Sunday, May 8, 2011

ಮೀಡಿಯಾ ಮನೆಗಳಲ್ಲಿ ಮತ್ತೊಂದು ಸುತ್ತು.. ನಾವು ಸ್ವಲ್ಪ ಸುಸ್ತು!

ಬಹಳ ದಿನಗಳಾಯ್ತು, ಮೀಡಿಯಾ ಮನೆಗಳ ಅಪ್‌ಡೇಟ್ಸ್ ಹೇಳದೆ. ಸಾಕಷ್ಟು ವಿದ್ಯಮಾನಗಳು ನಡೆದಿವೆ. ಮೊದಲನೆಯದು ಪ್ರಜಾವಾಣಿಯಲ್ಲಿ ಆಗಿರುವ ಬದಲಾವಣೆ. ಗೋಪಾಲ ಹೆಗಡೆಯವರು ಮೇ.೧ರಂದು ಪ್ರಜಾವಾಣಿಯ ಸಹ ಸಂಪಾದಕ (ಅಸೋಸಿಯೇಟಿವ್ ಎಡಿಟರ್) ಸ್ಥಾನಕ್ಕೇರಿದ್ದಾರೆ. ಪ್ರಜಾವಾಣಿಯಲ್ಲಿ ಈ ಸ್ಥಾನವೇ ಮುಖ್ಯ. ಸಂಪಾದಕ ಕೆ.ಎನ್.ಶಾಂತಕುಮಾರ್ ಅವರ ನಂತರ ಪತ್ರಿಕೆಯ ನೀತಿ ನಿರೂಪಣೆಯ ಜವಾಬ್ದಾರಿ ಇರುವ ಹುದ್ದೆಯಿದು. ಇದುವರೆಗೆ ಆ ಸ್ಥಾನದಲ್ಲಿದ್ದವರು ಪದ್ಮರಾಜ ದಂಡಾವತಿ. ಈಗ ಅವರು ಕಾರ‍್ಯನಿರ್ವಾಹಕ ಸಂಪಾದಕರ ಸ್ಥಾನಕ್ಕೆ ಏರಿದ್ದಾರೆ. ಸಹ ಸಂಪಾದಕರಾದವರು ಬದಲಾದಾಗ ಅವರ ಸೇವಾವಧಿಯಿನ್ನೂ ಬಾಕಿ ಇದ್ದರೆ ಈ ಸ್ಥಾನ ನೀಡಲಾಗುತ್ತದೆ. ಅದು ಆಡಳಿತಕ್ಕೆ ಸಂಬಂಧಿಸಿದ ಹುದ್ದೆ.

ಗೋಪಾಲ ಹೆಗಡೆ
ಗೋಪಾಲ ಹೆಗಡೆಯವರು ಈ ಹುದ್ದೆಗೆ ಬರುವ ವಿಷಯವನ್ನು ಸೂಕ್ಷ್ಮವಾಗಿ ಹಿಂದೆಯೇ ನಾವು ಬರೆದಿದ್ದೆವು. ಗೋಪಾಲ ಹೆಗಡೆ ಕ್ರೀಡಾ ವರದಿಗಾರರಾಗಿ ಹೆಸರು ಮಾಡಿದವರು. ಟಿವಿಗಳು ಇಲ್ಲದ ಕಾಲದಲ್ಲಿ ಕ್ರಿಕೆಟ್ ಇತ್ಯಾದಿ ಕ್ರೀಡೆಗಳು ನಡೆಯುವ ಜಾಗಕ್ಕೆ ಹೋಗಿ ವರದಿ ಮಾಡಿದವರು. ಆ ಕಾಲಕ್ಕೆ ನಂ.೧ ಕ್ರೀಡಾ ವರದಿಗಾರೆಂದು ಹೆಸರಾದವರು ಹೆಗಡೆ. ಈಗ ಹೊಸ ಹುದ್ದೆ ಏರುವುದಕ್ಕೂ ಮುನ್ನ ಅವರು ಹುಬ್ಬಳ್ಳಿಯಲ್ಲಿದ್ದರು, ಸ್ಥಾನಿಕ ಸಂಪಾದಕರಾಗಿ.

