಾರು ಇರಬೇಕು ಎಂಬುದರ ಕುರಿತೂ ಅವರೇ ನಿರ್ಧಾರ ಕೈಗೊಂಡಿದ್ದಾರೆ. ಟೆಲಿಫೋನ್ ಕದ್ದಾಲಿಕೆಯ ಹಗರಣದಲ್ಲಿ ತಾನು ಸಿಕ್ಕಿಬೀಳಲಾರೆ ಎಂಬ ಅದಮ್ಯ ವಿಶ್ವಾಸ ಅವರಿಗಿದ್ದಂತಿದೆ. ಒಂದು ವೇಳೆ ಸಿಕ್ಕಿಬಿದ್ದರೂ ಜತೆಯಲ್ಲೇ ಹಲವು ಮಾಜಿ ಮುಖ್ಯಮಂತ್ರಿಗಳನ್ನು ಸೇರಿಸಿಯೇ ಹಳ್ಳಕ್ಕೆ ಬೀಳಲು ಅವರು ತಯಾರಾಗಿರುವಂತಿದೆ.

ಇನ್ನು ಯಡಿಯೂರಪ್ಪ ಅವರಿಗೆ ಉಳಿದಿರುವುದು ಲೋಕಾಯುಕ್ತ ವರದಿಯನ್ನು ಎದುರಿಸುವ ಸಂಕಷ್ಟವೊಂದೇ. ಇದಕ್ಕಾಗಿ ಅವರಿಗೆ ಕಾನೂನು ತಜ್ಞರ ದಂಡೇ ನೆರವಾಗುತ್ತಿದೆ. ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಯಾವ ಯಾವ ಸಂದರ್ಭದಲ್ಲಿ ಲೋಕಾಯುಕ್ತ ವರದಿಗಳನ್ನು ಅಂಗೀಕರಿಸಲಾಗಿದೆ, ತಿರಸ್ಕರಿಸಲಾಗಿದೆ ಎಂಬುದರ ಪಟ್ಟಿಯೇ ಸಿದ್ಧವಾಗುತ್ತದೆ. ವರದಿಯ ಪರಿಶೀಲನೆಗೊಂದು ಸಮಿತಿ ರಚನೆ, ಅದಕ್ಕೆ ಒಂದಷ್ಟು ತಿಂಗಳ ಕಾಲಾವಧಿ, ನಂತರ ಅದರ ವಿಸ್ತರಣೆ.... ಹೀಗೆ ಇದನ್ನು ಹೇಗೆ ಎಳೆದಾಡಬಹುದೆಂಬುದು ಯಡಿಯೂರಪ್ಪನವರಿಗೆ ಚೆನ್ನಾಗಿ ಗೊತ್ತಿದೆ.

ಬಿಜೆಪಿ ಹೈಕಮಾಂಡ್ ಆಡಿಸುವ ಪುಂಗಿಯೂ ಯಡಿಯೂರಪ್ಪ ಬಳಿ ಇದೆ. ಸಂದರ್ಭ ಬಂದಾಗೆಲ್ಲ ಅವರು ಲಿಂಗಾಯತ ಕಾರ್ಡ್, ಮಠಾಧೀಶರ ಕಾರ್ಡ್‌ಗಳನ್ನು ಬಳಸುತ್ತ ಬಂದಿದ್ದಾರೆ. ನಿತಿನ್ ಗಡ್ಕರಿಗೆ ಬರೆದಿರುವ ಪತ್ರ ಯಡಿಯೂರಪ್ಪ ಹಾಕಿರುವ ಪರೋಕ್ಷ ಧಮಕಿ. ತಾವೇ ತಾವಾಗಿ ರಾಜೀನಾಮೆ ಕೊಡುವುದಿಲ್ಲ ಎಂದು ಯಡಿಯೂರಪ್ಪ ಪತ್ರ ಬರೆದಿರಲಾರರು. ರಾಜೀನಾಮೆ ಕೊಡಿ ಎಂಬ ಸಂದೇಶಕ್ಕೇ ಇದು ಉತ್ತರವಾಗಿರಬಹುದು. ಯಡಿಯೂರಪ್ಪ ಪಕ್ಷದ ಹೈಕಮಾಂಡನ್ನು ಮೀರಿ ಬೆಳೆದಿರುವುದಕ್ಕೆ ಇದು ಸಾಕ್ಷಿ. ಒಂದು ವೇಳೆ ಈ ಬಾರಿಯಾದರೂ ಬಿಜೆಪಿ ಹೈಕಮಾಂಡ್ ಗಟ್ಟಿಯಾದ ನಿರ್ಧಾರ ಕೈಗೊಂಡು ಯಡಿಯೂರಪ್ಪ ಅವರನ್ನು ಬದಲಿಸಿದರೆ ರಾಜ್ಯ ರಾಜಕಾರಣದ ಬಹುದೊಡ್ಡ ಪವಾಡ!

ಯಡಿಯೂರಪ್ಪನವರು ಹಿಂದೆ ತಮ್ಮನ್ನು ಕಾಡಿಸಿದ ರೆಡ್ಡಿ ಸೋದರರಿಂದ ಹಿಡಿದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರವರೆಗೆ ತಮ್ಮ ರಾಜಕೀಯ ಎದುರಾಳಿಗಳಿಗೆ, ತಿರುಗಿ ಬಿದ್ದವರಿಗೆ, ಯುದ್ಧ ಹೂಡಿದವರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಹೊಸ ಸೇರ್ಪಡೆ ಸಂತೋಷ್ ಹೆಗಡೆ. ಮಾಧ್ಯಮ ಪ್ರತಿನಿಧಿಗಳ ಜತೆಗಿನ ಅತಿಯಾದ ಸಲುಗೆಯಿಂದ ಹೆಗಡೆ ತಾವೇ ಟ್ರಾಪ್ ಆದರಾ?

Saturday, July 23, 2011

ಭಟ್ಟರೇಕೆ ವೈರಾಗ್ಯದ ಮಾತುಗಳನ್ನು ಆಡುತ್ತಿದ್ದಾರೆ? ವಿದಾಯದ ಮುನ್ಸೂಚನೆಯೇ?


ಸಮಯ ಚಾನಲ್‌ನ ಮುಖ್ಯಸ್ಥರಾದ ಶಶಿಧರ ಭಟ್ಟರು ರಾಜೀನಾಮೆ ಕೊಟ್ಟು ಹೊರಹೋದರೇ? ಇದ್ದಕ್ಕಿದ್ದಂತೆ ಹೀಗಾಗಲು ಕಾರಣ ಏನು? ಭಟ್ಟರ ಜಾಗಕ್ಕೆ ಬರುವವರು ಯಾರು? ಹೀಗೆ ಒಂದಾದ ಮೇಲೊಂದರಂತೆ ಪ್ರಶ್ನೆಗಳು ಪ್ರೆಸ್‌ಕ್ಲಬ್‌ನ ಕಲ್ಲಿನ ಟೇಬಲ್ಲುಗಳಿಂದ ಎದ್ದು ಸುದ್ದಿಮನೆಗಳಲ್ಲಿ ಓಡಾಡಿ, ಪತ್ರಕರ್ತರ ಮೊಬೈಲುಗಳಲ್ಲಿ ಮೆಸೇಜುಗಳ ಸ್ವರೂಪ ಪಡೆದುಕೊಂಡಿವೆ.

ಹೀಗೆ ಸುದ್ದಿ ಹರಡುವುದಕ್ಕೆ ಕಾರಣವಾಗಿರುವುದು ಫೇಸ್‌ಬುಕ್‌ನಲ್ಲಿ ಭಟ್ಟರು ಬರೆದಿರುವ ಅಮೂರ್ತ ಅರ್ಥವನ್ನು ಧ್ವನಿಸುವ ಒಂದು ಮಾತು.

ವಿದಾಯದ ಜೊತೆಗೆ ನೋವಿರುತ್ತದೆ. ಆದರೆ ವಿದಾಯ ಎಂದರೆ ಬಿಡುಗಡೆ. ಬಿಡುಗಡೆಯ ಸಂತೋಷ ವಿದಾಯದ ನೋವನ್ನು ಮರೆಸುತ್ತದೆ.

ವಿಶೇಷವೆಂದರೆ ಭಟ್ಟರು ಹೀಗೆ ವೈರಾಗ್ಯದ ಮಾತುಗಳನ್ನು ಬರೆಯುತ್ತಿರುವುದು ಇದೇ ಮೊದಲಲ್ಲ. ಜೂನ್ ತಿಂಗಳಿಂದೀಚಿಗೆ ಅವರು ಬರೆಯುತ್ತಿರುವುದೆಲ್ಲ ಇದೇ ಮಾದರಿಯ ಸ್ಟೇಟಸ್‌ಗಳು. ಕೆಲವನ್ನು ನೀವೂ ಗಮನಿಸಿ ನೋಡಿ.

ಬದುಕು ಎನ್ನುವುದು ನದಿಯಂತೆ. ಅದು ಹರಿಯುತ್ತಲೇ ಇರಬೇಕು. ಆದರೆ ನದಿಗೆ ಅಣೆಕಟ್ಟುವ ಯತ್ನ ನಡೆಯುತ್ತಲೇ ಇರುತ್ತದೆ. 
ಜಂಗಮತ್ವ ಬದುಕಿಗೆ ಚಲನಶೀಲತೆಯನ್ನು ಕೊಡುತ್ತದೆ. ಸ್ಥಾವರಕ್ಕಳಿವುಂಟು ಜಂಗಮಕ್ಕಲ್ಲ 
ಬದುಕಿನಲ್ಲಿ ಎತ್ತರಕ್ಕೆ ಎರಿದವರಿಗೆ ಬೀಳುವ ಭಯ. ಕೆಳಗೆ ಇರುವವರಿಗೆ ಮೇಲೆರುವ ಕನಸು. ಆದ್ದರಿಂದ ಕೆಳಕ್ಕೆ ಇರುವುದೇ ಒಳ್ಳೆಯದು. 
ಬದುಕು ಹರಿಯುವ ನದಿಯಂತಿರಬೇಕು, ನದಿಗೆ ಅಣೆ ಕಟ್ಟು ಕಟ್ಟು ಕಟ್ಟಬಾರದು, ಆಗಲೇ ಚಂದ.
ಹೀಗೆಲ್ಲ ಬರೆದ ಭಟ್ಟರಿಗೆ ಅವರ ಫೇಸ್‌ಬುಕ್ ಗೆಳೆಯರು ಏನ್ಸಾರ್ ನಿಮ್ಮ ಮಾತು ಕೇಳಿದ್ರೆ, ನೀವು ಸಮಯ ಟಿವಿನೂ ಬಿಡೋ ಹಾಗೆ ಅನ್ನಿಸ್ತಾ ಇದೆ ಎಂದು ನೇರಾನೇರ ಕೇಳಿದ್ದಾರೆ. ಭಟ್ಟರು ಉತ್ತರಿಸಿದ ಹಾಗೆ ಕಾಣುವುದಿಲ್ಲ.

ಸಮಯದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದೇನೋ ನಿಜ. ಭಟ್ಟರ ಕಾಂಟ್ರಾಕ್ಟ್ ಅವಧಿಯೂ ಮುಗಿಯುತ್ತ ಬಂದಿದೆ ಎಂಬ ಮಾಹಿತಿಯಿದೆ. ಮ್ಯಾನೇಜ್‌ಮೆಂಟ್ ಬದಲಾದ ಮೇಲೆ ಬೇರೆ ಬೇರೆ ತರಹದ ಬದಲಾವಣೆಗಳು ನಡೆಯುತ್ತಲಿವೆ. ಆದರೆ ಭಟ್ಟರು ಅಲ್ಲಿಂದ ಕಾಲ್ತೆಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆಯೇ?

ಭಟ್ಟರು ಹೊರಹೋದರೆ, ಸಮಯದ ಸಾರಥ್ಯ ವಹಿಸುವವರು ಯಾರು ಎಂಬ ಪ್ರೀ ಮೆಚ್ಯೂರ್ ಪ್ರಶ್ನೆಯೂ ಈಗ ಉದ್ಭವವಾಗಿದೆ. ಮಹತ್ವಾಕಾಂಕ್ಷೆಯ ಜ್ವರದಲ್ಲಿ ಬೇಯುತ್ತಿರುವ ಜೂನಿಯರ್ ಪತ್ರಕರ್ತರೊಬ್ಬರು ಈ ಪೋಸ್ಟಿಗೆ ಫೈಟ್ ಮಾಡುತ್ತಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಮೊದಲೇ ಹೇಳಿದಂತೆ ಇದು ಪ್ರೀ ಮೆಚ್ಯೂರ್ ಪ್ರಶ್ನೆ.

ಹಾಗೆ ನೋಡಿದರೆ, ಕನ್ನಡ ಪತ್ರಕರ್ತರ ಪೈಕಿ, ಅತಿ ಹೆಚ್ಚು ಆತ್ಮಾವಲೋಕನದ ಮಾತುಗಳನ್ನು ಆಡಿದವರು ಶಶಿಧರ ಭಟ್ಟರು. ತಮ್ಮ ಬ್ಲಾಗ್ ಕುಮ್ರಿಯ ಮೂಲಕ, ಕಾರ್ಯಕ್ರಮಗಳ ವೇದಿಕೆಗಳಲ್ಲಿ ಭಟ್ಟರು ಆಗಾಗ ಮಾಧ್ಯಮಗಳ ಕುರಿತು ಮಾತನಾಡುತ್ತಲೇ ಬಂದಿದ್ದಾರೆ. ಇತ್ತೀಚಿಗೆಯಂತೂ ಬಹಳ ನಿಷ್ಠುರವಾಗಿಯೇ ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತ ಬಂದಿದ್ದಾರೆ. ಮ್ಯಾನೇಜ್‌ಮೆಂಟುಗಳೊಂದಿಗೆ ಹೊಂದಿಕೊಂಡು ಹೋಗದಿದ್ದರೆ ಅವರು ನಮ್ಮನ್ನು ಸಂಸ್ಥೆಯಿಂದ ಹೊರಕಳುಹಿಸುತ್ತಾರೆ ಎಂಬ ಕಟುಸತ್ಯವನ್ನು ನಿರ್ಭಿಡೆಯಿಂದ ಹೇಳುತ್ತ ಬಂದಿದ್ದಾರೆ. ಪತ್ರಕರ್ತರು ಪತ್ರಕರ್ತರಾಗಿದ್ದುಕೊಂಡೇ ರಿಯಲ್ ಎಸ್ಟೇಟ್ ವ್ಯಾಪಾರಿಗಳಾಗಿರುವ, ದಳ್ಳಾಳಿಗಳಾಗಿರುವ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಭ್ರಷ್ಟಾಚಾರದಿಂದಲೇ ರಾಜಕಾರಣಿಯಾದ ಮಾಧ್ಯಮ ಸಂಸ್ಥೆ ಮಾಲೀಕರೊಬ್ಬರನ್ನು ನೇರವಾಗಿ ಜಾಡಿಸಿದ್ದರು. ಹೀಗೆ ಮಾತನಾಡುವ ಸಂದರ್ಭದಲ್ಲಿ ಅವರು ಎಸೆದ ಬಾಣಗಳು ಯಾರ‍್ಯಾರಿಗೆ ತಿವಿದವೋ? ಗೊತ್ತಿಲ್ಲ.

ಭಟ್ಟರು ತಮ್ಮ ಬ್ಲಾಗ್‌ನಲ್ಲಿ ಆಗಾಗ ಹೇಳುತ್ತಾ ಬಂದ ಮಾಧ್ಯಮ-ಪತ್ರಕರ್ತರ ಕುರಿತ ಮಾತುಗಳನ್ನು ಹೆಕ್ಕಿ ಇಲ್ಲಿ ನೀಡಿದ್ದೇವೆ. ಒಮ್ಮೆ ಗಮನಿಸಿ.

ನಾವೆಲ್ಲ ತುರ್ತು ಪರಿಸ್ಥಿತಿಯ ನಂತರ ಪತ್ರಿಕೋದ್ಯಮಕ್ಕೆ ಬಂದವರು. ಪತ್ರಿಕೋದ್ಯಮವನ್ನು ಅತಿಯಾಗಿ ಪ್ರೀತಿಸಿ ಅದನ್ನು ಅಪ್ಪಿಕೊಂಡವರು. ಜೊತೆಗೆ ನಾವು ಅಂದರೆ ನನ್ನ ತಲೆಮಾರಿನವರು ಪತ್ರಿಕೋದ್ಯಮಕ್ಕೆ ಬರುವಾಗ ಕರ್ನಾಟಕದಲ್ಲಿ ಮೂರು ಜನಪರ ಚಳವಳಿಗಳಿದ್ದವು. ಆ ಚಳವಳಿಯ ಜೊತೆಗೆ ನಾವು ಬೆಳೆದೆವು, ಬೆಳೆಯುವುದಕ್ಕೆ ಯತ್ನ ಮಾಡಿದೆವು. ಜೊತೆಗೆ ನನ್ನಂಥವರನ್ನು ಬೆಳೆಸಲು ಬುದ್ದಿ ಹೇಳಲು ಖಾದ್ರಿ ಶಾಮಣ್ಣ, ವೈ ಎನ್ ಕೆ ಲಂಕೇಶ್ ಅವರಂತಹ ಸಂಪಾದಕರಿದ್ದರು. ಅವರು ಬೈದು ಬುದ್ದಿ ಹೇಳಿ ಬೆಳೆಸುತ್ತಿದ್ದರು. ಇಂತಹ ಸಂಪಾದಕರ ಜೊತೆ ಕೆಲಸ ಮಾಡಿ, ಬೈಸಿಕೊಂಡು ಪತ್ರಿಕೋದ್ಯಮದ ಆಳ ಆಗಲವನ್ನು ತಿಳಿದುಕೊಳ್ಳಲು ನಾವು ಯತ್ನ ಮಾಡಿದೆವು. ಈ ಯತ್ನ ಈಗಲೂ ಮುಂದುವರಿದಿದೆ. ಇಂತವರ ಸಹವಾಸ ನನ್ನಂತವರಿಗೆ ನಿಷ್ಠುರ ಮನಸ್ಥಿತಿಯನ್ನು ಬೆಳೆಸಿತು. ಸತ್ಯವನ್ನು ಸತ್ಯ ಎಂದು ಹೇಳುವ ಎದೆಗಾರಿಕೆ ಬರುವಂತೆ ಮಾಡಿತು. ಯಾವುದೇ ಸಂದರ್ಭದಲ್ಲಿ ಭ್ರಷ್ಠರಾಗದಂತೆ ಕಾದಿದ್ದು ಇಂತವರ ಜೊತೆ ಕೆಲಸ ಮಾಡಿದ ಅನುಭವ,

ಇಂದಿನ ಪತ್ರಿಕೋದ್ಯಮಿಗಳಿಗೆ ಇಂತಹ ಅನುಭವ ಇರುವುದು ಸಾಧ್ಯವಿಲ್ಲ. ಇವರೆಲ್ಲ ಜಾಗತೀಕರಣದ ನಂತರ ಪತ್ರಿಕೋದ್ಯಮಕ್ಕೆ ಬಂದವರು. ಪತ್ರಿಕೋದ್ಯಮ ಉಳಿದೆಲ್ಲ ಉದ್ಯಮದಂತೆ ಉದ್ಯಮವಾಗಿ ಪರಿವರ್ತನೆಗೊಂಡಿದ್ದು ನಮಗೆ ಆಫಾತವನ್ನು ಉಂಟು ಮಾಡಿದರೆ, ಹೊಸ ತಲೆ ಮಾರಿನ ಪತ್ರಿಕೋದ್ಯಮಿಗಳಿಗೆ ಇದು ಒಂದು ಸಾಮಾನ್ಯವಾದ ಘಟನೆ. ಜೊತೆಗೆ ಅವರಿಗೆ ಮಾರ್ಗದರ್ಶನ ಮಾಡುವ ಸಂಪಾದಕರೂ ಇಲ್ಲ. ಇರುವ ಬಹುತೇಕ ಸಂಪಾದಕರು, ಪಾರ್ಟ್ ಟೈಮ್ ರಾಜಕಾರಣಿಗಳು. ಜೊತೆಗೆ ಆಡಳಿತ ವರ್ಗ, ರಾಜಕಾರಣಿಗಳು ಮತ್ತು ಉದ್ಯೋಗಿಗಳ ನಡುವೆ ಮಧ್ಯವರ್ತಿಗಳಾಗಿ ಕೆಲಸ ಮಾಡುವವರು. ಇವರ ಗರಡಿಯಲ್ಲಿ ಬೆಳೆಯುತ್ತಿರುವವರು ನಿಜವಾದ ಅರ್ಥದಲ್ಲಿ ಪತ್ರಿಕೋದ್ಯಮಿಗಳಾಗುವುದಿಲ್ಲ. ಕೇವಲ ಏಜೆಂಟರುಗಳಾಗುತ್ತಾರೆ. ಇಂತಹ ಏಜೆಂಟರುಗಳಿಗೆ ಪತ್ರಿಕೋದ್ಯಮದ ಇತಿಹಾಸ ಬದ್ಧತೆ ಇರುವುದಿಲ್ಲ. ತಾವು ಬಳಸುವ ಭಾಷೆಯ ಬಗ್ಗೆ ಜ್ನಾನ ಇರುವುದಿಲ್ಲ.

