Wednesday, June 1, 2011

ಪೆನ್ನು ಕಾಗದವಿದ್ದರೆ, ಪ್ರಾಮಾಣಿಕತೆ ಇದ್ದರೆ ಕನ್ನಡಿಗರು ಕಾಪಾಡ್ತಾರೆ!


ಪೆನ್ನು ಕಾಗದವಿದ್ದರೆ, ಪ್ರಾಮಾಣಿಕತೆ ಇದ್ದರೆ ಕನ್ನಡಿಗರು ಕಾಪಾಡ್ತಾರೆ! 
ಈ ಶೀರ್ಷಿಕೆಯನ್ನು ಹೆಸರಾಂತ ಚಿತ್ರ, ಕಿರುತೆರೆ, ರಂಗಭೂಮಿ ನಿರ್ದೇಶಕ ಬಿ.ಸುರೇಶ ಅವರ ಫೇಸ್‌ಬುಕ್ ಪ್ರೊಫೈಲ್‌ನಿಂದ ಅನಾಮತ್ತಾಗಿ ಎತ್ತಿಕೊಂಡಿದ್ದೇವೆ; ಈಗ ಹೇಳಲು ಹೊರಟಿರುವ ವಿಷಯಗಳಿಗೆ ಈ ಸಾಲು ಸಮರ್ಥ ಅರ್ಥಗಳನ್ನು ನೀಡುತ್ತದೆ ಎಂಬ ನಂಬಿಕೆಯಿಂದ.

ಡಬ್ಬಿಂಗ್ ವಿರೋಧದ ಮಾತುಗಳು ಅತ್ಯಂತ ಪ್ರಖರವಾಗಿ ಆಡುತ್ತಿರುವ ಸುರೇಶ ಅವರು ಡಬ್ಬಿಂಗ್ ಸಿನಿಮಾಗಳು ಬೇಕು ಎನ್ನುವ ವಾದ ನಮ್ಮದು; ನಿಮ್ಮದು? ಎಂಬ ಸಂಪಾದಕೀಯದ ಲೇಖನವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿ ಈ ಕೆಳಗಿನಂತೆ ಬರೆದಿದ್ದರು.

ಕನ್ನಡದ ನಿಜವಾದ ಕಾಳಜಿ ಇರುವವರು, ನಿನ್ನೆ ಭೈರಪ್ಪನವರ ಭಾಷಣ ಕೇಳಿದವರು ಇಲ್ಲಿ (ಸಂಪಾದಕೀಯ ಬ್ಲಾಗ್‌ನಲ್ಲಿ) ಡಬ್ಬಿಂಗ್ ಬೇಡ ಎಂದು ಮತ ಚಲಾಯಿಸಿ ಎಂದು ಕೋರುತ್ತೇನೆ. ಭಾಷೆಯನ್ನ, ಸಂಸ್ಕೃತಿಯನ್ನು ಕೊಲ್ಲುವ ಹುನ್ನಾರವುಳ್ಳ, ಲಾಭಬಡುಕರ ಜಾಣ ಮಾತುಗಳನ್ನು ವಿರೋಧಿಸುವುದು ಎಲ್ಲಾ ಕನ್ನಡಿಗರ ಜವಾಬ್ದಾರಿ. ಡಬ್ಬಿಂಗ್ ಅನ್ನುವುದು ಯಾವುದೇ ಭಾಷೆಯ ತಾಯಿಬೇರಿಗೆ ಬೀಳುವ ಕೊಡಲಿ ಏಟು. ಮೂರು ವರ್ಷಗಳ ಹಿಂದೆ ಮಲೆಯಾಳಿ ಚಿತ್ರರಂಗದಲ್ಲಿ ಇದನ್ನು ಆರಂಭಿಸಿ, ಈಗ ಅಲ್ಲಿನ ಜನ ಕೊರಗುತ್ತಿದ್ದಾರೆ. ಅದು ನಮಗೂ ಆಗುವುದು ಬೇಡ.

ಬಿ.ಸುರೇಶರ ಕರೆಯನ್ವಯ ಸಾಕಷ್ಟು ಮಂದಿ ಈ ಬ್ಲಾಗ್‌ಗೆ ಬಂದು ವೋಟ್ ಮಾಡಿರಬಹುದು. ಆದರೆ ಈ ಲೇಖನ ಸಿದ್ಧಪಡಿಸುತ್ತಿರುವ ಈ ಹೊತ್ತಿಗೆ ಒಟ್ಟು ಚಲಾವಣೆಯಾದ ಮತಗಳು ೩೭೫, ಅದರಲ್ಲಿ ಡಬ್ಬಿಂಗ್ ಬೇಕು ಅಂದವರು ೨೬೬ ಮಂದಿ (೭೦.೯೩%), ಬೇಡ ಅಂದವರು ೧೦೨ ಮಂದಿ (೨೭.೨%), ಏನೂ ಹೇಳಲು ಗೊತ್ತಾಗ್ತಾ ಇಲ್ಲ ಅಂದವರು ೭ ಮಂದಿ (೧.೮೭%). ಅಲ್ಲಿಗೆ ಸರಿಸುಮಾರು ಮುಕ್ಕಾಲು ಪಾಲು ಜನರು ಡಬ್ಬಿಂಗ್ ಇರಲಿ ಎಂದೇ ಹೇಳುತ್ತಿದ್ದಾರೆ.

ಇದಾದ ತರುವಾಯ ಸುರೇಶ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಒಂದು ಸುದೀರ್ಘ ನೋಟ್ ಬರೆದು, ಡಬ್ಬಿಂಗ್ ಬೇಡ ಎಂಬ ತಮ್ಮ ವಾದಕ್ಕೆ ಸಮರ್ಥನೆಗಳನ್ನು, ಡಬ್ಬಿಂಗ್ ಬರಲಿ ಎನ್ನುತ್ತಿರುವವರಿಗೆ ಉತ್ತರಗಳನ್ನು ನೀಡಿದ್ದಾರೆ. ಈ ಲೇಖನವನ್ನು ಮತ್ತು ಅದಕ್ಕೆ ಬಂದಿರುವ ಪ್ರತಿಕ್ರಿಯೆಗಳನ್ನು ಮೊದಲು ಓದಲು ನಮ್ಮ ಓದುಗರಿಗೆ ವಿನಂತಿಸುತ್ತೇವೆ. ಲಿಂಕ್ ಇಲ್ಲಿದೆ: https://www.facebook.com/note.php?note_id=213965275304333&comments

ಮುಂದಿನದನ್ನು ಹೇಳುವುದಕ್ಕೆ ಮುನ್ನ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಲೇಬೇಕು. ಬಿ.ಸುರೇಶ ಅವರು ಕನ್ನಡ ರಂಗಭೂಮಿ, ಹಿರಿತೆರೆ ಮತ್ತು ಕಿರುತೆರೆಗಳಲ್ಲಿ ಸಾಕಷ್ಟು ದುಡಿದಿದ್ದಾರೆ. ಅವರು ಸೃಜನಶೀಲರು ಮತ್ತು ಕ್ರಿಯಾಶೀಲರು. ಇತ್ತೀಚಿನ ಅವರ ಪುಟ್ಟಕ್ಕನ ಹೈವೇ ಸಿನಿಮಾದವರೆಗೆ ಅವರು ಸಾಗಿ ಬಂದ ಹಾದಿಯ ಕುರಿತು ನಮಗೆ ಅಭಿಮಾನವಿದೆ. ಕನ್ನಡದ ಕೆಲವು ನಿರ್ದೇಶಕರ ಹಾಗೆ ಅವರು ಖಾಲಿತಲೆಯವರಲ್ಲ, ಬೌದ್ಧಿಕವಾಗಿ ಬೆಳೆದವರು. ಈ ಚರ್ಚೆ ಇನ್ನೂ ಎಷ್ಟು ದೂರ ಸಾಗಿದರೂ ಅವರ ಮೇಲೆ ಈ ಗೌರವ ಹಾಗೆಯೇ ಇರುತ್ತದೆ.

ಇನ್ನೊಂದು ಕಡೆ ಡಬ್ಬಿಂಗ್ ಪರವಾಗಿರುವವರನ್ನು ಕನ್ನಡದ್ರೋಹಿಗಳು, ಸಂಸ್ಕೃತಿಯನ್ನು ಕೊಲ್ಲುವವರು, ಲಾಭಬಡುಕರು ಇತ್ಯಾದಿಯಾಗಿ ಗೇಲಿ ಮಾಡಲಾಗುತ್ತಿದೆ. ನಿಜ, ಕನ್ನಡ ಚಿತ್ರರಂಗದ ಕೆಲವು ಲಾಭಬಡುಕರು ಡಬ್ಬಿಂಗ್ ಪ್ರಶ್ನೆಯನ್ನು ತಮ್ಮ ಹಿತಕ್ಕಾಗಿ, ವ್ಯವಹಾರಕ್ಕಾಗಿ ಬಳಸುತ್ತಿರಬಹುದು. ಆದರೆ ನಮ್ಮಂಥ ಸಾಮಾನ್ಯರಿಗೇನಿದೆ ಲಾಭ? ಒಂದು ಅಂಶವನ್ನು ಗಮನಿಸಬೇಕು. ಡಬ್ಬಿಂಗ್ ಕುರಿತ ಚರ್ಚೆಯನ್ನು ಮತ್ತೆ ಆರಂಭಿಸಿದ್ದು ಬನವಾಸಿ ಬಳಗದ ಗೆಳೆಯರು. ಕಳೆದ ಎರಡು ಮೂರು ವರ್ಷಗಳಿಂದ ಅವರು ಡಬ್ಬಿಂಗ್ ಯಾಕೆ ಬೇಡ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಈ ಸಂಬಂಧ ಒಂದು ವೈಜ್ಞಾನಿಕ ವರದಿಯನ್ನು ಕೊಟ್ಟವರೂ ಇದೇ ಗೆಳೆಯರು.

ನಮಗೆ ಗೊತ್ತಿದ್ದ ಹಾಗೆ ಬನವಾಸಿ ಬಳಗದವರು ಅಪ್ಪಟ ಕನ್ನಡಾಭಿಮಾನಿಗಳು. ಅಭಿಮಾನಕ್ಕೆ ಮಾತ್ರ ಸೀಮಿತಗೊಳ್ಳದೆ ಏನ್ ಗುರು ಬ್ಲಾಗ್‌ನ ಮೂಲಕ ಕನ್ನಡಪರವಾದ ಧ್ವನಿಯನ್ನು ಮೊಳಗಿಸುತ್ತ ಬಂದವರು. ನೂರಾರು ಕ್ರಿಯಾತ್ಮಕ ಯೋಜನೆ, ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದವರು. ಇದೇ ರೀತಿ ಡಬ್ಬಿಂಗ್ ಬಂದರೆ ತಪ್ಪೇನು ಎಂದು ಪ್ರಶ್ನಿಸುತ್ತಿರುವ ಸಾಕಷ್ಟು ಮಂದಿ ಇಂಥದ್ದೇ ನೆಲೆಯಿಂದ ಬಂದವರಿರಬಹುದು. ಹೀಗಿರುವಾಗ ಕನ್ನಡದ್ರೋಹ, ನಾಡದ್ರೋಹ ಇತ್ಯಾದಿ ಶಬ್ದಗಳನ್ನು ಉಪಯೋಗಿಸಿ ಮಾತನಾಡುವುದು ಕಿಡಿಗೇಡಿತನವಾಗುತ್ತದೆ. ಅದೇ ರೀತಿ ಡಬ್ಬಿಂಗ್ ವಿರುದ್ಧವಾಗಿ ಮಾತನಾಡುತ್ತಿರುವ ಸಾಮಾನ್ಯ ಜನರೂ ಸಹ ಎಲ್ಲಿ ಕನ್ನಡ ಸಂಸ್ಕೃತಿ ನಾಶವಾಗುತ್ತೋ ಎಂಬ ಭೀತಿಗೆ ಸಿಲುಕಿದವರು. ಅವರ ಕನ್ನಡಪ್ರೀತಿಯ ಕುರಿತೂ ಸಹ ಪ್ರಶ್ನೆಗಳನ್ನು ಎಸೆದು ತಿವಿಯುವುದು ಸಲ್ಲ. ನಮ್ಮ ಚರ್ಚೆ ದಾರಿತಪ್ಪದಿರಲಿ ಎಂಬ ಕಾರಣಕ್ಕೆ ಈ ವಿಷಯಗಳನ್ನು ಮೊದಲೇ ಸ್ಪಷ್ಟಪಡಿಸಬೇಕಾಯಿತು.

ಇನ್ನು ವಾಪಾಸು ವಿಷಯಕ್ಕೆ ಬರುವುದಾದರೆ ಫೇಸ್‌ಬುಕ್, ಬ್ಲಾಗ್, ವೆಬ್‌ಸೈಟುಗಳಲ್ಲಿ ನಡೆಯುವ ವೋಟಿಂಗ್‌ಗಳು ಸಂಪೂರ್ಣ ಜನರ ಮನಸ್ಸನ್ನು ಅಭಿವ್ಯಕ್ತಿಸುತ್ತವೆ ಎಂದು ನಾವು ಕುರುಡಾಗಿ ನಂಬಿದವರಲ್ಲ. ಇಂಟರ್‌ನೆಟ್ ಉಪಯೋಗಿಸುವ ಮಂದಿ ಹೇಗೆ ಯೋಚಿಸುತ್ತಾರೆ ಎಂಬುದಕ್ಕೆ ಇಂಥ ವೋಟಿಂಗ್‌ಗಳು ಅನುಕೂಲಕರವಾಗಬಹುದು, ಅಷ್ಟೆ. ಬಿ.ಸುರೇಶ ಅವರು ಸೂಚಿಸಿದ ಮೇಲೂ ಯಾಕೆ ಡಬ್ಬಿಂಗ್ ಪರವಾಗಿಯೇ ಜನರು ಮತ ಚಲಾಯಿಸುತ್ತಿದ್ದಾರೆ ಅನ್ನುವುದು ಕುತೂಹಲಕರ ವಿಷಯ. ಸುರೇಶ್ ಅವರು ಹೀಗೆ ಹೇಳುತ್ತಾರೆ:

ಇಂತಹ ವಿಷಯವನ್ನು ಕುರಿತು ಮತ ಚಲಾಯಿಸೋಣ ಎಂಬ ಮಾತಾಡುವವರಿದ್ದಾರೆ. ಇದು ಬಹುಮತದಿಂದ ನಿರ್ದರಿತವಾಗಬೇಕಾದ ವಿಷಯವಲ್ಲ. ಇದು ಈ ಸಮಾಜದ ಜ್ಞಾನಶಾಖೆಗಳು ತೀರ್ಮಾನಿಸಬೇಕಾದ ವಿಷಯ. ಈ ನಾಡಿನ ಪ್ರಧಾನ ಚಿಂತಕರು ಚರ್ಚಿಸಿ, ತೀರ್ಮಾನ ತಿಳಿಸಲಿ. ಅಡ್ಡಿ ಇಲ್ಲ. Might is Right ಎಂಬ ವಾದವನ್ನು ಒಂದು ಸಂಸ್ಕೃತಿಯನ್ನೇ ಪಲ್ಲಟಗೊಳಿಸಬಹುದಾದ ತೀರ್ಮಾನಕ್ಕೆ ಬಳಸಬಾರದು. ಇಂತಹ ತಪ್ಪಾಗಬಾರದು ಎಂತಲೇ ನಮ್ಮ ಸಂವಿಧಾನ ವಿಧಾನಸಭೆಯೊಂದಿಗೆ ವಿಧಾನ ಪರಿಷತ್ತನ್ನು, ಲೋಕಸಭೆಯೊಂದಿಗೆ ರಾಜ್ಯಸಭೆಯನ್ನು ಇರಿಸಿದೆ. ಯಾವುದೇ ವಿಷಯ ಎರಡೂ ಸಭೆಗಳಲ್ಲಿ ತೀರ್ಮಾನವಾಗಬೇಕು ಎಂದು ನಮ್ಮ ಸಂವಿಧಾನ ಹೇಳುತ್ತದೆ. ಹಾಗೆಯೇ ಡಬ್ಬಿಂಗ್ ಪರವಾಗಿ ಮಾತಾಡುವವರೆಲ್ಲರೂ ಈ ನಾಡಿನ ಸಾಂಸ್ಕೃತಿಕ ಚಿಂತಕರೆಂದು ಕರೆಸಿಕೊಂಡವರ ಜೊತೆಗೆ ಚರ್ಚಿಸಬೇಕಿದೆ. ಹಾಗೆ ಮಾಡದೆ ಡಬ್ಬಿಂಗ್ ತರಬೇಕು ಎಂದು ಪ್ರಯತ್ನಿಸುವುದು ದಬ್ಬಾಳಿಕೆ ಆಗುತ್ತದೆ. ಒಂದು ನಾಡಿನ ಸಂಸ್ಕೃತಿಯ ಮೇಲೆ ಆ ಸಮಾಜವೇ ಬಂಡೆಯನ್ನು ಎಳೆದಂತೆ ಆಗುತ್ತದೆ.

ಇದು ಬಹುಮತದಿಂದ ನಿರ್ಧರಿತವಾಗಬೇಕಾದ ವಿಷಯವಲ್ಲ ಎಂದು ಸುರೇಶ ಅವರು ಸಾರಾಸಗಟಾಗಿ ಹೇಳುತ್ತಿದ್ದಾರೆ. ಹಾಗಿದ್ದರೆ ಇದನ್ನು ಯಾರು ನಿರ್ಧರಿಸಬೇಕು? ಈ ನಾಡಿನ ಪ್ರಧಾನ ಚಿಂತಕರು ನಿರ್ಧರಿಸಲಿ ಎಂಬ ಇಂಗಿತ ಸುರೇಶ ಅವರದು. ಈ ಪ್ರಧಾನ ಚಿಂತಕರಾದರೂ ಯಾರು? ಹಾಗಿದ್ದರೆ ಸಿನಿಮಾ ನೋಡುವ ವೀಕ್ಷಕರ ಪಾಲ್ಗೊಳ್ಳುವಿಕೆ ಬೇಡವೇ? ತಮಗೆ ಯಾವುದನ್ನು ನೋಡಬೇಕು/ನೋಡಬಾರದು ಎಂಬ ವಿವೇಚನೆ ಕನ್ನಡ ವೀಕ್ಷಕರಿಗಿಲ್ಲ ಎಂದು ಸುರೇಶ ಅವರು ಸೂಚಿಸುತ್ತಿದ್ದಾರೆಯೇ?

ಬಿ.ಸುರೇಶ ಅವರು ಸಮಗ್ರ ಕನ್ನಡ ಚಿತ್ರರಂಗದ ಪರವಾಗಿ ತಮ್ಮ ಚಿಂತನೆಗಳನ್ನು ಮಂಡಿಸುತ್ತಿದ್ದಾರೆಯೇ? ಅಥವಾ ಒಬ್ಬ ಸಂಸ್ಕೃತಿ ಚಿಂತಕರಾಗಿ ವಾದಿಸುತ್ತಾರೆಯೇ? ಅಥವಾ ಓರ್ವ ಚಿತ್ರ ವೀಕ್ಷಕನಾಗಿ ಈ ವಿಷಯಗಳನ್ನು ಹೇಳುತ್ತಿದ್ದಾರಾ? ಅನ್ನುವುದು ಅವರ ಇಡೀ ಲೇಖನವನ್ನು ಓದಿದ ಮೇಲೂ ಗೊತ್ತಾಗುವುದಿಲ್ಲ.

ಹಾಗೆ ನೋಡಿದರೆ ಅವರು ಕನ್ನಡ ಚಿತ್ರರಂಗದ ಪರವಾಗಿ ತಮ್ಮ ಚಿಂತನೆಗಳನ್ನು ಮಂಡಿಸುತ್ತಿದ್ದರೆ, ಅವರ ವಾದವೇ ಅವರನ್ನು ಸೋಲಿಸಿಬಿಡುತ್ತದೆ. ಅದಕ್ಕೆ ತಕ್ಕ ಸಾಕ್ಷ್ಯಗಳೂ ಅವರ ಸುದೀರ್ಘ ಲೇಖನದಲ್ಲಿದೆ. ಡಬ್ಬಿಂಗ್ ಬೇಡ ಅನ್ನುವ ಚಿತ್ರರಂಗ ರೀಮೇಕ್‌ಗಳಲ್ಲಿ ಮುಳುಗಿಹೋಗಿರುವುದನ್ನು ಸಮರ್ಥಿಸಿಕೊಳ್ಳಲು ಸುರೇಶರಿಂದಾಗಿಲ್ಲ. ರೀಮೇಕ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಕ್ಕೂ ಅವರು ಪರಿತಪನೆಯಂಥ ಮಾತುಗಳನ್ನಾಡಿದ್ದಾರೆ.

ಇನ್ನು ಸಂಸ್ಕೃತಿ ಚಿಂತಕರಾಗಿ ಈ ಮಾತುಗಳನ್ನು ಹೇಳುತ್ತಿದ್ದರೂ ಸುರೇಶರ ವಾದಗಳನ್ನು ಕನ್ನಡ ಚಿತ್ರರಂಗವೇ ಹೊಡೆದುಹಾಕುತ್ತದೆ. ಡಬ್ಬಿಂಗ್ ನಮ್ಮ ಭಾಷೆಯನ್ನು, ನಮ್ಮ ಸಂಸ್ಕೃತಿಯನ್ನು, ನಮ್ಮ ಮುಂದಿನ ತಲೆಮಾರನ್ನು ಸಾರಸಗಟಾಗಿ ಪಲ್ಲಟಗೊಳಿಸಲಿದೆ. ಅದನ್ನು ವಿರೋಧಿಸುವುದು ಅತ್ಯಗತ್ಯ ಅನ್ನುವುದು ಸುರೇಶರ ಹಸಿಬಿಸಿ ವಾದ. ಹಾಗಿದ್ದರೆ ಇವತ್ತಿನ ಕನ್ನಡ ಸಿನಿಮಾಗಳು ಕನ್ನಡ ಭಾಷೆಯನ್ನು, ಸಂಸ್ಕೃತಿಯನ್ನು ಉಳಿಸಿ-ಬೆಳೆಸಿಕೊಂಡು ಬಂದಿವೆಯೇ ಎಂಬ ಮೂಲಭೂತ ಪ್ರಶ್ನೆ ಉದ್ಭವಿಸುತ್ತದೆ.

ಇವತ್ತಿನ ಕನ್ನಡ ಸಿನಿಮಾಗಳ ಪೈಕಿ ಹತ್ತರಲ್ಲಿ ಐದರಲ್ಲಿ ಸಿನಿಮಾದ ನಾಯಕನೇ ರೌಡಿಯಾಗಿರುತ್ತಾನೆ, ಕೊಲೆ ಪಾತಕಿಯಾಗಿರುತ್ತಾನೆ. ಹಾಗಿದ್ದರೆ ಅರ್ಧದಷ್ಟು ಕನ್ನಡಿಗರು ರೌಡಿಗಳು, ಕೊಲೆಗಡುಕರಾಗಿದ್ದಾರೆಯೇ? ಕರ್ನಾಟಕದ ಜನರ ನಿಜವಾದ ಬದುಕು-ಸಂಸ್ಕೃತಿಯನ್ನು ಎಷ್ಟು ಸಿನಿಮಾಗಳು ಪ್ರತಿಬಿಂಬಿಸುತ್ತಿವೆ? ಅಷ್ಟಕ್ಕೂ ಸುರೇಶರಂಥ ಕೆಲವರನ್ನು ಹೊರತುಪಡಿಸಿದರೆ ಸಿನಿಮಾ ನಿರ್ದೇಶಕರಿಗೆ ಸಂಸ್ಕೃತಿ ಎಂಬ ಶಬ್ದಕ್ಕೆ ಏನಾದ್ರೂ ಅರ್ಥ ತಿಳಿದಿದೆಯೇ?

ಸಿನಿಮಾಗಳಲ್ಲಿ ಬಳಸಲಾಗುತ್ತಿರುವ ಕನ್ನಡ ಭಾಷೆಯಾದರೂ ಎಂಥದ್ದು? ತಮಿಳು-ತೆಲುಗು ಹಾವಳಿ ಇರುವ ಬೆಂಗಳೂರಿನ ಗಲ್ಲಿಯೊಂದರಲ್ಲಿ ಮಾತನಾಡುವ ಮಚ್ಚಾ, ಡವ್, ಟಪಾಸ್, ಕುರ್ಪು, ಪೊರ್ಕಿ, ಅಮ್ಮನ್, ಅಕ್ಕನ್ ತರಹದ ಶಬ್ದಗಳನ್ನು ಒಳಗೊಂಡ ಕನ್ನಡವೇ ಇಡೀ ಕರ್ನಾಟಕವನ್ನು ಪ್ರತಿನಿಧಿಸುವ ಕನ್ನಡವೇ? ಹೋಗಲಿ, ಕನ್ನಡ ಸಿನಿಮಾಗಳ ಶೀರ್ಷಿಕೆಗಳಾದರೂ ಎಂಥವು? ಕನ್ನಡ ಭಾಷೆಯನ್ನು ಬೆಳೆಸುವ ರೀತಿಯೇ ಇದು? ಇಡೀ ಕರ್ನಾಟಕದಲ್ಲಿ ಹಲವು ಭಾಗಗಳಲ್ಲಿ ಹಲವು ರೀತಿಯ ಕನ್ನಡವನ್ನು ಮಾತನಾಡಲಾಗುತ್ತದೆ. ಸಿನಿಮಾಗಳಲ್ಲಿ ನೋಡುವ ಭಾಷೆ ಒಂದೇ. ಅದು ಟಿಪಿಕಲ್ ಬೆಂಗಳೂರು ಶ್ರೀರಾಮಪುರದ ಭಾಷೆ. ಮಂಗಳೂರು ಕನ್ನಡ, ಧಾರವಾಡ ಕನ್ನಡ ನಮ್ಮ ಸಿನಿಮಾದವರಿಗೆ ಗೇಲಿಯ ವಸ್ತು, ಕಾಮಿಡಿ ಪಾತ್ರಗಳು ಆಗೊಮ್ಮೆ ಈಗೊಮ್ಮೆ ಬಳಸುವ ಭಾಷೆ.

ಹೋಗಲಿ, ಕನ್ನಡ ಕಿರುತೆರೆಯಲ್ಲಾದರೂ ಕನ್ನಡ ಭಾಷೆಯನ್ನು ಉದ್ಧಾರ ಮಾಡಲಾಗುತ್ತಿದೆಯೇ?  ಬಿ.ಸುರೇಶ ಅವರೇ ಹಿಂದೆ ತಮ್ಮ ಬ್ಲಾಗ್‌ನಲ್ಲಿ ಹೀಗೆ ಬರೆದಿದ್ದರು.

