Saturday, March 19, 2011

ಮಾಂಸಾಹಾರ, ಶಾಖಾಹಾರ ಕುರಿತು ವಿವೇಕಾನಂದರ ನಿಲುವು...


ಟೀಕೆಗಳಿಗೆ ಗಮನಕೊಡದೆ ನಿನಗಿಷ್ಟ ಬಂದಷ್ಟು ಮೀನು ತೆಗೆದುಕೊ. ದೇಶವೆಲ್ಲಾ ಒಂದೇ ತರಕಾರಿಯಲ್ಲಿ ಜೀವಿಸುವ, ಅಜೀರ್ಣದಿಂದ ನರಳುವ ಬಾಬಾಜಿಗಳಿಂದ ತುಂಬಿಹೋಗಿದೆ. ಸತ್ವಗುಣದ ಚಿಹ್ನೆಯೇ ಇಲ್ಲ. ಬರೇ ತಮಸ್ಸು, ಮೃತ್ಯುವಿನ ಛಾಯೆ. ನಗುಮುಖ, ಅಭಯೋತ್ಸಾಹ, ತೃಪ್ತಿ, ಉತ್ಕಟ ಚಟುವಟಿಕೆ ಇವೆಲ್ಲಾ ಸತ್ವ ಗುಣದ ಪರಿಣಾಮ. ಸೋಮಾರಿತನ, ಆಲಸ್ಯ, ಉತ್ಕಟ ಮೋಹ, ನಿದ್ರೆ ಇವೆಲ್ಲಾ ತಾಮಸ ಚಿಹ್ನೆ..... ಈಗ ರಾಜಸ ಸ್ವಭಾವ ಬಹಳ ಬೇಕಾಗಿದೆ. ನೀನು ಸತ್ವಗುಣಗಳೆಂದು ತಿಳಿದಿರುವವರಲ್ಲಿ ಶೇಕಡಾ ೯೦ ಮಂದಿ ಘೋರ ತಾಮಸದಿಂದ ಆವೃತರಾಗಿದ್ದಾರೆ. ತೀವ್ರವಾದ ರಾಜಸಿಕ ಶಕ್ತಿಯ ಉದ್ದೀಪವಾಗಬೇಕು. ಇಡೀ ದೇಶವೆಲ್ಲಾ ತಮೋಗುಣದಿಂದ ಆಚ್ಛಾದಿತವಾಗಿದೆ. ದೇಶದಾದ್ಯಂತ ಜನರಿಗೆಲ್ಲಾ ಆಹಾರಬೇಕು, ಬಟ್ಟೆ ಬೇಕು, ದೇಶ ಜಾಗೃತಗೊಳ್ಳಬೇಕು. ಚಟುವಟಿಕೆಯಿಂದ ಕೆಲಸ ಮಾಡುವಂತೆ ಪ್ರೇರೇಪಿಸಬೇಕು. ಇಲ್ಲದಿದ್ದಲ್ಲಿ ಅವರು ಮತ್ತಷ್ಟು ಜಡರಾಗಿ ಮರಕಲ್ಲುಗಳಾಗುತ್ತಾರೆ. ಆದ್ದರಿಂದಲೇ ಹೆಚ್ಚು  ಮಾಂಸ ಮೀನು ತಿನ್ನಬೇಕೆಂದು ನಾನು ಹೇಳುವುದು. ೧