ಗೋಪಾಲ ಹೆಗಡೆಯವರಿಗೆ ಇನ್ನು ಎರಡು ವರ್ಷ ಸೇವಾವಧಿ ಇರಬಹುದು. ಬಹುತೇಕ ಅಲ್ಲಿಯವರೆಗೆ ಅವರು ಪ್ರಜಾವಾಣಿಯ ಈ ಪ್ರತಿಷ್ಠಿತ ಹುದ್ದೆಯಲ್ಲಿರುತ್ತಾರೆ. ಪ್ರಜಾವಾಣಿಯ ವೈಚಾರಿಕ ಪರಂಪರೆಯನ್ನು, ಜನಪರ ಕಾಳಜಿಗಳನ್ನು, ನೊಂದವರ-ಬಡವರ ಪರವಾದ ನಿಲುವುಗಳನ್ನು ಗೋಪಾಲ ಹೆಗಡೆಯವರು ಕಾದಿಟ್ಟುಕೊಂಡು ಹೋಗಲಿ ಎಂದು ಹಾರೈಸೋಣ.

ಈಗ ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥರಾಗಿ ಎಂ.ನಾಗರಾಜು ನೇಮಕಗೊಂಡಿದ್ದಾರೆ. ನಾಗರಾಜು ಪ್ರಜಾವಾಣಿಯ ಮುಖ್ಯವರದಿಗಾರರಾಗಿಯೂ ಕೆಲಸ ಮಾಡಿದ್ದರು. ಹಲವು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವವೂ ಇದೆ. ಬೆಂಗಳೂರನ್ನು ಬಿಟ್ಟರೆ ಪ್ರಜಾವಾಣಿಗೆ ಹುಬ್ಬಳ್ಳಿ ಬಹುಮುಖ್ಯ ಕೇಂದ್ರ. ಹೊಸ ಸವಾಲನ್ನು ಅವರು ಸುಲಭವಾಗಿ ನಿರ್ವಹಿಸುವ ವಿಶ್ವಾಸ ಅವರನ್ನು ಬಲ್ಲವರಿಗೆ ಇದೆ.
ಕೆ.ವಿ.ಪ್ರಭಾಕರ್

ಕನ್ನಡಪ್ರಭದಲ್ಲಿ ಮತ್ತೊಂದು ಮಹತ್ವದ ಬದಲಾವಣೆಯಾಗಿದೆ. ಕೆಲದಿನಗಳ ಹಿಂದೆ ಮುಖ್ಯ ವರದಿಗಾರರಾಗಿ ಕೆ.ವಿ.ಪ್ರಭಾಕರ್ ನೇಮಕಗೊಂಡಿದ್ದಾರೆ. ಪ್ರಭಾಕರ್ ಪ್ರತಿಭಾವಂತರು. ರಾಜಕೀಯ ವರದಿಗಾರಿಕೆಯಲ್ಲಿ ಅನುಭವವುಳ್ಳವರು. ಈ ಹುದ್ದೆಗೆ ಸಮರ್ಥರು.

ಈ ಹುದ್ದೆಯಲ್ಲಿದ್ದ ರೇಣುಕಾ ಪ್ರಸಾದ್ ಹಾಡ್ಯ ಅವರನ್ನು ದಿಲ್ಲಿ ವರದಿಗಾರರನ್ನಾಗಿ ನೇಮಿಸುತ್ತಿರುವ ಕುರಿತು ಮಾಹಿತಿಯಿದೆ. ಪ್ರತಿ ಪತ್ರಕರ್ತನೂ ಪ್ರತಿಷ್ಠಿತ ಪತ್ರಿಕೆಗಳ ದಿಲ್ಲಿ ವರದಿಗಾರರಾಗಿ ಕೆಲಸ ಮಾಡಬೇಕು ಎಂದು ಕನಸು ಕಾಣುತ್ತಾರೆ. ಹಾಡ್ಯ ಅವರಿಗೆ ಇದು ಒದಗಿ ಬಂದಿದೆ. ಆ ಸಾಮರ್ಥ್ಯವೂ ಅವರಿಗಿದೆ. ಅವರ ಪತ್ನಿಯೂ ಪತ್ರಕರ್ತೆ. ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಾರೆ. ದಿಲ್ಲಿಗೆ ಹೋಗುತ್ತಾರೋ ಇಲ್ಲವೋ ಎಂಬ ಅನುಮಾನವಿದೆ.

ಹೊಸ ಹುದ್ದೆಗಳಿಗೆ ಹೋಗುತ್ತಿರುವ ಎಲ್ಲರಿಗೂ ಶುಭಾಶಯಗಳು. ಅವರಿಂತ ಕನ್ನಡ ಮಾಧ್ಯಮಲೋಕಕ್ಕೆ ಒಳ್ಳೆಯದಾಗಲಿ ಎಂಬ ಆಶಯ ಎಲ್ಲರದು.