ಇಂದು ನಮ್ಮ ಟೆಲಿವಿಷನ್ನಿನಲ್ಲಿ ಸುದ್ದಿವಾಹಿನಿ, ಸಾಮಾನ್ಯ ಜನರಂಜನೆಯ ಕಾರ್ಯಕ್ರಮಗಳ ವಾಹಿನಿ ಎಂಬ ಎರಡು ಬಗೆಗಳು ಇವೆ. ಅವುಗಳಲ್ಲಿ ಜನರಂಜನೆಯ ವಾಹಿನಿಯನ್ನು ಮೊದಲು ಗಮನಿಸುವುದಾದರೆ; ಇಲ್ಲಿ ಬರುವ ಬಹುತೇಕ ನಿರೂಪಕರು (ಹಾಡಿನ ಕಾರ್ಯಕ್ರಮ ನಡೆಸಿಕೊಡುವವರು) ಕನ್ನಡವನ್ನು ಕಂಗ್ಲೀಷು ಮಾಡಿದ್ದಾರೆ. ಇವರಾಡುವ ಮಾತಿಗೆ ಇರುವ ತೂಕವೂ ಅಂತಹುದೇ. ಇಂತಹ ಕಾರ್ಯಕ್ರಮಗಳನ್ನು ನೋಡುವ ಜನರಿಗೆ ನೇರವಾಗಿ ಇವರ ಭಾಷೆ ತಲುಪುತ್ತಿದೆ. ವಿಶೇಷವಾಗಿ ಖಾಸಗಿ ವಾಹಿನಿಗಳಲ್ಲಿನ ನಿರೂಪಕ/ನಿರೂಪಕಿಯರು ಬಳಸುವ ಭಾಷೆಯನ್ನು ನಿಯಂತ್ರಿಸುವುದು ಕನ್ನಡವನ್ನು ಮುಂದಿನ ತಲೆಮಾರಿಗೆ ಸರಿಯಾಗಿ ದಾಟಿಸುವ ದೃಷ್ಟಿಯಿಂದ ಅಗತ್ಯವಾಗಿದೆ. ಈ ನಿರೂಪಕರು ಬಳಸುವ ಭಾಷೆಯಲ್ಲಿ ಕನ್ನಡಕ್ಕಿಂತ ಹೆಚ್ಚು ಇಂಗ್ಲೀಷ್ ಬಳಕೆಯಾಗುತ್ತಿದೆ ಎಂಬುದೊಂದು ವಿಷಯವಾದರೆ ಇದರೊಂದಿಗೆ ಕನ್ನಡಕ್ಕೆ ಅನೇಕ ಪದಗಳ ಆಮದು ಸಹ ಆಗುತ್ತಿದೆ. ಈ ಹೊಸ ಪದಗಳಿಂದ ಕನ್ನಡ ಭಾಷೆಗೆ ಹೊಸಪದಗಳು ಸಿಕ್ಕಿವೆ. ಇದು ಸಹ ಬಾಷೆಯ ಬೆಳವಣಿಗೆಯ ದೃಷ್ಟಿಯಿಂದ ಅಗತ್ಯವಾದುದೇ ಆಗಿದೆ. ನಾವು ಕಂಪ್ಯೂಟರ್ ಎಂಬ ಪದಕ್ಕೆ ಗಣಕ ಯಂತ್ರ ಅನ್ನುವುದಕ್ಕಿಂತ ಅದನ್ನು ಕಂಪ್ಯೂಟರ್ ಎನ್ನುವುದೇ ಹೆಚ್ಚು ಸೂಕ್ತ. ಹಾಗೆಯೇ ಪೋಲೀಸರಿಗೆ ಆರಕ್ಷಕರು ಎನ್ನುವುದಕ್ಕಿಂತ ಪೋಲೀಸ್ ಎಂದೇ ಬಳಸುವುದು ಅನುಕೂಲ. ಭಾಷೆಯ ದೃಷ್ಟಿಯಿಂದ ನಮ್ಮಲ್ಲಿ ಅಷ್ಟು ಉದಾರತೆ ಇರಲೇಬೇಕಾಗುತ್ತದೆ. ಎಲ್ಲಾ ಪದಗಳನ್ನು ಕನ್ನಡಕ್ಕೆ ತರುತ್ತೇವೆ ಎಂದು, ಸಂಸ್ಕೃತ ಪದಗಳನ್ನು ಬಳಸುವುದಕ್ಕಿಂತ, ಅಂತಹ ಪದಗಳನ್ನು ಮೂಲ ಸ್ವರೂಪದಲ್ಲಿಯೇ ಬಳಸುವುದು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಆರೋಗ್ಯಕರ.
ಇನ್ನು ಇದೇ ವಾಹಿನಿಯಲ್ಲಿ ಬರುತ್ತಿರುವ ಧಾರಾವಾಹಿಗಳಿಗೆ ಬರೋಣ. ಇಲ್ಲಿ ಕನ್ನಡವನ್ನು ಎಚ್ಚರಿಕೆಯಿಂದ ಬಳಸುವ ಬರಹಗಾರರ ಮತ್ತು ನಿರ್ದೇಶಕರ ಸಂಖ್ಯೆ ಕಡಿಮೆಯಾಗುತ್ತಿದೆ. ಅಂತೆಯೇ ಕಲಾವಿದರಲ್ಲಿಯೂ ಕನ್ನಡ ಬಳಕೆಯ ಚಚ್ಚರಗಳು ಕ್ಷೀಣಿಸುತ್ತಿವೆ. ಹೀಗಾಗಿ ನಿರೂಪಕ/ನಿರೂಪಕಿಯರ ಸ್ಥಿತಿಯೇ ಬಹುತೇಕ ಕಲಾವಿದರದ್ದೂ ಆಗಿದೆ. ಈ ವಿಷಯ ಕುರಿತಂತೆ ಆಯಾ ವಾಹಿನಿಯ ಕಾರ್ಯಕ್ರಮ ಮುಖ್ಯಸ್ಥರು ವಿಶೇಷ ಕಾಳಜಿ ವಹಿಸಬೇಕಾಗಿದೆ. ಇದಲ್ಲದೆ ಈಚೆಗೆ ವಾಹಿನಿಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಮೂಲಕತೆಗಳನ್ನು ಸಿದ್ಧಪಡಿಸಿಕೊಳ್ಳುವ ಸಮಯವಿಲ್ಲದ ಕಾರಣ ಇತರ ಭಾಷೆಗಳಿಂದ ಎರವಲು ಕತೆಗಳನ್ನು ತೆಗೆದುಕೊಂಡು ಪುನರ್‌ನಿರ್ಮಾಣ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇಂತಹ ಕಾರ್ಯಕ್ರಮಗಳ ನಿರ್ದೇಶಕರು ಬಹುಮಟ್ಟಿಗೆ ಪರಭಾಷೆಯವರೇ ಆಗಿರುತ್ತಾರೆ. ಆದ್ದರಿಂದ ಕಲಾವಿದರು ಬಳಸುವ ಕನ್ನಡದ ಮೇಲೆ ಅಧಿಕಾರಸ್ಥವಾಗಿ ಮಾತಾಡುವುದು ಅಂತಹ ಪರಭಾಷಿಕರಿಗೆ ಸಾಧ್ಯವಾಗುವುದಿಲ್ಲ. ಇದರಿಂದಾಗಿಯೂ ನಮ್ಮ ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಕಲಾವಿದರ ಕನ್ನಡಕ್ಕೆ ಸಾಕಷ್ಟು ತೊಂದರೆಗಳು ಆಗುತ್ತಿವೆ. ಈ ದೃಷ್ಟಿಯಿಂದ ಕನ್ನಡ ವಾಹಿನಿಗಳಲ್ಲಿ ತಯಾರಾಗುವ ಕಾರ್ಯಕ್ರಮಗಳಿಗೆ ಕನ್ನಡಿಗರನ್ನೇ ನಿರ್ದೇಶಕರನ್ನಾಗಿ ಆಯ್ದುಕೊಳ್ಳಬೇಕು ಎಂದು ಕನ್ನಡಿಗರೆಲ್ಲರೂ ವಾಹಿನಿಗಳ ಮೇಲೆ ಒತ್ತಡ ತರಬೇಕಾಗುತ್ತದೆ.

ಕನ್ನಡ ಕಿರುತೆರೆಯ ಧಾರಾವಾಹಿಗಳಲ್ಲಿ ಮಹಿಳೆಯರ ಪಾತ್ರಗಳೇ ಮುಖ್ಯ ಭೂಮಿಕೆಯಲ್ಲಿರುತ್ತವೆ. ನಾಯಕ-ಖಳನಾಯಕ ಪಾತ್ರಗಳಿಗಿಂತ ನಾಯಕಿ-ಖಳನಾಯಕಿ ಪಾತ್ರಗಳೇ ಇಲ್ಲೆ ಮೆರೆಯುತ್ತವೆ. ಗಂಡ-ಹೆಂಡತಿ ಜತೆಗೆ ಪ್ರೇಯಸಿ ಇಲ್ಲದಿದ್ದರೆ ಕಥೆಯೇ ಮುಂದೆ ಸಾಗುವುದಿಲ್ಲ. ಅನೈತಿಕ ಸಂಬಂಧಗಳೇ ಈ ಸೀರಿಯಲ್ಲುಗಳ ಜೀವಾಳ. ಪ್ರತಿ ಧಾರಾವಾಹಿಗಳಲ್ಲೂ ನೀಚ, ಕೊಲೆಗಡುಕ ಹೆಣ್ಣುಮಕ್ಕಳು ಇದ್ದೇ ಇರುತ್ತಾರೆ. ಕರ್ನಾಟಕ ಇಷ್ಟು ಹೊಲಸೆದ್ದು ಹೋಗಿದೆಯೇ? ಈ ಸೀರಿಯಲ್ಲುಗಳು ನಿಜವಾಗಿಯೂ ಕರ್ನಾಟಕದ ಹೆಣ್ಣುಮಕ್ಕಳನ್ನು ಪ್ರತಿನಿಧಿಸುತ್ತವೆಯೇ?

ವಿಷಯ ಇಷ್ಟೆಲ್ಲ ಇರುವಾಗ ಡಬ್ಬಿಂಗ್ ಸಿನಿಮಾಗಳು ಕನ್ನಡ ಭಾಷೆಯನ್ನು, ಸಂಸ್ಕೃತಿಯನ್ನು ಪಲ್ಲಟಗೊಳಿಸುತ್ತವೆ ಎಂಬುದು ಎಷ್ಟು ಸರಿ? ಸಂಸ್ಕೃತಿಯೇ ಗೊತ್ತಿಲ್ಲದ ಜನರು ಸಂಸ್ಕೃತಿಯನ್ನು ಉಳಿಸುವ ಮಾತನಾಡಿದರೆ ಅದು ನಗೆಪಾಟಲಿಗೆ ಈಡಾಗುತ್ತದೆ.

ಇನ್ನು ನಮ್ಮ ಮೂಲಭೂತ ಪ್ರಶ್ನೆಗಳಿಗೆ ಸುರೇಶ ಅವರೂ ಸೇರಿದಂತೆ ಕನ್ನಡ ಚಿತ್ರರಂಗದ ದಿಗ್ಗಜರು ಉತ್ತರಿಸಲಾರರು. ಈಗ ನಮ್ಮ ಚಿತ್ರರಂಗ ನಡೆಸಿಕೊಂಡು ಬರುತ್ತಿರುವ ಡಬ್ಬಿಂಗ್ ನಿಷೇಧಕ್ಕೆ ಕಾನೂನಿನ ಮಾನ್ಯತೆಯೇ ಇಲ್ಲ. ಹಾಗೆಲ್ಲ ಕಲೆ-ಸಿನಿಮಾ-ಸಂಸ್ಕೃತಿಯನ್ನು ನಿರ್ಬಂಧ, ನಿಷೇಧಗಳಲ್ಲಿ ಇಡಲಾಗದು. ಎಷ್ಟು ಕಾಲದವರೆಗೆ ಈ ನಾಟಕ ಜಾರಿಯಲ್ಲಿರುತ್ತದೆ?

ಒಂದು ವೇಳೆ ನಾವೇ ಒಂದು ಥೇಟರ್ ನಿರ್ಮಿಸಿ, ನಾವೇ ಒಂದು ಡಬ್ಬಿಂಗ್ ಸಿನಿಮಾ ನಿರ್ಮಿಸಿ ನಿಮ್ಮ ಚೇಂಬರ್ ಹಂಗು-ಮುಲಾಜಿಗೆ ಬೀಳದೆ ಸಿನಿಮಾ ಪ್ರದರ್ಶಿಸಿದರೆ ಏನು ಮಾಡುತ್ತೀರಿ? ನಿಮ್ಮ ಬಳಿ ಬಳಸಲು ಯಾವ ಅಸ್ತ್ರವಿದೆ? ನಿಮ್ಮ ಚೇಂಬರ್‌ನ ಸದಸ್ಯರೇ ಅಲ್ಲದವರನ್ನು ನಿಷೇಧಿಸುತ್ತೀರಾ? ನಾಲ್ಕು ವಾರಗಳ ನಿಷೇಧ ಹೇರಿದ ಕಾರಣಕ್ಕೆ ರಿಲಯನ್ಸ್ ಸಂಸ್ಥೆಯವರು ದುಬಾರಿ ಪರಿಹಾರ ಕೋರಿ ಹೂಡಿರುವ ಮೊಕದ್ದಮೆಯನ್ನು ಚೇಂಬರ್ ಎದುರಿಸುತ್ತಿಲ್ಲವೆ? ಇಷ್ಟೆಲ್ಲ ಗೊತ್ತಿದ್ದೂ ನಮ್ಮ ಚಲನಚಿತ್ರ ರಂಗದ ಗಣ್ಯರು ಪಾಳೇಗಾರಿಕೆ ಪ್ರದರ್ಶಿಸುವುದು ಯಾಕೆ?

ಚಿತ್ರರಂಗದವರ ಹಾಗೆ ಉಳಿದವರೆಲ್ಲರೂ ವರ್ತಿಸಿದರೆ ಏನಾಗಬಹುದು. ಒಂದು ವೇಳೆ ಕನ್ನಡ ಸಾಹಿತ್ಯ ಪರಿಷತ್‌ನಂಥ ಸಂಸ್ಥೆ ಯಾವುದೇ ಕಾರಣಕ್ಕೂ ಇತರ ಭಾಷೆಗಳ ಸಾಹಿತ್ಯ ಕೃತಿಗಳ ಅನುವಾದವನ್ನು ಯಾವ ಸಾಹಿತಿಗಳೂ ಮಾಡಕೂಡದು, ಅದನ್ನು ಮುದ್ರಿಸಕೂಡದು, ಮಾರಕೂಡದು ಎಂದು ನಿರ್ಬಂಧ ಹೇರಿದರೆ ಹೇಗಿರುತ್ತದೆ?

ಡಬ್ಬಿಂಗ್ ಸಿನಿಮಾದಲ್ಲಿ ಬಳಸುವ ಭಾಷೆಯ ಕುರಿತು ಸುರೇಶರು ಹೇಳುತ್ತಾರೆ. ಯಾಕೆ ಸುರೇಶರಂಥವರೇ ಡಬ್ಬಿಂಗ್ ಸಿನಿಮಾದಲ್ಲಿ ಬಳಸಲಾಗುವ ಭಾಷೆಯನ್ನು ಕನ್ನಡ ಕೇಳುಗರಿಗೆ ಹಿತವಾಗುವಂತೆ, ಕನ್ನಡದ ಸೊಗಡು ಮಾಯವಾಗದಂತೆ ಮಾಡಬಾರದು? ಅದು ಅಷ್ಟು ಅಸಾಧ್ಯದ ಮಾತೇ?

ಕನ್ನಡ ಸಿನಿಮಾಗಳಿಗೆ ನೂರರಷ್ಟು ತೆರಿಗೆ ವಿನಾಯಿತಿ, ಸಬ್ಸಿಡಿ, ಪ್ರಶಸ್ತಿ ಇತ್ಯಾದಿಗಳು ಸೇರಿದಂತೆ ಸರ್ಕಾರ ಬೇಕಾದಷ್ಟು ವಿನಾಯಿತಿಗಳನ್ನು ನೀಡಿದೆ. ಇಷ್ಟಾದರೂ ನಮ್ಮ ಚಲನಚಿತ್ರರಂಗದ ಅಭದ್ರತೆಯಿಂದ ನರಳುವುದನ್ನು ಬಿಟ್ಟಿಲ್ಲ. ಕಳಪೆ ಸಿನಿಮಾಗಳನ್ನು ನಮ್ಮ ಜನರು ಮುಲಾಜಿಲ್ಲದಂತೆ ತಿರಸ್ಕರಿಸುತ್ತಾರೆ ಎಂಬುದು ಗೊತ್ತಿದ್ದರೂ ಕೆಟ್ಟ ಸಿನಿಮಾಗಳನ್ನು ತಯಾರಿಸುವುದನ್ನೂ ಬಿಟ್ಟಿಲ್ಲ. ಸದಬಿರುಚಿಯ ಸಿನಿಮಾಗಳನ್ನು ಪ್ರೇಕ್ಷಕರು ಪುರಸ್ಕರಿಸಿದ್ದಾರೆ, ಬೇಡವಾದವನ್ನು ಮೂಲೆಗೆ ತಳ್ಳಿದ್ದಾರೆ. ಈ ವಾಸ್ತವವನ್ನು ಯಾಕೆ ಇವರು ಅರ್ಥ ಮಾಡಿಕೊಳ್ಳುತ್ತಿಲ್ಲ?

ಡಬ್ಬಿಂಗ್ ಸಿನಿಮಾಗಳು ಭರ್ಜರಿ ಯಶಸ್ಸು ಗಳಿಸಿ ಕನ್ನಡ ಚಿತ್ರರಂಗವೇ ನಾಶವಾಗುತ್ತದೆ ಎಂಬ ಭ್ರಮೆ ಯಾಕೆ ಇವರುಗಳನ್ನು ಆವರಿಸಿಕೊಂಡಿದೆ. ಕನ್ನಡದ ಪ್ರೇಕ್ಷಕರು ಅಷ್ಟು ದಡ್ಡರೇ? ಕನ್ನಡ ಸಿನಿಮಾ ನಿರ್ದೇಶಕರು-ನಿರ್ಮಾಪಕ-ಕಲಾವಿದರಿಗೇಕೆ ಇಷ್ಟೊಂದು ಆತ್ಮವಿಶ್ವಾಸದ ಕೊರತೆ? ಡಬ್ಬಿಂಗ್ ಸಿನಿಮಾಗಳು ಬಂದ ಕೂಡಲೇ ಕನ್ನಡ ಪ್ರೇಕ್ಷಕರು ಇಡೀ ಕನ್ನಡ ಚಿತ್ರರಂಗವನ್ನು ಬೀದಿಗೆ ತಳ್ಳುತ್ತಾರಾ?

ಉತ್ತರ ಸುರೇಶ ಅವರ ಮಾತುಗಳಲ್ಲೇ ಇದೆ.

ಪೆನ್ನು ಕಾಗದವಿದ್ದರೆ, ಪ್ರಾಮಾಣಿಕತೆ ಇದ್ದರೆ ಕನ್ನಡಿಗರು ಕಾಪಾಡ್ತಾರೆ!

ಡಬ್ಬಿಂಗ್ ಬೇಕೆ, ಬೇಡವೇ ಎಂಬ ಮತದಾನದಲ್ಲಿ ಇನ್ನೂ ಪಾಲ್ಗೊಳ್ಳದವರು ದಯವಿಟ್ಟು ಮತ ಚಲಾಯಿಸಿ.

38 comments:

  1. ಡಬ್ಬಿಂಗ್ ಬೇಡ ಎನ್ನುವ ಇದೇ ಬಿ.ಸುರೇಶ್ ಅವರು ತಮ್ಮ ಚಿತ್ರಗಳಿಗೆ ಸೋನು ನಿಗಮ್‍ರಂತಹ ಪರಭಾಷಾ ಗಾಯಕರನ್ನು ಕರೆಸಿ ಹಾಡಿಸಿದ್ದೇಕೆ? ಕನ್ನಡದಲ್ಲಿ ಗಾಯಕ-ಗಾಯಕಿಯರಿಗೇನು ಬರಬಿದ್ದಿತ್ತೇ? ಇದು ಕೇವಲ ಚಲನಚಿತ್ರ ರಂಗಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಜಾಗತಿಕ ಮಟ್ಟದಲ್ಲಿ ನಾವು ಸ್ಪರ್ಧೆಗಿಳಿಯಬೇಕೆಂದರೆ ಇಂಗ್ಲೀಷ್ ಭಾಷೆಯನ್ನು ಬಲ್ಲವರಾಗಿರಲೇ ಬೇಕು. ಅದರ ಅರ್ಥ ನಮ್ಮ ಮಾತೃಭಾಷೆಯನ್ನು ಕೊಲ್ಲಬೇಕೆಂದೇನಲ್ಲ. ನಮ್ಮ ಮಾತೃಭಾಷೆಯನ್ನು ಪೋಷಿಸಿ, ಬೆಳೆಸುವುದರೊಂದಿಗೆ, ಬೇರೆಭಾಷೆಗಳ ಗೆಳೀತನ ಮಾಡಿಕೊಂಡರೆ ಅಂತಹ ಅನಾಹುತವೇನೂ ಆಗುವುದಿಲ್ಲ. ಅದು ನಮ್ಮನ್ನೇ ಬೆಳೆಸುತ್ತದೆ. ನಾವಿಲ್ಲಿ ಕೇವಲ "ಫೆನೆಟಿಕ್" ಆಗಿ ಯಾವುದೇ ಭಾಷೆಯನ್ನು ನೋಡುವುದು ಬೇಡ.

    ReplyDelete
  2. ಆತ್ಮೀಯ ಮಿತ್ರರೇ,
    ನೀವು ನನ್ನ ಬರಹಗಳನ್ನು ಈ ಬಗೆಯಲ್ಲಿ ಗಮನಿಸುತ್ತೀರಿ ಎಂಬುದೇ ನನಗೆ ಮಹಾದಾನಂದ ಕೊಟ್ಟಿದೆ.
    ನಾನು ‘ಬನವಾಸಿ ಬಳಗ’ದ ಎಲ್ಲಾ ಕಾರ್ಯಚಟುವಟಿಕೆಗಳನ್ನೂ ನೋಡುತ್ತಾ ಬಂದಿದ್ದೇನೆ. ಮೆಚ್ಚಿಕೊಂಡಿದ್ದೇನೆ. ಆ ಬಳಗದ ಎಲ್ಲರ ಬಗ್ಗೆ ನನಗೆ ವಿಶೇಷ ಗೌರವ ಇದೆ. ಅವರಲ್ಲಿ ಕೆಲವರೊಡನೆ ನಾನು ವೈಯಕ್ತಿಕವಾಗಿ ಮಾತಾಡಿಯೂ ಇದ್ದೇನೆ. ಅವರ ಸಹಾಯದಿಂದ ನಾನೂ ಒಂದಷ್ಟು ಕಂಪ್ಯೂಟರ್ ಕಲಿತಿದ್ದೇನೆ. ‘ಬನವಾಸಿ ಬಳಗ’ದ ಎಲ್ಲಾ ಕನ್ನಡಿಗರಿಗೆ ನನ್ನ ಶರಣು, ಶರಣಾರ್ಥಿ.
    ನೀವು ಮತ್ತೊಂದು ಬ್ಲಾಗ್‌ನ ಹೆಸರು ಹೇಳಿದ್ದೀರಿ. ‘ಏನ್ಗುರು ಕಾಫಿ ಆಯ್ತಾ?’ ಅದನ್ನು ನಾನು ಹೆಚ್ಚು ಗಮನಿಸಿಲ್ಲ. ಇನ್ನು ಮುಂದೆ ಸಮಯ ಸಿಕ್ಕಂತೆ ನೋಡುತ್ತೇನೆ. ಈ ದಿನಮಾನಗಳಲ್ಲಿ ಆ ಬ್ಲಾಗ್ ನೊಡದೆ ಇದ್ದುದ್ದಕ್ಕೆ ಕ್ಷಮೆಗಳಿರಲಿ. ‘ಕೆಂಡಸಂಪಿಗೆ’ ‘ಅವಧಿ’ಗಳಲ್ಲಿ ಕಳೆದು ಹೋಗುವವನಿಗೆ ಉಳಿದ ಎಷ್ಟೋ ಬ್ಲಾಗ್ ನೋಡಲು ಭೌತಿಕವಾಗಿ ಸಾಧ್ಯವಾಗದು ಎಂಬುದನ್ನು ನೀವೂ ಒಪ್ಪುತ್ತೀರಿ ಎಂದುಕೊಂಡಿದ್ದೇನೆ.
    ನಿಮ್ಮ ಲೇಖನದ ವಿಷಯಕ್ಕೆ ಬರೋಣ. ನೀವು ಈ ಮೇಲಿನ ಲೇಖನದಲ್ಲಿ ಕೇಳಿರುವ ಪ್ರಶ್ನೆಗಳಲ್ಲಿ ಕೆಲವಕ್ಕೆ ತಕ್ಷಣ ಉತ್ತರಿಸಬೇಕೆನಿಸಿ ಇಲ್ಲಿ ಬರೆಯುತ್ತಾ ಇದ್ದೇನೆ.
    ೧. ನಾನು ಸಿನಿಮಾ ಉದ್ಯಮದ ವಕ್ತಾರ ಅಲ್ಲ. ನಾನೂ ಸಹ ನಿಮ್ಮೆಲ್ಲರ ಹಾಗೆ ಸಿನಿಮಾ ಪ್ರೇಮಿ ಹಾಗೂ ಸಿನಿಮಾದ ವಿದ್ಯಾರ್ಥಿ. ಹಾಗಾಗಿ ನನ್ನ ಮಾತುಗಳು ‘ಇದಮಿತ್ಥಂ’ ಎಂದು ಸ್ವೀಕರಿಸಬೇಕಾದ್ದಲ್ಲ. ಅವು ಚರ್ಚಿತವಾಗಬೇಕು. ಆ ಚರ್ಚೆಗೆ ತಾತ್ವಿಕ ಶಕ್ತಿ ಇರಬೇಕು ಎಂದಷ್ಟೇ ನಾನು ಬಯಸುತ್ತೇನೆ.
    ೨. ಮತಚಲಾವಣೆ ಕುರಿತಂತೆ ನೀವು ನನ್ನ ಯಾವ ಮಾತುಗಳನ್ನು ಉದಾಹರಿಸಿದ್ದೀರೋ ಅದಕ್ಕೆ ನನ್ನ ಲೇಖನದಲ್ಲಿಯೇ ‘ಗಾಡ್ಸ್‌ ಮಸ್ಟ್‌ ಬಿ ಕ್ರೇಜಿ’ ಚಿತ್ರದ ಉದಾಹರಣೆಯನ್ನು ನೀಡಿದ್ದೇನೆ.
    ೩. ‘ನಮ್ಮಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ. ಅವುಗಳಲ್ಲಿ ತೋರಿಸುತ್ತಿರುವ ಸಂಸ್ಕೃತಿ ಸರಿಯಾಗಿಲ್ಲ’ ಎನ್ನುವವರ ಅಭಿಪ್ರಾಯಕ್ಕೆ ನನ್ನ ಗೌರವ ಇದೆ. ಆದರೆ ಅದು ಸಾರಾಸಗಟದ ಮಾತು. ಹಾಗಾಗಿದ್ದರೆ ಕನ್ನಡ ಸಿನಿಮಾಗಳಿಗೆ ಪ್ರತೀ ವರ್ಷವು ನಾಲ್ಕಾರು ರಾಷ್ಟ್ರಪ್ರಶಸ್ತಿ ಬರುತ್ತಿರಲಿಲ್ಲ. ಆದರೆ ಅಂತಹ ಸಿನಿಮಾಗಳನ್ನು ನೋಡುವ ಅಭ್ಯಾಸವನ್ನೇ ನಮ್ಮ ಜನ ಕಳಕೊಂಡಿದ್ದಾರೆ ಎಂಬುದನ್ನು ತಾವು ಗಮನಿಸಬೇಕು. ಇರಲಿ. ಒಳ್ಳೆಯ ಸಿನಿಮಾಗಳನ್ನು ಈ ಜನ ನೋಡುತ್ತಿಲ್ಲ. ಅವರು ನೋಡಲು ಆರಿಸಿಕೊಂಡದ್ದು ಸಂಸ್ಕೃತಿ ಹೀನ ಸಿನಿಮಾಗಳು ಎಂತಲೇ ಅಂದುಕೊಳ್ಳೋಣ. ಏನೋ ಸರಿಯಾಗಿಲ್ಲ ಎಂದು ಮೂಗು ಕೊಯ್ದುಕೊಳ್ಳುವಂತೆ, ಇಲ್ಲಿನ ಸಿನಿಮಾಗಳನ್ನು ಸುಧಾರಿಸುವ ಬದಲಿಗೆ ಅದರ ನೆತ್ತಿಯ ಮೇಲೆ ‘ಡಬಿಂಗ್’ ಎಂಬ ಭೂತವನ್ನು ತರುತ್ತೇವೆ ಎನ್ನುವುದು ಸರಿಯಲ್ಲ. (ಇದು ನನ್ನ ಅಭಿಪ್ರಾಯ. ಇಲ್ಲಿ ನಾನು ಬಳಸಿದ ಭೂತ ಎಂಬ ಪದಕ್ಕೆ ಮತ್ತೆ ಹೊಸ ಅರ್ಥ ಕಟ್ಟಿ ಚರ್ಚೆ ಮಾಡಬೇಡಿ)
    ... ಮುಮದುವರೆಯುತ್ತದೆ....

