Monday, January 31, 2011

ಫ್ಲಾಷ್ ನ್ಯೂಸ್: ಅನಿತಾ ಕುಮಾರಸ್ವಾಮಿ ಮಧುಗಿರಿಗೆ ಭೇಟಿ!


ಜನಶ್ರೀ ಕುರಿತು ಬರೆದ ಪೋಸ್ಟ್‌ಗೆ ಬಂದ ಕೆಲವು ಪ್ರತಿಕ್ರಿಯೆಗಳು ಇಂಟರೆಸ್ಟಿಂಗ್ ಆಗಿದ್ದವು. ಒಂದೆರಡು ಪ್ರತಿಕ್ರಿಯೆಗಳನ್ನು ಗಮನಿಸಿ.

ಜನಶ್ರೀ ಟೀವಿ ಚಾನೆಲ್ ಎಂದು ಬರುತ್ತದೆ ಎಂಬ ಕುತೂಹಲ ಕೇವಲ ಜರ್ನಲಿಸ್ಟುಗಳಾದ ನಿಮಗೆ ಇದೆಯೇ ಹೊರತು ನಮ್ಮಂಥ ಸಾಮಾನ್ಯ ಟೀವಿ ವೀಕ್ಷಕನಿಗೆ ಖಂಡಿತವಾಗಿಯೂ ಇಲ್ಲ. ಹೇಳಿ ಕೇಳಿ, ಇದು ವಿವಾದಾತ್ಮಕ ರಾಜಕಾರಣಿಯ ಮಾಲಿಕತ್ವದ್ದು. ಅಂದ ಮೇಲೆ ಅವರ ವಿರುದ್ಧದ ಆಪಾದನೆಗಳನ್ನು ನಿರಾಕರಿಸುವಂಥ ರಾಜಕೀಯ ನಿಲುವು ಇರುತ್ತದೆ, ಸಂದೇಹವೇ ಇಲ್ಲ.  ಪತ್ರಿಕೆಗಳಿಂದ, ಇತರ ಚಾನೆಲ್‌ಗಳಿಂದ ಹೆಚ್ಚಿನ ಸಂಬಳದ ಆಸೆಗೆ ಕೆಲಸ ಬದಲಾಯಿಸುವವರಿಗೆ ಮಾತ್ರ ಹೊಸ ಚಾನೆಲ್ ಆಗಮನ ಖುಷಿ ತರುತ್ತಿರಬಹುದು.


yes. really true. Laymen like us are really not interested in Janaashree news chnl. we do not expect any miracle from that new, upcoming news chnl. It is an another business for them. may be this is the factor which pricking its management.and they are delaying its launch. Any way for journalists, it is an another company to get salary for their degree.


ಎರಡೂ ಅಭಿಪ್ರಾಯಗಳು ನಿಜ. ಜನಶ್ರೀ ಕುರಿತು ಯಾರಿಗೂ ಅಂಥ ವಿಶೇಷವಾದ ನಿರೀಕ್ಷೆಗಳೇನೂ ಇಲ್ಲ. ರೆಡ್ಡಿ ಸೋದರರು ನಡೆಸುವ ಈ ಚಾನೆಲ್ ಹೇಗಿರುತ್ತದೆ ಎಂದು ಸುಲಭವಾಗಿ ಊಹಿಸಬಹುದು.

ಉದಾಹರಣೆಯಾಗಿ ಕಸ್ತೂರಿ ಟಿವಿ ನಮ್ಮ ಕಣ್ಣ ಮುಂದೆಯೇ ಇದೆ.

ಅನಿತಾ ಕುಮಾರಸ್ವಾಮಿ ಮಧುಗಿರಿಗೆ ಭೇಟಿ ಅನ್ನೋದೂ ಕಸ್ತೂರಿ ವಾಹಿನಿಯಲ್ಲೊಂದು ಫ್ಲಾಶ್ ನ್ಯೂಸ್! ಅಲ್ಲಾ ಕಣ್ರೀ, ಅನಿತಾ ಕುಮಾರಸ್ವಾಮಿ ಮಧುಗಿರಿಯ ಶಾಸಕಿ. ಅವರು ಇರಬೇಕಾಗಿದ್ದೇ ಮಧುಗಿರಿಯಲ್ಲಿ. ಹೀಗೆಲ್ಲ ಸುದ್ದಿ ಮಾಡಿ ಅವರ ಮಾನ ಯಾಕೆ ಕಳೀತೀರಾ ಅಂದ್ರೆ, ಇಲ್ಲ ಗುರುವೇ ನಮ್ಮ ಕರ್ಮ, ನಾವು ಹಾಗೆ ಸುದ್ದಿ ಮಾಡಲೇಬೇಕು ಅನ್ನುತ್ತಾರೆ ಕಸ್ತೂರಿಯ ವರದಿಗಾರರು.

ಸರ್ಕಾರದ ವಿರುದ್ಧ ದಿನಕ್ಕೆ ಮೂರರಿಂದ ನಾಲ್ಕು ಪ್ಯಾಕೇಜ್ ಸ್ಟೋರಿಗಳು. ಕುಮಾರಸ್ವಾಮಿ, ರೇವಣ್ಣ, ದೇವೇಗೌಡರು ಎಲ್ಲಿಲ್ಲಿ ಇರ‍್ತಾರೋ ಅಲ್ಲಿಲ್ಲಿಂದ ತಲಾ ಒಂದೊಂದು ಸ್ಟೋರಿ. ಇನ್ನು ಜೆಡಿಎಸ್ ಇತರ ಲೀಡರುಗಳಿಗೆ ಒಂದೆರಡು ನಿಮಿಷ. ಅರ್ಧ ಗಂಟೆಯ ಬುಲೆಟಿನ್‌ನಲ್ಲಿ ಇನ್ನೇನು ಉಳಿಯಿತು? ಯಾಕೆ ಹೀಗೆಲ್ಲ ಮಾಡ್ತೀರಿ ಅಂದ್ರೆ, ಅದು ಸ್ಟಾಂಡಿಂಗ್ ಇನ್‌ಸ್ಟ್ರಕ್ಷನ್ ಎನ್ನುತ್ತಾರೆ ವರದಿಗಾರರು.

ಒಮ್ಮೊಮ್ಮೆ ಕಸ್ತೂರಿ ಪತ್ರಕರ್ತರು ಒಳ್ಳೆ ತನಿಖಾ ವರದಿಗಳನ್ನೇ ಮಾಡುತ್ತಾರೆ. ಯಡಿಯೂರಪ್ಪನವರ ಹಗರಣಗಳು ಹೊರಬಂದಾಗ ಹೆಚ್ಚಿನ ಸುದ್ದಿಗಳನ್ನು ಬ್ರೇಕ್ ಮಾಡಿದ್ದು ಕಸ್ತೂರಿ ನ್ಯೂಸೇ. ಆದರೆ ಏನು ಪ್ರಯೋಜನ? ಇದು ಜೆಡಿಎಸ್ ತುತ್ತೂರಿ ಎಂಬ ಕಾರಣಕ್ಕೆ ಬಹಳಷ್ಟು ಮಂದಿ ಕಸ್ತೂರಿಯ ನ್ಯೂಸನ್ನು ನೋಡೋದೆ ಇಲ್ಲ. ನೋಡಿದವರು ಆಪೋಜಿಷನ್ ಪಾರ್ಟಿಯವರಲ್ವಾ? ಏನೇನೋ ಮಾಡ್ತಾರೆ ಎಂದು ಮೂಗು ಮುರಿಯುತ್ತಾರೆ. ಅಲ್ಲಿಗೆ ವರದಿಗಾರರು ಕಷ್ಟಪಟ್ಟು ತಂದು ಮಾಡಿದ ಸುದ್ದಿ ಖಲ್ಲಾಸ್.

ದೇವೇಗೌಡರು ಗುಡುಗಿದ್ದಾರೆ, ಕುಮಾರಸ್ವಾಮಿ ಕೆರಳಿದ್ದಾರೆ, ರೇವಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ, ಚೆಲುವರಾಯಸ್ವಾಮಿ ಚಾಟಿ ಬೀಸಿದ್ದಾರೆ, ದತ್ತ ಕಿಡಿಕಿಡಿಯಾಗಿದ್ದಾರೆ ಅಂತ ಎಷ್ಟು ದಿನ ಹೇಳಿಕೊಂಡು ಇರ‍್ತೀರಿ? ಇವತ್ತಿನ ಪೈಪೋಟಿ ಯುಗದಲ್ಲಿ ನಿಮ್ಮ ನ್ಯೂಸನ್ನು ಯಾರು, ಯಾಕೆ ನೋಡಬೇಕು? ಹೀಗೆಲ್ಲ ಕೇಳಿ ನೋಡಿ, ಕಸ್ತೂರಿ ಪತ್ರಕರ್ತರು ಪೆಚ್ಚಾಗಿ ಹೋಗುತ್ತಾರೆ, ಅವರ ಬಳಿ ಉತ್ತರಗಳಿಲ್ಲ.

ಈ ಚಂದಕ್ಕೆ ಕಸ್ತೂರಿಯನ್ನು ನ್ಯೂಸ್ ಚಾನೆಲ್ ಮಾಡುವ ಐಡಿಯಾ ಬೇರೆ ಕುಮಾರಸ್ವಾಮಿಯವರಿಗೆ ಇದೆ. ಇದೇ ಧೋರಣೆ, ಜೆಡಿಎಸ್ ಭಟ್ಟಂಗಿತನ ಇಟ್ಟುಕೊಂಡಿದ್ದರೆ ನ್ಯೂಸ್ ಚಾನಲ್ ಕಥೆ ಅಷ್ಟೆ. ಕನಿಷ್ಟ ಎಂಟರ್‌ಟೈನ್‌ಮೆಂಟ್‌ಗಾಗಿಯಾದರೂ ಎಲ್ಲರೂ ಕಸ್ತೂರಿಯನ್ನು ಆಗೊಮ್ಮೆ ಈಗೊಮ್ಮೆ ನೋಡುತ್ತಿರುತ್ತಾರೆ. ಇದೇ ನಿಲುವು ಇಟ್ಟುಕೊಂಡು ನ್ಯೂಸ್ ಚಾನಲ್ ಮಾಡಿದರೆ ಸ್ವತಃ ಕಾಲಭೈರವೇಶ್ವರನೂ ಕಾಪಾಡಲಾರ. ಹಾದಿಬೀದಿಯಲ್ಲೂ ಜೆಡಿಎಸ್ ಪೋಸ್ಟರುಗಳಿರುತ್ತವೆ, ಟಿವಿಯಲ್ಲೂ ಅದೇ ನೋಡಬೇಕಾ?

ತಮಿಳುನಾಡಿನಲ್ಲಿ ಸನ್ ಟಿವಿ, ಜಯ ಟಿವಿಯಂಥವು ಬೆಳೆದುಕೊಂಡವು ನಿಜ. ಅಲ್ಲಿನ ಜನ ರಾಜಕಾರಣಿಗಳ ಬಗ್ಗೆ ವಿಚಿತ್ರ ವ್ಯಾಮೋಹ ಇಟ್ಟುಕೊಂಡವರು. ಹೀಗಾಗಿ ರಾಜಕಾರಣಿಗಳು ಆರಂಭಿಸಿದ ಚಾನಲ್‌ಗಳನ್ನೂ ಪ್ರೀತಿಸಿದರು. ಕರ್ನಾಟಕದಲ್ಲಿ ಹಾಗಿಲ್ಲ. ರಾಜಕಾರಣಿಗಳನ್ನು ಪ್ರೀತಿಸುವ ಮಾತು ಹಾಗಿರಲಿ, ಅವರನ್ನು ದ್ವೇಷಿಸುವ ಜನರೇ ಇಲ್ಲಿ ಹೆಚ್ಚು. ಹೀಗಾಗಿ ಚಾನಲ್‌ಗಳ ಮೂಲಕ ತಮಗಿಷ್ಟವಾಗಿದ್ದನ್ನೆಲ್ಲ ಕೊಡುತ್ತೇವೆ ಎಂದರೆ ತೆಗೆದುಕೊಳ್ಳಲು ಇಲ್ಲಿ ಯಾರೂ ಸಿದ್ಧರಿಲ್ಲ.

ಕಸ್ತೂರಿಯ ಕಥೆಯೇ ಜನಶ್ರೀಯಲ್ಲೇ ಆಗುವುದು ದಿಟ. ಅದರಲ್ಲಿ ಅನುಮಾನ ಪಡಬೇಕಾಗಿಲ್ಲ. ಹಾಗೆ ನೋಡಿದರೆ ಟಿವಿ ಪತ್ರಕರ್ತರಿಗೆ ಇರುವ ಆಯ್ಕೆಗಳಾದರೂ ಯಾವುವು? ಸಮಯ ಟಿವಿಯೂ ರಾಜಕಾರಣಿಯ ಮಾಲಿಕತ್ವದಲ್ಲೇ ಇದೆ. ಸುವರ್ಣ ಟಿವಿಯ ಮಾಲಿಕರೂ ಪಾರ್ಟ್ ಟೈಮ್ ರಾಜಕಾರಣಿಯೇ ಆಗಿದ್ದಾರೆ.

ಪತ್ರಕರ್ತರ ಮುಂದೆ ಆಯ್ಕೆಗಳು ಕಡಿಮೆ. ರಾಜಕಾರಣಿಗಳಲ್ಲದ ಮ್ಯಾನೇಜ್‌ಮೆಂಟುಗಳು ವ್ಯವಸ್ಥೆಯ ಆಮಿಷಕ್ಕೆ ಒಳಗಾಗಿ ಯಾವಾಗ ನೈತಿಕವಾಗಿ ಡಿನೋಟಿಫೈ ಆಗುತ್ತವೋ ಹೇಳಲು ಬರುವುದಿಲ್ಲ. ಮಾಧ್ಯಮರಂಗ ಇಂದು ಒಂದೋ ನೇರವಾಗಿ ರಾಜಕಾರಣಿಗಳ ಮಾಲಿಕತ್ವದಲ್ಲಿದೆ ಅಥವಾ ರಾಜಕಾರಣಿಗಳ ಪರೋಕ್ಷ ನಿಯಂತ್ರಣದಲ್ಲಿದೆ. ಈ ವ್ಯವಸ್ಥೆಯನ್ನು ಮೀರಿ ನಡೆಯುವ ಪತ್ರಕರ್ತರಿಗೆ ಸೋಡಾ ಚೀಟಿ ಸಿದ್ಧಪಡಿಸಿಕೊಂಡೇ ಇರಲಾಗುತ್ತದೆ.

ಹಿಂದೆ ಹಾಗಿರಲಿಲ್ಲ. ಒಂದು ಸಣ್ಣ ಉದಾಹರಣೆ. ರಾಜ್ಯದ ಪ್ರತಿಷ್ಠಿತ ಪತ್ರಿಕೆಯೊಂದರಲ್ಲಿ ಪ್ಯಾಕರ್ ಒಬ್ಬನನ್ನು ಕೆಲಸದಿಂದ ತೆಗೆಯಲಾಗಿತ್ತು. ಪ್ಯಾಕರ್‌ಗಳು ಎಂದರೆ ಮುದ್ರಣವಾದ ಪತ್ರಿಕೆಗಳ ಬಂಡಲ್ ಕಟ್ಟುವವರು. ಈಗ ಮೆಷಿನ್ನುಗಳೇ ಈ ಕೆಲಸವನ್ನು ಮಾಡುತ್ತವೆ. ಹಿಂದೆ ಈ ಕೆಲಸಕ್ಕಾಗಿಯೇ ಒಂದು ಸೆಕ್ಷನ್ ಇರುತ್ತಿತ್ತು.

ಪ್ಯಾಕರ್ ಪರವಾಗಿ ಇಡೀ ಪತ್ರಿಕಾ ಸಿಬ್ಬಂದಿ ಮುಷ್ಕರ ಹೂಡಿತು. ಪತ್ರಿಕೆಯ ಪಾಲುದಾರರೊಬ್ಬರು ಸಿಟ್ಟಿಗೆದ್ದರು. ಅವರಿಗೆ ವಿಶೇಷವಾಗಿ ಪತ್ರಕರ್ತರ ಮೇಲೆ ಸಿಟ್ಟಿತ್ತು. ಪ್ಯಾಕರ್‌ಗಳ ಬೆಂಬಲಕ್ಕೆ ಪತ್ರಕರ್ತರು ನಿಂತಿದ್ದು ಅವರಿಗೆ ಸಹಿಸಲಾಗಲಿಲ್ಲ. ಈ ಜರ್ನಲಿಸ್ಟುಗಳು ಪ್ಯಾಕರ್‌ಗಳಾಗಲು ಲಾಯಕ್ಕು ಎಂದು ಅವರು ನಾಲಿಗೆ ಸಡಿಲಬಿಟ್ಟು ಮಾತನಾಡಿಬಿಟ್ಟರು. ಇದು ಎಲ್ಲರಿಗೂ ಗೊತ್ತಾಯಿತು. ಆಗ ಪತ್ರಿಕೆಯಲ್ಲಿದ್ದ ಹಿರಿಯ ಪತ್ರಕರ್ತರೊಬ್ಬರು ಏನೆಂದು ಗುಡುಗಿದರು ಗೊತ್ತೆ? ನಾವು ಪ್ಯಾಕರ್‌ಗಳಾಗಲು ತಯಾರು. ಹೆಮ್ಮೆಯಿಂದ ಆ ಕೆಲಸ ಮಾಡುತ್ತೇವೆ. ಆದರೆ ಈ ಮಾಲೀಕರು ಪ್ಯಾಕರ್‌ಗಳಾಗಲೂ ನಾಲಾಯಕ್.

ಹೀಗೆ ಮ್ಯಾನೇಜ್‌ಮೆಂಟ್‌ಗಳನ್ನು ಎದುರುಹಾಕಿಕೊಂಡು ಬದುಕುವ ಸಾಹಸವನ್ನು ಯಾರಾದರೂ ಪತ್ರಕರ್ತರು ಮಾಡಲು ಸಾಧ್ಯವೇ? ಕನಸಿನ ಮಾತು.

ಇಂಥ ಕಲುಷಿತ ವಾತಾವರಣದಲ್ಲಿ ಪತ್ರಕರ್ತರು ಯಾವ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ಸಂಕೀರ್ಣ ಚರ್ಚೆಗೆ ಆಸ್ಪದ ಮಾಡಿಕೊಡುತ್ತದೆ.

ಪತ್ರಕರ್ತರು ಕಡೇ ಪಕ್ಷ ತಮ್ಮ ಆತ್ಮಗೌರವಕ್ಕೆ ಧಕ್ಕೆ ಬರದಂತೆ ಕೆಲಸ ಮಾಡಿದರೆ ಸಾಕು, ಅಲ್ಲವೆ?

ಕೊನೆಕುಟುಕು: ಈಗಾಗಲೇ ಅಕ್ರಮ ಗಣಿಗಾರಿಕೆ ಸಂಬಂಧ ತನಿಖೆ ನಡೆಸುತ್ತಿರುವ ಸಿಬಿಐನವರು ಜನಾರ್ಧನರೆಡ್ಡಿಯನ್ನು ಬಂಧಿಸಿದರೆ ಜನಶ್ರೀಯಲ್ಲಿ ಹೇಗೆ ಸುದ್ದಿ ಮಾಡಬಹುದು?
* ಜನಾರ್ಧನ ರೆಡ್ಡಿ ಅಕ್ರಮ ಬಂಧನ: ರಾಜ್ಯಾದ್ಯಂತ ರೊಚ್ಚಿಗೆದ್ದ ಜನತೆ
* ಶಂಕಿತ ಸಿಬಿಐ ಅಧಿಕಾರಿಗಳಿಂದ ದುಷ್ಕೃತ್ಯ
* ಸಿಬಿಐ ಅಧಿಕಾರಿಗಳಿಂದ ಜನಾರ್ಧನ ರೆಡ್ಡಿ ಅಪಹರಣ
* ಕಾಂಗ್ರೆಸ್ ಏಜೆಂಟ್ ಸಿಬಿಐನಿಂದ ಜನಾರ್ಧನ ರೆಡ್ಡಿ ವಿರುದ್ಧ ಪಿತೂರಿ
( ಅಥವಾ ಹೀಗೂ ಆಗಬಹುದು: ಸ್ಯಾಟಲೈಟ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಅಡಚಣೆಯಿಂದಾಗಿ ಇಂದು ಸುದ್ದಿ ವಾಹಿನಿ ಪ್ರಸಾರವಾಗುವುದಿಲ್ಲ.)

Sunday, January 30, 2011

ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಅಂದವರು ಶೇ.೭೪ ಮಂದಿ

ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ೧೫ ಭ್ರಷ್ಟಾಚಾರದ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ನೈತಿಕ ಜವಾಬ್ದಾರಿ ಹೊತ್ತು ಯಡಿಯೂರಪ್ಪ ರಾಜೀನಾಮೆ ನೀಡಬೇಕೆ ಎಂಬ ಪ್ರಶ್ನೆ ಇಟ್ಟುಕೊಂಡು ಈ ವಾರದ ಸಮೀಕ್ಷೆ ನಡೆಸಿದ್ದೆವು. ರಾಜೀನಾಮೆ ನೀಡಬೇಕು, ರಾಜೀನಾಮೆ ನೀಡಬಾರದು, ಏನೂ ಹೇಳಲು ಸಾಧ್ಯವಾಗುತ್ತಿಲ್ಲ ಎಂಬ ಮೂರು ಉತ್ತರಗಳನ್ನು ಆಯ್ಕೆಗೆ ನೀಡಲಾಗಿತ್ತು. ಈ ಸಮೀಕ್ಷೆಯಲ್ಲಿ ಮತ ಚಲಾಯಿಸಿದವರು ಒಟ್ಟು ೧೪೯ ಮಂದಿ. ಈ ಪೈಕಿ ೧೧೧ ಮಂದಿ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಎಂದು ಮತ ಚಲಾಯಿಸಿದ್ದಾರೆ. ೩೬ ಮಂದಿ ರಾಜೀನಾಮೆ ನೀಡಬಾರದು ಎಂದಿದ್ದಾರೆ. ಏನೂ ಹೇಳಲು ಸಾಧ್ಯವಾಗುತ್ತಿಲ್ಲ ಎಂದವರು ಇಬ್ಬರು ಮಾತ್ರ

ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದವರು ಶೇ.೭೪ರಷ್ಟು ಮಂದಿಯಾದರೆ, ಬೇಡ ಎಂದವರು ಶೇ.೨೪ರಷ್ಟು ಜನರು. ಇನ್ನು ಏನೂ ಹೇಳಲು ಸಾಧ್ಯವಾಗುತ್ತಿಲ್ಲ ಎಂದವರು ಶೇ.೧ರಷ್ಟು ಮಾತ್ರ.

ಮತ ಚಲಾಯಿಸಿದ ಎಲ್ಲ ೧೪೯ ಓದುಗರಿಗೂ ಕೃತಜ್ಞತೆಗಳು.

ಮುಂದಿನ ಸಮೀಕ್ಷೆ ಪ್ರಜಾವಾಣಿ ಪತ್ರಿಕೆಯನ್ನು ಕುರಿತದ್ದಾಗಿದೆ. ಪ್ರಜಾವಾಣಿ ಕನ್ನಡದ ಶ್ರೇಷ್ಠ ದಿನಪತ್ರಿಕೆ. ಜಾತ್ಯತೀತ ಮೌಲ್ಯಗಳನ್ನು, ಧಾರ್ಮಿಕ ಸಹಿಷ್ಣುತೆಯನ್ನು ಎತ್ತಿಹಿಡಿಯುತ್ತಲೇ ಎಲ್ಲ ಸಾಮಾಜಿಕ ಅನಾಚಾರಗಳ ವಿರುದ್ಧವೂ ಧ್ವನಿಯೆತ್ತುತ್ತಲೇ ಬಂದ ಪತ್ರಿಕೆ. ಕನ್ನಡಿಗರ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯಾಗಿರುವ ಪ್ರಜಾವಾಣಿ ಜನಪರ ಮೌಲ್ಯಗಳನ್ನು ಕಾಪಾಡಿಕೊಂಡೇ ಬಂದಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಯಾಕೋ ಏನೋ ಪತ್ರಿಕೆಯ ಸಂಪಾದಕೀಯ ನೀತಿ ಕೊಂಚ ಸಡಿಲವಾದಂತೆ ಕಾಣುತ್ತಿದೆ. ಸಂಪಾದಕೀಯ ಬ್ಲಾಗ್‌ನಲ್ಲಿ ನಾವು ಸಾಕ್ಷಿ ಸಮೇತ ಈ ಅಂಶಗಳನ್ನು ಬಹಿರಂಗಪಡಿಸಿದ್ದೇವೆ.

ಪ್ರಜಾವಾಣಿ ತನ್ನ ಹಳೆಯ ಜನಪರ, ಪ್ರಗತಿಪರ, ಜೀವಪರ ಸಿದ್ಧಾಂತಗಳನ್ನೇ ಮುಂದುವರೆಸಬೇಕೆ? ಅಥವಾ ಬೇರೆ ಆದ್ಯತೆಗಳಿಗಾಗಿ ತಾನು ಕಾಪಾಡಿಕೊಂಡ ಮೌಲ್ಯಗಳನ್ನು ಬಿಟ್ಟು ಹೊಸ ನಿಲುವನ್ನು ತಾಳಬೇಕೆ? ಓದುಗರಿಗೆ ಬೇಕಾಗಿರುವುದು ಹಳೆಯ ಪ್ರಜಾವಾಣಿಯೋ? ಅಥವಾ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸರೂಪದ ಪ್ರಜಾವಾಣಿಯೋ?

ಅಷ್ಟಕ್ಕೂ ಪ್ರಜಾವಾಣಿ ಸಂಪಾದಕೀಯ ಧೋರಣೆ ಬದಲಾಗಿದೆ ಮತ್ತು ಆಳುವ ಸರ್ಕಾರದ ಪರವಾಗಿದೆ ಎಂದು ನಿಮಗನ್ನಿಸುತ್ತದೆಯೇ?

ಇದು ನಮ್ಮ ಪ್ರಶ್ನೆ.

ಹೌದು, ಇಲ್ಲ, ಗೊತ್ತಿಲ್ಲ ಎಂಬ ಮೂರು ಉತ್ತರಗಳು ನಿಮ್ಮ ಮುಂದೆ. ದಯಮಾಡಿ ಓಟ್ ಮಾಡಿ.

Saturday, January 29, 2011

ನೊಂದವರ ನೋವು, ನೋಯದವರ ನಿರಂಬಳತೆ


ಕೆ.ವಿ.ಅಕ್ಷರ ಬರೆದ ಹರಕೆ-ಹರಾಜು ಲೇಖನ ಅತಿ ಹೆಚ್ಚು ಚರ್ಚಿತವಾದ ಲೇಖನ. ಈಗಾಗಲೇ ಅಂತರ್ಜಾಲದಲ್ಲಿ ಚರ್ಚೆ ಸಾಕಷ್ಟು ವೇಗವಾಗಿ ನಡೆದಿದೆ. ಆದರೆ ಲೇಖನ ಪ್ರಕಟಗೊಂಡು ಎರಡು ವಾರವಾದರೂ ಪ್ರಜಾವಾಣಿಯಲ್ಲಿ ಯಾವುದೇ ಪ್ರತಿಕ್ರಿಯೆ ಪ್ರಕಟಗೊಂಡಿಲ್ಲ. ಬಹುಶಃ ನಾಳೆಯ ಸಾಪ್ತಾಹಿಕ ಪುರವಣಿಯಲ್ಲಿ ಒಂದಷ್ಟು ಚರ್ಚೆಯನ್ನು ನಿರೀಕ್ಷಿಸಬಹುದು. ಈ ನಡುವೆ ಪ್ರಸಿದ್ಧ ಚಿಂತಕ ಎಚ್.ಎಸ್.ಶಿವಪ್ರಕಾಶ್ ಬರೆದ ಪ್ರತಿಕ್ರಿಯೆ ಇಲ್ಲಿದೆ. ಈಗಾಗಲೇ ಇದು ಇ-ಮೇಲ್‌ಗಳಲ್ಲಿ ಹರಿದಾಡಿ ಒಂದಷ್ಟು ಜನರನ್ನು ತಲುಪಿದೆ, ಸಂಪಾದಕೀಯಕ್ಕೂ ಸಿಕ್ಕಿದೆ. ಶಿವಪ್ರಕಾಶ್ ಅವರ ಬರವಣಿಗೆ ಎಂದಿನಂತೆ ಸತ್ಯದ ಅನ್ವೇಷಿ, ಹೃದಯ ತಟ್ಟುವ, ಒಳಗಿನ ಅಂತಃಸಾಕ್ಷಿಯನ್ನು ಬಡಿದೆಚ್ಚರಿಸುವ ಅಕ್ಷರಲಹರಿ. ಸಂಪಾದಕೀಯದ ಓದುಗರಿಗಾಗಿ ಅದರ ಪೂರ್ಣಪಾಠ ಇಲ್ಲಿದೆ. ಓವರ್ ಟು ಶಿವಪ್ರಕಾಶ್...

ಹರಕೆ ಮತ್ತು ಹರಾಜಿನ ಬಗ್ಗೆ ಶ್ರೀ ಅಕ್ಷರ ಅವರು ಬರೆದ ಬರಹ ಈಗಾಗಲೇ ಸಾಕಷ್ಟು ಚರ್ಚೆಯಾಗುತ್ತಿದೆ.
ಅವರು ಒಂದು ರೂಪಕವಾಗಿ ಬಳಸಿರುವ ಚಿತ್ರ ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ. ಒಬ್ಬ ಕೂತಿದ್ದಾನೆ, ಒಬ್ಬ ನಿಂತಿದ್ದಾನೆ, ಮತ್ತೊಬ್ಬ ನೋಡುತ್ತಿದ್ದಾನೆ. ನೋಡುವನು ಮಾನವಶಾಸ್ತ್ರಜ್ಞನಾಗಿದ್ದಾನೆ. ಅವನು ಬಹುಶಃ ಪಡುವಣ ನಾಡಿನವನಾಗಿದ್ದಾನೆ. ಕೂತವನು ಮೇಲು ಜಾತಿಯವನಂತಲೂ ನಿಂತವನು ಕೆಳಜಾತಿಯವನೆಂತಲೂ ಭಾವಿಸುತ್ತಾನೆ. ಇದು ಎಷ್ಟು ಸರಿ?  ನಿಂತವನು ತಾನೇ ಅದನ್ನು ಯಾಕೆ ಆಯ್ಕೆ ಮಾಡಿಕೊಂಡಿರಬಾರದು. ಹಾಗಿದ್ದರೆ ಅದು ಅವನ ವಿಶ್ವಾಸದ ಮಾತು. ಕೇಳುವುದಕ್ಕೆ ನಾವು ಯಾರು?

ಎಂಜಲೆಲೆ ಸೇವೆಯಂಥ ಅವಹೇಳನಕಾರಿಯಾದ ಆಚರಣೆಯನ್ನು ವಿಶ್ಲೇಷಿಸುವುದಕ್ಕೆ ಇದೊಂದು ಅತ್ಯಂತ ಸರಳೀಕೃತವಾದ ರೂಪಕವೆಂಬ ಸತ್ಯವನ್ನು ಬದಿಗೊತ್ತಿ  ಶ್ರೀ ಅಕ್ಷರ ಅವರ ದಾರಿಯನ್ನು ಹಿಡಿದು ಇನ್ನಷ್ಟು ಮುಂದೆಹೋಗಿ ಅದು ನಮ್ಮನ್ನು ಎಲ್ಲಿಗೆ ತಲುಪಿಸುತ್ತೆ, ನೋಡೋಣ.

