Wednesday, March 9, 2011

ಮನಸ್ಸುಗಳೆಲ್ಲ ತಿಳಿಯಾಗಲಿ, ಇದು ನಮ್ಮ ಬಯಕೆ ಮತ್ತು ಸಂಕಲ್ಪ...


ಇದು ಮೀಡಿಯಾ ಸಂಬಂಧಿ ಬ್ಲಾಗ್. ಹೀಗಾಗಿ ಇಲ್ಲಿ ಚರ್ಚೆಯಾಗುವ ವಿಷಯಗಳೆಲ್ಲವೂ ಮೀಡಿಯಾ ಸಂಬಂಧಿಯಾಗೇ ಇರಬೇಕು ಎಂಬುದು ನಮಗೆ ನಾವೇ ವಿಧಿಸಿಕೊಂಡ ಕಟ್ಟಳೆ. ಡಾ.ಎಂ.ಚಿದಾನಂದಮೂರ್ತಿಯವರ ಓದುಗರ ಪತ್ರದ ಕುರಿತ ಆಕ್ಷೇಪಣೆಯೂ ಸಹ ಈ ಮೀಡಿಯಾ ಪರಿಧಿಯೊಳಗೇ ನಾವು ಬರೆದ ಪ್ರತಿಕ್ರಿಯೆಯಾಗಿತ್ತು. ಚಿದಾನಂದಮೂರ್ತಿಯಂಥವರು ಏನನ್ನು ಬರೆದರೂ ಅವರ ಘನತೆ, ಗೌರವದ  ಕಾರಣಕ್ಕಾಗಿ ಪತ್ರಿಕೆಗಳು ಪ್ರಕಟಿಸಿಬಿಡುವ ಸಾಧ್ಯತೆಗಳಿರುತ್ತದೆ. ಗೋರಿಪಾಳ್ಯದ ಕುರಿತ ವರ್ಣನೆ ಯಾವುದೇ ಪತ್ರಿಕೆಯಲ್ಲೂ ಪ್ರಕಟಣೆಗೆ ಯೋಗ್ಯವಾಗಿರಲಿಲ್ಲ ಎಂಬುದು ನಮ್ಮ ನಿಲುವು. ಆದರೆ ಚಿದಾನಂದಮೂರ್ತಿಯವರು ಪ್ರಸ್ತಾಪಿಸಿದ ಮತಾಂತರ ಮತ್ತು ಗೋಹತ್ಯಾನಿಷೇಧದ ಮೂಲ ವಿಷಯವನ್ನು ನೀವು ಚರ್ಚೆಗಿಡಬೇಕಿತ್ತು ಎಂಬುದು ಹಲವರ ಒತ್ತಾಯವಾಗಿತ್ತು. ಹೀಗಾಗಿ ಆ ಒತ್ತಾಯಗಳಿಗೆ ಉತ್ತರರೂಪವಾಗಿ ನೈಜ ಹಿಂದುತ್ವವಾದಿಗಳು, ಹುಸಿ ಹಿಂದುತ್ವವಾದಿಗಳು ಎಂಬ ಲೇಖನ ಪ್ರಕಟಿಸಿದ್ದೆವು.

ಆ ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಬ್ಲಾಗ್‌ನಲ್ಲೂ, ಫೇಸ್‌ಬುಕ್‌ನಲ್ಲೂ ಬಿಸಿಬಿಸಿಯಾದ ವಾಗ್ವಾದ ನಡೆದಿದೆ. ಕೆಲವರಿಗೆ ನಾವು ಬಳಸಿದ ನೈಜ, ಹುಸಿ ಹಿಂದುತ್ವವಾದ ಎಂಬ ಪ್ರಯೋಗವೇ ಅಚ್ಚರಿ ಹುಟ್ಟಿಸಿದೆ. ಕೆಲವರು ಅಕಾರಣವಾಗಿ ಗೊಂದಲ ಸೃಷ್ಟಿಸಿಕೊಂಡಿದ್ದಾರೆ. ಮತ್ತೆ ಕೆಲವರು ನೀವು ಎಷ್ಟು ಧರ್ಮಗ್ರಂಥಗಳನ್ನು ಓದಿದ್ದೀರಿ ಎಂದು ಸವಾಲು ಒಡ್ಡುವ ಧಾಟಿಯಲ್ಲಿ ಮಾತನಾಡಿದ್ದಾರೆ. ವಿವೇಕಾನಂದರು ವಿಶ್ವವೇದಿಕೆಯಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮ ಯಾವುದು ಎನ್ನುವುದರ ಕುರಿತು ಕೆಲವರಿಗೆ ಸ್ಪಷ್ಟ ಕಲ್ಪನೆಗಳು ಇದ್ದಂತಿಲ್ಲ.

ಚರ್ಚೆ ಹೀಗೆ ಅಪೂರ್ಣವಾಗುವುದು ಬೇಡ ಎಂಬುದು ನಮ್ಮ ನಿಲುವು. ಹಾಗಂತ ನಾವಾಗಲಿ ಇಲ್ಲಿ ಪ್ರತಿಕ್ರಿಯಿಸಿದವರಾಗಲಿ ನಮಗನ್ನಿಸಿದ್ದನ್ನು ಬರೆದು ಅಂತಿಮ ಜಡ್ಜ್‌ಮೆಂಟ್ ಕೊಡುವುದೂ ಸರಿಯಲ್ಲ. ಹೀಗಾಗಿ ಈ ಚರ್ಚೆಯನ್ನು ತಾರ್ಕಿಕವಾಗಿ ಕೊನೆಗೊಳಿಸಲು ನಾವು ಸ್ವಾಮಿ ವಿವೇಕಾನಂದರ ಮೊರೆ ಹೋಗುವುದೇ ವಾಸಿ ಎಂದುಕೊಂಡಿದ್ದೇವೆ.

ಸ್ವಾಮಿ ವಿವೇಕಾನಂದರು ವೇದಾಂತವನ್ನು ಒಪ್ಪಿ ಅನುಸರಿಸಿದವರು. ವೇದಾಂತಕ್ಕೆ ಮಾತ್ರ ವಿಶ್ವಧರ್ಮವಾಗುವ ಹಕ್ಕಿದೆ ಎಂದು ವಿವೇಕಾನಂದರು ಬಲವಾಗಿ ನಂಬಿದ್ದರು. ವೇದಾಂತ ವ್ಯಕ್ತಿಯನ್ನು ಬೋಧಿಸುವುದಿಲ್ಲ, ತತ್ವವನ್ನು ಬೋಧಿಸುತ್ತದೆ. ವ್ಯಕ್ತಿಯ ಮೇಲೆ ನಿಂತ ಧರ್ಮಕ್ಕೆ ತತ್ವದ ಮೇಲೆ ನಿಂತ ಧರ್ಮ ಸಾಟಿಯಾಗಲಾರದು ಎಂದು ಅವರು ಹೇಳುತ್ತಿದ್ದರು. ಆದರೆ ಪ್ರತಿಯೊಬ್ಬರೂ ಒಂದೇ ಧರ್ಮಕ್ಕೆ ಸೇರಿ, ಒಂದೇ ಮಾರ್ಗವನ್ನು ಅನುಸರಿಸುವ ದುರ್ದಿನ ಪ್ರಪಂಚಕ್ಕೆ ಬರದಿರಲಿ ಎಂದು ವಿವೇಕಾನಂದರು ಹೇಳಿದ್ದರು. ಹಾಗೇನಾದರೂ ಆದಲ್ಲಿ ಧರ್ಮ ಮತ್ತು ಅಧ್ಯಾತ್ಮಿಕ ಭಾವನೆ ನಾಶವಾಗುವುದು. ವೈವಿಧ್ಯವೇ ಜೀವನದ ರಹಸ್ಯ, ಇದು ಪೂರ್ಣ ನಾಶವಾದರೆ ಸೃಷ್ಟಿಯೇ ನಾಶವಾಗುವುದು ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು.

