Friday, August 5, 2011

ಕೋಳಿ-ಕುರಿ ಕಡಿಯುವುದು ಸಹಜ ಬದುಕಿನ ಭಾಗ: ಹರ್ಷ ಕುಗ್ವೆ


ಪ್ರಾಣಿಬಲಿ ಕುರಿತ ಚರ್ಚೆ ಮುಂದುವರೆದಿದೆ. ಈಗ ಅಖಾಡಕ್ಕೆ ಇಳಿದವರು ಸಂಡೆ ಇಂಡಿಯನ್ ಪತ್ರಿಕೆಯ ವರದಿಗಾರ, ಪ್ರತಿಭಾವಂತ ಲೇಖಕ ಹರ್ಷ ಕುಮಾರ್ ಕುಗ್ವೆ. ಪ್ರಾಣಿ ಬಲಿಯೂ ಸಹ ಗ್ರಾಮೀಣ ಪ್ರದೇಶದಲ್ಲಿ ಹೇಗೆ ಸಂಸ್ಕೃತಿಯ ಭಾಗವೇ ಆಗಿದೆ ಎಂಬುದನ್ನು ಅವರು ಇಲ್ಲಿ ವಿವರಿಸಿದ್ದಾರೆ. ಪ್ರಾಣಿ ಬಲಿ ವಿರೋಧಿ ಚಿಂತನೆಯಲ್ಲಿ ನಿರ್ದಿಷ್ಟ ರಾಜಕಾರಣ ಇರುವುದನ್ನು ಗುರುತಿಸಿದ್ದಾರೆ. ಚರ್ಚೆ ಮುಂದುವರೆಯುತ್ತದೆ. -ಸಂಪಾದಕೀಯ

ಮೊದಲನೆಯದಾಗಿ ಇಲ್ಲಿ ಯಾವುದನ್ನು ಅರುಣ್, ರೂಪಾ ಹಾಸನ ಅವರು ಪ್ರಾಣಿ ಬಲಿ ಎಂದು ಕರೆದಿದ್ದಾರೋ ಅದನ್ನು ನಾನು ಪ್ರಾಣಿ ಬಲಿ ಎಂದು ಕರೆಯುವುದಿಲ್ಲ. ಯಾಕೆಂದರೆ ಅದನ್ನು ಹಾಗೆ ಕರೆಯುವ ಹಿಂದೆ ಒಂದು ನಿರ್ದಿಷ್ಟ ರಾಜಕೀಯ ಹಾಗೂ ಮನಸ್ಥಿತಿ ಇದೆ ಎಂದು ನನ್ನ ಸ್ಪಷ್ಟ ಅಭಿಪ್ರಾಯ. ಹಾಗಾಗಿ ಈ ಆಚರಣೆಯನ್ನು ನಾನು ಕೋಳಿ ಕುರಿ ಕಡಿಯೋದು ಎಂದು ಕರೆಯುತ್ತೇನೆ. ನಮ್ಮ ಊರಿನಲ್ಲಿ ಹಾಗೂ ನಾನು ಕಂಡಿರುವ ಹಲವಾರು ಹಳ್ಳಿಗಳಲ್ಲಿ ಅದನ್ನು ಎಲ್ಲರೂ ಕರೆಯುವುದೇ ಹಾಗೆ. ದೇವರ ಹೆಸರಲ್ಲಿ ಕುರಿ ಕೋಳಿಗಳನ್ನು ಬಲಿಕೊಡುತ್ತಾರಾದರೂ ಯಾರೂ ಹಾಗೆ ಕರೆಯುವುದಿಲ್ಲ.

ನಮ್ಮ ಊರಲ್ಲಿ ಸುಮಾರು ಹಬ್ಬಗಳಲ್ಲಿ ಹಾಗೂ ಜಾತ್ರೆಗಳಲ್ಲಿ ಕೋಳಿಕುರಿ ಕಡಿಯುವ ಸಂಪ್ರದಾಯ ಇದೆ. ಪ್ರತಿ ವರ್ಷ ಚೌಡಿ ಹಬ್ಬ ಅಂತ ಆಚರಿಸುತ್ತೇವೆ. ಆ ದಿನ ತಪ್ಪದೇ ಊರಿನ ಪ್ರತಿ ಮನೆಯವರೂ (ನಮ್ಮೂರಲ್ಲಿರುವ ೫೦೦ ಮನೆಗಳಲ್ಲಿ ಒಂದೈವತ್ತು ಮನೆಗಳಲ್ಲಿ ಮಾತ್ರ ಮಾಂಸಾಹಾರ ಮಾಡುವುದಿಲ್ಲ. ಆ ಮನೆಗಳವರು ಹೊರತುಪಡಿಸಿ) ಊರಿನ ಹೊರವಲಯದಲ್ಲಿರುವ ಚೌಡಿಬನಕ್ಕೆ ಕೋಳಿಗಳನ್ನು ತರುತ್ತಾರೆ. ಇಡೀ ಊರಿನ ಜನರ ಚಂದಾ (ಅದಕ್ಕೆ ವರಾಡ ಅಂತಾರೆ) ಎತ್ತಿ ೨-೩ ಕುರಿಗಳನ್ನು ತಂದಿರುತ್ತಾರೆ. ಆ ಚೌಡಿ ಬನದಲ್ಲಿರುವ ಚೌಡಿಗೆ ದಾಸಯ್ಯ ಎನ್ನುವವರು ಪೂಜೆ ನಡೆಸಿದ ಕೂಡಲೇ ಒಬ್ಬ ನಿರ್ದಿಷ್ಟ ವ್ಯಕ್ತಿ ಅಲ್ಲಿದ್ದ ಕುರಿಗಳನ್ನು ಕಡಿಯುತ್ತಾರೆ. ಆ ಕೂಡಲೇ ಎಲ್ಲರೂ ತಮ್ಮ ತಮ್ಮ ಕೋಳಿಗಳನ್ನು ಕುಯ್ದು, ತೆಂಗಿನಕಾಯಿ ಕಾಯಿ ಒಡೆದುಕೊಂಡು ಮನೆಗೆ ಹೋಗುತ್ತಾರೆ.

ಇದು ನೂರಾರು ವರ್ಷಗಳಿಂದ ನಡೆದು ಬಂದ ಆಚರಣೆ. ಈಗ ಕೆಲವರ್ಷಗಳಿಂದ ಬಿಟ್ಟರೆ ಚಿಕ್ಕಂದಿನಿಂದಲೂ ಈ ಆಚರಣೆಯಲ್ಲಿ ನಾನು ಭಾಗಿಯಾಗುತ್ತಲೇ ಬಂದಿದ್ದೇನೆ. ಪೇಪರುಗಳಲ್ಲಿ, ಟಿವಿಗಳಲ್ಲಿ ಇಂತಹ ಆಚರಣೆಯ ಕುರಿತು ಭೀಕರವಾಗಿ ಚಿತ್ರಣವಾದಾಗಲೆಲ್ಲಾ ಈ ಕುರಿತು ನನ್ನೊಳಗೇ ಜಿಜ್ಞಾಸೆ ನಡೆದಿದೆ. ಒಂದರೆ ಕ್ಷಣ ಈ ಸಂಪ್ರದಾಯದ ಆಚರಣೆಯ ಸಂದರ್ಭದಲ್ಲಿ ನಮ್ಮ ಊರಿನ ಜನರ ಸಂಭ್ರಮ ಸಡಗರಗಳು ಮನಸ್ಸಿನಲ್ಲಿ ಬಂದರೆ ಇನ್ನೊಂದು ಕ್ಷಣ ಅದನ್ನು ಮಾಧ್ಯಮಗಳು ಭೀಕರವಾಗಿ, ಅಮಾನವೀಯವಾಗಿ ಚಿತ್ರಿಸುವ ಮನಸ್ಥಿತಿಯ ಕುರಿತು ಯೋಚಿಸುತ್ತೇನೆ.

ಆದರೆ ಸೋಕಾಲ್ಡ್ ನಾಗರಿಕ ಸಮಾಜದ ಕೆಲವೇ ಮಂದಿ ಈ ಆಚರಣೆಯನ್ನು ಪರಿಭಾವಿಸುವಂತೆ ಇದು ಅಮಾನವೀಯ ಎಂತಲೋ, ಭೀಭತ್ಸ ಎಂತಲೋ ನನಗೆ ಅನ್ನಿಸಿಯೇ ಇಲ್ಲ. ಅನ್ನಿಸುವುದೂ ಇಲ್ಲ. ಇದು ನಮ್ಮ ಊರಿನ ಜನರು ಆಚರಿಸುವ ಹಬ್ಬದ ಸಡಗರದ ಒಂದು ಭಾಗವಷ್ಟೇ ಆಗಿ ತೋರಿದೆ ನನಗೆ. ನನ್ನ ಮಾತುಗಳು ಅನೇಕರಿಗೆ ಕ್ರೂರವೆನ್ನಿಸಲೂ ಕಾರಣವಿಲ್ಲದಿಲ್ಲ. ಆದರೆ ರೂಪಾ ಹಾಸನ ಅವರ ವಾದದಲ್ಲಿ ನನಗೆ ಅರ್ಥವಾಗದಿರುವುದೇನೆಂದರೆ ಅವರು ಕುರಿ ಕೋಳಿ ಮೀನುಗಳನ್ನು ಅಂಗಡಿಗಳಲ್ಲಿ ಕಡಿಯುವದಕ್ಕೇನೂ ವಿರೋಧ ವ್ಯಕ್ತಪಡಿಸಿಲ್ಲ. ಅದು ಅವರಿಗೆ ಶುದ್ಧವಾದ ವಿಧಾನವಾಗಿ ತೋರುತ್ತದೆ. ಆದರೆ ಹೀಗೆ ಕುರಿಕೋಳಿ ಕಡಿಯುವುದು ಸಾಮುದಾಯಿಕ ನೆಲೆಯಲ್ಲಿ ಸಾಮೂಹಿಕವಾಗಿ ನಡೆದಾಗ ಮಾತ್ರ ಅದು ಮಾನವೀಯವಾಗಿ ತೋರುತ್ತದೆ. ಏನಿದರ ಅರ್ಥ? ಹೊಟೆಲ್‌ನಲ್ಲಿ ಮಾಂಸ ಎಷ್ಟಾದರೂ ತಿನ್ನಬಹುದು ಆದರೆ ಹಬ್ಬಹರಿದಿನಗಳಲ್ಲಿ ಸಂಭ್ರಮದಿಂದ ಜನರು ಮಾಂಸಾಹಾರವನ್ನು ತಿನ್ನುವುದು ವರ್ಜ್ಯ. ಇದೆಂತಹ ಇಬ್ಬಂದಿತನ?

ನಮ್ಮ ಸಂವಿಧಾನ ಹಾಗೂ ಅಂಬೇಡ್ಕರ್‌ರನ್ನು ರೂಪಾ ಹಾಸನ ಅವರು ತಮ್ಮ ವಾದಕ್ಕೆ ತಂದಿದ್ದಾರೆ. ನನಗೆ ತಿಳಿದಿರುವಂತೆ ಸಂವಿಧಾನದ ೫೧ಎ ಕಲಮು ಮೂಲಭೂತ ಕರ್ತವ್ಯಗಳ ಕುರಿತು ಮಾತನಾಡುತ್ತದೆಯೇ ಹೊರತು ಪ್ರಾಣಿಬಲಿಯ ಬಗ್ಗೆ ಅಲ್ಲ. ೫೨ಎ (ಎಫ್) ಪರಿಚ್ಛೇದ ದೇಶದ ಶ್ರೀಮಂತ ಸಂಸ್ಕೃತಿಯನ್ನು ಉಳಿಸುವ ಕುರಿತು ಮಾತನಾಡುತ್ತದೆ. ನನಗೆ ನಮ್ಮೂರಿನ ಚೌಡಿ ಹಬ್ಬವನ್ನು ಹೊರತುಪಡಿಸಿದ ದೇಶದ ಸಂಸ್ಕೃತಿ ಯಾವುದಾದರೂ ಇದೆಯೇ ಎಂದು ನೋಡಿದರೆ ಅದು ಪರಕೀಯ ಸಂಸ್ಕೃತಿಯಾಗಿ ಕಾಣುತ್ತದೆ. ಡಾ. ಬಿ.ಆರ್.ಅಂಬೇಡ್ಕರ್ ಅವರು ಇದನ್ನು ವಿರೋಧಿಸಿದ್ದ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಅವರು ನಂತರದಲ್ಲಿ ಆಯ್ಕೆ ಮಾಡಿಕೊಂಡ ಬೌದ್ಧ ಧರ್ಮದ ಮೂಲ ಪುರುಷ ಗೌತಮ ಬುದ್ಧ ಗೋವಧೆಯನ್ನು ನಿಷೇಧಿಸಲು ನಿರ್ದಿಷ್ಠ ಚಾರಿತ್ರಿಕ ಕಾರಣವಿತ್ತು. ಅಂದು ಗೋವಧೆಯು ವೈದಿಕ ಧರ್ಮದ ಪ್ರಮುಖ ಆಚರಣೆಯಾಗಿದ್ದರಿಂದ ಕೃಷಿಯಲ್ಲಿ ಬಂದಂತಹ ಬಿಕ್ಕಟ್ಟನ್ನು ಪರಿಹರಿಸಲು ಬೌದ್ಧಧರ್ಮ ಹಾಗೆ ನಿಯಮವನ್ನು ಜಾರಿಗೊಳಿಸಿತ್ತು. ಈ ಕಾರಣದಿಂದಲೇ ಅದು ಕೃಷಿಕ ಸಮುದಾಯಕ್ಕೆ ಹತ್ತಿರವಾಯಿತು. ತದನಂತರದಲ್ಲಿ ಅದರ ಜನಪ್ರಿಯತೆಯನ್ನು ತಪ್ಪಿಸಿ ತನ್ನ ಅಸ್ತಿತ್ವವನ್ನು ಕಾಪಾಡಲು ವೈದಿಕ ಧರ್ಮ ಸಂಪೂರ್ಣ ಮಾಂಸಾಹಾರವನ್ನು ಪ್ರತಿಪಾದಿಸಿತ್ತು. ಇದು ದಾಮೋದರ ಧರ್ಮಾನಂದ ಕೋಸಾಂಬಿ ಹಾಗೂ ಆರ್.ಎಸ್.ಶರ್ಮರಂತ ಪ್ರಮುಖ ಚರಿತ್ರೆಕಾರರ ಆಖ್ಯಾನ.

ಅರುಣ್ ಜೋಳದ ಕೂಡ್ಲಿಗಿಯವರು ಸಾಂಸ್ಕೃತಿಕ ಚರ್ಚೆಯ ಹಿನ್ನೆಲೆಯಲ್ಲಿ ಮಾತನಾಡಿದ್ದಾರಾದರೂ ಅವರ ಮನಸ್ಸಿನಲ್ಲಿಯೂ ಹೀಗೆ ಪ್ರಾಣಿಗಳನ್ನು ಕಡಿಯುವುದು ಸರಿಯಲ್ಲ ಎನ್ನುವ ಮನಸ್ಥಿತಿಯಿದೆ. ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ನನ್ನ ಅಭಿಪ್ರಾಯಗಳನ್ನು ಇನ್ನೊಂದು ರೀತಿ ವಿವರಿಸಲು ಇಚ್ಚಿಸುತ್ತೇನೆ. ಇದು ಬಹಳ ಜನರಿಗೆ ತಲೆಹರಟೆ ಎಂತಲೋ ವಿತಂಡವಾದ ಎಂತಲೋ ಕಾಣಬಹುದು. ತೀರಾ ಅಕಾಡೆಮಿಕ್ ಆಗಿ, ಉಲ್ಲೇಖಗಳೊಂದಿಗೆ ನಡೆಸುವ ಚರ್ಚೆಗಿಂತ ನಾನು ಈ ನಾಡಿನ ಬಹುಸಂಖ್ಯಾತರ ಕಾಮನ್‌ಸೆನ್ಸ್‌ನ ಭಾಗವಾಗಿರುವ ವಿಚಾರಗಳನ್ನಷ್ಟೇ ಮುಂದಿಡಲು ಬಯಸುತ್ತೇನೆ.

ಮಾಂಸಾಹಾರವನ್ನು ವಿರೋಧಿಸುವವರು ಹಿಂಸೆಯ ಬಗ್ಗೆ ಮಾತನಾಡುತ್ತಾರೆ. ಮಾನವೀಯತೆಯ ಬಗ್ಗೆ ಮಾತನಾಡುತ್ತಾರೆ. ಇಂದಿನ ವ್ಯವಸ್ಥೆಯಲ್ಲಿ ಯಾವುದು ಹಿಂಸೆ, ಯಾವುದು ಮಾನವೀಯತೆ ಎನ್ನುವುದೂ ಬಹಳ ಚರ್ಚಾಸ್ಪದ. ಇವುಗಳ ಬಗ್ಗೆ ಏಕಸೂತ್ರವಾಗಲೀ, ಏಕಾಭಿಪ್ರಾಯವಾಗಲೀ ಇಲ್ಲ. ಇವು ಒಂದು ಬಗೆಯಲ್ಲಿ ಸಾಪೇಕ್ಷ ಮೌಲ್ಯಗಳು.