ಹೀಗೆಂದು ಭಾವಿಸಿಕೊಳ್ಳಿ:
ಒಬ್ಬ ಹೆಂಗಸು ಸತಿ ಹೋಗುತ್ತಿದ್ದಾಳೆ. ಅವಳು ಈಗಾಗಲೇ ಚಿತೆಯ ಜ್ವಾಲೆಯೊಳಗೆ ಬಿದ್ದಿದ್ದಾಳೆ. ಸುತ್ತಾ  ಗಂಡಸರು ದೊಣ್ಣೆ ಹಿಡಿದುಕೊಂಡು ನಿಂತಿದ್ದಾರೆ. ಇದನ್ನು ಒಬ್ಬ ನೋಡುತ್ತಿದ್ದಾನೆ. ಅವನು ಒಬ್ಬ ಸಮಾಜಸುಧಾರಕನಾಗಿದ್ದಾನೆ. ಇದು ಮಹಿಳೆಯರ ವಿರುಧ್ಧ ಶೋಷಣೆ ಅಂತ ಭಾವಿಸಿದರೆ, ಅದೆಷ್ಟು ಸರಿ? ಸುತ್ತಾ ನಿಂತಿರುವ ದೊಣ್ಣೆನಾಯಕರು ಅವಳನ್ನು ಹೊರಗೆ ಜಿಗಿಯದಂತೆ ನೋಡಿಕೊಳ್ಳುತ್ತಿದ್ದಾರೆ ಅಂತ ಅವನು ಊಹಿಸಬಹುದು. ನಾವು ಹಾಗೆ ಯೋಚಿಸಬಾರದು. ಸತಿಹೋಗುವಾಗ ದೊಣ್ಣೆನಾಯಕರು ಹಾಗೆ ನಿಲ್ಲಬೇಕೆಂಬುದು ಒಂದು ಆಚರಣೆಯಿರಬಹುದು. ಆದರೆ ಆ ಹೆಂಗಸು ಕಿರುಚುವ ಹಾಗೆ ಕಾಣುತ್ತಿದೆಯಲ್ಲ? ಹಾಗೆ ಭಾವಿಸುವುದೂ ತಪ್ಪಿರಬಹುದು. ಪತಿಪರಮೇಶ್ವರನೊಂದಿಗೆ ಸ್ವರ್ಗಾರೋಹಣ ಸನ್ನಿಹಿತವಾಗುತ್ತಿರುವುದರಿಂದ ಅವಳು ಆನಂದತುಂದಿಲಳಾಗಿ ಹಾಗೆ ಕೂಗುತ್ತಿರಲಿಕ್ಕೂ ಸಾಕು. ಆದ್ದರಿಂದೇ ಅವಳೇ ಸ್ವಂತ ಇಚ್ಛೆಯಿಂದ ಸತಿ ಹೋಗುತ್ತಿದ್ದಾಳೆ ಅಂತ ಭಾವಿಸುವುದೇ ಸರಿ. ಇದನ್ನು ಶೋಷಣೆ ಎನ್ನುವುದು ಎರವಲು ತಂದ ಬುದ್ಧಿ, ಅವಳು ನಂಬುವುದನ್ನು ಕೇಳಲು ನಾವು ಯಾರು?

ಅಥವಾ ಜೋನ್ಸಟೌನ್ ದುರಂತವನ್ನು ಜ್ಞಾಪಿಸಿಕೊಳ್ಳಿ:
ದಕ್ಷಿಣ ಅಮರಿಕದ ಡೋಂಗಿ ಗುರು ಜಿಮ್ ಜೋನ್ಸನ ಆದೇಶದ ಮೇರೆಗೆ ನೂರಾರು ಜನ ಅನುಯಾಯಿಗಳು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡು ಸತ್ತುಬಿದ್ದಿದ್ದಾರೆ. ಅದರಲ್ಲಿ ಹೆಂಗಸರು, ಮಕ್ಕಳು, ಮುದುಕರೂ ಇದ್ದಾರೆ. ಈ ಚಿತ್ರವನ್ನು ಒಬ್ಬ ನೋಡುತ್ತಿದ್ದಾನೆ. ಅವನು ಒಬ್ಬ ವಿಚಾರವಾದಿ ಎಂದುಕೊಳ್ಳಿ. ಈ ದುರಂತವನ್ನು ಮೂಢನಂಬಿಕೆಯ ಫಲವೆಂದು ಅವನು ಭಾವಿಸಿದರೆ ಅದೆಷ್ಟು ಸರಿ? ಆ ಸಾಮೂಹಿಕ ಆತ್ಮಹತ್ಯೆ ಅವರ ಆಯ್ಕೆ. ಆ ಮಕ್ಕಳು ಕೂಢ ಈ ಭಯಾನಕ ಆತ್ಮಹತ್ಯೆಯನ್ನು ಖುಷಿಯಾಗಿ ಆಯ್ಕೆ ಮಾಡಿಕೊಂಡಿದ್ದರು. ಇದು ದುರಂತವೇನಲ್ಲ. ಒಂದು ಧೀರೋದಾತ್ತ ಆಚರಣೆ. ಅವರೆಲ್ಲರೂ ತಾವಾಗಿಯೇ ಸಾವನ್ನಪ್ಪಿಕೊಂಡಿರುವುದರಿಂದ  ಅದನ್ನು ಖಂಡಿಸಲು ನಾವು ಯಾರು?

ಅಥವಾ ಕ್ರಾಂತಿ ಪೂರ್ವ  ಚೀಣಾದ ಒಂದು ಆಚರಣೆಯನ್ನು ಚಿತ್ರಿಸಿಕೊಳ್ಳಿ;
ವರ್ಷಕ್ಕೊಂದು ಸಲ ಅಲ್ಲಿನ ಚಕ್ರವರ್ತಿ ಬೀರ್ಜಿಂಗ್  ತನ್ನ ಭವ್ಯ ಅರಮನೆಯ ಮುಂದೆ ದೇಶದ ರೈತರಿಗೆ ದಿವ್ಯದರ್ಶನ ಕೊಡುತ್ತಾನೆ. ಆವತ್ತು ನೂರಾರು ಜನ ರೈತರು ತಮ್ಮ ಶಿಷ್ಣಗಳನ್ನು ಕಚಕ್ಕನೆ ಕತ್ತರಿಸಿಕೊಂಡು ತಮ್ಮ ನಾಯಕನಿಗೆ ಅರ್ಪಣೆ ಮಾಡುತ್ತಾರೆ. ಈ ಆಚರಣೆಯಿಂದ ನಾಯಕನ ವೀರ್ಯಶಕ್ತಿ ಹೆಚ್ಚಿ ನಾಡಿಗೆ ಒಳಿತಾಗುವುದೆಂದು ಅವರು ನಂಬುತ್ತಾರೆ. ಇದನ್ನು ಅಮಾನವೀಯ ಆಚರಣೆ ಅನ್ನುವದಕ್ಕೆ ನಾವು ಯಾರು? ಇದೂ ಅವರ ನಂಬಿಕೆಯಲ್ಲವೆ?

ಅಥವಾ ಅಕ್ಷರ ಅವರೇ ಖಂಡಿಸಿರುವ ಐಪಿಎಲ್ ಹರಾಜಿನ ಚಿತ್ರವನ್ನು ಹೀಗೆ ಭಾವಿಸಿಕೊಳ್ಳಿ:
ಹರಾಜು ಮಾಡಿಕೊಂಡ ಕ್ರಿಕೆಟಿಗರು ತಮ್ಮ ಕೊರಳಿಗೆ ತಾವು ಪಡೆದ ಬೆಲೆಯ ಫಲಕಗಳನ್ನು ಹಾಕಿಕೊಂಡು, ಟಿ ವಿ ಕ್ಯಾಮರಾಗಳ ಮುಂದೆ ಪೋಜು ಕೊಡುತ್ತಿದ್ದಾರೆ. ಅಭಿಮಾನಿಗಳು ಅವರನ್ನು ಅಭಿನಂದಿಸುತ್ತಿದ್ದಾರೆ. ಇದನ್ನು ಖಂಡಿಸಲು ನಾವು ಯಾರು? ಆ ಫಲಕಗಳು ಹೆಮ್ಮೆಯ ಸಂಕೇತಗಳೆಂದು ಅವರು ತಿಳಿದಿರಬಹುದಲ್ಲವೆ? ಅವರ ಪ್ಯಾನ್ಗಳೂ ಹಾಗೇ ತಿಳಿದಿದ್ದಾರೆ. ಆ ಸಮಾರಂಭದ ಶೋಭೆಯನ್ನು ಹೆಚ್ಚಿಸಲು ಬಂದ ಶಿಲ್ಪಾ ಶೆಟ್ಟಿ, ವಿಜಯ ಮಲ್ಯ ಅವರೂ ಹಾಗೇ ತಿಳಿದಿದ್ದಾರೆ. ಇದೇನು ಬೈಲಹೊಂಗಲದ ದನದ ಜಾತ್ರೆಯ ಥರದ ಹರಾಜಲ್ಲ. ಸ್ವಂತ ಇಚ್ಛೆಯಿಂದ ಕ್ರಿಕೆಟಿಗರು ತಮ್ಮ ಕ್ರಯವನ್ನು ಪಡೆದುಕೊಂಡಿದ್ದಾರೆ. ಇದು ಮನಮೋಹನ ಯುಗದ, ಯಡಿಯೂರಪ್ಪ ಯುಗದ ಎಲ್ಲ ಭಾರತೀಯರು, ವಿಶೇಷವಾಗಿ ಮುಕ್ಕೋಟಿ ಕನ್ನಡಿಗರು ಹೆಮ್ಮೆ ಪಡಬೇಕಾದ ವಿಷಯ.

ಹೀಗಾಗಿ ಮೇಲ್ಕಾಣಿಸಿದ ಯಾವ ಚಿತ್ರಗಳೂ ಖಂಡನೀಯವಲ್ಲ. ನಾವು ಅಪಮಾನ, ಖಂಡನೀಯ ಅಂತ ತಪ್ಪಾಗಿ ಭಾವಿಸುವುದಕ್ಕೆ ಗುರಿಯಾದ ಆ ಎಲ್ಲರೂ ನಮ್ಮ ಮೆಚ್ಚುಗೆಗೆ ಪಾತ್ರರು.
ಹೀಗೇ ಮುಂದುವರಿಯೋಣ. ದಲಿತರಿಗೆ ಮಲ ತಿನ್ನಿಸಿದ ಘಟನೆಯನ್ನೂ ನಾವು ಖಂಡಿಸಬೇಕಿಲ್ಲ. ಪರಜಾತಿಯ ಹುಡುಗನ ಜೊತೆ ಮದುವೆಯಾಗಿದ್ದಕ್ಕೆ ಒಬ್ಬ ಹುಡುಗಿಯನ್ನು ಮನೆಯವರು ಕೊಲೆ ಮಾಡಿದ ಘಟನೆಯನ್ನೂ ಖಂಡಿಸಬಾರದು. ಕೊಂದವರ ನಂಬಿಕೆಗಳನ್ನೂ ನಾವು ಗೌರವಿಸೋಣ. ಎಳೇ ಹುಡುಗಿಯನ್ನು ನರಬಲಿ ಕೊಟ್ಟವರನ್ನೂ ಬೈಯಬಾರದು. ಯಾಕಂದರೆ ಹುಡುಗಿ ಸ್ವರ್ಗಕ್ಕೆ ಹೋಗಿ ಸುಖವಾಗಿರುತ್ತಾಳೆ. ಹಳ್ಳಿಯಿಂದ ದಿಲ್ಲಿಯವರೆಗೆ ನಡೆಯುವ ಕೊಲೆಗಳು, ಮಾನಭಂಗಗಳು, ಹಲ್ಲೆಗಳು, ಶೋಷಣೆಯ ನಾನಾ ರೂಪಗಳು, ಎಮ್‌ಎಲ್‌ಎ, ಎಮ್‌ಪಿಗಳ ಹರಾಜು ಎಲ್ಲವೂ ಸಮರ್ಥನೀಯ.

ಕೊನೆಯದಾಗಿ ಇನ್ನೊಂದು ಚಿತ್ರ:
ಹೋತವೊಂದನ್ನು ಯಜ್ಞದಲ್ಲಿ ಬಲಿಕೊಡಲು ಕೊಂಡೊಯ್ಯುತ್ತಿದ್ದಾರೆ. ಅದನ್ನು ಬಸವಣ್ಣ ದೂರದಿಂದ ನೋಡುತ್ತಿದ್ದಾನೆ. ಅದನ್ನು ನೋಡಿ ಮರುಗತೊಡಗುತ್ತಾನೆ. ವೇದವನೋದಿದವರ ಮುಂದೆ ಅಳು ಕಂಡೆಯಾ ಹೋತೆ ಅನ್ನುತಿದ್ದಾನೆ. ಹೀಗೆನ್ನಲು ಅವನಿಗೇನು ಅಧಿಕಾರ? ಬಲಿಕೊಡವವರ ನಂಬಿಕೆಗಳನ್ನು ಅವನೇಕೆ ಅರ್ಥ ಮಾಡಕೊಳ್ಳುತ್ತಿಲ್ಲ? ಆ ಕುರಿಗೂ ಬೇಜಾರಿಲ್ಲ. ಅಗೋ ನೋಡಿ, ಅದು ತೋರಣದ ತಳಿರನ್ನು ತಿನ್ನುತ್ತಾ ನಿಂತಿದೆ. ಹೀಗೆ ಬಲಿಯ ಅಗತ್ಯವನ್ನು ಮೌನವಾಗಿ ಒಪ್ಪಿಕೊಂಡಿರುವ ಕುರಿಗೆ ನಾವೇಕೆ ವಕೀಲರಾಗಬೇಕು? ಅಥವಾ ಆ ಬಸವಣ್ಣ ಕೂಡ ಒಬ್ಬ ಮಾನವಶಾಸ್ತ್ರ್ರಜ್ಞನಾಗಿರಬಾರದೇಕೆ?

ಹೀಗೆ ಅಕ್ಷರ ಅವರ ದಾರಿಯನ್ನು ಹಿಡಿದು ನಾವು ಇಲ್ಲಿತನಕ ಬಂದಮೇಲೆ  ಮಾನವಮುಕ್ತಿ ಯಜ್ಞಗಳ ಅಗ್ನಿ ಚರಿತ್ರೆಗಳಿಗೆ ವಿದಾಯ ಹೇಳಿಬಿಡೋಣ. ಕತ್ತಲಿನಿಂದ ಬೆಳಕಿಗೆ, ಪಾರತಂತ್ರದಿಂದ ಸ್ವಾತಂತ್ರ್ಯದ ಕಡೆ ಕೊಂಡೊಯ್ಯುವ ಹಾದಿಗಳನ್ನೇ ಅಳಿಸಿಬಿಡೋಣ.

ಸೂಫಿಗಳ  ಒಂದು ಸೂಕ್ತಿ:
ಬೈಯಬೇಕಾದ್ದು ಬಾಣವನ್ನಲ್ಲ, ಬಾಣಬಿಟ್ಟವನನ್ನು. ಅ ಬಾಣ ಬಿಡಿಸಿದವನೂ ಇನ್ನೊಬ್ಬನಿರಬೇಕು.
ಅಕ್ಷರ ಬಾಣವಾಗಿದ್ದಾರೆಯೇ ಹೊರತು ಬಾಣ ಬಿಟ್ಟಿಲ್ಲ, ಬಿಡಿಸಿಲ್ಲ.
ಬನ್ನಿ, ಬಾಣವನ್ನು ಬಾಣದ ಪಾಡಿಗೆ ಬಿಟ್ಟು ಬಾಣ ಬಿಟ್ಟವರನ್ನು ಮತ್ತು ಬಿಡಿಸಿದವರನ್ನು ತರಾಟೆಗೆ ತೆಗೆದುಕೊಳ್ಳೋಣ.
ಮಾನವಶಾಸ್ತ್ರ್ರಜ್ಞರ ಕ್ಯಾಮರಾಕ್ಕೆ ಕಣ್ಣಿದೆ, ಕರುಳಿಲ್ಲ. ಹಾಗೆಯೇ ಕೂತುಕೊಂಡಿರುವನ ವಕೀಲರಿಗೆ ಬುದ್ಧಿಯಿದೆ, ಹೃದಯವಿಲ್ಲ.
ನೊಂದವರ ನೋವೇ ಬೇರೆ. ಅದ ಕಂಡು ಮರುಗಿದವರ ಮರುಕವಾಗಲಿ, ಕೆರಳಿದವರ  ಸಿಟ್ಟಾಗಲಿ ಆ ವಕೀಲನಿಗಿಲ್ಲ. ಅವನಲ್ಲಿರುವುದು ನೋಯದವರ ನಿರಂಬಳತೆ ಮಾತ್ರ; ನೋವನ್ನೇ ಇಲ್ಲವೆನ್ನಿಸುವ ಘಾತುಕ ಚತುರತೆ ಮಾತ್ರ.

Friday, January 28, 2011

ಪ್ರಜಾವಾಣಿ ಕಣ್ಣಲ್ಲಿ ಯಡಿಯೂರಪ್ಪನವರೇ ಕೃಷ್ಣದೇವರಾಯ!

ನಿಗದಿಗಿಂತ ಎರಡೂವರೆ ಗಂಟೆ ತಡವಾಗಿ ಉತ್ಸವಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಚಿವ ಶ್ರೀರಾಮುಲು ಹಂಪಿಯ ಪೇಟ ತೊಡಿಸಿ, ವಿಜಯ ಖಡ್ಗವನ್ನು ನೀಡುತ್ತಿದ್ದಂತೆಯೇ, ಒಂದು ಕ್ಷಣ ಯಡಿಯೂರಪ್ಪ ಅವರೂ, ವೀರಯೋಧನೂ ಆಗಿ, ಗಂಡರಗಂಡ, ವೀರರಮಣ ಎಂದೇ ಕರೆಯಿಸಿಕೊಂಡಿದ್ದ ಕೃಷ್ಣದೇವರಾಯನಂತೆ ಕಂಗೊಳಿಸಿದರು...


ಇವತ್ತಿನ ಪ್ರಜಾವಾಣಿಯ ರಾಜ್ಯ-ರಾಷ್ಟ್ರೀಯ ಪುಟದ (ಪುಟ-೮ಬಿ) ಬೆರಗು ಮೂಡಿಸಿದ ಹಂಪಿ ಉತ್ಸವದ ಬೆಡಗು ಎಂಬ ವರದಿಯ ಸಾಲುಗಳು ಇವು.

ವರದಿಗಾರಿಕೆಯ ಪ್ರಾಥಮಿಕ ಪಾಠಗಳನ್ನು ಕಲಿತ ಟ್ರೈನಿಗಳೂ ಕೂಡ ಬರೆಯದಂಥ ವಾಕ್ಯಗಳನ್ನು ಸಿದ್ಧಯ್ಯ ಹಿರೇಮಠ ಬರೆದಿದ್ದಾರೆ. ಅದನ್ನು ಪ್ರಕಟಿಸಿ, ಪ್ರಜಾವಾಣಿ ಪಾವನವಾಗಿದೆ.

ಈ ವರದಿಗಾರನಿಗೆ ಯಡಿಯೂರಪ್ಪ ಕೃಷ್ಣದೇವರಾಯನಂತೆ ಕಂಡಿರಬಹುದು, ಹೀಗೆ ಕಾಣಿಸುವುದಕ್ಕೂ ಅವರವರದ್ದೇ ಆದ ಕಾರಣಗಳಿರುತ್ತದೆ. ಆ ಕುರಿತು ನಮ್ಮ ಆಕ್ಷೇಪಣೆಗಳೇನೂ ಇಲ್ಲ.

ಆದರೆ ಇಂಥ ಕಾಲ್ಪನಿಕ, ಉತ್ಪ್ರೇಕ್ಷಿತ ಉಪಮೆಗಳನ್ನು ಪತ್ರಿಕಾ ವರದಿಗಾರ ಬರೆಯಕೂಡದು ಎಂಬ ಪ್ರಾಥಮಿಕ ಪಾಠವನ್ನು ಅವರಿಗೆ ಯಾರೂ ಹೇಳಿಕೊಡಲಿಲ್ಲವೆ? ತಮ್ಮ ವರದಿಗಾರರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಪ್ರವೇಶ ಪರೀಕ್ಷೆಯನ್ನು ನಡೆಸುವ, ನಂತರ ತಿಂಗಳುಗಟ್ಟಲೆ ತರಬೇತಿ ನೀಡುವ ಪ್ರಜಾವಾಣಿಯ ಹಿರಿಯ ತಲೆಗಳಾದರೂ ಅವರಿಗೆ ಇದನ್ನು ಹೇಳಿಕೊಟ್ಟಿರಲಿಲ್ಲವೇ?

ಪ್ರಜಾವಾಣಿಯಲ್ಲಿ ನಡೆಯುತ್ತಿರುವ ವಿಚಿತ್ರಗಳನ್ನು ಗಮನಿಸಿ. ಇಲ್ಲಿ ಒಬ್ಬ ಅಂಕಣಕಾರ ವರದಿ ಬರೆದಂತೆ ಅಂಕಣ ಬರೆಯುತ್ತಾರೆ, ವರದಿಗಾರ ವರದಿಯನ್ನು ಆಸ್ಥಾನಕವಿಯಂತೆ ಬರೆಯುತ್ತಾನೆ.

ವರದಿಗಾರನಿಗೆ ಯಡಿಯೂರಪ್ಪ ಸಾಕ್ಷಾತ್ ಕೃಷ್ಣದೇವರಾಯನಂತೆ ಕಂಡು, ಕಂಗೊಳಿಸಿದಂತೆ, ಜನಾರ್ದನರೆಡ್ಡಿ ಸಾಕ್ಷಾತ್ ಮದಕರಿ ನಾಯಕನಂತೆಯೂ, ಶ್ರೀರಾಮುಲು ಸಂಗೊಳ್ಳಿ ರಾಯಣ್ಣನಂತೆಯೂ ಕಾಣಿಸಿರಬಹುದು. ಆದರೆ ಅದನ್ನೂ ಆತ ಬರೆಯದೆ ಇರುವುದು ಓದುಗರಾದ ನಮ್ಮ ಭಾಗ್ಯ, ಪ್ರಜಾವಾಣಿಯ ಪುಣ್ಯ.

ಹಿಂದೆ ಜನಾರ್ದನರೆಡ್ಡಿ ಯಡಿಯೂರಪ್ಪನವರನ್ನು ಕೃಷ್ಣದೇವರಾಯನ ಅಪರಾವತಾರ ಎಂದು ಹೊಗಳಿದ್ದರು. ನಂತರ ಮುದುಕ-ಕಂಸ ಇತ್ಯಾದಿ ಬೈಗುಳಗಳೂ ಅವರ ಬಾಯಿಂದಲೇ ಬಂದವು. ರಾಜಕಾರಣಿಗಳು ಪರಸ್ಪರರನ್ನು ಹೀಗೆ ಅಸಹ್ಯವಾಗಿ ಹೊಗಳುವುದು, ತೆಗಳುವುದು ಮಾಮೂಲು. ಆದರೆ ಪತ್ರಿಕಾ ವರದಿಗಾರರಿಗೆ ಮುಖ್ಯಮಂತ್ರಿಗಳೋ ಇನ್ನ್ಯಾರೋ ಕೃಷ್ಣದೇವರಾಯನಂತೆ ಕಂಡು, ಕಂಗೊಳಿಸುವುದನ್ನು ಹೇಗೆ ಸ್ವೀಕರಿಸುವುದು? ಹೈಪ್ರೊಫೈಲ್ ಪತ್ರಕರ್ತರೇ ತುಂಬಿರುವ ಎಂಜಿ ರಸ್ತೆಯ ಕಚೇರಿಯಲ್ಲಿ ಈ ಕುರಿತು ಒಂಚೂರು ಚರ್ಚೆ ನಡೆಯಬಾರದೇ?

ಪ್ರಜಾವಾಣಿಯ ಇನ್ನೊಂದು ವರದಿಯನ್ನು ಗಮನಿಸಿ: ಹಂಪಿ ಉತ್ಸವ: ಗಮನ ಸೆಳೆದ ಶೋಭಾಯಾತ್ರೆ. ಇಲ್ಲಿ ಶೋಭಾಯಾತ್ರೆ ಅಂದರೆ ಏನು? ಈ ಪದವನ್ನು ಯಾರು, ಯಾಕೆ ಬಳಸುತ್ತಾ ಬಂದಿದ್ದಾರೆ? ಸರ್ಕಾರ ನಡೆಸುವ ಕಾರ್ಯಕ್ರಮಗಳ ಮೆರವಣಿಗೆಗೂ ಶೋಭಾಯಾತ್ರೆ ಎಂದು ಕರೆಯುವ ಪರಿಪಾಠ ಯಾವಾಗ ಆರಂಭವಾಯಿತು?

ಕೊನೆ ಕುಟುಕು: ಮೊನ್ನೆ ಪ್ರಜಾವಾಣಿ ಸಹಸಂಪಾದಕ ಪದ್ಮರಾಜ ದಂಡಾವತಿಯವರ ನಾಲ್ಕನೇ ಆಯಾಮದ ಎರಡು ಸಂಪುಟಗಳು ಬಿಡುಗಡೆಯಾದವು. ಪ್ರಜಾವಾಣಿಯಲ್ಲಿ ಈ ಕುರಿತ ವರದಿಯೂ ಪ್ರಕಟವಾಯಿತು. ಪುಸ್ತಕ ಬಿಡುಗಡೆಯಾಗುವ ಸಂದರ್ಭದಲ್ಲಿ ತಮ್ಮ ಸಹಸಂಪಾದಕರು ಸಾಕ್ಷಾತ್ ಶೇಕ್ಸ್‌ಪಿಯರ್‌ನಂತೆ ಕಾಣಿಸಿದರು ಎಂದು ವರದಿಗಾರ ಬರೆಯಲಿಲ್ಲ, ಥ್ಯಾಂಕ್ ಗಾಡ್!

Thursday, January 27, 2011

ಅಷ್ಟಕ್ಕೂ ಈ ಜನಶ್ರೀ ಚಾನಲ್ ಶುರುವಾಗೋದು ಯಾವಾಗ?


ಇಂಡಿಪೆಂಡೆನ್ಸ್ ಡೇ ಮುಗೀತು, ದಸರಾ ಬಂದು ಹೋಯ್ತು, ರಾಜ್ಯೋತ್ಸವವೂ ಆಯ್ತು, ದೀಪಾವಳಿಯೂ ಉರಿದು ಹೋಯ್ತು. ಉಳಿದಿದ್ದು ನ್ಯೂ ಇಯರ್, ನಂತರ ಸಂಕ್ರಾಂತಿ ಎಲ್ಲವೂ ಆಗಿ ಹೋದವು. ಚಾನೆಲ್ ಮಾತ್ರ ಶುರುವಾಗಲಿಲ್ಲ.
ಇದು ಜನಾರ್ದನ ರೆಡ್ಡಿ-ಶ್ರೀರಾಮುಲು ಅವರ ಜನಶ್ರೀ ಕಥೆ. ಜನಶ್ರೀ ಹೆಸರಿನಲ್ಲೇ ಜನಾರ್ದನ ರೆಡ್ಡಿ, ಶ್ರೀರಾಮುಲು ಇಬ್ಬರೂ ಇದ್ದಾರೆ. ಇಬ್ಬರೂ ಸದ್ಯದ ಕರ್ನಾಟಕ ರಾಜಕಾರಣದಲ್ಲಿ, ಉದ್ಯಮದಲ್ಲಿ ಓಡುತ್ತಿರುವ ಕುದುರೆಗಳು. ರೆಡ್ಡಿಗಳು ಕಳೆದ ಕೆಲವು ವರ್ಷಗಳಲ್ಲಿ ಕೈ ಇಟ್ಟಿದ್ದೆಲ್ಲ ಚಿನ್ನ.

ಆದರೆ ನಸೀಬು ಒಂದೇ ತರ ಇರಲ್ಲ ನೋಡಿ. ಸದ್ಯಕ್ಕೆ ಅವರ ಟೈಮು ಸರಿ ಇದ್ದಂತೆ ಕಾಣುತ್ತಿಲ್ಲ. ಒಂದೆಡೆ ಕರ್ನಾಟಕದ ಬಿಜೆಪಿ ಸರ್ಕಾರವೇ ಈಗಲೋ ಆಗಲೋ ನೆಗೆದುಬೀಳುವಂತಿದೆ. ಆಂಧ್ರದಲ್ಲಿ ರೆಡ್ಡಿಗಳಿಗೆ ಗಾಡ್‌ಫಾದರ್‌ನಂತಿದ್ದ ವೈಎಸ್‌ಆರ್ ಹೆಲಿಕಾಪ್ಟರಿನ ಸಮೇತ ಸುಟ್ಟುಹೋದರು; ಜೊತೆಜೊತೆಗೆ ರೆಡ್ಡಿಗಳ ರಾಜಕೀಯ ಮಹತ್ವಾಕಾಂಕ್ಷೆಗಳೂ ಭಸ್ಮವಾಗುತ್ತಿವೆ.  ಅಕ್ರಮ ಗಣಿಗಾರಿಕೆ ಕುರಿತ ಸಿಬಿಐ ತನಿಖೆ ಆಂಧ್ರಸೀಮೆಯಿಂದ ಶುರುವಾಗಿ ರೆಡ್ಡಿಗಳ ಮನೆ ಬಾಗಿಲಿಗೆ ಬಂದು ನಿಂತಿದೆ. ರೆಡ್ಡಿಗಳ ಫ್ರೆಂಡು, ಪಾರ್ಟನರ್ ವೈಎಸ್‌ಆರ್ ಪುತ್ರ ಜಗನ್ ಕಾಂಗ್ರೆಸ್‌ನಿಂದ ಹೊರಬಿದ್ದು ಹೊಸಪಾರ್ಟಿ ಕಟ್ಟುವ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ.

ರಾಜಕೀಯವಾಗಿಯೂ ರೆಡ್ಡಿಗಳು ಸ್ವತಃ ಬಳ್ಳಾರಿಯಲ್ಲೇ ಏಟು ತಿಂದಿದ್ದಾರೆ. ಜಿಪಂ ಚುನಾವಣೆಗಳಲ್ಲಿ ರೆಡ್ಡಿಗಳಿಗೆ ಸರಿಯಾದ ಹೊಡೆತವೇ ಬಿದ್ದಿದೆ. ಹಾಗೂ ಹೀಗೂ ಆಪರೇಷನ್ ಕಮಲ ಮಾಡಿ ಗದ್ದುಗೆ ಹಿಡಿದರೂ, ರೆಡ್ಡಿಗಳ ಪಾಲಿಗೆ ಈ ಹಿಂಬಾಗಿಲ ಜಯ, ಜಯವಲ್ಲ.