ವಿವೇಕಾನಂದರು ವೇದಾಂತಕ್ಕೆ ವಿಶ್ವಧರ್ಮವಾಗುವ ಹಕ್ಕಿದೆ ಎಂದು ಹೇಳುತ್ತಲೇ, ಭಾರತದಲ್ಲಿ ಅನುಷ್ಠಾನದಲ್ಲಿದ್ದ ಹಿಂದೂ ಧರ್ಮದ ಹುಳುಕುಗಳ ಕುರಿತು ಚಿಂತಿತರಾಗಿದ್ದರು. ಆ ಹುಳುಕುಗಳು ಇಂದಿಗೂ ಬೇರೆ ಬೇರೆ ಸ್ವರೂಪಗಳಲ್ಲಿ ಮುಂದುವರೆದುಕೊಂಡು ಬಂದಿದೆ ಎಂಬುದು ನೋವಿನ ಸಂಗತಿ. ದೀನದರಿದ್ರರ ಉದ್ಧಾರವಾಗಬೇಕು ಎಂಬುದು ವಿವೇಕಾನಂದರ ತೀವ್ರ ತುಡಿತವಾಗಿತ್ತು. ಈ ಉದ್ಧಾರವು ಗುಡಿ, ಚರ್ಚು, ಮಸೀದಿಗಳಿಂದ ಆಗದು ಎಂಬುದನ್ನು ಅವರು ಅಂದೇ ಸಾರಿದ್ದರು. ಪುರೋಹಿತರು, ಪಾದ್ರಿಗಳು, ಮುಲ್ಲಾಗಳಿಂದ ಎಲ್ಲ ಧರ್ಮಗಳು ಬಿಡುಗಡೆಯಾಗಬೇಕು ಎಂದು ಅವರು ಬಯಸಿದ್ದರು. ಇದನ್ನೇ ಜಡಗೊಂಡ ಧರ್ಮಗಳು ಎಂದು ನಾವು ಹೇಳಿದ್ದು. ಈ ಕಾರಣಕ್ಕಾಗಿಯೇ ಧರ್ಮಗಳು ಪರಿಷ್ಕಾರಗೊಳ್ಳಬೇಕು ಎಂದು ನಾವು ಬರೆದಿದ್ದೆವು.

ಯಾವ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ ಎಂಬ ಕ್ಲೀಶೆಯ ವಾಕ್ಯವೊಂದನ್ನು ನಾವು ಆಗಾಗ ಹೇಳುತ್ತಿರುತ್ತೇವೆ. ಆದರೆ ಅದು ಸಂಪೂರ್ಣ ಸತ್ಯವಲ್ಲ. ಧರ್ಮಗಳು ಬೆಳೆಯುವಾಗ ಅನುಸರಿಸಿದ ಮಾರ್ಗಗಳನ್ನು ಗಮನಿಸಿದರೆ ಇವು ಧರ್ಮಗಳೋ ಅಧರ್ಮಗಳೋ ಎನಿಸುತ್ತದೆ. ವಿವೇಕಾನಂದರು ಈ ಕುರಿತು ಖಚಿತವಾದ ಅಭಿಪ್ರಾಯಗಳನ್ನು ಹೊಂದಿದ್ದರು. ಇಸ್ಲಾಂ ಹಾಗು ಕ್ರಿಶ್ಚಿಯನ್ ಧರ್ಮಗಳು ಹೇಗೆ ಬೆಳೆದವು ಎಂಬುದರ ಕುರಿತು ಅವರು ಸ್ಪಷ್ಟವಾಗಿ, ಕಟುವಾಗಿ ಹೇಳಿದ್ದಾರೆ. ನಮ್ಮ ಧರ್ಮಗ್ರಂಥಗಳು ಪ್ರತ್ಯಕ್ಷವಾಗಲ್ಲದಿದ್ದರೂ ಪರೋಕ್ಷವಾಗಿ ಹಿಂಸೆಯನ್ನು ಪ್ರಚೋದಿಸುತ್ತಲೇ ಬಂದಿವೆ. ಈ ಕಾರಣಗಳಿಂದಲೇ ಬೈಬಲ್, ಕುರಾನ್, ಗೀತೆಗಳು ಇಲ್ಲದ ಕಡೆಗೆ ಮಾನವ ವರ್ಗವನ್ನು ಕೊಂಡೊಯ್ಯಬೇಕಿದೆ ಎಂದು ವಿವೇಕಾನಂದರು ಹೇಳಿದ್ದರು. ಈ ಕಾರಣದಿಂದಲೇ ಚಿಕಾಗೋದಲ್ಲಿ ಅವರು ‘ಸ್ವಮತಾಭಿಮಾನ, ಅನ್ಯಮತದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನ ಈ ಸುಂದರ ಜಗತ್ತನ್ನು ಬಹುಕಾಲದಿಂದ ಆವರಿಸಿಕೊಂಡಿರುವುವು. ಇವು ಜಗತ್ತನ್ನೆಲ್ಲ ಹಿಂಸೆಯಿಂದ ತುಂಬಿಸಿರುವುವು. ಹಲವು ವೇಳೆ ನರರಕ್ತವನ್ನು ತೋಯಿಸಿರುವುವು. ಸಂಸ್ಕೃತಿಯನ್ನು ನಾಶ ಮಾಡಿರುವುವು. ಹಲವು ದೇಶಗಳನ್ನು ನಿರಾಶೆಯ ಕೂಪಕ್ಕೆ ತಳ್ಳಿರುವುವು. ಸಂಸ್ಕೃತಿಯನ್ನು ನಾಶ ಮಾಡಿರುವುವು. ಇಂಥ ಉಗ್ರ ಧಮಾಂಧತೆಯ ದೈತ್ಯರಿಲ್ಲದೇ ಇದ್ದರೆ ಮಾನವ ಜನಾಂಗ ಇಂದಿಗಿಂತಲೂ ಎಷ್ಟೋ ಮುಂದುವರೆದು ಹೋಗಬೇಕಾಗಿತ್ತು. ಎಂದು ಹೇಳಿದ್ದರು.

ಎಲ್ಲ ಧರ್ಮಗಳ ಕುರಿತೂ ವಿವೇಕಾನಂದರು ಮಾತನಾಡಿದ್ದಾರೆ. ಮತಾಂತರ, ಆಹಾರ ಪದ್ಧತಿ, ಅಸ್ಪೃಶ್ಯತೆ, ಶೋಷಣೆ, ಮೂಢನಂಬಿಕೆ, ಭಾಷೆ-ಕಲೆ, ದುರ್ಬಲರ ಅಭಿವೃದ್ಧಿ, ಮೀಸಲಾತಿ ಇತ್ಯಾದಿ ಎಲ್ಲ ವಿಷಯಗಳ ಕುರಿತೂ ತಮ್ಮ ಸ್ಪಷ್ಟ ನಿಲುವುಗಳನ್ನು ಮಂಡಿಸಿದ್ದಾರೆ. ವಿವೇಕಾನಂದರ ಈ ಎಲ್ಲ ವಿಚಾರಗಳನ್ನು ಇನ್ನು ಐದಾರು ಪೋಸ್ಟ್‌ಗಳಲ್ಲಿ ಮಂಡಿಸುತ್ತ ಹೋಗುತ್ತೇವೆ. ಅವು ಎಲ್ಲರಿಗೂ, ಎಲ್ಲ ವಿವಾದಗಳಿಗೂ ಉತ್ತರವಾಗಬಹುದು ಎಂಬುದು ನಮ್ಮ ನಂಬಿಕೆ.

