Saturday, April 30, 2011

ಪ್ಯಾಟೆ ಹುಡ್ಗೀರ್-೨: ವಿಕೃತ ಮನಸ್ಸುಗಳ ಲೈಂಗಿಕ ಚೇಷ್ಟೆಗಳು...

ಸುವರ್ಣ ಚಾನಲ್‌ನ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು-೨ ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇದೆ. ಹಿಂದೆ ನಾವೆಲ್ಲರೂ ಇದೇ ರಿಯಾಲಿಟಿ ಶೋನಲ್ಲಿ ಮುಗ್ಧ ಬಾಲಕನನ್ನು ಬೆತ್ತಲೆ ಮಾಡಿ ಹಿಂಸಿಸಿದ ಪ್ರಕರಣದ ಕುರಿತು ಪ್ರತಿಭಟನೆಯ ಧ್ವನಿ ಎತ್ತಿದ್ದೆವು. ಈಗ ಶೋನಲ್ಲಿ ಭಾಗವಹಿಸಿದ್ದ ಯುವತಿಯೊಬ್ಬಳು ಮೀಡಿಯಾಗಳ ಮುಂದೆ ನಿಂತು ತನಗೆ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದಾಳೆ.

ಅಕ್ಷತಾ
ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಆಸೆಯಿಂದ ಬಂದೆ. ನಿರ್ದೇಶಕ ರಾಘವೇಂದ್ರ, ನಿರೂಪಕ ಅಕುಲ್ ಹಾಗು ತಂಡ ನನಗೆ ಮಾನಸಿಕ, ದೈಹಿಕ ಹಿಂಸೆ ನೀಡಿದ್ದಾರೆ. ಮರ್ಯಾದಸ್ಥ ಮನೆತನದ ಹೆಣ್ಣುಮಕ್ಕಳು ಯಾರೂ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಬಾರದು. ಎಲ್ಲ ಟಾಸ್ಕ್‌ಗಳಲ್ಲೂ ಗೆದ್ದಿದ್ದ ನನ್ನನ್ನು ಅನ್ಯಾಯದಿಂದ ಎಲಿಮಿನೇಟ್ ಮಾಡಲಾಯಿತು. ತಂಡದೊಂದಿಗೆ ಸಹಕರಿಸದೇ ಹೋಗಿದ್ದಕ್ಕೆ ಇದು ಶಿಕ್ಷೆ....

ಇತ್ಯಾದಿಯಾಗಿ ಮಾತನಾಡುತ್ತಿರುವಾಕೆ ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿರುವ ಅಕ್ಷತಾ. ಈಗಾಗಲೇ ಈಕೆ ಪತ್ರಿಕಾಗೋಷ್ಠಿ ನಡೆಸಿ ಆರೋಪಗಳ ಮೇಲೇ ಆರೋಪ ಮಾಡಿದ್ದಾಳೆ. ಈಕೆಯ ಹಾಗೆಯೇ ಎಲಿಮಿನೇಟ್ ಆದ ಪೂರ್ಣಿಮ ಎಂಬ ಯುವತಿಗೂ ಸಹ ಇದೇ ರೀತಿ ಅನ್ಯಾಯ  ಮಾಡಲಾಗಿದೆಯಂತೆ.

ಕನ್ನಡ ಚಾನಲ್‌ಗಳಲ್ಲಿ ಪ್ರಸಾರವಾದ, ಪ್ರಸಾರವಾಗುತ್ತಿರುವ ಅತ್ಯಂತ ದರಿದ್ರ ರಿಯಾಲಿಟಿ ಶೋ ಇದು. ಟಾಸ್ಕ್ ನಲ್ಲಿ ಸೋತವರಿಗೆ ಮೆಣಸಿನಕಾಯಿ ತಿನ್ನಿಸುವ, ಹಸುವಿನ ಗುದದ್ವಾರಕ್ಕೆ ಕಿಸ್ ಮಾಡಿಸುವ, ಇಡೀ ದಿನ ಹಸು ಸೆಗಣಿ ಹಾಕುವುದನ್ನೇ ಕಾದು ಅದನ್ನು ನೆಲಕ್ಕೆ ಬೀಳದಂತೆ ಬೊಗಸೆಯಲ್ಲಿ ಹಿಡಿಸುವ, ಗಂಜಲ ಕುಡಿಸುವ, ಹಸಿ ಮೀನು ತಿನ್ನಿಸುವ ವಿಕೃತ ಮನಸ್ಸಿನ ಶಿಕ್ಷೆಗಳನ್ನು ನೀಡುವ ಈ ರಿಯಾಲಿಟಿ ಶೋಗಳನ್ನು ವಿಕೃತ ಮನಸ್ಸಿನವರಷ್ಟೆ ರೂಪಿಸಲು ಸಾಧ್ಯ.

ಇಂಥ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ಯುವತಿಯರೂ ಸಹ ಹಣಕ್ಕಾಗಿ ಸ್ವಾಭಿಮಾನವನ್ನೇ ಬಿಟ್ಟು ನಿಂತ ಮುಖೇಡಿಗಳು. ಯಾರದೋ ಇಶಾರೆಯ ಮೇಲೆ ತಮ್ಮ ವ್ಯಕ್ತಿತ್ವವನ್ನೇ ಮರೆತು ಇಂಥ ಅಸಹ್ಯಗಳನ್ನೆಲ್ಲ ಮಾಡುವ ಈ ಯುವತಿಯರು ಸಾರ್ವಜನಿಕ ಅನುಕಂಪಕ್ಕೂ ಲಾಯಕ್ಕಾದವರಲ್ಲ.

ಅಕುಲ್ ಬಾಲಾಜಿ
ಅಕ್ಷತಾ ಹೇಳುತ್ತಿರುವುದೆಲ್ಲಾ ನಿಜವಾದರೆ, ಆಕೆ ಮಹಿಳಾ ಆಯೋಗಕ್ಕೆ ದೂರು ನೀಡುವುದಕ್ಕೂ ಮುನ್ನ ಪೊಲೀಸ್ ಠಾಣೆಯಲ್ಲಿ ತನ್ನ ದೂರು ಕೊಡುವುದು ಒಳ್ಳೆಯದು. ಒಂದು ವೇಳೆ ಆಕೆಯ ಮೇಲೆ ದೈಹಿಕ, ಮಾನಸಿಕ ಹಲ್ಲೆ ನಡೆದಿರುವುದು ಖಾತ್ರಿಯಾದರೆ ಶೋನ ನಿರ್ಮಾಪಕ, ನಿರ್ದೇಶಕ, ನಿರೂಪಕರೆಲ್ಲರೂ ಜೈಲು ಸೇರುತ್ತಾರೆ. ಅದೊಂದನ್ನು ಮಾಡಿದರೆ ಈ ರಿಯಾಲಿಟಿ ಶೋನ ಚಿತ್ರಹಿಂಸೆ ಕನ್ನಡಪ್ರೇಕ್ಷಕರಿಗೆ ತಪ್ಪಿದಂತಾಗುತ್ತದೆ. ಈ ಶೋನಲ್ಲಿ ಭಾಗವಹಿಸಿದ್ದಕ್ಕೆ ಆಕೆ ತಕ್ಕ ಪ್ರಾಯಶ್ವಿತ್ತವನ್ನೂ ಮಾಡಿಕೊಂಡಂತಾಗುತ್ತದೆ.

ಪ್ಯಾಟಿ ಹುಡ್ಗೀರ್ ಸೇರಿದಂತೆ ಸುವರ್ಣದಲ್ಲಿ ಪ್ರಸಾರವಾಗುವ ಇದೇ ಬಗೆಯ ರಿಯಾಲಿಟಿ ಶೋಗಳಿಗೆ ಯುವತಿಯರೇ ಆಸ್ತಿ, ಬಂಡವಾಳ. ಈ ಯುವತಿಯರನ್ನು ನಡೆಸಿಕೊಳ್ಳುವ ರೀತಿಯಲ್ಲೇ ತಮ್ಮ ವಿಕೃತ ಲೈಂಗಿಕ ಚೇಷ್ಟೆಗಳನ್ನು ಈಡೇರಿಸಿಕೊಳ್ಳುವ ಕಾರ್ಯಕ್ರಮದ ತಂಡ, ಅದನ್ನೇ ಕನ್ನಡ ಪ್ರೇಕ್ಷಕರಿಗೆ ಉಣಬಡಿಸುತ್ತಿರುವುದು ಹೇಸಿಗೆ ಹುಟ್ಟಿಸುವ ವಿಷಯ. ಯುವತಿಯರನ್ನು ನೀರಲ್ಲಿ, ಕೊಚ್ಚೆಯಲ್ಲಿ ಹೊರಳಾಡಿಸುವುದರ ಉದ್ದೇಶ ಏನೆಂಬುದನ್ನು ಯಾರು ಬೇಕಾದರೂ ಸುಲಭವಾಗಿ ಊಹಿಸಿಕೊಳ್ಳಬಹುದು. ಪ್ರಸಾರವಾಗುವ ಕಾರ್ಯಕ್ರಮದಲ್ಲೇ ಇಂಥ ಹಿಂಸೆ ಇರುವಾಗ ತೆರೆಮರೆಯಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ಊಹಿಸಿಕೊಳ್ಳುವುದು ಸುಲಭ. ಅಕ್ಷತಾ ಇದೇ ವಿಷಯಗಳನ್ನು ಈಗ ಪ್ರಸ್ತಾಪಿಸುತ್ತಿದ್ದಾಳೆ.

ಕನ್ನಡ ಚಾನಲ್‌ಗಳು ಟಿಆರ್‌ಪಿಗಾಗಿ, ಅಗ್ಗದ ಜನಪ್ರಿಯತೆಗಾಗಿ ಇಂಥ ವ್ಯಭಿಚಾರಗಳನ್ನು ನಡೆಸುತ್ತಲೇ ಇದ್ದರೆ, ಅವುಗಳನ್ನು ನಮ್ಮ ಪ್ರೇಕ್ಷಕರು ಕಣ್ಣುಬಾಯಿ ಬಿಟ್ಟುಕೊಂಡು ನೋಡುತ್ತಲೇ ಹೋದರೆ, ಯಾರೂ ಏನನ್ನೂ ಮಾಡಲಾಗದು. ಜನರು ಇಂಥ ಕಾರ್ಯಕ್ರಮಗಳನ್ನು ತಿರಸ್ಕರಿಸಿದ ಹೊರತು ವಿಕೃತ ಮನಸ್ಸಿನವರ ವಿಕೃತ ಶೋಗಳಿಗೇನು ಕೊರತೆಯಿರುವುದಿಲ್ಲ.

ಈ ಲೇಖನಗಳನ್ನೂ ಒಮ್ಮೆ ಓದಿ:


ಪ್ಯಾಟೆ ಹುಡ್ಗೀರು: ನೋಟೀಸು ಕೊಟ್ಟರೆ ಸಾಕೆ? ಈ ಅಸಹ್ಯ ನಿಲ್ಲಬೇಡವೇ?


ರಿಯಾಲಿಟಿ ಶೋ ಹೆಸರಿನಲ್ಲಿ ಬಾಲಕನ ಮೇಲೆ ದೌರ್ಜನ್ಯ

Thursday, April 28, 2011

ಮೌಢ್ಯವನ್ನು ಗೆಲ್ಲಲು ಸತ್ಯದ ಮಾರ್ಗವೇ ಅನಿವಾರ್ಯವಲ್ಲವೇ?

ಎಲ್ಲರೂ ನಿಮ್ಮಂತೆಯೇ ಯೋಚಿಸಿದರೆ ಪ್ರಪಂಚ ಹೇಗಿರಬಹುದು ಹೇಳಿ ಗುರುಗಳೇ? ಬುದ್ಧ, ಭಗವಾನ್ ಅಲ್ಲ ಅನಿಸಿಬಿಟ್ಟರೆ, ಜನರು ನಂಬಿಕೆಗಳನ್ನು (ಮೂಢವೋ, ಅಲ್ಲವೋ) ಬಿಟ್ಟರೆ, ನಿಮ್ಮಂತೆಯೇ ಯೋಚಿಸಿದರೆ how boring? ಅಲ್ವಾ? ನಮ್ಮ ಬದುಕು ಬಹಳ ಹಸನಾಗಿದೆ ಸ್ವಾಮೀ.. ದಿನದ್ದೋ, ತಿಂಗಳಿದ್ದೋ ಖರ್ಚಿಗೆ ಹಣ ಸಿಗುತ್ತದೆ ಬದುಕು ಆರಾಮಾಗಿದೆ. ಎಷ್ಟೋ ಜನ ಬದುಕು ಬೇಡದೆ ಹೋದವರುಂಟು.. ಬಾಬಾರ ಒಂದು ನಗು, ಒಂದು ನೋಟ ಅಂಥಹ ಎಷ್ಟೋ ಜನರಿಗೆ ಮತ್ತೆ ಬದುಕಲು ಕಾರಣ ನೀಡಿದ್ದುಂಟು. ಮತ್ತೆ ಎದ್ದು ಸಾಧಿಸಿದವರುಂಟು. ಬಡ ಬಗ್ಗರಿಗೆ ಉಚಿತ ಕ್ಯಾನ್ಸರ್, ಹೃದ್ರೋಗ ಆಸ್ಪತ್ರೆಗಳಲ್ಲಿ ಶುಶ್ರೂಷೆ ಸಿಕ್ಕಿದೆ.

ಬುದ್ಧ ತಾನು ದೇವರಲ್ಲ ಎಂದು ಹೇಳಿರಬಹುದು. ನಿಮಗೆ ಸ್ವಂತ ವಿಚಾರವಿದೆ, ಅದಕ್ಕೆ ಆ ಕೋನದಿಂದ ಬುದ್ಧನನ್ನು ನೋಡುತ್ತೀರಿ, ಬುದ್ಧನನ್ನು ಭಗವಾನ್ ಅಲ್ಲ ಎನ್ನುತ್ತೀರಿ. ಆದರೆ, ಬುದ್ಧನಿಂದಾಗಿ ಬದುಕಿದವರಿಗೆ ಅವನು ಯಾವತ್ತೂ ಭಗವಾನ್. ಹೋಗಲಿ ಬಿಡಿ, ಕಷ್ಟದಲ್ಲಿದ್ದ ಯಾರನ್ನೋ ನೀವೇ ಕಾಪಾಡಿದರೆ ದೇವರಂತೆ ಬಂದು ಕಾಪಾಡಿದ ಅನ್ನಲ್ಲವೇ? ಹಾಗೆಯೇ ಬುದ್ಧ, ಬಸವಣ್ಣ, ಅಮ್ಮ ಎಲ್ಲ ದೇವರಾಗಿರಬಹುದಲ್ಲವೇ? ಬುದ್ಧನನ್ನು, ಬಸವಣ್ಣನನ್ನು ಬಾಬಾರನ್ನು, ಮತ್ತಿತರರನ್ನು ತರ್ಕಿಸುವುದು ಎಷ್ಟು ಸರಿ? ಅಧ್ಯಾತ್ಮ ಗುರುಗಳು ಹೀಗೆ ಇರಬೇಕು ಎನ್ನುವುದು ಎಷ್ಟು ಸರಿ? ಹಾಗೆ ನೋಡಿದರೆ ಎಲ್ಲವೂ ಮಾರಾಟದ ಸರಕೆ ಅಲ್ಲವೇ? ಕೊಡು ಕೊಳ್ಳುವಿಕೆ ಇದ್ದದ್ದೇ ಅಲ್ಲವೇ? ಹಣದ ವಿನಿಮಯ ಇದ್ದರೆ ಮಾತ್ರ ಮಾರಾಟವೇ? ನೀವು ತಾರ್ಕಿಕವಾಗಿ ಯೋಚಿಸಿ, ಯಾವುದನ್ನು ಮೌಢ್ಯ ಎನ್ನುತ್ತೀರೋ psychologically ಅದು ಮೌಢ್ಯ ಅನಿಸಲ್ಲ. ನೀವು ಹೇಳುವ ಮೌಢ್ಯವನ್ನು ಗೆಲ್ಲುವುದು ಎಲ್ಲರಿಂದ ಸಾಧ್ಯವೂ ಇಲ್ಲ.
                                                                                         -ರವೀಂದ್ರ ಪ್ರಭು

(ಊರ್ಧ್ವಮುಖಿ ಎಂಬ ಬ್ಲಾಗ್‌ನ ರವೀಂದ್ರ ಪ್ರಭು, ಸಾಯಿಬಾಬಾ ಸಾವನ್ನು ಗೆಲ್ಲಲಿಲ್ಲ, ನಮ್ಮಿಂದ ಮೌಢ್ಯವನ್ನು ಗೆಲ್ಲಲಾಗಲಿಲ್ಲ ಎಂಬ ಲೇಖನಕ್ಕೆ ನೀಡಿರುವ ಪ್ರತಿಕ್ರಿಯೆ ಇದು. ರವೀಂದ್ರ ಬಾಬು ಛಾಯಾಗ್ರಹಣದಲ್ಲಿ ಆಸಕ್ತಿ ಉಳ್ಳವರು. ಅವರ ಬ್ಲಾಗ್‌ನಲ್ಲಿ ಅವರು ಚಿತ್ರಿಸಿದ ಸುಂದರವಾದ ಚಿತ್ರಗಳಿವೆ. ಅವರ ಮೇಲಿನ ಪ್ರತಿಕ್ರಿಯೆಗೆ ಉತ್ತರಿಸಬೇಕಿನಿಸಿದೆ, ಉತ್ತರಿಸಲು ಪ್ರಯತ್ನಿಸಿದ್ದೇವೆ.)

ಪ್ರಿಯ ರವೀಂದ್ರ ಪ್ರಭು,
ನೀವು ಏನನ್ನು ಹೇಳಹೊರಟಿದ್ದೀರೋ ಅದೆಲ್ಲವೂ ಅರ್ಥವಾಗುತ್ತವೆ. ಮೌಢ್ಯವನ್ನು ಗೆಲ್ಲುವುದು ಎಲ್ಲರಿಂದ ಸಾಧ್ಯವಿಲ್ಲ ಎಂಬುದು ನಿಮ್ಮ ಅಭಿಪ್ರಾಯ. ಎಲ್ಲರೂ ಮೌಢ್ಯವನ್ನು ಗೆಲ್ಲುವಂತಾಗಬೇಕು ಎಂಬುದು ನಮ್ಮ ಅಪೇಕ್ಷೆ.

ಜನರು ನಂಬಿಕೆಗಳನ್ನು ಬಿಟ್ಟುಬಿಡಬೇಕು ಎಂಬುದು ನಮ್ಮ ಅಭಿಪ್ರಾಯವಲ್ಲ. ನಂಬಿಕೆಗಳು ಇಲ್ಲದೆ ಬದುಕೇ ಇಲ್ಲ. ಯಾವುದು ನಂಬಿಕೆಗೆ ಅರ್ಹವೋ ಅದನ್ನಷ್ಟೆ ನಂಬಬೇಕು ಎಂಬುದಷ್ಟೇ ನಮ್ಮ ಕಾಳಜಿ.

ನೀವು ಬುದ್ಧನ ವಿಷಯ ಪ್ರಸ್ತಾಪಿಸಿದ್ದೀರಿ. ಬುದ್ಧನದು ಸತ್ಯದ ಮಾರ್ಗ. ಬುದ್ಧನ ಈ ಸತ್ಯಮಾರ್ಗವನ್ನು ಒಪ್ಪಿದ್ದ, ತಾನೂ ಅಳವಡಿಸಿಕೊಂಡಿದ್ದ ಸ್ವಾಮಿ ವಿವೇಕಾನಂದರು ಒಂದೆಡೆ ಹೀಗೆ ಹೇಳುತ್ತಾರೆ:

ಸತ್ಯದ ಹಾದಿಯಲ್ಲಿ ಅತ್ಯಂತ ಅಡಚಣೆಯಾಗುವುವು ಪವಾಡಗಳು ಎಂದು ನಾನು ತಿಳಿದಿರುವೆ. ಬುದ್ಧನ ಶಿಷ್ಯ ಬುದ್ಧನಿಗೆ ಒಬ್ಬಾತ ಪವಾಡವನ್ನು ಮಾಡಿದ ಬಗ್ಗೆ ಹೇಳಿದಾಗ, ಬುದ್ಧ ಒಂದು ಭಿಕ್ಷಾಪಾತ್ರೆಯನ್ನು ಅದನ್ನು ಮುಟ್ಟದಂತೆ ಪವಾಡದ ರೀತಿ ತೆಗೆದುಕೊಂಡು ಆತನಿಗೆ ತೋರಿಸಿದರು. ನಂತರ ಅದನ್ನು ತನ್ನ ಕಾಲಿನಿಂದ ತುಳಿದು ಚೂರು ಚೂರು ಮಾಡಿ, ಪವಾಡದಲ್ಲಿ ನಂಬಿಕೆ ಇಡಬೇಡಿ. ಬದಲಿಗೆ ನಿತ್ಯಸತ್ಯವಾದ ನಿಯಮಗಳನ್ನು ಕುರಿತು ಆಲೋಚಿಸಿ ಎಂದು ಅವರಿಗೆ ಹೇಳಿದ. ತಮ್ಮನ್ನು ಸುರಕ್ಷಿತವಾಗಿ ಕರೆದೊಯ್ಯುವ ತಮ್ಮ ಹೃದಯದಲ್ಲೇ ಸುಪ್ತವಾಗಿರುವ ಅಂತಃಶಕ್ತಿಯ ಬಗ್ಗೆ ಅವರಿಗೆ ತಿಳಿಯ ಹೇಳಿದ. ಪವಾಡಗಳು ಅತ್ಯಂತ ಅಡಚಣೆಗಳು. ನಾವು ಅದನ್ನು ನಾಶಪಡಿಸಬೇಕು.
                ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ, ಸಂಪುಟ-೧. ಪುಟ ೩೨೮(ಇಂಗ್ಲಿಷ್)

ಬುದ್ಧ ಸುಳ್ಳೇಸುಳ್ಳು ಪವಾಡಗಳನ್ನು ಎಷ್ಟು ದ್ವೇಷಿಸುತ್ತಿದ್ದ ಎನ್ನುವುದಕ್ಕೆ ವಿವೇಕಾನಂದರ ಮಾತುಗಳು ಉದಾಹರಣೆ. ಎಚ್‌ಎನ್, ಕೋವೋರ್‌ರಂಥವರು ಆಧುನಿಕ ಕಾಲದಲ್ಲಿ ಮಾಡಿದ್ದನ್ನು ಬುದ್ಧ ಆ ಕಾಲದಲ್ಲೇ ಮಾಡಿದ್ದ, ಮತ್ತು ಹಾಗೆ ಮಾಡುವುದರ ಮೂಲಕ ವೈಜ್ಞಾನಿಕ ಮನೋಭಾವ ನಮ್ಮದಾಗಬೇಕು ಎಂದು ಪರಿಣಾಮಕಾರಿಯಾಗಿ ನಿರೂಪಿಸಿದ್ದ.

ಇಂಥ ಬುದ್ಧನಿಗೆ ನಾವು ಪವಾಡಗಳನ್ನು ಆರೋಪಿಸಿದರೆ, ದೈವವನ್ನಾಗಿಸಿದರೆ ಅದು ಬುದ್ಧನಿಗೆ ನಾವು ಮಾಡುವ ಅಪಚಾರವಲ್ಲವೇ? ಅಪಮಾನವಲ್ಲವೇ? ಇಂಥ ಅಪಚಾರಗಳನ್ನು ನಾವು ಕೇವಲ ಬುದ್ಧನಿಗೆ ಮಾಡಿಲ್ಲ, ಎಲ್ಲ ಮಹಾನುಭಾವರಿಗೂ ಮಾಡಿದ್ದೇವೆ.

ದುರ್ಬಲ ಮನಸ್ಸುಗಳಷ್ಟೇ ತಮ್ಮ ಹೊರಗೆ ದೇವರನ್ನು, ದೇವಮಾನವರನ್ನು ಹುಡುಕಲು ಯತ್ನಿಸುತ್ತವೆ. ಹಾಗಂತ ಶುಷ್ಕ ವಿಚಾರವಾದವನ್ನು ಇಲ್ಲಿ ಹೇಳಲು ಹೊರಟಿಲ್ಲ. ವೈಚಾರಿಕತೆ ಮತ್ತು ಅಧ್ಯಾತ್ಮ ಎರಡೂ ಭಿನ್ನ ಧ್ರುವಗಳು, ಎಂದೂ ಒಂದೆಡೆ ಸೇರುವುದಿಲ್ಲ ಎಂದು ಹಲವರು ಭಾವಿಸಿದ್ದಾರೆ. ಎರಡನ್ನೂ ಒಟ್ಟಾಗಿ ಗ್ರಹಿಸುವುದು ನಮಗೆ ಸಾಧ್ಯವಾಗಬೇಕು. ಬುದ್ಧನಿಗೆ ಅದು ಸಾಧ್ಯವಾಗಿತ್ತು, ವಿವೇಕಾನಂದರಿಗೆ ಅದು ಸಾಧ್ಯವಾಗಿತ್ತು, ಕುವೆಂಪು ಅವರಿಗೂ ಸಾಧ್ಯವಾಗಿತ್ತು. ಅಧ್ಯಾತ್ಮ ಹಾಗು ವಿಜ್ಞಾನ ಒಟ್ಟಾಗಿ ಸೇರುವ, ಪರಸ್ಪರ ಪೂರಕವಾಗಿ ನಿಲ್ಲುವುದಕ್ಕೆ ಒಂದು ಸುಂದರ ಉದಾಹರಣೆ ಕುವೆಂಪು ಅವರ ಕಾನೂರು ಹೆಗ್ಗಡತಿ. ಬಸವಣ್ಣನ ಸಾಮಾಜಿಕ ನೆಲೆಗಟ್ಟಿನ ಅಧ್ಯಾತ್ಮವೂ ಇಂಥ ನೆಲೆಯಿಂದಲೇ ಮೂಡಿದ್ದು.

ಸಾಯಿಬಾಬಾರ ನೋಟಕ್ಕೆ, ನಗೆಗೆ ಯಾರಿಗಾದರೂ ಸಾಂತ್ವನ ಸಿಗುತ್ತಿದ್ದರೆ ಸಂತೋಷ. ಸಾಯಿಬಾಬಾರ ನೋಟ, ನಗೆ ಮಾತ್ರವೇಕೆ? ಒಂದು ಹಕ್ಕಿಯ ಮಧುರ ಕೂಗು, ಒಂದು ಮೋಹಕ ಹೂವಿನ ಪಕಳೆಗಳು, ಆಕಾಶದಲ್ಲಿ ಇದ್ದಕ್ಕಿದ್ದಂತೆ ಎದ್ದ ಒಂದು ಕಾಮನಬಿಲ್ಲು, ಮಳೆಬಿದ್ದ ನೆಲದಿಂದ ಎದ್ದ ಘಮ್ಮನೆ ಪರಿಮಳ, ಒಂದು ಎಳೇ ಮಗುವಿನ ತುಟಿಯಲ್ಲಿ ಅರಳಿದ ತಿಳಿನಗು ಎಲ್ಲವೂ ನಮಗೆ ಬದುಕುವ ಸ್ಫೂರ್ತಿಯನ್ನು ನೀಡುತ್ತವೆ. ಇಂಥೆಲ್ಲ ಸ್ಫೂರ್ತಿದಾಯಕ ಜೀವತಂತುಗಳು ನಮ್ಮ ಸುತ್ತಮುತ್ತಲೇ ಇರುವಾಗ ಬದುಕು ಬೋರಿಂಗ್ ಯಾಕಾಗಬೇಕು ರವೀಂದ್ರ ಅವರೇ? ಬದುಕು ಇಂಟರೆಸ್ಟಿಂಗ್ ಆಗಿರಲು ಸುಳ್ಳು ದೇವರನ್ನು ಸೃಷ್ಟಿಸಿಕೊಳ್ಳಲೇಬೇಕಾ? ಭ್ರಮೆಗಳಲ್ಲೇ ಬದುಕಬೇಕಾ? ಸ್ವಲ್ಪ ಯೋಚನೆ ಮಾಡಿ.

ಅಧ್ಯಾತ್ಮ ಗುರು ಹೀಗೇ ಇರಬೇಕೆಂದು ಹೇಳುವುದು ಎಷ್ಟು ಸರಿ ಎನ್ನುವುದು ನಿಮ್ಮ ಪ್ರಶ್ನೆ. ಅಧ್ಯಾತ್ಮ ಗುರುಗಳು ಹೇಗಾದರೂ ಇರಲಿ, ಕಪಟ-ಸುಳ್ಳುಗಳಿಂದ ಮುಕ್ತರಾಗಿರಬೇಕು, ಇಲ್ಲವಾದಲ್ಲಿ ಅಧ್ಯಾತ್ಮಕ್ಕೆ ಅರ್ಥವೇ ಉಳಿಯುವುದಿಲ್ಲ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಇದಿರ ಹಳಿಯಲುಬೇಡ, ತನ್ನ ಬಣ್ಣಿಸಬೇಡ, ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ ಎಂದು ಅಧ್ಯಾತ್ಮವನ್ನು ಅತ್ಯಂತ ಸರಳವಾಗಿ, ನೇರವಾಗಿ ಹೇಳಿದರು ಬಸವಣ್ಣ. ಇದೇ ನಿಜವಾದ ಅಧ್ಯಾತ್ಮ ಮಾರ್ಗ.

ಹಾಗೆ ನೋಡಿದರೆ, ಎಲ್ಲವೂ ಮಾರಾಟದ ಸರಕೇ ಅಲ್ಲವೇ? ಎನ್ನುತ್ತೀರಿ ನೀವು. ಅಧ್ಯಾತ್ಮ ಮಾರಾಟದ ಸರಕು ಅಲ್ಲವೇ ಅಲ್ಲ. ಮಾರಾಟದ ಸರಕಾಗಿದ್ದರೆ ಬುದ್ಧ ರಾಜ್ಯವನ್ನು ತೊರೆದು ಹೊರಗೆ ಬರುತ್ತಿರಲಿಲ್ಲ. ಬಸವಣ್ಣ ಅಧಿಕಾರವನ್ನು ಕಳೆದುಕೊಳ್ಳಬೇಕಾಗಿರಲಿಲ್ಲ. ರಾಮಕೃಷ್ಣ ಪರಮಹಂಸರು, ವಿವೇಕಾನಂದರು ಅಧ್ಯಾತ್ಮದ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಸಂಗ್ರಹಿಸಿಡಲಿಲ್ಲ. ನಂಬಿಕೆ, ಪ್ರೀತಿ, ಆತ್ಮವಿಶ್ವಾಸ, ಸಂಬಂಧಗಳು ಯಾವುದೂ ಮಾರಾಟದ ಸರಕಲ್ಲ, ಆಗಲೂ ಬಾರದು. ಅಧ್ಯಾತ್ಮವೂ ಹಾಗೆಯೇ.

ಬದುಕಲ್ಲಿ ಆಸಕ್ತಿಯನ್ನೇ ಕಳೆದುಕೊಂಡವರ ಕುರಿತು ನೀವು ಹೇಳುತ್ತೀರಿ. ಅವರ ಕಣ್ಣುಗಳಲ್ಲಿ ಆತ್ಮವಿಶ್ವಾಸವನ್ನು ತರಬೇಕಾಗಿರುವುದು ನಮ್ಮ ಸಮಾಜ ವ್ಯವಸ್ಥೆ ಮತ್ತು ಸರ್ಕಾರಗಳು; ಸುಳ್ಳುಬಾಬಾಗಳಲ್ಲ. ಹಾಗೆಯೇ ವಿವೇಕಾನಂದರು ಹೇಳುವಂತೆ ತಮ್ಮೊಳಗೇ ಇರುವ ಅಂತಃಶಕ್ತಿಯನ್ನು ನಾವು ಜಾಗೃತಗೊಳಿಸಿಕೊಳ್ಳಬೇಕಾಗುತ್ತದೆ. ಜಂಜಡಗಳಲ್ಲಿ ಸಿಕ್ಕ ಮನಸ್ಸು ಹೊರಗಿನ ಅತಿಮಾನವ ಶಕ್ತಿಗಾಗಿ ಆಶ್ರಯಿಸುತ್ತದೆ. ಈ ಮನಸ್ಸುಗಳ ದೌರ್ಬಲ್ಯಗಳನ್ನು ಬಳಸಿಕೊಳ್ಳುವವರು ಸುಳ್ಳುಪವಾಡಗಳನ್ನು ಮಾಡುತ್ತಾರೆ, ಹಣ ಗಳಿಸುತ್ತಾರೆ.

ಪವಾಡ ನಡೆಯಬೇಕಿರುವುದು ದುರ್ಬಲ ಮನಸ್ಸುಗಳಲ್ಲಿ. ಆ ಪವಾಡವೇನೆಂದರೆ, ಆ ದುರ್ಬಲ ಮನಸ್ಸುಗಳು ಸಬಲವಾಗುವುದು. ತಮ್ಮಲ್ಲಿ ತಾವು ವಿಶ್ವಾಸವಿಡುವುದು. ಆ ವಿಶ್ವಾಸದ ಬಲದಲ್ಲಿ ನೆಮ್ಮದಿ-ಸಂತೋಷದಿಂದ ಬದುಕುವಂತಾಗುವುದು. ಸುಳ್ಳಿನ ತಳಪಾಯದ ಮೇಲೆ ಕಟ್ಟಿದ ಸೌಧ ಬಹುಕಾಲ ಇರಲಾರದು. ಬುದ್ಧನ ಸತ್ಯ ಮಾರ್ಗವೇ ನಿಜವಾದ ಬದುಕಿನ ತಳಪಾಯ. ಅದರ ಮೇಲೇ ನಮ್ಮ ಬದುಕು ಕಟ್ಟಿಕೊಳ್ಳುವಂತಾಗಬೇಕು. ಅಲ್ಲವೇ?

ನಿಮ್ಮ ಬ್ಲಾಗ್‌ಗೆ ಊರ್ಧ್ವಮುಖಿ ಎಂಬ ಸುಂದರ ಹೆಸರನ್ನು ಇಟ್ಟಿದ್ದೀರಿ. ನಾವು ಸತ್ಯದ ಮಾರ್ಗದಲ್ಲಿ ಊರ್ಧ್ವಮುಖಿಗಳಾಗಬೇಕೇ ಹೊರತು ಸುಳ್ಳಿನ ಮಾರ್ಗದಲ್ಲಿ ಅಧೋಮುಖಿಗಳಾಗಬಾರದು ಅಲ್ಲವೇ?

ಪ್ರೀತಿಯಿಂದ,

ಸಂಪಾದಕೀಯ

Wednesday, April 27, 2011

ಸಾವಿಲ್ಲದ ದೇವ ಮತ್ತು ಸಾಯುವ ಬಾಬಾ


 ಸಾಯಿಬಾಬಾ ಸಾವನ್ನು ಗೆಲ್ಲಲಿಲ್ಲ, ನಮ್ಮಿಂದ ಮೌಢ್ಯವನ್ನು ಗೆಲ್ಲಲಾಗಲಿಲ್ಲ ಲೇಖನಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ನಮಗೆ ಈ ಸಂದರ್ಭಕ್ಕೆ ಬೇಕಾಗಿರುವುದು ದೇವಮಾನವರಲ್ಲ, ನಿಜಮನುಷ್ಯರು ಎಂಬುದನ್ನು ಅರ್ಥಮಾಡಿಕೊಳ್ಳಲೇಬೇಕಾದ ಕಾಲವಿದು. ಸನ್ಮಾರ್ಗ ಪತ್ರಿಕೆಯ ಸಂಪಾದಕರಾದ ಎ.ಕೆ.ಕುಕ್ಕಿಲ ಅವರು ತಮ್ಮ ಪತ್ರಿಕೆಯ ಸಂಪಾದಕೀಯಕ್ಕೆ ಬರೆದ ಲೇಖನವನ್ನು ನಮಗೆ ಕಳುಹಿಸಿದ್ದಾರೆ. ಸಾಯಿಬಾಬಾ ಅವರನ್ನು ಅಪ್ಪಟ ಮನುಷ್ಯರಂತೆಯೇ ಕಂಡು, ಅವರ ಜನಪರ ಕಾಳಜಿಗಳನ್ನು ಪ್ರಶಂಸಿಸುವ ಈ ಲೇಖನ ಅಗಲಿದ ಚೇತನಕ್ಕೆ ನಿಜವಾದ ಶ್ರದ್ಧಾಂಜಲಿಯಾಗಬಹುದು. -ಸಂಪಾದಕೀಯ

ವೇಷ ಕಳಚಿಟ್ಟು, ಅಪ್ಪಟ ಮನುಷ್ಯರಂತೆ ಸಾಯಿಬಾಬಾ ಹೊರಟು ಹೋಗಿದ್ದಾರೆ. ಇನ್ನು, ಯಾರಾದರೂ ಆ ವೇಷವನ್ನು ತೊಟ್ಟುಕೊಂಡು ತಾನು ದೇವನೆಂದು ಘೋಷಿಸಿಕೊಂಡರೆ, ಆತನನ್ನು ನಂಬಬೇಡಿ ಎಂಬ ಸೂಕ್ಷ್ಮ ಸಂದೇಶವನ್ನೂ ಈ ಮೂಲಕ ಬಾಬಾ ರವಾನಿಸಿದ್ದಾರೆ. ನಿಜವಾಗಿ, ಜೀವಂತ ಇದ್ದಾಗ ಅವರ ಸುತ್ತ ಯಾವೆಲ್ಲಾ ಭ್ರಮೆಗಳು ಹರಡಿಕೊಂಡಿದ್ದುವೋ ಅವೆಲ್ಲವೂ ಆಸ್ಪತ್ರೆಯ ತುರ್ತು ನಿಗಾ ಕೋಣೆಯಲ್ಲಿ ಅವರು ಉಸಿರಾಟಕ್ಕೆ ಸಂಕಟ ಪಡುತ್ತಿದ್ದಾಗಲೇ ಬಹುತೇಕ ಕಳಚಿ ಬಿಟ್ಟಿದ್ದುವು. ಹಾಗೆಯೇ, ಆಸ್ಪತ್ರೆಯ ಹೊರಗೆ ನಿಂತು, ದೇವರ ಆರೋಗ್ಯಕ್ಕೆ ಪ್ರಾರ್ಥಿಸುತ್ತಿದ್ದ ಭಕ್ತರ ದೃಶ್ಯವು, ಮನುಷ್ಯ ದೇವನಾಗಲು ಸಾಧ್ಯವಿಲ್ಲ ಎಂದು ನಂಬಿಕೊಂಡವರನ್ನು ಅಪಾರ ಜಿಜ್ಞಾಸೆಗೆ ಒಳಪಡಿಸಿತ್ತು. ಕಾಯಿಲೆಯನ್ನು ಗುಣಪಡಿಸಬೇಕಾದವನೇ ಕಾಯಿಲೆಪೀಡಿತನಾಗಿ ಆಸ್ಪತ್ರೆಗೆ ಸೇರುವುದಾದರೆ, ಆತ ದೇವನಾಗುವುದಾದರೂ ಹೇಗೆ? ೮೫ ವರ್ಷದ ಸಾಮಾನ್ಯ ವ್ಯಕ್ತಿಯೊಬ್ಬನಿಗೆ ಬಾಧಿಸುವ ಸಹಜ ಕಾಯಿಲೆಗಳು ಬಾಬಾರನ್ನೂ ಆಕ್ರಮಿಸಿದ್ದುವು. ಅವರು ಚಲಿಸುತ್ತಿದ್ದುದು ಇನ್ನೊಬ್ಬರ ಸಹಾಯದಿಂದ. ಬಾಲ್ಯ, ಯೌವನ, ಮುಪ್ಪು ಮು೦ತಾದ ಮಾನವ ಸಹಜ ಬದಲಾವಣೆಗಳು ದೇವನಲ್ಲೂ ಕಾಣಿಸಿಕೊಳ್ಳುವುದಾದರೆ ದೇವನಿಗೂ ಮನುಷ್ಯನಿಗೂ ನಡುವೆ ಇರುವ ವ್ಯತ್ಯಾಸವಾದರೂ ಏನು? ಒಂದು ರೀತಿಯಲ್ಲಿ, ಭಾವುಕ ಜನರು ಸಾಯಿಬಾಬಾರ ಮೇಲೆ ದೈವತ್ವದ ಯಾವೆಲ್ಲ ಆರೋಪಗಳನ್ನು ಹೊರಿಸಿಬಿಟ್ಟಿದ್ದರೋ ಅವೆಲ್ಲವನ್ನೂ ಬಾಬಾ ನಯವಾಗಿ ನಿರಾಕರಿಸಿದ್ದಾರೆ. ಬಾಲ್ಯ, ಯೌವನ, ಮುಪ್ಪು ಮುಂತಾದ ಮನುಷ್ಯ ಸಹಜ ಬದಲಾವಣೆಗಳಿಲ್ಲದ, ಕಾಯಿಲೆ ಬಾಧಿಸದ, ತ೦ದೆ-ತಾಯಿ, ಪತ್ನಿ-ಮಕ್ಕಳಿಲ್ಲದ, ಸಾವು ಇಲ್ಲದ, ಆಹಾರ ಸೇವಿಸದ ಶಕ್ತಿಯೊಂದಕ್ಕೆ ಮಾತ್ರ ದೇವರಾಗಲು ಸಾಧ್ಯ ಎಂಬುದು ಅವರ ಸಾವಿನ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