ಹೀಗಿರುವಾಗ ಚಾನೆಲ್ ಕಥೆ ಏನಾಯ್ತು ಎಂದರೆ ಜನಶ್ರೀಯಲ್ಲಿ ಸೇರಿಕೊಂಡಿರುವ ಪತ್ರಕರ್ತರ ಮುಖಗಳಲ್ಲಿ ನಿಸ್ತೇಜ ಕಳೆ. ಮೊದಮೊದಲು ದಸರಾಗೆ ಶುರು, ದೀಪಾವಳಿಗೆ ಸಿಡಿತೀವಿ ನೋಡಿ, ಸಂಕ್ರಾಂತಿ ಎಳ್ಳುಬೆಲ್ಲದೊಂದಿಗೆ ಬರ‍್ತೀವಿ ಎನ್ನುತ್ತಿದ್ದ ಹುಡುಗ-ಹುಡುಗಿಯರು ಈಗೀಗ ಯಾವಾಗ ಶುರುವಾಗುತ್ತೋ ಗೊತ್ತಿಲ್ಲ ಕಣ್ರೀ ಎಂದು ನಿರುತ್ಸಾಹದಿಂದ ಗೊಣಗುತ್ತಿದ್ದಾರೆ.
ಇನ್ನೂ ಚಾನೆಲ್ ಅಪ್ರೂವಲ್ ಆಗಿಲ್ಲ, ಸ್ಯಾಟಲೈಟ್‌ದು ಏನೇನೋ ಪ್ರಾಬ್ಲಮ್ಮು, ಸೆಂಟ್ರಲ್ ಗವರ್ಮೆಂಟು ಬೇಕಂತ ಆಟ ಆಡಿಸ್ತಾ ಇದೆ... ಇತ್ಯಾದಿ ಇತ್ಯಾದಿ ಕಪೋಲಕಲ್ಪಿತ ಮಾತುಗಳು ಚಾನೆಲ್ ಹುಡುಗರಲ್ಲೇ ವಿನಿಮಯವಾಗುತ್ತಿದೆ.

ಸದ್ಯಕ್ಕೆ ಜನಶ್ರೀಯಲ್ಲಿ ಅನಂತ ಚಿನಿವಾರ್ ಬಾಸ್. ಚಿನಿವಾರ್ ಪ್ರತಿಭಾವಂತ ಪತ್ರಕರ್ತ, ಸೂಕ್ಷ್ಮಮತಿ. ಆದರೆ ಇಷ್ಟು ದೊಡ್ಡ ಟೀಮನ್ನು ನಿಯಂತ್ರಿಸುವುದು ಅವರಿಂದ ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಚಿನಿವಾರ್ ಹಿಂದೆ ತಮ್ಮ ಟೀಮಿನೊಂದಿಗೆ ರಾಜ್ ನ್ಯೂಸ್ ಎಂಬ ಶುರುವಾಗದ ಚಾನೆಲ್‌ಗೆ ಹೋಗಿ ಪಟ್ಟಪಾಡು ದೇವರಿಗೇ ಪ್ರೀತಿ. ಕಡೆಗೆ ಚಿನಿವಾರ್ ತಂಡ ಸಂಬಳಕ್ಕೂ ಜಗಳವಾಡಿ ಅಲ್ಲಿಂದ ಹೊರಬರಬೇಕಾಯಿತು.

ಜನಶ್ರೀಯಲ್ಲಿ ಸಂಬಳಕ್ಕೇನು ಕೊರತೆಯಿಲ್ಲ. ಇಲ್ಲಿ ಆಫರ್ ಮಾಡಲಾದ ಸಂಬಳವನ್ನು ನೆಚ್ಚಿಕೊಂಡೇ ಟಿವಿ೯, ಈಟಿವಿಯಿಂದ ಸಾಕಷ್ಟು ಮಂದಿ ಸಾಲುಮೇರೆ ವಲಸೆ ಬಂದಿದ್ದಾರೆ. ಇತ್ತೀಚಿಗಷ್ಟೆ ಸುವರ್ಣ ನ್ಯೂಸ್‌ನಿಂದ ಹೊರಗೆ ಬಂದಿರುವ ರಂಗನಾಥ ಭಾರದ್ವಾಜ್ ಕೂಡ ಜನಶ್ರೀಗೆ ಸೇರಿಕೊಳ್ಳುವ ಸಾಧ್ಯತೆಯಿದೆ. ಇದೆಲ್ಲ ಸರಿ. ಆದರೆ ಎಷ್ಟು ದಿನ ಟ್ರಯಲ್ ಪ್ರೋಗ್ರಾಮ್ ಮಾಡೋದು? ಯಾರೂ ನೋಡದ ಸುದ್ದಿಯನ್ನು ಎಷ್ಟು ದಿನ ಓದೋದು? ಕಾರ್ಯಕ್ರಮಗಳು, ಪ್ರೆಸ್‌ಮೀಟುಗಳಿಗೆ ಲೋಗೋ ಹಿಡಿದು ಹೋಗುವ ಹುಡುಗರನ್ನು ಜನರು ವಿಚಿತ್ರವಾಗಿ ನೋಡ್ತಾರಲ್ಲವೆ?

ಪತ್ರಕರ್ತರು ಗುಮಾಸ್ತರ ಥರ ಅಲ್ಲ. ಅದರಲ್ಲೂ ಟಿವಿ ಪತ್ರಕರ್ತರು ಇವತ್ತು ಸ್ಟಾರ್ ವ್ಯಾಲ್ಯೂ ಇರುವವರು. ಜನರನ್ನು ತಲುಪದೇ ಹೋದರೆ ಅವರು ಎಷ್ಟೇ ದುಡ್ಡು ಕೊಟ್ರೂ ಕೆಲಸ ಮಾಡುವವರಲ್ಲ. ಕೆಲಸ ಮಾಡಿದರೂ ವೃತ್ತಿಯೆಡೆಗಿನ ಪ್ಯಾಷನ್ ಕಳೆದುಕೊಳ್ಳುವ ಸಾಧ್ಯತೆಯಿರುತ್ತದೆ.

ಜನಶ್ರೀ ಬೇಗ ಶುರುವಾಗಲಿ, ಅಲ್ಲಿರುವ ಹುಡುಗ-ಹುಡುಗಿಯರ ಮೊಗದಲ್ಲಿ ಮಂದಹಾಸ ಮೂಡಲಿ.


ಮರೆತಿದ್ದ ಮಾತು: ಪತ್ರಕರ್ತರು ಜನರನ್ನು ತಲುಪದೇ ಹೋದರೆ ಕಂಗಾಲಾಗಿ ಹೋಗಿಬಿಡುತ್ತಾರೆ ಎಂದೆವಲ್ಲ. ಅದಕ್ಕೆ ವಿಜಯ ಕರ್ನಾಟಕದಿಂದ ಹೊರಬಂದ ಪ್ರತಾಪಸಿಂಹ ಉದಾಹರಣೆ. ಲಾಲ್‌ಚೌಕದ ವಿದ್ಯಮಾನ, ಜಿಲ್ಲಾಧಿಕಾರಿ ಜೀವಂತ ದಹನ... ಇತ್ಯಾದಿ ಇತ್ಯಾದಿ ಘಟನೆಗಳೆಲ್ಲ ನಡೆಯುತ್ತಿರುವಾಗ ನಂಗೆ ಬರೆಯಲು ಕಾಲಂ ಇಲ್ಲ. ನಾನು ಹುಚ್ಚನಾಗುತ್ತಿದ್ದೇನೆ ಎಂಬ ಪ್ರಾಮಾಣಿಕ ಅನಿಸಿಕೆಯನ್ನು ಪ್ರತಾಪಸಿಂಹ ತಮ್ಮ ಫೇಸ್‌ಬುಕ್ ಗೋಡೆಗೆ ಅಂಟಿಸಿದ್ದಾನೆ. ೧೦ನೇ ತಾರೀಖಿನವರೆಗೆ ತಡೆದುಕೋ, ನಿಂಗೊಂದು ಕಾಲಂ ಸಿಗುತ್ತೆ ಎಂದು ಭಟ್ಟರು ಸಮಾಧಾನಪಡಿಸುತ್ತಿದ್ದಾರೆ ಎಂಬ ಮಾಹಿತಿಯಿದೆ. ಒಂದು ಹುಚ್ಚರಾಸ್ಪತ್ರ್ರೆ ನಾನು ಕಟ್ಟಿಸಿಕೊಡಲೇ ಎನ್ನುತ್ತ ರವಿ ಬೆಳಗೆರೆ ಮೀಸೆಯಡಿಯಲ್ಲೇ  ಖಿಲ್ಲನೆ ನಕ್ಕರು ಎಂಬುದು ಮಾತ್ರ ಶುದ್ಧಕುಹಕ.

Wednesday, January 26, 2011

ರಾಜ್ಯಪಾಲರ ನಡೆ ಸರಿ ಎಂದವರು ಶೇ.೭೩.೨೮ ಓದುಗರು


ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮೊಕದ್ದಮೆ ದಾಖಲಿಸಲು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನೀಡಿರುವ ಅನುಮತಿ ಸರಿಯೇ?

ಹೀಗಂತ ಪ್ರಶ್ನೆ ಕೇಳಿದ್ದೆವು. ಸರಿ, ತಪ್ಪು, ಗೊತ್ತಿಲ್ಲ ಎಂಬ ಮೂರು ಉತ್ತರಗಳನ್ನು ಆಯ್ಕೆಗೆ ನೀಡಲಾಗಿತ್ತು. ಸಂಪಾದಕೀಯ ನಡೆಸಿದ ಈ ಪುಟ್ಟ ಸಮೀಕ್ಷೆಯಲ್ಲಿ ಮತ ಚಲಾಯಿಸಿದವರು ಒಟ್ಟು ೧೪೬ ಮಂದಿ. ಈ ಪೈಕಿ ೧೦೭ ಮಂದಿ ರಾಜ್ಯಪಾಲರ ನಿರ್ಧಾರ ಸರಿ ಎಂದು ಮತ ಚಲಾಯಿಸಿದ್ದಾರೆ. ೩೩ ಮಂದಿ ಸರಿಯಲ್ಲ ಎಂದು ಉತ್ತರಿಸಿದ್ದಾರೆ. ಇನ್ನು ೬ ಮಂದಿ ಗೊತ್ತಿಲ್ಲ ಎಂದು ವೋಟ್ ಮಾಡಿದ್ದಾರೆ.

ರಾಜ್ಯಪಾಲರು ತೆಗೆದುಕೊಂಡ ತೀರ್ಮಾನ ಸರಿ ಎಂದವರು ಶೇ.೭೩.೨೮ ಮಂದಿಯಾದರೆ ತಪ್ಪು ಎಂದವರು ಶೇ. ೨೨.೬೦ರಷ್ಟು ಓದುಗರು. ಇನ್ನು ಗೊತ್ತಿಲ್ಲ ಎಂದವರು ಶೇ.೪.೧೦ರಷ್ಟು ಮಂದಿ.

ಮತ ಚಲಾಯಿಸಿದ ಎಲ್ಲ ೧೪೬ ಓದುಗರಿಗೂ ಕೃತಜ್ಞತೆಗಳು.

ಮುಂದಿನ ಸಮೀಕ್ಷೆಯೂ ಬಿ.ಎಸ್.ಯಡಿಯೂರಪ್ಪ ಅವರನ್ನು ಕುರಿತದ್ದೇ ಆಗಿದೆ. ಈಗಾಗಲೇ ರಾಜ್ಯಪಾಲರ ಅನುಮತಿ ಪಡೆದು ವಕೀಲರುಗಳಾದ ಸಿರಾಜಿನ್ ಬಾಷ ಮತ್ತು ಬಾಲರಾಜ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ವಿಶೇಷವೆಂದರೆ ಈ ಎಲ್ಲ ಪ್ರಕರಣಗಳನ್ನು ಬಯಲಿಗೆ ತಂದದ್ದು ಕರ್ನಾಟಕದ ಮೀಡಿಯಾಗಳು.

ಭ್ರಷ್ಟಾಚಾರದ ಆರೋಪಗಳು ಎದುರಾದ ಹಿನ್ನೆಲೆಯಲ್ಲಿ ಹಲವರು ಸಚಿವರ ತಲೆದಂಡವನ್ನು ಮುಖ್ಯಮಂತ್ರಿಗಳೇ ಪಡೆದಿದ್ದರು. ಈಗ ಸ್ವತಃ ಯಡಿಯೂರಪ್ಪನವರ ಸರದಿ.

ಮೊಕದ್ದಮೆಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆಗಾರಿಕೆ ನಿಭಾಯಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಬೇಕೆ? ಇದು ನಮ್ಮ ಪ್ರಶ್ನೆ. ದಯವಿಟ್ಟು ನಿಮ್ಮ ಮತ ದಾಖಲಿಸಿ. ಕಳೆದ ಬಾರಿ ಮತ ಚಲಾಯಿಸದವರು ಈ ಬಾರಿಯಾದರೂ ಚಲಾಯಿಸಿ. ನಿಮ್ಮ ಬೆರಳಿಗೆ ನಾವು ಶಾಯಿ ಹಾಕುವುದಿಲ್ಲ!

Tuesday, January 25, 2011

ಮಲಗಿದ ಗುಲಾಮನನ್ನು ಕಂಡರೆ ಸ್ವಾತಂತ್ರ್ಯದ ಅರ್ಥ ತಿಳಿಹೇಳಿ...


ಖಲೀಲ್ ಗಿಬ್ರಾನ್ ಹೇಳಿದ್ದನ್ನು ಒಮ್ಮೆ ಕೇಳಿ..

ಅವರು ಹೇಳುತ್ತಾರೆ, ಮಲಗಿದ ಗುಲಾಮನನ್ನು ಕಂಡರೆ ಅವನನ್ನು ಎಬ್ಬಿಸಬೇಡ
ಅವನು ಸ್ವಾತಂತ್ರ್ಯದ ಕನಸು ಕಾಣುತ್ತಿರಲಿ ಬಿಡು..
ನಾನು ಅವರಿಗೆ ಹೇಳುತ್ತೇನೆ, ಮಲಗಿದ ಗುಲಾಮನನ್ನು ನೀವು ಕಂಡರೆ, 
ಅವನನ್ನು ಎಬ್ಬಿಸಿ ಮತ್ತು ಸ್ವಾತಂತ್ರ್ಯದ ಅರ್ಥ ತಿಳಿಹೇಳಿ..

ಸಾಹಿಲ್ ಎಂದೇ ಖ್ಯಾತಿಯಾದ ಸಂವರ್ಥ ಈ ಮೇಲಿನ ಮಾತುಗಳನ್ನು ಉದ್ಧರಿಸಿ, ಕೆ.ವಿ ಅಕ್ಷರ ಇತ್ತೀಚೆಗೆ ಬರೆದ ಹರಾಜು- ಹರಕೆ ಲೇಖನಕ್ಕೆ ಪ್ರತಿಕ್ರಿಯಿಸಿದ್ದಾರೆ. ಶೋಷಣೆಗೆ ಒಳಗಾಗುವವನಿಗೆ ತನಗಾಗುತ್ತಿರುವುದು ಅವಮಾನ ಎಂದು ತಿಳಿಯದ ಹೊರತು ಅದು ಅವಮಾನವಲ್ಲ ಎಂದು ಬರೆದಿದ್ದ ಲೇಖನಕ್ಕೆ ಸಂವರ್ಥ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಮಾತುಗಳಲ್ಲಿ ಸ್ಪಷ್ಟತೆ ಇದೆ. ಕೆಲವು ಉದಾಹರಣೆಗಳ ಮೂಲಕ ಅಕ್ಷರರವರ ವಾದ ಸರಣಿಯನ್ನು ಸಮರ್ಥವಾಗಿ ಟೀಕಿಸಿದ್ದಾರೆ. ನೀವು ಓದಲೇಬೇಕಾದ ಬರಹ ಅದು.

ಸಂವರ್ಥ ಉಡುಪಿಯವರು. ಮೂಲತಃ ಕವಿ. ಅಕ್ಕಪಕ್ಕದ ಕೆಲ ದೇಶಗಳ ಕವಿಗಳ ಜೊತೆ ನಿಕಟ ಸಂಪರ್ಕ ಇದೆ. ಹಾಗೆಯೇ ವಿಮರ್ಶೆಯಲ್ಲೂ ಎತ್ತಿದ ಕೈ. ಇತ್ತೀಚೆಗೆ ಹೊರ ಬಂದ ನೀಷೆ ಕುರಿತ ಪುಸ್ತಕವೊಂದಕ್ಕೆ ಸಂವರ್ಥ ಆಪ್ತವಾಗಿ ಹಿಂಬರಹ ಬರೆದಿದ್ದಾರೆ. ಮಣಿಪಾಲ್‌ನಲ್ಲಿ ಮಾಧ್ಯಮ ವ್ಯಾಸಂಗ ಮುಗಿಸಿ ಮಂಗಳೂರಿನಲ್ಲಿ ಕೆಲಕಾಲ ಪತ್ರಕರ್ತನಾಗಿ ದುಡಿದ ಸಂವರ್ಥ ಸದ್ಯ ಜವಾಹರಲಾಲ ನೆಹರು ವಿಶ್ವವಿದ್ಯಾನಿಲಯದಲ್ಲಿ ಎಂಫಿಲ್ ವಿದ್ಯಾರ್ಥಿ. ಅವರ ಬ್ಲಾಗ್‌ಗೆ ಒಮ್ಮೆ ಭೇಟಿ ಕೊಡಿ.

ಅವರ ಬ್ಲಾಗ್: Crazy Mind's Eye

ಲೇಖನದ ಪೂರ್ಣಪಾಠ ಹೀಗಿದೆ:

If You See A Slave Sleeping…

It was shocking to read an article in the Sunday magazine of a major Kannada daily. As I have been travelling I got to know about this article quite late. It was a friend who drew my attention to this article which softly defends the ritual of ‘made snana’ where devotees roll on the left over food, in the name of right to belief.
 Few weeks ago I had read an article on the same lines on the same issue in the blog of a ‘research’ centre in Karnataka. But that was quite an expected stand from that ‘school’ of thought which thinks its path is that of de-schooling. But this article came as a shock because this was written by a sensible and respected author.
 I must accept that I am not too familiar with the ritual of ‘made snana’ but from whatever I know I have come to a conclusion that it shames human dignity. I am told, by one of the most respected progressive thinkers in Kannada, that this ritual is not imposed by Brahmins on the lower caste people and that even the upper caste people practice this ritual.
 The author of the article says that any action becomes oppressive or below human dignity only if the body and mind involved in the action feels so and argues that such a ritual should not be questioned as it is a matter of belief and this belief system appears oppressive and regressive only to the observers and not the practitioners.
 Very interestingly the author juxtaposes the ritual of ‘made snana’ with the auctioning of IPL players and says that the media and minds which oppose ‘made snana’ did not oppose the auctioning of human beings because of a colonial after-effect which makes us look at the local cultures as oppressive and regressive and not the ones driven by market and capitalist forces. I wonder why the author looks both the examples as different! To me both are below human dignity and both need to be opposed and banned. But the author, don’t know why, chose to look at the two examples as different and silently and softly attempts to convince that the ritual is acceptable as it is associated with the belief of the practitioners.
 There is a tribal community named Koraga. There is a ritual where the Koraga people are made to eat rice mixed with the hair, phlegm, urine and saliva of the upper caste people. This is to transfer the diseases of the upper caste to the lower caste. Sadly the Koraga people believe that they were born to eat rice mixed with the waste of the upper caste and liberate them from their diseases. It is, no doubt, a ritual which is slaughters human dignity even when the Koraga people do not think or feel so. They think it is their duty and the very cause of their birth. They believe so, I believe, because they have been, over the years, made to believe so. Do we defend such a ritual in the name of belief? Or do we oppose it because it is as inhumane as the IPL auction and the ‘made snana’ ritual?
 An activist friend once told me that he came across a child who was seriously unwell and needed quick medical help. The life itself was under threat. But the parents were taking the child to a temple and not to the doctor. When my friend insisted that the child be taken to the hospital and not to a temple the parents asked who was more concerned about the child, they- the parents- or the activist friend of mine. Do we defend the decision of the parents because it stems from their belief system? And let the child lose its life? Do we neglect the arguments of my friend just because he is an outsider and a non participant in the action?
Another activist friend of mine narrated an incident where he and his team of youths mobilized the ‘untouchable’ people and finalized on a date for temple entry. The ‘untouchable’ were charged up and all set to enter the temple. But on the decided date the ‘untouchables’ stopped when they all neared the temple because they, suddenly, felt that the God would feel offended if they entered the temple. They, deep from inside, believed that they were ‘untouchables’ and God created them so and hence they were not supposed to enter the temple. Do we let them be outside the temple (for now let us park aside the argument whether the untouchables are a part of Hinduism and related issues) because they themselves feel and believe that they are not supposed to enter the temple? If yes, then would any reformation any revolution possible? Isn’t such a stand supporting and protecting the existing system which is too oppressive in nature?
 Few months ago when I met a friend of mine after a long time she asked me what was the ‘thread’ that was tied on my right forehand. I said it was, ‘raakhi’ associated with the ritual of ‘raksha bandhan’. My friend asked me, “Don’t you think it is quite a patriarchal thing?” I had smiled and said, “The emotions of my sister is associated and I am quite attached to my sister and don’t want to hurt her emotions by not letting her tie the raakhi.” Listening to my explanation and justification my friend said, “Because you are attached to your sister and respect her emotions don’t you think you must make her understand that this ritual is patriarchic in nature?” I had no answer, as I felt that my friend made sense.
 In one of his poems the man from Lebanon, Kahlil Gibran has the following beautiful lines-
 They tell me: if you see a slave sleeping
Wake him not lest he be dreaming of freedom.
I tell them: If you see a slave sleeping
Wake him up and explain to him freedom.
 During the freedom movement while opposing the Colonial regime many went back to the so called great Indian culture, reinvented it, reinterpreted it to mobilize people and motivate them to fight the colonial power. But such a stream of thought made us blind to the darkness under the ‘bright’ lamp of the great Indian culture. Today while trying to oppose the colonial viewpoint of ‘self’ we are trying to repeat the same, in different ways and through different arguments, to justify everything that is native. This would be nothing but a self defeating step, as I see it, which will dehumanize ourselves and our society by strengthening the existing regressive forces.
 Few weeks ago there was an intellectual debate and discussion in Mangalore where S.N. Balagangadhara presented his viewpoints, about which we all know. Opposing his take Pattabhirama Somayaji, then and there, said that Balagangadhar’s thesis had words and arguments which did not consider the lives of human beings and human experience. What would knowledge and words be if divorced from human experience be but inhumane?
 The rebel musician Hanns Eliser while speaking of popular music and culture, in one of his writings, says that these popular music and culture serve as narcotics to the working class. While understanding that the working class finds a need for such an opium, Eisler draws our attention to what this opium final serves. It only energizes the working class to refuel themselves for the work next morning and help the oppressive class to make profit. Isn’t religion also an opium, as Marx said? Aren’t rituals and belief systems attached to religion also such narcotics? Should the slave be left to dream of freedom in his sleep? Or should he be woken up and explained freedom?
ಕೃಪೆ:  Crazy Mind's Eye

ನಾಳೆ ದಂಡಾವತಿ ಕೃತಿಗಳ ಬಿಡುಗಡೆ: ಅಭಿನಂದನೆಗಳು


ನಾಳೆ ಪ್ರಜಾವಾಣಿ ಸಹಸಂಪಾದಕ ಪದ್ಮರಾಜ ದಂಡಾವತಿಯವರ ನಾಲ್ಕನೇ ಆಯಾಮ ಅಂಕಣ ಬರಹಗಳ ಎರಡು ಸಂಪುಟ ಬಿಡುಗಡೆ, ನಯನ ಸಭಾಂಗಣದಲ್ಲಿ ಮಧ್ಯಾಹ್ನ ೪ಗಂಟೆಗೆ. ಸಾಹಿತಿ ಚಂದ್ರಶೇಖರ ಕಂಬಾರ, ಪ್ರಜಾವಾಣಿ ಸಂಪಾದಕ ಕೆ.ಎನ್.ಶಾಂತಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ಅತಿಥಿಗಳು. ಕೃತಿಗಳ ಪ್ರಕಾಶಕರು ಸಪ್ನ ಬುಕ್ ಹೌಸ್.

ದಂಡಾವತಿಯವರು ಮೂಲತಃ ಬಿಜಾಪುರದವರು, ಪ್ರತಿಭಾವಂತರು. ಪ್ರಜಾವಾಣಿ ಸೇರುವ ಮುನ್ನ ಶೂದ್ರ ಪತ್ರಿಕೆಯಲ್ಲಿ ಕೆಲಕಾಲ ದುಡಿದಿದ್ದರು. ದಿ ಪ್ರಿಂಟರ‍್ಸ್ ಮೈಸೂರು ಸಂಸ್ಥೆಗೆ ಸೇರಿದ ನಂತರ ಹಲವು ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡಮಿ  ಪತ್ರಿಕೋದ್ಯಮ ಕುರಿತ ದಂಡಾವತಿಯವರ ಎರಡು ಕೃತಿಗಳನ್ನು ಪ್ರಕಟಿಸಿದೆ. ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿದೆ.

ಇಂಥ ಹಿರಿಯ ಪತ್ರಕರ್ತರೂ ಒಮ್ಮೊಮ್ಮೆ ಎಡವಿಬಿಡುತ್ತಾರೆ. ಎಡವಿದ್ದು ಇವತ್ತಿನ ಆಧುನಿಕಯುಗದಲ್ಲಿ ನಿಚ್ಚಳವಾಗಿ ಎಲ್ಲರಿಗೂ ಕಾಣಸಿಗುತ್ತದೆ. ಇಲ್ಲಿ ಒಂದು ಉದಾಹರಣೆ ನಿಮ್ಮ ಮುಂದಿದೆ.

ಕಳೆದ ವರ್ಷ ನಡೆದ ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ದಂಡಾವತಿಯವರು ತಮ್ಮ ನಾಲ್ಕನೇ ಆಯಾಮದಲ್ಲಿ ಉಪಚುನಾವಣೆಗಳ ಕುರಿತಾಗಿ ಬರೆದಿದ್ದರು. ನಿಷ್ಠುರವಾಗಿ ಹೇಳಬೇಕೆಂದರೆ ಅದು ಅವರ ಅಂಕಣಕ್ಕೆ ಒಗ್ಗುವ ವಿಷಯವೇ ಆಗಿರಲಿಲ್ಲ. ವರದಿಗಾರನೊಬ್ಬನ ಚುನಾವಣಾ ವಿಶ್ಲೇಷಣೆಯ ಧಾಟಿಯಲ್ಲಿ ಬರಹ ಸಾಗುತ್ತದೆ.

ಚುನಾವಣೆಯ ಕುರಿತು ಬರೆಯುತ್ತ ದಂಡಾವತಿಯವರು ಒಂದು ವಿಷಯವನ್ನು ತೇಲಿಬಿಟ್ಟರು. ಈ ಸಾಲುಗಳನ್ನು ಗಮನಿಸಿ: ಬಿಜೆಪಿ ಆಂತರಿಕವಾಗಿ ಕುದಿಯುತ್ತಿರುವಾಗಲೇ ಅತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಬೇರೆಯದೇ ಲೆಕ್ಕ ಹಾಕಿದಂತಿದೆ. ದೇವೇಗೌಡರಿಗೆ ನಿಕಟವಾಗಿರುವ ಧರ್ಮಸಿಂಗ್, ಗುಲಬರ್ಗಾ ದಕ್ಷಿಣ ಕ್ಷೇತ್ರವನ್ನು ನಮಗೆ ಬಿಟ್ಟುಕೊಡಿ, ಕಡೂರು ಕ್ಷೇತ್ರವನ್ನು ನಿಮಗೆ ಬಿಟ್ಟುಕೊಡುತ್ತೇವೆ ಎಂದು ಮಾತಾಡಿದ್ದಾರೆ ಎಂಬ ಗಾಳಿ ಸುದ್ದಿ ಹರಡಿದೆ.

ಈ ಅಂಕಣ ಪ್ರಕಟಗೊಂಡಿದ್ದು ಸೆ.೫ರಂದು. ಪ್ರಜಾವಾಣಿಯಲ್ಲಿ ಇಂಥದ್ದೊಂದು ಸುದ್ದಿ ಪ್ರಕಟಗೊಂಡರೆ ಅದರ ಪರಿಣಾಮ ತೀವ್ರವಾಗಿರುತ್ತದೆ. ಅದರಲ್ಲೂ ಪತ್ರಿಕೆಯ ನೇತೃತ್ವ ವಹಿಸಿರುವ ಸಹಸಂಪಾದಕರೇ ಬರೆದರೆ?

ಎಚ್.ಡಿ.ದೇವೇಗೌಡರು ಸುಮ್ಮನಿರಲಿಲ್ಲ. ಸೆ.೮ರ ವಿಜಯ ಕರ್ನಾಟಕದ ಮುಖಪುಟದಲ್ಲೇ ಗೌಡರ ವಿಶೇಷ ಸಂದರ್ಶನ ಪ್ರಕಟಗೊಂಡಿತು. ಒಳ ಒಪ್ಪಂದ: ಮಾಧ್ಯಮ ವರದಿಗೆ ಆಕ್ರೋಶ ಎಂಬ ತಲೆಬರಹದ ಈ ಸಂದರ್ಶನದಲ್ಲಿ ಗೌಡರು ಈ ಗಾಳಿಸುದ್ದಿಯನ್ನು ತಿರಸ್ಕರಿಸಿದರಲ್ಲದೆ, ಈ ರೀತಿ ಸುದ್ದಿ ಹಬ್ಬಿಸುವವರಿಗೆ ನಾಚಿಕೆ ಇಲ್ಲ ಎಂದು ಗುಡುಗಿದರು.

ನಂತರ ಚುನಾವಣೆ ನಡೆಯಿತು. ಗೆದ್ದಿದ್ದು ಜೆಡಿಎಸ್ ಅಭ್ಯರ್ಥಿ.

ವಿಷಯ ಏನು ಅಂದರೆ, ಇದರಲ್ಲಿ ದಂಡಾವತಿಯವರ ದುರುದ್ದೇಶಗಳೇನೂ ಇರಲಿಲ್ಲ. ಅವರಿಗೆ ಮಾಹಿತಿ ಒದಗಿಸಿದ ಗುಲ್ಬರ್ಗದ ಹಿರಿಯ ಸಿಬ್ಬಂದಿ ಬೇಕೆಂದೇ ದಾರಿ ತಪ್ಪಿಸಿದ್ದರು. ಈ ಉಪಚುನಾವಣೆಯಲ್ಲಿ ವಿಪರೀತ ಆಕ್ಟಿವ್ ಆಗಿದ್ದ ಆ ಮಹಾನುಭಾವ ತಮ್ಮ ಸಂಪಾದಕರಿಂದಲೇ ಇಂಥದ್ದನ್ನು ಬರೆಸುವ ಹಿಂದೆ ಯಾವ ಉದ್ದೇಶವಿತ್ತೋ ಯಾರು ಬಲ್ಲರು? ಇದೆಲ್ಲ ಗೊತ್ತಾದ ನಂತರ ದಂಡಾವತಿ ಆ ತಮ್ಮ ಶಿಷ್ಯನನ್ನು ತರಾಟೆಗೆ ತೆಗೆದುಕೊಂಡರಾ? ಗೊತ್ತಿಲ್ಲ.