ದಯಮಾಡಿ ಕೆಲವರಲ್ಲಿ ಒಂದು ಮನವಿ. ವಿವೇಕಾನಂದರನ್ನೂ ನಿಂದಿಸುವ ಕೆಲಸವನ್ನು ಯಾರೂ ಮಾಡಬೇಡಿ. ಈಗಾಗಲೇ ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಅಂಥವರನ್ನು ನಿಂದಿಸಿಯಾಗಿದೆ. ವಿವೇಕಾನಂದರ ಕುರಿತೂ ಇಂಥ ಮಾತುಗಳು ಬೇಡ. ನಿಜ, ವಿವೇಕಾನಂದರ ನುಡಿಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಆದರೆ ಅದು ಅನಿವಾರ್ಯ. ಮಹಾತ್ಮರ ನುಡಿಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ನಮ್ಮೆಲ್ಲರಲ್ಲೂ ಬರಲಿ.

ಅಂದಹಾಗೆ ಮುಂದೆ ಪ್ರಕಟವಾಗಲಿರುವ ವಿವೇಕಾನಂದರ ಎಲ್ಲ ಮಾತುಗಳನ್ನು ಮೈಸೂರಿನ ಶ್ರೀರಾಮಕೃಷ್ಣಾಶ್ರಮ ಪ್ರಕಟಿಸಿರುವ ಸ್ವಾಮಿ ವಿವೇಕಾನಂದರ ಕೃತಿ ಶ್ರೇಣಿಯಿಂದ ಆಯ್ದುಕೊಳ್ಳಲಿದ್ದೇವೆ. ಒಟ್ಟು ಹತ್ತು ಸಂಪುಟಗಳ ಕೃತಿಶ್ರೇಣಿಯಿದು. ಇಲ್ಲಿ ಉಲ್ಲೇಖಿಸಿದ ಸಾಲುಗಳು ಯಾವ ಸಂಪುಟದ ಯಾವ ಪುಟದಿಂದ ಆಯ್ದುಕೊಂಡಿದ್ದೇವೆ ಎಂಬುದನ್ನು ದಾಖಲಿಸುತ್ತೇವೆ. ಕುತೂಹಲವಿದ್ದವರು ಪರಿಶೀಲಿಸಬಹುದು.

ವಿವೇಕಾನಂದರನ್ನು ಓದುವ ಮನಸ್ಸುಗಳೆಲ್ಲ ತಿಳಿಯಾಗಲಿ, ಇದು ನಮ್ಮ ಬಯಕೆ ಮತ್ತು ಸಂಕಲ್ಪ.

20 comments:

  1. ಧರ್ಮ ಎನ್ನುವಂಥ ಸಂಘಟಿತ ಎಲ್ಲ ವ್ಯವಸ್ಥೆಗಳೂ ಒಂದಿಲ್ಲೊಂದು ದೋಷಗಳಿಂದ ಕೂಡಿವೆ. ವಿವೇಕಾನಂದರು ವ್ಯಕ್ತಪಡಿಸಿದ ಹಿಂದೂ ಧರ್ಮವೇ ನಿಜವಾದ ಹಿಂದೂ ಧರ್ಮ ಎಂದರೆ, ಪರಧರ್ಮ ಸಹಿಷ್ಣುಗಳಾದ ಎಲ್ಲರೂ (ಮುಸ್ಲಿಂ, ಕ್ರಿಶ್ಚಿಯನ್ ಉದಾರವಾದಿಗಳೆಲ್ಲ ) ಅವರ ಹಿಂದೂ ಧರ್ಮದ ವ್ಯಾಪ್ತಿಗೆ ಬರುತ್ತಾರೆ.

    ReplyDelete
  2. A very good attempt to clarify confusions among so called Hindus. Swami Vivekananda is the right choice to decipher true Hinduism for the benefit of younger generation, majority of which are exposed to corrupt and tainted versions of Hindu philosophy.

    ReplyDelete
  3. Nija kelasavidu!! Manasu thiliyaagali., nanthara kalmasha nirmulavaagali!!

    ReplyDelete
  4. Tolerance is the biggest virtue. That's what Vivekananda preached. E M Forster also said the same in his well-ready essay - Tolerance. M Chidanandamurthy has reached a stage, where he can't tolerate even a mutton stall near his locality. This is highly disturbing. I wish the attempt to publish excerpts from the speeches of Vivekananda prompt at least a few individuals who passed unruly comments in the blog rethink.

    ReplyDelete
  5. "ಈ ಕಾರಣಗಳಿಂದಲೇ ಬೈಬಲ್, ಕುರಾನ್, ಗೀತೆಗಳು ಇಲ್ಲದ ಕಡೆಗೆ ಮಾನವ ವರ್ಗವನ್ನು ಕೊಂಡೊಯ್ಯಬೇಕಿದೆ ಎಂದು ವಿವೇಕಾನಂದರು ಹೇಳಿದ್ದರು".

    I am sure that these lines are not from Swami Vivekananda. May be these lines are quoted in some books written by his follower's. Everything depends on how you perceive the principles. This is we call as "DISTORTION OF MESSAGE"

    I am sure that not only Bible and Quran, any religious books on earth do not quote to follow violence. If they quote,then those are not religious books.
    What do you say for it?

    ReplyDelete
  6. ಬಿರಾದರ್ ಅವರೇ,
    ಅನಗತ್ಯ ಆತುರ ಬೇಡ. ಅದು ನಿಮಗೆ ಶೋಭೆ ತರದು. ನಾವು ಮಾನವ ವರ್ಗವನ್ನು ಎಲ್ಲಿ ವೇದಗಳು, ಬೈಬಲ್, ಕುರಾನ್ ಇಲ್ಲವೋ ಅಲ್ಲಿಗೆ ಕರೆದೊಯ್ಯಬೇಕು ಎಂದು ವಿವೇಕಾನಂದರು ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನು ಮೈಸೂರಿನ ಶ್ರೀ ರಾಮಕೃಷ್ಣಾಶ್ರಮ ಪ್ರಕಟಿಸಿರುವ ವಿವೇಕಾನಂದರ ಕೃತಿ ಶ್ರೇಣಿಯ ಏಳನೇ ಸಂಪುಟದ 244 ಮತ್ತು 245ನೇ ಪುಟಗಳಲ್ಲಿ ನೀವು ಕಾಣಬಹುದು. ದಯಮಾಡಿ ವಿವೇಕಾನಂದರು ಹೀಗೆ ಖಂಡಿತವಾಗಿಯೂ ಮಾತಾಡಿಲ್ಲ ಎಂದು ಲಘುವಾಗಿ ಮಾತನಾಡಬೇಡಿ. ವಿವೇಕಾನಂದರು ಬರೆದ ಪತ್ರಗಳು, ಭಾಷಣಗಳು, ಶಿಷ್ಯರೊಂದಿಗಿನ ಸಂವಾದ ಇತ್ಯಾದಿಗಳನ್ನು ಸೇರಿಸಿ ಈ ಹತ್ತು ಸಂಪುಟಗಳನ್ನು ರೂಪಿಸಲಾಗಿದೆ. ಇದು ವಿವೇಕಾನಂದರ ಕುರಿತಾದ ಅಧಿಕೃತವಾದ ಕೃತಿಗಳು.
    ನಾವು ಇಲ್ಲಿ ಹರಟೆ ಹೊಡೆಯಲು ಇಂಥ ವಿಷಯಗಳನ್ನು ಪ್ರಸ್ತಾಪಿಸುತ್ತಿಲ್ಲ. ದಯಮಾಡಿ ಗಂಭೀರವಾಗಿ ಸಂವಾದದಲ್ಲಿ ಪಾಲ್ಗೊಳ್ಳಿ.