ರವಿ ಬೆಳಗೆರೆ
ಜನಶ್ರೀ ಚಾನಲ್‌ನಲ್ಲಿ ಇತ್ತೀಚಿಗೆ ರವಿ ಬೆಳಗೆರೆ ಕಾಣಿಸಿಕೊಳ್ಳುತ್ತಿಲ್ಲ, ಕಾರಣ ನಿಗೂಢ. ಬದಲಾಗಿ ಮೊನ್ನೆ ಅವರು ಸುವರ್ಣ ನ್ಯೂಸ್‌ನಲ್ಲಿ ಬರೋಬ್ಬರಿ ಮೂರು ಗಂಟೆ ಲಾಡೆನ್ ಕುರಿತಾದ ಚರ್ಚೆಯಲ್ಲಿ ಪಾಲ್ಗೊಂಡಿದ್ದು ಹಲವರ ಹುಬ್ಬೇರಿಸಿದೆ. ಜನಶ್ರೀಗೆ ಸುವರ್ಣ ನ್ಯೂಸ್ ಎದುರಾಳಿ ಚಾನಲ್. ಹೀಗಿರುವಾಗ ಬೆಳಗೆರೆ ಸುವರ್ಣದಲ್ಲಿ ಕಾಣಿಸಿಕೊಂಡಿದ್ದು ಹೇಗೆ ಎಂಬ ಪ್ರಶ್ನೆ ಹಲವರದು. ಜನಶ್ರೀಗಾಗಿ ರವಿ ಬೆಳಗೆರೆ ವಿಶೇಷ ಕಾರ್ಯಕ್ರಮಗಳನ್ನು ಮಾಡಿಕೊಡುತ್ತಾರೆ ಎಂಬ ಮಾತಿತ್ತು. ಸ್ವತಃ ಬೆಳಗೆರೆಯವರೇ ಹಾಗೆ ಹೇಳಿಕೊಂಡಿದ್ದರು. ಆದರೆ ಅಂಥ ಕಾರ್ಯಕ್ರಮಗಳೇನು ಕಾಣಿಸುತ್ತಿಲ್ಲ. ಬದಲಾಗಿ ಈಟಿವಿಗಾಗಿ ಬೆಳ್ ಬೆಳಗ್ಗೆ ಬೆಳಗೆರೆ ಎಂಬ ಕಾರ್ಯಕ್ರಮವನ್ನು ಅವರು ತಯಾರು ಮಾಡಿಕೊಡುತ್ತಿರುವ ಮಾಹಿತಿ ಇದೆ.

ಎಚ್.ಆರ್.ರಂಗನಾಥ್ ತೆರೆಮರೆಗೆ ಸರಿದ ನಂತರ ಸುವರ್ಣ ನ್ಯೂಸ್ ಸಪ್ಪೆಯಾಗಿದೆ. ರಂಗನಾಥ್ ಅವರ ಬಾಡಿ ಲಾಂಗ್ವೇಜ್, ಜಗತ್ತೇ ತಲೆ ಮೇಲೆ ಬಿದ್ದಂತೆ ಮಾತನಾಡುವ ಶೈಲಿ, ಅತಿಥಿಗಳಿಗೆ ಮಾತನಾಡಲು ಅವಕಾಶ ನೀಡದ ಜಿಗುಟುತನ ಇತ್ಯಾದಿಗಳ ಬಗ್ಗೆ ಏನೇ ಟೀಕೆಗಳಿದ್ದರೂ ಅವರು ನ್ಯೂಸ್ ಚಾನಲ್‌ಗೆ ಹೇಳಿ ಮಾಡಿಸಿದ ಪತ್ರಕರ್ತ. ತನ್ನ ಅನುಭವ ಮತ್ತು ಜ್ಞಾನವನ್ನು ಬಳಸಿಕೊಂಡು ಅವರು ತಮ್ಮದೇ ಆದ ವೀಕ್ಷಕರನ್ನು ಸೃಷ್ಟಿಸಿಕೊಂಡಿದ್ದರು. ಜನಸಾಮಾನ್ಯರಿಗೂ ಅರ್ಥವಾಗುವಂತೆ ರಾಜಕೀಯವೂ ಸೇರಿದಂತೆ ಎಲ್ಲ ವಿದ್ಯಮಾನಗಳನ್ನು ಬಿಡಿಸಿ ಹೇಳುವ ಶೈಲಿ ಅವರಿಗೆ ಕರಗತ. ಸಾಯಿಬಾಬಾ ಸಾವು, ಲಾಡೆನ್ ಹತ್ಯೆ ಸಂದರ್ಭದಲ್ಲಂತೂ ರಂಗನಾಥ್ ಯಾವುದಾದರೂ ಚಾನಲ್‌ನಲ್ಲಿ ಇರಬೇಕಿತ್ತು ಎಂದು ಬಹಳಷ್ಟು ಜನರಿಗೆ ಅನ್ನಿಸಿದೆ. ರಂಗನಾಥ್ ನೇಪಥ್ಯಕ್ಕೆ ಸರಿದ ಮೇಲೆ ಸುವರ್ಣ ನ್ಯೂಸ್ ಟಿಆರ‍್ಪಿ ಸಹ ಜರ್ರನೆ ಇಳಿದುಹೋಗಿದೆ. ರಾಜೀವ್ ಚಂದ್ರಶೇಖರ್‌ಗೆ ಇದು ನಿಜಕ್ಕೂ ತಲೆನೋವಿನ ಸಂಗತಿ. ಸಮಯ ಟಿವಿ ಹೆಚ್ಚು ಕಡಿಮೆ ಸುವರ್ಣ ನ್ಯೂಸ್ ಹತ್ತಿರದಲ್ಲೇ ಇದೆ. ಜನಶ್ರೀ ಬಗ್ಗೆ ಹೇಳುವಂಥ ವಿಶೇಷವೇನೂ ಕಾಣುತ್ತಿಲ್ಲ. ಇನ್ನು ಟಿವಿ೯, ಟಿಆರ‍್ಪಿಯಲ್ಲಿ ಇತರ ಎಲ್ಲ ಚಾನಲ್‌ಗಳಿಗಿಂದ ಮೈಲು ದೂರ ಮುಂದೆ ಸಾಗಿದೆ. ಉಳಿದೆಲ್ಲ ಚಾನಲ್‌ಗಳ ಟಿಆರ್‌ಪಿಯನ್ನು ಒಟ್ಟುಗೂಡಿಸಿದರೂ ಟಿವಿ೯ಗೆ ಸಮವಾಗಲಾರದು. ಸದ್ಯದ ಮಟ್ಟಿಗೆ ಟಿವಿ೯ ಜತೆ ಫೈಟಿಂಗು ನಡೆಸಲು ಇತರ ಚಾನಲ್‌ಗಳು ಪವಾಡವನ್ನೇ ಮಾಡಬೇಕು, ಅಷ್ಟೆ.
ಎಚ್.ಆರ್.ರಂಗನಾಥ್