ಮಾಧ್ಯಮ ವಿದ್ಯಾರ್ಥಿಗಳಿಗೆ ಪಠ್ಯವಾಗುವಂಥ ಪುಸ್ತಕಗಳನ್ನು ಬರೆದ ದಂಡಾವತಿಯಂಥವರೇ ಹೀಗೆ ಎಡವಿದರೆ ಹೇಗೆ? ಪತ್ರಕರ್ತರು ಬರೆಯುವಾಗ ಎಷ್ಟು ಎಚ್ಚರಿಕೆಯಿಂದಿರಬೇಕು ಎಂಬುದನ್ನು ಹೇಳಲು ಈ ಉದಾಹರಣೆಯನ್ನು ನೀಡಿದೆವಷ್ಟೆ.

ನಾಳೆ ದಂಡಾವತಿಯವರ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ, ಇಂಥ ಇನ್ನೂ ಹಲವು ಸಂಪುಟಗಳನ್ನು ಅವರು ಹೊರತರುವಂತಾಗಲಿ ಎಂದು ಆಶಿಸುತ್ತೇವೆ. ದಂಡಾವತಿಯವರಿಗೆ ಅಭಿನಂದನೆಗಳು.

ಮರೆತಿದ್ದ ಮಾತು: ಇಲ್ಲಿ ಬಳಸಿರುವ ಪದ್ಮರಾಜ ದಂಡಾವತಿಯವರ ಫೋಟೋ ಶ್ರೀವತ್ಸ ಜೋಷಿಯವರ ಕ್ಯಾಮರಾದಿಂದ ತೆಗೆದದ್ದು. ಮೀಡಿಯಾ ಮಿರ್ಚಿಯಲ್ಲಿ ಪ್ರಕಟಗೊಂಡಿದ್ದನ್ನು ಕದ್ದಿದ್ದೇವೆ. ಕೇಳದೇ ಬಳಸಿದ್ದಕ್ಕೆ ಕ್ಷಮೆಯಿರಲಿ.

Monday, January 24, 2011

ಗೊಂದಲದ ಕೆಸರಲ್ಲಿ ಹೂತುಹೋದ ಪ್ರಜಾವಾಣಿ!


ಮುಖ್ಯಮಂತ್ರಿ ಹಾಗು ಇತರ ಕೆಲವು ಮಂತ್ರಿಗಳ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ, ಭೂ ಡಿನೋಟಿಫೈ ಇತ್ಯಾದಿ ಆರೋಪಗಳ ಬಗ್ಗೆ ಲೋಕಾಯುಕ್ತರು ಮತ್ತು ನ್ಯಾಯಮೂರ್ತಿ ಪದ್ಮರಾಜ ಆಯೋಗ ವಿಚಾರಣೆ ನಡೆಸುತ್ತಿದೆ. ಮುಖ್ಯಮಂತ್ರಿ ವಿರುದ್ಧ ಬೆಂಗಳೂರಿನ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಈ ಎಲ್ಲ ಆರೋಪಗಳ ಬಗ್ಗೆ ಮೂರು ನ್ಯಾಯ ವೇದಿಕೆಗಳಲ್ಲಿ ವಿಚಾರಣೆ ನಡೆಯುವುದು ಎಷ್ಟರಮಟ್ಟಿಗೆ ಸರಿಯಾದೀತು?- ಪ್ರಜಾವಾಣಿ ಸಂಪಾದಕೀಯ

ಈಗಾಗಲೇ ಎರಡು ಸಂಸ್ಥೆಗಳು ತನಿಖೆ ನಡೆಸುತ್ತಿರುವಾಗ ಮೂರನೆಯದು ಯಾಕೆ ಎನ್ನುವ ಪ್ರಶ್ನೆಯನ್ನೂ ಕೇಳಲಾಗುತ್ತಿದೆ. ಈ ಪರಂಪರೆಯನ್ನು ಪ್ರಾರಂಭಿಸಿದ್ದು ಬಿಜೆಪಿ ಸರ್ಕಾರವೇ ಅಲ್ಲವೇ? ಲೋಕಾಯುಕ್ತರು ತನಿಖೆ ಮಾಡುತ್ತಿದ್ದ ಪ್ರಕರಣಗಳನ್ನು ಅವರ ಗಮನಕ್ಕೂ ತರದೆ ತಾವೇ ನೇಮಿಸಿದ ತನಿಖಾ ಆಯೋಗಕ್ಕೆ ಒಪ್ಪಿಸಿದಾಗ ಎರಡೆರಡು ತನಿಖೆಗಳು ಸರಿ ಅಲ್ಲ ಎಂದು ಸರ್ಕಾರಕ್ಕೆ ಅನಿಸಲಿಲ್ಲವೇ?-ದಿನೇಶ್ ಅಮೀನ್ ಮಟ್ಟು.

ರಾಜ್ಯಪಾಲರನ್ನು ಕಾಂಗ್ರೆಸ್ ಪಕ್ಷದ ಏಜೆಂಟ್ ಹಾಗು ಯುಪಿಎ ಸರ್ಕಾರದ ವಕ್ತಾರ ಎಂದು ಬಿಜೆಪಿ ನಾಯಕರು ಟೀಕಿಸುವುದರಲ್ಲಿ ಅರ್ಥವಿದೆ ಎಂಬಂತೆ ನಡೆದುಕೊಂಡರು-ಪ್ರಜಾವಾಣಿ ಸಂಪಾದಕೀಯ

ಭಾರದ್ವಾಜ್ ಅವರು ಕಾಂಗ್ರೆಸ್ ಏಜೆಂಟ್ ಅನಿಸಿಕೊಳ್ಳಲು ರಾಜ್ಯಪಾಲರಾಗುವ ಮೊದಲು ಅವರು ಆ ಪಕ್ಷದ ಸದಸ್ಯರಾಗಿದ್ದದ್ದೇ ಕಾರಣ ಎಂದಾದರೆ ಆರು ವರ್ಷಗಳ ಕಾಲ ಎನ್‌ಡಿಎ ಅಧಿಕಾರಾವಧಿಯಲ್ಲಿ ರಾಜ್ಯಪಾಲರಾಗಿ ನೇಮಕಗೊಂಡಿದ್ದವರೆಲ್ಲ ಬಿಜೆಪಿ ಏಜೆಂಟ್‌ಗಳೇ?-ದಿನೇಶ್ ಅಮೀನ್ ಮಟ್ಟು

ಮುಖ್ಯಮಂತ್ರಿ ಅಥವಾ ಸರ್ಕಾರದ ಇತರ ಮಂತ್ರಿಗಳ ಮೇಲೆ ಯಾರೇ ಭ್ರಷ್ಟಾಚಾರದ ದೂರು ಸಲ್ಲಿಸಿದರೂ ದಾಖಲೆ ಹಾಗೂ ಪುರಾವೆಗಳನ್ನು ಪರಿಶೀಲಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕೇ ಹೊರತು ಅದಕ್ಕೆ ಮೊದಲೇ ಸಂಘರ್ಷಕ್ಕೆ ಇಳಿದವರಂತೆ ಬಹಿರಂಗವಾಗಿ ಆರೋಪಗಳ ಬಗ್ಗೆ ವ್ಯಾಖ್ಯಾನ ಮಾಡುವುದು ಅಪೇಕ್ಷಣೀಯವಲ್ಲ.-ಪ್ರಜಾವಾಣಿ ಸಂಪಾದಕೀಯ

ಇಂತಹ ಸಂದರ್ಭದಲ್ಲಿ ತಮ್ಮ ಮುಂದಿರುವ ಸಾಕ್ಷ್ಯಾಧಾರಗಳ ಸತ್ಯಾಸತ್ಯತೆಯನ್ನು ತಮಗೆ ಇರುವ ಅಧಿಕಾರದ ವ್ಯಾಪ್ತಿಯಲ್ಲಿ ದೃಢೀಕರಿಸಿ ಮೇಲ್ನೋಟಕ್ಕೆ ಆರೋಪದಲ್ಲಿ ಹುರುಳಿದೆ ಎಂದು ರಾಜ್ಯಪಾಲರಿಗೆ ಮನವರಿಕೆಯಾದರೆ ಮುಖ್ಯಮಂತ್ರಿಗಳನ್ನು ಪ್ರಾಸಿಕ್ಯೂಟ್ ಮಾಡಲು ಅವಕಾಶ ನೀಡಬಹುದಾಗಿದೆ. ಇದು ರಾಜ್ಯಪಾಲರ ಸಂವಿಧಾನದತ್ತ ಅಧಿಕಾರ. ಅದನ್ನು ಭಾರದ್ವಾಜ ಚಲಾಯಿಸಿದ್ದಾರೆ. ಆದ್ದರಿಂದ ರಾಜ್ಯಪಾಲರು ತಮ್ಮ ಅಧಿಕಾರದ ದುರುಪಯೋಗ ಮಾಡಿದ್ದಾರೆ ಇಲ್ಲವೇ ಕಾನೂನಿನ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸುವ ಹಾಗಿಲ್ಲ.- ದಿನೇಶ್ ಅಮೀನ್ ಮಟ್ಟು.

ನಾವು ಏನನ್ನು ಹೇಳಲು ಹೊರಟಿದ್ದೇವೆ ಎಂಬುದು ನಿಮಗೆ ಈಗಾಗಲೇ ಸ್ಪಷ್ಟವಾಗಿ ಅರ್ಥವಾಗಿರಬಹುದು. ಇವತ್ತಿನ ಪ್ರಜಾವಾಣಿಯ ಸಂಪಾದಕೀಯ ಪುಟದಲ್ಲಿ ಪ್ರಕಟಗೊಂಡಿರುವ ಎರಡು ಬರಹಗಳು ನಿಮ್ಮ ಕಣ್ಣ ಮುಂದಿವೆ. ಒಂದು ರಾಜ್ಯಪಾಲರ ರಾಜಕೀಯ ನಡೆ ಎಂಬ ಸಂಪಾದಕೀಯ ಲೇಖನ. ಮತ್ತೊಂದು ದಿನೇಶ್ ಅಮೀನ್ ಮಟ್ಟು ಅವರ ಸೋಮವಾರದ ಅನಾವರಣ ಅಂಕಣದಲ್ಲಿ ಪ್ರಕಟಗೊಂಡಿರುವ ಅಧಿಕಾರದ ಕೆಸರಲ್ಲಿ ಹೂತುಹೋದ ನೈತಿಕತೆಯ ಕಮಲ ಎಂಬ ಬರಹ. ಎರಡೂ ಪಕ್ಕಪಕ್ಕದಲ್ಲೇ ಇವೆ. ಒಂದಕ್ಕೊಂದು ಎಷ್ಟು ವಿರುದ್ಧದ ಧೋರಣೆಗಳನ್ನು ತಳೆದಿವೆ ಎಂಬುದಕ್ಕೆ ಮೇಲೆ ಉದಾಹರಿಸಿದ ಸಾಲುಗಳು ಸಾಕ್ಷಿ ಹೇಳುತ್ತಿವೆ.

ಪ್ರಜಾವಾಣಿಗೆ ಏನಾಗಿ ಹೋಗಿದೆ? ಯಾಕಿಷ್ಟು ಗೊಂದಲ? ಏನಿದರ ಹಕೀಕತ್ತು?

ನಿನ್ನೆ ಪದ್ಮರಾಜ ದಂಡಾವತಿ ಏನನ್ನು ಹೇಳಲು ಹೊರಟಿದ್ದಾರೋ ಅದನ್ನೆಲ್ಲ ಒಂದೇ ಏಟಿನಲ್ಲಿ ನೀವಳಿಸಿ ಎಸೆಯುವಂತಿದೆ ದಿನೇಶ್ ಅವರ ಅಂಕಣ. ಇದಕ್ಕೂ ರಾಶಿ ರಾಶಿ ಸಾಕ್ಷಿಗಳಿವೆ.

ದಂಡಾವತಿ ಥೇಟ್ ಬಿಜೆಪಿಯ ಸಿ.ಟಿ.ರವಿಯ ಶೈಲಿಯಲ್ಲಿ ರಾಜ್ಯಪಾಲರ ಪೂರ್ವಾಶ್ರಮವನ್ನು ಕೆದಕಿ ಮಾತನಾಡಿದ್ದಾರೆ. ಪೂರ್ವಾಶ್ರಮ ಏನೇ ಆಗಿದ್ದರೂ ಸಂವಿಧಾನದ ಚೌಕಟ್ಟಿನಲ್ಲಿ ಅವರು ಕೈಗೊಂಡ ನಿರ್ಧಾರಗಳೆಲ್ಲ ಅಬದ್ಧ ಎಂದು ಹೇಳಬಹುದೇ? ಎಂದು ನೇರನೇರ ಟಾಂಗು ಕೊಟ್ಟಿದ್ದಾರೆ ದಿನೇಶ್.

ರಾಜ್ಯಪಾಲರ ಕುರಿತ ಏಜೆಂಟರೆಂಬ ದಂಡಾವತಿಯವರ ವ್ಯಾಖ್ಯಾನಕ್ಕೂ ದಿನೇಶ್ ಸಮರ್ಥವಾಗಿ ಉತ್ತರಿಸಿದ್ದಾರೆ. ದಿನೇಶ್ ಅವರು ಬರೆದ ವಾಕ್ಯಗಳ ಪೈಕಿ ಕೆಲವು ಒಳಮರ್ಮಗಳಿಗೆ ತಾಕುತ್ತವೆ, ಕೆಲವು ನೇರವಾಗಿ ಕಪಾಲಕ್ಕೆ ಹೊಡೆಯುತ್ತವೆ. ದಂಡಾವತಿಯವರ ನಾಲ್ಕನೇ ಆಯಾಮವನ್ನು ಓದುವುದಕ್ಕೂ ಮುನ್ನವೇ ದಿನೇಶ್ ಇದನ್ನು ಬರೆದಿರುವ ಸಾಧ್ಯತೆಗಳೂ ಇಲ್ಲದಿಲ್ಲ. ಆದರೂ ಬಹುತೇಕ ಪ್ರಶ್ನೋತ್ತರಗಳ ಹಾಗಿವೆ ಎರಡೂ ಅಂಕಣಗಳು.

ಆದರೆ ದಿನೇಶ್ ಅಂಕಣವನ್ನು ಮಸುಕು ಮಾಡಲೆಂದು ರಾಜ್ಯಪಾಲರನ್ನು ವಾಪಾಸು ಕರೆಸಿಕೊಳ್ಳಬೇಕು ಎಂಬ ಅಭಿಪ್ರಾಯ ಸೂಚಿಸುವ ಸಂಪಾದಕೀಯ ಏಕೆ ಸಿದ್ಧವಾಯಿತು? ಇದು ಉದ್ದೇಶಪೂರ್ವಕವಾಗಿ ಸೃಷ್ಟಿಯಾದ ಪ್ರತಿಕ್ರಿಯೆಯಾಗಿದ್ದರೆ ಇದರ ಅನಿವಾರ್ಯತೆ ಏನಿತ್ತು? ಪ್ರಜಾವಾಣಿಯ ಓದುಗ ಯಾವುದನ್ನು ನಂಬಬೇಕು? ದಂಡಾವತಿ? ದಿನೇಶ್? ಸಂಪಾದಕೀಯ? ತಾನೇ ಗೊಂದಲದ ಕೆಸರಲ್ಲಿ ಮುಳುಗಿಹೋಗಿರುವ ಪ್ರಜಾವಾಣಿಯನ್ನು ಮೇಲಕ್ಕೆ ಎತ್ತುವವರು ಯಾರು?

ನಿವೃತ್ತರಾಗುವವರೆಗೂ ಡಿ.ವಿ.ರಾಜಶೇಖರ ಪ್ರಜಾವಾಣಿಯ ಸಂಪಾದಕೀಯಗಳನ್ನು ಬರೆಯುತ್ತಿದ್ದರು. ಪ್ರಜಾವಾಣಿಯ ಸಂಪಾದಕೀಯಗಳಿಗೆ ನಿಜಕ್ಕೂ ಒಂದು ಘನತೆ ಇದೆ. ಡಿವಿಆರ್ ಆ ಪರಂಪರೆಯನ್ನು ಸಮೃದ್ಧಗೊಳಿಸಿದವರು. ಆದರೆ ಇವತ್ತು ತನ್ನ ಅಂಕಣಕಾರನ ಬರಹದ ಮೌಲ್ಯವನ್ನು ತಗ್ಗಿಸಲೆಂದೇ ಹೆಣೆಯಲಾದ ಸಂಪಾದಕೀಯಕ್ಕೆ ಯಾವ ಮೌಲ್ಯವಿದೆ? ಯಾರನ್ನು ಮೆಚ್ಚಿಸಲು ಈ ಸರ್ಕಸ್ಸು? ಯಾರ ಕುಣಿಕೆಯಲ್ಲಿ ಸಿಕ್ಕಿ ಬಿದ್ದಿದೆ ಪ್ರಜಾವಾಣಿ?

ಕೊನೆಕುಟುಕು: ಮೂರು ನ್ಯಾಯಸಂಸ್ಥೆಗಳ ಎದುರು ಮುಖ್ಯಮಂತ್ರಿ ವಿರುದ್ಧದ ಪ್ರಕರಣಗಳ ತನಿಖೆ ನಡೆಯುತ್ತಿವೆ ಎಂದು ನಿನ್ನೆ ದಂಡಾವತಿಯವರು ಬರೆದಿದ್ದರು. ಇವತ್ತಿನ ಸಂಪಾದಕೀಯ ಹಾಗು ದಿನೇಶ್ ಅಂಕಣದಲ್ಲೂ ಇದು ಪುನರಾವರ್ತನೆಗೊಂಡಿವೆ. ಸ್ವತಃ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರೇ ಪದೇ ಪದೇ ತಾವು ಮುಖ್ಯಮಂತ್ರಿ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿಲ್ಲ ಎಂದು ಹೇಳಿದರೂ ಯಾಕೆ ಹೀಗೆ ಹಸಿಹಸಿ ಸುಳ್ಳುಗಳನ್ನು ಬಿತ್ತರಿಸಲಾಗುತ್ತಿದೆ? ಬೇರೆಯವರು ಹಾಗಿರಲಿ, ದಿನೇಶ್ ಅವರಾದರೂ ಸತ್ಯ ಬರೆಯಬಹುದಿತ್ತಲ್ಲವೇ? ಇದನ್ನು ಸಹವಾಸದೋಷ ಅನ್ನೋಣವೇ?

Sunday, January 23, 2011

ಘನತೆವೆತ್ತ ಸಂಪಾದಕರೇ, ಇದು ನ್ಯಾಯನಿಷ್ಠುರ ಲೇಖನ ಅಲ್ಲ


ಪದ್ಮರಾಜ ದಂಡಾವತಿ ಪ್ರಜಾವಾಣಿಯ ಸಹಸಂಪಾದಕರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ ಪುರಸ್ಕೃತರು. ನಾಲ್ಕನೇ ಆಯಾಮ ಪ್ರತಿ ಭಾನುವಾರ ಪ್ರಕಟಗೊಳ್ಳುವ ಇವರ ಅಂಕಣ. ಇವತ್ತಿನ ಅಂಕಣದ ಶೀರ್ಷಿಕೆ: ಘನತೆವೆತ್ತ ರಾಜ್ಯಪಾಲರೇ ಇದು ಸಹಜ ನ್ಯಾಯವಲ್ಲ. ದಂಡಾವತಿಯವರಿಗೆ ನಾವು ಹೇಳುತ್ತಿರುವ ಮಾತು: ಘನತೆವೆತ್ತ ಸಂಪಾದಕರೇ ಇದು ನ್ಯಾಯನಿಷ್ಠುರ  ಲೇಖನ ಅಲ್ಲ.

ಇಡೀ ಲೇಖನವನ್ನು ಓದಿದರೆ, ನೂರೆಂಟು ಪ್ರಶ್ನೆಗಳು ಉದ್ಭವಿಸುತ್ತಿವೆ. ಅಂಕಣಕಾರರ ಅಜ್ಞಾನ, ವ್ಯಕ್ತಿನಿಷ್ಠೆ, ಪಕ್ಷನಿಷ್ಠೆ, ಜಾಣಮರೆವು ಎಲ್ಲವೂ ಬಟಾಬಯಲಾಗಿವೆ.

ಪ್ರಜಾವಾಣಿಯಂತಹ ಪತ್ರಿಕೆಯ ಅಂಕಣಕ್ಕೆ ಅದರದ್ದೇ ಆದ ಮಹತ್ವ ಇರುತ್ತದೆ. ಪ್ರಜಾವಾಣಿಗೊಂದು ಗಾಂಭೀರ್ಯವಿದೆ, ಸೈದ್ಧಾಂತಿಕ ಹಿನ್ನೆಲೆಯಿದೆ. ಜನಪರ ಕಾಳಜಿಯನ್ನು ಅದು ಸದಾ ಕಾಪಾಡುತ್ತಾ ಬಂದಿದೆ. ಈ ಎಲ್ಲ ಪರಂಪರೆಯನ್ನು ಮಣ್ಣುಪಾಲು ಮಾಡುವ ಅಂಕಣ ಬರಹ ಇದು.

ನಿಜ, ರಾಜ್ಯಪಾಲರ ನಡವಳಿಕೆ ಕೆಲವರಿಗೆ ಅತಿರೇಕವೆನ್ನಿಸಿರಬಹುದು. ಆದರೆ ಅದನ್ನು ಟೀಕಿಸುವುದಕ್ಕೂ ಒಂದು ಕ್ರಮ ಇರಬೇಕಿತ್ತು. ಸಂವಿಧಾನದ ಆಶಯ, ಅಧಿನಿಯಮ, ವಿವಿಧ ಕಾಯ್ದೆಗಳ ಆಧಾರದಲ್ಲಿ ವಾದ ಮಂಡಿಸಿದ್ದರೆ, ಒಂದಿಷ್ಟು ಚರ್ಚೆಗೆ ಅವಕಾಶ ಇತ್ತು. ಪ್ರಜಾವಾಣಿಯ ಅಂಕಣಕಾರನಿಂದ ಓದುಗ ಅದನ್ನೇ ನಿರೀಕ್ಷಿಸುತ್ತಾನೆ.

ಆದರೆ, ಮುಖ್ಯಮಂತ್ರಿಯ ಪತ್ರಿಕಾ ಹೇಳಿಕೆಯೇ ಅಂಕಣದ ರೂಪದಲ್ಲಿ ಪ್ರಕಟಗೊಂಡಂತೆ ಕಂಡರೆ?

ಪದ್ಮರಾಜ ದಂಡಾವತಿಯವರಿಗೆ ಎಷ್ಟು ಜಾಣ ಮರೆವು ಎಂದರೆ ತಮ್ಮ ಅಂಕಣದಲ್ಲಿ ಎಲ್ಲಿಯೂ, ಮುಖ್ಯಮಂತ್ರಿ ಅವರ ಮಕ್ಕಳು ಮಾಡಿರುವ ಭಾನಗಡಿಗಳನ್ನು ಉಲ್ಲೇಖಿಸುವುದೇ ಇಲ್ಲ. ಅನೈತಿಕ ಡಿನೋಟಿಫಿಕೇಷನ್‌ಗಳ ಮೂಲಕ ನೂರಾರು ಕೋಟಿ ಲೂಟಿಯಾಗಿರುವುದು ಅವರನ್ನು ಕಾಡಿಸುವುದೇ ಇಲ್ಲ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೇ ಮುಖ್ಯಮಂತ್ರಿ ಮಾಡಿರುವುದು ಅನೈತಿಕ ಎಂದು ಒಪ್ಪಿಕೊಳ್ಳುತ್ತಾರೆ. ಪತ್ರಕರ್ತ ದಂಡಾವತಿ ಮಾತ್ರ ಮುಖ್ಯಮಂತ್ರಿಯ ನಿರ್ಧಾರಗಳನ್ನು ಟೀಕಿಸುವ ಗೋಜಿಗೇ ಹೋಗುವುದಿಲ್ಲ.

ಮುಖ್ಯಮಂತ್ರಿಯ ಕೆಲವು ನಿರ್ಧಾರಗಳಿಂದ ರಾಜ್ಯದ ಬೊಕ್ಕಸಕ್ಕೆ ೪೫೦ ಕೋಟಿಗೂ ಹೆಚ್ಚು ನಷ್ಟವಾಗಿದೆ. ಅವರ ಕುಟುಂಬಕ್ಕೆ ೨೦೦ ಕೋಟಿ ರೂ ಅಕ್ರಮವಾಗಿ ಸಂದಾಯವಾಗಿದೆ. ಇದನ್ನೆಲ್ಲಾ ಕೇಳುತ್ತಿದ್ದರೆ, ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿರುವವರ ಬಗ್ಗೆ ಎಂತಹವರಿಗೂ ಸಿಟ್ಟು ಬರುವುದು ಸಹಜ. ಆದರೆ ದಂಡಾವತಿಗೆ ಅದಾವುದೂ ಆಗುವುದಿಲ್ಲ!?

ರಾಜ್ಯಪಾಲರು ಮುಖ್ಯಮಂತ್ರಿಗೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳಲು ಅವಕಾಶ ಕೊಟ್ಟಿಲ್ಲ ಎನ್ನುತ್ತಾರೆ ದಂಡಾವತಿ.

ಒಬ್ಬ ವ್ಯಕ್ತಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾನೆ ಎಂದರೆ, ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಆರೋಪ ಎದುರಿಸುತ್ತಿರುವವರು ಮುಖ್ಯಮಂತ್ರಿ ಅಥವಾ ಮಂತ್ರಿಯಾಗಿದ್ದರೆ, ಅವರ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ರಾಜ್ಯಪಾಲರ ಅನುಮತಿ ಬೇಕು ಎನ್ನುತ್ತದೆ ಕಾನೂನು. ಅವರು ಇರುವ ಸ್ಥಾನದ ಕಾರಣ ಈ ವಿಶೇಷ ಅನುಮತಿ ಅನಿವಾರ್ಯ. ಅದರ ಹೊರತಾಗಿ ಅವರೂ ಸಾಮಾನ್ಯರೆ. ರಾಜ್ಯಪಾಲರು ತಮ್ಮ ಎದುರಿಗೆ ಬಂದ ಅರ್ಜಿಯನ್ನು ನೋಡಿ, ಅದರಲ್ಲಿ ದಾವೆ ಹೂಡಲು ಸಾಕಷ್ಟು ಮಾಹಿತಿ ಇದೆ ಎಂದು ಅನಿಸಿದರೆ ಅವರು ಯಾವುದೇ ಕಾಲಮಿತಿ ಇಲ್ಲದೆ ಅನುಮತಿ ನೀಡಲು ಅವಕಾಶ ಇದೆ. ಆದರೆ ಈ ಸಂದರ್ಭದಲ್ಲಿ ರಾಜ್ಯಪಾಲ ಭಾರದ್ವಾಜ ಪೂರಕ ಮಾಹಿತಿ ಕೇಳಿ ರಾಜ್ಯ ಸರಕಾರಕ್ಕೆ ಪತ್ರ ಬರೆದರು. ತಮಗೆ ತಲುಪಿಸಿದ ದಾಖಲೆಗಳನ್ನು ಪರಿಶೀಲಿಸಿ ನಂತರವಷ್ಟೆ ಅನುಮತಿ ನೀಡಿದ್ದಾರೆ. ದಂಡಾವತಿ ಹೇಳುವಂತೆ ಮುಖ್ಯಮಂತ್ರಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡಿಲ್ಲ ಎನ್ನುವುದು ಒಪ್ಪುವ ಮಾತಲ್ಲ. ಏಕೆಂದರೆ, ವಾದಿ, ಪ್ರತಿವಾದಿ ಎಲ್ಲರನ್ನೂ ಕೇಳಿ ತೀರ್ಮಾನ ಕೊಡಲು ರಾಜ್ಯಪಾಲರಿಗೆ ಅವಕಾಶ ಇಲ್ಲ. ಅದೇನಿದ್ದರೂ ನ್ಯಾಯಾಲಯದ ಕೆಲಸ. ಹಾಗಾಗಿ ಈಗ ಆರೋಪ ನ್ಯಾಯಾಲಯದ ಮೆಟ್ಟಿಲು ಹತ್ತಿದೆ. ಅಲ್ಲಿ ಮುಖ್ಯಮಂತ್ರಿಗೆ ಸಮರ್ಥಿಸಿಕೊಳ್ಳಲು ಅವಕಾಶ ಇದೆ. ದಂಡಾವತಿಯಂತಹ ಹಿರಿಯ ಪತ್ರಕರ್ತರಿಗೆ ಇದು ತಿಳಿಯುವುದಿಲ್ಲ ಎಂದು ನಂಬಬಹುದೆ?

ಅಷ್ಟಕ್ಕೂ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ಧ ದಾವೆ ಹೂಡಲು ಏಕೆ ಅನುಮತಿ ಕೊಟ್ಟರೆಂಬುದನ್ನು ಕನ್ನಡಪ್ರಭ ವಿಸ್ತ್ರತವಾಗಿ ಬರೆದಿದೆ, ಒಮ್ಮೆ ಓದಿ. ದಾವೆ ಹೂಡಲು ಅನುಮತಿ ಕೊಟ್ಟಿದ್ದು ಹೇಗೆ ಸರಿ ಎಂಬುದನ್ನು ವಿಜಯ ಕರ್ನಾಟಕದ ಇಂದಿನ ಮುಖಪುಟದಲ್ಲಿ ಪ್ರಕಟಗೊಂಡಿರುವ ಮಾಜಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ಅವರ ಸಂದರ್ಶನ ಹೇಳುತ್ತದೆ, ಅದನ್ನೂ ಒಮ್ಮೆ ಓದಿ.

ಮುಖ್ಯಮಂತ್ರಿಯ ವಿರುದ್ಧದ ಆರೋಪಗಳನ್ನು ಈಗಾಗಲೇ ಲೋಕಾಯುಕ್ತ ಹಾಗೂ ನ್ಯಾಯಮೂರ್ತಿ ಬಿ ಪದ್ಮರಾಜ ಆಯೋಗ ತನಿಖೆ ನಡೆಸುತ್ತಿದೆ ಎಂದು ದಂಡಾವತಿ ಬರೆಯುತ್ತಾರೆ.

ಕೆಲ ಆರೋಪಗಳು ಲೋಕಾಯುಕ್ತರ ಮುಂದೆ ದಾಖಲಾಗಿದ್ದು ನಿಜ. ಅವರು ತನಿಖೆ ಕೈಗೆತ್ತಿಕೊಳ್ಳುವ ಮೊದಲೇ, ಸರಕಾರ ಆಯೋಗವನ್ನು ನೇಮಿಸಿತು. ೧೯೯೫ ರಿಂದ ಕೇಳಿಬಂದಿರುವ ಆರೋಪಗಳನ್ನು ತನಿಖೆ ಮಾಡುವುದು ಆಯೋಗದ ಜವಾಬ್ದಾರಿ. ಲೋಕಾಯುಕ್ತರ ಮುಂದಿದ್ದ ಕೇಸುಗಳೂ ಆಯೋಗಕ್ಕೆ ವರ್ಗ ಆದವು. ಈ ಸಂದರ್ಭದಲ್ಲಿ ಯಡಿಯೂರಪ್ಪ ಜಾಣತನದಿಂದ ಜನತಾದಳದ ವೈಎಸ್‌ವಿ ದತ್ತ ತಮ್ಮ ವಿರುದ್ಧ ದೂರು ನೀಡಿದ ಹಿಂದಿನ ದಿನದವರೆಗಿನ ತನಿಖೆಗಳನ್ನು ಮಾತ್ರ ಲೋಕಾಯುಕ್ತಕ್ಕೆ ಸೀಮಿತಗೊಳಿಸಿ ಆದೇಶ ಹೊರಡಿಸಿದರು. ಸುಮಾರು ಐದು ವರ್ಷಗಳ ಕಾಲ ಕ್ರೈಮ್ ವರದಿಗಾರಿಕೆಯನ್ನೂ ಮಾಡಿದ್ದ ದಂಡಾವತಿಯವರಿಗೆ ಇದು ಗೊತ್ತಿಲ್ಲವೆ? ಹೀಗಿದ್ದೂ ಮುಖ್ಯಮಂತ್ರಿ ವಿರುದ್ಧದ ತನಿಖೆ ಲೋಕಾಯುಕ್ತರ ಮುಂದಿದೆ ಎಂದು ಏಕೆ ಬರೆಯುತ್ತಾರೆ? ಯಾರನ್ನು ಮಂಗ ಮಾಡುವ ಉದ್ದೇಶವಿದು?

