Friday, May 6, 2011

ಪಾಕಿಸ್ತಾನದ ಪರದಾಟಗಳು ಮತ್ತು ಎಲ್ಲರೂ ಕಲಿಯಬೇಕಾದ ಪಾಠಗಳು....

“ನಮ್ಮ ಮಿಲಿಟರಿ, ವಾಯುಸೇನೆಗಳಲ್ಲಿ ಸಾಕಷ್ಟು ಯೋಧರಿದ್ದಾರೆ. ಇದು (ಲಾಡೆನ್ ವಿರುದ್ಧದ ಕಾರ್ಯಾಚರಣೆ) ಮರುಕಳಿಸಿದರೆ ಇಂತಹ ದುಸ್ಸಾಹಸ ಅಥವಾ ತಪ್ಪು ತಿಳಿವಳಿಕೆಯಿಂದ ದುರಂತ ಅಂತ್ಯ ಕಾಣಬೇಕಾಗುತ್ತದೆ. ತನ್ನ ರಕ್ಷಣಾ ಬಲವನ್ನು ಪ್ರದರ್ಶಿಸಲು ಪಾಕ್ ಸಮರ್ಥವಾಗಿದೆ ಎಂಬುದರಲ್ಲಿ ಯಾವುದೇ ಅನುಮಾನ ಬೇಕಿಲ್ಲ. ಯಾವುದೇ ದೇಶ ಇದೇ ರೀತಿ ಕಾರ್ಯಾಚರಣೆ ಕೈಗೊಳ್ಳಬಹುದು ಎಂದು ಭಾವಿಸಿದ್ದರೆ ಅದು ತಪ್ಪು ಲೆಕ್ಕಾಚಾರ ಎಂಬುದು ಬಳಿಕ ಅರಿವಾಗುತ್ತದೆ...''

ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ನೀಡಿರುವ ಹೇಳಿಕೆ ಇದು. ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತಿದೆ ಈ ಸಮರ್ಥನೆ. ಪಾಕಿಸ್ತಾನದ ಸಾರ್ವಭೌಮತೆಯನ್ನು ಗೌರವಿಸಬೇಕು ಎಂದು ಬಶೀರ್ ಹೇಳುತ್ತಿದ್ದಾರೆ. ಹಾಗೆ ನೋಡಿದರೆ ತನ್ನ ಸಾರ್ವಭೌಮತೆಯನ್ನು ಆ ರಾಷ್ಟ್ರ ಅಮೆರಿಕಾಗೆ ಹಾಗು ಜಿಹಾದಿ ಹೆಸರಿನಲ್ಲಿ ಭಯೋತ್ಪಾದನೆ ನಡೆಸುವ ಶಕ್ತಿಗಳಿಗೆ ಒತ್ತೆ ಇಟ್ಟು ದಶಕವೇ ಕಳೆದುಹೋಗಿದೆ.

ಒಸಾಮಾ ಬಿನ್ ಲಾಡೆನ್ ಸತ್ತ ಮನೆ
ಪಾಕಿಸ್ತಾನ ಎರಡು ಅಲಗಿನ ಕತ್ತಿಯ ನಡುವೆ ಸಿಲುಕಿಕೊಂಡಿದೆ. ಅದರಿಂದ ಪಾರಾಗುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಕಳೆದ ಒಂದು ದಶಕದಲ್ಲಿ ಭಯೋತ್ಪಾದಕರ ದಾಳಿಗೆ ಅತಿ ಹೆಚ್ಚು ನಲುಗಿದ ದೇಶ ಯಾವುದಾದರೂ ಇದ್ದರೆ ಅದು ಪಾಕಿಸ್ತಾನವೇ ಹೌದು. ಅಲ್ಲಿ ಪ್ರತಿನಿತ್ಯ ಸ್ಫೋಟ, ಅಮಾಯಕರ ಸಾವು ಮಾಮೂಲಿ ಸುದ್ದಿಯಾಗಿ ಹೋಗಿದೆ. ಸಾಯಿಸುವವರು, ಸಾಯುವವರು ಎಲ್ಲರೂ ಒಂದೇ ಧರ್ಮದವರು. ಭಯೋತ್ಪಾದನೆಗೆ ಧರ್ಮ ಕಾರಣ ಎಂದು ಹೇಳಿದವರ‍್ಯಾರು?

ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ ಎಂಬ ಮಾತು ಆಗಾಗ ಕೇಳಿಬರುತ್ತದೆ. ಅಲ್ಲಿ ತಾಲಿಬಾನಿಗಳಿದ್ದಾರೆ, ಅಲ್ ಖೈದಾ ಇದೆ. ಲಷ್ಕರ್-ಇ-ತೊಯಿಬಾ ಇದೆ. ಇನ್ನೂ ಹಲವಾರು ಭಯೋತ್ಪಾದಕ ಸಂಘಟನೆಗಳು ಇಲ್ಲಿವೆ. ಇವುಗಳನ್ನು ಬೆಳೆಸಿಕೊಂಡು ಬಂದಿದ್ದು, ಪೋಷಣೆ ನೀಡಿದ್ದು, ರಕ್ಷಣೆ ಒದಗಿಸಿದ್ದು ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್‌ಐ. ಪಾಕಿಸ್ತಾನದ ಸೈನ್ಯ, ಐಎಸ್‌ಐ ಮತ್ತು ಸರ್ಕಾರದ ನಡುವೆಯೇ ಹೊಂದಾಣಿಕೆ ಇಲ್ಲ. ಒಂದೆಡೆ ಸರ್ಕಾರ ಭಯೋತ್ಪಾದನೆ ವಿರುದ್ಧ ನಮ್ಮ ಸಮರ ಎಂದು ಪಾಕಿಸ್ತಾನ ಸರ್ಕಾರ ಹೇಳಿಕೊಳ್ಳುತ್ತದೆ. ಆದರೆ ಅದರ ಮೂಗಿನಡಿಯಲ್ಲೇ ಭಯೋತ್ಪಾದಕರ ತರಬೇತಿ ಶಿಬಿರಗಳು ನಡೆಯುತ್ತದೆ. ಈ ಶಿಬಿರಗಳಲ್ಲಿ ಪಾಕಿಸ್ತಾನದ ಸೈನ್ಯಾಧಿಕಾರಿಗಳೇ ತರಬೇತಿ ಕೊಡುತ್ತಾರೆ. ಒಂದೆಡೆ ನಮ್ಮಲ್ಲಿ ಯಾವ ಭಯೋತ್ಪಾದಕರಿಗೂ ಆಶ್ರಯ ನೀಡಲಾಗಿಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ ಈ ಕೆಲಸವನ್ನು ಐಎಸ್‌ಐ ವರ್ಷಾನುವರ್ಷದಿಂದ ಮಾಡಿಕೊಂಡೇ ಬಂದಿದೆ. ಮುಂಬೈ ಮೇಲಿನ ದಾಳಿನ ನಡೆಸಿ ಭಯೋತ್ಪಾದಕರನ್ನು ಟ್ರೈನ್ ಅಪ್ ಮಾಡಿ ಕಳುಹಿಸಿಕೊಟ್ಟಿದ್ದು  ಇದೇ ಐಎಸ್‌ಐ. ಒಸಾಮಾ ಬಿನ್ ಲಾಡೆನ್‌ಗೂ ಆಶ್ರಯ ಕೊಟ್ಟಿದ್ದು ಐಎಸ್‌ಐ ಎಂಬುದರಲ್ಲಿ ಈಗ ಯಾವ ಸಂಶಯವೂ ಉಳಿದುಕೊಂಡಿಲ್ಲ. ಇದು ಗೊತ್ತಾದ ಬಳಿಕ ಅಮೆರಿಕದ ಸೆನೆಟರ್‌ಗಳು ಒಬ್ಬರಾದ ಮೇಲೊಬ್ಬರಂತೆ ಪಾಕಿಸ್ತಾನ ವಿರುದ್ಧ ಹೇಳಿಕೆಗಳನ್ನು ಕೊಡುತ್ತಿದ್ದಾರೆ.

ಪಾಕಿಸ್ತಾನ ವಿಶ್ವಾಸಕ್ಕೆ ಅರ್ಹವಾದ ದೇಶವಲ್ಲ ಎಂಬುದು ಸಾಬೀತಾಗಿ ಎಷ್ಟೋ ವರ್ಷಗಳಾಗಿ ಹೋದವು. ಮುಂಬೈ ದಾಳಿ ಘಟನೆಯ ತನಿಖೆ, ವಿಚಾರಣೆಯ ವಿಷಯದಲ್ಲಿ ಆ ದೇಶ ನಡೆದುಕೊಂಡ ರೀತಿಯನ್ನು ಗಮನಿಸಿದರೆ ಇದು ಗೊತ್ತಾಗಿ ಹೋಗುತ್ತದೆ. ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪದೇ ಪದೇ ಸಾಕ್ಷ್ಯ ಕೊಡಿ ಎಂದು ಪಾಕಿಸ್ತಾನವು ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿತು. ಸಾಕ್ಷ್ಯ ಕೊಟ್ಟ ನಂತರ ಸಾಲದು ಎಂದು ಹೇಳಿತು. ಇನ್ನಷ್ಟು ಕೊಟ್ಟ ನಂತರವಾದರೂ ಏನಾದರೂ ಆಯಿತೇ? ಮುಂಬೈ ದಾಳಿಕೋರರ ವಿರುದ್ಧ ಪಾಕಿಸ್ತಾನದಲ್ಲಿ ನಡೆಯುತ್ತಿರುವ ವಿಚಾರಣೆಯ ನಂತರ ಅಪರಾಧಿಗಳಿಗೆ ಶಿಕ್ಷೆ ಆದೀತು ಎಂದು ಯಾರಾದರೂ ನಂಬಲು ಸಾಧ್ಯವೇ?

ಪಾಕಿಸ್ತಾನವನ್ನು ಜರ್ದಾರಿ, ಗಿಲಾನಿಗಳು ಆಳುತ್ತಿಲ್ಲ. ಆಳುತ್ತಿರುವವರು ಅಲ್ಲಿನ ಧಾರ್ಮಿಕ ಮೂಲಭೂತವಾದಿ ಶಕ್ತಿಗಳು. ಅವುಗಳನ್ನು ಎದುರಿಸುವ ಶಕ್ತಿ ಈಗ ಆಳ್ವಿಕೆ ನಡೆಸುತ್ತಿರುವವರಿಗೂ ಇಲ್ಲ. ಹಿಂದೆ ಇದ್ದ ಮುಷರಫ್, ಭುಟ್ಟೋ, ನವಾಜ್ ಷರೀಫ್ ಇತ್ಯಾದಿಗಳಿಗೂ ಇರಲಿಲ್ಲ. ಲಾಡೆನ್ ಸತ್ತ ನಂತರ ಪಾಕಿಸ್ತಾನ ಸರ್ಕಾರ ಏಕಕಾಲಕ್ಕೆ ಅಮೆರಿಕವನ್ನೂ, ದೇಶದ ಒಳಗಿನ ಸೂಪರ್ ಪವರ್‌ಗಳಾದ ಮೂಲಭೂತವಾದಿಗಳನ್ನೂ ಎದುರು ಹಾಕಿಕೊಂಡಿದೆ. ಜಾಗತಿಕ ಸಮುದಾಯದಲ್ಲಿ ಪಾಕಿಸ್ತಾನ ಈಗ ಬಹಳ ಸ್ಪಷ್ಟವಾಗಿ ಖಳನಾಯಕನಾಗಿ ಕಾಣಿಸಿಕೊಂಡಿದೆ.

