Tuesday, July 12, 2011

ಜಟಕಾಬಂಡಿಯಿಂದ ಸಂಕಟ ನಿವಾರಕಿ ಮಾಳವಿಕಾ ಎದ್ದು ಹೋದರು, ಮತ್ತೆ ಬರ್ತಾರಾ?

ಇವರ ಹೆಸರು ಮಾಳವಿಕಾ ಅವಿನಾಶ್. ತಮಿಳು-ಕನ್ನಡ ಸಿನಿಮಾ-ಕಿರುತೆರೆಗಳಲ್ಲಿ ಕಲಾವಿದರಾಗಿ ಕೆಲಸ ಮಾಡುವವರು. ಕರ್ನಾಟಕದ ಟಿವಿ ನೋಡುವ ಸಾಕಷ್ಟು ಹೆಣ್ಣುಮಕ್ಕಳು ಅವರನ್ನು ಇಷ್ಟಪಡುತ್ತಾರೆ. ವಿಶೇಷವಾಗಿ ಮಾಯಾಮೃಗ ಎಂಬ ಸೀರಿಯಲ್ಲು ಅವರಿಗೆ ತುಂಬಾ ಹೆಸರು ಕೊಟ್ಟಿತ್ತು. ಬದುಕು ಜಟಕಾ ಬಂಡಿ ಅವರು ಜೀ ಕನ್ನಡದಲ್ಲಿ ನಡೆಸಿಕೊಡುವ ಕಾರ್ಯಕ್ರಮ. ಮೇಡಂ ಬಗ್ಗೆ ಇನ್ನಷ್ಟು ಹೇಳುವುದಾದರೆ ಅವರಿಗೆ ಅಧ್ಯಾತ್ಮದಲ್ಲಿ ಆಸಕ್ತಿ. ಅಧ್ಯಾತ್ಮದ ಮೂಲಕ ನಿತ್ಯಾನಂದ ಪಡೆಯಬಹುದೇ? ಇದು ಅವರ ಹುಡುಕಾಟವಿರಬಹುದು.

ಜಟಕಾ ಬಂಡಿ ಒಂಥರಾ  ಕೌಟುಂಬಿಕ ಕೋರ್ಟು ಇದ್ದಂತೆ. ಅದೂ ಕೂಡಾ ಫಾಸ್ಟ್ ಟ್ರಾಕ್! ಬೇಗ ಬೇಗ ಡ್ರಾ ಬೇಗ ಬೇಗ ಬಹುಮಾನ. ಮಾಳವಿಕಾ ಮೇಡಂ ಒಂದು ಘಂಟೆಯಲ್ಲಿ ಎಂಥೆಂಥದೊ ಫ್ಯಾಮಿಲಿ ಡಿಸ್ಪ್ಯೂಟ್ ಗಳನ್ನು ನಿವಾರಿಸಿ, ನೀವಳಿಸಿ ಎಸೆದಿದ್ದಾರೆ. ಎಲ್ಲವೂ ಖುಲ್ಲಂ ಖುಲ್ಲಾ. ಕ್ಯಾಮೆರಾ ಎದುರೇ ಪಂಚಾಯ್ತಿ.  ಬದುಕು ಜಟಕಾ ಬಂಡಿಯಲ್ಲಿ ನಿನ್ನೆ ಒಂದು ಕೇಸು. ಕೇಸು ಜಡಿದಾಕೆ ಒಬ್ಬ ಹೆಣ್ಣುಮಗಳು. ಆಕೆಗೂ ಆತನ ಗಂಡನಿಗೂ ಮನಸ್ತಾಪ. ಇಬ್ಬರು ಗಂಡುಮಕ್ಕಳಿದ್ದಾರೆ. ಮಕ್ಕಳಿಬ್ಬರೂ ತಂದೆಯ ಜತೆ ಇದ್ದಾರೆ. ಬೇರೆಬೇರೆಯಾಗಿರುವ ನಮ್ಮನ್ನು ಮತ್ತೆ ಸೇರಿಸಿ ಅಂತ ಆಕೆ ಬಂದಿದ್ದಳೆನಿಸುತ್ತದೆ.

ಮಾಳವಿಕಾ ಮೇಡಂ ಇಬ್ಬರನ್ನೂ ಮಾತಾಡಿಸತೊಡಗಿದರು. ಮೇಡಂ ಒಂಥರಾ ಅವರೇ ಲಾಯರ್, ಅವರೇ ಜಡ್ಜ್, ಅವರೇ ಲೀಗಲ್ ಎಕ್ಸ್‌ಪರ್ಟ್ ಇದ್ದಂತೆ. ಅವರು ಪಕ್ಕಾ ಹಳ್ಳಿ ಪಂಚಾಯ್ತಿದಾರರಂತೆ ಕಾಣಿಸುತ್ತಾರೆ. ಒಂದೊಂದು ಸರ್ತಿ ಅವರು ದಾರ್ಶನಿಕರ ಶೈಲಿಯಲ್ಲಿ, ತತ್ತ್ವಜ್ಞಾನಿಗಳ ಶೈಲಿಯಲ್ಲಿ ಮಾತಾಡೋದು ಉಂಟು. ಹೀಗಾಗಿ ಅವರ ಬಳಿ ಸಮಸ್ಯೆ ತೆಗೆದುಕೊಂಡು ಬರುವವರಿಗೆ ಅವರು ಸಾಕ್ಷಾತ್ ಜಗನ್ಮಾತೆಯ ಹಾಗೆ ಕಾಣಿಸಿದರೂ ಆಶ್ಚರ್ಯವಿಲ್ಲ.

ಮುನಿಸಿಕೊಂಡು ಕುಳಿತ ಗಂಡ-ಹೆಂಡತಿ ತಮ್ಮ ನಡುವೆ ಏನು ಸಮಸ್ಯೆ ಅಂತ ಹೇಳದೇ ಹೋದಾಗ ಮಾಳವಿಕಾ ಮೇಂಡಂಗೆ ರೇಗಿಹೋಯಿತು. ಏನು ಸಮಸ್ಯೆ ಹೇಳಿ ಅಂದ್ರೆ ಇಬ್ಬರೂ ಬಾಯಿಬಿಡೊಲ್ಲರು. ಗಂಡಹೆಂಡಿರ ನಡುವೆ ತೀರಾ ಖಾಸಗಿಯಾದ ಬೇಕಾದಷ್ಟು ವಿಷಯಗಳಿರುತ್ತವೆ. ಎಲ್ಲವನ್ನೂ ಎಲ್ಲರೆದುರೂ ಹೇಳೋದಕ್ಕೆ ಸಾಧ್ಯನಾ? ಆದ್ರೆ ಮೇಡಂ ಕೋರ್ಟಿನಲ್ಲಿ ಎಂಥ ಮುಚ್ಚು ಮರೆ?  ಮೇಡಂ ಬಲವಂತ ಮಾಡಿದಾಗ ಕಡೆಗೂ ಆತ ಬಾಯಿ ಬಿಟ್ಟ. ಅವತ್ತೊಂದಿನ ಇವಳು ರಾತ್ರಿ ಹತ್ತು ಗಂಟೆಗೆ ಹೋದೋಳು ಬೆಳಿಗ್ಗೆನೇ ಮನೆಗೆ ಬಂದಿದ್ದಳು. ಯಾವ ಗಂಡಸು ಸಹಿಸಿಕೊಳ್ತಾನೆ ಹೇಳಿ ಮೇಡಂ ಎಂದು ಕೇಳಿದ. ಅದಕ್ಕೆ ನಿನ್ನ ಬಳಿ ಎವಿಡೆನ್ಸ್ ಇದೆಯಾ ಅಂತ ಕೇಳಿದರು ಜಡ್ಜ್ ಮೇಡಂ. ಹೆಂಡತಿ ಮಾತ್ರ ನಾನು ಮನೆಲೇ ಇದ್ದೆ, ಈತ ಸುಳ್ಳು ಹೇಳುತ್ತಿದ್ದಾನೆ ಎಂದಳು.