ಇನ್ನು ನ್ಯಾಯಮೂರ್ತಿ ಪದ್ಮರಾಜ ಆಯೋಗದ ಮುಂದಿರುವುದು ಯಡಿಯೂರಪ್ಪನವರ ಪ್ರಕರಣಗಳು ಮಾತ್ರವಲ್ಲ. ಎಚ್.ಡಿ.ದೇವೇಗೌಡ, ಎಸ್.ಎಂ.ಕೃಷ್ಣ, ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿಯವರ ಕಾಲದ ಪ್ರಕರಣಗಳೂ ಆ ಆಯೋಗದ ಮುಂದಿದೆ.

ಅದಲ್ಲದೆ ಲೋಕಾಯುಕ್ತರ ಮುಂದಿದ್ದ ಕೇಸುಗಳು ಆಯೋಗಕ್ಕೆ ವರ್ಗವಾದ ವಿಚಾರ ಕೋರ್ಟ್ ಮುಂದಿದೆ. ಆಯೋಗ ಯಾವುದೇ ಸಾಕ್ಷ್ಯ ದಾಖಲಿಸದಂತೆ ಹಾಗು ಮಧ್ಯಂತರ ಆದೇಶ ಹೊರಡಿಸದಂತೆ ಕೋರ್ಟ್ ಆದೇಶಿಸಿದೆ. ಹಾಗಾಗಿ ಸದ್ಯ ಆಯೋಗ ತನಿಖೆ ನಡೆಸುತ್ತಿಲ್ಲ ಎನ್ನವುದು ನಿರ್ವಿವಾದ. ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಎರಡು ದಿನಗಳಿಂದ ಸಾರಿ ಸಾರಿ ಹೇಳಿದ್ದಾರೆ: ಅವರು ಮುಖ್ಯಮಂತ್ರಿ ವಿರುದ್ಧ ಯಾವುದೇ ಕೇಸನ್ನೂ ತನಿಖೆ ಮಾಡುತ್ತಿಲ್ಲ. ಆದರೆ ಈ ದಂಡಾವತಿಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದು ಯಾರು? ಪತ್ರಿಕೆಗಳನ್ನು ಓದುವ ಅಭ್ಯಾಸ ಈ ಹಿರಿಯ ಪತ್ರಕರ್ತರಿಗಿಲ್ಲವೆ?

ನೆನಪಿರಲಿ. ಮುಖ್ಯಮಂತ್ರಿಯ ಕೆಲ ಕಾನೂನು ವಿರೋಧಿ ಕ್ರಮಗಳಿಂದ ಅನ್ಯಾಯ ಆಗಿರುವುದು ಬಡ ರೈತರಿಗೆ. ಸ್ವಾಧೀನಕ್ಕೆ ಗುರುತಿಸಿದ್ದ ಜಮೀನನ್ನು ಮೂಲ ಮಾಲೀಕರಾದ ಬಡ ರೈತರಿಂದ ಅಕ್ರಮವಾಗಿ ವಶಪಡಿಸಿಕೊಂಡು ಡಿನೋಟಿಫೈ ಮಾಡಿದ್ದು ಸರಿಯೇ? ಹೀಗೆ ಡಿನೋಟಿಫೈ ಮಾಡಲಾದ ಜಮೀನನ್ನು ತಮ್ಮ ಕರುಳ ಬಳ್ಳಿಗಳಿಗೆ ಕೊಟ್ಟಿದ್ದು ಸರಿಯೇ?

ತಪ್ಪುಗಳಾಗಿದ್ದರೆ ಶಿಕ್ಷೆ ಅನುಭವಿಸಲಿ ಬಿಡಿ. ನಿಮಗ್ಯಾಕೆ ದುಃಖ ದಂಡಾವತಿಯವರೆ? ಬಿಜೆಪಿಯಲ್ಲಿ ಇರುವವರಿಗೆ ಮರ್ಯಾದೆ ಇದ್ದರೆ ಈ ಭ್ರಷ್ಟ ಮುಖ್ಯಮಂತ್ರಿಯನ್ನು ಕೆಳಗಿಳಿಸಿ, ಪಕ್ಷ, ಅಧಿಕಾರ ಉಳಿಸಿಕೊಳ್ಳುತ್ತಾರೆ. ‘ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಹೇಗಾದರೂ ಮಾಡಿ ಉರುಳಿಸುವ ಯತ್ನ ನಡೆಯುತ್ತಿದೆ ಎಂದೇಕೆ ರೋಧಿಸುತ್ತೀರಿ?

ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಯಡಿಯೂರಪ್ಪನವರ ಅವ್ಯವಹಾರಗಳ ಬಗ್ಗೆ ಚಕಾರ ಎತ್ತದೆ ದಂಡಾವತಿ ಮತ್ತು ಪ್ರಜಾವಾಣಿ ಕಳ್ಳನನ್ನು ಬೆಂಬಲಿಸಿದ ಆರೋಪ ಎದುರಿಸಬೇಕೆ? ಪ್ರಜಾವಾಣಿ ಸಂಸ್ಥೆಯ ಮಾಲೀಕರಿಗೆ ಇದೆಲ್ಲ ಏನೂ ಅನ್ನಿಸುವುದಿಲ್ಲವೆ?

ಇವತ್ತಿಗೂ ಕಾಡುವ ಗಂಭೀರವಾದ ಪ್ರಶ್ನೆ ಏನೆಂದರೆ  ಡಿನೋಟಿಫಿಕೇಷನ್ ದಂಧೆಯ ಕುರಿತು ಪ್ರಜಾವಾಣಿ ಏಕೆ ಮೃದುವಾಗಿದೆ?

ಕೊನೆ ಕುಟುಕು: ಪದ್ಮರಾಜ ದಂಡಾವತಿಯವರ ನಾಲ್ಕನೇ ಆಯಾಮ ಅಂಕಣ ಬರಹದ ಎರಡು ಪುಸ್ತಕಗಳು ಈ ವಾರ ಬಿಡುಗಡೆಯಾಗಲಿವೆ. ಸಾಹಿತಿ ಚಂದ್ರಶೇಖರ ಕಂಬಾರ ಕೃತಿಗಳನ್ನು ಬಿಡುಗಡೆ ಮಾಡುತ್ತಾರೆ. ಪ್ರಜಾವಾಣಿ ಸಂಪಾದಕ ಶಾಂತಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ಕಾರ್ಯಕ್ರಮದ ಅತಿಥಿಗಳು. ಕೃತಿಗಳ ಬಿಡುಗಡೆಗೆ ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪ ಅವರನ್ನು ಆಹ್ವಾನಿಸಿದ್ದರೆ ಹೆಚ್ಚು ಅರ್ಥಪೂರ್ಣವಾಗಿರುತ್ತಿತ್ತು.

Saturday, January 22, 2011

ಅದಿರು ಕಳ್ಳತನ: ಪೂರ್ತಿ ಡೀಟೇಲ್ಸ್ ಇಲ್ಲಿದೆ...


ಸ್ವಲ್ಪ ಫಾಲೋ ಅಪ್ ಮಾಡ್ತೀರಾ ಸರ್ ಎಂದು ರಾಜ್ಯದ ಮಾಧ್ಯಮ ಲೋಕದ ದಿಗ್ಗಜರನ್ನು ಮನವಿ ಮಾಡಿಕೊಂಡಿದ್ದೆವು. ಆದರೆ ಯಾರೂ ಫಾಲೋ ಅಪ್ ಮಾಡಿದ ಹಾಗೆ ಕಾಣುತ್ತಿಲ್ಲ. ಹೀಗಾಗಿ ಸಂಪಾದಕೀಯ ತಂಡವೇ ಸುದ್ದಿಯ ಆಳ-ಅಗಲವನ್ನು ಕೆದಕಿ ಮಾಹಿತಿಗಳನ್ನು ಸಂಗ್ರಹಿಸಿದೆ. ಅದನ್ನು ಓದುಗರ ಮುಂದೆ ಇಡುತ್ತಿದ್ದೇವೆ.

ನಾವು ಹೇಳುತ್ತಾ ಇರುವುದು ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಅದಿರು ಹರಾಜಿನ ವಿಷಯ. ಇದನ್ನು ಓದುವ ಮುನ್ನ ನಮ್ಮ ಹಳೆಯ ಪೋಸ್ಟ್ ಅದಿರು ಮಾಯ-ಸುದ್ದಿ ಮಂಗಮಾಯವನ್ನು ಮತ್ತೊಮ್ಮೆ ಓದಿ ಬನ್ನಿ.

ಚಿತ್ರಕೂಟ ಸ್ಟೀಲ್ ಅಂಡ್ ಪವರ್ ಪ್ರೈ. ಲಿ. ಸಂಸ್ಥೆಗೆ ಅತ್ಯಂತ ಕಡಿಮೆ ಬೆಲೆಯ ಹರಾಜಿನ ಕುರಿತು ಹೈಕೋರ್ಟ್‌ನಲ್ಲಿ ಓರ್ವರು ಆಕ್ಷೇಪ ಎತ್ತಿದ ಪರಿಣಾಮ ನ್ಯಾಯಾಲಯ ಹರಾಜು ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿತು, ನಂತರ ಅದು ತೆರವು ಸಹ ಆಯಿತು. ಅದಾದ ನಂತರ ಏನಾಯಿತು ಎಂಬುದೇ ಸಾಕಷ್ಟು  ಕುತೂಹಲಕರವಾಗಿದೆ.

ಚಿತ್ರಕೂಟ ಸ್ಟೀಲ್ ಅಂಡ್ ಪವರ್ ಪ್ರೈ. ಲಿ. ಸಂಸ್ಥೆ ೧೮ ಕೋಟಿ ರೂ.ಗಳಿಗೆ ಹರಾಜು ಪಡೆದಿದ್ದೇನೋ ನಿಜ. ಇದಕ್ಕಾಗಿ ಮೊದಲ ಕಂತಾಗಿ ಶೇ.೨೫ರಷ್ಟು ಹಣ ಅಂದರೆ, ೪,೭೦,೯೬,೫೦೦ ರೂ.ಗಳನ್ನು ಪಾವತಿಸಿತ್ತು. ಇನ್ನೂ ಮೂರು ಕಂತುಗಳಲ್ಲಿ ಬಾಕಿ ಹಣವನ್ನು ಪಾವತಿಸಬೇಕಿತ್ತು.

ಆದರೆ ಸಂಗ್ರಹಿಸಿಡಲಾಗಿದ್ದ ಅದಿರಿನ ಪೈಕಿ ಅರ್ಧಕ್ಕೂ ಹೆಚ್ಚು (ಸಿಓಡಿ ತನಿಖೆಯೇ ಇದನ್ನು ಹೇಳಿದೆ.) ನಾಪತ್ತೆಯಾಗಿತ್ತು. ಪೂರ್ತಿ ಅದಿರು ದೊರೆಯುವವರೆಗೂ ಉಳಿದ ಹಣವನ್ನು ಕಟ್ಟಲು ಸಾಧ್ಯವಿಲ್ಲ ಎಂದು ಸಂಸ್ಥೆ ಹೇಳಿತು. ಆದರೆ ಸರಿಯಾದ ಅವಧಿಯಲ್ಲಿ ಕಂತು ಪಾವತಿಸಲಿಲ್ಲ ಎಂಬ ಕಾರಣಕ್ಕೆ ಹರಾಜನ್ನು ರದ್ದುಗೊಳಿಸಿ ಹೊಸದಾಗಿ ಹರಾಜು ನಡೆಸಲು ಅಧಿಕಾರಿಗಳು ನಿರ್ಧರಿಸಿದರು. ಈ ಸಂಬಂಧ ಚಿತ್ರಕೂಟ ಸ್ಟೀಲ್ ಅಂಡ್ ಪವರ್ ಸಂಸ್ಥೆ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ದಾವೆ ಹೂಡಿತು. ರಿಟ್ ಪಿಟಿಷನ್ ಸಂಖ್ಯೆ 5124/ 2010(GM-MM-S)

ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದವರು ಕರ್ನಾಟಕ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿಗಳು, ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಆಯುಕ್ತರೂ ಆಗಿರುವ ಜಿಲ್ಲಾಧಿಕಾರಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಹಾಗು ಗಣಿ ಮತ್ತು ಭೂವಿಜ್ಞಾನ ಇಲಾಖೆ ಬಳ್ಳಾರಿ ಜಿಲ್ಲೆಯ ಉಪ ನಿರ್ದೇಶಕರು.

ಅದಿರು ಕಳ್ಳತನವಾಗಿರುವುದನ್ನು ಮುಚ್ಚಿಹಾಕಲು ಮರುಹರಾಜು ನಡೆಸಲು ಯತ್ನಿಸಲಾಗುತ್ತಿದೆ ಎಂದು ಅರ್ಜಿದಾರರು ವಾದಿಸಿದರು. ಅದಿರು ನಾಪತ್ತೆ ಪ್ರಕರಣದ ಸತ್ಯಾಂಶಗಳನ್ನು ಅರಿಯಲು ನ್ಯಾಯಾಲಯದ ಆದೇಶದ ಮೇರೆಗೆ ಸಿಓಡಿ ತನಿಖೆಯೂ ನಡೆಯಿತು.

ಗೌರವಾನ್ವಿತ ನ್ಯಾಯಮೂರ್ತಿಗಳಾದ ವಿ.ಗೋಪಾಲಗೌಡ ಮತ್ತು ಬಿ.ಎಸ್.ಪಾಟೀಲ ಅವರನ್ನು ಒಳಗೊಂಡ ವಿಭಾಗೀಯ ಪೀಠ ೨೦೧೦ರ ಫೆಬ್ರವರಿ ೧೯ರಂದು ತೀರ್ಪನ್ನು ನೀಡಿತು.

ಹೈಕೋರ್ಟ್ ವಿಭಾಗೀಯ ಪೀಠದ ಅಂತಿಮ ಆದೇಶದಲ್ಲಿ ಸಿಓಡಿ ತನಿಖೆ ವರದಿಯ ಕುರಿತು ಹೀಗೆ ಪ್ರಸ್ತಾಪಿಸಲಾಗಿದೆ:


...It is clear from the previous proceedings and from terms of the report filed by the COD referred to in the previous order passed by this court that considerable quantity is missing from the iron ore stacked in the lands.... (Page No.8)


...As regards the huge quantity of iron ore stacked in different lands found missing. we would like to make it clear that the authorities are duty bound to examine as to under what circumstances such lapse took place. In the light of the report submitted by the COD, we direct the Director of Mines and Geology, based on the exact quantity of material that will be auctioned in the proposed auction, to find out how much material falls short compared to what was stacked earlier and auctioned previously. The responsibility has to be fixed with regard to the missing quantity by conductiong necessary enquiry agaisnt the authorities and persons concerned....... (Page No. 8 & 9)


ಇಷ್ಟು ದೊಡ್ಡ ಪ್ರಮಾಣದ ಅದಿರು ನಾಪತ್ತೆಯಾಗಿರುವುದು ನಿಜ ಎಂಬುದು ಸಿಓಡಿ ತನಿಖೆಯಿಂದೇನೋ ಬಯಲಾಗಿದೆ. ಇಂಥ ದೊಡ್ಡ ಪ್ರಮಾದ ನಡೆಯಲು ಕಾರಣಕರ್ತರಾದ, ಜವಾಬ್ದಾರಿ ಹೊರಬೇಕಾದವರ ಮೇಲೆ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯವೂ ಆದೇಶಿಸಿದೆ.

ಕದ್ದವರು ಯಾರು? ಕದ್ದವರಿಗೆ ಅನುಕೂಲ ಮಾಡಿಕೊಟ್ಟ ಅಧಿಕಾರಿಗಳು ಯಾರು?  ಇನ್ನೂ ಬಯಲಾಗಿಲ್ಲ. ಚಿತ್ರಕೂಟ ಸಂಸ್ಥೆಗೇನೋ ತಾನು ಕಟ್ಟಿದ್ದ ಮೊದಲ ಕಂತಿನ ಹಣ ನ್ಯಾಯಾಲಯದ ಆದೇಶದಿಂದಾಗಿ ವಾಪಾಸು ದೊರೆತಿದೆ.

ಆದರೆ ಮಾಯವಾದ ಅದಿರಿನ ಕಥೆ? ಅದಕ್ಕೆ ಉತ್ತರದಾಯಿಗಳು ಯಾರು?

ಹೊಟ್ಟೆಪಾಡಿಗಾಗಿ ಮನೆಗಳ್ಳತನ ಮಾಡುವವನನ್ನು ಹಿಡಿದರೆ ಅದು ಸುದ್ದಿಯಾಗುತ್ತದೆ, ಅವನಿಗೆ ಜೈಲೂ ಆಗುತ್ತದೆ. ಕೋಟಿಗಟ್ಟಲೆ ನುಂಗಿದವರು ಆರಾಮವಾಗಿ ಇರುತ್ತಾರೆ. ಈ ಪ್ರಕರಣದಲ್ಲಿ ಅದು ಗಂಭೀರವಾದ ಸುದ್ದಿಯೂ ಆಗಲಿಲ್ಲ. ಇದು ಅತ್ಯಂತ ನೋವಿನ ವಿಚಾರ.

ಆರು ಕೋಟಿ ಕನ್ನಡಿಗರಿಗೆ ಅವಮಾನವಾಗಿದೆಯೇ?


ಇದು ಪ್ರಜಾವಾಣಿಯ ಇಂದಿನ ಸಂಚಿಕೆಯಲ್ಲಿ ಪ್ರಕಟಗೊಂಡಿರುವ ಪಿ. ಮಹಮದ್ ಅವರ ಚಿನಕುರುಳಿ ಪಂಚ್. ರಾಜಕಾರಣಿಗಳು ತಮ್ಮ ಸ್ಥಾನಕ್ಕೆ, ಮಾನಕ್ಕೆ ಧಕ್ಕೆಯಾದಾಗಲೆಲ್ಲ ಇದು ಇಡೀ ರಾಜ್ಯದ ಜನತೆಗೆ ಆದ ಅವಮಾನ ಎಂದು ಹೇಳಿಕೊಳ್ಳುವುದು ಮಾಮೂಲು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮೊಕದ್ದಮೆ ದಾಖಲಿಸಲು ಇಬ್ಬರು ವಕೀಲರಿಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅನುಮತಿ ನೀಡಿರುವುದು ನಿಜಕ್ಕೂ ರಾಜ್ಯದ ಆರು ಕೋಟಿ ಜನತೆಗೆ ಅವಮಾನ ಮಾಡಿದಂತಾಗಿದೆಯೇ?

ನಮಗಂತೂ ಹಾಗನ್ನಿಸುತ್ತಿಲ್ಲ, ನಿಮಗೆ?

Friday, January 21, 2011

ಮೀಡಿಯಾಗಳಲ್ಲೂ ಸಾಮಾಜಿಕ ನ್ಯಾಯ ಇರಬೇಕಲ್ಲವೆ?


ಇವತ್ತಿನ ಕನ್ನಡಪ್ರಭ ಮುಖಪುಟದ ಒಂದು ಸುದ್ದಿಯ ಶೀರ್ಷಿಕೆ: ಖಾಸಗಿ ಕಂಪನಿಗಳಲ್ಲಿ ಎಸ್‌ಸಿ, ಎಸ್‌ಟಿಗಳಿಗೆ ಜಾಗವೇ ಇಲ್ಲ.

ನಿಜ, ಖಾಸಗಿ ಸಂಸ್ಥೆಗಳಲ್ಲಿ ದಲಿತರಿಗೆ ಕೊಡಲಾಗುವ ಅವಕಾಶ ಅಷ್ಟಕ್ಕಷ್ಟೆ. ಇದು ಗೊತ್ತಿರುವ ವಿಷಯವೇ. ಈ ಕುರಿತ ಅಂಕಿಅಂಶಗಳನ್ನು ಕನ್ನಡಪ್ರಭ ಪ್ರಕಟಿಸಿದೆ.

ಆದರೆ ಮೀಡಿಯಾಗಳೆಂಬ ಖಾಸಗಿ ಸಂಸ್ಥೆಗಳು ಏನು ಮಾಡುತ್ತಿವೆ? ಮೀಡಿಯಾಗಳಲ್ಲಿ ಸಾಮಾಜಿಕ ನ್ಯಾಯಕ್ಕೆ ಏನಾದರೂ ಅರ್ಥ ಉಳಿದಿದೆಯೇ? ಬಹುಸಂಸ್ಕೃತಿಗಳ ಈ ನೆಲದಲ್ಲಿ ಸಣ್ಣಪುಟ್ಟ ಸಮುದಾಯಗಳ, ತಿರಸ್ಕೃತ ಸಮಾಜಗಳ ಅಭಿವ್ಯಕ್ತಿಯನ್ನು ಧ್ವನಿಸುವಂಥವರು ಮೀಡಿಯಾಗಳಲ್ಲಿ ಎಷ್ಟು ಮಂದಿ ಇದ್ದಾರೆ? ಬಹುಸಂಖ್ಯಾತ ಜನರ ಸಂವೇದನೆಗಳೆಲ್ಲ ನಮ್ಮ ಮೀಡಿಯಾಗಳಿಗೆ ನಗಣ್ಯ ಆಗಿರುವುದು ನಿಜವಲ್ಲವೆ?

ಸುಮ್ಮನೆ ಕನ್ನಡ ಮಾಧ್ಯಮಲೋಕದತ್ತ ಒಂದು ನೋಟ ಚೆಲ್ಲಿ. ಕನ್ನಡ ಮೀಡಿಯಾಗಳಲ್ಲಿ ಇರುವ ದಲಿತರ ಸಂಖ್ಯೆ ಎಷ್ಟು? ಸಂಪಾದಕರುಗಳಲ್ಲಿ ಬ್ರಾಹ್ಮಣೇತರರ ಸಂಖ್ಯೆ ಎಷ್ಟು? ಮುಸಲ್ಮಾನ ವರದಿಗಾರರು ಇದ್ದಾರೆಯೇ? ಇದ್ದರೆ ಅವರ ಪ್ರಮಾಣ ಎಷ್ಟು? ತಿಗಳ, ಕೊರಚ, ಕಮ್ಮಾರ, ಹೊಲೆಯ, ಮಾದಿಗ, ದೊಂಬರ, ಹಕ್ಕಿಪಿಕ್ಕಿ,... ಹೀಗೆ ನಾನಾ ಹಿಂದುಳಿದ ವರ್ಗಗಳ ಹುಡುಗ/ಹುಡುಗಿಯರು ಪತ್ರಿಕೋದ್ಯಮದಲ್ಲಿ ಎಲ್ಲಾದರೂ ಸಿಕ್ತಾರ?

ಯಾರಾದರೂ ಈ ಕುರಿತು ಒಂದು ಅಧ್ಯಯನ ನಡೆಸಿದ್ದಾರಾ?

ಇಂಥ ಪ್ರಶ್ನೆಗಳನ್ನು ಎತ್ತಿದ ತಕ್ಷಣ ಮೀಡಿಯಾಗಳಲ್ಲೂ ಜಾತಿ ಲೆಕ್ಕಾಚಾರನಾ? ಎಂದು ಟೀಕಿಸುವವರು ಇದ್ದೇ ಇರುತ್ತಾರೆ. ಹೀಗೆ ಹೇಳುವವರು ಒಳಗಿಂದೊಳಗೆ ಮಹಾನ್ ಜಾತಿವಾದಿಯಾಗಿರುತ್ತಾರೆ. ಅರಮನೆ ಮೈದಾನದಲ್ಲಿ ನಡೆಯುವ ಗಾಯತ್ರಿ ಸಹಸ್ರನಾಮ ಉತ್ಸವಕ್ಕೆ ನಮ್ಮ ಮಾಧ್ಯಮಗಳಲ್ಲಿ ಸಿಕ್ಕುವ ಪ್ರಚಾರ ಎತ್ತಿನ ಹಬ್ಬಕ್ಕೋ, ಮಾರಮ್ಮನ ಜಾತ್ರೆಗೋ ಯಾಕೆ ಸಿಕ್ಕುವುದಿಲ್ಲ? ಈ ಬಗ್ಗೆ ಯಾರಾದರೂ ಗಂಭೀರವಾಗಿ ಚಿಂತಿಸಿದ್ದಾರೆಯೇ?

ರಾಜ್ಯದ ಸಮಸ್ತರನ್ನು ಪ್ರತಿನಿಧಿಸಬೇಕಿರುವ ಪತ್ರಿಕೆ, ಮಾಧ್ಯಮಗಳು ಕೆಲವೇ ಕೆಲವು ಜಾತಿಗಳ ಸ್ವತ್ತಾಗಿರುವುದು ಅಪಾಯಕಾರಿ. ಜಾತಿ ಈ ದೇಶದಿಂದ ತೊಲಗಬೇಕು ಎಂಬುದು ಆದರ್ಶ, ಜಾತಿ ಇದೆ ಎಂಬುದು ಸತ್ಯ ಮತ್ತು ವಾಸ್ತವ. ಪ್ರತಿ ಜಾತಿಗೂ ಒಂದು ಭಿನ್ನ ಸಾಮಾಜಿಕ ಹಿನ್ನೆಲೆ ಇದೆ. ಮಾಧ್ಯಮ ಕೂಡಾ ಎಲ್ಲರನ್ನೂ ಪ್ರತಿನಿಧಿಸುವಂತಾದಾಗ ಮಾತ್ರ ಅದು ನಿಜ ಅರ್ಥದಲ್ಲಿ ಸಮೂಹ ಮಾಧ್ಯಮ.

ಈಗ ಮಾಧ್ಯಮ ರಂಗದಲ್ಲಿ ಅವಕಾಶ ಗಿಟ್ಟಿಸಿರುವವರು ಅನರ್ಹರು ಎಂಬ ಅಭಿಪ್ರಾಯ ನಮ್ಮದಲ್ಲ. ಆದರೆ ಇತರ ಸಮುದಾಯಗಳ ಅರ್ಹರನ್ನು ಹುಡುಕಿ ತಂದು ಅವಕಾಶ ನೀಡದೇ ಹೋದಲ್ಲಿ ಸಂವಿಧಾನದ ನಾಲ್ಕನೇ ಅಂಗ ಎನಿಸಿಕೊಳ್ಳುವ ಮಾಧ್ಯಮ ರಂಗ ಹೆಚ್ಚು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಕಾರ್ಯನಿರ್ವಹಿಸುವುದು ಅಸಾಧ್ಯ.

ಈ ಬಗ್ಗೆ ಹೆಚ್ಚು ಆಲೋಚನೆಗೆ ಹಚ್ಚುವ ಲೇಖನವೊಂದನ್ನು ಭಾರತದ ಪ್ರತಿಭಾವಂತ ಪರ್ತಕರ್ತ ಸಿದ್ಧಾರ್ಥ ವರದರಾಜನ್ ಈಗ್ಗೆ ಐದು ವರ್ಷಗಳ ಹಿಂದೆ ದಿ ಹಿಂದೂ ಪತ್ರಿಕೆಯಲ್ಲಿ ಬರೆದಿದ್ದರು. ಈ ಲೇಖನ ಇಂದಿನ ಮಾಧ್ಯಮರಂಗ ನಿರ್ವಹಿಸಬೇಕಿರುವ ಜವಾಬ್ದಾರಿಯನ್ನು ಸೂಕ್ಷ್ಮವಾಗಿ ತಿಳಿಸುತ್ತದೆ. ವರದರಾಜನ್ ಸದ್ಯ ದಿ ಹಿಂದೂ ಪತ್ರಿಕೆಯ ದೆಹಲಿ ಬ್ಯೂರೋ ಮುಖ್ಯಸ್ಥ. ಈ ಹಿಂದೆ ಇವರ ಸ್ಥಾನದಲ್ಲಿದ್ದ ಹರೀಶ್ ಖರೆ ಈಗ ಪ್ರಧಾನ ಮಂತ್ರಿಯವರ ಮಾಧ್ಯಮ ಸಲಹೆಗಾರರು. ವರದರಾಜನ್ ಹಿಂದೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಸಂಪಾದಕೀಯಗಳನ್ನು ಬರೆಯುತ್ತಿದ್ದರು. ಅವರ ಆಸಕ್ತಿಯ ಕ್ಷೇತ್ರ ಹಲವು - ಮುಖ್ಯವಾದದ್ದು ವಿದೇಶಾಂಗ ವ್ಯವಹಾರ.

ವರದರಾಜನ್ ಅವರದೊಂದು ಬ್ಲಾಗ್ ಕೂಡ ಇದೆ. ಅವರು ವಿದೇಶದಲ್ಲಿ ಕಲಿತವರು ಮತ್ತು ಕಲಿಸಿದವರು. ಭಾರತದ ಬೇರುಗಳನ್ನು ಚೆನ್ನಾಗಿ ಬಲ್ಲವರು. ಇವರ ಸಹೋದರ ಟುಂಕು ವರದರಾಜನ್ ಅಮೆರಿಕಾ ಮೂಲದ ನ್ಯೂಸ್ ವೀಕ್ ಪತ್ರಿಕೆ ಅಂತಾರಾಷ್ಟ್ರೀಯ ಸಂಪಾದಕ. ಒಮ್ಮೆ ವರದರಾಜನ್ ಅವರ ಬ್ಲಾಗ್  Reality, one bite at a timeಗೆ ಹೋಗಿ ಬನ್ನಿ.


Thursday, January 20, 2011

ಸಂಯುಕ್ತ ಕರ್ನಾಟಕ: ವಲಸಿಗರು-ಮೂಲನಿವಾಸಿಗಳು!


ಕಾಂಗ್ರೆಸ್ ಪಕ್ಷದಲ್ಲಿ ಮೂಲನಿವಾಸಿಗಳು-ವಲಸಿಗರು ಎಂಬ ಕಾಳಗ ನಿಮಗೆ ಗೊತ್ತೇ ಇದೆ. ಈ ತರಹದ ಜಗಳ ಪತ್ರಿಕಾ ಕಚೇರಿಗಳಲ್ಲೂ ಇದೆ ಎಂದರೆ ನೀವು ನಂಬಬೇಕು. ಸಂಯುಕ್ತ ಕರ್ನಾಟಕದಲ್ಲಿ ಈ ಯುದ್ಧ ಜಾರಿಯಲ್ಲಿದೆ.