ಆದರೆ ನನ್ನ ಪ್ರಕಾರ ಭಾರತದ ಮೆಜಾರಿಟಿ ಜನರು ಮೀನು, ಕೋಳಿ, ಕುರಿ, ಹಂದಿ, ಅಥವಾ ಇನ್ನಾವುದೇ ಪ್ರಾಣಿಗಳನ್ನು. (ನಮ್ಮ ದೇಶದ ಮುಸ್ಲಿಮರು, ಮಾದಿಗರು ದನ, ಎಮ್ಮೆ ತಿನ್ನುತ್ತಾರೆ ಹಾಗೂ ಪ್ರಪಂಚದ ಮೆಜಾರಿಟಿ ಜನರು ಜನರು ಬೀಫ್, ಪೋರ್ಕ್ ತಿನ್ನುತ್ತಾರೆ, ಈಶಾನ್ಯ ಭಾರತ ರಾಜ್ಯಗಳಲ್ಲಿ ನಾಯಿಯನ್ನೂ ತಿನ್ನುತ್ತಾರೆ. (ನಮ್ಮ ರಾಜ್ಯದಲ್ಲಿ ಬ್ರಾಹ್ಮಣರು, ಲಿಂಗಾಯತರು. ಕರಾವಳಿಯಲ್ಲಿ ಹಾಗೂ ಉತ್ತರದ ಕೆಲವು ರಾಜ್ಯಗಳಲ್ಲಿ ಬ್ರಾಹ್ಮಣರೂ ಮಾಂಸಹಾರಿಗಳೇ. ನಿಮಗೆ ತಿಳಿದಿರಬಹುದು. ನಮ್ಮ ಪರಿಸರದಲ್ಲಿ ಮಾಂಸಹಾರಿ ಸಸ್ಯಗಳೂ ಇವೆ. ನಮ್ಮೂರಿನಲ್ಲ್ಲಿ ಸಣ್ಣ ಪುಟ್ಟ ಇರುವೆಗಳನ್ನು ತಿನ್ನುವ ಸಸ್ಯಗಳನ್ನು ನಾನು ನೋಡಿದ್ದೇನೆ. ಹಿಂದೆ ದೊಡ್ಡ ಪ್ರಾಣಿಗಳನ್ನು ತಿನ್ನುವ ಸಸ್ಯಗಳೂ ಇದ್ದವೆಂದು ಹೇಳುತ್ತಾರೆ) ತಿನ್ನುವುದಕ್ಕೂ, ಇದೇ ಜನರು ಮಾಂಸಾಹಾರದೊಂದಿಗೆ ಸಸ್ಯಾಹಾರವನ್ನೂ ಹಾಗೂ ಕೆಲವೇ ಜನರು ಬರೀ ಸಸ್ಯಾಹಾರ ಸೇವಿಸುವುದಕ್ಕೂ ಜೈವಿಕವಾಗಿ ಯಾವುದೇ ವ್ಯತ್ಯಾಸವಿಲ್ಲ. ಯಾಕೆಂದರೆ ಜೀವದ ವಿಷಯಕ್ಕೆ ಬಂದರೆ ಪ್ರಾಣಿಗಳಿಗೂ ಸಸ್ಯಗಳಿಗೂ ವ್ಯತ್ಯಾಸವೇನಿಲ್ಲ. ಹಾಗೆ ನೋಡಿದರೆ ಪ್ರಾಣಿಗಳಿಗಿಂತಾ ಸಸ್ಯಗಳು ತೀರಾ ಪಾಪದವು. ಪ್ರಾಣಿಗಳಾದರೋ ತಮಗೆ ನೋವಾದರೆ ಅದನ್ನು ವ್ಯಕ್ತಪಡಿಸುತ್ತವೆ. ಆದರೆ ಸಸ್ಯಗಳು ಅದನ್ನೂ ಮಾಡಲು ಆಗುವುದಿಲ್ಲ. ಅವು ಮೂಕಜೀವಿಗಳು. ಪ್ರಾಣಿಗಳಾದರೋ ಒಂದೇ ಏಟಿಗೆ ಸಾಯುತ್ತವೆ. ಆದರೆ ಸಸ್ಯಗಳನ್ನು ಕಡಿದು, ಅವುಗಳ ಸಿಪ್ಪೆ (ಚರ್ಮ) ಸುಲಿದು, ಒಲೆಯ ಬೆಂಕಿಯ ಮೇಲಿಟ್ಟರೂ ಪೂರ್ತಿ ಜೀವ ಕಳೆದುಕೊಂಡಿರುವುದಿಲ್ಲ. ಅವುಗಳ ಜೀವಕೋಶಗಳೆಲ್ಲಾ ಪೂರ್ತಿ ಸತ್ತುಹೋದ ಮೇಲಷ್ಟೇ ಬೆಂದಿತು ಎನ್ನುತ್ತೇವೆ. ವಾದಿಸುವುದಾದರೆ ಪ್ರಾಣಿಗಳ ಮೇಲಿನ ಹಿಂಸೆಗಿಂತಾ ಹೆಚ್ಚಿನ ಹಿಂಸೆ ಇದು ಎನ್ನಬಹುದು. ಈ ನಿಟ್ಟಿನಲ್ಲಿ ನೋಡಿದಾಗ ನಾವು ಸಸ್ಯಗಳನ್ನು ಹೊಲಗಳಲ್ಲಿ ಕಟಾವು ಮಾಡುವುದೇ ಒಂದು ಸಾಮೂಹಿಕ ಬಲಿ. ಇದನ್ನು ಸಸ್ಯ ಬಲಿ ಎಂದು ಯಾರಾದರೂ ಕರೆದಿದ್ದಾರಾ? ಕರೆಯುವುದಿಲ್ಲ ಯಾಕೆ?

ಸಸ್ಯಾಹಾರ ಸಹಜವಾದದ್ದಾದರೆ ಮಾಂಸಾಹಾರ ಸಹಜ ಯಾಕಲ್ಲ? ಪರಿಸರದಲ್ಲಿ. ಕೇವಲ ಸಸ್ಯಾಹಾರಿಗಳೂ, ಕೇವಲ ಮಾಂಸಹಾರಿಗಳೂ ಇರುವಂತೆ ಬೆಕ್ಕು, ಹಾವು, ಮನುಷ್ಯನಂತಹ ಸರ್ವಾಹಾರಿ (ಆಮ್ನಿವೋರಸ್) ಜೀವಿಗಳಿವೆ. ಇದು ಸಹಜವಾದದ್ದು. ಒಂದು ಜೀವಿಯನ್ನು ಇನ್ನೊಂದು ಜೀವಿ ಅವಲಂಬಿಸಿಯೇ ಬದುಕುತ್ತದೆ. ಅದು ಪ್ರಾಣಿಯೋ ಸಸ್ಯವೋ ಎನ್ನುವುದು ಯಾಕೆ ಮುಖ್ಯವಾಗಬೇಕು? ಆದರೆ ಸಾಮಾನ್ಯವಾಗಿ ಜೀವಿಗಳು ಸಮಾನ ಪ್ರಜ್ಞೆಯ ಜೀವಿಗಳನ್ನು ತಿನ್ನುವುದಿಲ್ಲ. ಅಷ್ಟೆ. ಅದು ಕಾರ್ಯಸಾಧ್ಯವೂ ಅಲ್ಲ.

ಹಲವಾರು ಜನರು ನಾಗರಿಕತೆ, ಮಾನವೀಯತೆ ಮುಂತಾದ ನೆಪಗಳಲ್ಲಿ ಕುರಿಕೋಳಿ ಕಡಿಯುವುದನ್ನು ವಿರೋಧಿಸುತ್ತಾರೆ. ಮನುಷ್ಯನ ಸಹಜ ಆಹಾರವಾದ ಕುರಿಕೋಳಿಗಳ ಬಗ್ಗೆ ಕಾಳಜಿ ತೋರುವ ಇವರು ಸಹಮನುಷ್ಯರ ಬಗ್ಗೆ ಯಾಕೆ ಕಾಳಜಿ ತೋರುವುದಿಲ್ಲ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಇತ್ತೀಚೆಗೆ ಕೊಪ್ಪಳದ ಬಳಿ ಕರಡಿ ಆಡಿಸುವವವರ ಕಸುಬನ್ನು ಪ್ರಾಣಿ ದಯಾಸಂಘ ಹಾಗೂ ಸರ್ಕಾರ ಸೇರಿ ಬಲವಂತವಾಗಿ ಬಿಡಿಸಿ ಕರಡಿ ಆಡಿಸುವ ಸಮುದಾಯವನ್ನೂ, ಅವರಿಲ್ಲದೇ ಬದುಕಲು ಕಷ್ಟಪಡುತ್ತಿರುವ ಕರಡಿಗಳನ್ನೂ ಬೇರ್ಪಡಿಸಿದ್ದು. ಇಂದು ಆ ಇಡೀ ಸಮುದಾಯದ ನೋವು ಈ ದಯಾಮಯಿಗಳಿಗೆ ಕಾಣಲೇ ಇಲ್ಲ.

ಸಾಮೂಹಿಕವಾಗಿ ಪ್ರಾಣಿಗಳನ್ನು ಕಡಿಯುವುದು ದೇವರ ಹೆಸರಲ್ಲಿಯೇ ನಡೆಯುತ್ತದೆಯಾದರೂ ಅದರಲ್ಲಿ ಮಾಂಸಹಾರದ ಬಹಿರಂಗ ಸಮರ್ಥನೆ ಇದೆ ಎಂತಲೇ ನನ್ನ ಭಾವನೆ. ನಗರಗಳಲ್ಲಿ ಪಕ್ಕದ ಮನೆಯ ಲಿಂಗಾಯತರಿಗೋ ಬ್ರಾಹ್ಮಣರಿಗೋ ಗೊತ್ತಾಗದಂತೆ ಮಾಂಸದ ಅಂಗಡಿಯಲ್ಲೇ ಎಲ್ಲಾ ಮಾಡಿಸಿಕೊಂಡು ಬಂದು ಒಲೆ ಮೇಲೆ ಬೇಯಿಸಬೇಕಾದ ಪರಿಸ್ಥಿತಿ ಹಳ್ಳಿಗಳಲ್ಲಿ ಇರುವುದಿಲ್ಲ. ಜನರು ಸಂತೋಷದಿಂದಲೇ ಹೋಗಿ ತಾವು ಅಪರೂಪಕ್ಕೆ ತಿನ್ನುವ ವಿಶೇಷ ಆಹಾರವನ್ನು ಸಾಮೂಹಿಕವಾಗಿ ತಯಾರು ಮಾಡುತ್ತಾರೆ. ಪಕ್ಕಾ ಸಸ್ಯಾಹಾರದ ಪ್ರತಿಪಾದಕರು ಮತ್ತು ಪ್ರಾಣಿ ಪ್ರೇಮವುಳ್ಳವರು ಹೀಗೆ ಮಾಡುವುದರಲ್ಲಿ ಜೀವವಿರೋಧಿತನವನ್ನು ಕಾಣಬಹುದೇನೋ. ಆದರೆ ನನ್ನ ಪ್ರಕಾರ ಯಾರು ಪ್ರಾಣಿಗಳನ್ನು ತಿನ್ನುತ್ತಾರೋ ಅವರೇ ಆ ಜೀವಗಳಿಗೆ ಕಾರಣವಾಗುವಂತವರು. ಉದಾಹರಣೆಗೆ, ನಮ್ಮ ಉರಿನಲ್ಲಿ ಒಂಭತ್ತು ವರ್ಷಕ್ಕೊಮ್ಮೆ ನಡೆಯುವ ಮಾರಿಜಾತ್ರೆಯ ದಿನ ಮನೆಗೊಂದರಂತೆ ಎಂದರೂ ಐನೂರು ಕುರಿಗಳನ್ನು ಕಡಿಯಲಾಗುತ್ತದೆ. ಹೀಗೆ ೫೦೦ ಕುರಿಗಳು ಒಂದೇ ದಿನ ಸಾಯುವುದನ್ನು ಕಲ್ಪಿಸಿಕೊಂಡ ಪ್ರಾಣಿಪ್ರಿಯರು ಶಾಂತಂ ಪಾಪಂ ಎಂದು ಹಿಂಸೆ ಪಟ್ಟುಕೊಳ್ಳಬಹುದು. ಆದರೆ ಒಂದೊಮ್ಮೆ ನಮ್ಮೂರಿನ ಜನರೆಲ್ಲರೂ ಸಸ್ಯಾಹಾರಿಗಳೇ ಆಗಿದ್ದಿದ್ದಲ್ಲಿ ಆ ಐನೂರು ಪ್ರಾಣಿಗಳೂ (ಆಡುಗಳು) ಈ ಭೂಮಿಯ ಮೇಲೆ ಜನ್ಮ ತಾಳಲು ಅವಕಾಶವೇ ಇರುತ್ತಿರಲಿಲ್ಲ. ಮಟನ್, ಚಿಕನ್ ತಿನ್ನಬಾರದು ಎಂದು ಹೇಳುವುದು ಕೋಳಿಗಳ, ಕುರಿಗಳ ಸಂತತಿಯನ್ನು ಭೂಮಿಯ ಮೇಲೆ ಉಳಿಸಲೇಬಾರದು ಎಂದು ಹೇಳಿದಂತೆ.

ಇನ್ನು ಪ್ರಾಣಿ ಪ್ರೀತಿಯ ಕುರಿತು ಮಾತನಾಡುವುದಾದರೆ ಹಳ್ಳಿಗಳಲ್ಲಿ ಜನರು ಕುರಿಕೋಳಿಗಳನ್ನು ಸಾಕುವಾಗ ಅವುಗಳನ್ನು ಮುಂದೆ ತಿನ್ನುವುದೇ ಆದರೂ ಅವುಗಳನ್ನು ಸಾಕಷ್ಟು ಪ್ರೀತಿ, ಜತನದಿಂದಲೇ ಸಾಕುತ್ತಾರೆ. ಕೋಳಿ ಮರಿಯೊಂದನ್ನು ಹದ್ದು ಕಚ್ಚಿಕೊಂಡು ಹೋದರೆ ಮುಂದೆ ತಿನ್ನಲು ಒಂದು ಕೋಳಿ ಕಡಿಮೆಯಾಯಿತಲ್ಲಾ ಎಂದು ಯಾರೂ ಯೋಚಿಸುವುದಿಲ್ಲ. ಬದಲಾಗಿ ಅದರ ಮೇಲಿನ ಕಾಳಜಿಯಿಂದ ಮರುಗುತ್ತಾರೆ. ಹಾಗೆಯೇ ಜಾತ್ರೆಗಾಗಿ ತಂದ ಕುರಿಯನ್ನು ಸಾಕುವಾಗ ಅದರೊಂದಿಗೆ ಒಂದು ಬಾಂಧವ್ಯವೂ ಇರುತ್ತದೆ. ಆದರೆ ಅವುಗಳನ್ನು ಸಾಕುವ ಉದ್ದೇಶವೇ ತಿನ್ನುವುದಕ್ಕಾಗಿ ಎಂಬುದೂ ಸರ್ವವಿಧಿತವಾಗಿರುತ್ತದಷ್ಟೆ. ಹದಿನೈದು ದಿನಗಳ ಹಿಂದೆ ನಮ್ಮ ಮನೆಯ ಎಮ್ಮೆ ಅನಿರೀಕ್ಷಿತವಾಗಿ ತೀರಿಕೊಂಡು ಬಿಟ್ಟಿತು. ಮನೆಯವರೆಲ್ಲರಿಗೂ ದುಃಖವಾಯಿತು. ಕಾರಣ ಕಳೆದ ನಾಲ್ಕಾರು ವರುಷಗಳಿಂದ ಅದರೊಂದಿಗಿನ ನಮ್ಮ ಒಡನಾಟ. ಅದರಿಂದ ನಾವು, ನಮ್ಮಿಂದ ಅದು ಎಂಬಂತಿತ್ತು. ಸರಿ. ಬೆಳಿಗ್ಗೆ ನಮ್ಮೂರಲ್ಲಿ ಗಫಾರರು ಎಂದು ಕರೆಯುವವರಿಗೆ ಹೇಳಿ ಕಳುಹಿಸಲಾಯಿತು. ಅವರು ಅದನ್ನು ಮಾಂಸಕ್ಕಾಗಿ ಎತ್ತಿಕೊಂಡು ಹೋದರು. ಇದು ಪ್ರತಿ ಊರಿನಲ್ಲಿ ಕಾಣುವ ದೃಶ್ಯ. ಇದು ರೈತಾಪಿ ಬದುಕಿನ ಸಹಜತೆಯಲ್ಲಿ ಸೇರಿರುತ್ತದೆ. ಪ್ರತಿವರ್ಷದ ದೀಪಾವಳಿಯಲ್ಲಿ ದನ ಹಸುಗಳಿಗೆ ನಾವು ಪಾದ ಪೂಜೆ ಪಾಡುತ್ತೇವೆ. ಅವು ಸತ್ತ ಮೇಲೆ ಅದನ್ನು ತಿನ್ನುವ ಜನರಿಗೇ ಒಪ್ಪಿಸುತ್ತೇವೆ. ತಿನ್ನುವವರು ಅಷ್ಟರ ಮಟ್ಟಿಗೆ ತಿನ್ನದವರನ್ನು ಸಂಕಟದಿಂದ ಪಾರು ಮಾಡುತ್ತಾರೆ.

ಹೀಗಾಗಿ ಮಾಂಸಾಹಾರ ಈ ಜಗತ್ತಿನಲ್ಲಿ ಸಹಜವಾದದ್ದು. ಹಾಗೆಯೇ ಸೊಕಾಲ್ಡ್ ಪ್ರಾಣಿಬಲಿಯ ಮೂಲಕ ಮಾಂಸಾಹಾರದ ಬಹಿರಂಗ ಸಮರ್ಥನೆಯೂ ಕೂಡಾ. ಇದನ್ನು ನಿಷೇಧಿಬೇಕಿಲ್ಲ. ಅದು ನಮ್ಮ ಸಂಸ್ಕೃತಿಯ ಒಂದು ಭಾಗವಷ್ಟೇ. ಅದು ಇತಿಹಾಸ ಕ್ರಮದಲ್ಲಿ ರಹಮತ್ ತರೀಕೆರೆಯವರು ಹೇಳಿದಂತೆ ಅದು ಪ್ರತಿಸಂಸ್ಕೃತಿಯೂ ಇರಬಹುದು. ಇನ್ನು ರೂಪಾ ಹಾಸನ್ ಅವರು ಉಲ್ಲೇಖಿಸಿರುವ ಪ್ರಾಣಿಬಲಿ ನಿಷೇಧ ಕಾಯ್ದೆಗಳನ್ನು ಮಾಡಿರುವವರ ಉದ್ದೇಶವೂ ಪ್ರಶ್ನಾರ್ಹವಾದದ್ದೇ. ಇತ್ತೀಚೆಗೆ ಜಾನುವಾರು ಹತ್ಯಾ ಕಾಯ್ದೆಯನ್ನು ಕರ್ನಾಟಕ ಸರ್ಕಾರವು ಸಂಘಪರಿವಾರದ ಕುಮ್ಮಕ್ಕಿನಿಂದ ಜಾರಿಗೊಳಿಸಿತು. ಹಾಗಂತ ಸಂಘಪರಿವಾರಕ್ಕೆ ಮಾನವಪ್ರೇಮ ಇದೆ ಎನ್ನಲು ಸಾಧ್ಯವೇ. ಪ್ರಾಣಿಗಳ ಬಗ್ಗೆ ಕೃತಕ ದಯೆ ತೋರುವ ಅನೇಕರು  ಆಂತರ್ಯದಲ್ಲಿ ಜಾತಿ ಲಿಂಗ ಅಸಮಾನತೆಯನ್ನು ಪ್ರತಿಪಾದಿಸುವವರೂ ಮನುಷ್ಯರನ್ನು ಧರ್ಮದ ಹೆಸರಲ್ಲಿ ಕೊಚ್ಚಿ ಕೊಲ್ಲುವುದನ್ನೂ, ಹಾಗೂ ಹೆಣ್ಣೊಂದರ ಭ್ರೂಣವನ್ನು ಸೀಳುವುದನ್ನು ಸಮರ್ಥಿಸುವವರೂ ಆಗಿತ್ತಾರಲ್ಲಾ.... ಇದ್ಯಾಕೆ?

ಪ್ರಾಣಿಹಿಂಸೆ, ಮಾನವೀಯತೆ, ದಯೆ ಇಂತಹವುಗಳ ಬಗ್ಗೆ ಚರ್ಚಿಸುವಾಗ ಈ ಪ್ರಶ್ನೆಗಳೂ ಮುಖ್ಯವಾಗುತ್ತವೆ. ಇವುಗಳನ್ನು ಬಿಟ್ಟು ಯೋಚಿಸಿದಾಗ ಕಿರಣ್ ಹೇಳಿದಂತೆ ನಾವು ನಮ್ಮತನವನ್ನೇ ಅಲ್ಲಗಳೆದುಕೊಳ್ಳಬೇಕಾಗುತ್ತದೆ.

40 comments:

  1. ಒಂದು ವೇಳೆ ನರಬಲಿ ಕೊಡುವ ಸಂಪ್ರದಾಯ ಇತ್ತು ಅನ್ನುವುದಾದರೆ ಅದನ್ನು ನೀವು ಸಮರ್ಥಿಸುತ್ತಿದ್ದಿರೆ???? ... ಸತಿಸಹಗಮನವೂ ಕೂಡಾ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿತ್ತು ಅನ್ನುವುದನ್ನು ಒಪ್ಪಿಕೊಂಡು ಆದನ್ನು ಮುಂದುವರಿಸಲು ಒಪ್ಪುತ್ತಿದ್ದಿರೆ?... ಅಹಿಂಸೆ ಯಾವ ಧರ್ಮಕ್ಕೂ ಸೇರಿದುದಲ್ಲ, ಅದು ಮಾನವಧರ್ಮ.. ಪ್ರಾಣಿ ಬಲಿಯ ನಿಷೇಧ ಸಂಘ ಪರಿವಾರದ ಕುಮ್ಮಕ್ಕು ಅನ್ನುವುದಾದರೆ ಪ್ರಾಣಿ ದಯಾಸಂಘಗಳೆಲ್ಲಾ ಸಂಘ ಪರಿವಾರಕ್ಕೆ ಸೇರಿದವುಗಳೇ? ತಾವು ಮಾಂಸಾಹಾರಿಗಳಾದಲ್ಲಿ ತಮ್ಮಿಷ್ಟದಂತೆ ತಿನ್ನಿ. ಅದನ್ನು ಯಾರೂ ತಡೆಯುವುದಿಲ್ಲ, ತಮ್ಮ ಬಾಯಿಚಪಲಕ್ಕೆ ಪ್ರಾಣಿಬಲಿ ನಮ್ಮ ಸಂಸ್ಕೃತಿ ಎಂದು ಹೇಳುವ ತಮ್ಮ ಅಬಿಪ್ರಾಯಕ್ಕೆ ನನ್ನ ವಿಷಾದವಿದೆ....