ನಮ್ಮಲ್ಲಿ ಒಳ್ಳೆತನ ಎಷ್ಟು ಅಪರೂಪವಾಗಿ ಬಿಟ್ಟಿದೆಯೆಂದರೆ, ಯಾರಾದರೊಬ್ಬರು ನಾಲ್ಕು ಮ೦ದಿಗೆ ಅನ್ನ ಹಾಕಿದರೆ, ನಿರ್ವಸಿತರಿಗೆ ಗುಡಿಸಲು ಕಟ್ಟಿಕೊಟ್ಟರೆ, ಅವರನ್ನೇ ದೇವ ಅನ್ನುವಷ್ಟು. ನಿಜವಾಗಿ, ಇನ್ನೊಬ್ಬರಿಗೆ ನೆರವಾಗುವ, ಸಂಕಟಗಳಲ್ಲಿ ಪಾಲುಗೊಳ್ಳುವ ಮಾನವ ಸಹಜ ಸ್ವಭಾವ ಮನುಷ್ಯರಲ್ಲಿ ಕಡಿಮೆಯಾಗುತ್ತಿರುವ ಹೊತ್ತಲ್ಲೇ ಸಾಯಿಬಾಬಾ ಅದನ್ನು ಅಲ್ಪಸ್ವಲ್ಪ ಪ್ರದರ್ಶಿಸಿದರು. ಶೂನ್ಯದಿಂದ ಅವರು ವಿಭೂತಿ, ಆತ್ಮಲಿಂಗ, ಉಂಗುರ ಇನ್ನೇನೋ ಸೃಷ್ಟಿಸುತ್ತಿದ್ದುದಷ್ಟೇ ಅವರು ದೇವರಾಗಲು ಕಾರಣವಾದದ್ದಲ್ಲ. ಅಂಥ ಪವಾಡಗಳನ್ನು ಪ್ರದರ್ಶಿಸುವ ಸಾಕಷ್ಟು ಬಾಬಾಗಳು ಈ ದೇಶದಲ್ಲಿದ್ದಾರೆ. ಹಿಡಿಯಷ್ಟು ಭಕ್ತರನ್ನು ಬಿಟ್ಟರೆ, ಬಾಬಾರಂತೆ ದೊಡ್ಡದೊಂದು ಭಕ್ತವೃಂದ ಇವರಿಗಿಲ್ಲ. ಇಷ್ಟಕ್ಕೂ ಬಾಬಾರ ಪವಾಡಗಳನ್ನು ಈ ದೇಶದಲ್ಲಿ ಹಲವಾರು ಮಂದಿ ಪ್ರಶ್ನಿಸಿದ್ದಾರೆ. ಬಹಿರಂಗ ಸವಾಲು ಹಾಕಿದ್ದಾರೆ. ಆದರೆ ಬಾಬಾ ಪವಾಡಗಳಾಚೆ ಒಂದು ಇಮೇಜನ್ನು ಬೆಳೆಸಿಕೊಂಡಿದ್ದರು. ಆಸ್ಪತ್ರೆಯೇ ಇಲ್ಲದ ಕಡೆ ಅವರು ಆಸ್ಪತ್ರೆಳನ್ನು ಕಟ್ಟಿ, ಉಚಿತ ಸೇವೆ ಒದಗಿಸಿದರು. ಜೀವರಕ್ಷಕ ಯಂತ್ರದಿಂದ ಉಸಿರಾಡುತ್ತಿದ್ದ ಸರಕಾರಿ ಆಸ್ಪತ್ರೆಗಳು ನಾಚುವ೦ತೆ ಇವರ ಆಸ್ಪತ್ರೆಗಳು ಸೇವೆಯಲ್ಲಿ ತೊಡಗಿದುವು. ಸತ್ಯ ಸಾಯಿ ಗಂಗಾ ಕಾಲುವೆ ಎಂಬ ಬೃಹತ್ ನೀರು ಯೋಜನೆ ತಮಿಳ್ನಾಡು ಮತ್ತು ಆಂಧ್ರಗಳ ಬಡಪಾಯಿ ಜನರಿಗೆ ನೀರುಣಿಸಿದುವು. ಅವರು ಬಡವರಿಗೆ ಅನ್ನಛತ್ರ ಕಟ್ಟಿದರು... ಬಾಬಾ ದೇವರಾದದ್ದು ಹೀಗೆ. ತನ್ನಲ್ಲಿರುವ ಮತ್ತು ಪ್ರತಿ ಮನುಷ್ಯನಲ್ಲೂ ಇರಬೇಕಾದ ಒಳ್ಳೆತನವನ್ನು ಬಾಬಾ ಪ್ರದರ್ಶಿಸಿಬಿಟ್ಟಾಗ, ಆವರೆಗೆ ಅಂಥದ್ದೊಂದು ಸೇವಾ ಗುಣವನ್ನು ರಾಜಕಾರಣಿಗಳಿಂದಲೋ ಸರಕಾರದಿಂದಲೋ ನೋಡಿರದ ಮಂದಿ ಬಾಬಾರನ್ನು ಮನುಷ್ಯಾತೀತ ಅಂದುಕೊಂಡು ಬಿಟ್ಟರು. ಇಂಥ ಸಂದರ್ಭದಲ್ಲಿ ಅವರು ಪ್ರದರ್ಶಿಸುತ್ತಿದ್ದ ಚಮತ್ಕಾರ ಜನರನ್ನು ಭಾವುಕಗೊಳಿಸಿಬಿಟ್ಟಿತು.
ಎ.ಕೆ.ಕುಕ್ಕಿಲ

ನಿಜವಾಗಿ ನಮ್ಮನ್ನಾಳುವ ಸರಕಾರ, ನಮ್ಮಿಂದ ಓಟು ಪಡೆದು ಪ್ರತಿನಿಧಿಗಳೆನಿಸಿಕೊಳ್ಳುವ ಮಂದಿ ಜೀವಂತ ಇರುತ್ತಿದ್ದರೆ, ಮನುಷ್ಯನೊಬ್ಬ ಜೀವಂತ ದೇವನಾಗುವುದಕ್ಕೆ ಸಾಧ್ಯವಿರಲಿಲ್ಲ. ಇಷ್ಟಕ್ಕೂ ಜನರಿಗೆ ನೀರೊದಗಿಸುವುದು, ಬಡವರಿಗೆ ಉಚಿತ ಚಿಕಿತ್ಸೆ, ಶಿಕ್ಷಣ ಒದಗಿಸುವುದೆಲ್ಲ ದೇವಮಾನವರಿಂದ ಮಾತ್ರ ಮಾಡಲು ಸಾಧ್ಯವಾಗುವ ಕೆಲಸವೇ? ಜನಸಾಮಾನ್ಯರ ಕುರಿತಂತೆ ಅಲ್ಪಸ್ವಲ್ಪ ಕಾಳಜಿಯುಳ್ಳ ಯಾವುದೇ ಸರಕಾರ ಇದನ್ನು ಮಾಡುವುದಕ್ಕೆ ಸಾಧ್ಯವಿದೆ. ಒಂದು ವೇಳೆ ಸರಕಾರ ಈ ಹೊಣೆಗಾರಿಕೆಯನ್ನು ಶ್ರದ್ಧೆಯಿಂದ ಮಾಡಿರುತ್ತಿದ್ದರೆ, ಬಾಬಾ ಇವತ್ತು ಈ ಮಟ್ಟದಲ್ಲಿ ಗುರುತಿಸಿಕೊಳ್ಳುವ ಸಾಧ್ಯತೆಯೇ ಇರಲಿಲ್ಲ. ಸರಕಾರವೊಂದು ಮಾಡಬಹುದಾದ ಕೆಲಸವನ್ನು ವ್ಯಕ್ತಿಯೋರ್ವ ಮಾಡಿರುವುದನ್ನು, ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಸರತಿ ಸಾಲಲ್ಲಿ ನಿಂತ ಪ್ರತಿಯೋರ್ವ ಜನಪ್ರತಿನಿಧಿಯೂ ತಮ್ಮ ವೈಫಲ್ಯವಾಗಿ ಪರಿಗಣಿಸಬೇಕು. ನಿಜವಾಗಿ ಜನರು ಇವತ್ತು ಭ್ರಮೆಗಳ ಸುತ್ತ ಸುತ್ತುತ್ತಿದ್ದರೆ, ಬಾಬಾರನ್ನು ಮನುಷ್ಯ ಅಂತ ಕರೆಯುವುದನ್ನೇ ಅಪರಾಧವಾಗಿ ಕಾಣುತ್ತಿದ್ದರೆ ಅದಕ್ಕೆ ಭಕ್ತವೃಂದ ಖಂಡಿತ ಕಾರಣ ಅಲ್ಲ. ಅವರನ್ನು ಆ ಮಟ್ಟಕ್ಕೆ ಬೆಳೆಸಿದ ವ್ಯವಸ್ಥೆಯೇ ಅದರ ಹೊಣೆಯನ್ನು ವಹಿಸಿಕೊಳ್ಳಬೇಕು.

ಏನೇ ಆಗಲಿ, ಮನುಷ್ಯ ಮತ್ತು ದೇವರ ನಡುವಿನ ಸಂಘರ್ಷದಲ್ಲಿ ಮನುಷ್ಯ ಸೋತಿದ್ದಾನೆ. ಕೆಲವೊಂದು ಚಮತ್ಕಾರಗಳನ್ನು ಪ್ರದರ್ಶಿಸಿದ ಮಾತ್ರಕ್ಕೇ ಯಾರೂ ದೇವನಾಗುವುದಕ್ಕೆ ಸಾಧ್ಯವಿಲ್ಲ. ದೇವನೆಂದರೆ, ಕಾಯಿಲೆ ಗುಣಪಡಿಸುವವ. ಬೇಡಿದ್ದನ್ನು ಕೊಡುವವ. ಸಾವಿಲ್ಲದವ. ಸಾಯುವವರಿಗೆ ದೇವರಾಗಲು ಸಾಧ್ಯವಿಲ್ಲ. ಕಾಯಿಲೆಗೆ ಒಳಗಾಗಿ ಸಂಕಟಪಡುವವರಿಗೆ ದೇವರಾಗುವ ಅರ್ಹತೆಯಿಲ್ಲ. ಇಷ್ಟಕ್ಕೂ ಬಾಬ ತಮ್ಮ ಸುತ್ತ ಹರಡಿಕೊಂಡಿರುವ ಭ್ರಮೆಗಳನ್ನು ಒಂದು ಮಿತಿಯವರೆಗೆ ಸದುಪಯೋಗಪಡಿಸಿಕೊಂಡರು. ಜನರಿಗೆ ವಿಭೂತಿಯನ್ನು ಸೃಷ್ಟಿಸಿ ಕೊಟ್ಟದ್ದಕ್ಕಿಂತಲೂ ಹೆಚ್ಚಿನ ಕಾಳಜಿಯಿಂದ ನೀರು, ಶಿಕ್ಷಣ ಕೊಡಲು ಉತ್ಸಾಹ ತೋರಿದರು. ಆದರೆ ಸಮಾಜದಲ್ಲಿ ಇವತ್ತು ಚಮತ್ಕಾರಗಳನ್ನೇ ಬಂಡವಾಳ ಮಾಡಿಕೊಂಡು ದುಡ್ಡು ಮಾಡುವ ಸಾಕಷ್ಟು ಬಾಬಾಗಳು, ಜ್ಯೋತಿಷಿಗಳಿದ್ದಾರೆ. ಜನರ ಮೌಢ್ಯವೇ ಇವರ ಬಂಡವಾಳ. ತಮಗೆ ಕಾಯಿಲೆ ಬಾಧಿಸಿದಾಗ ಆಸ್ಪತ್ರೆಗೆ ಗುಟ್ಟಾಗಿ ಹೋಗುವ ಇವರು, ಜನಸಾಮಾನ್ಯರ ಕಾಯಿಲೆಗೆ ಮಾತ್ರ ನೀರು, ತಾಯಿತವನ್ನು ಕೊಟ್ಟು ವಂಚಿಸುತ್ತಿರುತ್ತಾರೆ. ಇಂಥವರ ಧರ್ಮ, ಹೆಸರು ಏನೇ ಇರಲಿ, ಅವರನ್ನು ನಕಲಿಗಳೆ೦ದು ಪರಿಗಣಿಸಲು ಬಾಬಾರ ಸಾವು ಜನಸಾಮಾನ್ಯರಿಗೆ ಒಂದು ನೆಪವಾಗಬೇಕು. ಇಷ್ಟಕ್ಕೂ ಮನುಷ್ಯರು ತಮ್ಮಲ್ಲಿರುವ ಒಳ್ಳೇತನವನ್ನು ಪ್ರದರ್ಶಿಸಲು, ಇನ್ನೊಬ್ಬರಿಗೆ ನೆರವಾಗುವ ಪ್ರಕೃತಿ ಸಹಜ ಗುಣವನ್ನು ಅಲ್ಪ ಸ್ವಲ್ಪವಾದರೂ ಜಾರಿಯಲ್ಲಿಡಲು ಮುಂದಾದರೆ ಹುಲುಮಾನವನನ್ನು ದೇವನಾಗುವುದರಿಂದ ಖ೦ಡಿತ ಬಚಾವ್ ಮಾಡಬಹುದು.

Tuesday, April 26, 2011

ಸಾಯಿಬಾಬಾ ಸಾವನ್ನು ಗೆಲ್ಲಲಿಲ್ಲ, ನಮಗೆ ಮೌಢ್ಯವನ್ನು ಗೆಲ್ಲಲಾಗಲಿಲ್ಲ...


ದೇವಮಾನವ ಸಾಯಿಬಾಬಾ, ಭಗವಾನ್ ಸಾಯಿಬಾಬಾ, ಅವತಾರ ಪುರುಷ ಸಾಯಿಬಾಬಾ, ಪವಾಡಪುರುಷ ಸಾಯಿಬಾಬಾ, ದೇವದೂತ ಸಾಯಿಬಾಬಾ... ಹೀಗೆ ಬರೆಯುತ್ತಿವೆ ನಮ್ಮ ಮಾಧ್ಯಮಗಳು. ಟಿವಿಗಳಂತೂ ಒಂದು ಕೈ ಮೇಲೇ. ನಮ್ಮ ಮೀಡಿಯಾ ಮಂದಿಗೆ ಸತ್ಯ ಸಾಯಿಬಾಬಾ ಅಥವಾ ಸತ್ಯ ನಾರಾಯಣರಾಜು ದೇವರೂ ಅಲ್ಲ, ದೇವದೂತನೂ ಅಲ್ಲ ಅನ್ನೋದು ಎಲ್ಲರಿಗಿಂತ ಚೆನ್ನಾಗಿ ಗೊತ್ತಿದೆ. ಸಾಯಿಬಾಬಾ ನಮ್ಮ ನಿಮ್ಮಂತೆ ಹಸಿವು, ನಿದ್ರೆ, ಸಾವನ್ನು ಗೆಲ್ಲಲಾಗದ ಯಕಃಶ್ಚಿತ್ ಮನುಷ್ಯ ಎಂಬುದು ಸ್ಪಷ್ಟವಾಗಿ ತಿಳಿದಿದೆ. ಆದರೂ ಮೀಡಿಯಾಗಳು ಇದನ್ನೆಲ್ಲ ಬಹಿರಂಗವಾಗಿ ಹೇಳಲಾರವು.

ಸಾಯಿಬಾಬಾರನ್ನು ಭಾರತದ ಮಹಾನ್ ಅಧ್ಯಾತ್ಮ ಗುರು ಎಂದು ಬಿಂಬಿಸಲಾಗುತ್ತಿದೆ. ಅಧ್ಯಾತ್ಮ ಅನ್ನುವುದು ಸಂಯುಕ್ತ ಪದ. ಅಧಿ+ಆತ್ಮ ಅಧ್ಯಾತ್ಮವಾಗುತ್ತದೆ. ಅಧಿ ಎಂಬ ಪದಕ್ಕೆ ಶ್ರೇಷ್ಠವಾದ, ಉನ್ನತವಾದ ಎಂಬ ಅರ್ಥಗಳಿವೆ. ಆತ್ಮ ಶ್ರೇಷ್ಠವಾಗುವುದು, ಉನ್ನತವಾಗುವುದು ಹೇಗೆ? ಅದು ನಮ್ಮ ಆಚರಣೆಗಳಿಂದ, ನಡವಳಿಕೆಗಳಿಂದ. ಸಾಯಿಬಾಬಾ ಸುಳ್ಳು ಪವಾಡಗಳ ಮೂಲಕ ಬೆಳೆದವರು. ಆತ್ಮಕ್ಕೆ, ಅಧ್ಯಾತ್ಮಕ್ಕೆ ಸುಳ್ಳಿನ ಹಂಗಿರುತ್ತದೆಯೇ?

ಅಧ್ಯಾತ್ಮ ಎಂಬುದಕ್ಕೆ ಲೌಕಿಕ ಬದುಕಿನ ವ್ಯವಹಾರಗಳ ಸೋಂಕೇ ಇಲ್ಲವೇ? ಇದ್ದರೆ ಅದು ಹೇಗಿರಬೇಕು? ಬಸವಣ್ಣನ ಭಕ್ತಿ ಮಾರ್ಗದಲ್ಲಿ ಹರಿದು ಬಂದ ಅಧ್ಯಾತ್ಮ ಯಾವುದು? ಬಸವಣ್ಣನ ಆಧ್ಯಾತ್ಮಿಕತೆಯಲ್ಲಿ ಸಾಮಾಜಿಕ ಕಳಕಳಿಯಿತ್ತು, ಆತ್ಮನಿರೀಕ್ಷಣೆಯಿತ್ತು, ಜೀವಕಾರುಣ್ಯವಿತ್ತು, ಬಸವಣ್ಣನ ದೃಷ್ಟಿಯಲ್ಲಿ ಅಧ್ಯಾತ್ಮ ಕೇವಲ ಖಾಸಗಿಯಾದ ವಿಷಯವಾಗಿರಲಿಲ್ಲ. ಅದು ವೈಯಕ್ತಿಕ ಮೋಕ್ಷವೊಂದನ್ನೇ ಗುರಿಯಾಗಿ ಇಟ್ಟುಕೊಂಡಿರಲಿಲ್ಲ. ಬಸವಣ್ಣನ ಅಧ್ಯಾತ್ಮಕ್ಕೆ ಸಾಮಾಜಿಕ ಸಮಸ್ಯೆಗಳಿಗೆ ಮುಖಾಮುಖಿಯಾಗುವ ವ್ಯಾಪಕತೆಯಿತ್ತು. ಕಾಯಕ ಮತ್ತು ದಾಸೋಹದ ಮೂಲಕವೇ ಆತ್ಮೋನ್ನತಿಯ ಮಾರ್ಗವನ್ನು ತೋರಿದವರು ಬಸವಾದಿ ಶರಣರು. ವೈಯಕ್ತಿಕ ಮಟ್ಟದ ಆತ್ಮಶುದ್ಧಿ ಅವರಿಗಿತ್ತು. ತಮ್ಮ ಎಲ್ಲ ಕ್ರಿಯೆಗಳಲ್ಲೂ ಅವರು ಪರಿಶುದ್ಧರಾಗಿರಲು ಬಯಸುತ್ತಿದ್ದರು.

ಆದರೆ ಇವತ್ತು ಆಧ್ಯಾತ್ಮಿಕ ನಾಯಕರಿಗೆ ಆತ್ಮಶುದ್ಧಿ ಇದೆಯೇ? ಇವತ್ತು ಅಧ್ಯಾತ್ಮ ಕೂಡ ಮಾರಾಟದ ಸರಕು. ಬಾಬಾ ರಾಮದೇವ್, ರವಿಶಂಕರ್ ಗುರೂಜಿ, ಗಣಪತಿ ಸಚ್ಚಿದಾನಂದ ಸ್ವಾಮಿ, ಕೇರಳದ ಅಮ್ಮ... ಹೀಗೆ ಅಧ್ಯಾತ್ಮವನ್ನೇ ಬಿಜಿನೆಸ್ ಮಾಡಿಕೊಂಡವರು ಸಾಕಷ್ಟು ಮಂದಿ ಇದ್ದಾರೆ. ಆ ಮೂಲಕವೇ ಸಾವಿರಾರು ಕೋಟಿ ರೂಪಾಯಿ ಗಳಿಸಿದವರಿದ್ದಾರೆ. ಆಧ್ಯಾತ್ಮಿಕ ಗುರುಗಳಿಗೆ ನಮ್ಮ ಸರ್ಕಾರಗಳು ತಲೆಬಾಗುತ್ತವೆ. ತರೇಹವಾರಿ ಟ್ಯಾಕ್ಸುಗಳಿಂದ ಮುಕ್ತರಾದವರು ಇವರು. ಆಸ್ತಿ, ಬಂಗಾರ, ಹಣ ಎಷ್ಟು ಮಾಡಿದ್ದಾರೆಂಬುದು ಸತ್ತ ನಂತರವೇ ಬಹಿರಂಗವಾಗಬೇಕು; ಒಮ್ಮೊಮ್ಮೆ ಅದೂ ಆಗುವುದಿಲ್ಲ.

ಭಾರತೀಯ ಪರಂಪರೆಯಲ್ಲಿ ಶ್ರೇಷ್ಠ ಸಾಧನೆಗಳನ್ನು ಮಾಡಿದವರಿಗೆ ಪವಾಡಗಳನ್ನು ಕಟ್ಟುವುದು ನಡೆದುಕೊಂಡುಬಂದ ರೀತಿ. ಮೌಢ್ಯ-ಕಂದಾಚಾರಗಳ ವಿರುದ್ಧ ಜೀವನಪೂರ್ತಿ ಸೆಣೆಸಿದ ಬಸವಣ್ಣನವರಿಗೇ ಪವಾಡಗಳನ್ನು ಆರೋಪಿಸಲಾಯಿತು. ಇವತ್ತಿಗೂ ಬಸವಣ್ಣನ ಪವಾಡಗಳನ್ನು ನಂಬುವವರಿದ್ದಾರೆ. ನಾನು ದೇವನೂ ಅಲ್ಲ, ದೇವದೂತನೂ ಅಲ್ಲ ಎಂದು ಘೋಷಿಸಿದ ಬುದ್ಧನಿಗೆ ಭಗವಾನ್ ಎಂಬ ಹೆಸರನ್ನು ಸೇರಿಸಿದವರು ನಾವು. ತನ್ನನ್ನು ಪವಾಡಪುರುಷನೆಂದು ನಂಬಿಬಂದಾಕೆಗೆ ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಸೂಚಿಸುವ ಮೂಲಕ ಬುದ್ಧ ತಾನು ಅತಿಮಾನವನಲ್ಲ ಎಂಬುದನ್ನು ಸ್ಪಷ್ಟವಾಗಿಯೇ ಹೇಳಿ, ಪವಾಡಗಳನ್ನು ಧಿಕ್ಕರಿಸಿದ. ಆದರೂ ನಮಗೆ ಈತ ಈಗ ಭಗವಾನ್ ಬುದ್ಧ!

ನೀವು ಯಾವುದೇ ಮಠ-ಪೀಠಗಳಿಗೆ ಹೋಗಿ ನೋಡಿ. ಮಠ ಕಟ್ಟಿದ ಗುರು, ಆನಂತರ ಬಂದು ಹೋದ ಮಠಾಧೀಶರ ಮೇಲೆ ಪವಾಡಗಳನ್ನು ಕಟ್ಟಲಾಗಿರುತ್ತದೆ. ಪವಾಡಗಳನ್ನು ಕಟ್ಟದ ಹೊರತು ಮಠಕ್ಕೆ ದೈವೀ ಕಳೆ ಬರಲಾರದು ಎಂಬುದು ಭಕ್ತರ ನಂಬುಗೆ ಇದ್ದಿರಬೇಕು. ಹೀಗಾಗಿ ತಮ್ಮ ಗುರುಗಳಿಗೆ ಅವರು ಪವಾಡಗಳನ್ನು ಕಟ್ಟಿದರು. ಸಾಮಾನ್ಯ ಮನುಷ್ಯರು, ಜನನಾಯಕರನ್ನು ಒಂದೇ ದೇವರನ್ನಾಗಿಸಿದರು ಅಥವಾ ದೇವಮಾನವರನ್ನಾಗಿಸಿದರು.

ಸತ್ಯ ಸಾಯಿಬಾಬಾ ಕೋಮುವಾದಿಯಾಗಿರಲಿಲ್ಲ. ಧರ್ಮಸಹಿಷ್ಣುತೆ ಅವರಿಗಿತ್ತು. ಹೀಗಾಗಿಯೇ ಅವರಿಗೆ ಎಲ್ಲ ಧರ್ಮಗಳ ಅನುಯಾಯಿಗಳಿದ್ದರು. ಸಾಮಾಜಿಕ ಸೇವೆ ಮಾಡುವ ಉತ್ಸಾಹ ಅವರಿಗಿತ್ತು. ತಮಗೆ ಬಂದ ಭಕ್ತರ ಕೊಡುಗೆಗಳನ್ನು ಅವರು ಬಡಬಗ್ಗರ ಅನುಕೂಲಕ್ಕಾಗಿ ಬಳಸಿದರು. ಎಲ್ಲವೂ ನಿಜ. ಆದರೆ ಇದಕ್ಕಾಗಿ ಅವರು ಕಂಡುಕೊಂಡಿದ್ದು ಕಪಟದ, ಮೋಸದ ಮಾರ್ಗ. ವಿಭೂತಿ, ಉಂಗುರ, ವಾಚುಗಳನ್ನು ಸೃಷ್ಟಿಸಿಕೊಡುವ ಅಗ್ಗದ ಇಂದ್ರಜಾಲವನ್ನು ಬಳಸಿ ಅವರು ಭಕ್ತರನ್ನು ಸೆಳೆದುಕೊಂಡರು. ಅವರ ಅಮಾಯಕ ಭಕ್ತರನ್ನು ಹೊರತುಪಡಿಸಿ, ಉಳಿದ ಎಲ್ಲರಿಗೂ ಮಿಗಿಲಾಗಿ ಸ್ವತಃ ಸಾಯಿಬಾಬಾ ಅವರಿಗೂ ಇದು ಗೊತ್ತಿತ್ತು. ಡಾ.ಎಚ್.ನರಸಿಂಹಯ್ಯ ಅವರು ಒಡ್ಡಿದ ಸವಾಲನ್ನು ಅವರು ಸ್ವೀಕರಿಸಲಿಲ್ಲ. ತುಂಬುತೋಳಿನ ನಿಲುವಂಗಿ ಧರಿಸುತ್ತಿದ್ದ ಸಾಯಿಬಾಬಾ ಅವರಿಂದ ಕುಂಬಳಕಾಯಿ ಸೃಷ್ಟಿಸುವುದು ಸಾಧ್ಯವಾಗಲಿಲ್ಲ.

ಭಾರತದ ಇತರ ಆಧ್ಯಾತ್ಮಿಕ ನಾಯಕರುಗಳಿಗೆ ಅವರ ಭಕ್ತರು ಪವಾಡಗಳನ್ನು ಆರೋಪಿಸಿದರು. ಆದರೆ ಸತ್ಯ ಸಾಯಿಬಾಬಾ ತಾವೇ ಪವಾಡಪುರುಷ ಎಂದು ಘೋಷಿಸಿಕೊಂಡರು. ಮಹಾತ್ಮರಿಗೆ ಅವತಾರಗಳನ್ನು ಸಹ ನಾವೇ ಹೇರುತ್ತ ಬಂದಿದ್ದೇವೆ. ಆದರೆ ಸಾಯಿಬಾಬಾ ತಮ್ಮನ್ನು ತಾವು ಶಿರಡಿ ಸಾಯಿಬಾಬಾ ಅವರ ಅವತಾರ ಎಂದು ಕರೆದುಕೊಂಡರು. ಹೀಗೆ ತಮ್ಮನ್ನು ತಾವು ಅವತಾರ ಪುರುಷ, ಪವಾಡ ಪುರುಷ ಎಂದು ಕರೆದುಕೊಂಡ, ಅದರಿಂದ ಯಶಸ್ಸು-ಕೀರ್ತಿ ಗಳಿಸಿದ ಆಧುನಿಕ ಕಾಲದ ಮೊದಲ ಧರ್ಮಗುರು ಸಾಯಿಬಾಬಾ ಅವರಿರಬೇಕು. ಸಾಯಿಬಾಬಾ ಅವರಿಂದ ಪ್ರೇರಿತರಾಗಿ ಈಗ ದೇಶದ ತುಂಬೆಲ್ಲ ಇಂಥ ಪವಾಡಪುರುಷರು ಸೃಷ್ಟಿಯಾಗಿದ್ದಾರೆ.

ಆದರೆ ಕಪಟ, ಮೋಸದಿಂದಲೇ ಜನರನ್ನು ವಂಚಿಸುವವರು ಆಧ್ಯಾತ್ಮಿಕ ನಾಯಕರಾಗುವುದು ಹೇಗೆ ಸಾಧ್ಯ? ತಾನು ವಂಚನೆಯ ಮೂಲಕವೇ ಭಕ್ತರನ್ನು ಸೆಳೆಯುತ್ತೇನೆ ಎಂದು ಗೊತ್ತಿರುವ ಗುರುಗಳು ಆಧ್ಯಾತ್ಮಿಕ ಸಾಧನೆ ಮಾಡುವುದಾದರೂ ಹೇಗೆ? ಆತ್ಮ ಶುದ್ಧಿ ಇಲ್ಲದಿದ್ದರೆ ಅಧ್ಯಾತ್ಮ ಒಲಿಯುವುದೆ?

ಸತ್ಯ ಸಾಯಿಬಾಬಾ ನಮ್ಮ ನಿಮ್ಮಂತೆಯೇ ಖಾಯಿಲೆ, ನೋವು ಅನುಭವಿಸಿ ಈಗ ತೀರಿಹೋಗಿದ್ದಾರೆ. ಅವರ ಪವಾಡಗಳು ಅವರ ಇಹವನ್ನೇ ರಕ್ಷಿಸಲಿಲ್ಲ. ಇನ್ನು ಪರರನ್ನು ರಕ್ಷಿಸುತ್ತಿದ್ದವೆಂದು ನಂಬುವುದು ಹೇಗೆ? ಪವಾಡಗಳಿದ್ದರೆ ತಾನೇ ರಕ್ಷಿಸುವುದು? ಈಗ ಪ್ರಶಾಂತಿ ನಿಲಯದಲ್ಲಿ ನಡೆಯುತ್ತಿರುವುದು ಅವರು ಸಂಗ್ರಹಿಸಿಟ್ಟ ಆಸ್ತಿಗಾಗಿ ಕದನ. ಲಕ್ಷ ಕೋಟಿ ಹಣ ಸಣ್ಣ ಮಾತೇ?

ಮುಂದೆ ಪ್ರೇಮಸಾಯಿಯಾಗಿ ಕರ್ನಾಟಕದ ಕಾವೇರಿ ನದಿ ತಟದಲ್ಲಿ ಹುಟ್ಟುತ್ತೇನೆ ಎಂದು ಸಾಯಿಬಾಬಾ ಹೇಳಿದ್ದರಂತೆ. ನಮ್ಮ ಮೀಡಿಯಾಗಳು ಬಾಬಾ ಸತ್ತ ದಿನ ಹುಟ್ಟಿದ ಮಕ್ಕಳ ಡೀಟೇಲುಗಳನ್ನು ಹುಡುಕಿ ಹುಡುಕಿ ಬರೆಯುತ್ತಿವೆ.

ಸಾಯಿಬಾಬಾ ಇನ್ನಿಲ್ಲವಾದ ಮೇಲಾದರೂ ನಾವು ಭಾರತೀಯರು ಪವಾಡಪುರುಷರನ್ನು ಧಿಕ್ಕರಿಸುವ ಕೆಲಸ ಮಾಡಬೇಕಿದೆ. ಸಾಯಿಬಾಬಾ ಅವರೇನೋ ಜನೋಪಯೋಗಿ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡರು. ಆದರೆ ಎಲ್ಲರೂ ಅಂಥವರೇ ಇರಬೇಕಿಲ್ಲ. ದೇವರ ದೂತ, ಜಗನ್ಮಾತೆಯ ಪುತ್ರ ಇತ್ಯಾದಿ ಹೇಳಿಕೊಂಡು ವಂಚಿಸುವವರನ್ನು ಸಾರ್ವಜನಿಕವಾಗಿ ಬಯಲಿಗೆಳೆಯುವ ಕೆಲಸ ಆಗಬೇಕಿದೆ. ಮೀಡಿಯಾಗಳು ಸಾಯಿ ಮೇನಿಯಾವನ್ನು ಹೀಗೇ ಮುಂದುವರೆಸಿದರೆ ನೂರಾರು ಮಂದಿ ಪ್ರೇಮಸಾಯಿಗಳು ಹುಟ್ಟಿಕೊಂಡಾರು! ಭಾರತ ಬೂದಿಬಾಬಾಗಳ, ವಾಮಾಚಾರಿಗಳ, ವಂಚಕ ಜ್ಯೋತಿಷಿಗಳ ಸ್ವರ್ಗವಾಗುವುದು ಬೇಡ.

ಪ್ರಜ್ಞೆ ಮತ್ತು ಎಚ್ಚರ ಎಲ್ಲರಲ್ಲೂ ಇರಲಿ ಎಂದು ಆಶಿಸೋಣ.

ಕರ್ನಾಟಕದಲ್ಲಿ ಪ್ರೇಮಸಾಯಿ: ಪ್ರಕಾಶ್ ಶೆಟ್ಟಿ ಪಂಚ್


Monday, April 25, 2011

ಬ್ರಹತ್ ಬ್ರಹ್ಮಾಂಡ: ಬಿಇಸಿಐಎಲ್ ನ ನರಸಿಂಹಸ್ವಾಮಿಯವರ ಪ್ರತಿಕ್ರಿಯೆ

ಜೀ ಟಿವಿ ಮುಖ್ಯಸ್ಥರಿಗೆ ಬರೆದ ಪತ್ರವನ್ನು ಅನೇಕ ಬ್ಲಾಗರ್‌ಗಳು ತಮ್ಮ ಬ್ಲಾಗ್‌ಗಳಲ್ಲಿ ಪ್ರಕಟಿಸಿದ್ದರು. ಆ ಪೈಕಿ ಪತ್ರಕರ್ತ ಚಾಮರಾಜ ಸವಡಿಯವರ ಬ್ಲಾಗ್‌ನಲ್ಲಿ ಮರು ಪ್ರಕಟಣೆಗೊಂಡ ಬಹಿರಂಗ ಪತ್ರಕ್ಕೆ ಉತ್ತರವಾಗಿ  BECIL (Broadcast Engineering Consultants India Limited) ಸಂಸ್ಥೆಯ ಬೆಂಗಳೂರು ಕೇಂದ್ರದ ಶ್ರೀ ಆರ್. ನರಸಿಂಹಸ್ವಾಮಿ ಈ ಕೆಳಗಿನ ಮಾಹಿತಿ ನೀಡಿದ್ದಾರೆ. 
ಚಾಮರಾಜ ಸವಡಿ

Dear Sri Chamraj,

I read you blog and sorry to see the "astrology" of Narendra Sharma. It is unfortunate that, such people are being provided with time on popular Kannada TV channel.

If is he is really accusing women and people belonging to so called lower caste, I advice you to complain it to Ministry of I&B who will take action against him if your accusation is true.

The content broadcast by all satellite TV channels uplinked from India are available in the servers of MIB's EMMC (Electronic Media Monitoring Center, Delhi for a period of 90 days after it is telecast. This setup is made, operated and maintained by BECIL). Hence, if you lodge an official complaint, Ministry will verify the content and take suitable necessary action against the erring channel, if they have broadcast anything against women, people of other caste etc which is against broadcast code.

The complaint is to be made within 90 days of the broadcast. 

Sunday, April 24, 2011

ಪ್ರೆಸ್ ಕ್ಲಬ್ ಚುನಾವಣೆ: ಪೊನ್ನಪ್ಪ, ಶೆಣೈ ಪುನರಾಯ್ಕೆ


ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ಗೆಲುವು ಸಾಧಿಸಿದವರ ಪಟ್ಟಿ ಈ ಕೆಳಕಂಡಂತಿದೆ.

ಅಧ್ಯಕ್ಷ: ಎಂ.ಎ.ಪೊನ್ನಪ್ಪ
ಉಪಾಧ್ಯಕ್ಷ: ವೈ.ಎಸ್.ಎಲ್.ಸ್ವಾಮಿ
ಪ್ರಧಾನ ಕಾರ್ಯದರ್ಶಿ: ಸದಾಶಿವ ಶೆಣೈ
ಕಾರ್ಯದರ್ಶಿ: ದೊಡ್ಡಬೊಮ್ಮಯ್ಯ
ಖಜಾಂಚಿ: ಕೇಶವ ವಿಟ್ಲ


ಕಾರ್ಯಕಾರಿ ಸಮಿತಿ ಸದಸ್ಯರು
ಶಾಂತಮ್ಮ
ಜನಾರ್ಧನಾಚಾರಿ
ಬಿ.ಎನ್.ಮೋಹನ್
ಬಿ.ಎನ್.ರಮೇಶ್
ಜೆ.ಸು.ನಾರಾಯಣರಾವ್(ಜೆಸುನಾ)
ಲೋಕೇಶ್ ಕಾಯರ್ಗ

Saturday, April 23, 2011

ಹಿಂದೂ ಪತ್ರಿಕೆಯಲ್ಲಿ ಸೋದರ ಕಲಹ ಮತ್ತು ಸಂಸ್ಥೆ ಬದಲಿಸಿದ ಬಲರಾಂ....


ಎನ್.ರಾಮ್
 ಚೆನ್ನೈನ ಪ್ರತಿಷ್ಠಿತ ಕಸ್ತೂರಿ ಕಟ್ಟಡದಲ್ಲಿನ ಬಿರುಕುಗಳು ದೊಡ್ಡದಾಗುತ್ತಿವೆ. ದಿ ಹಿಂದೂ ಪತ್ರಿಕೆ ಮುಖ್ಯ ಸಂಪಾದಕ ಎನ್. ರಾಮ್ ಮತ್ತವರ ಕಿರಿಯ ಸಹೋದರ ಎನ್. ರವಿ ಮಧ್ಯೆ ವಿರಸ ಬೀದಿಗೆ ಬಿದ್ದಿದೆ. ರಾಮ್ ನೇತೃತ್ವದ ಆಡಳಿತ ಮಂಡಳಿ ರವಿಯನ್ನು ಸಂಪಾದಕ ಹುದ್ದೆ ತೊರೆಯುವಂತೆ ನಿರ್ದೇಶಿಸಿದೆ. ಅವರ ಸ್ಥಾನದಲ್ಲಿ ಪತ್ರಿಕೆ ದೆಹಲಿ ಬ್ಯೂರೋ ಮುಖ್ಯಸ್ಥ ಹಾಗೂ ಸೂಕ್ಷ್ಮಮತಿ ಬರಹಗಾರ, ಚಿಂತಕ ಸಿದ್ಧಾರ್ಥ ವರದರಾಜನ್ ಅವರನ್ನು ನೇಮಿಸಲು ಉದ್ದೇಶಿಸಿದೆ. ಈಗ್ಗೆ ಕೆಲವು ದಿನಗಳ ಹಿಂದೆ ಸಂಪಾದಕೀಯ ಸಿದ್ಧಾರ್ಥ ವರದರಾಜನ್ ಕುರಿತು ಬರೆದಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

ಎಚ್.ಎಸ್.ಬಲರಾಂ
ಈ ಬೆಳವಣಿಗೆ ಮೂಲಕ ೧೩೨ ವರ್ಷಗಳ ಇತಿಹಾಸ ಇರುವ ದಿ ಹಿಂದೂ ಗ್ರೂಪ್ ಆಫ್ ಪಬ್ಲಿಕೇಶನ್ಸ್ ಒಂದು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಮೊಟ್ಟ ಮೊದಲ ಬಾರಿಗೆ ಕಸ್ತೂರಿ ಕುಟುಂಬ ಹೊರಗಿನ ವ್ಯಕ್ತಿಯೊಬ್ಬರನ್ನು ಸಂಪಾದಕ ಸ್ಥಾನಕ್ಕೆ ನೇಮಿಸಿದೆ. ಇದು ಸದ್ಯ ಕುಟುಂಬದಲ್ಲಿ ತೀವ್ರ ಚರ್ಚೆಯಾಗುತ್ತಿರುವ ಸಂಗತಿ. ಈ ಬೆಳವಣಿಗೆಯಿಂದ ಬೇಸತ್ತ ಎನ್. ರವಿ ಸಂಸ್ಥೆಯ ಎಲ್ಲಾ ನೌಕರರಿಗೆ ಒಂದು ಪತ್ರ ಬರೆದು ತಮ್ಮ ಬೇಸರವನ್ನು ದಾಖಲಿಸಿದ್ದಾರೆ. ಪತ್ರದ ಮೂಲಕ ದಿ ಹಿಂದೂ ಪತ್ರಿಕೆ ಇತ್ತೀಚಿನ ಕೆಲ ವಿಚಾರಗಳಲ್ಲಿ ತಳೆದ ಸಂಪಾದಕೀಯ ಧೋರಣೆ, ನಿಲುವುಗಳನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ. ಜೊತೆಗೆ ಪತ್ರಿಕೆಯು ೨ಜಿ ಹಗರಣದಲ್ಲಿ ಸಿಲುಕಿರುವ ರಾಜಾನ ವಿರುದ್ಧ ಕಠಿಣ ನಿಲುವು ತಾಳದೆ, ಅವರನ್ನು ಬೆಂಬಲಿಸಿತು ಮತ್ತು ಈ ಧೋರಣೆಗಾಗಿ ಟೆಲಿಕಾಂ ಇಲಾಖೆಯಿಂದ ವಿಶೇಷ ಜಾಹೀರಾತನ್ನೂ ಪಡೆಯಿತು ಎಂದು ರವಿ ಟೀಕಿಸಿದ್ದಾರೆ. ಹೀಗೆ ಒಂದು ಬೃಹತ್ ಸಂಸ್ಥೆಯೊಳಗಿನ ಹುಳುಕುಗಳು ಹೊರಬಂದ ಉದಾಹರಣೆ ಇತ್ತೀಚಿನ ದಿನಗಳಲ್ಲಿ ಇರಲಿಲ್ಲ.