ಲೇಟೆಸ್ಟ್ ಸುದ್ದಿ ಏನೆಂದರೆ ಹಿರಿಯ ಪತ್ರಕರ್ತೆ ಸಾವಿತ್ರಿ ಸಂಯುಕ್ತ ಕರ್ನಾಟಕ ತೊರೆದಿದ್ದಾರೆ. ಹಲವು ವರ್ಷಗಳಿಂದ ಅವರು ಸಂಕದಲ್ಲಿದ್ದರು. ವೃತ್ತಿ ಜೀವನದಲ್ಲಿ ಒಳ್ಳೆಯ ಹೆಸರು ಮಾಡಿದವರು ಸಾವಿತ್ರಿ.  ಪತ್ರಿಕೆ ಬಿಟ್ಟು ಹೋಗುವುದಕ್ಕೆ ಒಳಗಿನ ಜಗಳಗಳು, ಮನಸ್ತಾಪಗಳೇ ಕಾರಣವಾದವೇ?

ಇದೆಲ್ಲ ಶುರುವಾಗಿದ್ದು ಸಂಕವನ್ನು ಹೊಸ ವಿನ್ಯಾಸದಲ್ಲಿ ರೀಲಾಂಚ್ ಮಾಡಲು ಅದರ ಸಂಪಾದಕ ರಾಜನ್ ಪ್ರಯತ್ನಿಸಲು ಆರಂಭಿಸಿದಾಗ. ಎಲ್ಲ ಪತ್ರಿಕೆಗಳು, ಅದರಲ್ಲೂ ವಿಶೇಷವಾಗಿ ಹೊಸದಿಗಂತದಂಥ ಪತ್ರಿಕೆಯೇ ಹೊಸ ವಿನ್ಯಾಸದೊಂದಿಗೆ ಮೂಡಿಬರುತ್ತಿರುವಾಗ ಸಂಕಗೂ ಒಂದು ರೂಪವನ್ನು ಕೊಡಲು ರಾಜನ್ ಯತ್ನಿಸಿದರು. ಇದು ಹಳಬರನ್ನು ಕಟ್ಟಿಕೊಂಡು ಹೂಡುವ ಆಟವಲ್ಲ ಎಂಬುದು ಅವರಿಗೂ ಗೊತ್ತಿತ್ತು. ಹೀಗಾಗಿ ಒಂದಷ್ಟು ಹೊಸಬರು ಬಂದರು. ಶುರುವಾಯ್ತು ಕದನ.

ಈ ನಡುವೆ ವಾರಪತ್ರಿಕೆಯೊಂದರಲ್ಲಿ ಸಂಕದ ಕೆಲವು ಅವ್ಯವಹಾರಗಳ ಕುರಿತು ವರದಿಯೂ ಬಂತು. ಮಾಹಿತಿ ಕೊಟ್ಟವರು ಒಳಗಿನವರೇ ಎಂಬ ಅಂಶ ಬಯಲಾಯ್ತು. ನಂತರ ಹಳಬರು ಒಂದು ಸಿಗ್ನೇಚರ್ ಕ್ಯಾಂಪೇನ್ ನಡೆಸಿದರು. ಕಾರ್ಯದರ್ಶಿ (ನಾರಾಯಣಮೂರ್ತಿ) ಹಾಗು ಸಂಪಾದಕರನ್ನು ಬದಲಾಯಿಸಬೇಕು ಎಂಬುದು ಅವರ ಬೇಡಿಕೆ. ಸಾಕಷ್ಟು ಸಹಿಗಳು ಸಂಗ್ರಹಗೊಂಡವು. ಲೋಕಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿಯವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಆದರೆ ಇದರಿಂದ ಯಾವುದೇ ಪ್ರಯೋಜನವೂ ಆಗಲಿಲ್ಲ.

ಇದೆಲ್ಲವೂ ಸಂಕದಲ್ಲಿ ಆಂತರಿಕ ಸಂಘರ್ಷವನ್ನು ಹುಟ್ಟುಹಾಕಿತ್ತು. ಪತ್ರಿಕೆಗೆ ಹೊಸ ರೂಪ ಕೊಡಲು ರಾಜನ್ ಹೆಣಗಾಡಿದರೂ, ಹಲವರ ಅಸಹಕಾರದಿಂದಾಗಿ ಅದು ಹಳೇ ಮುದುಕಿಗೆ ಸೀರೆ ಉಡಿಸಿದಂತಾಯ್ತು, ಅಷ್ಟೆ.

ಇನ್ನು ತಮ್ಮ ವಿರುದ್ಧ ದೂರು ಕೊಟ್ಟವರ ವಿರುದ್ಧ ಕಾರ್ಯದರ್ಶಿಗಳು ರಾಂಗಾಗಿದ್ದರು. ಕೆಲವು ಬದಲಾವಣೆಗಳೂ ಆದವು. ಹಳಬರ ಪೈಕಿ ಜೋಷಿಯವರನ್ನು ಮಂಗಳೂರಿಗೆ ವರ್ಗಾಯಿಸಲಾಯಿತು. ನಂತರ ಅಲ್ಲಿಂದ ದಾವಣಗೆರೆಗೆ ಕಳುಹಿಸಲಾಯಿತು. ವರದಿಗಾರ್ತಿ ಭುವನೇಶ್ವರಿಯನ್ನು ಸಿಂಧೂರ ಸಪ್ಲಿಮೆಂಟ್‌ಗೆ ಹಾಕಲಾಯಿತು. ಆಕೆ ಬೇಸರದಿಂದ ರಾಜೀನಾಮೆ ಕೊಟ್ಟು ಹೋದರು. ಸಿಂಧೂರ, ಸಿನಿಮಾ ಸಪ್ಲಿಮೆಂಟುಗಳಲ್ಲಿದ್ದ ಸಾವಿತ್ರಿಯವರಿಗೆ ಕೃಷಿ ಪುರವಣಿಯ ಜವಾಬ್ದಾರಿ ಹೊರಿಸಲಾಯಿತು. ಈಗ ಸಾವಿತ್ರಿ ಕೂಡ ಪತ್ರಿಕೆ ತೊರೆದಿದ್ದಾರೆ.

ಹಳಬರ ಮತ್ತು ಹೊಸಬರ ನಡುವೆ ಕಂದಕ ಸೃಷ್ಟಿ ಮಾಡಿದ್ದೀರಿ ಎಂದು ಆಗಾಗ ಎಡಿಟೋರಿಯಲ್ ಮೀಟಿಂಗುಗಳಲ್ಲಿ ಆರ್ಭಟಿಸುತ್ತಿದ್ದ ಮತ್ತೊಬ್ಬ ವರದಿಗಾರರನ್ನು ಬೇರೊಂದು ಜಿಲ್ಲೆಗೆ ಸಾಗಹಾಕುವ ಯತ್ನಗಳೂ ನಡೆದಿವೆ.

ಒಟ್ಟಿನಲ್ಲಿ ಸಂಕದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನಂತೂ ಈ ಬೆಳವಣಿಗೆಗಳು ಹೇಳುತ್ತಿವೆ.

*******

ಉದಯವಾಣಿ ಬೆಂಗಳೂರು ಆವೃತ್ತಿಯ ಸರ್ವ ಸಿಬ್ಬಂದಿ ಇನ್ನು ಮುಂದೆ ರಜೆ ಬೇಕೆಂದರೆ ಸಂಪಾದಕ ತಿಮ್ಮಪ್ಪ ಭಟ್ಟರನ್ನೇ ಕೇಳಿ ಪಡೆಯಬೇಕು. ಹೀಗಂತ ಒಂದು ಆದೇಶವನ್ನು ಎರಡು ದಿನಗಳ ಕೆಳಗೆ ನೋಟಿಸ್ ಬೋರ್ಡ್‌ಗೆ ಅಂಟಿಸಲಾಗಿದೆ. ಅಲ್ಲಿಗೆ ಡಿವಿಜನಲ್ ಮ್ಯಾನೇಜರ್ ಇನ್ನು ಮುಂದೆ ರಜೆ ಕೊಡುವ ಹಾಗಿಲ್ಲ. ಸದ್ಯಕ್ಕೆ ಭಟ್ಟರಿಗೆ ಒಂದು ಕಿರುಕುಳ ತಪ್ಪಿದಂತಾಗಿದೆ. ಸಿಬ್ಬಂದಿ ಇನ್ನು ಮುಂದೆ ಹದ್ದುಬಸ್ತಿನಲ್ಲಿ ಇರುವ ಸಾಧ್ಯತೆಯೂ ಇದೆ.

ಜನವರಿ ೧೧ರಂದು ಸಂಪಾದಕೀಯದಲ್ಲಿ ಬರೆದದ್ದನ್ನು ನೆನಪಿಸಿಕೊಳ್ಳಿ:
ಮೃದು ಸ್ವಭಾವದ ತಿಮ್ಮಪ್ಪ ಭಟ್ಟರಿಗೆ ಉದಯವಾಣಿಯಲ್ಲಿ ಸಂಪಾದಕರಿಗೆ ನೀಡುವ ಪೂರ್ಣ ಅಧಿಕಾರವನ್ನು ಕೊಟ್ಟೇ ಇರಲಿಲ್ಲ. ಎಲ್ಲವೂ ಡಿವಿಜಿಜನಲ್ ಮ್ಯಾನೇಜರ್ ಒಬ್ಬನ ಕೈಯಲ್ಲೇ ಇತ್ತು. ಸಂಪಾದಕೀಯ ವಿಭಾಗ ಹೊರತುಪಡಿಸಿ ಉಳಿದ ವಿಭಾಗಗಳ ಸಿಬ್ಬಂದಿಗೆ ರಜೆ ನೀಡುವ, ನಿರಾಕರಿಸುವ ಅಧಿಕಾರವನ್ನೂ ಭಟ್ಟರಿಗೆ ನೀಡಲಾಗಿರಲಿಲ್ಲ. ಹೀಗಾಗಿ ಯಾವುದೂ ಅವರ ಕಂಟ್ರೋಲ್‌ನಲ್ಲೇ ಇರಲಿಲ್ಲ. ಡಿಟಿಪಿ ಆಪರೇಟರ್‌ಗಳು ತಿಂಗಳುಗಟ್ಟಲೆ ರಜೆ ಹಾಕಿದರೂ ಕೇಳುವವರು ಇರಲಿಲ್ಲ. ಇದರಿಂದ ಭಟ್ಟರು ಮಾನಸಿಕವಾಗಿ ನೊಂದಿದ್ದರು ಎಂಬ ಮಾತುಗಳೂ ಇವೆ. 

ಕೊನೇ ಕುಟುಕು:
ಉದಯವಾಣಿಯಲ್ಲಿ ಆದ ಈ ಸಣ್ಣ ಬದಲಾವಣೆಗೆ ಸಂಪಾದಕೀಯ ಕಾರಣ ಎಂದು ನಾವು ಹೇಳುವುದಿಲ್ಲ. ಹಾಗೇನಾದರೂ ಹೇಳಿದರೆ ಸ್ತ್ರೀಲಿಂಗದ ಹೆಸರಲ್ಲಿ ಬ್ಲಾಗ್ ನಡೆಸುವ ಅಂತರ್ಲಿಂಗಿಯೊಂದು ವಿಕಾರವಾಗಿ ಚೀರಾಡಿ ನನ್ನ ವಿಮರ್ಶೆಯ ಕಥೆ ಗೋವಿಂದಾ, ಅಕ್ಕೋ, ಅಣ್ಣೋ, ಹಿಡಿರೀ-ತದುಕ್ರೀ ಎಂದು ಊಳಿಡುವ ಸಾಧ್ಯತೆ ಇದೆ. ಆ ಪ್ರಾಣಿಗೆ ಕಷ್ಟ ಕೊಡುವುದು ನಮಗೆ ಇಷ್ಟವಿಲ್ಲ.

Wednesday, January 19, 2011

ಪತ್ರಿಕಾ ಸ್ವಾತಂತ್ರ್ಯವೆಂದರೆ ಕೊಲ್ಲಲು ಪರವಾನಗಿ ಅಲ್ಲ!

ವಿಜಯ ಕರ್ನಾಟಕದ ಮಾಜಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟರಿಗೆ ಹಿಂದೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಶಂಕರ ಮಹದೇವ ಬಿದರಿ ಸಹ ಖಾರವಾದ ಪತ್ರವೊಂದನ್ನು ಬರೆದಿದ್ದರು. ಈ ಪತ್ರವೂ ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡಿರಲಿಲ್ಲ. ಉತ್ಸಾಹಿ ಬ್ಲಾಗರ್ ಅರಕಲಗೂಡು ಜಯಕುಮಾರ್ (ಇವರು ಅಭಿವ್ಯಕ್ತಿ ಎಂಬ ಬ್ಲಾಗ್ ನಡೆಸುತ್ತಾರೆ.) ಈ ಬಗ್ಗೆ ೨೦೦೯ರ ನವೆಂಬರ್‌ನಲ್ಲೇ ಬೆಳಕು ಚೆಲ್ಲಿದ್ದರು. ಅರಕಲಗೂಡು ಜಯಕುಮಾರ್ ಬರೆದ ಲೇಖನ: ಪೊಲೀಸರ ರಕ್ಷಣೆಯಲ್ಲಿ ಪತ್ರಕರ್ತ ಇರಬೇಕಾ?

ಸಂಪಾದಕೀಯದ ಓದುಗರಿಗಾಗಿ ಶಂಕರ ಬಿದರಿಯವರ ಪತ್ರದ ಪೂರ್ಣಪಾಠವನ್ನು ಪ್ರಕಟಿಸುತ್ತಿದ್ದೇವೆ.


                                                                                                                                  
                                                                                         ಬೆಂಗಳೂರು,
                                                                                          ದಿನಾಂಕ ೧೭-೧೧-೨೦೦೯.
ಗೆ,
ಸನ್ಮಾನ್ಯ ಶ್ರೀ ವಿಶ್ವೇಶ್ವರ ಭಟ್ಟರು,
ಸಂಪಾದಕರು,
ವಿಜಯ ಕರ್ನಾಟಕ ದಿನಪತ್ರಿಕೆ,
ಬೆಂಗಳೂರು.

ಮಾನ್ಯರೆ,

೧. ತಮ್ಮ ಸಂಪಾದಕತ್ವದಲ್ಲಿ ಹೊರ ಬರುತ್ತಿರುವ ವಿಜಯ ಕರ್ನಾಟಕ ಪತ್ರಿಕೆಯ ದಿನಾಂಕ ೧೭-೧೧-೨೦೦೯ರ ಬೆಂಗಳೂರು ಆವೃತ್ತಿಯ ಪುಠ ೯ರಲ್ಲಿ ಕಾನೂನು ಎಷ್ಟಕ್ಕೆ ಬಿಕರಿಯಾಗಿತ್ತು, ಹೇಳಿ ಬಿದರಿ ಅವರೇ?  ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿರುವ ತಮ್ಮ ವರದಿಗಾರರಾದ ಶ್ರೀ ರಾಘವೇಂದ್ರ ಭಟ್ಟರ ಲೇಖನವನ್ನು ಗಮನಿಸಿದ್ದೇನೆ.

೨. ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ಸರಸ್ವತಿಪುರ ನಿವಾಸಿ ಎಂಬಿಎ ವಿದ್ಯಾರ್ಥಿನಿ ಪ್ರೇಮ ಪ್ರಕರಣ ಮತ್ತು ನಂತರ ಅವರಿಗಾದ ವಂಚನೆ ಪ್ರಸಂಗವು ನನ್ನ ಗಮನಕ್ಕೆ ದಿನಾಂಕ ೧೩-೧೧-೨೦೦೯ರಂದು ಮಧ್ಯಾಹ್ನ ಬಂದ ತಕ್ಷಣ, ಈ ಪ್ರಕರಣದಲ್ಲಿ ನ್ಯಾಯಯುತವಾದ ಮತ್ತು ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ಸೂಚನೆ ನೀಡಿದ್ದು, ಅದರ ಪ್ರಕಾರ ಕ್ರಮ ಜರುಗುವಂತೆ ನೋಡಿಕೊಂಡಿದ್ದೇನೆ.  ಈ ಬಗ್ಗೆ ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ದಿನಾಂಕ ೧೬-೧೧-೨೦೦೯ ರಂದು ನನ್ನನ್ನು ಭೇಟಿ ಮಾಡಿದ್ದು, ಅವರಿಗೆ ಕೈಗೊಂಡ ಕ್ರಮದ ಬಗ್ಗೆ ವಿವರಿಸಿದ್ದೇನೆ.  ತದ ನಂತರ, ಈ ಪ್ರಕರಣದಲ್ಲಿ ವಂಚಿತ ವಿದ್ಯಾರ್ಥಿನಿಯು ಮಾಡಿರುವ ಆರೋಪಗಳನ್ನು ಗಮನಿಸಿದ್ದೇನೆ.  ದಿನಾಂಕ ೧೪ ಮತ್ತು ೧೫ರಂದು ಸರ್ಕಾರಿ ರಜೆ ದಿನಗಳು ಇದ್ದ ಕಾರಣದಿಂದ,  ದಿನಾಂಕ ೧೬-೧೧-೨೦೦೯ರಂದು ನಾನು ನಮ್ಮ ಕಾರ್ಯಾಲಯ ಪ್ರಾರಂಭವಾದ ತಕ್ಷಣ ವಂಚಿತ ಹೆಣ್ಣು ಮಗಳು ಮಾಡಿರುವ ಆರೋಪಗಳ ವಿಚಾರಣೆಗೆ ಆದೇಶ ನೀಡಿದ್ದೇನೆ.

೩. ಈ ಪ್ರಕರಣದಲ್ಲಿ ವಂಚಿತ ಹೆಣ್ಣುಮಗಳ ಮತ್ತು ಸಾಮಾನ್ಯವಾಗಿ ಹೆಣ್ಣುಮಕ್ಕಳ ಕುಂದು-ಕೊರತೆಗಳ ಬಗ್ಗೆ ನನಗೆ ಇತರೆ ಯಾವುದೇ ವ್ಯಕ್ತಿ ಮತ್ತು ಸಂಘಟನೆಗಳಿಗೆ ಇರುವಷ್ಟೇ ಕಾಳಜಿ ಇದೆ ಮತ್ತು ಕಾನೂನು ಬದ್ಧವಾಗಿ ಇಂತಹ ಕುಂದು-ಕೊರತೆಗಳನ್ನು ನಾನು ಸತತವಾಗಿ ನಿರ್ವಹಿಸುತ್ತಿದ್ದೇನೆ.  ಈ ಹಿಂದೆ ಕೆಲವು ಭೂಮಿಗೆ ಸಂಬಂಧಪಟ್ಟ ಪ್ರಕರಣಗಳಲ್ಲಿ, ಪೊಲೀಸರು ಕಾನೂನುಬಾಹಿರವಾಗಿ ನಡೆದುಕೊಂಡಿರಬಹುದು.  ಆ ಕಾರಣದಿಂದ ಈ ಪ್ರಕರಣದಲ್ಲಿ ಪೊಲೀಸರು ಕಾನೂನು ಬಾಹಿರವಾಗಿ ಕ್ರಮ ಕೈಗೊಳ್ಳುವುದು ಸೂಕ್ತವಲ್ಲ ಎಂದು ನಾನು ನಂಬಿದ್ದೇನೆ.  ಈ ಪ್ರಕರಣದಲ್ಲಿ ವಂಚಿತ ಹೆಣ್ಣುಮಗಳ ಬಗ್ಗೆ  ನನಗೆ ಅಪಾರವಾದಂತ ಕಾಳಜಿ ಇದ್ದು, ಅವಳಿಗೆ ಆಗಿರುವ ಅನ್ಯಾಯದ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮತ್ತು ಈ ವಿಷಯದಲ್ಲಿ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ವರ್ಗದವರು ತಪ್ಪು-ತಡೆ ಎಸಗಿದ್ದರೆ ಕಠಿಣ ಕ್ರಮ ಕೈಗೊಳ್ಳಲು ನಾನು ಕಟಿಬದ್ದನಾಗಿದ್ದೇನೆ.  ನಮ್ಮ ಪ್ರತಿಕ್ರಿಯೆ ಮತ್ತು ನಾವು ಕೈಗೊಂಡಿರುವ ಕ್ರಮವು ಸಾರ್ವಜನಿಕರಿಗೆ ಮತ್ತು ಎಲ್ಲಾ ಮಾಧ್ಯಮದವರಿಗೆ ಗೊತ್ತಿದ್ದರೂ ಸಹಿತ,  ತಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿರುವ ಶ್ರೀ ರಾಘವೇಂದ್ರ ಭಟ್ಟರ ಲೇಖನದಲ್ಲಿ ವಿಷಯವನ್ನು ತಿರುಚಿ ನಮ್ಮ ಇಲಾಖೆಯ ಮತ್ತು ವೈಯಕ್ತಿಕವಾಗಿ ನನ್ನ ವರ್ಚಸ್ಸಿಗೆ ಧಕ್ಕೆ ಬರುವಂತಹ ಲೇಖನವನ್ನು ಪ್ರಕಟಿಸಲಾಗಿದೆ.
 
: ಪುಟ: ೨ :
೪. ಕಳೆದ ಕೆಲವು ತಿಂಗಳಿಂದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವೃತ್ತಿಯಲ್ಲಿ  ನಾನು ಕೈಗೊಂಡಿರುವ ಕ್ರಮ ಮತ್ತು ಬೆಂಗಳೂರು ಪೊಲೀಸ್ ಇಲಾಖೆಯ ಕಾರ್ಯನಿರ್ವಹಣೆ ಕುರಿತು ಹಲವಾರು ಪ್ರತಿಕೂಲ ವರದಿಗಳು ಪ್ರಕಟವಾಗಿರುತ್ತವೆ.  ಈ ಲೇಖನವೂ ಕೂಡಾ ಇದೇ ಸಾಲಿನಲ್ಲಿ ಇದೆ.  ನೀವು ದಿನಾಂಕ ೩೦-೦೬-೨೦೦೯ ರಂದು ತಮ್ಮ ಅಂಗರಕ್ಷಕರಾಗಿ ಪೊಲೀಸರನ್ನು ನಿಯುಕ್ತಗೊಳಿಸಲು ಅರ್ಜಿ ಸಲ್ಲಿಸಿರುವುದು ಸರಿಯಷ್ಠೆ.   ಈ ಬಗ್ಗೆ ಸೂಕ್ತ ವಿಚಾರಣೆ ಮಾಡಿಸಿ; ವಿಚಾರಣಾ ವರದಿಯನ್ನು ಆಧರಿಸಿ ನಿಮಗೆ ಪೊಲೀಸ್ ಅಂಗರಕ್ಷಕರನ್ನು ನಿಯಮಿಸುವುದು ಸರಿಯಲ್ಲ ಎಂಬ ನಿರ್ಧಾರಕ್ಕೆ ನಾನು ಬಂದಿರುವ ವಿಷಯ ನಿಮಗೆ ಗೊತ್ತಿದೆ.  ಈ ಬಗ್ಗೆ ತಮ್ಮ ವರದಿಗಾರರಾದ ಶ್ರೀ ರಾಘವೇಂದ್ರ ಭಟ್ಟರು ಮತ್ತು ಹಲವು ಉನ್ನತ ಮೂಲಗಳಿಂದ ಸಾಕಷ್ಟು ಒತ್ತಡ ಬಂದಿದ್ದರೂ, ನಾನು ನನ್ನ ನಿರ್ಧಾರಕ್ಕೆ ಬದ್ದನಾಗಿದ್ದೇನೆ.  ಈ ಕಾರಣದಿಂದಲೇ, ಕೆಲವು ತಿಂಗಳಿಂದ ನಾನು ಕೈಗೊಂಡ ವೃತ್ತಿಪರ ಕ್ರಮಗಳ ಬಗ್ಗೆ ಮತ್ತು ಬೆಂಗಳೂರು ಪೊಲೀಸ್ ಕಾರ್ಯನಿರ್ವಹಣೆಯ ಹಲವಾರು ಪ್ರತಿಕೂಲ ವರದಿಗಳು ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿವೆ ಮತ್ತು ಈ ಲೇಖನವು ಸಹಿತ ಅದೇ ಕಾರಣದಿಂದ ಪ್ರಕಟವಾಗಿದೆ ಎಂದು ನಾನು ನಂಬಲು ಬಲವಾದ ಕಾರಣಗಳಿವೆ.  ಆದರೂ ಸಹಿತ ಪತ್ರಿಕಾ ಧರ್ಮವನ್ನು ತಿಳಿದಿರುವ ತಾವು, ಈ ತರಹದ ಕೃತ್ಯವನ್ನು ಎಸುಗುವುದಿಲ್ಲ ಎಂದು ನಂಬಲು ಪ್ರಯತ್ನಿಸುತ್ತಿದ್ದೇನೆ.

೫. ಈ ನನ್ನ ಪ್ರತಿಕ್ರಿಯೆಯಿಂದ ತಮ್ಮ ಪತ್ರಿಕೆಯಲ್ಲಿ ತಾವು ಸಾಕಷ್ಟು ವಿವಾದಗಳನ್ನು ಸೃಷ್ಟಿಸುವ ಮತ್ತು ಪ್ರತಿಕೂಲ ವರದಿಗಳನ್ನು ಬರೆಯುವ ಸಾಧ್ಯತೆ ಇದೆ ಎಂಬ ಸಂಪೂರ್ಣ ಅರಿವು ನನಗೆ ಇದೆ. ಎಂತಹದೇ ಪ್ರಬಲವಾದ ಪತ್ರಿಕೆಯಾದರೂ ಸಹಿತ, ಎಷ್ಟೇ ಪ್ರತಿಕೂಲ ವರದಿಗಳನ್ನು ಪ್ರಕಟಿಸಿದರೂ,  ರಾಜ್ಯದ ಜನತೆಯು ಸಾಕಷ್ಟು ವಿವೇಚನೆಯಿಂದ ಮತ್ತು ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸತ್ಯವನ್ನು ತಿಳಿಯಲು ಶಕ್ತರಾಗಿದ್ದಾರೆ ಎಂದು ನಾನು ನಂಬಿದ್ದೇನೆ.
  
೬. ಬೆಂಗಳೂರು ನಗರ ಕೆಲವು ನಿಶ್ಚಿತ ವರ್ಗದವರಿಗೆ ಸುರಕ್ಷಿತ ನಗರವಾಗಿದೆ ಎಂದು ಬರೆದಿದ್ದೀರಿ.  ತಮಗೂ ಸಹಿತ ಬೆಂಗಳೂರು ಸುರಕ್ಷಿತ ನಗರವಾಗಿದೆ ಎಂಬುದನ್ನು ಮರೆಯದಿರಿ.

೭. ಹಲವಾರು ಕಾರಣಗಳಿಂದಾಗಿ ವಿಜಯ ಕರ್ನಾಟಕ ದಿನಪತ್ರಿಕೆಯು ರಾಜ್ಯದ ಒಂದು ಪ್ರಮುಖ ದಿನಪತ್ರಿಕೆಯಾಗಿ ಹೊರ ಹೊಮ್ಮಿದೆ.  ಈಗ ಅದು ಶತ-ಶತಮಾನಗಳಿಂದ ಪತ್ರಿಕಾ ಧರ್ಮವನ್ನು ಎತ್ತಿ ಹಿಡಿದಿರುವ ಟೈಮ್ಸ್ ಆಫ್ ಇಂಡಿಯಾ ಸಮೂಹಕ್ಕೆ ಸೇರಿದೆ.  ಪ್ರತಿಷ್ಠಿತ ಮತ್ತು ಗೌರವಾನ್ವಿತ ಪತ್ರಿಕಾ ಸಮೂಹವಾದ  ಟೈಮ್ಸ್ ಆಫ್ ಇಂಡಿಯಾ ಸಮೂಹಕ್ಕೆ ಸೇರಿರುವ ವಿಜಯ ಕರ್ನಾಟಕ ಪತ್ರಿಕೆ ಪತ್ರಿಕಾ ಧರ್ಮಕ್ಕೆ ಅನುಗುಣವಾಗಿ ನಡೆಯಲಿ ಎಂದು ಆಶಿಸುತ್ತೇನೆ.

೮. ಪ್ರತಿಕಾ ಧರ್ಮಕ್ಕೆ ಅನುಗುಣವಾಗಿ, ಸದುದ್ದೇಶದ ರಚನಾತ್ಮಕ ಟೀಕೆಗಳನ್ನು ಸದಾ ಸ್ವಾಗತಿಸುತ್ತೇನೆ.

೯. ಆದರೆ, ವೈಯಕ್ತಿಕವಾದ ರಾಗದ್ವೇಷಗಳಿಂದ ಯಾವುದೇ ಪ್ರತಿಕೂಲ ಲೇಖನವಾಗಲೀ, ವರದಿಗಳಾಗಲೀ ತಮ್ಮ ಗೌರವಾನ್ವಿತ ಪತ್ರಿಕೆಯಲ್ಲಿ ಮೂಡದಿರಲೆಂದು ಆಶಿಸುತ್ತೇನೆ.
    
ಇಂತಿ ಆದರಗಳೊಂದಿಗೆ,
ನಿಮ್ಮ ವಿಶ್ವಾಸಿ,

ಸಹಿ/-
(ಶಂಕರ್ ಬಿದರಿ)
ಪೊಲೀಸ್ ಆಯುಕ್ತರು,
ಬೆಂಗಳೂರು ನಗರ.

ಅಜಯ್ ಕುಮಾರ್ ಸಿಂಗ್ ಅವರ ಪತ್ರಕ್ಕೂ ಶಂಕರ್ ಬಿದರಿಯವರ ಪತ್ರಕ್ಕೂ ಅಂಥ ವ್ಯತ್ಯಾಸವೇನೂ ಇಲ್ಲ. ಈ ಎರಡೂ ಪತ್ರಗಳನ್ನು ಓದಿದ ನಂತರ ತುಂಬಾ ಕಾಡುವ ಪ್ರಶ್ನೆ ಪತ್ರಿಕಾ ಸ್ವಾತಂತ್ರ್ಯ ಯಾವುದಕ್ಕೆ ಬಳಸಬೇಕು? ಯಾವುದಕ್ಕೆ ಬಳಸಬಾರದು? ಅಜಯ ಕುಮಾರ ಸಿಂಗ್ ಹೇಳಿದ್ದು ನಿಜ: ಪತ್ರಿಕಾ ಸ್ವಾತಂತ್ರ್ಯವೆಂದರೆ ಕೊಲ್ಲಲು ಪರವಾನಗಿ ಅಲ್ಲ.

ಶ್ರಾದ್ಧವೇನೋ ಮುಗಿದಿದೆ, ಪೋಸ್ಟ್‌ಮಾರ್ಟಂ ಮುಂದುವರೆಯುತ್ತದೆ....

ಇದು ನಿಮ್ಮ ಧೈರ್ಯ ಮತ್ತು ಮನಃಸಾಕ್ಷಿಯ ಕೊರತೆಯನ್ನು ಬಹಿರಂಗಗೊಳಿಸುತ್ತದೆ.  ಸತ್ಯ, ನ್ಯಾಯ ಮತ್ತು ನ್ಯಾಯಯುತ ಗುಣದ ಬಗ್ಗೆ ನಿಮಗೆ ಹೊಣೆಗಾರಿಕೆ ಇರುವುದಿಲ್ಲ. ಆದರೆ ಪ್ರತಿಯೊಬ್ಬರ ಪ್ರಾಮಾಣಿಕತೆ ಮತ್ತು ನಿಷ್ಠೆ ಬಗ್ಗೆ ಟೀಕೆ ಮಾಡುವುದು ನಿಮ್ಮ ಆದ್ಯ ಕರ್ತವ್ಯವೆಂದು ತಿಳಿದಿರುತ್ತೀರಿ.

