Wednesday, July 27, 2011

ಪ್ರಾಣಿಬಲಿ ನಿಷೇಧ: ಸರಳೀಕರಣದ ಆತಂಕಗಳು

ಪ್ರಾಣಿ ಬಲಿ ನಿಷೇಧದ ಕುರಿತಾಗಿ ಪತ್ರಿಕೆಗಳಲ್ಲಿ ಮತ್ತೆ ಮತ್ತೆ ವರದಿಗಳು ಪ್ರಕಟವಾಗುತ್ತಿರುತ್ತವೆ, ಈ ವರದಿಗಳಲ್ಲಿ ಆ ವಿಷಯವನ್ನು ತುಂಬಾ ಸರಳೀಕರಿಸುತ್ತವೆ ಎಂಬುದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಯೋಜನಾ ಸಹಾಯಕ ಡಾ. ಅರುಣ್ ಜೋಳದಕೂಡ್ಲಿಗಿ ಅವರ ವಾದ. ಪ್ರಾಣಿಬಲಿ  ನಿಷೇಧ ಆಗಬೇಕು, ಆದರೆ ಆ ವಿಷಯವನ್ನು ತುಂಬಾ ಸರಳವಾಗಿ ನೋಡಲಾಗದು. ಹಾಗಾಗಿ ಪ್ರಾಣಿಬಲಿ ಕುರಿತು ಇನ್ನೊಂದು ಮಗ್ಗಲಲ್ಲಿ ಯೋಚಿಸಲು ಅನುವಾಗಬೇಕು ಎನ್ನುವ ಅರುಣ್ ಬರೆದ ಲೇಖನ ಇಲ್ಲಿದೆ. ಚರ್ಚೆಗೆ ಸ್ವಾಗತ. ಅರುಣ್ ಜೋಳದಕೂಡ್ಲಿಗಿ ಹೊಸ ತಲೆಮಾರಿನ ಜಾನಪದ ಸಂಶೋಧಕರು. ಅವರ ಬ್ಲಾಗ್ ಕನ್ನಡ ಜಾನಪದ.
-ಸಂಪಾದಕೀಯ

ಪ್ರಜಾವಾಣಿಯಲ್ಲಿ ಜುಲೈ ೬ ರ ಸಂಗತ ಬರಹ (ರೂಪ ಹಾಸನ) ಜುಲೈ ೧೩ ರ ವಾಚಕರವಾಣಿ (ಎಸ್.ತಾರಾನಾಥರ ಪತ್ರ) ಗಳನ್ನು ನೋಡಿದೆ. ಇಂತಹ ಬರಹ ಪತ್ರಿಕಾ ವರದಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುತ್ತದೆ. ಇಲ್ಲಿ ಪ್ರಾಣಿಬಲಿ ನಿಷೇಧದಬಗ್ಗೆ ಕಾಳಜಿ ವ್ಯಕ್ತವಾಗಿದೆ. ಅಂತೆಯೇ ಇಬ್ಬರೂ ಪ್ರಾಣಿಬಲಿಯನ್ನು ಮೌಢ್ಯ, ಇಂತಹ ಅನಾಗರಿಕ ಆಚರಣೆಯನ್ನು ನಾಗರಿಕರೊಬ್ಬರು ಸರಿಪಡಿಸುವ ಜವಾಬ್ದಾರಿಯಂತೆ ಹೇಳಿದ್ದಾರೆ. ಈ ಎರಡೂ ಬರಹಗಳು ಪ್ರಾಣಿ ಬಲಿಯನ್ನು ಸರಳವಾಗಿ ಗ್ರಹಿಸಿದಂತೆ ಕಾಣುತ್ತದೆ.  ಹೀಗೆ ವಿಚಾರ ಮಂಡಿಸುವುದು ಸುಲಭ, ಆದರೆ ಅದರ ಸಂಕೀರ್ಣ ಸ್ವರೂಪವನ್ನು ಅರ್ಥ ಮಾಡಿಕೊಂಡು ನಿಷೇಧದ ಬಗ್ಗೆ ಮಾತನಾಡುವುದು ಒಳಿತು.

ಪ್ರಾಣಿಬಲಿ ಆಚರಣೆ ನಿಷೇಧ ಆಗಬೇಕೆನ್ನುವುದು ಎಲ್ಲರ ಸದಾಶಯ. ಆದರೆ ಅದನ್ನು ಕಾನೂನಿನ ಮೂಲಕ ಹೊರಗಿನಿಂದ ನಿಯಂತ್ರಿಸಲು ಎಂದಿಗೂ ಸಾದ್ಯವಾಗದು. ಬದಲಾಗಿ ಮೊದಲು ಪ್ರಾಣಿಬಲಿ ಕುರಿತ ಚಾರಿತ್ರಿಕ ಹಿನ್ನೆಲೆಯನ್ನು ಅರಿತು, ಬುಡಮಟ್ಟದಿಂದ ಕೆಲ ಸಾಮಾಜಿಕ ಬದಲಾವಣೆಗಳಿಗೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕು. ಹಾಗಾದಲ್ಲಿ ನಿಧಾನಕ್ಕೆ ಜನರ ಒಳಗೇ ಪ್ರಾಣಿಬಲಿ ನಿಷೇಧದ ಭಾವನೆ ಬರುವಂತೆ ಮಾಡುವ ಅಗತ್ಯವಿದೆ.

ಪ್ರಾಣಿಬಲಿ  ದಮನಿತ ಮುದಾಯಗಳು ಕಟ್ಟಿಕೊಂಡ ಪ್ರತಿಸಂಸ್ಕೃತಿ. ಮೇಲ್ವರ್ಗ, ಮೇಲ್ಜಾತಿ ಸಮುದಾಯಗಳು ತಮ್ಮ ಆಚರಣೆ ಪರಂಪರೆಯನ್ನು ಶ್ರೇಷ್ಠ ಎಂದೂ, ಕೆಳಜಾತಿಗಳ ಆಚರಣೆ ಮತ್ತು ಬದುಕಿನ ರೀತಿಯನ್ನು ಕನಿಷ್ಠ ಎಂದೂ  ಬಾವಿಸುತ್ತವೆ. ಹಾಗಾಗಿ ಪ್ರಾಣಿಬಲಿ ಅನಾಗರಿಕ ಆಚರಣೆಯಂತೆ ಕಾಣುತ್ತದೆ.  ತಳಸಮುದಾಯಗಳು ಮೇಲ್ವರ್ಗ ಕಟ್ಟಿದ ಪಾವಿತ್ರ್ಯದ ನಾಶ ಮಾಡಲು, ಕೀಳೆಂದು ನಿರಾಕರಿಸದ್ದನ್ನು ಈ ಸಮುದಾಯಗಳು ತಮ್ಮ ಸಂಸ್ಕೃತಿಯ ಭಾಗವನ್ನಾಗಿಸಿಕೊಂಡಿರುತ್ತವೆ. (ನೋಡಿ: ರಹಮತ್ ತರೀಕೆರೆ ಅವರ ಪ್ರತಿಸಂಸ್ಕೃತಿ ಪುಸ್ತಕ) ಹಾಗಾಗಿ ಪ್ರಾಣಿಬಲಿ ನಿಷೇಧದ ಆತಂಕ ಏಕಕಾಲದಲ್ಲಿ ದಮನಿತ ಸಮುದಾಯಗಳ ಸಂಸ್ಕೃತಿಯ ನಿರಾಕರಣೆಯೂ ಆಗಿರುತ್ತದೆ.