ಮಾತು ಹೀಗೆ ಮುಂದುವರೆಯುತ್ತಿದ್ದಂತೆ ಬದುಕು ಜಟಕಾ ಬಂಡಿಯಲ್ಲಿ ಮಾಮೂಲಿಯಾಗಿ ನಡೆಯುವಂತೆ ಆತ ಆಕೆಯ ಮೇಲೆ ಎರಡು ಮೂರು ಬಾರಿ ಕೈ ಮಾಡಲು ಯತ್ನಿಸಿದ. ಜಡ್ಜ್ ಮೇಂಡಂ ಕೂತಲ್ಲಿಂದ ಕದಲಲೇ ಇಲ್ಲ. ಸಂಸ್ಕಾರ ಇಲ್ಲದ ಜನ ಹೊಡೆದಾಡುತ್ತಾರೆ. ಮೇಡಂ ಆದ್ರೂ ಏನು ಮಾಡುತ್ತಾರೆ ಪಾಪ. ಹೊಡೆಯೋದು ಗಿಡಿಯೋದು ಎಲ್ಲ ಬಿಟ್ಟುಬಿಡ್ರಿ ಎಂದು ಕೂತಲ್ಲಿಂದಲೇ ಒಂದು ಆವಾಜ್ ಹಾಕಿದರು. ಆಹಾ, ಏನು ಘರ್ಜನೆ, ಎಂಥಾ ಧ್ವನಿ.

ಹೀಗೇ ಚರ್ಚೆ ನಡೀತಾ ಇದ್ದಂತೆ ಗಂಡ-ಹೆಂಡತಿ ಇಬ್ಬರ ಬಿಪಿ ಏರುತ್ತಲೇ ಹೋಯಿತು. ಅವಳು ಸರಿಯಿಲ್ಲ ಅಂತ ಇವನು, ಇವಳು ಸರಿಯಿಲ್ಲ ಅಂತ ಅವನು. ಇಬ್ಬರು ಮಕ್ಕಳು ಪಿಳಿಪಿಳಿ ಕಣ್ಣುಬಿಟ್ಟುಕೊಂಡು ಕೂತಿದ್ದವು. ಕಡೆಗೆ ವಾಗ್ವಾದ ತಾರಕಕ್ಕೆ ಹೋಗುತ್ತಿದ್ದಂತೆ ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಒಬ್ಬಾಕೆ ಬಂದು ಅವನ ಮೇಲೆ ಫೇಡ್ ಫೇಡ್ ಎಂದು ಹೊಡೆಯಲಾರಂಭಿಸಿದಳು. ಆತನ ಹೆಂಡತಿ ಸುಮ್ಮನಿದ್ದಾಳೆಯೇ, ತಾನೂ ಒಂದು ನಾಲ್ಕು ಏಟು ಕ್ಯಾಮೆರಾ ಎದುರು ಹಾಕೇ ಬಿಡೋಣ ಅಂತ ಅವನ ಮೇಲೆ ಏರಿ ಹೋದಳು. ಇಬ್ಬರು ಹೆಂಗಸರು ದಾಳಿ ಮಾಡುವಾಗ ಈತ ಸುಮ್ಮನಿದ್ದಾನೆಯೇ? ಒಬ್ಬಳನ್ನು ಎಳೆದು ಬಿಸಾಕಿ ಇನ್ನೊಬ್ಬಳಿಗೆ ಗುದ್ದಿದ. ಪರಿಣಾಮವಾಗಿ ಗುದ್ದಿಸಿಕೊಂಡ ಹೆಂಡತಿ ಪ್ರಜ್ಞೆ ತಪ್ಪಿ ಬಿದ್ದಳು. ಜಗಳ ಒಂದು ಹಂತ ತಲುಪುವವರೆಗೆ ಕಾಯ್ದು, ಸೂಪರ್ ವಿಶುಯಲ್‌ಗಳು ಸಿಕ್ಕಾದ ಮೇಲೆ ಜಟಕಾಬಂಡಿಯ ಸಹಾಯಕ ಸಿಬ್ಬಂದಿ (ಬೌನ್ಸರ್‌ಗಳು ಅಂತ ಕರೆಯುವುದು ಅಪಚಾರ.) ಬಂದು ಜಗಳ ಬಿಡಿಸಿದರು.

ನಂತರ ಜಟಕಾ ಬಂಡಿಯವರು ಪೊಲೀಸರಿಗೆ ಕರೆ ಮಾಡುತ್ತಾರೆ. ಪೊಲೀಸರು ಬಂದು ಇಬ್ಬರ ಕಡೆಯವರನ್ನೂ ಸ್ಥಳದಿಂದ ಹೊರಗೆ ಕಳಿಸುತ್ತಾರೆ. ಥೇಟು ಎಲ್ಲ ಸಿನಿಮಾ ಸೀನುಗಳ ಹಾಗೆ. ಎಂಥ ಅದ್ಭುತ ಶೋ. ಎಂಥ ಅದ್ಭುತ ಎಡಿಟಿಂಗ್. ಅದರ ಕ್ಲೈಮ್ಯಾಕ್ಸ್ ಕೂಡ ಅದ್ಭುತವಾಗಿದೆ. ನಿಧಾನವಾಗಿ ಕೇಳಿ.