ಹೀಗೆ ನಿಷ್ಠುರ ಮಾತುಗಳಲ್ಲಿ ಅತ್ಯಧಿಕ ಪ್ರಸಾರದ ಪತ್ರಿಕೆಯ, ಸ್ಟಾರ್ ವ್ಯಾಲ್ಯೂ ಇರುವ ಸಂಪಾದಕರನ್ನು ತರಾಟೆಗೆ ತೆಗೆದುಕೊಂಡವರು ಡಿಜಿಪಿ ಅಜಯ ಕುಮಾರ್ ಸಿಂಗ್. ಸ್ವತಃ ಸಾಹಿತಿಯೂ ಆಗಿರುವ ಕವಿ ಮನಸ್ಸಿನ ಅಜಯ ಕುಮಾರ್ ಸಿಂಗ್ ನೇರವಾಗಿ ಹೀಗೆ ಹೇಳಿದ್ದು ಆ ಪತ್ರಿಕೆಯಲ್ಲಿ ಪ್ರಕಟವಾಗಲೇ ಇಲ್ಲ.

ನಿಮ್ಮ ಊಹೆ ನಿಜ. ಹೀಗೆ ಡಿಜಿಪಿಯವರ ಕಟುಟೀಕೆಗೆ ಒಳಗಾದವರು ವಿಜಯ ಕರ್ನಾಟಕದ ಮಾಜಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್.

ಯಾವುದೋ ಮೂಗರ್ಜಿಯ ವಿಚಾರಣೆಗೆಂದು ಪೊಲೀಸ್ ಒಬ್ಬ ತಮ್ಮ ಬಳಿ ಬಂದಿದ್ದನ್ನು ಕಂಡು ವಿಶ್ವೇಶ್ವರ ಭಟ್ಟರು ಕೆರಳಿದ್ದು ನಿಮಗೆ ನೆನಪಿರಬಹುದು. ಈ ಕುರಿತು ಪ್ರಕಟಗೊಂಡ ವರದಿಗಳೂ ನಿಮಗೆ ಸ್ಮರಣೆಯಲ್ಲಿರಬಹುದು. ನಂತರ ಡಿಜಿಪಿ ಅಜಯ ಕುಮಾರ್ ಸಿಂಗ್ ಅವರ ಸ್ಪಷ್ಟನೆಯೊಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾಯಿತು. ಅದನ್ನೂ ನೀವು ಓದಿರುತ್ತೀರಿ. ಹೀಗೆ ಪ್ರಕಟಗೊಂಡ ಪತ್ರವನ್ನು ಹೇಗೆ ಎಡಿಟ್ ಮಾಡಲಾಗಿತ್ತೆಂದರೆ, ಅದು ಡಿಜಿಪಿಯವರು ಏನನ್ನು ಹೇಳಲು ಬಯಸಿದ್ದರೋ ಅದನ್ನು ತಿರುಚಲಾಗಿತ್ತು, ಮುಚ್ಚಿಡಲಾಗಿತ್ತು.

ಆಗ ಅಜಯ ಕುಮಾರ್ ಸಿಂಗ್ ಇನ್ನೊಂದು ಪತ್ರವನ್ನು ಬರೆದಿದ್ದರು. ಆ ಪತ್ರದ ಪೂರ್ಣ ಪಾಠ ಇಲ್ಲಿದೆ.

ಅ.ಸ.ಪತ್ರ ಸಂಖ್ಯೆ:ಪಿಎಸ್/ಡಿಜಿ&ಐಜಿಪಿ/ವಿಕ/೨೦೧೦     ೨೫.೬.೨೦೧೦

ಪ್ರೀತಿಯ ಶ್ರೀ.ವಿಶ್ವೇಶ್ವರ ಭಟ್ ರವರೆ,

ವಿಷಯ: ದಿನಾಂಕ ೧೫ ರಿಂದ ೨೦ ಜೂನ್ ವರೆಗೆ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನನ್ನ ವಿರುದ್ಧ ಆಧಾರರಹಿತ,    ಅನೀತಿಯುತ, ನ್ಯಾಯವಲ್ಲದ ಮತ್ತು ಅಸಮಂಜಸ ವರದಿಗಳು ಪ್ರಕಟವಾದ ಬಗ್ಗೆ.

ಉಲ್ಲೇಖ: ೧. ನನ್ನ ಅ.ಸ.ಪತ್ರ ಸಂಖ್ಯೆ:ಪಿಎಸ್/ಡಿಜಿ&ಐಜಿಪಿ/ವಿಕ/೨೦೧೦ -        
         ದಿನಾಂಕ ೨೧.೬.೨೦೧೦.

ಇಂದಿನ ವಿಜಯ ಕರ್ನಾಟಕ ಪತ್ರಿಕೆಯ ವಾಚಕರ ವಿಜಯ ಅಂಕಣದಲ್ಲಿ, ಉಲ್ಲೇಖ ೧
ರಲ್ಲಿನ ನನ್ನ ಪತ್ರದ ಅಪೂರ್ಣ ಆವೃತ್ತಿ ಪ್ರಕಟವಾಗಿರುವುದನ್ನು ನೋಡಿದೆ.  ಇದು ನಿಮ್ಮ ಧೈರ್ಯ
ಮತ್ತು ಮನಃಸಾಕ್ಷಿಯ ಕೊರತೆಯನ್ನು ಬಹಿರಂಗ ಗೊಳಿಸುತ್ತದೆ.  ಸತ್ಯ, ನ್ಯಾಯ ಮತ್ತು
ನ್ಯಾಯಯುತ ಗುಣದ ಬಗ್ಗೆ ನಿಮಗೆ ಹೊಣೆಗಾರಿಕೆ ಇರುವುದಿಲ್ಲ.  ಆದರೆ ಪ್ರತಿಯೊಬ್ಬರ
ಪ್ರಾಮಾಣಿಕತೆ ಮತ್ತು ನಿಷ್ಠೆ ಬಗ್ಗೆ ಟೀಕೆ ಮಾಡುವುದು ನಿಮ್ಮ ಆದ್ಯ ಕರ್ತವ್ಯವೆಂದು ತಿಳಿದಿರುತ್ತೀರಿ.
ಈಗ ನೀವು ನಾನು ಬರೆದ ಪತ್ರವನ್ನು ನನ್ನ ಹೆಸರಿನಲ್ಲಿ ಪ್ರಕಟಿಸಿದ್ದರೂ, ಆ ಪತ್ರ ನಾನು
ಬರೆದ ಪೂರ್ಣಾವೃತಿ ಪತ್ರವಾಗದೆ, ಕೆಲವು ವಾಕ್ಯಗಳನ್ನು ಬೇರೆ ಅರ್ಥ ಬರುವಂತೆ ತಿರುಚಿ ಜನರ
ಹಾದಿ ತಪ್ಪಿಸುವಂತಿದೆ.  ನೀವು ನನ್ನ ವಿರುದ್ಧ ವರದಿಗಳನ್ನು ಪತ್ರಿಕೆಯಲ್ಲಿ ಎಷ್ಟು ಪ್ರಾಮುಖ್ಯವಾಗಿ
ಪ್ರಕಟಿಸಿದ್ದಿರೊ ಆ ಪ್ರಾಮುಖ್ಯತೆ ನನ್ನ ಪತ್ರಕ್ಕೆ ಕೊಡದೆ ವಾಚಕರ ವಿಜಯ ಅಂಕಣದಲ್ಲಿ ಯಾವುದೇ
ಪ್ರತಿಕ್ರಿಯೆಯಿಲ್ಲದೆ ಪ್ರಕಟಿಸಿರುತ್ತೀರಿ.  ನೀವು ನಿಮ್ಮ ಕ್ಷಮೆ/ವಿಷಾದವನ್ನು ಸಹ ವ್ಯಕ್ತಪಡಿಸಿರುವುದಿಲ್ಲ.
ದಯವಿಟ್ಟು ನಿಮ್ಮ ಪತ್ರಿಕೆಯ ಮುಖಪುಟದಲ್ಲಿ ನಿಮ್ಮ ಕ್ಷಮೆ/ವಿಷಾದವನ್ನು ವ್ಯಕ್ತಪಡಿಸಿ, ಇಲ್ಲವಾದಲ್ಲಿ
ನನಗೆ ಬೇರೆ ಮಾರ್ಗವಿಲ್ಲದೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ.
ನಿಮ್ಮ ವಿಶ್ವಾಸಿ,
(ಅಜಯ ಕುಮಾರ ಸಿಂಹ)

ಈ ಪತ್ರ ವಿಜಯ ಕರ್ನಾಟಕದಲ್ಲಿ ಪ್ರಕಟಗೊಳ್ಳಲಿಲ್ಲ.

ಇದಕ್ಕೂ ಮುನ್ನ ಅಜಯ ಕುಮಾರ ಸಿಂಹ ಬರೆದಿದ್ದ ಇನ್ನೊಂದು ಪತ್ರವನ್ನೂ ಒಮ್ಮೆ ಓದಿ. ಇದನ್ನು ವಿಜಯ ಕರ್ನಾಟಕದಲ್ಲಿ ತಿರುಚಿ ಪ್ರಕಟಿಸಲಾಗಿತ್ತು. ಆ ಪತ್ರದ ಪೂರ್ಣ ಪಾಠ ಇಲ್ಲಿದೆ.

ಅ.ಸ.ಪತ್ರ ಸಂಖ್ಯೆ:ಪಿಎಸ್/ಡಿಜಿ&ಐಜಿಪಿ/ವಿಕ/೨೦೧೦   ೨೧.೬.೨೦೧೦

ಪ್ರೀತಿಯ ಶ್ರೀ.ವಿಶ್ವೇಶ್ವರ ಭಟ್ ರವರೆ,

ಕಳೆದ ವಾರ ನಾನು ರಜೆಯ ಮೇಲೆ ಕರ್ನಾಟಕದಿಂದ ಹೊರಗಿದ್ದೆ.   ನಿಮ್ಮ ಪತ್ರಿಕೆ
ವಿಜಯ ಕರ್ನಾಟಕದಲ್ಲ್ಲಿ ನಾನು ಅನಾಮಧೇಯ ಅರ್ಜಿಯ ಮೂಲಕ ನಿಮ್ಮ ಮೇಲೆ
ವಿಚಾರಣೆಗೆ ಆದೇಶಿಸಿದ್ದೇನೆ ಎನ್ನುವ ನೆಪದಲ್ಲಿ ನನ್ನ ಮೇಲೆ ನಿರ್ದಯವಾಗಿ ದಾಳಿ
ನಡೆಸಿದ್ದೀರೆಂದು ದೂರವಾಣಿ ಮೂಲಕ ನನಗೆ ತಿಳಿದು ಬಂತು.

ನಾನು ಕರ್ತವ್ಯಕ್ಕೆ ಹಾಜರಾದ ನಂತರ, ದಿನಾಂಕ ೧೫ ರಿಂದ ೨೦ನೇ ಜೂನ್
೨೦೧೦ ರವರೆಗೆ ನಿಮ್ಮ ಪತ್ರಿಕೆಯಲ್ಲಿ ನನ್ನ ಮೇಲೆ ಪ್ರಕಟಿಸಿರುವ ವರದಿಯನ್ನು ಓದಿ ನನಗೆ
ಅತೀವ ನೋವು ಮತ್ತು ಆಶ್ಚರ್ಯವಾಯಿತು.

ಸದರಿ ವಿಷಯದ ಬಗ್ಗೆ ಪರಿಶೀಲಿಸಿದಾಗ ಕೆಲವು ಆಡಳಿತಾತ್ಮಕ
ತಪ್ಪುಗಳಾಗಿರುವುದು ನನಗೆ ಕಂಡು ಬಂದಿದೆ.  ಆದರೆ ಸದರಿ ಅರ್ಜಿ ಯಾವುದೇ
ಹಂತದಲ್ಲಿ ನನ್ನ ಗಮನಕ್ಕೆ ಬಂದಿರುವುದಿಲ್ಲ.  ಒಂದು ವೇಳೆ ಸದರಿ ಅರ್ಜಿ ನನ್ನ ಗಮನಕ್ಕೆ
ಬಂದಿದ್ದರೆ ನಾನು ಯಾವುದೇ ವಿಚಾರಣೆಗೆ ಆದೇಶಿಸುತ್ತಿರಲಿಲ್ಲ, ಎಲ್ಲಾ ಅನಾಮಧೇಯ
ಅರ್ಜಿಗಳು ಕಸದ ಬುಟ್ಟಿಗೆ ಹಾಕಲು ಅರ್ಹವಾದವು ಎನ್ನುವುದು ಸರಿಯಲ್ಲ.  ಪೊಲೀಸ್
ಇಲಾಖೆಗೆ ಸಂಬಂಧಪಟ್ಟಂತೆ ಅನಾಮಧೇಯ ಅರ್ಜಿಗಳು, ಪತ್ರಗಳು, ದೂರವಾಣಿ
ಕರೆಗಳು,  ಈ-ಮೇಲ್‌ಗಳು  ಮಾಹಿತಿಯ  ಮೂಲಗಳು.  ಅನೇಕ ಕೊಲೆ ಪ್ರಕರಣಗಳು
ಇಂತಹ ಅನಾಮಧೇಯ ಅರ್ಜಿಗಳು ನೀಡಿದ ಮಹತ್ವದ ಮಾಹಿತಿ ಮೂಲಕ
ಪತ್ತೆಯಾಗಿರುತ್ತವೆ.  ಆದರೆ ನನ್ನ ಅಭಿಪ್ರಾಯದಲ್ಲಿ ಈ ಅರ್ಜಿಯ ಮೇಲೆ ನಮ್ಮಿಂದ
ಯಾವುದೇ ಕ್ರಮದ ಅಗತ್ಯತೆ ಕಂಡು ಬರುವುದಿಲ್ಲ,

ವೈಯಕ್ತಿಕವಾಗಿ ನನ್ನ ವಿರುದ್ಧ ನಿಮ್ಮ ನಿಂದನೆ ಸಂಪೂರ್ಣವಾಗಿ ಅನಾಮಧೇಯ
ಅರ್ಜಿಯ ಮೇಲೆ ನಾನೇ ವಿಚಾರಣೆಗೆ ಆದೇಶಿಸಿದ್ದೇನೆ ಎಂಬ ಆಧಾರ ರಹಿತ ನೆಪವೊಡ್ಡಿ
ಮಾಡಿದ್ದಾಗಿರುತ್ತದೆ.  ಕೇವಲ ಒಬ್ಬ ಪೊಲೀಸ್ ಕಾನ್ಸ್‌ಟೇಬಲ್ ವಿಚಾರಣೆಗಾಗಿ ನಿಮ್ಮ ಬಳಿ
ಬಂದಾಗ, ನಿಮಗೆ ಬಂದಿರಬಹುದಾದ ಕೋಪ, ನಿಮ್ಮ ಮರ್ಯಾದೆ ಮತ್ತು ಸ್ವಪ್ರತಿಷ್ಠೆಗೆ ಧಕ್ಕೆ
ಉಂಟಾಗಿದೆ ಎಂಬ ಅನಿಸಿಕೆಯಿಂದಾಗಿ ದಿನಾಂಕ ೧೫.೬.೨೦೧೦ ರ ಪತ್ರಿಕೆಯಲ್ಲಿ ಪ್ರಕಟವಾದ
ವರದಿಯನ್ನು ಅರ್ಥಮಾಡಿಕೊಳ್ಳಬಹುದು.  ಆದಾಗ್ಯೂ ನೀವು ಈ ಬಗ್ಗೆ ಸ್ಪಷ್ಠೀಕರಣ
ಕೇಳಬಹುದಾಗಿತ್ತು.  ಆದರೆ ನೀವು ಹಾಗೆ ಮಾಡಲಿಲ್ಲ. ಪೊಲೀಸ್ ಆಯುಕ್ತರು,
ಬೆಂಗಳೂರು ನಗರ ರವರು ನಿಮಗೆ ಕಳುಹಿಸಿದ ಪತ್ರ ಸಂಖ್ಯೆ:ಡಿಸಿಪಿ.ಸಾ.ಸಂ.ಅ/೨೦೧೦
ದಿನಾಂಕ ೧೬.೬.೨೦೧೦ ರಲ್ಲಿ ಈ ಪ್ರಸಂಗದಲ್ಲಿ ನನ್ನ ಪಾತ್ರವೇನೂ ಇಲ್ಲವೆಂದು ಮತ್ತು ತಪ್ಪು
ಮಾಡಿದವರ ಮೇಲೆ ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿರುತ್ತಾರೆ. ನಮ್ಮ ಕಛೇರಿಯೂ :  ೨  :
ಸಹ ಪತ್ರ ಸಂಖ್ಯೆ: ಜಿಸಿ(೧)೫೩೫/ಬೆಂ.ನಗರ/೨೦೧೦/ಭಾಗ-೭ ದಿನಾಂಕ ೧೭.೬.೨೦೧೦ ರಲ್ಲಿ
ವಾಸ್ತವಾಂಶವನ್ನು ವಿವರಿಸಿ ಪ್ರಕಟಿಸಲು ಕೋರಿರುತ್ತಾರೆ.  ಆದರೆ ನೀವು ಯಾವುದೇ
ಸ್ಪಷ್ಠೀಕರಣವನ್ನು ಪ್ರಕಟಿಸದೆ, ನಿಮ್ಮ ನಿಂದನೆ ತಪ್ಪು ಎಂದು ಸಾಬೀತಾದರೂ ನನ್ನ ವಿರುದ್ಧ
ನಿಮ್ಮ  ಟೀಕಾಪ್ರಹಾರವನ್ನು  ಮುಂದುವರಿಸಿದಿರಿ.   ಸದರಿ  ಅರ್ಜಿ  ಯಾವುದೇ ಹಂತದಲ್ಲಿ
ನನ್ನ ಗಮನಕ್ಕೆ ಬಂದಿಲ್ಲದಿದ್ದು ಮತ್ತು ನಿಮ್ಮ ಮೇಲೆ ಯಾವುದೇ ವಿಚಾರಣೆಗೆ ನಾನು
ಆದೇಶ ನೀಡಿಲ್ಲದಿರುವುದರಿಂದ, ಪತ್ರಿಕೋದ್ಯಮದ ಸ್ವಾತಂತ್ರ್ಯ ಹರಣಕ್ಕೆ ಯತ್ನಿಸಿರುವ
ಪ್ರಶ್ನೆಯೇ ಉದ್ಭವಿಸುವುದಿಲ್ಲ.  ನಾನು ಸದಾ ಪತ್ರಿಕೋದ್ಯಮದ ಸ್ವಾತಂತ್ರ್ಯವನ್ನು
ಸಮರ್ಥಿಸಿರುತ್ತೇನೆ.  ನನ್ನ  ಬಗ್ಗೆ ನಿಮ್ಮ ನಿಲುವು ನ್ಯಾಯಯುತ ಮತ್ತು
ಸಮಂಜಸವಾಗಿರುವುದಿಲ್ಲ ಎಂದು ಹೇಳಲು ಬಯಸುತ್ತೇನೆ.  ನೀವು ಪೂರ್ವಾಗ್ರಹ ಪೀಡಿತ
ಮತ್ತು ಹತಾಶೆಗೊಂಡ ವ್ಯಕ್ತಿಯಂತೆ ವರ್ತಿಸಿ ಅಸಂಸದೀಯ ಭಾಷೆಯನ್ನು
ಉಪಯೋಗಿಸಿರುವುದು ನನ್ನನ್ನು ಆಶ್ಚರ್ಯಚಕಿತನನ್ನಾಗಿಸಿದೆ.  ಪತ್ರಿಕಾ ಸ್ವಾತಂತ್ರ್ಯವೆಂದರೆ
ಕೊಲ್ಲಲು ಪರವಾನಗಿ ಅಲ್ಲ.

ನಾನು ಅಧಿಕೃತವಾಗಿ ರಜೆಯನ್ನು ಪಡೆದು, ರಾಜ್ಯದ ಮಾನ್ಯ
ಮುಖ್ಯಮಂತ್ರಿಗಳಿಗೂ ಮತ್ತು ಮಾನ್ಯ ಗೃಹ ಮಂತ್ರಿಗಳಿಗೂ ತಿಳಿಸಿ ರಜೆಯ ಮೇಲೆ
ತೆರಳಿದ್ದೆನು,   ಅದನ್ನು   ನೀವು  ಡಿಜಿಪಿ ಮಿಸ್ಸಿಂಗ್!  ಎಂದು  ಕರೆದಿರುತ್ತೀರಿ.  ಇದು
ಪತ್ರಿಕೋದ್ಯಮದ ಪ್ರಾಮಾಣಿಕತೆಯೆ?  ಅದೇ ವರದಿಯಲ್ಲಿ ನಾನು ರಜೆಯ ಮೇಲಿದ್ದೇನೆ
ಎಂದೂ ಸಹ ಬರೆದಿರುತ್ತೀರಿ.  ಸತ್ಯ ಮತ್ತು ಸುಳ್ಳಿನ ನಡುವಿನ ಈ ಅಂತರವನ್ನು ನೀವು
ಸರಿ ಎಂದು ಒಪ್ಪಿದರೆ, ಅದು ವಿಷಾದನೀಯ.  ತಪ್ಪು ಮಾಹಿತಿಯ ಆಧಾರದ ಮೇಲೆ
ಕೆಲವು ಮುಖ್ಯ ವ್ಯಕ್ತಿಗಳ ಅಭಿಪ್ರಾಯವನ್ನು ಪಡೆದುಕೊಂಡಿರುತ್ತೀರಿ ಎಂದು
ಸ್ಪಷ್ಟವಾಗಿರುತ್ತದೆ.  ಅವರಲ್ಲಿ ಕೆಲವರು ನನ್ನನ್ನು ನಿನ್ನೆಯಿಂದ ದೂರವಾಣಿ ಮೂಲಕ
ಸಂಪರ್ಕಿಸಿ ಅವರು ಹೇಳಿದ್ದು ಒಂದಾದರೆ, ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿರುವುದೇ ಬೇರೆ
ಎಂದು ತಿಳಿಸಿದ್ದಾರೆ.  ಇದು ಪತ್ರಿಕೆಯ ಸಂಪಾದಕರಾಗಿ ನಿಮ್ಮ ಸ್ವಾತಂತ್ರ್ಯ?  ನೀವು
ನ್ಯಾಯಯುತ, ಆತ್ಮಸಾಕ್ಷಿಯುಳ್ಳ ಸಜ್ಜನ  ವ್ಯಕ್ತಿಯಾಗಿದ್ದರೆ,  ವಾಸ್ತವಾಂಶವನ್ನು  ವಿವರಿಸಿ
ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಮತ್ತು ನಮ್ಮ ಕಛೇರಿಯಿಂದ ಕಳುಹಿಸಲಾದ
ಪತ್ರಗಳನ್ನು ಪ್ರಕಟಿಸಿ ನಂತರ ಸಾರ್ವಜನಿಕರ ಅಭಿಪ್ರಾಯವನ್ನು ಪಡೆಯಬಹುದಾಗಿತ್ತು.
ಯಾವುದೇ ತಪ್ಪಿಲ್ಲದೆ ಬಂದ ನೋವನ್ನು ಸಹಿಸಿಕೊಳ್ಳಬಹುದು ಎಂದು ಫ್ರೆಂಚ್
ಅಸ್ತಿತ್ವವಾದಿ, ಬರಹಗಾರ ಮತ್ತು ದಾರ್ಶನಿಕರಾದ ಅಲ್ಬೇರ್ ಕಾಮು ಹೇಳಿದ್ದಾರೆ.  ಈ
ಮಾತು ಈಗ ನನಗೆ ಸಹಾಯ ಮಾಡುತ್ತಿದೆ.  ಆತಂಕ, ಸಿಟ್ಟು ಮತ್ತು ಆತುರದಲ್ಲಿ ನನ್ನ
ಮೇಲೆ ದಾಳಿ ನಡೆಸುವ ಭರದಲ್ಲಿ, ಡಿಜಿ&ಐಜಿಪಿ ಹುದ್ದೆಯ ಮೌಲ್ಯ ಕಡಿಮೆ ಮಾಡಿರುತ್ತೀರಿ.
ರಾಜ್ಯದ ಪೊಲೀಸ್ ಇಲಾಖೆಯ ಮುಖ್ಯಸ್ಥರಾಗಿ ಡಿಜಿ&ಐಜಿಪಿ ಗೆ ರಾಜ್ಯದ ಆರು ಕೋಟಿ
ಜನರ ಸುರಕ್ಷತೆ ಮತ್ತು ಭದ್ರತೆ ಹೊಣೆ ಇರುತ್ತದೆ.  ಇಷ್ಟು ವರ್ಷಗಳ ಕಾಲ ಕರ್ನಾಟಕದ
ಜನರು ನನ್ನ ಮೇಲೆ ಅಪಾರ ಪ್ರೀತಿ ಮತ್ತು ವಾತ್ಸಲ್ಯದ ಹೊಳೆ ಹರಿಸಿದ್ದಾರೆ.  ಅವರಿಗೂ
ವಾಸ್ತವ ಏನೆಂದು ಗೊತ್ತಾಗಲಿ.:  ೩  :

ನ್ಯಾಯ ಮತ್ತು ಪ್ರಾಮಾಣಿಕತೆ ಹೆಸರಿನಲ್ಲಿ, ನನ್ನ ವಿರುದ್ಧ ವರದಿಗಳನ್ನು ಎಷ್ಟು
ಪ್ರಾಮುಖ್ಯವಾಗಿ ಪ್ರಕಟಿಸಿದ್ದಿರಿ, ಈ ಪತ್ರವನ್ನೂ ಸಹ ಅಷ್ಟೇ ಪ್ರಾಮುಖ್ಯವಾಗಿ ಯಥಾವತ್ತಾಗಿ
ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸುವಂತೆ ನಿಮ್ಮ ಆತ್ಮಸಾಕ್ಷಿಗೆ ಮನವಿ ಮಾಡುತ್ತೇನೆ.  ಅದು
ಆಗದಿದ್ದಲ್ಲಿ ನಿಮ್ಮ ಪತ್ರಿಕೆಯ ಮುಖಪುಟದಲ್ಲಿ ನಿಮ್ಮ ಕ್ಷಮೆ/ವಿಷಾದ ವ್ಯಕ್ತಪಡಿಸಿದರೂ
ಸಾಕು ಎಂದು ಭಾವಿಸುತ್ತೇನೆ.

ಶುಭಾಶಯಗಳೊಂದಿಗೆ,
ತಮ್ಮ ವಿಶ್ವಾಸಿ,
(ಅಜಯ ಕುಮಾರ ಸಿಂಹ)

ಕೊನೆಕುಟುಕು: ವಿಶ್ವೇಶ್ವರ ಭಟ್ಟರ ವೆಬ್‌ಸೈಟ್‌ನ ಕೇಳ್ರಪ್ಪೋ ಕೇಳಿ ಅಂಕಣದ ಒಂದು ಪ್ರಶ್ನೋತ್ತರ ಹೀಗಿದೆ
೧೯ ಜನವರಿ ೨೦೧೧ ೧/೧೮/೧೧
ಭಾರತಿ ನಾಗರಾಜ
ಮೈಸೂರು ಅಷ್ಟಕ್ಕೂ ನೀವು ವಿಜಯ ಕರ್ನಾಟಕ್ ಬಿಟ್ಟಿದ್ದು ಯಾಕೆ?
 - ಶ್ರಾದ್ಧದ ಊಟ ಆದ ಮೇಲೆ ಅಪ್ಪ ಸತ್ತಿದ್ದು ಹೇಗೆ ಎಂದು ಕೇಳಿದ ಹಾಗಾಯ್ತಲ್ಲಮ್ಮ!
ಇಲ್ಲಿ ಶ್ರಾದ್ಧದ ಊಟ ಅಂದರೆ ಏನು ಅಂತ ಕೇಳ್ತಿದ್ದಾರೆ ಅಭಿಮಾನಿಗಳು.

Tuesday, January 18, 2011

ಅಕ್ಷರ ಮತ್ತು ಜೋಗಿ: ಕೆಲವು ಪ್ರತಿಕ್ರಿಯೆಗಳು

Anonymous said...
ಅಕ್ಷರ ಮತ್ತು ಜೋಗಿ ಮಾತುಗಳನ್ನು ಒಪ್ಪುವುದಾದರೆ,
ಬೆತ್ತಲೆ ಸೇವೆಗೆ ಬಲಿಯಾಗುವ ಮಹಿಳೆಯರು ತಮಗೆ ಆಗುತ್ತಿರುವುದು ಅವಮಾನ ಎನ್ನುವುದನ್ನು ಅರಿತುಕೊಳ್ಳುವ ತನಕ ಅದು ಅವಮಾನವಲ್ಲ. ಅಲ್ಲದೆ, ಕಳೆದ ಐವತ್ತು ವರ್ಷಗಳ ಹಿಂದೆ ಬೆತ್ತಲೆ ಸೇವೆ ಮಾಡಿದವರು ಇಂದು ಬಾಲಿವುಡ್ ಸ್ಟಾರ್ ಗೆ ಜನ್ಮ ನೀಡಿದ್ದಾರೇನೋ ಎಂಬುದನ್ನು ಮೊದಲು ಸಂಶೋಧನೆ ಮಾಡಬೇಕು. ಶತ ಶತಮಾನಗಳಿಂದ ಗಂಡನನ್ನು ಕಳೆದುಕೊಂಡವರು ತಲೆ ಬೋಳಿಸಿಕೊಂಡು, ಕುಂಕುಮ, ಹೂ ಮುಡಿಯದೆ ಬದುಕಿದ್ದರೆ ಅದು ಈ ಸಮಾಜಕ್ಕೆ ಆದ ಅವಮಾನವಲ್ಲ. ಕಾರಣ ಆ ಮಹಿಳೆ ಅದನ್ನು ಒಪ್ಪಿಯೇ ಅನುಸರಿಸಿದ್ದು. ಕಳೆದ ಐವತ್ತು ವರ್ಷಗಳ ಹಿಂದೆ, ಹೀಗೆ ಬದುಕಿದ ವಿಧವೆಯರ ಸ್ಥಿತಿ ಏನು ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು. ಅಂತಹ ಅಧ್ಯಯನದಲ್ಲಿ ವಿಧವೆಗೆ ವಿಧಿಸಿದ ನಿರ್ಬಂಧಗಳಿಂದ ತಲೆಗೆ ಹಚ್ಚುವ ಎಣ್ಣೆ, ಹೂ ಖರ್ಚು, ಕುಂಕುಮ ವೆಚ್ಚ ಎಲ್ಲವೂ ಉಳಿಯುತ್ತೆ ಎಂದು ಯಾವುದಾದರು ತಲೆಕೆಟ್ಟ ಎಕಾನಮಿಸ್ಟ್ ತೀರ್ಪು ಕೊಟ್ಟರೆ, ಅಂತಹ ಅನಿಷ್ಟ ಪದ್ಧತಿ ಈ ಸಮಾಜಕ್ಕೆ ಆದ ಅವಮಾನವಲ್ಲ - ನಮ್ಮ ಪೂರ್ವಿಕರು ಪಾಲಿಸಿಕೊಂಡು ಬಂದ ಆರ್ಥಿಕ ಮಿತವ್ಯಯ ಕ್ರಮ ಎಂದು ಜೋಗಿ ತರಹದವರು ಘೋಷಿಸುತ್ತಾರೆ!
ಅಕ್ಷರ, ಜೋಗಿ ಯಂತಹವರನ್ನು ಬುದ್ಧಿವಂತ ಬರಹಗಾರರು ಎಂದು ನಂಬಿಕೊಂಡು ಅವರನ್ನು ಓದುತ್ತಿರುವವರು ಇನ್ನಾದರೂ ಈ  ಸೋಗಲಾಡಿಗಳ ಆಲೋಚನಾ ಕ್ರಮಗಳನ್ನು ಅರ್ಥ ಮಾಡಿಕೊಳ್ಳಬೇಕು.


dinesh patwardhan said...
bettalada manassu !