    ReplyDelete
  3. ೪.‘ಹೇರಿಕೆ’ಯೊಂದನ್ನು ಅಮಾಯಕ ಪ್ರೇಕ್ಷಕರ ಮೇಲೆ ಅವರಿಗರಿವಿಲ್ಲದೆಯೇ ಇರುವ ಕಾಲಘಟ್ಟದಲ್ಲಿ ‘ಬನವಾಸಿ ಬಳಗ’ದವರೇ ಆಗಲಿ ಮತ್ಯಾರೇ ಆಗಲಿ ತರುವುದಕ್ಕೆ ಮತ ಚಲಾವಣೆ ಎಂಬುದು ಮಾರ್ಗವಲ್ಲ. ಅದಕ್ಕೆ ವಿಸ್ತೃತ ಚರ್ಚೆ ಆಗಬೇಕು. ಆ ಚರ್ಚೆಗಳಲ್ಲಿ ಸಿಟ್ಟಿಲ್ಲದ, ಸಾವಧಾನದ ಮಾತಾಗಬೇಕು. ಆಮೇಲೆ ತೀರ್ಮಾನಗಳಾಗಬೇಕು ಎಂದಷ್ಟೇ ನನ್ನ ಅಭಿಪ್ರಾಯ.
    ೫. ‘ಕರ್ನಾಟಕದಲ್ಲಿ ಡಬ್ಬಿಂಗ್ ತಡೆಯಲು ಕಾನೂನು ಇಲ್ಲ’ ಎಂದಿದ್ದೀರಿ. ಭಾರತದ ಸಂವಿಧಾನದಲ್ಲಿಯೇ ಪ್ರಾದೇಶಿಕ ಭಾಷೆಗಳ ರಕ್ಷಣೆ ಆಯಾ ರಾಜ್ಯಗಳ ಹೊಣೆ ಎಂಬ ಸಾಲಿದೆ. ಆ ಸಾಲನ್ನು ಹಿಡಿದರೆ ಭಾಷೆಯ ಮೇಲೆ ಆಗುವ ಯಾವ ಆಕ್ರಮಣವನ್ನಾದರೂ ಹೊಡೆದಟ್ಟಬಹುದು. ಮುಂದುವರೆದು ಹೇಳುವುದಾದರೆ, ‘ಡಬ್ಬಿಂಗ್ ತಡೆ’ ಎನ್ನುವುದು ಸಾಮಾಜಿಕ ಕಟ್ಟುಪಾಡು. ಅಂತಹ ಅನೇಕ ಕಟ್ಟುಪಾಡುಗಳನ್ನು ನಾವೆಲ್ಲರೂ ಪಾಲಿಸುತ್ತಾ ಇದ್ದೇವೆ. ಅದರಲ್ಲಿ ಮಹತ್ತರವಾದದು ಲಿಪಿ ಸಂಕೇತಗಳು. ನಾವೆಲ್ಲರೂ ಒಪ್ಪಿಕೊಂಡಿರುವ ಲಿಪಿಯನ್ನು ಬಳಸಿದಾಗ ಮಾತ್ರ ನಮ್ಮಿಬ್ಬರ ಮಧ್ಯೆ ಸಂವಹನ ಸಾಧ್ಯ. ಆ ಒಪ್ಪಿಗೆ ನಮಗೆ ದೊರೆತದ್ದು ಕಾನೂನಿನಿಂದಲ್ಲ. ಕನ್ನಡ ಸಮಾಜದಿಂದ. ಹಾಗೆಯೇ ಆ ಕನ್ನಡ ಸಮಾಜ ‘ಡಬ್ಬಿಂಗ್’ ಬೇಡ ಎಂದು ನಿರ್ಧರಿಸಿದೆ. ಅದೇ ಸಮಾಜ ಆ ನಿರ್ಧಾರ ಬದಲಿಸಲು ಸುಧೀರ್ಘ ಚರ್ಚೆ ಮಾಡಬೇಕಾಗಿದೆ.
    ಹಿಂದೆ ಅ.ನ.ಕೃ ಅವರು ಡಬಿಂಗ್ ವಿರೋಧಿ ಚಳುವಳಿ ಮಾಡುವಾಗ ಆರ್‌.ನಾಗೇಂದ್ರರಾಯರು ಅವರೆಲ್ಲರನ್ನೂ ವಿರೋಧಿಸಿದ್ದರು. ಆಗ ತಯಾರಾಗುತ್ತಿದ್ದ ಬಹುತೇಕ ಡಬಿಂಗ್ ಸಿನಿಮಾಗೆ ಅವರ ಇಡೀ ಕುಟುಂಬ ಕೆಲಸ ಮಾಡುತ್ತಿತ್ತು. ಆರ್‌.ಎನ್‌.ಜಯಗೋಪಾಲ್ ಅವರಂತಹವರು ತಮ್ಮ ಸಿನಿಮಾ ವೃತ್ತಿ ಆರಂಭಿಸಿದ್ದೇ ಡಬಿಂಗ್ ಸಿನಿಮಾಗೆ ಮಾತು, ಹಾಡು, ಧ್ವನಿ ಕೊಡುವ ಮೂಲಕ. ಆದರೆ ಕನ್ನಡ ಸಮಾಜ ತೆಗೆದುಕೊಂಡ ನಿರ್ಧಾರವನ್ನು ಅವರೆಲ್ಲರೂ ಗೌರವಿಸಿದರು. ತಮ್ಮ ಅಭಿಪ್ರಾಯ ಬದಲಿಸಿಕೊಂಡರು.
    ಈಗ ಇಲ್ಲಿ ಪರ-ವಿರೋಧಿ ಮಾತುಗಳನ್ನಾಡುತ್ತಾ ಇರುವವರಿಗೂ ಅಂತಹ ಅವಕಾಶ ಕೊಡಬೇಕಲ್ಲವೇ?
    ೬. ಇಷ್ಟೆಲ್ಲಾ ಆದರೂ, ಡಬಿಂಗ್ ಪರವಾಗಿ ವಾದ ಮಾಡುತ್ತಾ ಇರುವವರ ಎಲ್ಲಾ ತರ್ಕಗಳನ್ನು ಓದಿದ ನಂತರವೂ ನನ್ನ ನಿಲುವು ಬದಲಾಗಿಲ್ಲ. ನಾನಿನ್ನೂ ‘ಡಬಿಂಗ್ ಕನ್ನಡಕ್ಕೆ ಬೇಕಾಗಿಲ್ಲ’ ಎನ್ನುತ್ತೇನೆ. ಹಾಗಾದರೆ ರಿಮೇಕ್ ಇರಲಿ ಎಂದಲ್ಲ. ಅದೂ ಕೂಡ ತಪ್ಪೇ. ‘ಸಿಂಗಂ’ ತರಹದ ಸಿನಿಮಾ ‘ಕೆಂಪೇಗೌಡ’ ಆಗಿ ಬರುವುದನ್ನು ನಾನೂ ಮೆಚ್ಚುವುದಿಲ್ಲ. ಅಥವಾ ‘ತವಸಿ’ಯಂತಹ ಸಿನಿಮಾ ‘ಮಲ್ಲಿಕಾರ್ಜುನ’ ಆಗಿ ತತ್ತರಿಸುವುದನ್ನು ನೋಡುವುದೂ ನನಗೆ ಕಷ್ಟ. ನನ್ನ ಗೆಳೆಯ ಪ್ರಕಾಶ್ ರೈ ನಿರ್ದೇಶಿಸಿದ (ನಾನೂ ಗೆಳೆಯನಿಗಾಗಿಯೇ ಹಣ ಹಾಕಿದ) ‘ನಾನು ನನ್ನ ಕನಸು’ ಕೂಡ ಈ ತಪ್ಪುಗಳಿಂದ ಹೊರತಲ್ಲ. ಆದರೆ ಈ ರಿಮೇಕ್ ತಪ್ಪಿಸಲೆಂದು ‘ಡಬಿಂಗ್’ ತರುವುದನ್ನು ನಾನು ವಿರೋಧಿಸುತ್ತೇನೆ.
    ೭. ‘ನಮ್ಮಲ್ಲಿನ ಬಹುತೇಕ ನಟ-ನಟಿಯರಿಗೆ ಕನ್ನಡ ಬರುವುದಿಲ್ಲ. ಅವರಿಂದ ಕನ್ನಡ ಉಳಿಯುತ್ತದೆಯೇ’ಎಂಬ ಪ್ರಶ್ನೆಗೆ ನನ್ನ ಉತ್ತರವಿಷ್ಟೆ. ಅಂತಹವರಿಗೆ ಕನ್ನಡ ಕಲಿಸುವುದು ಕನ್ನಡ ಬಳಗದ ಎಲ್ಲರ ಜವಾಬ್ದಾರಿ. ನಿಮ್ಮಂತಹ ಕನ್ನಡ ಬಲ್ಲವರು ಸಹ ಸಿನಿಮಾದಲ್ಲಿ ನೇರವಾಗಿ ಭಾಗವಹಿಸಿ. ಕನ್ನಡಿಗರಿಂದಲೇ ಕನ್ನಡ ಬಾರದವರಿಗೆ ಕಲಿಕೆ ಆರಂಭವಾಗಲಿ.
    ಇನ್ನೂ ಮಾತಾಡಲಿಕ್ಕಿದೆ. ಅನೇಕ ಒತ್ತಡಗಳ ನಡುವೆ ಇಷ್ಟು ಹೇಳಿದ್ದೇನೆ. ಎಲ್ಲಾದರೂ ಚರ್ಚೆಯನ್ನು ಮುಖತಃ ಮುಂದುವರೆಸೋಣ.
    ನಿಮ್ಮ ಪ್ರೀತಿ ನಿರಂತರವಾಗಿರಲಿ. ಒಳ್ಲೆಯದನ್ನು ಪ್ರೋತ್ಸಾಹಿಸಿ.
    ನಿಮ್ಮವ
    ಬಿ.ಸುರೇಶ

    ReplyDelete
  4. ಸಿನೆಮಾ ಎನ್ನುವ ಪರಿಕಲ್ಪನೆ ಹುಟ್ಟುವುದಕ್ಕಿಂತಲೂ ಮೊದಲು ಹುಟ್ಟಿದ ಕನ್ನಡ ಬಾಷೆ,ಕಲೆ ಮತ್ತು ಸಂಸ್ಕೃತಿಯನ್ನು ಇವೆಲ್ಲವುಗಳ ನಂತರ ಹುಟ್ಟಿರುವ ಸಿನಿಮಾ ಮಾಧ್ಯಮ ಅಥವಾ ಸಿನಿಮಾ ಮಂದಿ ಕಾಪಾಡಿಬಿಡುತ್ತಾರೆ ಅಥವಾ ಹಾಳುಮಾಡಿಬಿಡುತ್ತಾರೆ ಎಂಬ ವಾದವೇ ಹುಚ್ಚುತನದ ಪರಮಾವಧಿಯಂತೆ ತೋರುತ್ತದೆ. ಯಾವ ಬಾಷೆಯ ಸಿನಿಮಾರಂಗವೂ ಕಾಪಾಡಬೇಕಾದಷ್ಟು ದುರ್ಬಲವಾಗಿ ಯಾವ ಸಂಸ್ಕ್ರೃತಿಯೂ ಆವತ್ತಿಗೂ ಇರಲಿಲ್ಲ, ಈವತ್ತಿಗೂ ಇಲ್ಲ. ಅಸಲಿಗೆ ಸಮಗ್ರ ಕರ್ನಾಟಕದ,ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಲು ಕನ್ನಡ ಸಿನಿಮಾಗಳು ಪ್ರಯತ್ನಿಸಿದ್ದು ಯಾವಾಗ? ಒಂದು ಸ್ಥರದ ಸಭ್ಯ ಸಂಸ್ಕೃತಿ ಮತ್ತು ಕಲೆಯನ್ನು ಕನ್ನಡ ಸಿನೆಮಾಗಳು ಎತ್ತಿ ಹಿಡಿದವೇ ಹೊರತು ಈ ಸೀಮಿತ ಸ್ಥರವನ್ನು ಹೊರತುಪಡಿಸಿ ರಾಜ್ಯದ ಎಲ್ಲೆಡೆಯೂ ಚೆಲ್ಲಿಕೊಂಡಿರುವ ಭಿನ್ನ ಸಂಸ್ಕೃತಿ, ಭಿನ್ನ ಜನಪದಕಲೆ, ಭಿನ್ನ ಭಾಷೆಗಳನ್ನು ಕನ್ನಡ ಬಾಷಾ ಚಿತ್ರರಂಗ ತನ್ನದೆಂದು ಯಾವತ್ತಿಗೂ ಪರಿಗಣಿಸಿಲ್ಲ, ಮಂಗಳೂರು ಕನ್ನಡವನ್ನು ಹಾಸ್ಯನಟರಿಗೂ, ಉತ್ತರ ಕರ್ನಾಟಕದ ಗಂಡುಮೆಟ್ಟಿನ ಜವಾರಿ ಬಾಷೆಯನ್ನು ಖಳನಟರಿಗೂ, ಸುಸಂಸ್ಕೃತರ ಬಾಷೆಯನ್ನು ನಾಯಕ ನಾಯಕಿಯರಿಗೂ ಹರಿದು ಹಂಚಿ ಬ್ರಾಂಡ್ ಮಾಡಿ, ಇದು ಸಾಲದೆಂದು "ಮಚ್ಚಾ ಲುಚ್ಚಾ" ಮಾದರಿಯ ಹೊಸ ಪರಿಭಾಷೆಯನ್ನು ಪರಿಚಯಿಸಿ ಕನ್ನಡ ಬಾಷೆಯ ಒಟ್ಟಂದವನ್ನು ಹಾಳು ಮಾಡಿಟ್ಟಿರುವುದನ್ನು ಸಂಸ್ಕೃತಿಯ ರಕ್ಷಣೆಯೆಂದು ಯಾವ ನಾಲಿಗೆಯಿಂದ ಕರೆಯಬೇಕು? ಡಬ್ಬಿಂಗ್ ಸಿನಿಮಾದಿಂದ ಒಂದು ಸ್ಥರದ ಸೀಮಿತ ಸಂಖ್ಯೆಯ ಜನಗಳ ಸಂಸ್ಕೃತಿಗೆ ಪೆಟ್ಟು ಬೀಳುತ್ತದೆ ಎಂದರೆ ಒಪ್ಪಬಹುದು, ಆದರೆ ಇಡೀ ರಾಜ್ಯದ ಕಲೆ ಸಂಸ್ಕೃತಿ ಮತ್ತು ಭಾಷೆ ಸಿನೆಮಾಮಂದಿಯಿಂದ ರಕ್ಷಣೆಗೊಳಗಾಗುವಷ್ಟು ರೋಗಪೀಡಿತವಾಗಿಯೇನೂ ಇಲ್ಲ. ರೋಗಪೀಡಿತವಾಗಿರುವುದು ಒಂದು ನಿರ್ಧಿಷ್ಟ ಸ್ಥರವನ್ನಷ್ಟೇ ನೋಡುವಂತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುವ ಚಿತ್ರರಂಗವೇ ಹೊರತು ಸಮಗ್ರ ಕರ್ನಾಟಕದ ಭಿನ್ನ ಪ್ರಾಕಾರಗಳ ಸಂಸ್ಕೃತಿಯಲ್ಲ.ಇವರು ಕುಟ್ಟಿ ಪುಡಿ ಮಾಡಿರುವುದನ್ನು ನೇರೂಪು ಮಾಡಿದರೆ ಸಾಕು, ಹುಸಿರಕ್ಷಣೆಯ ಅಗತ್ಯವೇನೂ ಇಲ್ಲ. ಟಿ.ಕೆ. ದಯಾನಂದ

    ReplyDelete
  5. 5. ಡಬ್ಬಿಂಗನ್ನು ವಿರೋಧಿಸುವಾಗ ಡಾ|| ರಾಜಕುಮಾರ್ ಮತ್ತು ಅನಕೃ ಅವರ ಹೆಸರನ್ನು ಮುಂದು ಮಾಡುತ್ತಾರೆ. ಆದರೆ ಅವರು ಯಾಕೆ ವಿರೋಧಿಸಿದರು ಅಂದಿನ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅವಲೋಕಿಸುವ ಮನಸ್ಥಿತಿ ಯಾರಿಗೂ ಇಲ್ಲ. ಅಂತವರ ಹೆಸರನ್ನು ಡಬ್ಬಿಂಗ್ ವಿಚಾರದಲ್ಲಿ ಬಳಸಿ ವಸ್ತುಸ್ಥಿತಿಯನ್ನು ಮರೆಮಾಚಿ, ಅವರಿಗೂ ಇರಿಸು-ಮುರಿಸು ಮಾಡುತ್ತಿದ್ದಾರೆ!!

    ಅಣ್ಣಾವ್ರು ಡಬ್ಬಿಂಗ್ ಬೇಡ ಎಂದು ವಿರೋಧಿಸುತ್ತಿದ್ದಾಗ ಕನ್ನಡ ಚಿತ್ರೋದ್ಯಮ ಮದ್ರಾಸಿನಲ್ಲಿ ನೆಲೆಗೊಂಡಿತ್ತು. ನಮ್ಮ ಚಿತ್ರೋದ್ಯಮ ಇನ್ನೂ ಅಂಬೆಗಾಲಿಡುತ್ತಿದ್ದ ಆ ಸಮಯದಲ್ಲಿ ಕನ್ನಡದ ಚಿತ್ರ ತೆಗೆಯೋದು ತುಂಬಾ ತ್ರಾಸದಾಯಕವಾಗಿತ್ತು ಅನ್ನೋದು ಕನ್ನಡ ಚಿತ್ರರಂಗದ ಇತಿಹಾಸ ತಿಳಿದಿರೋ ಎಲ್ಲರಿಗೂ ಗೊತ್ತು.ಅಂತ ಸಂದರ್ಭದಲ್ಲಿ ಬೇರೆ ಭಾಷೆಯಲ್ಲಿ ಬಂದ ಚಿತ್ರವೊಂದಕ್ಕೆ ಕನ್ನಡದ ದನಿ ಮಾತ್ರ ನೀಡಿ ಇಡೀ ಚಿತ್ರವನ್ನು ಕನ್ನಡೀಕರಿಸಿದರೆ ಕಂಠದಾನ ಕಲಾವಿದರಿಗೆ ಮಾತ್ರ ಅನುಕೂಲವಾಗಿ, ಕನ್ನಡ ಚಿತ್ರಗಳನ್ನೇ ನಂಬಿ ದುಡಿಯುತ್ತಿದ್ದ ಪ್ರತಿಭಾವಂತ ಕಲಾವಿದರಿಗೆ,ತಂತ್ರಜ್ಞರಿಗೆ, ಕಾರ್ಮಿಕರ ಜೀವನಕ್ಕೆ ತೊಂದರೆ ಆಗಿ ನಮ್ಮ ಚಿತ್ರೋದ್ಯಮ ಸಾಯುವುದು ಎಂದು ಮನಗೊಂಡ ಅಣ್ಣಾವ್ರು ಡಬ್ಬಿಂಗ್ಗನ್ನು ವಿರೋಧಿಸಿದ್ದರು. ಟಿಪ್ಪು ಸುಲ್ತಾನ ಹಿಂದಿ ಧಾರಾವಾಹಿ ಕನ್ನಡದಲ್ಲಿ ಬರಲು ವಿರೋಧಿಸಿದಾಗಲೂ ನಮ್ಮ ಚಿತ್ರರಂಗ ಅಥವಾ ಕಿರುತೆರೆ ಮಾಧ್ಯಮ ಇಂದಿನಷ್ಟು ಸಶಕ್ತವಾಗಿರಲಿಲ್ಲ ಎಂಬುದನ್ನು ಡಬ್ಬಿಂಗ್ ವಿರೋಧಿಸುವರು ಅರಿಯಬೇಕು.

    ReplyDelete
  6. ವರ್ಷದ ಹಿಂದೊಮ್ಮೆ ಡಬ್ಬಿಂಗ್ ಬಗ್ಗೆ ನಿಲುಮೆಯಲ್ಲಿ,ದಟ್ಸ್ ಕನ್ನಡದಲ್ಲಿ ಬರೆದಿದ್ದೆ.ಇಲ್ಲಿದೆ ನೋಡಿ

    http://thatskannada.oneindia.in/movies/controversy/2010/09/02-dubbing-boon-or-bane-for-kannada-films.html

    ReplyDelete
  7. sorry to say, that director B suresh has double standards on Dubbing movies. He says, "because of dubbing, Tamil film industry has been forced to make movies on the scripts based on local culture and nativity." and at the same time he says, "NO" for dubbing, in kannada film industry. Does not he want that kannada film industry also should move in that direction of searching nativity? what does he mean, "only award winning directors should make movies on nativity?"
    -Vandana Ithal

    Hope Director Mr.Suresha B will give response for this.

    ReplyDelete
  8. ಪ್ರಶಾಂತ ಉ.June 2, 2011 at 1:22 AM

    ಬಿ. ಸುರೇಶ ಅವರೇ,

    'ಡಬ್ಬಿಂಗ್' ಅನ್ನು ವಿರೋದಿಸಿದ ಹಾಗೇ 'ರಿಮೇಕ್ ಮಾಡುವದನ್ನ' ಯಾಕ್ ವಿರೋದಿಸಬಾರದ್ರಿ ಈ ಕನ್ನಡ ಚಿತ್ರರಂಗ? ಕನ್ನಡ ಚಿತ್ರರಂಗ ಸ್ವಂತತನ ಕಂಡುಕೊಳ್ಳೋ ದಿನ ಬರ್ಲಿ ಅಂತ ಕಾಯ್ತಾ ಇರೋ ಒಬ್ಬ ಅಪ್ಪಟ ಕನ್ನಡ ಅಭಿಮಾನಿ ಕಣ್ರೀ ನಾವು!!

    ReplyDelete
  9. ಸುರೇಶ್ ಅವರೇ

    ಮೊದಲಿಗೆ ನೀವು ಚರ್ಚೆ ಆಗಬೇಕು, ಸಿಟ್ಟಿಲ್ಲಿದ್ದ, ಸಾವಧಾನದ ಮಾತು ಆಗಬೇಕು ಆಮೇಲೆ ಒಳ್ಳೆಯ ಅಭಿಪ್ರಾಯವನ್ನು ಒಪ್ಪಿಕೊಳ್ಳೊಣ ಎಂದಿರುವ ಮಾತು ದಿಟವಾಗಿದೆ, ಆದರೆ ನಿಮ್ಮ ಬರಹದಲ್ಲಿ ಅದು ಕಾಣುತ್ತ ಇಲ್ಲ ಅನ್ನುವುದು ಕೂಡ ವಾಸ್ತವ.
    ನೀವು ಚರ್ಚೆ ಎಲ್ಲ ಆಗುವ ಮುಂಚೆಯೇ ಡಬ್ಬಿಂಗ್ ಅನ್ನುವುದು ಭೂತ, ಪಿಶಾಚಿ, ಸಂಸ್ಕೄತಿ ಅಪೋಸನ ಮಾಡುತ್ತದೆ ಎಂದು ಮತ್ತು ಡಬ್ಬಿಂಗ್ ಪ್ರೊತ್ಸಾಹಿಸುವವರನ್ನು ಕನ್ನಡ ದ್ರೋಹಿಗಳು , ಸಂಸ್ಕೃತಿ ಕೊಲ್ಲುವವರು ಎಂದು ಬ್ರಾಂಡ್ ಮಾಡಿ ಆಮೇಲೆ ನಿಮ್ಮ ವಾದವನ್ನು ಕನ್ನಡ ದ್ರೋಹಿಗಳ ಮಾತು ಕೇಳಬೇಡಿ, ಭೂತ ನಿಮಗೆ ಬೇಕೆ ಎನ್ನುವ ರೀತಿಯಲ್ಲಿ ವಾದ ಇಟ್ಟಿದ್ದೀರಾ. ಆದರೆ ಅವು ಡಬ್ಬಿಂಗ್ ಯಾಕೆ ಬೇಡ ಎನ್ನುವ ಪ್ರಶ್ನೆಯನ್ನಾಗಲಿ ಇಲ್ಲ ಹೇಗೆ ನಾವು ನಾಡದ್ರೋಹಿಗಳು ಆದೆವು ಎಂದಾಗಲಿ ತಿಳಿಸಿಕೊಡುವದಿಲ್ಲ . ನಾಳೆ ಈ ವಿಷಯದಲ್ಲಿ ಚರ್ಚೆ ಆದರೂ ನೀವು ಈ ವಿಷಯದಲ್ಲಿ ನೀವೇ ಕೊಟ್ಟಿರುವ ಪೂರ್ವಗ್ರಹಪೀಡಿತ ಹೊರತಾಗಿ ನೋಡುತ್ತೀರಾ ಎಂಬುದು ನನ್ನ ಸಂಶಯ.

    ನೀವೆ ಒಂದು ಕಡೆ ಮತ ಚಲಾಯಿಸಿ ಎಂದು ಹೇಳಿ, ಅದು ನಿಮ್ಮ ವಿರುದ್ಧ ಬಂದಾಗ ಅದೊಂದೆ ಮಾನದಂಡವಲ್ಲ ಎನ್ನುವುದು ಎಷ್ತರ ಮಟ್ಟಿಗೆ ಸರಿ. ಇದು ಇಂಟರನೆಟ್ ಎಂಬ ವಿಶಾಲ ಪ್ರಪಂಚ, ಇಲ್ಲಿ ಜಗತ್ತಿನ ಎಲ್ಲಾ ಕನ್ನಡಿಗರೂ ಪಾಲ್ಗೊಳ್ಳಬಹುದು ಮತ್ತು ಒಂದು ವರ್ಗದ ಹಿಡಿತದಲ್ಲಿ ಇರದ ಪ್ರಪಂಚ. ಇದು ೨ ಬಾರಿಗೆ ಡಬ್ಬಿಂಗ್ ವಿಷಯದಲ್ಲಿ ಕನ್ನಡ ಗ್ರಾಹಕನು ಒಕ್ಕೊರಿಲಿನಲ್ಲಿ ತನಗೆ ಡಬ್ಬಿಂಗ್ ಬೇಕು ಎಂದು ಹೇಳಿದ್ದಾನೆ. ಇದನ್ನು ನೀವು ಕನ್ನಡಿಗ ಸಮಾಜದ ಬೇಡಿಕೆ ಎಂದು ಪರಿಗಣಿಸೊಲ್ಲ ಎಂದರೆ ನಿಜಕ್ಕೂ ಅಂತರ್ಜಾಲದಲ್ಲಿ ಇರುವ ಎಲ್ಲಾ ಕನ್ನಡಿಗರಿಗೆ ಇದು ಅವಮಾನ ಮಾಡಿದ ಹಾಗೆ.


    ರಾಷ್ಟ್ರಪ್ರಶಸ್ತಿ ಬಂದ ಪುಟ್ಟಕ್ಕನ ಹೈವೆ ಚಿತ್ರವೂ ಉತ್ತಮ ಸಮಾಜಿಕ ಸಂದೇಶ ಹೊಂದಿದೆ ಎಂದು ಬೇರೆ ಭಾಷೆಗೆ ಡಬ್ ಮಾಡಿ ಎಂದಾಗ ನೀವು ಇಲ್ಲ ನನ್ನ ಚಿತ್ರವನ್ನು ಆ ಭ್ಜಾಷೆಯಲ್ಲಿ ಡಬ್ ಮಾಡಿದರೆ ಇಲ್ಲ ಆ ಜನರು ನೋಡಿದರೆ ಸಂಸ್ಕ್ರುತಿ ವಿಭ್ರಮೆ ಅಗುತ್ತಾರೆ
    ನೊಡುವದಾದರೆ ಕನ್ನಡವನ್ನು ಕಲಿತು ನೊಡಲಿ, ಇಲ್ಲ ಬಿಡಿ ಎಂದು ಹೇಳುತ್ತಿರಾ ?