ಪ್ರಾಣಿ ಬಲಿ ನಿಷೇಧ, ಕೊನೆಗೆ ಮಾಂಸಾಹಾರ ನಿಷೇಧದ ಕಡೆ ವಾಲುತ್ತದೆ. ಅಥವಾ ಮಾಂಸಾಹಾರ ನಿಷೇದದ ಬಗೆಗೆ ಒಲವಿರುವವರು ಸಹ ಪ್ರಾಣಿಬಲಿ ನಿಷೇಧವಾಗಬೇಕೆಂದು ಹೇಳುತ್ತಿರುತ್ತಾರೆ. ಇದು ಮಾಂಸ ಉಣ್ಣುವವರ ಆಹಾರದ ಹಕ್ಕಿನ ಪ್ರಶ್ನೆ. ಹಾಗಾಗಿ ಇಡೀ ಪ್ರಾಣಿ ಬಲಿ ಕುರಿತ ವಿಷಯವನ್ನು ತಿಳಿಯುವಲ್ಲಿಯೇ ತೊಡಕಿದೆ. ಪ್ರಾಣಿಬಲಿಯನ್ನು ಮೌಡ್ಯ ಎಂದು ಕರೆಯಲಾಗುತ್ತದೆ. ಆದರೆ ದೇವರನ್ನು ನಿರಾಕರಿಸಲಾಗದ ಯಾವುದೇ ಆಚರಣೆ ಕೂಡ ಮೂಡನಂಬಿಕೆ ಅಥವಾ ಮೌಡ್ಯ. ಮಠಾಧೀಶರುಗಳ ತುಲಾಬಾರ, ಬ್ರಾಹ್ಮಣರ ವ್ರತಾಚರಣೆ, ಕ್ರೈಸ್ತರ ಯೇಸು ಪ್ರಾರ್ಥನೆ, ಮುಸ್ಲೀಮರ ನಮಾಜು, ಹಿಂದುಗಳ ದೈವಾರಾಧನೆ ಈ ಎಲ್ಲವೂ ಮೌಡ್ಯವಲ್ಲದೆ ಮತ್ತೇನು? ಮೌಡ್ಯದ ನಿಷೇಧವಾಗಬೇಕೆಂದು ನಾವು ಭಾವಿಸುವುದಾದರೆ ಇವೆಲ್ಲವುಗಳ ನಿಷೇಧಕ್ಕೂ ನಾವು ಒತ್ತಾಯಿಸುವ ಅಗತ್ಯವಿದೆ.

ಪ್ರಾಣಿಬಲಿ ಆಚರಣೆಯನ್ನು ಕೇವಲ ಮೌಡ್ಯ ಎಂದು ಮಾತ್ರ ವಿವರಿಸಲಾಗುತ್ತಿದೆ. ಆದರೆ ಪ್ರಾಣಿಬಲಿಗೆ ಕೇವಲ ಮೌಡ್ಯವಲ್ಲದ ಮತ್ತೊಂದು ಆಯಾಮವಿದೆ. ಅದು ತಳಸಮುದಾಯ ಪ್ರಾಣಿ ಬಲಿಯಿಂದಾಗಿ ಬದುಕಿಗೆ ಪಡೆಯಬಹುದಾದ ಚೈತನ್ಯದ ಸಂಗತಿ.  ಇಡೀ ಪ್ರಾಣಿ ಬಲಿ ಆಚರಣೆಯನ್ನು ತುಂಬಾ ಸೂಕ್ಷ್ಮವಾಗಿ ಅವಲೋಕಿಸಿದಾಗ ಮಾತ್ರ ಇದು ಕಾಣುತ್ತದೆ. ಸಾಮಾನ್ಯವಾಗಿ ಹಳ್ಳಿಗಳ ಜಾತಿ  ಸಮೀಕರಣದ ರಚನೆಯ ಒಳಗೇ ಪ್ರಾಣಿಬಲಿಗೆ ಒಂದು ವಿಚಿತ್ರ ರೀತಿಯ ಸಂಬಂಧವಿದೆ. ಇಂತಹ ಸಮೀಕರಣದ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳದ ಯಾರಿಗಾದರೂ, ಇದು ಅನಾಗರಿಕವಾದುದು ಎಂದು ಅನ್ನಿಸದೇ ಇರದು. ಪ್ರಾಣಿಬಲಿಗೂ ಮುನ್ನ ಮೊಚ್ಚು, ಕಂದೀಲು ಹಿಡಿದು ಕುಣಿಯುವಿಕೆ ಇರುತ್ತದೆ, ಈ ಕುಣಿತದಲ್ಲಿ ತಳಸಮುದಾಯಗಳು ರೋಷಾವೇಷ ತಂದುಕೊಂಡು ಕುಣಿಯುತ್ತಾರೆ. ಆಗ ಅಕ್ಷರಶಃ ಮಾನಸಿಕವಾಗಿ ಅವರುಗಳು ಒಂದು ಬಗೆಯ ಬಿಡುಗಡೆ ಪಡೆಯುತ್ತಾರೆ ಅನ್ನಿಸುತ್ತದೆ.