ಇಂದು ಮಾಧ್ಯಮದಲ್ಲಿ ಇರುವವರಲ್ಲಿ ಬಹಳಷ್ಟು ಜನ ಮಾಧ್ಯಮದ ಗ್ಲಾಮರಿನಿಂದ ಬಂದವರು. ಇವರಿಗೆ ಹೇಳುವುದು ಇಷ್ಟೇ. ಸ್ವಲ್ಪ ಓದಿ, ಆಲೋಚನೆ ಮಾಡಿ. ಆರೋಗ್ಯ ಪೂರ್ಣವಾದ ಮನಸ್ಥಿತಿಯನ್ನು ರೂಪಿಸಿಕೊಳ್ಳಲು ಯತ್ನ ನಡೆಸಿ. ನಿಮ್ಮ ಮನಸ್ಸು ಆರೋಗ್ಯಪೂರ್ಣವಾಗಿರದಿದ್ದರೆ, ಬರವಣಿಗೆ ಆರೋಗ್ಯಪೂರ್ಣವಾಗಿರುವುದಿಲ್ಲ. ಬರವಣಿಗೆ ಆರೋಗ್ಯಪೂರ್ಣವಾಗಿರದಿದ್ದರೆ ಅದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿಬಿಡುತ್ತದೆ. ಜೊತೆಗೆ ಕನಿಷ್ಠ ಮನುಷ್ಯರಿಗೆ ಮನುಷ್ಯ ನೀಡುವ ಕನಿಷ್ಠ ಗೌರವ ನೀಡುವುದನ್ನು ಕಲಿತುಕೊಳ್ಳಿ.

***

ನನಗೆ ನಾನು ಮಾಡುವ ಕೆಲಸದ ಬಗ್ಗೆ ಜಿಗುಪ್ಸೆ ಮೂಡುತ್ತದೆ. ನಾನು ಪ್ರೀತಿಸುತ್ತ ಬಂದ, ನನಗೆ ಅನ್ನ ನೀಡುವ ಪತ್ರಿಕೋದ್ಯಮ ಪರಕೀಯ ಅನ್ನಿಸತೊಡಗುತ್ತದೆ. ನಾನು ನನ್ನ ಮನಸ್ಸು ಹೇಳುತ್ತಿರುವುದನ್ನು ಕೇಳುತ್ತಿದ್ದೇನೆಯೆ? ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸುವತ್ತ ನನ್ನ ಪತ್ರಿಕೋದ್ಯಮ ಕೆಲಸ ಮಾಡುತ್ತಿದೆಯೇ ? ಹೀಗೆ ನನ್ನನ್ನೇ ನಾನು ಪ್ರಶ್ನಿಸಿಕೊಳ್ಳುತ್ತೇನೆ. ಇದಕ್ಕೆ ದೊರಕುವ ಉತ್ತರ ನನ್ನನ್ನು ಇನ್ನಷ್ಟು ಹತಾಶನನ್ನಾಗಿ ಮಾಡುತ್ತದೆ.

***
ಇವತ್ತಿನ ಪತ್ರಿಕೋದ್ಯಮಿಗಳಿಗೆ ಬದ್ಧತೆಯ ಕೊರತೆ ಎದ್ದು ಕಾಣುತ್ತಿದೆ. ಅವ್ರಿಗೆ ಪೂರ್ವ ಸಿದ್ಧತೆ ಇಲ್ಲ. ಪತ್ರಿಕೆಯಲ್ಲಿ ಕೆಲಸ ಮಾಡುವುದೆಂದೆಂದರೆ, ಐಟಿ ಬಿಟಿ ಕಂಪೆನಿಯಲ್ಲಿ ಕೆಲಸ ಮಾಡಿದಂತೆ ಅಲ್ಲ. ಇಲ್ಲಿ ಎಲ್ಲವನ್ನೂ ಕಂಪೂಟರುಗಳ ಮೂಲಕ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಪತ್ರಿಕೋದ್ಯಮ ಮನಸ್ಸಿನ ಕೆಲಸ. ಅಲ್ಲಿ ತುಂಬಾ ವಿಭಿನ್ನವಾದ ಕ್ರಿಯಾಶೀಲತೆ ಬೇಕು. ಒಂದು ಘಟನೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ನೋಡುವ ಚಾಕಚಕ್ಯತೆ ಬೇಕು. ಇದು ಅಷ್ಟು ಸುಲಭವಾಗಿ ಧಕ್ಕುವುದಿಲ್ಲ. ನಿರಂತರ ಓದು ಚಿಂತನೆ ಇದ್ದರೆ ಮಾತ್ರ ಇಂಥಹ ಮನಸ್ಥಿತಿ ರೂಪಗೊಳ್ಳುತ್ತದೆ. ಆದರೆ ಇಂದು ಮಾಧ್ಯಮದಲ್ಲಿ ಕೆಲಸ ಮಾಡುವವರಲ್ಲಿ ಇಂತಹ ಮನೋಧರ್ಮವೇ ಇಲ್ಲ.. 
          ***
ನಾನು ನಮ್ಮ ವಾಹಿನಿ ಪ್ರಾರಂಭವಾದ ದಿನದಿಂದ ಕ್ರೆಡಿಬಿಲಿಟಿಯ ಬಗ್ಗೆ ನಮ್ಮ ಹುಡುಗರ ಜೊತೆ ಮಾತನಾಡುತ್ತಲೇ ಇದ್ದೇನೆ. ವಿಶ್ವಾರ್ಹತೆ ಎಷ್ತು ಮುಖ್ಯ ಎಂದು ಹೇಳುತ್ತಲೇ ಇದ್ದೇನೆ. ಆದರೆ ನನ್ನ ಮಾತು ಯಾರಿಗೆ ಅರ್ಥವಾದಂತೆ ಕಾಣುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ನನಗೆ ಅನ್ನಿಸುವುದೆಂದರೆ, ಇಂದು ಮಾಧ್ಯಮ ಉಳಿದೆಲ್ಲ ಮಾಧ್ಯಮದಂತೆ ಬದಲಾಗಿದೆ, ಇಲ್ಲಿ ಕೆಲಸ ಮಾಡುವವರಿಗೂ ಯಾವುದೋ ಅಂಗಡಿಯನ್ನು ಇಟ್ಟು ವ್ಯಾಪಾರ ಮಾಡುವವರಿಗೂ ಯಾವುದೇ ವ್ಯತ್ಯಾಸ ಉಳಿದಿಲ್ಲ ಎಂದು! 
ಜೊತೆಗೆ ಇಂದಿನ ಪತ್ರಿಕೋದ್ಯಮಿಗಳಿಗೆ ಓದುವ ಅಭಿರುಚಿ ಕಡಿಮೆ. ಒಬ್ಬ ಪತ್ರಿಕೋದ್ಯಮಿ ಇಪ್ಪತ್ನಾಲ್ಕು ಗಂಟೆ ಪತ್ರಿಕೋದ್ಯಮಿಯೇ. ಆತ ಕನಿಷ್ಟ ದಿನಕ್ಕೆ ಎರಡು ಮೂರು ಗಂಟೆ ಓದಬೇಕು. ಕರ್ನಾಟಕದಲ್ಲಿ ಪತ್ರಿಕೋದ್ಯಮ ಮಾಡುವವರಿಗೆ ಇಲ್ಲಿನ ಬದುಕು, ಸಾಹಿತ್ಯ ಸಂಸ್ಕೃತಿ, ರಾಜಕೀಯ ಇತಿಹಾಸ, ಸಾಮಾಜಿಕ ಸಮಸ್ಯೆ, ಜನಪರ ಚಳವಳಿಗಳ ಬಗ್ಗೆ ಗೊತ್ತಿರಬೇಕು. ಆದರೆ ದೃಶ್ಯ ಮಾಧ್ಯಮದಲ್ಲಿ ಇರುವವರಂತೂ ಈ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮ ಬಾಹ್ಯ ಸೌಂದರ್ಯವೇ ಮುಖ್ಯ ಎಂದುಕೊಂಡಿರುತ್ತಾರೆ. ಸೌಂದರ್ಯದ ಅಹಂಕಾರ ಅವರ ಕ್ರಿಯಾಶೀಲತೆಯನ್ನು ಕೊಂದು ಬಿಡುತ್ತದೆ ಎಂಬ ಸಾಮಾನ್ಯ ಜ್ನಾನವೂ ಅವರಿಗೆ ಇರುವುದಿಲ್ಲ.

ಜೊತೆಗೆ ನಮಗೆ ಮಾತನಾಡುವುದು ಗೊತ್ತಿದೆ. ಕೇಳಿಸಿಕೊಳ್ಳುವುದು ಗೊತ್ತಿಲ್ಲ. ದೃಶ್ಯ ಮಾದ್ಯಮದಲ್ಲಿ ಇರುವವರು ಮಾತನಾಡುವುದೇ ತಮ್ಮ ಕಾಯಕ ಎಂದುಕೊಂಡಿರುತ್ತಾರೆ. ಮೌನ ನಮಗೆ ನೀಡುವ ಕ್ರಿಯಾಶೀಲತೆ ಅರಿವು ಅವರಿಗೆ ಇರುವುದಿಲ್ಲ. ಇದನ್ನು ಯಾರನ್ನೂ ಉದ್ದೇಶಿಸಿ ನಾನು ಹೇಳುತ್ತಿಲ್ಲ. ನನ್ನನ್ನು ಸೇರಿದಂತೆ ಎಲ್ಲರೂ ಈ ಬಗ್ಗೆ ಯೋಚಿಸಬೇಕಾಗಿದೆ. 
***

ಮಾಧ್ಯಮದಲ್ಲಿ ಕೆಲಸ ಮಾಡುವವರೂ ಬದಲಾಗಿದ್ದಾರೆ. ಮಾಧ್ಯಮದಲ್ಲಿ ಕೆಲಸ ಮಾಡುವವರು ಸಂಪೂರ್ಣವಾಗಿ ಮಾಧ್ಯಮವನ್ನೇ ನಂಬಿಕೊಂಡು ಬದುಕುತ್ತಿಲ್ಲ. ಬಹಳಷ್ಟು ಜನರಿಗೆ ಬದುಕುವುದಕ್ಕೆ ಬೇರೆ ಬೇರೆ ದಾರಿಗಳಿವೆ. ಕೆಲವರು ಮಾಧ್ಯಮದಲ್ಲಿ ಕೆಲಸ ಮಾಡುವುದು ವಿಸಿಟಿಂಗ್ ಕಾರ್ಡಿಗಾಗಿ. ಇನ್ನೂ ಕೆಲವರಿಗೆ ಇದು ಪಾರ್ಟ್ ಟೈಮ್ ಜಾಬ್.

ನಮ್ಮ ನಡುವೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಪತ್ರಿಕೋದ್ಯಮಿಗಳಿದ್ದಾರೆ. ಗಣಿ ನಡೆಸುವ ಮಾಧ್ಯಮದ ವ್ಯಕ್ತಿಗಳಿದ್ದಾರೆ. ಹೋಟೇಲ್, ಬಾರ್ ನಡೆಸುವವರಿದ್ದಾರೆ. ಹಾಗೆ ಸಿನಿಮಾ ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತ, ಈ ಬಗ್ಗೆ ಬರೆಯುವ ಪತ್ರಿಕೋದ್ಯಮಿಗಳಿದ್ದಾರೆ. ಹಾಗೆ ಚಿತ್ರನಟರಾಗುವ ಮೆಟ್ಟಿಲಾಗಿ ಮಾಧ್ಯಮವನ್ನು ಬಳಸಿಕೊಳ್ಳುವವರಿದ್ದಾರೆ. ಒಂದು ಬದುಕುವ ದಾರಿಯಾಗಿ ಯಾವ ಕೆಲಸ ಮಾಡುವುದು ತಪ್ಪಲ್ಲ. ಆದರೆ ತಮ್ಮ ಬದುಕುವ ದಾರಿಯಲ್ಲಿ ಮುಂದುವರಿಯಲು ಪತ್ರಿಕೋದ್ಯಮವನ್ನು ಬಳಸಿಕೊಳ್ಳುವುದು ತಪ್ಪು.

ಇದನ್ನೆಲ್ಲ ಯಾಕೆ ಹೇಳುತ್ತಿದ್ದೆನೆಂದರೆ ಪ್ರಾಮಾಣಿಕತೆಯ ಬಗ್ಗೆ ಮಾತನಾಡುತ್ತಿರುವುದರಿಂದ. ನಮ್ಮ ಆಲೋಚನೆಯಲ್ಲಿ ಪ್ರಾಮಾಣಿಕತೆ ಬರಬೇಕೆಂದರೆ ನಮ್ಮ ಸ್ವಂತ ಹಿತಾಸಕ್ತಿ ಇರಕೂಡದು. ನಮ್ಮ ಸ್ಚಂತ ಹಿತಾಸಕ್ತಿ ಇರಕೂಡದು. ಯಾವುದೇ ವಿಚಾರ ಅಥವಾ ಘಟನೆಯಲ್ಲಿ ಅದನ್ನು ವರದಿ ಮಾಡುವವರ, ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರ ಪಾಲುದಾರಿಕೆ, ಸಹಭಾಗಿತ್ವ ಇರಕೂಡದು. ಈಗ ಬಾರ್ ನಡೆಸುವ ವ್ಯಕ್ತಿ ವರದಿಗಾರನಾಗಿದ್ದರೆ, ಆ ವಿಚಾರ ಬಂದಾಗ ಆತ ಪ್ರಾಮಾಣಿಕ ನಿಲುಮೆ ತೆಗೆದುಕೊಳ್ಳುವುದು ಸಾಧ್ಯವೆ ? ಗಣಿ ಮಾಲಿಕನಾದ ಒಬ್ಬ ವರದಿಗಾರ, ಈ ಬಗ್ಗೆ ಎಷ್ಟರ ಮಟ್ಟಿಗೆ ಪ್ರಾಮಾಣಿಕ ನಿಲುವನ್ನು ಪ್ರದರ್ಶಿಸಬಲ್ಲ ? ಇದರ ಜೊತೆಗೆ ಮಾಧ್ಯಮದ ಆಡಳಿತ ವರ್ಗ ಕೂಡ ಒಂದಲ್ಲ ಒಂದು ಗುಂಪು, ರಾಜಕೀಯ ಪಕ್ಷಗಳ ಜೊತೆ ತನ್ನನ್ನು ಗುರುತಿಸಿಕೊಳ್ಳುತ್ತಿದೆ.

ನೈತಿಕತೆಯ ಸೂಕ್ಷ್ಮವನ್ನು ಮಾಧ್ಯಮ ಅರ್ಥ ಮಾಡಿಕೊಳ್ಳಬೇಕು. ಮಾಧ್ಯಮದಲ್ಲಿ ಕೆಲಸ ಮಾಡುವವರು ಅರ್ಥ ಮಾಡಿಕೊಳ್ಳಬೇಕು. ಆದರೆ ಇಂದು ಮಾಧ್ಯಮ ಜಗತ್ತೂ ಕೂಡ ಸಂಪೂರ‍್ಣವಾಗಿ ಒಂದು ಉದ್ಯಮದಂತೆ ಕೆಲಸ ಮಾಡುತ್ತಿದೆ. ಯಾವುದು ಉದ್ಯಮವಾಗುತ್ತದೆಯೋ ಅಲ್ಲ ಲಾಭ ನಷ್ಟ ಮಾತ್ರ ಗಣನೆಗೆ ಬರುತ್ತದೆ. ಇಲ್ಲಿಯೂ ಅಷ್ಟೇ ಲಾಭ ನಷ್ಟವೇ ಪರಮ. ಸಾರ್ವಜನಿಕ ಹಿತಾಸಕ್ತಿ, ಬಹುಜನ ಹಿತಾಯ ಎಂಬ ಮಾತುಗಳು ಅರ್ಥ ಕಳೆದುಕೊಳ್ಳುತ್ತಿವೆ. ಇದರಿಂದ ಪತ್ರಿಕೋದ್ಯಮದ ನೈತಿಕತೆಯ ನೆಲಗಟ್ಟು ಶಿಥಿಲಗೊಳ್ಳುತ್ತಿದೆ. ಸಮಾಜದ ಫೋರ‍್ಥ್ ಎಸ್ಟೇಟ್, ರಿಯಲ್ ಎಸ್ಟೇಟ್ ಎಜೆಂಟರುಗಳ ತಾಣವಾಗುತ್ತಿದೆ.
***

ನಾವು ಪತ್ರಿಕೋದ್ಯಮಿಗಳೆಂದರೆ, ದೇವ ಲೋಕದಿಂದ ನೇರವಾಗಿ ಇಳಿದು ಬಂದವರಲ್ಲ. ನಾವೂ ಈ ಸಮಾಜದ ಭಾಗ. ನಾವು ಈ ಸಮಾಜದ ಒಳಗೆ ಇದ್ದೂ ಸಾಕ್ಷಿಪ್ರಜ್ಞೆಯಾಗಿ ಕೆಲಸ ಮಾಡುತ್ತಿರುತ್ತೇವೆ. ಒಳಗೆ ಇದ್ದು ಹೊರಗಿನವರಾಗಿ ನೋಡುವುದಿದೆಯಲ್ಲ, ಅದಕ್ಕೆ ಸಂತನ ಮನಸ್ಸು ಬೇಕು. ಹೋರಾಟಗಾರನ ಕೆಚ್ಚೆದೆ ಬೇಕು, ಸತ್ಯ ನಿಷ್ಟೆ ಬೇಕು, ಪ್ರಾಮಾಣಿಕತೆ ಬೇಕು. ಇದೆಲ್ಲ ಇದ್ದೂ ನಮಗೆ ನಾವು ಹೆದರುತ್ತಿರಬೇಕು. ನಮ್ಮನ್ನೇ ನಾವು ಲೇವಡಿ ಮಾಡಿಕೊಳ್ಳುವ ಮನಸ್ಥಿತಿ ಬೇಕು. ಒಳಗೆ ಇದ್ದೂ ಹೊರಗಿನವರಾಗುವುದು ಸಣ್ಣ ಕೆಲಸ ಅಲ್ಲ. ನಾವು ಒಳಗೆ ಇದ್ದೂ ಒಳಗಿನವರಾಗುವ ಅಪಾಯವೇ ಹೆಚ್ಚು. ಹೀಗಾಗಿಯೇ ನಾವು ರಾಜಕೀಯ ವರದಿ ಮಾಡುವವರು ರಾಜಕಾರಣಿಗಳಾಗಿ ಬಿಡುತ್ತೇವೆ. ಯಾರ ಯಾರ ಪರವಾಗಿ ಕೆಲಸ ಮಾಡಲು ಪ್ರಾರಂಭಿಸಿಬಿಡುತ್ತೇವೆ.