    ಕನ್ನಡ ಚಿತ್ರವನ್ನು ರಾಷ್ಟ್ರಪ್ರಶಸ್ತಿಗೆ ಆಯ್ಕೆ ಮಾಡುವ ಜನರಿಗೆ ಕನ್ನಡ ಬರಲೇಬೇಕು ಎಂಬ ನಿಯಮವನ್ನು ಮಾಡಿದಾಗ
    ಎಷ್ಟು ರಾಷ್ತ್ರಪ್ರಶಸ್ತಿ ಬರಬಹುದು ಎಂಬುದು ನಿಮ್ಮ ಅನಿಸಿಕೆ ?. ರಾಷ್ಟ್ರಪ್ರಶಸ್ತಿ ಅಯ್ಕಾ ಸಮಿತಿಯವರು ಅನೇಕ ಭಾಷೆಗಳ ಚಿತ್ರಗಳನ್ನು ನೋಡುತ್ತಾರೆ, subtitle ಇಲ್ಲಾ ಡಬ್ಬಿಂಗ್ ಮೂಲಕ ತಮಗೆ ಅರ್ಥವಾಗುವ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ ಅಲ್ಲವೇ ?. ಅವರಿಗೆ ಅರ್ಥವಾಗಿ ಮೆಚ್ಚಿದರೆ ಮಾತ್ರ ಪ್ರಶಸ್ತಿ ಪುರಸ್ಕರಿಸುತ್ತಾರೆ .

    ಇವತ್ತು ರಾಷ್ತ್ರಪ್ರಶಸ್ತಿಗೆ ಪಡೆಯುತ್ತಿರುವ ಅನೇಕ ಕನ್ನಡ ಚಿತ್ರಗಳಲ್ಲಿ ಸಾಮನ್ಯ ಅಂಶವನ್ನು ಕಾಣಬಹುದು, ಹೆಚ್ಚು ಕಡಿಮೆ ಅದೇ ನಿರ್ಧೇಶಕರು, ಅದೇ ನಿರ್ಮಾಪಕರು , ಅದೇ ನಟ ನಟಿಯರು .. ಡಬ್ಬಿಂಗ್ ಬಂದರೆ ಇದು ರಾತ್ರೋರಾತ್ರಿ ಬದಲಾಗಿ ಕನ್ನಡಕ್ಕೆ ರಾಷ್ಟ್ರಪ್ರಶಸ್ತಿ ಬರದೇ ಹೋಗುತ್ತದೆಯಾ ?. ಅಷ್ಟೊಂದು ದುರ್ಬಲವಾಗಿದೇಯೆ ನಮ್ಮ ಚಿತ್ರರಂಗ. ಬೇರೆಯವರು ಬೇಡ
    ರಾಷ್ಟ್ರಪ್ರಶಸ್ತಿ ವಿಜೇತರಾದ ನೀವು,ಶೇಷಾದ್ರಿ,ಕಾಸವರಳ್ಳಿಯವರು ನಾಳೆ ಡಬ್ಬಿಂಗ್ ಬಂದ ಕೂಡಲೆ ನಿಮ್ಮ ಚಿತ್ರ ನಿರ್ಮಾಣ ನಿಲ್ಲಿಸಿ
    ಡಬ್ಬಿಂಗ್ ಚಿತ್ರ ಮಾಡುತ್ತೀರಾ ?


    "ಆದರೆ ಅಂತಹ ಸಿನಿಮಾಗಳನ್ನು ನೋಡುವ ಅಭ್ಯಾಸವನ್ನೇ ನಮ್ಮ ಜನ ಕಳಕೊಂಡಿದ್ದಾರೆ ಎಂಬುದನ್ನು ತಾವು ಗಮನಿಸಬೇಕು."
    ಮೊದಲಿಗೆ ಇತ್ತಿಚಿನ ದಿನಗಳಲ್ಲಿ ರಾಷ್ತ್ರಪ್ರಶಸ್ತಿ ಚಿತ್ರಗಳು ತೆರೆ ಕಾಣುತ್ತ ಇವೆ, ಇಲ್ಲವಾದಲ್ಲಿ ಖಾಸಗಿ ಪ್ರದರ್ಶನ ಇಲ್ಲಾ ಸಂವಾದ ಮಾಡಿ ಜನರಿಗೆ ತೋರಿಸುವ ಪ್ರಯತ್ನ ನಡೆಯುತ್ತ ಇದೆ. ಮುಖ್ಯವಾಗಿ ಜನರಿಗೆ ಸುಲಭ ರೀತಿಯಲ್ಲಿ ನೋಡಲು ಸಿಗುತ್ತಿಲ್ಲ ಎಂಬುದು ಸತ್ಯ. ಅದ್ದರಿಂದ ಜನರ ಮೇಲೆ ಗೂಬೆ ಕೂರಿಸುವುದನ್ನು ನಮ್ಮ ಚಿತ್ರರಂಗ ಬಿಡಬೇಕು. ಚಲನಚಿತ್ರ ಮಂದಿರಕ್ಕೆ ಬಂದ ಪ್ರತಿಯೊಬ್ಬ
    ಪ್ರೇಕ್ಷಕನದು ಚಿತ್ರ ನೋಡಲು ಬಂದ ಕಾರಣ ಬೇರೆ ಇರುತ್ತದೆ. ಇಂತಹ ರಾಷ್ತ್ರಪ್ರಶಸ್ತಿ ಚಿತ್ರಗಳನ್ನು ಕನ್ನಡ ಪ್ರೇಕ್ಷಕ ತಿರಸ್ಕರಿಸಿದ ಮಾತ್ರಕ್ಕೆ ಅವನು ಸಂಸ್ಕ್ರುತಿಹೀನ ಆಗುವದಿಲ್ಲ ಎಂಬುದನ್ನು ನಾವು ಮರೆಯಬಾರದು.


    .‘ಹೇರಿಕೆ’ಯೊಂದನ್ನು ಅಮಾಯಕ ಪ್ರೇಕ್ಷಕರ ಮೇಲೆ ಅವರಿಗರಿವಿಲ್ಲದೆಯೇ ಇರುವ ಕಾಲಘಟ್ಟದಲ್ಲಿ ‘ಬನವಾಸಿ ಬಳಗ’ದವರೇ ಆಗಲಿ ಮತ್ಯಾರೇ ಆಗಲಿ ತರುವುದಕ್ಕೆ ಮತ ಚಲಾವಣೆ ಎಂಬುದು ಮಾರ್ಗವಲ್ಲ.

    ಯಾವುದು ಹೇರಿಕೆ ?

    * ಬಹುಭಾಷಾ ವಲ್ಲಬರಲ್ಲದ ಬಹುಸಂಖ್ಯಾತ ಕನ್ನಡಿಗರು ಕನ್ನಡವಲ್ಲದ ಚಿತ್ರಗಳನ್ನು ನೋಡಬಾರದು ಎನ್ನುವುದಾ ?
    * ಭಾರತಕ್ಕೆ ಇರದ ಪದ್ಧತಿಯನ್ನು ಕೇವಲ ಕನ್ನಡಿಗರ ಮೇಲೆ ಮಾತ್ರ ತಂದಿರುವುದಾ ?
    * ಪ್ರೇಕ್ಶಕನನ್ನು ಅಮಾಯಕ ಎಂದು ಕರೆದು, ನಿನಗೆ ತಿಳಿಯುವದಿಲ್ಲ ನಾವೇ ಬೇರೆ ಭಾಷೆ ಚಿತ್ರಗಳನ್ನು ನೋಡಿ ನಿನಗೆ ಎನು ಬೇಕು ಬೇಡ ಎಂಬುದನ್ನು ನಿಯಂತ್ರಿಸುವ ಕಪಿಮುಷ್ಟಿ ವ್ಯವಸ್ಥೆಯಾ ?.
    * ಒಂದು ಕಟ್ಟುಪಾಡು ಹಾಕಿ ಅದರ ಪರಿಧಿಯಲ್ಲಿ ಬಂಧಿಸಿ, ಕಾಲಘಟ್ಟದಲ್ಲಿ ಅದು ಅನ್ವಯಿಸುತ್ತದೆಯಾ ಇಲ್ವಾ ಎಂಬುದಕ್ಕೆ
    ಆಸ್ಪದ ಕೊಡದ ಹಿಡಿತವೇ ?

    ಪ್ರೇಕ್ಷಕನು ಅಮಾಯಕನಲ್ಲ, ಬುದ್ದಿವಂತ, ಅವನಿಗೆ ಎನು ಬೇಕು ಬೇಡ ಎನ್ನುವುದು ಗೊತ್ತ್ರು ಎಂದು ಹೇಳುವ ದನಿ ಕನ್ನಡ ಗ್ರಾಹಕನ ದನಿಯಾಗಿದೆ. ಇದೆ ಮತ ಚಲಾವಣೆಯಲ್ಲಿ ಸಾಬೀತಾಗಿದೆ.

    ....muMduvareyuttade...

    ReplyDelete
  10. "ಭಾರತದ ಸಂವಿಧಾನದಲ್ಲಿಯೇ ಪ್ರಾದೇಶಿಕ ಭಾಷೆಗಳ ರಕ್ಷಣೆ ಆಯಾ ರಾಜ್ಯಗಳ ಹೊಣೆ ಎಂಬ ಸಾಲಿದೆ. ಆ ಸಾಲನ್ನು ಹಿಡಿದರೆ ಭಾಷೆಯ ಮೇಲೆ ಆಗುವ ಯಾವ ಆಕ್ರಮಣವನ್ನಾದರೂ ಹೊಡೆದಟ್ಟಬಹುದು. ಮುಂದುವರೆದು ಹೇಳುವುದಾದರೆ, ‘ಡಬ್ಬಿಂಗ್ ತಡೆ’ ಎನ್ನುವುದು ಸಾಮಾಜಿಕ ಕಟ್ಟುಪಾಡು."

    ಇದೇ ವಾದವನ್ನು ೭ ವಾರ ಚಲನಚಿತ್ರ ತಡೆಗೆ ತಂದಾಗ ನಮ್ಮ ಸರ್ವೋಚ್ಚ ನ್ಯಾಯಾಲಯ ಸರಸಗಾಟಾಗಿ ತಿರಸ್ಕರಿಸಿತ್ತು. ನಮಗೆ ಅರ್ಥವಾಗುವ ನಮ್ಮ ಪರಿಸರಕ್ಕೆ ಹತ್ತಿರ ಆಗುವ ಸಂವಹನ ಕ್ರಿಯೆಯೇ ನಮ್ಮ ಕನ್ನಡ ಭಾಷೆ. ಭಾರತೀಯ ಪ್ರಜೆಯಾಗಿ ಕನ್ನಡಿಗರಿಗೆ ಕನ್ನಡದಲ್ಲಿ ಮನರಂಜನೆ ಸಿಗಬೇಕು ಎಂಬುದು ನಮ್ಮ ಸಂವಿಧಾನದ ಹಕ್ಕಾಗಿದೆ. ಸಾಲದಕ್ಕೆ ಡಬ್ಬಿಂಗ್ ಕೇಳುತ್ತ ಇರುವುದು ಕನ್ನಡಿಗರು, ಕನ್ನಡಿಗರಿಗಾಗಿ ಮತ್ತು ಕನ್ನಡಗೋಸ್ಕರ ಎಂಬುದು ಗಮನದಲ್ಲಿ ಇಟ್ಟಾಗ ಅದನ್ನು ಕೊಡುವ ಹೊಣೆ ರಾಜ್ಯ ಸರಕಾರಕ್ಕೆ ಇದೆ.

    ಕನ್ನಡ ಸಮಾಜ ಇಂದು ಡಬ್ಬಿಂಗ್ ಬೇಕು, ನಮ್ಮ ಭಾಷೆಯಲ್ಲಿ ನಮಗೆ ಮನರಂಜನೆ ಬೇಕು ಎಂದು ಕೇಳುತ್ತ ಇರುವಾಗ
    ಇಲ್ಲ ಕೋಡುವದಿಲ್ಲ ಎನ್ನುವುದು ಸಂವಿಧಾನಿಕ DENY OF FUNDAMENTAL RIGHTS ಅಗೊಲ್ವಾ ?. ಖಂಡಿತ ಚರ್ಚೆ ಆಗಲಿ, ಆದರೆ ಅದು ಆಗುವ ಮುಂಚಯೇ ಅವುಗಳನ್ನು ಬ್ರಾಂಡ್ ಮಾಡುವುದು ಬೇಡ ಅಲ್ಲವೇ ?

    ೧೯೬೫ ರಲ್ಲಿ ಇದ್ದ ರಾಜತಾಂತ್ರಿಕ ಸಂಬಂಧಗಳು ಇವತ್ತು ಬದಲಾಗಿಲ್ವಾ , ಅವತ್ತು ನಮ್ಮ ಅಜ್ಜ ಹಾಗೆ ಮಾಡಿದ್ರು, ಹೀಗೆ ಹೇಳಿದ್ರೂ
    ನಮ್ಮ ಚಾಚ ನೆಹರೂ ಅವತ್ತು ಆ ನಿರ್ಣಯ ತೆಗೆದುಕೊಂಡಿದ್ದರೂ ಅದ್ದರಿಂದ ಇವತ್ತು ಅದನ್ನೇ ಮುಂದುವರೆಸೋಣ ಎನ್ನುವ ಮಾತನ್ನು ನಾವು ಒಪ್ಪುತ್ತೆವೆಯೇ ?

    ಹಿಂದೆ ಈ ಕಟ್ಟುಪಾಡು ಆದಾಗ ಎಷ್ಟರ ಮಟ್ಟಿಗೆ ಕನ್ನಡ ಗ್ರಾಹಕನ್ನು ಮತ್ತು ಕನ್ನಡ ಸಮಾಜದ ಮಿಡಿತವನ್ನು ಮತ್ತು ಅಭಿಪ್ರಾಯವನ್ನು ಪರಿಗಣಿಸಿತ್ತು ಎಂಬುದು ಪ್ರಶ್ನಾರ್ಹ. ಇವತ್ತಿನ ತಂತ್ರಜ್ಞಾನ ಯುಗದಲ್ಲಿ ಎಲ್ಲ ವರ್ಗದವರು ತಮ್ಮ ಅಭಿಪ್ರಾಯ ಹೇಳಿಕೊಳ್ಳಲು, ಹಂಚಿಕೊಳ್ಳಲು ಸಾಧ್ಯವಾಗಿದೆ. ಅದ್ದರಿಂದ ಮುಕ್ತವಾಗಿ ಚರ್ಚೆ ಮಾಡೊಣ.

    ಕೊನೆಯದಾಗಿ, ಅಣ್ಣವರು ಹೇಳಿದ ಹಾಗೆ ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು ಅಲ್ಲವೇ ...

    ನನ್ನಿ
    ಪ್ರವೀಣ್

    ReplyDelete
  11. ಚಿತ್ರರಂಗದಲ್ಲಿ ನಾವು ಎರಡು ವಿಭಾಗ ನೋಡಬಹುದು. ಒಂದು ಜನಪ್ರೀಯ ಮತ್ತೊಂದು ಜನಪರ. ಇವೆರಡಕ್ಕೂ ಬಹಳ ವ್ಯತ್ಯಾಸವಿದೆ. ಜನಪ್ರೀಯ ಚಿತ್ರಗಳು ಕೇವಲ ಮನೊರಂಜನೆ ಹಾಗೂ ಒಬ್ಬ ವ್ಯಕ್ತಿಯ ವಿಜೃಂಭಣೆಯ ಸುತ್ತ ಇರುತ್ತದೆ. ಇವುಗಳು ಸುಲಭವಾಗಿ ನೋಡುಗರಿಗೆ ಮುದ ನೀಡುತ್ತದೆ ಹಾಗೂ ಒಂದು ಗುಂಗಿನಲ್ಲಿರಿಸುತ್ತದೆ. ಹಾಗಾಗಿ ಸಾಮಾನ್ಯ ನೋಡುಗರು ಅಂತಹ ಚಿತ್ರವನ್ನು ಬಯಸುತ್ತಾರೆ. ಆದ್ದರಿಂದ ಲಾಭದಾಸೆ ಇರುವವರು ಕೇವಲ ಇಂತಹ ಚಿತ್ರಗಳನ್ನೆ ತೆಗೆಯುತ್ತಾರೆ. ಅದಕ್ಕಾಗಿ ಅವರು ಮೊರೆಹೋಗುವುದು ಡಬ್ಬಿಂಗ್ ಗೆ. ಜನರು ಏನನ್ನು ಬಯಸುತ್ತಾರೆ ಅದನ್ನೆ ನಾವು ಕೊಡುತ್ತೇವೆ ಎನ್ನುವುದು ಸರಿಯಲ್ಲ. ಜನಪರ ಕಾಳಜಿ ಇರುವ ಪ್ರಜ್ಞಾವಂತರು ಚಿತ್ರಗಳನ್ನು ಮಾಡುವಾಗ ಜನರಿಗೆ ಪ್ರಿಯವಾದುದನ್ನು ಮಾತ್ರ ಕೊಡದೆ ಜನರಿಗೆ ಅರಿವನ್ನು ಮೋಡಿಸುವ, ಸಮಾಜದ ಕುರಿತು ಒಳ್ಳೆಯ ಚಿಂತನೆಯಿರುವ ವಿಷಯಗಳನ್ನೇ ತೆಗೆದುಕೊಳ್ಳುತ್ತಾರೆ. ಹಾಗಾಗಿ ಇವರಿಗೆ ಪರಭಾಷೆಯಿಂದ ಎರವಲು ಪಡೆಯುವ ಅಗತ್ಯವಿರುದಿಲ್ಲ.
    ಜನರು ಬಯಸುತ್ತಾರೆ ಎಂದು ರೌಡಿಸಮ್, ಕ್ರೈಂ ಗಳೆ ವಿಜೃಂಭಿಸುವಂತಹ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಇಂತಹ ಚಿತ್ರಗಳು ಜನರ ಮನಸ್ಸನ್ನು ಹಾಳು ಮಾಡುತ್ತವೆ ಹೊರತು, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪೂರಕವಾಗುವುದಿಲ್ಲ.

    ReplyDelete
  12. ಬಿ. ಸುರೇಶ ಅವರ ಬಗ್ಗೆ ಮತ್ತು ಅವರು ಮಾಡುತ್ತಿರುವ ಕೆಲಸಗಳ ಬಗ್ಗೆ ನನಗೆ ಗೌರವವಿದೆ.
    ಡಬ್ಬಿಂಗ್ ವಿಚಾರದಲ್ಲಿ ಬಿ.ಸುರೇಶ ಅವರು ಎತ್ತಿರುವ ವಿಷಯಗಳ ಬಗ್ಗೆ ನನಗೆ ಸಹಮತವಿಲ್ಲ.
    ಯಾಕೆಂದು ಕೆಲವು ವಿಷಯಗಳನ್ನು ಇಲ್ಲಿ ಹೇಳಬಯಸುತ್ತೇನೆ.
    ೧. ೧೯೯೧ ರಲ್ಲಿ ದೇಶದ ಮಾರುಕಟ್ಟೆಯನ್ನು ಹೊರಜಗತ್ತಿಗೆ ತೆರೆದುಕೊಂಡಾಗ, "ಹೊರದೇಶಗಳ ಕಂಪನಿಗಳು ಇಲ್ಲಿಗೆ ನುಗ್ಗುತ್ತವೆ, ನಮ್ಮಲ್ಲಿನ ಉದ್ದಿಮೆದಾರರೆಲ್ಲರೂ ಬಾಗಿಲು ಹಾಕ್ಕೊಂಡು ಮನೆ ಸೇರಬೇಕಾಗುತ್ತದೆ, ನಾವೆಲ್ಲರೂ ಹೊರದೇಶದ ಉದ್ದಿಮೆದಾರರ ಕೆಳಗೆ ಕೆಲಸ ಮಾಡುತ್ತಾ, ಅವರ ಮಾರುಕಟ್ಟೆ ಬೆಳೆಸುತ್ತಾ, ನಮ್ಮ ದೇಶದ ಸಂಪತ್ತು ಕೊಳ್ಳೆಯಾಗೋದು ನೋಡುತ್ತಾ ಕೂರಬೇಕಷ್ಟೇ", ಎಂಬಂತ ಮಾತುಗಳು ಕೇಳಿ ಬರುತ್ತಿದ್ದವು.
    ಆದರೆ, ನಮ್ಮ ದೇಶದ ಹಲವು ಉದ್ದಿಮೆದಾರರು ಇವತ್ತು ಪೈಪೋಟಿಯ ನಡುವೆ ಬೆಳೆದು ನಿಂತಿರೋದನ್ನು ನೋಡಬಹುದು.
    ೨. ಮೊಬೈಲು ಫೋನ್ ಕಂಪನಿಗಳು ತಮ್ಮ ಮಾರುಕಟ್ಟೆ ಬೆಳೆಸಲು ತೊಡಗುತ್ತಿದ್ದ ಸಮಯದಲ್ಲಿ (೧೯೯೭ - ೨೦೦೧), ಹಲವಾರು ಜನರು ಎಸ್.ಟಿ.ಡಿ ಬೂತ್-ಗಳನ್ನು ಇಟ್ಟುಕೊಂಡು ಬದುಕು ಸಾಗಿಸುತ್ತಿದ್ದರು. "ಮೊಬೈಲು ಕಂಪನಿಗಳು ಬೆಳೆದರೆ, ಎಸ್.ಟಿ.ಡಿ ಬೂತುಗಳನ್ನು ಇಟ್ಟುಕೊಂಡಿರೋ ಜನರೆಲ್ಲಾ ಬೀದಿಗೆ ಬರ್ತಾರೆ, ಅವರ ಬದುಕಿಗೆ ತೊಡಕು" ಎಂಬ ಮಾತು ಕೇಳಿ ಬರ್ತಿತ್ತು. ಇವತ್ತಿನ ದಿನ ಎಲ್ಲರ ಕೈಗೂ ಮೊಬೈಲು ಬಂದು, ಎಸ್.ಟಿ.ಡಿ ಬೂತುಗಳು ಹೆಚ್ಚಾಗಿ ಮುಚ್ಚಿರುವವು. ಆದರೆ, ಎಸ್.ಟಿ.ಡಿ ಬೂತನ್ನು ನಡೆಸುತ್ತಿದ್ದವರು, ಮೊಬೈಲು ಫೋನಿನ ಕರೆನ್ಸಿ ಮಾರಿಕೊಂಡು, ಸಿಂ ಕಾರ್ಡ್ ಮಾರಿಕೊಂಡು ಅತವಾ ಮೊಬೈಲುಗಳನ್ನೇ ಮಾರಿಕೊಂಡು ಬದುಕು ನಡೆಸುತ್ತಿದ್ದಾರೆ. ಮೊಬೈಲುಗಳಿಂದ ಹಲವರ ಬದುಕು ಬದಲಾಗಿದೆ ಮತ್ತು ಸಲೀಸಾಗಿದೆ.

    ನಮ್ಮಲ್ಲಿ ಡಬ್ಬಿಂಗ್-ಗೆ ತೆರೆದುಕೊಂಡರೆ ನಮ್ಮ ಉದ್ದಿಮೆ ಮುಚ್ಚಿ ಹೋಗುತ್ತದೆ ಎಂಬುವ ಕಳವಳ ಬೇಕಿಲ್ಲ.
    ನಮ್ಮ ಸಿನಿಮಾ-ಉದ್ದಿಮೆದಾರರು ಪೈಪೋಟಿಯ ನಡುವೆ ಬೆಳೆದು ನಿಲ್ಲುತ್ತಾರೆ. ಹೊಸ ಹೊಸತನ್ನು ಕಟ್ಟುತ್ತಾರೆ. ಮೇಲೆ ಹೆಸರಿಸಿದ ಬೊಟ್ಟು #೧ ನ ತರ.

    ನಮ್ಮಲ್ಲಿ ಡಬ್ಬಿಂಗ್-ಗೆ ತೆರೆದುಕೊಂಡರೆ, ಹಲವಾರು ಜನರ ಕೆಲಸ ಹೋಗುತ್ತದೆ, ಹಲವಾರು ಕುಟುಂಬಗಳು ಬೀದಿಗೆ ಬರುತ್ತವೆ ಎಂಬ ಕಳವಳ ಬೇಕಿಲ್ಲ.
    ಡಬ್ಬಿಂಗ್-ಗೆ ಅವಕಾಶ ನೀಡುವುದರಿಂದ, ಹಲವು ಹೊಸ ಬಗೆಯ ಕೆಲಸಗಳು ಹುಟ್ಟಿಕೊಳ್ಳುತ್ತವೆ. ಮಾರುಕಟ್ಟೆ ಬೆಳೆಯೋದರಿಂದ, ಇನ್ನೂ ಹೆಚ್ಚಿನ ಕೆಲಸಗಳು ನಮ್ಮ ಕಲಾವಿದರಿಗೆ ಒದಗಿಬರುತ್ತವೆ. ಮೇಲೆ ಹೆಸರಿಸಿದ ಬೊಟ್ಟು #೨ ರ ತರ.

    ReplyDelete
  13. I don't understand why KFI is taking decision or fighting against dubbing when the issue is actually concerned with all Kannadigas. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲ ಮುಟ್ಕೊಂಡ್ ನೋಡಿದ ಅನ್ನೋ ಹಾಂಗ್ ಆಯ್ತ್ ನೋಡಿ ಇದು!!! LOL.

    Another point, KFI thinks it represents Kannada and its culture, which in reality, doesn't seem reality to me!

    ReplyDelete
  14. For kannada film industry to flourish and to make movies with original script dubbing is a necessary evil.
    Until then these third rate remake movies wont stop.

    ReplyDelete
  15. ಸುರೇಶಣ್ಣ, ಡಬ್ಬಿಂಗ್ ಪರವಾಗಿ ನಿಮ್ಮ ವಾದ ಚೆನ್ನಾಗಿದೆ. "ಪೆನ್ನು ಕಾಗದವಿದ್ದರೆ, ಪ್ರಾಮಾಣಿಕತೆ ಇದ್ದರೆ ಕನ್ನಡಿಗರು ಕಾಪಾಡ್ತಾರೆ" ಅಂತ ಹೇಳುವ ನೀವು ಡಬ್ಬಿಂಗ್ ಚಿತ್ರಗಳಿಗೆ ಹೆದರಬೇಕಾಗಿಲ್ಲ. ನಿಮ್ಮ ಉಳುಮೆ ನೀವು ಮಾಡಿ.....ನೀವು ಉಳುಮೆ ಮಾಡಿದ ಪದ್ಧತಿ...ಉಪಯೋಗಿಸಿದ ಬಿತ್ತನೆ ಬೀಜ....ಹರಿ...ಸಿದ ಬೆವರು...ಒಳ್ಳೆಯ ಫಸಲನ್ನು ಕೊಡಲಿ...ಡಬ್ಬಿಂಗ್ ಮಾಡಿದ ಚಿತ್ರ ಚೆನ್ನಾಗಿದ್ದರೆ ಓಡುತ್ತೆ ಇಲ್ಲಾಂದ್ರೆ ಥಿಯೇಟರಿಂದ ಓಡುತ್ತೆ. ಕಾಸು ಕೊಟ್ಟು ನೋಡುವ ಪ್ರೇಕ್ಷಕ ಎಲ್ಲವನ್ನೂ ಅಳೆದು ತೂಗಿ ತನಗೆ ಬೇಕಾದದ್ದನ್ನು ಆರಿಸಿಕೊಳ್ಳುತ್ತಾನೆ. ಜೊಳ್ಳು ತೂರಿ ಹೋಗಿ ಗಟ್ಟಿ ಕಾಳು ಮಾತ್ರ ಉಳಿಯುತ್ತೆ.....ಡಬ್ಬಿಂಗ್ ಬರಲಿ ಬಿಡಿ.........ನೀವು ಸ್ವಂತ ಚಿತ್ರ ಮಾಡಿ ......ಖಂಡಿತ ಚಿತ್ರ ಚೆನ್ನಾಗಿದ್ದರೆ ಕನ್ನಡಿಗರು ಕಾಪಾಡ್ತಾರೆ.

    ReplyDelete
  16. suresh B should rethink .