    ReplyDelete
  2. lekhana sogasagide...
    neevu helidante nammoorinallu prani bali mari jatreyalli nadeyutte..... nimma vaadakke nimma bembalavide....
    -nagaraj naik

    ReplyDelete
  3. ಸಮಾಜದ ಬಹುಸಂಖ್ಯಾತರ ಆಹಾರ ವಿಧಾನವನ್ನೂ, ಸತಿಸಹಗಮನ ದಂತಹ ಸಹಮಾನವ ವಿರೋಧಿ ಕೃತ್ಯವನ್ನೂ ಒಟ್ಟಿಗೇ ಇಟ್ಟು ನೋಡುವ ನಿಮ್ಮ ದೃಷ್ಟಿಕೋನದ ಬಗೆಗೂ ನನಗೆ ತೀವ್ರ ವಿಷಾದವಿದೆ. ಮಾಂಸಾಹಾರವೂ ಸಂಸ್ಕೃತಿಯ ಭಾಗವೇ ಹೇಗೆ ಎನ್ನುವುದನ್ನು ತೋರಿಸುತ್ತೇನೆ ಬೇಕಾದರೆ ನನ್ನೊಂದಿಗೆ ಬಲ್ಲಿ.

    ReplyDelete
  4. ಪ್ರಾಣಿಬಲಿ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರೆ ಅದರಲ್ಲಿ ಹುರುಳಿಲ್ಲ ಎಂದೇ ನಾನು, ನನ್ನಂಥವರು ದೂರ ಇರುತ್ತೇವೆ. ಹರ್ಷ ಹೇಳಿದ ಹಾಗೆ ಸಂಸ್ಕೃತಿಯ ಭಾಗವಾಗಿರುವ ಮಾಂಸಾಹಾರ ಈ ನೆಲದ ಸಂಸ್ಕೃತಿಯ ಅರಿವಿಲ್ಲದ ಹಾಗೂ ಅರಿವಿದ್ದೂ ಇಲ್ಲದಂತೆ ನಟಿಸುವ ಮಂದಿಯಿಂದ ದೂಷಣೆಗೆ ಒಳಗಾಗಿರುವುದು ಕಳೆದ ಐದು ಸಾವಿರ ವರ್ಷಗಳ ಗರ್ಭಗುಡು ಪ್ರಜ್ಞೆಯ ಭಾಗವೇ ಆಗಿದೆ. ಮಾಂಸಾಹಾರ ಹಿಂದೂ, ಇಂದೂ ಭಾರತದ ಬಹುಜನರ ಬದುಕಿನ ಭಾಗ. ಮಾಂಸಾಹಾರ ಮಾಡುವವರು ಅಪ್ಪಟ ಸಸ್ಯಾಹಾರಿ ಹಿಟ್ಲರ್ ನಂತೆ ಚೂರಿಯನ್ನು ಬಗಲಲ್ಲಿ ಇಟ್ಟುಕೊಂಡು ತಿರುಗುವುದಿಲ್ಲ. ಒಂದು ಕೋಳಿಯನ್ನೋ ಕುರಿ, ಮೇಕೆ, ಕೋಣ, ದನವನ್ನೋ ಕೋಯ್ದು ತಿನ್ನುವ ಜನರಿಗೆ ಆ ಪ್ರಾಣಿಗಳ ಕುರಿತ ಸಕಲ ಗೌರವ, ಅವುಗಳ ಸಂತಾನ ಮಾಹಿತಿ ಇಲ್ಲಿ ವಿರೋಧಿಸುವವರಿಗಿಂತ ಚೆನ್ನಾಗಿಯೇ ಇರುತ್ತದೆ. ಪ್ರಾಣಿಗಳನ್ನು ಮಾಂಸಕ್ಕಾಗಿ ಬಳಸುತ್ತಿದ್ದ ಮಾನವರು ಅವುಗಳನ್ನು ಕೃಷಿಗೆ ಬಳಸತೊಡಗಿದಂದಿನಿಂದ ಅವುಗಳನ್ನು ಸಾಕುವ, ತಿನ್ನುವ ಕುರಿತು ಹಾಗೂ ಅವುಗಳ ಸಂತತಿ ನಾಶವಾಗುವ ಕುರಿತು ಹೆಚ್ಚಿನ ಮಾಹಿತಿಯನ್ನು ಹೊಂದಿದ್ದಾರೆ. ಮಾಂಸಾಹಾರದ ವಿರೋಧಿಗಳು ಹೇಳುವಂತೆ ಮಾಂಸಾಹಾರದಿಂದ ಸಂತತಿ ನಶಿಸಿಹೋಗಿರುವ ಪ್ರಾಣಿಗಳ ಪಟ್ಟಿಯನ್ನು ಕೊಡಲು ಸಾಧ್ಯವೇ..? ನಾಶದ ಅಂಚಿನಲ್ಲಿರುವ ಹುಲಿ, ಸಿಂಹ, ಆನೆಗಳನ್ನು ಯಾರೂ ಬಲಿ ಕೊಡುವುದಿಲ್ಲವಲ್ಲ..

    ReplyDelete
  5. ಪ್ರಕಾಶ್ ಅವರೆ, ವಕೀಲರ ರೀತಿಯಲ್ಲಿ ಸಮರ್ಥವಾಗಿಯೇ ವಾದ ಮಂಡಿಸಿದ್ದೀರಿ. ಕಳ್ಳತನ,ಕೊಲೆ, ದರೋಡೆ, ಸುಳ್ಳು ಹೇಳುವುದು, ವಂಚನೆ ಇವೆಲ್ಲ ಸಾರ್ವಕಾಲಿಕ ಮೌಲ್ಯಗಳೇ. ಕಾಲ ಬದಲಾದಂತೆ ಇವುಗಳ ಮೌಲ್ಯ ಬದಲಾಗುವುದಿಲ್ಲ. ಒಳ್ಳೆಯದು, ಕೆಟ್ಟದ್ದು ಎಂಬುದರ ಬಗ್ಗೆ ಸೋಕಾಲ್ಡ್ ಬುದ್ಧಿಜೀವಿಗಳು ವಾದ ಮಂಡಿಸಿ ಇವೆರಡರ ಮಧ್ಯೆ ಎಳೆ ಹಿಡಿದು ವಿತಂಡವಾದ ಮಾಡುವರೇ ಹೊರತು, ಜನಸಾಮಾನ್ಯರಿಗೆ ಒಳ್ಳೆಯದು, ಕೆಟ್ಟದ್ದು ಇವೆರಡರ ಬಗ್ಗೆ ಸರಿಯಾದ ತಿಳುವಳಿಕೆಯಿದೆ. ಮೌಲ್ಯಗಳನ್ನು ಅರಿತವರು ಕೆಟ್ಟತನಗಳ ಬಗ್ಗೆ ಗ್ರಾಮಗಳಲ್ಲಿ ಯಾರೂ ಸಮರ್ಥಿಸಿಕೊಳ್ಳುವುದನ್ನು ನೋಡಿಲ್ಲ. ಕಳ್ಳತನ ಮಾಡಿದವನು, ಕೊಲೆ ಮಾಡಿದವನಿಗೂ ಒಂದು ಕಾರಣವಿದ್ದೇ ಇರುತ್ತದೆ ಎಂಬುದನ್ನು ಮರೆಯಬಾರದು. ಆದರೆ ಅದು ಕಾನೂನಿನ ದೃಷ್ಟಿಯಲ್ಲಿ ಅಪರಾಧವೇ. ಆದರೆ ಇಂದು ಚಲನಚಿತ್ರ ಮಾಧ್ಯಮಗಳಲ್ಲಿಯೂ ಕಳ್ಳ, ದುಷ್ಟ, ಕೊಲೆ ಮಾಡಿದವನು ಒಳ್ಳೆಯವನೆಂದೇ ಬಿಂಬಿಸುವುದರಿಂದ ಜನರಿಗೂ ಗೊಂದಲವುಂಟಾಗುತ್ತಿದೆ. ಹೀಗಾದಾಗ, ಅಥವಾ ಕೆಟ್ಟತನಗಳನ್ನೂ ಸಮರ್ಥಿಸಿಕೊಳ್ಳುವುದರಿಂದ ಅಂತಹವರೇ ಬಹುಸಂಖ್ಯಾತರಾದಾಗ ಅವೂ ಉತ್ತಮ ಮೌಲ್ಯಗಳೆಂದೇ ಪರಿಗಣಿಸುವ ಅಪಾಯವಿದೆ. ಲಂಚಗುಳಿತನ, ಭ್ರಷ್ಟಾಚಾರಗಳನ್ನು ಎಲ್ಲರೂ ಮನಸಾರೆ ಒಪ್ಪಿ ಅಂತಹವರನ್ನೇ ಆಯ್ಕೆ ಮಾಡಿ ಸಲಾಮು ಹೊಡೆಯುತ್ತಿದ್ದೀವಲ್ಲ ಹಾಗೆ. ಬ್ರಹ್ಮಾಂಡವಾದ ಭ್ರಷ್ಟತೆಯನ್ನು, ಭ್ರಷ್ಟರನ್ನೇ ಒಪ್ಪಿಕೊಂಡಿರುವ ನಮ್ಮ ಮನಸುಗಳು ಬಲಿ ಕೊಡುವುದನ್ನು ಸಮರ್ಥಿಸಿಕೊಳ್ಳಲಾರವೇ? ಪ್ರಕಾಶ್ ವಾದಕ್ಕೆ ಕೊನೆಯಿಲ್ಲ. ಸಸ್ಯಗಳನ್ನು ತಿನ್ನುವುದನ್ನು ಬಹಳ ಜಾಣತನದಿಂದ ಅದೂ ಬಲಿಯೆನಿಸಿಕೊಳ್ಳುವುದಿಲ್ಲವೇ? ಎಂದು ಮಂಡಿಸಿದ್ದೀರಿ. ಸಸ್ಯಗಳೂ ನೀರನ್ನು, ಮಣ್ಣಿನಲ್ಲಿರುವ ಜೀವಸತ್ವಗಳನ್ನು ಅರಗಿಸಿಕೊಳ್ಳುವವಲ್ಲ ನಿಮ್ಮ ವಾದದಂತೆ ಅದೂ ಬಲಿಯೆನಿಸುವುದೇ? ಭೂಮಿ ತನ್ನ ಒಡಲಿಗೆ ಸುರಿದದ್ದನ್ನೆಲ್ಲ ಕೊಳೆಯುವಂತೆ ಮಾಡಿ ಜೀರ್ಣಿಸಿಕೊಳ್ಳುವುದಲ್ಲ ಅದೂ ಬಲಿಯೇ? ಅದು ಪ್ರಕೃತಿಯ ಕ್ರಿಯೆ. ಮಾನವನ ಆಲೋಚನಾ ಶಕ್ತಿ ಬೆಳೆದಂತೆಲ್ಲ ಯಾವುದು ಹಿಂಸೆ ಯಾವುದು ಅಹಿಂಸೆ ಎಂಬ ಯೋಚನಾ ಸರಣಿಗನುಗುಣವಾಗಿ ಒಳ್ಳೆಯ, ಕೆಟ್ಟ ಎಂಬುದನ್ನು ರೂಪಿಸಿಕೊಂಡಿದ್ದೇವೆ. ಅವರವರ ಆಲೋಚನಾ ಮಟ್ಟಗಳು ಎಲ್ಲಿವೆ ಎಂಬುದನ್ನು ಅವರವರ ವಾದಗಳೇ ನಿರೂಪಿಸುತ್ತವೆ ಎನ್ನಬಹುದು.-ಅಪೂರ್ವ

    ReplyDelete
  6. mosarinalluu bahala suukshmaanu jeevigaliruttave. enu madodu annode nanage samasye, enadaruu parihaara suuchisutterea? nanu mosaru thinnodu bidalikke kashta . aadare mamsahara bekadare biduttene. PLEASE HELP ME.

    ReplyDelete
  7. " ಇದು (ಪ್ರಾಣಿಬಲಿ)ಅಮಾನವೀಯ ಎಂತಲೋ, ಭೀಭತ್ಸ ಎಂತಲೋ ನನಗೆ ಅನ್ನಿಸಿಯೇ ಇಲ್ಲ". -- ಹೌದು. ಅನ್ನಿಸುವುದಾದರೂ ಹೇಗೆ? ಊಟದ ತಟ್ಟೆಗೆ ಬಂದು ಬೀಳುವಾಗ!!! ತನ್ನ ಮುಂದಿರುವ ಕುರಿಯನ್ನೋ ಕೊಳಿಯನ್ನೋ ಕಡಿಯುವುದನ್ನ ಕಣ್ಣಾರೆ ನೋಡುತ್ತಾ-ತನಗೆ ಮುಂದೆ ಕಾದಿರುವ ಗತಿಯನ್ನು ತಿಳಿದುಕೊಂಡು-ಕೊಲ್ಲಲ್ಪಡುವ ಸರದಿಯಲ್ಲಿರುವ-ಕುರಿ ಅಥವಾ ಕೋಳಿಯ ಶರೀರದಲ್ಲಿ (ನಾವು)ಪರಕಾಯಪ್ರವೇಶಮಾಡಿ ಯೋಚಿಸಿದಾಗ????

    " ಯಾಕೆಂದರೆ ಜೀವದ ವಿಷಯಕ್ಕೆ ಬಂದರೆ ಪ್ರಾಣಿಗಳಿಗೂ ಸಸ್ಯಗಳಿಗೂ ವ್ಯತ್ಯಾಸವೇನಿಲ್ಲ" --- ಇಲ್ಲ.ಇಲ್ಲಾ. ಸಾಮಾನ್ಯಜ್ಞಾನದ ಸಂಪೂರ್ಣ ಕೊರತೆ. ಸಸ್ಯಗಳಿಗೆ ನರಮಂಡಲ ಇಲ್ಲ.

    ReplyDelete
  8. ಹರ್ಷ ಅವರು ಅರ್ಥಪೂರ್ಣವಾಗಿ ಚರ್ಚೆಯನ್ನು ಮುಂದುವರಿಸಿದ್ದಾರೆ. ಅವರ ಆಲೋಚನೆಯ ಜತೆಗಾರ ನಾನು. ಪ್ರಾಣಿಬಲಿ ಮಾಡುವುದು ಸರಿಯಲ್ಲ ಎನ್ನುವ ನಿಲುವು ನನ್ನ ಬರಹದಲ್ಲಿ ಇದೆ. ಅದನ್ನು ಒಪ್ಪುವೆ, ಆದರೆ ಮೊದಲು ಒಪ್ಪುವಂತೆ ಹೇಳುತ್ತಲೆ ನನ್ನ ಬರಹದ ಕೊನೆಗೆ ಅದನ್ನು ಪ್ರತಿಸಂಸ್ಕೃತಿ ಎಂದು ಒಪ್ಪಿಕೊಳ್ಳಬೇಕಾದ ಸಹಜತೆ ಕಡೆ ಗಮನಸೆಳೆಯಲು ಪ್ರಯತ್ನಿಸಿದ್ದೇನೆ. ಸಾರಾಸಗಟಾಗಿ ನಿರಾಕರಿಸಿ ಅದನ್ನು ಸಮರ್ಥಿಸುವ ಬದಲು, ಪ್ರಾಣಿಬಲಿ ನಿಷೇಧವಾಗಬೇಕು ಎನ್ನುತ್ತಲೇ ಅದನ್ನು ಅರ್ಥಮಾಡಿಕೊಳ್ಳಬೇಕಾದ ಸಂಕೀರ್ಣತೆಯ ಬಗ್ಗೆ ಗಮನಸೆಳೆಯಲು ಪ್ರಯತ್ನಿಸಿರುವೆ. ಈ ಬರಹವನ್ನು ಪ್ರಜಾವಾಣಿಯ ಸಂಗತ ಕಾಲಂಗೆ ಕಳಿಸಿದ್ದೆ, ಇಲ್ಲಿ ಪ್ರಕಟವಾಗಲಿ, ಈ ಕುರಿತ ತಿಳುವಳಿಕೆಯನ್ನು ಬೇರೆ ನೆಲೆಯಲ್ಲಿ ಆಲೋಚನೆ ಮಾಡುವಂತಾಗಲಿ, ಎನ್ನುವ ಕಾರಣಕ್ಕೆ ನಾನು ಮೊದಲು ಪ್ರಾಣಿಬಲಿ ನಿಷೇದವಾಗಬೇಕು ಎನ್ನುವ ಅರ್ಥದಲ್ಲಿ ಬರಹವನ್ನು ಆರಂಭಿಸಿದ್ದೆ. ಆದರೆ ಪ್ರಜಾವಾಣಿಯಲ್ಲಿ ಈ ಬರಹ ಪ್ರಕಟವಾಗಲಿಲ್ಲ, ಅದೇ ಬರಹವನ್ನು ಸಂಪಾದಕೀಯ ಕರ್ನಾಟಕಕ್ಕೆ ಕಳಿಸಿದೆ. ಹಾಗಾಗಿ ನನ್ನದು ಪ್ರಾಣಿ ಬಲಿ ನಿಷೇದವಾಗಬೇಕೆನ್ನುವ ನಿಲುವು ಅಲ್ಲ. ಹರ್ಷ ಅವರೆ, ನೀವು ಈ ಬರಹದಲ್ಲಿ ಹೇಳಿಕೊಂಡ ಅನುಭವ ನನ್ನದೂ ಕೂಡ. ಕಾರಣ ನಾನು ಕೂಡ ಕೋಳಿ ಕುರಿ ಹರಕೆಕೊಡುವ ಸಹಜ ಸಂಸ್ಕೃತಿಯ ಭಾಗವೆ. ಈ ಆಚರಣೆಯನ್ನು ಹೊರಗಿನಿಂದ ನೋಡುವವರಿಗೆ ಮಾತ್ರ ಬಲಿಯಾಗಿ ಕಾಣುತ್ತದೆ. ಕ್ರೌರ್ಯವಾಗಿ ಕಾಣುತ್ತದೆ. ರೂಪ ಹಾಸನ ಅವರು ಸಾಮಾಜಿಕ ಕಾರ್ಯಕರ್ತರಾಗಿ ನಾವು ಸಾಮಾಜಿಕ ಬದಲಾವಣೆಗೆ ದುಡಿಯುತ್ತಿದ್ದೇವೆ, ಅಂದುಕೊಳ್ಳುವುದರಿಂದ ಸಂಸ್ಕೃತಿಯ ಭಾಗವಾಗಿ ಪ್ರಾಣಿಬಲಿಯನ್ನು ಅರ್ಥಮಾಡಿಕೊಳ್ಳಲು ಸೋಲುತ್ತಿದ್ದಾರೆ.ಇದು ಅವರೊಬ್ಬರ ಸಮಸ್ಯೆ ಮಾತ್ರವಲ್ಲ, ಬಹುಪಾಲು ಎನ್.ಜಿ.ಒ ಕಾರ್ಯಕರ್ತರ ಗ್ರಹಿಕೆಯ ತೊಡಕಿದು. ಇನ್ನು ಅಂತರ್ಜಾಲದಲ್ಲಿ ಒಡನಾಡುವ ಬಹುಪಾಲು ಜನರು ಮೇಲ್ವರ್ಗದ ಜನರು, ಸುಶಿಕ್ಷಿತ ನಾಗರೀಕರು ಎಂದುಕೊಂಡವರು. ಹಾಗಾಗಿರುವುದರಿಂದ, ನನ್ನ ಮತ್ತು ನಿಮ್ಮ ಅಭಿಪ್ರಾಯ ಸಹಜ ಅನ್ನಿಸದಿರುವುದೂ ಕೂಡ ಸಹಜ. ಇದರ ಮದ್ಯೆಯೆ ನಮ್ಮ ತಿಳುವಳಿಕೆಯನ್ನು ಹಂಚಿಕೊಳ್ಳುವ ಅಗತ್ಯವಿದೆ.
    -ಅರುಣ್ ಜೋಳದಕೂಡ್ಲಿಗಿ.