    ReplyDelete
  7. a very good attempt to clear the mist of 'Hinduism' and to differenciate hinduism as a religion and 'Hindutva' as a political stretegy.
    I am a true hindu who believe and worship my gods like Rama, shiva, krishna, etc. But I hate Political Rama of Hindutvavaadis.
    Vishwa, shimoga

    ReplyDelete
  8. ಧರ್ಮದ ಬಗ್ಗೆ ಒಂದು ಹಾಯ್ಕು...
    "ಸ್ವಂತ ಬೆಳಕಿಲ್ಲದ ಚಂದ್ರನ ಬೆಳದಿಂಗಳ ಮುಂದೆ ಸ್ವಯಂಪ್ರಭೆಯ ಸೂರ್ಯನನ್ನೇ ಬಿರುಬಿಸಿಲ ಉರಿಗಣ್ಣನೆಂದು ಬಗೆದ ಮನುಷ್ಯ, ತಾನು ಮಾತ್ರ ಸ್ವಂತಿಕೆಯಿಲ್ಲದೆ ಚಲಿಸಿದ್ದು, ಜ್ವಲಿಸುವ 'ಧರ್ಮ' ಎಂಬ ಪರಂಜ್ಯೋತಿಯ ಕಡೆಗೆ"...

    ReplyDelete
  9. @ Sampadakeeya:

    Even i am not doing timepass by commenting to your articles. I am serious about what i comment.

    "ವಿವೇಕಾನಂದರು ಈ ಕುರಿತು ಖಚಿತವಾದ ಅಭಿಪ್ರಾಯಗಳನ್ನು ಹೊಂದಿದ್ದರು. ಇಸ್ಲಾಂ ಹಾಗು ಕ್ರಿಶ್ಚಿಯನ್ ಧರ್ಮಗಳು ಹೇಗೆ ಬೆಳೆದವು ಎಂಬುದರ ಕುರಿತು ಅವರು ಸ್ಪಷ್ಟವಾಗಿ, ಕಟುವಾಗಿ ಹೇಳಿದ್ದಾರೆ. ನಮ್ಮ ಧರ್ಮಗ್ರಂಥಗಳು ಪ್ರತ್ಯಕ್ಷವಾಗಲ್ಲದಿದ್ದರೂ ಪರೋಕ್ಷವಾಗಿ ಹಿಂಸೆಯನ್ನು ಪ್ರಚೋದಿಸುತ್ತಲೇ ಬಂದಿವೆ. ಈ ಕಾರಣಗಳಿಂದಲೇ ಬೈಬಲ್, ಕುರಾನ್, ಗೀತೆಗಳು ಇಲ್ಲದ ಕಡೆಗೆ ಮಾನವ ವರ್ಗವನ್ನು ಕೊಂಡೊಯ್ಯಬೇಕಿದೆ ಎಂದು ವಿವೇಕಾನಂದರು ಹೇಳಿದ್ದರು"

    This is the original lines at your articles.

    But ನಾವು ಮಾನವ ವರ್ಗವನ್ನು ಎಲ್ಲಿ ವೇದಗಳು, ಬೈಬಲ್, ಕುರಾನ್ ಇಲ್ಲವೋ ಅಲ್ಲಿಗೆ ಕರೆದೊಯ್ಯಬೇಕು ಎಂದು ವಿವೇಕಾನಂದರು ಸ್ಪಷ್ಟವಾಗಿ ಹೇಳಿದ್ದಾರೆ. this is the lines you replied for my comment .


    "ನಮ್ಮ ಧರ್ಮಗ್ರಂಥಗಳು ಪ್ರತ್ಯಕ್ಷವಾಗಲ್ಲದಿದ್ದರೂ ಪರೋಕ್ಷವಾಗಿ ಹಿಂಸೆಯನ್ನು ಪ್ರಚೋದಿಸುತ್ತಲೇ ಬಂದಿವೆ". What does this means ? Does any religious book supports VIOLENCE? How can we believe it ? Why such books are called Religious books if they supports violence?

    ReplyDelete
  10. @ biradar,
    ಬಹುಶಃ ನಿಮ್ಮ ಪ್ರಶ್ನೆಗಳಿಗೆ ವಿವೇಕಾನಂದರ ಮಾತುಗಳು ಉತ್ತರವಾಗಬಹುದು. ಸ್ವಲ್ಪ ನಿರೀಕ್ಷಿಸಿ

    ReplyDelete
  11. nimma prayatna slaghaneeya. adare ondu maatu. Sway vivekanandarannu onde maggulininda nodi vimarshivantaha chali kelavarallide. andare avaravara `vaadakke' anukoolavaaguvantaha vivekana dara helikegalannu uddarisuva ketta chali. Baraguru Ramachandrappanavaru ittichege swamy vivekanandarannu `komuvaadigalinda doora idabeku' endu heliddu nenapu. Ondantu swasta. Aneka `lopadosha'ga naduve vivekanandaru aritu acharisi, prachara padisiddu HINDU DHARMA vannu embudannu charchisuva munna naavellaru nenapidabekada sangati.

    ReplyDelete
  12. Sampadakeeya says there is nothing
    wrong in being pro-hindu and he
    also says we should not follow any
    religion. How can a person saying
    two contradictory things justify
    himself?
    He also wrote in his article that
    Christianity and Islam resorted to
    violence to spread their religion and
    all the religions preach violence
    either directly or indirectly. He
    quotes Swamy Vivekananda to
    justify his statement that we should
    not follow any religion. He forgets
    that Swamy Vivekananda said that
    we should have faith in ourselves,
    the God and religion. He also forgets
    that the core of every religion is
    truth, sympathy and peace.