ಇಷ್ಟಕ್ಕೆ ನಾವು ಹತಾಶರಾಗಬೇಕಾಗಿಲ್ಲ. ಇವೆಲ್ಲವುದರ ಜೊತೆಗೆ ಪತ್ರಿಕೋದ್ಯಮ ಇಂದಿಗೂ ಜನರ ನಂಬಿಕೆಯನ್ನು ಉಳಿಸಿಕೊಂಡಿದೆ. ಭ್ರಷ್ಟರಾಗದ ಪ್ರಾಮಾಣಿಕ ಪತ್ರಿಕೋದ್ಯಮಿಗಳು ನಮ್ಮ ನಡುವೆ ಇದ್ದಾರೆ. ಇದರಿಂದಾಗಿಯೇ ಪತ್ರಿಕೋದ್ಯಮ ನಮ್ಮಲ್ಲಿ ಹೊಸ ಸಮಾಜದ ಕನಸನ್ನು ಮೂಡಿಸುತ್ತಲೇ ಇದೆ.
ಭಟ್ಟರು ಸಮಯ ಚಾನಲ್ ತೊರೆಯುವುದು ನಿಶ್ಚಿತವಾದರೆ, ಅದಕ್ಕೆ ಕಾರಣಗಳನ್ನು ಭಟ್ಟರ ಮೇಲಿನ ಮಾತುಗಳಲ್ಲೇ ಹುಡುಕಬಹುದೇನೋ?

Friday, July 22, 2011

ಒಂದು ಪತ್ರಿಕೆಯ ಸುಳ್ಳು ಸುದ್ದಿಯನ್ನು ಇನ್ನೊಂದು ಪತ್ರಿಕೆ ಬಯಲುಗೊಳಿಸಬಾರದೇ?

ದಿ ಹಿಂದೂ ಪತ್ರಿಕೆ ತನ್ನ ಎದುರಾಳಿ ಪತ್ರಿಕೆಗಳನ್ನು ಮಣಿಸಲು ವಿನೂತನ ಮಾದರಿಯನ್ನು ಅನುಸರಿಸುವಂತೆ ಕಾಣುತ್ತಿದೆ. ದಿನಾಂಕ ಜು.೨೦ ರ ಪತ್ರಿಕೆಎಎಯ op-ed ಪುಟ ನೋಡಿದವರಿಗೆ ಒಂದು ಅಚ್ಚರಿ ಕಾದಿತ್ತು. ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ದಿನಾಂಕ ಜೂ.೨೬ ರಂದು ಪ್ರಕಟಿಸಿದ್ದ exclusive ವರದಿಯೊಂದು ಸೃಷ್ಟಿಸಿದ ಅವಾಂತರಗಳನ್ನು, ಪತ್ರಿಕೆ ಮರೆತ ಜರ್ನಲಿಸ್ಟಿಕ್ ಎಥಿಕ್ಸ್ ನ್ನು, ವಿಷಯ ಪರಿಣತರನ್ನು misquote ಮಾಡಿದ್ದನ್ನು  ಬಯಲು ಮಾಡಿತು.

ಮತ್ತೊಂದು ಮಾಧ್ಯಮ ಸಂಸ್ಥೆಯ ಹೆಸರನ್ನೂ ನಮೂದಿಸಲು ಹಿಂಜರಿಯುವ ಪರಿಪಾಠ ಮಾಧ್ಯಮ ಕ್ಷೇತ್ರದಲ್ಲಿ ಸಾಮಾನ್ಯವಾಗಿರುವ ಈ ಹೊತ್ತಿನಲ್ಲಿ, ಇಂತಹದೊಂದು ಬೆಳವಣಿಗೆ ಕುತೂಹಲಕಾರಿ. ಲೇಖನದ ಕೊನೆಯಲ್ಲಿ ದಿ ಹಿಂದೂ ಪ್ರಕಟಿಸುತ್ತದೆ - ದಿ ಹಿಂದೂ ಉತ್ತರ ಭಾರತದಲ್ಲಿ ಹಿಂದೂಸ್ಥಾನ ಟೈಮ್ಸ್ ಜೊತೆ ಪೈಪೋಟಿ ನಡೆಸುತ್ತಿದೆ. ಈ ಅಡಿ ಟಿಪ್ಪಣಿ ದಿ ಹಿಂದೂ ಪತ್ರಿಕೆ  ಪ್ರಸ್ತುತ ಲೇಖನ ಪ್ರಕಟಿಸಿದ್ದುದರ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ.

ಆದರೆ ಎರಡು ಪತ್ರಿಕೆಗಳ ನಡುವಿನ ಪೈಪೋಟಿ ಆಚೆಗೂ ಈ ಬೆಳವಣಿಗೆ ಮಹತ್ವ ಪಡೆದಿದೆ.

DNA  ಪತ್ರಿಕೆ ಇಂದೋರ್‌ನಲ್ಲಿ ತನ್ನ ಆವೃತ್ತಿಯನ್ನು ಲಾಂಚ್ ಮಾಡುವ ದಿನ (ಜೂ ೨೬) ಹಿಂದೂಸ್ಥಾನ್ ಟೈಮ್ಸ್ ಒಂದು exclusive ಸುದ್ದಿಯನ್ನು ಪ್ರಕಟಿಸಲೇಬೇಕು ಎಂಬ ಹಟದೊಂದಿಗೆ ಹಸಿಹಸಿ ವರದಿಯನ್ನು ಮುಖಪುಟದಲ್ಲಿ ಟಾಪ್ ಆಂಕರ್ ಆಗಿ ಪ್ರಕಟಿಸಿತ್ತು. ಇಂದೋರ್ ನ ಆಸ್ಪತ್ರೆಯಲ್ಲಿ ನೂರಾರು ಹೆಣ್ಣು ಮಕ್ಕಳು ಹುಟ್ಟುವ ಕೆಲವೇ ಹೊತ್ತಿನಲ್ಲಿ  ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಅವರನ್ನು ಗಂಡು ಮಕ್ಕಳಾಗಿ ಪರಿವರ್ತನೆ ಮಾಡಲಾಗಿದೆ ಎಂದು ಪತ್ರಿಕೆ ವರದಿ ಮಾಡಿತ್ತು.

ವೈಜ್ಞಾನಿಕವಾಗಿ ಇದುವರೆಗೆ ಜಗತ್ತಿನ ಯಾವ ಮೂಲೆಯಲ್ಲೂ ಸಾಧ್ಯವಾಗದೇ ಇದ್ದದನ್ನು ಪತ್ರಿಕೆ ವರದಿ ಮಾಡಿ ಎಲ್ಲರಿಗೂ ದಂಗುಬಡಿಸಿತು. ಪ್ರಧಾನ ಮಂತ್ರಿ ಕಾರ್ಯಾಲಯವೂ ಈ ಬಗ್ಗೆ ಹೆಚ್ಚಿನ ಮಾಹಿತಿ ಕೇಳಿ ಸ್ಥಳೀಯ ಸರಕಾರಕ್ಕೆ ಪತ್ರ ಬರೆಯಿತು.

ಹೆಣ್ಣು ಮಕ್ಕಳನ್ನು ಗಂಡಾಗಿ ಪರಿವರ್ತಿಸುವ ಸಂಚು ಆಘಾತಕಾರಿ ಸುದ್ದಿಯೇ ಸರಿ. ಆ ಸುದ್ದಿ ಪ್ರಕಟವಾದಂದಿನಿಂದ ದಿ ಹಿಂದೂ ಅದರ ಹಿಂದೆ ಬಿದ್ದಿದೆ. ವೈಜ್ಞಾನಿಕವಾಗಿ ಇದು ಸಾಧ್ಯವೇ ಎಂದು ನುರಿತ ತಜ್ಞರನ್ನು ಮಾತನಾಡಿಸಿದೆ. ಹಿಂದೂಸ್ಥಾನ್ ಟೈಮ್ಸ್ ತನ್ನ ವರದಿಗಾಗಿ ಸಂಪರ್ಕಿಸಿದ ತಜ್ಞರನ್ನೂ ಮಾತನಾಡಿಸಿದೆ. ಅಷ್ಟೇ ಅಲ್ಲ HTಯ ಇಂದೋರ್ ಆವೃತ್ತಿ ಮುಖ್ಯಸ್ಥರನ್ನೂ ಸಂಪರ್ಕಿಸಿ ಅವರ ಅಭಿಪ್ರಾಯವನ್ನೂ ತೆಗೆದುಕೊಂಡಿದೆ.

ನವಜಾತ ಶಿಶುಗಳ ಅಂಗ ನಿರ್ಧರಿಸುವ ಅಂಗಗಳು ಸಂಪೂರ್ಣವಾಗಿ ಬೆಳೆಯದೇ ಇದ್ದ ಸಂದರ್ಭದಲ್ಲಿ, ದೇಹದ ಇತರ ಲಕ್ಷಣಗಳನ್ನು ಪರಿಶೀಲಿಸಿ, ಸೂಕ್ತ ಶಸ್ತ್ರಚಿಕಿತ್ಸೆ ನಡೆಸುವ ಪರಿಪಾಠವನ್ನೇ HT ತಪ್ಪಾಗಿ ವರದಿ ಮಾಡಿತ್ತು.
ತಜ್ಞರ ಹೇಳಿಕೆಗಳು ತಿರುಚಿ ಸುದ್ದಿಯನ್ನು sensational ಮಾಡುವ ಪ್ರಯತ್ನ ನಡೆದಿತ್ತು ಎಂಬುದನ್ನು ದಿ ಹಿಂದೂ ಸವಿವರವಾಗಿ ನಿರೂಪಿಸಿದೆ.

ಕನ್ನಡದಲ್ಲಿ ಇದುವರೆಗೆ ಹೀಗೆ ಒಂದು ಪತ್ರಿಕೆ ತನ್ನ ಎದುರಾಳಿಯ ತನಿಖಾ ವರದಿಯನ್ನು ವಿಶ್ಲೇಷಿಸಿ ವರದಿ ಪ್ರಕಟಿಸಿದ ಉದಾಹರಣೆ ಇಲ್ಲ. ಅನೇಕ ಸಂದರ್ಭಗಳಲ್ಲಿ ಆ ಪತ್ರಿಕೆ ಬರೆದಿರುವುದು ಸುಳ್ಳು, ಆ ಚಾನೆಲ್ ಅವಸರಕ್ಕೆ ಏನೇನೋ ವರದಿ ಮಾಡಿದೆ ಎಂದು ಮಾತನಾಡಿಕೊಳ್ಳುವ ಪತ್ರಕರ್ತರು, ಸಂಪಾದಕರು ಆ ತಪ್ಪನ್ನು ಎತ್ತಿ ತೋರಿಸುವ ಪ್ರಯತ್ನ ಮಾಡಲೇ ಇಲ್ಲ. ಇನ್ನು ಮುಂದೆ ಮಾಡುತ್ತಾರಾ?

Friday, July 15, 2011

ಮಲದ ಗುಂಡಿಯ ಸಾವುಗಳು: ಸತ್ಯ ಶೋಧನಾ ವರದಿ

Fact-find Report on the death of two persons engaged in the cleaning of a soak pit in Kenchammana Hoskote, Alur Taluk, Hassan District


'One of the darkest blots on our development process is the fact that even after 64 years of independence, we still have the heinous practice of manual scavenging. Today, I would like you to pledge that this scourge will be eliminated from every corner of our country in the next six months.'
(Prime Ministers Speech at the Inaugural Session of the Conference of State Ministers of Welfare and Social Justice)

ಬದುಕಿದ್ದಾಗ ಅರ್ಜುನ ತನ್ನ ಕುಟುಂಬದೊಂದಿಗೆ

On 9th July, 2011, of the four persons employed to clean a kakkas gundi (soak pit) at the Poornarama Coffee Estate at Kenchammana Hoskote, Alur Taluk, Hassan District, two of them, Shri Mahadeva (aged about 30 years) and and Shri Arjun (Aged about 21 years) died of asphyxiation. The matter was report in the newspapers including “The Hindu”.

The PUCL constituted a fact finding team consisting of Prof Ramdas Rao, Dayanand T.K., Raghupathy S. and Maitreyi Krishnan to inquire into the incident. To this end, the Team, on 11th July 2011, conducted the fact-finding mission and visited the families of the deceased persons, the Deputy Commissioner and the jurisdictional Police Station.

The Incident:

On 9th July, 2011 around 2.30 pm four workers from Sakleshpur were called by the owners of Poornarama Coffee Estate at Kenchammana Hoskote, Alur Taluk, Hassan District to clean the soak pit that was in the estate. The soak pit was 10-12 feet in height with 1 foot filled. It is to be noted that this entire area has no Underground Drainage system, and the excreta is collected in soak pits, and cleaned when they become full. The work is done by workers physically entering into the soak pits and immersing themselves in the excreta while and manually removing the same from these pits.

The incident as narrated to the Team by Muruga, who is an eye-witness to the incident, and who had also gone to perform the work is as follows:

ಇದು ಇವರ ವಾಸಸ್ಥಳ
Mahadeva, was contacted by Sanjay Gowda, owner of  Poorna Ram Estate to come and empty a pit of human excreta in the estate. Mahadeva took his brother Murugan (working as a linesman  in Sakleshpur) and his 2 cousins Arjun and Manja (contract pourakarmikas) along with him to perform the work. They were asked to complete the work immediately. On reaching the pit, Mahadeva opened the cover of the pit (10’ deep, excreta covering one foot of the pit without any vent to air it out). Mahadeva went inside the pit, followed by Arjun. Within 5 seconds of entering the pit he was immediately overpowered and suffered seizures on inhaling the deadly and noxious gas that emanated from the pit. Arjun tried to rescue Mahadeve, but he also lost consciousness. Muruga tried to pull up Arjun but felt sick and immobilized by the noxious gas, and couldn’t move his arms and legs. Madha and Arjun died within a few seconds. Muruga and Manja shouted for help but no one came at first. However, by the time the other workers in the area came to help them, Mahadeva and Arjun lay dead in the soak pit, and Manja and Muruga were drifting in and out of consciousness. Muruga and Manja were immediately taken by the women workers away from the spot, and to another place. The workers thereafter contacted the police who came and collected the bodies, cleaned the bodies, and admitted them to the morgue in Sakleshpur Hospital. The police collected the statement about the event from the President of the Adi Dravida Abhivrudhi Yuvaka Sangha.

Three of the workers were blood relatives, with Mahadeva being Muruga's older brother, and Arjuna, their cousin. Muruga who narrated the incident who was still visibly disturbed having witnessed the gruesome death of Arjun and Mahadeva. He also informed us that he had given this same statement to the police, who had visited the spot.

The aftermath of the incident, according to Varalakshmi, Municipal Councillor

We also Smt. Varalakshmi, Member of the Sakaleshpur Town Municpal Council in whose ward jurisdiction, Mahadeva, Arjun and Muruga reside. She informed us that immediately after the incident, around 5.30 pm, the Tahsildar, the Local MLA, H K Kumaraswamy, the President, Shri C. Nanjaiah, Adi Dravida Abhivrudhi Yuvaka Sangha (the local organization in the area in which the workers reside) and other members of the organization visited the spot of the incident.

According to Shri Krishna, member of the Adi Dravida Abhivrudhi Yuvaka Sangha, the owner of the  Poornarama Coffee Estate, Shri Sujay Gowda had provided Rs. 20, 000/- towards funeral expenses, and had agreed to pay the family of each of the deceased Rs. 2.5 lakhs by the 12th-13th July, 2011. As on the date of the visit, the Team found that no such compensation had been given to the families of the deceased.

According to Smt. Varalakshmi, the tehsildar has assured Madha’s surviving family of 3 children (wife doesn’t live with the family) of all benefits accruing to Madha. The Social Welfare dept. has promised to sanction one Ashraya site to each family and other admissible benefits.

However, no compensation was being given to Muruga who had also inhaled the gases and has breathing problems, and is also disturbed having witnessed the death of his brother and cousin.

Response of the District Administration

The Team visited the Deputy Commissioner, Hassan District, Shri K. G. Jagadeesh. He informed us that he was not aware of the said incident, until we mentioned it to him.

ಮಹದೇವನ ಕುಟುಂಬದವರು
He said that he would direct the Assistant Commissioner to visit the spot and prepare a report on this incident. He expressed that such an incident would be in contravention of the Employment of Manual Scavengers and Dry Latrines (Prohibition) Act, 1993 and that subsequent to the receipt of report from the Assistant Commissioner, he would make  appropriate directions including the invoking of penal sections under the Act.


On the state of manual scavenging in the district of Hassan, he informed us that according to the inspection there were no persons employed for manual scavenging in the district. However, after having received this information on the death and on the basis of the report of the Assistant Commissioner, he would look into this aspect again. While a large part of the district did not have UGD coverage, he said that wet toilets with connected tanks and soak pits were being used in the district. He said that in the urban local bodies, steps towards obtaining machines to perform this work were in progress, however the rural areas had not been provided with any such machines.
He mentioned that the implementation of the Employment of Manual Scavengers and Dry Latrines (Prohibition) Act, 1993 and the rehabilitation scheme made under this Act was in progress. However, only persons who feel under the criteria specified in the scheme would be entitled to the package and workers who had taken up this work recently would not be covered under it.

A meeting of the department officials, civil society representatives and groups working for the rights of manual scavengers has been fixed by the Deputy Commissioner on 30th July, 2011 to look into the issue of Manual Scavenging.

According to the Assistant Commissioner.......??