    ReplyDelete
  17. "ಡಬ್ಬಿಂಗ್ ಬೇಕು ಎನ್ನುವವರು ತೆಲುಗಿನ ‘ಮಗಧೀರ’, ಇಂಗ್ಲೀಷಿನ ‘ಅವತಾರ್’, ಮುಂತಾದ ಸಿನಿಮಾಗಳ ಬಗ್ಗೆ ಮಾತಾಡುತ್ತಾ ಇದ್ದಾರೆ. ಈ ಸಿನಿಮಾಗಳನ್ನು ಕನ್ನಡಿಗರು ಕನ್ನಡದಲ್ಲೇ ನೋಡಬೇಕು ಎನ್ನುತ್ತಾ ಇದ್ದಾರೆ. ಈ ನಾಡಿನ ಹಳ್ಳಿಗರು ಇಂತಹ ಸಿನಿಮಾಗಳಿಂದ ವಂಚಿತರಾಗುತ್ತಾ ಇದ್ದಾರೆ ಎಂಬ ವಾದ ಮಂಡಿಸುತ್ತಾ ಇದ್ದಾರೆ. ಆದರೆ ಇಂಥಾ ಸಿನಿಮಾಗಳನ್ನು ಯಾವ ಭಾಷೆಯಲ್ಲಿ ಯಾರೇ ನೋಡಿದರೂ ತೊಂದರೆ ಇಲ್ಲ. ಏಕೆಂದರೆ ಇವು ಭಾಷೆಯ ಹಂಗಿಲ್ಲದ ರಂಜನೆಯೇ ಪ್ರಧಾನವಾದ ಸಿನಿಮಾಗಳು. ಇಂತಹವುಗಳನ್ನು ಹೆಸರಿಸುವ ಬದಲು ಈ ಜನ ಕುರಾಸೋವಾನ ‘ರಾನ್’, ‘ಇಕಿರು’ ದಂತಹ ಚಿತ್ರಗಳನ್ನು ಹೆಸರಿಸಿದ್ದರೆ ಎದುರು ವಾದ ಮಾಡಲು ಎಂತಹ ಸಿನಿಮಾ ಪ್ರೇಮಿಯೂ ಹಿಂಜರಿಯಬೇಕಾಗುತ್ತಾ ಇತ್ತೇನೋ! ಹಾಗಾಗಿಲ್ಲ."

    ಇದು ಸುರೇಶ ಬಿ ತಮ್ಮ ಬ್ಲಾಗ್ ಲಿ ಬರೆದ ಸಾಲುಗಳು.

    ಸ್ವಾಮಿ ಸುರೇಶ ರವರೆ, ಕನ್ನಡಿಗರ ಬುದ್ಧಿವಂತಿಕೆ, ಅಭಿರುಚಿ ಯನ್ನೇಕೆ ಅಪಹಾಸ್ಯ ಮಾಡುತ್ತೀರಿ ಸ್ವಾಮಿ , ಡಬ್ಬಿಂಗ್ ಸಿನಿಮಾ ಗಳಿಂದ ನಮ್ಮ ಜನ ವಂಚಿತ ರಾಗಿರುವುದರಿಂದಲೇ, ಈಗ ನೀವು ಈ ಮೇಲೆ ಹೇಳಿದ ರಾನ್’ ಮತ್ತು ಇಕಿರು, ಸಿನಿಮಾ ಗಳ ಹೆಸರನ್ನು ಪ್ರಸ್ತಾಪಿಸಲು ಸಾಧ್ಯವಾಗಿಲ್ಲ . ಡಬ್ಬಿಂಗ್ ಗೆ ಅವಕಾಶ ಕೊಟ್ಟು ನೋಡಿ, ವಿದ್ಯಾವಂತರು, ನಿಮ್ಮಂಥ ಬುದ್ಧಿಜೀವಿಗಳು ಹಾಗಿರಲಿ, ಕಟ್ಟ ಕಡೆಯ ಹಳ್ಳಿ ಯ ಜನರು ಕೂಡ ನೀವು ಈ ಮೇಲೆ ಹೇಳಿದ ೨ ಸಿನಿಮಾ ಗಳಲ್ಲದೆ, ಜೊತೆಗೆ, Apocalypto , Gods must be crazy , children of Heaven , color of paradise ಇಂತಹ ಅನೇಕ ಸಿನಿಮಾ ಗಳ ನ್ನು ಹೆಸರಿಸುತ್ತಾರೆ.

    ReplyDelete
  18. ಜಾಗತೀಕರಣದ ಕೆಲ ಹೊಳಹುಗಳ ಫಲವೂ ಕೂಡ ಡಬ್ಬಿಂಗ್-ಪರ ಚಿಂತನೆಗಳಿಗೆ ಎಡೆಮಾಡಿಕೊಟ್ಟಿರಬಹುದು.. ಹಿಂದೆ ಪ್ರೊ.ನಂಜುಂಡಸ್ವಾಮಿಯವರು ಕೆಂಟಕಿ ಚಿಕನ್ ಶಾಪುಗಳ ಮೇಲೆ ದಾಳಿ ನಡೆಸಿ ಅವುಗಳಿಂದಾಗುವ ಶಾಪಗಳ ಕುರಿತು ಎಚ್ಚರಿಸಿದ್ದರು, ಆದರೆ ಇವತ್ತು ಬೆಂಗಳೂರು ಮತ್ತು ಬೆಂಗಳೂರಿನ ತುಂಡುಗಳಾಗಲು ಹವಣಿಸುತ್ತಿರುವ ನಗರಗಳ ಗಲ್ಲಿಗಲ್ಲಿಗಳಲ್ಲೂ ಕೆ.ಎಫ್.ಸಿ,ಮ್ಯಾಕ್-ಡೊನಾಲ್ಡ್,ಪಿಜ್ಜಾ ಹಟ್-ಗಳು ದೇಸಿನೆಲೆಯ ಅಂಗಡಿಗಳಿಗಿಂತಲೂ ಠಳಾಯಿಸುತ್ತಿರುವುದು, ನಮ್ಮ ಹುಡುಗರು ದುಡಿದ ಬಹುಪಾಲನ್ನು ಷೋಕಿಗಾಗಿ ಅದ್ಯಾವುದೋ ದೇಶದ ಮಾರುಕಟ್ಟೆಗಳಿಗೆ ಜಮಾ ಮಾಡುತ್ತಿರುವುದು ಈ ಕಾಲದ ದುರಂತ. ಅಂದು ನಂಜುಂಡಸ್ವಾಮಿಯವರ ರೈತಪರ ಕಾಳಜಿಯನ್ನು ಗೇಲಿಮಾಡಿ ಲಾಭಕೋರ ಉದ್ಯಮಿಗಳಿಗೆ ಮಣೆಹಾಕಿದ ಹಿತಾಸಕ್ತಿಗಳೇ ಇಂದು ಡಬ್ಬಿಂಗ್ ಬಂದರೇನಂತೆ ಎಂದು ಉದ್ಘರಿಸುತ್ತಿರುವುದು.. ಡಬ್ಬಿಂಗೀಕರಣ ಅನುಷ್ಠಾನಗೊಂಡಲ್ಲಿ ನಂತರ ನಡೆಯುವ ವಿದ್ಯಮಾನಗಳಿಗೆ ಹಾಗೂ ದುರಂತಗಳಿಗೆ ಪ್ರಸ್ತುತ ಹೋರಾಡುವ ಈ ಜನ ಮೌನವಾಗಿದ್ದು ಮತ್ಯಾವುದೋ ಲಾಭಬಡುಕ,ಸ್ವಹಿತಾಸಕ್ತ ಯೋಜನೆಗಳ ಬಗ್ಗೆ ಓರಾಡುತ್ತಿರುತ್ತಾರೆ.. ಈಗಾಗಲೇ ಪರಭಾಷಾ ಚಿತ್ರಹಾವಳಿ,ಚಿತ್ರಮಂದಿರಗಳ ತಾರತಮ್ಯ,ವಿತರಣೆ ಗೊಂದಲ,ಕಾಳಜಿಯ ಕೊರತೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಕನ್ನಡ ಚಿತ್ರೋದ್ಯಮಕ್ಕೆ ಡಬ್ಬಿಂಗ್ ಬಂದಲ್ಲಿ ಬೇರೆಯವರ ಭಾಷಾ ಶೈಲಿಗೆ ಒಗ್ಗಿ ಪರದೇಶದವರ ಹಗಲುಗಳಿಗಾಗಿ ತಮ್ಮ ರಾತ್ರಿಗಳನ್ನು ಬಲಿಕೊಡುವ ಕಾಲ್-ಸೆಂಟರ್(ಬಿಪಿಓ)ಆಗಿಬಿಡಬಲ್ಲುದು ನಮ್ಮ ಕನ್ನ ಸಿನಿಮಾ ಲೋಕ. ನಾವಿಲ್ಲಿ ರಿಮೇಕ್ ಪರವಾಗಿಲ್ಲದಿದ್ದರೂ ಕೊನೆ ಪಕ್ಷ ರಿಮೇಕ್ ಚಿತ್ರ ತಯಾರಿಕೆಯಲ್ಲಿಯಲ್ಲಾದರೂ ನಮ್ಮವರ ಪಾಲ್ಗೊಳ್ಳುವಿಕೆ ಇರುತ್ತದೆ.. ತಂತ್ರಜ್ಙರು,ಚಿತ್ರಕಾರ್ಮಿಕರ ಬದುಕಿಗಾದರೂ ಅನ್ನದ ಮೂಲವಿರುತ್ತದೆ, ಈ ಡಬ್ಬಿಂಗ್ ಕಾಲ ಅವತರಿಸಿದರೆ ಕಂಠದಾನವೊಂದನ್ನು ಬಿಟ್ಟು ಚಿತ್ರತಯಾರಿಕೆಯಲ್ಲಿ ದೇಸಿತನ ಮರೆಯಾಗಿಬಿಡುವ ಅಪಾಯವಿದೆ.. ಮೊದಲೇ ಕನ್ನಡೇತರ ಚಿತ್ರಗಳಿಗೆ ಮಣೆಹಾಕುವ ನಗರವಾಸಿ ಕನ್ನಡಿಗರು ಡಬ್ಬಿಂಗ್ ಚಿತ್ರಗಳಿಗೆ ಮೊದಲ ಪ್ರಾಶಸ್ತ್ಯ ನೀಡುವ ಸಾಧ್ಯತೆಯಿದೆ.. ಡಬ್ಬಿಂಗ್ ಹಕ್ಕು ಪಡೆಯುವುದೇ ಕನ್ನಡ ಚಿತ್ರನಿರ್ಮಾಪಕರ ಹೋರಾಟದ ಸಂಗತಿಯಾದರೂ ಅಚ್ಚರಿಯಿಲ್ಲ.. ಈಗಾಗಲೇ ಈ ಡಬ್ಬಿಂಗ್, ಜಾಹೀರಾತು ಲೋಕ್ಕೆ ಕಾಲಿಟ್ಟಿದ್ದು ವಾಮನಿತ ಅಂಬೆಗಾಲನ್ನು ಕಿರುತೆರೆಗೂ ಇಡಲು ಹವಣಿಸಿದೆ.. ಚಿತ್ರೋದ್ಯಮಕ್ಕೆ ಬಂದರೆ ಮಿಮಿಕ್ರಿ ಕಲಾವಿದರೇ ಕನ್ನಡ ಚಿತ್ರರಂಗದ ಸೂಪರ್ ಸ್ಟಾರುಗಳಾಗಬಹುದು(ಹಾಗಂತ ಮಿಮಿಕ್ರಿ ಕಲಾವಿದರ ಬಗ್ಗೆ ಅವಹೇಳನ ಮಾಡುತ್ತಿಲ್ಲ) ಹೀಗಾಗಿ ಜಾಗತೀಕರಣದ ಫಲಾನುಭವಿಗಳಿಗೆ ಡಬ್ಬಿಂಗ್ ಅಗತ್ಯದಂತೆ ಕಾಣುವುದರಲ್ಲಿ ಆಶ್ಚರ್ಯವಿಲ್ಲ.. ಈ ಬಗ್ಗೆ ತೀರ್ಮಾನಿಸಬೇಕಾದ್ದು ಪ್ರೇಕ್ಷಕರಿಗಿಂತ ಮಿಗಿಲಾಗಿ ಚಿತ್ರೋದ್ಯಮವನ್ನೇ ಅನ್ನದ ಮೂಲವಾಗಿಸಿಕೊಂಡ ಕನ್ನಡ ಚಿತ್ರರಂಗದ ಕಾರ್ಮಿಕರು,ಕಲಾವಿದರು,ತಂತ್ರಜ್ಙರು,ನಿರ್ಮಾಪಕರು ಉಳಿದೆಲ್ಲರೂ.. ಇದೂ ಕೂಡ ಚುನಾವಣೆಯ ಬಹುಮತಕ್ಕೆ ನಿಲುಕುವ ಸಂಗತಿಯಲ್ಲ, ಅದನ್ನೇ ನಂಬಿರುವವರ ಹಿತಾಸಕ್ತಿಯ ಪ್ರಶ್ನೆ..

    ReplyDelete
  19. One more thing. This is the incident that happened with me. In *Dharwad*, after listening to the much hype of the movie Sivaaji (in Tamil), I went to a theater to watch the same. To my surprise that theater showed the Telugu Dubbed Sivaaji!! Anyday, I would prefer to watch *Kannada* dubbed version than others! (I didn't like the movie and so called Rajni's styles, that'a different matter altogether).

    Also, I had the pleasure of being to Gangavathi once. OMG, you must see there, almost all theaters show Telugu movies there! Out of 5, one movie was Kannada one!

    ReplyDelete
  20. ಡಬ್ಬಿಂಗ್ ಕುರಿತಾದ ಈ ಚರ್ಚೆಯಲ್ಲಿ ಸಂಪಾದಕೀಯದವರೂ ಸೇರಿದಂತೆ ಡಬ್ಬಿಂಗ್ ಪರವಾಗಿರುವವರು ಡಬ್ಬಿಂಗ್ ಯಾಕೆ ಬೇಕು ಎಂದು ಸ್ಪಷ್ಟವಾಗಿ ಹೇಳುತ್ತಿಲ್ಲ. ಆದರೆ ಡಬ್ಬಿಂಗ್ ವಿರೋಧಿಗಳ ವಾದ ಎಷ್ಟು ಠೊಳ್ಳಾಗಿದೆ ಎನ್ನುವುದನ್ನು ಬಯಲು ಮಾಡುತ್ತಿದ್ದಾರೆ. ಡಬ್ಬಿಂಗ್ ಯಾಕೆ ಬೇಕು ಎಂಬುದನ್ನೂ ಅವರು ಸರಿಯಾದ ದಿಕ್ಕಿನಲ್ಲಿ ನಿರೂಪಿಸುವ ಅಗತ್ಯವಿದೆ.
    ನನಗೆ ಅನ್ನಿಸುವ ಹಾಗೆ ಭಾಷೆಯ ಉಳಿವಿಗಾಗಿಯೇ ಡಬ್ಬಿಂಗ್ ಬೇಕಾಗಿರೋದು. ಇದನ್ನು ನೇರವಾಗಿ ಹೇಳೋದು ಒಳ್ಳೇದು. ಕವಿಸ್ವರ ಅವರು ಜಾಗತೀಕರಣ, ಕೆಂಟಕಿ ಚಿಕನ್ ಇತ್ಯಾದಿಗಳನ್ನು ಹೋಲಿಕೆಗೆ ಬಳಸಿದ್ದಾರೆ. ನಿಜವಾಗಿಯೂ ಭೂತವಾಗಿ ಕಾಡುತ್ತಿರುವುದು, ಕನ್ನಡ ಭಾಷೆಗೆ ಗಂಭೀರ ಸವಾಲಾಗಿರುವುದು ಇಂದು ಕರ್ನಾಟಕದಲ್ಲಿ ದಿನೇದಿನೇ ಜನಪ್ರಿಯವಾಗುತ್ತಿರುವ ಪರಭಾಷಾ ಸಿನಿಮಾಗಳು. ಇವುಗಳೇ ನಮ್ಮ ಪಾಲಿನ ಕೆಂಟಕಿ, ಪಿಡ್ಜಾ, ಮೆಕ್ ಡೊನಾಲ್ಡ್ ಗಳು. ರಾಜ್ಯದ ಯಾವುದೇ ಮೂಲೆಗೆ ಹೋಗಿ ನೋಡಿ, ಅಲ್ಲಿ ಪರಭಾಷಾ ಚಿತ್ರಗಳದ್ದೇ ವೈಭವ. ಇವುಗಳನ್ನು ನೋಡುತ್ತಿರುವವರೆಲ್ಲ ಪರಭಾಷಿಗರಲ್ಲ, ಕನ್ನಡಿಗರೇ ಅರ್ಧ ಥಿಯೇಟರ್ ತುಂಬಿಕೊಳ್ಳುತ್ತಿದ್ದಾರೆ. ಕೆಲವು ಕನ್ನಡಿಗರಂತೂ ತಮಿಳು, ತೆಲುಗು ಸಿನಿಮಾ ನೋಡಿಕೊಂಡೇ ಆ ಭಾಷೆಗಳನ್ನು ಕಲಿತಿದ್ದಾರೆ. ಬೆಂಗಳೂರಿನಲ್ಲಿ ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಿಗದಷ್ಟು ಎಲ್ಲ ಕಡೆ ಬೇರೆ ಭಾಷೆ ಸಿನಿಮಾಗಳೇ ಓಡುತ್ತವೆ. ಪಿವಿಆರ್, ಐನಾಕ್ಸ್ ಗಳಲ್ಲಿ ತೋರಿಕೆಗೆ, ಕಾಟಾಚಾರಕ್ಕೆ ಒಂದು ಸ್ಕ್ರೀನ್ ನಲ್ಲಿ ಕನ್ನಡ ಸಿನಿಮಾ ಪ್ರದರ್ಶಿಸುತ್ತಾರೆ. ಉಳಿದ ಸ್ಕ್ರೀನ್ ಗಳಲ್ಲಿ ಅದೇ ಪರಭಾಷಾ ಸಿನಿಮಾಗಳು. ಹೀಗೆ ಪರಭಾಷಾ ಸಿನಿಮಾಗಳು ಮುನ್ನೆಲೆಗೆ ಬರಲು ಏನು ಕಾರಣ? ಕನ್ನಡ ಸಿನಿಮಾಗಳ ಗುಣಮಟ್ಟದ ಕೊರತೆಯಲ್ಲವೆ? ಕನ್ನಡ ಪ್ರೇಕ್ಷಕರು ಮುಂಗಾರುಮಳೆ, ಆಪ್ತಮಿತ್ರದಂಥ ಚಿತ್ರಗಳನ್ನು ನೋಡಿದರು, ಕೆಟ್ಟ ಸಿನಿಮಾಗಳನ್ನು ತಿರಸ್ಕರಿಸಿದರು. ಒಳ್ಳೆ ಪರಭಾಷಾ ಸಿನಿಮಾಗಳು ಅವುಗಳನ್ನೂ ನೋಡಿದರು.
    ಈಗ ಮುಖ್ಯ ಪ್ರಶ್ನೆ ಎಂದರೆ, ಪರಭಾಷಾ ಚಿತ್ರಗಳಿಗೆ ದಾಸರಾಗುತ್ತಿರುವ ಕನ್ನಡ ಪ್ರೇಕ್ಷಕರನ್ನು ಪಾರು ಮಾಡುವುದು ಹೇಗೆ? ಇದಕ್ಕೆ ಡಬ್ಬಿಂಗ್ ಹೊರತಾಗಿ ಬೇರೆ ದಾರಿಯೇ ಇಲ್ಲ. ಕನ್ನಡ ಸಿನಿಮಾ ರಂಗ ಮತ್ತು ಕನ್ನಡ ಭಾಷೆ ಇವುಗಳ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಸಂದರ್ಭ ಇದು ಎಂದು ನನ್ನಂಥವಳಿಗೆ ಅನ್ನಿಸಿದರೆ ಆಶ್ಚರ್ಯವಿಲ್ಲ. ಇಂಥ ಸಂದರ್ಭದಲ್ಲಿ ನನ್ನ ಆಯ್ಕೆ ಕಣ್ಣುಮುಚ್ಚಿ ಕನ್ನಡ ಭಾಷೆಯೇ ಎಂದು ಹೇಳುತ್ತೇನೆ. ಕನ್ನಡ ಚಿತ್ರರಂಗ ತಾನು ಹಾಳಾಗುವುದರೊಂದಿಗೆ ಭಾಷೆಯನ್ನೂ ಹಾಳು ಮಾಡುವುದಕ್ಕೆ ನಾವೇಕೆ ಬಿಡಬೇಕು? ಭಾಷೆ ನಮಗೆ ಮೊದಲ ಆದ್ಯತೆ, ನಂತರವಷ್ಟೆ ಚಿತ್ರರಂಗ,ಅವರ ಉದ್ಯಮ, ಹೊಟ್ಟೆಪಾಡು ಇತ್ಯಾದಿ.
    ಈಗ ನಾವು ಭಾಷೆಯನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಥಿಯೇಟರುಗಳಲ್ಲಿ ಕನ್ನಡ ಸಿನಿಮಾಗಳೇ ಓಡಬೇಕು. ಡಬ್ಬಿಂಗ್ ಸಿನಿಮಾಗಳು ಬಂದರೆ ಪರಭಾಷಾ ಚಿತ್ರಗಳ ಆರ್ಭಟ ತನ್ನಿಂತಾನೇ ಕಡಿಮೆಯಾಗುತ್ತದೆ. ಕನ್ನಡ ಪ್ರೇಕ್ಷಕರು ಪರಭಾಷಾ ಚಿತ್ರಗಳನ್ನು ನೋಡುವುದನ್ನು ಬಿಡುತ್ತಾರೆ.
    ತಮ್ಮ ಉಳಿವಿಗಾಗಿ ಕನ್ನಡ ಚಿತ್ರರಂಗ ಆಗ ಒಳ್ಳೆಯ ಸಿನಿಮಾಗಳನ್ನು ಮಾಡಲೇಬೇಕಾದ ಅನಿವಾರ್ಯತೆಗೆ ಸಿಲುಕುತ್ತದೆ. ಸಂಪಾದಕೀಯದವರು ಬರೆದಂತೆ ಇವರೂ ಸ್ಪರ್ಧೆಗೆ ಅಣಿಯಾಗಲಿ ಬಿಡಿ.
    ಡಬ್ಬಿಂಗ್ ಪರವಾದವರು ಕನ್ನಡವಿರೋಧಿಗಳಲ್ಲ, ಕನ್ನಡ ಭಾಷೆಯ ಪರವಾಗಿರುವವರು. ಇದನ್ನು ಎಲ್ಲರೂ ಮೊದಲು ಅರ್ಥ ಮಾಡಿಕೊಳ್ಳಬೇಕು.ನನಗಂತೂ ಸಿನಿಮಾದವರ ಕಷ್ಟ ನಷ್ಟಗಳಿಗಿಂತ ಕನ್ನಡ ಭಾಷೆಯ ಉಳಿವಿನ ಪ್ರಶ್ನೆಯೇ ಮುಖ್ಯವಾದದ್ದು ಅನಿಸುತ್ತದೆ.
    -ಅಪೂರ್ವ ಗೌಡ

    ReplyDelete
  21. ಡಬ್ಬಿಂಗ್ ಬೇಕು ಎನ್ನುವ ಮುನ್ನ ಒಂದು ಮಾತು..
    ಸಂಪಾದಕೀಯ ಈ ಕುರಿತು ಚರ್ಚೆ ನಡೆಸುತ್ತಿರುವುದು ಒಳ್ಳೇಯದೇ. ಏಕೆಂದರೆ ಇಂದು ಈ ಕುರಿತು ಕನಿಷ್ಟ ಚರ್ಚೆಯನ್ನೂ ಮಾಡದ ಸ್ಥತಿ ನಿರ್ಮಾಣವಾಗಿದೆ. ಇಂದು ಡಬ್ಬಿಗ್‌ನ್ನು ವಿರೋಧಿಸುವುದರಲ್ಲಿ ಚಿತ್ರರಂಗದ ಲಾಭಿಗಳು ನಡೆಸುತ್ತಿರುವ ರಾಜಕೀಯ ಎಲ್ಲರಿಗೂ ತಿಳಿದಿದ್ದೇ. ’ಸಂಪಾದಕೀಯ’ ಹೇಳಿರುವಂತೆ ಅದು ಕಾನೂನಿನಲ್ಲೂ ಮಾನ್ಯ ಇಲ್ಲ. ಹಾಗೆ ಡಬ್ಬಿಂಗ್‌ನ್ನು ತಡೆಯುತ್ತಿರುವುದು ಅದು ಪ್ರಜಾತಾಂತ್ರಿಕವೂ ಅಲ್ಲ. ಸರಿ. ಆದರೆ ನಾವು ಇನ್ನೊಂದು ದೃಷ್ಟಿಯಿಂದಲೂ ಯೋಚಿಸಬೇಕಾದ ಅಗತ್ಯತೆ ಇದೆ ಎನ್ನಿಸುತ್ತೆ.
    ಡಬ್ಬಿಂಗ ಪರವಾಗಿ ನಾವು ಯೋಚಿಸುವಾಗ ’ನಮಗೆ ಇತರೆ ಭಾಷೆಗಳ ಒಳ್ಳೆಯ ಸನೆಮಾಗಳು ಬೇಕು. ನಮ್ಮ ಸಾಮಾನ್ಯ ಜನರು ಅವನ್ನೆಲ್ಲಾ ನಮ್ಮ ಭಾಷೆಯಲ್ಲಿ ನೋಡುವಂತಾಗಬೇಕು’ ಎಂದೆಲ್ಲಾ ಯೋಚಿಸಿ ಅದಕ್ಕೆ ಇರಾನಿ ಸಿನೆಮಾಗಳು, ಫ್ರೆಂಚ್ ಸಿನೆಮಾಗಳು ಎಲ್ಲಾ ಉದಾಹರಣೆ ಕೊಡುತ್ತೇವೆ. ಆದರೆ ಒಮ್ಮೆ ಯೋಚಿಸೋಣ. ಇದು ಕಾಯ್ ಸಾಧ್ಯವಾ? ವಾಸ್ತವದಲ್ಲಿ ಇಂದು ಡಬ್ಬಿಂಗ್‌ನ್ನು ಪ್ರತಿಪಾದಿಸುವ ದೊಡ್ಡ ಬಂಡವಾಳಿಗ ಲಾಭಿ ಜಾಗತಿಕ ಮಟ್ಟದಲ್ಲೂ, ರಾಷ್ಟ್ರೀಯ ಮಟ್ಟದಲ್ಲೂ ಕೆಲಸ ಮಾಡುತ್ತಿರುವುದನ್ನು ಮರೆತು ಬಿಡೋಣವೇ? ಪಕ್ಕದ ತೆಲುಗು, ತಮಿಳು ಇಂಡಸ್ಟ್ರಿ ಕೂಡಾ ಡಬ್ಬಿಂಗ ನಡೆಸುತ್ತದೆ. ಹಾಗಾದರೆ ಎಲ್ಲಿ ಇದುವರೆಗೆ ಯಾವ ಚಿತ್ರಗಳು ಡಬ್ಬಿಂಗ್ ಆಗಿವೆ. ಮಜೀದಿಯ ಇಲ್ಲವೇ ಕೈರೋಸ್ತಮಿಯ ಸಿನಿಮಾಗಳು ಆಗಿವೆಯಾ? ಎಷ್ಟಾಗಿವೆ?
    ವಾಸ್ತವದಲ್ಲಿ ಡಬ್ಬಿಂಗ್ ಆಗಿರುವ ಸಿನೆಮಾಗಳು ಸೊಕಾಲ್ಡ್ ಜನಪ್ರಿಯ ಸಿನಿಮಾಗಳು ಮಾತ್ರ ಅಲ್ಲವೇ? ಯಾಕಂದರೆ ಡಬ್ಬಿಂಗ್ ಬಿಸಿನೆಸ್ ಮಾಡುವವರಿಗೆ ’ಲಾಭ’ ತಂದು ಕೊಡುವುದು ಅವು ಮಾತ್ರ. ಹೀಗಿರುವಾಗ ನಾವು ಒಳ್ಳೆಯ ಚಿತ್ರಗಳು ಬರಲಿಕ್ಕಾಗಿ ಡಬ್ಬಿಂಗ್ ಬೇಕು ಎನ್ನುವುದು ಭ್ರಮೆ ಹುಟ್ಟಿಸುವುದು ಮಾತ್ರ. ಮಾತ್ರವಲ್ಲ ನಮಗೆ ಅಂತಹಾ ಒಳ್ಳೆಯ ಸಿನೆಮಾಗಳ ನೈಜ ಅನುಭವಕ್ಕೆ ಡಬ್ಬಿಂಗ್‌ಗಿಂತಾ ನಮ್ಮ ಭಾಷೆಯಲ್ಲಿ ಸಬ್ ಟೈಟಲ್‌ಗಳನ್ನುಹಾಕುವುದೇ ಉತ್ತಮ ಆಯ್ಕೆ ಅಲ್ಲವೇ?.
    ಇಲ್ಲಿ ಇನ್ನೂ ಒಂದು ವಿಷಯ ಎದುರಾಗುತ್ತದೆ. ಇಂದಿನ ಜಾಗತಿಕ ವಿದ್ಯಮಾನಗಳಿಗೆ ಪಕ್ಕಾಗಿರುವ ಸಿನಿಮಾ ರಂಗ ಒಂದು ಸಧಭಿರುಚಿಯ ಮಾಧ್ಯಮವಾಗೇನೂ ಉಳಿಯದೇ ಹೆಚ್ಚಾಗಿ ಕೋಟ್ಯಾಧಿಪತಿಗಳು ಮಾತ್ರ ತಲೆಕೊಡುವ ಉದ್ದಿಮೆ ಆಗಿರುವಾಗ ಅಲ್ಲಿ ಡಬ್ಬಿಂಗ್‌ಗೆ ಅವಕಾಶ ಸಿಕ್ಕೊಡನೆ ಬದಲಾವಣೆ ಸಾಧ್ಯವೇ? ಅಲ್ಲಿ ಕೂಡಾ ಅಂತಹ ಕೋಟ್ಯಾಧಿಪತಿಗಳ ’ಅಭಿರುಚಿ’ಗಳೇ ಪಾತ್ರ ವಹಿಸುತ್ತವೆ. ಅವರ ಅಭಿರುಚಿಗೆ ತಕ್ಕ ’ಬೇಡಿಕೆಯನ್ನು ಸಮಾಜದಲ್ಲಿ ಸೃಷ್ಟಿಸಲಾಗುತ್ತದೆ ಮತ್ತು ಅಂತಹ ಕೃತಕ ಬೇಡಿಕೆಗಳಿಗನುಗುಣವಾಗಿಯೇ ಡಬ್ಬಿಂಗ್ ಕೂಡಾ ನಡೆಯುತ್ತದೆ. ಅಲ್ಲಿ ಸತ್ಯಜಿತ್ ರೇ, ಅಬ್ಬಾಸ್ ಕೈರೋಸ್ತಮಿ, ಕುರೋಸಾವಾ, ಗೊಡಾರ್ಡ್ ಸಿನೆಮಾಗಳಿಗೆ ಕಿವುಡು ಕಾಸಿನ ಕಿಮ್ಮತ್ತೂ ಇರುವುದಿಲ್ಲ.
    ಸಿನೆಮಾ ನೋಡುವವರಲ್ಲಿ ಮತ್ತು ಸಿನೆಮಾ ನಿರ್ಮಿಸುವವರಲ್ಲಿ ಒಂದು ಗುಣಾತ್ಮಕ ಬದಲಾವಣೆ ಬರದ ಹೊರತು ಡಬ್ಬಿಂಗ್ ಮಾಡುವುದು ಮಾತ್ರವೇ ಏನನ್ನೂ ಮಾಡದು. ಬದಲಾಗಿ ಅದೂ ಕೂಡ ಇಂದಿನ ಪರಿಸ್ತೀತಿಯಲ್ಲಿ ಕನ್ನಡಿಗರ ಮೇಲೆ ಬೇರೆ ಭಾಷೆಗಳ ಸೊಕಾಲ್ಡ್ ’ಜನಪ್ರಿಯ’ ಅಭಿರುಚಿಗಳನ್ನು ಹೇರುವ ಮಾಧ್ಯಮ ಮಾತ್ರವಾಗಿ ಉಳ್ಳವರ ಕೈಯಲ್ಲಿನ ದಾಳವಾಗಿರುತ್ತದೆ.
    -ಹರ್ಷ ಕುಗ್ವೆ