ಸಸ್ಯಾಹಾರದ ವಿಷಯದಲ್ಲಿ ನಾನು ಹೇಳುವುದು ಇದು. ಮೊದಲು ನನ್ನ ಗುರುಗಳು (ಶ್ರೀರಾಮಕೃಷ್ಣ ಪರಮಹಂಸರು) ಶಾಖಾಹಾರಿಗಳಾಗಿದ್ದರು. ಆ ಮಹಾಕಾಳಿಗೆ ನೈವೇದ್ಯ ಮಾಡಿದ ಮಾಂಸವನ್ನು ಕೊಟ್ಟರೆ ಅದನ್ನು ಶಿರಕ್ಕೆ ತಾಗಿಸುತ್ತಿದ್ದರು. ಪ್ರಾಣಿಗಳನ್ನು ಕೊಲ್ಲುವುದು ನಿಸ್ಸಂದೇಹವಾಗಿ ಕೆಟ್ಟದ್ದು. ಆದರೆ ರಸಾಯನಶಾಸ್ತ್ರದ ಅಭಿವೃದ್ಧಿಯೊಂದಿಗೆ ಎಲ್ಲಿಯವರೆವಿಗೆ ಸಸ್ಯಾಹಾರವನ್ನು ಮನುಷ್ಯನ ಶರೀರಕ್ಕೆ ಒಗ್ಗುವಂತೆ  ಮಾಡಿಲ್ಲವೋ ಅಲ್ಲಿಯವರೆವಿಗೂ ಮಾಂಸವನ್ನು ತಿನ್ನದೆ ವಿಧಿಯ ಇಲ್ಲ. ಈಗಿನ ವಾತಾವರಣಕ್ಕೆ ಸರಿಯಾಗಿ ಎಲ್ಲಿಯವರೆವಿಗೂ ಮನುಷ್ಯ ರಾಜಸಿಕ (ಚಟುವಟಿಕೆಯ) ಜೀವನವನ್ನು ನಡೆಸಬೇಕೋ, ಅಲ್ಲಿಯವರೆವಿಗೂ ಮಾಂಸಾಹಾರದ ಮೂಲಕವಲ್ಲದೆ ಬೇರೆ ದಾರಿಯಿಲ್ಲ. ಅಶೋಕ ಚಕ್ರವರ್ತಿ ಕತ್ತಿಯ ಬಲದಿಂದ ಲಕ್ಷಾಂತರ ಪ್ರಾಣಿಯ ಬಲಿಯನ್ನೇನೋ ನಿಲ್ಲಿಸಿದನು. ಆದರೆ ಸಾವಿರ ವರ್ಷದ ಗುಲಾಮಗಿರಿ ಅದಕ್ಕಿಂತ ಭಯಂಕರವಲ್ಲವೇ? ಕೆಲವು ಕುರಿಗಳ ಪ್ರಾಣವನ್ನು ಕಾಪಾಡುವುದೋ ಅಥವಾ ಅದರ ಬದಲು ಒಬ್ಬನ ಹೆಂಡತಿ ಮಕ್ಕಳ ಪ್ರಾಣವನ್ನು ಕಾಪಾಡಲು ಅಶಕ್ತನಾಗಿ ಆಹಾರವನ್ನು ತನ್ನ ಮಕ್ಕಳಿಗೋಸುಗವಾಗಿ ಅದನ್ನು ಲೂಟಿ ಮಾಡುವ ದರೋಡೆಕಾರರಿಂದ ತಪ್ಪಿಸುವುದಕ್ಕೆ ಅಶಕ್ತನಾಗುವುದೋ, ಇವೆರಡರಲ್ಲಿ ಯಾವುದು ಘೋರ ಪಾತಕ? ಬೇಕಾದರೆ, ದೈಹಿಕ ಕಷ್ಟದ ಮೂಲಕವಾಗಿ ತಮ್ಮ ಜೀವನೋಪಾಯವನ್ನು ಯಾರು ಸಂಪಾದಿಸುವುದಿಲ್ಲವೋ ಅಂತಹ ಮೇಲಿನವರ್ಗಕ್ಕೆ ಸೇರಿದ ಹತ್ತಾರು ಮಂದಿ ಮಾಂಸಾಹಾರವನ್ನು ಬಿಡಲಿ. ಆದರೆ ಯಾರು ತಮ್ಮ ಆಹಾರವನ್ನು ಹಗಲೂ ರಾತ್ರಿ ಬೆವರು ಸುರಿಸಿ ಸಂಪಾದನೆ ಮಾಡಬೇಕೊ ಅವರ ಮೇಲೆ ಶಾಖಾಹಾರವನ್ನು ಬಲವಂತ ಮಾಡುವುದೇ ನಮ್ಮ ದೇಶದ ಸ್ವಾತಂತ್ರ್ಯ ಹಾನಿಗೆ ಒಂದು ಕಾರಣ. ಒಳ್ಳೆಯ ಮತ್ತು ದೇಹ ಪೋಷಕವಾದ ಆಹಾರ ಏನು ಮಾಡಬಲ್ಲದು ಎಂಬುದಕ್ಕೆ ಜಪಾನೇ ಒಂದು ಉದಾಹರಣೆ. ೨

ಭಾರತದಲ್ಲಿ ಹಿಂದೆ ದನದ ಮಾಂಸ ತಿನ್ನದ ಬ್ರಾಹ್ಮಣ ಬ್ರಾಹ್ಮಣನಾಗಿ ಉಳಿಯುತ್ತಿರಲಿಲ್ಲ. ಸಂನ್ಯಾಸಿ, ರಾಜ, ಮಹಾತ್ಮರು ಮನೆಗೆ ಬಂದರೆ ಗೌರವಾರ್ಥವಾಗಿ ಅತ್ಯುತ್ತಮ ಗೂಳಿಯನ್ನು ಕೊಂದು ಅಡಿಗೆ ಮಾಡುತ್ತಿದ್ದರು ಎಂದು ವೇದದಲ್ಲಿ ನೀನು ಓದುವೆ. ನಮ್ಮದು ಕೃಷಿ ಪ್ರಧಾನ ಜೀವನವಾದ್ದರಿಂದ ಅತ್ಯುತ್ತಮ ಎತ್ತುಗಳನ್ನು ಕೊಂದರೆ ಕಾಲ ಕ್ರಮೇಣ ದನದ ಜಾತಿಯೇ ನಾಶವಾಗುವುದೆಂದು ತಿಳಿದು ಗೋಹತ್ಯೆ ಮಹಾಪಾಪವೆಂದು ಪರಿಗಣಿಸಲು ಪ್ರಾರಂಭಿಸಿದರು. ೩