ಇವರೆಲ್ಲ ಹೀಗೆ ನಾಯಿನರಿಗಳಂತೆ ಕಾದಾಡುವಾಗ ಅತ್ತ ಜಡ್ಜ್ ಮೇಂಡಂ ಮಾತ್ರ ಕೂತ ಕುರ್ಚಿಯಿಂದ ಏಳಲೇ ಇಲ್ಲ. ಪಾಪ, ಅವರು ಆಘಾತದಿಂದ ಜರ್ಝರಿತರಾಗಿದ್ದರು. ಆಮೇಲೆ ಸುಧಾರಿಸಿಕೊಂಡು ಎದ್ದುನಿಂತು ಒಂದು ಪ್ರವಚನದ ಸ್ವರೂಪದ ಭಾಷಣ ಹೊಡೆದೇ ಬಿಟ್ಟರು. ನೂರಾರು ಜನರು ತಮ್ಮ ಸಮಸ್ಯೆಗಳನ್ನು ಜಟಕಾ ಬಂಡಿಯ ವೇದಿಕೆಯಲ್ಲಿ ಇತ್ಯರ್ಥ ಮಾಡಿಕೊಂಡಿದ್ದಾರಂತೆ. ಎಷ್ಟೋ ಜನರಿಗೆ ನೆಮ್ಮದಿ ಸಿಕ್ಕಿದೆಯಂತೆ. ಆದರೆ ಈಗೀಗ ಬದುಕು ಜಟಕಾ ಬಂಡಿಯಲ್ಲಿ ಸಮಸ್ಯೆ ಹಿಡಿದುಕೊಂಡು ಬರ್ತಾ ಇರೋರೆಲ್ಲ ಪರಸ್ಪರ ಹೊಡೆದಾಡಿ, ಕ್ಯಾಮೆರಾ ಎದುರು ಸೀನ್ ಕ್ರಿಯೇಟ್ ಮಾಡಲು ಬರುವವರು. ಹೀಗಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಹೋಗೋದೇ ಅವರಿಗೆ ಬೇಡವಾಗಿದೆಯಂತೆ. ಇನ್ನು ಮುಂದೆ ಈ ಶೋ ಮಾಡಲಾರೆ ಎಂದು ಅವರು ಮೈಕು ಕಿತ್ತುಹಾಕಿ ಹೊರಟೇ ಬಿಟ್ಟರು. ಜಟಕಾ ಬಂಡಿಗೇ ಅವರು ಡೈವೋರ್ಸ್ ಕೊಟ್ಟುಬಿಟ್ಟರು.

ಹಾಗೆ ಅವರು ಹೋಗುವಾಗ  ಜಟಕಾಬಂಡಿಯ ಕ್ಯಾಮೆರಾಗಳು ಹಿಂಬಾಲಿಸುತ್ತವೆ. ಕ್ಯಾಮೆರಾ ಇದ್ದ ಮೇಲೆ ಜನರೂ ಇರಬೇಕಲ್ಲ. ಜಟಕಾ ಬಂಡಿಯ ಅಭಿಮಾನಿ ಪ್ರೇಕ್ಷಕರನೇಕರು ಬಂದು ಹೋಗಬೇಡಿ ಮೇಂಡಂ ಎಂದು ಕಾಡಿಬೇಡುವುದೆಲ್ಲ ದಾಖಲಾಗುತ್ತದೆ. ಆದರೆ ಅಪ್‌ಸೆಟ್ ಆಗಿದ್ದ ಮೇಡಂ ಸೀದಾ ಕಾರು ಹತ್ತಿ ಹೊರಟು ಹೋಗುತ್ತಾರೆ.

ಹಾಗಿದ್ದರೆ ಮಾಳವಿಕಾ ಮೇಡಂ ಇನ್ನು ಜಟಕಾ ಬಂಡಿಯಲ್ಲಿ ಕಾಣಿಸಿಕೊಳ್ಳುವುದಿಲ್ಲವಾ? ಅವರಿಗೆ ಬೇಜಾರಾಗಿ ಹೊರಟೇ ಹೋದರಾ? ಹಾಗಿದ್ದರೆ ಅಖಂಡ ಕರ್ನಾಟಕದ ಜನಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸುವವರು ಯಾರು? ಅನೈತಿಕ ಸಂಬಂಧಗಳನ್ನು ಬಿಡಿಸಿ, ಗಂಡ-ಹೆಂಡಿರನ್ನು ಒಂದು ಮಾಡುವವರು ಯಾರು?

ತಡೀರಿ, ಅಷ್ಟು ಬೇಜಾರು ಮಾಡ್ಕೋಬೇಡಿ. ಮಾಳವಿಕಾ ಮೇಂಡ ಒಂಥರಾ ಜಗನ್ಮಾತೆಯ ತರಹ. ಭಕ್ತರ ಮೇಲೆ ಸಿಟ್ಟು ಎಷ್ಟು ಕಾಲ ಇಟ್ಟುಕೊಳ್ಳಲು ಸಾಧ್ಯ. ರಾತ್ರಿ ಹರಿಯುವುದರಲ್ಲಿ ಅದು ಬಗೆಹರಿಯುತ್ತದೆ. ಕರ್ನಾಟಕದ ಜನರ ಸಂಸಾರಗಳು ಹಾಳಾಗುವುದನ್ನು ಅವರು ಹೇಗೆ ತಾನೇ ನೋಡಿಕೊಂಡು ಇರಲು ಸಾಧ್ಯ? ಮನೆಮನೆಯಲ್ಲಿ ಜನರು ಹೊಡೆದಾಡಿಕೊಂಡು ಬೇರೆಯಾಗುತ್ತಿರುವಾಗ ಅದನ್ನು ನೋಡಿ ಜಗನ್ಮಾತೆಯ ಕರುಳು ಚುರುಕ್ ಎನ್ನದಿರುತ್ತದೆಯೇ? ಅವರು ಬಂದೇ ಬರುತ್ತಾರೆ, ಭಕ್ತರ ಬೇಡಿಕೆಗೆ ತಥಾಸ್ತು ಅಂದೇ ಅನ್ನುತ್ತಾರೆ.

ಆದ್ರೂ ಕೆಲವರು ಪ್ರಶ್ನೆ ಕೇಳಿಯೇ ಕೇಳುತ್ತಾರೆ. ಅಲ್ರೀ, ಇಂಥ ಕೌನ್ಸಿಲಿಂಗ್‌ಗಳನ್ನು ಯಾಕೆ ಖಾಸಗಿಯಾಗಿ ಮಾಡಬಾರದು? ಯಾಕೆ ಕ್ಯಾಮೆರಾ ಮುಂದೆಯೇ ಮಾಡುತ್ತೀರಿ ಅಂತ ಕೆಲವರು ಕೇಳುತ್ತಾರೆ. ನಮ್ದು ಒಂಥರಾ ಲೈವ್ ಟ್ರೈಯಲ್. ಈ ತರಹದ ವ್ಯವಸ್ಥೆ ಯಾವ ಕೋರ್ಟಿನಲ್ಲಿದೆ ಹೇಳಿ. ಕರ್ನಾಟಕದ ಸಮಸ್ತ ಜನರೆದುರು ನಡೆಯುವ ಕೋರ್ಟಿನ ಬಗ್ಗೆ ನಿಮ್ಮದೇನು ತಕರಾರು ಎಂಬುದು ಜಗನ್ಮಾತೆಯ ಭಕ್ತಗಣದ ಅಭಿಪ್ರಾಯ.