    ReplyDelete
  22. ALLOW DUBBING (DON'T BAN DUBBING) -- DOESN'T MEAN: kannada audience (KA) want dubbed movies over original kannada movies OR KA want KFI to stop working on original movies OR KA want to enrich its culture (if movies can have such effects as suggested by the author) through dubbed movies over original movies OR KA want to learn kannada language (if movies can have such effects as suggested by the author) through dubbed movies or KA wants all movies around the world to be dubbed to kannada, etc... -- IT ONLY MEANS: if there is a GOOD video content in non-kannada language in the world, and there is someone who wants to put efforts and money to dub that content to kannada, ALLOW IT so that if kannada audience wants to consume that, let them have a CHOICE to consume GOOD content around the world... PERIOD. [http://www.dubbingbeku.com/]

    ReplyDelete
  23. @ಅಪೂರ್ವ ಗೌಡ,

    ಡಬ್ಬಿಂಗ್ ಯಾಕೆ ಬೇಕು ಅನ್ನುವುದು ಸರಳ.

    ಕನ್ನಡಿಗನಾಗಿ ನನಗೆ ಪ್ರಪಂಚದ ಎಲ್ಲವನ್ನೂ ನನ್ನ ಭಾಷೆ ಕನ್ನಡದಲ್ಲಿ ಪಡೆಯುವ ಸೌಲಭ್ಯ ಬೇಕು. ಅದು ನನ್ನ ಹಕ್ಕು ಕೂಡ. ಅದನ್ನು ನಾನು ಕೇಳುತ್ತಿದ್ದೇನೆ. ಇದರಿಂದ ನನ್ನ ಭಾಷೆ ಮತ್ತು ಭಾಷಿಕರು ಪ್ರಪಂಚಕ್ಕೆ ತೆರೆದುಕೊಳ್ಳಲು ಸಹಾಯವಾಗುತ್ತದೆ ಮತ್ತು ಬೆಳವಣಿಗೆಗೆ ಅನುಕೂಲವಾಗುತ್ತದೆ. ನನ್ನ ಹಕ್ಕನ್ನು ಕೆಲವೇ ಜನರ ಹಿತಾಸಕ್ತಿಗಾಗಿ ಬಲಿಕೊಡಲು ಇಷ್ಟ ಇಲ್ಲ.

    @ಸುರೇಶ್,

    ಈಗ ಸದ್ಯಕ್ಕೆ ಮಗಧೀರ, ಅವತಾರ್ ಸಿನೆಮಾಗಳ ಉದಾಹರಣೆ ಕೊಡುತ್ತಿದ್ದೇವೆ ಎಂದಾದರೆ ಅದು ಕರ್ನಾಟಕದಲ್ಲಿ ಅವು ಮಾಡಿದ ಪರಿಣಾಮ ಗಮನಿಸಿ. ಅವುಗಳನ್ನು ಕರ್ನಾಟಕದ ಸಾಮಾನ್ಯ ಜನರು ತಮ್ಮದಲ್ಲದ ಭಾಷೆಯಲ್ಲಿ ನೋಡಬೇಕಾಯಿತು. ಡಬ್ಬಿಂಗ್ ಶುರುಮಾಡಿದ ಮೇಲೆ ಜಪಾನಿ, ಇರಾನಿ ಏಕೆ ಜುಲು ಭಾಷೆ ಸಿನೆಮಾಗಳ ಬಗ್ಗೆಯೂ ಮಾತಾಡಬಹುದು ಜನರು. ಆ ಹಕ್ಕನ್ನೇ ಸದ್ಯಕ್ಕೆ ಕಸಿದುಕೊಂಡಿರುವುದು ನಮ್ಮಿಂದ.

    ReplyDelete
  24. All the gentlemen and ladies who are arguing that they are against dubbing and who are advising people to watch any movie in its own language, I have a question for you all - Did you not watch/take your kids and family to movies like Jurassic park, Harry Potter, Avatar, Taare Zameen Par, 3 Idiots? I am sure all of you would have taken them. Just because you are all educated in cities and can understand Hindi and English, you can thoroughly enjoy them. But how about the kids studying in remote villages of karnataka who understand only kannada.
    Its such a racist mentality that you all have. You are either asking those poor kids not to watch such hi-funda movies as its meant only for Aristocratic people like you? Or you are expecting them to watch only the visuals and not understand even a bit of conversation. Its pathetic that our own kannadigas in villages are expected to watch only the kannada films and not get an exposure of the outer world. This is the typical mentality of Landlords/patela/jameendaara shown in kannada films who would never want the villagers to get educated/exposure to the outside world.
    Now, dont tell me that its their headache..Also, if I want to watch a good Korean movie or a Japanese movie, If I go by your logic, I have to learn the language to enjoy that movie. How Funny..There are hundreds and thousands of languages across the globe and lets not talk foolishly to watch each of the movie in its own language. Neither do I have the time/interest to learn all the languages in the world not do I want to miss wonderful films made. All I want is to have them dubbed into kannada and enjoy them..

    ReplyDelete
  25. The irony is, most of the people who are dead against dubbing are a part of Kannada Film Industry. They are earning their living via KFI in some way or the other. Thats the reason they are taking such a defensive stand and are totally scared if dubbing is allowed in kannada. They are of the mindset that once dubbing is let in Kannada Film Industry, people will completely stop making kannada movies. What a joke this sounds like. Coming to the discussion about the small screen, most of the directors/actors or whoever are a part of this dubbing propaganda are hooked upto some kannada TV channels and have a virtually permanent slot in the small screen as well. They are extremely scared if their slots are going to be grabbed and would get handed over to serials originally made in other languages and dubbed into kannada. To cover up their limitations and shortcomings, dubbing is being portrayed as a ghost to the kannada audience.
    And the fact that most of us who want to watch quality movies and TV programs made in other languages after being dubbed to kannada are the real audience who pay and get the service. Dont we have the right to decide what kind of entertainment we want to watch when we are spending money on it?
    These people need to understand how exactly a business is run. neither we watch the movies for free nor do these film makers make it as social service. There is a give and take policy which applies here and ultimately, the manufacturer or the supplier should GIVE what the customer wants. If they are incapable of delivering what we need, they shouldn't atleast stop other vendors from providing the service. Its time to understand that their mentality is absolutely illogical and illegal.

    ReplyDelete
  26. ಶಶಾಂಕ್June 2, 2011 at 9:31 PM

    @ಅಪೂರ್ವ ಗೌಡ :
    ಕಾರ್ರೆಕ್ಟಾಗಿ ಹೇಳಿದ್ರಿ...ನಮಗೆ ನಮ್ಮ ಭಾಷೆಯೇ ಮೊದಲು...

    ಸಿನಿಮಾ ರಂಗದವರು ಬಿಟ್ಟು ಬೇರೆ ಯಾರಾದರು ಇವತ್ತು ಡಬ್ಬಿಂಗ್ ವಿರೋಧಿಸುತ್ತಿದ್ದರೆ, ಅವರಿಗೆ ಈಗಿನ ಸ್ಥಿತಿ ಸರಿಯಾಗಿ ತಿಳಿದಿಲ್ಲ..ಜೊತೆಯಲ್ಲಿ ಅವರು ಜಗತ್ತಿನ ಉತ್ತಮ ಚಿತ್ರಗಳನ್ನು ನೋಡದೆ ವಂಚಿತರಾಗುತ್ತಿರುವುದು ಅರಿವಿಲ್ಲ....ಮೊದಲು ಅಂತಹವರಿಗೆ ಪರಭಾಷೆ ಸಿನಿಮಾಗಳ ಹಾವಳಿಯಿಂದ ಕನ್ನಡ ಕುಗ್ಗುತ್ತಿರುವುದನ್ನು ತಿಳಿಸಬೇಕು....ಕನ್ನಡಿಗರಿಗೆ ನಿಧಾನವಾಗಿ "ಕಲಿಯೋಕೆ ಕೋಟಿ ಭಾಷೆ, ಆಡೊಕ್ಕೂ ಕೋಟಿ ಭಾಷೆ" ಎಂಬ ಸ್ಥಿತಿ ಬರುತ್ತೆ....ಹೀಗೆ ಇನ್ನೊಂದು ನೂರು ವರ್ಷ ಕಳೆದರೆ, ಪ್ರತಿಯೊಬ್ಬ ಕನ್ನಡಿಗನು ಕನ್ನಡಿಗನಾಗಿ ಉಳಿಯುವುದಿಲ್ಲ...ಅವನಿಗೆ ಕನ್ನಡ ಬಿಟ್ಟು ಬೇರೆ ಯಾವುದಾದರೂ ಒಂದು ಭಾಷೆ(english ಹೊರತುಪಡಿಸಿ) ಬಂದೆ ಬರುತ್ತೆ....ಆಗ ಹೊರ ರಾಜ್ಯದಿಂದ ಬರುವವರಿಗೆ ಕರ್ನಾಟಕದಲ್ಲಿ ಇರಬೇಕೆಂದರೆ, ಕನ್ನಡ ಗೊತ್ತಿರಲೇ ಬೇಕು ಅಂತ ಏನು ಇಲ್ಲ ಎಂಬ ಮನೋಸ್ಥಿತಿ ಬಂದು ಬಿಡುತ್ತದೆ....ಡಬ್ಬಿಂಗ್ ಬೇಕೇ ಬೇಕು ಕನ್ನಡ ಉಳಿ ಬೇಕು ಎಂದರೆ...

    ReplyDelete
  27. ೧. ಕೆಲವು ಜನ ಡಬ್ಬಿಂಗ್ ಬಂದ್ರೆ ಬೇರೆ ಭಾಷೆ ಸೊಗಡು ತಿಳಿಯೋಕಾಗೋದಿಲ್ಲ ಅಂತ ಹೇಳ್ತಾರೆ. ಅನ್ಯ ಭಾಷೆ ಚಿತ್ರಾನ ಆ ಭಾಷೇಲಿ ನೋಡಿ ಆ ಭಾಷೆ ಸೊಗಡು ಭಾವ ಸವಿ ಬೇಕಂದರೆ - ಕೇಬಲ್ನಲ್ಲಿ ಬೇರೆ ಭಾಷೆ ಚಾನೆಲ್ಗಳಿಗೆ ಕೊರತೆ ಇಲ್ಲ. ಧಾರಾಳವಾಗಿ ನೋಡಿ ಸವಿಯಿರಿ (ನಮ್ಮ ಭಾಷೆ ಸೊಗಡು ಬೇರೆಯವರಿಗೆ ಬೇಕಿಲ್ಲದಿದ್ದರೂ ಅನ್ಯ ಭಾಷೆ ಸೊಗಡು ಸವಿಯೋ ಆಸೆ ಕನ್ನಡದವರಿಗೆ ಮಾತ್ರ ಯಾಕೆ ಮಿತಿ ಮೀರಿ ಇದೆ ಅನ್ನೋದು ದೇವರಿಗೂ ಗೊತ್ತಿರಲಿಕ್ಕಿಲ್ಲ) ಆದರೆ ಇಂತ ಒಂದು ಕಾರಣವನ್ನ ಒಡ್ಡಿ ಡಬ್ಬಿಂಗ್ ವಿರೋಧಿಸುವುದು ಹಾಸ್ಯಾಸ್ಪದವಾಗುತ್ತೆ.
    ೨. ಡಬ್ಬಿಂಗ್ ಇಂದ ಕಾರ್ಮಿಕರ ಅನ್ನಕ್ಕೆ ಕುತ್ತು ಬರದೆ ಅದೆ ಒಂದು ಪರ್ಯಾಯ ಉದ್ಯಮವಾಗಿ ಹೆಚ್ಚು ಕೆಲಸಗಳನ್ನು ಹುಟ್ಟು ಹಾಕುತ್ತದೆ.
    ೩. ಈಗ ಒಂದು ದೊಡ್ಡ ಮಟ್ಟದ ಪ್ರಚಾರ ತೊಗೊಂಡು ಒಂದೇ ಚಿತ್ರ ೪-೫ ಭಾಷೆಗಳಲ್ಲಿ ಬಿಡುಗಡೆ ಆಗುತ್ತದೆ. ಉದಾ : ರೋಬೋ ( ಹಿಂದಿ- ತಮಿಳು-ತೆಲುಗು-ಮಲಯಾಳಂ).ಒಂದೊಂದು ಭಾಷೆಯ ರೋಬೋಗೂ ೨೦ ಚಿತ್ರಮಂದಿರಗಳು ಹೋದರೆ, ಒಂದೇ ಚಿತ್ರಕ್ಕೆ(ಭಾಷೆ ಬೇರೆ ಇರಬಹುದು) ೮೦ ಚಿತ್ರಮಂದಿರ ಕನ್ನಡ ಚಿತ್ರಗಳು ಕಳಕೊಂಡ ಹಾಗೆ ಅಂತ ಆಲ್ವಾ? ಅದರ ಬದ್ಲು ರೋಬೋನ ಕನ್ನಡಕ್ಕೆ ಅನುವಾದ ಮಾಡಿ ೧೦-೧೫ ಚಿತ್ರಮದಿರದಲ್ಲಿ ಬಿಡುಗಡೆ ಮಾಡಿದರೆ ೬೫-೭೦ ಥಿಯೇಟರ್ ಗಳು ಕನ್ನಡ ಚಿತ್ರಕ್ಕೆ ಸಿಗುತ್ತವೆ ಹಾಗು ಆ ಎಲ್ಲ ಚಿತ್ರಮಂದಿರಗಳಲ್ಲಿ ಕನ್ನಡದಲ್ಲಿ ಮನೋರಂಜನೆ ಸಿಗುತ್ತದೆ. ಆಲ್ವಾ?

    ನಾಡಿನ ಮುಖ್ಯವಾಹಿನಿಯಲ್ಲಿ ಕನ್ನಡದ ಸ್ಥಾನ ಏನು ಎಂದು ಯೋಚನೆ ಮಾಡಿದರೆ ಡಬ್ಬಿಂಗ್ ಯಾಕೆ ಬೇಕು ಎಂಬುವುದು ಗೊತ್ತಾಗುತ್ತದೆ.

    ReplyDelete
  28. ರೀಮೇಕ್ ಬರಿ ಜ್ವರವಾದ್ರೆ, ಡಬ್ಬಿ೦ಗ್ ನಿಜವಾಗ್ಲೂ ಕ್ಯಾನ್ಸರ್ರೆ ಸರಿ.
    ಬೇರೆ ಚಿತ್ರರ೦ಗಕ್ಕೂ, ಕನ್ನಡ ಚಿತ್ರರ೦ಗಕ್ಕೂ ಬಹಳ ವ್ಯತ್ಯಾಸ ಇದೆ ಸ್ವಾಮಿ.
    ನಮ್ಮ ಕರ್ನಾಟಕದಲ್ಲಿ, ಕನ್ನಡ ಚಿತ್ರರ೦ಗಕ್ಕೆ ಇರೋ ಅ೦ತ ಸ್ಪರ್ಧೆ ಬೇರೆ ಯಾವ ಚಿತ್ರರ೦ಗಕ್ಕೆ ಇದೆ ಯೋಚನೆ ಮಾಡಿ.

    ನಮ್ಮ ಕನ್ನಡ ಚಿತ್ರಗಳು, ತೆಲುಗು, ತಮಿಳು, ಹಿ೦ದಿ, ಮಲಯಾಳ೦, ಇ೦ಗ್ಲೀಷ್.. ಇ೦ತ ಹಲವಾರು ಬಾಷೆ ಚಿತ್ರಗಳ ಜೊತೆ ಹೆಣಗಾಡ್ಬೇಕು. ಬೇರೆ ಯಾವ ರಾಜ್ಯದಲ್ಲಿ ಇ೦ತ ವಾತಾವರಣ ಇದೆ ಹೇಳಿ?

    ಇದಲ್ಲದೆ ಕನ್ನಡದ ಬಗ್ಗೆ ಕನ್ನಡಿಗರಿಗೇ ಇರೋ ಅಸಡ್ಡೆ, (ಕೆಲವೇ) ಒಳ್ಳೆ ಚಿತ್ರ ಬ೦ದ್ರೂ ಮುಕ್ತ ಮನಸ್ಸಿನಿ೦ದ ಹೊಗಳದೆ, ನೋಡದೆ, ಬೇರೆಯವ್ರಿಗೂ ಹೇಳದೆ ಇರೋ ಮಹಾ ಜನ. ಇಷ್ಟೆಲ್ಲಾ ಅವಾ೦ತರಗಳು ಇರ‍ೋವಾಗ ಡಬ್ಬಿ೦ಗ್ಗಿಗೆ ಅನುವು ಮಾಡಿಕೋಡೊದು ಅನ್ಯಾಯ.

    ಹಾಗೆ ಮಾಡಿದ್ರೆ, ಹಣ ಮತ್ತು ವಿತರಣೆ ವಿಚಾರದಲ್ಲಿ ಬಲವಾಗಿರೋ ಸ೦ಸ್ಥೆಗಳು ಲಾಭ ಮಾಡೋ ಒ೦ದೆ ಉದ್ದೇಶದಿ೦ದ ಬರಿ ಡಬ್ಬಿ೦ಗ್ ಚಿತ್ರಗಳ ವ್ಯಾಪಾರ್ ಮಾಡೋಕ್ಕೆ ಮು೦ದಾಗ್ತಾರೆ.

    ಡಬ್ಬಿ೦ಗ್ ವಿರೋಧಿಸೋದು, ಯಾರ ಹಕ್ಕನ್ನು ಚ್ಯುತಿ ಮಾಡೊಕ್ಕ್೦ತೂ ಅಲ್ಲ, ನಮ್ಮ ಕನಡ ಚಿತ್ರಗಳಿಗೆ ಅನುಕೂಲಕರ ಮಾರುಕಟ್ಟೆ ಒದಗಿಸೋಕ್ಕೆ (ಕನ್ನಡ ಚಿತ್ರಗಳ ಮಾರುಕಟ್ಟೆ ಕರ್ನಾಟಕ್ಕಕ್ಕೆ ಮಾತ್ರ ಸೀಮಿತ ಮರಾಯ್ರೆ)

    ReplyDelete
  29. @ಅಮರನಾಥ, IdeaNaren, Vandana Ithal ,


    ನಮಗೆ ಎಲ್ಲವೂ ಕನ್ನಡದಲ್ಲಿ ಬೇಕು ಅಂತ ಕೇಳುತ್ತಿದ್ದೇವೆ. ನಿಮ್ಮ ಕಮೆಂಟ್ ಕೂಡ ಕನ್ನಡದಲ್ಲೇ ಬೇಕು. ನಿಮ್ಮ ಬರಹ ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳಬಾರದೇ? ಬರೀ ಇಂಗ್ಲೀಷ್ ಗೊತ್ತಿರುವವರಿಗೆ ಮಾತ್ರವೇ? ಇದು ಇಬ್ಬಂದಿತನವಲ್ಲವೇ? ಅವತಾರ್ ಸಿನೆಮಾ ನಮ್ಮ ಕನ್ನಡದ ಎಲ್ಲರೂ ನೋಡಲು ಕನ್ನಡಅವತಾರ್ ಬೇಕು ಎನ್ನುವ ನೀವು ನಿಮ್ಮ ಅಭಿಪ್ರಾಯವನ್ನೂ ಕನ್ನಡದಲ್ಲೇ ಕೊಡಬೇಕು ಎನ್ನುವುದನ್ನೂ ನೆನಪಿಡಿ. ಇಲ್ಲಿ ಚರ್ಚೆಯಾಗುತ್ತಿರುವುದು ಕನ್ನಡಿಗರ ನಡುವೆ. ಇವು ನೈಜ ಪ್ರಾಮಾಣಿಕತೆ ಅಡಿಯಲ್ಲಿ ಬರುತ್ತವೆ.

