Monday, December 5, 2011

ವರ್ತಮಾನದ ಕರೆಗೆ ಓಗೊಡೋಣ ಬನ್ನಿ, ಮಲಸಂತ್ರಸ್ಥರಿಗೆ ನೆರವಾಗೋಣ...


ನೆರೆ ಸಂತ್ರಸ್ಥರು ನಿಮಗೆ ಗೊತ್ತು, ಬರ ಸಂತ್ರಸ್ಥರು, ಮಲ ಸಂತ್ರಸ್ಥರು ನಿಮಗೆ ಗೊತ್ತೆ? ಕೆಜಿಎಫ್‌ಗೆ ಹೋಗಿದರೆ ಈ ಮಲಸಂತ್ರಸ್ಥರು ನಿಮಗೆ ಕಾಣಬಹುದು. ಬದುಕಿನುದ್ದಕ್ಕೂ ಊರಿನ ಮಲದ ಗುಂಡಿಯೊಳಗೆ ಇಳಿದು ಶುದ್ಧಗೊಳಿಸಿದವರು ಇವರು. ಸಾಮಾಜಿಕ ಸಂಘಟನೆಗಳ ಸತತ ಹೋರಾಟದಿಂದ ಈಗ ಮಲಹೊರುವ ಕಾಯಕವನ್ನು ನಿಷೇಧಿಸಲಾಗಿದೆ. ಆದರೆ ಅದೇ ಸಮಯಕ್ಕೆ ಈ ಕುಟುಂಬಗಳ ಹೊಣೆ ಹೊರಬೇಕಾದವರು ಸುಮ್ಮನಿದ್ದಾರೆ. ಈ ಕುಟುಂಬಗಳಿಗೆ ಅಗತ್ಯವಿರುವ ತಕ್ಷಣದ ನೆರವನ್ನು ನೀಡಲು ವರ್ತಮಾನ ಬಳಗ ಮುಂದೆ ಬಂದಿದೆ. ವರ್ತಮಾನದ ಈ ಕರೆಗೆ ನಾವೆಲ್ಲ ಸ್ಪಂದಿಸಬೇಕಿದೆ. ಹಿಂದೆ ಹಾನಗಲ್‌ನ ಪೌರಕಾರ್ಮಿಕಳೊಬ್ಬಳ ಮಗನ ಕಷ್ಟಕ್ಕೆ ಕರಗಿ ಸಂಪಾದಕೀಯದ ಮನವಿಗೆ ಸ್ಪಂದಿಸಿದವರು ನೀವು. ಈಗಲೂ ನಿಮ್ಮಿಂದ ಅದೇ ನಿರೀಕ್ಷೆ ನಮ್ಮದು. 
                                                                                  -ಸಂಪಾದಕೀಯ

ವರ್ತಮಾನ ಬಳಗದ ಮನವಿಯ ಸಾರಾಂಶ ಈ ಕೆಳಗಿನಂತಿದೆ.


ಕೆಜಿಎಫ್ ದಲಿತ ಕಾಲೋನಿಗಳಲ್ಲಿ ಇತ್ತೀಚೆಗೆ ಘಟಿಸಿದ ಸಾವುಗಳು ನಿಮಗೆ ನೆನಪಿರಬಹುದು. ಕಕ್ಕಸ್ಸು ಗುಂಡಿ ಶುಚಿಗೊಳಿಸಲು ಹೋದ ಐವರು ಅಸುನೀಗಿದ್ದಾರೆ. ಇದೇ ಕೆಲಸದಿಂದಾಗಿ ಅಂಟಿಸಿಕೊಂಡ ನಾನಾ ರೋಗಗಳಿಂದ ಸತ್ತವರೆಷ್ಟೋ, ಲೆಕ್ಕ ಇಟ್ಟವರಾರು? ಇನ್ನು ಕೆಲವರು ರೋಗಗಳಿಂದ ಬಳಲುತ್ತಿದ್ದಾರೆ.