ಹಾಗೆ ನೋಡಿದರೆ ೯/೧೧ ಘಟನೆಯ ನಂತರ ಅಮೆರಿಕಾ ಸೈನ್ಯವನ್ನು ತನ್ನ ರಾಷ್ಟ್ರದೊಳಗೆ ಬಿಟ್ಟುಕೊಳ್ಳದೆ ಪಾಕಿಸ್ತಾನಕ್ಕೆ ಗತ್ಯಂತರವಿರಲಿಲ್ಲ. ತನ್ನ ಸೇನಾ ನೆಲೆಗಳನ್ನು ಸ್ಥಾಪಿಸಿಕೊಳ್ಳಲು ಪಾಕಿಸ್ತಾನಕ್ಕೆ ಭಾರಿ ಪ್ರಮಾಣದ ಹಣದ ಸಹಾಯದ ಆಮಿಷವನ್ನು  ಅಮೆರಿಕಾ ಒಡ್ಡಿತ್ತು. ಒಂದು ವೇಳೆ ಅಮೆರಿಕಾ ನೆರವನ್ನು ತಿರಸ್ಕರಿಸಿ, ತನ್ನ ಸಾರ್ವಭೌಮತೆಯನ್ನು ಉಳಿಸಿಕೊಳ್ಳುವ ತೀರ್ಮಾನವನ್ನೇನಾದರೂ ಪಾಕಿಸ್ತಾನ ಕೈಗೊಂಡಿದ್ದರೆ, ಅಫಘಾನಿಸ್ತಾನಕ್ಕೆ ಆದ ದುರ್ಗತಿಯೇ ಪಾಕಿಸ್ತಾನಕ್ಕೂ ಬಂದೊದಗುತ್ತಿತ್ತು. ಪಾಕಿಸ್ತಾನ ಅಮೆರಿಕಕ್ಕೆ ಶರಣಾಯಿತು. ಜಾಗತಿಕ ವಲಯದಲ್ಲಿ ತಾನೂ ಸಹ ಭಯೋತ್ಪಾದನೆಯ ವಿರೋಧಿ ಎಂದು ಫೋಜು ನೀಡಿತು. ಅಮೆರಿಕ ಕೊಟ್ಟ ಭಾರೀ ಪ್ರಮಾಣದ ನೆರವನ್ನು ಎರಡೂ ಕೈಗಳಿಂದ ಬಾಚಿಕೊಂಡಿತು. ಆದರೆ ಸತ್ಯವನ್ನು ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ. ತನ್ನದೇ ರಾಷ್ಟ್ರದಲ್ಲೇ, ರಾಜಧಾನಿ ಇಸ್ಲಾಮಾಬಾದ್‌ಗೆ ಕೇವಲ ೪೫ ಕಿ.ಮೀ ದೂರದ ನಗರದಲ್ಲಿ ತನ್ನದೇ ಸೇನಾನೆಲೆಯ ಕೂಗಳತೆ ದೂರದಲ್ಲೇ ಮುಚ್ಚಿಟ್ಟುಕೊಂಡಿದ್ದ ಲಾಡೆನ್‌ನನ್ನು ಅಮೆರಿಕ ಸೈನ್ಯದಿಂದ ಉಳಿಸಿಕೊಳ್ಳಲೂ ಸಾಧ್ಯವಾಗಲಿಲ್ಲ.

ಸಲ್ಮಾನ್ ರಶ್ದಿ ಎಂಬ ಲೇಖಕ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಬೇಕೆಂದು ಹೇಳಿಕೆ ನೀಡಿದ್ದಾರೆ. ಹಾಗೆ ಘೋಷಿಸಲು ಉಳಿದಿರುವುದಾದರೂ ಏನು? ರಕ್ತಪಿಪಾಸುಗಳನ್ನು ಸಾಕಿಕೊಂಡ ರಾಷ್ಟ್ರ ಏನನ್ನು ಅನುಭವಿಸಬೇಕೋ ಅದನ್ನು ಅನುಭವಿಸುತ್ತಿದೆ. ಮೊನ್ನೆ ಲಾಡೆನ್ ಸತ್ತ ನಂತರವೂ ಉಗ್ರಗಾಮಿಗಳ ಪ್ರತೀಕಾರದ ದಾಳಿಗೆ ಬಲಿಯಾಗಿದ್ದೂ ಸಹ ಇದೇ ಪಾಕಿಸ್ತಾನದ ಅಮಾಯಕ ಜನರು.