    ReplyDelete
  30. ಡಬ್ಬಿಂಗ್ ಒಂದೇ ಮಾರ್ಗವಲ್ಲ; ಕನ್ನಡ ಚಿತ್ರರಂಗ ಈ ಸವಾಲನ್ನು ಹೇಗೆ ಸ್ವೀಕರಿಸುತ್ತದೆ?
    ಡಬ್ಬಿಂಗ್ ವಿಚಾರವಾಗಿ ಚರ್ಚೆಗಳು ಹುಟ್ಟಿಕೊಂಡಿರುವುದು, ಅಲ್ಲಾ ಹುಟ್ಟುಹಾಕಿರುವುದು ಒಂದು ಒಳ್ಳೆಯ ಬೆಳವಣಿಗೆ.ಚಲನಚಿತ್ರ ಕೇವಲ ಒಂದು ಘಟಕವಾಗಿಲ್ಲ. ಅದೊಂದು ಬೃಹತ್ ಉದ್ಯಮ. ಎಷ್ಟೆಂದರೆ ಇಂದು ಸಂಸ್ಕೃತಿಯ ಮೇಲೆ ಪ್ರಭಾವ ಬೀರುವ ಮೊದಲ ಮಾಧ್ಯಮವಾಗಿದೆ. (ಜಾಹಿರಾತು ಕ್ಷೇತ್ರವೂ ಕೂಡ ಉದ್ಯಮ) ಟಿವಿ ರೇಡಿಯೋ ಇತರೆ ಸಂವಹನ ಮಾಧ್ಯಮಗಳೂ ಸಹ ಚಿತ್ರರಂಗದ ಶೇ.೬೫ರಷ್ಟು ಅಂಶಗಳನ್ನು ಒಳಗೊಂಡಿವೆ. ಕನ್ನಡ ಚಿತ್ರರಂಗದಲ್ಲಿ ತಮಿಳಿನ ಬಹಳಷ್ಟು ಸಂಸ್ಕೃತಿಯನ್ನು ಹೇರಿರುವುದು ಹೀಗಾಗಲೇ ಸ್ಪಷ್ಟವಾಗಿ ನಮ್ಮ ಕಣ್ಣ ಮುಂದೆಯೇ ಇದೆ. ಅಂದರೆ ಪ್ರಾಕ್ಟೀಸ್ ಮಾಡುತ್ತಿದ್ದೇವೆ. (ನಾನು ತಮಿಳು ಅಥವಾ ಇತರೆ ಯಾವುದೇ ಭಾಷೆಯ ವಿರೋಧಿಯಲ್ಲ)
    ಹಾಗೆಯೇ ಕನ್ನಡ ಚಿತ್ರರಂಗವೆಂದು ಹೇಳುತ್ತಿದ್ದೇವೆಲ್ಲಾ, ಇದರಲ್ಲಿ ಸಹಾಯಕರು,ತಂತ್ರಜ್ಞರಿಂದ ನಿರ್ಮಾಪಕರವರೆಗೆ ಎಷ್ಟು ಕನ್ನಡಿಗರು ಇದ್ದಾರೆ? (ಕನ್ನಡವೆಂದರೆ ಅನ್ನ ಜೀವನ ಮುನ್ನಡೆಯುತ್ತದೆ ಎಂದವರು)?!!! (ಮಾತೃಭಾಷೆ ಹಾಗೂ ಪ್ರಾಕ್ಟೀಸ್ ನಲ್ಲಿ) ಇವರೂ ಕೂಡ ಹೇಳುವುದು ಡಬ್ಬಿಂಗ್ ಬೇಡ ಎಂದು. ಏಕೆಂದರೆ ಇದು ಜೀವನದ ಪ್ರಶ್ನೆ!
    ಇನ್ನು ಈಗಿನ ಡಬ್ಬಿಂಗ್ ಪ್ರಶ್ನೆ ಹುಟ್ಟು ಹಾಕಿದವರು. ಇವರು ಕನ್ನಡ ಚಿತ್ರರಂಗದ ನಿರ್ಮಾಪಕರು, ಕನ್ನಡದಲ್ಲಿ ನಿರ್ಮಾಣ ಮಾಡಿ ಬೇರೆ ಭಾಷೆಗೆ ಡಬ್ ಮಾಡಿ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳಬಲ್ಲ ಸಾಮರ್ಥ್ಯರು. ಮುಖ್ಯವಾಗಿ ಧೀರ್ಘಕಾಲದಿಂದ ಚಿತ್ರರಂಗದ ಆಂತರ್ಯವನ್ನು ಅರಿತವರು. ಇಂತಹವರು ಡಬ್ಬಿಂಗ್ ಬೇಕು ಎನ್ನುತ್ತಿರುವ ಉದ್ದೇಶ ಏನು? ಇವರೇನು ಬೇರೆ ಭಾಷೆಯ ಚಿತ್ರ ನಿರ್ಮಿಸಿ ಕನ್ನಡಕ್ಕೆ ಡಬ್ ಮಾಡುತ್ತಾರೆಯೇ? ಅಥವಾ ಬೇರೆ ಭಾಷೆಯ ಚಿತ್ರಗಳನ್ನು ಕನ್ನ್ಡಕ್ಕೆ ಡಬ್ ಮಾಡಿ ಹಂಚಿಕೆ ಕೆಲಸವನ್ನು ಮಾಡುವ ಉದ್ದೇಶ ಹೊಂದಿದ್ದಾರೆಯೇ? ಅಟವಾ ಮಾರುಕಟ್ಟೆ ವಿಸ್ತರಿಸಿಕೊಳ್ಳಲು ಬೇರೆ ಚಿತ್ರರಂಗದವರ ಚಿತಾವಣೆ ಇದೆಯಾ? ಜನರ ಪರವಾಗಿ ಮಾತನಾಡಲು ಇವರು ಜನರಿಗೆ ಡಬ್ಬಿಂಗ್ ನ ಒಳಿತು ಕೆಡಕುಗಳನ್ನು ತಿಳಿಸಿ ಅವರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆಯೇ? ಇದರಿಂದ ಒಟ್ಟಾರೆ ಇವರಿಗೇನು ಲಾಭ? ಟಿವಿಯಲ್ಲಿ ಇವರ ಚರ್ಚೆಯನ್ನು ನೋಡಿದ ಮೇಲೆ ಇವರು ಇಲ್ಲಿನ ಕಲಾವಿದರ, ತಂತ್ರಜ್ಞರ, ನಿರ್ಮಾಪಕರ ನದುವಿನ ಹಲವಾರು ವೈಮನಸ್ಯದಿಂದ ಅಥವಾ ವೈಯಕ್ತಿಕ ಬೇಸರದಿಂದ ಗುಂಪುಗಾರಿಕೆಯಲ್ಲಿ ವ್ಯವಸ್ಥೆಯಲ್ಲಿ ರಾಡಿ ಹಾಕುತ್ತಿರಬಹುದೇ?! ಎಂಬ ಆಲೋಚನೆ ನನಗೆ ಬಂತು. (ಪೂರ್ವಾಗ್ರಹ ಪೀಡಿತನಾಗಿಲ್ಲ, ವಾಸ್ತವ ಆಲೋಚನೆ ಅಷ್ಟೆ).
    ಡಬ್ಬಿಂಗ್ ವಿರೋಧಿಸಿದ ಇಬ್ಬರೂ ಸುರೇಶ್ ಅವರು ಮತ್ತು ಇತರರಿಗೆ, ವಿರೋಧಿಸಿದ್ರೆ ಇದರಿಂದ ವೈಯಕ್ತಿಕ ಲಾಭವೇನೂ ಇಲ್ಲವಲ್ಲ?!!! ಎನಿಸಿತು. ಅವರೇನು ಕೋಟಿ ಬಡ್ಜೆಟ್ ಸಿನಿಮಾಗಳನ್ನು, ಪ್ರಭಾವಿ ಉದ್ಯಮಿಗಳನ್ನು, ಜನಪ್ರಿಯ ಸ್ಟಾರ್ ಗಳನ್ನು ಹಾಕಿಕೊಂಡು ಮಾಡುವವರಲ್ಲ.
    ಕನ್ನಡಿಗರಿಗೆ ಕನ್ನಡ ಕಲಿಸಬೇಕಾಗಿಲ್ಲ. ಯಾವುದೇ ಭಾಷೆ ಸಂಸ್ಕೃತಿಯ ಭಾಗವಾದರೆ ತಾನಾಗೇ ಅದು ಮುನ್ನಡೆಯುತ್ತದೆ.
    ಇಡೀ ಭಾರತೀಯ ಚಿತ್ರರಂಗದಲ್ಲಿ ಕನ್ನಡ ಚಿತ್ರರಂಗವು ಕನಿಷ್ಠ ಸೃಜನಶೀಲತೆಯಲ್ಲಿ, ಹೂಡಿಕೆ ಮತ್ತು ಗಳಿಕೆಯ ವಿಷಯದಲ್ಲಿ ತೃಪ್ತಿಕರವಾಗಿದೆ ಎಂದರೆ ತಪ್ಪಾಗುವುದಿಲ್ಲ. ಇದಕ್ಕೆ ಕಾರಣ ಒಟ್ಟಾರೆ ಪ್ರೊಡಕ್ಷನ್ ಗಳು ಉತ್ತಮವಾಗಿವೆ ಎಂದು ಅರ್ಥ. ಕೆಲವೊಂದು ಜೊಳ್ಳು ಚಿತ್ರಗಳನ್ನೇ ಅಧಾರವಾಗಿಟ್ಟುಕೊಂಡು ಇಡೀ ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಚಿತ್ರಗಳು ಬರುತ್ತಿಲ್ಲ ಎನ್ನುವುದು ತಪ್ಪು. ಬೇರೆ ಭಾಷೆಯ ಚಿತ್ರರಂಗದಲ್ಲಿ ಕೇವಲ ಒಂದು ಅವತಾರ್,ಮಗಧೀರ, ರೋಬೋಟ್ ತರಹ ಚಿತ್ರಗಳಿಂದ ಮಾತ್ರ ಇಡೀ ಚಿತ್ರರಂಗದ ಬೆಳವಣಿಗೆಯಾಗಿದೆ ಮತ್ತು ಅತ್ಯುತ್ತಮವಾದವು ಎಂದು ಹೇಳಲಾಗುವುದಿಲ್ಲ.
    ಉದ್ಯಮ ಎಷ್ಟು ಮುಖ್ಯವೆಂದರೆ, ಆ ಉದ್ಯಮ ಕನ್ನಡವಾಗಿದ್ದರೆ, ಅದೇ ಉದ್ಯಮ ಭಾಷೆಯನ್ನೂ ಬೆಳೆಸುತ್ತದೆ. ಒಬ್ಬ ತಮಿಳು ನಿರ್ಮಾಪಕ ಕನ್ನಡಕ್ಕೆ ಡಬ್ ಮಾಡಿದನೆಂದರೆ ಅದು ಕನ್ನಡದ ಬೆಳವಣಿಗೆ ಅಲ್ಲ. ಇಡೀ ಚಿತ್ರತಂಡದ ಹಿಂದೆ ಸಾಮಾನ್ಯವಾಗಿ ಅವರದೇ ಮಾತೃಭಾಷೆ ಭಾಂದವರು ಇರುತ್ತಾರೆ ಎಂಬುದನ್ನು ಮನಗಾಣಬೇಕಾಗುತ್ತದೆ.
    ಬೇಕು ಬೇಡಗಳ ಬಗ್ಗೆ ಮತ ಚಲಾವಣೆಯ ವೇದಿಕೆಯಲ್ಲಿ ಮತ ಚಲಯಿಸುವ ಮಂದಿ ಆತುರದಲ್ಲಿ ಮತ ಚಲಾಯಿಸುತ್ತಾರೆಯೇ ಹೊರತು, ಕನ್ನಡ ಚಿತ್ರರಂಗದ ಒಳಗಿನ ವಾಸ್ತವ ಅರಿವು ಇರುವುದಿಲ್ಲ ಎನ್ನುವುದೂ ಅಷ್ಟೆ ಮುಖ್ಯ!. ಏಕೆಂದರೆ, ಕನ್ನಡದ ಜನರಿಂದ ಕನ್ನಡದ ಜನರ ಮೇಲೆ ಬೇರೆ ಭಾಷೆಗಳ ದಬ್ಬ ಚಿತ್ರಗಳೂ ಮತ್ತು ಆ ಚಿತ್ರಗಳ ನಾಯಕರೂ ಸೂಪರ್ ಎನ್ನುವಂತೆ ಪ್ರಭಾವ ಬೀರುತ್ತಿರುವ ಪ್ರಯತ್ನ ಇತಿಹಸದಿಂದಲೂ ಇದೆ.
    .... ಮುಂದುವರೆದಿದೆ

    ಸುರೇಶ್ ಕಾಂತ ಬಿ.

    ReplyDelete
  31. ಡಬ್ಬಿಂಗ್ ಒಂದೇ ಮಾರ್ಗವಲ್ಲ: ಮುಂದುವರೆದು...
    ಸುಮಾರು ಒಂದೂವರೆ ವಾರಗಳಿಂದ ಈ ಬಗ್ಗೆ ನಡೆಯುತ್ತಿರುವ ಚರ್ಚೆ, ಸ್ಥಿತಿಗತಿಗಳನ್ನು ಗಮನಿಸುತ್ತಿದ್ದು, ಇದರಲ್ಲಿ ಪ್ರತಿಕ್ರಿಯಿಸಬೇಕೆಂದು ಸಾವಿರ ಸಲ ಅಂದುಕೊಂಡಿದ್ದೇನೆ. ಆದರೂ ನಾನಾ ಕಾರಣಗಳಿಂದ ಆಗಿಲ್ಲ. ಇನ್ನು ಇಂಟರ್ ನೆಟ್ ಬಳಕೆದಾರರು ಎಷ್ಟು? ಅದರಲ್ಲಿ ಫೇಸ್ ಬುಕ್ ಬಳಕೆದಾರರು ಎಷ್ಟು? ಅದರಲ್ಲೂ ಈ ರೀತಿಯ ವಿಷಯಕ್ಕೆ ಗಮನ ಕೊಡುವವರು ಎಷ್ಟು? ಇನ್ನು ಏನೋ ಸಮಯ ನೀಡಿ ಗಮನ ವಹಿಸಿದವರಲ್ಲಿ ಎಷ್ಟು ಮಂದಿ ಕನ್ನಡ ಲಿಪಿಯನ್ನು ಬಳಸುತ್ತಾರೆ? ಇಂಗ್ಲೀಶ್ ನಲ್ಲೇ ಬಳಸಿದರೂ ಅದರ ಒಳ ಹೊರ ತಿಳುವಳಿಕೆ ಇದ್ದೇ ಇರುತ್ತದೆಯೆಂದು ಹೇಳಲಾಗದು. ಕನ್ನಡ ಭಾಷೆಯಲ್ಲಿ ಸಿನಿಮಾ ನೋಡಬೇಕು ಎಂದಾಕ್ಷಣ ಸುಲಭ ಮಾರ್ಗೋಪಾಯವೆಂದರೆ ಒಂದು ಗುಂಡಿ ಒತ್ತುವುದು (ಕ್ಲಿಕ್). ವೈಯಕ್ತಿಕವಾಗಿ ವಿಚಾರ ಮಂಡಿಸುವಾಗ ಉದ್ದೇಶಪೂರ್ವಕವಲ್ಲದಿದ್ದರೂ ಕೆಲವೊಂದು ತಪ್ಪುಗಳು (ತಿದ್ದಿಕೊಳ್ಳಬಹುದಾದ ಸಾಮಾನ್ಯ ತಪ್ಪುಗಳು) ಕಾಣಬಹುದು! ಆದರೆ ಒಂದು ಮಾಧ್ಯಮವಾಗಿ ಮಂಡಿಸುವಾಗ ಎಚ್ಚರ ವಹಿಸುವುದು ಅವಶ್ಯಕ. ಮತದಾರರಿಗೆ ಯಾವ ರೀತಿ ವಿಚಾರಗಳನ್ನು ಮಂಡಿಸಿ ಮತ ಚಲಾಯಿಸಿ ಎನ್ನುತ್ತೀರೋ, ಅದು ಮತದಾರರ ಮೇಲೆ ಪ್ರಭಾವ ಬೀರುವುದು ಖಂಡಿತಾ!!!! ಇಲ್ಲೂ ಹಾಗಾಗಿರಬಹುದು ಎನಿಸುತ್ತಿದೆ. ನೀವು ಡಬ್ಬಿಂಗ್ ಬೇಕು ಎಂದು, ಕನ್ನಡಿಗರೆಲ್ಲರೂ ಕನ್ನಡ ಭಾಷೆಯಲ್ಲೇ ಸಿನಿಮಾ ನೋಡುತ್ತಾರೆ ಎಂದು ಮಂಡಿಸಿದರೆ ಅತ್ಯುತ್ತಮವಾಗೇ ಕಾಣುತ್ತದೆ. ಇದನ್ನು ನಾನೂ ಇಷ್ಟಪಡುತ್ತೇನೆ. ಆದರೆ, ಒಂದು ಆಳವಾದ ಚರ್ಚೆ ನಡೆಯಬೇಕಲ್ಲ? ಅದಕ್ಕೊಂದು ಪೂರ್ವಾಗ್ರಹ ಮುಕ್ತ, ವೈಯಕ್ತಿಕ ಹಿತಾಸಕ್ತಿಗಳನ್ನು ತಡೆಯಬಲ್ಲ, ನ್ಯಾಯಯುತವಾದ, ಅಭಿವೃದ್ಧಿ ಪೂರಕ ವೇದಿಕೆ ಮುಖ್ಯ ಎಂಬುದನ್ನು ಇಟ್ಟುಕೊಂಡೇ ಒಂದು ನಿರ್ಣಯಕ್ಕೆ ಬರಬೇಕು. ಒಂದು ಉದಾಹರಣೆಯಿಂದ ಅರ್ಥ ಮಾಡಿಕೊಳೋಣ, ಫ಼ೇಸ್ ಬುಕ್ ಲಿಂಕ್ ನಲ್ಲಿ ಹುಡುಕಿ ವೋಟಿಂಗ್ ವಿಂಡೋಗೆ ಬಂದೆ. ಕೇವಲ ಹೌದು, ಇಲ್ಲ ಮತ್ತು ಗೊತ್ತಿಲ್ಲ ಎಂಬ ಬಹು ಆಯ್ಕೆಗಳಿಂದ ಸೂಕ್ತ ಉತ್ತರ ದೊರಕುವುದು ಕಷ್ಟವೆನಿಸಿತು. ಮೂರು ಗುಂಡಿ ಬಿಟ್ಟರೆ ಅಲ್ಲಿ ಅನ್ಯಮಾರ್ಗವಿಲ್ಲ. ಏಕೆಂದರೆ ಇದಮಿತ್ತಂ ಎಂದು ಗುಂಪುಗಳು ಹೇಳ ಹೊರಟರೆ ಸಮಸ್ಯೆ ಮತ್ತಷ್ಟು ಉಲ್ಬಣವಾಗುತ್ತದೆ ಎಂದೆನಿಸಿತು. ಏಕೆಂದರೆ ಇದು ೨+೨=೪ ತರಹದ ಪ್ರಶ್ನೆ ಅಲ್ಲ. ಕನ್ನಡ ಚಿತ್ರರಂಗದಲ್ಲಿ ಹುಟ್ಟಿಕೊಂಡಿರುವ ಗೋಜಲು ಇದು. ಸರಿ, ಡಬ್ಬಿಂಗ್ ಬೇಡವೆಂದು ಗುಂಡಿ ಒತ್ತಿದೆ. ಆದರೆ, ನನ್ನ ಅಭಿಪ್ರಾಯವನ್ನು ಬರೆಯೋಣವೆಂದರೆ ಕನ್ನಡ ಬರವಣಿಗೆ ತುಂಬಾ ನಿಧಾನ, ಇಂಟರ್ ನೆಟ್ ಲಭ್ಯತೆ ಇಲ್ಲ, ಹೀಗೆ ಹಲವಾರು ತೊಂದರೆಗಳು ಇದ್ದವು. ಇದೆಲ್ಲ ಏಕೆಂದರೆ, ಪ್ರಜಾತಾಂತ್ರಿಕ ಅಭಿಪ್ರಾಯ ಪಡೆಯುವಾಗ ಎಷ್ಟೆಲ್ಲಾ ಮುಕ್ತವಾತಾವರಣ ಮುಖ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಂಕಿ-ಸಂಖ್ಯೆಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
    ಈ ಚರ್ಚೆಯಲ್ಲಿ ಸಾಮಾನ್ಯ ಜನರು ಭಾಗಿಯಾಗುವಂತೆ ಮಾಡಬೇಕು, ಅದಕ್ಕಾಗಿ ಅವರಿಗೆ ಜನಸಾಮಾನ್ಯ ಚರ್ಚೆ ಮಾಡಿ, ಬುದ್ಧಿಜೀವಿ ಅಥವಾ ಚಿಂತಕರ ಭಾಷೆ ಇಲ್ಲಿಗೆ ಮಾತ್ರ ತುರುಕುವುದು ಬೇಡವೆನಿಸುತ್ತದೆ.
    ಸುರೇಶ್ ದ್ವಯರು ಕನ್ನಡ ಭಾಷೆಯ, ಕನ್ನಡನಾಡಿನ ಸಂಪನ್ಮೂಲಗಳ, ಎಲ್ಲಕ್ಕಿಂತ ಮಿಗಿಲಾಗಿ ವಸ್ತು ಸ್ಥಿತಿಯ ಆಧಾರದ ಮೇಲೆ ಭವಿಷ್ಯವನ್ನು ಗಮನವನ್ನಿಟ್ಟುಕೊಂಡು ಮಾತನಾಡಿದ್ದಾರೆ. ಕನ್ನಡ, ಕನ್ನಡ ನಾಡು ಎನ್ನುತ್ತಿರುವ ಇವರ ಮಾತಿನಲ್ಲಿ ದುರುದ್ದೇಶವಿರುವುದಿಲ್ಲ. ಯಾರೇ ಆದರೂ ಟೀಕೆ ಟಿಪ್ಪಣಿ ಮಾಡುವಾಗ ವೈಯಕ್ತಿಕ ನೆಲೆಗಟ್ಟಿನಲ್ಲಿ ಮಾತನಾಡದೇ ಸಾರ್ವಜನಿಕ ಉದ್ದೇಶವಿರಲಿ ಎಂಬುದೇ ನನ್ನ ಕಳಕಳಿ.
    ಹೈದಾರಾಬಾದ್ ಕರ್ನಾಟಕದ ಕೆಲವು ಜಿಲ್ಲೆಗಳು, ಬೆಂಗಳೂರು, ಕೋಲಾರ, ಚಾಮರಾಜನಗರ, ಮೈಸೂರು ಜಿಲ್ಲೆಯ ಕೆಲವು ತಾಲೊಕುಗಳು, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಹೀಗೆ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿರುವ ಪ್ರದರ್ಶಕರ ಒಲವು ಹೇಗಿದೆ???!!! ಗೊತ್ತಿಲ್ಲ. ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳು ದೊರಕದೇ ಇರುವಾಗ ಡಬ್ಬಿಂಗ್ ಸಿನಿಮಾಗಳು ಬಂದರೆ ಕನ್ನಡ ಸಿನಿಮಾಗಳಿಗೆ ಪ್ರದರ್ಶಕರ ಲಾಭಕೋರತನದಿಂದ ಚಿತ್ರಮಂದಿರಗಳು ದೊರಕುತ್ತವೆಯೇ? ಟಾಗೋರ್, ಪಡೆಯಪ್ಪ, ಹಿಂದಿಯ ರಾವಣ ಚಿತ್ರಗಳು (ಬೇಕೆನಿಸುವಷ್ಟು ಉದಾಹರಣೆಗಳು ನಮ್ಮಲ್ಲಿವೆ) ಕನ್ನಡ ಚಿತ್ರರಂಗಕ್ಕಿಂತ ಅತ್ಯುತ್ತಮವಲ್ಲದೇ ಹೋದರೂ, ಕನ್ನಡ ಸಿನಿಮಾ ನಿರ್ಮಾಣದ ಬಡ್ಜೆಟ್ ಗಿಂತ ಹೆಚ್ಚು ಕೋಟಿಗಳ ಹಣ ಸುರಿದು ಹಂಚಿಕೆ ಪಡೆದುಕೊಳ್ಳುತ್ತಾರೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಮಿತಿ ಇದ್ದಾಗ್ಯೂ ಪ್ರಭಾವಗಳಿಂದ ಹೆಚ್ಚು ಚಿತ್ರಮಂದಿರಗಳನ್ನು ಪಡೆದುಕೊಳ್ಳುತ್ತಾರೆ. ರಿಲಾಯೆನ್ಸ್ ಶ್ರೀಮಂತ, ಪ್ರಭಾವಿ ಘಟಕವಾಗಿ ಯಾವುದೇ ರೀತಿಯಿಂದಲೂ ಇಡೀ ಉದ್ಯಮದ ರೀತಿ ನೀತಿಗಳನ್ನೇ ತಿದ್ದುವ ಮಟ್ಟಕ್ಕೆ ಸೆಡ್ಡು ಹೊಡೆಯುತ್ತದೆ. ಇನ್ನು ಡಬ್ಬಿಂಗ್ ನಂತರ ಕರ್ನಾಟಕದ ಚಿತ್ರಮಂದಿರಗಳು ಶಾಶ್ವತವಾಗಿ ಲೀಸ್ ಗೆ ಬುಕ್ ಆಗಿಬಿಡುತ್ತವೆಯೇನೋ?!!
    ಕನ್ನಡದಲ್ಲಿ ನಿರ್ಮಾಣವಾದ ಶ್ರಿ ಮಂಜುನಾಥ ಅದ್ದೂರಿ ಸಿನಿಮಾವನ್ನು ನನಗೆ ತಿಳಿದ ಮಟ್ಟಿಗೆ ಅತ್ಯುತ್ತಮ ಚಿತ್ರವೆಂದೇ ಬಿಂಬಿಸಲಾಗಿದೆ. ಬೇರೆ ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಯಿತು. ಸಿನಿಮಾ ನಿರ್ಮಾಣ ಮಾಡುವಂತಹವರು ಕನ್ನಡದಲ್ಲೇ ಚಿತ್ರ ಮಾಡಿ, ಬೇರೆ ಭಾಷೆಗಳಿಗೆ ಡಬ್ ಮಾಡಿ. ಇದರಿಂದ ತೊಂದರೆಯೇನೂ ಇಲ್ಲವಲ್ಲ! ಆಗೋಲ್ಲವಾ?! ಅದು ಸಾಧ್ಯವಾದಾಗ ಡಬ್ಬಿಂಗ್ ಮಾಡಿ ಎಂದರೆ ತಪ್ಪಾಗುವುದಿಲ್ಲವೇನೋ?
    ...ಮುಂದುವರೆದಿದೆ

    ಸುರೇಶ್ ಕಾಂತ ಬಿ.

    ReplyDelete
  32. ಡಬ್ಬಿಂಗ್ ಒಂದೇ ಮಾರ್ಗವಲ್ಲ; ಮುಂದುವರೆದು...

    ನಮ್ಮ ಕನ್ನಡದ ಸಾಮಾನ್ಯ ಪ್ರೇಕ್ಷಕನಿಗೆ ಕೇಳಿದರೆ, ಕನ್ನಡದಲ್ಲಿ ಯಾವುದೇ ಸಿನಿಮಾ ಬಂದರೂ ನೋಡುತ್ತೇವೆ ಎನ್ನುತ್ತಾರೆ. ಭಾಷೆ ಅರ್ಥವಾಗುವುದು ಮುಖ್ಯವಾಗಿರುತ್ತದೆ. ಇನ್ನು ಕೆಲವು ಭಾಷಾಂಧ ಹೀರೋಗಳ ಸಿನಿಮಾವೇ ಬಿದುಗಡೆಯಾಗಬೇಕು, ಅದನ್ನೇ ಎಲ್ಲರೂ ನೋಡಬೇಕು ಎನ್ನುವವರಿಗೂ ಕಡಿಮೆಯೇನಿಲ್ಲ.
    ಟೈಟಾನಿಕ್, ರೋಬೋ, ೨೦೧೨, ಅವತಾರ್ ಮುಂತಾದ ಚಿತ್ರಗಳ ಹೆಸರುಗಳನ್ನು ಹೇಳುವುದು ಸಾಮಾನ್ಯ. ಆ ರೀತಿಯ ಚಿತ್ರ ತೆಗೆದುದಕ್ಕೆ ಅದೇ ರೀತಿಯ ಪ್ರತಿಫಲವೂ ಆ ಚಿತ್ರಗಳಿಗೆ ದೊರಕಿದೆ. ಭಾಷೆ ಅರ್ಥವಾಗದಿದ್ದರೂ ಸಿನಿಮಾ ಇಷ್ಟವಾಯಿತು. ಏಕೆಂದರೆ ಅವರದೇ ಒರಿಜಿನಾಲಿಟಿಯನ್ನು ಕಂಡು ಇಷ್ಟಪಟ್ಟಿದ್ದಾರೆ. ಅದನ್ನು ಕನ್ನಡಕ್ಕೆ ಡಬ್ ಮಾಡಿದ್ದರೆ, ಈಗ ಸಿಕ್ಕಿರುವ ಯಶಸ್ಸು ಸಿಗುತ್ತಿತ್ತಾ ಎಂದು ಅನುಮಾನ. ಚಿತ್ರವನ್ನು ಸವಿಯುವುದು ಎಂದರೆ ಆಯಾ ಭಾಷೆ, ಸಂಸ್ಕೃತಿ, ಭಾವನಾತ್ಮಕ ತಿರುಳನ್ನು ಕೇವಲ ಸಾಮಾನ್ಯವಾದ ತಂತ್ರಜ್ಞಾನವಲ್ಲ. ತಂತ್ರಜ್ಞಾನಕ್ಕೆ ಭಾಷೆಯ ಅಗತ್ಯವಿಲ್ಲ. ಅಂದಹಾಗೆ ಕ್ಷಣಮಾತ್ರದಲ್ಲಿ ಹೇಳಿ ಮುಗಿಸಬಹುದಾದ ಬೆರಳೆಣಿಕೆ ಸಿನಿಮಾಗಳನ್ನು ಉದಾಹರಿಸಿ ಇಡೀ ಕನ್ನಡ ಸಿನಿಮಾವೇ ಸರಿಯಿಲ್ಲ ಎನ್ನುವುದು ಸರಿಯಿಲ್ಲ. ಈ ರೀತಿಯ ಮನೋಸ್ಥಿತಿಯೇ ಕನ್ನಡ ಚಿತ್ರಗಳು ಉತ್ತಮವಾಗಿದ್ದರೂ ಸರಿಯಿಲ್ಲ ಎನ್ನುವಂತಾಗಿದೆ. ಇಲ್ಲಿ ಅಭಿಮಾನ ಸೇರಿದಂತೆ ಹಲವಾರು ರೀತಿಯ ಅಸಮಾದಾನಗಳು ಇರುವುದು ಸುಳ್ಳಲ್ಲ.
    ವೋಟಿಂಗ್ ನಲ್ಲಿ ಬೇಕು, ಬೇಡ, ಗೊತ್ತಿಲ್ಲ ಎಂದು ಹೇಳಿದರೆ ಇದಕ್ಕೆ ನ್ಯಾಯ ಸಿಗುವುದಿಲ್ಲ. ಈ ಚರ್ಚೆಯನ್ನು ತಂದಿಟ್ಟವರ ಹಿಂದೆ ಸ್ವಾರ್ಥ, ಅಸಮಾದಾನ ಅಥವಾ ಲಾಭದ ಉದ್ದೇಶ, ಯಾವುದಾದರೂ ಇದ್ದೇ ಇದೆ. ಆದರೂ ಆಗುವುದೆಲ್ಲಾ ಒಳ್ಳೆಯದ್ದಕ್ಕೇ!!! ಕನ್ನಡ ಚಿತ್ರೋದ್ಯೋಮ ಸಂಘಟಿತವಾಗಿ ಕಾನೂನು ನೀತಿ ವ್ಯವಸ್ಥೆ ಒಳಗೊಂಡಿರುವುದರಿಂದ, ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಆಗಬೇಕಾದ ಕೆಲಸಗಳು, ಜವಾಬ್ದಾರಿಗಳ ನಿರೂಪಣೆ, ಸ್ಪಷ್ಟ ಕಾನೂನುನೀತಿ ಎಲ್ಲವನ್ನು ತರುವ ಅವಶ್ಯಕತೆ ಇದೆ. ಅದಕ್ಕಾಗಿ ದೀರ್ಘ ಚರ್ಚೆ ಮತ್ತು ತೀರ್ಮಾನಗಳು ಆಗಬೇಕು. ಸಂಸ್ಕೃತಿಯ ಪ್ರಭಾವ ಬೀರಿರುವ ಹಲವಾರು ರೀಮೇಕ್ ಚಿತ್ರಗಳೇ ನಮ್ಮಲ್ಲಿ ಇರುವಾಗ, ಇನ್ನು ಡಬ್ಬಿಂಗ್ ನಿಂದಲೇ ನಮ್ಮ ಕನ್ನಡ ನಾಡಿನ ಜನರು ಸಿನಿಮಾ ನೋಡಬೇಕಿಲ್ಲ. (ದಿಗ್ಗಜರು)
    ರಿಮೇಕ್ ಸಿನಿಮಾಗಳಿಂದ ಅಷ್ಟೊಂದು ತೊಂದರೆಯಾಗುವುದಿಲ್ಲ ಎಂಬುದು ನನ್ನ ಅನಿಸಿಕೆ. ಏಕೆಂದರೆ ಭಾಷೆ, ಸಂಸ್ಕೃತಿ, ಭಾವ-ಅನುಭಾವ, ಉದ್ಯಮ, ಮಾರುಕಟ್ಟೆ, ವೃತ್ತಿ, ಆರ್ಥಿಕತೆ ಎಲ್ಲದರಿಂದಲೂ ಸಮತೋಲನವಾಗಿದೆ ಎಂದೆನಿಸುತ್ತಿದೆ. ಹಾಗೆಂದು ರೀಮೇಕನ್ನು ಉತ್ತೇಜಿಸುತ್ತಿಲ್ಲ. ಅಷ್ಟಕ್ಕೂ ಎಲ್ಲಾ ಸಿನಿಮಾಗಳನ್ನು ರಿಮೇಕ್ ಮಾಡಲಾಗುವುದಿಲ್ಲ. ಮೈ ಆಟೋಗ್ರಾಫ್ ಸಿನಿಮಾದ ಕಥೆ ಇಡೀ ಭಾರತೀಯರ ಭಾವನೆಗಳಿಗೆ ಸಾಮಾನ್ಯವಾಗಿ ಅನ್ವಯಿಸುತ್ತದೆ ಎಂದೆನಿಸುತ್ತಿದೆ. ಕೇರಳ ಮತ್ತು ತಮಿಳು ಇದ್ದರೆ, ಕನ್ನಡದಲ್ಲಿ ಕೇರಳ ಮತ್ತು ಕರ್ನಾಟಕವನ್ನು ಅನ್ವಯಿಸಿಕೊಳ್ಳುತ್ತದೆ. ಅದೇ ರೀತಿ ಅನೇಕ ಉತ್ತಮ ಕಥೆಗಳೂ ಕೂಡ ಹಾಗೇನೇ.!ಹಾಗಂತ ಕನ್ನಡದಲ್ಲಿ ಎಲ್ಲಾ ಸಿನಿಮಾವೂ ರಿಮೇಕ್ ಆಗಿಬಿಡಲು ಸಾಧ್ಯವಿಲ್ಲ. ಅಲ್ಲದೆ, ಕನ್ನಡದಲ್ಲಿ ಅನೇಕ ನಿರ್ದೇಶಕರು, ಕಥಾಕಾರರು ಎಲ್ಲಕ್ಕಿಂತ ಸೃಜನಶೀಲರು ಇದ್ದಾರೆ ಎಂಬುದುದು ಸತ್ಯ, ಒಪ್ಪುವ ಮನಸ್ಸು ಬೇಕು.
    ಯಾವುದೇ ಪೂರ್ವಾಗ್ರಹ ಪೀಡಿತನಾಗದೇ, ನನ್ನ ತಲೆಯಲ್ಲಿ ಮೂಡಿದ ಆಲೋಚನೆಗಳನ್ನು ಇಲ್ಲಿ ಬರೆದಿದ್ದೇನೆ. ಕ್ರಮಾನುಸಾರ ಇಲ್ಲದೇ ಇರುವುದನ್ನು ನೀವೇ ಜೋಡಿಸಿಕೊಳ್ಳಿ. ಯಾವುದೇ ಒಂದು ಸಾಂಘಿಕ ನೆಲೆಗಟ್ಟಿನಲ್ಲಿ ನೋಡಿದಾಗ, ಹೃದಯವಂತ ಪ್ರಾಮಾಣಿಕ ಕನ್ನಡಿಗರು ಕಾಪಾಡುತ್ತಾರೆ, ಅವರನ್ನು ಅವರೇ.