ದುಡಿವವರನ್ನು ಕಳೆದುಕೊಂಡ ಅವರ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿವೆ. ಸಾಲು ಸಾಲು ಸಾವುಗಳ ನಂತರ ಸ್ಥಳೀಯ ಸಂಸ್ಥೆ ಎಚ್ಚರಗೊಂಡು ಮಲಹೊರುವ ಪದ್ಧತಿ ನಿರ್ಮೂಲನೆಗೆ ಶತಪ್ರಯತ್ನ ಮಾಡುತ್ತಿದೆ. ಮಲದ ಗುಂಡಿಗಳನ್ನು ಶುಚಿ ಮಾಡಲು ಯಾರೂ ಇವರನ್ನು ಕರೆಯಬಾರದು ಎಂದು ಅರಿವು ಮೂಡಿಸುವ ಪ್ರಯತ್ನದಲ್ಲಿದ್ದಾರೆ. ಆದರೆ, ಅದೇ ಆಡಳಿತದ ಜವಾಬ್ದಾರಿಯಾಗಿದ್ದು ದುಡಿಯುವ ಕೈಗಳನ್ನು ಮತ್ತು ದುಡಿಮೆಯನ್ನು ಕಳೆದುಕೊಂಡವರಿಗೆ ಪರ್ಯಾಯ ಉದ್ಯೋಗ ಕೊಡಿಸಬೇಕಾದ್ದು. ಇದುವರೆಗೂ ಅದು ಈಡೇರಿಲ್ಲ. ಭರವಸೆ ನೀಡಿದ್ದಾರೆ. ಈಡೇರುವುದು ಎಂದೋ?
ಆದರೆ ಅಲ್ಲಿಯವರೆಗೆ??

ಪಿಯುಸಿಎಲ್ ಮತ್ತಿತರ ಸಂಘಟನೆಗಳ ಸತತ ಒತ್ತಡದ ಫಲವಾಗಿ, ವೈ.ಜೆ.ರಾಜೇಂದ್ರ, ದಯಾನಂದ್, ಚಂದ್ರಶೇಖರ್, ಪದ್ಮ ಮೊದಲಾದ ಸಾಮಾಜಿಕ ಹೋರಾಟಗಾರರ ಪ್ರಯತ್ನದಿಂದಾಗಿ ಕೆಜಿಎಫ್‌ನಲ್ಲಿ ಈಗ ಮನುಷ್ಯರೇ ಮಲಹೊತ್ತುವ ಕಾರ್ಯಕ್ಕೆ ಸ್ಥಳೀಯ ಆಡಳಿತ ತಡೆಯೊಡ್ಡಿದೆ. ಇದರ ಜತೆಜತೆಗೆ ಈ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾದ ಜಿಲ್ಲಾಡಳಿತ ಮಾತ್ರ ನಿಧಾನಗತಿ ಅನುಸರಿಸುತ್ತಿದೆ. ಪರಿಣಾಮವಾಗಿ ಈ ಕುಟುಂಬಗಳ ಒಪ್ಪೊತ್ತಿನ ಊಟಕ್ಕೂ ಈಗ ತತ್ವಾರ.

ಸದ್ಯಕ್ಕೆ ಅವರಿಗೆ ಆದಾಯದ ಮೂಲವೇ ಇಲ್ಲ. ಪರ್ಯಾಯ ಉದ್ಯೋಗ ಕಲ್ಪಿಸುವವರೆಗಾದರೂ ಆ ಕಾಲೋನಿಯಲ್ಲಿ ಗಂಜಿ ಕೇಂದ್ರ ಸ್ಥಾಪಿಸಿ ಅನ್ನ ನೀಡಬೇಕಾದ ಜವಾಬ್ದಾರಿ ಆಡಳಿತದದ್ದು. ಆದರೆ ಇದುವರೆಗೂ ಅದು ಸಾಧ್ಯವಾಗಿಲ್ಲ. ನಾಗರಿಕ ಸಮಾಜವೂ ಜವಾಬ್ದಾರಿ ಮರೆತರೆ? ನಮ್ಮ ಮನೆಯ ಮಲದ ಗುಂಡಿಗಳು ತುಂಬಿಕೊಂಡಾಗ, ನಗರಸಭೆ, ಪುರಸಭೆಗಳನ್ನು ನಂಬಿಕೊಳ್ಳದೆ ನಾವು ಇಂತಹವರ ಮೊರೆ ಹೋಗಿದ್ದೆವು, ಅವರನ್ನು ಗುಂಡಿಯೊಳಗೆ ಇಳಿಸಿ ಮೇಲೆ ಮೂಗು ಮುಚ್ಚಿ ನಿಂತಿದ್ದೆವು. ಅವರು ಅಂಟಿಸಿಕೊಂಡ ರೋಗಗಳಿಗೆ, ತೆತ್ತ ಜೀವಕ್ಕೆ ಸರಕಾರ ಅಷ್ಟೇ ಅಲ್ಲ, ನಾವೂ ಹೊಣೆ.