ಕೊನೆ ಮಾತು...
ಕಳೆದ ನಾಲ್ಕೂವರೆ ತಿಂಗಳಿನಿಂದ ಸತತವಾಗಿ ಈ ಬ್ಲಾಗ್‌ನಲ್ಲಿ ಬರೆದು ನಮಗೂ ಕೊಂಚ ಸುಸ್ತು, ಬಳಲಿಕೆ. ಈ ಬ್ಲಾಗ್ ಅನ್ನು ಕಮೆಂಟುಗಳ ಸಮೇತ ಪುಸ್ತಕರೂಪದಲ್ಲಿ ತಂದರೆ ಕನಿಷ್ಠ ೧೦೦೦ ಪುಟಗಳ ಪುಸ್ತಕವಾಗಿಬಿಡುತ್ತದೆ. ಹಿಂದಿರುಗಿ ನೋಡಿದಾಗ ಅಷ್ಟೊಂದು ಬರೆದೆವಾ ಅನ್ನಿಸುವುದುಂಟು. ಸ್ವಲ್ಪ ದಿನಗಳ ಬಿಡುವು ಬೇಕೆನ್ನಿಸಿದೆ. ಈ ಬ್ಲಾಗ್‌ನಿಂದಾಗಿಯೇ ತಗುಲಿಕೊಂಡ ಕೆಲವು ಅತ್ಯಂತ ಮಹತ್ವದ ಕೆಲಸಗಳು ತುಂಬಾ ಸಮಯವನ್ನು ಬೇಡುತ್ತಿವೆ. ಹೀಗಾಗಿ ಕೆಲ ದಿನಗಳ ವಿಶ್ರಾಂತಿ. ಮರೆತುಬಿಡಬೇಡಿ, ಹೀಗೆ ಹೋಗಿ ಹಾಗೆ ವಾಪಾಸು ಬಂದುಬಿಡುತ್ತೇವೆ. ಹಾಗಂತ ಬ್ಲಾಗ್ ಖಾಲಿ ಹೊಡೆಯುತ್ತದೆ ಎಂದುಕೊಳ್ಳಬೇಕಾಗಿಲ್ಲ, ಯಾರಾದೂ ಪ್ರಕಟಣೆಗೆ ಲೇಖನಗಳನ್ನು ಕಳುಹಿಸಿದರೆ, ಅದು ಈ ಬ್ಲಾಗ್ ಚೌಕಟ್ಟಿಗೆ ಒಗ್ಗುವಂತಿದ್ದರೆ ಪ್ರಕಟಿಸುತ್ತೇವೆ. ಪ್ರೀತಿ ಇರಲಿ.