Response of the Police


ಬದುಕುಳಿದ ಮುರುಗ
Kenchammana Hoskote, Alur Taluk falls in the jurisdiction of the Alur Town Police Station. We met Shri Muddhuraj Y., the Police Sub-Inspector who stated that the police had registered the UDR (unnatural death report ) under Section 174 of the Code of Criminal bearing UDR No. 26/2011. A copy of the UDR report provided to us shows that the complaint on which it is based given by Shri Muruga, states that on 9th July, 2011, the Writer of Poornarama estate, Shri Giridhar informed him that the kakkas-gundi at the estate was stuck and needed to be cleaned. Shri Muruga, along with his brother Madheva, cousin Arjun and Manja went around 3 pm to the estate to clean the kakkas gundi. Having moved the stone that was covering the pit, they saw that the pit was 10 feet in height with 3 feet water.

It goes on to state that Mahadeva slipped in the wet mud and fell into the pit, and Arjun who went to save him also slipped and fell in. Muruga and Manja tried to save them with a rope, but were unable to do so. This is contrary to what we were informed by Shri Mahadeva who had categorically said that Mahadeva and Arjuna had entered the pit to clean it, and having inhaled the noxoius gas had fallen inside the pit.

We were informed by the concerned police official that since the complaint given by Muruga said that the incident was an accident, no case under Section 304-A could be registered.

The Team brought to the notice of the Police Officer the Employment of Manual Scavengers and Construction of Dry Latrines (Prohibition) Act, 1993 which penalizes any person who employs any other person for manually carrying human excreta, and that the said complaint squarely attracts this prohibition. Shri Muddhuraj Y. informed us that he would immediately look into this matter to see if the said case attracted this provision, and would immediately invoke the said section upon consultation with his superior officers. We also spoke to the Deputy Superintdent of Police, Alur Taluk over the telephone, who informed us that he would look into the matter and give appropriate directions to the concerned Investigating Officer.

ಸೂರಿಲ್ಲದ ಮನೆಗಳು

The Team would like to point out that firstly, the narration of incidents by Shri Muruga to the team is contrary to that provided in the UDR Report. Secondly, although the provisions of Section 304-A of the Indian Penal Code which deals with causing death by negligence the same has not been invoked, and in fact no FIR has been registered in this regard. Thirdly, although the provisions of the Employment of Manual Scavengers and Construction of Dry Latrines (Prohibition) Act, 1993 are directly attracted in the case, since the complaint itself discloses that the workers had gone to the spot to manually clean the kakkus gundi (soak pit), and the offence under the Act is cognizable, no case under this Act has also not been registered. This lack of registering of an FIR when serious cognizable are so clearly made out is of grave concern, and it is absolutely essential that the same is registered and the persons responsible for the death of the workers are not allowed to go scott-free.

Living Conditions of Madiga community in Sakleshpur 

The Madiga community where the families of the deceased powrakarmikas reside, live in very poor conditions. There are 150 families living in17 municipal-owned quarters divided into smaller habitations to accommodate growing families. They have lived here for many generations, and moved in here when it was a barren hill, infested with wild animals. It was a burial ground then. (Yet they have not been given khata deeds, despite living there for more than 50 years.) The colony has no proper roads, inadequate water supply and electricity. Only after a lot of pressure have some basic amenities been provided. Most of them work as powrakarmikas and manual scavengers. We were informed that the condition in Alur district was even worse than the situation in Sakaleshpur, where  manual scavenging is being carried out regularly in the area by contract powrakarmikas. They informed us that both men and women perform the work of manual scavenging, and women enter the pits to remove the human excreta.

ಸತ್ತು ಬಿದ್ದಿರುವ ಬೀದಿದೀಪಗಳು
Interestingly, the account we received from the persons residing there was in contrast to the account of Smt. C.Varalskshmi’s, the area Concillor, who is highly regarded as the representative of her community, and is accepted and consulted on matters related to the welfare of this community. According to her, about 27 PKs work in Sakleshpur, and while there is no separate workforce of pit cleaners, some members of this community (both PKs and others, like Murugan, who work odd jobs in the town) go for this work to supplement their meager earnings.

She told us that there are no dry latrines in the area, but only wet latrines; the UGD has not been tried out in the area because of its hilly terrain. One sucking machine has been bought and is operating normally under a trained employee.

According to Varalakshmi, there’s no caste discrimination of any sort in Sakleshpur. No caste atrocity has taken place in this town, though it persists in surrounding villages.

Application of the Employment of Manual Scavengers and Construction of Dry Latrines (Prohibition) Act, 1993

The Employment of Manual Scavengers and Construction of Dry Latrines (Prohibition) Act, 1993 was enacted in the year 1993 to bring an end to the degrading, dehumanising and obnoxious  practice of manual scavenging which involves persons physically and manually removing human excreta with hands and carrying the excreta from the latrines or pits to the dumping sites. The dehumanising practice of manual scavenging is closely interlinked with untouchability, with only persons belonging to dalit communities performing this work.

The Ministry of Home Affairs has issued Advisory to States/UTS and Concerned Ministries/Departments to Check Crimes against SC/ST, noting that that manual scavenging still persists in India despite being outlawed. The advisory noted that no one has been punished in 17 years of the existence of the Employment of Manual Scavengers and Construction of Dry Latrines (Prohibition) Act, 1993.

The Government of India being deeply concerned on the continuance of this shameful practice which violates human dignity and Articles 14, 17, 21 and 23 of the Constitution and would therefore re-emphasize that urgent action should be taken by the State Governments and UT Administrations to completely eradicate this practice, requires that urgent action be taken by the State Governments and UT Administrations on the following:-

• Vigorous and conscientious enforcement of the statutory provisions and the existing legislations relating to crimes against Scheduled Castes and Scheduled Tribes should be undertaken. It is reiterated that manual scavenging is punishable u/s 14, read with Section 3(1)(a), of the Employment of Manual Scavengers and Construction of Dry Latrines(Prohibition) Act,1993. However, the enforcement of the Act by State Governments/ UTs is generally lax.

ಅರ್ಜುನ

• Further, in terms of Scheduled Castes and Scheduled Tribes ( POA) Act, 1989, any act done to violate the dignity of a member of a Scheduled Caste or a Scheduled Tribe by a non-Scheduled Caste or non-Scheduled Tribe person would amount to an offence under Section 3 (1) (iii) of the Act. It may be noted that engaging or employing a member of a Scheduled Caste or a Scheduled Tribe to clean, handle or carrying human excreta amounts to violating his or her dignity and therefore, may fall within the ambit of Clause (iii) of Sub Section (1) of Section 3 of the Act. Therefore, such cases of manual scavenging may be pursued under appropriate Sections of the Scheduled Castes and Scheduled Tribes (Prevention of Atrocities) Act, 1989


Although the official stand of the Government of Karnataka is that there are no persons working as manual scavengers in the State, the reality of the situation is completely different and show that this abhorrent practice is rampantly present. Despite the law being in force, and the advisory having been sent, the blatant violation of the law continues in full force. The lax nature in which the officials have failed to register any complaint also reveals the reluctance to implement the statute.
ಮಹದೇವ


Observations of the Team

1. The practice of manual scavenging is in rampant practice. This is not the first such accident and definitely not the last.

The 'accident' that resulted in the death of the two workers of the Madiga community once again reinforces that the abhorrent practice of manual scavenging is very much present in the State of Karnataka. The information provided by Shri Muruga the survivor from the incident, clearly shows that the workers had been employed by the owners of the Poornarama Coffee Estate at Kenchammana Hoskote, Alur Taluk in order to remove the human excreta from the kakkas gundi (pit), with their bare hands. They were provided with absolutely no safety equipments, no gloves, face masks, bunny suits. The usage of kakkas gundis implies dry latrines.

The death of the two workers were a result of the violation of the Employment of Manual Scavenging and Construction of Dry Latrines (Prohibition) Act, 1993, by the owners of Poornarama Coffee Estate and the failure to implement the Act by the District Administration of Hassan District.

This incident clearly shows that the practice of manual scavenging that is prohibited continues to be practiced rampantly. Not only does it continue to be practiced, but even when such instances come to light, no action whatsoever is taken.  In fact, The powrakarmikas we met in Sakalaeshpur informed us that they were not even aware that this practice had been banned.

The denial of the District Administration that no persons are working as manual scavengers is also without force. According to the Deputy Commissioner, there is no Underground Drainage in entire area. Machines are available only in select urban areas and not available at all in rural areas. In fact according to a report submitted by the Yojana Nirdeshakaru, Hassan Zilla Nagarabhivrudhikosha (???), there are 'nil' sewerage workers employed in Alur.
This begs the question, how is the work being done, if neither machines nor human beings are performing the same?

Demands
1. It is essential that the practice of Manual Scavenging must be immediately stopped, and the Employment of Manual Scavengers and Construction of Dry Latrines (Prohibition) Act, 1993 be enacted with a war-footing

2. The meeting to be held by the Deputy Commissioner should address and review the implementation of the Employment of Manual Scavengers and Construction of Dry Latrines (Prohibition) Act, 1993 and look into the present conditins of persons performing the work of manual scavenging, cleaning of sewers, manholes ad all other forms of manual scavenging, and develop an action plan to eradicate the practice in entirety, and providing all persons permanent jobs with the government, and other steps towards uplifting them.

3. A survey be conducted of all person performing the work of manual scavenging and their living and social conditions.

4. The schemes should be implemented, and every single person performing the work of manual scavenging, irrespective of the time period for which they have performed this work be provided the rehabilitation scheme formulated under the Employment of Manual Scavengers and Construction of Dry Latrines (Prohibition) Act, 1993


2. No penal action or investigation

With regard to police action, the fact that the complaint relied on by the police to register a UDR is contrary to the information provided to us by Shri Muruga, makes the entire enquiry deeply suspect. The death of Shri Mahadeva and Shri Arjun is the direct result of the failure of the district administration to perform its duty and the violation of the law by the owners of Poornarama Coffee Estate, and this difference appears be in an attempt to make the workers responsible for their own death in order to let the real culprits go scott-free.
ತಾಯಿಯ ನೋವು

The failure of the Police officials to register any case against the employers despite a clear case being made out under Section 304-A of the Indian Penal Code, the Employment of Manual Scavenging and Construction of Dry Latrines (Prohibition) Act, 1993, and the Scheduled Castes and Scheduled Tribes (Prevention of Atrocities) Act, 1989, also betrays the partisan nature of the Police, and their refusal to perform their constitutional duties. It must be stressed that when an offence is categorically made out, it is the duty of the police to immediately register the crime and investigate into the matter, and the failure to do so amounts to their failure to perform their constitutional obligations and statutory duties.

Demands


Hence, it is necessary that a criminal case for offences under the Indian Penal Code, the Employment of Manual Scavengers and Construction of Dry Latrines (Prohibition) Act, 1993 and the Scheduled Caste and Scheudled Tribes (Prevention of Atrocities) Act be immediately registered against the owner of Poornarama Estate.


3. No compensation
Firstly, when the Team had visited the families of the deceased two days after the inident, no compensation had yet been paid to them. The Team was informed that the families were to be paid compensation of Rs. 2.25 lakhs, which is abysmally low. The death of Shri Mahadeva and Shri Arjun is the direct result of the failure of the district administration to perform its duty and the violation of the law by the owners of Poornarama Coffee Estate. It is essential to note that, when similar incidents occurred in Bangalore and K.R.Nagar in Mysore District, the Administration in each of the cases agreed to award compensation of Rs. 5 lakhs, a house and a government job to the families of each of the deceased. Further, the surviving workers, Muruga and Manja who were both affected by the noxious gases that have long term health impacts, and who were witness to the gruesome death of their blood relatives have not been paid any compensation whatsoever. It appears that this compensation is in the nature of a private settlement and a compromise worked out by interested intermediaries to buy silence from the victim families. This package doesn’t absolve the state and its agencies of their primary responsibility to provide full compensation to the survivors.
It cannot be permitted that persons who blatantly violate the law and are responsible and liable for the death of workers, are left to go free by merely paying 'compensation'.

Demands
1. Adequate compensation  should be immediately provided to the families of the deceased and a compensation should be provided to Shri Muruga and Shri Manja, who survived this accident.

2. The District Administration provide the rehabilitation scheme formulated under the Employment of Manual Scavengers and Construction of Dry Latrines (Prohibition) Act, 1993 to the families of the deceased

3. The district administration provide one member of the family of the deceased with a permanent job, and a house for the family.

ಕಟ್ಟಿಹೋದ ಗಂಟಲಲ್ಲೇ ಮಗನನ್ನು ಕಳೆದುಕೊಂಡ ತಾಯಿ ಮಾತನಾಡಿದ್ದಾಳೆ. ಒಮ್ಮೆ ಕೇಳಿಸಿಕೊಳ್ಳಿ:

Thursday, July 14, 2011

ಹೊಸ ಪತ್ರಿಕೆಯ ಹೆಸರು ವಿಜಯವಾಣಿ, ಅದು ಶುರುವಾಗೋದು ೧೧-೧೧-೧೧ರಂದು...

Vijay Sankeshwar new paper name VIJAYAVANI. Vani happens to be Sankeshwar's daughet-in-law. He purchased it from Venkateshmurthy,Tumkur for Rs.35 lakhs.
ಇವು ವಿಶ್ವೇಶ್ವರ ಭಟ್ಟರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಸಾಲುಗಳು.

ನಿಜ, ಸಂಕೇಶ್ವರರ ಹೊಸ ಪತ್ರಿಕೆಯ ಹೆಸರು ವಿಜಯ ವಾಣಿ. ಇದೇ ಟೈಟಲ್ ಮೇಲೆ ಸಂಕೇಶ್ವರರು ಕಣ್ಣಿಟ್ಟು ಹಲವು ವರ್ಷಗಳೇ ಆಗಿತ್ತು. ಹಿಂದೆ ಉಷಾಕಿರಣವನ್ನು ಆರಂಭಿಸುವುದಕ್ಕೂ ಮುನ್ನ ಅವರ ಮುಂದಿದ್ದ ಹೆಸರೂ ಇದೇ. ಇದು ೧೯೬೭ರಲ್ಲಿ ಎಚ್.ಆರ್.ಗುಂಡೂರಾವ್ ಎಂಬುವವರ ಹೆಸರಲ್ಲಿ ರಿಜಿಸ್ಟರ್ ಆಗಿದ್ದ ಟೈಟಲ್. ಇದನ್ನು ನಡೆಸುತ್ತಿದ್ದವರು ವೆಂಕಟೇಶಮೂರ್ತಿ ಎಂಬ ಹಿರಿಯ ಪತ್ರಕರ್ತರು. ಸಂಕೇಶ್ವರರಿಗೆ ಸಂಬಂಧಿಸಿದವರು ಟೈಟಲ್ ಕೇಳಿದಾಗ ಅವರು ನಯವಾಗಿಯೇ ನಿರಾಕರಿಸಿದ್ದರು. ಹೀಗಾಗಿ ಸಂಕೇಶ್ವರರು ಉಷಾಕಿರಣ ಎಂಬ ಹೆಸರಿನಲ್ಲಿ ಪತ್ರಿಕೆ ಆರಂಭಿಸಿದ್ದರು.

ಈ ಬಾರಿ ಹೊಸ ಪತ್ರಿಕೆ ಆರಂಭಿಸುವಾಗ ಸಂಕೇಶ್ವರರು ಆನಂದ ಕರ್ನಾಟಕ ಟೈಟಲ್‌ನೊಂದಿಗೆ ಪತ್ರಿಕೆ ಆರಂಭಿಸಬಹುದು ಎಂಬ ಗುಸುಗುಸು ಕೇಳಿಬಂದಿತ್ತು. ಆ ಕುರಿತು ಆನಂದ ಕರ್ನಾಟಕದ ಸಂಪಾದಕರಾದ ಹೊಸಪೇಟೆ ಶಾಸಕ ಆನಂದ್ ಸಿಂಗ್ ಸಂಪಾದಕೀಯಕ್ಕೆ ನೀಡಿದ್ದ ಸ್ಪಷ್ಟನೆಯನ್ನು ನೀವು ಗಮನಿಸಿರಬಹುದು.

ಈ ಬಾರಿಯೂ ತಮ್ಮ ಪತ್ರಿಕೆಯ ಹೆಸರಿನಲ್ಲಿ ವಿಜಯ ಎಂಬ ಹೆಸರು ಇರಲೇಬೇಕು ಎಂದು ಟೈಟಲ್‌ಗಳನ್ನು ಹುಡುಕಾಡಿದಾಗ ಮತ್ತೆ ತೊಡರಿಕೊಂಡಿದ್ದು ವಿಜಯವಾಣಿಯೇ. ಈ ಬಾರಿಯೂ ಹಲವು ವಿಘ್ನಗಳಿದ್ದವು. ಟೈಟಲ್ ಕೊಡಬೇಕೆ ಬೇಡವೇ ಎಂಬ ವಿಷಯದ ಕುರಿತು ವೆಂಕಟೇಶಮೂರ್ತಿಯವರ ಕುಟುಂಬದಲ್ಲೇ ಹಲವು ಬಗೆಯ ಅಭಿಪ್ರಾಯಗಳಿದ್ದವು. ಕಡೆಗೂ ಟೈಟಲ್ ಸಂಕೇಶ್ವರರಿಗೆ ದೊರಕಿದೆ. ಹೀಗಾಗಿ ವಿಜಯವಾಣಿಯೇ ಸಂಕೇಶ್ವರರ ಹೊಸ ಪತ್ರಿಕೆಯಾಗಲಿದೆ.

ಅಂದ ಹಾಗೆ ವಿಜಯವಾಣಿಯ ಆರಂಭಕ್ಕೂ ಒಂದು ಮುಹೂರ್ತ ನಿಗದಿಯಾಗಿರುವ ಬಗ್ಗೆ ವರ್ತಮಾನವಿದೆ. ನಮಗೆ ಗೊತ್ತಾದ ಪ್ರಕಾರ ಹನ್ನೊಂದು ಹನ್ನೊಂದು ಹನ್ನೊಂದರಂದು ಪತ್ರಿಕೆಯ ಮೊದಲ ಪ್ರತಿ ಹೊರಗೆ ಬರಲಿದೆ. ಇದೊಂದು ವಿಶೇಷ ದಿನ. ಸಾವಿರ ವರ್ಷಕ್ಕೆ ಒಮ್ಮೆ ೧೧-೧೧-೧೧ ಅಂಕಿಗಳ ಡೇಟು ಬರುತ್ತದೆ. ಹೀಗಾಗಿ ಈ ವಿಶೇಷ ದಿನದಂದು ಪತ್ರಿಕೆ ಆರಂಭಿಸುವ ಆಲೋಚನೆ ಸಂಕೇಶ್ವರರಿಗಿದೆ ಎಂಬ ಮಾಹಿತಿ ಇದೆ.

ಈಗಾಗಲೇ ನಿಯೋಜಿತ ಪ್ರಧಾನ ಸಂಪಾದಕ ತಿಮ್ಮಪ್ಪ ಭಟ್ಟರು ಬೆಂಗಳೂರಿನ ವಿಆರ್‌ಎಲ್ ಕಚೇರಿಯಿಂದಲೇ ಕೆಲಸ ಕಾರ್ಯ ಆರಂಭಿಸಿದ್ದಾರೆ. ಒಟ್ಟು ಹತ್ತು ಆವೃತ್ತಿಗಳು ಆರಂಭವಾಗುವುದೂ ಬಹುತೇಕ ಖಚಿತವೇ. ಆದರೆ ಗಂಗಾವತಿ ಆವೃತ್ತಿಯ ಬದಲು ಕೊಪ್ಪಳ, ಶಿವಮೊಗ್ಗದ ಬದಲು ದಾವಣಗೆರೆ ಆವೃತ್ತಿ ಆರಂಭಿಸಲು ಯೋಜನೆಯಲ್ಲಿ ಸಂಕೇಶ್ವರರು ಇದ್ದಾರೆ ಎಂಬ ಮಾಹಿತಿಯಿದೆ.

