Thursday, September 22, 2011

ಬ್ಲಾಕ್‌ಮೇಲ್ ಪತ್ರಕರ್ತರ ವಿರುದ್ಧ ಮುಧೋಳ ಬಂದ್!


ಏನು ಆಗಬಾರದಿತ್ತೋ ಅದೆಲ್ಲವೂ ಆಗುತ್ತಿದೆ. ಮುಧೋಳದಲ್ಲಿ ಬ್ಲಾಕ್‌ಮೇಲ್ ಪತ್ರಕರ್ತರ ಕಾಟ ತಡೆಯಲಾರದೆ ಅಲ್ಲಿನ ಜನರು ಬಂದ್ ಆಚರಿಸಿದ್ದಾರೆ. ಈ ಸುದ್ದಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ವಿವಾದಾತ್ಮಕ ಸುದ್ದಿಗಳ (ಅದರಲ್ಲೂ ವಿಶೇಷವಾಗಿ ಕೋಮುಭಾವನೆ ಪ್ರಚೋದಿಸುವ ಬರೆಹಗಳು) ಬಗ್ಗೆ ಗಲಾಟೆ, ಬಂದ್ ನಡೆಯುವುದು ಸಾಮಾನ್ಯ. ಆದರೆ ಪೀತ ಪತ್ರಕರ್ತರ ವಿರುದ್ಧ ಜನರು ಊರನ್ನೇ ಬಂದ್ ಮಾಡಿದ ಘಟನೆ ಇತಿಹಾಸದಲ್ಲಿ ಮೊದಲಿರಬೇಕು. ಮುಧೋಳ ಜನರನ್ನು ಕಾಡುತ್ತಿರುವವರು ದಿನಪತ್ರಿಕೆಯವರಲ್ಲ, ಸ್ಥಳೀಯ ವಾರಪತ್ರಿಕೆಗಳು ಎಂಬುದು ಗಮನಾರ್ಹ ಅಂಶ. ಕೆಲ ಪತ್ರಕರ್ತರೂ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಇತ್ತೀಚೆಗೆ ಬ್ಲಾಕ್‌ಮೇಲ್ ಜರ್ನಲಿಸಂ ದಿನಪತ್ರಿಕೆ, ಟಿವಿ ಚಾನಲ್‌ಗಳಿಗೂ ಕಾಲಿಟ್ಟಿರುವುದನ್ನು ಮರೆಯುವಂತಿಲ್ಲ. ಮಾಧ್ಯಮ ಸಮೂಹ ಎಚ್ಚೆತ್ತುಕೊಳ್ಳಲು ಇದು ಸಕಾಲ. ಅಂದಹಾಗೆ ಪ್ರಜಾವಾಣಿ ವರದಿಯ ಕೆಲವು ಅಂಶಗಳು ಈ ಕೆಳಕಂಡಂತಿವೆ.