ಪ್ರಾಣಿಬಲಿಗಳು ನಡೆಯುವುದು ಬಹುಪಾಲು ಹಳ್ಳಿಗಳಲ್ಲಿ. ಅಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಪ್ರಾಣಿ ಬಲಿ ಮಾಡುವುದು ದಲಿತರು, ಮತ್ತು ಕೆಳವರ್ಗದ, ಹಿಂದುಳಿದ ಜನರು. ಈ ಜನರು ಪ್ರಾಣಿಬಲಿ ಆಚರಣೆ ಮಾಡುತ್ತಾ ಬಂದಿರುವುದಕ್ಕೆ ದೊಡ್ಡ ಚರಿತ್ರೆ ಇದೆ. ಇಂತಹುದನ್ನು ಒಂದು ಯಕಶ್ಚಿತ್ ಕಾನೂನು ನಿಲ್ಲಿಸಿಬಿಡುವಷ್ಟು ಸರಳವೆ?  ಪ್ರಾಣಿಬಲಿಯನ್ನು ವಿರೋಧಿಸುವವರಲ್ಲಿ ಬಹುಪಾಲು ಜನ ಮೇಲ್ವರ್ಗದವರು. ಮುಖ್ಯವಾಗಿ ಇದರಲ್ಲಿ ಮಾಂಸಾಹಾರ ಸೇವಿಸದವರ ಸಂಖ್ಯೆ ಹೆಚ್ಚು. ಅದರಲ್ಲಿ ಕೆಲವರು ಸುಶಿಕ್ಷಿತರು. ಇವರುಗಳು ಪ್ರಾಣಿಬಲಿ ಎನ್ನುವುದು ಅನಾಗರಿಕ ವರ್ತನೆ, ಈ ವರ್ತನೆಯ ಕಾರಣಕ್ಕೆ  ಹಳ್ಳಿಗರನ್ನು ಅನಾಗರಿಕರೆಂದೂ ಸಮೀಕರಿಸಿ ಸುಖ ಪಡುವ ವರ್ಗದವರು ಇದ್ದಾರೆ. ಇಂಥವರು ಪ್ರಾಣಿಬಲಿಯನ್ನು ವಿರೋಧಿಸುವ ಕಾರಣಕ್ಕೆ ತಮ್ಮನ್ನು ತಾವು ನಾಗರಿಕರೆಂದು ಕರೆದುಕೊಂಡು ಖುಷಿಪಡುವ ಮನಸ್ಥಿತಿಯವರು.

ನಾವು ಸಾಮಾಜಿಕ ಬದಲಾವಣೆಯನ್ನು ನಗರಗಳ ಕಣ್ಣೋಟದಿಂದ ನೋಡುತ್ತಿರುತ್ತೇವೆ. ಆದರೆ ಹಳ್ಳಿಗಳ ಕಣ್ಣೋಟದಿಂದ ಸಾಮಾಜಿಕ ಬದಲಾವಣೆಯನ್ನು, ಜಾತಿ ಪದ್ದತಿಯನ್ನು ನೋಡಲು ಸಾದ್ಯವಾದರೆ ಪ್ರಾಣಿಬಲಿ ಆಚರಣೆಯ ಮತ್ತೊಂದು ಮುಖ ಹೊಳೆಯುತ್ತದೆ. ಈಗಲೂ ಲಕ್ಷಾಂತರ ಹಳ್ಳಿಗಳ ದಲಿತರು, ಕೆಳಜಾತಿಗಳು ಮೇಲ್ವರ್ಗದಿಂದ ಶೋಷಣೆಗೆ ಒಳಗಾಗಿವೆ. ಈ ಶೋಷಣೆಯ ರೂಪಗಳು ಈಗ ಬದಲಾಗಿವೆ. ಹಾಗಾಗಿ ಈಗಲೂ ದಲಿತರು, ಕೆಳಜಾತಿಗಳು ಮೇಲ್ವರ್ಗದ ಮೇಲಿನ ಮನಸ್ಸಿನಲ್ಲಿ ಹುದುಗಿಟ್ಟುಕೊಂಡ ಸೇಡನ್ನು ಪ್ರಾಣಿಬಲಿ ಮೂಲಕ ತೀರಿಸಿಕೊಂಡು ಮಾನಸಿಕವಾಗಿ ಹಗುರಾಗುವ ಬಗ್ಗೆ ನಾವು ಆಲೋಚನೆ ಮಾಡಬೇಕಾಗಿದೆ. ಆ ನಂತರ ತಮ್ಮ ಕೀಳರಿಮೆಗಳನ್ನು ಕಳೆದುಕೊಂಡು ಬದುಕಲು ಹೊಸ ಚೈತನ್ಯವನ್ನು ಪಡೆಯುತ್ತಾರೆ. ಹಾಗಾಗಿ ಪ್ರಾಣಿಬಲಿ ಬಗ್ಗೆ ಚಕಾರವೆತ್ತುವ ನಾವುಗಳು ಮೇಲ್ಜಾತಿಗಳು ಕೆಳಜಾತಿಗಳ ಮೇಲೆ ಮಾಡುವ ಶೋಷಣೆಗಳ ಬಗ್ಗೆ ಮೊದಲು ಚಕಾರವೆತ್ತಬೇಕಾಗಿದೆ.

ಹಾಗಾಗಿ ನಾವು ಪ್ರಾಣಿಬಲಿ ನಿಷೇಧದ ಬಗ್ಗೆ ಮಾತನಾಡುವ ನಾವುಗಳು, ಈ ಬಗೆಯ ಮೇಲ್ವರ್ಗದ ಶೋಷಣೆಯ ಕಾರಣಕ್ಕೆ ಹಳ್ಳಿಗಳ ಮತ್ತು ಗ್ರಾಮೀಣ ಭಾಗದಲ್ಲಿ ಕೆಳವರ್ಗದ ಜಾತಿಗಳು, ದಲಿತರು ಪಡುವ ಶೋಷಣೆಯನ್ನು, ಆ ಶೋಷಣೆಯ ಕಾರಣಕ್ಕೆ ಅವರುಗಳು ಬೆಳೆಸಿಕೊಳ್ಳುವ ಕೀಳಿರಿಮೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿ ಸರಕಾರವಾಗಲಿ, ಸುಶಿಕ್ಷಿತ ವರ್ಗವಾಗಲಿ ಏನು ಮಾಡಿದೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ.  ಪ್ರಾಣಿಬಲಿ ಬಗ್ಗೆ ಪುಂಕಾನುಪುಂಕವಾಗಿ ಬರೆದು ಪ್ರಾಣಿದಯೆಯನ್ನು ತೋರುವ ಬರಹಗಾರರು ಇದನ್ನೇಕೆ ನೋಡಲು ಸಾದ್ಯವಾಗುತ್ತಿಲ್ಲ? ಸುಶಿಕ್ಷಿತರಾದವರಿಗೆ ಪ್ರಾಣಿ ಬಲಿ ಹಿಂಸೆಯಂತೆ ಕಾಣುತ್ತದೆನ್ನುವುದಾದರೆ, ಪ್ರಾಣಿಬಲಿ ಕೊಡುವ ಸಮುದಾಯಗಳಲ್ಲಿ ಅದನ್ನು ಹಿಂಸೆಯನ್ನಾಗಿ ಕಾಣುವ ಶಿಕ್ಷಣವನ್ನಾಗಲಿ, ಸಾಮಾಜಿಕ ಪ್ರಜ್ಞೆಯನ್ನಾಗಲಿ, ಆರ್ಥಿಕ ಬದಲಾವಣೆಯ ಪರ್ಯಾಯವನ್ನಾಗಲಿ ಎಷ್ಟರಮಟ್ಟಿಗೆ ಕೊಡಲಾಗಿದೆ ಎಂದು ಯೋಚಿಸುವ ಅಗತ್ಯವಿದೆ. ನಾನಿಲ್ಲಿ ಪ್ರಾಣಿಬಲಿಯನ್ನು ಬೆಂಬಲಿಸುತ್ತಿಲ್ಲ, ಬದಲಾಗಿ ಬಹುಸಂಸ್ಕೃತಿಯ ದೇಶದಲ್ಲಿ ಬದುಕುತ್ತಿರುವ ನಾವುಗಳು, ಅದನ್ನು ಕಾನೂನು ಗ್ರಹಿಸಿದಂತೆ ಸರಳವಾಗಿ ಗ್ರಹಿಸುವುದು ಕಷ್ಟ ಎಂದು ಮಾತ್ರ ಹೇಳಲು ಇಚ್ಚಿಸುತ್ತೇನೆ.
-ಡಾ. ಅರುಣ್ ಜೋಳದ ಕೂಡ್ಲಿಗಿ
ವಿಳಾಸ: ಯೋಜನಾ ಸಹಾಯಕ, ದರ್ಪಣ ಕಟ್ಟಡ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.