ಚಪ್ಪಲಿಯಲ್ಲಿ ಹೊಡೆದಾಡುವವರೆಗೆ ಯಾಕೆ ಸುಮ್ಮನಿರುತ್ತೀರಿ? ಒಂದುವೇಳೆ ಚಪ್ಪಲಿಯಲ್ಲಿ ಹೊಡೆದಾಡಿಕೊಂಡರೂ ಅದನ್ನು ಯಾಕೆ ಟೆಲಿಕಾಸ್ಟ್ ಮಾಡ್ತೀರಿ, ಎಡಿಟ್ ಮಾಡಬಹುದಲ್ಲ ಎಂಬುದು ಹಲವರ ಪ್ರಶ್ನೆ. ಹೊಡೆದಾಡಿ ಅಂತ ಶೋ ನಡೆಸುವವರು ಹೇಳಿರ್ತಾರಾ? ನಾವು ಪಾರದರ್ಶಕವಾಗಿರಬೇಕು ಅಲ್ಲವೇ? ಅದಕ್ಕೆ ಹೊಡೆದಾಡಿದ್ದನ್ನು ತೋರಿಸುತ್ತಾರೆ. ಅದು ತಪ್ಪೆ ಎಂದು ಕೇಳುತ್ತದೆ ಭಕ್ತಗಣ.

ಬಡವರ ಮನೆಯ ಬಾಧಿತರನ್ನೇ ಕರೆಯುತ್ತೀರಿ. ದೊಡ್ಡವರ ಮನೆಗಳಲ್ಲಿ ಜಗಳಗಳಿರುವುದಿಲ್ಲವಾ? ಅವರಿಗೆ ಯಾಕೆ ಕೌನ್ಸಿಲಿಂಗ್ ಮಾಡೋಲ್ಲ. ಬಡವರು ಮಾತ್ರನಾ ಕಿತ್ತಾಡೋದು ಅಂತ ಕೆಲವರು ಕೇಳುತ್ತಾರೆ. ಬಡವರಾದರೆ ಹೆದರಿಸಿ ಕರೆಸಬಹುದು, ಉಳ್ಳವರನ್ನು ಕರೆಸಲು ಆಗುತ್ತಾ? ಅವರು ಇವರನ್ನೇ ಹೆದರಿಸಿಬಿಡಬಹುದು. ಹೋಗ್ಲಿ ಬಿಡಿ, ನಷ್ಟ ಆಗೋದು ಅವರಿಗೇ ತಾನೇ. ಬಂದು ಸಮಸ್ಯೆ ಬಗೆಹರಿಸಿಕೊಳ್ಳೋದ್ರಿಂದ ಬಡವರ ಸಮಸ್ಯೆಗಳು ಬಗೆಹರಿಯುತ್ತಲ್ಲಾ ಅನ್ನುತ್ತದೆ ಭಕ್ತಗಣ.

ಇದೆಲ್ಲ ಹಾಗಿರಲಿ, ಮೇಡಂ ನಿಜಕ್ಕೂ ಸಿಟ್ಟು ಮಾಡಿಕೊಂಡ್ರಾ? ಅಥವಾ ತಮ್ಮ ಭಕ್ತರನ್ನು ಸಣ್ಣದಾಗಿ ಹೆದರಿಸಲು ಬಿಟ್ಟು ಹೋಗ್ತೀನಿ ಅಂದ್ರಾ? ಒಂದು ವೇಳೆ ಮೇಡಂ ಹೋಗೇ ಬಿಟ್ಟರೆ, ಕಚ್ಚಿಕೊಂಡಿರುವ ಟಿಆರ್‌ಪಿ ಯಾರು ತಂದು ಕೊಡುತ್ತಾರೆ. ಬೇರೊಬ್ಬ ಜಡ್ಜ್ ಎಲ್ಲಿಂದ ಕರೆತರೋದು? ಹೀಗೆಲ್ಲ ಚಾನಲ್‌ನವರು ತಲೆಕೆಡಿಸಿಕೊಂಡಿರಬಹುದು ಅಂದುಕೊಂಡಿದ್ದೀರಾ?

ಜಗತ್ತು ನಿತ್ಯಾನಂದಮಯವಾಗಿದೆ ಅನ್ನೋದು ಅವರಿಗೆ ಗೊತ್ತು. ನಿನ್ನೆ ಆದ ನೋವು-ದುಃಖವನ್ನೆಲ್ಲ ಮರೆತು ಮೇಡಂ ವಾಪಾಸ್ ಬರ್ತಾರೆ ಅಂತಾನೂ ಅವರಿಗೆ ಗೊತ್ತು. ನಿನ್ನೆ ಮೇಂಡಂ ವಾಕ್‌ಔಟ್ ಮಾಡಿದ್ರಿಂದ ಜಟಕಾ ಬಂಡಿಗೆ ಇನ್ನಷ್ಟು ಟಿಆರ್‌ಪಿ ಹೆಚ್ಚಾಗಿರುತ್ತೆ ಅನ್ನೋದೂ ಸಹ ಗೊತ್ತು. ಈ ತರಹ ವಾಕ್ ಔಟ್, ಮುನಿಸು ಇಲ್ಲದೇ ಇದ್ದರೆ ಶೋಗೆ ಕಳೆಕಟ್ಟುವುದಾದರೂ ಹೇಗೆ ಹೇಳಿ?