ಮುಧೋಳ: ಬ್ಲ್ಯಾಕ್‌ಮೇಲ್ ಪತ್ರಿಕೋದ್ಯಮ ಹಾಗೂ ನಕಲಿ ಪತ್ರಕರ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಂಥವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಮಂಗಳವಾರ ನಡೆಸಿದ ಮುಧೋಳ ಬಂದ್ ಸಂಪೂರ್ಣ ಯಶಸ್ವಿಯಾಯಿತು. 
ಪತ್ರಿಕಾರಂಗ ಸಂವಿಧಾನದ ನಾಲ್ಕನೆಯ ಅಂಗವಾಗಿದ್ದು, ಸಮಾಜದಲ್ಲಿ ಪತ್ರಿಕೆಗಳಿಗೆ ಹಾಗೂ ಪತ್ರಕರ್ತರಿಗೆ ಗೌರವದ ಸ್ಥಾನವಿದೆ. ಆದರೆ ಕೆಲವು ನಕಲಿ ಪತ್ರಕರ್ತರಿಂದಾಗಿ ಇಡೀ ಪತ್ರಿಕೋದ್ಯಮಕ್ಕೆ ಕಳಂಕ ಬರುವಂತಾಗಿದೆ. ಪೀತ ಪತ್ರಿಕೋದ್ಯಮಿಗಳು ಮತ್ತು ಪತ್ರಕರ್ತರನ್ನು ನಿಯಂತ್ರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. 
ಪ್ರತಿಭಟನೆ ನಂತರ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ನಂತರ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಕಿಸಾನ ಘಟಕದ ಅಧ್ಯಕ್ಷ ನಂದಕುಮಾರ ಪಾಟೀಲ, ಪತ್ರಿಕೆಗಳ ವಿರುದ್ಧ ತಮ್ಮ ಆಕ್ರೋಶವಿಲ್ಲ. ಕೆಲವು ವಾರ ಪತ್ರಿಕೆಗಳು ಪೀತ ಪತ್ರಿಕೋದ್ಯಮಕ್ಕೆ ಪ್ರಚೋದಿಸುತ್ತಿವೆ. ಅದರಿಂದಾಗಿ ಬ್ಲ್ಯಾಕ್‌ಮೇಲ್ ಪತ್ರಕರ್ತರ ಹಾವಳಿ ಹೆಚ್ಚಾಗಿ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದರು. 
ಪತ್ರಕರ್ತ ಬಾಬುರೆಡ್ಡಿ ತುಂಗಳ ಮಾತನಾಡಿ, ಪತ್ರಕರ್ತರು ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಮಾಹಿತಿ ಹಕ್ಕಿನ ದುರುಪಯೋಗ ಆಗುತ್ತಿದೆ. ನೋಂದಣಿ ಇಲ್ಲದ ಪತ್ರಿಕೆಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು. 
ಜಿಪಂ ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ, ಪ್ರಮುಖರಾದ ನಂದಕುಮಾರ ಪಾಟೀಲ, ಸತೀಶ ಬಂಡಿವಡ್ಡರ, ರಾಚಪ್ಪ ಕರೇಹೊನ್ನ, ಎಸ್.ಆರ್.ನಿರಾಣಿ, ಪುರಸಭೆ ಅಧ್ಯಕ್ಷ ರಾಜು ಪಾಲೋಜಿ, ಪುರಸಭೆ ಸದಸ್ಯರಾದ ಸದಾಶಿವ ಬಾಗೋಡಿ, ಮಾರುತಿ ಪವಾರ, ಪಾಂಡು ಭೋವಿ, ಕಿಶೋರ ಮಸೂರಕರ, ಗಿರಿಮಲ್ಲಪ್ಪ ತೇಲಿ, ಇಬ್ರಾಹಿಂ ಸಾರವಾನ, ಸೋಮಶೇಖರ ಕರೇಹೊನ್ನ, ಮಹಮ್ಮದಸಾಬ ಕೌಜಲಗಿ ಹಾಗೂ ವಿವಿಧ ಸಮಾಜದ ಹಾಗೂ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 
ನಗರದಲ್ಲಿ ಕೆಲಹೊತ್ತು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದ ವರ್ತಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ವಾಹನಗಳ ಸಂಚಾರ ಸ್ಥಗಿತಗೊಂಡಿದ್ದರು.

8 comments:

  1. ನೀಚತನ-ಭ್ರಷ್ಟತನವನ್ನು...ಬ್ಲಾಖ್ ಮೇಲ್ ಗಳನ್ನು ಯಾರು ಮಾಡಿದ್ದಾರೆ ಎಂಬುದಕ್ಕಿಂತ ಹೇಗೆ ಮಾಡಿದ್ದಾರೆಂಬುದೇ ಅತೀ ಮುಖ್ಯ. ಅದರಲ್ಲೂ ಅವರಿವರ ಹುಳುಕುಗಳನ್ನು ಎತ್ತಿತೋರಿಸುವ ಮಂದಿಯೇ ಇಂತಹ ಹೊಲಸು ಮಾಡಿಕೊಂಡರೆ...ನಿಜಕ್ಕೂ ಅಸಹ್ಯ. ಪ್ರತಿಭಟನೆ ಯಶಸ್ವಿಯಾಗಿ ದಾಖಲಾಗಿರುವುದು ಪ್ರಶಂಸನಾರ್ಹ.