ಸಿದ್ಧಾರ್ಥ ವರದರಾಜನ್
ಇದೇ ಹೊತ್ತಿನಲ್ಲಿ ಇನ್ನೊಂದು ಬೆಳವಣಿಗೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಕರ್ನಾಟಕದಲ್ಲಿ ಬಹುಕಾಲ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡು, ಯಶಸ್ವಿ ನೇತಾರ ಎನಿಸಿಕೊಂಡ ಎಚ್.ಎಸ್ ಬಲರಾಮ್ ನಾಲ್ಕು ದಿನಗಳ ಹಿಂದೆ ಏಷಿಯಾನೆಟ್ ಸುದ್ದಿ ಸಂಸ್ಥೆಯ ನಿರ್ದೇಶಕರಾಗಿ ನೇಮಕವಾಗಿದ್ದಾರೆ. ಪತ್ರಿಕೋದ್ಯಮ ಮತ್ತು ಬಲರಾಮ್ ನಂಟು ನಾಲ್ಕು ದಶಕಗಳಷ್ಟು ಹಳೆಯದು.

ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕೆಲಸ ಆರಂಭಿಸಿದ ಅವರು ಟೈಮ್ಸ್ ಆಫ್ ಇಂಡಿಯಾ ಬೆಂಗಳೂರು ಆವೃತ್ತಿಯನ್ನು ಹದಿನೈದಕ್ಕೂ ಹೆಚ್ಚು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದರು. ಅವರ ನೇತೃತ್ವದಲ್ಲಿ ಪತ್ರಿಕೆ ರಾಜ್ಯದಲ್ಲಿ ನಂ೧ ಇಂಗ್ಲಿಷ್ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಟೈಮ್ಸ್‌ನಲ್ಲಿ ಬಲರಾಂ ವಾರಕ್ಕೊಂದು ಕಾಲಂ ಮೂಲಕ ರಾಜಕೀಯ ಘಟನೆಗಳ ವಿಶ್ಲೇಷಣೆ ಮಾಡುತ್ತಿದ್ದರು. ಇತ್ತೀಚೆಗಷ್ಟೆ ತಮ್ಮ ಸ್ಥಾನವನ್ನು ವಿನಯ್ ಕಾಮತರಿಗೆ ಬಿಟ್ಟುಕೊಟ್ಟಿದ್ದದ್ದ ಅವರು ಹೊಸ ಸಂಸ್ಥೆಯ ಕಡೆ ಮುಖ ಮಾಡಿದ್ದಾರೆ. ಅವರಿಗೆ ಶುಭಾಶಯಗಳು.

Thursday, April 21, 2011

ಜೀ ಕನ್ನಡ ವಾಹಿನಿ ಮುಖ್ಯಸ್ಥರಿಗೊಂದು ಬಹಿರಂಗ ಆಗ್ರಹ ಪತ್ರ


ಮಾನ್ಯರೆ,

ಈ ಪತ್ರವನ್ನು ಅತ್ಯಂತ ನೋವು, ವಿಷಾದ, ಕಳವಳದಿಂದ ನಿಮಗೆ ಬರೆಯುತ್ತಿದ್ದೇವೆ. ಪತ್ರ ಓದಿದ ನಂತರವಾದರೂ ನೀವು ನಮ್ಮ ಭಾವನೆಗಳಿಗೆ ಸ್ಪಂದಿಸುತ್ತೀರೆಂಬ ನಂಬಿಕೆ ಇದೆ. ಲಕ್ಷ-ಕೋಟಿ ಜನರನ್ನು ತಲುಪುವ ಮೀಡಿಯಾಗಳು ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸಬೇಕು. ಇದು ಕಾನೂನಿನ ಪರಿಭಾಷೆಗಳಿಗೆ ಮಾತ್ರ ಒಳಪಡುವ ವಿಷಯ ಎಂದು ಯಾರೂ ಭಾವಿಸಬೇಕಾಗಿಲ್ಲ, ಕಾನೂನನ್ನೂ ಮೀರಿದ ನೈತಿಕತೆ, ಮಾನವೀಯತೆಯ ಹೊಣೆಗಾರಿಕೆಯನ್ನೂ ಒಪ್ಪಿ ಅನುಸರಿಸಬೇಕಾಗುತ್ತದೆ. ತಾವು ಇಡೀ ಪತ್ರವನ್ನು ಓದಿ, ಸೂಕ್ತ, ಅತ್ಯಗತ್ಯ, ಸಕಾಲಿಕ ನಿರ್ಧಾರಕ್ಕೆ ಬರುವಿರೆಂಬ ನಂಬುಗೆ ನಮಗಿದೆ.

ನಮ್ಮ ತಕರಾರು, ಸಿಟ್ಟು, ಆತಂಕ ಇರುವುದು ನಿಮ್ಮ ವಾಹಿನಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ೯ ಗಂಟೆಗೆ ಪ್ರಸಾರವಾಗುವ ಬೃಹತ್ ಬ್ರಹ್ಮಾಂಡ ಎಂಬ ಜ್ಯೋತಿಷ್ಯ ಸಂಬಂಧಿ ಕಾರ್ಯಕ್ರಮದ ಕುರಿತು. ಈ ಕಾರ್ಯಕ್ರಮವನ್ನು ನಡೆಸಿಕೊಡುವವರು ಶ್ರೀ ನರೇಂದ್ರ ಬಾಬು ಶರ್ಮ ಎಂಬುವವರು. ಇವರು ನಿಮ್ಮ ಚಾನಲ್‌ನಲ್ಲಿ ಕಾರ್ಯಕ್ರಮ ನಡೆಸಿಕೊಡುವುದಕ್ಕೆ ಮುನ್ನ ಸುವರ್ಣ ವಾಹಿನಿಯಲ್ಲಿ ಭವ್ಯ ಬ್ರಹ್ಮಾಂಡ ಎಂಬ ಹೆಸರಿನಲ್ಲಿ, ಅದಕ್ಕೂ ಮುನ್ನ ಕಸ್ತೂರಿ ವಾಹಿನಿಯಲ್ಲಿ ಬ್ರಹ್ಮಾಂಡ ಎಂಬ ಹೆಸರಿನಲ್ಲಿ ಇದೇ ಸ್ವರೂಪದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಬಹಳಷ್ಟು ಜನರಿಗೆ ಗೊತ್ತಿರುವ ಪ್ರಕಾರ ತೀರಾ ಇತ್ತೀಚಿನವರೆಗೆ ನರೇಂದ್ರ ಶರ್ಮ ಅವರು ಕನ್ನಡ ಸಿನಿಮಾಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿದ್ದವರು.

ನರೇಂದ್ರ ಶರ್ಮ ಅವರು ಕಸ್ತೂರಿ ವಾಹಿನಿ ಹಾಗು ಸುವರ್ಣ ವಾಹಿನಿಗಳಲ್ಲಿ ಬ್ರಹ್ಮಾಂಡ ನಡೆಸುತ್ತಿದ್ದಾಗಲೇ ಅವರು ಬಳಸುವ ಭಾಷೆ, ಹೇಳುವ ಹಸಿಹಸಿ ಸುಳ್ಳುಗಳು ಮಾನವಂತರ, ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿತ್ತು. ಮಹಿಳೆಯರನ್ನು ವಿನಾಕಾರಣ ನಿಂದಿಸುವುದು-ಅವಹೇಳನ ಮಾಡುವುದು, ಕೆಳಜಾತಿಯ ಜನರನ್ನು ಗುರಿಪಡಿಸಿ ತಿರಸ್ಕಾರದಿಂದ ಮಾತನಾಡಿ ಅಪಮಾನಿಸುವುದು, ಜ್ಯೋತಿಷ್ಯದ ಹೆಸರಿನಲ್ಲಿ ಸುಳ್ಳುಗಳ ಕಂತೆ ಕಟ್ಟಿ ಜನರನ್ನು ಬೆದರಿಸುವುದು ಇವರು ಹಿಂದಿನಿಂದ ಮಾಡಿಕೊಂಡು ಬಂದಿರುವ ಕೆಲಸ. ಅದನ್ನು ಅವರು ನಿಮ್ಮ ಜೀ ವಾಹಿನಿಯಲ್ಲೂ ಮಾಡುತ್ತಿದ್ದಾರೆ ಹಾಗು ಅದು ಈಗ ಅತಿರೇಕಕ್ಕೆ ತಲುಪಿದೆ.

ನಿಮ್ಮ ಜೀ ವಾಹಿನಿಯ ವೇದಿಕೆಯನ್ನು ಬಳಸಿಕೊಂಡು ನರೇಂದ್ರ ಶರ್ಮ ಏನೇನು ಮಾತನಾಡಿದ್ದಾರೆ ಎಂಬುದಕ್ಕೆ ಕೆಲವು ಸ್ಯಾಂಪಲ್‌ಗಳನ್ನು ಇಲ್ಲಿ ಒದಗಿಸುತ್ತಿದ್ದೇವೆ. ದಯವಿಟ್ಟು ಗಮನವಿಟ್ಟು ಓದಬೇಕಾಗಿ ವಿನಂತಿ.

೧. ನಾನು ಜಗನ್ಮಾತೆಯ ಪುತ್ರ. ಆಕೆ ಮೇ.೧೨ರಂದು ಭೂಮಿಗೆ ಬರುತ್ತಿದ್ದಾಳೆ. ಬಂದವಳು ಭೂಮಿಯನ್ನು ನಾಶಪಡಿಸುತ್ತಾಳೆ. ನಾನು ಇದನ್ನು ಘೋಷಿಸಿರುವುದರಿಂದ, ಜಗನ್ಮಾತೆ ನನ್ನ ಮಾತು ಉಳಿಸುವ ದೃಷ್ಟಿಯಿಂದಲಾದರೂ ಪ್ರಳಯ ನಡೆಸುತ್ತಾಳೆ.

೨. ಕರ್ನಾಟಕದ ಯಾವ ದೇವಸ್ಥಾನಗಳಲ್ಲೂ ದೇವರಿಲ್ಲ. ಕರ್ನಾಟಕದಲ್ಲಿ ಸಾಧು ಸಂತರು ಮಾತ್ರ ಇದ್ದಾರೆ. ದೇವರು ಇರುವುದೆಲ್ಲ ತಮಿಳುನಾಡಿನಲ್ಲಿ. ಅಲ್ಲಿನ ಧರ್ಮಕ್ಷೇತ್ರಗಳಲ್ಲಿ. ಹಾಗಾಗಿ ನಾನು ತಮಿಳುನಾಡಿನ ದೇವಸ್ಥಾನಗಳಿಗೆ ಹೋಗುವಂತೆ ಭಕ್ತರಿಗೆ ಹೇಳುತ್ತೇನೆ.

೩. ಹೆಣ್ಣು ಮಕ್ಕಳು ನೈಟಿ ತೊಡಬಾರದು. ಸಲ್ವಾರ್ ಕಮೀಜ್ ಹಾಕಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ. ರಾತ್ರಿ ಗಂಡನ ಜತೆ ಮಲಗಿ ಬೆಳಿಗ್ಗೆ ಎದ್ದ ಕೂಡಲೇ ಅಡುಗೆ ಮನೆಗೆ ಹೋಗಬಾರದು. ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದರೆ ಲಕ್ಷಣ. ಅಗಲವಾದ ಬಿಂದಿ ಇಟ್ಟುಕೊಳ್ಳಬೇಕು. ಇಲ್ಲವಾದಲ್ಲಿ ಬೂಬಮ್ಮಗಳ ಹಾಗೆ ಕಾಣುತ್ತೀರಿ. (ಬೂಬಮ್ಮ ಎಂದರೆ ಮುಸ್ಲಿಂ ಹೆಂಗಸು)

೪. ಬೆಳಿಗ್ಗೆ ಎದ್ದ ಕೂಡಲೇ ಪೊರಕೆಯನ್ನು, ಹಜಾಮರ ಮುಖವನ್ನು ನೋಡಬಾರದು. ನೋಡಿದರೆ ಕೆಟ್ಟದಾಗುತ್ತದೆ.

೫. ಇಡೀ ಜಗತ್ತು ಮುಳುಗಿ ಹೋಗುತ್ತದೆ, ಬೆಳಗಾವಿಯ ಒಂದು ಹಳ್ಳಿ ಮಾತ್ರ ಉಳಿದುಕೊಳ್ಳುತ್ತದೆ. ಪಾಪಿಗಳು ಮಾಡಿದ ತಪ್ಪಿಗಾಗಿ ಪಾಪಿಗಳಲ್ಲದವರೂ ನಾಶವಾಗುತ್ತಾರೆ.

೬. ಹಾವು ಎಂದರೆ ದೇವರು. ಜಪಾನ್ ದೇಶದವರು ಹಾವು ತಿನ್ನುತ್ತಾರೆ, ಅದಕ್ಕೆ ಸುನಾಮಿ ಬಂದಿದ್ದು.

ಇವು ಕೆಲವು ಸ್ಯಾಂಪಲ್‌ಗಳು ಮಾತ್ರ. ಈತನ ಇನ್ನಷ್ಟು ಭಯಾನಕ ಉಪದೇಶಗಳ ಕುರಿತು ಈ ಹಿಂದೆ ಇದೇ ಬ್ಲಾಗ್ ನಲ್ಲಿ ಪ್ರಸ್ತಾಪಿಸಿದ್ದೇವೆ. ಒಮ್ಮೆ ಓದಿ ನೋಡಲು ವಿನಂತಿ.  ಈ ಬಗೆಯ ದುರ್ಬೋಧನೆಗಳನ್ನು ನೀಚಾತಿನೀಚರಷ್ಟೆ ಸಮರ್ಥಿಸಿಕೊಳ್ಳಬಹುದು. ಹೀಗಾಗಿ ನೀವು ಇವುಗಳನ್ನೆಲ್ಲ ಒಪ್ಪಲಾರಿರಿ ಎಂದು ನಮ್ಮ ನಂಬಿಕೆ. ನರೇಂದ್ರ ಶರ್ಮ ಬಳಸುವ ಭಾಷೆ ಎಷ್ಟು ಕೊಳಕಾಗಿದೆಯೆಂದರೆ ಆತ ಪದೇಪದೇ ಮುಂಡೇವು, ಮುಂಡೆ (ಗಂಡ ಸತ್ತ ಹೆಂಗಸು), ಕಳ್ ನನ್ ಮಕ್ಕಳು, ಗೂಬೆ, ಗುಗ್ಗು, ದರಿದ್ರದವು.. ಇತ್ಯಾದಿ ಪದಗಳನ್ನೇ ಬಳಸುತ್ತಾರೆ. ವೇದೋಪನಿಷತ್ತುಗಳನ್ನು ಓದಿದ ವ್ಯಕ್ತಿ ಇಷ್ಟು ಅಸಭ್ಯವಾದ ಭಾಷೆಯಲ್ಲಿ ಸಾರ್ವಜನಿಕವಾಗಿ ಮಾತನಾಡಲು ಸಾಧ್ಯವೇ?

ಕಪಟ ಜ್ಯೋತಿಷಿಗಳು ಹರಡುವ ಮೂಢನಂಬಿಕೆಗಳ ಕುರಿತು ಸ್ವಾಮಿ ವಿವೇಕಾನಂದರು ಹೀಗೆ ಹೇಳಿದ್ದರು:
 ಜ್ಯೋತಿಷ್ಯ ಮುಂತಾದುವನ್ನು ಹೇಳಿ ಉದರಪೋಷಣೆ ಮಾಡಿಕೊಳ್ಳುವವರ ಹತ್ತಿರ ಸಂಬಂಧವನ್ನು ಇಟ್ಟುಕೊಳ್ಳಕೂಡದು ಎನ್ನುವನು ಬುದ್ಧ. ಅವನಿಗೆ ಇದರ ರಹಸ್ಯ ಚೆನ್ನಾಗಿ ಗೊತ್ತಾಗಿರಬೇಕು. ತಾರೆಯೊಂದು ನನ್ನ ಜೀವನದ ಮೇಲೆ ತನ್ನ ಪ್ರಭಾವವನ್ನು ಬೀರಿ ವ್ಯಥೆಯನ್ನು ತಂದರೆ ನನ್ನ ಜೀವನ ಕುರುಡು ಕಾಸಿಗೂ ಯೋಗ್ಯವಲ್ಲ. ಜ್ಯೋತಿಷ್ಯ ಮುಂತಾದ ರಹಸ್ಯಗಳನ್ನೆಲ್ಲಾ ನೆಚ್ಚುವುದು ದೌರ್ಬಲ್ಯದ ಚಿಹ್ನೆ. ಈ ಸ್ವಭಾವ ನಿಮ್ಮ ಮನಸ್ಸಿನಲ್ಲಿ ಬಲವಾಗುತ್ತಿದ್ದರೆ ನೀವು ಒಬ್ಬ ವೈದ್ಯನನ್ನು ನೋಡಿ; ಒಳ್ಳೆಯ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಿ..... ಜ್ಯೋತಿಷ್ಯ ಮುಂತಾದವುಗಳಲ್ಲೆಲ್ಲಾ ಸ್ವಲ್ಪ ಸತ್ಯಾಂಶವಿದ್ದರೂ ಅದನ್ನು ನಾವು ನಿರ್ಲಕ್ಷ್ಯದಿಂದ ನೋಡಬೇಕು..... ಮೂಢಭಾವನೆಗಳು ನಾಯಿಕೊಡೆಯಂತೆ ನಮ್ಮ ದೇಶದಲ್ಲಿ ಹಬ್ಬುತ್ತಿವೆ. ವಿಚಾರ ಮಾಡದ ಸ್ತ್ರೀಯರು ಇನ್ನೂ ಸ್ವಾತಂತ್ರ್ಯಕ್ಕೆ ಹೋರಾಡುತ್ತಿರುವರು. ಒಬ್ಬ ಹಣಕ್ಕಾಗಿ ಮತ್ತೊಬ್ಬರನ್ನು ಮೋಸ ಮಾಡಿದರೆ ಅವನನ್ನು ಮೋಸಗಾರ ಎನ್ನುವಿರಿ. ಇತರರನ್ನು ಅಧ್ಯಾತ್ಮಿಕ ದೃಷ್ಟಿಯಿಂದ ಪಾಪಿಗಳು ಎಂದು ಮೋಸಗೊಳಿಸುವವರು ಎಂತಹ ಪಾಪಿಗಳಿರಬೇಕು? ಇದು ಪರಮಪಾತಕ. ಸತ್ಯ ನಿಮ್ಮನ್ನು ಧೀರರನ್ನಾಗಿ ಮಾಡಬೇಕು; ಮೌಢ್ಯತೆಯಿಂದ ಪಾರಾಗುವಂತೆ ಮಾಡಬೇಕು. ಇದೇ ಸತ್ಯದ ಪರೀಕ್ಷೆ.... ಬೇಕಾದರೆ ತಾರೆಗಳನ್ನು ನಿಮ್ಮ ಬೊಗಸೆಯಿಂದ ಎತ್ತಿ ನುಂಗಿಹಾಕಬಹುದು. ನಿಮ್ಮ ನೈಜಸ್ವಭಾವ ಅಂತಹುದು. ಧೀರರಾಗಿ, ಎಲ್ಲಾ ವಿಧದ ಮೂಢನಂಬಿಕೆಗಳಿಂದ ಪಾರಾಗಿ, ಮುಕ್ತರಾಗಿ.

ಇವತ್ತು ನಿಮ್ಮ ಚಾನಲ್ ಮೂಲಕ ನರೇಂದ್ರ ಶರ್ಮ ಅವರು ಇಡೀ ಕರ್ನಾಟಕವನ್ನು ಮೌಢ್ಯದಲ್ಲಿ ಮುಳುಗಿಸಲು ಯತ್ನಿಸುತ್ತಿದ್ದಾರೆ. ಅಮೆರಿಕದ ಕೆಲವು ಸ್ವತಂತ್ರ ಕ್ರಿಶ್ಚಿಯನ್ ಗುಂಪುಗಳು ಹರಡುತ್ತಿರುವ ಪ್ರಳಯದ ಥಿಯರಿಗಳನ್ನೇ (http://www.coffetoday.com/the-doomsday-is-on-may-21-2011/907618/
http://www.ebiblefellowship.com/may21/
http://en.wikipedia.org/wiki/Harold_Camping
http://www.allvoices.com/contributed-news/8599025-worlds-doomsday-fixed-for-6-pm-on-21st-may-2011)  ಕದ್ದು ತಂದು, ಅವುಗಳನ್ನು ಜಗನ್ಮಾತೆಯ ಹೆಸರಿನಲ್ಲಿ ಬದಲಾಯಿಸಿ, ಈ ವರ್ಷವೇ ಪ್ರಳಯವಾಗುತ್ತದೆ ಎಂದು ಭೀತಿ ಸೃಷ್ಟಿಸುತ್ತಿದ್ದಾರೆ. ಪ್ರಳಯವನ್ನು ತಪ್ಪಿಸಲು ಸಾಧ್ಯವಿರುವುದು ನನಗೆ ಮಾತ್ರ, ಹೀಗಾಗಿ ನಾನು ಹೇಳಿದಂತೆ ಕೇಳಿ ಎಂದು ಜನರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿದ್ದಾರೆ.

ಹಿಂದೆ ಕಸ್ತೂರಿ ವಾಹಿನಿಯಲ್ಲಿದ್ದಾಗ ಸಹ ಲೋಕ ಕಲ್ಯಾಣ, ಇತ್ಯಾದಿ ಬೊಗಳೆ  ಮಾತುಗಳನ್ನು ಹೇಳಿ ಅರಮನೆ ಮೈದಾನದಲ್ಲಿ ದೊಡ್ಡ ಯಾಗವೊಂದನ್ನು ನಡೆಸಿದ ನರೇಂದ್ರ ಶರ್ಮ ಅವರು ಇದಕ್ಕಾಗಿ ಕೋಟ್ಯಂತರ ರೂಪಾಯಿ ಹಣವನ್ನು ಮುಗ್ಧ, ಅಮಾಯಕ ಜನಸಾಮಾನ್ಯರಿಂದ ಪಡೆದಿದ್ದರು. ಎಷ್ಟು ಹಣ ಪಡೆದಿದ್ದೀರಿ, ಸ್ವಲ್ಪ ಲೆಕ್ಕ ಕೊಡಿ ಎಂದು ಪತ್ರಕರ್ತರು ಪತ್ರಿಕಾಗೋಷ್ಠಿಯೊಂದರಲ್ಲಿ ಕೇಳಿದಾಗ ನರೇಂದ್ರ ಶರ್ಮ ಗೋಷ್ಠಿಯನ್ನೇ ನಿಲ್ಲಿಸಿ ಹೊರಟುಹೋಗಿದ್ದರು. ನರೇಂದ್ರ ಶರ್ಮ ಅವರು ಸಾರ್ವಜನಿಕರ ದೇಣಿಗೆ ಪಡೆಯಲೆಂದೇ ಎರಡು ಟ್ರಸ್ಟ್‌ಗಳನ್ನು ರಚಿಸಿಕೊಂಡಿದ್ದಾರೆ. ಈ ಟ್ರಸ್ಟ್‌ಗಳಿಗೂ ನಿಮ್ಮ ಚಾನಲ್‌ಗಳಿಗೂ ಯಾವ ಸಂಬಂಧವಿರುವುದಿಲ್ಲ. ಪ್ರಚಾರಕ್ಕೆ ನಿಮ್ಮ ಚಾನಲ್‌ಗಳು, ಹಣ ವಸೂಲಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸುವ ಟ್ರಸ್ಟ್‌ಗಳು! ಈ ದುರ್ ವ್ಯವಹಾರ ನಿಲ್ಲಿಸಲು ನೀವು ಹೇಳಿದರೆ, ಅವರು ಚಾನಲ್ ಬದಲಾಯಿಸುತ್ತಾರೆ.  ಬ್ರಹ್ಮಾಂಡ, ಭವ್ಯ ಬ್ರಹ್ಮಾಂಡ, ಬೃಹತ್ ಬ್ರಹ್ಮಾಂಡ ಆಯಿತು, ಇನ್ನು ಸೂಪರ್ ಬ್ರಹ್ಮಾಂಡ ಸೃಷ್ಟಿಯಾಗಬಹುದು ಅಷ್ಟೆ.

ಇಂಥ ಕಾರ್ಯಕ್ರಮ ಬೇಕೆ ಎಂದು ನೀವು ಯೋಚಿಸಲೇಬೇಕಾದ ಸಮಯವಿದು. ನಿಜ, ಈ ಕಾರ್ಯಕ್ರಮದಿಂದ ನಿಮಗೆ ಟಿಆರ್‌ಪಿ ಹೆಚ್ಚಾಗಿರಬಹುದು. ಆದರೆ ಜನ ಹೆಚ್ಚು ನೋಡುತ್ತಾರೆ ಎಂಬ ಕಾರಣಕ್ಕೆ ಅದು ಶ್ರೇಷ್ಠವಾದ ಕಾರ್ಯಕ್ರಮ ಎಂದು ಭಾವಿಸುವುದು ಮೂರ್ಖತನ. ಬೀದಿಯಲ್ಲಿ ಒಬ್ಬ ಹುಚ್ಚ ವಿಚಿತ್ರವಾಗಿ ಮಾತನಾಡುತ್ತ, ಬಟ್ಟೆ ಬಿಚ್ಚಿಕೊಂಡು ಓಡಾಡುತ್ತಿದ್ದರೆ ಆತನನ್ನು ಎಲ್ಲರೂ ನೋಡುತ್ತಾರೆ. ಮಾಮೂಲಿಯಂತೆ ಓಡಾಡುವ ನಮ್ಮ, ನಿಮ್ಮನ್ನು ಯಾರೂ ಗಮನಿಸುವುದಿಲ್ಲ. ಎಲ್ಲರೂ ನೋಡುತ್ತಾರೆ ಅನ್ನುವ ಕಾರಣಕ್ಕೆ ಬೆತ್ತಲೆ ಹುಚ್ಚನನ್ನು ಪ್ರೋತ್ಸಾಹಿಸುವುದು ಸರಿಯೇ? ಬೆತ್ತಲೆ ಓಡಾಡುವ ಹುಚ್ಚನಿಗೆ ಬಟ್ಟೆ ಕೊಡಿಸಿ, ಯಾವುದಾದರೂ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಬೇಕೇ ಹೊರತು, ಹುಚ್ಚನೇ ಶ್ರೇಷ್ಠ ಎಂದು ಭಾವಿಸಬೇಕಾಗಿಲ್ಲ. ಒಬ್ಬ ಹುಚ್ಚನನ್ನು ಸಹಿಸಿಕೊಂಡ ಪರಿಣಾಮ ಈಗ ಬೀದಿ ತುಂಬ ಹುಚ್ಚರು ಸೇರಿಬಿಡುತ್ತಾರೆ. ಆ ಅಪಾಯವನ್ನೂ ನಾವು ಎದುರಿಸುತ್ತಿದ್ದೇವೆ.

ಇದೆಲ್ಲವನ್ನೂ ಗಮನಿಸಿ ತಾವು ದಯಮಾಡಿ ನರೇಂದ್ರ ಶರ್ಮ ಅವರ ಬ್ರಹತ್ ಬ್ರಹ್ಮಾಂಡ ಕಾರ್ಯಕ್ರಮವನ್ನು ಈಗಿಂದೀಗಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸುತ್ತೇವೆ. ಈ ಕಾರ್ಯಕ್ರಮ ಅನೈತಿಕ, ಅಪ್ರಜಾಸತ್ತಾತ್ಮಕ, ಮಾನವ ವಿರೋಧಿಯಾಗಿದೆ.

ಇದನ್ನು ನಾವು ನಿಮ್ಮ ಬೇಡಿಕೆ ಎಂದು ಹೇಳುತ್ತಿಲ್ಲ, ಆಗ್ರಹ ಎಂದೇ ಹೇಳುತ್ತಿದ್ದೇವೆ. ಯಾಕೆಂದರೆ ಇದು ಕಾನೂನು ಪ್ರಕಾರವೂ ಅಪರಾಧ. ನೀವು ಹಾಗು ನರೇಂದ್ರ ಶರ್ಮ ಸರ್ಕಾರ ರಚಿಸಿರುವ ನಿಯಮಾವಳಿಗಳನ್ನು ಗಾಳಿಗೆ ತೂರಿರುವುದು ಸ್ಪಷ್ಟ.

ನಿಮಗೆ ಚೆನ್ನಾಗಿ ಗೊತ್ತಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆ ಸಿದ್ಧಪಡಿಸಿರುವ ಮಾರ್ಗಸೂಚಿಗಳನ್ನು ನೀವು ತಪ್ಪದೇ ಪಾಲಿಸಬೇಕು. ಮಾರ್ಗಸೂಚಿಗಳನ್ನು ಅಲಕ್ಷ್ಯ ಮಾಡಿದ ಎಂಟಿವಿ, ಟಿವಿ೫ ಮುಂತಾದ ಚಾನಲ್‌ಗಳನ್ನು ಶಿಕ್ಷಿಸಲಾಗಿರುವ ಉದಾಹರಣೆಗಳೂ ನಮ್ಮ ಮುಂದಿವೆ. ಟಿವಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಒಟ್ಟು ೧೩ ವಿವಿಧ ಕಾಯ್ದೆಗಳ ವ್ಯಾಪ್ತಿಗೆ ಒಳಪಡುತ್ತವೆ. ಹೀಗಾಗಿ ತಮಗೆ ಕಾನೂನಿನ ಹೊಣೆಗಾರಿಕೆಯೂ ಇದೆ. ಅವುಗಳನ್ನು ನಿಮಗೆ ನೆನಪಿಸಲು ಯತ್ನಿಸುತ್ತೇವೆ.

ಕಾಯ್ದೆಗಳು ಹೀಗಿವೆ.

1. Cable Television Network (Regulation) Act, 1995 and Certification Rules there under.
2. Drugs and Cosmetics Act, 1940.
3. Emblems and Names (Prevention of Improper Use) Act, 1950.
4. Drugs (Control) Act 1950.
5. Drugs and Magic Remedies (Objectionable Advertisements) Act, 1954.
6. Prevention of Food & Adulteration Act, 1954.
7. Prize Competitions Act, 1955.
8. Indecent Representation of Women (Prohibition) Act, 1986.
9. Trade and Merchandise Marks, Act 1999.
10. Copyright Act, 1957.
11. Cigarette and other Tobacco Products Act 2003.
12. Consumer Protection Act, 1986.
13. The Prevention of Cruelty to Animals Act, 1960


ಪ್ರಸಾರ ವೇಳೆ ಕಾನೂನು ಉಲ್ಲಂಘನೆಯನ್ನು ಮೂರು ಹಂತದಲ್ಲಿ ವಿಚಾರಣೆಗೆ ಒಳಪಡಿಸಬಹುದು. ಮೂರನೆ ಹಂತದಲ್ಲಿ ಸರಕಾರ ನೇಮಿಸಿದ ಸಮಿತಿ ಚಾನೆಲ್ ಮುಖ್ಯಸ್ಥ ತಪ್ಪಿತಸ್ಥ ಎಂದು ಕಂಡುಬಂದರೆ, ಪ್ರಸ್ತುತ ಕಾರ್ಯಕ್ರಮವನ್ನು ಪ್ರಸರಣ ಮಾಡದಂತೆ ನಿರ್ದೇಶಿಸಬಹುದು, ಕ್ಷಮಾಪಣೆಯನ್ನು ಬಿತ್ತರಿಸುವಂತೆ ಹೇಳಬಹುದು ಹಾಗೂ ದಂಡ ವಿದಿಸಬಹುದು. ಈ ಪ್ರಕ್ರಿಯೆಗೆ ದೂರು ದಾಖಲಿಸುವುದು ಮುಖ್ಯ.ಮಾರ್ಗಸೂಚಿ ಸ್ಪಷ್ಟ ಮಾತುಗಳಲ್ಲಿ ಕಾರ್ಯಕ್ರಮಗಳಲ್ಲಿ ಅವಹೇಳನಕಾರಿ ಭಾಷೆ, ಜಾತಿ ನಿಂದನೆ, ಮೂಢನಂಬಿಕೆ ವೈಭವೀಕರಣ ಹಾಗೂ ಜನರನ್ನು ದಿಕ್ಕುತಪ್ಪಿಸುವುದನ್ನು ಖಂಡಿಸುತ್ತದೆ.

ಕಂಟೆಂಟ್ ಸರ್ಟಿಫಿಕೇಷನ್ ನಿಯಮಾವಳಿ ೨೦೦೮ ಪ್ರಕಾರ ಯಾವುದೇ ನಿರ್ದಿಷ್ಟ ಜಾತಿ, ಕೋಮು ಅಥವಾ ನಂಬಿಕೆ ವಿರುದ್ಧ ಮಾತನಾಡುವುದು ಅಪರಾಧ. ಜೊತೆಗೆ ಯಾವುದೇ ಒಂದು ಆಚರಣೆಯನ್ನು ಶ್ರೇಷ್ಠ ಅಥವಾ ಕನಿಷ್ಟ ಎಂದು ಬಿಂಬಿಸುವಂತಿಲ್ಲ. ಹಾಗೆಯೇ ಲಿಂಗ ಅಸಮಾನತೆಯನ್ನು ಹೇಳುವಂತಿಲ್ಲ.

ನಿಮ್ಮ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮ ಈ ಎಲ್ಲ ಕಾಯ್ದೆಗಳನ್ನು ಉಲ್ಲಂಘಿಸಿರುವುದು ಸ್ಪಷ್ಟ. ಈ ಕಾರ್ಯಕ್ರಮ ಸ್ತ್ರೀಯರನ್ನು ಕೆಟ್ಟದಾಗಿ ಚಿತ್ರಿಸುತ್ತದೆ. ಹಜಾಮರನ್ನು ನೋಡಬಾರದು ಎನ್ನುವ ಮೂಲಕ ಅಸ್ಪೃಶ್ಯತೆಯನ್ನು ಪ್ರಚಾರ ಮಾಡುತ್ತಿದೆ. ಜನರಲ್ಲಿ ಪ್ರಳಯದ ಭೀತಿಯನ್ನು ಸೃಷ್ಟಿಸುತ್ತಿದೆ. ಮಾಂಸಾಹಾರಿಗಳನ್ನು ಈತ ಕೀಳಾಗಿ ನಿಂದಿಸುವ ಮೂಲಕ ಜನಾಂಗೀಯ ನಿಂದನೆಯನ್ನು ಈ ಕಾರ್ಯಕ್ರಮ ಪೋಷಿಸುತ್ತಿದೆ.

ಭಾರತದ ಸಂವಿಧಾನವು ಜನರಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಾಗಬೇಕು ಎನ್ನುತ್ತದೆ. ಆಧುನಿಕ ಕಾಲಘಟ್ಟದಲ್ಲಿ ನಾವು ಇನ್ನೂ ಕಂದಾಚಾರಗಳ ನರಕದಲ್ಲೇ ಕೊಳೆಯುತ್ತಿದ್ದೇವೆ. ಈ ಕೆಟ್ಟ ಬೆಳವಣಿಗೆಯನ್ನು ಟಿವಿ ಚಾನಲ್ ಗಳು ನಿರಂತರವಾಗಿ ಪೋಷಿಸುತ್ತಿವೆ. ಈ ನಿಟ್ಟಿನಲ್ಲಿ ನಿಮ್ಮ ಚಾನಲ್ ಸೇರಿದಂತೆ ಎಲ್ಲ ಚಾನಲ್ ಗಳು ಟಿಆರ್ಪಿ ಆಸೆಗೆ ಬಲಿಬೀಳದೆ ಕಾಲದ ಅಗತ್ಯಕ್ಕೆ ತಕ್ಕಂಥ, ಮನುಷ್ಯರನ್ನು ಎಲ್ಲ ಮೌಢ್ಯಗಳಿಂದ ಬಿಡುಗಡೆಗೊಳಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಅಗತ್ಯವಿದೆ.

ಈ ಕಾರ್ಯಕ್ರಮವನ್ನು ಕೂಡಲೇ ನಿಲ್ಲಿಸಬೇಕೆಂದು ಮತ್ತೊಮ್ಮೆ ಆಗ್ರಹಪಡಿಸುತ್ತೇವೆ. ಒಂದು ವೇಳೆ ನಿಲ್ಲಿಸದೇ ಹೋದಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ದೂರು ಸಲ್ಲಿಸುವುದೂ ಸೇರಿದಂತೆ, ಪ್ರಜಾಸತ್ತಾತ್ಮಕ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಧನ್ಯವಾದಗಳು.

ಓದುಗರಿಗೊಂದು ಮನವಿ: ದಯಮಾಡಿ ಈ ಪತ್ರದ ಧಾಟಿಯ ಪತ್ರಗಳನ್ನು ಅಥವಾ ಇದೇ ಪತ್ರವನ್ನು ನಿಮ್ಮ ಐಡಿಗಳಿಂದ  ಈ feedbackzeekannada@zeenetwork.com  ಇಮೇಲ್ ಅಥವಾ ಜೀ ಕನ್ನಡ, ನಂ.೩೯, ಯುನೈಟೆಡ್ ಮ್ಯಾನ್ಷನ್, ಮೂರನೇ ಮಹಡಿ, ಮಹಾತ್ಮಗಾಂಧಿ ರಸ್ತೆ, ಬೆಂಗಳೂರು-೧ ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕಾಗಿ ವಿನಂತಿ. ಸಾಧ್ಯವಾಗುವುದಾದರೆ ಈ ಅಭಿಯಾನವನ್ನು ಬೆಂಬಲಿಸುವ ಬ್ಲಾಗರ್‌ಗಳು ಈ ಪತ್ರವನ್ನು ಯಥಾವತ್ತಾಗಿ ತಮ್ಮ ಬ್ಲಾಗ್‌ಗಳಲ್ಲಿ ಪ್ರಕಟಿಸಬೇಕೆಂದು ಕೋರುತ್ತೇವೆ. ಹಾಗೆಯೇ ಇದನ್ನು ಫೇಸ್‌ಬುಕ್ ಹಾಗು ಇತರ ಸೋಷಿಯಲ್ ನೆಟ್‌ವರ್ಕ್‌ಗಳಲ್ಲಿ ಶೇರ್ ಮಾಡಲು ವಿನಂತಿಸುತ್ತೇವೆ.

Sunday, April 17, 2011

ಬೆಂಗಳೂರು ಪ್ರೆಸ್‌ಕ್ಲಬ್ ಚುನಾವಣೆಗೆ ಅಖಾಡ ಸಜ್ಜು...


ಬೆಂಗಳೂರಿನ ಪತ್ರಕರ್ತರ ಪಾಲಿನ ನೆಚ್ಚಿನ ತಾಣವಾಗಿರುವ ಪ್ರೆಸ್ ಕ್ಲಬ್‌ನ ವಾರ್ಷಿಕ ಚುನಾವಣೆಗೆ ಅಖಾಡ ಸಜ್ಜುಗೊಂಡಿದೆ. ಬರುವ ೨೪ರಂದು ಭಾನುವಾರವೇ ಚುನಾವಣೆ. ಹಿರಿಯ ಪತ್ರಕರ್ತ ಟಿ.ಎಸ್.ರಾಮಚಂದ್ರರಾಯರು ತಮ್ಮ ಗೆಳೆಯರೊಂದಿಗೆ ೪೧ ವರ್ಷಗಳ ಹಿಂದೆ ಸ್ಥಾಪಿಸಿದ ಬೆಂಗಳೂರು ಪ್ರೆಸ್‌ಕ್ಲಬ್ ದೇಶದ ಪ್ರೆಸ್‌ಕ್ಲಬ್‌ಗಳ ಪೈಕಿ ಹೆಸರುವಾಸಿ. ಕಬ್ಬನ್ ಪಾರ್ಕ್ ಆವರಣದಲ್ಲೇ ಇರುವ ಕ್ಲಬ್‌ನ ಸಹಜ ನೈಸರ್ಗಿಕ ಸೌಂದರ್ಯ ಮತ್ತು ರಮಣೀಯ ವಾತಾವರಣಕ್ಕೆ ಮನಸೋಲದವರೇ ಇಲ್ಲ.