ಪಾಕಿಸ್ತಾನದಲ್ಲಿ ಈಗ ಏನು ಉಳಿದಿದೆ? ಅಲ್ಲಿಗೆ ಜಾಗತಿಕ ಬಂಡವಾಳ ಹೂಡಿಕೆದಾರರ‍್ಯಾರೂ ಕಣ್ಣೆತ್ತಿಯೂ ನೋಡುತ್ತಿಲ್ಲ. ಬಂಡವಾಳ ಹೂಡುವವರು ಇರಲಿ, ಇತರ ದೇಶೀಯರು ಇಲ್ಲಿಗೆ ಪ್ರವಾಸಕ್ಕಾಗಿಯೂ ಬರಲಾರರು. ಪಾಕಿಸ್ತಾನದಲ್ಲಿ ಭಾರತದಂತೆಯೇ ಕ್ರಿಕೆಟ್ ಹುಚ್ಚು ಜನರಿಗೆ. ಬ್ಯಾಟು, ಬಾಲು ಹಿಡಿದು ಆಡಲು ಹೋಗುವ ಕ್ರಿಕೆಟಿಗರನ್ನು ಬಂದೂಕು ಹಿಡಿದು ಯುದ್ಧಕ್ಕೆ ಹೋಗುವ ಸೈನಿಕರೆಂಬಂತೆ ಕಾಣುವ ಹುಚ್ಚರು ಅಲ್ಲಿದ್ದಾರೆ. ತಮ್ಮ ಆಟಗಾರರು ವಿಕೆಟ್ ಕಿತ್ತರೆ, ಬೌಂಡರಿ ಹೊಡೆದರೆ ಬೀದಿಗೆ ಬಂದು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸುವ ವಿಚಿತ್ರ ಜನರಿರುವ ದೇಶ ಅದು. ಆದರೆ ಈಗ ಅಲ್ಲಿ ಕ್ರಿಕೆಟ್ ಸರಣಿಗಳೇ ನಡೆಯುತ್ತಿಲ್ಲ. ಯಾವ ದೇಶದ ತಂಡವೂ ಅಲ್ಲಿಗೆ ಪ್ರವಾಸ ಮಾಡಲು ಒಪ್ಪುತ್ತಿಲ್ಲ. ಈಚೆಗೆ ನಡೆದ ವಿಶ್ವಕಪ್ ಪಂದ್ಯಾವಳಿಯನ್ನು ಸಂಘಟಿಸಿದ್ದು ಭಾರತ, ಶ್ರೀಲಂಕ ಮತ್ತು ಬಾಂಗ್ಲಾದೇಶ ದೇಶಗಳು. ಪಾಕಿಸ್ತಾನ ಇದೇ ಭಯೋತ್ಪಾದನೆಯ ಕಾರಣಕ್ಕೆ ವಿಶ್ವಕಪ್ ಸಹ ಆತಿಥ್ಯದ ಅವಕಾಶವನ್ನು ಕಳೆದುಕೊಂಡಿತ್ತು.

ಪಾಕಿಸ್ತಾನದಲ್ಲಿ ಈಗ ಕಿತ್ತು ತಿನ್ನುವ ಬಡತನ. ಅಮೆರಿಕ ಕೊಡುವ ವಾರ್ಷಿಕ ನೆರವು ಸೈನ್ಯದ ಖರ್ಚಿಗೇ ಮುಡಿಪು. ಇನ್ನು ಅಭಿವೃದ್ಧಿಯ ಮಾತೆಲ್ಲಿ? ಆ ದೇಶದ ಅಧ್ಯಕ್ಷನ ಮಾನಸಿಕ ಸ್ಥಿತಿಯೇ ಸರಿಯಿಲ್ಲವೆಂಬ ಮಾತಿದೆ. ದೇಶದ ಸ್ಥಿತಿ ಇನ್ನು ಹೇಗೆ ಇರಲು ಸಾಧ್ಯ?

ಭಾರತ ಮತ್ತು ಪಾಕಿಸ್ತಾನ ಒಟ್ಟಿಗೆ ಉದಯಿಸಿದ ರಾಷ್ಟ್ರಗಳು. ಆದರೆ ಪಾಕಿಸ್ತಾನವು ಭಾರತಕ್ಕಿಂತ ಭಿನ್ನವಾದ ರಾಷ್ಟ್ರ. ಪ್ರಜಾಪ್ರಭುತ್ವಕ್ಕೆ ಪಾಕಿಸ್ತಾನದಲ್ಲಿ ಅರ್ಥವೇ ಇಲ್ಲ. ಒಂದೇ ಅಲ್ಲಿನ ಮಿಲಿಟರಿಯೇ ಕ್ಷಿಪ್ರ ಕ್ರಾಂತಿ ನಡೆಸಿ ಜನರಿಂದ ಆಯ್ಕೆಯಾದವರನ್ನು ಗಲ್ಲಿಗೇರಿಸಿ ಅಥವಾ ಗಡೀಪಾರು ಮಾಡಿ ನೇರವಾಗಿ ಅಧಿಕಾರ ಪಡೆಯುತ್ತದೆ, ಅಥವಾ ಆಳುವ ಸೋ ಕಾಲ್ಡ್ ಜನಪ್ರತಿನಿಧಿಗಳ ಸರ್ಕಾರವನ್ನು ನಿಯಂತ್ರಿಸುತ್ತದೆ. ಹೆಸರಿಗೆ ಇದು ಸ್ವತಂತ್ರ ದೇಶ. ಆದರೆ ಸ್ವತಂತ್ರ ರಾಷ್ಟ್ರದ ಮೂಲಭೂತ ಆವಶ್ಯಕತೆಯಾದ ಸಾರ್ವಭೌಮತೆಯನ್ನೂ ಸಹ ಪಾಕಿಸ್ತಾನ ಉಳಿಸಿಕೊಂಡಿಲ್ಲ. ಅಮೆರಿಕಾದ ಪಡೆಯನ್ನು ತನ್ನ ಮಡಿಲಲ್ಲೇ ಸುಡುವ ಕೆಂಡವಾಗಿ ಅದು ಉಳಿಸಿಕೊಂಡಿದೆ.