    ReplyDelete
  2. ಪತ್ರಕರ್ತರೇ ಇದು ನಿಜಕ್ಕೂ ಅವಮಾನಕರ ಸಂಗತಿ. ಇನ್ನಾದರೂ ಪತ್ರಕರ್ತರು ಎಚ್ಚೆತ್ತುಕೊಳ್ಳಬೇಕು. ಭ್ರಷ್ಟ ಪತ್ರಕರ್ತರ ವಿರುದ್ದ ಸಮರ ಸಾರಬೇಕು.

    ReplyDelete
  3. ಸಂಪಾದಕರೇ, ಶಿವಮೊಗ್ಗ ಪತ್ರಕರ್ತರ KHB ಹಗರಣದ ಬಗ್ಗೆ ಮರೆತುಬಿಟ್ಟೀರಾ...?! ಹೇಗೆ... ಹಗರಣ ನಡೆದಿರುವುದು ನಿಜವೇ? ಅಥವಾ ಇಲ್ಲವೇ? ಎಂಬುವುದರ ಬಗ್ಗೆ ಮಾಹಿತಿ ನೀಡಿ ಸಾರ್.

    ReplyDelete
  4. ಮುಧೋಳದಲ್ಲಿ ನಿಜಕ್ಕೂ ಪ್ರಜ್ಞಾವಂತ, ಜಾಗೃತ ನಾಗರಿಕರಿದ್ದಾರೆ. ಉಳಿದೆಡೆಯಲ್ಲಿ ಯಾವ ವರದಿಗಾರರ ವಿರುದ್ಧ ಹೇಳಿದರೆ ಏನು ತೊಂದರೆಯೋ ಎಂದು ಹೆದರುವವರೇ ಹೆಚ್ಚು. ಉಳಿದೆಡೆಯಲ್ಲೂ ಇಂತಹ ಬಂದ್ ಗಳು ನಡೆದಲ್ಲಿ ಬ್ಲಾಕ ಮೇಲ್ ದಂಧೆಯೂ ಬಂದ್ ಆಗುವುದರಲ್ಲಿ ಸಂದೇಹವೇ ಇಲ್ಲ.

    ReplyDelete
  5. ಮುಧೋಳದ ನಾಗರಿಕರಿಗೆ ಅಭಿನಂದನೆಗಳು.ಹಾಗೆ ಈ ಸುದ್ದಿಯನ್ನು ಪ್ರಕಟಿಸಿದ ಸಂಪಾದಕೀಯಕ್ಕೂ ಧನ್ಯವಾದಗಳು.ಪತ್ರಕರ್ತರು ಪ್ರಶ್ನಾತೀತರು ಎಂಬ ಭ್ರಮೆಯಿಂದ ಇನ್ನಾದರೂ ಹೊರಬರಬೇಕು.ಮುಖ್ಯವಾಗಿ ರಾಜಧಾನಿಯಿಂದ ತಾಲ್ಲೂಕು ಹಂತದವರೆಗೆ ಬೇರೆ ಬೇರೆ ದಂಧೆಗಳನ್ನು ನಡೆಸುವವರು ತಮ್ಮ ಸ್ವಹಿತಾಸಕ್ತಿಗಾಗಿ ಅನಿಯತಕಾಲಿಕಗಳನ್ನು ಪ್ರಕಟಿಸುತ್ತಾ ಬದ್ಧತೆಯಿಂದ ಕೆಲಸ ಮಾಡುವ ಪತ್ರಕರ್ತರಿಗೆ ಬಹುದೊಡ್ಡ ಬೆದರಿಕೆಯಾಗಿ ಪರಿಣಮಿಸಿದ್ದಾರೆ. ಇಂತಹ ಪತ್ರಿಕೆಗಳನ್ನು ಸಂಬಂಧಪಟ್ಟ ಜಿಲ್ಲೆಯ ಅಸಿಸ್ಟೆಂಟ್ ಕಮೀಷನರ್ ಗಳು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು.ಅದಕ್ಕೂ ಮೊದಲು ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆಯೆಂಬಂತೆ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕಾರ್ಯಮರೆತವರನ್ನು ಹುಡುಕಿ ಸದಸ್ಯತ್ವ ರದ್ದುಪಡಿಸಬೇಕು.ಇಷ್ಟಬಂದಾಗ ಪತ್ರಿಕೆಗಳನ್ನು ಪ್ರಕಟಿಸಿ ಪತ್ರಕರ್ತರಾಗಿ ಚಲಾವಣೆಯಾಗುವ ಅವಕಾಶವಾದಿಗಳನ್ನು ನಿರ್ಬಂಧಿಸಬೇಕು. ಆದರೆ ಸಂಖ್ಯಾಬಲದ ಜೊತೆಗೆ ತೋಳುಬಲವನ್ನೂ ನೆಚ್ಚಿಕೊಂಡು ಕಾರ್ಯನಿರತಪತ್ರಕರ್ತರ ಸಂಘದ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಇಂಥಹ ಸೂಕ್ಷ್ಮಗಳು ಅರ್ಥವಾಗುತ್ತವೆಯೇ?