ಮಾಂಸಾಹಾರವನ್ನು ಸ್ವೀಕರಿಸುವುದು ಒಳ್ಳೆಯದೇ ಕೆಟ್ಟದೇ ಅಥವಾ ಬರೀ ಶಾಖಾಹಾರದ ಮೇಲೆ ಜೀವಿಸಬೇಕೇ, ಮಾಂಸಾಹಾರದಿಂದ ಪ್ರಯೋಜನ ಉಂಟೆ? ಎಂಬುದರ ಮೇಲೆ ಹಲವು ಭಿನ್ನಾಭಿಪ್ರಾಯಗಳಿವೆ.... ರಾಮ, ಕೃಷ್ಣ ಮುಂತಾದವರೆಲ್ಲಾ ಮದ್ಯ ಮಾಂಸವನ್ನು ಸೇವಿಸುತ್ತಿದ್ದರೆಂಬುದನ್ನು ರಾಮಾಯಣ, ಮಹಾಭಾರತದಲ್ಲಿ ನೋಡುತ್ತೇವೆ.

ಸೀತಾಮಾದಾಯ ಬಾಹುಭ್ಯಾಂ ಮಧುಮೈರೇಯಕಂ ಶುಚಿ|
ಪಾಯಯಾಮಾಸ ಕಾಕುತ್ಸ್ಥಃ ಶಚೀಮಿಂದ್ರೋ ಯಥಾಮೃತಮ್
ಮಾಂಸಾನಿ ಚ ಸುಮೃಷ್ಟಾನಿ ವಿವಿಧಾನಿ ಫಲಾನಿ ಚ|
ರಾಮಸಾಭ್ಯವಹಾರಾರ್ಥಂ ಕಿಂಕರಾಸ್ತೂರ್ಣಮಾಹರನ್||
-ರಾಮಾಯಣ, ಉತ್ತರಕಾಂಡ.(೪೨)
(ಶ್ರೀರಾಮ ಸೀತೆಯನ್ನು ಎರಡೂ ಬಾಹುಗಳಿಂದಲೂ ಆಲಂಗಿಸಿ ಶುದ್ಧ ಮೈರೇಯ ಮದ್ಯವನ್ನು, ಇಂದ್ರ ಶಚಿಗೆ ಅಮೃತವನ್ನು ನೀಡುವಂತೆ ನೀಡಿದನು. ಪರಿಚಾರಕರು ಹಲವು ಬಗೆಯ ಮಾಂಸವನ್ನು ಮತ್ತು ಫಲಗಳನ್ನು ಬಡಿಸಿದರು)

ಸುರಾಘಟಸಹಸ್ರೇಣ ಮಾಂಸಭೂತೌದನೇನ ಚ|
ಯಕ್ಷ್ಯೇತ್ವಾಂ ಪ್ರೀಯತಾಂ ದೇವಿ ಪುರೀಂ ಪುನರುಪಾಗತಾ||
-ರಾಮಾಯಣ, ಅಯೋಧ್ಯಕಾಂಡ (೫೨)
(ಮಹಾತಾಯಿ ಗಂಗೆ, ದಯೆತಾಳು. ನಾನು ಹಿಂತಿರುಗಿ ಬರುವಾಗ ಸಾವಿರ ಮದ್ಯದ ಹಂಡೆ, ಬೇಕಾದಷ್ಟು ಮಾಂಸದೊಂದಿಗೆ ಬೇಯಿಸಿದ ಅನ್ನವನ್ನು ನಿನಗೆ ಅರ್ಪಿಸುತ್ತೇನೆ) ಎಂದು ಸೀತಾದೇವಿ ಗಂಗಾನದಿಯನ್ನು ದಾಟುವ ಕಾಲದಲ್ಲಿ ಪ್ರಾರ್ಥಿಸುವಳು.)