ಎಂ.ಎ.ಪೊನ್ನಪ್ಪ
ಪ್ರೆಸ್‌ಕ್ಲಬ್ ಪತ್ರಕರ್ತರ ಮನರಂಜನೆಗಾಗಿ ಇರುವ ಸಂಸ್ಥೆ. ಆದರೆ ವೃತ್ತಿಪರ ಸಂಘಟನೆಗಳ ಹಾಗೆಯೇ ಇದು ಕಾರ್ಯ ನಿರ್ವಹಿಸುತ್ತ ಬಂದಿದೆ. ಕ್ಲಬ್‌ನಲ್ಲಿ ದಿನಕ್ಕೆ ಐದಾರು ಪತ್ರಿಕಾಗೋಷ್ಠಿಗಳು, ಸಭೆ ಸಮಾರಂಭಗಳು ಜರುಗುತ್ತವೆ. ಹಿರಿಯ ಪತ್ರಕರ್ತರಿಗೆ ಸಮಯ ಕಳೆಯುವ, ವಿಶ್ರಾಂತಿ ಪಡೆಯುವ, ಜತೆಯ ಗೆಳೆಯರೊಂದಿಗೆ ಹರಟುವ ತಾಣ. ಕಿರಿಯ ಪತ್ರಕರ್ತರಿಗೆ ಕೆಲಸ ಒತ್ತಡದ ನಡುವೆ ರಿಲ್ಯಾಕ್ಸ್ ಆಗುವ, ಸಹೋದ್ಯೋಗಿಗಳ ಜತೆ ಅನುದಿನದ ಆಗುಹೋಗುಗಳ ಕುರಿತು ಚರ್ಚಿಸುವ ಅಡ್ಡ. ಇವರ ನಡುವೆ ಕೆಲವು ಅಡ್ಡಕಸುಬಿಗಳಿಗೂ ಕ್ಲಬ್ ಆಶ್ರಯದಾಣವಾಗಿರುವುದುಂಟು. ಪತ್ರಕರ್ತರನ್ನು ಹೊರತುಪಡಿಸಿ ರಾಜಕಾರಣಿಗಳು, ಸಂಘಟನೆಗಳ ಪ್ರಮುಖರು, ಬೇರೆ ಬೇರೆ ವಲಯದ ಗಣ್ಯರಿಗೂ ಕ್ಲಬ್‌ನೆಡೆಗೆ ಒಂದು ಆಕರ್ಷಣೆ ಇದ್ದೇ ಇದೆ.

ಇಂತಿಪ್ಪ ಕ್ಲಬ್‌ನ ಆಡಳಿತ ಮಂಡಳಿಯ ಆಯ್ಕೆಗೆ ಪ್ರತಿವರ್ಷವೂ ಚುನಾವಣೆ ನಡೆಯುತ್ತದೆ. ಕ್ಲಬ್‌ನೊಂದಿಗೆ ಗುರುತಿಸಿಕೊಂಡು ಕೆಲಸ ಮಾಡಲು ಆಸಕ್ತಿಯುಳ್ಳವರು ಸ್ಪರ್ಧಿಸುತ್ತಾರೆ.

ಕಳೆದ ವರ್ಷದ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಎಂ.ಎ.ಪೊನ್ನಪ್ಪ ಈ ಬಾರಿಯೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಪೊನ್ನಪ್ಪ ಪ್ರಜಾವಾಣಿಯ ಕ್ರೀಡಾ ವಿಭಾಗವನ್ನು ನೋಡಿಕೊಳ್ಳುವ ಸಹಾಯಕ ಸಂಪಾದಕ. ತನ್ನದೇ ಆದ ಗೆಳೆಯರ ಬಳಗವನ್ನು ಹೊಂದಿದವರು. ಮೂಲತಃ ಕೊಡಗಿನವರಾದ ಪೊನ್ನಪ್ಪ ಅವರಿಗೆ ಕ್ಲಬ್ ಕಲ್ಚರ್ ಒಗ್ಗಿ ಬರುವುದರಿಂದಲೋ ಏನೋ, ಹಲವು ಅವಧಿಗಳಿಗೆ ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಈ ಬಾರಿ ಮತ್ತೊಮ್ಮೆ ಅಖಾಡಕ್ಕೆ ಇಳಿದಿದ್ದಾರೆ.

ಸದಾಶಿವ ಶೆಣೈ
ಪೊನ್ನಪ್ಪ ಅವರಿಗೆ ಎದುರಾಳಿಯಾಗಿರುವುದು ಉದಯ ಟಿವಿಯ ಶ್ರೀಧರ್. ಕಳೆದ ಬಾರಿ ಶ್ರೀಧರ್ ಉಪಾಧ್ಯಕ್ಷರಾಗಿದ್ದವರು. ಹೊಸ ತಲೆಮಾರಿನ ಪತ್ರಕರ್ತರ ಸ್ನೇಹ ಗಳಿಸಿದವರು. ಅದೇ ಅವರಿಗೆ ಶ್ರೀರಕ್ಷೆ. ಆದರೆ ಹಳೆಯ ಹುಲಿ ಪೊನ್ನಪ್ಪ ಅವರನ್ನು ಮಣಿಸಲು ಸಾಧ್ಯವೇ ಎಂಬುದು ದೊಡ್ಡ ಪ್ರಶ್ನೆ.

ಇನ್ನು ಕ್ಲಬ್‌ನ ಅತ್ಯಂತ ಮಹತ್ವದ ಹುದ್ದೆಯಾಗಿರುವ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಲಂಕೇಶ್ ಪತ್ರಿಕೆಯ ಸದಾಶಿವ ಶೆಣೈ ಸ್ಪರ್ಧಿಸಿದ್ದಾರೆ. ಕಳೆದ ಬಾರಿಯೂ ಅವರು ಅದೇ ಹುದ್ದೆಯಲ್ಲಿದ್ದರು. ಶೆಣೈ ಅವರು ಲಂಕೇಶರ ಜತೆ ಕೆಲಸ ಮಾಡಿದವರು. ಹಿರಿಯ ಮತ್ತು ಕಿರಿಯ ಪತ್ರಕರ್ತ ಜತೆ ಸಾಕಷ್ಟು ಒಡನಾಟವಿದೆ. ಅವರ ಎದುರಾಳಿಯಾಗಿರುವ ವೆಂಕಟೇಶ್ ಅದ್ಭುತ ಛಾಯಾಗ್ರಾಹಕರೆಂಬುದೇನೋ ನಿಜ. ಆದರೆ ಗೆಲ್ಲುವ ಸಾಧ್ಯತೆ ಕಡಿಮೆ. ಹೀಗಾಗಿ ಶೆಣೈ ಈ ಬಾರಿಯೂ ಪ್ರಧಾನ ಕಾರ್ಯದರ್ಶಿಯಾಗುವುದು ಬಹುತೇಕ ಖಚಿತ.

ಇನ್ನು ಉಪಾಧ್ಯಕ್ಷ, ಖಜಾಂಚಿ, ಕಾರ್ಯದರ್ಶಿ ಸ್ಥಾನಗಳಿಗೆ ಸಾಕಷ್ಟು ಪೈಪೋಟಿ ಕಂಡುಬಂದಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಮೂವರು ಸ್ಪರ್ಧಾಳುಗಳಿದ್ದರೆ, ಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಗಳಿಗೆ ಕ್ರಮವಾಗಿ ಐದು ಮತ್ತು ಆರು ಮಂದಿ ಸ್ಪರ್ಧಿಗಳಿದ್ದಾರೆ. ಆರು ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಗಳಿಗೆ ಒಟ್ಟು ಹದಿನಾಲ್ಕು ಮಂದಿ ಕಣದಲ್ಲಿ ಉಳಿದಿದ್ದಾರೆ.

ಬರುವ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಚುನಾವಣೆ. ಸಂಜೆ ಹೊತ್ತಿಗೆ ಫಲಿತಾಂಶ ಪ್ರಕಟವಾಗಲಿದೆ. ಹೊಸಹೊಸ ಸುದ್ದಿಗಳೇನೇ ಇದ್ದರೂ ಖಂಡಿತಾ ಅಪ್‌ಡೇಟ್ ಮಾಡುತ್ತೇವೆ.

ಜನಲೋಕಪಾಲ ಮಸೂದೆ ಬಗೆಗಿನ ಸಂದೇಹಗಳ ಕುರಿತು ಪ್ರಶಾಂತ್ ಭೂಷಣ್



ಜನಲೋಕಪಾಲ ಮಸೂದೆ ಕುರಿತಂತೆ ಸಾರ್ವಜನಿಕವಾಗಿ ವ್ಯಕ್ತವಾಗಿರುವ ಸಂದೇಹಗಳ ಕುರಿತು ಸುಪ್ರೀಂ ಕೋರ್ಟ್‌ನ  ಹಿರಿಯ ನ್ಯಾಯವಾದಿ ಹಾಗು ಮಸೂದೆ ಕರಡು ರಚನಾ ಸಮಿತಿಯ ಸದಸ್ಯ ಪ್ರಶಾಂತ್ ಭೂಷಣ್ ದಿ ಹಿಂದೂ ಪತ್ರಿಕೆಯಲ್ಲಿ ಬರೆದಿದ್ದರು. ಪತ್ರಕರ್ತ ಹರ್ಷ ಕುಮಾರ್ ಕುಗ್ವೆ ಈ ಲೇಖನವನ್ನು ಕನ್ನಡದಲ್ಲಿ ಅನುವಾದಿಸಿ ನೀಡಿದ್ದಾರೆ. ಮೂಲ ಇಂಗ್ಲಿಷ್ ಲೇಖನವನ್ನು ಓದಲು ಇಲ್ಲಿ ಕ್ಲಿಕ್ಕಿಸಿ: Jan Lokpal bill: addressing concerns

ಜನಲೋಕಪಾಲ್ ಮಸೂದೆಯ ಕರಡು ಪ್ರತಿಯಲ್ಲಿರುವ ಅಂಶಗಳ ಕುರಿತು ಹಲವಾರು ಜನರು ತಮ್ಮ ಸಂದೇಹಗಳನ್ನು ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರವನ್ನು ತಡೆಯಲು ಅದು ಪರಿಣಾಮಕಾರಿ ಸಾಧನವಾಗಬಲ್ಲದೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ. ಅಣ್ಣಾ ಹಜಾರೆಯವರ ನಿರಶನವು ಸರ್ಕಾರದ ಮೇಲೆ ತಂದ ಒತ್ತಡದ ರೀತಿಯತ್ತ ಅವರು ಬೊಟ್ಟುಮಾಡಿ ತೋರಿಸಿದ್ದಾರೆ. ಹೀಗಾಗಿ ಈ ಮಸೂದೆಯಲ್ಲಿ ಏನೇನು ಅವಕಾಶಗಳಿವೆ ಹಾಗೂ ಭ್ರಷ್ಟಾಚಾರವನ್ನು ನಿಯಂತ್ರಿಸಲು ಒಂದು ಪರಿಣಾಮಕಾರಿ ಸಂಸ್ಥೆಯನ್ನು ರಚಿಸಲು ಈ ಮಸೂದೆ ಹೇಗೆ ಸಹಕಾರಿಯಾಗಬಲ್ಲದು  ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ.

ಭ್ರಷ್ಟಾಚಾರವು ವ್ಯಾಪಕವಾಗಿ ಹರಡಲು ಹದವಾದ ಭೂಮಿಕೆಯನ್ನು ಸೃಷ್ಟಿಸಿದ ನೀತಿಗಳ ಕಾರಣಕ್ಕಾಗಿ ಹಾಗೂ ಭ್ರಷ್ಟರನ್ನು ತನಿಖೆಗೊಳಪಡಿಸಿ, ವಿಚಾರಣೆಗೊಳಪಡಿಸಲು ಅಗತ್ಯವಿರುವ ಪರಿಣಾಮಕಾರಿ ಸಂಸ್ಥೆಯೊಂದರ ಕೊರತೆಗಳ ಕಾರಣಕ್ಕಾಗಿಯೇ ಇಂದು ಭ್ರಷ್ಟಾಚಾರ ಎನ್ನುವುದು ಭಾರತದಲ್ಲಿ ಅಪಾಯಕಾರಿ ಮಟ್ಟಕ್ಕೆ ಬೆಳೆದು ನಿಂತಿದೆ. ಉದಾರೀಕರಣ ಹಾಗೂ ಖಾಸಗೀಕರಣಗಳ ಹೆಸರಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಹಾಗೂ ಸಾರ್ವಜನಿಕ ಆಸ್ತಿಗಳನ್ನು (ಖನಿಜ ಸಂಪನ್ಮೂಲ, ತೈಲ ಹಾಗೂ ಅನಿಲ ಸಂಪನ್ಮೂಲ, ಭೂಸಂಪತ್ತು, ತರಂಗಾಂತರ, ಇನ್ನಿತರೆ) ಯಾವುದೇ ಪಾರದರ್ಶಕತೆ ಅಥವಾ ಸಾರ್ವಜನಿಕ ಹರಾಜು ಪ್ರಕ್ರಿಯೆಗಳಿಗೊಳಪಡಿಸದೆ ಖಾಸಗಿಯವರಿಗೆ ಒಪ್ಪಿಸಿಬಿಡುವಂತಹ ನೀತಿಗಳನ್ನು ಭಾರತ ಅಳವಡಿಸಿಕೊಂಡಿದೆ. ಸರ್ಕಾರವು ಖಾಸಗಿ ಕಾರ್ಪೊರೇಷನ್‌ಗಳೊಂದಿಗೆ ರಾತ್ರೋರಾತ್ರಿ, ನೂರಾರು ಒಡಂಬಡಿಕೆ (ಎಂಓಯು)ಗಳಿಗೆ  ಸಹಿ ಹಾಕಿ ಅಪಾರ ಪ್ರಮಾಣದ ಖನಿಜ ಸಂಪತ್ತು, ಅರಣ್ಯ ಸಂಪತ್ತು ಹಾಗೂ ಜಲಮೂಲಗಳಿರುವ ವಿಶಾಲವಾದ ಭೂಮಿಯನ್ನು ಪರಭಾರೆ ಮಾಡಿಬಿಡುತ್ತಿದೆ. ಇದರಿಂದಾಗಿ ಈ ಕಾರ್ಪೊರೇಟ್ ಕಂಪನಿಗಳು ತಾವು ಪಡೆದ ಸಂಪನ್ಮೂಲದ ಒಟ್ಟು ಮೌಲ್ಯದಲ್ಲಿ ಕೇವಲ ಶೇಕಡಾ ಒಂದಕ್ಕಿಂತ ಕಡಿಮೆ ಮೊತ್ತದ ರಾಯಧನ ನೀಡಿ ಸಂಪನ್ಮೂಲಗಳನ್ನೆಲ್ಲಾ ವಶಪಡಿಸಿಕೊಂಡು ಬಿಕರಿಮಾಡಲು ಸುಲಭಸಾಧ್ಯವಾಗಿದೆ.

ಕರ್ನಾಟಕದ ಲೋಕಾಯುಕ್ತ ನ್ಯಾ.ಸಂತೋಷ್ ಹೆಗಡೆಯವರು ಕರ್ನಾಟಕದಲ್ಲಿ ಗಣಿಗಾರಿಕೆ ಕುರಿತ ವರದಿಯೊಂದರಲ್ಲಿ ಇಂತಹ ವಹಿವಾಟಿನಲ್ಲಿ ಈ ಕಂಪನಿಗಳಿಗೆ ದಕ್ಕುವ ಲಾಭದ ಪ್ರಮಾಣ ಶೇಕಡಾ ೯೦ಕ್ಕಿಂತ ಹೆಚ್ಚಾಗಿರುವುದನ್ನು ಗುರುತಿಸಿದ್ದಾರೆ. ಈ ಲಾಭ ಪ್ರಮಾಣವೇ ಲಂಚ ಕೊಡಲು ವ್ಯಾಪಕ ಅವಕಾಶವನ್ನೂ ಭ್ರಷ್ಟಾಚಾರ ಎಸಗಲು ಪ್ರೇರಣೆ ಪ್ರೋತ್ಸಾಹಗಳನ್ನೂ ನೀಡುತ್ತದೆ. ಎ.ರಾಜಾ ಅವರು ಸಾರ್ವಜನಿಕ ಹರಾಜನ್ನೂ ನಡೆಸದೇ ತರಂಗಾಂತರಗಳನ್ನು ಅದರ ಮಾರುಕಟ್ಟೆ ಬೆಲೆಗಿಂತ ಶೆಕಡಾ ೧೦ಕ್ಕಿಂತ ಕಡಿಮೆ ಬೆಲೆಯಲ್ಲಿ ಕಂಪನಿಗಳಿಗೆ ಮಾರಿದಾಗ ಆಗಿದ್ದೂ ಇದೇ. ಇಲ್ಲಿ ನಿಯಂತ್ರಕರನ್ನು ಭ್ರಷ್ಟಗೊಳಿಸಿ ಕಂಪನಿಗಳಿಗೆ ಅತ್ಯಲ್ಪ ಪ್ರಮಾಣದ ಶುಲ್ಕ ವಿಧಿಸಿ ಖಾಸಗಿ ಏಕಸ್ವಾಮ್ಯ ಕಂಪನಿಗಳು ಒಪ್ಪಲಸಾಧ್ಯವಾಗದಷ್ಟು ಬೃಹತ್ ಪ್ರಮಾಣದಲ್ಲಿ ಲಾಭಮಾಡಿಕೊಳ್ಳಲು ಸಾಧ್ಯವಾಗುವ ಒಂದು ವಾತಾವರಣದಲ್ಲಿ ಜಲ ಮತ್ತು ವಿದ್ಯುತ್ ಸರಬರಾಜು, ವಿಮಾನ ನಿಲ್ದಾಣ ಅಭಿವೃದ್ಧಿ ಮತ್ತಿತರ ಕ್ಷೇತ್ರಗಳಲ್ಲಿ ಖಾಸಗಿ ಏಕಸ್ವಾಮ್ಯ ಕಂಪನಿಗಳು ಸೃಷ್ಟಿಯಾಗಲು ಅವಕಾಶವಾಗಿದೆ. ವಿಮಾನ ನಿಲ್ದಾಣ ಅಭಿವೃದ್ಧಿ, ಹೆದ್ದಾರಿ ನಿರ್ಮಾಣ, ವಿಶೇಷ ಆರ್ಥಿಕ ವಲಯಗಳ ಸೃಷ್ಟಿ, ಇತ್ಯಾದಿಗಳ ಹೆಸರಲ್ಲಿ ಹತ್ತಾರು ಸಾವಿರ ಹೆಕ್ಟೇರ್‌ಗಳಷ್ಟು ಭೂಮಿಯನ್ನು ಅದರ ಮೌಲ್ಯದ ಶೇಕಡಾ ೧೦ಕ್ಕಿಂತ ಕಡಿಮೆ ಬೆಲೆಯಲ್ಲಿ ಈ ಕಂಪನಿಗಳಿಗೆ ವಾಣಿಜ್ಯೀಕರಣಕ್ಕಾಗಿ ಬಿಟ್ಟುಕೊಡಲಾಗಿದೆ. ಇಂತಹ ಯೋಜನೆಗಳೇ ಭ್ರಷ್ಟಾಚಾರಕ್ಕೆ ವ್ಯಾಪಕ ಪ್ರೋತ್ಸಾಹ ನೀಡುವುದರ ಜೊತೆಜೊತೆಗೆ ಲಕ್ಷಾಂತರ ಮಂದಿ ಬಡವರನ್ನು ಬಲವಂತವಾಗಿ ಒಕ್ಕಲೆಬ್ಬಿಸಿ ಅವರನ್ನು ಹಸಿವಿನ ದವಡೆಗೆ ತಳ್ಳಿ ಅವರಲ್ಲಿ ಕೆಲವರು ಮಾವೋವಾದಿಗಳನ್ನು ಸೇರಿಕೊಳ್ಳುವಂತೆ ಮಾಡುತ್ತಿವೆ. ಲಾಭ ಪಡೆದುಕೊಂಡವರು ಪ್ರಾಕೃತಿಕ ಸಂಪನ್ಮೂಲಗಳ ಭೂಮಿಯನ್ನು ಛಿದ್ರಗೊಳಿಸಿ (ಅದರಲ್ಲಿ ಸಾಕಷ್ಟು ರಫ್ತಾಗಿ ಹೋಗುತ್ತದೆ) ಪರಿಸರವನ್ನು ನಾಶಮಾಡಿದ್ದಾರೆ. ಇನ್ನೂ ಆತಂಕದ ವಿಷಯ ಯಾವುದೆಂದರೆ ಇಂತಹ ವ್ಯವಹಾರಗಳು ಅತ್ಯಂತ ಪ್ರಭಾವಶಾಲಿ ರಾಕ್ಷಸಿ ಕಂಪನಿಗಳನ್ನು ಸೃಷ್ಟಿಸುತ್ತವೆ. ಅದ್ಯಾವ ಮಟ್ಟಕ್ಕೆಂದರೆ, ಈಗಾಗಲೇ ನಾವು ರಾಡಿಯಾ ಟೇಪ್‌ಗಳಲ್ಲಿ ನೋಡಿರುವಂತೆ ಅವು ಅಧಿಕಾರದ ಸಂಸ್ಥೆಗಳನ್ನು ಪ್ರಭಾವಗೊಳಿಸಿ,  ಹೆಚ್ಚೂ ಕಡಿಮೆ ಅವುಗಳ ಮೇಲೆ ನಿಯಂತ್ರಣ ಸಾಧಿಸುವಷ್ಟು  ಸಾಮರ್ಥ್ಯಗಳಿಸಿಕೊಂಡುಬಿಟ್ಟಿರುತ್ತವೆ.

ಈ ಬಗೆಯಲ್ಲಿ ಭ್ರಷ್ಟಾಚಾರಕ್ಕೆ ವ್ಯಾಪಕ ಪ್ರೋತ್ಸಾಹ ನೀಡುವ ನೀತಿಗಳನ್ನು ಅಳವಡಿಸಿಕೊಂಡಿರುವ ನಾವು ಅದೇ ವೇಳೆಗೆ ಭ್ರಷ್ಟಾಚಾರವನ್ನು ತಡೆಯುವಂತಹ, ತನಿಖೆ ನಡೆಸುವಂತಹ, ಭ್ರಷ್ಟರನ್ನು ವಿಚಾರಣೆ ನಡೆಸಿ ನ್ಯಾಯಕ್ಕೆ ತಲೆಬಾಗಿಸುವ  ಪರಿಣಾಮಕಾರಿ ಸಂಸ್ಥೆಗಳನ್ನು ರಚಿಸಿಕೊಳ್ಳಲೇ ಇಲ್ಲ. ಕೇಂದ್ರ ತನಿಖಾ ದಳ (ಸಿಬಿಐ) ಕೂಡಾ ಭ್ರಷ್ಟಾಚಾರದ ಮೂಲವೆ ಆಗಿರುವ ಸರ್ಕಾರದ ಆಡಳಿತಾತ್ಮಕ ನಿಯಂತ್ರಣದಲ್ಲಿಯೇ ಇದೆ. ಹೀಗಾಗಿ, ಸಿಬಿಐ ಮೇಲೆ ನ್ಯಾಯಾಲಯವು ಒತ್ತಡ ಹೇರಿದ ಅಪರೂಪದ ಸಂದರ್ಭಗಳನ್ನು ಹೊರತುಪಡಿಸಿದರೆ ಅದು ಉನ್ನತ ಮಟ್ಟದ ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ತನಿಖೆ ನಡೆಸಲು ಸಾಮಾನ್ಯವಾಗಿ ಯಾವ ಕ್ರಮವನ್ನೂ ಕೈಗೊಳ್ಳುವುದಿಲ್ಲ. ಕೆಲವೊಮ್ಮೆ ಸಿಬಿಐ ತಾನೇ ಭ್ರಷ್ಟಗೊಂಡಿರುವ ರೀತಿಯಲ್ಲಿ ವರ್ತಿಸುವುದನ್ನೂ ನಾವು ಕಂಡಿದ್ದೇವೆ. ಅದನ್ನು ತನಿಖೆ ನಡೆಸುವ ಮತ್ತೊಂದು ಸಂಸ್ಥೆಯೂ ಇಲ್ಲ. ಸಿಬಿಐಯನ್ನು ಮೇಲ್ವಿಚಾರಣೆ ನಡೆಸಬೇಕಾಗಿರುವ ಕೇಂದ್ರೀಯ ವಿಚಕ್ಷಣಾ ಆಯೋಗ (ಸಿವಿಸಿ) ತನ್ನೊಳಗಿನ ನೇಮಕಾತಿ ವಿಷಯದಲ್ಲೇ ಹಿತಾಸಕ್ತಿ ತಿಕ್ಕಾಟಕ್ಕೆ ತುತ್ತಾಗಿ ತನ್ನ ಕರ್ತವ್ಯ ನೆರವೇರಿಸಲು ವಿಫಲವಾಗಿದೆ. ಪ್ರಧಾನ ಮಂತ್ರಿ, ಗ್ರಹಮಂತ್ರಿ ಹಾಗೂ ವಿರೋಧ ಪಕ್ಷದ ಮುಖಂಡರು (ಇವರೂ ಸಹ ಸಚಿವರಾಗಿದ್ದವರು ಹಾಗೂ ಮುಂದೊಂದು ದಿನ ಪ್ರಧಾನಮಂತ್ರಿಯಾಗುವ ವಿಶ್ವಾಸವಿಟ್ಟುಕೊಂಡಿರುವವರು) ತಾವು ಉತ್ತರದಾಯಿಗಳಾಗಿರಬೇಕಾದ ಯಾವುದೇ ಸಾಧ್ಯತೆಯನ್ನು ತಡೆಯುತ್ತಿದ್ದಾರೆ.  ಈ ಕಾರಣಕ್ಕಾಗಿ ದುರ್ಬಲ ಹಾಗೂ ರಾಜಿ ಮಾನೋಭಾವದ ವ್ಯಕ್ತಿಯೇ ಸಿಬಿಐಯನ್ನು ಮೇಲ್ವಿಚಾರಣೆ ನಡೆಸುತ್ತದೆನ್ನಲಾದ ಈ ಸಿವಿಸಿಯ ಮುಖ್ಯಸ್ಥರಾಗಿರಬೇಕೆಂದು ಬಯಸುತ್ತಿದ್ದಾರೆ. ಅದಕ್ಕಿಂತ ಹೆಚ್ಚಾಗಿ ತಪ್ಪಿತಸ್ಥರ ತನಿಖೆ ನಡೆಸಿ ವಿಚಾರಣೆ ನಡೆಸಲು ಈ ಸಿವಿಸಿ ಹಾಗೂ ಸಿಬಿಐಗಳು ಸರ್ಕಾರದ ಅನುಮತಿ ಪಡೆಯಬೇಕಿದೆ. ಆದರೆ ಉನ್ನತ ಮಟ್ಟದ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಈ ಅನುಮತಿ ದೊರೆಯುವುದೇ ಇಲ್ಲ. ಈ ಸಿವಿಸಿಯು ಹಲವಾರು ಸರ್ಕಾರಿ ಇಲಾಖೆಗಳಲ್ಲಿರುವ ವಿಚಕ್ಷಣಾ ಅಧಿಕಾರಿಗಳ ಮರ್ಜಿಯಲ್ಲಿರುತ್ತದೆ. ಅವರು ಅದೇ ಇಲಾಖೆಯಲ್ಲಿರುವ ಮಧ್ಯಮ ಕ್ರಮಾಂಕದ ಅಧಿಕಾರಿಗಳಾಗಿರುತ್ತಾರೆ. ಹೀಗಿರುವಾಗ ತಮ್ಮ ಗುಪ್ತ ವರದಿಗಳನ್ನು ತಯಾರಿಸುವ ಮೇಲಧಿಕಾರಿಗಳ ಮೇಲೆ ತಾವೇ ಮೇಲ್ವಿಚಾರಣೆ ನಡೆಸುವುದನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ. ತಪ್ಪಿತಸ್ಥರನ್ನು ವಿಚಾರಣೆ ನಡೆಸಿ ಶಿಕ್ಷೆ ವಿಧಿಸಬೇಕಾದ ನ್ಯಾಯಾಂಗವೂ ಜಡಗೊಂಡಿದೆಯಲ್ಲದೆ ಉನ್ನತ ನ್ಯಾಯಾಂಗದ ಉತ್ತರದಾಯಿತ್ವದ ಕೊರತೆಯ ಕಾರಣದಿಂದಾಗಿ ಇದೂ ಸಹ ಭ್ರಷ್ಟಗೊಂಡಿದೆ.

ಜನಲೋಕಪಾಲ ಮಸೂದೆಯ ಕರಡಿನಲ್ಲಿ ವ್ಯಕ್ತವಾಗಿರುವ ಆಶಯ ಏನೆಂದರೆ ತಾನು ಯಾರ ಮೇಲೆ ಕ್ರಮಗೈಗೊಳ್ಳಲು ಬಯಸುವುದೋ ಅವರಿಂದ ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿರುವ ಹಾಗೂ ಸಾರ್ವಜನಿಕ ಸೇವೆಯಲ್ಲಿರುವ ಸರ್ವರನ್ನೂ (ಸಚಿವರು, ಸಂಸದರು, ಅಧಿಕಾರಿಗಳು, ನ್ಯಾಯಾಧೀಶರು ಮುಂತಾದವರನ್ನೂ ಒಳಗೊಂಡು) ಹಾಗೂ ಇವರನ್ನು ಭ್ರಷ್ಟಗೊಳಿಸಿದ ಅಪರಾಧವೆಸಗಿದವರನ್ನೂ ತನಿಖೆ ನಡೆಸಿ ವಿಚಾರಣೆ ನಡೆಸುವ ಅಧಿಕಾರಗಳನ್ನು ಹೊಂದಿರುವ ಒಂದು ಸಂಸ್ಥೆಯನ್ನು ರಚಿಸುವುದು.

ಭ್ರಷ್ಟಾಚಾರವು ದುರಾಚಾರವಾಗಿರುವುದರೊಂದಿಗೆ ಸಮಸ್ಯೆಗಳನ್ನೂ ಉಂಟುಮಾಡುವುದರಿಂದ ಲೋಕಪಾಲ ಸಂಸ್ಥೆಯು ಸರ್ಕಾರದ ಸೇವೆಯಲ್ಲಿರುವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲೆಂದು ರಚಿತವಾಗಿರುವ ಯಂತ್ರಾಂಗ (ವಿಚಕ್ಷಣಾ ಇಲಾಖೆ) ಹಾಗೂ ಜನರ ಸಮಸ್ಯೆಗಳ ನಿವಾರಣೆಗೆಂದು ಇರುವ ಯಂತ್ರಾಂಗವನ್ನೂ ಮೇಲ್ವಿಚಾರಣೆ ನಡೆಸುತ್ತದೆ ಎಂದು ಕರಡಿನಲ್ಲಿ ತಿಳಿಸಲಾಗಿದೆ. ಇದರಿಂದ ಸರ್ಕಾರದ ಸೇವೆಯಲ್ಲಿರುವವರ ಅನಾಚಾರ ಹಾಗೂ ಅದರಿಂದುಂಟಾದ ಜನರ ಸಮಸ್ಯೆಗಳು ಸ್ವಾರ್ಥ ಹಿತಾಸಕ್ತಿಗಳ ತಿಕ್ಕಾಟದಿಂದಾಗಿ ಇಡೀ ಯಂತ್ರಾಂಗವೇ ದುರ್ಬಲವಾಗಿ ನಿಂತಿರುವ ಸರ್ಕಾರದ ಬಳಿ ಹೋಗುವುದಕ್ಕೆ ಬದಲಾಗಿ ನೇರವಾಗಿ ಈ ಸ್ವತಂತ್ರ ಸಂಸ್ಥೆಯ ಅಡಿಗೆ ಬರುತ್ತವೆ. ಭ್ರಷ್ಟಾಚಾರಕ್ಕೆ ಒಳಗಾಗಿ ಯಾವುದೇ ಒಂದು ಗುತ್ತಿಗೆ ನೀಡಲ್ಪಟ್ಟಿರುವುದು ಲೋಕಪಾಲದ ಗಮನಕ್ಕೆ ಬಂದರೆ ಆ ಗುತ್ತಿಗೆಯನ್ನೇ ರದ್ದುಪಡಿಸುವ ಅಧಿಕಾರವೂ ಲೋಕಪಾಲಕ್ಕಿರಬೇಕು ಎಂಬ ಪ್ರಸ್ತಾಪವೂ ಇದೆ. ಇಲ್ಲವಾದಲ್ಲಿ ಅದು ಸರ್ಕಾರದ ನೀತಿ ನಿರ್ಣಯಗಳಲ್ಲಿ ಮಧ್ಯೆ ಪ್ರವೇಶಿಸಲು ಸಾಧ್ಯವಾಗುವುದೇ ಇಲ್ಲ.

ಈ ಮಸೂದೆಯು ಭಾರಿ ಅಧಿಕಾರ ಹೊಂದಿದ ಹಾಗೂ ಉತ್ತರದಾಯಿತ್ವವೇ ಇಲ್ಲದ ಒಂದು ಸೂಪರ್-ಕಾಪ್ ಸಂಸ್ಥೆಯನ್ನು ಸೃಷ್ಟಿಸಿಬಿಡುತ್ತದೆ ಎಂಬುದಾಗಿ ಹೇಳಲಾಗುತ್ತಿದೆ. ಲೋಕಪಾಲವು ನ್ಯಾಯಾಂಗಕ್ಕಿರುವ ಅಧಿಕಾರ ಹೊಂದಿರುತ್ತದೆ ಎಂಬ ತಪ್ಪುಕಲ್ಪನೆಯೂ ಪ್ರಚಲಿತದಲ್ಲಿದೆ. ಈ ಮಸೂದೆಯಲ್ಲಿ ಅಂತಹದಕ್ಕೇನೂ ಅವಕಾಶವಿಲ್ಲ. ತಾವೇ ವಿಚಾರಣೆಗೊಳಪಡಬೇಕಾಗಿರುವ ಜನರಿಂದ ಯಾವುದೇ ನಿರ್ಬಂಧವಿಲ್ಲದೇ ಉನ್ನತಾಧಿಕಾರದಲ್ಲಿರುವವರನ್ನೂ, ಬಲಾಢ್ಯರನ್ನೂ ತನಿಖೆಗೊಳಪಡಿಸಿ ವಿಚಾರಣೆಗೊಳಪಡಿಸುವಂತಹ ಒಂದು ಅತ್ಯಂತ ಪರಿಣಾಮಕಾರಿ ಸಂಸ್ಥೆಯೊಂದರ ರಚನೆ ಇಂದಿನ ತುರ್ತು ಅಗತ್ಯವಾಗಿದೆ.

ಲೋಕಪಾಲ ಸಂಸ್ಥೆಯನ್ನು ಉತ್ತರದಾಯಿಯನ್ನಾಗಿ ಮಾಡುವ ಇಚ್ಛೆ ಮಸೂದೆಯಲ್ಲಿ ಅಡಕವಾಗಿದೆ. ಮೊತ್ತಮೊದಲನೆಯದಾಗಿ, ಅದು ತನ್ನ ಕಾರ್ಯಪಾಲನೆಯಲ್ಲಿ ಪಾರದರ್ಶಕತೆಯನ್ನು ಉಳಿಸಿಕೊಂಡಿರಲೇಬೇಕಲ್ಲದೆ ಅದರ ಕಾರ್ಯಬಾರವು ಜನರಿಗೆ ತಿಳಿಯುವಂತಿರಬೇಕು. (ಅದು ನಡೆಸುವ ತನಿಖೆಯನ್ನೂ ಒಳಗೊಂಡು). ಮಾಹಿತಿ ಹಕ್ಕಿನಡಿಯಲ್ಲಿ ಕೆಲವು ಮಾಹಿತಿಗಳನ್ನು ಬಹಿರಂಗಪಡಿಸುವಂತಿಲ್ಲ ಎಂದು ಹೇಳಲಾಗಿದೆ. ಆದರೆ ಆ ರಿಯಾಯಿತಿಗಳನ್ನೂ ಲೋಕಪಾಲದಲ್ಲಿ ಇಡುವ ಅಗತ್ಯವಿಲ್ಲದಂತೆ ಮಾಡಬಹುದು. ಎರಡನೆಯದಾಗಿ, ಲೋಕಪಾಲ ನೀಡುವ ಆದೇಶಗಳನ್ನು ಹೈಕೋರ್ಟು ಹಾಗೂ ಸುಪ್ರೀಂ ಕೋರ್ಟುಗಳಲ್ಲಿ ಪರಾಮರ್ಶೆಗೊಳಪಡಿಸಬಹುದು. ಕೊನೆಯದಾಗಿ, ದುರ್ವರ್ತನೆ ತೋರುವ ಲೋಕಪಾಲದ ಸದಸ್ಯರನ್ನು ಸುಪ್ರೀಂಕೋರ್ಟ್‌ನ ಐವರು ಸದಸ್ಯರ ಪೀಠವು ಉಚ್ಛಾಟಿಸಲು ಅವಕಾಶವಿರುತ್ತದೆ.

ಲೋಕಪಾಲ ಆಯ್ಕೆ ಸಮಿತಿ ಹಾಗೂ ಆಯ್ಕೆ ಪ್ರಕ್ರಿಯೆಯ ಕುರಿತು ಟೀಕೆಗಳು ವ್ಯಕ್ತವಾಗಿವೆ. ನಮ್ಮ ಪ್ರಭುತ್ವದ ಬಹುಪಾಲು ಸಂಸ್ಥೆಗಳಲ್ಲಿ ಬದ್ಧತೆಯೇ ಕ್ಷೀಣಗೊಂಡಿರುವುದರಿಂದಾಗಿ  ಒಂದು ವಿಶಾಲ ನೆಲೆಯ ಆಯ್ಕೆ ಸಮಿತಿಯನ್ನು ರಚಿಸುವುದೊಳಿತು ಎಂದು ಯೋಚಿಸಲಾಗಿತ್ತು. ಇದರಲ್ಲಿ ಲೋಕಪಾಲದಡಿ ವಿಚಾರಣೆಗೊಳಪಡಬಹುದಾದವರನ್ನು ದೂರವಿರಿಸಿ ಪಾರದರ್ಶಕತೆ ಖಾತ್ರಿಯಾಗುವಂತೆ ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಭಾಗೀದಾರಿಕೆಗೂ ಅವಕಾಶ ಕಲ್ಪಿಸುವ ಆಲೋಚನೆ ಇತ್ತು. ಈ ಕಾರಣದಿಂದಾಗಿಯೇ ಕರಡು ಮಸೂದೆಯಲ್ಲಿ ಸಚಿವರನ್ನು ಆಯ್ಕೆ ಪ್ರಕ್ರಿಯೆಯಿಂದ ದೂರವಿಡಬೇಕೆಂದು ತಿಳಿಸಲಾಗಿದೆ.