    ReplyDelete
  9. ನಿಮ್ಮ ವಾದ ವಿತ೦ಡವಲ್ಲ, ವಿಕೃತ. ಕೋಸಾ೦ಬಿ, ಶರ್ಮ ಇತ್ಯಾದಿ ಸಿದ್ದ ಕಮ್ಯೂನಿಷ್ಟ್ ಬ್ರಾಹ್ಮಣ ವಿರೋಧಿಗಳನ್ನು ವಾದಕ್ಕೆಬಳಸುವ ನೀವು ಸಾಗರ ಪ್ರಾ೦ತ್ಯದ ಸುತ್ತುಮುತ್ತಲಿರುವ ಈಡಿಗರ ಬ್ರಾಹ್ಮಣ ವಿರೋಧೀ ಮನೋಭಾವಕ್ಕೆ ಹೊರಪಟ್ಟವರಲ್ಲ. ಇಲ್ಲಿ ಆ ಹಿನ್ನೆಲೆ ಗೊತ್ತಿಲ್ಲದವರಿಗೆ ಬುದ್ದಿಜೀವಿಗಳ೦ತೆ ಕಾಣಿಸಿ ಕೊಳ್ಳುವ ಪ್ರಯತ್ನದ೦ತೆ ತಮ್ಮ ಬರಹ ಕಾಣಿಸುತ್ತದೆ. ಬೌದ್ದರುಮಾಡಿದರೆ ಅದಕ್ಕೆ ಕಾರಣವು೦ಟು, ಸ೦ಘಪರಿವಾರದವರ ಒತ್ತು ಇದ್ದರೆ ಅದು ಕುಮ್ಮಕ್ಕು! ಇದು ಇಬ್ಬ೦ದಿತನವಲ್ಲವೋ ? "ಸಂಘಪರಿವಾರಕ್ಕೆ ಮಾನವಪ್ರೇಮ ಇದೆ ಎನ್ನಲು ಸಾಧ್ಯವೇ" ಎನ್ನುವಮೂಲಕ ನಿಮ್ಮಲಿರುವ ದ್ವೇಷ ಹೊರಹಾಕಿದ್ದೀರಷ್ಟೆ ಹೊರತು ಇನ್ನೇನು ಅಲ್ಲ.

    ಮಾ೦ಸತಿನ್ನುವವರು ಎಲ್ಲಿ ಕೊಯ್ದರೆ ಏನು ? ಅದನ್ನು ಒ೦ದು ಹ೦ತಕ್ಕೆ ಒಪ್ಪಬಹುದು. ಆದರೆ ಸ೦ಭ೦ಧವಿಲ್ಲದ್ದನ್ನು ಬಡಬಡಿಸಿರುವ ನಿಮ್ಮ ಗೋಜಲು ಮನಸ್ಥಿತಿಯನ್ನು ನೀವೇ ಬಗೆಹರಿಸಿ ಕೊಳ್ಳಬೇಕೇ ಹೊರತು ಬೇರಾರಿಗು ಸರಿಪಡಿಸಲಾಗುವ೦ತೆ ಕಾಣುವುದಿಲ್ಲ.

    ReplyDelete
  10. "ಯಾಕೆಂದರೆ ಜೀವದ ವಿಷಯಕ್ಕೆ ಬಂದರೆ ಪ್ರಾಣಿಗಳಿಗೂ ಸಸ್ಯಗಳಿಗೂ ವ್ಯತ್ಯಾಸವೇನಿಲ್ಲ".
    ಹಿಂಸೆ ಮತ್ತು ನೋವಿನ ಅನುಭೂತಿಯನ್ನು ಗಣನೆಗೆ ತೆಗೆದುಕೊಂಡರೆ ಮೇಲಿನ ಹೇಳಿಕೆ ಪೂರ್ಣ ತಪ್ಪಾಗುತ್ತದೆ. ಸಸ್ಯಗಳಲ್ಲಿ ನರವ್ಯೂಹ (nervous system ) ಇರುವುದಿಲ್ಲವಾದ್ದರಿಂದ ಅವಕ್ಕೆ ನಿಜವಾಗಿಯೂ ನೋವಾಗುವುದಿಲ್ಲ! ಇದಕ್ಕೆ ಪ್ರತಿವಾದವಾಗಿ ಹೀಗೆ ಪ್ರಶ್ನಿಸಬಹುದು: "ಒಂದು ಪ್ರಾಣಿಗೆ ನಿದ್ರೆ ಮಾತ್ರೆ ತಿನ್ನಿಸಿ ನಂತರ ಕಡಿದರೆ ಅಹಿಂಸಾತ್ಮಕವೆ ಆಗುತ್ತದಲ್ಲವೇ" ಎಂದು. ಉತ್ತರವಿಲ್ಲ. ಜೀವಶಾಸ್ತ್ರೀಯ ದೃಷ್ಟಿಯಿಂದ ನೋಡಿದರೆ ಯಾವುದೂ ತಪ್ಪಲ್ಲ, ನರಬಲಿಯೂ ಸೇರಿಸಿ! ಏಕೆಂದರೆ ದೊಡ್ಡ ಮೀನು ಚಿಕ್ಕದನ್ನು ತಿನ್ನುತ್ತದಲ್ಲವೇ?

    ReplyDelete
  11. ಪ್ರಾಣಿಗಳ ಹತ್ಯೆ ಮಾಡುವಾಗ ನಡೆಯುವ ಹಿಂಸೆ ಹಾಗೂ ಸಸ್ಯ ಬೆಳೆಗಳ ಕೊಯ್ಲನ್ನು ಒಂದೇ ರೀತಿ ನೋಡಲು ಸಾಧ್ಯವಿಲ್ಲ. ಪ್ರಾಣಿಗಳಿಗೆ ದೇಹರಚನೆಯಲ್ಲಿ ನರವ್ಯೂಹ ಹಾಗೂ ಮೆದುಳು ಇರುವುದರಿಂದ ಅವುಗಳಿಗೆ ಯಾವುದೇ ಗಾಯವಾದರೂ ನೋವಾಗುತ್ತದೆ. ಆದರೆ ಸಸ್ಯಗಳಿಗೆ ನರವ್ಯೂಹದ ಹಾಗೂ ಮೆದುಳಿನ ವ್ಯವಸ್ಥೆಯೇ ಇಲ್ಲದಿರುವುದರಿಂದ ಎಷ್ಟೇ ಗಾಯವಾದರೂ ನೋವಿನ ಅರಿವು ಆಗುವುದಿಲ್ಲ. ಒಂದು ಮರದ ಎಲ್ಲ ರೆಂಬೆಗಳನ್ನು ಕಡಿದರೂ ಅದು ಪುನ: ಚಿಗುರಿ ಬೆಳೆಯುತ್ತದೆ, ಅದಕ್ಕೆ ನೋವಿನ ಅನುಭವ ಆಗುವ ಸಾಧ್ಯತೆಯೇ ಇಲ್ಲ. ಆದರೆ ಪ್ರಾಣಿಯೊಂದರ ಅಂಗಾಂಗಳನ್ನು ಕಡಿದರೆ ಅದು ಬದುಕುವ ಸಾಧ್ಯತೆಯೇ ಇಲ್ಲ. ಹೀಗಾಗಿ ಸಸ್ಯಗಳಿಗೆ ಹಿಂಸೆಯ ಅನುಭವ ಆಗಲು ಸಾಧ್ಯವಿಲ್ಲ ಹಾಗೂ ಸಸ್ಯ ಬೆಳೆಗಳ ಕೊಯ್ಲನ್ನು ಹಿಂಸೆ ಎನ್ನಲು ಸಾಧ್ಯವಿಲ್ಲ.-ಆನಂದ ಪ್ರಸಾದ್

    ReplyDelete
  12. ಸತಿಸಹಗಮನವೆಂಬುದು ಸ್ವ ಇಚ್ಛೆಇಂದ ನಡೆಯುವಂತಹುದು..ಇದರಿಂದ ಬೇರೆ ಯಾರಿಗೂ ತೊಂದರೆ ಇಲ್ಲ. ಆದರೂ ಅದನ್ನು ಸರಕಾರ ನಿಷೇಧಿಸಿದೆ. ಪ್ರಾಣಿ ಬಲಿ ಎಂಬುದು ಸಹಸ್ರಾರು ಪ್ರಾಣಿಗಳ ಜೀವಕ್ಕೆ ಸಂಬಂಧಿಸಿದುದು. ಮಾನವನಿಗೆ ಹೇಹೆ ಜೀವ ನೀಡಲು ಸಾಧ್ಯವಿಲ್ಲವೋ ಹಾಗೆ ಜೀವ ತೆಗೆಯುವ ಹಕ್ಕೂ ಕೂಡಾ ಇಲ್ಲ..
    ಹೆಣದ ಭಾಗಗಳನ್ನು ತಿನ್ನುವವರು ಪಿಶಾಚಿಗಳು..

    ReplyDelete
  13. ಇಲ್ಲಿ ಯಾವುದನ್ನು ಅರುಣ್, ರೂಪಾ ಹಾಸನ ಅವರು ಪ್ರಾಣಿ ಬಲಿ ಎಂದು ಕರೆದಿದ್ದಾರೋ ಅದನ್ನು ನಾನು ಪ್ರಾಣಿ ಬಲಿ ಎಂದು ಕರೆಯುವುದಿಲ್ಲ. ಯಾಕೆಂದರೆ ಅದನ್ನು ಹಾಗೆ ಕರೆಯುವ ಹಿಂದೆ ಒಂದು ನಿರ್ದಿಷ್ಟ ರಾಜಕೀಯ ಹಾಗೂ ಮನಸ್ಥಿತಿ ಇದೆ ಎಂದು ನನ್ನ ಸ್ಪಷ್ಟ ಅಭಿಪ್ರಾಯ.

    @ ಹರ್ಷ ನಿಮ್ಮ ಮೇಲಿನ ಅಭಿಪ್ರಾಯ ನಿಜವಾಗಿಯೂ ಒಪ್ಪುವಂಥದ್ದೇ ನಮ್ಮಲ್ಲಿ ಇ ಮನಸ್ಥಿತಿ ಬಹಳಷ್ಟು ಮಂದಿಗೆ ಇದೆ. ನಮ್ಮ ಆಚರಣೆಗಳ ಕುರಿತ ವಿವರಣೆಗಳು ನಮಗೆ ಪಶ್ಚಥ್ಯರಿಂದಲೇ ಬಂದಿವೆ ಎಂಬುದು ನಿಜವಾದರೂ ಅ ವಿವರಣೆಗಳನ್ನೇ ಬಳಸಿಕೊಂಡ ಮೇಲ್ವರ್ಗ ಅವುಗಳನ್ನು ತಮ್ಮ ರಾಜಕಾರಣದ ಭಾಗವಾಗಿ ಬಳಸಿಕೊಳ್ಳುತ್ತಲೇ ಬಂದಿದೆ ಇದು ನನ್ನ ಸ್ಪಷ್ಟ ಅಭಿಪ್ರಾಯವು ಕೊಡ ಹೌದು ಅದಕ್ಕೆ ನೀವು ಮೇಲೆ ಹೇಳಿದ ವಿವರಣೆ ಒಂದು ಉದಾಹರಣೆಯಾದರೆ ಹಳ್ಳಿಗಳಲ್ಲಿ ಮಾರಿ ಗುಡಿ ಮಾರಿಕಾಂಬ ದೇವಸ್ತನಗಳಗಿ ಬದಲಾದದ್ದು ಇನೊಂದು

    ReplyDelete
  14. "ಮೇಲ್ವರ್ಗ ಅವುಗಳನ್ನು ತಮ್ಮ ರಾಜಕಾರಣದ ಭಾಗವಾಗಿ ಬಳಸಿಕೊಳ್ಳುತ್ತಲೇ ಬಂದಿದೆ" ಏನ್ರಿ ಇದು ಸ್ವಲ್ಪ ವಿವರಿಸಿ

    ReplyDelete
  15. ಅರುಣ್ ಜೋಳದಕೂಡ್ಲಿಗಿಯವರೇ

    (ನೀವು ಈ ಬರಹದಲ್ಲಿ ಹೇಳಿಕೊಂಡ ಅನುಭವ ನನ್ನದೂ ಕೂಡ. ಕಾರಣ ನಾನು ಕೂಡ ಕೋಳಿ ಕುರಿ ಹರಕೆಕೊಡುವ ಸಹಜ ಸಂಸ್ಕೃತಿಯ ಭಾಗವೆ. ಈ ಆಚರಣೆಯನ್ನು ಹೊರಗಿನಿಂದ ನೋಡುವವರಿಗೆ ಮಾತ್ರ ಬಲಿಯಾಗಿ ಕಾಣುತ್ತದೆ. ಕ್ರೌರ್ಯವಾಗಿ ಕಾಣುತ್ತದೆ.)

    ಕೋಳಿ ಕುರಿಗಳಿರುವ ಜಾಗದಲ್ಲಿ ತಮ್ಮನ್ನು ಕಲ್ಪಿಸಿಕೊಳ್ಳಿ ! ... :)

    ಉಳಿದವರು ಆಗ ಕ್ರೌರ್ಯವಲ್ಲ ಎನ್ನುವುದಾದರೆ ನೀವು ಹೇಳಿರುವ ಮಾತು ಅಕ್ಷರಶ: ಸತ್ಯ ಎಂದು ಒಪ್ಪುತ್ತೇನೆ..

    ReplyDelete
  16. ಪಶ್ಚಿಮದ, ಪ್ರಮುಖವಾಗಿ ಯುರೋಪಿನ, ಜನರು ತಮ್ಮ ಸಂಸ್ಕೃತಿಯ ಚೌಕಟ್ಟಿನಲ್ಲಿ ಕಂಡುಕೊಂಡಂತಹ ರಾಜಕೀಯ, ಸಾಂಸ್ಕೃತಿಕ ಮೌಲ್ಯಗಳು ಜಗತ್ತಿನಾದ್ಯಂತ ಅನ್ವಯವಾಗುವ ಸಾರ್ವತ್ರಿಕ ಮೌಲ್ಯಗಳಾಗಿ ಹೇಗೆ ಪರಿವರ್ತನೆಗೊಂಡವು ಎನ್ನುವುದರ ಬಗ್ಗೆ ಸಾಕಷ್ಟು ಜಿಜ್ಞಾಸೆ ನಡೆದಿದೆ ಹಾಗು ನಡೆಯುತ್ತಲೂ ಇದೆ ವಸಾಹತು ದೇಶಗಳಲ್ಲಿ ಈ ಪ್ರಭಾವ ಬೇರೆಲ್ಲಿಗಿಂತಲೂ ಹೆಚ್ಚಾಗಿ ಕಂಡುಬರುತ್ತದೆ. ಭಾರತದ ಮೇಲೂ ಈ ಪ್ರಭಾವ ಬಹಳ ದಟ್ಟವಾಗಿದೆ. ಅದ್ದರಿಂದ ಭಾರತದ ಆಚರಣೆಗಳ ಕುರಿತಾದ ನಮ್ಮ ಬಹುಪಾಲು ವಿವರಣೆಗಳು ಪಶ್ಚಿಮದ ಕಣ್ಣಿನಿಂದ ಗ್ರಹಿಸಿ ವಿವರಿಸುತ್ತಿದ್ದೇವೆ ಎಂದು ನಾನು ನನ್ನ ಬರಹದಲ್ಲಿ ವಿವರಿಸಿದ್ದೆ. ಮುಂದುವರಿದು ಅದು ಅಷ್ಟೆಯೇ? ಅ ನಂತರ ಅ ಜ್ಞಾನ ಭಾರತದ ಸಮಾಜದ ಮೇಲೆ ಬಿರಿದ ಪ್ರಭಾವ ಏನು ಎಂದು ಯೋಚಿಸಿದರೆ ಭಾರತದ ಸಮಾಜದ ಕುರಿತು ಪಶ್ಚಿಮ ವಿವರಿಸಿದ ಇ ಜ್ಞಾನವನ್ನೇ ಭಾರತದ ಮೇಲು ಜಾತಿಗಳು ಯಾವುದೇ ಮರು ಪರೀಕ್ಷೆಗೆ ಒಳಪಡಿಸದೆ ತಮ್ಮ ರಾಜಕೀಯದ ಭಾಗವಗಿಸಿಕೊಂಡವು. ಅದಕ್ಕೆ ಉದಾಹರಣೆಯಾಗಿ ಸಮಾಜದ ಬಹುಪಾಲು ಅವಕಾಶಗಳನ್ನು ಗಳಿಸಿರುವ/ಗಳಿಸಿಕೊಳ್ಳುತ್ತಿರುವ ಜಾತಿಗಳನ್ನೂ ಗುರುತಿಸಬಹುದು. ಅದರಿಂದ ನಮ್ಮ ಪ್ರಯತ್ನ ನಮ್ಮ ಸಮಾಜದ ಕುರಿತು ಪಶ್ಚಿಮ ಸೃಷ್ಟಿಸಿದ ಜ್ಞಾನದ ನಿರಾಕರಣೆ ಮಡಿ ನಮ್ಮದೇ ಜ್ಞಾನ ಶಾಕೆಗಳ ಸೃಷ್ಟಿ ಮಾತ್ರವಾಗಬಾರದು ಹೀಗಾದರೆ ಪಶ್ಚಿಮದ ಜ್ಞಾನದ ಆಧಾರದ ಮೇಲೆ ಇತರ ಸಮುದಾಯಗಳನ್ನು ಶೋಷಿಸುತ್ತ ಅವಮಾನಿಸುತ್ತ ಬಂದ ಜಾತಿಗಳು ಇದರಲ್ಲಿ ನಮ್ಮದೇನು ತಪ್ಪಿಲ್ಲ ಇದು ಪಶ್ಚಿಮ ಸೃಷ್ಟಿಸಿದ ಜ್ಞಾನದ ತೊಂದರೆ ಎಂದು ಜಾಣತನ ತೋರಿಸಿ ನಿರಪರಾಧಿ ಸ್ಥಾನಕ್ಕೆ ಸರಿದುಬಿಡುತ್ತವೆ.(ಇ ಪ್ರಕ್ರಿಯೆಯು ಅವರ ರಾಜಕಾರಣದ ಭಾಗವಾಗುವ ಸಾದ್ಯತೆ ಇದೆ ) ಅದರಿಂದ ಪಶ್ಚಿಮದ ನಿರಾಕರಣೆ ಎಂದರೆ ಮೇಲ್ವರ್ಗದವರ ರಾಜಕೀಯದ ನಿರಕರನೆಯು ಆಗಬೇಕು ಎಂಬುದು ನನ್ನ ಉದ್ದೇಶ.