ಪಾಕಿಸ್ತಾನ ನಮಗೆ ನೂರಾರು ಪಾಠಗಳು ಹೇಳಿಕೊಡುತ್ತಿದೆ. ಧಾರ್ಮಿಕ ಮೂಲಭೂತವಾದಿಗಳ ಸುಪರ್ದಿಗೆ ಒಪ್ಪಿಸಿದರೆ ಯಾವುದೇ ದೇಶ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ ಎಂಬುದು ನಾವು ಕಲಿಯಬೇಕಾದ ಮೊದಲ ಪಾಠ. ಭಾರತದಲ್ಲೂ ಅಂಥ ಧಾರ್ಮಿಕ ಮೂಲಭೂತವಾದಿಗಳು ಮುನ್ನೆಲೆಗೆ ಬರಲು ಯತ್ನಿಸಿ ವಿಫಲಗೊಂಡಿರುವುದನ್ನು ನಾವು ಕಾಣುತ್ತೇವೆ. ನಮ್ಮಲ್ಲೂ ದೇಶಭಕ್ತ ಸ್ವದೇಶಿ ಉಗ್ರಗಾಮಿಗಳು ಹುಟ್ಟಿಕೊಂಡಿದ್ದಾರೆ, ಸಾಕಷ್ಟು ಭಯೋತ್ಪಾದನಾ ಕೃತ್ಯಗಳನ್ನೂ ನಡೆಸಿ ಸಿಕ್ಕಿಬಿದ್ದಿದ್ದಾರೆ. ವಿದೇಶಿಯಾಗಲಿ, ಸ್ವದೇಶಿಯಾಗಲಿ, ಯಾವುದೇ ಧರ್ಮದವರಾಗಲಿ ಭಯೋತ್ಪಾದಕರನ್ನು ಭಯೋತ್ಪಾದಕರಂತೆಯೇ ನೋಡುವ, ಅವರನ್ನು ಕಾನೂನಿನ ಅಡಿಯಲ್ಲಿ ಶಿಕ್ಷಿಸುವ ಮತ್ತವರ ಬೇರುಗಳನ್ನು ಕಿತ್ತೆಸೆಯುವ ಕೆಲಸ ಆಗಲೇಬೇಕು.

ಭಯೋತ್ಪಾದಕರು ಯಾವತ್ತಿಗೂ ಅಪಾಯಕಾರಿಯೇ ಆಗಿರುತ್ತಾರೆ. ಹಿಂದೆ ಎಲ್‌ಟಿಟಿಇಗಳನ್ನು ಮುದ್ದು ಮಾಡಿ, ತಮಿಳುನಾಡಿನಲ್ಲಿ ರಹಸ್ಯವಾಗಿ ತರಬೇತಿ ಕೊಟ್ಟ ಪರಿಣಾಮವನ್ನು ನಾವು ಅನುಭವಿಸಿದ್ದೇವೆ. ನಾವು ಅದಕ್ಕೆ ತೆತ್ತ ಬೆಲೆಯೂ ಕಡಿಮೆಯೇನಿರಲಿಲ್ಲ. ಈ ದೇಶದ ಮಾಜಿ ಪ್ರಧಾನಿಯನ್ನೇ ಕಳೆದುಕೊಳ್ಳಬೇಕಾಯಿತು.  ಲಾಡೆನ್‌ನನ್ನು ಬಳಸಿಕೊಂಡಿದ್ದ ಅಮೆರಿಕ ತಾನೇ ಲಾಡೆನ್‌ನ ಶಿಕಾರಿಯಾಯಿತು. ಭಾರತದ ಮೇಲೆ ಭಯೋತ್ಪಾದಕರನ್ನು ಛೂ ಬಿಟ್ಟ ಪಾಕಿಸ್ತಾನ ಈಗ ಅದೇ ಭಯೋತ್ಪಾದಕರ ದಾಳಿಗೆ ಸಿಲುಕಿದೆ. ಯಾವುದೇ ರಾಷ್ಟ್ರ ಇನ್ನೊಂದು ರಾಷ್ಟ್ರದ ಒಳಗೆ ಭಯೋತ್ಪಾದನೆ ನಡೆಸುವವರಿಗೆ ಸಹಕಾರ ಕೊಡುವುದು ಅನೈತಿಕ, ಅಪಮಾರ್ಗ. ಪಾಠಗಳನ್ನು ಎಲ್ಲರೂ ಕಲಿತಿದ್ದೇವೆ. ಇನ್ನಷ್ಟು ದುಸ್ಸಾಹಸಗಳನ್ನು ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ.