ಇದು ಪ್ರಜಾಪ್ರಭುತ್ವ ನಿಂದನೆಯಾಗುತ್ತದೆ ಎಂಬುದು ಒಂದು ಟೀಕೆ. ಪ್ರಜಾತಾಂತ್ರಿಕವಾಗಿಯೇ ಆಯ್ಕೆಯಾದ ಪ್ರಧಾನಮಂತ್ರಿ, ಗೃಹ ಸಚಿವ ಹಾಗೂ ವಿಪಕ್ಷ ನಾಯಕರು ಒಮ್ಮತದಿಂದಲೇ ದುರ್ಬಲ ಹಾಗೂ ರಾಜಿ ಮನೋಭಾವದ ಸಿವಿಸಿಗಳನ್ನು ಹೇಗೆ ಆಯ್ಕೆ ಮಾಡಿದ್ದಾರೆಂಬುದನ್ನು ನಾವೆಲ್ಲಾ ಕಂಡಿದ್ದೇವೆ. ಹಾಗಾಗಿಯೇ ಆಯ್ಕೆ ಸಮಿತಿಯು ಲೋಕಸಭೆ ಸಭಾಪತಿ, ರಾಜ್ಯಸಭೆ ಅಧ್ಯಕ್ಷ, ಮಹಾಲೇಖಪಾಲಾಧಿಕಾರಿ, ಮುಖ್ಯ ಚುನಾವಣಾ ಆಯುಕ್ತರು, ಸುಪ್ರೀಂ ಕೋರ್ಟ್‌ನ ಇಬ್ಬರು ಅತ್ಯಂತ ಹಿರಿಯ ನ್ಯಾಯಾಧೀಶರು, ಹೈಕೋರ್ಟ್‌ನ ಇಬ್ಬರು ಅತ್ಯಂತ ಹಿರಿಯ ಮುಖ್ಯ ನ್ಯಾಯಾಧೀಶರು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು, ಹಾಗೂ ಲೋಕಪಾಲದಿಂದ ನಿವೃತ್ತರಾಗಲಿರುವ ಇಬ್ಬರು ಸದಸ್ಯರನ್ನು ಒಳಗೊಂಡಿರಬೇಕಂದು ಕರಡು ಮಸೂದೆಯಲ್ಲಿ ತಿಳಿಸಲಾಗಿದೆ. ಸಮಿತಿಯ ಈ ಪ್ರಸ್ತಾಪಿತ ಸಂರಚನೆಯನ್ನು ಸಾರ್ವಜನಿಕರೊಂದಿಗಿನ ಸಮಾಲೋಚನೆ ಹಾಗೂ ಸದ್ಯ ನಡೆಯುವ ಕರಡು ಸಮಿತಿಯ ಸಭೆಗಳಲ್ಲಿ ಖಂಡಿತಾ ಚರ್ಚೆಗೊಳಪಡಿಸಬಹುದು, ಅಭಿವೃದ್ಧಿಪಡಿಸಲೂಬಹುದು.

ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಕೆಲಸವನ್ನೂ ಲೋಕಪಾಲದ ಪರಿಧಿಯಲ್ಲಿ ತರುವುದರಿಂದ ಅದು ತನ್ನ ಕೆಲಸವನ್ನು ನಿರ್ವಹಿಸಲಾರದಂತಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಲೋಕಪಾಲವು ಒಂದೊಂದೂ ಸಮಸ್ಯೆಯನ್ನೂ ತೆಗೆದುಕೊಳ್ಳುವ ಬದಲು ಈಗಿರುವ ಸಮಸ್ಯೆ ಪರಿಹಾರ ಯಂತ್ರಾಂಗವನ್ನು ಪುನರ್‌ಸಂಘಟಿಸಿ ಮೇಲ್ವಿಚಾರಣೆ ನಡೆಸುವ ಕೆಲಸವನ್ನಷ್ಟೇ ಮಾಡುವ ಉದ್ದೇಶ ಹೊಂದಿದ್ದರೂ ಇದನ್ನು ಸಮಿತಿಯಲ್ಲಿ ಮುಕ್ತವಾಗಿ ಚರ್ಚಿಸಬಹುದು. ಮುಂದಿನ ವಾರದ ಹೊತ್ತಿಗೆ, ಜನಲೋಕಪಾಲ ಮಸೂದೆಯ ಬಗೆಗೆ ಎಲ್ಲಾ ಅಭಿಪ್ರಾಯ ಹಾಗೂ ಸಲಹೆಗಳನ್ನು ಅಧಿಕೃತವಾಗಿ ಒಳಗೊಳ್ಳುವ ಒಂದು ವೆಬ್‌ಸೈಟನ್ನು ಆರಂಭಿಸಿ ಘೋಷಿಸಲಾಗುವುದು. ಜನರು ಇದನ್ನು ಓದಿ, ಅರ್ಥ ಮಾಡಿಕೊಂಡು ತಮ್ಮ ಕಮೆಂಟುಗಳನ್ನು ಅದರಲ್ಲಿಯೇ ವ್ಯಕ್ತಪಡಿಸಲು ಸ್ವಾಗತಿಸುತ್ತೇವೆ.

ಅದೇ ವೇಳೆಗೆ ಯಾರಿಗೂ ಸಹ ಲೋಕಪಾಲ ಕಾನೂನೇ ಭ್ರಷ್ಟಾಚಾರದ ಪಿಡುಗನ್ನು ಸಂಪೂರ್ಣ ಪರಿಹರಿಸಿಬಿಡುತ್ತದೆ ಎಂಬ ಭ್ರಮೆಯೂ ಇರಬಾರದು. ಇಂದು ವ್ಯಾಪಕ ಭ್ರಷ್ಟಾಚಾರಕ್ಕೆ ಪ್ರೇರಣೆ ಪ್ರೋತ್ಸಾಹವೊದಗಿಸುವ ಹಾಗೂ ಯಾವುದೇ ಸಂಸ್ಥೆಯ ನಿಯಂತ್ರಣ ಮೀರಿ ಬೆಳೆಯುವ ರಾಕ್ಷಸೀ ಕಂಪನಿಗಳನ್ನು ಸೃಷ್ಟಿಸುವ ನೀತಿಗಳನ್ನು ನಿಭಾಯಿಸಿ,  ಬದಲಾಯಿಸಿಕೊಳ್ಳದ ಹೊರತು ಹೋರಾಟ ಅಪೂರ್ಣವಾಗೇ ಇರುತ್ತದೆ. ನಮ್ಮ ನ್ಯಾಯಾಂಗದಲ್ಲಿಯೂ ಸಹ ಸಮಗ್ರ ಸುಧಾರಣೆ ಬರಬೇಕಾಗಿದೆ.

ಆದರೆ ಒಂದು ಸ್ವತಂತ್ರ, ವಿಶ್ವಾಸಾರ್ಹ ಹಾಗೂ ಅಧಿಕಾರಯುಕ್ತ ಲೋಕಪಾಲವು ಭ್ರಷ್ಟಾಚಾರವನ್ನು ಸಂಪೂರ್ಣವಾಗಿಯಲ್ಲದಿದ್ದರೂ ಪರಿಣಾಮಕಾರಿಯಾಗಿ ನಿಯಂತ್ರಿಸುವ ಅಗತ್ಯವಂತೂ ಖಂಡಿತಾ ಇದೆ. ಈಗ ಕನಿಷ್ಟ ಅಂತಹದ್ದೊಂದನ್ನು ಆಗುಮಾಡಲು ಶ್ರಮಿಸೋಣ.

(ಪ್ರಶಾಂತ್ ಭೂಷಣ್‌ರವರು ಹಿರಿಯ ಸುಪ್ರೀಂಕೋರ್ಟ್ ನ್ಯಾಯವಾದಿ ಹಾಗೂ ಲೋಕಪಾಲ ಮಸೂದೆಯನ್ನು ತಯಾರಿಸಲು ರಚನೆಯಾಗಿರುವ ಜಂಟಿ ಸಮಿತಿಯ ಸದಸ್ಯರು.)  

ಅನುವಾದ: ಹರ್ಷಕುಮಾರ್ ಕುಗ್ವೆ (ಮೊಬೈಲ್: ೮೧೨೩೦೦೪೧೩೬)
ಕೃಪೆ: ದಿ ಹಿಂದೂ

ಬುರುಡೆ ಬ್ರಹ್ಮಾಂಡ: ಈ ಬಗ್ಗೆ ನಾವು ಮೊದಲೇ ಹೇಳಿದ್ದೆವು

ಡಾ.ಸತೀಶ್ ಶೃಂಗೇರಿ ಚಿತ್ರಿಸಿರುವ ಕಾರ್ಟೂನ್ ಇಲ್ಲಿದೆ. ನಿಮಗೆ ಇಷ್ಟವಾಗಬಹುದು.


Saturday, April 16, 2011

ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ: ಫೇಸ್‌ಬುಕ್‌ನಲ್ಲೊಂದು ಗುಂಪು


ಕಪಟ ಜ್ಯೋತಿಷಿಗಳ ವಿರುದ್ಧ ನಾವು ನೀವೆಲ್ಲ ಸೇರಿ ಹೂಡಿರುವ ಸಮರಕ್ಕೆ ಸಾವಿರಾರು ಮಂದಿ ಸ್ಪಂದಿಸುತ್ತಿದ್ದಾರೆ. ಬೃಹತ್ ಬ್ರಹ್ಮಾಂಡ ವಿರುದ್ಧದ ಆಂದೋಲನದ ನೀಲನಕ್ಷೆ ಎಂಬ ಪೋಸ್ಟ್‌ನ ಲಿಂಕ್ ಅನ್ನು ಎರಡು ದಿನಗಳ ಅವಧಿಯಲ್ಲಿ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದವರ ಸಂಖ್ಯೆ ೬೦೦ಕ್ಕೂ ಹೆಚ್ಚು. ದಟ್ಸ್ ಕನ್ನಡ, ವಿಶ್ವ ಕನ್ನಡಿಗ ವೆಬ್ ಸೈಟುಗಳು ಈ ಆಂದೋಲನದ ಕುರಿತು ಸುದ್ದಿಯನ್ನು ಮಾಡಿವೆ. ನಿಲುಮೆ ಸೇರಿದಂತೆ ಹಲವು ಬ್ಲಾಗ್‌ಗಳಲ್ಲಿ ಈ ಕುರಿತು ಬೆಳಕು ಚೆಲ್ಲಲಾಗಿದೆ. ಸಾಮಾಜಿಕ ತಾಣಗಳಲ್ಲಿ ಈ ಕುರಿತು ಸಾಕಷ್ಟು ಚರ್ಚೆಯಾಗಿದೆ.

ಈಗಾಗಲೇ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಎಂಬ ಹೆಸರಿನಲ್ಲಿ ಫೇಸ್‌ಬುಕ್‌ನಲ್ಲಿ ಒಂದು ಗುಂಪನ್ನು ಆರಂಭಿಸಿದ್ದೇವೆ. ಮೊದಲ ಹಂತದಲ್ಲಿ ಒಂದಷ್ಟು ಗೆಳೆಯ-ಗೆಳತಿಯರನ್ನು ಈ ಗುಂಪಿಗೆ ಈಗಾಗಲೇ ಸೇರಿಸಿದ್ದೇವೆ. ಫೇಸ್‌ಬುಕ್ ಬಳಸುವ ಎಲ್ಲ ಓದುಗರೂ ಈ ಕೆಳಗಿನ ಲಿಂಕ್ ಬಳಸಿ, ಈ ಗುಂಪನ್ನು ಸೇರಿಕೊಳ್ಳಬೇಕೆಂದು ವಿನಂತಿಸುತ್ತೇವೆ. ಹಾಗೆಯೇ ಇದು ಓಪನ್ ಗುಂಪು ಆಗಿರುವುದರಿಂದ ಸಾಧ್ಯವಾದಷ್ಟು ಸ್ನೇಹಿತರನ್ನು ಸೇರಿಸಬೇಕೆಂದು ಮನವಿ ಮಾಡುತ್ತೇವೆ. ಈ ಗುಂಪನ್ನು ಸೇರಲು ಇಲ್ಲಿ ಕ್ಲಿಕ್ಕಿಸಿ. ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ.

ಮೌಢ್ಯವನ್ನು ಹೇರುವ ಕಪಟ ಜ್ಯೋತಿಷಿಗಳ ಕುರಿತು ಈ ಹಿಂದೆ ಬ್ಲಾಗರ್‌ಗಳು ಬರೆದ ಲೇಖನಗಳ ಲಿಂಕ್‌ಗಳನ್ನು ಈ ಗುಂಪಿನಲ್ಲಿ ಒದಗಿಸಬೇಕೆಂದು ಕೋರುತ್ತೇವೆ.

ಜನವಿರೋಧಿಯಾಗಿರುವ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮವನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಜೀ ಟಿವಿಯ ಮುಖ್ಯಸ್ಥರಿಗೆ ಒಂದು ಆಗ್ರಹ ಪತ್ರವನ್ನು ಬರೆದಿದ್ದೇವೆ. ಅದನ್ನು ಸದ್ಯದಲ್ಲೇ ಪ್ರಕಟಿಸುತ್ತೇವೆ. ಸಾಧ್ಯವಾಗುವುದಾದರೆ ಈ ಆಂದೋಲನವನ್ನು ಬೆಂಬಲಿಸುವ ಬ್ಲಾಗರ್‌ಗಳು ತಮ್ಮ ಬ್ಲಾಗ್‌ಗಳಲ್ಲಿ ಈ ಬಹಿರಂಗ ಪತ್ರವನ್ನು ಪ್ರಕಟಿಸಬೇಕೆಂದು ಕೋರುತ್ತೇವೆ. ಇದೇ ಮಾದರಿಯ ಪತ್ರಗಳನ್ನು ಎಲ್ಲರೂ ಬರೆದು ಜೀ ಟಿವಿಯ ಮೇಲ್ ಐಡಿಗೆ ಕಳುಹಿಸೋಣ. ಒಂದು ವೇಳೆ ಕಾಲಾವಕಾಶವಾಗದೇ ಹೋದರೆ ಸಂಪಾದಕೀಯದ ಪತ್ರವನ್ನೇ ಫಾರ್ವರ್ಡ್ ಮಾಡಿದರೂ ಆಗುತ್ತದೆ. ಕನಿಷ್ಠ ಒಂದು ಸಾವಿರ ಪತ್ರಗಳನ್ನಾದರೂ ಬರೆದರೆ ಜೀ ಟಿವಿಯವರು ಕಾರ್ಯಕ್ರಮ ಪ್ರಸಾರ ಮಾಡುವ ಕುರಿತು ಮರುಚಿಂತನೆ ನಡೆಸಬಹುದೇನೋ? ಈ ಪತ್ರ ಚಳವಳಿಯಿಂದಲೇ ಕಾರ್ಯಕ್ರಮ ನಿಂತರೆ ಒಳ್ಳೆಯದು, ಇಲ್ಲವಾದಲ್ಲಿ ಇನ್ನಷ್ಟು ಪ್ರಜಾಸತ್ತಾತ್ಮಕವಾದ ಹೋರಾಟಗಳಿಗೆ ನಾವು ಅಣಿಯಾಗಬೇಕಾಗುತ್ತದೆ.

ಟಿವಿಗಳಲ್ಲಿ ಜ್ಯೋತಿಷಿಗಳು ನಡೆಸುತ್ತಿರುವ ಅವಾಂತರಗಳ ಕುರಿತು, ಮಾಧ್ಯಮಗಳು ಮೌಢ್ಯವನ್ನು ಹರಡುತ್ತಿರುವ ಕುರಿತು ಸಾಕಷ್ಟು ಸಂಘಸಂಸ್ಥೆಗಳಿಗೆ ಪತ್ರ ಬರೆದು ಮಾಹಿತಿ ವಿವರಿಸುವ ಕಾರ್ಯವನ್ನು ಆರಂಭಿಸಿದ್ದೇವೆ. ಈ ಸಂಬಂಧ ಒಂದಷ್ಟು ವಿಚಾರ ಸಂಕಿರಣಗಳು, ಪ್ರತಿಭಟನೆಗಳು ಆರಂಭವಾಗಬೇಕಿದೆ. ಆ ಕುರಿತ ಬೆಳವಣಿಗೆಗಳ ಬಗ್ಗೆ ನಿಮಗೆ ಆಗಾಗ ಮಾಹಿತಿ ನೀಡುತ್ತಿರುತ್ತೇವೆ.

ಮೌಢ್ಯ ಕಂದಾಚಾರಗಳಿಲ್ಲದ ಒಂದು ಸ್ವಸ್ಥ ಸಮಾಜ ಮತ್ತು ಅನೈತಿಕ ಮಾರ್ಗದ ಟಿಆರ್‌ಪಿ ಈ ಎರಡರ ನಡುವೆ ಒಂದನ್ನು ಜೀ ಟಿವಿಯವರು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅವರ ಆಯ್ಕೆ ಟಿಆರ್‌ಪಿ ಆಗದಿರಲಿ ಎಂದು ಆಶಿಸೋಣ.

Friday, April 15, 2011

2012ರ ಪ್ರಳಯ ಥಿಯರಿಗಳು ಮತ್ತು ಮಿಥ್ ಗಳು

ಹರ್ಷ ಕುಮಾರ್ ಕುಗ್ವೆ
ಪ್ರಳಯದ ಭೀತಿ ಸೃಷ್ಟಿಸುತ್ತಿರುವ ಜ್ಯೋತಿಷಿಗಳ ವಿರುದ್ಧ ಸಮರ ನಡೆಸುವ ಮುನ್ನ  ಈ ಜ್ಯೋತಿಷಿಗಳು ಎಲ್ಲಿಂದ ಈ ಥಿಯರಿಗಳನ್ನು ತರುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಬೃಹತ್ ಬ್ರಹ್ಮಾಂಡದ ನರೇಂದ್ರ ಸ್ವಾಮಿ ಹೇಳುವ ಪ್ರಳಯದ ಚಿತ್ರಣವೆಲ್ಲ ಎರವಲು ತಂದದ್ದು. ಈಗ ಕೆಲವು ಸ್ವತಂತ್ರ ಕ್ರಿಶ್ಚಿಯನ್ ಸಂಘಟನೆಗಳು ಪ್ರಳಯವನ್ನು ಪ್ರೀಪೋನ್ ಮಾಡುತ್ತಿದ್ದಂತೆ ಈತನೂ ಅದೇ ಕೆಲಸವನ್ನು ಮಾಡುತ್ತಿದ್ದಾನೆ. ಜನರನ್ನು ನಂಬಿಸಲೆಂದು ಜಗನ್ಮಾತೆ ಬರುತ್ತಿದ್ದಾಳೆ... ಇತ್ಯಾದಿ ಕಥೆಗಳನ್ನು ಕಟ್ಟುತ್ತಿದ್ದಾನೆ.


ಈ ಪ್ರಳಯದ ಥಿಯರಿಗಳು ಹುಟ್ಟಿಕೊಂಡಿದ್ದು ಹೇಗೆ? ಇದರಲ್ಲಿನ ಮಿಥ್ ಗಳೇನು ಎಂಬುದರ ಕುರಿತು ಪತ್ರಕರ್ತ ಹರ್ಷ ಕುಮಾರ್ ಕುಗ್ವೆ ಬಹಳ ಹಿಂದೆಯೇ 2009ರ ನವೆಂಬರ್ ನಲ್ಲಿ ಬರೆದಿದ್ದರು. ಆ ಲೇಖನ ಪ್ರಸ್ತುತವಾಗಿರುವುದರಿಂದ  ಅದನ್ನು ಸಂಪಾದಕೀಯದಲ್ಲಿ ಪ್ರಕಟಣೆಗಾಗಿ ಕಳುಹಿಸಿದ್ದಾರೆ. ಅದು ಇಲ್ಲಿದೆ, ಒಮ್ಮೆ ಓದಿ.


ಹರ್ಷಕುಮಾರ್ ಕುಗ್ವೆ ಮೂಲತಃ ಶಿವಮೊಗ್ಗದವರು.ಈಗ ಸಂಡೇ ಇಂಡಿಯನ್ ಪತ್ರಿಕೆಯ ವರದಿಗಾರರಾಗಿದ್ದಾರೆ. ಕೆಂಡುಸಿರು ಅವರ ಬ್ಲಾಗ್. 


೨೦೧೨ರ ಡಿಸೆಂಬರ್ ೨೧ ರಂದು ಜಗತ್ತಿನ ಅಂತ್ಯವಾಗಲಿದೆ. ಭೂಗ್ರಹವು ಯಾವುದೋ ಒಂದು ರೀತಿಯಲ್ಲಿ ಭಾರೀ ಮಾರ್ಪಾಡಿಗೆ ಒಳಗಾಗಲಿದೆ. ಭೂಮಿಯ ಮೇಲಿನ ಬಹುಪಾಲು ಮನುಷ್ಯರು  ನಾಶವಾಗಲಿದ್ದಾರೆ. ಭೂಖಂಡಗಳು ಪ್ರತ್ಯೇಕಗೊಳ್ಳಲಿವೆ, ಇಡೀ ಜಗತ್ತೇ ಅಲ್ಲೋಲ ಕಲ್ಲೋಲವಾಗುತ್ತದೆ. ಆ ದಿನವೇ ಡೂಮ್ಸ್ ಡೇ ೨೦೧೨. ಅದು ಭೂಮಂಡಲದ ಅಂತ್ಯದ ದಿನ..... ಈ ಬಗೆಯ ಊಹಾಪೋಹಗಳು ಈಗಾಗಲೇ ನಮ್ಮ ಇಡೀ ಜಗತ್ತಿನಾದ್ಯಂತ ವ್ಯಾಪಕವಾದ ಪ್ರಚಾರವನ್ನು ಪಡೆದುಕೊಂಡು ಬಿಟ್ಟಿವೆ. ಅದರ ಈ ಕುರಿತ ಸಾವಿರಾರು ಸಂಖ್ಯೆಯ ಅಂತರ್ಜಾಲ ತಾಣಗಳಿಂದ, ಟಿ.ವಿ೯ ನ ಹೀಗೂ ಉಂಟೆ?! ಯಂತಹ ಕಾರ್ಯಕ್ರಮಗಳಿಂದ, ಕೆಲವು ಧಾರ್ಮಿಕ ವ್ಯಕ್ತಿಗಳು ಬರೆದಿರುವ ಪುಸ್ತಕಗಳಿಂದ, ಹೀಗೆ ನಾನಾ ಮೂಲಗಳಿಂದ ಈ ತಥಾಕಥಿತ ಪ್ರಳಯದ ಕುರಿತ ವಿಷಯಗಳನ್ನು ಓದಿ, ಕೇಳಿ ಜನರು ತೀವ್ರ ಆತಂಕ, ಕುತೂಹಲಗಳಿಗೊಳಗಾಗಿದ್ದಾರೆ. ಬೆಂಗಳೂರಿನ ಹತ್ತಿರ ಚಿಕ್ಕಗುಬ್ಬಿಯಲ್ಲಿರುವ ಮಾನಸ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾಗಿರುವ ಕೃಷ್ಣಾನಂದ ಎಂಬ ಸ್ವಾಮಿ ೨೦೧೨ ನೇ ಇಸವಿಯಲ್ಲಿ ನಡೆಯಬಹುದಾದ ಘಟನೆಗಳನ್ನು ತಮ್ಮ ದಿವ್ಯದರ್ಶನದ ಸಹಾಯದಿಂದ, ೨೦೧೨-ಎಂಡ್ ಆರ್ ಬಿಗಿನಿಂಗ್ ಎಂಬ ಕೃತಿಯನ್ನು ಬರೆದಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡ ತಾಲ್ಲೂಕು, ಶಿವಪುರದ ಶ್ರೀ ಚೆನ್ನಬಸವಾನಂದ ಸ್ವಾಮೀಜಿ ಕಾಲಜ್ಞಾನ ನಿರ್ಣಯ  ಕರ್ಮಕಾಂಡ ಅಂತ್ಯಕಾಲ ಎಂಬ ಡಿವಿಡಿಯನ್ನೂ ತಂದಿದ್ದಾನೆ.

ಜಗತ್ತು ಮುಳುಗಿ ಹೋಗುವ ಪ್ರಳಯದ ಭೀತಿಯನ್ನು ಹಲವಾರು ಪ್ರಳಯಾಂತಕರು ಹಿಂದಿನಿಂದಲೂ ಸೃಷ್ಟಿಸುತ್ತಲೇ ಬಂದಿದ್ದಾರೆ. ಈ ಹಿಂದೆ ೧೯೯೯ ರಲ್ಲಿಯೂ ಜನರು ಪ್ರಳಯದ ಭೀತಿಗೆ ಒಳಗಾಗಿದ್ದರು. ಅದೇ ರೀತಿ ಇದೀಗ ೨೦೧೨ರಲ್ಲಿ ಜಗತ್ತು ಅಂತ್ಯವಾಗುತ್ತದೆ ಎನ್ನಲು ಹಲವಾರು ವೈಜ್ಞಾನಿಕ ಸಮರ್ಥನೆಗಳನ್ನು ಬೇರೆ ನೀಡಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಕ್ರಿ.ಶ.೨೫೦ರಿಂದ ಕ್ರಿ.ಶ.೯೦೦ ರ ಅವಧಿಯಲ್ಲಿ ರಚಿಸಲಾದ ಮಾಯಾ ನಾಗರೀಕತೆಯ ಜನರ ಕ್ಯಾಲೆಂಡರ್ ೨೧.೧೨.೨೦೧೨ಕ್ಕೆ ಕೊನೆಗೊಳ್ಳುತ್ತದೆ ಎಂಬುದು ಒಂದು. ಇದೇ ಹೊತ್ತಿಗೆ ಭೂಮಿಯು ಕ್ಷೀರ ಪಥದ ಕೇಂದ್ರದೊಳಕ್ಕೆ ಪ್ರವೇಶ ಪಡೆಯುತ್ತದೆಂದೂ, ಅದನ್ನನುಸರಿಸಿ ಭೂಮಿಯ ಮೆಲೆ ಹಲವಾರು ಪರಿವರ್ತನೆಗಳಾಗುತ್ತವೆ ಎಂದೂ ಹೇಳಲಾಗುತ್ತಿದೆ. ಇದರ ಜೊತೆಗೆ ಭೂಮಿಯ ಮೆಲೆ ಕ್ಷುದ್ರಗ್ರಹಗಳು ಅಪ್ಪಳಿಸುತ್ತವೆಂದೂ, ಭೂಮಿಯ ಧೃವಗಳು ಅದಲು ಬದಲಾಗುತ್ತವೆಂದೂ ಹೇಳಲಾಗುತ್ತಿದೆ. ಭೂಮಿಯ ಮೆಲೆ ರಹಸ್ಯ ಗ್ರಹವೊಂದು ಎರಗಲಿದೆ ಎಂದೂ ನಂಬಲಾಗುತ್ತಿದೆ. ಎಲ್ಲಾ ನಾಶವಾದ ಮೇಲೆ ಬದುಕುವ ಕೆಲವೇ ಸಜ್ಜನರು ಮಾತ್ರ ನಂತರದಲ್ಲಿ ಕೇವಲ ಬೆಳಕನ್ನು ಮಾತ್ರ ಸೇವಿಸಿ ಬದುಕುತ್ತಾರೆನ್ನುವ ಕಥೆಗಳನ್ನೂ ಹರಿಬಿಡಲಾಗುತ್ತದೆ. ಮೇಲೆ ತಿಳಿಸಿದ ಕರ್ನಾಟಕದ ಸ್ವಾಮಿಗಳು ಜನರು ಆಧ್ಯಾತ್ಮಿಕ ಚಿಂತನೆಗೆ ತೊಡಗಿಕೊಂಡಲ್ಲಿ ಮಾತ್ರ ಜನರು ಉಳಿದುಕೊಳ್ಳಬಹುದೆಂದು ಉಚಿತ ಸಲಹೆಗಳನ್ನೂ ನೀಡತೊಡಗಿದ್ದಾರೆ. ನುಡಿದಿದ್ದಾರೆ. ಪ್ರಳಯದ ಕುರಿತೇ ಕೆಲವಾರು ಹಾಲಿವುಡ್ ಸಿನಿಮಾಗಳೂ ಬಿಡುಗಡೆಯಾಗುತ್ತಿವೆ. ಪ್ರಳಯ ಅಥವಾ ಭೂಮಿಯ ಅಂತ್ಯದ ಕುರಿತ ಇಂತಹ ವಿಚಾರಗಳನ್ನು ಹಿಂದೆಮುಂದೆ ನೋಡದೆ ಒಪ್ಪಿಕೊಳ್ಳುವ ಅಥವಾ ತಳ್ಳಿ ಹಾಕುವ ಮುನ್ನ ಈ ಕುರಿತು ಪ್ರಚಲಿತದಲ್ಲಿರುವ ಕೆಲ ಊಹಾಪೋಹಗಳನ್ನು ಅಥವಾ ಮಿಥ್‌ಗಳನ್ನು ಪರಿಶೀಲಿಸೋಣ.

ಮಿಥ್೧ : ಮಾಯನ್ ಕ್ಯಾಲೆಂಡರ್ ಪ್ರಕಾರ ಜಗತ್ತು ಅಂತ್ಯಗೊಳ್ಳುತ್ತದೆ.

ಅಮೆರಿಕ ಖಂಡದಲ್ಲಿ ಕ್ರಿಸ್ತಪೂರ್ವದಲ್ಲಿ ಅಸ್ತಿತ್ವದಲ್ಲಿದ್ದ ಮಾಯಾನಾಗರೀಕತೆಯ ಜನರು ಆಕಾಶಕಾಯಗಳ ದೀರ್ಘಕಾಲ ಅಧ್ಯಯನದಿಂದ ಹಾಗೂ ಗಣಿತ ಲೆಕ್ಕಾಚಾರದ ಸಹಾಯಗಳಿಂದ ಕೆಲವು ರೀತಿಯ ಕ್ಯಾಲೆಂಡರ್‌ಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದರು. ಈ ಮಾಯಾ ಜನರು ಖಗೋಳ ಶಾಸ್ತ್ರದಲ್ಲಿ ಬಹಳ ಚಾಣಾಕ್ಷರಾಗಿದ್ದರು. ಆಕಾಶಕಾಯಗಳ ವೀಕ್ಷಣೆಗಾಗಿ ವೀಕ್ಷಣಾಲಯಗಳನ್ನೂ ನಿರ್ಮಿಸಿದ್ದರು. ನಮ್ಮಲ್ಲಿನ ಪಂಚಾಂಗದಂತೆ ಅವರ ಕ್ಯಾಲೆಂಡರ್ ಕೂಡಾ ಸಾಮಾಜಿಕ, ಆಡಳಿತಾತ್ಮಕ ಹಗೂ ಧಾರ್ಮಿಕ ಕಾರ್ಯಗಳಿಗಾಗಿ ರಚಿಸಲ್ಪಟ್ಟಿತ್ತು. ಮಾಯಾ ಜನರ ಮೊದಲ ಕ್ಯಾಲೆಂಡರ್‌ಗಳು ಲಘು ಅವಧಿಯವಾಗಿದ್ದವು. ಅವುಗಳಲ್ಲಿ ೨೬೦ ದಿನಗಳ ಝೋಕ್ ಹಾಗೂ ೩೬೦ ದಿನಗಳಹಾಬ್ ಮುಖ್ಯವಾದವು. ಕ್ರಮೇಣ ಈ ಎರಡೂ ಕ್ಯಾಲೆಂಡರ್‌ಗಳನ್ನೂ ಒಂದುಗೂಡಿಸಿದ್ದರು. ಅದು ೫೨ ಹಾಬ್‌ಗಳನ್ನೊಳಗೊಂಡಿತ್ತು.(ಸು. ೫೨ ವರ್ಷಗಳು.) ಅವರ ಕ್ಯಾಲೆಂಡರ್ ೧೩ ದಿನಗಳ ಒಂದು ಕಾಲಚಕ್ರ, ೨೦ ದಿನಗಳ ಒಂದು ಕಾಲಚಕ್ರ ಹಾಗೂ ರಾತ್ರಿವೇಳೆಯ ಶುಕ್ರಗ್ರಹದ ಗತಿಯನ್ನಾದರಿಸಿದ ಶುಕ್ರಚಕ್ರಗಳನ್ನು ಒಳಗೊಂಡಿರುತ್ತಿತ್ತು. ಈ ಕ್ಯಾಲೆಂಡರ್‌ನಲ್ಲಿ ೫೨ ವರ್ಷಗಳಿಗಿಂತ ಹೆಚ್ಚು ಕಾಲಾವಧಿಯನ್ನು ನೋಡಲಾಗುತ್ತಿರಲಿಲ್ಲ. ಇದಕ್ಕೆ ಮಾಯಾ ಜನರು ಒಂದು ಪರಿಹಾರವನ್ನು ಕಂಡುಕೊಂಡರು. ೨೦ನ್ನು ಮೂಲಘಟಕವನ್ನಾಗಿಟ್ಟುಕೊಂಡು ಅವರು ದೀರ್ಘಕಾಲದ ಒಂದು ಕ್ಯಾಲೆಂಡರ್‌ನ್ನು ಅಭಿವೃದ್ಧಿಪಡಿಸಿಕೊಂಡರು. ಇದನ್ನು ದೀರ್ಘಲೆಕ್ಕಾಚಾರದ ಕ್ಯಾಲೆಂಡರ್ ಎನ್ನಲಾಗುತ್ತದೆ. ಇದರ ಪ್ರಕಾರ ೩೬೦ ದಿನಗಳಿಗೆ ಒಂದು ಟುನ್ ಆಗುತ್ತದೆ. ೨೦ ಟುನ್‌ಗಳಿಗೆ ಒಂದು ಕಟೂನ್. ೨೦ ಕಟೂನ್‌ಗಳಿಗೆ ಒಂದು ಬಕ್ಟೂನ್. (ಸು.೪೦೦ ವರ್ಷಗಳು.) ಈ ಮಾಯನ್ ಕ್ಯಾಲೆಂಡರ್ ೦.೦.೦.೦.೦. ರಿಂದ ಶುರುವಾಗುತ್ತದೆ. ಒಂದೊಂದು ಸೊನ್ನೆಯೂ ೦-೧೯ರವರೆಗೆ ಬಂದು ನಂತರದ ದಿನವು ಹಿಂದಿನ ಸಂಖ್ಯೆಗೆ ಹೋಗುತ್ತದೆ. ಉದಾಹರಣೆಗೆ ಮಯನ್ನರ ಪ್ರಕಾರ ಮೊದಲನೆಯ ದಿನವು ೦.೦.೦.೦.೧. ೧೯ ನೆಯ ದಿನವು ೦.೦.೦.೦.೧೯. ಅದೇ ೨೦ನೆಯ ದಿನವು ೦.೦.೦.೧.೦ ಎಂದಾಗುತ್ತದೆ. ಹೀಗೆ ಇದು ಒಂದು ವರ್ಷವನ್ನು ೦.೦.೧.೦.೦, ೨೦ ವರ್ಷವನ್ನು ೦.೧.೦.೦.೦, ೪೦೦ ವರ್ಷ ಅಥವಾ ಒಂದು ಬಕ್ಟುನ್‌ನನ್ನು ೧.೦.೦.೦.೦ಎಂದು ಬರೆಯಲಾಗುತ್ತದೆ. ಮಾಯನ್ ಕ್ಯಾಲೆಂಡರ್ ಪ್ರಕಾರ ೨.೧೦.೧೨೦೭.೧ ಎಂದು ಬರೆದರೆ ಅದರ ಅರ್ಥ ೧೦೧೨ ವರ್ಷ. ೭ ತಿಂಗಳು ಒಂದು ದಿನವಾಗುತ್ತದೆ.
   
ಮಾಯನ್ನರು ತಮ್ಮ ಸಂಖ್ಯಾಶಾಸ್ತ್ರಗಳಲ್ಲಿ ೧೩ ಹಾಗೂ ೨೦ನ್ನು ಮೂಲ ಘಟಕಗಳನ್ನಾಗಿಟ್ಟುಕೊಳ್ಳುತ್ತಿದ್ದರು ೨೦೧೨ರ ಡಿಸೆಂಬರ್ ೨೧ಕ್ಕೆ ಅವರ ಕ್ಯಾಲೆಂಡರ್ ಪ್ರಕಾರ ೧೩ ಬಕ್ಟುನ್‌ಗಳು ಮುಗಿಯುತ್ತವೆ . ಆದಿನವನ್ನು ೧೩.೦.೦.೦.೦.ಗೆ ಎಂದು ಓದಬೇಕಾಗುತ್ತದೆ. ಮಾಯಾ ಜನರ ದೀರ್ಘ ಲೆಕ್ಕಾಚಾರದ ಕ್ಯಾಲೆಂಡರ್ ಆರಂಭವಾದ ಆಗಸ್ಟ್೧೧, ೩೧೧೪ಕ್ರಿ.ಪೂ.ದಿಂದ ೫೧೨೬ವರ್ಷಗಳಾಗುತ್ತದೆ.. ಇಲ್ಲಿ ಗಮನಿಸಬೆಕಾದುದು ಏನೆಂದರೆ ಈ ದಿನಕ್ಕೆ ಮಾಯಾ ಜನರು ಮಾಡಿಕೊಂಡಿದ್ದ ಕ್ಯಾಲೆಂಡರ್ ಅವಧಿಯು ಒಂದು ಮಹಾಚಕ್ರ್ರವನ್ನು ಪೂರೈಸುತ್ತದೆ. ಅಂದರೆ ಅದರ ಅರ್ಥ ಅದರ ಮರು ದಿನವು ಮಾಯನ್ನರ ಪ್ರಕಾರ ಮತ್ತೆ .೦.೦.೦.೦.೦ಎಂದು ಆರಂಭವಾಗುತ್ತದೆ. ನಮ್ಮ ಪ್ರಕಾರ ಡಿಸೆಂಬರ್ ೩೧ರ ನಂತರ ಜನವರಿ ೧ ಆರಂಭವಾಗುವುದಿಲ್ಲವೇ ಹಾಗೆ. ಇದರಾಚೆಗೂ ಹಲವು ಪಂಡಿತರು ಮಾಯನ್ನರ ಕ್ಯಾಲೆಂಡರ್‌ನ ಒಂದು ಮಹಾಚಕ್ರವು ಮುಗಿಯುವುದು ೨೦ ಬಕ್ತುನ್‌ಗಳಿಗೆ ಎಂದೂ ವಾದಿಸುತ್ತಾರೆ. ಆದರೆ ಮಾಯನ್ನರು ಎಲ್ಲೂ ಆ ದಿನವೇ ಜಗತ್ತಿನ ಅಂತ್ಯವಾಗುತ್ತದೆ ಎಂದು ಹೇಳಿರಲಿಲ್ಲ. ಜಗತ್ತು ಮುಂದೊಮ್ಮೆ ಮುಗಿದುಬಿಡುತ್ತದೆ ಎಂದು ಮಾಯಾ ಜನರು ಎಲ್ಲಿಯೂ ಉಲ್ಲೇಖಿಸಿಯೂ ಇಲ್ಲ. ಇಂದಿಗೂ ಅಮೆರಿಕಾದಲ್ಲಿ ಬದುಕುತ್ತಿರುವ ಮಾಯಾ ಜನರೇ ಜಗತ್ತಿನ ಅಂತ್ಯದ ಬಗೆಗಿನ ಈ ಪ್ರಚಾರವನ್ನು ನಂಬುವುದಿಲ್ಲ. ಆದರೆ ಕೆಲವು ಸ್ವಾರ್ಥ ಹಿತಾಸಕ್ತಿಗಳು ಮಾಯಾ ಕ್ಯಾಲೆಂಡರ್‌ನ್ನು ಕಪೋಲ ಕಲ್ಪಿತ ಜಗತ್ತಿನ ಅಂತ್ಯ ದೊಂದಿಗೆ ಸಂಬಂಧ ಕಲ್ಪಿಸಿ ಭಾರೀ ಪ್ರಚಾರ ಪಡಿಸುತ್ತಿದ್ದಾರೆ.

ಮಿಥ್ ಎರಡು: ಪ್ರತ್ಯೇಕಗೊಳ್ಳುವ ಖಂಡಗಳು ನಾಗರೀಕತೆಯನ್ನು ನಾಶ ಮಾಡುತ್ತವೆ.
ಪ್ರಳಯಾಂತಕರ ಪ್ರಕಾರ ಭೂಮಿಯ ಕೇಂದ್ರದಲ್ಲಿರುವ ದ್ರವ - ಲೋಹದ ಹೊರ ಕವಚದ ಮೇಲಿರುವ ಭೂಮಿಯ ಮೇಲ್ಪದರಗಳು ತಿರುಗಿಕೊಂಡು ಬಿಡುತ್ತವೆ. ಭಾರೀ ಪ್ರಮಾಣದ ಸೌರ ವಿಕಿರಣಗಳು ಹಾಗೂ ಗ್ಯಾಲೆಕ್ಟಿಕ್ ಅಲೈನ್‌ಮೆಂಟ್ನ ಪರಿಣಾಮವಾಗಿ ಭೂಮಿಯ ಗುರುತ್ವಾಕರ್ಷಣೆಯ ಮೇಲಾಗುವ ಪರಿಣಾಮದಿಂದಾಗಿ ಭೂಮಿಯ ಧೃವಗಳು ಅದಲು ಬದಲಾಗಿ ಬಿಡುತ್ತದೆ ಎಂದು ಅವರ ಅಂಬೋಣ. ಇತ್ತೀಚೆಗೆ ಮಿಡುಗಡೆಯಾಗಿರುವ ೨೦೧೨ ಎಂಬ ಹಾಲಿವುಡ್ ಸಿನೆಮಾದಲ್ಲೂ ಇದನ್ನು ಭಯನಕವಾಗಿ ತೋರಿಸಲಾಗಿದೆ. ಈ ಧೃವ ಸ್ಥಳಾಂತರದಿಂದ ಹಲವು ಖಂಡಗಳು ಸಾಗರಗಳಲ್ಲಿ ಮುಳುಗುತ್ತವೆ, ಭಾರೀ ಸುನಾಮಿಗಳು, ಭೂಕಂಪಗಳಾಗುತ್ತವೆ ಎಂದು ಹೇಳಲಾಗುತ್ತವೆ. ಆದರೆ ನಾಸಾದ ವಿಜ್ಙಾನಿಗಳು ಹಾಗೂ ಜಗತ್ತಿನ ಹಲವಾರು ಖಗೋಳ ಶಾಸ್ತ್ರೀಯ ಸಂಶೋಧನೆಗಳು ಈ ಬಗೆಯ ದಿಢೀರ್ ಬೆಳವಣಿಗೆಗಳನ್ನು ಸ್ಪಷ್ಠವಾಗಿ ತಳ್ಳಿ ಹಾಕಿವೆ. ಭೂಮಿಯ ಇತಿಹಾಸದಲ್ಲಿ ಖಂಡಗಳು ಕೋಟ್ಯಾಂತರ ವರ್ಷಗಳಿಂದಲೂ ಸರಿಯುತ್ತಿವೆ. ಹಾಗೆಯೇ ಭೂಮಿಯ ಧೃವಗಳೂ ಬದಲಾಗುತ್ತವೆ. ಆದರೆ ಈ ಬೆಳವಣಿಗೆಗಳು ಅರಿವಿಗೇ ಬರದಷ್ಟು ನಿಧಾನ ಗತಿಯಲಿ ಸಾವಿರಾರು ವರ್ಷಗಳವರೆಗೆ ನಡೆಯುತ್ತಿರುತ್ತವೆ. ಹಾಗೆಯೇ ಸೂರ್ಯನಿಂದ ಭೂಮಿಯ ರಚನೆಯನ್ನೇ ಪ್ರಭಾವಿಸುವಷ್ಟು ತೀವ್ರವಾದ ವಿಕಿರಣಗಳಾಗಲೀ, ಸೌರ ಬಿರುಗಳಾಗಲೀ ಇದುವರೆಗೂ ಯಾರ ಅರಿವಿಗೂ ಬಂದಿಲ್ಲ.