11 comments:

  1. ಲೇಖನ ಮಾಹಿತಿಪೂರ್ಣವಾಗಿದೆ.

    ReplyDelete
  2. ಮಿ.ಸಂಪಾದಕೀಯ,
    ಮೀಡಿಯಾ ವಿದ್ಯಾಮಾನಗಳ ಬಗ್ಗೆ, ಮಾಧ್ಯಮದ ಆಂತರ್ಯದ ಬೆಳವಣಿಗೆಗಳ ಬಗ್ಗೆ ಪತ್ರಕರ್ತರ ಪತ್ರಕರ್ತರಾಗಿ ವರದಿ ಮಾಡುತ್ತಿರುವ ನಿಮಗೆ ಧನ್ಯವಾದಗಳು.

    ಕೆಲವು ಪ್ರಶ್ನೆಗಳಿವೆ.
    ೧. ಸುವರ್ಣ ಬಿಟ್ಟ ರಂಗನಾಥ್ ಹೋದದ್ದೆಲ್ಲಿಗೆ?
    ೨. ರವಿ ಬೆಳಗೆರೆ ಜನಶ್ರೀನಿಂದ ಸುವರ್ಣಕ್ಕೆ ಜಂಪ್ ಆಗ್ತಿರೋದಕ್ಕೆ ಕಾರಣಗಳೇನು?

    ಗಣೇಶ್

    ReplyDelete
  3. ನೋಡ್ತಾ ಇರಿ ಸ್ವಾಮೀ ನಮ್ಮ ರಂಗಣ್ಣ ಮತ್ತೆ ಬರ್ತಾರೆ ಸದ್ಯದಲ್ಲೇ......ರಂಗಣ್ಣ ಇಲ್ಲದ ನ್ಯೂಸ್ ಚಾನೆಲ್ ಹೀರೋ ಇಲ್ಲದ ಸಿನಿಮಾ ತರ....
    ನೀವು ಬರೆಯೋದು ನಿಲ್ಲಿಸಿದರೆ ನಾಳೆಯಿಂದ ಮತ್ತೆ ಬ್ರಹ್ಮಾಂಡ ಸ್ವಾಮೀ ಕಚ ಕಚ ಅಂತ ಏನೇನೋ ಒದರೋಕೆ ಶುರು ಮಾಡ್ತಾನೆ...ಜಾಸ್ತಿ ದಿನ ರಾಜ ಹಾಕಬೇಡಿ...ನೀವು ಲೇಖನ ಬರೀತಿರ್ಬೇಕು...ನಾವು ಕಾಮೆಂಟ್ ಹಾಕ್ತಾ ಇರ್ಬೇಕು..ಆಗಲೇ ಸಂಪಾದಕೀಯಕ್ಕೆ ಕಳೆ.....

    ReplyDelete
  4. ರಂಗನಾಥ್ ಏನು ಮಾಡ್ತಾ ಇದಾರೆ ಅಂತ ಸ್ವಲ್ಪ ಹೇಳ್ತಿರ..

    ಆಮೇಲೆ ರವಿ ಬೆಳಗೆರೆ ನಿನ್ನೆ ಇಂದ ಜನಶ್ರೀ ಅಲ್ಲಿ ಕಾನಿಸ್ಕೋತ ಇದಾರಲ್ಲ..

    ReplyDelete
  5. koncha rest beku anta heli hege yashto blog galu makade malagive innu sampadakiyanu haage ansutte

    yakri sampadakare.. bahala sustayta? atava blog mele yaradru case haki sumnirappa anta helidara?