ವಿಜಯ ಸಂಕೇಶ್ವರ್ ತಮ್ಮ ಹೊಸ ಪತ್ರಿಕೆಯ ಮೂಲಕ ಕನ್ನಡ ಪತ್ರಿಕಾ ರಂಗದಲ್ಲಿ ಇನ್ನೊಂದು ಸುತ್ತಿನ ದರ ಸಮರ ಆರಂಭಿಸುವುದು ಸರಿಯೇ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಒಂದು ಪೋಲ್ ನಡೆಸಿದ್ದು ನಿಮಗೆ ಗೊತ್ತು. ಇದರ ಫಲಿತಾಂಶ ಅಚ್ಚರಿಯದು. ಸರಿ ಎಂದು ಹೇಳುವವರ ಸಂಖ್ಯೆ ಶೇ.೭೦ರಷ್ಟು. ಶೇ.೨೬ರಷ್ಟು ಮಂದಿ ಮಾತ್ರ ಇದು ಸರಿಯಲ್ಲ ಎಂದಿದ್ದಾರೆ. ಶೇ.೪ರಷ್ಟು ಮಂದಿ ಗೊತ್ತಿಲ್ಲ ಎಂದಿದ್ದಾರೆ.

ಉಳಿದಿರುವ ಪ್ರಶ್ನೆ ಒಂದೇ. ವಿಜಯವಾಣಿಯ ಮುಖಬೆಲೆ ಎಷ್ಟಿರುತ್ತದೆ. ಈ ಪತ್ರಿಕೆ ನಡೆಸುವ ಬೆಲೆಸಮರಕ್ಕೆ ಯಾರ‍್ಯಾರು ಬಲಿಯಾಗುತ್ತಾರೆ? ಕಾದು ನೋಡೋಣ.

Wednesday, July 13, 2011

ಹೋದಷ್ಟೇ ವೇಗವಾಗಿ ವಾಪಾಸು ಬಂದ ಮಾಳವಿಕಾ: ನಮ್ಮದೊಂದಿಷ್ಟು ಉದ್ರಿ ಸಲಹೆಗಳು...

ಬದುಕು ಜಟಕಾ ಬಂಡಿಯ ಜಡ್ಜ್ ಸಾಹೇಬರಾದ ಶ್ರೀಮತಿ ಮಾಳವಿಕಾ ಅವಿನಾಶ್ ವಾಕ್ ಔಟ್ ಮಾಡಿದಷ್ಟೇ ವೇಗವಾಗಿ ಮತ್ತೆ ವಾಪಾಸು ಬಂದಿದ್ದಾರೆ. ಅಲ್ಲಿಗೆ ಅವರು ಜಗಳ ಮಾಡಿಕೊಂಡು ಒದ್ದಾಡುತ್ತಿರುವ ಕರ್ನಾಟಕದ ಜನರನ್ನು ಕೈಬಿಡಲಿಲ್ಲ ಎಂದಾಯಿತು. ಅವರದು ಮಾತೃಹೃದಯ, ಹೀಗಾಗಿ ಕಾರ್ಯಕ್ರಮ ನಡೆಸೋದಿಲ್ಲ ಎಂದು ಹೇಳಿದ ಮರುದಿನವೇ ನಿರ್ಧಾರ ಬದಲಿಸಿ ಬಂದು ತಮ್ಮ ಅಸಾಮಾನ್ಯ ಜನಪರ ಕಾಳಜಿಯನ್ನು ಮರೆದಿದ್ದಾರೆ. ಇನ್ನೇನು ಆಮರಣಾಂತ ಉಪವಾಸ ಸತ್ಯಾಗ್ರಹವನ್ನೇ ಹೂಡಬಹುದಾಗಿದ್ದ ತಮ್ಮ ಭಕ್ತವೃಂದವನ್ನು ಕಾಪಾಡಿದ್ದಾರೆ. ಅವರ ಮನೋಭಿಲಾಶೆಯನ್ನು ಈಡೇರಿಸಿದ್ದಾರೆ. ಅವರಿಗೆ ದೇವರು ಸಕಲ ಸನ್ಮಂಗಳವನ್ನೂ ಉಂಟು ಮಾಡಲಿ.

ಹೇಗೂ ಮಾಳವಿಕಾ ವಾಪಾಸು ಬಂದಿದ್ದಾರೆ. ನಿನ್ನೆ ಎಪಿಸೋಡಿನಲ್ಲಿ ಮತ್ತೆ ಕಾಣಿಸಿಕೊಂಡ ಅವರು ಕಿತ್ತಾಡುತ್ತಿದ್ದ ಗಂಡ-ಹೆಂಡಿರನ್ನು ಒಂದು ಮಾಡಿ ಕಳುಹಿಸುವ ಮಹತ್ಕಾರ್ಯ ಮಾಡಿದ್ದಾರೆ. ನಿನ್ನೆ ಕಹಿ ಅನುಭವವಾಗಿತ್ತು, ಇವತ್ತು ಮನಸ್ಸಿಗೆ ಸಮಾಧಾನವಾಗುವ ಸಿಹಿ ಘಟನೆ ನಡೆದಿದೆ ಎಂದು ಅವರು ರೋಮಾಂಚಿತರಾಗಿದ್ದಾರೆ. ಜಟಕಾ ಬಂಡಿ ಇನ್ನಷ್ಟು ವೇಗವಾಗಿ ಮುಂದೆ ಸಾಗಲಿದೆ. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಇನ್ನಷ್ಟು ಬಡಜನರಿಗೆ ಅನುಕೂಲವಾಗುವಂತೆ ಮಾಡಲು ಒಂದಷ್ಟು ಉದ್ರಿ ಸಲಹೆಗಳನ್ನು ಕೊಡೋಣ ಅನ್ನುವ ಆಲೋಚನೆ ನಮ್ಮದು. ಕೊಟ್ಟ ಸಲಹೆಗಳನ್ನು ತೆಗೆದುಕೊಳ್ಳೋದು ಬಿಡೋದು ಅವರಿಗೆ ಬಿಟ್ಟ ವಿಚಾರ. ಸಲಹೆಗಳು ಇಂತಿವೆ.

೧. ಜಟಕಾ ಬಂಡಿಯಲ್ಲಿ ಬಂದು ಕೂರುವ ಜನ ಸಂಸ್ಕಾರವಿಲ್ಲದವರು. ಹೀಗಾಗಿ ಹೊಡೆದಾಡುತ್ತಾರೆ, ಅದೂ ಚಪ್ ಚಪ್ಪಲಿಯಲ್ಲೇ ಕಾದಾಡುತ್ತಾರೆ. ಹೀಗಾಗಿ ಗಲಭೆ ನಿಯಂತ್ರಿಸಲು ಒಂದು ರ‍್ಯಾಪಿಡ್ ಆಕ್ಷನ್ ಫೋರ್ಸ್‌ನ ತುಕಡಿಯನ್ನು ಪರ‍್ಮನೆಂಟಾಗಿ ಶೂಟಿಂಗ್ ಸ್ಥಳದಲ್ಲಿ ನಿಯೋಜಿಸುವುದು ಒಳ್ಳೆಯದು. ಇಲ್ಲಿ ಹೊಡೆದಾಡುವವರು ಮಹಿಳೆಯರೂ ಆಗಿರುವುದರಿಂದ ಮಹಿಳಾ ಪೊಲೀಸರ ಒಂದು ತಂಡವನ್ನೂ ಸಹ ಇಟ್ಟುಕೊಳ್ಳುವುದು ಒಳ್ಳೆಯದು. ಸಂಭವನೀಯ ಗಲಭೆ ತಪ್ಪಿಸಲು ಪೊಲೀಸರು ಅಶ್ರುವಾಯು, ಮದ್ದುಗುಂಡು ಸೇರಿದಂತೆ ಎಲ್ಲ ಶಸ್ತ್ರಾಸ್ತ್ರಗಳಿಂದ ಸನ್ನದ್ಧರಾಗಿರುವುದು ಒಳ್ಳೆಯದು. ಹೀಗೆ ಶೂಟಿಂಗ್ ಸ್ಥಳದಲ್ಲೇ ಪೊಲೀಸರನ್ನು ಇಟ್ಟುಕೊಳ್ಳುವುದರಿಂದ ಪದೇ ಪದೇ ಪೊಲೀಸರಿಗೆ ಫೋನ್ ಮಾಡಿ ಕರೆಸುವ ತಾಪತ್ರಯ ತಪ್ಪುತ್ತದೆ.

. ಜಟಕಾ ಬಂಡಿಯಲ್ಲಿ ಜನರು ಆವೇಶಕ್ಕೆ ಬಿದ್ದು ಪರಸ್ಪರ ಹಲ್ಲೆ ಮಾಡಿಕೊಳ್ಳುವ, ಕೊಲೆ ಮಾಡಿಕೊಳ್ಳುವ ಸಾಧ್ಯತೆಗಳಿರುವುದರಿಂದ ಗಾಯಾಳುಗಳಿಗೆ ಅಗತ್ಯ ಪ್ರಾಥಮಿಕ ಚಿಕಿತ್ಸೆ ಕೊಡಿಸಲು ಒಂದು ಮೊಬೈಲ್ ಆಸ್ಪತ್ರೆಯನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಒಬ್ಬ ವೈದ್ಯಾಧಿಕಾರಿ, ಮತ್ತೊಬ್ಬ ಫಿಜಿಷಿಯನ್, ಇನ್ನೊಬ್ಬ ಆರ್ಥೋಪೆಡಿಷಿನ್ ಜತೆಗೆ ಒಂದಷ್ಟು ಜನ ನರ್ಸುಗಳನ್ನು ಖಾಯಂ ಆಗಿ ನೇಮಕ ಮಾಡಿಕೊಳ್ಳುವುದು ಅಪೇಕ್ಷಿತ. ಸ್ಥಳದಲ್ಲೇ ಎಕ್ಸ್‌ರೇ, ಸಿಟಿ ಸ್ಕಾನ್ ಥರಹದ ಸೌಲಭ್ಯಗಳಿದ್ದರೆ ಇನ್ನೂ ಒಳ್ಳೆಯದು.

೩. ಕೌಟುಂಬಿಕ ಕೋರ್ಟುಗಳು, ಮಹಿಳಾ ಸಹಾಯವಾಣಿಗಳಲ್ಲಿ ಸಾವಿರಾರು ಕೇಸುಗಳು ಪೆಂಡಿಂಗಾಗಿವೆ. ಹೀಗೆ ಬಾಕಿ ಉಳಿದ ಕೇಸುಗಳನ್ನು ಜಟಕಾ ಬಂಡಿಯ ಕೋರ್ಟಿಗೆ ವರ್ಗಾಯಿಸಲು ಕೋರಿ ಸರ್ಕಾರಕ್ಕೆ ಮತ್ತು ರಾಜ್ಯ ಮುಖ್ಯ ನ್ಯಾಯಾಧೀಶರಿಗೆ ಒಂದು ಅರ್ಜಿ ಹಾಕಿ, ಕೇಸುಗಳನ್ನು ಪಡೆದು ಬಗೆಹರಿಸುವ ಕಡೆ ಯೋಚನೆ ಮಾಡಬಹುದು.

. ಜಟಕಾ ಬಂಡಿಯೂ ಒಂದು ಬಗೆಯ ಕೋರ್ಟ್ ಸ್ವರೂಪದಲ್ಲಿರುವುದರಿಂದ ಇದಕ್ಕೆ ಕಾನೂನು ಮಾನ್ಯತೆಯನ್ನು ದಕ್ಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸುವುದು ಒಳ್ಳೆಯದು. ಶಿಕ್ಷಣ ಕ್ಷೇತ್ರದಲ್ಲಿ ಈಗ ಖಾಸಗಿ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗುತ್ತಿರುವ ಹಾಗೆ ನ್ಯಾಯಾಂಗ ಕ್ಷೇತ್ರದಲ್ಲಿ ಖಾಸಗಿ ಕೋರ್ಟುಗಳು. ಹೇಗಿದೆ ಐಡಿಯಾ? ಹಾಗೆಯೇ ಜಟಕಾ ಬಂಡಿಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ಬರುವವರಿಗೆ ತಮ್ಮ ಪರವಾಗಿ ವಕಾಲತ್ತು ವಹಿಸಲು ವಕೀಲರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಒದಗಿಸುವುದು ಸೂಕ್ತ.

. ಜಟಕಾ ಬಂಡಿಯ ಜಡ್ಜು ಮಾಳವಿಕಾ ಅವರ ಗೌರವವನ್ನು ಹೆಚ್ಚಿಸುವ ಸಲುವಾಗಿ ಅವರಿಗೆ ಹೊಸಬಗೆಯ ಡ್ರೆಸ್ ನೀಡುವುದು ಒಳ್ಳೆಯದು. ಜಡ್ಜುಗಳು ಧರಿಸುವ ನಿಲುವಂಗಿ ಅಥವಾ ಧರ್ಮಾಧಿಕಾರಿಗಳು ಬಳಸುವ ಉಡುಗೆ ಸೂಕ್ತವಾಗಬಹುದು. ಜಟಕಾ ಬಂಡಿ ಓಡಿಸುವವರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬಹುದು.

೬. ಜಟಕಾ ಬಂಡಿಯಲ್ಲಿ ಆಗಾಗ ಮಾರಾಮಾರಿ ನಡೆಯುವ ಸಾಧ್ಯತೆಗಳಿರುವುದರಿಂದ ಮಾಳವಿಕಾ ವಾಕ್ ಔಟ್ ಮಾಡುವ ಬಗೆಬಗೆಯ ದೃಶ್ಯಗಳನ್ನು ಮೊದಲೇ ಚಿತ್ರೀಕರಿಸಿಕೊಂಡು ಲೈಬ್ರರಿಯಲ್ಲಿಟ್ಟುಕೊಂಡರೆ ಅದನ್ನು ಬೇಕಾದಾಗಲೆಲ್ಲ ಬಳಸಬಹುದು.

೭. ಜಟಕಾ ಬಂಡಿಯಲ್ಲಿ ಹಂತಹಂತವಾಗಿ ಸಿವಿಲ್ ವ್ಯಾಜ್ಯಗಳನ್ನೂ ಬಗೆಹರಿಸಲು ಯತ್ನಿಸಬಹುದು. ಈಗ ಈ ಕೆಲಸವನ್ನು ಹಾಲಿ-ಮಾಜಿ ಭೂಗತ ದೊರೆಗಳು, ಕಾರ್ಪೊರೇಟರ್‌ಗಳು, ಹಾಲಿ-ಮಾಜಿ ಪೊಲೀಸ್ ಅಧಿಕಾರಿಗಳು ಮಾಡುತ್ತಿದ್ದಾರೆ. ಜಟಕಾ ಬಂಡಿ ಈ ಕೆಲಸವನ್ನು ಕೈಗೆತ್ತಿಕೊಂಡರೆ ಇವರೆಲ್ಲರ ಕೆಲಸ ಸುಲಭವಾಗುತ್ತದೆ.

. ಹಿಂದೆಲ್ಲಾ ಕೋರ್ಟುಗಳಲ್ಲೇ ನ್ಯಾಯಾಧೀಶರ ಮೇಲೆ ಚಪ್ಪಲಿ ತೂರಿದ ಪ್ರಕರಣಗಳು ನಡೆದಿವೆ. ಜಟಕಾ ಬಂಡಿಯಲ್ಲಿ ಏನೇನೋ ನಡೆಯುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಡ್ಜು ಸಾಹೇಬರಿಗೆ ಸಶಸ್ತ್ರ ಅಂಗರಕ್ಷಕರನ್ನು ಒದಗಿಸುವುದು ಸೂಕ್ತ.

ಇನ್ನೂ ಸಾಕಷ್ಟು ಸಲಹೆಗಳನ್ನು ಕೊಡಬಹುದು. ಆದರೆ ನಮ್ಮ ಓದುಗರು ಜಾಣರು. ಅವರೂ ಸಹ ಇನ್ನೊಂದಿಷ್ಟು ಉದ್ರಿ ಸಲಹೆಗಳನ್ನು ಕೊಡಬಲ್ಲವರಾದ್ದರಿಂದ ಇಲ್ಲಿಗೆ ನಿಲ್ಲಿಸಿದ್ದೇವೆ.

Tuesday, July 12, 2011

ಜಟಕಾಬಂಡಿಯಿಂದ ಸಂಕಟ ನಿವಾರಕಿ ಮಾಳವಿಕಾ ಎದ್ದು ಹೋದರು, ಮತ್ತೆ ಬರ್ತಾರಾ?

ಇವರ ಹೆಸರು ಮಾಳವಿಕಾ ಅವಿನಾಶ್. ತಮಿಳು-ಕನ್ನಡ ಸಿನಿಮಾ-ಕಿರುತೆರೆಗಳಲ್ಲಿ ಕಲಾವಿದರಾಗಿ ಕೆಲಸ ಮಾಡುವವರು. ಕರ್ನಾಟಕದ ಟಿವಿ ನೋಡುವ ಸಾಕಷ್ಟು ಹೆಣ್ಣುಮಕ್ಕಳು ಅವರನ್ನು ಇಷ್ಟಪಡುತ್ತಾರೆ. ವಿಶೇಷವಾಗಿ ಮಾಯಾಮೃಗ ಎಂಬ ಸೀರಿಯಲ್ಲು ಅವರಿಗೆ ತುಂಬಾ ಹೆಸರು ಕೊಟ್ಟಿತ್ತು. ಬದುಕು ಜಟಕಾ ಬಂಡಿ ಅವರು ಜೀ ಕನ್ನಡದಲ್ಲಿ ನಡೆಸಿಕೊಡುವ ಕಾರ್ಯಕ್ರಮ. ಮೇಡಂ ಬಗ್ಗೆ ಇನ್ನಷ್ಟು ಹೇಳುವುದಾದರೆ ಅವರಿಗೆ ಅಧ್ಯಾತ್ಮದಲ್ಲಿ ಆಸಕ್ತಿ. ಅಧ್ಯಾತ್ಮದ ಮೂಲಕ ನಿತ್ಯಾನಂದ ಪಡೆಯಬಹುದೇ? ಇದು ಅವರ ಹುಡುಕಾಟವಿರಬಹುದು.