    ReplyDelete
  13. 'ಮನುಜ ಕುಲಂ ತಾನೊಂದೆ ವಲಂ'ಎಂಬ ಪಂಪನ ವಾಣಿ ಎಂದೆಂದಿಗೂ ಪ್ರಸ್ತುತ.ವೇದ-ಗೀತೆ,ಬೈಬಲ್,ಕುರಾನ್...ಎಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಇದೇ ಪರಮಸತ್ಯವೆಂದು ಪ್ರತಿಪಾದಿಸಿವೆ.ಯಾವ ಧರ್ಮವೂ ಹಿಂಸೆಯನ್ನು ಬಿಂಬಿಸಿಲ್ಲ;ವೈಭವೀಕರಿಸಿಲ್ಲ. ವಿವೇಕವಾಣಿಯೂ ಇದನ್ನೇ ಸ್ಪಷ್ಟಪಡಿ ಸಿದೆ. ಭ್ರಮೆಗಳನ್ನೇ ಸತ್ಯದ ಸಾಧನ ಎಂದು ಅಂದುಕೊಂಡ ಮಂದಿಗೆ 'ನಿಶ್ಚಿತವಾದ ಒಂದು ಧರ್ಮ'ಮುಖ್ಯವಾಗುತ್ತದೆ.ವಿವೇಕಾವಂದರಂತಹ ಜ್ಞಾತಿಗಳಿಗೆ ಮನುಕುಲದ ಏಳಿಗೆ ಪ್ರಮುಖವಾಗುತ್ತದೆ.ನಾಶದತ್ತ ಕೊಂಡೊಯ್ಯುವ ಧರ್ಮಕ್ಕಿಂತ ಮನುಷ್ಯರನ್ನು ಅವನತಿಯಿಂದ ಪಾರುಮಾಡುವುದೇ ಸರಿಯಾದ ನಡೆ ಎಂದು ವಿವೇಕರೇ ಹೇಳಿದ್ದಾರೆ.ಹೀಗಿದ್ದರೂ ನೀವೇಕೆ ವಿವೇಕರ ಮಾತುಗಳಿಗೆ ಹಿಂದುತ್ವದ ಚೌಕಟ್ಟು ತೊಡಿಸಲು ಮುಂದಾಗುತ್ತಿದ್ದೀರಿ...?
    'ವಿವೇಕಾನಂದರು ವಿಶ್ವವೇದಿಕೆಯಲ್ಲಿ ಪ್ರತಿಪಾದಿಸಿದ ಹಿಂದೂ ಧರ್ಮ ಯಾವುದು ಎನ್ನುವುದರ ಕುರಿತು ಕೆಲವರಿಗೆ ಸ್ಪಷ್ಟ ಕಲ್ಪನೆಗಳು ಇದ್ದಂತಿಲ್ಲ.'ಎಂಬ ಸಂಪಾದಕೀಯದ ಮಾತುಗಳ ಉದ್ದೇಶವಾದರೂ ಏನು..?
    ಬಿರಾದಾರ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದೀರಿ,ಇದು ಸಂಪಾದಕೀಯಕ್ಕೆ ಶೋಭೆ ತರುವಂಥದಲ್ಲ.ನಿಮ್ಮ ಹಿಟ್ಸ್ ಲಕ್ಷ ದಾಟುವುದಕ್ಕೆ ನೆರವಾದ ಇಂತಹ ಗೆಳೆಯರಿಗೆ ನೀವು ಬಳಸಿರುವ ಭಾಷೆಗೆ ನನ್ನ ವಿರೋಧವಿದೆ.'ಗಂಭೀರವಾಗಿ ಸಂವಾದದಲ್ಲಿ ಪಾಲ್ಗೊಳ್ಳಿ'ಎಂಬ ನಿಮ್ಮ ಧ್ವನಿಯಲ್ಲಿ ಆದೇಶದ ಛಾಯೆ ಎದ್ದುಕಾಣುತ್ತದೆ.ಗೆಳೆಯರೆ ಪ್ಲೀಸ್, ಇಂಥದ್ದು ಮತ್ತೆ ಮರುಕಳಿಸದಿರಲಿ.
    'ವಿವೇಕಾನಂದರನ್ನೂ ನಿಂದಿಸುವ ಕೆಲಸವನ್ನು ಯಾರೂ ಮಾಡಬೇಡಿ.'ಇದು ಸಂಪಾದಕೀಯದ ಮತ್ತೊಂದು ಕೋರಿಕೆ. Editorial ಅಭಿಪ್ರಾಯ ಮಂಡನೆಯೇ ಹೊರತು,ಹೇರಿಕೆಯಲ್ಲ. ವಿವೇಕರ ಬಗ್ಗೆಯೂ ಯಾರಾದರೂ ಅರ್ಥಪೂರ್ಣವಾಗಿ ಚರ್ಚಿಸಬಲ್ಲವರಿದ್ದರೆ ಏಕಾಗಬಾರದು...ಈ ನೆಲದಲ್ಲಿ ಯಾರೂ ಅತೀತರಿಲ್ಲ ಅಲ್ಲವೇ...
    'ವೇದಾಂತಕ್ಕಿಂತಲೂ ಮನುಷ್ಯತ್ವಕ್ಕೆ ವಿಶ್ವಧರ್ಮವಾಗುವ ಹಕ್ಕಿದೆ'ಇದನ್ನು ಸ್ವಯಂ ಸ್ವಾಮಿ ವಿವೇಕಾನಂದರೂ ಒಪ್ಪಿದ್ದಾರೆ.ನೀವೇ ಹೇಳಿರುವ ಅವರದೇ ಮಾತುಗಳ ಮೂಲಕ ನನ್ನ ಅಭಿಪ್ರಾಯ ಮುಗಿಸುತ್ತೇನೆ-ವಿವೇಕವಾಣಿಯತ್ತ ಕಿವಿಗೊಡಿ-'....‘ಸ್ವಮತಾಭಿಮಾನ, ಅನ್ಯಮತದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನ ಈ ಸುಂದರ ಜಗತ್ತನ್ನು ಬಹುಕಾಲದಿಂದ ಆವರಿಸಿಕೊಂಡಿರುವುವು. ಇವು ಜಗತ್ತನ್ನೆಲ್ಲ ಹಿಂಸೆಯಿಂದ ತುಂಬಿಸಿರುವುವು. ಹಲವು ವೇಳೆ ನರರಕ್ತವನ್ನು ತೋಯಿಸಿರುವುವು. ಸಂಸ್ಕೃತಿಯನ್ನು ನಾಶ ಮಾಡಿರುವುವು. ಹಲವು ದೇಶಗಳನ್ನು ನಿರಾಶೆಯ ಕೂಪಕ್ಕೆ ತಳ್ಳಿರುವುವು. ಸಂಸ್ಕೃತಿಯನ್ನು ನಾಶ ಮಾಡಿರುವುವು. ಇಂಥ ಉಗ್ರ ಧಮಾಂಧತೆಯ ದೈತ್ಯರಿಲ್ಲದೇ ಇದ್ದರೆ ಮಾನವ ಜನಾಂಗ ಇಂದಿಗಿಂತಲೂ ಎಷ್ಟೋ ಮುಂದುವರೆದು ಹೋಗಬೇಕಾಗಿತ್ತು....'
    ಇದಕ್ಕಿಂತ ಮಿಗಿಲಾದ ಮತ್ತೊಂದು ತತ್ವಬೋಧೆ ಅನಗತ್ಯ ಅಲ್ಲವೇ... ಈ ಮಾತು ನಿಜವಾದರೆ ಎಲ್ಲ ಮನಸ್ಸುಗಳೂ ತಿಳಿಗೊಳಗಳಾಗುತ್ತವೆ.ಕೊಳಕು ತನ್ನಿಂತಾನೇ ತೊಳೆದುಹೋಗುತ್ತದೆ.
    ಪ್ರೀತಿಯಿರಲಿ
    ಟಿ.ಗುರುರಾಜ್,ಮೈಸೂರು.

    ReplyDelete
  14. @ ravi sondur

    dude this fellow is completely out of his mind...
    he just sit behind a desk n read some books or what ever the reports...
    n whenever he try to answer someone he's selective. this also smells in most of his posts... for example:

    http://sampadakeeya.blogspot.com/2011/03/blog-post_13.html


    n comments r blocked for this post....

    if something goes wrong (like what happened in shimoga last year after TASLEEMA NASREENS ARTICLE PUBLISHED IN KP) he will be no one. he will never claim his responsibility.