ಒಬಾಮಾರನ್ನು ನೋಡಿ ಕಲಿಯಿರಿ, ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ಎಂದು ನಮ್ಮ ಮಾಧ್ಯಮಗಳ ಕೆಲವು ಪಂಡಿತರು ಟಿವಿ ಚಾನಲ್‌ಗಳಲ್ಲಿ ಉಪದೇಶ ನೀಡುತ್ತಿರುವುದನ್ನು ನೀವು ಗಮನಿಸಿರಬಹುದು. ಪಾಕಿಸ್ತಾನ ಸಹ ಒಂದು ಅಣ್ವಸ್ತ್ರ ರಾಷ್ಟ್ರ ಎಂಬುದನ್ನು ಇವರು ಮರೆತ ಹಾಗೆ ಕಾಣುತ್ತದೆ. ಯುದ್ಧಗಳಲ್ಲಿ ಸಾಯುವವರು ಅಮಾಯಕರು, ಬಡಪಾಯಿಗಳು. ಯುದ್ಧವೇ ಎಲ್ಲಕ್ಕೂ ಪರಿಹಾರ ಎನ್ನುವ ಯುದ್ಧೋನ್ಮಾದಿಗಳು ರಣರಂಗದಲ್ಲಿ ಕಾದುವ ಸಾಮರ್ಥ್ಯವಿಲ್ಲದ ಹೇಡಿಗಳು. ಇಂಥವರು ತಮ್ಮ ಮನೆಯ ಮುಂದೆ ನಾಯಿಯೊಂದು ಸತ್ತುಬಿದ್ದಿದ್ದರೆ, ಕಾರ್ಪರೇಷನ್‌ಗೊಂದು ದೂರವಾಣಿ ಕರೆ ಮಾಡಲೂ ಹಿಂಜರಿಯುವವರು. ಅವರು ಹೀಗೆ ಯುದ್ಧಪ್ರೀತಿಯ ಮಾತುಗಳನ್ನು ಹೇಳುತ್ತಲೇ ಇರುತ್ತಾರೆ, ಅದರಲ್ಲಿ ಆಶ್ಚರ್ಯವೇನಿಲ್ಲ. ಹಾಗೆ ನೋಡಿದರೆ ಪಾಕಿಸ್ತಾನ ಸರ್ಕಾರದ ಕಪಟ, ಪೊಳ್ಳುತನವನ್ನು ಮುಂಬೈ ದಾಳಿಯ ನಂತರದ ದಿನಗಳಲ್ಲಿ ಭಾರತ ಸಮರ್ಥವಾಗಿ ಬಯಲು ಮಾಡುತ್ತಲೇ ಬಂದಿದೆ. ಭಾರತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಇನ್ನಷ್ಟು ರಾಜತಾಂತ್ರಿಕ ಕ್ರಮಗಳನ್ನು ಮುಂದುವರೆಸಿ, ನಮಗೆ ಬೇಕಿರುವ ಉಗ್ರಗಾಮಿಗಳನ್ನು ಅಲ್ಲಿಂದ ಎಳೆತಂದು ಶಿಕ್ಷೆಗೆ ಒಳಪಡಿಸುವ ಕೆಲಸ ಮಾಡಬೇಕು.

ಪಾಕಿಸ್ತಾನದ ಮೇಲೆ ಯುದ್ಧಹೂಡುವ ಬದಲು ದೇಶದಲ್ಲಿ ಮಾಡಬೇಕಿರುವ ಕೆಲಸಗಳು ನೂರಾರಿವೆ. ಭಷ್ಟಾಚಾರಕ್ಕೆ ಹೊಸ ಭಾಷ್ಯವನ್ನೇ ಬರೆದ ೨ಜಿ ರಾಜಾ, ಕಲ್ಮಾಡಿ, ಯಡಿಯೂರಪ್ಪ ತರಹದ ಭ್ರಷ್ಟರು ಇಲ್ಲಿದ್ದಾರೆ. ಗುಜರಾತ್ ನರಮೇಧದ ಆರೋಪಿ ನರೇಂದ್ರ ಮೋದಿ ಮತ್ತೆ ಮತ್ತೆ ಗೆದ್ದು ಅಧಿಕಾರಕ್ಕೆ ಬರುತ್ತಿದ್ದಾರೆ. ಲಕ್ಷಾಂತರ ಕೋಟಿ ಕಪ್ಪುಹಣ ವಿದೇಶಿ ಬ್ಯಾಂಕುಗಳಲ್ಲಿ ಕೊಳೆಯುತ್ತಾ ಬಿದ್ದಿದೆ. ಪಾಕಿಸ್ತಾನದಂತೆಯೇ ಭಾರತದಲ್ಲೂ ಒಳ್ಳೆಯ ನಾಯಕರನ್ನು ಸೃಷ್ಟಿಸುವ ಕೆಲಸ ನಮ್ಮಿಂದಾಗುತ್ತಿಲ್ಲ. ಭ್ರಷ್ಟರನ್ನು ಜಾತಿಯ ಕಾರಣಕ್ಕೆ ಸಮರ್ಥಿಸಿಕೊಳ್ಳುವ, ಸಾವಿರಾರು ಜನರನ್ನು ಕೊಲ್ಲಿಸಿದ ಆರೋಪಿಗಳನ್ನು ಧರ್ಮದ ಕಾರಣಕ್ಕೆ ಅಭಿವೃದ್ಧಿಯ ಹೆಸರಿನಲ್ಲಿ ಸಮರ್ಥಿಸಿಕೊಂಡವರು ನಾವು. ದೇಶದ ರಾಜಕಾರಣಿಗಳು ಹಣ ಕೊಟ್ಟು ಮತವನ್ನು ಕೊಳ್ಳುವುದನ್ನು ಕಲಿತುಬಿಟ್ಟಿದ್ದಾರೆ. ನಮ್ಮನ್ನು ನಾವು ಮಾರಿಕೊಂಡು ರಾಜಕಾರಣಿಗಳ ಗುಲಾಮರಾಗಿದ್ದೇವೆ. ದೇಶದ ಬಹುಪಾಲು ಜನರು ಹಸಿವಿನಿಂದ ನರಳುತ್ತಿದ್ದಾರೆ. ರೈತರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜಾಗತೀಕರಣದ ಅಬ್ಬರದಲ್ಲಿ ನಮ್ಮ ಹಳ್ಳಿಗಳ ಜನರ ಬದುಕು ಮೂರಾಬಟ್ಟೆಯಾಗಿದೆ. ನಗರಗಳು ಉದ್ಯೋಗ ಅರಸಿ ಬರುವವರ ನಿರಾಶ್ರಿತರ ಶಿಬಿರಗಳಾಗಿವೆ. ಅಭಿವೃದ್ಧಿಯ ಹೆಸರಿನಲ್ಲಿ ರೈತರನ್ನು, ಆದಿವಾಸಿಗಳನ್ನು, ಗುಡ್ಡಗಾಡು ಜನರನ್ನು ಒಕ್ಕಲೆಬ್ಬಿಸಿ ಅವರ ಬದುಕನ್ನು ಭೀಕರಗೊಳಿಸಿದ್ದೇವೆ. ಜಾಗತೀಕರಣದ ನೆಪದಲ್ಲಿ ನವ ವಸಾಹತುಶಾಹಿಗಳನ್ನು ದೇಶದ ಒಳಗೆ ಬಿಟ್ಟುಕೊಂಡಿದ್ದೇವೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುವ, ಬಡವರು ನಿರ್ಗತಿಕರಾಗುವ ಇವತ್ತಿನ ಪರಿಸ್ಥಿತಿ ಭವಿಷ್ಯದ ಘೋರ ದಿನಗಳನ್ನು ಸೂಚಿಸುತ್ತಿದೆ. ಈಗಿರುವ ಮನಸ್ಥಿತಿಯ ರಾಜಕಾರಣಿಗಳು ಮುಂದುವರೆದರೆ ಪಾಕಿಸ್ತಾನ ಎದುರಿಸುತ್ತಿರುವ ಸಮಸ್ಯೆಗಳನ್ನೆಲ್ಲ ನಾವೂ ಎದುರಿಸಬೇಕಾದೀತು.