    ReplyDelete
  17. ಪಶ್ಚಿಮದ, ಪ್ರಮುಖವಾಗಿ ಯುರೋಪಿನ, ಜನರು ತಮ್ಮ ಸಂಸ್ಕೃತಿಯ ಚೌಕಟ್ಟಿನಲ್ಲಿ ಕಂಡುಕೊಂಡಂತಹ ರಾಜಕೀಯ, ಸಾಂಸ್ಕೃತಿಕ ಮೌಲ್ಯಗಳು ಜಗತ್ತಿನಾದ್ಯಂತ ಅನ್ವಯವಾಗುವ ಸಾರ್ವತ್ರಿಕ ಮೌಲ್ಯಗಳಾಗಿ ಹೇಗೆ ಪರಿವರ್ತನೆಗೊಂಡವು ಎನ್ನುವುದರ ಬಗ್ಗೆ ಸಾಕಷ್ಟು ಜಿಜ್ಞಾಸೆ ನಡೆದಿದೆ ಹಾಗು ನಡೆಯುತ್ತಲೂ ಇದೆ ವಸಾಹತು ದೇಶಗಳಲ್ಲಿ ಈ ಪ್ರಭಾವ ಬೇರೆಲ್ಲಿಗಿಂತಲೂ ಹೆಚ್ಚಾಗಿ ಕಂಡುಬರುತ್ತದೆ. ಭಾರತದ ಮೇಲೂ ಈ ಪ್ರಭಾವ ಬಹಳ ದಟ್ಟವಾಗಿದೆ. ಅದ್ದರಿಂದ ಭಾರತದ ಆಚರಣೆಗಳ ಕುರಿತಾದ ನಮ್ಮ ಬಹುಪಾಲು ವಿವರಣೆಗಳು ಪಶ್ಚಿಮದ ಕಣ್ಣಿನಿಂದ ಗ್ರಹಿಸಿ ವಿವರಿಸುತ್ತಿದ್ದೇವೆ ಎಂದು ನಾನು ನನ್ನ ಬರಹದಲ್ಲಿ ವಿವರಿಸಿದ್ದೆ. ಮುಂದುವರಿದು ಅದು ಅಷ್ಟೆಯೇ? ಅ ನಂತರ ಅ ಜ್ಞಾನ ಭಾರತದ ಸಮಾಜದ ಮೇಲೆ ಬಿರಿದ ಪ್ರಭಾವ ಏನು ಎಂದು ಯೋಚಿಸಿದರೆ ಭಾರತದ ಸಮಾಜದ ಕುರಿತು ಪಶ್ಚಿಮ ವಿವರಿಸಿದ ಇ ಜ್ಞಾನವನ್ನೇ ಭಾರತದ ಮೇಲು ಜಾತಿಗಳು ಯಾವುದೇ ಮರು ಪರೀಕ್ಷೆಗೆ ಒಳಪಡಿಸದೆ ತಮ್ಮ ರಾಜಕೀಯದ ಭಾಗವಗಿಸಿಕೊಂಡವು. ಅದಕ್ಕೆ ಉದಾಹರಣೆಯಾಗಿ ಸಮಾಜದ ಬಹುಪಾಲು ಅವಕಾಶಗಳನ್ನು ಗಳಿಸಿರುವ/ಗಳಿಸಿಕೊಳ್ಳುತ್ತಿರುವ ಜಾತಿಗಳನ್ನೂ ಗುರುತಿಸಬಹುದು. ಅದರಿಂದ ನಮ್ಮ ಪ್ರಯತ್ನ ನಮ್ಮ ಸಮಾಜದ ಕುರಿತು ಪಶ್ಚಿಮ ಸೃಷ್ಟಿಸಿದ ಜ್ಞಾನದ ನಿರಾಕರಣೆ ಮಡಿ ನಮ್ಮದೇ ಜ್ಞಾನ ಶಾಕೆಗಳ ಸೃಷ್ಟಿ ಮಾತ್ರವಾಗಬಾರದು ಹೀಗಾದರೆ ಪಶ್ಚಿಮದ ಜ್ಞಾನದ ಆಧಾರದ ಮೇಲೆ ಇತರ ಸಮುದಾಯಗಳನ್ನು ಶೋಷಿಸುತ್ತ ಅವಮಾನಿಸುತ್ತ ಬಂದ ಜಾತಿಗಳು ಇದರಲ್ಲಿ ನಮ್ಮದೇನು ತಪ್ಪಿಲ್ಲ ಇದು ಪಶ್ಚಿಮ ಸೃಷ್ಟಿಸಿದ ಜ್ಞಾನದ ತೊಂದರೆ ಎಂದು ಜಾಣತನ ತೋರಿಸಿ ನಿರಪರಾಧಿ ಸ್ಥಾನಕ್ಕೆ ಸರಿದುಬಿಡುತ್ತವೆ.(ಇ ಪ್ರಕ್ರಿಯೆಯು ಅವರ ರಾಜಕಾರಣದ ಭಾಗವಾಗುವ ಸಾದ್ಯತೆ ಇದೆ ) ಅದರಿಂದ ಪಶ್ಚಿಮದ ನಿರಾಕರಣೆ ಎಂದರೆ ಮೇಲ್ವರ್ಗದವರ ರಾಜಕೀಯದ ನಿರಕರನೆಯು ಆಗಬೇಕು ಎಂಬುದು ನನ್ನ ಉದ್ದೇಶ.

    ReplyDelete
  18. ದುರಂತವೆಂದರೆ, ಇದೇ ಬ್ಲಾಗ್ ನಲ್ಲಿ ಪ್ರಕಟವಾಗಿರುವ ಚಿಂತಾಮಣಿಯ ನರಮೇಧ ಕುರಿತು ಯಾರೂ ತಲೆ ಕೆಂಡಿಸಿಕೊಂಡಂತಿಲ್ಲ. ಆದರೆ ಪ್ರಾಣಿಬಲಿ ಕುರಿತಾಗಿ ಪ್ರತಿಕ್ರಿಯೆಗಳ ಹೊಳೆ ಹರಿಯುತ್ತಿದೆ. ಅರುಣ್ ಅವರು ಹೇಳಿರುವಂತೆ ’ಆಚರಣೆಯನ್ನು ಹೊರಗಿನಿಂದ ನೋಡುವವರಿಗೆ ಕ್ರೌರ್ಯವಾಗಿ ಬಲಿಯಾಗಿ ಕಾಣುತ್ತದೆ’. ಖಂಡಿತವಾಗಿ ಚಿಂತಾಮಣಿಯ ನರಮೇಧ, ಬಲಿ ಎರಡೂ ನಮಗೆ ಕ್ರೌರ್ಯವಾಗಿಯೇ ಕಾಣುತ್ತವೆ. ಅರುಣ್ ಅವರು ಹಾಗೂ ಹರ್ಷ ಅವರು ಚಿಂತಾಮಣಿಯ ಪ್ರಕರಣವನ್ನೂ ಯಾವ ರೀತಿಯಲ್ಲಿ ಅಕಾಡೆಮಿಕ್ ಆಗಿ ನೋಡುವರೋ ಏನೋ. ಇದನ್ನೂ ಒಂದು ಪ್ರತಿಸಂಸ್ಕೃತಿ, ಸಾಮಾಜಿಕ ಜನಜೀನವನದ ಒಂದು ಅಂಗವೆಂದು ಸಾಧಿಸಲೂಬಹುದು. ಯಾಕೆಂದರೆ ಅಲ್ಲಿ ಕಳ್ಳರನ್ನು ಕೊಲ್ಲುತ್ತಿದ್ದೇವೆಂಬ ಸಮರ್ಥನೆಯಿದೆ. ವ್ಯವಸ್ಥೆಯ ವಿಫಲತೆಯಿಂದ ಆದ ಅನಾಹುತವೆಂಬ ವಾದವಿದೆ. ನಾನು ಹೀಗೆಂದಾಕ್ಷಣ ಸಂಘ ಪರಿವಾರದವರೆಂಬ ಕಾಮಾಲೆ ಕಣ್ಣಿಂದ ನೋಡಬಹುದು. ನಾನು ಯಾವ ಪರಿವಾರದವಳೂ ಅಲ್ಲ. ಅಹಿಂಸೆಯ ಪರವಾದಿ ಅಷ್ಟೆ. ಇಲ್ಲಿ ವಾದಿಸುವವರು ಸುಶಿಕ್ಷಿತರು, ನಾಗರಿಕರು ಎಂದು ಕೊಂಡಿದ್ದಾರೆಂದು(ಸಸ್ಯಾಹಾರಿಗಳು) ಅರುಣ್ ತಿಳಿಸಿದ್ದಾರೆ. ಆ ಭ್ರಮೆ ನಮಗಿಲ್ಲ. ಬಲಿ ಅನ್ನಿ ಅಥವಾ ಕಡಿಯುವುದು ಎಂದೇ ಹೇಳಿ ವ್ಯತ್ಯಾಸವೇನಿಲ್ಲ. ಅದನ್ನು ಮಾಡುವವರೆಲ್ಲ ಸುಶಿಕ್ಷಿತರು, ನಾಗರಿಕರು ಎಂದುಕೊಂಡರೆ ನಮ್ಮ ಅಭ್ಯಂತರವೇನಿಲ್ಲ. ನಮ್ಮ ಪೂರ್ವಜರು ಆದಿವಾಸಿಗಳು ಪ್ರಾಣಿಗಳನ್ನು ಬೇಟೆಯಾಡಿಯೇ ಕೊಂದು ತಿನ್ನುತ್ತಿದ್ದರು ಎಂದು ಹೇಳುವುದೂ ಸಮರ್ಥನೆಯೆಯಿಸದು. ಯಾಕೆಂದರೆ ಪೂರ್ವಜರಿಗೆ ಆಗಿನ್ನೂ ಬುದ್ಧಿ ಬೆಳವಣಿಗೆಯಾಗಿರಲಿಲ್ಲ. ಮುಂದಿನದು ತಮಗೆ ಬಿಟ್ಟದ್ದು.-ಅಪೂರ್ವ

    ReplyDelete
  19. ಇನ್ನು ಪ್ರಾಣಿ ಪ್ರೀತಿಯ ಕುರಿತು ಮಾತನಾಡುವುದಾದರೆ ಹಳ್ಳಿಗಳಲ್ಲಿ ಜನರು ಕುರಿಕೋಳಿಗಳನ್ನು ಸಾಕುವಾಗ ಅವುಗಳನ್ನು ಮುಂದೆ ತಿನ್ನುವುದೇ ಆದರೂ ಅವುಗಳನ್ನು ಸಾಕಷ್ಟು ಪ್ರೀತಿ, ಜತನದಿಂದಲೇ ಸಾಕುತ್ತಾರೆ. ಕೋಳಿ ಮರಿಯೊಂದನ್ನು ಹದ್ದು ಕಚ್ಚಿಕೊಂಡು ಹೋದರೆ ಮುಂದೆ ತಿನ್ನಲು ಒಂದು ಕೋಳಿ ಕಡಿಮೆಯಾಯಿತಲ್ಲಾ ಎಂದು ಯಾರೂ ಯೋಚಿಸುವುದಿಲ್ಲ. ಬದಲಾಗಿ ಅದರ ಮೇಲಿನ ಕಾಳಜಿಯಿಂದ ಮರುಗುತ್ತಾರೆ
    ಆಹಾ... ಎಂತಹ ಜಾಣ್ಮೆಯಿಂದ ಕೂಡಿದ ಬರಹ !!!

    ReplyDelete
  20. ಅಪೂರ್ವ ಅವರೆ, ನಿಮ್ಮ ವಾದದ ಪ್ರಕಾರ ನೋಡುವುದಾದರೆ ಮನುಷ್ಯನ ವಿಕಾಸ ಪ್ರಕ್ರಿಯೆಯಲ್ಲಿ ಶುದ್ಧ ಸಸ್ಯಾಹಾರ ಎನ್ನುವುದು ಮನುಷ್ಯನ ಪ್ರಜ್ಞೆಯಲ್ಲಿನ ವಿಕಾಸ. ಹೌದಲ್ವಾ? ಮಾಂಸಾಹಾರಿಯಾಗಿದ್ದ ಮನುಷ್ಯ ಕ್ರಮೇಣ ಶುದ್ಧ ಸಸ್ಯಾಹಾರಿಯಾಗಿ ಬೆಳವಣಿಗೆ ಹೊಂದಿದ್ದಾನೆ. ಅಥವಾ ನಿಮ್ಮ ತಿಳಿವಳಿಕೆಯ ಪ್ರಕಾರ ಹೀಗೆ ಬೆಳವಣಿಗೆ ಹೊಂದಿದವರು ಮಾತ್ರ ನಿಜಕ್ಕೂ ಮನುಷ್ಯರು ಎನ್ನಬಹುದು. ಅಂದರೆ ಅಲ್ಲಿಗೆ ನಿಮ್ಮ ವಾದದ ಪ್ರಕಾರ ನಮ್ಮ ದೇಶದ ಮುಕ್ಕಾಲು ವಾಸಿ ಜನರು ಇನ್ನೂ ಪರಿಪೂರ್ಣತೆ ಬೆಳವಣಿಗೆ ಹೊಂದಿಲ್ಲ. ಅಥವಾ ಅವರು ಕೆಟ್ಟವರು. ನಿಮ್ಮ ಮಾತು ಜಗತ್ತಿನ ಮುಕ್ಕಾಲು ವಾಸಿ ಜನರಿಗೂ ಅನ್ವಯವಾಗುತ್ತದೆ. ಇದೇ ನಿಮ್ಮ ವಾದವಾದರೆ ನಿಮಗೆ ನನ್ನ ಒಂದು ಸಣ್ಣ ಪ್ರಶ್ನೆ ಇದೆ. ನಮ್ಮ ದೇಶದಲ್ಲಿ ಇಂದು ಶುದ್ದ ಸಸ್ಯಾಹರವನ್ನು ಕಳೆದ ನೂರಾರು ಅಥವಾ ಸಾವಿರ ವರ್ಷದಿಂದ ಪಾಲಿಸುತ್ತಿರುವವರಲ್ಲಿರುವ ಮಾನವೀಯತೆಯ ಪ್ರಮಾಣ ಎಷ್ಟು? ಅದೇ ಶುದ್ಧ ಸಸ್ಯಾಹಾರಿ ಸಮುದಾಯದಿಂದ ಬಂದವರ ಪ್ರತಿಪಾದನೆ ಹಾಗೂ ಬರವಣಿಗೆಗಳಿಂದಲೇ ನಾನು ಅರ್ಥ ಮಾಡಿಕೊಂಡಿರುವುದು ಏನೆಂದರೆ ನಮ್ಮ ದೇಶದಲ್ಲಿ ಶುದ್ಧ ಸಸ್ಯಾಹಾರಿ ವರ್ಗಗಳೇ ಅತ್ಯಂತ ಅಮಾನವೀಯವಾಗಿ ನಡೆದುಕೊಂಡಿರುವುದು. ಇಂದೂ ಸಹ ಅದು ಮುಂದುವರೆದಿದೆ. ಒಂದು ಕಾಂಟೆಂಪರರಿ ಉದಾಹರಣೆ ಕೊಡಲೇಬೇಕು. ಜೈನರು ಅಪ್ಪಟ ಸಸ್ಯಾಹಾರಿಗಳು ಹಾಗೂ ಸೊಕಾಲ್ಡ್ ಅಹಿಂಸಾವಾದಿಗಳು. ಅವರು ಕಾಲಿನಲ್ಲಿ ಒಂದು ಇರುವೆಯನ್ನೂ ಸಾಯೊಸುವುದಿಲ್ಲ ಎನ್ನುವುದನ್ನು ಕೇಳಿದ್ದೇನೆ. ಆದರೆ, ನಾನು ನಮ್ಮ ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ಕಂಡಿದ್ದೇನೆ. ಅವರು ತಮ್ಮ ಮನೆಯಲ್ಲಿ, ತೋಟಗಳಲ್ಲಿ ದಿನವಿಡೀ ಕೂಲಿ ಕೆಲಸ ಮಾಡುವ ಕೆಳವರ್ಗದ ಹೆಣ್ಣಾಳುಗಳಿಗೆ ಕೊಡುವುದು ಬರೀ ೧೫ ರಿಂದ ೨೦ ರೂಪಾಯಿ ಕೂಲಿ. ಈ ಕಾರಣದಿಂದಾಗಿ ಎಷ್ಟೋ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆದುಕೊಳ್ಳುತ್ತಿದ್ದಾರೆ. ಸಾಗರ ತಾಲ್ಲೂಕಿನ ತುಮರಿ ತಾಲ್ಲೂಕಿನಲ್ಲಿ ಈ ಹೆಣ್ಣು ಮಕ್ಕಳು ತಮ್ಮ ಬದುಕನ್ನು ಮೂರಾಬಟ್ಟೆ ಮಾಡುವ ಸಾರಾಯಿ ದೊರೆಗಳ ವಿರುದ್ಧ ಹೋರಾಟಕ್ಕಿಳಿದಾಗ ಿದೇ ಜೈನ ಭೂಮಾಲೀಕರು ಈ ಹೆಣ್ಣು ಮಕ್ಕಳ ಮೇಲೆ ಹಲ್ಲೆ ನಡೆಸಿದರು. ಹಾಗಂತ ಎಲ್ಲಾ ಜೈನರೂ ಹಾಗೇ ಎಂದಲ್ಲ. ಆದರೆ ಬಹುತೇಕರು ಹಾಗೆ. ಅವರಿಗೆ ಇರುವೆಯ ನೋವು ಕೇಳುತ್ತದೆ. ಆದರೆ ತಮಗಾಗಿ ಬೆವರು ಹರಿಸುವವರ ನೋವು ಕೇಳುವುದಿಲ್ಲ. ಇದೇನಾ ಅಹಿಂಸಾವಾದ? ಇದೇನಾ ಮಾನತೆ?.
    ನೀವು ನಿಮ್ಮ ಅಭಿಪ್ರಾಯದಲ್ಲಿ ನಾವು ತಿನ್ನುವ ಆಹಾರಕ್ಕೂ ನಮ್ಮ ಒಳ್ಳೆಯತನ ಹಾಗೂ ಕೆಟ್ಟತನಗಳಿಗೂ ಸಂಬಂಧ ಕಲಿಸಲು ಪ್ರಯತ್ನಿಸಿದಾಗ ನಾವು ಮೇಲಿನ ಉತ್ತರ ನೀಡದೇ ವಿಧಿಯಿಲ್ಲ.
    ನಾವು ನಮ್ಮ ಬರೆಹಗಳ ಮೂಲಕ ನಿಮಗೆ ಅರ್ಥ ಮಾಡಿಸಲು ಯತ್ನಿಸಲು ಪ್ರಯತ್ನಿಸುತ್ತಿರುವ ಒಂದೇ ವಿಷಯವೆಂದರೆ ಮೊದಲು ಮನುಷ್ಯರನ್ನು ಪ್ರೀತಿಸುವುದನ್ನು ಕಲಿಯೋಣ. ಮಾನವ ಜನುಮ ಪ್ರಾಣಿಗಳ ಜನುಮಕಕ್ಇಂತ ದೊಡ್ಡದು. ಮಾಂಸಾಹಾರ ೆನ್ನುವುದು ಮನುಷ್ಯರನ್ನು ನಿಕೃಷ್ಟರಾಗಿ ಕಾಣಲು ಅಥವಾ ಧ್ವೇಷಿಸಲು ಕಾರಣವಾಗದಿರಲಿ. ಇದು ಅರುಣ್ , ನನ್ನ ಹಾಗೂ ನಮ್ಮಂಥವರ ಕಾಳಜಿ . ಇಲ್ಲಿ ಬಹಳ ಜನ ಕಮೆಂಟುಗಳಲ್ಲಿ ನಾವು ನರಬಲಿಯನ್ನೂ ಸಮರ್ಥಿಸುತ್ತೇವೆ ಎನ್ನುವ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ನಾವು ಎತ್ತಿರುವ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟವಾದಾಗ ಅವರಿಗೆ ಇದು ಅನಿವಾರ್ಯವಾಗಿರಬಹುದು. ಇರಲಿ. ಆದರೂ ನಾನು ಲೇಖನದಲ್ಲೇ ಸ್ಪಷ್ಟ ಪಡಿಸಿದ್ದೇನೆ. ಪ್ರಕೃತಿಯಲ್ಲಿ ಸಸ್ಯಗಳಿರಲಿ ಪ್ರಾಣಿಗಳಿರಲಿ ಒಂದನ್ನೊಂದು ಅವಲಂಬಿಸಿ ಬದುಕುತ್ತವೆ. ಆದರೆ ಯಾವ ಪ್ರಾಣಿಯೂ ತನ್ನದೇ ಜಾತಿಯ ಪ್ರಾಣಿಯನ್ನು ತಿನ್ನುವುದಿಲ್ಲ ಎಂದು. ಮನುಷ್ಯನ ವಿಕಾಸದ ಯಾವ ಹಂತದಲ್ಲೂ ಅದು ಕಾಣಿಸುವುದಿಲ್ಲ.