ವರ್ತಮಾನ ಬಳಗ ಹೀಗೊಂದು ಆಲೋಚನೆ ಮಾಡಿದೆ. ಒಪ್ಪತ್ತಿನ ಅನ್ನಕ್ಕಾಗಿ ಕಷ್ಟಪಡಿಸುತ್ತಿರುವವರಿಗೆ ನಾವು, ನೀವು ನೆರವಾಗೋಣ ಎಂಬುದು ನಮ್ಮ ಆಲೋಚನೆ. ಅವರಿಗೆ ಮುಖ್ಯವಾಗಿ ಈಗ ಬೇಕಿರುವುದು, ಅಕ್ಕಿ, ಬೇಳೆ ಹಾಗೂ ಅಡಿಗೆಗೆ ಬೇಕಾದ ಇತರೆ ಅಗತ್ಯ ಸಾಮಾಗ್ರಿಗಳು. ಸಂಗ್ರಹವಾಗುವ ಹಣದಲ್ಲಿ ಅಗತ್ಯ ವಸ್ತುಗಳನ್ನು ಕೊಂಡು ಅವರಿಗೆ ತಲುಪಿಸುವ ಹೊಣೆ ನಮ್ಮದು. ಸಂಗ್ರಹವಾಗುವ ಪ್ರತಿ ಪೈಸೆಗೂ ಲೆಕ್ಕ ಕೊಡುತ್ತೇವೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ? ಅಂತೆಯೇ ನಮ್ಮ ಜೊತೆ ಕೈಜೋಡಿಸುವವರ ಹೆಸರನ್ನು ಪ್ರಕಟಿಸುತ್ತೇವೆ. ಜೊತೆಗೆ ಹಣ ನೀಡುತ್ತೇವೆ ಎಂದು ಭರವಸೆ ಕೊಡುವವರ ಹೆಸರನ್ನೂ ಮತ್ತೊಂದು ಪಟ್ಟಿಯಲ್ಲಿ ಪ್ರಕಟಿಸುತ್ತೇವೆ. ಅಂತಹವರು ತಮ್ಮ ಭರವಸೆಗಳನ್ನು ಮೇಲ್ ಮಾಡಬಹುದು (editor@vartamaana.com)

ವರ್ತಮಾನ ಬಳಗ ೫,೦೦೦ ರೂಗಳನ್ನು ಈ ಕೆಲಸಕ್ಕಾಗಿ ವಿನಿಯೋಗಿಸುತ್ತದೆ.

ನೀವು ಹಣ ಕಳುಹಿಸಬೇಕಾದ ಬ್ಯಾಂಕ್ ಖಾತೆ: ೬೪೦೪೬೦೯೬೯೭೪ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸಂಪಂಗಿರಾಮ ನಗರ ಶಾಖೆ, ಬೆಂಗಳೂರು. ಇದೇ ಡಿಸೆಂಬರ್ ೧೫ ರ ಒಳಗೆ ತಾವು ಹಣ ಕಳುಹಿಸಬೇಕಾಗಿ ವಿನಂತಿ.

ನಮಸ್ಕಾರ
ವರ್ತಮಾನ ಬಳಗ.

ವರ್ತಮಾನದಲ್ಲಿ ಈ ಮೂಲ ಲೇಖನ ಓದಲು ಈ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ:


No comments:

Post a Comment