ಮೇಡಂ ಬೇಗ ವಾಪಾಸ್ ಬರಲಿ. ಕರ್ನಾಟಕದ ಆರೇಳು ಕೋಟಿ ಕನ್ನಡಿಗರ ಮನೆಮನೆಗಳ ಸಮಸ್ಯೆಗಳನ್ನೆಲ್ಲ ಅವರು ಇತ್ಯರ್ಥ ಮಾಡಲಿ. ಒಂದೊಂದು ಸರ್ತಿ ಜಗಳ ಆಗುತ್ತಪ್ಪಾ? ಜನ ಚಪ್ಪಲಿಲೂ ಹೊಡೆದಾಡುತ್ತಾರೆ, ಬಿಪಿ ಏರಿದರೆ ಮಚ್ಚಲ್ಲೂ ಹೊಡೆದಾಡುತ್ತಾರೆ. ನಿನ್ನೆ ಒಬ್ಬಳು ಮೂರ್ಛೆ ತಪ್ಪಿದ್ದಾಳೆ, ನಾಳೆ ಇನ್ನ್ಯಾರೋ ಕೊಲೆಯೂ ಆಗಿಬಿಡಬಹುದು. ಆಗಲಿಬಿಡಿ. ಎಲ್ಲ ಸಾರ್ವಜನಿಕರ ಎದುರು, ಕ್ಯಾಮೆರಾ ಎದುರು ನಡೆಯುತ್ತಲ್ಲಾ? ಎವಿಡೆನ್ಸ್ ಇರುತ್ತೆ, ಆ ಪ್ರಕರಣದ ವಿಚಾರಣೆಯನ್ನೂ ಜಟಕಾ ಬಂಡಿಯ ಕೋರ್ಟಿನಲ್ಲೇ ಮಾಡಬಹುದು. ಕೊಂದವರಿಗೆ ಶಿಕ್ಷೆ ಆಗುತ್ತೆ. ಮನೆಯಲ್ಲಿ ಹೊಡೆದಾಡಿಕೊಂಡು ಸಾಯುವವರು ಸ್ಟುಡಿಯೋದಲ್ಲಿ ಸತ್ತರೆ ಏನಂತೆ, ಕಾರ್ಯಕ್ರಮಕ್ಕೆ ಇನ್ನಷ್ಟು ಟಿಆರ್‌ಪಿ ಬರುತ್ತೆ. ಸಮಸ್ಯೆ ತೆಗೆದುಕೊಂಡು ಬರೋರು ಜಾಸ್ತಿಯಾಗ್ತಾರೆ. ಅಲ್ಲಿಗೆ ಅಖಂಡ ಕರ್ನಾಟಕದ ಸಮಸ್ಯೆಗಳೆಲ್ಲ ಬಗೆಹರಿದುಬಿಡುತ್ತವೆ.

ನೀವೇನಂತೀರಿ?

23 comments:

  1. ಎಲ್ಲಾರು ಮಾಡುವುದು ಹೊಟ್ಟೆಗಾಗಿ, ತುಂಡು TRP-ಗಾಗಿ

    ReplyDelete
  2. ಜೆರ್ರಿ ಸ್ಪ್ರಿಂಗರ್ ಶೋ ನ ಕನ್ನಡ ಅವತರಣಿಕೆ ಇದು ಎನಿಸುತ್ತದೆ. ಆದರೆ ಅಲ್ಲಿ ಹೊಡೆದಾಟ ಆರಂಭವಾಗುತ್ತಿದ್ದಂತೆ ಬೌನ್ಸರ್ ಗಳು ಬಂದು ಜಗಳ ಬಿಡಿಸುತ್ತಾರೆ. ಇಲ್ಲಿಯ ಹಾಗೆ ತಮಾಷೆ ನೋಡುವುದಿಲ್ಲ. ಟಿಆರ್ಪಿಗಾಗಿ ಮಾಧ್ಯಮಗಳ ಸಂವೇದನಾಶೀಲತೆ ಎಂದೋ ಸತ್ತುಹೋಗಿದೆ ಎನಿಸುತ್ತದೆ.
    -ಸುಘೋಷ್ ಎಸ್ ನಿಗಳೆ

    ReplyDelete
  3. ಇಂತಹ ಶೋ ಗಳು ಬೃಹತ್ ಬ್ರಹ್ಮಾಂಡದಷ್ಟೇ ಅಪಾಯಕಾರಿ. alwa?
    - Chetana

    ReplyDelete
  4. hmmmmmmmmmmmmmmmmm knri ,,, tale male suttige hodedanta satya helidri

    ReplyDelete
  5. ಅದ್ಭುತ ವ್ಯಂಗ್ಯ. ಜಾಣರಿಗೆ ಮಾತಿನ ಪೆಟ್ಟು. ಆದರೆ ಇವರು ಅತಿಜಾಣರು. ನಿಮ್ಮ ಮಾತಿನ ಪೆಟ್ಟು ಜೀರ್ಣಿಸಿಕೊಳ್ಳುವ ಶಕ್ತಿ ಇವರಿಗಿದೆ. ಆದರೆ ಸಂವೇದನಾಶೀಲ ಸಮಾಜ ಇಂಥ ಪಿಡುಗುಗಳಿಗೆ ಪ್ರತಿಕ್ರಿಯಿಸಲೇಬೇಕು. ಇಲ್ಲದಿದ್ದರೆ ಇಡೀ ಸಮಾಜವೇ insensitive ಆಗಿದೆಯೇನೋ ಎಂಭ ಭ್ರಮೆ ಹುಟ್ಟುತ್ತದೆ. ಇಂಥ ಪ್ರತಿಕ್ರಿಯೆಗಳನ್ನು ಕೊಡುವ ಪರ್ಯಾಯ ಶಕ್ತಿ ಇರಲೇಬೇಕು. ಸದ್ಯಕ್ಕೆ ನೀವು ಈ ಕೆಲಸ ಮಾಡುತ್ತಿದ್ದೀರಿ.

    ReplyDelete
  6. ಇಂತಹ ಕಾರ್ಯಕ್ರಮಗಳಿಂದಾಗಿ ಸಂಸಾರದ ಸಣ್ಣಪುಟ್ಟ ಜಗಳಗಳು ಬೀದಿಗೆ ಬೀಳುವಂತಾಗಿವೆ. ಇಂತಹ ಟಿವಿ ಕಾರ್ಯಕ್ರಮಗಳು ಟಿಆರ್ಪಿಗಾಗಿ ನಡೆಸುವ ದಂಧೆಯಾಗಿ ಮಾರ್ಪಾಡಾಗಿವೆ. ಸಾಮಾಜಿಕ ಕಳಕಳಿಯುಳ್ಳ ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ರಮಗಳ ವಿರುದ್ದ ದನಿ ಎತ್ತಬೇಕಿದೆ. ಇಲ್ಲದಿದ್ದರೆ ಪ್ರತಿ ಸಂಸಾರಗಳೊಳಗೂ ಬದುಕು ಜಟಕಾ ಬಂಡಿ ತನ್ನ ಕರಾಮತ್ತು ನಡೆಸುತ್ತದೆ.