    ಪರಿಸರದಲ್ಲಿ ಸಹಜ ಯಾವುದು, ಅಸಹಜ ಯಾವುದು ಎನ್ನುವ ಕುರಿತು ತಪ್ಪು ಕಲ್ಪನೆಗಳಿದ್ದಾಗ ಮಾತ್ರ ನೀವು ಹೇಳುವಂತಹ ವಾದಗಳು ಉದ್ಭವಿಸಬಹುದು. ಹೀಗಾಗಿಯೇ ನಾವು ಮಾಂಸಾಹಾರವನ್ನು ಸರಿ ಎಂದಾಕ್ಷಣ ಚಿಂತಾಮಣಿಯ ಕೊಲೆಗಳನ್ನು ಸರಿ ಎಂದು ಹೇಳುತ್ತೇವೆ ಎನ್ನುವ ಮಟ್ಟಕ್ಕೆ ನಿಮ್ಮ ಕಲ್ಪನಾ ಶಕ್ತಿ ವಿಸ್ತಾರವಾಗುತ್ತದೆ. ಈ ಮಟ್ಟದ ವಿಕೃತ ಕಲ್ಪನೆ ಶುದ್ಧ ಸಸ್ಯಾಹಾರದಿಂದಲೇ ಬಂದದ್ದೋ ಏನೋ??
    -ಹರ್ಷ ಕುಗ್ವೆ

    ReplyDelete
  21. ಹರ್ಷ, ಚರ್ಚೆಯನ್ನು ಎತ್ತೆತ್ತೆಲೋ ಎಳೆಯಬೇಡಿ. ಬಲಿಕೊಡುವುದನ್ನು ನಾನು ವಿರೋಧಿಸಿದ ತಕ್ಷಣ ಮನುಷ್ಯರನ್ನು ಮನುಷ್ಯರಂತೆ ಕಾಣುವುದನ್ನು ವಿರೋಧಿಸುತ್ತೇನೆ ಎಂದು ಹೇಗೆ ಕಲ್ಪಿಸಿದಿರಿ? ನನ್ನ ಹೇಳಿಕೆಯಲ್ಲೆಲ್ಲೂ ಅಮಾನವೀಯ ನಡವಳಿಕೆಗಳಿಗೆ ಸಮರ್ಥನೆ ಇಲ್ಲ. ಅಥವಾ ಮನುಷ್ಯರು ಮನುಷ್ಯರನ್ನೇ ಹೀನಾಯವಾಗಿ ಕಾಣುವುದನ್ನೂ ನಾನು ಸಮರ್ಥಿಸಿಕೊಂಡಿಲ್ಲ. ಇದು ನಿಮ್ಮ ಕಲ್ಪನೆಯಷ್ಟೆ. ಮನುಷ್ಯರೊಂದಿಗೆ ಪ್ರಾಣಿಗಳನ್ನೂ ಮಾನವೀಯತೆಯ ದೃಷ್ಟಿಯಿಂದ ನೋಡಬೇಕೆಂಬುದು ನನ್ನ ವಾದದ ಅರ್ಥ. ಪ್ರಕೃತಿಯಲ್ಲಿ ಪ್ರಾಣಿ, ಸಸ್ಯಗಳು ಒಂದನ್ನೊಂದು ಅವಲಂಬಿಸಿ ಬದುಕುತ್ತವೆ ನಿಜ. ಮನುಷ್ಯನಿಗೆ ಪ್ರಾಣಿಗಳನ್ನೇ ಅವಲಂಬಿಸಿ ಬದುಕುವ ಅನಿವಾರ್ಯತೆಯೂ ಇಲ್ಲವೆಂದು ನನ್ನ ಅಭಿಪ್ರಾಯ. ನಾನು ಹೇಳುವುದಿಷ್ಟೇ. ಪ್ರಾಣಿ ಇರಲಿ, ಮನುಷ್ಯರೇ ಇರಲಿ ಅವರನ್ನು ಹೃದಯದಿಂದ ನೋಡಿ ಎಂದು. ಮನುಷ್ಯರ ಶೋಷಣೆಗೆ ನನ್ನದೂ ವಿರೋಧವಿದೆ. ಹರ್ಷ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು-ಅಪೂರ್ವ

    ReplyDelete
  22. ಹರ್ಷ ಅವರೇ, ನಮ್ಮ ದೇಶದಲ್ಲಿ ಶುದ್ಧ ಸಸ್ಯಾಹಾರಿ ವರ್ಗಗಳೇ ಅತ್ಯಂತ ಅಮಾನವೀಯವಾಗಿ ನಡೆದುಕೊಂಡಿರುವುದು ಎಂಬ ನಿಮ್ಮ ಮಾತು ಸ್ವತಃ ಸಸ್ಯಹಾರಿಯಾದ ನನಗೆ ಅತ್ಯಂತ ನೋವು ಕೊಡುವ ಮಾತು. ಆದರೆ ನಿಮ್ಮಿಂದ ಅಂಥ ಮಾತು ಬಂತು ಅಂದರೆ ಅದಕ್ಕೆ ಕಾರಣ ಸಸ್ಯಹಾರಿಗಳಿಂದ ನೀವು ಅನುಭವಿಸಿದ ನೋವುಗಳೇ ಇರಬಹುದು.

    ReplyDelete
  23. Well defended article. More than 90 percent in our society are non-vegetarians. Does it mean our society is uncivilised?

    ReplyDelete
  24. ನನ್ನ ಅಭಿಪ್ರಾಯದಲ್ಲಿ, ಆಹಾರಕ್ಕಾಗಿ ನಡೆದ ಪ್ರಾಣಿ ಹತ್ಯೆ ಸಮರ್ಥನೀಯವೇ. ಇನ್ನು ಸಂಸ್ಕೃತಿ-ವಿಕೃತಿ ಇತ್ಯಾದಿಗಳು ಕೇವಲ ಅಂದಾಜು ಪರಿಕಲ್ಪನೆಗಳೇ ಹೊರತೂ ನೇರ ನಿರ್ದಿಷ್ಟ, ಎಲ್ಲರೂ ಒಪ್ಪುವಂಥ ವ್ಯಾಖ್ಯಾನಗಳಿಗೆ ಒಳಪಡುವಂತವುಗಳಲ್ಲ. ಕುರಿ ಕಡಿಯುವವರಿಗೆ, ತಿನ್ನುವವರಿಗೆ ಅದು ಹಿಂಸೆ/ಸ್ಯಾಡಿಸಂ ಅಂತ ಅನ್ನಿಸದಿದ್ದರೆ ಅಷ್ಟೇ ಆಯಿತು. ಬಲಿ ನೀಡುವವರು, ಕಡಿಯುವವರು ಪ್ರಾಣಿಯು ಹೆಚ್ಛು ಹಿಂಸೆ ಇಲ್ಲದೇ-ಒದ್ದಾಟವಿಲ್ಲದೇ ಅರ್ಧ ಸತ್ತು ಅರ್ಧ ಬದುಕಿದಂತಾಗದೇ ಸರಿಯಾಗಿ ನೋವುರಹಿತವಾಗಿ ೫ರಿಂದ ೧೦ ಸೆಕೆಂದುಗಳಲ್ಲಿ (ಒಂದೇಟಿಗೇ) ಸಾಯುವಂತೆ ನೋಡಿಕೊಲ್ಲುದು ಮಾತ್ರಾ ಅಪೇ‍ಕ್ಷಣೀಯವಷ್ಟೇ. ದೇವರಿಗೆ ಹಲವು ಮಾನವ ಗುಣಗಳನ್ನು ಆರೋಪಿಸಿದ್ದು ಸರಿಯಾದರೆ, ದೇವರು ಸಂಸ್ಕೃತಿಯ ಭಾಗವೇ ಎಂದಾದರೆ, ಆ ದೇವರಿಗೆ ಮಾನವನು ತಿನ್ನುವ ಮಾಂಸಾಹಾರವೂ ಒದಗುವುದು ಸಂಸ್ಕೃತಿಯ ಭಾಗವೇ ಆಗುತ್ತದಲ್ಲವೇ?

    ReplyDelete
  25. ಒಕ್ಸಿಜನ್ ಕೊಡುವ ಸಸ್ಯಗಳನ್ನು ಕೊಂದು ಚಟ್ನಿ ಮಾಡಿ ತಿನ್ನುವುದು ಎಷ್ಟು ಸರಿ.
    ಬೂದು ಕುಂಬಳ ಕಾಯಿ ಒಡೆದು ಹಾಲು ಮಾಡಿದಾಗ ನಿಮಗೇನು ಅನಿಸುವುದಿಲ್ಲ ಯಾಕೆ ?
    ಮಾಂಸಾಹಾರ ಭಾರತದ ಬಹುಜನ ಹಿಂದೂಗಳ ಬದುಕಿನ ಭಾಗ. ಮಾಂಸಾಹಾರ ಮಾಡುವವರು ಅಪ್ಪಟ ಸಸ್ಯಾಹಾರಿ ಹಿಟ್ಲರ್ ನಂತೆ ಚೂರಿಯನ್ನು ಬಗಲಲ್ಲಿ ಇಟ್ಟುಕೊಂಡು ತಿರುಗುವುದಿಲ್ಲ.

    ReplyDelete
  26. ಮಾನ್ಯ ಅನಾಮಧೇಯರೇ, ಮಾಂಸಾಹಾರಿಗಳು ಚೂರಿಯನ್ನು ಇಟ್ಟುಕೊಳ್ಳುವದೇ ಇಲ್ಲವೇ.. ಅಥವಾ ಚೂರಿಯನ್ನು ಬಗಲು ಬಿಟ್ಟು ಬೇರೆ ಕಡೆ ಇಟ್ಟುಕೊಂಡು ತಿರುಗುತ್ತಾರೋ??? ಅಪ್ಪಟ ಸಸ್ಯಹಾರಿಗಳಾದ ಮಹಾತ್ಮಾ ಗಾಂಧಿ, ಬಸವಣ್ಣ ಮುಂತಾದವರ ಬಗಲಲ್ಲೂ ಚೂರಿ ಇತ್ತಾ??

    ReplyDelete
  27. roopa hassan avaru barediruvante namma samvidanada 51 a column pranidayeya kuritu prasthapiside. neevu tappagi bhavisidante pranibaliya kuritalla. ambedkar avaru halavaru kadegalalli pranibaliyannu virodisi matanadiruvudu dhakalagide. 50 varshagala hindeye pranibali nishedada kanunugalu jariyagive. hegagi ega pranibali kuritu samarthisikollalu nadeuttiruva charcheye samvidana bahira. kanunina virudda. mamsahara-pranibali eradu bereyade vishayagalu. summane charche dikku tapputtide.- venkatesh gowda a.v

    ReplyDelete
  28. ಇಲ್ಲಿ ಒಬ್ಬರು ಹೇಳಿದ್ದು:

    "ನೀವು ನಿಮ್ಮ ಅಭಿಪ್ರಾಯದಲ್ಲಿ ನಾವು ತಿನ್ನುವ ಆಹಾರಕ್ಕೂ ನಮ್ಮ ಒಳ್ಳೆಯತನ ಹಾಗೂ ಕೆಟ್ಟತನಗಳಿಗೂ ಸಂಬಂಧ ಕಲಿಸಲು ಪ್ರಯತ್ನಿಸಿದಾಗ ನಾವು ಮೇಲಿನ ಉತ್ತರ ನೀಡದೇ ವಿಧಿಯಿಲ್ಲ.ನಾವು ನಮ್ಮ ಬರೆಹಗಳ ಮೂಲಕ ನಿಮಗೆ ಅರ್ಥ ಮಾಡಿಸಲು ಯತ್ನಿಸಲು ಪ್ರಯತ್ನಿಸುತ್ತಿರುವ ಒಂದೇ ವಿಷಯವೆಂದರೆ ಮೊದಲು ಮನುಷ್ಯರನ್ನು ಪ್ರೀತಿಸುವುದನ್ನು ಕಲಿಯೋಣ."

    ಇದು ಒಪ್ಪುವಂತಹ ಮಾತೇ.

    "ಹಾಗಿದ್ದರೆ, ಮಾಂಸಾಹಾರ ಮಾಡುವವರು ಅಪ್ಪಟ ಸಸ್ಯಾಹಾರಿ ಹಿಟ್ಲರ್ ನಂತೆ ಚೂರಿಯನ್ನು ಬಗಲಲ್ಲಿ ಇಟ್ಟುಕೊಂಡು ತಿರುಗುವುದಿಲ್ಲ."


    ಇಂತಹ ಮಾತುಗಳೇಕೆ ಬರಬೇಕು? ಅಪ್ಪಟ ಸಸ್ಯಾಹಾರಿಗಳನ್ನು ಹಿಟ್ಲರ್ ಗೆ ಹೋಲಿಸಬೇಕೇಕೆ? ಹಿಟ್ಲರ್ ಸಸ್ಯಾಹಾರಿಯಾಗಿದ್ದು ನಿಜ. ಆದರೆ ಎಲ್ಲ ಸಸ್ಯಾಹಾರಿಗಳೂ ಹಿಟ್ಲರ್ ರೀತಿ ಇಲ್ಲವಲ್ಲ!

    ಇಂತಹ ದ್ರಾವಿಡ ಪ್ರಾಣಾಯಾಮ ಅಸಂಬದ್ಧ ಎನಿಸದಿರದು.

    ReplyDelete
  29. ಹರ್ಷ, ನಿಮ್ಮ ಒಳನೋಟದ,ನಿರ್ಭಿಡೆಯ ಬರಹ ನಿಜಕ್ಕೂ ಪ್ರಸ್ತುತ. ಅದಕ್ಕಾಗಿ ನಿಮಗೆ ಅಭಿನಂದನೆಗಳು.
    'ಮಾಂಸಾಹಾರ' ಎಂಬುದನ್ನು ವೈದಿಕರು ರಾಜಕೀಯದ ಒಂದು ಬಹುದೊಡ್ಡ 'ಅಸ್ತ್ರ'ವಾಗಿ ಬಳಸುತ್ತ ಬಂದಿದ್ದಾರೆ.

    ಕೆಳವರ್ಗದ, ಗ್ರಾಮೀಣ ಸಮುದಾಯದ ಭಕ್ತಿ, ಶ್ರದ್ಧೆ ಮತ್ತು ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗವಾದ ಆಹಾರ ಪದ್ಧತಿಗೆ ತನ್ನದೆ ಆದ ಘನತೆ ಇದೆ.ಭಕ್ತ ಪರಂಪರೆಯೇ ಇದರ ಹಿಂದಿದೆ.

    ಪ್ರಾಣಿಬಲಿಯನ್ನು 'ಅಮಾನವೀಯ' ಎಂದು ಕರೆಯುವ 'ಮನುಷ್ಯರು' ಮೊದಲು ತಮ್ಮ 'ಮಾನವಕುಲದ' ಕುರಿತು,ಮನುಷ್ಯಜಾತಿಯ ಕುರಿತು ಸಹನೆ ಮತ್ತು ಪ್ರೀತಿಯನ್ನು ಕಲಿಯಲಿ. ಮನುಷ್ಯರ ನಡುವೆ ರಕ್ತಕಾರುತ್ತಿರುವ ಹಿಂಸೆಯ ಕುರಿತು ಯೋಚಿಸಲಿ.

    ಮಾಂಸಾಹಾರ, ಪ್ರಾಣಿಬಲಿಯನ್ನು ಹೀಯಾಳಿಸುವ ಮೂಲಕ ಜನರಲ್ಲಿ ಕೀಳರಿಮೆಯನ್ನು ಉದ್ದೀಪಿಸುವ ಕೀಳು ರಾಜಕೀಯ ನಿಲ್ಲಿಸಿ, ಮನುಷ್ಯರನ್ನು ಪ್ರೀತಿಸುವ ಮಾನವರಾಗಲಿ.

    ReplyDelete
  30. ಮನುಷ್ಯ ಪ್ರಾಣಿಗಳನ್ನು ತಿನ್ನುವುದು ಸರಿಯಾದರೆ.. ಹುಲಿ ಮನುಷ್ಯನನ್ನು ತಿನ್ನುವುದೂ ಸಹಜವೇ ತಾನೆ? ಪಾಪ ಅವುಗಳನ್ನು ಯಾಕೆ ನರಹಂತಕ ಹುಲಿ ಎಂದು ಸಾಯಿಸ್ತಾರೋ ಅರ್ಥ ಆಗ್ತಾ ಇಲ್ಲ ??? :)

    ReplyDelete
  31. May I be dear to all animals (Atharva 16.71.4)

    May you eat rice (Vrihi); may you eat barley (Yava), also black beans (Mdsa) and Sesamum (Tila). This is the share aloted to both of you for happy results, 0 you two teeth (dantau), may you not injure the father and mother. (Atharva - 6-140-2)

    Do not kill any of the Creatures. (Yaju. L 1)

    Do not kill the horse. (Yaju. 13.42)

    Do not kill quadrupeds. (Yak. 13.44)

    Do not kill wool-giving animals. (Yak. 13.47)


    May you be illumined by the mighty rags of knowledge and may you not kill the cow, the aditi (Yaju.13.43)

    Do not kill a cow but treat her as Mother. (Yaju.12.32)

    Protect both our species, two-legged and four-legged. Both food and water for their needs supply. May they with us increase in stature and strength. Save us from hurt all our days, O Powers!
    Rig Veda Samhita 10.37.11. VE, 319

    One who partakes of human flesh, the flesh of a horse or of another animal, and deprives others of milk by slaughtering cows, O King, if such a fiend does not desist by other means, then you should not hesitate to punish such a person.
    Rig Veda Samhita, 10.87.16, FS 90

    Peaceful be the earth, peaceful the ether, peaceful heaven, peaceful the waters, peaceful the herbs, peaceful the trees. May all Gods bring me peace. May there be peace through these invocations of peace. With these invocations of peace which appease everything, I render peaceful whatever here is terrible, whatever here is cruel, whatever here is sinful. Let it become auspicious, let everything be beneficial to us.
    Atharva Veda Samhita 10. 191. 4

    Those noble souls who practice meditation and other yogic ways, who are ever careful about all beings, who protect all animals, are the ones who are actually serious about spiritual practices.
    Atharva Veda Samhita 19.48.5. FS, 90