ಕೊನೆಮಾತು: ನಿನ್ನೆ ಬರೆದ ಹಾಗೆಯೇ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಸಮಯ ನ್ಯೂಸ್ ಚಾನಲ್‌ನ ಮುಖ್ಯಸ್ಥರಾಗಿ ರಾತ್ರಿ ೮ ಗಂಟೆಯ ಸುಮಾರಿಗೆ ಅಧಿಕಾರ ಸ್ವೀಕರಿಸಿದ್ದಾರೆ. ಸಂಪಾದಕೀಯ ಓದುಗರೆಲ್ಲರ ಪರವಾಗಿ ಜಿ.ಎನ್.ಮೋಹನ್‌ರಿಗೆ ಶುಭಾಶಯ ಹಾಗು ಅಭಿನಂದನೆಗಳು. ಚಾನಲ್ ಜನಮುಖಿಯಾಗಿರಲಿ ಎಂಬುದು ನಮ್ಮ ಏಕೈಕ ಅಪೇಕ್ಷೆ.

7 comments:

  1. ಸಂತೋಷಕ್ಕೂ, ಸಿಟ್ಟಿಗೂ ಬಲಿ ಬಿಟ್ಟು ಬೇರಾವುದನ್ನು ಅಪೇಕ್ಷಿಸದ ನಮ್ ದೇವಾನುದೇವತೆಗಳನ್ನ ಏನ್ ಮಾಡು ಅಂತೀರಿ, ಎಲ್ಲಿಗೆ ಕಳಿಸೋಣ......, ಮೊದಲು ಮನುಷ್ಯ - ಮನುಷ್ಯರ ಮೇಲೆ ನಡೆಸುತ್ತಿರುವ ದೌರ್ಜನ್ಯ - ಕ್ರೂರ ಹತ್ಯಾಕಾಂಡ, ನಿಷೇದದಂತ ಅನಿಷ್ಟ ಪದ್ದತಿಗಳಿಂದ, ಸುಳ್ಳು ಸುಳ್ಳಿನ ಅಂಧ ಕಂದಾಚಾರದ ಹೊರೆಯನ್ನ ಹೊರಿಸಿರುವ ವೈದಿಕ ಧರ್ಮದ ಮೌಡ್ಯದಿಂದ, ಶ್ರೇಣಿಕೃತ ಅನಾಗರಿಕ ಮೌಡ್ಯ ಆಚರಣೆಗಳಿಂದ ನಾವು ಮತ್ತು ನೀವೂ ವಿಮುಕ್ತವಾಗಬೇಕಿದೆ, ಅನಂತರ ಶತ ಶತಮಾನಗಳಿಂದ ರೂಡಿಯಾಗಿ ಬಂದಿರುವ ಆಹಾರ ಪದ್ದತಿಯಲ್ಲಿನ ಬದಲಾವಣೆ ಸಾದ್ಯ, ಇದು ಸಾಧ್ಯವಾಗದ ಹೊರತು ಅದು ಸಾದ್ಯವಿಲ್ಲ.

    ReplyDelete
  2. ಸ್ವಸ್ಥವಾಗಿ ಯೋಚಿಸುವವರೆಲ್ಲ ಸಾಮಾನ್ಯವಾಗಿ ಅನಾಗರಿಕ ಎಂದು ಸರಳವಾಗಿ ಹೇಳಬಹುದಾದ "ಮಡೆಸ್ನಾನ" ಎಂಬೊಂದು ಆಚರಣೆಯ ಬಗ್ಗೆ ಹಿಂದೊಮ್ಮೆ ಶ್ರೀಮಾನ್ ಕೆ.ವಿ.ಅಕ್ಷರ ಎಂಬ ಚಿಂತಕರು ಅಪರಿಮಿತ ಬೌದ್ಢಿಕ ಕಸರತ್ತು ಮಾಡಿ "ಪ್ರಜಾವಾಣಿ"ಯಲ್ಲಿ ಬರೆದ, "ಸಂಪಾದಕೀಯ ಕರ್ನಾಟಕ"ದಲ್ಲಿ ನೀವು ಪುನರ್ಮುದ್ರಿಸಿದ ಲೇಖನದ್ದೇ ಒಂದು ರೂಕ್ಷ ರೂಪ ಈ ಲೇಖನ.ಅಕ್ಷರ ಅವರ ಲೇಖನವನ್ನು ಒಂದು ಸರಿಯಾದ ವಿವರಣೆಯ ಚೌಕಟ್ಟಿನಲ್ಲಿಟ್ಟು ಆ ಕುರಿತ ಚರ್ಚೆಯನ್ನು ಆಹ್ವಾನಿಸಿದ ನೀವು ಪ್ರಸ್ತುತ ಪ್ರಾಣಿಬಲಿ ಕುರಿತ ಲೇಖನವನ್ನು ಪ್ರಾಣಿಬಲಿಯನ್ನು ಸುಲಭವಾಗಿ ನೋಡಲಾಗದು ಎಂಬ ಪೀಠಿಕೆಯೊಂದಿಗೆ ಪುನರ್ಮುದ್ರಿಸಿದ್ದೀರಿ. ದಲಿತರು ಕೆಳಜಾತಿಗಳು ತಮ್ಮ ಮನಸ್ಸಿನಲ್ಲಿ ಹುದುಗಿಸಿಟ್ಟುಕೊಂಡ ಮೇಲ್ವರ್ಗಗಳ ಮೇಲಿನ ಸೇಡನ್ನು ಪ್ರಾಣಿಬಲಿ ಮೂಲಕ ತೀರಿಸಿಕೊಂಡು ಹಗುರಾಗುತ್ತಾರೆ ಎಂದು ನಾವು ಯೋಚಿಸಬೇಕು ಎಂಬಂಥ ಈ ಲೇಖನದ ವಿಚಾರಗಳು ಸರಳೀಕರಣಕ್ಕೆ ಪರ್ಯಾಯವಾಗಿ ಸೂಚಿತವಾಗಬಹುದಾದ ವಿಚಾರಗಳಾಗುವದಾದರೆ ಬಹಳ ಗಂಭೀರ ಚರ್ಚೆಗಳನ್ನು ನಿರೀಕ್ಷಿಸಬಹುದೇ ಎಂಬ ಸಂದೇಹ ನನಗಿದೆ.

