Friday, December 2, 2011

ಪ್ರಶಸ್ತಿ-ಪ್ರತಿಭಟನೆ: ಒಂದು ಪುಟ್ಟ ಪ್ರತಿಕ್ರಿಯೆ


ಮಾನ್ಯರೆ,

ಇಂದು ಮುಂಜಾನೆ ಪತ್ರಿಕೆ ತೆರೆಯುತ್ತಿದ್ದಂತೆ ಗಮನ ಸೆಳೆದಿದ್ದು ಎರಡು ಸುದ್ದಿಗಳು. ಎರಡೂ ಕೂಡ ಪತ್ರಿಕೋದ್ಯಮಕ್ಕೆ ಕುರಿತಾದ, ಒಂದೇ ನಮೂನೆಯ ಅಂಶವನ್ನು ಪ್ರತಿಪಾದಿಸುತ್ತಿದ್ದವು. ಒಂದು ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭದ ಚಿತ್ರ ಸುದ್ದಿಯಾದರೆ ಮತ್ತೊಂದು ಶಿವಮೊಗ್ಗದಲ್ಲಿನ ನಕಲಿ ರೋಲ್ ಕಾಲ್ ಪತ್ರಕರ್ತರ ವಿರುದ್ಧ ಕಾರ್ಯನಿರತ ಪತ್ರಕರ್ತರ ಪ್ರತಿಭಟನೆ. ಇದಕ್ಕೆ ಕಾರ್ಯ ಮರೆತವರ ವಿರುದ್ಧ ಕಾರ್ಯನಿರತರ ಪ್ರತಿಭಟನೆ ಎಂದು ಹೆಡ್ಡಿಂಗ್ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು. ವಿಷಯ ಅದಲ್ಲ.

ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಸಾಲಿನಲ್ಲಿ ಹೆಸರಿದ್ದ ಪ್ರಜಾವಾಣಿಯ ಅಂಕಣಕಾರ ದಿನೇಶ್ ಅಮೀನಮಟ್ಟು ಅವರು ಪ್ರಶಸ್ತಿ ಸ್ವೀಕರಿಸಲಿಲ್ಲ. ಅದಕ್ಕೆ ವೈಯುಕ್ತಿಕವಾಗಿ ಅವರು ನೀಡುತ್ತಿರುವ ಕಾರಣ ಅನಾರೋಗ್ಯ. ಅದು ಅವರ ಅನಾರೋಗ್ಯವೋ ಪತ್ರಿಕೋದ್ಯಮದ ಅನಾರೋಗ್ಯವೋ ತಿಳಿದಿಲ್ಲ. ಬಹುಶಃ ಅಮಿನಮಟ್ಟು ಬರವಣಿಗೆಯನ್ನು ಗಮನಿಸಿದ ಯಾರಿಗೇ ಆಗಲಿ ಈ ಕುರಿತು ಸಂದೇಹ ಬರುವುದು ಸಹಜ. ಹಾಗಾಗಿ ಅವರೇ ಈ ಕುರಿತು ತಮ್ಮ ಅಂತರಾಳದ ನಿರ್ಧಾರದ ಬಗ್ಗೆ ಅನಾವರಣ ಮಾಡಿದರೆ ಚೆನ್ನಾಗಿರುತ್ತಿತ್ತು. ಇವತ್ತಿನ ಯುವ ಪತ್ರಕರ್ತರಿಗೆ, ಭ್ರಷ್ಟರಾಗದೆ ತೊಳಲಾಡುತ್ತಿರುವವರಿಗೆ ಇದು ಜೀವನ ಪ್ರೀತಿ ಜೊತೆಗೆ ಪತ್ರಿಕೋದ್ಯಮದ ಬಗ್ಗೆ ಮಮಕಾರ ಬೆಳೆಸಬಲ್ಲದು ಎಂಬುದು ನಂಬಿಕೆ.

ಉಳಿದಿದ್ದು ಶಿವಮೊಗ್ಗ ಪತ್ರಕರ್ತರ ಪ್ರತಿಭಟನೆ ಸುದ್ದಿ. ಸಂಪಾದಕೀಯದಲ್ಲಿ ಶಿವಮೊಗ್ಗ ಪತ್ರಕರ್ತರ ಸೈಟು ಹಗರಣದ ಬಗ್ಗೆ ಪತ್ರಿಕಾ ಮಿತ್ರ ಹರ್ಷ ಕುಗ್ವೆ ಪ್ರಸ್ತಾಪಿಸಿದ್ದು ನಿಮಗೆ ನನಪಿರಬಹುದು. ಈಗಿನ ಪ್ರತಿಭಟನೆಯ ಮೂಲಸೆಲೆ ಅಲ್ಲಿಂದ ಆರಂಭವಾಗುತ್ತದೆ. ಅದು ಮತ್ತೊಂದು ಕತೆ.

ಸದ್ಯ ಕಾರ್ಯನಿರತ ಪತ್ರಕರ್ತ ಮಿತ್ರರು ಶಿವಮೊಗ್ಗದಲ್ಲಿ ಪತ್ರ್ರಕರ್ತರ ಹೆಸರಿನ ಬ್ಲಾಕ್ ಮೇಲ್ ವಸೂಲಿ ವೀರರ ಬಗ್ಗೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಆದರ ಅದರ ನೇತ್ರೃತ್ವದಲ್ಲಿರುವ ಮುಂಚೂಣಿ ಪತ್ರಕರ್ತ ಮಿತ್ರರ ಹೆಸರೀಗ ಕೆಎಚ್‌ಬಿ ಸೈಟ್ ಹಂಚಿಕೆ ವಿವಾದದಲ್ಲಿ ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲಿದ್ದು ಇತ್ತೀಚೆಗೆ ಒಂಭತ್ತು ಮಂದಿಯ ಮೇಲೆ ಎಫ್‌ಐಆರ್ ಕೂಡಾ ದಾಖಲಾಗಿದೆ. ಈ ಎಫ್‌ಐಆರ್ ದಾಖಲಿಸಲು ಕೋರ್ಟು ಒಂದು ವರ್ಷದ ಹಿಂದೆಯೇ ಆದೇಶಿಸಿತ್ತು ಎಂಬ ಸುದ್ದಿ ಇದೆ. ಎಲ್ಲಿಗೆ ಬಂತು ಜಿಲ್ಲಾ ಪತ್ರಿಕೋದ್ಯಮ..??

ವಂದನೆಗಳೊಂದಿಗೆ
ಒಬ್ಬ ಯುವ ಪತ್ರಕರ್ತ

No comments:

Post a Comment