    ReplyDelete
  7. ಇತ್ತೀಚೆಗೆ ಒಂದು ಮಾಹಿತಿ ತಿಳಿದು ಬಂತು. ಹಿರಿಯ ಗೆಳೆಯರೊಬ್ಬರು ಮಾಳವಿಕಾ ಈ ಮೈಲ್ ಐಡಿ ಕೇಳಿದರು, ನನಗೆ ಕುತೂಹಲವಾಗಿ ಏಕೆ ಸರ್ ಅಂದೆ, ಅಲ್ಲಪ್ಪ ಈ ಯಮ್ಮ ಜಟಕಾಬಂಡಿ ಹೊಡೆಯೋಕೆ ಅಂತ ತುಮಕೂರಿಂದ ಕೌಟುಂಬಿಕ ಸಮಸ್ಯೆಗೆ ಸಿಕ್ಕ ಇಬ್ಬರನ್ನ ಸ್ಟುಡಿಯೋಗೆ ಕರೆಸಿದ್ರು, ಅದರಲ್ಲಿ ಸಮಸ್ಯೆಯ ಇನ್ನೊಂದು ಧ್ರುವದಲ್ಲಿದವರು ಈ ಪ್ರೋಗ್ರಾಂಗೆ ಕೂರಲು ಸುತರಾಂ ಒಪ್ಪಿರಲಿಲ್ಲ. ಮನೆ ಸಮಸ್ಯೆ ನಾಲ್ಕು ಗೋಡೆ ಮಧ್ಯೆ ಇತ್ಯರ್ಥ ಆಗಬೇಕು, ಟೀವೀಲಿ ಮನೆ ಮಾನ ಹರಾಜಾಗೋದು ನಮಗಿಷ್ಟ ಅಂತ ಹೇಳಿದರೂ ಕೇಳದೆ ಬಲವಂತವಾಗಿ ಕೂರಿಸಿ ಅವರ ಪ್ರೈವೇಟ್ ಸಂಗತಿಗಳನ್ನ ಹರಾಜು ಹಾಕಿದಾರೆ. ಅದಕ್ಕೆ ಆ ಕುಟುಂಬದವರು ನೊಂದು ಹೋಗಿದಾರೆ, ಮಾಳವಿಕಾ ಮೇಲೆ ಬಲವಂತವಾಗಿ ಕೂರಿಸಿ ಮನೆ ಮರ್ಯಾದೆ ಹರಾಜು ಹಾಕಿದ್ದಕ್ಕೆ ಕೇಸು ಹಾಕಿದಾರೆ ಆ ಕುಟುಂಬದವರು. ತುಮಕೂರಿನ ವಕೀಲರು ನೋಟೀಸ್ ಕಳಿಸಿದ್ರೆ ಈಯಮ್ಮ ರಿಸೀವ್ ಮಾಡ್ತಾ ಇಲ್ಲ, ತಪ್ಪಿಸಿಕೊಂಡು ತಿರುಗ್ತಾ ಇದೆ ಈ ಯಮ್ಮ, ಈ ಮೈಲ್ ಐಡಿಗೆ ನೋಟೀಸ್ ರವಾನಿಸಿದರೆ ಅಧಿಕೃತವಾಗಿ ನೋಟೀಸ್ ಕೊಟ್ಟಂತೆ ಆಗತ್ತೆ. ಈಮೈಲ್ ಐಡಿ ಕೊಡು ಅಂದರು. ಈ ಬಗೆಯ ಕೇಸ್ ಗಳಿಗೆ ತಲೆಕೊಟ್ಟು ಮಾಳವಿಕಾರವರು ನೊಂದು ಹೋಗಿದ್ದಾರೇನೋ ಪಾಪ. ಅವರ ಬದುಕಿನ ಜಟಕಾಬಂಡಿಯ ಕಡಾಣಿಗೆ ನ್ಯಾಯಾಲಯ ಕಲ್ಲು ಅಡ್ಡವಿಟ್ಟಂತಿದೆ. ಮೊದಲು ಮಾಳವಿಕಾರನ್ನೇ ಕೂರಿಸಿ ಸಮಸ್ಯೆ ಏನು ಇವರೇ ಅಂತ ಒಂದು ಎಪಿಸೋಡು ಮಾಡಬಹುದೇನೋ. ನಿರ್ಗಮನದ ಹಿಂದೆ ಇದೂ ಒಂದು ಕಾರಣವಿರಬಹುದಾ? - ಹೆಸರು ತಗೊಂಡು ಏನ್ ಮಾಡ್ತೀರ?

    ReplyDelete
  8. ಅರೆ.. ಮಾಳವಿಕ ಅವರಿಗ, ಮಾಯಾಮೃಗ, ಮುಕ್ತ ಮುಕ್ತ ಮಾಳವಿಕ ಅಲ್ಲಾರಿ.. ಮಂದಿ ಮಾತು, ಮನಸ್ಸಿನ್ಯಾಗ ಮತ್ಸರ ತುಂಬಿ.. ಮೂಗು ತೋರಿಸೋ ಮಾಳವಿಕ.... ಮ ಕಾರದ ಆರ್ಥಾ ನ ಹಾಳು ಮಾಡ್ಯಾರ ಮೆಡಮ್ !

    ReplyDelete
  9. inthaha show galannu khanditha nillisa beku. Ganda hendathi jagala undu malaguva varege andru doddoru:( aadre illi live agi telecast agodu sariya?

    ReplyDelete
  10. ಬಡವರ ಬದುಕೆ ಇವರಿಗೆ ಬಂಡವಾಳ. ಅಮಾಯಕ ಜನ ಏನೋ ನಮ್ಮ ಸಮಸ್ಯೆಗಳು ಬಗೆಹರಿಯಬಹುದು ಎಂದು ನೂರು ಆಸೆಗಳನ್ನು ಕಟ್ಟಿಕೊಂಡು ಟಿವಿ ಕಟಕಟೆಗೆ ಬರುತ್ತಾರೆ. ಆದರೆ ಟಿವಿ ರಿಯಾಲಿಟಿ ಶೋಗಳು ಮಾಡುವುದೇ ಬೇರೆ. ಕಾರ್ಯಕ್ರಮಗಳಿಗೆ ಬರುವವರನ್ನು ಉದ್ರೇಕಿಸುತ್ತಾರೆ. ಅವರು ಜಗಳವಾಡಲಿ ಎಂದು ಕಾಯುತ್ತಿರುತ್ತಾರೆ. ತಮಗೆ ಬೇಕಾದಂತೆ ಚಿತ್ರಿಸಿಕೊಂಡು, ಬೇಕಾದ ದೃಶ್ಯಗಳನ್ನು ತೋರಿಸುತ್ತಾರೆ. ತಮ್ಮ ಟಿಆರ್ಪಿ ಹಾಗೂ ಬಂಡವಾಳ ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಇವೆಲ್ಲಾ ತಿಳಿಯದ ಅಮಾಯಕ ಜನ ಹಿಂಗು ತಿಂದ ಮಂಗನಂತಾಗುತ್ತಾರೆ. ತಮಗೆ ಗೊತ್ತಿಲ್ಲದೆಯೇ ಮನೆಯ ಗುಟ್ಟನ್ನು ರಟ್ಟು ಮಾಡಿಕೊಂಡು ಬೀದಿಪಾಲಾಗುತ್ತಿದ್ದಾರೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಥೆ ಅಲ್ಲ ಜೀವನ, ಜೀ ಟಿ.ವಿಯ ಬದುಕು ಜಟಕಾ ಬಂಡಿ ಈ ಕಾರ್ಯಕ್ರಮಗಳಿಂದ ಸಂಸಾರಗಳು ಹಾಳಾಗುತ್ತಿವೆಯೇ ಹೊರತು, ಜನತೆಗೆ ಎಳ್ಳಷ್ಟೂ ಒಳಿತಾಗುತ್ತಿಲ್ಲ. ಜನ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬಾರದು.