    ReplyDelete
  32. @~rAGU
    ರಾಘು ಅವರೆ, ಎಂಥಾ ಸಂಶೋಧನೇರೀ ನಿಮ್ದು! ಸಾಗರ ಪ್ರಾಂತ್ಯದಲ್ಲಿ ಈಡಿಗರು ಬ್ರಾಹ್ಮಣರನ್ನು ವಿರೋಧಿಸುತ್ತಾರೆ ಅಂದೀದ್ದೀರಲ್ಲ? ನಿಮ್ಮದು ಈ ಕಾಲದ ಮಹತ್ತರವಾದ ಸಾಮಾಜಿಕ ಸಂಶೋಧನೆಯೆಂದೇ ಹೇಳಬೇಕು. ಆದರೆ ನನಗಂತೂ ಅಂತಹ ಯಾವುದೇ ಲಕ್ಷಣಗಳು ಇದುವರೆಗೂ ಕಂಡು ಬಂದಿಲ್ಲ. ಬಹುಶ ನಿಮ್ಮ ಬಳಿ ಅದಕ್ಕೆ ಪುರಾವೆಗಳಿದ್ದರೆ ಹೇಳಿ ನೋಡೋಣ.
    ಇರಲಿ ಈ ಮೂಲಕ ನಾನೂ ಈಡಿಗನೆಂದೂ, ಇಲ್ಲಿ ಮಾಂಸಾಹಾರ ಸಮರ್ಥಿಸುವ ಮೂಲಕ ಬ್ರಾಹ್ಮಣರನ್ನು ವಿರೋಧಿಸುತ್ತಿದ್ದೇನೆಂದೂ ತೀರ್ಪುನೀಡುವಂತಿದೆ ನಿಮ್ಮ ಪ್ರತಿಕ್ರಿಯೆ. ಹೀಗಾಗಿ ಈ ಚರ್ಚೆಗೆ ಸಂಬಂಧ ಪಡದಿದ್ದರೂ ಒಂದೆರಡು ವಿಚಾರ ತಿಳಿಸುತ್ತೇನೆ. ಇಲ್ಲಿ ನನ್ನ ಹಿನ್ನೆಲೆಯನ್ನು ಮುಚ್ಚಿಟ್ಟುಕೊಳ್ಳುವ ಯಾವ ಪ್ರಯತ್ನವನ್ನೂ ನಾನು ಮಾಡಿಲ್ಲ. ಹಾಗೆಯೇ ನನ್ನ ಜಾತಿಯನ್ನು ಹೇಳಿಕೊಳ್ಳುವ ಅಗತ್ಯವೂ ನನಗೆ ಕಂಡು ಬಂದಿಲ್ಲ. ನೀವು ತಿಳಿಸಿರುವಂತೆ ಸಾಗರ ಪ್ರಾಂತ್ಯದ ಈಡಿಗ ಸಂಸ್ಕೃತಿಯ ಭಾಗವಾಗಿಯೇ ನಾನು ಬೆಳೆದಿದ್ದು. ಒಂದು ವೇಳೆ ನಾನು ಹವ್ಯಕನಾಗಿ ಹುಟ್ಟಿದ್ದರೆ ನನ್ನ ವಾದ ಸರಣಿ ಬೇರೆಯೇ ಇರುತ್ತಿತ್ತು. ದಲಿತನಾಗಿದ್ದರೆ ಇನ್ನೂ ಬೇರೆಯದಾಗಿರುತ್ತಿತ್ತು. ನಮ್ಮ ದೇಶದಲ್ಲಿ ಹುಟ್ಟುವ ಪ್ರತಿಯೊಬ್ಬರಿಗೂ ಅವರ ಜಾತಿ ಹಿನ್ನೆಲೆ ಕೆಲಸ ಮಾಡಿಯೇ ತೀರುತ್ತದೆ. ಆದರೆ, ನಮ್ಮ ಕಡೆಯ ಈಡಿಗರು ಹೊಲೆಯರನ್ನು, ಮಾದಿಗರನ್ನು ನಡೆಸಿಕೊಳ್ಳುವುದು ಎಂತಹಾ ಅಮಾನವೀಯತೆ ಎನ್ನುವುದು ನನ್ನ ಅರಿವಿಗೆ ಬಂದಿದೆ. ಬೆಕ್ಕು, ಕೋಳಿ, ನಾಯಿಗಳನ್ನು ಮನೆಯೊಳಕ್ಕೆ ಕರೆದುಕೊಳ್ಳುವ ನಾವು ದಲಿತರನ್ನು ಒಳಕ್ಕೆ ಸೇರಿಸಿಕೊಳ್ಳುವುದಿಲ್ಲ. ನನ್ನ ವೈಯುಕ್ತಿಕ ಮಟ್ಟದಲ್ಲಿ ಅದನ್ನು ಮೀರುವ ಪ್ರಯತ್ನ ನನಗೆ ಬುದ್ದಿ ಬಂದಾಗಿನಿಂದ ನಡೆದಿದೆ. ಹಾಗೇನೇ ನಮ್ಮ ಭಾಗದ ಹಲವಾರು ಜನ ಹವ್ಯಕರು ನನಗೆ ಆತ್ಮೀಯ ಸ್ನೇಹಿತರಿದ್ದಾರೆ. ಅವರೂ ತಮ್ಮ ಜಾತಿಯ ಕಟ್ಟಳೆಗಳನ್ನು ಮೀರಿ ಬದುಕಲು ಇಚ್ಚಿಸುತ್ತಿದ್ದಾರೆ. ಇವರಾರೂ ಕಮ್ಯುನಿಷ್ಟರಲ್ಲ. ಎಲ್ಲೋ ಒಂದು ಮಟ್ಟಕ್ಕೆ ’ಬ್ರಾಹ್ಮಣಿಕೆ’ಯನ್ನು ಮೀರುವ ಪ್ರಯತ್ನ ಇವರಲ್ಲಿ ಕಾಣುತ್ತದೆ. ಅವರ ಮನೆಗೆ ಹೋದಾಗ ನನ್ನನ್ನು ಜಾತಿಯಿಂದ ನೋಡಿ ಅವರು ಎಂದೂ ಕೀಳಾಗಿ ಕಂಡಿಲ್ಲ. ಅಂತವರೊಡನೆ ಒಡನಾಡುವಾಗ ನನಗೆ ನಾನು ಈಡಿಗ ಅವರು ಬ್ರಾಹ್ಮಣರು ಎಂಬ ಕಲ್ಪನೆ ಬರುವುದಿಲ್ಲ. ಅದಕ್ಕೆ ಅವಕಾಶವೂ ಇರುವುದಿಲ್ಲ. ಮನುಷ್ಯರನ್ನು ಮನುಷ್ಯರ ಹಾಗೆ ನೋಡುವವರು ಅವರು. ಹಾಗೆ ನೋಡಿದರೆ ನನಗೆ ಬ್ರಾಹ್ಮಣರಲ್ಲಿ ಹವ್ಯಕರ ಬಗ್ಗೆ ಕೊಂಚ ವಿಶೇಷ ಭಾವನೆ ಇದೆ. ಏಕೆಂದರೆ ಬಹುತೇಕ ಹವ್ಯಕರು ಶ್ರಮಜೀವಿಗಳು. ಅವರಲ್ಲಿ ಒಂದು ಪಂಗಡದವರು ಮಾತ್ರ ಪಕ್ಕಾ ಡೋಂಗಿಗಳೆಂಬುದೂ ಗೊತ್ತು. ಅವರು ಹೇಳುವುದೊಂದು ಮಾಡುವುದೊಂದು. ಇಂತಹವರು ಪಕ್ಕಾ ಜಾತಿವಾದಿಗಳು. ಇಂತಹವರನ್ನು ಕಿಂಡರೆ ನನಗೆ ಅಷ್ಟಕ್ಕಷ್ಟೆ. ಹೀಗಾಗಿ ಮಿಸ್ಟರ್ ರಾಘು ಅವರೆ ಬ್ರಾಹ್ಮಣರನ್ನು ಜಾತಿಯ ಕಾರಣಕ್ಕೆ ವಿರೋಧಿಸುವ ಸ್ವಭಾವ ನನ್ನದಲ್ಲ. ಹಾಗೆ ಮಾಡುವ ಬಗ್ಗೆ ನನಗೆ ವಿರೋಧವಿದೆ.
    ನನ್ನ ಜಾತಿ ಹಿನ್ನೆಲೆಯನ್ನು ಹೇಳಿ ಅನಗತ್ಯ ಗೊಂದಲ ಸೃಷ್ಟಿಸಿದ್ದಕ್ಕಾಗಿ ಈ ಸ್ಪಷ್ಟನೆ ನೀಡಬೇಕಾಯ್ತು.
    ಇನ್ನು ಕೋಸಾಂಬಿ, ಆರ್. ಎಸ್. ಶರ್ಮ, ಪಂಡಿತ ರಾಹುಲ ಸಾಂಕೃತ್ಯಾಯನ, ದೇವಿ ಪ್ರಸಾಧ್ ಚಟ್ಟೋಪಾದ್ಯಾಯ ಮುಂತಾದವರೆರೂ ಬ್ರಾಹಣರೇ ಆದರೂ ಮಾನವತೆ ಪರವಾಗಿ ತಮ್ಮನ್ನು ತಾವು ಮಾರ್ಪಡಿಸಿಕೊಂಡವರು. ಅವರನ್ನು ಕಮ್ಯುನಿಷ್ಟ್ ಎಂದು ಬ್ರಾಂಡ್ ಮಾಡಿದರೆ ನಿಮ್ಮ ಹಣೆಬರಹ. ಇಂತಹವರ ವಿಚಾರಗಳನ್ನು ನನಗೆ ಒಪ್ಪಿಕೊಳ್ಳಲು ನನಗೆ ಅವರು ಬ್ರಾಹ್ಮಣರು ಎನ್ನುವುದಾಗಲೀ, ಅವರು ಕಮ್ಯುನಿಷ್ಟರೆನ್ನುವುದಾಗಲೀ ಕಾರಣವಾಗಿಲ್ಲ. ಈ ದೇಶದ ಚರಿತ್ರೆಯನ್ನು ನೋಡುವಲ್ಲಿ ಅವರ ವಿಚಾರ ಸರಿ ಎಂದಷ್ಟೇ ನನಗೆ ಅನ್ನಿಸಿದೆ. ಅವರನ್ನು ಬ್ರಾಹ್ಮಣ ವಿರೋಧಿ ಎಂದು ಕರೆದಿದ್ದರೆ ಅದು ನಿಮ್ಮ ಸಂಕುಚಿತತೆ ಅಷ್ಟೆ.
    ನೀವು ಹೇಳಿದಂತೆ ನನಗೆ ಯಾವುದೇ ಗೊಂದಲಗಳಿಲ್ಲ. ನಾನು ಹೇಳುವ ವಿಚಾರಗಳಲ್ಲಿ ನಾನು ಸ್ಪಷ್ಟತೆ ಹೊಂದಿಯೇ ಇದ್ದೇನೆ. ಕೆಲವೊಮ್ಮೆ ನಮ್ಮ ವಿಚಾರಗಳು ತಪ್ಪಾಗಬಹುದು. ಅವು ಅರ್ಥವಾದಾಗ ಸರಿ ಮಾಡಿಕೊಳ್ಳುವುದಿದ್ದೇ ಇರುತ್ತೆ. ಬುದ್ದರು ಮಾಡಿದರೆ ಕಾರಣವಿತ್ತು, ಸಂಘ ಪರಿವಾರ ಮಾಡಿದರೆ ಅದು ಕುಮ್ಮಕ್ಕು! ಇದು ಇಬ್ಬಂದಿತನವಲ್ಲವೇ ಅಮತ ಕೇಳಿದ್ದೀರಿ. ಇದಕ್ಕೆ ನನ್ನ ಉತ್ತರ ಖಂಡಿತಾ ಅಲ್ಲ. ಯಾಕೆ ಕೇಳಿ. ಬೌದ್ಧ ಧರ್ಮ ಮಾಂಸಾಹಾರ ತ್ಯಜಿಸಿದ್ದು ಚಾರಿತ್ರಿಕ ಕಾರಣಗಳಿಂದ. ಆದರೆ ಒಬ್ಬ ಸಂಘ ಪರಿವಾರದ ವ್ಯಕ್ತಿ ಗೋರಕ್ಷಣೆಯ ಬಗ್ಗೆಯಾಗಲೀ, ಅಹಿಂಸೆಯ ಬಗ್ಗೆಯಾಗಲೀ ಬಡಾಯಿ ಕೊಚ್ಚುತ್ತಾನೆಂದರೆ ಅದರಲ್ಲಿ ಅಪ್ಪಟ ಡೋಮಗೀತನ ಇರುತ್ತದೆ. ನೋಡಿ ಈ ಚರ್ಚೆಯಲ್ಲಿ ಮಾಂಸಾಹಾರದ ವಿರುದ್ಧವಾಗಿ ಪ್ರತಿಪಾದಿಸಿದಂತಹ ಅಪೂರ್ವ ಅಂತಹವರೂ ಇದ್ದಾರೆ. ಅವರ ಪ್ರಾಮಾಣಿಕತೆ ಬಗ್ಗೆ ನನಗೆ ಗೌರವವಿದೆ. ಹೀಗಾಗಿ ಅವರ ವಿಚಾರವನ್ನೂ ಗೌರವಿಸುತ್ತೇನೆ. ಆದರೆ ಧರ್ಮದ ಹೆಸರಿನಲ್ಲಿ ಹಿಂಸೆಯನ್ನು ಪ್ರತಿಪಾದಿಸುವ ಒಬ್ಬ ಸಂಘಪರಿವಾರದ ವಕ್ತಿಗೆ ಮಾಂಸಾಹಾರವನ್ನು ಪ್ರಾಣಿ ಹಿಂಸೆ, ಅಹಿಂಸೆಗಳ ನೆಲೆಯಲ್ಲಿ ವಿರೋಧಿಸುವ ನೈತಿಕ ಹಕ್ಕಿರುವುದಿಲ್ಲ. ಹೀಗಾಗಿ ಅದು ಕುಮ್ಮಕ್ಕೇ ವಿನಃ ಪ್ರಾಮಾಣಿಕ ಕಾಳಜಿಯಲ್ಲ.
    ಕೊನೆಯದಾಗಿ, ನಾನು ’ಬುದ್ದಿಜೀವಿ’ಯಾಗಲು ಪ್ರಯತ್ನಿಸುತ್ತಿದ್ದೇನೆಂದು ಸುಖಾಸುಮ್ನೆ ಗಂಭೀರವಾದ ಆಪಾದನೆ ಮಾಡಿದ್ದೀರಿ. ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ತಯಾರಾಗಿದ್ದೇನೆ. ನಿಮ್ಮ ಹೆಸರು, ಊರು ತಿಳಿಸಿ.

    --
    Regards,

    Harsha Kugwe

    ReplyDelete
  33. @ಹರ್ಷ ಅವರೆ ವಿಷಯವನ್ನು ವಸ್ತುನಿಷ್ಟವಾಗಿ ಚರ್ಚಿಸದೇ ಘಾಸಿಗೊ೦ಡವರ೦ತೆ ಪ್ರತಿಕ್ರಿಯಿಸಿದ್ದೀರಿ. ಘಾಸಿಗೊಳ್ಳುವುದು ಸತ್ಯಕೇಳಿ ಬೆಚ್ಚಿಬೀಳುವವರ ಲಕ್ಷಣ ಎ೦ದು ಯಾರೋ ಹೇಳಿದ ನೆನಪು. ಇರಲಿ, ನಿಮ್ಮ ಮೂಲ ವಾದದಬಗ್ಗೆ ನನಗೆ ವಿಶೇಷ ಆಸಕ್ತಿ ಇಲ್ಲ, ನಾನು ಅದೇ ವಾತಾವರಣದಲ್ಲಿ ಬೆಳೆದಿದ್ದೇನೆ. ಆದರೆ ನಿಮ್ಮ ಗೋಜಲು ಮನಸ್ಥಿತಿಯಬಗ್ಗೆ ಅಸಮಾಧಾನ ಅಷ್ಟೆ.

    ೧) ಸ೦ಶೋಧನೆ ಬಹಳ ದೂರದಮಾತು. ಶೋಧನೆ ನಮಗೆ ನಿಮಗೆ ಸಧ್ಯ ಸಾಕು. ಈ ವೀಡಿಯೋ ನೋಡಿ: http://www.youtube.com/watch?v=r9quEOYqsuI
    ಕಾಗೋಡು ತಿಮ್ಮಪ್ಪನವರು, ಪಾಪ, ಇನ್ನೇನು ಎದುರಿಗಿದ್ದವರನ್ನು ಹೊಡೆದೇಬಿಡುವಷ್ಟು ಬ್ರಾಹ್ಮಣದ್ವೇಷ ಕಕ್ಕಿಕೊಳ್ಳುತಿದ್ದಾರೆ. ಮಾಲ್ವೆ ಊರಿನ ಹೆಸರು ಕೇಳಿದ್ದೀರೋ? ಬಲ್ಲವರಲ್ಲಿ ಕೇಳಿ ನಿಮಗೆ ಕಥೆಹೇಳಿಯಾರು. ಹಲವು ಉದಾಹರಣೆ ಸಮರ್ಥನೆ ಕೊಡಬಹುದು ಆದರೆ ನನಗೆ ನಿಮ್ಮೆದುರು ಅದನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆ ಕಾಣುವುದಿಲ್ಲ.

    ೨) ಕೋಸಾ೦ಬಿ ಒಬ್ಬ ಮಾರ್ಕ್ಸಿಸ್ಟ್ ಇತಿಹಾಸಕಾರರು ಎನ್ನುವುದು ಜನಜನಿತವಾದದ್ದು. ಕನಿಷ್ಟ ವೀಕಿಪೀಡಿಯಾವನ್ನಾದರು ಓದಿ. ಅವರು ಸ೦ಪೂರ್ಣ ಬಲಪ೦ಥೀಯವಾದದ ವಿರೋಧಿ! ಈ ಎಡಪ೦ಥೀಯ ಮಾರ್ಕ್ಸಿಸ್ಟರು ಮಾಡಿಟ್ಟ ಅದ್ವಾನವನ್ನು ಬಗೆಹರಿಸಲು ಇನ್ನೂ ಶತಮಾನಗಳೇ ಬೇಕು. ನಿಮಗೆ ಪ್ರಾಮಾಣಿಕವಾಗಿ ಅದರಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಅನೇಕ ಅವಕಾಶವಿದೆ.
    ೩) ಶ೦ಕರಾಚಾರ್ಯರ ಹೆಸರು ಕೇಳಿದ್ದೀರೋ ? ಸಸ್ಯಾಹಾರಕ್ಕೂ ಕೆಲವು ಸಮುದಾಯಗಳಿಗೂ ಇರುವ ಸ೦ಬ೦ಧಕ್ಕೂ ಚಾರಿತ್ರಿಕ ಹಿನ್ನೆಲೆ ಇದೆ. ಸ೦ಶೋಧನೆ ಬೇಡ, ಸ್ವಲ್ಪ ಶೋಧನೆ ಮಾಡಿ!
    ೪) ನೀವು ನಿಮ್ಮ ಪ್ರತಿಕ್ರಿಯೆಗಳಲ್ಲೂ ಲೇಖನದಲ್ಲೂ ಅನಗತ್ಯವಾಗಿ ನಿಮ್ಮ ಸಸ್ಯಾಹಾರಿ ವಿರೋಧೀ ಮತ್ತು ಬಲಪ೦ಥೀಯ ವಿರೋಧೀ ಭಾವೆನೆಗಳನ್ನು ಸ್ಪಷ್ಟವಾಗಿ ತೋರ್ಪಡಿಸಿದ್ದೀರಿ. ಅಲ್ಲದೇ ಹ೦ಗಿಸಿ ನುಡಿದಿದ್ದೀರಿ. ಅವನ್ನಾಧರಿಸಿ ನಿಮ್ಮ ಒಲವಿನ ಬಗ್ಗೆ ಊಹೆಮಾಡಬಹುದು. ಇದಕ್ಕೆ ಅಸಹನೆ ಎ೦ಬ ಪದಬಳಸುತ್ತಾರೆ (intolerance). ಎಲ್ಲವನ್ನೂ ಒಪ್ಪದಿರುವ ಸ್ವಾತ೦ತ್ರ್ಯ ಹಕ್ಕು ನಮಗಿದ್ದರೂ ಬೇರೆ ಸಮುದಾಯದ ಮೌಲ್ಯಗಳನ್ನು ಹ೦ಗಿಸುವ ಅಧಿಕಾರ ಯಾರಿಗೂ ಇಲ್ಲ.