ಮಿಥ್ ಮೂರು: ಗಾಲೆಕ್ಟಿಕ್ ಅಲೈನ್‌ಮೆಂಟ್ ಜಗತ್ತನ್ನು ನಾಶಗೊಳಿಸುತ್ತದೆ.
ಗ್ಯಾಲೆಕ್ಟಿಕ್ ಅಲೈನ್‌ಮೆಂಟ್(galactic alignment) ಎಂದರೆ ನಮ್ಮ ಗ್ರಹವಾದ ಭೂಮಿ, ನಕ್ಷತ್ರವಾದ ಸೂರ್ಯ ಹಾಗೂ ನಾವಿರುವ ಗ್ಯಾಲಾಕ್ಸಿಯಾದ ಕ್ಷೀರಪಥ ಗ್ಯಾಲಾಕ್ಷಿಯ ಕೇಂದ್ರಗಳು ತಮ್ಮ ತಂತಮ್ಮ ಪ್ರದಕ್ಷಿಣೆಯ ಪ್ರಕ್ರಿಯೆಯಲ್ಲಿ ಗ್ಯಾಲಾಕ್ಷಿಯ ಸಮಭಾಜಕ ವೃತ್ತದಲ್ಲಿ ಒಂದೇ ಸರಳರೇಖೆಯಲ್ಲಿ ಜೋಡಣೆಯಾಗುವುದು. ನಮ್ಮ ಭೂಮಿಯು ಸೂರ್ಯನ ಸುತ್ತಲೂ ಹೇಗೆ ಪ್ರದಕ್ಷಿಣೆ ಹಾಕುತ್ತದೆಯೋ ಹಾಗೆಯೇ ಸೂರ್ಯನೂ ತನ್ನ ಪರಿವಾರದ ಸದಸ್ಯರೊಂದಿಗೆ( ಸೌರವ್ಯೂಹ) ಕ್ಷೀರಪಥದ ಸುತ್ತಲೂ ತಿರುಗುತ್ತಿರುತ್ತದೆ ತಾನೆ?. ಸಾಮಾನ್ಯವಾಗಿ ಇಂತಹ ಒಂದು ಅಲೈನ್‌ಮೆಂಟ್ ಭೂಮಿಯಿಂದ ನಿಂತು ನೋಡಿದಾಗ ಆಗಾಗ ಸಂಭವಿಸುತ್ತಲೇ ಇರುತ್ತದೆ. ಇವನ್ನೇ ನಾವು ಮಕರ ಸಂಕ್ರಾಂತಿ ಅಥವಾ ದಕ್ಷಿಣಾಯಣ ಸಂಕ್ರಮಣ (ಸು.ಜೂ೨೧ಕ್ಕೆ) ಹಾಗೂ ಕರ್ಕಾಟಕ ಸಂಕ್ರಾಂತಿ ಅಥವಾ ಉತ್ತರಾಯಣ ಸಂಕ್ರಮಣ (ಸು.ಡಿಸೆಂಬರ್ ೨೨ಕ್ಕೆ) ಎಂದು ಕರೆಯುತ್ತೇವೆ. ೧೯೯೮ ರಲ್ಲಿ ನಡೆದ ಈ ಬಗೆಯ ಅಲೈನ್‌ಮೆಂಟ್ ಸರಳರೇಖೆಗೆ ಬಹುತೇಕ ಹತ್ತಿರವಿತ್ತು. ಆದರೆ ಈಗ ಸಂಭವಿಸುತ್ತದೆ ಎಂದು ಹೇಳಲಾಗುತ್ತಿರುವುದು ಸೂರ್ಯ ಹಾಗೂ ಭೂಮಿಗಳು ಕ್ಷೀರಪಥದ ಕೇಂದ್ರವನ್ನೇ ಪ್ರವೇಶ ಮಾಡಿಬಿಡುತ್ತವೆ ಎಂದು ಹೆಳಲಾಗುವ ಗ್ಯಾಲೆಕ್ಟಿಕ್ ಅಲೈನ್‌ಮೆಂಟು. ಸೂರ್ಯನು ಇಡೀ ಕ್ಷೀರಪಥ ಗ್ಯಾಲಕ್ಸಿಯನ್ನು ಒಂದು ಬಾರಿ ಸುತ್ತುಹೊಡೆಯಲು ತೆಗೆದುಕೊಳ್ಳುವ ಸಮಯ ಸು.೨೨೦ ಮಿಲಿಯನ್ ವರ್ಷಗಳು. ಇಂತಾದ್ದರಲ್ಲಿ ಅದು ಗ್ಯಾಲಕ್ಸಿಯ ಕೇಂದ್ರವನ್ನು ತಲುಪಲು ಅದೆಷ್ಟೋ ಲಕ್ಷ ವರ್ಷಗಳೇ ಬೇಕಾಗುತ್ತದೆ. ಅದು ಯವಾಗ ಎನ್ನುವುದು ಇದುವರೆಗೆ ಖಗೋಳಶಾಸ್ತ್ರಜ್ಞರ ಅರಿವಿಗೂ ನಿಲುಕಿಲ್ಲ. ಬರುವ ಡಿಸೆಂಬರ್ ೨೧ ಕ್ಕೇ ಅಂತಹ ಗ್ಯಾಲೆಕ್ಟಿಕ್ ಅಲೈನ್‌ಮೆಂಟ್ ಸಂಭವಿಸಿಬಿಡುತ್ತದೆ ಎಂದು ನಮ್ಮ ಕವಡೆ ಶಾಸ್ತ್ರಿಗಳು ಹಾಗೂ ಟಿ.ಆರ್‌ಪಿ. ರೇಟ್ ಹೆಚ್ಚಿಸಿಕೊಳ್ಳಲು ಏನಾದರೂ ಮಾಡಲು ತಯಾರಿರುವ TV9  ನಂತಹ ಚಾನಲ್‌ಗಳು ಬೊಬ್ಬೆ ಹೊಡೆಯುತ್ತಿರುವುದರಲ್ಲಿ ಜನರನ್ನು ಆತಂಕದಲ್ಲಿ ಮುಳುಗಿಸಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ಹಿತಾಸಕ್ತಿ ಮಾತ್ರವೇ ಕಾಣುತ್ತಿದೆ. ಈಗ ಮಾಯನ್ ಕ್ಯಾಲೆಂಡರ್‌ಗೂ, ಡಿಸೆಂಬರ್‌ನ ಉತ್ತರಾಯಣ ಸಂಕ್ರಮಣಕ್ಕೂ ಈ ಗ್ಯಾಲೆಕ್ಟಿಕ್ ಅಲೈನ್‌ಮೆಂಟ್‌ಗೂ ಬೇಕಂತಲೇ ಅನಗತ್ಯವಾಗಿ ಸಂಬಂಧ ಕಲ್ಪಿಸಲಾಗುತ್ತಿದೆ ಅಷ್ಟೆ.

ಮಿಥ್ ನಾಲ್ಕು: ರಹಸ್ಯ ಗ್ರಹ ಎಕ್ಸ್ ಭೂಮಿಗೆ ಅಪ್ಪಳಿಸುತ್ತದೆ.
ಪ್ಲಾನೆಟ್ ಎಕ್ಸ್ ಅಥವಾ ನಿಬಿರು ಎಂಬ ರಹಸ್ಯ ಗ್ರಹವೊಂದು ಭೂಮಿಗೆ ಅದೆಲ್ಲಿಂದಲೋ ಬಂದು ಭೂಮಿಗೆ ಅಪ್ಪಳಿಸಲಿದೆ ಎಂಬುದು ಮತ್ತೊಂದು ಮಿಥ್ಯೆ. ಇದರೊಂದಿಗೆ ಹಲವು ಕ್ಷುದ್ರ ಆಕಾಶಕಾಯಗಳು, ಉಲ್ಕೆಗಳು, ಅಥವಾ ಧೂಮಕೇತು ಭೂಮಿಗೆ ಬಡಿದು ಭೂಮಿಯನ್ನು ಛಿದ್ರ ಮಾಡಿಬಿಡುತವೆ ಎಂದೂ ಹೇಳಲಾಗುತ್ತದೆ. ಈ ಕುರಿತು ಅಮೆರಿಕದ ಬಹ್ಯಾಕಾಶ ಸಂಸ್ಥೆ ನಾಸಾದ ಖಗೋಳಜೀವಿಜ್ಞಾನಿ ಮೋರಿಸನ್  ಈ ವಿಚಾರಕ್ಕೆ ಸಂಬಂಧಿಸಿದಂತೆ ನೇರವಾಗಿ ಹೇಳಬಹುದಾದ ಒಂದೇ ಉತ್ತರವೆಂದರೆ ಇಲ್ಲ ಅಂತಾದ್ದೇನೂ ಆಗುವುದಿಲ್ಲ ಎನ್ನುತ್ತಾರೆ. ನಿಜವೆಂದರೆ ಈ ನಿಬಿರು ರಹಸ್ಯ ಗ್ರಹದ ಕುರಿತ ಪುಕಾರನ್ನು ೨೦೦೩ ರಲ್ಲೇ ಹರಿಬಿಡಲಾಗಿತ್ತು. ಆದರೆ ಆ ಪ್ರಚಾರವು ಕೊನೆಗೆ ಸುಳ್ಳು ಎಂದು ಸಾಬೀತಾಗಿತ್ತು. ಅಂತಹ ಯಾವುದಾದರೂ ಆಕಾಶಕಾಯವು ಇನ್ನು ಮೂರೇ ವರ್ಷಗಳಲ್ಲಿ ಭೂಮಿಯನ್ನು ಸಮೀಪಿಸುವುದಾದಲ್ಲಿ ಅದು ಇಷ್ಟು ಹೊತ್ತಿಗಾಗಲೇ ಸೌರವ್ಯೂಹವನ್ನು ಪ್ರವೇಶಿಸಿರಬೇಕಿತ್ತು ಹಾಗೂ ಅದು ಬರಿಗಣ್ಣಿಗೆ ಕಾಣಿಸಬೇಕಿತ್ತು ಎಂದು ಮೋರಿಸನ್ ಹೇಳುತ್ತಾರೆ. ಈಗ್ಗೆ ಹಲವಾರು ವರ್ಷಗಳಿಂದಲೂ ಸೌರವ್ಯೂಹದಾಚೆಗೂ ಆಕಾಶವನ್ನು ವೀಕ್ಷಿಸುತ್ತಿರುವ ಭಾರೀ ಗಾತ್ರದ ಟೆಲೆಸ್ಕೋಪುಗಳಿಗಾಗಲೀ, ಕೃತಕ ಉಪಗ್ರಹಗಳಿಗಾಗಲೀ ಕಾಣದ ಈ ಆಕಾಶಕಾಯಗಳು ನಮ್ಮ ನಡುವಿನ ಪ್ರಳಯಾಂತಕರಿಗೆ ಅದು ಹೇಗೆ ಕಂಡಿವೆ ಎಂದೇ ತಿಳಿಯುವುದಿಲ್ಲ.

ಮಿಥ್ ಐದು: ಸೌರ ಬಿರುಗಾಳಿಯು ಭೂಮಿಯನ್ನು ತೀವ್ರವಾಗಿ ದಾಳಿಮಾಡಲಿದೆ.
ಸಾಮಾನ್ಯವಾಗಿ ಸೂರ್ಯನಿಂದ ಭೂಮಿಗೆ ಹಲವು ಬಗೆಯ ವಿಕಿರಣಗಳು ಬರುತ್ತಲೇ ಇರುತ್ತವೆ. ಇವುಗಳಲ್ಲಿ ಹನಿಕಾರಕವಾದವುಗಳನ್ನು ಭೂಮಿಯ ವಾಯುಮಂಡಲದಲ್ಲಿರುವ ಓಝೋನ್ ಪದರವು ತಡೆಯುತ್ತದೆ. ಹಾಗೆಯೇ ಕೆಲವು ವಿಕಿರಣಗಳು ತೀವ್ರ ಸ್ವರೂಪದಲ್ಲಿದ್ದು ಭೂಮಂಡಲವನ್ನು ತಾಕುವುದೂ ಉಂಟು. ಆದರೆ ಇಂದು ಪ್ರಳಯಾಂತಕರು ಹೇಳುವ ರೀತಿಯಲ್ಲಿ ಇಡೀ ಭೂಮಿಯನ್ನೇ ಗುಡಿಸಿ ಹಾಕಬಲ್ಲಂತಹ ಸೌರ ಬಿರುಗಾಳಿಯೇನೂ ಭೂಮಿಯನ್ನು ತಾಕುವ ಯವುದೇ ಸಾಧ್ಯತೆಗಳಿಲ್ಲ. ಅಥವಾ ಇಂತಹ ವಾದಕ್ಕೆ ಪುಷ್ಠಿ ನೀಡುವ ಯಾವುದೇ ಸಾಕ್ಷ್ಯಗಳೂ ಇಲ್ಲ. ಇದೊಂದು ಊಹಾಪೋಹವಷ್ಟೇ. ಇಂದು ಭೂಮಿಯಲ್ಲಿ ಹಸಿರುಮನೆ ಅನಿಲಗಳ ಹೆಚೆಚ್ಚು ಹೊರಸೂಸುವಿಕೆಯಿಂದ ಓಝೋನ್ ಪದರದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯ. ಅಲ್ಲದೇ ಭೂಗ್ರಹದ ತಾಪಮನವು ಹೆಚ್ಚಾಗುತ್ತಿರುವುದೂ ಸತ್ಯ. ಆದರೆ ಈ ವಿದ್ಯಮಾನಗಳಿಗೂ ಇಂಟರ್‌ನೆಟ್, ಸಿನೆಮಾ ಟೀವಿ ಪ್ರಚಾರಗಳ ಪ್ರಳಯ, ಡೂಮ್ಸ್ ಡೇ ಅಥವಾ ಅಪೋಕ್ಯಾಲಿಪ್ಸ್ ಅರ್ಥಾತ್ ಜಗತ್ತಿನ ಅಂತ್ಯ ದಂತಹ ಕಟ್ಟುಕಥೆಗಳಿಗೂ ಯಾವುದೇ ಸಂಬಂಧವಿಲ್ಲ.

ಈ ಮೇಲಿನ ಮಿಥ್‌ಗಳಲ್ಲದೇ ಜಗತ್ತಿನ ನಾಶದ ಕುರಿತು ಇನ್ನೂ ಹಲವಾರು ಬಗೆಯ ಊಹಾಪೋಹಗಳಿವೆ. ನ್ಯಾನೋತಂತ್ರಜ್ಞಾನವು ಮಿತಿಮೀರಿ ನಿಯಂತ್ರಣಕ್ಕೇ ಸಿಗದೇ ಹೋಗುವ ಗ್ರೇ ಗೂ(grey goo) ಇಂತದೇ ಇನ್ನೊಂದು ಪ್ರಚಾರ. ಇದರ ಪ್ರಕಾರ ಸ್ವಯಂ ದ್ವಿಗುಣಗೊಳ್ಳುವ ರೋಬೋಟ್‌ಗಳು ಮನುಷ್ಯ ಕುಲವನ್ನೇ ನಾಶ ಮಡಿಬಿಡುತ್ತವಂತೆ. ಮಾನವ ನಿರ್ಮಿತ ಸೂಪರ್ ಕಂಪ್ಯೂಟರ್‌ಗಳು ಮನುಷ್ಯನ ಶೋಷಣೆಯನ್ನು ತಾಳದೆ ದಂಗೆ ಎದ್ದುಬಿಡುತ್ತವೆ ಎನ್ನುವುದು ಇನ್ನೊಂದು ಊಹೆ. ಹೀಗೆ ಇನ್ನೂ ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತಹ ತಲೆಕೆಟ್ಟ ಪ್ರಳಯದ ವಾದಗಳನ್ನು ಹುಟ್ಟಿಹಾಕಬಹುದು. ದುರಂತವೆಂದರೆ ಇಂದು ಚಾಲ್ತಿಯಲ್ಲಿರುವ ಈ ಪ್ರಳಯದ ಸಿದ್ಧಾಂತಗಳನ್ನು ಪ್ರಚಾರ ಮಾಡುವವರು ಯವಾಗಲೂ ಒಂದಷ್ಟು ವಿಜ್ಞಾನದ ವಿಷಯಗಳನ್ನೂ ತಮ್ಮ ಕುತರ್ಕಗಳಿಗೆ ಸೇರಿಸಿಬಿಟ್ಟಿರುತ್ತಾರೆ. ಆಗ ವಿದ್ಯಾವಂತ ಜನರೂ ಸಹ ನಿಜವೆನೋ? ಎಂದುಕೊಂಡು ಆತಂಕಗಳಿಗೀಡಾಗುತ್ತಾರೆ. ಈ ಬಗೆಯ ಪ್ರಳಯದ ಪ್ರಚಾರಕ್ಕೆ ಭಯಗೊಂಡು ಸಾಯಲು ಅಣಿಯಾದ ಕೆಲವರು ನಾಸಾದಂತಹ ವೈಜ್ಞಾನಿಕ ಸಂಸ್ಥೆಗಳ ಪ್ರಯತ್ನದಿಂದ ಬದುಕಿ ಉಳಿದಿದ್ದಾರೆ. ಆದರೆ ಬದುಕಿನಲ್ಲಿ ಸರಿಯಾದ ವೈಜ್ಞಾನಿಕ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುವವರು ಈ ಬಗೆಯ ಪುಕಾರುಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ.

ಪ್ರಳಯಭೀತಿಯ ಉದ್ದಿಮೆ.
ಭೂಕಂಪ, ಬಿರುಗಾಳಿ, ಅತಿವೃಷ್ಟಿ, ನೆರೆ, ಪ್ರವಾಹಗಳಂತಹ ನಮ್ಮ ಸುತ್ತ ಮುತ್ತಲೂ ನಡೆಯುವ ಪ್ರಕೃತಿ ವಿಕೋಪಗಳನ್ನೇ ಪ್ರಳಯದ ಮುನ್ಸೂಚನೆ ಎಂದು ಹೇಳಲಾಗುತ್ತಿದೆ. ಆದರೆ ಇಂತಹ ನೈಸರ್ಗಿಕ ವಿಕೋಪಗಳು ಸಾವಿರಾರು ವರ್ಷಗಳಿಂದಲೂ ನಡೆಯುತ್ತಿವೆ. ಕೆಲವೊಮ್ಮೆ ಅವು ಸಣ್ಣ ಪ್ರಮಾಣದಲ್ಲಿಯೂ ಇನ್ನು ಕೆಲವೊಮ್ಮೆ ದೊಡ್ಡ ಪ್ರಮಾಣದಲ್ಲಿಯೂ ನಡೆಯಬಹುದು. ಭೂಮಿಯ ಮೇಲೆ ಕೆಲವು ಹಿಮಯುಗಗಳೇ ಕಳೆದಿವೆ ಎಂದು ಹೇಳಲಾಗುತ್ತದೆ. ಆದರೆ ಅಂತಹ ಯಾವ ಪ್ರಕ್ರಿಯೆಯೂ ಇಡೀ ಭೂಮಿಯನ್ನೇ ಮುಳುಗಿಸುವ ಮಟ್ಟಕ್ಕಾಗಲೀ, ಅದನ್ನು ನಾಶ ಮಾಡುವ ಮಟ್ಟಕ್ಕಾಗಲೀ ನಡೆದಿಲ್ಲ. ಹೀಗಿರುವಾಗ ಈಗ ಇದ್ದಕ್ಕಿದ್ದಂತೆ ಇಡೀ ಪ್ರಪಂಚವೇ ನಾಶವಾಗುತ್ತದೆ ಎನ್ನುವುದು ಶುದ್ಧ ಮೂರ್ಖತನವಾಗುತ್ತದೆ. ವಾಸ್ತವದಲ್ಲಿ ಇಂತಹ ಪ್ರಚಾರಗಳಿಂದ ಇಂದು ಭಾರೀ ಲಾಭ ಪಡೆದುಕೊಳ್ಳುತ್ತಿರುವ ಒಂದು ವರ್ಗವಿದೆ. ಈ ವರ್ಗದಲ್ಲಿ ಜನರಲ್ಲಿ ಆತಂಕ ಹುಟ್ಟಿಸಿ ಅವರು ಪ್ರಳಯದ ಕುರಿತು ಭಾರೀ ಭಯ ಕುತೂಹಲ ಬೆಳೆಸಿಕೊಳ್ಳುವಂತೆ ಮಾಡಿ ಜನರ ದಿನನಿತ್ಯದ ಕೆಲಸ ಕಾರ್ಯಗಳು, ಮತುಕತೆಗಳು ಇದರ ಸುತ್ತಲೇ ಸುತ್ತುವಂತೆ ಮಾಡುವ ಬಂಡವಾಳಿಗ ವರ್ಗವು ಒಂದು. ಇಂದು ಇಂಟರ್‌ನೆಟ್‌ನಲ್ಲಿ ಇರುವ ಸಾವಿರಾರು ಪ್ರಳಯದ ವೆಬ್‌ಸೈಟುಗಳ ಒಡೆಯರು ಪ್ರತಿದಿನ ಕೋಟ್ಯಾಂತರ ರೂಗಳನ್ನು ಬಾಚುತ್ತಿದ್ದಾರೆ. ಹಾಗೆಯೇ ಪ್ರಳಯದ ಕುರಿತ ಸಿನಿಮಾಗಳೂ ಅಷ್ಟೇ ಹಣವನ್ನು ಬಾಚಿಕೊಳ್ಳುತ್ತಿವೆ. ಹಿಸ್ಟರಿ ಚಾನೆಲ್‌ನ ರೂಪಕ್ ಮುರ್ಡೋಕ್‌ನಂತಹ ಟೀವಿ ಚಾನಲ್ ಒಡೆಯರು ಇಂತಹ ಮೌಡ್ಯಗಳ ಸುತ್ತ ಕಾರ್ಯಕ್ರಮ ನಡೆಸಿ ತಮ್ಮ ಚಾನೆಲ್‌ಗಳ ಟಿಆರ್‌ಪಿ. ದರವನ್ನು ಹೆಚ್ಚಿಸಿಕೊಂಡು ಜನರನ್ನು ಭಯಕ್ಕೂ, ಹತಾಶೆಗೂ ತಳ್ಳುತ್ತಿವೆ. ಪತ್ರಿಕೆಗಳು ತಮ್ಮ ಪ್ರಸಾರವನ್ನು ಹೆಚ್ಚಿಸಿಕೊಳ್ಳುತ್ತಿವೆ. ಇವರಿಗೆಲ್ಲಾ ಪ್ರಳಯವೂ ಸಹ ಲಾಭ ತರುವ ಒಂದು ವ್ಯಾಪಾರ ಮಾತ್ರ. ಇವರ ನಡುವೆ ಮೌಢ್ಯವನ್ನೇ ಜನರ ತಲೆಗೆ ತುಂಬಿ ತಾವು ಮಾತ್ರ ದೇವಮಾನವರಾಗಲು ಹವಣಿಸುವ ಜೋತಿಷಿಗಳೂ, ಧಾರ್ಮಿಕ ಮೂಲಭೂತವಾದಿಗಳೂ ಇದ್ದಾರೆ. ಇವರು ಜನರು ಪ್ರಳಯದಿಂದ ಪಾರಾಗಲು ಹೋಮ ಹವನಗಳನ್ನೂ, ಆಧ್ಯಾತ್ಮವನ್ನೂ, ಪೂಜೆ ಪುನಸ್ಕಾರಗಳನ್ನೂ, ಧ್ಯಾನವನ್ನೂ ಹೆಚೆಚ್ಚು ಆಚರಿಸಬೇಕೆಂದು ತಾಕೀತು ಮಾಡುತ್ತಾರೆ. ಸನ್ಮಾರ್ಗದಲ್ಲಿ ಜನರು ನಡೆಯಬೇಕೆಂದು ಹೇಳುವ ಇಂತಹ ಕವಡೆ ಶಾಸ್ತ್ರಿಗಳೇ ಜನರನ್ನು ಮೌಢ್ಯದ ಪರಮಾವಧಿಗೆ ತಳ್ಳುತ್ತಾ, ಅಧಿಕಾರಸ್ತರ ಸಂಗದಲ್ಲಿ ದುರ್ಮಾರ್ಗದಲ್ಲಿ ನಡೆಯುತ್ತಿರುತ್ತಾರೆ. ಈ ಹಿಂದೆ ೧೯೯೯ ರಲ್ಲಿಯೇ ಪ್ರಳಯ ಸಂಭವಿಸಿ ಬಿಡುತ್ತದೆ ಎಂದು ಪುಕಾರು ಹಬ್ಬಿಸಿದವರೂ ಇವರೇ. ಇಂತಹವರ ಮಾತುಗಳನ್ನು ಕೇಳಿದ ಜನರು ತಾವು ನಾಶವಾಗುವ ಭೀತಿಗೆ ಒಳಗಾಗಿ ಈ ಜ್ಯೋತಿಷಿಗಳು ಹೇಳಿದಂತೆ ಕೇಳುತ್ತಾ ಹೋದರೆ ಮನುಷ್ಯ ಸಮಾಜವು ಪ್ರಗತಿಯೆಡೆ ಚಲಿಸುವ ಬದಲಾಗಿ ಅಧೋಗತಿಗಿಳಿಯುತ್ತದೆ ಅಷ್ಟೆ. ಹೀಗಾಗಿ ಇಂತಹ ಊಹಾಪೋಹಗಳಿಗೆ ಆತಂಕಗೊಳ್ಳುವ ಜನರಿಗೆ ಸತ್ಯವನ್ನು ಅರುಹುತ್ತಾ, ಸ್ಥಾಪಿತ ಹಿತಾಸಕ್ತಿಗಳ ಬಂಡವಾಳವನ್ನು ಅಮಾಯಕ ಜನರೆದುರು ಬಯಲುಮಾಡುತ್ತಾ, ನಾವೂ ವೈಜ್ಞಾನಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುತ್ತಾ ಸತ್ಯ, ನ್ಯಾಯ, ಪ್ರಗತಿಯ ಮಾರ್ಗದಲ್ಲಿ ನಡೆಯುವುದೇ ನಮ್ಮೆಲ್ಲರ ಹೊಣೆಗಾರಿಕೆ.
Harsha@9449423060 

Thursday, April 14, 2011

ಬೃಹತ್ ಬ್ರಹ್ಮಾಂಡದ ವಿರುದ್ಧ ಆಂದೋಲನದ ನೀಲನಕ್ಷೆ...


ಎಲ್ಲ ಟಿವಿ ಚಾನಲ್‌ಗಳಲ್ಲೂ ಜ್ಯೋತಿಷಿಗಳ ಆರ್ಭಟ ನಿರಂತರವಾಗಿ ಸಾಗಿದೆ. ಪರಸ್ಪರ ಫೈಟಿಂಗಿಗೆ ಬಿದ್ದ ಹಾಗೆ ಜ್ಯೋತಿಷ್ಯ ಸಂಬಂಧಿ ಕಾರ್ಯಕ್ರಮಗಳನ್ನು ಟಿವಿ ವಾಹಿನಿಗಳು ಎಗ್ಗಿಲ್ಲದೆ ಪ್ರಸಾರ ಮಾಡುತ್ತಿವೆ. ಜೀ ಟಿವಿಯಲ್ಲಿ ಬರುವ ನರೇಂದ್ರ ಶರ್ಮರ ಅವಾಂತರಗಳ ಕುರಿತು ಈ ಹಿಂದೆ ಬರೆದಿದ್ದೆವು. ನೀವೂ ಸಹ ಪ್ರತಿಕ್ರಿಯಿಸಿದ್ದಿರಿ. ಈ ವರ್ಷ ಇಡೀ ಪ್ರಪಂಚ ಮುಳುಗಿ ಹೋಗುತ್ತದೆ ಎಂದು ಹೇಳಿದ ಈ ಮಹಾನುಭಾವ, ಯುಗಾದಿಯ ದಿನ ಇಡೀ ವರ್ಷದ ಭವಿಷ್ಯ ಯಾರಿಗೆ ಹೇಗೆ ಇದೆ ಎಂದು ಹೇಳುತ್ತಾರೆ. ಎರಡನ್ನೂ ನಾಚಿಕೆಯಿಲ್ಲದಂತೆ ಚಾನಲ್ ಪ್ರಸಾರ ಮಾಡುತ್ತದೆ. ಜಗತ್ತೇ ನಾಶವಾದ ಮೇಲೆ ವರ್ಷ ಭವಿಷ್ಯ ಯಾಕೆ ಒದರುತ್ತ ಕೂತಿದ್ದೀರಿ ಎಂದು ಚಾನಲ್ ನವರು ಪ್ರಶ್ನಿಸಲಿಲ್ಲ. ನೋಡುವ ವೀಕ್ಷಕರಿಗೂ ಅದು ಹೊಳೆಯಲಿಲ್ಲ.

ವರ್ಷದ ತೊಡಕು ಮಾಡಬೇಡಿ, ಜೀವನವೆಲ್ಲ ತೊಡಕು ಆಗಿಬಿಡುತ್ತದೆ ಎಂದು ಈ ಸ್ವಾಮಿ ಮಾಂಸಾಹಾರಿಗಳನ್ನು ಹೆದರಿಸಿದರು. ಈತನ ಮಾತು ಕೇಳಿ ಎಷ್ಟು ಮಂದಿ ವರ್ಷದ ತೊಡಕು ಆಚರಿಸಿದರೋ, ಬಿಟ್ಟರೋ ಗೊತ್ತಿಲ್ಲ. ಆದರೆ ಬೀದಿಬೀದಿಯಲ್ಲಿ, ಮಾಂಸದಂಗಡಿಗಳಲ್ಲಿ ಈತನ ಸಹಸ್ರ ನಾಮಾರ್ಚನೆಯಂತೂ ನಡೆದ ಮಾಹಿತಿಯಿದೆ. ಮಾಂಸಾಹಾರ ಮಾಡಬೇಕೋ ಬೇಡವೋ ಎಂದು ಯುಗಾದಿ ಮರುದಿನ ಗಂಡಸರು-ಹೆಂಗಸರು ಮನೆಮನೆಯಲ್ಲಿ ಜಗಳವಾಡಿಕೊಂಡ ಮಾಹಿತಿಗಳೂ ಇವೆ.

ಬ್ರಹ್ಮಾಂಡ ಸ್ವಾಮಿಯೂ ಸೇರಿ ಎಲ್ಲ ಕಪಟ ಜ್ಯೋತಿಷಿಗಳನ್ನು ದೂರವಿಡಿ ಎಂದು ಎಲ್ಲ ಟಿವಿ ಚಾನಲ್‌ಗಳನ್ನೂ ಒತ್ತಾಯಿಸುವ, ಒತ್ತಡ ಹೇರುವ ಕೆಲಸಕ್ಕೆ ಇದು ಸಕಾಲ. ‘ಕಪಟ ಜ್ಯೋತಿಷಿಗಳನ್ನು ಟಿವಿ ಚಾನಲ್‌ಗಳಿಂದ ಓಡಿಸಿ ಎನ್ನುವ ಅಭಿಯಾನ ಆರಂಭಿಸೋಣ. ಏನೇನು ಮಾಡಬಹುದು ಎಂಬುದನ್ನು ನಿಮ್ಮ ಪ್ರತಿಕ್ರಿಯೆಗಳಿಂದಲೇ ಪಡೆದು ಇಲ್ಲಿ ಪಟ್ಟಿ ಮಾಡಿದ್ದೇವೆ. ಮತ್ತೆ ಮತ್ತೆ ನಿಮ್ಮ ಸಹಕಾರ ಯಾಚಿಸುತ್ತೇವೆ.

೧. ಪ್ರಳಯದ ಭೀತಿಯನ್ನು ಸೃಷ್ಟಿಸುತ್ತಿರುವ ನರೇಂದ್ರ ಸ್ವಾಮಿ ಈಗಾಗಲೇ ಲಕ್ಷಾಂತರ ಅಮಾಯಕ, ಮುಗ್ಧ ಜನರನ್ನು ದಾರಿ ತಪ್ಪಿಸಿದ್ದಾರೆ. ಹೆಣ್ಣು ಮಕ್ಕಳ ಉಡುಪು, ನಡವಳಿಕೆ, ಉದ್ಯೋಗ ಇತ್ಯಾದಿ ಎಲ್ಲ ವಿಷಯಗಳಲ್ಲೂ ಮೂಗು ತೂರಿಸಿ, ಅವರ ಆತ್ಮಸ್ಥೆರ್ಯವನ್ನು ಉಡುಗಿಸುವ ಯತ್ನ ನಡೆಸಿದ್ದಾರೆ. ಕೆಲವು ಹಿಂದುಳಿದ ಜಾತಿಗಳ ವಿಷಯದಲ್ಲೂ ಲಘುವಾಗಿ ಮಾತನಾಡಿ ಅವರ ಮನ ನೋಯಿಸಿದ್ದಾರೆ. ಈತ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲದೆ, ಪ್ರಳಯ, ಸುನಾಮಿ, ಭೂಕಂಪ ಇತ್ಯಾದಿಗಳ ಕುರಿತು ಲಂಗು ಲಗಾಮಿಲ್ಲದಂತೆ ಮಾತನಾಡುತ್ತ ರಾಜ್ಯದ ಜನರನ್ನು ಮೌಢ್ಯದ ಅಂಧಕಾರಕ್ಕೆ ತಳ್ಳುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ದಯಮಾಡಿ ಈ ಕಾರ್ಯಕ್ರಮದ ಪ್ರಸಾರವನ್ನು ನಿಲ್ಲಿಸಿ ಎಂದು ನಾವು ಜೀ ಟಿವಿ ಸಂಸ್ಥೆಯವರಿಗೆ ಮನವಿ ಮಾಡೋಣ. ಎಷ್ಟು ಜನರು ಸಾಧ್ಯವೋ ಅಷ್ಟು ಜನರು ಈ ಪತ್ರ ಚಳವಳಿಯಲ್ಲಿ ಪಾಲ್ಗೊಳ್ಳಬಹುದು. ಬರೆಯುವಾಗ ನಮ್ಮ ಭಾಷೆ ಸಭ್ಯವಾಗಿರಲಿ, ಕನ್ವಿನ್ಸಿಂಗ್ ಆಗಿರಲಿ ಎಂಬುದು ವಿನಂತಿ.
ಜೀ ಟಿವಿಯ ಇಮೇಲ್ ವಿಳಾಸ ಈ ಕೆಳಕಂಡಂತಿದೆ.
feedbackzeekannada@zeenetwork.com
ಜೀ ಟಿವಿಯ ವಿಳಾಸ ಈ ಕೆಳಕಂಡಂತಿದೆ.

ZEE KANNADA
#39 United Mansions,
3rd Floor, M.G.Road,
Bengalooru - 560 001
Tel: +91 - 80 - 66109999
Fax: +91 - 80 - 2555 9432


೨. ಬ್ರಹ್ಮಾಂಡ ಕಾರ್ಯಕ್ರಮದಿಂದ ನಾಗರಿಕ ಸಮಾಜದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ವಿವರಿಸಿ ರಾಜ್ಯದ ಪ್ರಮುಖ ಸಂಘಟನೆಗಳಿಗೆ ಒಂದು ಪತ್ರ ಬರೆದು, ಈ ಬಗ್ಗೆ ವ್ಯಾಪಕ ಮಾಹಿತಿ ಹಂಚುವ ಕಾರ್ಯವನ್ನು ಮಾಡೋಣ. ಈ ಕೆಲಸವನ್ನು ಸಂಪಾದಕೀಯವೇ ಮಾಡುತ್ತದೆ. ಇತರರೂ ಸಹ ತಮಗೆ ಗೊತ್ತಿರುವ ಸಂಘಟನೆಗಳ ಮುಖಂಡರಿಗೆ ಈ ವಿಷಯವನ್ನು ಹರಡಿದರೆ ಅನುಕೂಲವಾಗುತ್ತದೆ.

೩. ನರೇಂದ್ರ ಶರ್ಮ ನಡೆಸುವ ಸಾರ್ವಜನಿಕ ಸಂವಾದ ಕಾರ್ಯಕ್ರಮಗಳಿಗೆ ತೆರಳಿ ಅಲ್ಲಿ ಪ್ರತಿಭಟಿಸುವ ಸಲಹೆಯನ್ನು ಹಲವರು ನೀಡಿದ್ದಾರೆ. ಇದು ಒಳ್ಳೆಯ ನಡೆಯಾಗಬಹುದು. ನರೇಂದ್ರ ಶರ್ಮ ಜತೆ ಬಹಿರಂಗ, ನೇರಪ್ರಸಾರ ಮುಕ್ತ ಸಂವಾದಕ್ಕಾಗಿ ನಾವು ಜೀ ಟಿವಿಯವರನ್ನು ಕೋರಬಹುದು. ಒಂದು ವೇಳೆ ಅಂಥ ಅವಕಾಶವನ್ನು ಅವರು ನೀಡಿದರೆ, ನರೇಂದ್ರ ಸ್ವಾಮಿಯವರ ನಿಜಬಣ್ಣವನ್ನು ಬಯಲು ಮಾಡಬಹುದು.

೪. ಈ ಕಾರ್ಯಕ್ರಮದಿಂದ ಆಗುತ್ತಿರುವ ಅನಾಹುತಗಳ ಕುರಿತು ವಿವರಿಸಿ, ಕಾರ್ಯಕ್ರಮ ಸ್ಥಗಿತಗೊಳಿಸಲು ರಾಜ್ಯ-ಕೇಂದ್ರ ಸರ್ಕಾರಗಳಿಗೆ, ಗೃಹ-ವಾರ್ತಾ ಇಲಾಖೆಗಳಿಗೆ, ಪ್ರಸಾರ ಭಾರತಿ, ಪ್ರೆಸ್ ಕೌನ್ಸಿಲ್‌ಗೆ ಮತ್ತು ಸಂಬಂಧಪಟ್ಟ ಸಂಸ್ಥೆಗಳಿಗೆ ಪತ್ರ ಬರೆಯೋಣ.

೪. ಪತ್ರಿಕೆಗಳಲ್ಲಿ ಈ ಕುರಿತು ಲೇಖನಗಳನ್ನು ಬರೆಯುವ ಮೂಲಕ ಎಚ್ಚರ ಮೂಡಿಸಬಹುದು ಎಂಬುದು ಹಲವರ ಅಭಿಪ್ರಾಯ. ಆ ಕೆಲಸವನ್ನೂ ನಾವು ಮಾಡುತ್ತ ಹೋಗೋಣ. ಈಗಾಗಲೇ ಹಲವು ಪತ್ರಿಕೆಗಳಲ್ಲಿ ಈ ಕುರಿತು ಲೇಖನಗಳು ಬಂದಿವೆ. ಜತೆಗೆ ಬ್ಲಾಗರ್‌ಗಳೂ ಸಹ ಈ ಕುರಿತು ಲೇಖನಗಳನ್ನು ಬರೆಯಲು ವಿನಂತಿಸುತ್ತೇವೆ. ಈಗಾಗಲೇ ಬರೆದಿರುವವರು ತಮ್ಮ ಬ್ಲಾಗ್‌ಗಳ ಕೊಂಡಿಯನ್ನು ನೀಡಿದರೆ ಅನುಕೂಲವಾಗುತ್ತದೆ.

೫. ಈ ಅವೈಜ್ಞಾನಿಕ ಕಾರ್ಯಕ್ರಮಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ವಕೀಲರನ್ನು ಸಂಪರ್ಕಿಸುವ ಕೆಲಸವನ್ನೂ ಆರಂಭಿಸೋಣ.