    ReplyDelete
  15. @ ರವಿ ಸೊಂಡೂರ್
    ನಿಮ್ಮದು ವಿತಂಡವಾದ. ಯಾವುದೇ ಧರ್ಮವನ್ನು ಅನುಸರಿಸಬೇಡಿ ಎಂದು ಸಂಪಾದಕೀಯ ಹೇಳೇ ಇಲ್ಲ. ಯಾಕೆ ಈ ಸುಳ್ಳು? ವಿವೇಕಾನಂದರು ಪ್ರತಿಪಾದಿಸಿದ ಹಿಂದೂ ಧರ್ಮವನ್ನು ಅವರು ಒಳ್ಳೆಯದೆಂದು ಹೇಳುತ್ತಿದ್ದಾರೆ. ಅದು ನಿಮಗೆ ಒಪ್ಪಿಗೆಯಾಗದಿದ್ದರೆ ಬಿಡಿ. ಯಾಕೆ ಕನ್ಫ್ಯೂಷನ್?
    @ ಗುರುರಾಜ್
    ವಿವೇಕಾನಂದರ ವಿಚಾರಗಳ ಕುರಿತು ಚರ್ಚೆ ಬೇಡ ಎಂದು ಸಂಪಾದಕೀಯ ಎಲ್ಲಿ ಹೇಳಿದೆ? ನಿಂದಿಸುವುದು ಬೇಡ ಎಂದು ಹೇಳಿದ್ದಾರೆ. ತಪ್ಪಾಗಿ ಯಾಕೆ ಅರ್ಥ ಮಾಡಿಕೊಂಡಿರಿ.
    ಈ ಪೋಸ್ಟ್ ಗೆ ಕಮೆಂಟ್ ಮಾಡಿರುವವರಿಗೆ ಉತ್ತರಗಳು ಸಂಪಾದಕೀಯ ಪ್ರಕಟಿಸುತ್ತಿರುವ ವಿವೇಕಾನಂದ ವಿಚಾರಧಾರೆಗಳ ಲೇಖನಗಳಲ್ಲೇ ಇವೆ.
    ರವಿಶಂಕರ್ ಭಟ್

    ReplyDelete
  16. ಈ ಲೇಖನದ ಮೂಲಕ ತಾವು ಕೊಡುತ್ತಿರುವ ಸ್ಪಷ್ಟನೆ ಯಾರಿಗಾಗಿ ಅಂತ ಅರ್ಥವಾಗುತ್ತಿಲ್ಲ. ಹಿಂದುತ್ವವಾದಿಗಳಿಗಂತೂ ತಾವು ವಿವಕಾನಂದರ ಬಗ್ಗೆ ಹೇಳಿಕೊಡಬೇಕಾದ್ದಿಲ್ಲ. ಯಾಕೆಂದರೆ ವಿವೇಕಾನಂದರ ಸಾಹಿತ್ಯ ಓದಿ ಪ್ರೇರಿತರಾದವರಲ್ಲಿ ಹಿಂದುತ್ವವಾದಿಗಳೂ ಇದ್ದಾರೆ, ಅಲ್ಲದವರೂ ಇದ್ದಾರೆ.
    ವಿವೇಕಾನಂದರು ಈಗಿನ ಹಿಂದೂ ಧರ್ಮದ ಬಗ್ಗೆ ಆಡಿದ ಕಟು ಟೀಕೆಗಳು ನನ್ನಂಥಹವರಿಗೆ ಚಾಟಿಯೇಟಾಗಲಿ ಎಂದು ತಾವು ಲೇಖನ ಮಾಲೆ ಪ್ರಕಟಿಸಲು ಪ್ರಾರಂಭಿಸಿದ್ದೀರಿ ಎಂಬ ಗುಮಾನಿ ನನಗಿದೆ. ಅದು ಸುಳ್ಳಾಗಿರಲಿ. ಒಂದುವೇಳೆ ನಿಜವಾಗಿದ್ದರೂ ನನಗೇನೂ ಬೇಜಾರಿಲ್ಲ ಎಂದು ಹೇಳಲು ಇಷ್ಟಪಡುತ್ತೇನೆ. ಯಾಕೆಂದರೆ ವಿವೇಕಾನಂದರು ಪುರೋಹಿತಶಾಹಿ ಬಗ್ಗೆ ಏನೆಲ್ಲ ಹೇಳಿದ್ದಾರೋ ನಾನು (ಇಲ್ಲಿ ನಾನು ಅಂತ ಹೇಳುತಿರುವುದು ನೀವು ಹಿಂದುತ್ವವಾದಿಗಳು ಎಂದು ಪದೇ ಪದೇ ಜರೆಯುವವರು ಅಂತ ತಿಳಿದುಕೊಳ್ಳಿ) ಅದನ್ನು ಸಂಪೂರ್ಣ ಒಪ್ಪುತ್ತೇನೆ! ನಾನು ಒಪ್ಪುವುದು ದೊಡ್ಡ ವಿಚಾರವೇನಲ್ಲ ನಿಜ. ಆದರೆ ವಿವೇಕಾನಂದರ ವಿಚಾರಗಳಿಂದ ಹಿಂದುತ್ವವಾದಿಗಳಿಗೆ ಏನೇನೂ ತೊಂದರೆಯಾಗುವುದಿಲ್ಲ ಎಂದು ನಿಮಗೆ ಸ್ಪಷ್ಟ ಪಡಿಸುತ್ತಿದ್ದೇನೆ ಅಷ್ಟೆ.
    ನನ್ನ ತಕರಾರಿರುವುದು ಏನಿದ್ದರೂ ತಾವು ವಿವೇಕಾನಂದರ ವಿಚಾರಗಳನ್ನು ತಮಗೆ ಬೇಕಾದಲ್ಲಿ ಮಾತ್ರ ಸೆಲೆಕ್ಟಿವ್ ಆಗಿ ಆರಿಸಿಕೊಳ್ಳುತ್ತೀರಲ್ಲ, ಅದಕ್ಕೆ. ಅಸ್ಪೃಷ್ಯತೆ ಕಟುವಾಗಿ ಟೀಕಿಸಿ, ಪುರೋಹಿತಶಾಹಿಯನ್ನು ಟೀಕಿಸಿ ಇನ್ನು ಏನೇನು ಕುಂದು ಕೊರತೆಗಳಿವೆಯೋ, ತಪ್ಪುಗಳಿವೆಯೋ ಅವನ್ನು ಟೀಕಿಸಿ. ಹಿಂದುತ್ವ ದ ಕಲ್ಪನೆಗಳಲ್ಲಿ ತಪ್ಪುಗಳೇನಿವೆಯೋ ಅದನ್ನೂ ಟೀಕಿಸಿ. ಬೇಡ ಅಂದವರ್ಯಾರು. ಆದರೆ ಟೀಕಿಸುವಾಗ ಸಬ್ಜೆಕ್ಟಿವ್ ಆಗಿ ಟೀಕಿಸಿ. ಆಬ್ಜೆಕ್ಟಿವ್ ಆಗಿ ಅಲ್ಲ. "ಹಿಂದುತ್ವದಿಂದ ಹೀಗೀಗಾಗುತ್ತದೆ" ಎನ್ನುವುದಕ್ಕೂ "ಹಿಂದುತ್ವವಾದಿಗಳೇ ಅಧರ್ಮಿಗಳು, ದುಷ್ಟರು" ಎನ್ನುವುದಕ್ಕೂ ವ್ಯತ್ಯಾಸವಿದೆ. ತಿಳಿಯಿತೇ?
    ವಿವೇಕಾನಂದರ ಬಗ್ಗೆ ಇಷ್ಟೆಲ್ಲ ಹೇಳುವ ತಾವು ಮತಾಂತರವನ್ನು ಸಹಜ ಪ್ರಕ್ರಿಯೆ ಎಂಬಂತೆ ಬಿಂಬಿಸಿರುವುದು ಹೇಗೆ ಎಂದು ನನಗೆ ಅರ್ಥವಾಗುತ್ತಿಲ್ಲ. ಪುರೋಹಿತ ಶಾಹಿಗಳ, ಈಗಿನ ಹಿಂದೂ ಪಧ್ಧತಿಗಳ ಬಗ್ಗೆ ಹೇಗೆ ವಿವೇಕಾನಂದರು ಅಧಿಕಾರವಾಣಿಯಿಂದ ಟೀಕಿಸಿದ್ದರೋ ಹಾಗೆಯೇ ಮತಂತರಿಸುವ ಮಿಶನರಿಗಳನ್ನೂ ಟೀಕಿಸಿದ್ದಾರೆ. ತಾವು ಇವುಗಳಲ್ಲಿ ಮೊದಲನೆಯದ್ದನ್ನು ಮಾತ್ರ ಆರಿಸಿಕೊಂಡು ಎರಡನೆಯದ್ದನ್ನು ಮರೆಯುವ ಜಾಣತನಕ್ಕೇ ನನ್ನದು ವಿರೋಧ.
    ಅದೆಲ್ಲಾ ಇರಲಿ. ತಾವು ಪದೇ ಪದೇ ಬರೆಯುತ್ತಿರುವ ವಿವೇಕಾನಂದರು ತಪಗೈದ ಕನ್ಯಾಕುಮಾರಿಯಲ್ಲಿ ಸಮುದ್ರ ಮಧ್ಯದಲ್ಲಿರುವ ಶಿಲೆ ಮೇಲೆ ಅವರ ಸ್ಮಾರಕವೊಂದನ್ನು ನಿರ್ಮಾಣ ಮಾಡಲು ಕ್ರಿಶ್ಚಿಯನ್ನರು, ಕಾಂಗ್ರೆಸ್ಸಿಗರು ಮತ್ತು ಕಮ್ಯುನಿಸ್ಟರು ಯಾವ ರೀತಿ ತಡೆಯೊಡ್ಡಿದ್ದರು ಎಂದು ತಮಗೆ ತಿಳಿದಿದೆಯೇ? ಆ ಸ್ಮಾರಕ ನಿರ್ಮಿಸಲು ಇನ್ನಿಲ್ಲದ ಕಷ್ಟ ಕೋಟಲೆಗಳನ್ನ ಸಹಿಸಿ, ಕನಗೂ ತಮ್ಮ ಗುರಿ ಸಾಧಿಸಿದ ಏಕನಾಥ ರಾನಡೆ ತಾವು ದಿನನಿತ್ಯ ದ್ವೇಷಿಸುವ ಆರೆಸ್ಸೆಸ್ಸಿನ ಮುಖಂಡರಾಗಿದ್ದರು ಎನ್ನುವುದು ತಮಗೆ ತಿಳಿದಿರಲಿ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲೇಖನ ಓದಬಹುದು : http://www.hindu-blog.com/2010/06/story-behind-construction-of.html