ಜಟಕಾ ಬಂಡಿ ಒಂಥರಾ  ಕೌಟುಂಬಿಕ ಕೋರ್ಟು ಇದ್ದಂತೆ. ಅದೂ ಕೂಡಾ ಫಾಸ್ಟ್ ಟ್ರಾಕ್! ಬೇಗ ಬೇಗ ಡ್ರಾ ಬೇಗ ಬೇಗ ಬಹುಮಾನ. ಮಾಳವಿಕಾ ಮೇಡಂ ಒಂದು ಘಂಟೆಯಲ್ಲಿ ಎಂಥೆಂಥದೊ ಫ್ಯಾಮಿಲಿ ಡಿಸ್ಪ್ಯೂಟ್ ಗಳನ್ನು ನಿವಾರಿಸಿ, ನೀವಳಿಸಿ ಎಸೆದಿದ್ದಾರೆ. ಎಲ್ಲವೂ ಖುಲ್ಲಂ ಖುಲ್ಲಾ. ಕ್ಯಾಮೆರಾ ಎದುರೇ ಪಂಚಾಯ್ತಿ.  ಬದುಕು ಜಟಕಾ ಬಂಡಿಯಲ್ಲಿ ನಿನ್ನೆ ಒಂದು ಕೇಸು. ಕೇಸು ಜಡಿದಾಕೆ ಒಬ್ಬ ಹೆಣ್ಣುಮಗಳು. ಆಕೆಗೂ ಆತನ ಗಂಡನಿಗೂ ಮನಸ್ತಾಪ. ಇಬ್ಬರು ಗಂಡುಮಕ್ಕಳಿದ್ದಾರೆ. ಮಕ್ಕಳಿಬ್ಬರೂ ತಂದೆಯ ಜತೆ ಇದ್ದಾರೆ. ಬೇರೆಬೇರೆಯಾಗಿರುವ ನಮ್ಮನ್ನು ಮತ್ತೆ ಸೇರಿಸಿ ಅಂತ ಆಕೆ ಬಂದಿದ್ದಳೆನಿಸುತ್ತದೆ.

ಮಾಳವಿಕಾ ಮೇಡಂ ಇಬ್ಬರನ್ನೂ ಮಾತಾಡಿಸತೊಡಗಿದರು. ಮೇಡಂ ಒಂಥರಾ ಅವರೇ ಲಾಯರ್, ಅವರೇ ಜಡ್ಜ್, ಅವರೇ ಲೀಗಲ್ ಎಕ್ಸ್‌ಪರ್ಟ್ ಇದ್ದಂತೆ. ಅವರು ಪಕ್ಕಾ ಹಳ್ಳಿ ಪಂಚಾಯ್ತಿದಾರರಂತೆ ಕಾಣಿಸುತ್ತಾರೆ. ಒಂದೊಂದು ಸರ್ತಿ ಅವರು ದಾರ್ಶನಿಕರ ಶೈಲಿಯಲ್ಲಿ, ತತ್ತ್ವಜ್ಞಾನಿಗಳ ಶೈಲಿಯಲ್ಲಿ ಮಾತಾಡೋದು ಉಂಟು. ಹೀಗಾಗಿ ಅವರ ಬಳಿ ಸಮಸ್ಯೆ ತೆಗೆದುಕೊಂಡು ಬರುವವರಿಗೆ ಅವರು ಸಾಕ್ಷಾತ್ ಜಗನ್ಮಾತೆಯ ಹಾಗೆ ಕಾಣಿಸಿದರೂ ಆಶ್ಚರ್ಯವಿಲ್ಲ.

ಮುನಿಸಿಕೊಂಡು ಕುಳಿತ ಗಂಡ-ಹೆಂಡತಿ ತಮ್ಮ ನಡುವೆ ಏನು ಸಮಸ್ಯೆ ಅಂತ ಹೇಳದೇ ಹೋದಾಗ ಮಾಳವಿಕಾ ಮೇಂಡಂಗೆ ರೇಗಿಹೋಯಿತು. ಏನು ಸಮಸ್ಯೆ ಹೇಳಿ ಅಂದ್ರೆ ಇಬ್ಬರೂ ಬಾಯಿಬಿಡೊಲ್ಲರು. ಗಂಡಹೆಂಡಿರ ನಡುವೆ ತೀರಾ ಖಾಸಗಿಯಾದ ಬೇಕಾದಷ್ಟು ವಿಷಯಗಳಿರುತ್ತವೆ. ಎಲ್ಲವನ್ನೂ ಎಲ್ಲರೆದುರೂ ಹೇಳೋದಕ್ಕೆ ಸಾಧ್ಯನಾ? ಆದ್ರೆ ಮೇಡಂ ಕೋರ್ಟಿನಲ್ಲಿ ಎಂಥ ಮುಚ್ಚು ಮರೆ?  ಮೇಡಂ ಬಲವಂತ ಮಾಡಿದಾಗ ಕಡೆಗೂ ಆತ ಬಾಯಿ ಬಿಟ್ಟ. ಅವತ್ತೊಂದಿನ ಇವಳು ರಾತ್ರಿ ಹತ್ತು ಗಂಟೆಗೆ ಹೋದೋಳು ಬೆಳಿಗ್ಗೆನೇ ಮನೆಗೆ ಬಂದಿದ್ದಳು. ಯಾವ ಗಂಡಸು ಸಹಿಸಿಕೊಳ್ತಾನೆ ಹೇಳಿ ಮೇಡಂ ಎಂದು ಕೇಳಿದ. ಅದಕ್ಕೆ ನಿನ್ನ ಬಳಿ ಎವಿಡೆನ್ಸ್ ಇದೆಯಾ ಅಂತ ಕೇಳಿದರು ಜಡ್ಜ್ ಮೇಡಂ. ಹೆಂಡತಿ ಮಾತ್ರ ನಾನು ಮನೆಲೇ ಇದ್ದೆ, ಈತ ಸುಳ್ಳು ಹೇಳುತ್ತಿದ್ದಾನೆ ಎಂದಳು.

ಮಾತು ಹೀಗೆ ಮುಂದುವರೆಯುತ್ತಿದ್ದಂತೆ ಬದುಕು ಜಟಕಾ ಬಂಡಿಯಲ್ಲಿ ಮಾಮೂಲಿಯಾಗಿ ನಡೆಯುವಂತೆ ಆತ ಆಕೆಯ ಮೇಲೆ ಎರಡು ಮೂರು ಬಾರಿ ಕೈ ಮಾಡಲು ಯತ್ನಿಸಿದ. ಜಡ್ಜ್ ಮೇಂಡಂ ಕೂತಲ್ಲಿಂದ ಕದಲಲೇ ಇಲ್ಲ. ಸಂಸ್ಕಾರ ಇಲ್ಲದ ಜನ ಹೊಡೆದಾಡುತ್ತಾರೆ. ಮೇಡಂ ಆದ್ರೂ ಏನು ಮಾಡುತ್ತಾರೆ ಪಾಪ. ಹೊಡೆಯೋದು ಗಿಡಿಯೋದು ಎಲ್ಲ ಬಿಟ್ಟುಬಿಡ್ರಿ ಎಂದು ಕೂತಲ್ಲಿಂದಲೇ ಒಂದು ಆವಾಜ್ ಹಾಕಿದರು. ಆಹಾ, ಏನು ಘರ್ಜನೆ, ಎಂಥಾ ಧ್ವನಿ.

ಹೀಗೇ ಚರ್ಚೆ ನಡೀತಾ ಇದ್ದಂತೆ ಗಂಡ-ಹೆಂಡತಿ ಇಬ್ಬರ ಬಿಪಿ ಏರುತ್ತಲೇ ಹೋಯಿತು. ಅವಳು ಸರಿಯಿಲ್ಲ ಅಂತ ಇವನು, ಇವಳು ಸರಿಯಿಲ್ಲ ಅಂತ ಅವನು. ಇಬ್ಬರು ಮಕ್ಕಳು ಪಿಳಿಪಿಳಿ ಕಣ್ಣುಬಿಟ್ಟುಕೊಂಡು ಕೂತಿದ್ದವು. ಕಡೆಗೆ ವಾಗ್ವಾದ ತಾರಕಕ್ಕೆ ಹೋಗುತ್ತಿದ್ದಂತೆ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಒಬ್ಬಾಕೆ ಬಂದು ಅವನ ಮೇಲೆ ಫೇಡ್ ಫೇಡ್ ಎಂದು ಹೊಡೆಯಲಾರಂಭಿಸಿದಳು. ಆತನ ಹೆಂಡತಿ ಸುಮ್ಮನಿದ್ದಾಳೆಯೇ, ತಾನೂ ಒಂದು ನಾಲ್ಕು ಏಟು ಕ್ಯಾಮೆರಾ ಎದುರು ಹಾಕೇ ಬಿಡೋಣ ಅಂತ ಅವನ ಮೇಲೆ ಏರಿ ಹೋದಳು. ಇಬ್ಬರು ಹೆಂಗಸರು ದಾಳಿ ಮಾಡುವಾಗ ಈತ ಸುಮ್ಮನಿದ್ದಾನೆಯೇ? ಒಬ್ಬಳನ್ನು ಎಳೆದು ಬಿಸಾಕಿ ಇನ್ನೊಬ್ಬಳಿಗೆ ಗುದ್ದಿದ. ಪರಿಣಾಮವಾಗಿ ಗುದ್ದಿಸಿಕೊಂಡ ಹೆಂಡತಿ ಪ್ರಜ್ಞೆ ತಪ್ಪಿ ಬಿದ್ದಳು. ಜಗಳ ಒಂದು ಹಂತ ತಲುಪುವವರೆಗೆ ಕಾಯ್ದು, ಸೂಪರ್ ವಿಶುಯಲ್‌ಗಳು ಸಿಕ್ಕಾದ ಮೇಲೆ ಜಟಕಾಬಂಡಿಯ ಸಹಾಯಕ ಸಿಬ್ಬಂದಿ (ಬೌನ್ಸರ್‌ಗಳು ಅಂತ ಕರೆಯುವುದು ಅಪಚಾರ.) ಬಂದು ಜಗಳ ಬಿಡಿಸಿದರು.

ನಂತರ ಜಟಕಾ ಬಂಡಿಯವರು ಪೊಲೀಸರಿಗೆ ಕರೆ ಮಾಡುತ್ತಾರೆ. ಪೊಲೀಸರು ಬಂದು ಇಬ್ಬರ ಕಡೆಯವರನ್ನೂ ಸ್ಥಳದಿಂದ ಹೊರಗೆ ಕಳಿಸುತ್ತಾರೆ. ಥೇಟು ಎಲ್ಲ ಸಿನಿಮಾ ಸೀನುಗಳ ಹಾಗೆ. ಎಂಥ ಅದ್ಭುತ ಶೋ. ಎಂಥ ಅದ್ಭುತ ಎಡಿಟಿಂಗ್. ಅದರ ಕ್ಲೈಮ್ಯಾಕ್ಸ್ ಕೂಡ ಅದ್ಭುತವಾಗಿದೆ. ನಿಧಾನವಾಗಿ ಕೇಳಿ.

ಇವರೆಲ್ಲ ಹೀಗೆ ನಾಯಿನರಿಗಳಂತೆ ಕಾದಾಡುವಾಗ ಅತ್ತ ಜಡ್ಜ್ ಮೇಂಡಂ ಮಾತ್ರ ಕೂತ ಕುರ್ಚಿಯಿಂದ ಏಳಲೇ ಇಲ್ಲ. ಪಾಪ, ಅವರು ಆಘಾತದಿಂದ ಜರ್ಝರಿತರಾಗಿದ್ದರು. ಆಮೇಲೆ ಸುಧಾರಿಸಿಕೊಂಡು ಎದ್ದುನಿಂತು ಒಂದು ಪ್ರವಚನದ ಸ್ವರೂಪದ ಭಾಷಣ ಹೊಡೆದೇ ಬಿಟ್ಟರು. ನೂರಾರು ಜನರು ತಮ್ಮ ಸಮಸ್ಯೆಗಳನ್ನು ಜಟಕಾ ಬಂಡಿಯ ವೇದಿಕೆಯಲ್ಲಿ ಇತ್ಯರ್ಥ ಮಾಡಿಕೊಂಡಿದ್ದಾರಂತೆ. ಎಷ್ಟೋ ಜನರಿಗೆ ನೆಮ್ಮದಿ ಸಿಕ್ಕಿದೆಯಂತೆ. ಆದರೆ ಈಗೀಗ ಬದುಕು ಜಟಕಾ ಬಂಡಿಯಲ್ಲಿ ಸಮಸ್ಯೆ ಹಿಡಿದುಕೊಂಡು ಬರ್ತಾ ಇರೋರೆಲ್ಲ ಪರಸ್ಪರ ಹೊಡೆದಾಡಿ, ಕ್ಯಾಮೆರಾ ಎದುರು ಸೀನ್ ಕ್ರಿಯೇಟ್ ಮಾಡಲು ಬರುವವರು. ಹೀಗಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಹೋಗೋದೇ ಅವರಿಗೆ ಬೇಡವಾಗಿದೆಯಂತೆ. ಇನ್ನು ಮುಂದೆ ಈ ಶೋ ಮಾಡಲಾರೆ ಎಂದು ಅವರು ಮೈಕು ಕಿತ್ತುಹಾಕಿ ಹೊರಟೇ ಬಿಟ್ಟರು. ಜಟಕಾ ಬಂಡಿಗೇ ಅವರು ಡೈವೋರ್ಸ್ ಕೊಟ್ಟುಬಿಟ್ಟರು.

ಹಾಗೆ ಅವರು ಹೋಗುವಾಗ  ಜಟಕಾಬಂಡಿಯ ಕ್ಯಾಮೆರಾಗಳು ಹಿಂಬಾಲಿಸುತ್ತವೆ. ಕ್ಯಾಮೆರಾ ಇದ್ದ ಮೇಲೆ ಜನರೂ ಇರಬೇಕಲ್ಲ. ಜಟಕಾ ಬಂಡಿಯ ಅಭಿಮಾನಿ ಪ್ರೇಕ್ಷಕರನೇಕರು ಬಂದು ಹೋಗಬೇಡಿ ಮೇಂಡಂ ಎಂದು ಕಾಡಿಬೇಡುವುದೆಲ್ಲ ದಾಖಲಾಗುತ್ತದೆ. ಆದರೆ ಅಪ್‌ಸೆಟ್ ಆಗಿದ್ದ ಮೇಡಂ ಸೀದಾ ಕಾರು ಹತ್ತಿ ಹೊರಟು ಹೋಗುತ್ತಾರೆ.

ಹಾಗಿದ್ದರೆ ಮಾಳವಿಕಾ ಮೇಡಂ ಇನ್ನು ಜಟಕಾ ಬಂಡಿಯಲ್ಲಿ ಕಾಣಿಸಿಕೊಳ್ಳುವುದಿಲ್ಲವಾ? ಅವರಿಗೆ ಬೇಜಾರಾಗಿ ಹೊರಟೇ ಹೋದರಾ? ಹಾಗಿದ್ದರೆ ಅಖಂಡ ಕರ್ನಾಟಕದ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವವರು ಯಾರು? ಅನೈತಿಕ ಸಂಬಂಧಗಳನ್ನು ಬಿಡಿಸಿ, ಗಂಡ-ಹೆಂಡಿರನ್ನು ಒಂದು ಮಾಡುವವರು ಯಾರು?

ತಡೀರಿ, ಅಷ್ಟು ಬೇಜಾರು ಮಾಡ್ಕೋಬೇಡಿ. ಮಾಳವಿಕಾ ಮೇಂಡ ಒಂಥರಾ ಜಗನ್ಮಾತೆಯ ತರಹ. ಭಕ್ತರ ಮೇಲೆ ಸಿಟ್ಟು ಎಷ್ಟು ಕಾಲ ಇಟ್ಟುಕೊಳ್ಳಲು ಸಾಧ್ಯ. ರಾತ್ರಿ ಹರಿಯುವುದರಲ್ಲಿ ಅದು ಬಗೆಹರಿಯುತ್ತದೆ. ಕರ್ನಾಟಕದ ಜನರ ಸಂಸಾರಗಳು ಹಾಳಾಗುವುದನ್ನು ಅವರು ಹೇಗೆ ತಾನೇ ನೋಡಿಕೊಂಡು ಇರಲು ಸಾಧ್ಯ? ಮನೆಮನೆಯಲ್ಲಿ ಜನರು ಹೊಡೆದಾಡಿಕೊಂಡು ಬೇರೆಯಾಗುತ್ತಿರುವಾಗ ಅದನ್ನು ನೋಡಿ ಜಗನ್ಮಾತೆಯ ಕರುಳು ಚುರುಕ್ ಎನ್ನದಿರುತ್ತದೆಯೇ? ಅವರು ಬಂದೇ ಬರುತ್ತಾರೆ, ಭಕ್ತರ ಬೇಡಿಕೆಗೆ ತಥಾಸ್ತು ಅಂದೇ ಅನ್ನುತ್ತಾರೆ.

ಆದ್ರೂ ಕೆಲವರು ಪ್ರಶ್ನೆ ಕೇಳಿಯೇ ಕೇಳುತ್ತಾರೆ. ಅಲ್ರೀ, ಇಂಥ ಕೌನ್ಸಿಲಿಂಗ್‌ಗಳನ್ನು ಯಾಕೆ ಖಾಸಗಿಯಾಗಿ ಮಾಡಬಾರದು? ಯಾಕೆ ಕ್ಯಾಮೆರಾ ಮುಂದೆಯೇ ಮಾಡುತ್ತೀರಿ ಅಂತ ಕೆಲವರು ಕೇಳುತ್ತಾರೆ. ನಮ್ದು ಒಂಥರಾ ಲೈವ್ ಟ್ರೈಯಲ್. ಈ ತರಹದ ವ್ಯವಸ್ಥೆ ಯಾವ ಕೋರ್ಟಿನಲ್ಲಿದೆ ಹೇಳಿ. ಕರ್ನಾಟಕದ ಸಮಸ್ತ ಜನರೆದುರು ನಡೆಯುವ ಕೋರ್ಟಿನ ಬಗ್ಗೆ ನಿಮ್ಮದೇನು ತಕರಾರು ಎಂಬುದು ಜಗನ್ಮಾತೆಯ ಭಕ್ತಗಣದ ಅಭಿಪ್ರಾಯ.

ಚಪ್ಪಲಿಯಲ್ಲಿ ಹೊಡೆದಾಡುವವರೆಗೆ ಯಾಕೆ ಸುಮ್ಮನಿರುತ್ತೀರಿ? ಒಂದುವೇಳೆ ಚಪ್ಪಲಿಯಲ್ಲಿ ಹೊಡೆದಾಡಿಕೊಂಡರೂ ಅದನ್ನು ಯಾಕೆ ಟೆಲಿಕಾಸ್ಟ್ ಮಾಡ್ತೀರಿ, ಎಡಿಟ್ ಮಾಡಬಹುದಲ್ಲ ಎಂಬುದು ಹಲವರ ಪ್ರಶ್ನೆ. ಹೊಡೆದಾಡಿ ಅಂತ ಶೋ ನಡೆಸುವವರು ಹೇಳಿರ್ತಾರಾ? ನಾವು ಪಾರದರ್ಶಕವಾಗಿರಬೇಕು ಅಲ್ಲವೇ? ಅದಕ್ಕೆ ಹೊಡೆದಾಡಿದ್ದನ್ನು ತೋರಿಸುತ್ತಾರೆ. ಅದು ತಪ್ಪೆ ಎಂದು ಕೇಳುತ್ತದೆ ಭಕ್ತಗಣ.