೬. ಆನ್‌ಲೈನ್ ಪಿಟಿಷನ್ ಒಂದನ್ನು ಮಾಡುವ ಕುರಿತು ನಮ್ಮ ಓದುಗರು ಹೇಳಿದ್ದಾರೆ. ಇದೂ ಸಹ ಉಪಯುಕ್ತ ಸಲಹೆ. ಈ ಹಿಂದೆ ಇಂಥ ಆನ್ ಲೈನ್ ಪಿಟಿಷನ್ ಗಳನ್ನು ಮಾಡಿದವರು ಸಹಕಾರ ನೀಡಲು ಮನವಿ.

೭. ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ದೂರು ದಾಖಲಿಸುವ ಸಲಹೆಯೂ ಬಂದಿದೆ. ಈತ ಪ್ರಳಯದ ಭೀತಿಯನ್ನು ಹರಡುತ್ತಿರುವ ಪ್ರವಚನಗಳಿರುವ ಕಾರ್ಯಕ್ರಮದ ವಿಡಿಯೋ ರೆಕಾರ್ಡ್ ಪಡೆದು ನಾವು ಸುಲಭವಾಗಿ ಈ ಕೆಲಸವನ್ನು ಮಾಡಬಹುದು.

೮. ಚಾನಲ್ ಮುಂಭಾಗ ಪ್ರತಿಭಟನೆ ಮಾಡುವ ಸಲಹೆಯೂ ಬಂದಿದೆ. ಇದು ಅತ್ಯಂತ ಅನಿವಾರ್ಯವಾದ ಕ್ರಿಯೆ. ಮೊದಲ ಹಂತದ ಎಲ್ಲ ಪ್ರಯತ್ನಗಳೂ ವಿಫಲವಾದರೆ ಇದನ್ನೇ ನಾವು ಗಂಭೀರವಾಗಿ ಪರಿಗಣಿಸಬೇಕಾಗಿದೆ.

೯. ನಾವು ನಡೆಸುವ ಎಲ್ಲ ಚಟುವಟಿಕೆಗಳನ್ನು ಪರಸ್ಪರರ ಗಮನಕ್ಕೆ ತರುವ ದೃಷ್ಟಿಯಿಂದ ಫೇಸ್‌ಬುಕ್ ನಲ್ಲಿ ಒಂದು ಗುಂಪನ್ನು ಸೃಷ್ಟಿಸಿ, ಅದರಲ್ಲೇ ಈ ಸಂಬಂಧದ ಎಲ್ಲ ಮಾಹಿತಿಗಳನ್ನು ಶೇರ್ ಮಾಡೋಣ. ಕಪಟ ಜ್ಯೋತಿಷಿಗಳನ್ನು ಟಿವಿ ಚಾನಲ್ ಗಳಿಂದ ಓಡಿಸಿ ಎಂದು ಈ ಗುಂಪಿಗೆ ಹೆಸರಿಡಲು ಯೋಚಿಸಿದ್ದೇವೆ. ಇದಕ್ಕಿಂದ ಪರಿಣಾಮಕಾರಿಯಾದ ಹೆಸರನ್ನು ಯಾರಾದರೂ ಸೂಚಿಸಿದರೆ ಅದನ್ನು ಬಳಸಬಹುದು. ಈ ಗುಂಪಿಗೆ ಎಷ್ಟು ಸಾಧ್ಯವೋ ಅಷ್ಟು ಜನರನ್ನು, ತಮ್ಮ ಎಲ್ಲ ಗೆಳೆಯ-ಗೆಳತಿಯರನ್ನು ಸೇರಿಸಿದರೆ ಹೆಚ್ಚು ಮಂದಿಯನ್ನು ನಾವು ತಲುಪಬಹುದು.

೧೦. ಫೇಸ್‌ಬುಕ್‌ನ ಗೆಳೆಯರಿಗೆ ಒಂದು ವಿನಂತಿ. ಸಾಕಷ್ಟು ಮಂದಿ ನಮ್ಮ ಎಲ್ಲ ಪೋಸ್ಟ್‌ಗಳನ್ನು ಕಾಳಜಿಯಿಂದ ನಿಮ್ಮ ವಾಲ್‌ನಲ್ಲಿ, ವಿವಿಧ ಗ್ರೂಪ್‌ಗಳಲ್ಲಿ ಶೇರ್ ಮಾಡುತ್ತ ಬಂದಿರುವುದನ್ನು ನಾವು ಗಮನಿಸಿದ್ದೇವೆ. ನಾವು ವಿನಂತಿಸದೆಯೇ ನೀವು ಅದನ್ನು ಮಾಡುತ್ತಾ ಬಂದಿದ್ದೀರಿ. ಈ ಬಾರಿ ಈ ಪೋಸ್ಟ್ ಅನ್ನು ಹೆಚ್ಚು ಜನರಿಗೆ ತಲುಪಿಸುವ ದೃಷ್ಟಿಯಿಂದ ನಿಮ್ಮ ನಿಮ್ಮ ಫೇಸ್‌ಬುಕ್ ಮತ್ತು ನೀವು ಒಳಗೊಂಡಿರುವ ಗ್ರೂಪ್ ಗಳಲ್ಲಿ ಶೇರ್ ಮಾಡಿ ಎಂದು ವಿನಂತಿಸುತ್ತೇವೆ. ಹಾಗೆಯೇ ಇತರ ಸಾಮಾಜಿಕ ತಾಣಗಳನ್ನು ಬಳಸುವವರೂ ಸಹ ಈ ಲೇಖನವನ್ನು ಹೆಚ್ಚು ಜನರಿಗೆ ತಲುಪಿಸಬೇಕೆಂದು ವಿನಂತಿಸುತ್ತೇವೆ.

ಇದಿಷ್ಟು ಸದ್ಯದ ಆಲೋಚನೆಗಳು. ಇನ್ನಷ್ಟನ್ನು ನೀವು ಸೇರಿಸಬಹುದು. ಏನೇನು ಪ್ರಗತಿ ಆಗಿದೆ ಎಂಬುದನ್ನು ನಿರಂತರವಾಗಿ ನಿಮ್ಮ ಗಮನಕ್ಕೆ ತರುತ್ತಾ ಬರುತ್ತೇವೆ. ವಿಶ್ವಾಸವಿರಲಿ.

Tuesday, April 12, 2011

ಕಪಟ ಜ್ಯೋತಿಷಿಗಳ ವಿರುದ್ಧ ಅಭಿಯಾನ: ಪ್ರತಿಕ್ರಿಯೆಗಳು

ಜನರನ್ನು ಮೌಢ್ಯದ ಪ್ರಪಾತಕ್ಕೆ ತಳ್ಳುತ್ತಿರುವ, ಪ್ರಳಯದ ಭೀತಿಯನ್ನು ಸೃಷ್ಟಿಸುತ್ತಿರುವ ಕಪಟ ಜ್ಯೋತಿಷಿಗಳನ್ನು ಟಿವಿಗಳಿಂದ ಓಡಿಸುವುದು ಹೇಗೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದ್ದನ್ನು ನೀವು ಗಮನಿಸಿದ್ದೀರಿ. ಈ ಎಲ್ಲವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ತಲೆಹರಟೆ ಜ್ಯೋತಿಷಿಗಳ ಕಾರ್ಯಕ್ರಮಗಳನ್ನು ನಿಲ್ಲಿಸುವಂತೆ ಟಿವಿ ಚಾನಲ್ ಗಳ ಮೇಲೆ ಒತ್ತಡ ಹೇರಲು ನಡೆಸಬೇಕಾದ  ಅಭಿಯಾನದ ಸ್ಪಷ್ಟ ರೂಪುರೇಷೆಗಳನ್ನು ತೀರ್ಮಾನಿಸಬಹುದಾಗಿದೆ. ಒಂದು ಪಟ್ಟಿಯನ್ನು ತಯಾರಿಸುವ ಮುನ್ನ  ಈ ಎಲ್ಲ ಪ್ರತಿಕ್ರಿಯೆಗಳನ್ನು ಮತ್ತೊಮ್ಮೆ ಗಮನಿಸಿ ಎಂದು ವಿನಂತಿಸುತ್ತೇವೆ. ಪ್ರತಿಕ್ರಿಯಿಸಿದ ಎಲ್ಲರಿಗೂ ಥ್ಯಾಂಕ್ಸ್.


Anonymous said...

Dear Sampaadakeeya
Could you please find and post the phone numbers of That channels Chief Editors and this Nuisance Narendraswamy,So that Let the Public bang them privately! Then we can think of Next step.
Mohan

adithikrishna said...

jagan maathe yaav flight nal barthare antha ee mundedakke hellirbekalla, yen hucchnan maga re evnu, iddan kello nam janakke yaak artha aagthilla evnu mank boodi erchthidaane antha, hogli bidi bere henn makkalanna baithanalla ee mundedru mane hengasru yest udda koodlu bittidaaranthe??????????? uttra kodakke heli avanige.........

idella samanya janara mele nadithiro dowrjanya....

ella seri channels ge ottada haakdre kanditha channel navru idanna nillstaare.......

atleast ee comments nodi yaadru channel navaru intha programme na nillisli...

Anonymous said...

ಅಂಬರೀಷ್............Finally he only clear the dispute (He is man behind for clear so many problems in earlier time also). Now this the time take that KAMANGI JYOTHISIge DIKKARA.........& DIKKARA for the dirty minds behind that progromme.....

JAI REBEL STAR..We all wishes to ambi for long and happy life...

Thanks
Surayakanth

G!R!SH said...

Sir,
NAVU MODALU E TV CHANNEL GALALLI BARUVA ELLA JOTISHYA SABHANDHI KARYAKRAMAGALANNA NILLISABEKU.
SUPER MOON DIVASA HAAGE AGUTTE HEEGE AGUTTE ANTHA HELIDA ELLA JOTISHIGALIGU ENADARU SHIKSHE KODABEKU.
MAY 6 ALLA EGLE AVANA( NARENDRA SHARMA)MELE CASE FILE AGBEKU.
TANNA TAPPU ABHIPRAYAGALINDA JANARANNA HAADI TAPPISUTTIDDANE ANTA SAARVAJANIKA HITAASAKTI CASE HAKBEKU.
ISHTELLA NADITIDRU AVARELLI AGNI SHRIDHAR AVARANNA E AANDOLANADA NAAYAKATVA VAHISIKOLLODAKKE MANAVI MADABEKU.

ಅವಿನಶ ಕನ್ನಮ್ಮನವರ್ said...

ಶರ್ಮಾ ಎಲ್ಲಲ್ಲಿ ಜನರ ಸ೦ದಶ೯ನ (ಹಿ೦ದಿನ ವಾರ ಜಯನಗರ ೪ ನೇ ಬ್ಲಾಕ್ ನಲ್ಲಿತ್ತು) ಮಾಡುತ್ತಾನೋ ಅಲ್ಲಲ್ಲೀ ನಾವೆಲ್ಲರೂ ಪ್ರತಿಭಟಿಸಬೇಕು, ಅದೂ ಯಾರನ್ನಾದರು scientist/science writer ಜೊತೆಗೆ ಕರೆದು ಕೊ೦ಡು ಹೋಗಿ ಪ್ರತಿಭಟಿಸೋಣ,
ನೀವು ಆಯೋಜಿಸಿ, ನಾವು ಬ೦ದೇಬರುತ್ತೇವೆ..

Anonymous said...

Agni shridhar ge nayakatva vahisi e aandolanavanna raajyadyanta churukugolisona
nimma vaicharika pragnege salam.

Girish

ಪ್ರಶಾಂತ said...

ಬಹಳ ಒಳ್ಳೆಯ ಲೇಖನ. ಈಗ ಸ್ವಲ್ಪ ದಿನಗಳ ಹಿಂದೆ TV9 ಕಾರ್ಯಕ್ರಮದಲ್ಲಿ, ವಿವೇಕ - ನರೇಂದ್ರ, ಸಂಪೂರ್ಣ ಜಗತ್ತು ಡಿಸೆಂಬರ್ ೨೦೧೧ ಕ್ಕೆ ಮುಳುಗಡೆಯಾಗಿ ಈಡಿ ಜಗತ್ತಿನಲ್ಲಿ ದಕ್ಷಿಣ ಭಾರತ (ತನ್ನ ಕಾಲಡಿಯ ನೆಲ) ಮಾತ್ರ ಉಳಿದುಕೊಳ್ಳುತ್ತೆ ಎಂಬುದಾಗಿ ಭವಿಷ್ಯ ನುಡಿದಿದ್ದಾನೆ. ನರೆಂದ್ರರಿಗೆ ಧಿಕ್ಕಾರ!

Anonymous said...

ವಾಹಿನಿಗಳ ಮುಖ್ಯಸ್ಥರ ಇಮೇಲ್‌ ಐಡಿಗಳನ್ನು ಹಾಗೂ ಮೊಬೈಲ್‌ ನಂಬರ್‌ಗಳನ್ನು ಇಲ್ಲಿ ನೀಡಿದರೆ ಒಳ್ಳೆಯದು. ಎಲ್ಲರೂ ಒಂದೊಂದು ಮೇಲ್‌ , ಎಸ್‌ಎಮ್‌ಎಸ್‌‌ ಒಗೆದರೆ ಆಗಲಾದರೂ ಅವರಿಗೆ ತಾವು ಮಾಡುತ್ತಿರುವ ಅನಾಹುತದ ಬಗ್ಗೆ ಅರಿವಾದೀತು. ಕೇವಲ ಟಿಆರ್‌ಪಿಯ ವರದಿಯನ್ನೇ ಎದುರು ನೋಡುತ್ತಾ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮರೆತಂತಿದೆ ಅವರೆಲ್ಲಾ. ಆದಷ್ಟು ಬೇಗ ಅವರ ಇಮೇಲ್‌ ಐಡಿ ಹಗೂ ಮೊಬೈಲ್‌ ನಂಬರ್‌ಗಳನ್ನು ನೀಡಿ. ಸಾಧ್ಯವಾದರೆ ಆ ಅನಿಷ್ಠ ನರೇಂದ್ರ ಶರ್ಮನ ಮೊಬೈಲ್‌ ನಂಬರ್‌ ಅನ್ನೂ ನೀಡಿ.

Abhiman said...

"I used to believe ASTROLOGY as a science...!!.but i wont think like an IDIOT NARENDRA SWAMY thinks...!!.even i wont watch any shows like that because i GROWN UP in such FAMILY environment...!!. even i am creating awareness...!!.and atleast Every parent should create awareness to their family or atleast to their childrens...!!.
Instead of FOLLOWING IDIOT Narendra swamy...!!. and Few IDIOTS of TV9, SUVARNA, KASTURI,Z-KANNADA, any many...."

Anonymous said...

ಬ್ರಹ್ಮಾಂಡದ ನರೇಂದ್ರ ಶರ್ಮ ಬಾಯಿಹರುಕುತನದಿಂದ ಬೆತ್ತಲಾಘುತಿದ್ದಾನೆ. ಬೇರೆ ಚಾನೆಲ್ಲುಗಳ ಇಂತಹ ಕಾರ್ಯಕ್ರಮಗಳಲ್ಲೂ ಜ್ಯೋತಿಷ್ಯದ ಹೆಸರಲ್ಲಿ ಮುಗ್ದರನ್ನು ಹಾದಿ ತಪ್ಪಿಸುವ, ಭಯಭೀತರನ್ನಾಗಿಸುವ ಹುನ್ನಾರಗಳು ನಡೆಯುತ್ತಿವೆ. ಇಂತಹ noncense ಕಾರ್ಯಕ್ರಮಗಳ ನಿರ್ಭಂಧಿಸುವ ಕೆಲಸ ಆಗಭೇಕಿದೆ. ಸಂಪಾದಕೀಯದ ಫಾಲೋಫ್ ಚೆನ್ನಾಗಿದೆ.

Chetu said...

ಈ ಮನುಷ್ಯನನ್ನು ನೋಡಿದರೆ, ಇವನ ಮಾತುಗಳನ್ನ ಕೇಳಿದರೆ ಎಂಥವರಿಗೂ ಅಸಹ್ಯ ಬರುತ್ತದೆ. ಆದರೆ ದುರಂತವೆಂದರೆ ಮಾಮೂಲಿ ಜನ ಬಿಡಿ ಪ್ರಜ್ಞಾವಂತರಂತೆ ಕಾಣುವ ಎಷ್ಟೋ ಜನರು ಇವನನ್ನು ಭಕ್ತಿಯಿಂದ ಕಾಣುವುದು! ಇವನು ಮತ್ತು ಇಂಥವರ ಬಗ್ಗೆ ದನಿ ಎತ್ತಿರುವ 'ಸಂಪಾದಕೀಯ'ದ ಪ್ರಯತ್ನ ನಿಜಕ್ಕೂ ಶ್ಲಾಗನಿಯ.
ಇವನನ್ನು ಹಾಗೇ ಬಿಟ್ಟರೆ ಅಂಕುಶವಿಲ್ಲದೆ ಬೆಳೆಯುತ್ತಾನೆ. ಮಾಳವಿಕರಂಥವರು ತಮ್ಮ ಚಾನೆಲ್ನಲ್ಲಿ ಇಂಥಹ ಸೋಗಲಾಡಿಗಳಿಗೆ ಜಾಗ ಕೊಟ್ಟಿರುವುದು ಖಂಡನೀಯ. ಸಮಸ್ಯೆಯೆಂದರೆ ಇವನ ವಿರುದ್ದ ಸಾಮಾನ್ಯ ಜನಗಳಲ್ಲಿ ಅರಿವು ಮೂಡಿಸಲು ಇರುವ ಮಾಧ್ಯಮದ ಕೊರತೆ, ಏಕೆಂದರೆ ಎಲ್ಲ ಚಾನೆಲ್ಗಳು ಇದರಲ್ಲಿ ಸಮಾನ ಅಪರಾದಿಗಳು.
ನಾವು ಮಾಡಬಹುದಾದ ಕೆಲ ಪ್ರಯತ್ನಗಳೆಂದರೆ ದಿನಪತ್ರಿಕೆಗಳಿಗೆ ಪತ್ರದ ಮೂಲಕ ಚರ್ಚೆಗಳನ್ನ ಹುಟ್ಟು ಹಾಕಬಹುದು. ಮಾನವೀಯ ಮೌಲ್ಯಗಳಿರುವ ಪ್ರಸಿದ್ದರಿಂದ ಸಹಾಯ ಪಡೆಯಬಹುದು. ಈ ಮೂಲಕ ಆಸೆಬುರುಕ ಚಾನೆಲ್ಗಳ ಮೇಲೆ ಒತ್ತಡ ಹೇರಬಹುದು. ನನ್ನ ಮನವಿಯೆಂದರೆ ಆದಷ್ಟು ಜನ ಇದರಲ್ಲಿ ಭಾಗವಹಿಸಿ ಮತ್ತು ಈ ಪಿಡುಗಿನ, ಪೀಡೆಗಳ ವಿರುದ್ದ ದನಿಯೆತ್ತಿರಿ. ಇಂಥವು ಮಾರಕವಗಬಲ್ಲದು.

-ಚೇತನ್

Anonymous said...

ಸರ್ ನಿಮ್ಮ ಕಳಕಳಿ ನಮಗೆ ಅರ್ಥವಾಗುತ್ತದೆ. ಆದರೆ ಈ ಟಿವಿ ಮಾಧ್ಯಮಗಳು ಎಂದು ಅರ್ಥ ಮಾಡಿಕೊಳ್ಳುತ್ತವು ಅದು ಅ ಅಧಿ ಶಕ್ತಿ ಜಗನ್ಮಾತೆಗೆ ಮಾತ್ರ ಗೊತ್ತು. ನಮ್ಮ ಜನಗಳು ಈ ಪುಣ್ಯಾತ್ಮ ಹೇಳುವುದೆಲ್ಲ ನಿಜ ಎಂದು ನಂಬುತ್ತಾರಲ್ಲ ಅದಕ್ಕೆ ಅವನ ಪ್ರವರ ನಿತ್ಯ ತೋರಿಸುತ್ತಿದ್ದಾನೆ. ನಮ್ಮ ಜನಗಳು ಸ್ವಲ್ಪ ಜಾಗರುಕರಾಗಿ ಅವನ ಬಗ್ಗೆ ಅಸಡ್ಡೆ ಮಾಡಿದರೆ ಅವನ ದರ್ಶನಕ್ಕೆ ಒಂದು ಮುಕ್ತಾಯ ಹೇಳಬಹುದು. ಅದರ ಪ್ರಯತ್ನ ಎಂಬಂತೆ ನಿಮ್ಮ ಈ ಲೇಕನ ನಮ್ಮ ಕನ್ನಡಿಗರ ಕಣ್ಣು ತೆರೆಸುವುಲ್ಲಿ ಅಡಿಗಲ್ಲು ಇಟ್ಟಂತೆ. ದನ್ಯವಾದಗಳು.

Anonymous said...

Tv chnls should organize a live show of debate. this should be between narendra babu and any sensible citizen of karnataka. then audience will judge the "erudition" of this narendra babu sharma!. we need not expect a scientist should come and argue with narendra babu. because it is not worth for scientists to invest their precious time with this fellow.

Anonymous said...

Kandithavagivu intha kapatarannu bidbaradu...Private TV chanel galu tamma samajika baddatheyannu kaapadbeku...Prakasha

Anonymous said...

ಟಿ.ವಿ. ಚಾನೆಲ್ ಗಳ ಟಿ.ಆರ್.ಪಿ, ಜಾಹಿರಾತು ಹಪಾಹಪಿಯೇ ಬೀದಿಯಲ್ಲಿ ಬಿದ್ದಿರಬೇಕಾದ ಜ್ಯೋತಿಷಿಗಳು ಟಿ.ವಿ. ಪರದೆಯಲ್ಲಿ ಮೆರೆದಾಡಲು ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೇವಲ ನರೇಂದ್ರ ಶರ್ಮ ಮಾತ್ರವಲ್ಲ ವೈಜ್ಞಾನಿಕ(?) ಜ್ಯೋತಿಷ್ಯದ ಹೆಸರಲ್ಲಿ ಎಲ್ಲಾ ಚಾನೆಲ್ ಗಳಲ್ಲೂ ಒಬ್ಬೊಬ್ಬ ಮೂಢ ಅವತರಿಸಿದ್ದಾನೆ. ಸ್ಟುಡಿಯೋ ಒಳಗೆ ಕುಳಿತ ಜ್ಯೋತಿಷಿ ಬೋಂಗು ಬಿಡುತ್ತಿದ್ದರೆ ನ್ಯೂಸ್ ರೂಮಿನಲ್ಲಿ ಕುಳಿತ ಹುಡುಗರು ನಗುತ್ತಿರುತ್ತಾರೆ. ನೀವು ಹೇಳಿದಂತೆ ಖಂಡಿತವಾಗಿ ಚಾನೆಲ್ ಗಳ ಮೌಢ್ಯ ಬಿತ್ತನೆ ಕಾರ್ಯಕ್ಕೆ ಬ್ರೇಕ್ ಹಾಕುವ ಅಗತ್ಯವಿದೆ. ಇದಕ್ಕಾಗಿ ಒತ್ತಡವೊಂದೇ ತಂತ್ರ. ಮುಖ್ಯವಾಗಿ ಚಾನೆಲ್ ಗಳ ಜ್ಯೋತಿಷ್ಯ ಕಾರ್ಯಕ್ರಮಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಬೇಕು. ಚರ್ಚೆಗಳು ನಡೆಯಬೇಕು. ಆ ಮೂಲಕ ಚಾನೆಲ್ ಗಳ ಕಾರ್ಯಕ್ರಮ ಮುಖ್ಯಸ್ಥರ ಮೇಲೆ ಒತ್ತಡ ಹೇರಬೇಕು. ಅವರನ್ನೂ ಚರ್ಚೆಗೆ ಎಳೆದು ತರಬೇಕು. ಸೂಪರ್ ಮೂನ್, ಸುನಾಮಿ ಸೇರಿದಂತೆ ಯಾವ ವಿಷಯದಲ್ಲಿ ಜ್ಯೋತಿಷಿಗಳು ಕರಾಕುವಕ್ಕಾಗಿ ಮಾತನಾಡಿದ್ದಾರೆ. ಆ ವಿಷಯದಲ್ಲಿ ಅವರಿಗಿರುವ ಜ್ಞಾನವೇನು ಎಂಬ ಬಗ್ಗೆಯೂ ಅದೇ ಟಿ.ವಿ. ಚಾನೆಲ್ ಗಳಲ್ಲಿ, ಪ್ಯಾನಲ್ ಡಿಸ್ಕಷನ್ ಗಳಾಗಬೇಕು. ಇದಿಷ್ಟು ನನಗನ್ನಿಸಿದ್ದು. ಇನ್ನು ಸಂಪಾದಕೀಯದ ಯಾವುದೇ ನಿಲುವಿಗೂ ನನ್ನ ಬೆಂಬಲವಿದೆ.
ಇಂತಿ.
ಓರ್ವ ಓದುಗ

Anonymous said...

ನಮ್ಮ ಯಾವುದೇ ಧಾರ್ಮಿಕ ಗ್ರಂಥಗಳು ಕೂಡ ದೇವರನ್ನು ಈಪರಿ ದೂಷಣೆಗೆ ಒಳಪಡಿಸಿರಲಿಕ್ಕಿಲ್ಲ!
"ಜಗನ್ಮಾತೆ ಭೂಮಿಗೆ ಇಳಿಯುವುದರಿಂದ ಪ್ರಳಯ! ಜೀವ ಸಂಕುಲದ ನಾಶ!"
ಜಗನ್ಮಾತೆ ಇರುವುದು ಭಕ್ತರ ರಕ್ಷಣೆಗೋ ಅಥವಾ ಅವರ ಜೀವ ತೆಗೆಯಲೋ?
ನರೇಂದ್ರ ಶರ್ಮ ಅವರ ದೃಷ್ಟಿಯಲ್ಲಿ ಜಗನ್ಮತೆಯೇನು ರಾಕ್ಷಸಿಯೇ? ಪೆಡಂಭೂತವೆ? ಅಥವಾ ಪಿಡುಗೇ?
ದೇವರು ಇರುವುದೇ (ಇರುವುದೇ ಆದಲ್ಲಿ) ಜೀವ ಸಂಕುಲದ ರಕ್ಷಣೆಗೆ ಎಂದು 'ನಂಬುವ' ಸಂಸ್ಕೃತಿ, ಸಂಪ್ರದಾಯ ನಮ್ಮದು. ಈ ಶರ್ಮ ಆ ದೇವರಿಂದಲೇ ಜಗತ್ತಿನ ವಿನಾಶ ಎನ್ನುತ್ತಾರೆ. ಇದು ಯಾವ ರೀತಿಯ Logic ಶರ್ಮಾ ರವರೆ?
ಅಥವಾ ನೀವು ದೇವರನ್ನೇ (ಜಗನ್ಮಾತೆ ಯನ್ನೇ) ಮೀರಿಸುವ 'ದೇವರಾಗಲು' ಹೊರಟಿದ್ದೀರಾ?

Anonymous said...

nammaa tv channel galige budhi barola, e swamijigala , bolage mathanadodhana neelisola.

Anonymous said...

ನೀವು ಹೇಳೋದೇನೋ ಸರಿ. ಆದರೆ, ಟಿಆರ್ ಪಿಗಾಗಿ ಟಿವಿಗಳು ಇಂಥ ಕಾರ್ಯಕ್ರಮಗಳನ್ನೇ ಜಾಸ್ತಿ ನೆಚ್ಚಿಕೊಂಡಿವೆ. ಇಂಥ ಬೊಗಳೆ ಕಾರ್ಯಕ್ರಮಗಳನ್ನು ಜಾಸ್ತಿ ನೋಡೋದೇ ಹೆಂಗಸರು. ಹಾಗಾಗಿ, ಟಿವಿ ಮೇಲೆ ನಿಷೇಧಕ್ಕಿಂಥ ಇಂಥ ಹೊಲಸು ಕಾರ್ಯಕ್ರಮಗಳು ಮನೆಗೆ ಹೊಲಸು ಅಂಥ ಜನರೇ ಎಚ್ಚರಿಕೆವಹಿಸಬೇಕು
&ಅಭಿ

B.N. said...

Astrologers thrive because of the gullible class in our society irrespective of their educational/ illiteracy background. To add fuel to the fire we have some rotten channels who have nothing but such nonsense to telecast. Unless our people get proper perspective withregard to these Bogale/ Bogus astrologers these humbug class of professionals thrive &command respect from the masses.For that matter even if Swami NItyananda openly performs sexual acts there are followers who find devine message in such Sexual massages.Its time some criminal procedure code is applied to such cheats .These acts are worse than 420.

ಸುಬ್ರಮಣ್ಯ ಮಾಚಿಕೊಪ್ಪ said...

ಫಲಜ್ಯೋತಿಷ್ಯ ಒಂದು ಲೊಳಲೊಟ್ಟೆ!!!!
ಋಷಿ ಮುನಿಗಳು ಹೇಳಿದ್ದು ಎಂದು ತಿಳಿದುಕೊಂಡು ಹೆಚ್ಚಿನ ಜನ ನಂಬುತ್ತಾರೆ!! ಆದರೆ ಈ ಫಲಜ್ಯೋತಿಷ್ಯ ಪಶ್ಚಿಮದಿಂದ ಆಮದಾದ ಕಳಪೆ ಸರಕು!!! ಇದರ ಬಗ್ಗೆ ಪುರುಸೊತ್ತಾದಾಗ ಒಂದು ಬ್ಲಾಗ್ ಬರೆಯೋಣವೆಂದು ಅಂದುಕೊಂಡಿದ್ದೇನೆ.

ಇಂಗಿತ said...

ಏನೇ ಆದರೂ ಸಾಮಾನ್ಯ ಜನರು ಇದನ್ನು ನೋಡುವುದು ನಿಲ್ಲಿಸಬೇಕು.

ರೋಹಿಣಿ said...

ನನ್ನ post ಸ್ವಲ್ಪ ಉದ್ದವಾಗಿರತ್ತೆ, ದಯವಿಟ್ಟು adjust ಮಾಡ್ಕೊಳ್ಳಿ.
ಇಲ್ಲಿ ನಾನು 2 situation ನ ಹೇಳೊಕೆ ಇಷ್ಟಪಡ್ತೀನಿ. 1> ಇಬ್ಬರು ಗೃಹಿಣಿಯರಿಗೆ, ಈ ಕಾರ್ಯಕ್ರಮ ನೊಡೊದು ನಿಲ್ಸಿ ಅ೦ತ ಕನ್ನಡದಲ್ಲೆ ಸ್ವಛ್ಛವಾಗಿ ಹೇಳಿದಾಗ, ಅವರು ಇದರಲ್ಲಿ ಇರೊ ಲೋಪ ದೋಷವನ್ನು ಅರ್ಥಮಾಡಿಕೊ೦ಡು, ನೊಡೊದನ್ನ ನಿಲ್ಸಿದಾರೆ. 2> ಒಬ್ಬ ಭಾರಿ ಓದಿದ ಮಹಾಶಯರೊಬ್ಬರು (ನನ್ನ ಪರಿಚಯಸ್ಥರು), HAL ನಲ್ಲಿ ಒ೦ದು ಗೌರವಾನ್ವಿತ ಹುದ್ದೆಯಲ್ಲಿರೊರು, ಇದರ ಬಗ್ಗೆ ಹೇಳಿದಾಗ, ಈ ಕಾರ್ಯಕ್ರಮದಲ್ಲಿ ಹೇಳೋದೆಲ್ಲ ಸರಿ ಇದೆ, ಸುನಾಮಿ ಆಗಿದ್ದು ಹಾವು ತಿನ್ನೊದ್ರಿ೦ದಾನೆ ಅ೦ತ ಮಹಾ ವಿತ೦ಡ ವಾದ ನನ್ನ ಮು೦ದೆ ಇಟ್ಟರು. ಇದನ್ನು ಕೇಳಿದ ನನಗು ಮತ್ತು ನನ್ನ ಅಕ್ಕನಿಗೂ ಸಿಕ್ಕಿದ್ದರಲ್ಲಿ ಹೊಡೊಕೊಳ್ಳೊಹಾಗೆ ಆಯ್ತು. ಮೇಲೆ ಹೇಳಿದ ಇಬ್ಬರು ಗೃಹಿಣಿಯರು, ನನ್ನ ಅಜ್ಜಿ ಮತ್ತು ಅತ್ತೆ. ಇವರು ಭಾರಿ ಭಾರಿ ಓದಿದೊರೆನಲ್ಲ, ಆದರೂ, ಅವರಿಗೆ, ಈ ಕಾರ್ಯಕ್ರಮದಲ್ಲಿರುವ ದುರುದ್ದೇಶ ಅರ್ಥವಾಗಿ, ಅವರು ನೊಡೊದನ್ನ ನಿಲ್ಸಿದಾರೆ. ಆದರೆ ಪ್ರಜ್ನಾವ೦ತರು ಅನ್ನಿಸಿಕೊ೦ಡವರಿಗೆ, ತಲೇಲಿ ಬುದ್ದಿ ಇದ್ಯೊ, ಲದ್ದಿ ಇದ್ಯೊ ಸ್ವತಃ ಆ ಜಗನ್ಮಾತೆಗೂ ತಿಳಿತಿಲ್ಲ!!!
ಜ್ಯೊತಿಷ್ಯ ಶಾಸ್ತ್ರ ಅನ್ನೊದು, ಒ೦ದು Science. ಇದನ್ನು ಭಾರತದ ಹಲವಾರು ಸ೦ಸ್ಕೃತ ವಿಶ್ವವಿದ್ಯಾಲಯಗಳಲ್ಲಿ ಕಲಿಸಿಕೊಟ್ಟು ಅದಕ್ಕೆ ಒ೦ದು ಡಿಗ್ರಿ certificate ಕೊಡಲಾಗುತ್ತದೆ. ನಮ್ಮ ಈ ಚಾನೆಲ್ ಜ್ಯೊತಿಷಿಗಳು ಯಾವ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಪಡೆದುಕೊ೦ಡಿದ್ದರೆ, ಅ೦ತ ತಿಳಿಸಿದರೆ, ಉತ್ತಮ. ಆಗ ಇವರುಗಳಿಗೆ, ಸತ್ಯವಾಗಲು ಜ್ಯೊತಿಶಾಸ್ತ್ರ ಗೊತ್ತೊ, ಇಲ್ಲ TRP ಗೊಸ್ಕರ ಸುಳ್ಳಿನ ಕ೦ತೆಯನ್ನು ಕಟ್ಟುತ್ತಿದ್ದಾರೊ ಅ೦ತ ಗೊತ್ತಾಗತ್ತೆ.

ಎಸ್.ಬಿ said...

ಹಿರಿಯರಿಗೆ ಧನ್ಯವಾದಗಳು......

ತಾವು ಒಂದು ಮಹತ್ತರ ಕಾರ್ಯದಲ್ಲಿ ತೊಡಗಿದ್ದೀರಿ... ತುಂಬಾ ಸಂತೋಷ...

ಇಂತಹ ಕಮಂಗಿಗಳ ವಿರುದ್ಧ ಒಂದು ದೊಡ್ಡ ಆಂದೋಲನವೇ ಆಗಬೇಕಿದೆ.

ಇನ್ನೊಂದು ವಿಷಯ ತಮ್ಮ ಗಮನಕ್ಕೂ ಬಂದಿರಬಹುದು.ಇಂತಹ ಅಡ್ಡಕಸಬಿಗಳು ಟಿ.ವಿ.ಯಲ್ಲಿ ಬಂದದ್ದಕ್ಕಾಗಿ ಮಾತ್ರ ನಮಗೆ ಇಂತಹವರ "ಪರಿಚಯ" ಸಿಗುತ್ತಿದೆ.

ಆದರೆ ಇಂತವರು ಇಂದು ಗಲ್ಲಿ ಗಲ್ಲಿಗಳಲ್ಲಿ ಮನೆ ಮಾಡಿಕೊಂಡಿದ್ದಾರೆ.

ಮನೆ ಮನೆಗೆ ಹೋಗಿ ಪೂಜೆಯ ನೆಪದಲ್ಲಿ,ಹೋಮ,ಹವನದ ನೆಪದಲ್ಲಿ, ಜನರಿಗೆ ಮಂಕುಬೂದಿ ಎರಚುವವರು ಕಡಿಮೆಯಿಲ್ಲ.(ಕಣ್ಣಾರೆ ಕಂದಿದ್ದೇನೆ,ನನ್ನ ಮಿತ್ರರಲ್ಲೂ ಇದ್ದಾರೆ.ಅವರೇ ಹೇಳಿದ್ದು ಇದು ಅನಿವಾರ್ಯ,ಸರಿಯಾಗಿ ಪೂಜೆ ಮಾಡಿದರೆ,ಹೇಳಿದರೆ ಯಾರಿಗೂ ಬೇಡ ಎಲ್ಲವೂ ಅರ್ಜೆಂಟ ಆಗ್ಬೇಕು ಅದಕ್ಕೇ ನಾವು ಹೀಗೆ....ಯಾರು ಸರಿ..??? ಜನ ಮರುಳೋ ಜಾತ್ರೆ ಮರುಳೋ.......???!!!!)

ನಾನು ಇನ್ನೂ ಕೆಲವು ಅಪರೂಪದ ವಿದ್ವಾಂಸರನ್ನೂ,ಜ್ಯೋತಿಷಿಗಳನ್ನೂ ನೋಡಿದ್ದೇನೆ.ಆದರೆ ಅವರ್ಯಾರಿಗೂ ಪ್ರಚಾರದ ಆಸೆಯಿಲ್ಲ.ಅಗತ್ಯವೂ ಇಲ್ಲ."ವಿದ್ಯಾ ದದಾತಿ ವಿನಯಮ್" ಅನ್ನುವ ಉಕ್ತಿಗೆ ಅವರು ಅರ್ಹರು.ಅಂತಹ ಅನೇಕರಿಂದ ನಾನೂ ಸಾಕಷ್ಟು ಕಲಿತಿದ್ದೇನೆ.

ತಮ್ಮಲ್ಲಿ ಒಂದು ವಿನಂತಿ....ಸೃಷ್ಠಿಯಲ್ಲಿ ಕೆಟ್ಟವರೂ ಒಳ್ಳೆಯವರೂ ಇದ್ದಾರೆ.ಹಾಗೆಯೇ ಜ್ಯೋತಿಷಿಗಳೆಲ್ಲ ಕೆಟ್ಟವರಲ್ಲ,ಇಂತಹ ತಲೆಹಿಡುಕರನ್ನು ದಯವಿಟ್ಟು ಜ್ಯೋತಿಷಿಗಳೆಂದು ಸಂಭೋದಿಸಬೇಡಿ.ಅದು ಶಾಸ್ತ್ರಕ್ಕೆ ಮಾಡಿದ ಅವಮಾನ...ಎಂದು ನನ್ನ ಭಾವನೆ...

ನನ್ನಲ್ಲಿ ಒಂದು ಅನುಮಾನ....ಇಂತಹವರನ್ನು ಚಾನೆಲ್ ಇಂದ ಓಡಿಸಬಹುದು...ಕೊನೆಗೆ.....????

ಮತ್ತೆ ನಮ್ಮ ಬೆಂಗಳೂರಿನಲ್ಲಿರುವ ಹಲವು ಪೂಜಾರಿಗಳ ಕಥೆ.....???

ಪ್ರೀತಿಯಿಂದ......... ಎಸ್.ಬಿ

Anonymous said...

@ಸುಬ್ರಮಣ್ಯ
ಪ್ರತಿಯೊಂದಕ್ಕೂ ಪಶ್ಚಿಮವನ್ನು ದೂಷಿಸುವುದು ಸರಿಯಲ್ಲ. ಮಧ್ಯಯುಗದಲ್ಲಿ ಜಾತಿವಾದ ಹಾಗೂ ಮೂಢನಂಬಿಕೆಗಳಲ್ಲಿ ಹೂತುಹೋಗಿದ್ದ ನಮಗೆ ವೈಚಾರಿಕತೆಯ ಗಾಳಿ ಬೀಸಿದ್ದೇ ಪಶ್ಚಿಮದಲ್ಲಿ ಪ್ರಾರಂಭವಾದ ವೈಜ್ಞಾನಿಕ ಕ್ರಾಂತಿಯಿಂದಲ್ಲವೇ? ಯಾವುದನ್ನು ತೆಗೆದುಕೊಳ್ಳಬೇಕು ಅಥವಾ ಬಿಡಬೇಕು ಎಂಬುದು ನಮ್ಮ ಕೈಯಲ್ಲಿದೆ.
@ಸಂಪಾದಕೀಯ
ಒಳ್ಳೆಯ ಕೆಲಸವನ್ನು ಮಾಡುತ್ತಿದ್ದೀರಿ. ಇಂತಹ ಕಾರ್ಯಕ್ರಮವನ್ನು ನಿಲ್ಲಿಸಲು ಎರಡು ಮಾರ್ಗಗಳಿವೆ. ಒಂದು- ಈ ಚಾನಲ್ ಹಾಗೂ ನರೇಂದ್ರ ಶರ್ಮ ವಿರುದ್ಧ ಸ್ತ್ರೀಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕಾಗಿ ಹಾಗೂ ಜನರಲ್ಲಿ ಅನಗತ್ಯ ಭೀತಿ ಮೂಡಿಸಿದ್ದಾಕ್ಕಾಗಿ ನ್ಯಾಯಾಲದಲ್ಲಿ ಮೊಕದ್ದಮೆ ಹೂಡುವುದು.
ಎರಡು- ಬೀದಿಗಿಳಿದು ಚಾನಲ್ ವಿರುದ್ಧ ಪ್ರತಿಭಟನೆ ಮಾಡುವುದು.