    ReplyDelete
  17. @Ravishankar Bhat: In one of his earlier posts Sampadakeeya said "the religions are not updated" and in this article he wrote "religions preach violence either directly or indirectly". Doesn't it mean that we shouldn't follow such religions or do you interpret it as we have to follow these religions even though they are ridden with many ills? In his previous article he also wrote that there's nothing wrong in being pro-Hindu. The last and the former two statements seem contradictory to me.
    My firm belief is that no religion in the world preaches violence and the core of every religion, be it Hinduism, Christianity, Islam or any other religion is Truth, Sympathy and Peace. If the religions are not practiced in true spirit by the fllowers then we shouldn't blame the religions.

    ReplyDelete
  18. @ Ravisondur,
    ನಿಮ್ಮ ಸಮಸ್ಯೆ ಏನು ಅರ್ಥವಾಗುತ್ತಿಲ್ಲ. ಧರ್ಮಗಳು ಹಿಂಸೆಯನ್ನು ಪ್ರಚೋದಿಸುತ್ತಿವೆ ಎಂದು ಹೇಳಿದಾಕ್ಷಣ ಧರ್ಮವನ್ನು ಅನುಸರಿಸಬೇಡಿ ಎಂದು ಹೇಳಿದಂತಾಗುತ್ತದೆಯೇ? ಮನೆ ಮಗು ಪೋಲಿಯಾದರೆ ಆತನನ್ನು ಆಚೆ ಎಸೆಯಬೇಕೆ? ಪೋಲಿಯಾಗಿರುವ ಮಗುವನ್ನು ಒಳ್ಳೆಯ ದಾರಿಗೆ ತರಬಾರದೆ?
    ನಿಜವಾದ ಹಿಂದುತ್ವ ವಿವೇಕಾನಂದರ ವಾಣಿಯಲ್ಲಿದೆ. ಕಲುಷಿತವಾಗಿರುವುದನ್ನು ಸರಿ ಮಾಡುವ ಕೆಲಸ ಮಾಡಬೇಕಿದೆ. ಅದನ್ನು ಸಂಪಾದಕೀಯದವರು ಹೇಳಲು ಪ್ರಯತ್ನಿಸುತ್ತಿದ್ದಾರೆ. ಇದು ನನ್ನ ಅನಿಸಿಕೆ. ನಿಮಗೆ ಎಲ್ಲ ಧರ್ಮಗಳು ಶಾಂತಿಯನ್ನೇ ಬೋಧಿಸುತ್ತವೆ ಎಂದು ಅನಿಸಿರಬಹುದು. ಆದರೆ ವಿವೇಕಾನಂದರು ಧರ್ಮ ಹಾಗು ಧರ್ಮಗ್ರಂಥಗಳ ಕುರಿತು ಹೇಳಿರುವುದನ್ನೂ ಗಮನಿಸಿ.
    ನಾವು ವಿವೇಕಾನಂದರು ಹೇಳಿದ್ದನ್ನೇ ಒಪ್ಪಿಕೊಳ್ಳುತ್ತೇವೆ.
    ರವಿಶಂಕರ್ ಭಟ್