    ReplyDelete
  6. ರಾಜ್ಯಮಟ್ಟದ ಮತ್ತು ತೆರೆಯ ಮೇಲೆ ಬೊಬ್ಬಿರಿಸಿ ಅಬ್ಬರಿಸುವ ಪತ್ರಕರ್ತರು ಮಾತ್ರ 'ಸಂಪಾದಕೀಯ'ದ ದೃಷ್ಟಿಗೆ ಗೋಚರಿಸುತ್ತಿರುವಂತೆ ಕಾಣುತ್ತಿದೆ.. ಮಾಧ್ಯಮಲೋಕ ಎಂದ ಮೇಲೆ ಮಧ್ಯ ಕರ್ನಾಟಕದ ಮಾಧ್ಯಮ ಜಗತ್ತೂ ಸೇರುತ್ತದೆಯಲ್ಲವೆ...? ಕೇವಲ ಬೆಂಗಳೂರಿನ ಪತ್ರಕರ್ತರ ಸುದ್ದಿಗೆ ಮಾತ್ರ ಮೀಸಲಾಯಿತೇ ನಮ್ಮ ಈ 'ಸಂ'.. ಏಕೆಂದರೆ ದಾವಣಗೆರೆಯಿಂದ ಪ್ರಕಟಗೊಳ್ಳುವ ಹಾಗೂ ಮಧ್ಯ ಕರ್ನಾಟಕದಲ್ಲಿ ಅತ್ಯಧಿಕ ಪ್ರಸಾರವುಳ್ಳ ಜನಪ್ರಿಯ ದೈನಿಕ 'ಜನತಾವಾಣಿ' ವಿಚಾರವಂತ ಸಂಪಾದಕ ಎಚ್.ಎನ್.ಷಡಾಕ್ಷರಪ್ಪನವರ ನಿಧನವಾರ್ತೆ ಮಾಧ್ಯಮಲೋಕದ ಮಟ್ಟಿಗೆ ಬ್ರೇಕಿಂಗ್ ಮತ್ತು ಷಾಕಿಂಗ್ ನ್ಯೂಸ್ ಅಲ್ಲವೇ? ಸಂಪಾದಕೀಯದ ಮೇಲೆ ತುಸು ಮುನಿಸಿನಿಂದ.. ಕೆಂಡಸಂಪಿಗೆಯಲ್ಲಿ ನಮ್ಮ ಕಡಕೋಳ ಎಚ್ಚೆನ್ನೆಸ್ ಬಗ್ಗೆ ಅದ್ಭುತವಾಗಿ ಬರೆದಿದ್ದಾರೆ ಓದಿ http://kendasampige.com/article.php?id=4392

    ReplyDelete
  7. ರಂಗಣ್ಣ ಇಲ್ಲದ "ಸುವರ್ಣ ನ್ಯೂಸ್ ೨೪/೭" ಸೋರಗುತಿದೆ. ಒಂದು ಮೂಲಗಳ ಪ್ರಕಾರ "ಸಮಯ ೨೪/೭", ಸುವರ್ಣ ನ್ಯೂಸ್ ನ ಹಿಂದಿಕ್ಕಿ ಮುಂದಕ್ಕೊಗಿದೆ. ರಂಗನಾಥ್ ಭಾರಧ್ವಜ್ ಮತ್ತು ರಂಗಣ್ಣ ನೇಪಥ್ಯಕ್ಕೆ ಹೋದಮೇಲೆ ಇದರ ಭಗ್ಗೆ ಆಶ್ಚರ್ಯ ಪಡುವನ್ತದೇನೂ ಇಲ್ಲ. ರವಿ ಬೆಳಗೆರೆ ಒಂದು ಮನೋಭಿಲಾಷೆಯ ಜನಗಳ ಅಭಿಮಾನಿ ಅಂತ ನನ್ನ ಅಭಿಪ್ರಾಯ, ಸಾಮಾನ್ಯರಿಗೆ ಸ್ಪಂದಿಸುವ ವ್ಯಕ್ತಿತ್ವ ಅವರಲ್ಲಿ ನಾನು ಕಂಡಿಲ್ಲ.

    ಅದೇನೇ ಇರಲಿ ಎಲ್ಲರಂತೆ ನನ್ನಲ್ಲೂ ಕಾಡೋ ಕುತೂಹಲ "ರಂಗನಾಥ್ ಭಾರಧ್ವಜ್" ಮತ್ತು "ರಂಗಣ್ಣ", "ಸುವರ್ಣ ನ್ಯೂಸ್ ೨೪/೭" ಬಿಟ್ಟು ಎನ್ಮದ್ಥ ಇದ್ದಾರೆ?....