Anonymous said...

sign campaign or online petition olledu anisutte .............or shall v take a help of rationalist Narendra Nayk ..........? he will sure help in this regard...... or is there any advocate takes an suo motto action based on the reports published in newspapers on `Moudyada deepa.............'

Anonymous said...

ಎಚ್. ನರಸಿಂಹಯ್ಯ ಅಂತಹವರು ಈಗ ಇದ್ದಿರಬೇಕಿತ್ತು.

ಸಿಮೆಂಟು ಮರಳಿನ ಮಧ್ಯೆ said...

ಏನ್ ಹುಚ್ಚ ಅದಾನ್ರೀ ಇವನು..?
ಮೆಂಟಲ್ ಇದಾನ...
ಅಶೋಕ್ ಪೈ ಹತ್ರ ತೋರ್ಸ್ ಬೇಕ್ರಿ....

Anonymous said...

We can send our feelings about narendra swamy & his bruhat brhamanda to the following email id.

feedbackzeekannada@zeenetwork.com

parthasarathi said...

ಝೀ ಟೀ ವಿ ಯವರಿಗೆ ಸಾಮಾಜಿಕ ಕಳಕಳಿ ಇದ್ದರೆ ಈ ಬೇಕುಪ್ಪ ನನ್ನ ಆಚೆಗೆ ಹಾಕಲಿ.ಒಂದೊಂದು ಎಪಿಸೋಡ್ ಗೆ ಸಾವಿರಾರು ಕೊಟ್ಟು ಸಾಮಾಜಿಕ ಸ್ವಾಸ್ಥ್ಯ ವನ್ನ ಹಾಳು ಮಾಡ್ತ ಇದಾರೆ.ಒಂದು ವೇಳೆ ಅವರು ಆ ಕೆಲಸ ಮಾಡಲಿಲ್ಲ ಅಂದ್ರೆ ನಾವು ಆ ಕೆಲಸ ಮಾಡೋಣ.ಜನ ಬೀದಿಗಿಳಿದರೆ ರಾಷ್ಟ್ರದ ನಾಯಕರೆ ಸೀಟು ಬಿಟ್ಟು ಕೆಳಗಿಳಿಯುತ್ತಿರುವಾಗ ಇವನ್ಯಾವ ಸೊಪ್ಪು,ಇವನದ್ಯಾವ ಸಿಂಹಾ ಸನ.

PARAANJAPE K.N. said...

ದೃಶ್ಯಮಾಧ್ಯಮದಲ್ಲಿ ಢೋ೦ಗಿ ಜ್ಯೋತಿಷಿಗಳ ಹಾವಳಿ ಹೆಚ್ಚಿದೆ. ಈ ಬ್ರಹ್ಮಾ೦ಡ ವ್ಯಕ್ತಿಯನ್ನು ಕಳೆದ ವಾರ ನಾನು ಖುದ್ದು ಕ೦ಡಿದ್ದೆ.( ಅಚಾನಕ್ ಆಗಿ ) ಈ ಬಗ್ಗೆ ನನ್ನ ಬ್ಲಾಗ್ ನಲ್ಲಿ ಒ೦ದು ಲೇಖನ ಹಾಕಿದ್ದೇನೆ. ನೀವೊಮ್ಮೆ ಓದಿ.
http://nirpars.blogspot.com/2011/03/blog-post_22.html

ಅರಕಲಗೂಡುಜಯಕುಮಾರ್ said...

@ಸಂಪಾದಕೀಯ, ಮಾರ್ಟಿನ್ ಲೂಥರ್ ಹೇಳಿರುವಂತೆ "ಸಮಾಜದ ಅಶಾಂತಿಗೆ ದುರ್ಜನರ ದುಷ್ಟತನಕ್ಕಿಂತ, ಸಜ್ಜನರ ಮೌನವೇ ಅತ್ಯಂತ ಅಪಾಯಕಾರಿ" ಯಾಗಿದೆ ಆದುದ್ದರಿಂದ ಛಾನಲ್ ಗಳಲ್ಲಿ ಜ್ಯೋತಿಷಿಗಳ ಮೂಲಕ ಬಿತ್ತಲಾಗುತ್ತಿರುವ ಮೌಡ್ಯ ಅಶಾಂತಿಗೆ ಕಾರಣವಾಗಿದೆ. ಹೊಣೆ ಮರೆತು ಮಾತನಾಡುವ ಜ್ಯೋತಿಷಿಗಳು ಮತ್ತು ಛಾನಲ್ ನಲ್ಲಿ ಪ್ರಸಾರಕ್ಕೆ ಅವಕಾಶ ಮಾಡುವವರ ವಿರುದ್ದವೂ ಪ್ರಕರಣಗಳು ದಾಖಲಾಗಬೇಕಿದೆ. ಮಹಿಳೆಯರನ್ನು ತುಚ್ಚವಾಗಿ ನಿಂದಿಸುವ ಮೂಲಕ ಅವಮಾನಿಸುವ ನರೇಂದ್ರಸ್ವಾಮಿ ಮತ್ತು ಇತರೆ ಟಿವಿ ಜ್ಯೋತಿಷಿಗಳು ಹಾಗೂ ನಿರ್ವಾಹಕರುಗಳ ವಿರುದ್ದ ರಾಜ್ಯದ ಪ್ರತೀ ಊರುಗಳ ಪೋಲಸ್ ಠಾಣೆಗಳಲ್ಲಿ ಸಮಾನ ಮನಸ್ಕ ಸಾರ್ವಜನಿಕರು ವೈಯುಕ್ತಿಕ ದೂರು ದಾಖಲು ಮಾಡಿದ್ದಲ್ಲಿ ಸಮಾಜದ ಸ್ವಾಸ್ಥ್ಯ ಉಳಿಯಬಹುದು.ಬೀದಿಗಿಳಿದು ಪ್ರತಿಭಟನೆ ಮಾಡಿದರೆ ವಿನಾಕಾರಣ ಅವರ ಕಾರ್ಯಕ್ರಮಕ್ಕೆ ಛಾನಲ್ ಗೆ ಪ್ರಚಾರ ಸಿಗುತ್ತದಲ್ಲವೇ ?

Anonymous said...

ಮೊನ್ನೆ ಹೀಗೆ ಬ್ರಹ್ಮಾಂಡದ ದಂಡಪಿಂಡನ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಕೇಳಿದರು: ನೀವು ಯಾವಾಗ್ಲೂ ನ್ಯೇಟಿ ಹಾಕೋ ಹೆಂಗಸರನ್ನ ಬಯ್ಯುತ್ತಿರುತ್ತೀರಲ್ಲಾ? ನಿಮಗ್ಯಾಕೆ ನಮ್ಮ ನ್ಐಟಿ ಮೇಲೆ ಕಣ್ಣು?
ಅದಕ್ಕೆ ದಂಡ ಪಿಂಡ ತನ್ನ ಸಮಸ್ತ ಬ್ರಹ್ಮಾಂಡವನ್ನೂ ಕುಲುಕಿಸುತ್ತಾ, ಬುಸ ಬುಸನೆ ನಕ್ಕು ಹೇಳ್ತು: ನಿಮ್ಮ ಮೇಲೆ ನಂಗೇನೂ ಕೋಪ ಇಲ್ಲ...ಆದರೆ ನ್ಐಟಿ ನೋಡಕ್ಕೆ ಚೆನ್ನಾಗಿರಲ್ಲ...ಅಷ್ಟೇ...!
ಇವನಿಗೆ ಯಾವುದರಲ್ಲಿ ಹೊಡೆಯಬೇಕು?
-ಉಲ್ಲಾಸ

Anonymous said...

i agree with the the other readers that we can put pressure on the channels to stop telecasting such programs by sms and letters .... sampadakeeya is doing a good job and i think it should continue the same

umesh desai said...

sir we have to protest against tv channels. whether zee tv owner knows about such a senseless programme aired in his channel. if not we should spread his awareness, and if he is doing for TRP a campaign should be arranged so that advt. agencies should stop airing ads on this channel.
one simple thing we can do --we should throw stones in mr. sharmas public gatherings.

umeshdesai

Anonymous said...

jyotishigalu yava chanal galalli heliddaro,adara sathyasathyateya javabdari aaya chanalgaladdagirabeku.

Anonymous said...

nange sharmandu jyothi programgintha adu ondu comedy program thara basavagthade....dinesh

manju said...

Bareyorella Journalists, Barovella Newspaper and Channels.. Haage Burude bidoru, Tale Buda Ilde Mathanadoru ella Kalakkoo Irtaare.. Namma Janara Bauddika Matta Anthaddu..

Anonymous said...

ikralaa..odeeralaa..

Ravishankar Haranath said...

ಅವಿನಶ ಕನ್ನಮ್ಮನವರ್ ಅವರ ಅಭಿಪ್ರಾಯ ನನಗೂ ಸರಿಯೆನಿಸುತ್ತದೆ. ನಮ್ಮಲ್ಲೂ ನಾಗೇಶ್ ಹೆಗಡೆಯವರಂತಹ ಹಲವುಮಂದಿ ವೈಜ್ಞಾನಿಕ ವಿಚಾರವಂತರಿದ್ದಾರೆ. ಅವರ ಸಮ್ಮುಖದಲ್ಲೇ ನರೇಂದ್ರಶರ್ಮರಂತವರಿಗೆ ಪಾಠಕಲಿಸಬೇಕು.

ಇನ್ನೊಂದು ಭಿನ್ನಹ. ನಾವು ಪ್ರತಿಕ್ರಿಯಿಸುವಾಗ "Anonymous" ಆಗಬೇಕಿಲ್ಲ. ನಿಜವಾಗಿಯೂ ಸಾಮಾಜಿಕ ಕಾಳಜಿ ಇದ್ದರೆ ಗೌಪ್ಯತೆ ಏಕೆ?! ದಯವಿಟ್ಟು ಒಮ್ಮೆ ಯೋಚಿಸಬೇಕು.

Anonymous said...

MOST OF CHANNELS, NEWS PAPERS OWNED BY NON KANNADIGAS AND IMPORTANTLY MOST OF THEM CANT READ KANNADA AND KNOWS WHAT WAS TELECASTED & PRINTED. Tha kannadiga slaves who works in these TV/papers are the real culprit or owners ?
You ppl knew the damage done by Vijay karnataka

Anonymous said...

ಸಂಪಾದಕೀಯದವರೆ, ಈ ವಾರದ ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ ರವಿ ಬೆಳಗೆರೆ ಸಂಪಾದಕೀಯ ಬ್ಲಾಗ್ ಪ್ರಸ್ತಾಪಿಸಿ ಅವರ ಸಂಪಾದಕೀಯ ಬರೆದಿದ್ದಾರೆ. ನೀವು ಗಮನಿಸಲಿಲ್ಲವೇ?

Narayan said...

ಯಾವೊನೋ ಓಟ್ಲ ಜ್ಯೋತಿಷಿ ಕತ್ತೊರಗೂ ತಿಂದು ಎನೇನೋ ಡರ್ರಂಬುರ್ರುಂ ಬುರುಡೆ ಬಿಡ್ತಾನಲ್ರೀ... ಆತನ ಪಕ್ಕ ಕೂತ್ಕೊಳ್ಳೋ ನಿರೂಪಕಿ ಕೈಲ್ಲಿ ಮೆಡಿಕಲ್‌ ಟೇಪ್‌ ಕೊಡ್ರೀ... ಆತನ ಮೂತಿ ಮುಚ್ಚಕ್ಕೆ...

SHREE (ಶ್ರೀ) said...

ಒಲವೆ ಜೀವನ ಲೆಕ್ಕಾಚಾರ ಪಿಚ್ಚರಲ್ಲಿ ಇರುವುದು ಇದೇ ಸ್ವಾಮೀಜಿಯ ಕಥೆಯಂತೆ. ಈ ಕಥೆಯನ್ನಾದರೂ ಯಾರಾದರೂ ಸರಿಯಾಗಿ ತಿಳಿದುಕೊಂಡು ವಿವರಿಸಿ. ಅದು ಎಲ್ಲರಿಗೂ ತಿಳಿಯುವಂತೆ ಮಾಡಿ, ಅದರಿಂದ ಏನಾದರೂ ಉಪಯೋಗವಾಗಬಹುದು. ಈ ಕೆಲಸಕ್ಕೆ ನಮ್ಮಿಂದಾದ ಸಹಾಯ ನಾವು ಮಾಡೋಣ. ಪ್ರತಿಭಟನೆಗಳ ಜತೆಗೆ ಇದನ್ನೂ ಮಾಡಬೇಕು.

arpota said...

Sharmagantoo nacike, mana, maryade illa. innu Zee tv avarigoo illa anisutte. janara dari tappisuttiruv kuritu, prakarna dakhalisebeku.

-arpita, ganagvathi

ರೋಹಿಣಿ said...

@SHREE: howda!! nija na!!? haagadre, sariyada saakshi iddare, dayavittu tilisi.. adanna hidkondu, ivanige, huduki hodyana!!

srikanth said...

PLEASE INNU MUNDE INTHA KAPATHA JYOTHISI GALA KAI YINDA MUGDA JANARANNU RAKSHISI HAGU INTHA CHANEL GALANNU BAN MADI

ಕವಿಸ್ವರ,ಶಿಕಾರಿಪುರ said...

ಆರೋಗ್ಯವಂತ ಸಮಾಜದಲ್ಲಿ ಅನಗತ್ಯವಾಗಿ ನಾಗರೀಕ ಸಮುದಾಯವನ್ನು ಬೆಚ್ಚಿಬೀಳಿಸುವ ಕೃತ್ಯ ಎಸಗುವವರಿಗೆ ಭಯೋತ್ಪಾದಕರೆಂದು ಸಾಮಾನ್ಯವಾಗಿ ಕರೆಯಲಾಗುವುದು.. ಈ ನರೇಂದ್ರಶರ್ಮನಂತವನನ್ನೂ ಸಹ ಇಂತಹ ಭಯ-ಉತ್ಪಾದಕರ ಸಾಲಿಗೆ ಸೇರಿಸುವುದು ಸೂಕ್ತ, ಮೊದಲೇ ಸ್ವಾವಲಂಬಿ ಮನಸ್ಥಿತಿಯಿರದ ಹಲವು ಮುಗ್ಧ ಮನಸ್ಸುಗಳನ್ನು ಭಯದಲ್ಲಿರಿಸಿ ತನ್ನ ಕುತರ್ಕ ಸಮಜಾಯಿಷಿಗಳಿಂದ ವಂಚಿಸುವ ನರೇಂದ್ರಶರ್ಮನಂತ ಭಯೋತ್ಪಾದಕರಿಗೆ ಸಾರ್ವಜನಿಕ ವಂಚನೆಯ ಆರೋಪದಡಿ ಫಿರ್ಯಾದು ದಾಖಲಿಸಲು ಕಾನೂನು ನಿಯಮಗಳಲ್ಲಿ ಆಸ್ಪದವಿದೆ..
ಅದರಂತೆ ಈತನ ವಿರುದ್ಧ ತಮ್ಮ ಹತ್ತಿರದ ಪೊಲೀಸು ಠಾಣೆಗಳಲ್ಲಿ ವೈಚಾರಿಕ ವಿರೋಧಿ ಮತ್ತು ಸಾರ್ವಜನಿಕ ವಂಚನೆಯಡಿ ಕಂಪ್ಲೇಂಟು ದಾಖಲಿಸುವಂತೆ ನನ್ನ ವಿದ್ಯಾರ್ಥಿಗಳಿಗೆ ತಿಳಿಸಲು ಅನುವಾಗಿದ್ದೇನೆ.. ಸಂಪಾದಕೀಯದಂತೆ ಈತನ ವಿರುದ್ಧ ಆಂದೋಲನೋಪಾದಿಯಲ್ಲಿ ಜನಜಾಗೃತಿ ಮೂಡಿಸಲು ನಮ್ಮ ಕವಿಸ್ವರ ಸಮೂಹವೂ ಹಿಂದೆಯೇ ನಿರ್ಧರಿಸಿತ್ತು.. ನಾವೆಲ್ಲ ಸೇರಿ ಈತನ ವಿರುದ್ದ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲು ಪ್ರಯತ್ನಿಸಬೇಕು ಮತ್ತು ಅದರನ್ವಯ ಈತನ ಮೂಢನಂಬಿಕೆ ಪಸರಿಸುವ ಕಾರ್ಯಕ್ರಮ ಪ್ರಸಾರದ ತಡೆಗೆ ಪ್ರಯತ್ನ ಮಾಡಬೇಕು..
ಸಮಯ ಮುಂತಾದ ವಾಹಿನಿಗಳಲ್ಲೂ ವಕ್ಕರಿಸುತ್ತಿರುವ ಈ ವಿಚಾರ-ವಿರೋಧಿಯ ಕಾರ್ಯಕ್ರಮಗಳಲ್ಲಿ ವಿಜ್ಞಾನಚಿಂತಕರನ್ನೂ ಮುಖಾಮುಖಿಯಾಗಿಸುವಂತೆ ಸಂಬಂಧಿತ ವಾಹಿನಿಗಳಿಗೆ ನಮ್ಮೆಲ್ಲರ ಲಿಖಿತ ಮನವಿಯನ್ನು ವರ್ಗಾಯಿಸಬೇಕು..

Anonymous said...

ನರೇಂದ್ರಶರ್ಮನ ಅವಾಂತರಗಳು ಒಂದೊಂದಲ್ಲ.
ಮೊನ್ನೆ ಜಿ-ಟಿವಿಯಲ್ಲಿ ಪ್ರಸಾರವಾದ ಸಾರ್ವಜನಿಕ ಸಮಾರಂಭದಲ್ಲಿ ಶರ್ಮನ ಹೊಸ ಸಿದ್ದಾಂತ ಕೇಳಿದವರಿಗೆ ದಂಗು ಬಡಿದದ್ದು ಸುಳ್ಳಲ್ಲ. ಅದ್ವೈತ, ವಿಶಷ್ಟಾದ್ವೈತ ಸಿದ್ಧಾಂತ ಗೊತ್ತಿತ್ತು. ಈ ಶರ್ಮನ ಸಿದ್ಧಾಂತ ಬಲುವಿಚಿತ್ರ. ಇವನ ಪ್ರಕಾರ ಆತ್ಮ ಎಂಬುದು ಕೊಳತುನಾರುವ ಲಂಗೋಟಿ, ಈ ಲಂಗೋಟಿಯನ್ನು ಯಾರು ಮುಟ್ಟಲಾಗದು, ನಾಶಗೊಳಿಸಲಾರದು ಮತ್ತು ನೋಡಲು ಸಹ್ಯವೆನಿಸದಂತೆ. ಹಾಗೆ ಆತ್ಮವನ್ನು ಕೂಡ ಯಾರು ನೋಡಲಾಗದು, ಮುಟ್ಟಲಾಗದು ಮತ್ತು ನಾಶಗೊಳಿಸಲಾಗದು ಅಂತ ಶರ್ಮ ಕೆಟ್ಟದಾಗಿ ವಿಶ್ಲೇಷಣೆ ನೀಡುತ್ತಾನೆ. ಹಿಂದೂ ಸನಾತನ ಧರ್ಮದ ಮಹಾ ತುಂಡೆಂದು ಹೇಳಿಕೊಳ್ಳುವ ಈತ, ಆತ್ಮವನ್ನು ಲಂಗೋಟಿಗೆ ಹೋಲಿಸಿ ಆತ್ಮ ಪರಿಕಲ್ಪನೆಗೆ ಮಹಾ ಅಪಚಾರ ವೆಸಗಿದರೂ, ಈ ಲಂಗೋಟಿ ಸಿದ್ಧಾಂತವನ್ನು ಕಣ್ಣು ಕೆಕ್ಕರಿಸಿಕೊಂಡು ನೋಡುತ್ತಾ, ಎಂಜಾಯ್ ಮಾಡುತ್ತಿದ್ದ ನಾಗರೀಕರನ್ನು ಕಂಡರೆ ಎಂತವರಿಗೂ ಅಸಹ್ಯವಾಗದಿರಲಿಲ್ಲ. ಇಂತಹ ಮತಿಗೇಡಿ ಹಾಗೂ ಲಜ್ಜಗೆಟ್ಟ ಜೋತಿಷಿಗಳ ಕಾರ್ಯಕ್ರಮಕ್ಕೆ ಲಕ್ಷಾಂತರ ರೂ ವ್ಯಯಿಸುವ, ಬಿತ್ತರಿಸುವ ವಿದ್ಯುನ್ಮಾನ ಮಾಧ್ಯಮಗಳಿಗೆ ಕಿಂಚಿತ್ತಾದರೂ ಸಾಮಾಜಿಕ ಹೊಣೆಗಾರಿಕೆ ಇಲ್ಲವೇ? ಇನ್ನಾದರೂ ಇಂತ ಸಮಾಜ ವಿರೋಧಿ, ಜೀವ ವಿರೋಧಿ ಕಾರ್ಯಗಳಿಗೆ ದುಡ್ಡು ಸುರಿಯುವ ಕೆಲಸವನ್ನು ಮಾಧ್ಯಮಗಳು ಮಾಡದಿರಲಿ. ಆಗ ಶರ್ಮನಂತಹ ಅಂತ ಕೆಟ್ಟ ಹುಳಗಳು ಮಿಂಚುವುದಿರಲಿ, ಯಾರ ಕಣ್ಣಿಗೂ ಗೋಚರಿಸುವುದಿಲ್ಲ. ಆ ದಿನ ಬೇಗ ಬರಲಿ...

-ಸುದೀಶ್, ಬೆಂಗಳೂರು

Ashraf manzarabad said...

ಕೋಡಂಗಿ ಜ್ಯೋತಿಷಿಗಳ ವಿರುದ್ಧ ಒಂದು ಆಂದೋಲನವೇ ನಡೆಯಬೇಕೆನಿಸುವುದಿಲ್ಲವೇ? ಈ ಜ್ಯೋತಿಷಿಗಳ ಆಟಾಟೋಪಗಳ ನಿಯಂತ್ರಣಕ್ಕೆ ಏನು ಮಾಡಬಹುದು? ನಾವು ಪ್ರಜ್ಞಾವಂತ ನಾಗರಿಕರಾಗಿ ಏನು ಮಾಡಲು ಸಾಧ್ಯ? ಎಲ್ಲರೂ ಸೇರಿ ನಮ್ಮ ಟಿವಿ ಚಾನಲ್‌ಗಳ ಮೇಲೆ ಒತ್ತಡ ಹೇರಿದರೆ ಇಂಥ ಕಾರ್ಯಕ್ರಮಗಳನ್ನು ನಿಲ್ಲಿಸಬಹುದಲ್ಲವೇ ? ಎಂಬ ತಮ್ಮ ಪ್ರಶ್ನೆಗೆ ಹಲವರು ಹಲವಾರು ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಮ್ಮ ಮಲೆನಾಡಿನಲ್ಲಿ ಒಂದು ಮಾತಿದೆ.. ಕಾಡು ಹಂದಿಯಾದರೆ ಗುಂಡು ಹೊಡೆಯಬಹುದು. ಊರು ಹಂದಿಯಾದರೆ ಏನು ಮಾಡೋದು ಅಂತ ?

ಇಲ್ಲಿನ ಸನ್ನಿವೇಶಕ್ಕೆ ಈ ಮಾತು ಅನ್ವಯಿಸುವಂತಿದೆ. ಓದುಗರು ನೀಡಿರುವ ಸಲಹೆಗಳಲ್ಲಿ ಕೆಲವರು ಈ ಕೋಡಂಗಿ ಜ್ಯೋತಿಷಿಗಳ ವಿರುದ್ಧ ಜನತೆ ಸ್ಥಳೀಯ ಪೋಲಿಸ್ ಠಾಣೆಗಳಲ್ಲಿ ದೂರು ನೀಡಬೇಕೆಂಬ ಸಲಹೆ ನೀಡಿದ್ದಾರೆ. ಅದು ಒಂದು ಉತ್ತಮ ಮತ್ತು ಪರಿಣಾಮಕಾರಿ ಸಲಹೆಯ ರೀತಿ ಇದೆ. ಒಟ್ಟಿನಲ್ಲಿ ಈ ಪಿಡುಗಿನ ವಿರುದ್ಧ ಧ್ವನಿ ಎತ್ತಿರುವ ಸಂಪಾದಕೀಯದ ಕಾಳಜಿ ಅಭಿನಂದನಾರ್ಹ .

Anonymous said...

ನಾಗರೀಕ ಸಮುದಾಯ ಮೂಢನಂಬಿಕೆ ಪಸರಿಸುವ ಕಾರ್ಯಕ್ರಮ ಪ್ರಸಾರದ ತಡೆಗೆ ಪ್ರಯತ್ನ ಮಾಡಬೇಕು

Ashraf manzarabad said...

ಈ ಕೋಡಂಗಿ ಜ್ಯೋತಿಷಿಗಳು ನಮ್ಮ ದೇಶದಲ್ಲಿ ಎಲ್ಲಾ ಕಡೆ ಎಲ್ಲಾ ಧರ್ಮಗಳಲ್ಲೂ ತುಂಬಿ ಬಿಟ್ಟಿದ್ದಾರೆ . ಇಲ್ಲಿ ನರೇಂದ್ರ ಶರ್ಮನಿಗೆ ಮತ್ತಿತರ ಕೆಲವರಿಗೆ ಟಿವಿ ಮಾಧ್ಯಮ ಪ್ರಚಾರ ಕೊಟ್ಟು ಜನರಿಗೆ ಮಂಕು ಬೂದಿ ಎರಚಿದೆ. ನನಗೆ ಗೊತ್ತಿರುವ ಹಾಗೆ ನಮ್ಮ ಸಾಬರ ಜಾತಿಯಲ್ಲೂ ಇವನಂತಹವರು ಬಹಳ ಜನ ಇದ್ದಾರೆ. ಅಲ್ಲಾಹನ , ಬಾಬಾನ ಹೆಸರಿನಲ್ಲಿ ಮಂಕುಬೂದಿ ಎರಚುತ್ತಾ ಬಡವರ ಹಣ ಹೊಡಿಯುತ್ತಾ ಇದ್ದಾರೆ. ಅವರಿಗೆ ಟಿವಿ ಮಾಧ್ಯಮದಲ್ಲಿ ಮಿಂಚಲು ಜಾಗ ಸಿಕ್ಕಿಲ್ಲ ಅಷ್ಟೇ. ಸಿಕ್ಕಿದ್ದರೆ ಅವರೂ ಇವನಂತೆ ಇನ್ನೇನೋ ಬೋಂಗು ಬಿಟ್ಟು ಜನರನ್ನು ಭಯ ಬೀಳಿಸಿ ದುಡ್ಡು , ಹೆಸರು ಎರಡೂ ಮಾಡಿಕೊಳ್ತಾ ಇದ್ರು.

Anonymous said...

nana abhiprayadalli nrendr kanditha jothishada hucha

Anonymous said...

http://www.zeekannadatv.com/feedback.aspx

http://www.zeekannadatv.com/contactus.aspx

yellaru dayavittu nimma nimma kastagalannu tilisi...

ramyaprapancha said...

ಈ ಲೇಖನ ಪ್ರಸಿದ್ದ ಪತ್ರಿಕೆಗಳಲ್ಲಿ ಪ್ರಕಟವಾದರೆ ಇನ್ನೂ ಹೆಚ್ಚು ಜನರನ್ನು ತಲುಪಬಹುದು. ಇದರಿಂದ ಕೆಲವರಾದರು ಇಂತಹ ಕಾರ್ಯಕ್ರಮ ನೋಡುವುದನ್ನು ನಿಲ್ಲಿಸಬಹುದೇನೋ!!

Kumar said...

ಮೇಲಿರುವ ಎಲ್ಲ ಪ್ರತಿಕ್ರಿಯೆಗಳನ್ನು ಓದಿ, ನನ್ನ ಮನೆಯಲ್ಲಿ ಟೀ ವಿ ಇಲ್ಲದ್ದನ್ನು ನೆನೆಸಿಕೊಂಡು ತುಂಬ ಖುಷಿಯಾಯಿತು, ನನ್ನ ಪೂರ್ವ ಜನ್ಮದ ಪುಣ್ಯದಿಂದಾಗಿ ಈ ಮೈಸೂರು ಬ್ಯಾಂಕಿನ ಬಳಿ ಗಿಳಿ ಜ್ಯೋತಿಷ್ಯ ನೋಡಲಾಗಲಿಲ್ಲವೆಂದು ಇನ್ನು ಜಾಸ್ತಿನೆ ಖುಷಿ ಆಯಿತು.


G!R!SH said...

E riti ellarannu daari tappisutiruva narendra sharma na mele case haakbeku.
avarelli agni shridhar?
avaru e aandolanada nayakatva vahisikollabeku.
karnatakada pratiyobba samachittada naagarikarU idara virudda sidideluva kaala bandide.
neenu yaava riti horatavannu sanghatisuttira? heli navu nimmondige idde irtivi.

Girish and Friends

Anonymous said...

Oh ! this is from where this narendra swamy sharma is getting inspiration?! and talking about PRALAYA ! He is definitely trying to become another Benny henn.. He is on his way already, started doing public programmes, like jana darshana..etc. some thing should be done against him . seriously.

Anonymous said...

put him in some lunatic asylum, thats where he belongs to.some of his antics look so vulgar that i feel like slapping on his face. agni shreedhar should take charge against this pralayanthaka who is creating rumbles in innocent people's lives so much so that, people are refusing to get insured for the simple reason the world is going to be finished anyhow in 2011!!

ರವಿ ಭರತ್ said...

Aa ******* maganige budhi illa, namma janaru kuda ade rithi varthisuthidhare, janaru hechetu kolabeku, aatha Hudoo Pogige janaru thale adisabharadhu, avaga athane mulege sarikoluthane,

Nenapirali : Mosa Hogoru heli varegu erutharo, ali varegu Mosa Madooruv Iruthare

karthik said...

ivnige oddu buddi heladidre innu enenu shrusti madtano, mr.body bramhanda...ivniginta dodda pralaya ellu sigalla...

Anonymous said...

ದೇಹ ನಶ್ವರ, ಆತ್ಮ ಶಾಶ್ವತ, ಚಿರಂತನ. ದೇಹವು ಕೊಳಕು ವಸ್ತ್ರ ವಾದರೂ ಆತ್ಮ ಎಂದಿಗೂ ಶುದ್ಧ ವಾದುದು. ದೇಹ ವು ಬರಿಯ ವಸ್ತ್ರ ವಿದ್ದಂತೆ, ಮನುಷ್ಣ ನ ಸಾವಿನ ನಂತರ ಆತ್ಮ ವು ಆ ವಸ್ತ್ರ ದಿಂದ ಕಳಚಿ ಕೊಳ್ಳುತ್ತದೆ. ಇದೆಲ್ಲ ನಾವು ನಮ್ಮ ಧರ್ಮ ಗ್ರಂಥಗಳು ಮತ್ತು ಆಧ್ಯಾತ್ಮ ದ ಚಿಂತಕರಿಂದ ಇದುವರೆಗೂ ತಿಳಿದಿದ್ದಂತಹ ವಿಚಾರಗಳು. ಈಗ ಇದ್ಯಾವನಯ್ಯಾ ಇವನು ಹೊಸದಾಗಿ ಆತ್ಮ ವನ್ನೇ ಕೊಳಕು ಬಟ್ಟೆ ಅನ್ನೋವನು? ಇವನನ್ನ ಏನು ಮಾಡಬೇಕು? ! ಜನರಿಗೆ ತಪ್ಪು ತಪ್ಪಾಗಿ ಮಾರ್ಗದರ್ಶನ ನೀಡುವುದರ ಮೂಲಕ ಇವನು ಅವರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾನೆ. ನಮ್ಮ ಆಧ್ಯಾತ್ಮ , ಧರ್ಮ ಸಿದ್ದಾಂತ ಗಳ ಬಗ್ಗೆ ತಿಳಿದಿರುವ ಮೇಧಾವಿ ಗಳೆಲ್ಲ ಎಲ್ಲಿದ್ದಾರೆ? ಅವರ್ಯಾರಿಗೂ ಇವನು ಮಾಡುತ್ತಿರುವ ಕೆಲಸ ಗಳ ಅರಿವಿಲ್ಲವೇ? ಇವನಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲವೇ ಅವರಿಗೆ? ಯಾಕೆ ನಮ್ಮ ವಿಧ್ವಾಂಸರು, ಸ್ವಾಮೀಜಿಗಳು, ಪಂಡಿತರು ,ಎಲ್ಲರೂ ಸುಮ್ಮನಿದ್ದಾರೆ? ಅವರಿಗೆ ಜವಾಬ್ದಾರಿ ಇಲ್ಲವೇ? ನಿಜವಾಗಿ ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಬೇಕಾದವರೇ ಅವರು.

ಅವಿನಾಶ ಕನ್ನಮ್ಮನವರ್ said...

"ಈ ಚರ್ಚೆ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ",
ಇದೇ ನಮಗೆ ಬೇಕಾಗಿದ್ದು,, ಇದೊ೦ದು ಕ್ರಾ೦ತಿಯಾಗಿಬಿಡಲಿ..

B.N. said...

Irepeat ... so long as these rotten TV channels go after this humbug of an astrolger there shall be people watching the programme , blindly doing whatever instruction this bogale swami gives. The best way to shut his mouth is people taking law into their own hands & defacing him with cowdung or bullshit!

ಅರಕಲಗೂಡುಜಯಕುಮಾರ್ said...

@ಸಂಪಾದಕೀಯ,ಈ ಹಿಂದೆ ನಾನೇ ಸೂಚಿಸಿದ ಸಲಹೆಯಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನರೇಂದ್ರ ಶರ್ಮ ಹಾಗೂ ಇತರೆ ಕಿರುತೆರೆ ಜ್ಯೋತಿಷಿಗಳು ಬಿತ್ತುತ್ತಿರುವ ಮೌಢ್ಯ, ಮಹಿಳೆಯರ ಕುರಿತ ಅಗೌರವದ ಮಾತುಗಳ ವಿರುದ್ದ ದೂರು ನೀಡಲು ನಿರ್ಧರಿಸಿದ್ದೇನೆ.. ಹಾಗೆಯೇ ಛಾನಲ್ ನಿರ್ವಾಹಕರ ವಿರುದ್ದವೂ ಇದು ಸಾಧ್ಯವೇ ಅಂದರೆ ಸದರಿ ವಿಷಯದ ಬಗ್ಗೆ ದೂರು ದಾಖಲಿಸಲು ವ್ಯಾಪ್ತಿ ಏನಾದರೂ ನಿಗದಿಯಾಗಿದೆಯೇ? ಒಂದು ಸಂಕ್ಷಿಪ್ತ ದಾಖಲಿಸಬಹುದಾದಂತಹ ದೂರಿನ ಮಾಡೆಲ್ ನೀಡಿದರೆ ಉಪಕಾರವಾದೀತೇನೊ

Rajesha said...

ಆತ್ಮವೆಂದರೆ ಕೊಳೆತು ನಾರುವ ಲಂಗೋಟಿಯೇ - ಓಹೋ ಬಹುಷಃ ಅದು ನರೇಂದ್ರ ಸ್ವಾಮಿಯ ಆತ್ಮವೆ ಇರಬೇಕು.

ms manjunatha said...

ಕೊಳೆತು ನಾರುವ ಲಂಗೋಟಿ! ನಂಗೆ ನಗು ತಡೆಯಕ್ಕಾಗುತ್ತಿಲ್ಲ.

Nagu said...

ವಿನಾಶ ಕಾಲವೇ ವೀಪರೀತ ಬುದ್ಧಿ! ಈತನಿಗೆ ಅದ್ಯಾವಾಗ ಬುದ್ಧಿ ಬರೋತ್ತೋ

ಅವನ ಲಂಗೋಟಾದ್ವೈತಕ್ಕೆ ಧಿಕ್ಕಾರ.

ಸಂಪಾದಕೀಯದ ಪ್ರಯತ್ನಗಳು ಅಭಿನಂದಾನರ್ಹ

ನಾಗೇಂದ್ರ

satish said...

A Narendra babu hoba manga mundedu... ava mathu kelloru... Mangagaleee bidi...

Anonymous said...

ಅವನು ಹೇಗಿದ್ದಾನೋ, ಅದರಂತೆ ಅವನ ಆತ್ಮವಿದೆ ಎಂಬುದು ಅವನ ಅರ್ಥ. ಆದರೆ, ಈ ಪ್ರಗತಿಪರರು, ಬುದ್ಧಿಜೀವಿಗಳೆಂದು ಕೊಂಡವರು ಪ್ರತಿಯೊಂದಕ್ಕೂ ಪ್ರತಿಭಟನೆ ಮಾಡುವವರು ಈಗ ಯಾಕೆ ಸುಮ್ಮನಿದ್ದಾರೋ, ಈ ಮನುಷ್ಯ ಒಂದು ಅನಿಷ್ಟವಾದರೆ, ಟಿ ವಿ ೯ ನ ನಾರಾಯಣ ಸ್ವಾಮಿ ಮತ್ತೊಂದು ಅನಿಷ್ಟ. ಇವರನ್ನು ವಿರೋಧಿಸೋದು ತೀರಾ ಅಗತ್ಯ. ನಾರಾಯಣ ಸ್ವಾಮಿಯಂತೂ ೧೦ ರಿಂದ ೨೦ ಸಾವಿರ ರೂ. ಕೊಟ್ರೆ ಯಾವ ಮನೆಯಲ್ಲಾದ್ರೂ ಗೂಬೆ ಕೂರಿಸ್ತಾನೆ, ಅದಕ್ಕೇ ಪೂಜೆ ಮಾಡಿಸ್ತಾನೆ, ಆ ಕಂಪನಿಯವರಿಗೂ ಕಮೀಶನ್ ಹೋಗುತ್ತೇ ಇರ್ಬೇಕು ತಣ್ಣಗಿದ್ದಾರೆ. ಇಬ್ಬರನ್ನೂ ಜನ ಎದುರಾದಲೆಲ್ಲಾ ವಿರೋಧಿಸ್ಬೇಕು ಜತೆಗೆ ಎಕ್ಕಡದಲ್ಲಿ ಹೊಡೀಬೇಕು, ಇಡೀ ಕುಟುಂಬಕ್ಕೇ ಸಾಮಾಜಿಕ ಬಹಿಷ್ಕಾರ ಹಾಕ್ಬೇಕು...

Anonymous said...

ayyo odake hesige aguthe. innu keloke agutha heli? edakke bega sollution sigalebeku
-chitra

Anonymous said...

ನಮ್ಮ ನರೇಂದ್ರಸ್ವಾಮಿ ಅನ್ನಬೇಡಿ.

Anonymous said...

Your beating at bush...forget langoti jostisi
Shoot a powerful letter to TV channel owners..
Don;t forget the damage done by Vijay Karnataka, a Times Group publication
This is very dangerous trend in Karnataka. We fight for kannada. Same time these non kannadiga media outlets ruining our society..Any body serious about this..
Shoot a letter to owners and cc to I&B and Home ministry of GoI..it is very serious matter

Anonymous said...

ಬೆನ್ನಿಹಿನ್ನ್ ಬಗ್ಗೆ ಪೂರ್ವಾಗ್ರಹ ಪೀಡಿತ ಅಭಿಪ್ರಾಯವಿದ್ದರೆ, ಅವರ ಬಗ್ಗೆ ನೀವೊಂದಿಷ್ಟು ತಿಳಿದುಕೊಳ್ಳುವುದು ಉಚಿತ ಅನಿಸುತ್ತಿದೆ.

sunil said...

ಸರ್, ಸ೦ಪಾದಕೀಯ ವೇದಿಕೆ ತು೦ಬ ಚೆನ್ನಾಗಿದೆ ಆದರೆ, ಹೀಗೆ ಒಬ್ಬ ವ್ಯಕ್ತಿ ಅಥವಾ ಒ೦ದು ಮಾದ್ಯಮದವರ ತಪ್ಪುಗಳ ಜೊತೆಗೆ, ಸಮಾಜದಲ್ಲಿ ನಡೆಯುತಿರುವ ಕೆಲವೊ೦ದು ವಿಷಯಗಳ ಬಗ್ಗೆ ಕೂಡ ವಿಶ್ಲೆಷಣೆ ಅಗತ್ಯವಿದೆ.