ಬಡವರ ಮನೆಯ ಬಾಧಿತರನ್ನೇ ಕರೆಯುತ್ತೀರಿ. ದೊಡ್ಡವರ ಮನೆಗಳಲ್ಲಿ ಜಗಳಗಳಿರುವುದಿಲ್ಲವಾ? ಅವರಿಗೆ ಯಾಕೆ ಕೌನ್ಸಿಲಿಂಗ್ ಮಾಡೋಲ್ಲ. ಬಡವರು ಮಾತ್ರನಾ ಕಿತ್ತಾಡೋದು ಅಂತ ಕೆಲವರು ಕೇಳುತ್ತಾರೆ. ಬಡವರಾದರೆ ಹೆದರಿಸಿ ಕರೆಸಬಹುದು, ಉಳ್ಳವರನ್ನು ಕರೆಸಲು ಆಗುತ್ತಾ? ಅವರು ಇವರನ್ನೇ ಹೆದರಿಸಿಬಿಡಬಹುದು. ಹೋಗ್ಲಿ ಬಿಡಿ, ನಷ್ಟ ಆಗೋದು ಅವರಿಗೇ ತಾನೇ. ಬಂದು ಸಮಸ್ಯೆ ಬಗೆಹರಿಸಿಕೊಳ್ಳೋದ್ರಿಂದ ಬಡವರ ಸಮಸ್ಯೆಗಳು ಬಗೆಹರಿಯುತ್ತಲ್ಲಾ ಅನ್ನುತ್ತದೆ ಭಕ್ತಗಣ.

ಇದೆಲ್ಲ ಹಾಗಿರಲಿ, ಮೇಡಂ ನಿಜಕ್ಕೂ ಸಿಟ್ಟು ಮಾಡಿಕೊಂಡ್ರಾ? ಅಥವಾ ತಮ್ಮ ಭಕ್ತರನ್ನು ಸಣ್ಣದಾಗಿ ಹೆದರಿಸಲು ಬಿಟ್ಟು ಹೋಗ್ತೀನಿ ಅಂದ್ರಾ? ಒಂದು ವೇಳೆ ಮೇಡಂ ಹೋಗೇ ಬಿಟ್ಟರೆ, ಕಚ್ಚಿಕೊಂಡಿರುವ ಟಿಆರ್‌ಪಿ ಯಾರು ತಂದು ಕೊಡುತ್ತಾರೆ. ಬೇರೊಬ್ಬ ಜಡ್ಜ್ ಎಲ್ಲಿಂದ ಕರೆತರೋದು? ಹೀಗೆಲ್ಲ ಚಾನಲ್‌ನವರು ತಲೆಕೆಡಿಸಿಕೊಂಡಿರಬಹುದು ಅಂದುಕೊಂಡಿದ್ದೀರಾ?

ಜಗತ್ತು ನಿತ್ಯಾನಂದಮಯವಾಗಿದೆ ಅನ್ನೋದು ಅವರಿಗೆ ಗೊತ್ತು. ನಿನ್ನೆ ಆದ ನೋವು-ದುಃಖವನ್ನೆಲ್ಲ ಮರೆತು ಮೇಡಂ ವಾಪಾಸ್ ಬರ್ತಾರೆ ಅಂತಾನೂ ಅವರಿಗೆ ಗೊತ್ತು. ನಿನ್ನೆ ಮೇಂಡಂ ವಾಕ್‌ಔಟ್ ಮಾಡಿದ್ರಿಂದ ಜಟಕಾ ಬಂಡಿಗೆ ಇನ್ನಷ್ಟು ಟಿಆರ್‌ಪಿ ಹೆಚ್ಚಾಗಿರುತ್ತೆ ಅನ್ನೋದೂ ಸಹ ಗೊತ್ತು. ಈ ತರಹ ವಾಕ್ ಔಟ್, ಮುನಿಸು ಇಲ್ಲದೇ ಇದ್ದರೆ ಶೋಗೆ ಕಳೆಕಟ್ಟುವುದಾದರೂ ಹೇಗೆ ಹೇಳಿ?

ಮೇಡಂ ಬೇಗ ವಾಪಾಸ್ ಬರಲಿ. ಕರ್ನಾಟಕದ ಆರೇಳು ಕೋಟಿ ಕನ್ನಡಿಗರ ಮನೆಮನೆಗಳ ಸಮಸ್ಯೆಗಳನ್ನೆಲ್ಲ ಅವರು ಇತ್ಯರ್ಥ ಮಾಡಲಿ. ಒಂದೊಂದು ಸರ್ತಿ ಜಗಳ ಆಗುತ್ತಪ್ಪಾ? ಜನ ಚಪ್ಪಲಿಲೂ ಹೊಡೆದಾಡುತ್ತಾರೆ, ಬಿಪಿ ಏರಿದರೆ ಮಚ್ಚಲ್ಲೂ ಹೊಡೆದಾಡುತ್ತಾರೆ. ನಿನ್ನೆ ಒಬ್ಬಳು ಮೂರ್ಛೆ ತಪ್ಪಿದ್ದಾಳೆ, ನಾಳೆ ಇನ್ನ್ಯಾರೋ ಕೊಲೆಯೂ ಆಗಿಬಿಡಬಹುದು. ಆಗಲಿಬಿಡಿ. ಎಲ್ಲ ಸಾರ್ವಜನಿಕರ ಎದುರು, ಕ್ಯಾಮೆರಾ ಎದುರು ನಡೆಯುತ್ತಲ್ಲಾ? ಎವಿಡೆನ್ಸ್ ಇರುತ್ತೆ, ಆ ಪ್ರಕರಣದ ವಿಚಾರಣೆಯನ್ನೂ ಜಟಕಾ ಬಂಡಿಯ ಕೋರ್ಟಿನಲ್ಲೇ ಮಾಡಬಹುದು. ಕೊಂದವರಿಗೆ ಶಿಕ್ಷೆ ಆಗುತ್ತೆ. ಮನೆಯಲ್ಲಿ ಹೊಡೆದಾಡಿಕೊಂಡು ಸಾಯುವವರು ಸ್ಟುಡಿಯೋದಲ್ಲಿ ಸತ್ತರೆ ಏನಂತೆ, ಕಾರ್ಯಕ್ರಮಕ್ಕೆ ಇನ್ನಷ್ಟು ಟಿಆರ್‌ಪಿ ಬರುತ್ತೆ. ಸಮಸ್ಯೆ ತೆಗೆದುಕೊಂಡು ಬರೋರು ಜಾಸ್ತಿಯಾಗ್ತಾರೆ. ಅಲ್ಲಿಗೆ ಅಖಂಡ ಕರ್ನಾಟಕದ ಸಮಸ್ಯೆಗಳೆಲ್ಲ ಬಗೆಹರಿದುಬಿಡುತ್ತವೆ.

ನೀವೇನಂತೀರಿ?

Monday, July 11, 2011

ಮಲದ ಗುಂಡಿಯಲ್ಲಿ ಇನ್ನಿಬ್ಬರು ಸತ್ತರು, ನಮ್ಮ ಮನುಷ್ಯತ್ವ ಯಾವಾಗಲೋ ಸತ್ತಿದೆ...

ತಾಯಂದಿರ ದುಃಖ
ಕೆಲವರ ಬದುಕೂ ಸುದ್ದಿಯಾಗುವುದಿಲ್ಲ, ಸಾವೂ ಸುದ್ದಿಯಾಗುವುದಿಲ್ಲ. ಜಗತ್ತು ಹಾಗೇ ಮುಂದುವರೆಯುತ್ತದೆ. ಸಾವು ಹೇಗೆ ಬೇಕಾದರೂ ಬರಬಹುದು. ಆದರೆ ಮಲದ ಗುಂಡಿಯಲ್ಲಿ ಉಸಿರುಗಟ್ಟಿ ಹುಳಗಳಂತೆ ಸಾಯುವ ಪಾಡು ಯಾರಿಗೂ ಬರಬಾರದು. ಶನಿವಾರ ಸಂಜೆ ೪-೩೦ರ ಸುಮಾರಿಗೆ ಹಾಸನ ಜಿಲ್ಲೆ ಆಲೂರು ತಾಲ್ಲೂಕು ಕೆಂಚಮ್ಮನಹೊಸಕೋಟೆ ಬಳಿಯ ಕಾಫಿ ಎಸ್ಟೇಟ್‌ನ ಮಲದ ಗುಂಡಿಯಲ್ಲಿ ಇಬ್ಬರು ಯುವಕರು ನೀಗಿ ಹೋದರು. ಯಥಾಪ್ರಕಾರ ನಮ್ಮ ಮಾಧ್ಯಮಗಳಿಗೆ ಇದು ಬ್ರೆಕಿಂಗ್ ನ್ಯೂಸ್ ಅಲ್ಲ. ಜೀವ ಅಮೂಲ್ಯ. ಆದರೆ ಎಲ್ಲರದೂ ಅಲ್ಲ. ಇಂಥವರ ಸಾವು ಸಹ ಸುದ್ದಿಯಾಗುವುದಿಲ್ಲ.

ಆ ಭಾಗದ ಜನರಿಗೆ ಇಂಥ ಸಾವುಗಳು ಹೊಸದೇನೂ ಅಲ್ಲ. ಇತ್ತೀಚಿನ ವರ್ಷಗಳಲ್ಲಿ ಚನ್ನರಾಯಪಟ್ಟಣ, ಅರಸೀಕೆರೆ, ಕೆ.ಆರ್.ನಗರ ತಾಲ್ಲೂಕುಗಳಲ್ಲಿ ಹೀಗೇ ಮಲದ ಗುಂಡಿಯಲ್ಲಿ ವಿಷಕಾರಿ ಅನಿಲ ಕುಡಿದು ಹಲವರು ಸತ್ತು ಹೋದರು. ಯಾರೂ ಸುದ್ದಿಯಾಗಲಿಲ್ಲ. ಶನಿವಾರ ಸತ್ತವರೂ ಅಷ್ಟೆ. ಅವರ ಸಾವು ನಮ್ಮ ಸಮಾಜವನ್ನು ಅಲುಗಾಡಿಸಲೇ ಇಲ್ಲ. ಅವರೇನೋ ಸತ್ತರು ನಿಜ, ಆದರೆ ನಮ್ಮೊಳಗಿನ ಮನುಷ್ಯತ್ವ ಸತ್ತು ಯಾವ ಕಾಲವಾಯಿತು?

ಸತ್ತ ಇಬ್ಬರೂ ಸಕಲೇಶಪುರದವರು. ಒಬ್ಬ ಮಹದೇವ, ಮತ್ತೊಬ್ಬ ಅರ್ಜುನ. ದಿನಗೂಲಿ ಗುತ್ತಿಗೆ ಆಧಾರದಲ್ಲಿ ಸಕಲೇಶಪುರ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದವರು. ಈ ಇಬ್ಬರೂ ಮತ್ತು ಮಂಜ, ಮುರುಗ ಎಂಬ ಇನ್ನಿಬ್ಬರು ಯಕಶ್ಚಿತ್ ಮೂರೂವರೆ ಸಾವಿರ ರೂಪಾಯಿಗಳ ಒಂದು ಕೆಲಸ ಒಪ್ಪಿಕೊಂಡಿದ್ದರು. ಈ ನಾಲ್ವರೂ ಸೋದರ ಸಂಬಂಧಿಗಳೇ. ಕೆಂಚಮ್ಮನ ಹೊಸಕೋಟೆ ಬಳಿಯ ಪೂರ್ಣರಾಮ ಎಸ್ಟೇಟ್‌ನಲ್ಲಿ ಮಲದ ಪಿಟ್ ತುಂಬಿಕೊಂಡಿತ್ತು. ಅದನ್ನು ಖಾಲಿ ಮಾಡಿಕೊಡಲು ನಾಲ್ವರು ಹೊರಟಿದ್ದರು. ಶನಿವಾರ ಮಧ್ಯಾಹ್ನ ೧೨-೩೦ರ ಸುಮಾರಿಗೆ ಅವರು ಅಲ್ಲಿಗೆ ತಲುಪಿಕೊಂಡಿದ್ದರು.

ಕಾಫಿ ಎಸ್ಟೇಟ್‌ಗಳಲ್ಲಿ ಲೈನ್ ಮನೆಗಳೆಂದು ಕರೆಯಲಾಗುವ ವಸತಿ ವ್ಯವಸ್ಥೆಯೊಂದು ಇರುತ್ತದೆ. ಐದೋ, ಹತ್ತೋ ಪುಟ್ಟಪುಟ್ಟ ಕೊಠಡಿಗಳ ಸಾಲು ಮನೆಗಳನ್ನು ನಿರ್ಮಿಸಲಾಗಿರುತ್ತದೆ. ಈ ಮನೆಗಳಲ್ಲಿ ತೋಟ ಕಾರ್ಮಿಕರು ಸಂಸಾರ ಸಮೇತ ವಾಸ ಮಾಡುತ್ತಾರೆ. ಇಂಥ ಲೈನ್ ಮನೆಗಳಿಗಾಗಿ ಒಂದು ಪಿಟ್ ನಿರ್ಮಿಸಲಾಗಿತ್ತು. ಈ ತೋಟದ ಲೈನ್ ಮನೆಗಳಲ್ಲಿ ಕೆಲವು ತಿಂಗಳುಗಳಿಂದ ಯಾರೂ ವಾಸವಾಗಿರಲಿಲ್ಲ. ಎಸ್ಟೇಟ್ ಮಾಲೀಕರು ಹೊಸದಾಗಿ ಒಂದಷ್ಟು ತೋಟ ಕೂಲಿಗಳನ್ನು ಕರೆಸಿಕೊಂಡಿದ್ದರು. ಆದರೆ ಈ ಮನೆಗಳ ಟಾಯ್ಲೆಟ್‌ಗಳು ಕಟ್ಟಿಕೊಂಡಿದ್ದವು. ಗುಂಡಿ ತುಂಬಿರಬಹುದು ಎಂದು ಭಾವಿಸಿದ ಎಸ್ಟೇಟ್ ಮಾಲೀಕರು ಸಕಲೇಶಪುರದಿಂದ ಮಹದೇವ ಮತ್ತು ತಂಡವನ್ನು ಕರೆಸಿಕೊಂಡಿದ್ದರು.

ಪಿಟ್‌ನ ಮೇಲೆ ಸುಮಾರು ಎರಡೂವರೆ ಅಡಿಗಳಷ್ಟು ಮಣ್ಣು ತುಂಬಿಕೊಂಡಿತ್ತು. ಮಹದೇವ ಮತ್ತು ಸಂಗಡಿಗರು ಆ ಮಣ್ಣನ್ನು ತೆಗೆದು ಪಿಟ್‌ನ ಕಲ್ಲನ್ನು ಸರಿಸುವಷ್ಟರಲ್ಲಿ ಹೈರಾಣಾಗಿ ಹೋಗಿದ್ದರು. ಪಿಟ್ ಕ್ಲೀನ್ ಮಾಡುವವರು ಕಡ್ಡಾಯವಾಗಿ ಕುಡಿದಿರುತ್ತಾರೆ. ಕುಡಿಯದ ಹೊರತು ಅವರು ಅಸಾಧ್ಯ ವಾಸನೆಯನ್ನು ಸಹಿಸಿಕೊಳ್ಳಲಾರರು. ವರ್ಷಾನುವರ್ಷಗಳ ಕೊಳೆತ ಮಲದ ದುರ್ವಾಸನೆಗೇ ಯಾರಾದರೂ ಮೂರ್ಛೆ ಹೋಗಿಬಿಡುತ್ತಾರೆ. ಹೀಗಾಗಿ ಕುಡಿದೇ ಕೆಲಸ ಮಾಡುವುದು ನಡೆದು ಬಂದ ಸಂಪ್ರದಾಯ.

ಪಿಟ್ ತೆರೆದಾಗ ಅವರು ಗಮನಿಸಿದ್ದೇನೆಂದರೆ ಅದು ಎಸ್ಟೇಟ್ ಮಾಲೀಕರು ಭಾವಿಸಿದಂತೆ ಭರ್ತಿಯಾಗಿರಲಿಲ್ಲ. ಕೇವಲ ಮೂರು ಅಡಿಯಷ್ಟು ಮಾತ್ರ ಮಲ ಶೇಖರಣೆಯಾಗಿತ್ತು. ಬಹುಶಃ ಲೈನ್ ಮನೆಗಳಿಂದ ಮಲ ಹೊರಹೋಗಲು ಅಳವಡಿಸಿದ್ದ ಪೈಪ್‌ಗಳು ಬ್ಲಾಕ್ ಆಗಿರಬೇಕು. ಹೀಗಾಗಿ ಗುಂಡಿ ತುಂಬಿರಬಹುದು ಎಂದು ಎಸ್ಟೇಟ್ ಮಾಲೀಕರು ಅಂದುಕೊಂಡಿರಬಹುದು. ಹೇಗೂ ಬಂದಾಗಿದೆ, ಇರುವಷ್ಟು ಮಲವನ್ನು ಖಾಲಿ ಮಾಡಲು ಮಹದೇವ ಮತ್ತು ತಂಡ ಹೊರಟಿದೆ.

ಚಪ್ಪಡಿ ಕಲ್ಲು ಸರಿಸಿ ಪಿಟ್‌ನ ಮೇಲ್ಭಾಗದ ದ್ವಾರವನ್ನು ತೆರೆದ ನಂತರ ಕನಿಷ್ಠ ಒಂದು ದಿನವಾದರೂ ಹಾಗೇ ಬಿಡಬೇಕಿತ್ತು. ಯಾಕೆಂದರೆ ಶೇಖರಣೆಯಾದ ಮಲದಿಂದ ವಿಷಕಾರಿ ಅನಿಲಗಳು ಉತ್ಪತ್ತಿಯಾಗಿ ಅದು ಗುಂಡಿಯಲ್ಲಿ ಆವರಿಸಿಕೊಂಡಿರುತ್ತದೆ. ಪೂರ್ಣ ತುಂಬಿದ ಗುಂಡಿಗಳಾದರೆ ಈ ಅಪಾಯ ಕಡಿಮೆ, ಆದರೆ ಅರ್ಧಂಬರ್ಧ ತುಂಬಿದ ಗುಂಡಿಗಳು ಅಪಾಯಕಾರಿ.

ಹಿಂದೆ ಈ ಕೆಲಸ ಮಾಡುತ್ತಿದ್ದವರು ಒಂದು ದೀಪವನ್ನು ಗುಂಡಿಯಲ್ಲಿ ಇಳೆಬಿಟ್ಟು, ಪರೀಕ್ಷಿಸುತ್ತಿದ್ದರು. ಹೀಗೆ ದೀಪವನ್ನು ಕೆಳಗೆ ಬಿಟ್ಟಾಗ ಗುಂಡಿಯಲ್ಲಿ ತುಂಬಿದ ಮೀಥೇನ್ ಮತ್ತಿತರ ಅನಿಲಗಳು ಭಗ್ಗನೆ ಉರಿಯುತ್ತಿದ್ದವು. ಹೀಗೆ ಬೆಂಕಿ ಕಾಣಿಸಿಕೊಂಡರೆ ಗುಂಡಿಯಲ್ಲಿ ಇಳಿಯಲು ಅದು ಸಕಾಲವಲ್ಲ ಎಂಬುದು ಅವರಿಗೆ ಗೊತ್ತಾಗುತ್ತಿತ್ತು. ಒಂದು ವೇಳೆ ಇಳೆ ಬಿಟ್ಟ ದೀಪವು ಆರಿಹೋದರೂ ಗುಂಡಿಯಲ್ಲಿ ಇಳಿಯುವಂತಿರಲಿಲ್ಲ. ಯಾಕೆಂದರೆ ಒಳಗೆ ಆಮ್ಲಜನಕವೇ ಇಲ್ಲ ಎಂಬುದು ಅವರಿಗೆ ಗೊತ್ತಾಗುತ್ತಿತ್ತು. (ಬಾವಿಗಳನ್ನು ಶುದ್ಧ ಮಾಡುವಾಗಲೂ ಕೆಲವೆಡೇ ಇದೇ ಕ್ರಮ ಅನುಸರಿಸಲಾಗುತ್ತದೆ.)