    ReplyDelete
  3. ಪ್ರಾಣಿ ಬಲಿ ಕೇವಲ ತಳಸಮುದಾಯದಲ್ಲಿ ಮಾತ್ರವಲ್ಲ, ಮೇಲ್ವರ್ಗದಲ್ಲೂ ಇತ್ತೆಂಬುದು ಇತಿಹಾಸದಿಂದ ತಿಳಿದುಬರುತ್ತದೆ. ಅಶ್ವಮೇಧ ಯಾಗ, ಹಿರಿದಾದ ಪೂಜಾ ಕಾರ್ಯಗಳಲ್ಲಿಯೂ ಪ್ರಾಣಿ ಬಲಿ ನಡೆಯುತ್ತಿತ್ತು. ಕೆಲವು ಧರ್ಮಗಳ, ಹಿರಿಯರ ಹೇಳಿಕೆಯಂತೆ ಪ್ರಾಣಿಬಲಿ ತಪ್ಪೆಂದು ಮೇಲ್ವರ್ಗದವರು ನಿಲ್ಲಿಸಿದರು, ಆದರೆ ಅದರ ಪಳೆಯುಳಿಕೆ ಎಂಬಂತೆ ತಳ ಸಮುದಾಯದಲ್ಲಿ ಮುಂದುವರೆದುಕೊಂಡುಬಂದಿದೆಯೇ ಹೊರತು, ಮೇಲ್ವರ್ಗದವರ ಮೇಲಿನ ಸಿಟ್ಟನ್ನು ಪ್ರಾಣಿ ಬಲಿಯ ಮೂಲಕ ನೋಡುವುದು ಸರಿಯೆನಿಸುವುದಿಲ್ಲ. ಹಾಗಿದ್ದರೆ ಮೇಲ್ವರ್ಗದವರನ್ನು ಬಲಿ ತೆಗೆದುಕೊಂಡೂ ಹಗುರಾಗಬಹುದಲ್ಲವೆ? ಪ್ರಾಣಿಗಳೇ ಯಾಕೆ ಬೇಕು? ಮತ್ತೊಂದು ಮುಖವೆಂದರೆ ಆಹಾರ ಪದ್ಧತಿ. ಯಾವುದನ್ನು ತಿನ್ನಲು ಬಳಸಲ್ಪಡುವುದೋ ಅದನ್ನು ಬಲಿ ಕೊಡಲಾಗುವುದು. ಹುಲಿ, ಚಿರತೆ, ಆನೆಗಳನ್ನು ಎಲ್ಲಿಯೂ ಬಲಿ ಕೊಡುವುದಿಲ್ಲ ಎಂಬುದನ್ನೂ ನಾವು ಗಮನಿಸಬೇಕು. ಅವುಗಳನ್ನು ಬೇಟೆಯಾಡಿ ಕೊಲ್ಲುವರೇ ಹೊರತು, ದೇವತೆಗಳಿಗೆ ಬಲಿಯಾಗಿ ಕೊಡುವುದಿಲ್ಲ. ಅಂದರೆ ಆಹಾರ ಪದ್ಧತಿಯೂ ಇದರಲ್ಲಿ ಸೇರಿಕೊಂಡಿದೆ. ಸಂಕೀರ್ಣವೂ, ಜಟಿಲವೂ ಆಗಿರುವ ಪ್ರಾಣಿ ಬಲಿ ಪದ್ಧತಿಯನ್ನು ಮೌಲ್ಯಗಳ ದೃಷ್ಟಿಯಿಂದ ನೋಡಬೇಕಾಗುವುದು ಸೂಕ್ತ ಎಂದು ನನ್ನ ಅನಿಸಿಕೆ.- ಅಪೂರ್ವ

    ReplyDelete
  4. ತಮ್ಮ ಲೇಖನದಲ್ಲಿ, ಆಚರಣೆಗಳು ತೀರ ಸರಳವಾಗಿ ಇಲ್ಲ ಅವುಗಳಿಗೆ ಒಂದು ಚಾರಿತ್ರಿಕ ಆಯಾಮವಿದೆ ಹಾಗಾಗಿ ಅವನ್ನು ಸರಳವಾಗಿ ಅರ್ಥಮಾಡಿಕೊಳ್ಳಲು ಸಾದ್ಯವಿಲ್ಲ ಎಂದು ಹೇಳುತ್ತೀರಿ ಹಾಗೂ ಆಚರಣೆಗಳಿಗೂ ಮತ್ತು ಜಾತಿಶೋಷಣೆಗೂ ಒಂದು ಸಂಬಂಧವಿದೆ ಎಂದು ವಾದಿಸುತ್ತೀರಿ ಅದಕ್ಕೆ ಈ ಕೆಳಗಿನ ನಿಮ್ಮ ಲೇಖನದ ಸಾಲುಗಳೇ ಸಾಕ್ಷಿ.
    ೧)ತಳಸಮುದಾಯಗಳು ಮೇಲ್ವರ್ಗ ಕಟ್ಟಿದ ಪಾವಿತ್ರ್ಯದ ನಾಶ ಮಾಡಲು
    ೨)ಈಗಲೂ ಲಕ್ಷಾಂತರ ಹಳ್ಳಿಗಳ ದಲಿತರು, ಕೆಳಜಾತಿಗಳು ಮೇಲ್ವರ್ಗದಿಂದ ಶೋಷಣೆಗೆ ಒಳಗಾಗಿವೆ. ಈ ಶೋಷಣೆಯ ರೂಪಗಳು ಈಗ ಬದಲಾಗಿವೆ. ಹಾಗಾಗಿ ಈಗಲೂ ದಲಿತರು, ಕೆಳಜಾತಿಗಳು ಮೇಲ್ವರ್ಗದ ಮೇಲಿನ ಮನಸ್ಸಿನಲ್ಲಿ ಹುದುಗಿಟ್ಟುಕೊಂಡ ಸೇಡನ್ನು ಪ್ರಾಣಿಬಲಿ ಮೂಲಕ ತೀರಿಸಿಕೊಂಡು ಮಾನಸಿಕವಾಗಿ ಹಗುರಾಗುವ ಬಗ್ಗೆ ನಾವು ಆಲೋಚನೆ ಮಾಡಬೇಕಾಗಿದೆ
    ೩)ಹಾಗಾಗಿ ಪ್ರಾಣಿಬಲಿ ಬಗ್ಗೆ ಚಕಾರವೆತ್ತುವ ನಾವುಗಳು ಮೇಲ್ಜಾತಿಗಳು ಕೆಳಜಾತಿಗಳ ಮೇಲೆ ಮಾಡುವ ಶೋಷಣೆಗಳ ಬಗ್ಗೆ ಮೊದಲು ಚಕಾರವೆತ್ತಬೇಕಾಗಿದೆ.