ಅದು ಹಾಗಿರಲಿ, ಪಾಕಿಸ್ತಾನ ಇನ್ನಾದರೂ ಬದಲಾಗಲಿ. ಆ ದೇಶವನ್ನು ಕತ್ತಲಕೂಪಕ್ಕೆ ನೂಕಿರುವ ಅಲ್ಲಿನ ಧಾರ್ಮಿಕ ಮೂಲಭೂತವಾದ ಕೊನೆಗೊಳ್ಳಲಿ. ನಿಜವಾದ ಅರ್ಥದ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬರಲಿ. ಸ್ವಾತಂತ್ರ್ಯೋತ್ತರದಲ್ಲಿ ಇದುವರೆಗೆ ಕಾಣಿಸಿಕೊಳ್ಳದ ಒಳ್ಳೆಯ ಜನನಾಯಕರು ಇನ್ನಾದರೂ ರೂಪುಗೊಳ್ಳಲಿ. ಮಿಲಿಟರಿಗೆ ಕೊಡುವ ಹಣವನ್ನು ಅಲ್ಲಿನ ಆಡಳಿತಗಾರರು ಅಭಿವೃದ್ಧಿಗೆ ವ್ಯಯಿಸುವಂತಾಗಲಿ. ಜನರ ಜೀವನ ಮಟ್ಟ ಉತ್ತಮಗೊಳ್ಳಲಿ. ಧರ್ಮದ ಆಫೀಮನ್ನು ಕುಡಿದು ಭಯೋತ್ಪಾದಕರಾಗುತ್ತಿರುವ ನಿರುದ್ಯೋಗಿ ಯುವಕರಿಗೆ ಕೈ ತುಂಬ ಹಣ ಬರುವ ಉದ್ಯೋಗ ನೀಡುವ ಕೆಲಸವನ್ನು ಅಲ್ಲಿನ ಸರ್ಕಾರ ಮಾಡಲಿ. ಮಕ್ಕಳಿಗೆ ಆಧುನಿಕ ಕಾಲಮಾನಕ್ಕೆ ತಕ್ಕಂಥ ಶಿಕ್ಷಣವನ್ನು ಅಲ್ಲಿ ಕೊಡುವ ವ್ಯವಸ್ಥೆ ಜಾರಿಯಾಗಲಿ. ಆ ದೇಶದಲ್ಲೂ ಶಾಂತಿಯ ಪತಾಕೆ ಹಾರುವಂತಾಗಲಿ. ಜನರು ನೆಮ್ಮದಿಯಿಂದ ಬದುಕುವಂತಾಗಲಿ.

ಕೊನೆ ಮಾತು:
ದೇವರಾಜ ಅರಸು ಹುಣಸೂರು ತಾಲೂಕಿನ ತಮ್ಮ ಹಳ್ಳಿಯಲ್ಲಿ ತೋಟ ಮಾಡಿದರು. ಆ ಹಳ್ಳಿಯಲ್ಲಿ ತೋಟ ಮಾಡುವ ಕೆಲಸಕ್ಕೆ ಕೈ ಹಾಕಿದವರಲ್ಲಿ ಅವರೇ ಮೊದಲಿಗರು. ಅವರು ಸುಮ್ಮನಿರಲಿಲ್ಲ. ಅಕ್ಕ ಪಕ್ಕದ ರೈತರನ್ನೂ ತೋಟ ಮಾಡುವಂತೆ ಹುರಿದುಂಬಿಸಿದರು. ಸ್ನೇಹಿತರೊಬ್ಬರು ಅರಸು ಅವರನ್ನು ಒಮ್ಮೆ ಕೇಳಿದರು- ಅಲ್ಲಾರಿ, ನೀವೊಬ್ಬರು ತೋಟ ಮಾಡ್ಕೊಂಡು ಇರಿ. ಅಕ್ಕ ಪಕ್ಕದವರ ಉಸಾಬರಿ ನಿಮಗ್ಯಾಕೆ?. ಅರಸು ಹೇಳಿದರಂತೆ- ಅದು ಹಂಗಲ್ಲ, ನನ್ನ ಜೊತೆ ಪಕ್ಕದವರೂ ತೋಟ ಮಾಡಿದರೆ, ನನ್ನ ಸ್ವತ್ತು ಸುರಕ್ಷಿತವಾಗಿರುತ್ತೆ, ಮತ್ತು ಅವರಿಗೂ ಒಳ್ಳೆಯದಾಗುತ್ತೆ.