ಉಚೌಮಧ್ವಾಸವಕ್ಷೀವಾವುಭೌ ಚಂದನರೂಪಿತೌ|
ಸ್ವಗ್ವನೌವರಸ್ತ್ರೌತೌ ದಿವ್ಯಾಭರಣಭೂಷಿತೌ||
-ಮಹಾಭಾರತ, ಉದ್ಯೋಗಪರ್ವ (ಅಧ್ಯಾಯ ೫೮-೫)
(ನಾನು, ಕೃಷ್ಣಾರ್ಜುನರಿಬ್ಬರೂ ಗಂಧ ಲೇಪಿಸಿಕೊಂಡು ಪುಷ್ಪದಿಂದ ಅಲಂಕೃತರಾಗಿ ಸುಂದರ ವಸ್ತ್ರಗಳನ್ನು ಧರಿಸಿ ಮಧ್ವಾಸವನ್ನು ಸೇವಿಸಿದ್ದುದನ್ನು ಕಂಡೆನು).

ಹಿಂದೂ ಮತ್ತು ಚೀಣಿಯರನ್ನು ನೋಡಿ, ಅವರು ಎಷ್ಟು ಬಡವರಾಗಿರುವರು ಎನ್ನುವರು. ಅವರು ಮಾಂಸ ತಿನ್ನುವುದಿಲ್ಲ. ಅಕ್ಕಿ ಮತ್ತು ಸಿಕ್ಕಿದ ಕೆಲವು ತರಕಾರಿಯ ಮೇಲೆ ಜೀವಿಸುವುದರಿಂದ ಇಂತಹ ದುಸ್ಥಿತಿಯಲ್ಲಿರುವರು. ಹಿಂದೆ ಜಪಾನಿಯರೂ ಅದೇ ಸ್ಥಿತಿಯಲ್ಲಿದ್ದರು. ಆದರೆ ಮಾಂಸಾಹಾರಕ್ಕೆ ಪ್ರಾರಂಭಿಸಿದೊಡೆನೆಯೇ ಅವರ ಚರಿತ್ರೆಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು. ಇಂಡಿಯಾ ಸೈನ್ಯದಲ್ಲಿ ಸುಮಾರು ಒಂದೂವರೆ ಲಕ್ಷ ಭಾರತೀಯರು ಸಿಪಾಯಿಗಳಾಗಿರುವರು. ಅವರಲ್ಲಿ ಬಲಾಢ್ಯರಾದ ಸಿಕ್ಕರು ಮತ್ತು ಗೂರ್ಕರು ಎಂದೂ ಶಾಖಾಹಾರಿಗಳಲ್ಲ. ಯಾರು ಅಧ್ಯಾತ್ಮಿಕ ಜೀವನವನ್ನು ನಡೆಸಬೇಕೆಂದು ಇಚ್ಛಿಸುವರೋ ಅವರಿಗೆ ಶಾಖಾಹಾರ ಒಳ್ಳೆಯದು. ಆದರೆ ಯಾರು ಹಗಲು ರಾತ್ರಿ ಜೀವನದಲ್ಲಿ ದುಡಿಯಬೇಕೋ ಅವರು ಮಾಂಸಹಾರವನ್ನು ಸೇವಿಸಬೇಕು. ಎಲ್ಲಿಯವರೆವಿಗೂ ಸಮಾಜದಲ್ಲಿ ಬಲವಂತನಿಗೆ ಜಯವೆಂಬುದು ಇದೆಯೋ ಅಲ್ಲಿಯವರೆವಿಗೂ ಮಾಂಸಾಹಾರಿಯಾಗಿರಬೇಕು. ಇಲ್ಲದೆ ಇದ್ದರೆ ದುರ್ಬಲರು ಬಲಾಢ್ಯರ ಪಾದದ ಅಡಿಗೆ ಸಿಕ್ಕಿ ನಾಶವಾಗುವುದು. ಎಲ್ಲೋ ಕೆಲವರಿಗೆ ಶಾಖಾಹಾರದಿಂದ ಪ್ರಯೋಜನವನ್ನು ಹೇಳಿದರೆ ಸಾಲದು. ಒಂದು ದೇಶವನ್ನು ಮತ್ತೊಂದು ದೇಶದೊಂದಿಗೆ ಹೋಲಿಸಿ ನಿರ್ಣಯಕ್ಕೆ ಬನ್ನಿ. ೪

೧. ವಿವೇಕಾನಂದರ ಕೃತಿಶ್ರೇಣಿ, ಸಂಪುಟ ೧೦, ಪುಟ: ೨೩೬
೨. ಸಂಪುಟ ೭, ಪುಟ: ೧೨೫
೩. ಸಂಪುಟ ೫, ಪುಟ: ೬೬
೪. ಸಂಪುಟ ೨, ಪುಟ: ೧೪೧-೪೩