    ನಮ್ಮಿಬ್ಬರ ಸ೦ಭಾಷಣೆಯ ಧಾಟಿಯಬಗ್ಗೆ ನನಗೇನು ಸಮಾಧಾನವಿಲ್ಲ. ಏಕೆ೦ದರೆ ನಾನೂ ಬ್ರಾಹ್ಮಣ, ಈಡಿಗ, ವಕ್ಕಲಿಗ, ಮಡಿವಾಳ, ಹೊಲೆಯ, ಮಾದಿಗಾದಿಗಳೊಡನೆ ಆಡಿ ಬೆಳೆದವನೆ. ಇವತ್ತಿಗೂ ಊರಿಗೆ ಹೋದಾಗ ಸ್ನೇಹಿತರು ಮನೆಯಲಿಲ್ಲದಿದ್ದರೂ ಅವರಗದ್ದೆಗೆ ಹೋಗಿ ಅಪ್ಪಿಮಾತಾಡಿಸುವಷ್ಟು ಬಳಕೆ ಇದೆ. ಆದರೆ, ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎನ್ನುವಮೂಲಕ ಸ್ವಲ್ಪ ಅತಿಮಾಡಿದ್ದೀರಿ. ನನ್ನ ಜಾತಕವೇ ಅ೦ತರ್ಜಾಲದಲ್ಲಿದೆ. ನಿಮ್ಮ೦ತೆ ನನ್ನ ಹೆಸರಿನಲ್ಲೂ ನನ್ನ ಊರಿದೆ! ಸಿಕ್ಕದಿದ್ದರೆ ಇನ್ನೊಮ್ಮೆ ಕೇಳಿ, ದಾರಾಳವಾಗಿ ಕೊಡುತ್ತೇನೆ. ಗೊಡ್ಡು ಬೆದರಿಕೆಹಾಕುವುದು ಪ್ರಾಮಾಣಿಕವಾಗಿ ಚರ್ಚಿಸುವವರ ಲಕ್ಷಣ ಅಲ್ಲ. ಅದಕ್ಕೆ ಹೆದರುವನಾಗಿದ್ದರೆ ಈ ರೀತಿ ಪ್ರತಿಕ್ರಿಯಿಸುತ್ತಲೂ ಇರಲಿಲ್ಲ. ನಮ್ಮನಿಮ್ಮ೦ಥವರು ವಿನಾಕಾರಣ ನಮ್ಮ ಶಕ್ತಿಯನ್ನು ಅನುಪಯೋಗೀ ಕಾರ್ಯಗಳಲ್ಲಿ ವಿನಿಯೋಗಿಸಬಾರದು ಎ೦ದು ಬಲ್ಲವರು ಹೇಳಿದ್ದಾರೆ. ನಮಸ್ಕಾರ.

    ರಾಗು ಕಟ್ಟಿನಕೆರೆ

    ReplyDelete
  34. "With great power comes great responsibility" ಎನ್ನುವಂತೆ ಒಂದು ಗಂಭೀರವಾದ ವಿಷಯದ ಬಗ್ಗೆ ಲೇಖನ ಬರೆದರೆ ಅದರ ಬಗ್ಗೆ ಜವಾಬ್ದಾರಿಯ ಅಷ್ಟೇ ಗಂಭೀರವಾಗಿ ಹೊರಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಅಧ್ಯಯನ ಅಗತ್ಯ.
    ಹಿಟ್ಲರ್ ಸಸ್ಯಹಾರಿಯಾಗಿದ್ದನೆಂದು ಸಸ್ಯಹಾರಿಗಳನ್ನೆಲ್ಲಾ ಹಿಟ್ಲರ್‌ಗೆ ಹೋಲಿಸುವುದು, ಯಾರೋ ಕೆಲಸದವರ ಮೇಲೆ ದಬ್ಬಾಳಿಕೆ ನೆಡೆಸಿದವ ಜೈನನಾಗಿದ್ದನೆಂದು ಜೈನರನ್ನೆಲ್ಲಾ ದಬ್ಬಾಳಿಕೆ ನೆಡೆಸುವವರೆಂದು ಬಿಂಬಿಸುವುದು. ಕೊಳೆತ ಮಾವುತಿಂದು ಜಗದ ಮಾವೆಲ್ಲಾ ಕೊಳೆತಿದೆ ಎನ್ನುವಂತಿರುವ ಲೇಖಕರ ವಾದ ಸರಣಿ ಈ ಲೇಖನದ Comments ಮೂಲಕ ದೃಢಪಡುತ್ತದೆ.

    ಸಂಪಾದಕೀಯದ ಗುಣಮಟ್ಟ ಹೀಗಿರಬಾರದಿತ್ತು.

    ನಿಮಗೆ ಪ್ರಕಟಿಸಲು ಲೇಖನಗಳಿಲ್ಲದಿದ್ದಲ್ಲಿ ಸುಮ್ಮನಿದ್ದುಬಿಡಿ.offcourse, ನಿಮ್ಮ ಜನಪ್ರಿಯತೆಗೆ ಇದರಿಂದೇನು ಕುಂದಿಲ್ಲ. ಆದರೆ ಈ ರೀತಿಯ 3 ನೇ ದರ್ಜೆಯ ಲೇಖನಗಳನ್ನು ಪ್ರಕಸಿಸಬೇಡಿ.

    ನಮಸ್ಕಾರಗಳು,
    ಶ್ರುತದೇವ

    ReplyDelete
  35. charche asahya huttisuttide. vikruta vitandavadagalu hesige tarisuttive.sampadakeeya geleyare dayamadi idannu nillisi.
    chandrashekar

    ReplyDelete
  36. @ರಾಘು ಅವರೆ, ನೀವು ಹೇಳಿದ ಮೊದಲೆರಡು ಸಾಲುಗಳು ನಿಮ್ಮ ಈ ಹಿಂದಿನ ಪ್ರತಿಕ್ರೆಯೆಯ ವಿಷಯದಲ್ಲೂ ಅಷ್ಟೇ ಸತ್ಯ. ಅಲ್ಲವೇ? ಚರ್ಚೆಯ ದಾಟಿಯ ಬಗ್ಗೆ ನೀವು ಆಗಲೇ ಯೋಚಿಸಿದ್ದರೆ ಇದು ಹೀಗಾಗುತ್ತಿರಲಿಲ್ಲ ಬಿಡಿ.
    ನನ್ನನ್ನು ಗೋಜಲು ಮನಸ್ಥಿತಿಯಿಂದ ಹೊರತರಲು ಅವಿರತ ಪ್ರಯತ್ನಕ್ಕೆ ಹೇಗೆ ಕೃತಜ್ಞತೆ ಹೇಳಬೇಕೋ ತಿಳಿಯುತ್ತಿಲ್ಲ.
    ೧. ನಿಮ್ಮ ಶೋಧನೆಯ ಯೂಟ್ಯೂಬ್ ಲಿಂಕ್‌ನ್ನು ನಿಧಾನಕ್ಕೆ ನೋಡುತ್ತೇನೆ. ಆದರೆ ತಮ್ಮ ಸ್ವಂತ ಏಳಿಗೆಗಾಗಿ ಜಾತಿಯನ್ನು ಬಳಸಿಕೊಳ್ಳುವ ರಾಜಕಾರಣಿಗಳ ಮಾತುಗಳಿಗೆ ನಾನು ಅಷ್ಟಾಗಿ ಬೆಲೆ ಕೊಡಬಾರದು ಎಂದುಕೊಂಡಿದ್ದೇನೆ. ಬ್ರಾಹ್ಮಣ ದ್ವೇಷದ ಉದಾಹರಣೆಗಳು ನಿಮಗೆ ಸಿಕ್ಕಿರಬಹುದು. ಆದರೆ ನನ್ನ ದೃಷ್ಟಿಯಲ್ಲಿರುವುದು ಎಂದೂ ಬ್ರಾಹ್ಮಣ - ದೀವರಲ್ಲಿ ಜಗಳ ದೊಂಬಿಯಾಗಲೀ ದ್ವೇಷವಾಗಲೀ ಇರದ ನಮ್ಮ ಊರು ಹಾಗೂ ಅಂತಹ ಅನೇಕ ಊರುಗಳು. ನೀವು ಹೇಳಿರುವುದು ನಿಜ ಸಂಗತಿಯಾದರೆ ಅದು ಕಾಳಜಿಯ ವಿಷಯ. ಜಾತಿ - ಜಾತಿಗಳ ಹಾಗೂ ಧರ್ಮ - ಧರ್ಮಗಳ ನಡುವೆ ಅದು ಯಾವುದೇ ಕಾರಣಕ್ಕಿರಲಿ ದ್ವೇಷ, ಕಲಹ, ಸಂಘರ್ಷಗಳೇರ್ಪಡುವುದು ಈ ಬಹುಸಂಸ್ಕೃತೀಯ ಭಾರತದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಏನಂತೀರಿ?. ಅಭಿಪ್ರಾಯ ಬೇಧಗಳು ಮಾತುಕತೆಯಿಂದ ಬಗೆಹರಿಯಬೇಕು.
    ೨. ನಿಮ್ಮ ಸಲಹೆಯಂತೆ ಕೊಸಾಂಬಿ ಬಗ್ಗೆ ತಿಳಿಯಲು ವಿಕಿಪಿಡಿಯಾ ನೋಡಿದೆ. ಅದರಲ್ಲಿ ಹೀಗಿತ್ತು. He is well-known for his work in numismatics and for compiling critical editions of ancient Sanskrit texts. His father, Dharmananda Damodar Kosambi, had studied ancient Indian texts with a particular emphasis on Buddhism and its literature in the Pali language. Damodar Kosambi emulated him by developing a keen interest in his country's ancient history. Kosambi was also a Marxist[1] historian specializing in ancient India who employed the historical materialist approach in his work. He is described as "the patriarch of the Marxist school of Indian historiography".[1].......
    ನೀವು ಹೇಳಿದ್ದು ಸರಿ ರಾಘು. ಅವರು ಮಾರ್ಕ್ಸ್‌ವಾದಿ ಕೂಡಾ ಹೌದಂತೆ!. ಆದರೆ ಏನು ಮಾಡೋಣ. ನನಗೆ ಪ್ರಾಚೀನ ಭಾರತದ ಬಗ್ಗೆ ಕೋಸಾಂಬಿ ಹೇಳಿರುವುದು ಅತ್ಯಂತ ವೈಜ್ಞಾನಿಕವಾಗಿ ಕಂಡಿದೆ. ಯಾರಾದರೂ ಬಲಪಂಥೀಯ ಬರೆದಿದ್ದು ಅಷ್ಟೇ ವೈಜ್ಞಾನಿಕವಾಗಿ ಕಂಡರೆ ನಾನು ಮರುಮಾತಿಲ್ಲದೇ ಒಪ್ಪಿಕೊಳ್ಳುತ್ತೇನೆ. ಸರೀನಾ?. ಕಮ್ಯುನಿಷ್ಟರ ಬಗ್ಗೆ ನಿಮಗೆ ಏನಿದೆಯೋ ಗೊತ್ತಿಲ್ಲ. ನನಗೂ ಸಾವಿರ ಭಿನ್ನಾಭಿಪ್ರಾಯಗಳಿವೆ. ಅದಕ್ಕಿಂತಲೂ ಹೆಚ್ಚು ಬಲಪಂಥೀಯರ ಬಗ್ಗೆ ಇವೆ. ಇವುಗಳ ಬಗ್ಗೆ ಚರ್ಚಿಸಲು ಬೇರೆ ವೇದಿಕೆ ಕಲ್ಪಿಸಲು ಸಂಪಾದಕೀಯದವರನ್ನೇ ಕೇಳೋಣ. ಇದು ವೇದಿಕೆಯಲ್ಲ. ಓಕೆನಾ?
    ೩. ಡಾ. ಬಿ.ಆರ್.ಅಂಬೇಡ್ಕರ್ ಹೆಸರು ಕೇಳಿದೀರೋ?. ಮಾಂಸಾಹಾರಕ್ಕೂ ಕೆಲವು ಸಮುದಾಯಕ್ಕೂ (ವಿಶೇಷವಾಗಿ ಗೋ ಮಾಂಸಕ್ಕೂ) ಇರುವ ಸಂಬಂಧಕ್ಕೂ ಚಾರಿತ್ರಿಕ ಹಿನ್ನೆಲೆ ಇದೆ. ಸಂಶೋಧನೆ ಬೇಡ. ಶೋಧನೆ ಮಾಡಿ. ಲಿಂಕನ್ನೂ ನಾನೇ ಕೊಡುತ್ತೇನೆ. ನೋಡಿ.1. http://www.ambedkar.org/ambcd/39B.Untouchables%20who%20were%20they_why%20they%20became%20PART%20II.htm
    ೪. ನೋಡಿ. ನಿಮ್ಮ ಮಾತನ್ನು ಅಕ್ಷರಶಃ ಒಪ್ಪುತ್ತೇನೆ. ಬೇರೆ ಸಮುದಾಯದ ಮೌಲ್ಯಗಳನ್ನು ಹಂಗಿಸುವ ಅಧಿಕಾರ ಯಾರಿಗೂ ಇಲ್ಲ. ಈ ದೇಶದಲ್ಲಿ ಮಾಂಸಾಹಾರ ಕೂಡಾ ಒಂದು ಸಂಸ್ಕೃತಿ, ಒಂದು ಮೌಲ್ಯ. ಅದರ ಬಗ್ಗೆ ಅಭಿಪ್ರಾಯಬೇಧ ಮಾತ್ರ ಸಾಧ್ಯ. ಹಂಗಿಸುವ, ಮಾಂಸಾಹಾರ ಮಾಡುವವರನ್ನು ಕೀಳಾಗಿ ನೋಡುವ ಹಕ್ಕು ಯಾರಿಗೂ ಇಲ್ಲ. ಇದು ಶತಃಸಿದ್ಧ.
    ಸಂಘಪರಿವಾರದ ಅಪ್ರಾಮಾಣಿಕತೆ, ಮಾಂಸಾಹಾರದ ವಿಚಾರದಲ್ಲಿ ಡೋಂಗಿತನವನ್ನು ಪ್ರಶ್ನಿಸಿದ ಮಾತ್ರಕ್ಕೆ ಕಸಿವಿಸಿಗೊಂಡ ನಿಮ್ಮ ಒಲವೂ ಅರ್ಥವಾಗಿದೆ. ನೀವೇನೂ ಸಹನೆಯಿಂದ ಪ್ರತಿಕ್ರಿಯಿಸಲಿಲ್ಲವಲ್ಲ.


    ನಿಮ್ಮ ಹಿನ್ನೆಲೆ ಹೇಳಿದ್ದೀರಿ ಸಂತೋಷ. ನನ್ನ ಗೊಡ್ಡುಬೆದರಿಕೆ ವರ್ಕೌಟ್ ಆಗಿದೆ. ಡೋಂಟ್ ವರಿ. ನನ್ನ ಮನಸ್ಸು ಬದಲಾಯಿಸಿದ್ದೇನೆ. ನಿಮ್ಮ ಮೇಲೆ ಮಾನನಷ್ಟ ಮೊಕದ್ದಮೆಯಿಲ್ಲ!. be happpy..
    -ಹರ್ಷ ಕುಗ್ವೆ.

    ReplyDelete
  37. ಕುರಿ,ಕೋಳಿ,ಹಂದಿ ಮುಂತಾದ ಪ್ರಾಣಿಗಳನ್ನು ಜನ ಮಾಂಸಕ್ಕಾಗಿಯೇ ಸಾಕುತ್ತಾರೆ.ಉತ್ತಮ ಫಸಲು ಪಡೆಯಬೇಕಾದರೆ ಹೇಗೆ ಬೆಳೆ ಗಿಡಗಳಿಗೆ ಗೊಬ್ಬರ ನೀರು ಪೂರೈಸಬೇಕೋ ಹಾಗೆಯೇ ಒಳ್ಳೆ ಆಹಾರ,ಕಾಳಜಿಯಿಂದ ಸಾಕಿ ಇಂತಹ ಪ್ರಾಣಿಗಳ ತೂಕ ಹೆಚ್ಚುವಂತೆ ನೋಡಿಕೊಳ್ಳುತ್ತಾರೆ..ಮಾಂಸಾಹಾರಿಗಳು ಅಂದರೆ ಕ್ರೂರಿಗಳಲ್ಲ..ಮಾಂಸಕ್ಕಾಗಿ ಸಾಕುವ ಜೀವಗಳನ್ನು ಹರಕೆ ರೂಪದಲ್ಲಿ ಬಲಿ ನೀಡುವ ಸಂಪ್ರದಾಯವೂ ಹಿಂದಿನ ಕಾಲದಿಂದಲೇ ನಡೆದುಕೊಂಡು ಬಂದದ್ದು.ಇದು ಅವರವರ ಭಕುತಿ ನಂಬಿಕೆಗಳಿಗೆ ಬಿಟ್ಟದ್ದು..ಆದರೆ ಪ್ರಾಣಿ ಬಲಿಯ ಹೆಸರಲ್ಲಿ ನಡೆಯುವ, ಜೀವ ತೆಗೆಯುವ ಆ ಸಂದರ್ಭ ನೋಡಿದರೆ ಕರುಳು ಕಿತ್ತಂತಹ ಅನುಭವವಾಗುವುದಂತೂ ನಿಜ..ಅಮಾನುಷಿಕವಾಗಿ ಜೀವಂತ ಕೋಳಿಯ ಕತ್ತು ಕಚ್ಚಿ ಎಳೆದು ರಕ್ತ ಕುಡಿಯುವ ದೈವಗಳನ್ನು ಆವಾಹಿಸಿಕೊಂಡ ಮನುಷ್ಯನಿಗೆ ಕೈ ಮುಗಿಯುತ್ತ ನಿಂತವರಲ್ಲಿ ಭಯವೇ ಭಕ್ತಿ..ಇದು ಜಾತಿ ಬಗ್ಗೆ ಇರುವ ಮೇಲು ಕೀಳು ಹೇಳಿಕೆಗಳಲ್ಲ.ಸಸ್ಯಾಹಾರಿ ಅಥವಾ ಮಾಂಸಾಹಾರಿ ಆಗಿರಲಿ ..ವಿಷಯ ಇಷ್ಟೆ..ಪ್ರಾಣಿಗಳನ್ನು ಕೊಲ್ಲುವಾಗ ಅತಿಯಾಗಿ ಹಿಂಸಿಸದೆ,ತುಂಬ ಹೊತ್ತು ನರಕ ಯಾತನೆ ನೀಡದೆ ಇದ್ದರೆ ಸಾಕು....

    ReplyDelete
  38. ಹೌದು.ಕೆಲವು ದೈವಿಕ ಆಚರಣೆಗಳು ಅತಿರೇಕವಾಗಿದ್ದು ಭೀಕರ ಎನ್ನಿಸುತ್ತವೆ. ಮೈನಡುಗುತ್ತದೆ. ಜಾತ್ರೆಗಳಲ್ಲಿ ಸಿಡಿ ಆಚರಿಸುವುದಂತೂ ಹಿಂಸೆ ಎನಿಸುತ್ತದೆ. ಬೆನ್ನಿಗೆ ಕಬ್ಬಿಣದ ಸರಳನ್ನು ಚುಚ್ಚಿಕೊಂಡು ರಥವನ್ನು ಎಳೆಯುತ್ತಾರೆ. ನೋಡುಗರಿಗೋ ಅದೊಂದು ದೈವಿಕ ಶಕ್ತಿಯ ಪ್ರತೀಕ. ಇದನ್ನೆಲ್ಲಾ ಸಾಮಾಜಿಕ, ಮನೋವೈಜ್ಞಾನಿಕವ಻ಗಿ ಮಾತ್ರ ಅರಿಯಬಹುದೇನೋ? ಪ್ರಾಣಿಬಲಿ ಮಾಡುವಾಗ ಸಹಜ ಮನಸ್ಥಿತಿಯಲ್ಲಿ ಇಂತಹ ಅತಿರೇಕಗಳು ನಡೆಯುವುದಿಲ್ಲ. ಬಲಿ ಪ್ರಾಣಿಗೆ ಹೆಚ್ಚು ಹಿಂಸೆಯಾಗಬಾರದೆನ್ನುವ ಕಾರಣಕ್ಕಾಗಿಯೇ ಒಂದು ನಿಯಮ ಇದೆ ಹಳ್ಳಿಗಳಲ್ಲಿ. ಅದನ್ನು ಕಡಿಯುವಾತ ಅದು ಹೆಚ್ಚು ಹಿಂಸೆ ಅನುಭವಿಸದಂತೆ ಒಂದೇ ಏಟಿಗೆ ಹೊಡೆಯಬೇಕು. ಇಲ್ಲವಾದಲ್ಲಿ ಆತ ಭಾರೀ ದಂಡವನ್ನು ದೇವರಿಗೆ ಕಟ್ಟಬೇಕಾಗುತ್ತದೆ.
    ಶೇಷೇಗೌಡ, ಮಾಳೂರು.

    ReplyDelete