ಅಕ್ಕ ಪಕ್ಕದವರು ಸುಖ, ಸಂತೋಷ, ನೆಮ್ಮದಿಯಿಂದ ಇದ್ದರೆ ನಮಗೂ ನೆಮ್ಮದಿ ಅಲ್ಲವೆ?

8 comments:

  1. ಮಾಡಿದ್ದುಣ್ಣೋ ಮಹರಾಯ!!! ಉಪ್ಪು ತಿನ್ಡಿದ್ರು ಈಗ ನೀರು ಕುಡಿಯುತ್ತಿದ್ದಾರೆ ಅಷ್ಟೇ! ಅಷ್ಟಕ್ಕೂ ಅವರು ನಮ್ಮವರು ಎಂದು ಕೊರಗಲು ಅವರಿಂದ ನಮಗೇನು ಲಾಭವಾಗಿದೆ?? ಅವರ ತಪ್ಪುಗಳಿಂದ ಖಂಡಿತ ಕಲಿಯುವದಂತು ಇದೆ, ನಿಜ ಆದರೆ ಪಾಕಿಗಳಂತೆ ನಮ್ಮ ದೇಶದಲ್ಲಿ ವಿಪರೀತ ಎನ್ನುವ ಧರ್ಮಾಂಧತೆ ಇಲ್ಲದಿದ್ದರೂ, ಕೆಲವು ಸರಿಪಡಿಸಲೇ ಬೇಕಾದ ತಪ್ಪುಗಳು ಇವೆ. ಆದರೆ, ಆ ದೇಶದಲ್ಲಿ ಮತ್ತೆ ಶಾಂತಿ, ಸಮೃದ್ಧಿ, ಹಿಂತುರುಗುವದಂತು ಭ್ರಮೆಯೇ ಸರಿ!!!

    ReplyDelete
  2. ಸಂಪಾದಕೀಯಕ್ಕೆ ನಮಸ್ಕಾರ
    ಸಮಯೋಚಿತ ಲೇಖನ. ನೀವು ಹೇಳಿದ ಎಲ್ಲಾ ಮಾತುಗಳು ಅರ್ಥಪೂರ್ಣ. ಆದರೆ ನರೇಂದ್ರ ಮೋದಿ ಬಗ್ಗೆ ಬರೆದ ಸಾಲು ಯಾಕೋ ಸರಿ ಅನ್ನಿಸಲಿಲ್ಲ. ಯಾರು ಏನೇ ಹೇಳಲಿ ಅವರೊಬ್ಬ ಉತ್ತಮ ಆಡಳಿತಗಾರ ಮತ್ತು ಇದುವರೆಗೂ ಯಾವ ಕೋರ್ಟ್ನಲ್ಲಿಯೂ ಅವರ ಮೇಲಿರುವ ಆರೋಪ ಸಾಬೀತಾಗಿಲ್ಲ. ಬೇರೆ ಯಾರೋ ಹೇಳಿದ್ದರೆ ಅವರ ದೃಷ್ಟಿಯೇ 'ಆ ಥರ' ಎಂದು ಸುಮ್ಮನಾಗುತ್ತಿದ್ದೆ. ನೀವೇ ಹೇಳಿದಾಗ ಮನಸ್ಸಿಗೆ ಯಾಕೋ ಬೇಜಾರು

    --
    ನಾಗೇಂದ್ರ

    ReplyDelete
  3. "ಗುಜರಾತ್ ನರಮೇಧದ ಆರೋಪಿ ನರೇಂದ್ರ ಮೋದಿ ಮತ್ತೆ ಮತ್ತೆ ಗೆದ್ದು ಅಧಿಕಾರಕ್ಕೆ ಬರುತ್ತಿದ್ದಾರೆ."- ಸಂಪಾದಕೀಯ ತನ್ನ ಪಕ್ಷಾತೀತತೆಯನ್ನು ತೋರಿಸಲೋಸುಗ ಈ ಮಾತನ್ನು ಹೇಳಿದಂತಿದೆ :)

    ReplyDelete
  4. ನೀವು ಇನ್ನೂಮ್ಮೆ ನರೇಂದ್ರ ಮೋದಿ ಅವರ ಬಗ್ಗೆ ನೆಗೆಟಿವಿ ಆಗಿ ಬರೆದ್ರೆ... ಅವತ್ತೆ ಕೊನೆ ನಿಮ್ಮ ಬ್ಲಾಗ್ ಗೆ ನನ್ನ ಬೇಟಿ ಎಚ್ಚರಿಕೆ.

    - Kaiser Soze

    ReplyDelete
  5. instead of publishing media issues... sampadakeeya has become external affairs expert

    ReplyDelete
  6. Also understand that, pseudo secularists will also ruin the nation. sampaadakeeya, yaako nidhanavaadi atibuddhi vaadi gaLa jaaDinalli saaguttide..

    ReplyDelete
  7. http://vbhat.in/nurentu-matu/america-terrorism_10051/

    ReplyDelete