Anonymous said...
ಅಕ್ಷರ ಅವರ ವಾದದ ಬಗ್ಗೆ ನಿಮಗನಿಸುವುದನ್ನು ಹೇಳಬಹುದು. ಆದರೆ ಪ್ರಜಾವಾಣಿ ಲೇಖನ ಪ್ರಕಟಿಸಿದ್ದೇ ತಪ್ಪು; ಹಾಗೆ ಮಾಡಿದ್ದರಿ೦ದ ಅದು ವಿಜಯಕರ್ನಾಟಕದ ತಮ್ಮ ಎ೦ಬಿತ್ಯಾದಿ ತೀರ್ಪುಗಳು ಕೇಸರಿ ಮನೊಭಾವದಷ್ಟೇ ಅಪಾಯಕಾರಿ

Anonymous said...
Akshara and Jogi need to understand the difference between a 'belief' and a 'blind belief'. If a person prefers to take blessings of his father by touching his feet before venturing into a journey in his life, it is his belief. If the father insists the son to take blessings of a priest or a brahmin in the neighborhood also, it is his 'blind belief'. A son never feels insulted to take blessings of his father. But he is insulted when he is asked to bend before a stranger in a priest.

It is disheratening to know that Akshara, son of a socialist K V Subbanna, who played a role in popularising Lohia in Karnataka, argues as a conformist. Karnataka has a great tradition of writers who pressed upon scientific outlook in creative writing. Interestingly, most of the commentators who stand by Akshara represent a particular sect in society responsible for continuing untouchability.


Anonymous said...
ಹೌದು ಮತ್ತೆ. ಅಕ್ಷರ ಹೇಳುವದು ನಿಜ. ಬ್ರಾಹ್ಮಣರೋ ಇನ್ನಾರೋ ಉಂಡ ಎಂಜಲೆಲೆಗಳ ಮೇಲೆ ಉರುಳಾಡುವ ಮುಖಾಂತರ ತನಗೆ ಅವಮಾನ ಆಗುತ್ತದೆ ಎಂದು ತೀರ್ಮಾನಿಸುವವನು ಕೊನೆಗೂ ಆ ಅವಮಾನಿತನೇ ಆಗಿರಬೇಕು. ನಗ್ನವಾಗಿ ಬೇವಿನುಡುಗೆ ಉಟ್ಟು ಹರಕೆ ತೀರಿಸುವದು ಅವಮಾನಕರ ಎಂದು ಸ್ವತ: ಬೇವಿನ ತೊಪ್ಪಲು ಮೆತ್ತಿಕೊಂಡು ಹೋಗುವಾಕೆಗೆ ಅನಿಸಬೇಕು.ಪಶ್ಚಿಮದ ಎನಲೈಟನ್ಮೆಂಟ್ ಪ್ರೇರಿತ ಮೌಲ್ಯಪ್ರಜ್ನೆಯಿಂದ ಯಾಕೆ ನಿಮ್ಮಂಥ ಪ್ರಗತಿಪರರು ಅದನ್ನು ಅವಮಾನಕರ, ಅನಾಗರಿಕ ಅಂತೆಲ್ಲಾ ಹೇಳಿ ಅಕ್ಷರರಂಥ ಪ್ರಕಾಂಡ ಪಂಡಿತರನ್ನು ಕೆರಳಿಸಿ ಇಂಥ ಅತಿಬೌದ್ಧಿಕ ಲೇಖನ ಬರೆಯಲು ಹಚ್ಚುತ್ತೀರಿ? ಅದಕ್ಕಿಂತ ಐಪಿಎಲ್ ಹರಾಜಿನಂಥ ಸಂಗತಿಗಳನ್ನು ಅತ್ಯಂತ ಘೋರ, ಅವಮಾನಕಾರಿ ಎಂಬುದಾಗಿ ಗೋಳಾಡಿ ಅಕ್ಷರರಂಥ ಕಾಲಶೇಷಗಳನ್ನು ಸಂಪ್ರೀತಗೊಳಿಸಬೇಕು......

Ashraf manzarabad said...
ಅಕ್ಷರ ಅವರ ಲೇಖನ ಅವರ ನೈಜ ಮನಸ್ಥಿಯನ್ನು ಹೊರಹಾಕುವಂತಿದೆ. ಆದರೆ ಅದನ್ನು ಸಂಪೂರ್ಣವಾಗಿ ಹೊರಗೆ ಹಾಕಲು ಸ್ವಲ್ಪ ಹಿಂಜರಿಕೆ ತೋರಿದ್ದಾರೆ. ಆದರೂ ಓದುಗರು ಅದನ್ನು ಅರ್ಥ ಮಾಡಿಕೊಳ್ಳದಷ್ಟು ದಡ್ಡರಲ್ಲ

Anonymous said...
ಬೆತ್ತಲೆ ಸೇವೆ ಮಾಡುವ ಹೆಣ್ಣುಮಕ್ಕಳಿಗೂ ತಾವು ಬೆತ್ತಲೆಯಾಗುವುದು ಅವಮಾನ ಅನ್ನಿಸುವುದಿಲ್ಲ.
ಅಕ್ಷರ ಅವರು ಬೆತ್ತಲೆ ಸೇವೆಯನ್ನೂ ಸಮರ್ಥಿಸುತ್ತಾರೆಯೇ?

Monday, January 17, 2011

ಜೋಗಿ ಬರೆದಿದ್ದಾರೆ: ಪತ್ರಕರ್ತರೆಲ್ಲ ತಪ್ಪದೆ ಓದಿ...

ಪತ್ರಕರ್ತ ಜೋಗಿ ಅಪ್ಪಣೆ ಕೊಡಿಸಿದ್ದಾರೆ.

ಯಾವುದು ಮೂಢನಂಬಿಕೆ, ಯಾವುದು ಅನುಮಾನ ಎಂಬುದನ್ನು ಮೀಡಿಯಾಗಳು ನಿರ್ಧಾರ ಮಾಡೋಹಂಗಿಲ್ಲ. ಮೀಡಿಯಾಗಳಿಗೆ ಆ ಹಕ್ಕನ್ನು ಯಾರೂ ಕೊಟ್ಟಿಲ್ಲ. ಯಾವುದು ಮೌಢ್ಯ ಎಂಬುದನ್ನು ನಿರ್ಧಾರ ಮಾಡಬಹುದಾದ ತಜ್ಞರು ಮೀಡಿಯಾಗಳಲ್ಲಿ ಇಲ್ಲವೇ ಇಲ್ಲ. ಹೀಗಾಗಿ ಯಾವುದನ್ನೂ ಅವರು ಮೌಢ್ಯ ಅನ್ನುವ ಹಾಗೆ ಇಲ್ಲ.

ಮಡೆಸ್ನಾನದ ಕುರಿತು ಅವಧಿ ಆರಂಭಿಸಿರುವ ಚರ್ಚೆಯಲ್ಲಿ ಜೋಗಿ ತಮ್ಮದಲ್ಲದ ಶೈಲಿಯಲ್ಲಿ ಬರೆದಿದ್ದಾರೆ. ಜೋಗಿ ಅವರ ಅಭಿರುಚಿಗಳು, ಪುಸ್ತಕಗಳ ಬಗ್ಗೆ ಗೊತ್ತಿರುವವರಿಗೆ ಇದು ಇನ್ನೊಂದು ವರಸೆಯ ದರ್ಶನ.

ಒಂದು ಆಚರಣೆಯಿಂದ ಯಾರಿಗೆ ಏನೇನು ಅನುಕೂಲವಾಗಿದೆ ಎನ್ನುವುದರ ಕುರಿತು ಎಲ್ಲ ಮನೋವಿಜ್ಞಾನಿಗಳೂ, ಸಮಾಜಶಾಸ್ತ್ರಜ್ಞರೂ ಸೇರಿ ಅಧ್ಯಯನ ನಡೆಸಬೇಕು ಎಂದು ಜೋಗಿ ಅಬ್ಬರಿಸಿದ್ದಾರೆ.

ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಮಗುವನ್ನು ಎಸೆಯುವ ಸಂಪ್ರದಾಯದ ಬಗ್ಗೆಯೂ ಜೋಗಿ ಬರೆದಿದ್ದಾರೆ. ಹೀಗೆ ಎಸೆದ ಮಗುವಿಗೆ ಏನೇನಾಯಿತು ಎನ್ನುವುದರ ಕುರಿತು ಪತ್ರಕರ್ತರು ಫಾಲೋ ಅಪ್ ಮಾಡಬೇಕಿತ್ತು ಎನ್ನುವುದು ಜೋಗಿ ಅಭಿಮತ. ಅದೇನೋ ಸರಿ, ಈ ಮಾತಿಗೆ ಅವರು ಇನ್ನೊಂದು ವಾಕ್ಯವನ್ನೂ ಪೋಣಿಸಿದ್ದಾರೆ. ಆ ಕ್ಷಣದ ತೆವಲಿಗೆ ಆಚರಣೆಗಳು ಮತ್ತು ಸಂಪ್ರದಾಯಗಳು ಬಲಿಯಾಗುತ್ತವೆ ಎಂದು ಅವರು ಸ್ಟೇಟ್‌ಮೆಂಟ್ ಹೊರಡಿಸಿದ್ದಾರೆ. ಏನಿದರ ಅರ್ಥ? ಯಾರ ತೆವಲಿಗೆ ಯಾವ ಸಂಪ್ರದಾಯ ಬಲಿಯಾಗಿದೆ?

ಜೋಗಿನ ಮಾತಿನ ಜಾಡು ಹಿಡಿದು ಹೊರಟರೆ, ಮಾಧ್ಯಮಗಳು ತಮಗೆ ಯಾವುದೇ ಸಂಪ್ರದಾಯ ಮೌಢ್ಯ, ಕಂದಾಚಾರದಿಂದ ಕೂಡಿದೆಯೆಂದು ಕಂಡರೆ ಅದನ್ನು ವಿರೋಧಿಸಿ ಬರೆಯುವಂತಿಲ್ಲ. ಒಂದು ವರ್ಷ ಕಾಲ ಸಮಾಜಶಾಸ್ತ್ರಜ್ಞರು, ಮನೋವಿಜ್ಞಾನಿಗಳಿಂದ ತನಿಖೆ ಮಾಡಿಸಿ, ನಂತರ ತೀರ್ಮಾನಕ್ಕೆ ಬರಬೇಕು.

ಮಗುವನ್ನು ಮೇಲಿಂದ ಎತ್ತಿ ಎಸೆದರೂ ಅಷ್ಟೆ, ಎಂಜಲೆಲೆ ಮೇಲೆ ಉರುಳಾಡಿದರೂ ಅಷ್ಟೆ. ಬರಿಗಣ್ಣಿಗೆ ಅದು ಅನಿಷ್ಟ, ರೋಗಿಷ್ಠ ಆಚರಣೆಯಂತೆ ಕಂಡರೂ ಅದನ್ನು ಪತ್ರಕರ್ತರು ಬರೆಯುವಂತಿಲ್ಲ, ಬರೀ ಕೂಡದು. ಒಂದು ವೇಳೆ ಬರೆದರೆ ಇಂಥ ಭವ್ಯವಾದ ಆಚರಣೆಗಳು ಅನ್ಯಾಯವಾಗಿ ಬಲಿಯಾಗಿಬಿಡುತ್ತವೆ!

ಯಾವುದು ಮೌಢ್ಯ ಎಂಬುದನ್ನು ಮಾಧ್ಯಮಗಳು ದಾಖಲೆ ಮಾಡದೆ ಇನ್ನ್ಯಾರು ಮಾಡಬೇಕು? ಕಡೆ ಪಕ್ಷ ಜೋಗಿಯವರು ಹೇಳುವ ಸಮಾಜವಿಜ್ಞಾನಿಗಳೂ ಸಹ ತಮ್ಮ ಅಭಿಪ್ರಾಯವನ್ನು ಮಾಧ್ಯಮಗಳ ಮೂಲಕವೇ ಪ್ರಚುರಪಡಿಸಬೇಕಲ್ಲವೇ? ಜೋಗಿ ಏನನ್ನು ಹೇಳಲು ಹೊರಟಿದ್ದಾರೆ?

ಮಾಧ್ಯಮಗಳು ಯಾರನ್ನು ತಿದ್ದುವುದೂ ಬೇಡ, ಬುದ್ಧಿವಂತರನ್ನಾಗಿ ಮಾಡುವುದೂ ಬೇಡ. ಕಣ್ಣಿಗೆ ರಾಚುವ ಅಂಧಶ್ರದ್ಧೆಯನ್ನು ಅದು ಇದ್ದಂತೆ ಹೇಳಿದರೆ ಸಾಕು. ಅದನ್ನೂ ಬೇಡ ಎನ್ನುವ ಜೋಗಿ ಏನನ್ನು ಸೂಚಿಸುತ್ತಿದ್ದಾರೆ?

ಸುವರ್ಣ ನ್ಯೂಸ್‌ನಲ್ಲಿ ಬಾಲ ಜ್ಞಾನಿ ಎಂಬ ಕಾರ್ಯಕ್ರಮ ಬರುತ್ತದೆ. ಆ ಕಾರ್ಯಕ್ರಮವನ್ನು ರೂಪಿಸಿದವರಲ್ಲಿ ಜೋಗಿ ಕೂಡ ಒಬ್ಬರು. ಎಳೇ ಹುಡುಗನೊಬ್ಬನನ್ನು ಎಳೆತಂದು ಜೋತಿಷ್ಯ ಹೇಳಿಸುವ ಕಾರ್ಯಕ್ರಮ ಅದು. ಇದು ಜೋಗಿಯವರ ಹೊಸ ಅಭಿರುಚಿ.

ಹೀಗಿರುವಾಗ ಮಡೆಸ್ನಾನವನ್ನು ಸಮರ್ಥಿಸಿಕೊಂಡು ಬರೆದ ಅಕ್ಷರ ಅವರ ಲೇಖನ ಜೋಗಿಗೆ ಇಷ್ಟವಾಗದೇ ಇರುತ್ತದೆಯೇ?
ಚರಿತ್ರೆಯಲ್ಲಿ ದಾಖಲಾಗುವುದು ಕ್ರಿಯೆಯೇ ಹೊರತು, ಮಾತಲ್ಲ. ಮಹಾತ್ಮ ಗಾಂಧಿ ದಂಡಿ ಮಾರ್ಚ್ ಮಾಡಿದ್ದಷ್ಟೇ ಮುಖ್ಯ, ಯಾರು ಅದನ್ನು ವರದಿ ಮಾಡಿದರು ಅನ್ನುವುದಲ್ಲ ಎಂದು ಜೋಗಿ ಪತ್ರಕರ್ತರಿಗೆ ಕಿವಿಮಾತು ಹೇಳಿದ್ದಾರೆ.

ಚರಿತ್ರೆಯಲ್ಲಿ ಒಳ್ಳೆಯದು ಮಾತ್ರವಲ್ಲ, ಕೆಟ್ಟದ್ದೂ ದಾಖಲಾಗುತ್ತದೆ. ಮೌಢ್ಯದ ಅನಿಷ್ಠ ಪರಂಪರೆಯೂ ದಾಖಲಾಗುತ್ತದೆ. ಅದನ್ನು ಸಮರ್ಥಿಸಿಕೊಂಡ ಅವಿವೇಕಿಗಳೂ ದಾಖಲಾಗುತ್ತಾರೆ.

ಪೂರಕ ಓದಿಗಾಗಿ:

ಕೆ.ವಿ.ಅಕ್ಷರ ಅವರ ಬೆತ್ತಲೆ ಜಗತ್ತು...

ಕೆ.ವಿ.ಅಕ್ಷರ ಅವರ ಬೆತ್ತಲೆ ಜಗತ್ತು...

...ಸ್ವತಃ  ಅವಮಾನವನ್ನು ಅನುಭವಿಸುತ್ತಿದ್ದಾನೆಂದು ಹೇಳಲಾಗುವಾತನೇ ತನಗೆ ಅವಮಾನವಾಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳದೆ ಹೋದರೆ, ಅದನ್ನು ಅವಮಾನ ಎಂದು ಕರೆಯುವುದು ಕಷ್ಟವೇ ಸರಿ...... ತನಗೆ ಅವಮಾನ ಆಗುತ್ತಿದೆಯೋ ಇಲ್ಲವೋ ಎಂಬುದನ್ನು ತೀರ್ಮಾನಿಸುವಾತ ಸ್ವತಃ ಆ ಅವಮಾನಿತನೇ ಆಗಿರಬೇಕೆ ಹೊರತು, ಆತನ ಪರವಾಗಿ ಇನ್ನೊಬ್ಬರು ಅವನಿಗೆ ಅವಮಾನವಾಗುತ್ತಿದೆ ಎಂದು ತೀರ್ಮಾನಿಸಲಾಗದು...

ಇಂಥ ಅದ್ಭುತ ಮನೋವೈಜ್ಞಾನಿಕ ಸತ್ಯಗಳನ್ನು ಹೇಳುತ್ತಿರುವವರು ಕೆ.ವಿ.ಅಕ್ಷರ. ಭಾನುವಾರದ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯ ಮುಖಪುಟದ ಅಗ್ರ ಲೇಖನದಲ್ಲಿ ಇಂಥ ದಿವ್ಯಜ್ಞಾನವನ್ನು ಅವರು ಉಣಬಡಿಸಿದ್ದಾರೆ. ಲೇಖನದ ಶೀರ್ಷಿಕೆ: ಹರಕೆ ಹರಾಜು- ಯಾವುದು ಸಹಜ? ಯಾವುದು ಅವಮಾನ?

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಮಡೆಸ್ನಾನ ಹಾಗು ಐಪಿಎಲ್ ಹರಾಜು ಇವರೆಡರನ್ನೂ ತೌಲನಿಕವಾಗಿ ವಿಮರ್ಶಿಸಿ ಅಕ್ಷರ ಅವರು ಮೇಲಿನ ನಿರ್ಧಾರಕ್ಕೆ ತಲುಪಿದ್ದಾರೆ. ಬ್ರಾಹ್ಮಣರು ಉಂಡ ಎಂಜಲೆಲೆಯ ಮೇಲೆ ಶೂದ್ರರು ಉರುಳಾಡಿದ್ದು ಮತ್ತು ಐಪಿಎಲ್‌ನಲ್ಲಿ ಆಟಗಾರರನ್ನು ಹರಾಜು ಹಾಕಿದ್ದು ಇವರೆಡರಲ್ಲಿ ಯಾವುದು ಹೆಚ್ಚು ಆದ್ಯತೆಯ ಸುದ್ದಿಯಾಗಬೇಕಿತ್ತು ಎಂಬ ಪ್ರಶ್ನೆಯನ್ನು ಮಾಧ್ಯಮಲೋಕಕ್ಕೆ ಎಸೆದಿದ್ದಾರೆ. ಉತ್ತರವೂ ಅವರ ಲೇಖನದಲ್ಲೇ ಇದೆ.

ಅಕ್ಷರ ಅವರು ತಮ್ಮ ವಾದ ಸಮರ್ಥನೆಗೆ ಒಂದು ಕೆಟ್ಟ, ಬಾಲಿಷ ದೃಷ್ಟಾಂತವನ್ನೂ ಕೊಟ್ಟಿದ್ದಾರೆ. ದೃಷ್ಟಾಂತವೂ ಸಹ ಮಡೆ ಸ್ನಾನದ ಪರವಾಗಿಯೇ ವಕಾಲತ್ತು ವಹಿಸುತ್ತದೆ. ಆದರೂ ಅವರು ಲೇಖನದ ಅಂತ್ಯದಲ್ಲಿ ಯಾವುದು ಸಹಜ, ಯಾವುದು ಅವಮಾನ ಎಂಬ ತೀರ್ಮಾನವನ್ನೇನು ಹೇಳಿಲ್ಲ ಎಂದು ಜಾಣತನದಲ್ಲೋ, ಅಪರಾಧಿಪ್ರಜ್ಞೆಯಲ್ಲೋ ಗೊಣಗಿರುವುದೂ ಕೇಳುತ್ತದೆ.  ನಮ್ಮ ಕಾಲದೇಶ ಸಂದರ್ಭಕ್ಕೆ ನಮ್ಮದೇ ಸ್ವಂತ ಮಾನಾವಮಾನಗಳ ಪರಿಕಲ್ಪನೆಯೇ ಇನ್ನೂ ಹುಟ್ಟಿಲ್ಲವೇನೋ ಎಂಬ ಅನುಮಾನದಿಂದ ಈ ಬರಹಕ್ಕೆ ತೊಡಗಿದ್ದೇನೆ. ಅದೇನಾದರೂ ನಿಜವಾಗಿದ್ದರೆ, ನಮ್ಮ ಸಮಾಜಕ್ಕೆ ಅದಕ್ಕಿಂತ ದೊಡ್ಡ ಅವಮಾನ ಇನ್ನೊಂದಿಲ್ಲ ಎಂದು ಸಂಪೂರ್ಣ ಗೊಂದಲಮಯವಾಗಿ ಹೇಳುವ ಅಕ್ಷರ ಇಡೀ ಲೇಖನದಲ್ಲಿ ಮಡೆಸ್ನಾನವನ್ನು ಯಾವುದೋ ಸಂಸ್ಕೃತಿ ವಿಮರ್ಶೆಯ ಧಾಟಿಯಲ್ಲಿ ಸಮರ್ಥನೆ ಮಾಡಿಕೊಂಡಿರುವುದು ಮಾತ್ರ ಎದ್ದು ಕಾಣುತ್ತದೆ.

ಅಕ್ಷರ ಅವರಿಗೆ ವಾಪಾಸು ಒಂದು ದೃಷ್ಟಾಂತ ಹೇಳೋಣ. ಒಂದು ಹಳ್ಳಿಯಲ್ಲಿ ಒಬ್ಬ ದಲಿತನಿದ್ದಾನೆ. ಅವನಿಗೆ ದೇವಸ್ಥಾನದಲ್ಲಿ ಪ್ರವೇಶವಿಲ್ಲ. ಕಾಸು ಕೊಟ್ಟರೂ ಹೊಟೆಲಿನಲ್ಲಿ ಕಾಫಿ, ತಿಂಡಿ ಕೊಡುವುದಿಲ್ಲ. ಅದು ಅವನಿಗೆ ಅಭ್ಯಾಸವಾಗಿದೆ. ಅವನಿಗೆ ಅದು ಅವಮಾನ ಅಂತಲೂ ಅನಿಸುತ್ತಿಲ್ಲ. ಹಾಗೆಂದ ಮಾತ್ರಕ್ಕೆ ಅವನಿಗೆ ಅವಮಾನ ಆಗುತ್ತಿದೆ ಎಂಬುದನ್ನು ನಿರಾಕರಿಸಲಾಗುತ್ತದೆಯೇ? ಅವಮಾನವನ್ನು ನಿರ್ಧರಿಸಬೇಕಾದವನು ಅವಮಾನಕ್ಕೆ ಒಳಗಾದ ವ್ಯಕ್ತಿ ಮಾತ್ರ ಎನ್ನುವುದಾದರೆ ಅಸ್ಪೃಶ್ಯತೆಯೂ ಅವಮಾನ ಎಂದು ಹೇಳಲಾಗದು. ಯಾಕೆಂದರೆ ಅಸ್ಪೃಶ್ಯತೆಯನ್ನು ಅನುಭವಿಸುತ್ತಿರುವ ಸಮುದಾಯಗಳಲ್ಲಿ ಬಹುತೇಕರು ತಾವು ಅನುಭವಿಸುತ್ತಿರುವುದು ಅವಮಾನ ಎಂಬುದನ್ನೇ ಗೊತ್ತುಮಾಡಿಕೊಳ್ಳದ ಮುಗ್ಧರು.

ಅಕ್ಷರ ಅವರಿಗೆ ಇಂಥ ಬೇಸಿಕ್ ವಿಷಯಗಳು ಅರ್ಥವಾಗುವುದಿಲ್ಲವೇ? ಜನ ಇದನ್ನೆಲ್ಲ ಅರ್ಥಮಾಡಿಕೊಳ್ಳದಷ್ಟು ದಡ್ಡರು ಎಂದು ಅವರು ಭಾವಿಸಿದ್ದಾರೆಯೇ? ಅವಮಾನವೆಂಬುದು ಒಂದು ಕಾಲದೇಶಾಧೀನ ಸಾಂಸ್ಕೃತಿಕ ಪರಿಕಲ್ಪನೆಯೇ ಹೊರತು ಸಾರ್ವತ್ರಿಕವಾಗಿ ಸಾರ್ವಕಾಲಿಕವಾಗಿ ನಿರ್ವಚಿತವಾದ ಒಂದು ಸ್ಥಿತಿಯಲ್ಲ ಎಂಬಂಥ ಜಾಣ ವಾಕ್ಯಗಳ ಮೂಲಕ ಅವರು ಓದುಗರನ್ನು ಅರೆಕ್ಷಣ ಮೈಮರೆಸಿ ತನ್ನ ತೆಕ್ಕೆಗೆ ತಂದುಕೊಳ್ಳಬಹುದು ಎಂಬ ಭ್ರಮೆಯಲ್ಲಿದ್ದಾರೆಯೇ? ಮಡೆಸ್ನಾನವನ್ನು ಬೆಂಬಲಿಸುವುದರ ಮೂಲಕ ಅವರು ಮನುಷ್ಯನನ್ನು ಅಪಮಾನಕ್ಕೆ ಒಳಪಡಿಸುವ ಎಲ್ಲ ರೀತಿಯ ಮೌಢ್ಯ, ಕಂದಾಚಾರಗಳನ್ನು ಸಮರ್ಥಿಸುತ್ತಿದ್ದಾರೆಯೇ? ಇದು ಅಕ್ಷರ ಅವರು ಕಂಡುಕೊಂಡಿರುವ ಬೆತ್ತಲೆ ಜಗತ್ತೇ?

ಐಪಿಎಲ್ ಹರಾಜು ಗುಲಾಮಗಿರಿಯ ಸಂಕೇತ ನಿಜ. ಅಕ್ಷರ ಅವರು ಹೇಳುವಂತೆಯೇ ಪ್ರಾಚೀನ ರೋಮಿನ ಅನಾಗರಿಕ ಮನಸ್ಥಿಯು ಇನ್ನೂ ಮುಂದುವರೆದಿರುವುದರ ಸಂಕೇತ ಎಂದೂ ಭಾವಿಸೋಣ. ಆದರೆ ಐಪಿಎಲ್ ಹರಾಜಿಗೂ ಮಡೆ ಸ್ನಾನಕ್ಕೂ ಎಲ್ಲಿಂದೆಲ್ಲಿಯ ಸಂಬಂಧ? ಐಪಿಎಲ್ ಹರಾಜನ್ನೇ ವಿರೋಧಿಸಲು ಅಕ್ಷರ ಪ್ರತ್ಯೇಕ ಲೇಖನವೊಂದನ್ನು ಬರೆಯಬಹುದಿತ್ತು. ಯಾಕೆ ಮಡೆಸ್ನಾನದ ವಿಷಯವನ್ನು ಇಲ್ಲಿ ತಳುಕು ಹಾಕಲು ಯತ್ನಿಸುತ್ತಿದ್ದಾರೆ. ಮಡೆಸ್ನಾನದ ಅನಾಗರಿಕ, ಅಮಾನವೀಯ ಸಂಪ್ರದಾಯವನ್ನು ಪರೋಕ್ಷವಾಗಿ ಸಮರ್ಥಿಸಿಕೊಳ್ಳುವ ಅಗತ್ಯವಾದರೂ ಏನಿತ್ತು? ಅದರಲ್ಲೂ ಪ್ರಜಾವಾಣಿಯಂಥ ಪ್ರಗತಿಪರ ಪತ್ರಿಕೆಯನ್ನು ಇದಕ್ಕೆ ಬಳಸಿಕೊಳ್ಳುವ ಹಕೀಕತ್ತಾದರೂ ಏನು? ಪ್ರಜಾವಾಣಿಯಾದರೂ ಇಂಥ ಅಮಾನವೀಯ (ಈ ಪದವನ್ನು ಅತ್ಯಂತ ನಿಷ್ಠುರವಾಗಿ, ಪ್ರಜ್ಞಾಪೂರ್ವಕವಾಗಿಯೇ ಬಳಸಿದ್ದೇವೆ.) ಲೇಖನವನ್ನು ಪುರವಣಿಯಲ್ಲಿ ಪ್ರಕಟಿಸುವ ಅಗತ್ಯವಾದರೂ ಏನಿತ್ತು?

ಮಡೆಸ್ನಾನದ ಅಸಹ್ಯಗಳ ವಿರುದ್ಧ ಕನ್ನಡ ಪತ್ರಿಕೆಗಳು ಸರಣಿಯಂತೆ ಬರೆದವು. ಈ ವಿಷಯದಲ್ಲಿ ಯಾರೂ ಹಿಂದೆ ಬೀಳಲಿಲ್ಲ. ಇದು ಕೆ.ವಿ.ಅಕ್ಷರ ಅಂಥವರಿಗೆ ಅಸಹನೆ ಹುಟ್ಟಿಸಿರಬಹುದಾ? ಯಾಕಾದರೂ ಇಂಥ ಅಸಹನೆ ಅವರಿಗೆ ಹುಟ್ಟಿತು?

ನೀನಾಸಂ ಮೂಲಕ ಹೆಗ್ಗೋಡನ್ನು ಜಗತ್ತಿನ ರಂಗಭೂಮಿಯ ನಕಾಶೆಯಲ್ಲಿ ಎದ್ದು ಕಾಣುವಂತೆ ರೂಪಿಸಿದವರು ಕೆ.ವಿ.ಸುಬ್ಬಣ್ಣ. ಅವರ ಕಾಲಾನಂತರ ಅಕ್ಷರ ನೀನಾಸಂನ ರೂವಾರಿಯಾಗಿದ್ದಾರೆ. ಈಗಲೂ ಸಂಸ್ಕೃತಿ ಶಿಬಿರಗಳು ಪ್ರತಿವರ್ಷ ನಡೆಯುತ್ತವೆ.

ಮುಂದಿನ ಸಂಸ್ಕೃತಿ ಶಿಬಿರದ ಥೀಮ್ ‘ಹರಕೆ-ಹರಾಜು ಎಂದಿರಬಹುದೇ?