    ReplyDelete
  8. ಸಂಪಾದಕೀಯ,
    ನಿಮಗೆ ಸುಸ್ತು ಆಗಬಾರದು. ನನ್ನ ಅಚ್ಚುಮೆಚ್ಚಿನ ಬ್ಲಾಗ್ ಇದು. ಯಾವ ಪತ್ರಿಕೆಯಲ್ಲೂ ಬರದ ವಿಚಾರಗಳು ಇಲ್ಲಿ ಸತ್ಯ ಮತ್ತು ನೇರವಾಗಿ ಅದಕ್ಕಿಂತ ಆಳವಾಗಿ ಸಿಗುತ್ತವೆ. ನಾನು ಒಬ್ಬ ದಿನಪತ್ರಿಕೆ ವಿತರಕನಾಗಿ, ಸಣ್ಣಮಟ್ಟದ ಬರಹಗಾರನಾಗಿ, ಛಾಯಾಗ್ರಾಹಕನಾಗಿ...ಇದೆಲ್ಲದಕ್ಕಿಂತ ಪತ್ರಕರ್ತರು ಮತ್ತು ಪತ್ರಿಕಾಲಯಗಳ ಕಣ್ಣಿಗೆ ಕಾಣದ ರಾಜಕೀಯವನ್ನು ನೋಡಿ, ಅದರಿಂದ ದೂರನಿಂತು ಹೇಸಿಗೆಪಟ್ಟುಕೊಂಡುವನು. ಪತ್ರಿಕಾ ಮಾರುಕಟ್ಟೆ ವಲಯದಲ್ಲಿ ನಡೆಯುವ ತಂತ್ರ ಮತ್ತು ಕುತಂತ್ರಗಳನ್ನು ಖುದ್ದಾಗಿ ಗಮನಿಸಿದವನು. ಅದೆಲ್ಲವನ್ನು ಗಮನಿಸಿದಾಗ ಇವರು ಇಷ್ಟು ಕೆಳಮಟ್ಟಕ್ಕೆ ಇಳಿಯುದನ್ನು ನೋಡಿದರೆ ಮಳೆ, ಚಳಿಗಾಳಿಯೆನ್ನದೆ ಫುಟ್‍ಬಾತ್‍ನಲ್ಲಿ ಬೆಳಿಗ್ಗೆ ಐದು ಗಂಟೆಗೆ ದಿನಪತ್ರಿಕೆ ಎಲ್ಲಾ ದಿನಪತ್ರಿಕೆಗಳನ್ನು ಯಾವುದೇ ರಾಜಕೀಯವಿಲ್ಲದೇ ಶ್ರದ್ಧೆಯಿಂದ ಮನೆಮನೆಗೆ ತಲುಪಿಸುವ ನಾವೇ ಇವರಿಗಿಂತ ಶ್ರೇಷ್ಟರು ಅನ್ನಿಸುತ್ತದೆ. ಖಂಡಿತ ನನಗೆ ಈ ಪತ್ರಿಕ ಮಾರುಕಟ್ಟೆಯ ಮೋಸ ಮತ್ತು ಜಾಹೀರಾತು ತಂತ್ರ ಮತು ಕುತಂತ್ರದ ಬಗ್ಗೆ ಬರೆದು ನಿಮ್ಮ ಬ್ಲಾಗಿಗೆ ಕಳಿಸುವ ಆಸೆಯಿದೆ..
    ಧನ್ಯವಾದಗಳು.

    ReplyDelete
  9. hello sampadakiya,

    Why donot you write something about suvarna news new chief Mr. Hameed palya? is he doing his job as expected?

    ReplyDelete
  10. ರಂಗನಾಥ್ ಅವರ ಬಾಡಿ ಲಾಂಗ್ವೇಜ್, ಜಗತ್ತೇ ತಲೆ ಮೇಲೆ ಬಿದ್ದಂತೆ ಮಾತನಾಡುವ ಶೈಲಿ, ಅತಿಥಿಗಳಿಗೆ ಮಾತನಾಡಲು ಅವಕಾಶ ನೀಡದ ಜಿಗುಟುತನ ಇತ್ಯಾದಿಗಳ ಬಗ್ಗೆ ಏನೇ ಟೀಕೆಗಳಿದ್ದರೂ..by sampadakiya.