    ಅಂದರೆ ಆಚರಣೆಗಳಿಗೂ ಜಾತಿಶೋಷಣೆಗೂ ಒಂದು ಸಂಬಂಧ ಇದೆ ಎಂದಾಯಿತು. ಹಾಗೂ ಸಾಮಾನ್ಯವಾಗಿ ಹಳ್ಳಿಗಳ ಜಾತಿ ಸಮೀಕರಣದ ರಚನೆಯ ಒಳಗೇ ಪ್ರಾಣಿಬಲಿಗೆ ಒಂದು ವಿಚಿತ್ರ ರೀತಿಯ ಸಂಬಂಧವಿದೆ ಮತ್ತು ಇದು ಸಂಕೀರ್ಣವಾಗಿದೆ ಎಂದು ಹೇಳುತ್ತೀರಿ. ಹಾಗಾಗಿ "ಆಚರಣೆಗಳಿಗೂ ಜಾತಿಶೋಷಣೆಗೂ ಇರುವ ಸಂಬಂಧವನ್ನು" ಮತ್ತು "ಜಾತಿ ಸಮೀಕರಣಕ್ಕು ಪ್ರಾಣಿಬಲಿಗೂ ಇರುವ ಸಂಬಂಧವನ್ನು" ತಾವು ಸ್ವಲ್ಪ ಸರಿಯಾಗಿ ವಿವರಿಸಿದರೆ ಚರ್ಚೆಗೆ ಸಹಾಯಕ ವಾಗಬಹುದು.
    GOWDA