ಮಹದೇವ
ಕುಡಿದಿದ್ದ ಮಹದೇವ ಮತ್ತು ತಂಡ ಅದೇನು ಯೋಚನೆ ಮಾಡಿತೋ? ಹೇಗೂ ಇರುವುದು ಮೂರು ಅಡಿಯಷ್ಟು ಕೊಳಕು. ಬೇಗ ಬೇಗ ತೆಗೆದು ನಿಗದಿತ ಸ್ಥಳದಲ್ಲಿ ಖಾಲಿ ಮಾಡಿ, ಕಾಸು ಪಡೆದು ಹೋಗಿಬಿಡೋಣ ಎಂದುಕೊಂಡರೇನೋ? ಏಣಿಯೊಂದನ್ನು ಗುಂಡಿಯೊಳಗೆ ನಿಲ್ಲಿಸಲಾಗಿದೆ. ಮೊದಲು ಮಹದೇವ ಗುಂಡಿಯಲ್ಲಿ ಇಳಿದಿದ್ದಾನೆ. ಇಳಿದ ತಕ್ಷಣವೇ ಭಯಾನಕ ಅನಿಲ ಅವನನ್ನು ನುಂಗಿಹಾಕಿದೆ. ಅವನು ಅಲ್ಲೇ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಅವನು ಬದುಕಿಸಲು ಮೇಲೆ ನಿಂತಿದ್ದ ಅರ್ಜುನನೂ ಇಳಿದಿದ್ದಾನೆ. ಅವನೂ ಸಹ ವಿಷಕಾರಿ ಅನಿಲವನ್ನು ಸೇವಿಸಿ ಮಲದ ಮೇಲೆ ಅಂಗಾತ ಮಲಗಿ ಸತ್ತು ಬಿದ್ದಿದ್ದಾನೆ. ಮೇಲೆ ಇದ್ದ ಮಂಜ ಮತ್ತು ಮುರುಗರಿಗೆ ಅನಾಹುತದ ಅರಿವಾಗಿದೆ. ತಾವೂ ಇಳಿದರೆ ತಮ್ಮ ಸಾವೂ ಖಚಿತ ಎಂಬುದು ಅವರಿಗೆ ಸ್ಪಷ್ಟವಾಗಿ ಗೊತ್ತಾಗಿದೆ. ಬಾಯಿ ಬಡಿದುಕೊಳ್ಳುವ ಬದಲಾಗಿ ಅವರಿಗೆ ಮಾಡಲು ಇನ್ನೇನೂ ಉಳಿದಿರಲಿಲ್ಲ.

ಮಹದೇವನಿಗೆ ಇನ್ನೂ ಇಪ್ಪತ್ತೈದು ವರ್ಷ. ಮೂವರು ಮಕ್ಕಳಿದ್ದಾರೆ. ಇಬ್ಬರು ಗಂಡು, ಒಬ್ಬ ಹೆಣ್ಣುಮಗಳು. ಅರ್ಜುನನಿಗೆ ಇನ್ನೂ ಮದುವೆಯಾಗಿಲ್ಲ. ಬೆಳೆದು ನಿಂತ ತಂಗಿಯಿದ್ದಾರೆ. ಇಬ್ಬರ ದುರಂತವೆಂದರೆ ಇಬ್ಬರಿಗೂ ತಂದೆಯಿಲ್ಲ. ಅವರಿಬ್ಬರೂ ಅಣ್ಣತಮ್ಮಂದಿರು. ಒಬ್ಬ ಅಪಘಾತಕ್ಕೆ ಸಿಕ್ಕಿ ಸತ್ತಿದ್ದರೆ, ಮತ್ತೊಬ್ಬ ಇದ್ದಕ್ಕಿದ್ದಂತೆ ರಸ್ತೆಯಲ್ಲೇ ಕುಸಿದು ಬಿದ್ದು ಸತ್ತು ಹೋಗಿದ್ದರು. ತಂದೆಯಿಲ್ಲದ ತಬ್ಬಲಿ ಮಕ್ಕಳಿಬ್ಬರೂ ಇಡೀ ಸಂಸಾರದ ನೊಗ ಹೊತ್ತು ದುಡಿಯುತ್ತಿದ್ದರು. ಈಗ ಇಬ್ಬರೂ ಸತ್ತಿದ್ದಾರೆ, ಇಬ್ಬರ ಕುಟುಂಬವೂ ಬೀದಿಗೆ ಬಂದಿದೆ.

ಈ ದುರ್ಘಟನೆಯ ನಂತರ ಎಲ್ಲ ಮಾಮೂಲಿ ಪ್ರಹಸನಗಳು ನಡೆದಿವೆ. ಸ್ಥಳೀಯ ನಾಯಕರು ಸೇರಿದ್ದಾರೆ. ಇಬ್ಬರ ಕುಟುಂಬಕ್ಕೂ ಎಸ್ಟೇಟ್ ಮಾಲೀಕರಿಂದ ಒಂದಷ್ಟು ಪರಿಹಾರ ಕೊಡಿಸುವ ರಾಜಿಪಂಚಾಯ್ತಿ ನಡೆದಿದೆ. ಇದರ ಫಲಶ್ರುತಿಯಾಗಿ ಪಿಟ್ ಕ್ಲೀನ್ ಮಾಡಲು ಬಂದವರು ಕಾಲು ಜಾರಿ ಬಿದ್ದು ಸತ್ತರೆಂಬ ಹೊಂದಾಣಿಕೆಯ ತೀರ್ಮಾನದ ಸುದ್ದಿಗೆ ಎಲ್ಲರೂ ಬದ್ಧರಾಗಿದ್ದಾರೆ. ಎರಡೂ ಕುಟುಂಬಗಳ ಹಿತದೃಷ್ಟಿಯಿಂದ ಮೃತರ ಸಂಬಂಧಿಗಳಿಗೆ ಈ ಒಪ್ಪಂದ ಅಗತ್ಯವಾಗಿತ್ತೇನೋ?

ಭಾನುವಾರ ಮಧ್ಯಾಹ್ನದ ಹೊತ್ತಿಗೆ ಪೋಸ್ಟ್‌ಮಾರ್ಟಂ ನಡೆದು, ನಂತರ ಸಂಬಂಧಿಕರು, ಗೆಳೆಯರ ರೋಧನದ ನಡುವೆ ಇಬ್ಬರ ಅಂತ್ಯಕ್ರಿಯೆಯೂ ನಡೆದಿದೆ. ದಿನಗಟ್ಟಲೆ ಅಳುತ್ತಾ ಕೂರಲು ಅವರ ಬಳಿ ಸಮಯವೂ ಇಲ್ಲ. ಅವತ್ತಿನ ಕೂಳನ್ನು ಅವತ್ತೇ ದುಡಿದು ತಿನ್ನುವವರಿಗೆ ಸತ್ತವರಿಗಾಗಿ ಅಳುವ ಸಮಯವಾದರೂ ಎಲ್ಲಿರುತ್ತದೆ?

ಸರ್ಕಾರ ಎಷ್ಟೇ ಸುಳ್ಳು ಅಫಿಡೆವಿಟ್‌ಗಳನ್ನು ಕೊಟ್ಟರೂ ಮಲ ಹೊರುವ ವ್ಯವಸ್ಥೆ ಇಡೀ ರಾಜ್ಯದಲ್ಲಿ ನಡೆಯುತ್ತಲೇ ಇದೆ. ಅಂತಾರಾಷ್ಟ್ರೀಯ ನಗರಿ ಬೆಂಗಳೂರಿನ ಹೊರವಲಯದಲ್ಲೇ ಇನ್ನೂ ಪಿಟ್ ವ್ಯವಸ್ಥೆ ಇದೆ. ಪಿಟ್ ವ್ಯವಸ್ಥೆ ಇದ್ದ ಮೇಲೆ ಗುಂಡಿಗಿಳಿದು, ಮಲ ಹೊತ್ತು ಶುದ್ಧ ಮಾಡುವವರೂ ಇರಲೇಬೇಕಲ್ಲವೇ? ಬೆಂಗಳೂರಿನ ಕಥೆಯೇ ಹೀಗಿರುವಾಗ ಒಳಚರಂಡಿ ವ್ಯವಸ್ಥೆಯೇ ಇಲ್ಲದ ಸಣ್ಣಪುಟ್ಟ ನಗರಗಳು, ಪಟ್ಟಣಗಳಲ್ಲಿ ಮಲ ಹೊರುವ ಪದ್ಧತಿ ಇಲ್ಲವೆಂದು ನಂಬುವುದು ಹೇಗೆ?

ಸಕಲೇಶಪುರ-ಆಲೂರಿನಂಥ ಮಲೆನಾಡಿನ ಪ್ರದೇಶದಲ್ಲಿ ಪರಿಸ್ಥಿತಿ ಗಂಭೀರ. ಯಾಕೆಂದರೆ ಇಲ್ಲಿ ಪಿಟ್‌ಗಳು ಬೇಗಬೇಗ ತುಂಬುತ್ತವೆ. ಮಳೆ ನೀರು ಗುಂಡಿಯಲ್ಲಿ ಶೇಖರಣೆಯಾಗುವುದರಿಂದ ಪಿಟ್‌ಗಳನ್ನು ಆಗಾಗ ಶುದ್ಧಗೊಳಿಸಲೇಬೇಕು, ಅದು ಅನಿವಾರ್ಯ. ಗುಂಡಿಗಳಿರುವುದರಿಂದ, ಅದನ್ನು ಆಗಾಗ ಖಾಲಿ ಮಾಡಬೇಕಿರುವುದರಿಂದ ಮಹದೇವ, ಅರ್ಜುನರಂಥವರು ಹಣದ ಆಸೆಗೆ ಇಂಥ ಕೆಲಸಗಳನ್ನು ಒಪ್ಪಿಕೊಳ್ಳುತ್ತಾರೆ.

ಸಕಲೇಶಪುರದಲ್ಲಿ ಇಂಥ ಕೆಲಸಗಳನ್ನು ಮಾಡುವವರು ಪೌರಕಾರ್ಮಿಕರು ಮತ್ತು ಅವರ ಸಂಬಂಧಿಗಳು. ಅವರದ್ದೇ ಒಂದು ಸಂಘಟನೆಯಿದೆ. ಈ ಸಂಘಟನೆಯ ಮುಖ್ಯಸ್ಥರಲ್ಲಿ ಒಬ್ಬರಾದ ಕೃಷ್ಣ ಹೇಳುವ ಪ್ರಕಾರ ಮಲದ ಗುಂಡಿಯ ಕೆಲಸ ಮಾಡದಂತೆ ಅವರೆಲ್ಲರೂ ಬಹಳ ಹಿಂದೆಯೇ ನಿರ್ಧರಿಸಿದ್ದಾರೆ. ಆದರೆ ಹಣದ ಆಸೆಗೆ ಕೆಲವರು ಕದ್ದುಮುಚ್ಚಿ ಈ ಕೆಲಸ ಮಾಡುತ್ತಾರೆ. ಹಾಗೆ ಮಾಡಿದ್ದು ಬೆಳಕಿಗೆ ಬಂದಾಗಲೆಲ್ಲ ಅವರಿಂದ ದಂಡವನ್ನೂ ಕಟ್ಟಿಸಿಕೊಳ್ಳಲಾಗಿದೆ. ಬಹುಶಃ ದಂಡ ಕಟ್ಟುವುದೂ ಮಹದೇವ ಅಂಥವರಿಗೆ ಅಭ್ಯಾಸವಾಗಿರಬಹುದು.

ಅರ್ಜುನ
ಸರ್ಕಾರದ ಚಿತ್ರವಿಚಿತ್ರ ನಿಯಮಾವಳಿಗಳಿಂದಾಗಿ ಪುರಸಭೆಗೆ ಖಾಯಂ ನೇಮಕಾತಿ ಪಡೆದಿದ್ದ ಒಟ್ಟು ಹನ್ನೊಂದು ಮಂದಿಯ ನೌಕರಿಯನ್ನು ವಾಪಾಸು ಕಿತ್ತುಕೊಳ್ಳಲಾಗಿದೆ. ಹೀಗಾಗಿ ಅವರೆಲ್ಲರೂ ಈಗಲೂ ದಿನಗೂಲಿ ಆಧಾರದಲ್ಲೇ ಕೆಲಸ ಮಾಡುತ್ತಾರೆ. ಬದುಕಿನ ಅನಿವಾರ್ಯತೆಗಳಿಗಾಗಿ ಹೆಚ್ಚು ಹಣದ ಆಸೆಗೆ ಇಂಥ ಕೆಲಸಗಳನ್ನು ಒಪ್ಪಿಕೊಳ್ಳುವವರು ಒಂದೇ ಗುಂಡಿಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾರೆ, ಅಥವಾ ಬರಬಾರದ ಖಾಯಿಲೆಗಳಿಗೆ ಗುರಿಯಾಗುತ್ತಾರೆ.

ವ್ಯಂಗ್ಯವೆಂದರೆ ಇತ್ತೀಚಿಗೆ ಹದಿನೈದು ದಿನಗಳ ಹಿಂದೆಯಷ್ಟೇ ಮಲದ ಪಿಟ್‌ಗಳನ್ನು ಖಾಲಿ ಮಾಡುವ ಸಕ್ಕಿಂಗ್ ಮೆಷಿನ್ ಹೊಂದಿದ ವಾಹನವೊಂದು ಸಕಲೇಶಪುರ ಪುರಸಭೆಗೆ ಬಂದಿದೆ. ಅದರ ಉದ್ಘಾಟನೆ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮಾಮೂಲಿನಂತೆ ಮಲ ಹೊರುವ ಪದ್ಧತಿ ಅನಿಷ್ಟ., ಅದನ್ನು ಓಡಿಸಬೇಕು. ವಾಹನ ಬಂದಿರುವುದರಿಂದ ಸಮಸ್ಯೆ ಬಗೆಹರಿದಿದೆ ಎಂಬ ಧಾಟಿಯಲ್ಲಿ ಮಾತನಾಡಿದ್ದರು. ವಾಹನ ಬಂದ ಹದಿನೈದು ದಿನಗಳಿಗೇ ಇವರಿಬ್ಬರು ತೀರಿಕೊಂಡಿದ್ದಾರೆ.

ಇಂಥವರ ಸಾವಿಗಾಗಿ ಮರುಗುವವರು ಕಡಿಮೆ. ಸತ್ಯಶೋಧನಾ ಸಮಿತಿಗಳು ಮಲೆನಾಡಿನ ಈ ಹಳ್ಳಿಗಳನ್ನು ತಲುಪುವ ಸಾಧ್ಯತೆಗಳು ಕಡಿಮೆ. ಮಾನವ ಹಕ್ಕು ಹೋರಾಟಗಾರರು ಸಾಧಾರಣವಾಗಿ ಬೆಂಗಳೂರು-ಮೈಸೂರುಗಳಂಥ ನಗರಗಳಲ್ಲೇ ವಾಸವಾಗಿರುವುದರಿಂದ, ಅವರಿಗೆ ಈ ಹುಡುಗರ ಸಾವಿನ ಆಕ್ರಂದನವೂ ಕೇಳಿಸುವುದಿಲ್ಲ. ವರ್ಷದ ಆರು ತಿಂಗಳು ಮಳೆಯಲ್ಲೇ ಇರುವ ಮಲೆನಾಡಿನ ಹಳ್ಳಿಗಳಲ್ಲಿ ಮನುಷ್ಯರು ವಾಸವಾಗಿದ್ದಾರೆಂದು ನಮ್ಮ ಬೆಂಗಳೂರು ಸಮಾಜ ನಂಬಿದೆ ಎಂದು ಹೇಳುವಂತೆಯೂ ಇಲ್ಲ. ಮನುಷ್ಯರೇ ಇಲ್ಲದ ಮೇಲೆ ಮಾನವ ಹಕ್ಕುಗಳ ಪ್ರಶ್ನೆಯಾದರೂ ಎಲ್ಲಿಂದ ಉದ್ಭವಿಸುತ್ತದೆ?

ಸತ್ತವರ ಪೈಕಿ ಅರ್ಜುನ ಎಳೆಯವನು, ಮುಗ್ಧ. ಸಕಲೇಶಪುರದಲ್ಲಿ ರಸ್ತೆಗಳಲ್ಲಿ ಹಿರಿಯರು, ಗಣ್ಯರು ಎದುರಿಗೆ ಸಿಕ್ಕರೆ ದುನಿಯಾ ಸಿನಿಮಾದಲ್ಲಿ ವಿಜಯ್ ಮಾಡುತ್ತಿದ್ದಂತೆ ಭರ್ಜರಿಯಾಗಿ ಸೆಲ್ಯೂಟ್ ಹೊಡೆದು ನಮಸ್ತೆ ಸಾರ್ ಎನ್ನುತ್ತಿದ್ದ. ಅವನೀಗ ಬದುಕಿಗೇ ಒಂದು ದೊಡ್ಡ ಸಲಾಮ್ ಹೊಡೆದು ಹೋಗಿದ್ದಾನೆ.

ಯಾರ‍್ಯಾರೋ ಹೇಗೆ ಹೇಗೋ ಸಾಯುತ್ತಾರೆ. ಆದರೆ ಸಮಾಜದ ಕೊಳಕು ತೆಗೆಯುವ ಕಾಯಕ ಮಾಡುವ ಈ ಜನರು ಅದೇ ಕೊಳಕಿನ ಮೇಲೆ ಅಂಗಾತ ಬಿದ್ದು ಸಾಯುವುದನ್ನು ನೆನಪಿಸಿಕೊಂಡರೆ ಸಂಕಟವಾಗುತ್ತದೆ.

ಇಂಥ ಸಾವುಗಳಿಗೂ ನಮ್ಮ ಸಮಾಜ, ನಾವು, ನಮ್ಮ ಮಾಧ್ಯಮಗಳು ಮೌನವಾಗಿ ಪ್ರತಿಕ್ರಿಯಿಸುವಷ್ಟು ನಿರ್ಭಾವುಕ ಸ್ಥಿತಿಗೆ ತಲುಪಿರುವುದು ಆಧುನಿಕ ಜಗತ್ತಿನ ಬದಲಾದ ಭಾಷೆಯನ್ನು ಬಿಂಬಿಸುತ್ತದೆ. ಕೊಳಕೆನ್ನುವುದು ಗುಂಡಿಯಲ್ಲಿ ಮಾತ್ರವಿದೆಯೋ, ನಮ್ಮ ಎದೆಗಳಲ್ಲೇ ವರ್ಷಾನುವರ್ಷಗಳಿಂದ ಶೇಖರಣೆಗೊಂಡು, ಕೊಳೆತು ನಾರುತ್ತಿದೆಯೋ?