    ReplyDelete
  11. ಎಲ್ಲಾರ ಮನೆಯ ದೋಸೆಯಲ್ಲಿ ತೂತು ಇರುತ್ತದೆ. ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ.ಇಬ್ಬರ ಮದ್ಧ್ಯೆ ಜಗಳವಿಲ್ಲದಿದ್ದರೆ ಆ ಸಂಸಾರದಲ್ಲಿ ಸ್ವಾರಸ್ಯವೇ ಇರುವದಿಲ್ಲ. ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ನಾಲ್ಕು ಗೋಡೆಯ ಮದ್ಧ್ಯೆ ಬಗೆಹರಿಸುವ ಸಂಗತಿಯಿದು. ಅದನ್ನು ಬಿಟ್ಟು ಜಗಳದ ಬೆಂಕಿಗೆ ತುಪ್ಪ ಹಾಕುವ ಕೆಲಸವನ್ನು ಈ ಟೀವಿ ವಾಹಿನಿಗಳು ಯಾಕಾದರೂ ಮಾಡುತ್ತಿವೆ.ಏನೂ ತಿಳಿಯದ ಹಳ್ಳಿಯ ಜನರೇಕೆ ಇವರ ಟಿ ಆರ್ ಪಿ ದಾಹಕ್ಕೆ ಬಲಿಯಾಗಬೇಕು ? ಮಾಳವಿಕಾ ಅವರೇ ದಯವಿಟ್ಟು ವಾಪಸ್ ಬರಬ್ಯಾಡ್ರೀ.ಅವರವರ ಜಗಳವನ್ನು ಅವರೇ ತೀರಿಸಿಕೊಳ್ಳಲಿ.ಅದಾಗದಿದ್ದರೆ ಅವರ ಮನೆ ಹಿರಿಯರು ತೀರಿಸುತ್ತಾರೆ.

    ReplyDelete
  12. ಮಾಳವಿಕಾರನ್ನು ಬದುಕು ಜಟಕಾಬಂಡಿ ಕಾರ್ಯಕ್ರಮಕ್ಕೆ ಕರೆದು ಅಲ್ಲಿ ಮಾತುಕತೆ ನಡೆಸಿ ಅವರು ಹೊರನಡೆದ ಪ್ರಕರಣ ಇತ್ಯರ್ಥ ಮಾಡೋದು ಒಳ್ಳೇದು. ಈ ರೀತಿಯ ಅನೇಕ ಪ್ರಕರಣಗಳು ಅಲ್ಲಿ ಇತ್ಯರ್ಥವಾಗಿವೆ!

    ReplyDelete
  13. ಟಿವಿ ಪ್ರೋಗ್ರಾಂಗೋಸ್ಕರ, ಅವರಿಗೆ ಬೇಕಾದ ಜಾಹಿರಾತು ಹಣಕ್ಕೋಸ್ಕರ ಬಡವರ ಮನೆಯ ಕಷ್ಟಗಳು ಯಾಕೆ ಟೀವೀಲಿ ಬಂದು ಅವರ ಮನೆ ಗುಟ್ಟುಗಳು ಇಡೀ ರಾಜ್ಯಕ್ಕೆ ಗೊತ್ತಾಗಬೇಕು ಅನ್ನೋದು ನನ್ ಪ್ರಶ್ನೆ. ಮಾಳವಿಕಾಗೆ ಅಥವಾ ಬೇರೆಲ್ಲ ಟಿವಿಯವರಿಗೆ ಅಷ್ಟೊಂದು ಸಮಾಜಸೇವೆಯ ಹುಚ್ಚಿದ್ದರೆ ಜಾಹಿರಾತಿಲ್ಲದೆ ಇಂಥ ಪ್ರೋಗ್ರಾಂ ನಡೆಸಲಿ ನೋಡೋಣ. ಪೋಲೀಸು, ಕೋರ್ಟು ಅಥವ ಮನೆಯ ಹಿರಿಯರು ಮಾಡಬೇಕಾದ ನ್ಯಾಯ ಪಂಚಾಯ್ತಿ ಕೆಲಸವನ್ನ ದುಡ್ಡಿನಾಸೆಗೆ ಮಾಡಲು ಮಾಳವಿಕಾ ಯಾರು? ಈಯಮ್ಮ ಕೊಟ್ಟ ತೀರ್ಪನ್ನ ಯಾರೂ ಪ್ರಶ್ನೆ ಮಾಡಬಾರದು ಅಂದರೆ ಕೋರ್ಟುಗಳು ಪೋಲೀಸ್ ಸ್ಟೇಷನ್ ಗಳು ಮನೆಯ ಹಿರಿಯರು ಅಂತ ಯಾಕೆ ಇರಬೇಕು? ಮುಚ್ಚಿಬಿಡಲಿ ಬಿಡಿ ಅವನ್ನ. ಮನೆಯ ದೊಡ್ಡೋರಿಗೆ ಏನು ಬೆಲೆ ಬಂತು ಇಲ್ಲಿ. ಅವರ ಬದುಕಿನ ಮಾಗಿದ ಅನುಭವ ಕುಟುಂಬದೊಳಗಿನ ಸಮಸ್ಯೆಗಳನ್ನ ಬಗೆಹರಿಸೋಕೆ ಶಕ್ತವಾಗಿರ್ತವೆ.
    ಮಕ್ಕಳನ್ನ ಎದುರಿಗೆ ಕೂರಿಸಿಕೊಂಡು ಆ ಮಕ್ಕಳ ತಾಯಿಯ ಶೀಲ ಸರಿ ಇಲ್ಲ ಅಂತ ಒಂದು ಎಪಿಸೋಡು ಮಾಡುತ್ತೆ ಈಯಮ್ಮ..ಆ ಮಕ್ಕಳ ಮನಸ್ಥಿತಿಗೆ ಏನಾಗಬೇಕು? ನಾಳೆ ದಿನ ಟಿವಿ ನೋಡಿದ ಆ ಮಕ್ಕಳ ಗೆಳೆಯರು ನಿಮ್ಮ ತಾಯಿ ಶೀಲ ಸರಿ ಇಲ್ವಂತೆ ಟೀವೀಲಿ ಬಂತು ಅಂತ ಆ ಮಕ್ಕಳೆದುರು ಆಡಿಕೊಂಡು ನಕ್ಕರೆ ಈ ಮಕ್ಕಳ ಕಥೆಯೇನು? ನಾಳೆ ದಿನ ಮಾಳವಿಕಾ ಮಕ್ಕಳನ್ನೇ ಕೂರಿಸಿಕೊಂಡು ಅವಿನಾಶ್ ಗೆ ಯಾರಾದರೂ ಈ ಪ್ರಶ್ನೆ ಕೇಳಿದರೆ? ಕಂಡವರ ಮನೆ ಮಾನ ೆಲ್ಮಾಲಾದರೂ ಹರಾಜಾಗಲಿ ಎಪಪಿಸೋಡಿಗೆ ಇಷ್ಳಟು ಅಂತ ದುಡ್ವಿಡು ಬಂದರೆ ಸಾಕಾ? ಇಲ್ಲಿ ಮಾಳವಿಕಾ ಟಿವಿಯವರ ದುಡ್ಡಿನ ದರೋಡೆಯ ಈ ಬಗೆಯ ಪ್ರೋಗ್ರಾಂಗಳ ಒಂದು ಪ್ರತಿನಿಧಿ ಅಷ್ಟೇ. ಮಾಳವಿಕಾನ ಎದುರಿಗಿಟ್ಟುಕೊಂಡು ಉಳಿದೆಲ್ಲರಿಗೂ ಸಂಪಾದಕೀಯದಲ್ಲಿ ಮಂಗಳಾರತಿ ಎತ್ತಲಾಗಿದೆ. ಇದೇ ಬಗೆಯ ಪ್ರೋಗ್ರಾಂ ಅನ್ನ ಒಬ್ಬ ಗಂಡಸು ದುಡ್ಡಿನಾಸೆಗೆ ಮಾಡಿದರೂ ಆತ ಮನೆಮುರುಕನೇ. ಟಿ.ಕೆ. ದುಯಾನಂದ