    ReplyDelete
  5. ಈ ಲೇಖನವು ಪ್ರಾಣಿ ಬಲಿಯ ಆಚರಣೆಯ ನಿಷೇಧದ ಕುರಿತಾಗಿ ಚರ್ಚೆ ಮಾಡುತ್ತಾ, ತಮ್ಮದೇ ಆದ ಕೆಲವು ವಿಚಾರವನ್ನು ಮಂಡಿಸುತ್ತದೆ. ನನಗೆ ಇಲ್ಲಿ ಮುಖ್ಯವಾದುದು ಒಂದು ಆಚರಣೆಯನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಎನ್ನುವುದಾಗಿದೆ. (ಅದು ಯಾವುದೇ ಆಗಿರಲಿ ಪ್ರಾಣಿ ಬಲಿ, ತುಲಾಬಾರ,ಮಡೆಸ್ನಾನ,) ಈ ಲೇಖನ ಇದೇ ಈ ಆಶಯವನ್ನು ಹೊಂದಿದ್ದರು, ಅಂತಹ ಆಚರಣೆಯಗಳ ಅರ್ಥ ಮಾಡಿಕೊಳ್ಳುವುದು, ಮತ್ತು ಅದರ ಬಗೆಗೆ ಗಂಭೀರ ಚರ್ಚೆಗೆ ತೊಡಗಿಕೊಳ್ಳುವ ಸಾದ್ಯತೆಯನ್ನು ತಪ್ಪಿಸುವಂತಿದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನಾನು ಗುರುತಿಸುಸಲೆತ್ನಿಸುತ್ತೇನೆ.
    ೧. ಲೇಖಕರು, ಪ್ರಾಣಿಬಲಿ ನಿಷೇಧದ ವಿಚಾರದಲ್ಲಿ ಸರಳೀಕರಣ ಬೇಡವೆಂದ್ರು, ಅವ್ರಿಗೂ ಸಹ ಅವರ ಪ್ರತಿ ಪಕ್ಷದವರಂತೆ ಆಚರಣೆಯು ಮೌಡ್ಯವೆಂದು ತಿರ್ಮಾನವಿರುವುದು ಸ್ಪಷ್ಟವಾಗುತ್ತದೆ. ಇಲ್ಲದಿದ್ದರೆ, ಅರುಣ್ ಮುಂದಿನ ಮಾತನ್ನು ಹೇಳುತ್ತಿರಲಿಲ್ಲ: ಪ್ರಾಣಿಬಲಿ ಆಚರಣೆ ನಿಷೇಧ ಆಗಬೇಕೆನ್ನುವುದು ಎಲ್ಲರ ಸದಾಶಯ. ಆದರೆ ಅದನ್ನು ಕಾನೂನಿನ ಮೂಲಕ ಹೊರಗಿನಿಂದ ನಿಯಂತ್ರಿಸಲು ಎಂದಿಗೂ ಸಾದ್ಯವಾಗದು. ಬದಲಾಗಿ ಮೊದಲು ಪ್ರಾಣಿಬಲಿ ಕುರಿತ ಚಾರಿತ್ರಿಕ ಹಿನ್ನೆಲೆಯನ್ನು ಅರಿತು, ಬುಡಮಟ್ಟದಿಂದ ಕೆಲ ಸಾಮಾಜಿಕ ಬದಲಾವಣೆಗಳಿಗೆ ಪೂರಕವಾದ ಯೋಜನೆಗಳನ್ನು ರೂಪಿಸಬೇಕು. ಹಾಗಾದಲ್ಲಿ ನಿಧಾನಕ್ಕೆ ಜನರ ಒಳಗೇ ಪ್ರಾಣಿಬಲಿ ನಿಷೇಧದ ಭಾವನೆ ಬರುವಂತೆ ಮಾಡುವ ಅಗತ್ಯವಿದೆ. ಅರುಣ್ ಅವರ ಈ ಅಭಿಪ್ರಾಯವನ್ನು ಅನುಸರಿಸಿ ಅವನ್ನು "ಸಂಕೀರ್ಣತೆ"ಯಿಂದ ಅರ್ಥಮಾಡಿಕೊಂಡರು ಆಚರಣೆಗಳ ಬಗೆಗೆ ನಾವು ಬರುವ ತೀರ್ಮಾನವು ಅವು ಮೌಡ್ಯವೆಂದೆ. ಆದ್ದರಿಂದ ಆಚರಣೆಗಳನ್ನು ಅರ್ಥ ಮಾಡಿಕೊಳ್ಳಬೇಕಾದರು ಹೀಗೆ ಹೊರಡಬಹುದೇ? ನನ್ನ ಪ್ರಕಾರ ಸಾಧ್ಯವಿಲದಲ್ಲ.
    ೨. ಅರುಣ್ ತಮ್ಮ ಲೇಖನನಕ್ಕೆ ರಹಮತ್ತರ ಮುಂದಿನ ಅಭಿಪ್ರಾಯವನ್ನು ಬೆಂಬಲವಾಗಿ ಬಳಸಿಕೊಳ್ಳುತ್ತಾರೆ:
    ಅ) ಪ್ರಾಣಿಬಲಿ ದಮನಿತ ಮುದಾಯಗಳು ಕಟ್ಟಿಕೊಂಡ ಪ್ರತಿಸಂಸ್ಕೃತಿ.
    ಆ) ಮೇಲ್ವರ್ಗ, ಮೇಲ್ಜಾತಿ ಸಮುದಾಯಗಳು ತಮ್ಮ ಆಚರಣೆ ಪರಂಪರೆಯನ್ನು ಶ್ರೇಷ್ಠ ಎಂದೂ, ಕೆಳಜಾತಿಗಳ ಆಚರಣೆ ಮತ್ತು ಬದುಕಿನ ರೀತಿಯನ್ನು ಕನಿಷ್ಠ ಎಂದೂ ಬಾವಿಸುತ್ತವೆ. ಹಾಗಾಗಿ ಪ್ರಾಣಿಬಲಿ ಅನಾಗರಿಕ ಆಚರಣೆಯಂತೆ ಕಾಣುತ್ತದೆ.
    ಇ) ತಳಸಮುದಾಯಗಳು ಮೇಲ್ವರ್ಗ ಕಟ್ಟಿದ ಪಾವಿತ್ರ್ಯದ ನಾಶ ಮಾಡಲು, ಕೀಳೆಂದು ನಿರಾಕರಿಸದ್ದನ್ನು ಈ ಸಮುದಾಯಗಳು ತಮ್ಮ ಸಂಸ್ಕೃತಿಯ ಭಾಗವನ್ನಾಗಿಸಿಕೊಂಡಿರುತ್ತವೆ. (ನೋಡಿ: ರಹಮತ್ ತರೀಕೆರೆ ಅವರ ಪ್ರತಿಸಂಸ್ಕೃತಿ ಪುಸ್ತಕ) ಈ ಯಾವ ಸಾಲಿಗದರು ಸಾಕ್ಷೀಯೇನು? ಎನ್ನುವುದು ಸ್ಪಷ್ಟವಿಲ್ಲ. ಮಾತ್ರವಲ್ಲದೆ ಭಾರತ ಭಿನ್ನ ಜಾತಿಯ ಇಲ್ಲವೆ ಗುಂಪಿನ ಜನರು ಇನ್ನೊಂದು ಜಾತಿ ಅಥವಾ ಗುಂಪಿನ ಆಚರಣೆಗಳನ್ನು ಪರಿಭಾವಿಸುವ ರೀತಿಯನ್ನು ಸರಳಿಕರಿಸಲಾಗಿದೆ ಎನಿಸುತ್ತದೆ. ರಹಮತ್ತರ ಇದೇ ಸರಳಿಕೃತ ಅಭಿಪ್ರಾಯವನ್ನು ಅರುಣ್ ಚಾರಿತ್ರಿಕ ಸಾಕ್ಷಿಯಾಗಿ ಉಲ್ಲೇಖಿಸುತ್ತಿದ್ದಾರೆಯೇ? ಹೌದು ಎಂದಾದರೆ, ಇದನ್ನು ಒಪ್ಪುವುದು ಕಷ್ಟಕರ. ಅಲ್ಲದೇ ಇದನ್ನು ಪ್ರಾಣಿಬಲಿಯ ಆಚರಣೆಯ ಉಗಮಕ್ಕೆ ಕಾರಣವೆಂದು ಹೇಳಿದರೆ, ಆಚರಣೆಗಳ ಉಗಮವನ್ನು ಚಾರಿತ್ರಿಕವಾಗಿ ಈ ಕಾರಣಕ್ಕೆ ಉಗಮವಾಯಿತು ಎಂದು ಹೇಳಲು ಸಾದ್ಯವೇ? ಎನ್ನುವ ಪ್ರಶ್ನೆಗಳು ಬರುತ್ತವೆ.
    ೩. ಆಚರಣೆಗಳನ್ನು ಆಚರಿಸುವ ಜನರ ಮಾನಸಿಕ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಆಚರಣೆಯನ್ನು ವಿವರಿಸಲು ಯತ್ನಿಸಿದ್ದಾರೆ. ಉದಾ; ದಲಿತರು, ಕೆಳಜಾತಿಗಳು ಮೇಲ್ವರ್ಗದ ಮೇಲಿನ ಮನಸ್ಸಿನಲ್ಲಿ ಹುದುಗಿಟ್ಟುಕೊಂಡ ಸೇಡನ್ನು ಪ್ರಾಣಿಬಲಿ ಮೂಲಕ ತೀರಿಸಿಕೊಂಡು ಮಾನಸಿಕವಾಗಿ ಹಗುರಾಗುವ ಬಗ್ಗೆ ನಾವು ಆಲೋಚನೆ ಮಾಡಬೇಕಾಗಿದೆ. ತುಲಾಬಾರ,ಮಡೆಸ್ನಾನ ಇಂತಹವು ಸಹ ಎನೇನೋ ಮಾನಸಿಕ ನೆಮ್ಮದಿಯನ್ನು ಕೊಡಬಹುದು ಎಂದು ಇನ್ನು ಕೆಲವರು ವಾದಿಸ ಬಹುದು, ಈ ನಿರೂಪಣೆಗಳು ಆಚರಣೆಯನ್ನು ನಮಗೆ ಬೇಕಾದಂತೆ ನಾವು ನಿರೂಪಿಸುವ ಕೆಲಸವಾಗಿ ಮಾತ್ರವಾಗಿ ತೋರುತ್ತದೆ. ಇತ್ತಿಚೆಗೆ ಭಾರತದಲ್ಲಿ ಜಾರಿಯಲ್ಲಿರುವ ಅನೇಕ ಆಚರಣೆಗಳನ್ನು ’ವಿಜ್ಜಾನ” ಮಾರ್ಗದಲ್ಲಿ ವಿವರಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಉದಾ: ಮನೆಯ ಬಾಗಿಲಿಗೆ ಅರಿಶಿಣ ಹಚ್ಚುವ ಆಚರಣೆಯು ಮನೆಗೆ ಇರುವೆ ಬರದಿರಲಿ ಎಂದು ವಾದಿಸುವುದು , ಎಲೆಯ ಸುತ್ತಾ ನೀರು ಹಾಕಿಕೊಳ್ಳುವುದು ಇರುವೆ ಎಲೆಗೆ ಬರದಿರಲಿ ಎಂದು, ಮನೆಯ ಮುಂದೆ ತುಳಸಿಗಿಡ ನೆಡುವುದು ಆಕ್ಸಿಜನ್ ಪಡೆಯಲು ಇತ್ಯಾದಿ. ಅರುಣ್ ಕೊಡುತ್ತಿರುವ ನಿರೂಪಣೆಯು ಎಂತಹದ್ದೇ ಇನ್ನೊಂದು ನಿರೂಪಣೆಯಾಗಿದೆ ಎನಿಸುತ್ತದೆ. ಇದಲ್ಲದಿದ್ದರೆ? ಅಚರಣೆಯನ್ನು ಮನಃಶಾಸ್ತ್ರೀಯವಾಗಿ ಅರ್ಥಮಾಡಿಕೊಳ್ಳಲು ಸಾದ್ಯವೆ? ಒಂದಕ್ಕಿಂತ ಹೆಚ್ಚು ನಿರೂಪಣೆಗಳು ಒಂದು ಆಚಣೆರಣೆಯ ಪ್ರತಿಯಾಗಿ ನೀಡಲು ಸಾಧ್ಯವಾದರೆ (ಅದನ್ನು ಆಚರಿಸುವ ಜನರು ನೀಡಬಹುದು ಇಲ್ಲವೇ ವಿದ್ವಾಂಸರು ನೀಡಬಹುದು) ಇವುಗಳಲ್ಲಿ ಯಾವುದು ಸರಿ ಎಂದು ಹೇಗೆ ಕಂಡುಕೊಳ್ಳುವುದು ಎನ್ನುವ ಸಮಸ್ಯೆ ಬರುತ್ತದೆ, ಇವೆಲ್ಲವನ್ನು ಬಗೆಹರಿಸದೇ ಆಚರಣೆಗಳನ್ನು ಹೇಗೆ ಅರ್ಥ ಮಾಡಿಕೊಳ್ಳವುದು?