    ReplyDelete
  6. ಬೆಳಗಾವಿ , ಬಿಜಾಪುರ. ಜಿಲ್ಲೆಗಳಲ್ಲಿ... ಇದು ಇನ್ನೂ ಜಾಸ್ತಿ ಇದೆ.... ತುಂಬಾ ಮೊದ್ಲಿಂದ...

    ಹಲವು ವರ್ಷಗಳ ಕೆಳಗೆ.. ನಮ್ಮ ತಂದೆಗೆ.. ಒಬ್ಬ.. ಬೆಳ್ಲಗ್ಗೆ ಆರಕ್ಕೆ.. ಕುಡಿದು ಬಂದು.. ಬೆದರಿಕೆ.. ಹಾಕುತ್ತಿದ್ದ... , ದುಡ್ಡು ಕೊಡು.. ಇಲ್ಲಾ ಅಂದ್ರೆ.. ನಿನ್ನ ಬಗ್ಗೆ ಕೆಟ್ಟಾದಾಗಿ ಬರೀತೀನಿ.. ನೀನೊಬ್ಬ... ಬ್ರಷ್ಟ ಅಧಿಕಾರಿ ಅಂತ.... ಬರೀತೀನಿ ಅಂತ.... ಪತ್ರಿಕೆ ಯ ಹೆಸರು.. ಎಂತೋದೋ ಕ್ರಾಂತಿ ಎಂಬ.. ನೆನಪು..

    ಪೊಲೀಸರಿಗೆ.. ಕರೆ ಮಾಡುವದಾಗಿ.. ಹೇಳಿದಾಗ ಕಾಲ್ಕಿತ್ತ....., ಆನಾಂತರ್, ನ್‌ನ್ನ ತಂದೆ ಮತ್ತು ಅವರ ಕೆಳಗಿನ ಅಧಿಕಾರಿ ಗಳು.. ತೊಂದರೆ ಅನುಬಾವಿಸಬೇಕಾಯ್ತು...

    ಆ ಘಟನೆ.. ನಮ್ಮ್ ತಂದೆ ಮತ್ತು ಕುಟುಂಬಡವರನ್ನೆಲ್ಲ.. ಕಲಕಿ.. ಬಿಟ್ಟಿತು..

    ಕಿರಣ್

    ReplyDelete
  7. ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ.
    ಟೆಲಿ ಮಾದ್ಯಮಗಳಿಗು ಬಿಸಿ ಮುಟ್ಟಿಸುವ ಕೆಲಸ ಆಗಬೇಕು.

    ReplyDelete