    ಸುರೇಶ್ ಕಾಂತ ಬಿ.

    ReplyDelete
  33. "ಸಿನಿಮಾಗಳಲ್ಲಿ ನೋಡುವ ಭಾಷೆ ಒಂದೇ. ಅದು ಟಿಪಿಕಲ್ ಬೆಂಗಳೂರು ಶ್ರೀರಾಮಪುರದ ಭಾಷೆ."

    100000% Nija.
    Shame!!

    ReplyDelete
  34. ವಿಜಯ್ ಅವರೇ,
    ವಿಜಯ್ ಅವರೇ,
    ನಿಮ್ಮ ತರ ಯಾರಾದರೂ ಪ್ರತಿಕ್ರಿಯೆ ಕೊಡ್ತಾರೆ ಅಂತ ಕಾಯ್ತಾ ಇದ್ದೆ. ಈಗ ತೃಪ್ತಿ ಆಯಿತು.ನಾನು ಇಂಗ್ಲೀಶ್ ನಲ್ಲಿ ಪ್ರತಿಕ್ರಿಯೆ ಕೊಟ್ಟಾಗ ಅದರಲ್ಲಿರೋ ಸಾರ ಕನ್ನಡ ಮಾತ್ರ ತಿಳಿದವರಿಗೆ ಅರ್ಥವಾಗೋದಿಲ್ಲ, ಕನ್ನಡದಲ್ಲಿ ಕೊಡಿ ಅನ್ನೋದು ೧೦೦% ಸರಿ. ನಮ್ಮದು ಅದೇ ವಾದ. ನನ್ನ ಪ್ರತಿಕ್ರಿಯೆ ಇಂಗ್ಲಿಶ್ ನಲ್ಲಿ ಮೂಡಿಬಂದಿದ್ದರೂ ಅದು ಎಲ್ಲರನ್ನು ತಲುಪಲು ಕನ್ನಡದಲ್ಲಿ ಬೇಕ್ಕಲ್ಲವೇ? ಅದೇ ರೀತಿ ಇಂಗ್ಲೀಶ್ನಲ್ಲಿ ಅಥವಾ ಬೇರೆ ಯಾವುದೇ ಭಾಶೆಯಲ್ಲಾದರೂ ತಯಾರಾಗೋ ಉತ್ತಮ ಚಿತ್ರಗಳು ಕನ್ನಡದಲ್ಲಿ ಸಿಗಬೇಕು. ನನ್ನ ಇಂಗ್ಲಿಶ್ ಪ್ರತಿಕ್ರಿಯೆಯನ್ನ ಒಂದು ಇಂಗ್ಲಿಶ್ ಚಿತ್ರವಾಗಿ ತೆಗೆದುಕೊಳ್ಳೋಣ. ಅದರಲ್ಲಿ ಒಳ್ಳೆಯ ವಾದವಿದೆಯೋ, ಕೆಟ್ಟ ವಾದವಿದೆಯೋ ಅನ್ನೋದು ಸದ್ಯಕ್ಕೆ ಪಕ್ಕಕ್ಕೆ ಇಡೋಣ. ಒಟ್ಟಿನಲ್ಲಿ ಅದರಲ್ಲಿ ಏನಿದೆ ಅಂತ ತಿಳಿದುಕೊಳಕ್ಕೆ ಅದು ಕನ್ನಡದಲ್ಲಿಯೇ ಸಿಗಬೇಕು ಅಲ್ಲವೇ? ಅಥವಾ ಕನ್ನಡ ಮಾತ್ರ ಬಲ್ಲವನು ನನ್ನ ಪ್ರಶ್ನೆ ಮಾಡಿದ್ರೆ ಈಗ ಡಬ್ಬಿಂಗ್ ವಿರೋಧಿಗಳು ಹೇಳೋ ಕುಂಟು ನೆಪಗಳ ತರ ನಾನು "ಇಂಗ್ಲಿಶ್ ಕಲ್ತ್ಕೊಲ್ಲಿ, ಆಮೇಲೆ ಓದಿ" ಅಂತಾನೋ ಅಥವಾ "ಮೂಲ ಇಂಗ್ಲಿಶ್ ನಲ್ಲಿ ಬರೆದ ಪ್ರತಿಕ್ರಿಯೆ ಕನ್ನಡಕ್ಕೆ ತರ್ಜುಮೆ ಆದ್ರೆ ಅದರ ಸಾರ ಹಲಾಗತ್ತೆ" ಅಂತಾನೋ ತಲೆ ಬುಡ ಇಲ್ಲದೆ ಮಾತಾಡಿದ್ರೆ ಹೆಂಗಿರತ್ತೆ ಅಲ್ಲವೇ? ಹ ಹ ಹ
    ಇದೀಗ ನನ್ನ ಪ್ರತಿಕ್ರಿಯೆಗಳ ಕನ್ನಡದ ತರ್ಜುಮೆ ಇಲ್ಲಿದೆ:
    ಡಬ್ಬಿಂಗ್ ವಿರುದ್ಧ ಸೆಡ್ಡು ಹೊಡೆದು ನಿಂತಿರುವ ಎಲ್ಲ ಮಹಿಳೆಯರಿಗೆ ಹಾಗು ಮಹನೀಯರಿಗೆ ನನ್ನದೊಂದು ಪ್ರಶ್ನೆ - ಜುರಾಸಿಕ್ ಪಾರ್ಕ್, ಅವತಾರ್ , ಹಾರಿ ಪಾಟರ್, ತಾರೆ ಜಮೇನ್ ಪರ, ೩ ಈಡಿಯಟ್ಸ್ ಚಿತ್ರಗಳನ್ನು ತಾವು, ಕುಟುಂಬ ಸಮೇತರಾಗಿ ನೋಡಿದ್ದೀರಾ ತಾನೇ? ಪಟ್ಟಣಗಳಲ್ಲಿ ಬೆಳೆದು ಇಂಗ್ಲಿಷ್, ಹಿಂದಿ ಬಲ್ಲವರಾಗಿ ಆ ಭಾಷೆಗಳಲ್ಲಿ ತಯಾರಿ ಆಗೋ ಒಳ್ಳೆ ಚಿತ್ರಗಳ್ನ ಅವೇ ಭಾಷೆಗಳಲ್ಲಿ ನೋಡ್ತೀರಾ. ಅದರಲ್ಲಿರೋ ಸತ್ವವನ್ನು ಚೆನ್ನಾಗೆ ಸವೀತೀರ. ಒಟ್ಟಾರೆಯಾಗಿ ಒಳ್ಳೆಯ ಮನರಂಜನೆ ನಿಮ್ಮದಾಗತ್ತೆ. ಆದ್ರೆ ನಮ್ಮ ಹಳ್ಳಿಗಾಡಿನಲ್ಲಿ ವಾಸವಿರೋ ಕೇವಲ ಕನ್ನಡ ಮಾತ್ರ ತಿಳಿದಿರೋ ನಮ್ಮ ಹಳ್ಳಿಯ ಮುಗ್ಧ ಮಕ್ಕಳು ಮಾತ್ರ ಕನ್ನಡದಲ್ಲಿ ತಯಾರಾಗೋ ಬೆರಳೆಣಿಕೆಯಷ್ಟು ಒಳ್ಳೆಯ ಚಿತ್ರಗಳನ್ನ ಮಾತ್ರ ನೋಡಬೇಕಾ?
    ಡಬ್ಬಿಂಗ್ ಬೇಡ ಅನ್ನುವವರ ಮನಸ್ಸಿನಲ್ಲಿ ಬಹುಶ ನಮ್ಮ ಹಳ್ಳಿಗಳಲ್ಲಿ ವಾಸವಿರೋ ಮಕ್ಕಳ ಬಗ್ಗೆ ಕೀಳು ಅಭಿಪ್ರಾಯ ಹಾಗು ಅವರು ಹಳ್ಳಿ ಗೂಬೆಗಳು ಅವರ ಯೋಗ್ಯತೆಗೆ ಕನ್ನಡ ಚಿತ್ರಗಳು ಮಾತ್ರ ಸಾಕು ಅನ್ನುವ ದುರಹಂಕಾರ ತುಂಬಿರುವ ಧೋರಣೆ ಇದ್ದಂತಿದೆ. ಇದು ಹೇಗಿದೆ ಅಂದ್ರೆ ನಮ್ಮ ಕನ್ನಡ ಚಿತ್ರಗಳಲ್ಲಿ ತೋರಿಸ್ತಾರಲ್ಲ, ಹಳ್ಳಿಯಲ್ಲಿ ಪಟೇಲ, ಜಮೀನುದಾರ ಮುಂತಾದವರು ಹಳ್ಳಿಯ ಜನರನ್ನ ಓದು, ಬರಹಗಳಿಂದ ದೂರ ಇಟ್ಟು ಅವರನ್ನ ಕೀಳು ಮನೋಭಾವದಿಂದ ಕಾಣೋದು. ಈ ಡಬ್ಬಿಂಗ್ ವಿಷಯವಾಗಿ ಡಬ್ಬಿಂಗ್ ವಿರೋಧಿಗಳು ಮಾಡುತ್ತಿರುವುದು ಅದನ್ನೇ. ಇವರು ಹಾಕೋ ಭಿಕ್ಷೆಯನ್ನು ಮಾತ್ರ ತಗೊಂಡು ಕೂತಿರಬೇಕು.
    ಅದೊಂದು ವಿಷಯವಾದರೆ, ಮತ್ತೊಂದು ಕೆಲವು ಡಬ್ಬಿಂಗ್ ವಿರೋಧಿ ಪಂಡಿತರು ಮಂಡಿಸುವ ವಾದ - ಆಯಾ ಭಾಷೆಯ ಚಿತ್ರಗಳನ್ನ ಅವವೇ ಭಾಷೆಗಳಲ್ಲಿ ನೋಡಿ ಅಂತ. ಅಲ್ಲ ಸ್ವಾಮಿ ನಾಳೆ ಜ್ಯಾಪನಿಸ್ ಅಥವಾ ಫ್ರೆಂಚ್ ನಲ್ಲಿ ಒಳ್ಳೆಯ ಚಿತ್ರ ಒಂದು ಬಂದ್ರೆ, ನಾನು ಆ ಭಾಷೆಗಳನ್ನ ಕಲ್ತ್ಕೊಂಡು ಆಮೇಲೆ ಚಿತ್ರಗಳನ ನೋಡಬೇಕಾ? ಮಾಡಕ್ಕೆ ಬೇರೆ ಏನು ಕೆಲಸ ಇರಲ್ವಾ ನಮಗೆ? ಪ್ರಪಂಚದಲ್ಲಿರೋ ಭಾಷೆಗಲ್ನೆಲ್ಲಾ ಕಲ್ಕೊಲೋ ಪುರುಸತ್ತಾಗಲೀ ಅವಶ್ಯಕಥೆಯಾಗಲೀ ನಮಗಿಲ್ಲ. ಪ್ರಪಂಚದಲ್ಲಿ ತಯಾರಾಗೋ ಎಲ್ಲ ಒಳ್ಳೆ ಚಿತ್ರಗಳು ಕನ್ನಡಕ್ಕೆ ಡಬ್ ಆದ್ರೆ ಸಾಕು

    ReplyDelete
  35. ನನ್ನ ಎರಡನೇ ಇಂಗ್ಲಿಶ್ ಪ್ರತಿಕ್ರಿಯೆಯ ಕನ್ನಡ ತರ್ಜುಮೆ ಇಲ್ಲಿದೆ -
    ಕಾಕತಾಳೀಯ ಅಂದ್ರೆ ಕನ್ನಡಕ್ಕೆ ಪರಭಾಷೆಯ ಚಿತ್ರಗಳು ಡಬ್ ಆಗಬಾರದು ಅಂತ ವಾದ ಮಾಡ್ತಾ ಇರೋ ೯೫% ಜನ ತಮ್ಮ ಕೂಲಿಗೆ, ಹೊಟ್ಟೆ ಪಾಡಿಗೆ, ಕನ್ನಡ ಚಿತ್ರರಂಗದ ಮೇಲೆ ಅವಲಂಬಿತರಾಗಿದ್ದಾರೆ. ಅದಕ್ಕೆ ಅವರ ಮಾತಿನಲ್ಲಿ ಭಯ ಎದ್ದು ಕಾಣುತ್ತದೆ. ಪರಭಾಷೆ ಚಿತ್ರಗಳು ಕನ್ನಡಕ್ಕೆ ಡಬ್ ಆದ್ರೆ ಕನ್ನಡ ಚಿತ್ರಗಳ ನಿರ್ಮಾಣವೇ ನಿಂತುಹೊಗುತ್ತದೇನೋ ಅನ್ನೋ ಭಯ ಅವರಿಗಿದೆ. ಡಬ್ಬಿಂಗ್ ವಿರುದ್ಧ ಹರಿಹಾಯ್ತ ಇರೋ ಬಹಳಷ್ಟು ಜನ ನಿರ್ದೇಶಕರು, ನಟರು ಮತ್ತು ತಂತ್ರಜ್ಞರು ಕೆಲವು ಟಿವಿ ವಾಹಿನಿಗಳ ಜೊತೆ ಅಪ್ಪಟ ಒಪ್ಪಂದಗಳನ್ನು ಮಾಡಿಕೊಂಡಂತೆ ಕಾಣ್ಸತ್ತೆ. ಆಡದೆ ನಿರ್ದೇಶಕರ ಸೀರಿಯಲ್ಗಳು ಮುಗಿದರು ಮತ್ತೆ ಅವರಿಗೆ ಅವಕಾಶ ಸಿಗತ್ತೆ. ಮತ್ತೊಂದು ಕಾಗೆ, ಗುಬ್ಬಚ್ಚಿ ಕಥೆಗಳ ಸೀರಿಯಲ್ ಅನ್ನು ಮತ್ತೆ ೩೦೦-೪೦೦-೧೦೦೦ ಯೆಪಿಸೋದ್ಗಳಿಗೆ ರಬ್ಬರ್ ತರ ಎಳೆಯುವ ಮಹತ್ತರವಾದ ಅವಕಾಶ ಸಿಗತ್ತೆ. ಅಲ್ಲೇ ಇರೋದು ನಮ್ಮವರಿಗೆ ಭಯ. ಒಂದು ಪಕ್ಷ ಡಬ್ಬಿಂಗ್ ಮಾಡಿ ಪರಭಾಷೆಯಲ್ಲಿ ತಯಾರಾಗೋ ಒಳ್ಳೆಯ ಸೀರಿಯಲ್ಗಳನ್ನ ಈ ವಾಹಿನಿಗಳು ಪ್ರಸಾರ ಮಾಡಿದ್ರೆ, ಇವರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಅಷ್ಟೇ. ಇವರಿಗೆ ಅರ್ಥವಾಗಬೇಕಿದೆ. ಒಳ್ಳೆಯ ಸದಭಿರುಚಿ ಚಿತ್ರಗಲಾಗಲೀ, ಸೀರಿಯಲ್ ಗಳಾಗಲಿ ನಮ್ಮವರು ತಯಾರು ಮಾಡಿದಲ್ಲಿ ಡಬ್ಬಿಂಗ್ ವಿಷಯವಾಗಿ ಹೆದರಬೇಕಿಲ್ಲ. ಗುಣಮಟ್ಟದ ಸರಕಿಗೆ ಯಾವತ್ತಿಗೂ ಬೆಲೆ ಇರುತ್ತದೆ. ಕನ್ನಡದಲ್ಲಿ ತಯಾರಾದ ಜಾಕಿ, ಸೂಪರ್, ಎದ್ದೇಳು ಮಂಜುನಾಥ ಮುಂತಾದ ಚಿತ್ರಗಳನ್ನ ಕನ್ನಡ ಪ್ರೇಕ್ಷಕರು ಗೆಲ್ಲಿಸಲ್ಲಿಲ್ಲವೇ? ಕೆಟ್ಟ ಕನ್ನಡ ಚಿತ್ರಗಳು ಒಂದೆರಡು ವಾರಗಳಿಗೆ ಮಣ್ಣು ಮುಕ್ಕಿಸಲಿಲ್ಲವೇ? ಇದೆ ನೀತಿ ಡಬ್ಬಿಂಗ್ ಚಿತ್ರಗಳಿಗೂ ಅನ್ವಯಿಸುತ್ತದೆ. ಒಳ್ಳೆಯದು ಗೆಲ್ಲುತ್ತದೆ, ಕೆಟ್ಟದ್ದು ಸೋಲಲೇಬೇಕು.
    ತಮಾಷೆ ಅಂದ್ರೆ, ಡಬ್ಬಿಂಗ್ ಗುಮ್ಮನ್ನನ್ನು ತೋರಿಸಿ ತೋರಿಸಿ ಇಷ್ಟು ದಿನ ಕನ್ನಡಿಗರನ್ನ ಉತ್ತಮ ಮನರಂಜನೆ ಸಿಗದಂತೆ ದೂರ ಇಟ್ಟಿದ್ದಾರೆ ಅಷ್ಟೇ.
    ಒಂದು ವ್ಯಾಪಾರ, ವಹಿವಾಟು ಹೇಗೆ ನಡೆಯುತ್ತದೆ ಅನ್ನುವ ಆಳ ಇವರುಗಳಿಗಿದ್ದಂತಿಲ್ಲ. ಗ್ರಾಹಕನಾಗಿ ಪ್ರಜಾಪ್ರಭುತ್ವದಲ್ಲಿ ನ್ಯಾಯವಾಗಿ ನಮಗೆ ಬೇಕಾದುದನ್ನು ಪದೆಕೊಳ್ಳುವ ಹಕ್ಕು ನಮಗಿದೆ. ಮತ್ತೊಮ್ಮೆ ಹೇಳುವೆ ಅದು ನಮ್ಮ ಹಕ್ಕು. ನಮ್ಮ ಹಕ್ಕುಗಳಿಂದ ನಮ್ಮನ್ನು ವನ್ಚಿತಗೊಳಿಸಲು ಈ ಮಹಾನ್ ನಾಯಕರು ಯಾರು?
    ಗ್ರಾಹಕ ಕೆಲಿದನ್ನು ತಯಾರಕ ತುಟಿಕ್, ಪಿಟಕ್ ಅನ್ನದೆ ಕೊಡಬೇಕು. ಅವನಿಗೆ ಕೊಡಲು ಯೋಗ್ಯತೆ ಇಲ್ಲವಾದರೆ, ಬೇರೆ ಅವರು ಕೊಡ್ತೀವಿ ಅಂದಾಗ ಮೂಗು ತೂರಿಸಬಾರದು

    ReplyDelete
  36. ಎಲ್ಲರಿಗೂ ನಮಸ್ಕಾರ ರೀ. ಯಾರೋ ಒಬ್ಬರು ಮೊನ್ನೆ ಹೇಳಲಿಕತ್ತಿದ್ದ್ರು , ನಮ್ಮ ಕನ್ನಡ ಜಾಹೀರಾತುಗಳು ನೋಡಿದ್ರೆ ಅದು ಹಿಂದಿ/ಇಂಗ್ಲಿಷ್ ನ ತಜುರ್ಮೆಯಾಗಿರ್ತದ, ತುಟಿ ಸಿಂಕ್ ಮಾಡ್ಲಿಕ್ಕೆ ಆಗಿರೋಲ್ಲ ಒಂಥರಾ ಹಾಸ್ಯಾಸ್ಪದ ಆಗಿರ್ತದ ಅಂತ. ಅಲ್ಲರಿ, ಇದು ನಮ್ಮದ ತಪ್ಪು.ಡಬ್ಬಿಂಗಕ್ಕೆ ಅವಕಾಶ ಮಾಡಿಕೊಟ್ರೆ, ಎಲ್ಲವನ್ನು ಇಲ್ಲೇ ನೇರವಾಗಿ ಶುರು ಮಾಡಬಹುದು. ನಮ್ಮ ಮಂದಿಗೆ ಹಿಂದಿ/ಇಂಗ್ಲಿಷ್ ಜಾಹೀರಾತು ನೋಡ್ಲಿಕ್ಕೆ ಅಡ್ಡಿಯಿಲ್ಲ ಆದ್ರೆ ಅದೇ ನ್ನಮ್ಮ ಭಾಷಾ ದಾಗ ಬ್ಯಾಡ ಅಂದ್ರ, ನಮಗೆ ನಾವೇ ಕಲ್ಲು ಹಾಕೊಂಡಂಗ. ಯಾವುದೇ ಜನಾಂಗ ಆಗಿರಲಿ ಜನ ಇರಲಿ ತನ್ನ ತಾಯಿ ಭಾಷೇಲಿ ಎಷ್ಟು ಸುಲಭ,ಸರಳ ವಾಗಿ ಅರ್ಥ ಆಗ್ತದ ಅಷ್ಟು ಬೇರೆ ಭಾಷೇಲಿ ಆಗಲ್ಲ. ಡಬ್ಬಿಂಗ್ ಬಂದ್ರೆ ಏನೆಲ್ಲಾ ಒಳ್ಳೆಯದಾಗುತ್ತೆ ಅನ್ನೋದು ಜನಕ್ಕ ಗೊತ್ತೇ ಇಲ್ಲ. ಇತ್ತೀಚಿಗೆ ನಮ್ಮಂಥ ಸ್ವಲ್ಪ ಮಂದಿ ಇಂಟರ್ನೆಟ್-ಗಣಕ ಯಂತ್ರ ಅಂತ ಗೊತ್ತಿರೋರಿಗೆ ಇದರ ಮಹತ್ವ ತಿಳಿಲಿಕತ್ತೈತಿ. ಇನ್ನು ಒಂದು ಜಲ್ವಂತ ಉದಾಹರಣೆ ಕೊಡಬೇಕು ಅಂದ್ರೆ, ನಮ್ಮ ಉತ್ತರ ಕರ್ನಾಟಕದ ಹಲವಡೆ ಹಳ್ಳಿಯೊಳಗ ಈ ಜನಪ್ರಿಯವಾದ ಹಿಂದಿ ಹಾಡ ಇರ್ತವಲ್ಲ ಅವನ್ನ ಉತ್ತರ ಕರ್ನಾಟಕದ ಕನ್ನಡ ದಾಗ ಡಬ್ಬ ಮಾಡಿ ಎಲ್ಲೆಡೆ ಕೇಳ್ತಾರೆ. ಕೆಲವೊಂದು ಸಾರಿ ಇದು ಹಾಸ್ಯಭರಿತ ವಾದ್ರು ಜನಕ್ಕೆ ತಮ್ಮ ತಾಯ್ನುಡಿದಾಗ ಕೇಳಬೇಕು ಅನ್ನೋ ತುಡಿತ ನೋಡ್ರಿ ಅದು. ನಾವು ಹಿಂಗೆ ಡಬ್ಬಿಂಗ್ ಬ್ಯಾಡ ಬ್ಯಾಡ ಅಂದ್ರೆ ಅಷ್ಟೇ!! ನಮ್ಮ ಮಂದಿನೆ ನಮಗೆ ಕಲ್ಲು ತಗೊಂಡು ಎಸಿಬಹುದು ಅಂತ ನನಗ ಅನಿಸ್ತದ.

    ReplyDelete
  37. All of your discussions and voting will never decide if movies will be dubbed into Kannada. The only obstacle before producers who are willing to dub is the threat of violence. It is only a matter of time before those threatening violence are bought over.

    ReplyDelete
  38. B suresh, does n't have current environment sense, i don't know what kind of analysis he has done.
    Dubbing should be allowed in Kannada at least for English films, we don't want it for Telugu, Tamil or Hindi language as we don't watch those movies at all.
    If we do dubbing, Kannada as language will grow in multiplex. Especially in young children who are given high prominence to study in English.
    People will watch all big budget Hollywood cinemas in Kannada this will definitely increase Kannada environment.
    We want Kannada to be their in every part of karnataka and dubbing is one of the method to achieve it.
    B Suresh jee, forget sanskriti and all, come out of your useless thinking and think it in big way, don't be a frog in well, we want Kannada to sustain
    I think you are afraid of loosing money and job, boss compete properly with current generation film making if you are good people will definitely encourage you.

    Ram

    ReplyDelete