    ಇನ್ನು ಕೆಲವು ಅನುಮಾನಗಳಿವೆ. ಅವನ್ನು ಮುಂದೆ ಚರ್ಚೆಯಲ್ಲಿ ಎತ್ತುತ್ತೇನೆ?
    ಮಹೇಶ ಕುಮಾರ್ ಸಿ, ಎಸ್.

    ReplyDelete
  6. ಪ್ರಾಣಿಬಲಿ ಆಚರಣೆ ನಿಷೇಧ ಆಗಬೇಕೆನ್ನುವುದು ಎಲ್ಲರ ಸದಾಶಯ. .WHAT YOU MEAN ಎಲ್ಲರ ಸದಾಶಯ...WE STRONGLY OPPOSE YOUR OPINION...

    ReplyDelete
  7. ಆಹಾರಕ್ಕಾಗಿಯೇ ಇರಲಿ, ದೇವರ ಹೆಸರಿನಲ್ಲಿ ಆಹಾರಕ್ಕಾಗಿಯೇ ಇರಲಿ ಪ್ರಾಣಿಬಲಿ (ಈಗ ನಡೆಯುತ್ತಿರುವಂತೆ) ಅನಾಗರೀಕವೇ!!! ಪ್ರಾಣಿ ಮಾಂಸ ಅನಿವಾರ್ಯವಾದರೆ ಮಾತ್ರ ಅದನ್ನು ಆಹಾರದ ಹಕ್ಕು ಎಂದು ಕರೆಯಬಹುದೇನೋ. ಆದರೆ ವ್ಯವಸಾಯ,ಹೈನುಗಾರಿಕೆ ಕಲಿತ ಮಾನವನಿಗೆ ಪ್ರಾಣಿಮಾಂಸ ಅನಿವಾರ್ಯವೇನಲ್ಲ.ಬಾಯಿಚಪಲ.(ವ್ಯವಸಾಯ ವೃತ್ತಿ ಮುಂಚಿನ ಮಾನವರಿಗೆ ಪ್ರಾಣಿಮಾಂಸ ಅನಿವಾರ್ಯವಾಗಿತ್ತೇನೋ). ಪ್ರಾಣಿಮಾಂಸ ತಿನ್ನದೇ ನಾವೆಲ್ಲಾ(ಹಾಗೂ ನಮ್ಮಂತ ಲಕ್ಷಾಂತರ ಜನ)ಬದುಕುತ್ತಿಲ್ಲವೇ?
    ಆದರೆ ಪ್ರಾಣಿವಧೆ ತಪ್ಪಿಸಲು ಸಾದ್ಯವಿಲ್ಲವೆಂಬುದು ಅಪ್ರಿಯ ಸತ್ಯ. ದೇವರ ಮುಂದೆ ಕಡಿಯದ ಪ್ರಾಣಿಗಳು ಮುಂದೊಂದು ದಿನ ಮತ್ತೆಲ್ಲೋ ಕಡಿಯಲ್ಪಟ್ಟು ಬಾಯಿಚಪಲ ತೀರಿಸಲು ತಟ್ಟೆ (ಆಮೇಲೆ ಹೊಟ್ಟೆ!!) ಸೇರುತ್ತವೆ!! ಪ್ರಾಣಿಗಳನ್ನು (ಅವು ಆಹಾರ ತಿನ್ನುತ್ತಾ ಸಂತೋಷದಿಂದಿರುವಾಗ) ಅವುಗಳಿಗೆ ಗೊತ್ತೇ ಆಗದಂತೆ ಆದುನಿಕ ಪದ್ದತಿಯಲ್ಲಿ (ಆ ಕೂಡಲೆ ಸಾಯುವಂತೆ ಅವಕ್ಕೆ ಗೊತ್ತಾಗದಂತೆ ಇಂಜಕ್ಷನ್ ಕೊಡುವುದರಿಂದ) ಕೊಲ್ಲುವುದು ಒಳ್ಳೆಯದು.

    ನಾವೆಷ್ಟೇ ನಮ್ಮನ್ನು ನಾವು ನಾಗರೀಕರೆಂದು ಬೆನ್ನು ತಟ್ಟಿಕೊಂಡರೂ ನಮ್ಮ ನಾಲಿಗೆ ಚಪಲಕ್ಕೆ ನಮ್ಮಿಂದ (ಕ್ರೂರವಾಗಿ) ಸಾಯುವ ಪ್ರಾಣಿಗಳ ಪಾಲಿಗೆ ನಾವೆಂದೆಂದೂ ಅನಾಗರೀಕರೆ!!!!

    ReplyDelete