    ReplyDelete
  14. ಮೇಡಂ ಅವರದು ಪ್ರಾಮಾಣಿಕ ಪ್ರಯತ್ನವೇ ಇರಬಹುದು.ಆದರೆ ಚಾನಲ್ಲುಗಳು ಇಷ್ಟೊಂದು ಸಮಾಜ ಸೇವೆ ಯಾವಾಗಿಂದ ಮಾಡೋಕೆ ಶುರು ಮಾಡಿದವು?
    "ಸಚ್ ಕಾ ಸಾಮ್ನಾ" ಗೊತ್ತಲ್ಲ? ಸತ್ಯವನ್ನೇ ಹೇಳಿಸ್ತೇವೆ ಅಂತ ಬಂದ್ರು.ಇದ್ಯಾವುದೋ ಗಾಂಧೀಸತ್ಯ ಇರಬಹುದು ಅನ್ಕೊಂಡ್ರೆ, ಇನ್ಯಾವುದೋ ಪಲ್ಲಂಗದ ಸತ್ಯ ಹೇಳೋಕೆ ಶುರು ಮಾಡಿದ್ರು.
    ಇನ್ಯಾವುದೋ ಚಾನಲ್ ನಿಮ್ಮ ಪ್ರೀತಿ ಸತ್ಯಾನಾ? ಅಂತ ಕೇಳ ಕೇಳುತ್ತಲೇ ಇನ್ಯಾವುದೋ ಹಸಿ ಸತ್ಯ ತೋರಿಸುತ್ತದೆ.
    ಇದರರ್ಥ ಏನು?
    ಕಾರ್ಯಕ್ರಮದ ಹೆಡ್ಡಿಂಗ್ ಮತ್ತು ಆಶಯ ಮಾತ್ರ ಪ್ರಾಮಾಣಿಕವಾಗಿದ್ದರೆ ಸಾಕು.
    ಮಿಕ್ಕಂತೆ TRPಗಾಗಿ ಅತ್ತೂ ಕರೆದು ಬುದ್ಧಿ ಹೇಳಿ ಜಗಳನಾದ್ರು ಮಾಡ್ಸಿ,ಕೊಲೆನಾದ್ರು ಮಾಡ್ಸಿ.ಕೊನೆಗೆ ಯಾವುದೂ ಆಗ್ಲಿಲ್ಲಾಂದ್ರೆ ನೀವೇ ಸೆಟಗೊಂಡು ಎದ್ದು ಹೋಗಿ!
    ಅಲ್ಲಿಗೆ ಸಂವೇದನೆ ಎಂಬುದು ಗಟಾರಕ್ಕೆ ಬೀಳಲಿ..

    ReplyDelete
  15. ಮೊದಲು ಈ ಟಿ.ಆರ್.ಪಿ ಮಾಹಿತಿ ಸಿಗೋದನ್ನ ನಿಷೇಧಿಸಬೇಕು. ಎಲ್ಲ ಸರಿ ಹೋಗುತ್ತೆ.
    Gamesh K

    ReplyDelete
  16. ಅರ್ಥಪೂರ್ಣ ವ್ಯಂಗ್ಯ ಲೇಖನ. ತುಂಬಾ ಚೆನ್ನಾಗಿದೆ, ಮಾತಿನ ಪೆಟ್ಟು.

    ReplyDelete
  17. kelasavillada badagi makkala himbaaga kettidananthe. Hagaayitu ee episodina kathe. Maalavikaage maneyalli kelasavillaa antha kaanatte.

    ReplyDelete
  18. Excellent sir,
    My personell request please stop this programme "BADUKU JATAKA BANDEE". This is very worst programme by zee kannada.My personell request to Mrs Malavika pls dont come to this programme ,if this programme continues means uoy will face"ibbara jagaladalli kusu badavaithu".

    ReplyDelete
  19. tumba channagide, janarige, malavikarige,zeetvavarige tappina arivagali.

    ReplyDelete
  20. madam pls continue this program.........

    ReplyDelete
  21. nanu kuda kasthurinalli eethara program direct madidde. thaara nadesi kodtidda `idu yaaru bareda katheyo'. naavu endoo yarondigoo compro agiralilla.. yaara para vahisiralilla.. yaarigoo bekantane anyaya madiralilla. nondavara manassanna mattashtu noyisiralilla. monne monne nanna snehite obru ide malavika munde hogidrante. avra kutumbada samasye (ganda hendatiyaddalla) bage harisikodi anta. adre eekeye chikkappa bandu `jaganmatheyanna' sari madikondu shoot madodrinda tappisikondananthe. program poorti shoot madade baree nanna snehiteyaddashte torisi avala manasige mattashtu ghasi madibitru.. ashtu idre ibrannu koorisi nyaya(?) kodisabahudittu. adre nimma jaganmaathe hage madalilla. novige menasina pudi savaridaru.. eega nanna snehite samajada munde tale etti tirugadalu anjuttiddale.. yaaru help madtare?
    -ಕರಣಂ ರಮೇಶ್

    ReplyDelete
  22. ella ityartha madali adare tv li prasara maduvudu channel navaru badukkobekuanta aste

    ReplyDelete
  23. ಇವರಿಗೆಲ್ಲಾ ಕೌನ್ಸಿಲಿಂಗ್ ನ ಬೇಸಿಕ್ ಸೆನ್ಸ್ ಕೂಡ ಇಲ್ಲ,,,,,,,,,,,,,,, ?

    ReplyDelete