    ReplyDelete
  19. ಮಹೇಶ್ ರವರೆ,
    ಪ್ರತಿಯೊಬ್ಬರು ತಿಳಿದಿರುವಂತೆ, ಇಂದಿನ ಅಸಮಾನತೆ, ಅಸ್ಪೃಶ್ಯತೆ, ಜಾತಿ ಭೇದ, ಮತಾಂತರ ಪಿಡುಗು ಇವುಗಳಿಗೆ ಮುಖ್ಯ ಕಾರಣ ನಮ್ಮ ಹಿಂದು ಸಮಾಜದ ಒಂದು ಜಾತಿ ವರ್ಗದ ಜನ ಅನ್ನುವುದು ಗೊತ್ತಿರುವ ಸಂಗತಿ. ಆ ಕಾಲದಲ್ಲಿ ಅವರು ಮಾಡಿದ ಅನಾಚಾರಗಳಿಗೆ ನಾವು ಇಂದು ಬೆಲೆ ತೆರುತಿದ್ದೇವೆ. ಸುಮ್ಮನೆ ಬಡಬಡಬಾಯಿಸಿ ನಾವು ಏನೇ ಹಿಂದುತ್ವ ಪ್ರತಿಪಾದಿಸಿದರು ನಮ್ಮಲ್ಲಿರುವ ಜಾತಿಪದ್ದತಿ ಯನ್ನು ಹೋಗಲಾಡಿಸಲು ಸಾಧ್ಯವಾಗುತ್ತಿಲ್ಲ. ಆ ನೋವುಗಳು ಮತ್ತು ಸಂಕಟಗಳು ಅನುಭವಿಸಿದ ಹಿಂದುಳಿದ ವರ್ಗದ ಬಡಜನರಿಗೆ ಮಾತ್ರ ಗೊತ್ತು. ಮೇಲ್ವರ್ಗದ ಜನ ನೂರಾರು ಕಂತೆ ಪುರಾಣಗಳು ಹೇಳಿದರು ಸಹ ಅವರ ಮನಸ್ಸಿನಲ್ಲಿ ಇನ್ನೂ ನೆಲೆಯೂರಿರುವ ಆ ಒಂದು ಅಹಂ ಇನ್ನು ಕೊನೆಗೊಂಡಿಲ್ಲ. ಆ ಜನರು ಇಂದು ಹಿಂದುತ್ವದ ಅಡಿಯಲಲ್ಲಿ ಮತ್ತೆ ಶೋಷಣೆ ಮಾಡಲು ತಯಾರಾಗುತಿದ್ದಾರೆ. ಶತಮಾನಗಳು ಅಳಿದರು ಸಹ ಬದಲಾವಣೆ ಇನ್ನು ಅಸಾಧ್ಯ. ಜತೆಗೆ ವೈಧಿಕ ಆಚರಣೆಯೆ ಹಿಂದೂ ಪದ್ದತಿ ಅನ್ನುವುದನ್ನು ಬಿಂಬಿಸುವದನ್ನು ನಾವು ಮನಗಾಣುತಿದ್ದೇವೆ.
    ಪೇಜಾವರ ಶ್ರೀಗಳು ಅಷ್ಟೊಂದು ವಿಶಾಲ ಮನೋಭಾವದವರಾಗಿದ್ದರೆ, ಸಹಭೋಜನ ಪದ್ದತಿ ಗೆ ಅನುವು ಮಾಡಿಕೊಡುತಿದ್ದರು, ಆದರೆ ಸಹಭೋಜನ ಸಲ್ಲದು ಅನ್ನುವುದಕ್ಕೆ ಒಂದು ದೊಡ್ಡ ಸಮರ್ಥನೆ ಮಾಡಿದ್ದಾರೆ. ಹೀಗಿರಬೇಕಾದರೆ ಇಲ್ಲಿ ಸಲ್ಲದ ಜನ ಬೇರೆ ಧರ್ಮದಲ್ಲಿ ಅವರಿಗೆ ಮನ್ನಣೆ ಸಿಗಬಹುದು ಅನ್ನುವ ಆಶಾಭಾವನೆಯಿಂದ ಮತಾಂತರಕ್ಕೆ ಒಳಗಾಗಿರುವುದು ಕಟು ವಾಸ್ತವ. ಮೊದಲು ನಾವು ಏನು ಮಾಡುತಿದ್ದೇವೆ ಅನ್ನುವುದನ್ನು ವಿಮರ್ಶಿಸಿ ನಂತರ ಬೇರೆಯವರ ತಪ್ಪುಗಳನ್ನು ಎತ್ತಿ ತೋರಿಸುವುದು ದೊಡ್ಡಗುಣವಲ್ಲವೆ. ಮುಸ್ಲಿಮರಿಗೆ ಹಾಗು ಕ್ರಿಶ್ಚಿಯನ್ ಜನಾಂಗದವರೆಗೆ ಇರುವ ಧರ್ಮ ಪ್ರಚಾರದ ಹಸಿವು ಹಾಗು ಸಂಖ್ಯೆ ಯನ್ನು ವಿಸ್ತರಿಸಬೇಕು ಎನ್ನುವ ಆ ಹಪಾಹಪಿ ಗುಣ ನಮ್ಮ ಹಿಂದು ಧರ್ಮದ ಯಾವ ಜಾತಿಯವ್ರಿಗೆ ಇದೆ? ನಮ್ಮ ಜಾತಿಯ ಹೆಣ್ಣು ಮಕ್ಕಳು ಹಾಗು ಗಂಡುಗಳು ಕೇವಲ ನಮ್ಮಜಾತಿಯಲ್ಲಿಯೆ ಮದುವೆ ಯಾಗಬೇಕು ಅನ್ನುವ ಹಟ ಇರುವಾಗ, ಜಾತಿ ಹೇಗೆ ಬೆಳೆಯುತ್ತದೆ ಹಾಗು ಧರ್ಮ ಹೇಗೆ ಬೆಳೆಯುತ್ತದೆ. ಆ ಚೌಕಟ್ಟಿ ನಿಂದ ಹೊರಗೆ ಬಂದರೆ ಬಹುಶ ಸಾಧ್ಯವಾಗಬಹುದು ಎನೋ? ಅತಿ ಶೀಘ್ರವಾಗಿ ಬೆಳೆಯುತ್ತಿರುವ ಮುಸ್ಲಿಮ್ ಧರ್ಮ ಆ ಚೌಕಟ್ಟಿನಿಂದ ಹೊರಬರಲು ಪ್ರಯತ್ನಿಸುತ್ತಿದೆ. ಕೇವಲ ನಾವು ಹಿಂದುತ್ವ ಪ್ರತಿಪಾದಿಸಿದರೆ ಪ್ರಯೋಜನ ವಾಗದು. ಎಲ್ಲ ಸಮುದಾಯದವರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಮನೋಭಾವ ವಿದ್ದರೆ ಸಾಧ್ಯವಾಗುವ ಅವಕಾಶಗಳು ಇವೆ.
    --
    ಸುಂದರ್

    ReplyDelete
  20. ಸುಂದರ್ ನಿಮ್ಮ ಅಭಿಪ್ರಾಯಕ್ಕೆ ನನ್ನದೂ ಸಹಮತವಿದೆ. ಆದರೆ ಹಿಂದುತ್ವದ ಅಡಿಯಲ್ಲಿ ಮತ್ತೆ ಶೋಷಣೆ ನಡೆಯುತ್ತಿದೆ ಎನ್ನುವುದು ಸರಿಯಲ್ಲವೇನೋ. ಅಂದು ಶೋಷಣೆ ಮಾಡುತ್ತಿದ್ದವರೇ ಇಂದಿಗೂ ಮಾಡುತ್ತಿದ್ದಾರೆ ಅಥವಾ ಮಾಡುವ ಮನಸ್ಸು ಹೊಂದಿದ್ದಾರೆ. ಈಗಿನ ಸಾಮಾಜಿಕ ಕಾರಣಗಳಿಂದಾಗಿ ಅವರಿಗೆ ಅದು ಅಸಾಧ್ಯವಾಗದಿರಬಹುದು,ಆದರೆ ಆ ಮನಸ್ಥಿತಿಯನ್ನಂತೂ ಹೊಂದಿದ್ದಾರೆ ಎನ್ನುವುದರಲ್ಲಿ ಸಂಶಯವಿಲ್ಲ.

    ಜೊತೆಗೆ ವೈದಿಕ ಆಚರಣೆ ಎಂದು ನಾವು ಯಾವುದನ್ನು ಈಗ ಕರೆಯುತ್ತಿದ್ದೇವೆಯೋ, ಅವು ನಿಜವಾಗಿಯೂ ವೈದಿಕ ಹೌದೇ ಎಂದು ನಾವು ಪ್ರಶ್ನಿಸಿಕೊಂಡಿದ್ದೇವೆಯೇ? ಪ್ರಶ್ನಿಸಿಕೊಂಡರೆ ಉತ್ತರ ಸಿಗಬಹುದು. ಹೆಚ್ಚಿನ ಮಾಹಿತಿಗೆ ಈ ಬ್ಲಾಗು ಓದಿ :
    http://vedasudhe.blogspot.com

    ReplyDelete