    ಹಲೋ ಯಾರು ಮಾಡುತ ಇದ್ರು ಸ್ವಾಮಿ ಈ ಟೀಕೆ ಗಳು?! ಯಾವೊಬ್ಬ ವೀಕ್ಷಕನು ಈ ಬಗೆಯ ಟೀಕೆ, ಆಕ್ಷೇಪ ಮಾಡಿದ ಹಾಗೆ ಕಾಣೆ. ಅದಕ್ಕೆ ರಂಗಣ್ಣ ನಡೆಸಿ ಕೊಡುತಿದ್ದ ಶೋ ಗಳಿಗೆ ಬರುತಿದ್ದ ಫೋನ್ ಕಾಲ್ ಗಳೇ ಸಾಕ್ಷಿ. ಪಬ್ಲಿಕ್ ವಾಯ್ಸ್ ನಂತಹ ಶೋ ಗಳು popular ಆದ ಸಂಗತಿಯೇ ಸಾಕ್ಷಿ. he was very much near to audience. ಕಾರ್ಯಕ್ರಮಗಳಿಗೆ ಅಥಿತಿ ಗಳಾಗಿ ಬರುತಿದ್ದ ರಾಜಕಾರಿಣಿ ಗಳು ಕೂಡ ತುಂಬಾನೇ, ಮನಬಿಚ್ಚಿ, ಮಾತನಾಡುತಿದ್ರು ಅಥವಾ ರಂಗಣ್ಣ ಅವರಿಂದ ಮಾತು ತೆಗೆಸುತಿದ್ರು. ನಿಜವಾಗಿ ಹೇಳಬೇಕಂದ್ರೆ ನಮ್ಮ ರಾಜಕಾರಿಣಿ ಗಳಿಗೆ ಅಷ್ಟೊಂದು ವೈಚಾರಿಕವಾಗಿ ಮಾತನಾಡಲೂ ಬರುತ್ತದೆ, ಮತ್ತು ಸುರೇಶ ಕುಮಾರ್, ರಮೇಶ್ ಕುಮಾರ್, ಶಂಕರ್ B L , ಚಂದ್ರೇಗೌಡ , ಸುದರ್ಶನ್, ದತ್ತ, ಇತ್ಯಾದಿ ವಿಭಿನ್ನ ರಾಜಕಾರಿಣಿ ಗಳೂ ಇದ್ದಾರೆ ಎಂಬ ಪರಿಚಯ ನಮ್ಮ ವೀಕ್ಷಕರಿಗೆ ನೇರವಾಗಿ ಆಗಿದ್ದೂ ಕೂಡ ರಂಗಣ್ಣ ನಡೆಸಿ ಕೊಡುತಿದ್ದ ಜುಗಲ್ ಬಂದಿ , ಇತ್ಯಾದಿ ಕಾರ್ಯಕ್ರಮ ಗಳಿಂದ. ರಾಜ ಕಾರಿಣಿ ಗಳ ಚುನಾವಣಾ ಭಾಷಣ ಗಳನ್ನೂ ಕೇಳಿ ಮಾತ್ರ ಅಭ್ಯಾಸವಿದ್ದ , typical ರಾಜಕಾರಿಣಿ ಗಳನ್ನೂ ನೋಡಿ ಮಾತ್ರ ಆಭ್ಯಾಸ ವಿದ್ದ ವೀಕ್ಷಕರಿಗೆ ರಾಜ ಕಾರಣ ಎನ್ನುವುದು ರಾಜ್ಯ ಶಾಸ್ತ್ರ, ಸಂವಿಧಾನ ಬದ್ಧ ನೀತಿ ಎಂಬ ಅರಿವು ಮೂಡಿಸಿದರು. ಇನ್ನು ಸಂಪದಕಿಯದವರೇ, ನೀವು ಮೇಲೆ ಹೇಳಿದ ಟೀಕೆ ಆಕ್ಷೇಪ ಗಳು ಏನಿದ್ರೂ ನಿಮ್ಮ ವೃತ್ತಿ ಬಾಂಧವರೆ ಯಾರಾದರು ಮಾಡಿರಬಹುದು. ವೃತ್ತಿ ಮತ್ಸರದ ಕಾರಣ ದಿಂದ! ಅಥವಾ ರಂಗಣ್ಣ ನ ಪ್ರೌಢಿಮೆ ಮುಂದೆ ತಾವು ಸಪ್ಪೆ ಆಗಿಬಿಡುತ್ತೇವೆ ಎಂಬ ಅಳುಕಿನಿಂದ.! body language is not an issue. ಆಕಾಶ ತಲೆ ಮೇಲೆ ಬಿದ್ದ ಹಾಗೆ ಮಾತಾಡಿದ್ರೆ ಒಳ್ಳೇದೆ ತಾನೇ ಟಿ ಆರ್ ಪಿ ಹೆಚ್ಚಿಸಲು. ! ಅಥಿತಿಗಳಿಗೆ ಪ್ರಶ್ನಿಸಲೂ ಬರದವರು, leading questions ಹಾಕಲು ಬರದವರು,ವಿಷಯ ಪ್ರೌಢಿಮೆ ಇರದವರು, ರಂಗಣ್ಣ ಜಾಸ್ತಿ ಮಾತದುತಾರೆ ಎಂದಿರಬಹುದು. ! ತಮಗೆ ಮಾತನ್ನಾಡಲು ಬರುವುದಿಲ್ಲ, ಮಾತನಾಡುವವರನ್ನು ಸಹಿಸುವುದಿಲ್ಲ ಎಂಬಂತೆ! infact some matured, different politicians were very much comfortable in shows of Ranganna. because Ranganna was able to match their level in subject. any way An intellectual has many more obstacles than an average! This is true in Ranganna s case.

    ReplyDelete
  11. Exactly true. Anyway HRranganath is no more in suvarna news, so there is no barrier to "others" for talking. then why the "others" are silent now! They can talk and show their talent is n t it?! But now the new chief is super silent!

    ReplyDelete